Thursday, April 19, 2012

ಕರುಣಾ ಸಂಧಿ - ೨ನೇ ಪದ್ಯ




 













ಮಳೆಯ ನೀರೋಣಿಯೊಳು ಪರಿಯಲು |
ಬಳಸರೂರೊಳಗಿದ್ದ ಜನರಾ |
ಜಲವು ಹೆದ್ದೊರೆಗೂಡೆ ಮಜ್ಜನ ಪಾನ ಗೈದಪರು ||
ಕಲುಷ ವಚನಗಳಾದರಿಯ ಬಾಂ |
ಬೊಳೆಯ ಪೆತ್ತನ ಪಾದ ಮಹಿಮಾ |
ಜಲಧಿ ಪೊಕ್ಕುದರಿಂದ ಮಾಣ್ದಪರೇ ಮಹೀಸುರರು || ೨ ||

ಪ್ರತಿಪದಾರ್ಥ : ಮಳೆಯ ನೀರೋಣಿಯಲಿ ಪರಿಯಲು - ಮಳೆ ಸುರಿದು ನೀರು ಓಣಿ ಬೀದಿಗಳಲ್ಲಿ ಹರಿಯಲು, ಬಳಸರು ಊರೊಳಗಿದ್ದ ಜನರು - ಊರಿನಲ್ಲಿರುವ ಜನರು ಆ ನೀರನ್ನು ಯಾವುದಕ್ಕೂ ಉಪಯೋಗಿಸುವುದಿಲ್ಲ, ಆ ಜಲವು ಹೆದ್ದೊರೆಗೂಡೆ - ಅದೇ ನೀರು ಯಾವುದಾದರೂ ದೊಡ್ಡ ನದಿಯನ್ನು ಸೇರಿದಾಗ, ಮಜ್ಜನ ಪಾನ ಗೈದಪರು - ಸ್ನಾನ ಮತ್ತು ಪಾನಗಳಿಗೆ ಉಪಯೋಗುವರು, ಕಲುಷ ವಚನಗಳಾದರಿವು - ದೇವವಾಣಿಯಾದ ಸಂಸ್ಕೃತವಲ್ಲದೆ ಪ್ರಾಕೃತ ಭಾಷೆಯಲ್ಲಿದ್ದರೂ, ಬಾಂಬೊಳೆಯ ಪೆತ್ತನ - ಬಾನಿನ ಹೊಳೆ ಅಥವಾ ಗಂಗಾನದಿಯ ಜನಕನಾದ ಶ್ರೀಹರಿಯ, ಪಾದ ಮಹಿಮಾಜಲಧಿ - ತ್ರಿವಿಕ್ರಮ ಅವತಾರದಲ್ಲಿ ಭಗವಂತನ ಪಾದವೆಂಬ ಮಹಿಮಾ ಸಾಗರದಲ್ಲಿ, ಪೊಕ್ಕುದರಿಂದ - ಭಗವಂತನ ಪಾದ ತೊಳೆದು ಮಹಿಮೆಯೆಂಬ ಸಾಗರವನ್ನು ಸೇರಿರುವ ಈ ಪ್ರಾಕೃತಿಕ ಭಾಷೆಯ ಪದಗಳು ಸೇರಿರುವುದರಿಂದ, ಮಾಣ್ದಪರೆ - ಬಿಟ್ಟು ಬಿಡುವರೆ, ಮಹೀಸುರರು - ವೇದ ಶಾಸ್ತ್ರ ನಿಪುಣರಾದ ವಿಪ್ರೋತ್ತಮರು.


ಮಳೆಯ ನೀರು ಬೀದಿಯಲ್ಲಿ ಹರಿದಾಗ ಕೊಚ್ಚೆ ನೀರು ಎಂದೆನಿಸಿಕೊಳ್ಳುತ್ತದೆ.  ಅದೇ ನೀರು ದೊಡ್ಡದಾದ ಹಾಗೂ ಪವಿತ್ರವಾದ ನದಿಗಳನ್ನು ಸೇರಿದಾಗ, ಸೇರಿದ ನದಿಯ ಹೆಸರನ್ನೇ ಪಡೆದು ಸ್ನಾನ – ಪಾನಾದಿಗಳಿಗೆ ಬಳಸಲ್ಪಡುತ್ತದೆ.  ಇಲ್ಲಿ ದಾಸರು “ಹೆದ್ದೊರೆ” ಎಂಬ ಪದವನ್ನು ಉಪಯೋಗಿಸಿ ಕೃಷ್ಣಾ ನದಿಯನ್ನು ಕುರಿತು ಹೇಳುತ್ತಾರೆ.  “ಕೃಷ್ಣೆ”ಯನ್ನು ಹೆದ್ದೊರೆಯೆಂದು ಗ್ರಾಮ್ಯ ಭಾಷೆಯಲ್ಲಿ ಕರೆಯುತ್ತಾರೆ. ಹೇಗೆ ಮಳೆಯ ನೀರು ನದಿಯನ್ನು ಸೇರಿದಾಗ ನದಿಯೇ ಆಗತ್ತದೆಯೋ ಹಾಗೆ ಪರಮಾತ್ಮನ ಬಗ್ಗೆ ಬರೆದಾಗ ಪ್ರಾಕೃತಭಾಷೆಯೂ “ಸಂಸ್ಕೃತ”ದಷ್ಟೇ ಪವಿತ್ರವಾಗಿದೆ ಎಂಬುದು ಜಗನ್ನಾಥ ದಾಸರ ಭಾವ. ಆದ್ದರಿಂದ ಪ್ರಾಕೃತ ಭಾಷೆಯಾದ ಕನ್ನಡದಲ್ಲಿ ಪರಮಾತ್ಮನ ಬಗ್ಗೆ ಹೇಳುತ್ತಿರುವುದು ದೋಷವಲ್ಲ ಎಂದು ದಾಸರು ನಿರೂಪಿಸಿದ್ದಾರೆ.

ಪ್ರಾಚೀನರೂ ಹಾಗೂ ಋಷಿಮುನಿಗಳು ಭಗವಂತನ ಸರ್ವವ್ಯಾಪ್ತತೆಯನ್ನು ಗುರುತಿಸುವಂತಹ ಸೂಕ್ಷ್ಮ ಸಂವೇದನೆಯನ್ನು ಹೊಂದಿದ್ದು ಅವನ ವಿಶೇಷತೆಯನ್ನು ಆರಾಧಿಸುತ್ತಿದ್ದರು. ಸುಪ್ರಸಿದ್ಧವಾದ "ತ್ವಮೇವ ಮಾತಾ ಚ ಪಿತಾ ತ್ವಮೇವ" ಶ್ಲೋಕದಲ್ಲಿ ಕೂಡ ಭಗವಂತನಿಗೆ ಅಸಾಧಾರಣವಾದ ಪಿತೃತ್ವ, ಮಾತೃತ್ವ, ಬಂಧುತ್ವ, ಗುರುತ್ವ ಇತ್ಯಾದಿ ಸಕಲ ಬಾಂಧವ್ಯವನ್ನೂ ಜಗತ್ತಿನೊಡನೆ ವಿಧಿಸುವ, ಗುರುತಿಸುವ ದಿವ್ಯ ದೃಷ್ಟಿಯನ್ನು ಹೊಂದಿದ್ದರು.  ಮಳೆಗರೆಯುವ ಮೇಘದ ಪ್ರಾಕೃತಿಕ ವ್ಯಾಪಾರದಲ್ಲಿಯೂ ಋಷಿಗಳು ಭಗವಂತನನ್ನು ಕಂಡು ಧನ್ಯತೆಯನ್ನು ಅನುಭವಿಸುತ್ತಿದ್ದರು.  ನೀರನ್ನು ತುಂಬಿಕೊಂಡ ಮೇಘಗಳನ್ನು, ಗರ್ಭಧರಿಸುವ ತಾಯಿಯೆಂದೂ ಸೃಷ್ಟಿರೂಪದಲ್ಲಿ ಮಳೆಗರೆಯುವ ಪುರುಷರ ಕಾರ್ಯವನ್ನೂ (ರೇತೋ ವಿಸರ್ಜನ) ಮಾಡುವುದರಿಂದ ತಂದೆಯೆಂದೂ ಕರೆದು, ಭಗವಂತನ ಜೊತೆಗಿನ ಆಪ್ತತೆಯನ್ನು ಅನುಭೂತಿಸುತ್ತಿದ್ದರು. ಜೀವ ನಳನಳಿಸಲು ’ಜೀವನಾಡಿ”ಯಾಗುವ ನದಿಗಳನ್ನು ದೇವತೆಗಳೆ೦ದು ಪೂಜಿಸುತ್ತಿದ್ದರು. ಭಗವ೦ತ ತ್ರಿವಿಕ್ರಮಾವತಾರದಲ್ಲಿ   ತನ್ನ ಎರಡನೆಯ ಪಾದದಿ೦ದ ಅ೦ತರಿಕ್ಷವನ್ನು ಅಳೆಯುವಾಗ, ಎಡಪಾದದ ಉಗುರಿನ ಬಿರಿದ ಭಾಗದಿಂದ ಸ್ಫುರಿಸಿದವಳು ಗಂಗೆ. ಈ ವಿಷ್ಣುಪದಿಯನ್ನು ಬೊಗಸೆಯಲ್ಲಿ ಹಿಡಿದ ಬ್ರಹ್ಮದೇವನು ಶ್ರೀಹರಿಯ ಪಾದಗಳನ್ನು ತೊಳೆದನಾದ್ದರಿಂದ ಗಂಗೆ ಸಕಲರ ಪಾಪಗಳನ್ನೂ ತೊಳೆವ ಪುಣ್ಯವತಿಯೆಂದು ಪೂಜಿಸಲ್ಪಡುವಳು.

ಹೀಗೆ ಉದ್ಭವಿಸಿದ ಗಂಗೆಯನ್ನು ಶ್ರೀ ಶಂಕರಾಚಾರ್ಯರು ತಮ್ಮ “ಗಂಗಾಸ್ತೋತ್ರ”ದಲ್ಲಿ- 
ತವ ಜಲಮಮಲಂ ಯೇನ ನಿಪೀತಂ | ಪರಮಪದಂ ಖಲು ತೇನ ಗೃಹೀತಮ್ |
ಮಾತರ್ಗಂಗೇ ತ್ವಯಿ ಯೋ ಭಕ್ತ: | ಕಿಲ ತಂ ದ್ರಷ್ಟುಂ ನ ಯಮ: ಶಕ್ತ: ||

ಓ ತಾಯೇ ಗಂಗೇ, ನಿನ್ನ ನಿರ್ಮಲ ಜಲವನ್ನು ಕುಡಿಯುವವನು ಪರಮಾತ್ಮನ ಪರಮಪದವನ್ನೇ ಪಡೆಯುವನಲ್ಲವೇ ? ಆ ಯಮನಂತೂ ನಿನ್ನ ಭಕ್ತನ ಕಡೆ ಕಣ್ಣೆತ್ತಿ ನೋಡಲೂ ಶಕ್ತನಲ್ಲ ಎಂದು ಸ್ತುತಿಸುತ್ತಾರೆ.  ಹೀಗೆ ಗಂಗಾನದಿಯಲ್ಲಿ ಸ್ನಾನ ಮಾಡಿದರೆ ಬರಿಯ ಶರೀರ ಮಾತ್ರವಲ್ಲಾ ಮನಸ್ಸೂ ಶುದ್ಧವಾಗುತ್ತದೆ ಎಂಬ ನಂಬಿಕೆಯಿದೆ.

“ಕಲುಷ ವಚನಗಳಾದರಿವು ಬಾಂ | ಬೊಳೆಯ ಪೆತ್ತನ ಪಾದ ಮಹಿಮಾ | ಜಲಧಿ ಪೊಕ್ಕುದರಿಂದ ಮಾಣ್ದಪರೇ ಮಹೀಸುರರು” || ವಿಷ್ಣು ಪಾದೋದ್ಭವಳಾದ ಗಂಗೆಗೇ ಇಷ್ಟು ಮಹಿಮೆ ಇರುವಾಗ ಶ್ರೀಹರಿಯ ಕಥೆಗಳನ್ನೂ, ಮಹಿಮೆಯನ್ನೂ, ಅಹಂಕಾರವನ್ನು ತೊರೆದು, ಅತಿ ಆದರದಿಂದ, ಭಕ್ತಿಯಿಂದ, ಭಗವಂತನ ಸೇವೆಯೆಂಬ ಭಾವದಿಂದ, ಕನ್ನಡ ಭಾಷೆಯಲ್ಲಿ ಬರೆಯುತ್ತಿದ್ದೇನಾದ್ದರಿಂದ ಇದು ಕೂಡ ಸಂಸ್ಕೃತದಷ್ಟೇ ಪವಿತ್ರವಾಗಿದೆ. ಸಂಸ್ಕೃ ಪದಗಳು ವಸ್ತುವಿನ ಗುಣ - ಅಭಿರುಚಿ - ಎಂದು ನಾನಾ ಮುಖಗಳನ್ನು ವಿವರಿಸುತ್ತೆ.  ಆದ್ದರಿಂದ ಅಂತಹ ಒಂದು ಸಮೃದ್ಧ ಭಾಷೆ ಬಿಟ್ಟು, ಕನ್ನಡದಲ್ಲಿ ರಚಿಸಿರುವ ಕೃತಿ ಕೂಡ ಶ್ರೀಹರಿಯ ಸ್ತುತಿಯನ್ನು ಮಾಡುವುದರಿಂದ ಸಂಸ್ಕೃತದಷ್ಟೇ ವಿಶೇಷತೆಯನ್ನು ಡೆದಿದೆ   ಎಂದು ಜಗನ್ನಾಥ ದಾಸರು ಈ ಪದ್ಯದಲ್ಲಿ ಹೇಳುತ್ತಾರೆ.

ಶ್ರೀ ವಿಷ್ಣು ಸಹಸ್ರನಾಮದ  ಫಲಶ್ರುತಿಯಲ್ಲಿ :
"ದ್ಯೌ: ಸ ಚಂದ್ರಾರ್ಕನಕ್ಷತ್ರಂ ಖಂ ದಿಶೋ ಭೂ: ಮಹೋದಧಿ: |
ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನ:" ||

ಪರಮಾತ್ಮನ ವೀರ್ಯದಿಂದಲೇ ಸಕಲ ಜಗತ್ತೂ ಭರಿಸಲ್ಪಟ್ಟು ನಿಂತಿದೆಯೆಂದೂ, ಹಾಗೂ  ಜಗತ್ತಿನ ಸೃಷ್ಟಿಗೂ, ಮೇಘಗರ್ಭದಲ್ಲಿರುವ ನೀರಿಗೂ ನಡುವೆ ಒಂದು ದಿವ್ಯ ಸಂಬಂಧವನ್ನು ವೇದ ಇಲ್ಲಿ ಎತ್ತಿ ಹಿಡಿದಿದೆ.  ಸೃಜನ ಕಾರ್ಯಕ್ಕೆ ಅವಶ್ಯವಾಗಿ ಬೇಕಾಗುವ ಮೂಲದ್ರವ್ಯ ಉದಕವೆಂದೂ, ಆಪವೆಂದೂ, ಸಲಿಲವೆಂದೂ, ವನವೆಂದೂ ಮುಂತಾಗಿ ಸುಮಾರು ನೂರಾ ಒಂದು ದಿವ್ಯ ಶಬ್ದಗಳಲ್ಲಿ ಕರೆದಿದೆ.  “ಘೃತಂ” ಎಂದು ಕೂಡ ಒಂದು ಹೆಸರಿದೆ ನೀರಿಗೆ.  ’ಘೃ’ ಧಾತುವು ಸೇಚನ ಮಾಡುವುದು, ಸಿಂಪಡಿಸುವುದು ಎಂಬ ಕ್ರಿಯಾರ್ಥವನ್ನು ಹೊಂದಿರುವುದರಿಂದ ಮೇಲಿನಿಂದ ಮಳೆಯ ರೂಪದಲ್ಲಿ ಚೆಲ್ಲಲ್ಪಡುವ ನೀರು ಎಂಬುದನ್ನು ಸೂಚಿಸುತ್ತದೆ.  ಇದೇ ಧಾತುವಿಗೆ ’ಬೆಳಗು’ ಎಂಬ ಅರ್ಥವಾದಾಗ ತನ್ನ ಕಾಂತಿಯಿಂದಲೇ ಬೆಳಗುವ ನೀರಿನ ದೀಪ್ತಿಯನ್ನು, ದೈವೀ ಶಕ್ತಿಯನ್ನು ಸೂಚಿಸುತ್ತದೆ.  ಹಾಗೇ ಇದೇ ಧಾತುವಿಗೆ ’ಗತಿ’ ಎಂಬರ್ಥವನ್ನು ಹೇಳಿದಾಗ ಮಳೆಯ ರೂಪದಲ್ಲಿಯೂ ಪರ್ವತದಲ್ಲಿಯೂ ಕೆಳಗೆ ಬೀಳುವ ನೀರು ಎಂದು ಸೂಚಿಸುತ್ತದೆ. “ಜೀವ  ನಳನಳಿಸಲು ’ಜೀವನಾಡಿ"ಯಾಗುವ ಜಲ, ಜೀವನದ ಕಡೆಯ ಪಯಣದಲ್ಲಿ – "ಗಂಗಾಜಲ" ವಾಗುತ್ತದೆ.   ಹೀಗೆ ನೀರು ನಮಗೆ ಅತಿ ಅವಶ್ಯಕವಾದ ವಸ್ತುವಾಗುತ್ತದೆ.

“ಮಳೆಯ ನೀರೋಣಿಯೊಳು ಪರಿಯಲು” – ಪವಿತ್ರವಾದ ಮಳೆಯ ನೀರು ಕೊಳಚೆ ತುಂಬಿದ ಓಣಿಯಲ್ಲಿ ಸುರಿದು ಹರಿಯುತ್ತದೆ.  ಸುರಿವ ಮಳೆಗೆ ಕೊಳಚೆ ಓಣಿ, ಶುದ್ಧವಾದ ಓಣಿ ಎಂಬ ತಾರತಮ್ಯವಿರುವುದಿಲ್ಲ.  ಎಲ್ಲಾ ಕಡೆಯೂ ಸುರಿದು ಹರಿಯುತ್ತದೆ.  ಆಗಲೂ ನೀರು ಪವಿತ್ರವಾಗಿಯೇ ಇದ್ದರೂ ಕೂಡ ಅದು ಅಪವಿತ್ರವೆನ್ನಲಾಗುತ್ತದೆ. ಉಪಯೋಗಕ್ಕೆ ಬಾರದಿರುತ್ತದೆ.

“ಬಳಸರೂರೊಳಗಿದ್ದ ಜನರಾ ಜಲವು ಹೆದ್ದೊರೆಗೂಡೆ ಮಜ್ಜನಪಾನ ಗೈದಪರು” – ಕೊಳಚೆ ಓಣಿಯಲ್ಲಿ ಸುರಿದು ಹರಿದರೂ ಕೂಡ ಕೊನೆಗೆ ಮಳೆಯ ನೀರು ಹಿರಿದಾದ ತೊರೆಯನ್ನೋ, ನದಿಯನ್ನೋ ಸೇರಿದಾಗ, ತಾನೂ ಅದೇ ತೊರೆ ಅಥವಾ ನದಿಯೆಂದು ಗುರುತಿಸಲ್ಪಡುತ್ತದೆ.  ಊರಿನ ಜನಗಳು ಅದು ಕೊಳಚೆ ಓಣಿಯಲ್ಲಿ ಹರಿದಾಗ ಉಪಯೋಗ ಪಡಿಸಿಕೊಳ್ಳದವರು, ನದಿಯನ್ನೋ, ತೊರೆಯನ್ನೋ ಸೇರಿದಾಗ, ಕುಡಿಯಲು, ಸ್ನಾನ ಮಾಡಲು ಉಪಯೋಗಿಸುತ್ತಾರೆ.

ಸಾಗರದ  ನೀರು ಸೂರ್ಯ ರಶ್ಮಿಯ ಮಿಲನದಿಂದ ಆವಿಯಾಗಿ, ಮೋಡದ ಗರ್ಭದಲ್ಲಿ ಹನಿಯಾಗಿ ಸೇರಿ  ಮತ್ತೆ ಭೂಮಿಗೆ ಸುರಿದಾಗ ಎಲ್ಲಾ ರೀತಿಯಲ್ಲೂ ಬಹು ಪವಿತ್ರ ಹಾಗೂ ಪಾವನವಾಗಿರುತ್ತದೆ. ಅದೇ ರೀತಿಯಲ್ಲಿ ಯಾವುದೇ ವಸ್ತುವಾದರೂ ಕೂಡ ಭಗವಂತನ ಸಾನ್ನಿಧ್ಯವಿಲ್ಲದೆ ಪವಿತ್ರವಾಗುವುದಿಲ್ಲ.  ವಿಷ್ಣುಪದಿಯಾದ ಗಂಗೆ “ಹರಿವ ಹರಿಯೇ” ಎನ್ನುವಷ್ಟು ಶ್ರೀಹರಿಯ ಸಾ೦ಗತ್ಯವನ್ನು ಹೊ೦ದಿದ೦ತೆ, ದಾಸರು ರಚಿಸಿರುವ ’ಹರಿಕಥಾಮೃತಸಾರ’ ಗ್ರಂಥವೂ ಕೂಡ ಶ್ರೀಹರಿಯ ಸ್ತುತಿರೂಪವಾಗಿದ್ದು, ಭಗವಂತನ ಮಹಾಸನ್ನಿಧಾನ ಇರುವುದರಿಂದಲೇ ಅದು ಪವಿತ್ರವೆನ್ನಿಸಿದೆ.  

ಮೇಘೋಚ್ಛಿಷ್ಟ ವರ್ಷಧಾರೆಯು ಇಳೆಯನೆಲ್ಲಾ ಆವರಿಸಿ ಕಡಲ ತಡಿಯಲಿ ಹರಿದು ಒಡಲು ಸೇರುವ೦ತೆ, ಜೀವಿಗಳೂ ಕೂಡ ಮಳೆಯ ನೀರಿನಂತೆಯೇ ಹುಟ್ಟು ಸಾವುಗಳ ಚಕ್ರದಲ್ಲಿ ಬಂಧಿತರಾಗಿದ್ದೇವೆ. ಸಾಗರದ ನೀರು ಹೇಗೆ ಆವಿಯಾಗಿ-ಮೋಡವಾಗಿ ಮತ್ತೆ ಮಳೆಹನಿಯಾದಾಗ ಶುದ್ಧ ಮತ್ತು ಪವಿತ್ರವಾಗಿರುತ್ತದೆಯೋ,  ಹಾಗೆಯೇ ನಾವು ನಮ್ಮ ಮನಸ್ಸನ್ನು ಭಗವಂತನ ಪರ ಚಿ೦ತನೆಯಲ್ಲಿ ತೊಡಗಿಸಿಕೊಂಡು, ಮಾಡುವ ಎಲ್ಲಾ ಕರ್ಮಗಳನ್ನೂ ಪ್ರತಿಫಲಾಫೇಕ್ಷೆಯಿಲ್ಲದೆ ಮಾಡುತ್ತಾ ಬಂದರೆ, ನಮ್ಮ ಮನಸ್ಸೂ ಕೂಡ ಪರಿಶುದ್ಧವಾಗುತ್ತಾ ಭಗವಂತನಲ್ಲಿ ನೆಲೆ ಗಾಣುತ್ತದೆ.  ಸಾಗರದ ಗರ್ಭದಲ್ಲಿ ತಿಮಿಂಗಿಲಗಳೂ ಇವೆ, ಸುಂದರ ಮತ್ಸ್ಯಗಳೂ ಇವೆ ಮತ್ತು ಬೆಲೆಬಾಳುವ ಮುತ್ತು ರತ್ನಗಳೂ ಅಡಗಿವೆ.  ನಮ್ಮ ಹುಡುಕಾಟ ಮುತ್ತು ರತ್ನಗಳೆಂಬ ಬೆಲೆಬಾಳುವ ಭಗವಂತನ ಚಿಂತನೆಗಳಾಗಿರಬೇಕೆ ಹೊರತೂ, ವಿಷಯಾಸಕ್ತಿಗಳೆಂಬ ತಿಮಿಂಗಿಲಗಳಾಗಿರಬಾರದು ಎ೦ಬುದು ದಾಸರ ಚಿ೦ತನೆಯಾಗಿದೆ.

ಚಿತ್ರಕೃಪೆ : ಅಂತರ್ಜಾಲ 
ಆಧಾರ ಗ್ರಂಥ : "ವೇದ ಸಂಸ್ಕೃತಿಯ ಪರಿಚಯ"   ಡಾ|| ಕೆ ಎಸ್ ನಾರಾಯಣಾಚರ್ಯ

Saturday, March 31, 2012

ಕರುಣಾ ಸಂಧಿ - ೧ನೇ ಪದ್ಯ
















ಶ್ರವಣ ಮನಕಾನಂದವೀವುದು
ಭವಜನಿತ ದುಃಖಗಳ ಕಳೆವುದು
ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು |
ಭುವನಪಾವನವೆನಿಪ ಲಕುಮೀ
ಧವನ ಮಂಗಳ ಕಥೆಯ ಪರಮೋ
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ  ||೧||

ಮ೦ಗಳಾಚರಣದಲ್ಲಿ ಪರಮಾತ್ಮನಿ೦ದ ಮೊದಲುಗೊ೦ಡುಸಕಲ ಪರಿವಾರವನ್ನು ವ೦ದಿಸಿದ ಜಗನ್ನಾಥ ದಾಸರು,ಕರುಣಾಸ೦ಧಿಯಲ್ಲಿ ಪರಮಾತ್ಮನ ಕರುಣಾತಿಶಯವನ್ನುಆಲಿಸಿದಲ್ಲಿ ಆಗತಕ್ಕ ಫಲವನ್ನು ವಿಶ್ಲೇಷಿಸುತ್ತಾರೆ.  

ಪ್ರತಿಪದಾರ್ಥ : ಶ್ರವಣ ಮನಕಾನಂದವೀವುದು - ಶ್ರೀಹರಿಯ ಕಥಾ ಶ್ರವಣವು ಮನಸ್ಸಿಗೆ ಆನಂದವನ್ನು ಕೊಡುವುದು, ಭವಜನಿತ - ಸಂಸಾರದಿಂದ ಹುಟ್ಟುವಂಥಹ, ದುಃಖಗಳ ಕಳೆವುದು - ಸಂಸಾರದ ತಾಪತ್ರಯಗಳನ್ನು ನಾಶಮಾಡುವುದು, ವಿವಿಧ ಭೋಗಗಳಿಹಪರಂಗಳಲಿತ್ತು - ಬಹು ಪರಿಯಾದ ಸುಖಗಳನ್ನೂ/ಭೋಗಗಳನ್ನೂ ಇಹದಲ್ಲಿಯೂ ಪರದಲ್ಲಿಯೂ ಕೊಡುವುದು, ಸಲಹುವುದು - ಕಾಪಾಡುವುದು, ಭುವನಪಾವನನೆನಿಪ - ಲೋಕ ಪಾವನನೆನಿಸುವ, ಲಕುಮೀಧವನ - ಮಹಾಲಕ್ಷಿಯ ಪತಿಯಾದ ಶ್ರೀಹರಿಯ, ಮಂಗಳ ಕಥೆಯ - ಭಗವಂತನ ಗುಣಗಾನ, ಮಂಗಳಕರವಾಗಿರುವ ಕಥೆ, ಪರಮೋತ್ಸವದಿ - ಅತಿ ಸಂತೋಷದಿಂದ, ಕಿವಿಗೊಟ್ಟಾಲಿಪುದು - ಶ್ರದ್ಧೆ ಹಾಗೂ ಭಕ್ತಿಯಿಂದ ಕಿವಿಯಗಲಿಸಿ ಕೇಳುವುದು, ಭೂಸುರರು - ಬ್ರಾಹ್ಮಣರು ಹಾಗೂ ಜ್ಞಾನಿಗಳು, ದಿನದಿನದಿ - ಅನವರತವೂ.

ಶ್ರವಣ” ವೆನ್ನುವುದು ನವವಿಧ ಭಕ್ತಿಗಳಲ್ಲಿ ಮೊದಲನೆಯದು.  ಭಕ್ತಿಯ ಮೊದಲನೆಯ ಮೆಟ್ಟಿಲು.  ಭಗವಂತನ ಅರಿವು ತಿಳಿಯುವ ಪ್ರಯತ್ನಕ್ಕೆ ಮೊದಲ ಸೋಪಾನ.  ವಿಷ್ಣು ಸಹಸ್ರನಾಮ ಅರ್ಥ ವಿವರಣೆಯ ಮೊದಲು ಕೂಡ ನವವಿಧ ಭಕ್ತಿಯ ವಿವರ ತಿಳಿಸುತ್ತಾರೆ.  ಶ್ರವಣವೆಂದರೆ ಮಹಾವಿಷ್ಣುವಿನ ಮಹಿಮೆಯನ್ನು ಕೇಳುವುದು ಎಂದರ್ಥ.  ಮಹರ್ಷಿ ಯಾಜ್ಞವಲ್ಕ್ಯರು ಮೈತ್ರೇಯಿಯನ್ನು ಕುರಿತು “ಶ್ರೋತವ್ಯೋ ಮನ್ತವ್ಯೋ ನಿದಿಧ್ಯಾಸಿತವ್ಯ:” (ಬೃಹದಾರಣ್ಯಕ ಉಪನಿಷತ್ತು) ಎಂದರೆ ಪರಮಾತ್ಮನ ವಿಚಾರವನ್ನೇ ಕೇಳಬೇಕು, ಮನನ ಮಾಡಬೇಕು ಮತ್ತು ಆ ಪರಮಾತ್ಮನ ತತ್ತ್ವದಲ್ಲಿ ದೃಢವಾಗಿ ನೆಲೆ ನಿಂತುಬಿಡಬೇಕು ಎನ್ನುತ್ತಾರೆ.  ಭಗವದ್ಗೀತೆಯನ್ನು  ಅರ್ಜುನ ಶ್ರವಣ ಮಾಡಿದ್ದರಿಂದಲೇ ಅವನಿಗೆ ಕವಿದಿದ್ದ ಮೋಹ ಕಳೆಯಿತು.  ಹೀಗೆ ಶ್ರವಣದ ಮಹತ್ವ ಸಾರುವ ಅನೇಕ ಕಥೆಗಳು ನಮಗೆ ನಮ್ಮ ಪುರಾಣಗಳಲ್ಲಿ ಸಿಕ್ಕುತ್ತವೆ.  ಶ್ರವಣವೆಂದರೆ ಕಿವಿಯೆಂದೂ, ಕೇಳುವುದೆಂದೂ ಎರಡೂ ಅರ್ಥವಾಗುತ್ತದೆ.  ಏನನ್ನು ಕೇಳಬೇಕೆಂದರೆ ಶ್ರೀಹರಿಯ ಕಥೆಗಳನ್ನು ಆಲಿಸಬೇಕು.  ಏಕೆಂದರೆ ಶ್ರೀಹರಿಯು “ಶ್ರವಣ ಮಂಗಲಧಾಮನು” – ಶ್ರೀಹರಿ ತಾನೇ ಮಂಗಲಧಾಮನಾಗಿರುವುದರಿಂದ ಹರಿಕಥೆ ಶ್ರವಣ ಮಾಡುವ ಭಕ್ತರಿಗೆ ರಕ್ಷಣೆ, ಆಶ್ರಯ ಕೊಟ್ಟು ಕಾಪಾಡುತ್ತಾನೆಂಬ ನಂಬಿಕೆ.     ಭಾಗವತದ ದಶಮಸ್ಕಂದದಲ್ಲಿ 

೧)  ವಾಸುದೇವಕಥಾಪ್ರಶ್ನ: ಪುರುಷಾಂಸ್ತ್ರೀನ್ಪುನಾತಿ ಹಿ |
     ವಕ್ತಾರಂ ಪೃಚ್ಛಕಂ ಶ್ರೋತೄಂಸ್ತತ್ಪಾದಸಲಿಲಂ ಯಥಾ ||

ವಿಷ್ಣುಪಾದೋದ್ಭವಳಾದ ಗಂಗಾದೇವಿಯ ಪವಿತ್ರ ತೀರ್ಥವು ಸ್ವರ್ಗ-ಮರ್ತ್ಯ-ಪಾತಾಳಗಳೆಂಬ ಮೂರೂ ಲೋಕಗಳನ್ನೂ ಪಾವನಗೊಳಿಸುವಂತೆ ವಾಸುದೇವನ ಕಥೆಗಳನ್ನು ಕೇಳುವವರು, ಪ್ರವಚನ ಮಾಡುವವರು, ಕಥೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಮಾಡುವವರ ಜನ್ಮಗಳು ಸಾರ್ಥಕಗೊಳ್ಳುವುವು.

೨)  ತವ ಕಥಾಮೃತಂ ತಪ್ತಜೀವನಂ | ಕವಿಭಿರೀಡಿತಂ ಕಲ್ಮಷಾಪಹಮ್ |
     ಶ್ರವಣಮಂಗಲಂ ಶ್ರೀಮದಾತತಂ | ಭುವಿ ಗೃಣನ್ತಿ ತೇ ಭೂರಿದಾ ಜನಾ: ||
ಎಂದು ಭಾಗವತದ ಗೋಪೀಗೀತದಲ್ಲಿ ಶ್ರವಣದ ಮಹತ್ವ ಹೇಳುತ್ತಾರೆ.  ಪ್ರಭುವೇ ನಿನ್ನ ಕಥಾಪ್ರಸಂಗಗಳು ಅಮೃತ ಸ್ವರೂಪಗಳು, ಅವುಗಳ ಶ್ರವಣ ಮಾತ್ರದಿಂದಲೇ ನಮ್ಮೆಲ್ಲಾ ಪಾಪವು ಪರಿಹಾರವಾಗುವುದು, ಸುಖ ಸಂಪತ್ತುಗಳು ಪ್ರಾಪ್ತವಾಗುವುವು ಮತ್ತು ಈ ಜನ್ಮದಲ್ಲಿ ನಿನ್ನ ಮಂಗಳಕರವಾದ ಕಥೆಗಳನ್ನು ಕೇಳಿ ಅಮೃತವನ್ನು ಯಾರು ಸವಿಯುವರೋ ಅವರು ತಮ್ಮ ಪೂರ್ವಜನ್ಮದ ಪುಣ್ಯ ಫಲದಿಂದಲೇ ನಿನ್ನ ಕಥೆ ಆಲಿಸುವುದಕ್ಕೆ ಅರ್ಹರಾಗಿರುತ್ತಾರೆ.  ಆದ್ದರಿಂದ ನಿನ್ನ ಅಭೂತಪೂರ್ವ ಲೀಲೆಗಳನ್ನು ಕೇಳಿ ಆನಂದಿಸುವ ಸುಖ ನಮಗೆ ನಿರಂತರ ಪ್ರಾಪ್ತವಾಗಲಿ ಎಂದು ಹೇಳಿದ್ದಾರೆ.

ಶ್ರೀ ವಿಜಯದಾಸರು ತಮ್ಮ ಒಂದು ವಾಯುದೇವರ ಕುರಿತ ಪದದಲ್ಲಿ
“ಪವಮಾನ ಜಗದ ಪ್ರಾಣ ಸಂಕರುಷಣ | ಭವಭಯಾರಣ್ಯದಹನ ||

ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ” ಎಂದು ಪ್ರಾರ್ಥಿಸುತ್ತಾರೆ.
“ಶ್ರವಣ ಮನಕಾನಂದವೀವುದು” ಎಂದಾಗ ಇಲ್ಲಿ ಬರಿಯ ಕಥೆ ಎಂಬ ಅರ್ಥವಾಗುವುದಿಲ್ಲ. ಶ್ರೀಹರಿಯ ಗುಣ ನಾಮ ಕೀರ್ತನಗಳ ಪರವಾದ ವೇದ, ಉಪನಿಷತ್ತುಗಳು, ಪುರಾಣಗಳು, ತರ್ಕಗ್ರಂಥಗಳು, ಕಾವ್ಯಾಲಂಕಾರನಾಟಕಗಳು ಎಲ್ಲವೂ ಆಗುತ್ತವೆ.  ಭಾಗವತದಲ್ಲಿ

ಶೃಣ್ವತಾಂ ಸ್ವಕಥಾಂ ಕೃಷ್ಣ: ಪುಣ್ಯಶ್ರವಣಕೀರ್ತನ: |
ಹೃದ್ಯಂತಸ್ಥೋ ಹ್ಯಭದ್ರಾಣಿ ವಿಧುನೋತಿ ಸುಹೃತ್ ಸತಾಮ್ ||

ಎಲ್ಲವೂ ಮಂಗಳಕರವಾದ ಕಥೆಗಳೇ, ಬೆಳಿಗ್ಗೆ ಎದ್ದ ಕೂಡಲೆ ಮಂಗಳಕರವಾದವುಗಳನ್ನು ಶ್ರವಣ ಮಾಡುವುದರಿಂದ, ಭಗವಂತ ನಮ್ಮ ಶ್ರವಣೇಂದ್ರಿಯಗಳ ಮೂಲಕ ನಮ್ಮ ಹೃದಯದಲ್ಲಿ ಬಂದು ನೆಲೆಸುತ್ತಾನೆ ಮತ್ತು ನಮ್ಮಲ್ಲಿರುವ ಎಲ್ಲಾ ಕಶ್ಮಲಗಳನ್ನೂ ತೊಳೆದು ಬಿಡುತ್ತಾನೆ ಎನ್ನುತ್ತಾರೆ.  ಸದಾ ಮಂಗಳಕರವಾದ ವಾಸುದೇವನ ಕಥೆಗಳನ್ನು ಕೇಳುತ್ತಿದ್ದರೆ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ, ಆನಂದವನ್ನು ಅನುಭೂತಿಸುತ್ತಿರುತ್ತದೆ.  ಹೀಗೆ ನಿರಂತರ ಆನಂದದಲ್ಲಿ ಮನಸ್ಸು ತೇಲಾಡಿದಾಗ, ಅದು ನಿಧಾನವಾಗಿ ನಮ್ಮ ಹೃದಯದಲ್ಲಿ ಗಟ್ಟಿಯಾಗಿ ನೆಲೆಯೂರಿ ಅದೇ ಧ್ಯಾನವಾಗಿ ಪರಿವರ್ತನೆಯಾಗಿ ಬಿಡುತ್ತದೆ.  ಈ ಧ್ಯಾನದ ಆನಂದ ಮೋಕ್ಷಾನಂದಕ್ಕಿಂತಲೂ ಮಿಗಿಲಾಗಿರುತ್ತದೆ. 

“ಭವಜನಿತ ದು:ಖಗಳ ಕಳೆವುದು “ – ಭಾಗವತದಲ್ಲಿ “ಭವೌಷಧಾತ್” ಎಂದಂತೆ ನಮ್ಮ ಎಲ್ಲಾ ದು:ಖಗಳ ಪರಿಹಾರಕ್ಕೂ ಒಂದೇ ಔಷಧಿ ಹರಿಕಥಾಮೃತಸಾರ.  ದು:ಖ ನಿಜವಾಗಿಯೂ ವಿಷಯ ಪದಾರ್ಥದಲ್ಲಿಲ್ಲ, ಅದನ್ನು ನೋಡುವ ಕಣ್ಣು ಮತ್ತು ಆಲೋಚಿಸುವ ಮನಸ್ಸಿನಲ್ಲಿರುತ್ತದೆ.  ಯಾವಾಗ ನಮ್ಮ ಮನಸ್ಸು ಸದಾ ಶ್ರೀಹರಿಯ ಧ್ಯಾನದಲ್ಲಿ ತೊಡಗಿರುವುದೋ ಆಗ ಅಲ್ಲಿ ನಮಗೆ ಭಗವಂತನ ಕರುಣೆ, ಅವನ ಸೃಷ್ಟಿಯಲ್ಲಿನ ಸಂತೋಷ, ಉಲ್ಲಾಸಗಳು ಕಾಣ ಸಿಕ್ಕುತ್ತವೆ.  ನಮ್ಮ ಭವದ ದು:ಖಗಳು ನಮ್ಮನ್ನು ಬಾಧಿಸುವುದೇ ಇಲ್ಲ. 

“ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು” – ನಿರಂತರವಾಗಿ ಕರ್ಮಗಳನ್ನು ಮಾಡುತ್ತಲೇ ಇರುವ ನಾವು ಜ್ಞಾನ, ಭಕ್ತಿ, ವೈರಾಗ್ಯಗಳನ್ನು ಪಡೆಯಬೇಕು ಎಂದರೆ ಸದಾ ಸತ್ಕರ್ಮಗಳನ್ನು ಮಾಡುತ್ತಾ ಭಗವಂತನ್ನು ಒಲಿಸಿಕೊಳ್ಳಬೇಕು.  ಹೀಗೆ ಮಾಡಲು ನಮಗೆ ಇಂದ್ರಿಯಗಳು ಬೇಕು, ಅವುಗಳ ಸದುಪಯೋಗ ನಮಗೆ ಇಹದಲ್ಲೂ, ಪರದಲ್ಲೂ ಜ್ಞಾನ, ಭಕ್ತಿ, ವೈರಾಗ್ಯಗಳೆಂಬ ಭೋಗಗಳನ್ನು ನೀಡುವುದು. ಇಹಲೋಕದಲ್ಲಿ  ವಿವಿಧ  ಭೋಗಗಳು  ಎ೦ದಾಗ ಲೌಕಿಕ  ಭೋಗಗಳು  ಎ೦ದು ಅರ್ಥವಲ್ಲ,  ಅಹ೦ ಮತ್ತು ಮಮತಾದಿಗಳಿ೦ದ  ರಹಿತರನ್ನಾಗಿ  ಮಾಡಿ ಶ್ರೀಹರಿಯ ಭಕ್ತಿಯಲ್ಲಿ ಮನಸ್ಸನ್ನು ಕೊಟ್ಟು,  ವಿಷಯಗಳಲ್ಲಿ ವೈರಾಗ್ಯವನ್ನು ಮೂಡಿಸುವುದರ ಮೂಲಕ ಜೀವಕ್ಕೆ ಒ೦ದು ದಿವ್ಯಸ್ಥಾನವನ್ನು ಕರುಣಿಸುವುದು ಎ೦ದು ಜಗನ್ನಾಥ ದಾಸರು ವಿಶ್ಲೇಷಿಸುತ್ತಾರೆ.  ಶ್ರೀಹರಿಯ ಕಥೆಗಳ ಶ್ರವಣ ಮಾತ್ರದಿಂದಲೇ ಇದು ಸಾಧ್ಯವೆಂದು  ವಿವರಿಸಿದ್ದಾರೆ.

  ಗ್ರ೦ಥವನ್ನು ಸ೦ಪೂರ್ಣವಾಗಿ ಆಲಿಸುವುದರಿ೦ದ ಮನಸ್ಸಿಗೆ  ಆನ೦ದವನ್ನು  ನೀಡುವುದರ  ಜೊತೆಗೆ  ಸ೦ಸಾರಕ್ಕೆ ಕಾರಣವಾದ ಲಿ೦ಗ ದೇಹದಿ೦ದ ಉತ್ಪನ್ನಗಳಾದ  ಜನನ, ಮರಣಾದಿ  ದು:ಖಗಳು  ಪರಿಹರಿಸಲ್ಪಡುತ್ತವೆ.  ಲಿ೦ಗದೇಹ ಇರುವವರೆಗೂ ಎ೦ದರೆ, ಕರ್ಮ  ಬ೦ಧನದಲ್ಲಿ ಸಿಲುಕಿರುವವರೆಗೂ  ಜೀವನ  ಚಕ್ರಗಳಿ೦ದ  ಮುಕ್ತರಾಗದೇ ಇರುವ  ಸ೦ಧರ್ಭದಲ್ಲಿ,  ಇಹದಲ್ಲಿ  ಸ೦ಸಾರ  ದು:ಖವನ್ನು ಪರಿಹಾರ  ಮಾಡುತ್ತದೆ.   ನಾನಾ ವಿಧವಾದ ಸುಖ ಭೋಗಗಳನ್ನು  ಭೂಲೋಕದಲ್ಲಿ, ನ೦ತರ  ಸ್ವರ್ಗಾದಿ ಮೊದಲಾದ ಲೋಕಗಳಲ್ಲೂ ಕೊಟ್ಟು ಸ೦ರಕ್ಷಣೆ ಮಾಡುತ್ತದೆ.  ನ೦ತರದಲ್ಲಿ ಜೀವನ್ಮುಕ್ತರನ್ನಾಗಿ ಮಾಡಿ,    ಲಿ೦ಗ - ಭ೦ಗವನ್ನು  ಐದಿಸಿ,  ಸ್ವರೂಪಾನ೦ದವನ್ನು  ಅಭಿವ್ಯಕ್ತಿ ಮಾಡಿಸಿ,  ರಕ್ಷಿಸುತ್ತದೆ ಎ೦ದು  ದಾಸರು ತಿಳಿಸುತ್ತಾರೆ.  ಆದ್ದರಿ೦ದ  ಹದಿನಾಲ್ಕು  ಲೋಕಗಳ ಭಕ್ತ  ಜೀವರನ್ನು  ಪವಿತ್ರ ಮಾಡತಕ್ಕ,  ಲಕ್ಶ್ಮೀಪತಿಯಾದ ಶ್ರೀಮನ್ನಾರಾಯಣನ  ಶುಭಕರ  ಚರಿತ್ರೆಯನ್ನು ಅತ್ಯ೦ತ ಮನೋಲ್ಲಾಸದಿ೦ದ,  ಅನ್ಯವಾರ್ತೆಗೆ  ಶ್ರವಣೇ೦ದ್ರಿಯವು  ಹೋಗದ೦ತೆ ಹರಿಕಥೆಗೆ  ದತ್ತ  ಮಾಡಿ ಶ್ರದ್ಧೆಯಿ೦ದ  ಕೇಳುವುದು  ಎ೦ದು  ತಿಳಿಸುತ್ತಾರೆ.

“ಕಥಾಶ್ರವಣ ಮಾಡೋ, ಹರಿಕಥಾ ಶ್ರವಣ ಮಾಡೋ.. ಪಥಾ ವೈಕುಂಠಕಿದು ನೋಡೋ”.. ಎಂದು ವಿಜಯದಾಸರೆಂದರೆ, "ಕಾಲಕಾಲಕ್ಕೆ ಹರಿಕಥಾ  ಶ್ರವಣ  ಗುರುಗಳ  ಮುಖದಿ೦ದ ಕೇಳಿದ್ದೇ  ಕೇಳುತ್ತಾ,  ಹಾಡುತ್ತಾ ಪಾಡುತ್ತಾ, ಮನನ ಮಾಡುತ್ತಾ ಧ್ಯಾನವನ್ನು ಮಾಡುವುದು" ಎ೦ಬುದು ಗೋಪಾಲದಾಸರ ಉಕ್ತಿ.  ಇನ್ನು ಕನಕದಾಸರು "ಹರಿಕಥಾ ಶ್ರವಣವೇ  ಮುಕ್ತಿಗೆ ಮೊದ ಪಾವಟಿಗೆ" ಎ೦ದು  ತಮ್ಮ ಹರಿಭಕ್ತಿಸಾರದಲ್ಲಿ ದಾಖಲಿಸಿದ್ದಾರೆ  ಹೀಗೆ ಶ್ರೀಹರಿಯ ಕಥೆಗಳನ್ನು ಪರಮ ಉತ್ಸಾಹದಿಂದ ಭಜಿಸುವುದರಿಂದಲೂ, ಕಿವಿಗೊಟ್ಟು ಆಲಿಸುವುದರಿಂದಲೂ ಕಷ್ಟ ಪರಿಹಾರ – ಇಷ್ಟ ಪ್ರಾಪ್ತಿಯಾಗುತ್ತದೆ, ಅರಿತು ಪೂಜಿಸುವವರನ್ನು ದುಃಖದಿಂದ ದೂರೈಸಿ ಸುಖಗಳನ್ನಿತ್ತು ಜಗನ್ನಾಥ ವಿಠಲ ಒಲಿದು ಕಾಪಾಡುವ  ಎನ್ನುತ್ತಾ  “ಭುವನ ಪಾವನನಾದ ಪರಮಾತ್ಮನ  ಕರುಣೆ”ಯ  ಬಗ್ಗೆ ತಿಳಿಸಿದ್ದಾರೆ.




ಚಿತ್ರಕೃಪೆ : ಅಂತರ್ಜಾಲ

Thursday, March 22, 2012

ಕರುಣಾ ಸಂಧಿ – ಮುನ್ನುಡಿ


ಕರುಣೆ ನವರಸಗಳಲ್ಲಿ ಪ್ರಮುಖವಾದದ್ದು.  “ಕರುಣೆ”ಯ ಭಾವ ಶೋಕವೆಂದೂ ಆಗುತ್ತದೆ.  ಕರುಣೆಯ ಅರ್ಥ ದಯೆ, ಕ್ಷಮೆ, ಕೃಪೆ ಎಂದೂ “ಕರುಣೆ ತೋರು” ಎಂದರೆ ಮರುಗು, ಕನಿಕರಪಡು ಎಂದೂ ಆಗುತ್ತದೆ.  ಕಷ್ಟದಲ್ಲಿರುವವರನ್ನು ಕಂಡು ಕರುಣೆ ತೋರಬೇಕು, ಕನಿಕರ ಪಡಬೇಕು. “ಕಾರುಣ್ಯ ಸರಸ ಸೌಂದರ್ಯ ರುಚಿಗಳೇ ಸೃಷ್ಟಿ” – ಕರುಣೆ, ಸರಸ ಹಾಗೂ ಸೌಂದರ್ಯಗಳೇ ಈ ಸೃಷ್ಟಿಗೆ ಕಾರಣ ಎನ್ನುತ್ತಾರೆ ಡಿವಿಜಿಯವರು.  ನಾವು ಯಾವ ಭಾವವನ್ನು ಮತ್ತೊಬ್ಬರೆಡೆಗೆ ಕಳುಹಿಸುತ್ತೇವೋ, ಅದೇ ಭಾವ ನಮ್ಮೆಡೆಗೆ ತಿರುಗಿ ಬರುತ್ತದೆ.  ಬದ್ಧ ದ್ವೇಷವನ್ನು ಸ್ಫುರಿಸುವ ಭಾವ ಕೂಡ ಪ್ರೀತಿಯ ಭಾವ ಸಿಂಚನದಿಂದ, ಕರುಣೆ ತೋರುವುದರಿಂದ ಕರಗುತ್ತದೆ.  ಹಾಗೇ ಪರಮಾತ್ಮನೆಡೆಗೆ ನಾವು ಅನನ್ಯ ಭಕ್ತಿಯನ್ನೂ, ಪ್ರೇಮವನ್ನೂ ತೋರಿಸಿದಾಗ ನಮಗೆ ಆ ಕಮಲನಾಭನ, ಕರುಣೆ ಅಪಾರವಾಗಿ ಸಿಕ್ಕುತ್ತದೆ.  ಭಗವಂತ ನಮ್ಮೆಡೆಗೆ ಸದಾ ಕರುಣೆಯ ಸಾಗರವನ್ನೇ ಹರಿಸಲು ಕಾಯುತ್ತಿರುತ್ತಾನೆ, ಆದರೆ ನಾವು ಅವನೆಡೆಗೆ ನಮ್ಮ ಭಕ್ತಿ ಹಾಗೂ ಪ್ರೇಮದ ನಿವೇದನೆಯನ್ನು ಹೊತ್ತು ಪ್ರಸ್ಥಾನಿಸಬೇಕು.  ಕರುಣೆಯೆಂಬ ಪಾಲ್ಗಡಲ ಒಡೆಯ ಶ್ರೀಹರಿ..

ಜಗನ್ನಾಥ ದಾಸರು ಮಂಗಳಾ ಚರಣ ಸಂಧಿಯಲ್ಲಿ ಪರಮಾತ್ಮ ಹೇಗೆ ಪರಮಾತ್ಮನಾಗಿದ್ದಾನೆಂದು ಹೇಳುತ್ತಾ ತಮ್ಮ ಕುಲದೈವವಾದ ನರಸಿಂಹನನ್ನು ಮಂಗಳವ ಕರುಣಿಸು ಎಂದು ಕೇಳಿಕೊಳ್ಳುತ್ತಾರೆ. ತಾರತಮ್ಯದಲ್ಲಿ ಎಲ್ಲಾ ದೇವಾನುದೇವತೆಗಳ ನಮಸ್ಕರಿಸುವ ಅಧಿಕಾರದ ನಂತರ, ಹರಿದಾಸರುಗಳ ನಂತರ ತುಂಬಾ ಎತ್ತರದಲ್ಲಿರುವ – ತುರೀಯಾವಾಸ್ಥೆಯಲ್ಲಿರುವ ಭಗವಂತನನ್ನು ಸಾಮಾನ್ಯರಲ್ಲಿ ಸಾಮಾನ್ಯ ಜೀವಿಗಳಾದ ನಮ್ಮಂತಹವರು ನಮಿಸುವುದು ಹೇಗೆ?  ನಮಗೂ ಪರಮಾತ್ಮ ತನ್ನ ಕರುಣೆ ತೋರುತ್ತಾನೆಯೇ ಎಂಬೆಲ್ಲಾ ಸಂದೇಹಗಳು  ನಮ್ಮಲ್ಲಿ ಹುಟ್ಟುವುದು ಸಹಜವೇ ಆಗಿದೆ.  ನಮ್ಮ ಈ ಎಲ್ಲಾ ಸಂದೇಹಗಳನ್ನೂ ಹೋಗಲಾಡಿಸಲೆಂದೇ ದಾಸರಾಯರು ಮಂಗಳಾಚರಣ ಸಂಧಿಯ ನಂತರ ಕರುಣಾ ಸಂಧಿಯನ್ನು ತೆಗೆದುಕೊಂಡಿದ್ದಾರೆ.  ಜಗನ್ನಾಥ ದಾಸರು ತಮ್ಮ ಪದ.. “ನಿನ್ನ ಪೋಲುವ ಕರುಣಿಗಳನಾರ ಕಾಣೆ.. ಪ್ರಪನ್ನ ತಾ ಪಾಪಹರನೆ... ಬನ್ನಬಡಿಸುವ ರೋಗವನ್ನು ಮೋಚನ ಮಾಡಿ ಚೆನ್ನಾಗಿ ಪಾಲಿಸುವುದೋ ಹರಿಯೆ...” ಎಂದೂ ಪ್ರಾರ್ಥಿಸಿದ್ದಾರೆ.  ಹಾಗೇ..

ಭಗವಂತನ ಕರುಣೆಯ ಬಗ್ಗೆ ಹೇಳಬೇಕೆಂದರೆ ವ್ಯಾಸರಾಯರು ತಮ್ಮ  ಉಗಾಭೋಗವೊಂದರಲ್ಲಿ

ಕರಿ ಹರಿ ಎನಲಾಕ್ಷಣದಿ ಸುಪ್ತಿಯಾ ತಳ್ಳಿ
ಉರಗ ಮಂಚದಿಂ ಧುಮುಕಿ ಸಿರಿಯಾ ಸಾರೆನುತ
ವಿರಿಂಚಿಯ ಕೈಲಾಘವನೊಲ್ಲದೆ ಹನುಮನಿತ್ತ
ಹಾವಿಗೆಯನು ದಾಂಟಿ ಗರುಡನೊದಗುತಿರೆ
ತಿರುಗಿ ನೋಡದೆ ಬಂದ ಕರುಣೆ ತೋರೆನಗೆ
ನಮೋ ನಮೋ ನಮೋ ಸಿರಿಕೃಷ್ಣ ||  ಎಂದು ಇಲ್ಲಿ ಪರಮಾತ್ಮನ ಕರುಣೆಯನ್ನು ನಿಚ್ಚಳವಾಗಿ ತೋರಿಸಿದ್ದಾರೆ.  ಪರಶುಕ್ಲತ್ರಯರಾದ ವಿರಿಂಚಿ ಹನುಮರನ್ನೂ ಲೆಕ್ಕಿಸದೆ, ಶೇಷ ಗರುಡರಂತ ಅಹಂಕಾರತ್ರಯರನ್ನೂ ಲೆಕ್ಕಿಸದೆ, ಕಕ್ಷೆಯೊಳಗೆ ಇವರುಗಳಿಂದ ಕೆಳಗಿನವನಾದ ಗಜೇಂದ್ರನ ಮೊರೆಗೆ ಆತುರದಿಂದ ಬಂದು ಭಕ್ತನಿಗೆ ತನ್ನ ಕರುಣೆ ಎಷ್ಟು ಅಪಾರವೆಂದು ತೋರಿಸಿದ್ದಾನೆ ಭಗವಂತ.  ಹಾಗೇ ಎಲ್ಲಾ ಪರಮ ಭಕ್ತರಿಗೂ ಕರುಣೆ ತೋರಿಸುತ್ತಾನೆ. 

ಸುಧಾಮನ ಅವಲಕ್ಕಿ ಭಕ್ತಿ, ಅದಕ್ಕಾಗಿ ಪರಮಾತ್ಮ ಸಂಪತ್ತನ್ನು ಕರುಣಿಸಿದ್ದು ಇಲ್ಲಿ ನೆನೆಯಬಹುದು.  ಅವ “ಲಕ್ಕಿ” ಎಂದರೆ, ಲಕ್ಷ್ಮೀ ದೇವಿಯನ್ನು ಗ್ರಾಮ್ಯ ಭಾಷೆಯಲ್ಲಿ “ಲಕ್ಕಿ”.. “ಲಕುಮಿ”.. “ಲಕ್ಕಮ್ಮಾ”.. ಎಂದೆಲ್ಲಾ ಕರೆಯುತ್ತಾರೆ.  ಸುಧಾಮನ ಭಕ್ತಿಗೆ ಮೆಚ್ಚಿ ಪರಮಾತ್ಮ ಅವನಿಗೆ ಲಕ್ಷ್ಮೀ ಕಟಾಕ್ಷ ಕರುಣಿಸಿದ. ತನ್ನ ಭಕ್ತರಿಗೆ ತೊಂದರೆಯಾದರೆ ಪರಮಾತ್ಮ ದೇವತೆಗಳನ್ನೂ ಬಿಡುವುದಿಲ್ಲ ಎಂಬ ಮಾತಿಗೆ ಉದಾಹರಣೆ “ಅಂಬರೀಶ”.  ಈ ರಾಜನಿಗೆ ದೂರ್ವಾಸ ಮುನಿ ಶಾಪ ಕೊಡಲು ಬಂದರೆ.. ಅಂಬರೀಶನಿಂದಲೇ ದೂರ್ವಾಸ ಮುನಿ ಶಾಪ ವಿಮೋಚನೆ ತೆಗೆದುಕೊಳ್ಳ ಬೇಕಾಗುತ್ತದೆ.  ಹೀಗೆ ಪರಮಾತ್ಮ ತನ್ನ ಭಕ್ತರಿಗೆ ಕರುಣೆ ತೋರುವ ಕರುಣಿ, ಕರುಣಾಳು, ಕರುಣಾಮಯಿ ಎಂಬುದನ್ನು ಜಗನ್ನಾಥ ದಾಸರು “ಕರುಣಾ ಸಂಧಿ”ಯಲ್ಲಿ ಹೇಳಿದ್ದಾರೆ.

ಮೊದಲ ಸಂಧಿಯಾದ ಮಂಗಳಾಚರಣ ಸಂಧಿಯಿಂದ ಎರಡನೆಯ ಸಂಧಿ “ಕರುಣಾ ಸಂಧಿ”ಗೆ ಬರುವ ಒಂದು ಕೊಂಡಿ ಎಂದರೆ, ಮಂಗಳಾಚರಣ ಸಂಧಿಯ ಕೊನೆಯ   “ಪರಿಮಳವು ಸುಮನದೊಳಗನಲನು....” ಪದ್ಯದಲ್ಲಿ ಜಗನ್ನಾಥ ವಿಠ್ಠಲನ “ಕರುಣೆ” ಪಡೆವ ಮುಮುಕ್ಷುಜೀವರು ಎಂದು ಹೇಳಿರುವುದು.  ದಾಸವರ್ಯರು ಮುಂದಿನ ಸಂಧಿಯಲ್ಲಿ ಭಗವಂತನ ಅಪಾರ ಕರುಣೆಯ ವಿಷಯ ತಿಳಿಸುತ್ತಾರೆಂಬ ಸೂಚನೆಯೆಂದುಕೊಳ್ಳಬಹುದು..


ಚಿತ್ರಕೃಪೆ : ಅಂತರ್ಜಾಲ

Sunday, March 18, 2012

ವಸಂತಾಗಮನಕ್ಕೆ ಒಂದು ಸಂದೇಶ.... :-)




ಅಂತರ್ಜಾಲದ ಆತ್ಮೀಯ ಮಿತ್ರರಿಗೆಲ್ಲಾ ವಸಂತಾಗಮನದ ಶುಭಾಶಯಗಳು....

ಸ್ನೇಹಿತರೇ ನಿಮಗೆಲ್ಲಾ ತಿಳಿದಿರುವಂತೆ ನಾವು "ಹರಿಕಥಾಮೃತಸಾರ"  ಗ್ರಂಥದ ಮೊದಲ ಸಂಧಿ, "ಮಂಗಳಾಚರಣ ಸಂಧಿ"ಯನ್ನು ಶ್ರೀಹರಿಯ ಕೃಪೆ ಮತ್ತು ಕರುಣೆಯಿಂದ ನಮಗೆ ತಿಳಿದಷ್ಟು, ವಿವರಿಸುವ ಪ್ರಯತ್ನ ಮಾಡಿದ್ದೆವು.  ಮೊದಲ ಸಂಧಿಯ ವಿವರಣೆ .. ಮುಗಿದಿದ್ದು ಈಗ  ನಾವು ಹರಿಕಥಾಮೃತಸಾರ ಗ್ರಂಥದ ಎರಡನೆಯ ಸಂಧಿಯಾದ "ಕರುಣಾ ಸಂಧಿ"ಯನ್ನು ಪ್ರಾರಂಭಿಸುತ್ತಿದ್ದೇವೆ.  ಹೊಸ ಸಂವತ್ಸರದ ಆರಂಭದೊಂದಿಗೇ ನಮ್ಮ ಕೆಲಸವೂ ಮುಂದುವರೆಯಲಿದೆ.   ಸಧ್ಯದಲ್ಲೇ ಪ್ರಾರಂಭವಾಗುವ ಕರುಣಾ ಸಂಧಿಯ ವಿವರಣೆಯನ್ನೂ ತಾವುಗಳು ಓದಲು ಬರುವಿರಲ್ಲವೇ....

ಎಲ್ಲರಿಗೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು.... ನೂತನ ವರ್ಷಾರಂಭವನ್ನು ನಮ್ಮ ಹರಿಕಥಾಮೃತಸಾರ ತಿಳಿಯುವ ಪ್ರಯತ್ನ ಮಾಡುತ್ತಾ ಅನವರತವೂ ಹರಿಯ ಧ್ಯಾನವನ್ನು ಮಾಡೋಣ ಬನ್ನಿ.

ಕರುಣಾಸಂಧಿಗೆ ಒಂದು ಚಿಕ್ಕ ಮುನ್ನುಡಿಯ ಬರಹದೊಂದಿಗೆ ನಿಮ್ಮನ್ನು ಸ್ವಾಗತಿಸುತ್ತೇವೆ...

ಸತ್ಯವತಿ
ಅನಂತ್ ರಾಜ್
ಶ್ಯಾಮಲಾ

Thursday, December 1, 2011

ಮಂಗಳಾಚರಣ ಸಂಧಿಗೆ ಮಂಗಳದ ಮುಕ್ತಾಯ....


ಯಾವುದೇ ಒಂದು ಶುಭ ಕಾರ್ಯ ಮಾಡುವ ಮುನ್ನ ನಿರ್ವಿಘ್ನವಾಗಿ ಕಾರ್ಯ ಸಂಪೂರ್ಣಗೊಳ್ಳಬೇಕು ಎಂಬ ಭಾವದ ಪುಷ್ಟೀಕರಣಕ್ಕೆ ಅನುಸಾರವಾಗಿ ಹರಿಕಥಾಮೃತಸಾರದ ಕರ್ತೃ ಶ್ರೀ ಜಗನ್ನಾಥ ದಾಸರು ಕೂಡ ಆರಂಭದ ಒಂದು ಪರಿಪೂರ್ಣ ಸಂಧಿಯನ್ನೇ ದೇವತಾ ಪ್ರಾರ್ಥನೆಗೆ ಮೀಸಲಿಟ್ಟಿದ್ದಾರೆ.  ಯಾವುದೇ ಒಂದು ಬೃಹತ್ ಗ್ರಂಥ / ಕಾವ್ಯ ರಚನೆಯಾದಾಗ ಅದರ ಮೊದಲ ಪದ್ಯವು ಗ್ರಂಥದ ವಿಷಯ ಸೂಚಕವೂ ಆಗಿರಬೇಕಲ್ಲವೇ..? ಹಾಗೇ ಅದೇ ಪದ್ಧತಿಗನುಗುಣವಾಗಿ ಈ ಗ್ರಂಥದ ವಿಚಾರ ನಾರಾಯಣಾದಿ ಪಂಚರೂಪ ಪರಮಾತ್ಮನ ಉಪಾಸನೆಯಾಗಿರುವುದರಿಂದ, ದಾಸರು ಮೊದಲ ಸಂಧಿಯಾದ ಮಂಗಳಾಚರಣ ಸಂಧಿಯ ಮೊಟ್ಟ ಮೊದಲ ಪದ್ಯವನ್ನು “ಶ್ರೀ ರಮಣಿಕರಕಮಲ ಪೂಜಿತ” ಎಂದೂ, ನೀರಜಭವಾಂಡ ಉದಯ ಸ್ಥಿತಿ ಕಾರಣನೆ ಎಂದು ಪ್ರದ್ಯುಮ್ನ, ಅನಿರುದ್ಧ ರೂಪಗಳನ್ನೂ, ಕೈವಲ್ಯದಾಯಕವಾದ ಸಂಕರ್ಷಣರೂಪವನ್ನೂ ಸ್ತುತಿಸಿದ್ದಾರೆ.  ಆಮೇಲೆ ಲಕ್ಷ್ಮೀ, ಬ್ರಹ್ಮ, ವಾಯು, ಸರಸ್ವತಿ, ಭಾರತೀ ದೇವಿಯವರನ್ನು ಸ್ತುತಿಸಿ, ನಮಿಸಿದ್ದಾರೆ.  ನಂತರ ಗುರುಗಳ ನಮಸ್ಕಾರವಾಗಿ ವೇದವ್ಯಾಸರು, ಆಚಾರ್ಯರು, ರುದ್ರ, ಇಂದ್ರ, ಋಷಿಗಳು, ಪಿತೃಗಳು, ಚಕ್ರವರ್ತಿಗಳು, ಯತಿವರ್ಯರು ಹಾಗೂ ಕೊನೆಯದಾಗಿ ಸಕಲ ದಾಸವರೇಣ್ಯರಿಗೂ ನಮಿಸಿದ್ದಾರೆ.

ಹೀಗೆ ಪಂಚಭೇದ ತಾರತಮ್ಯ ಪಂಚವಿಂಶತಿ ತತ್ವ ಇವುಗಳ ವಿವರಣೆ ಕೊಟ್ಟು ಮಂಗಳಾಚರಣ ಸಂಧಿಯಲ್ಲಿ ಸ್ವೋತ್ತಮರಿಗೆಲ್ಲಾ ವಂದಿಸಿ ಅಂತರ್ಯಾಮಿ ಬಿಂಬರೂಪಿ ಜಗನ್ನಾಥ ವಿಠಲನ “ಕರುಣೆ”ಯನ್ನು ಕೇಳಿಕೊಂಡು ಮುಂದಿನ “ಕರುಣಾಸಂಧಿ” ಪದ್ಯಗಳಿಗೆ ನಾಂದಿ ಹಾಡುತ್ತಾರೆ ಜಗನ್ನಾಥ ದಾಸರು.  ಈ ಮಂಗಳಾಚರಣ ಸಂಧಿಯನ್ನು ಓದಿದವರಿಗೆ, ಕೇಳಿದವರಿಗೆ, ಬರೆದವರಿಗೆ ಎಲ್ಲರಿಗೂ ಶ್ರೀಹರಿಯ ಪ್ರಸಾದ ಲಭ್ಯವಾಗಲೆಂದು ಪ್ರಾರ್ಥಿಸಿದ್ದಾರೆ.  ಶ್ರೀಹರಿಯ ಪ್ರಸಾದವೆಂದರೆ ಭಗವಂತನ “ಅನುಗ್ರಹ”.  ನಮಗೆ ಆ ಪ್ರಸಾದ ಸಿಕ್ಕಬೇಕಾದರೆ ನಾವು ಕಾಯಾ ವಾಚಾ ಮನಸಾ ಭಗವಂತನ ಪಾದಗಳಿಗೆ ಶರಣಾಗಿ, ಪರಾಪರ ತತ್ವಜ್ಞಾನದ ಆಶ್ರಯದಿಂದ ನಮ್ಮೊಳಗಿನ ಜೀವ ಕುಸುಮದ ವಿಕಸನೆಯನ್ನು ನಿರಂತರ ಮಾಡಿಕೊಳ್ಳುತ್ತಲೇ ಇರಬೇಕು ಎಂಬ ಸಂದೇಶ ಸಾರುತ್ತಾ ಶ್ರೀ ಜಗನ್ನಾಥ ದಾಸರು “ಹರಿಕಥಾಮೃತಸಾರ” ಗ್ರಂಥ ರಚನೆಯ ಕೆಲಸ ಸುಗಮವಾಗಿ ಸಾಗಿ, ಮುಕ್ತಾಯಹೊಂದಿ, ಶ್ರೀಹರಿಯ ಕೃಪೆ, ಅನುಗ್ರಹದ ಪ್ರಸಾದ ಎಲ್ಲರಿಗೂ ಲಭ್ಯವಾಗಲೆಂದು ಪ್ರಾರ್ಥಿಸುತ್ತಾ ಮಂಗಳಾಚರಣ ಸಂಧಿಗೆ ಮಂಗಳವನ್ನು  ಕೋರುತ್ತಾ 

ಜಯ ಮಂಗಳಂ ನಿತ್ಯ ಶುಭ ಮಂಗಳಂ |
ದಯದಿ ಭಕ್ತರ ಕಾಯ್ದ ದಾಶರತಿಗೆ ||

ಅವನಿಜಾವಲ್ಲಭಾಗೆ ಪವನಾತ್ಮನ ಸಖಗೆ |
ಪ್ಲವಗ ನಾಯಕರಾಳ್ದ ರವಿಜ ಸುತಗೆ |
ಶಿವನ ವರ ಪಡೆದಕ್ಷಕುವರ ಮುಖ್ಯ ರಕ್ಕಸರ |
ಬವರಮುಖದಲಿ ಸದೆದ ಪ್ರವಿತತನಿಗೆ ||

ಪಾವಮಾನಿಯ ಪೆಗಲನೇರಿ ಅತಿ ಹರ್ಷದಲಿ |
ರಾವಣಾದ್ಯರ ಸದೆದ ರಘುರಾಮಗೆ |
ಭಾವಿ ಬ್ರಹ್ಮನಿಗೆ ಭಕ್ತಿಯನಿತ್ತು ಮಿಕ್ಕ ಸು |
ಗ್ರೀವಾದಿಗಳಿಗೆ ಮುಕ್ತಿಯ  ನೀಡ್ದಗೆ ||

ತ್ರಿಗುಣವರ್ಜಿತ ತ್ರಿವಿಕ್ರಮ ತೀರ್ಥಪಾದನಿಗೆ |
ಭಗೃ ಕುಲೋದ್ವಹ ಭಕ್ತಜನಪಾಲಗೆ |
ಸ್ವಾಗತ ನಾಮಗಳ ಸರ್ವರಿಗಿತ್ತು ಸಂತೈಪ |
ಅಗಣಿತಮಹಿಮ ಜಗನ್ನಾಥ ವಿಠಲಗೆ || 

ಜಯ ಮಂಗಳಂ ನಿತ್ಯ ಶುಭ ಮಂಗಳಂ ಎಂದು ಪ್ರಾರ್ಥಿಸುತ್ತಾರೆ.


ಚಿತ್ರಕೃಪೆ : ಅಂತರ್ಜಾಲ

Wednesday, November 16, 2011

ಮಂಗಳಾಚರಣ ಸಂಧಿ - ೧೩ ನೇ (ಕೊನೆಯ) ಪದ್ಯ...


































ಪರಿಮಳವು  ಸುಮನದೊಳಗನಲನು
ಅರಣಿಯೊಳಗಿಪ್ಪಂತೆ  ದಾಮೋ
ದರನು ಬ್ರಹ್ಮಾದಿಗಳ  ಮನದಲಿ ತೋರಿ ತೋರದೆಲೆ |
ಇರುತಿಹ ಜಗನ್ನಾಥ ವಿಠಲನ
ಕರುಣ ಪಡೆವ ಮುಮುಕ್ಷುಜೀವರು
ಪರಮ ಭಾಗವತರನು ಕೊಂಡಾಡುವುದು ಪ್ರತಿದಿನವು ||೧೩||

ಪ್ರತಿಪದಾರ್ಥ  : ಪರಿಮಳವು ಸುಮನದೊಳಗೆ - ಸುಮ ಎಂದರೆ ಹೂವು, ಹೂವಿನಲ್ಲಿರುವ ಸುವಾಸನೆ, ಅನಲನು ಅರಣಿಯೊಳಗೆ - ಅರಣಿ ಎಂದರೆ ಒಣಗಿದ ಅರಳಿ ಕಡ್ಡಿ ಮತ್ತು ಅನಲನೆಂದರೆ ಅಗ್ನಿ, ಇಪ್ಪಂತೆ - ಅಡಗಿಕೊಂಡಿರುವಂತೆ, ದಾಮೋದರನು - ದಾಮ ಎಂದರೆ ಹಗ್ಗ ಮತ್ತು ತಾಯಿ ಯಶೋದೆಯು ಹಗ್ಗದಿಂದ ಬಾಲಕೃಷ್ಣನನ್ನು ಕಟ್ಟಿದಾಗ, ದರ  ಎಂದರೆ ಉದರದಲ್ಲಿ ಧರಿಸಿದವನು, ಬ್ರಹ್ಮಾದಿಗಳ ಮನದಲಿ ತೋರಿ ತೋರದೆಲೆ - ಬ್ರಹ್ಮಾದಿ ಸಮಸ್ತ ದೇವತೆಗಳ ಮನದಲ್ಲಿ ಕಂಡೂ ಕಾಣಿಸದಂತೆ, ಇರುತಿಹ - ನೆಲೆಸಿರುವ, ಜಗನ್ನಾಥವಿಠಲನ - ಜಗತ್ತಿಗೇ ಒಡೆಯನಾದ ಶ್ರೀಹರಿಯ, ಕರುಣಪಡೆವ - ಕರುಣೆಗೆ ಪಾತ್ರರಾಗಬಯಸುವಂತಹ, ಮುಮುಕ್ಷು ಜೀವರು - ಮೋಕ್ಷಾಪೇಕ್ಷಿಗಳಾದ ಸುಜೀವರು, ಪರಮಭಾಗವತರನು - ಭಗವಂತನ ಶ್ರೇಷ್ಠ ಭಕ್ತರಾದ ಭಾಗವತರುಗಳನ್ನು, ಕೊಂಡಾಡುವುದು ಪ್ರತಿದಿನವು - ಪ್ರತಿದಿನವೂ ಅನವರತವೂ ಸ್ತುತಿಸುತ್ತಲೇ ಇರಬೇಕು.
 

ಮಂಗಳಾಚರಣದ  ಅಂತಿಮ ಚರಣದಲ್ಲಿ ಅಂತರ್ಯಾಮಿ ಬಿಂಬರೂಪಿ ಜಗನ್ನಾಥ ವಿಟ್ಠಲ ಜೀವಿಗಳೊಳಗೆ ಹೇಗೆ ಇರುತ್ತಾನೆಂದು ವರ್ಣಿಸುತ್ತಾರೆ.  ಭಗವಂತ ಸುಮನದೊಳು ಪರಿಮಳವಿದ್ದಂತೆ ಎಂದರೆ ಹೂವಿನಲ್ಲಿರುವ ಕಂಪಿನಂತೆ ಎಂದು ದೃಷ್ಟಾಂತ ಕೊಡುತ್ತಾರೆ. ಹೇಗೆಂದರೆ ಹೂವಿನಲ್ಲಿರುವ ಕಂಪು ನಮಗೆ ಕಣ್ಣಿಗೆ ಕಾಣುವುದಿಲ್ಲ, ಆದರೆ ಹೂವು ಚೆನ್ನಾಗಿ ಅರಳಿದ ನಂತರ ನಮಗೆ ಅದರ ಸುವಾಸನೆ ತಿಳಿಯುತ್ತದೆ.  “ಸುಮನ” ಎಂದರೆ ಹೂವು ಎಂದೂ ಹಾಗೂ “ಸು” ಮನಸ್ಸು ಎಂದೂ ಆಗುತ್ತದೆ.  ನಮ್ಮ ಮನಸ್ಸು ಸು – ಒಳ್ಳೆಯದಾಗಿರಬೇಕು, ಸಾತ್ವಿಕ ವಿಚಾರಗಳಿಂದ ತುಂಬಿ ಮನಸ್ಸು ಅರಳಿದಾಗ, ಭಗವಂತನಿರುವ ಅರಿವು ನಮಗೆ ಪರಿಮಳದಂತೆ ತಿಳಿಯುವುದು.  ಅಂದರೆ ಮನಸ್ಸೆಂಬ ಹೂವು ತನ್ನನ್ನು ಆವರಿಸಿ ಕೊಂಡಿರುವ ಅಹಂಕಾರ ಮತ್ತು ಮಮಕಾರಗಳಿಂದ ಬಿಡಿಸಿಕೊಂಡು, ಜ್ಞಾನ-ಭಕ್ತಿ-ವೈರಾಗ್ಯಗಳಿಂದ, ಸಾಧನೆಮಾಡಿ, ಹರಿ-ಗುರು ಕೃಪೆಯಿಂದ, ಭಗವತ್ಪ್ರಜ್ಞೆಯಿಂದ ಸುಂದರವಾಗಿ ಅರಳಿದರೆ, ಪರಿಮಳದಂತೆ ಪರಮಾತ್ಮ ನಮ್ಮೊಳಗೇ ವ್ಯಕ್ತವಾಗಿ ನಮ್ಮನ್ನು ಉದ್ಧರಿಸುತ್ತಾನೆ.  ಪರಿಮಳವು ಹೂವಿಗೆ ಸಹಜ ಅಥವಾ ಸ್ವಾಭಾವಿಕ ಗುಣ.  ಅದು ಅರಳಿದಾಗ ಮಾತ್ರ ಪರಿಮಳದ ಕಂಪು ಹೊರಸೂಸುವುದು.  ಹಾಗೇ ನಮ್ಮ ಮನಸ್ಸೂ ಕೂಡ.

ಇನ್ನೊಂದು ದೃಷ್ಟಾಂತವೆಂದರೆ ಕಟ್ಟಿಗೆಯಲ್ಲಿರುವ ಅತೀ ಸೂಕ್ಷ್ಮವಾದ ಅನಲ – ಬೆಂಕಿಯಂತೆ, ನಮಗೆ ಕಾಣುವುದೇ ಇಲ್ಲ.  ಆದರೆ ಎರಡು ಕಾಷ್ಟದ ಘರ್ಷಣೆ ಮಾಡಿದಾಗ, ಮಥನ ಮಾಡಿದಾಗ ಮಾತ್ರ ಅರಣಿ (ಕಟ್ಟಿಗೆ)ಯಲ್ಲಿ ಕಾಣುವಂತೆ, ಭಗವಂತ ಇರುತ್ತಾನೆ.  ನಾವು ನಮ್ಮ ಮನಸ್ಸೆಂಬ ಕಡಗೋಲಿನಿಂದ ಶಾಸ್ತ್ರದ ಸಮುದ್ರವನ್ನು ಮಥನ ಮಾಡಿ, ಮಾಡಿ ಆ ಭಗವಂತನ ಅರಿವು ತಿಳಿಯಬೇಕು.  ನಮ್ಮ ಮನಸ್ಸಿನಲ್ಲಿಯೇ ಅಸುರೀ ಗುಣಗಳು ಮತ್ತು ಸಾತ್ವಿಕ ಗುಣಗಳು ಎರಡೂ ಇವೆ.  ಯಾವಾಗ ಮನಸ್ಸಿನ ಮಥನ ಶುರುವಾಗುವುದೋ ಆಗ ಅಸುರೀ ಶಕ್ತಿಗಳು ಅಂದರೆ  ಅಹಂಕಾರ, ಮಮಕಾರ, ವಿಷಯಾಸಕ್ತಿಗಳು ಎಲ್ಲವೂ ಮೇಲೆ ಬರುತ್ತವೆ. ನಾವು ಆ ಯಾವ ಶಕ್ತಿಗಳನ್ನೂ ಗಣನೆಗೆ ತೆಗೆದುಕೊಳ್ಳದೇ... ಸತತವಾಗಿ ಭಗವಂತನ ಧ್ಯಾನ ಮಾಡಬೇಕು ಅವನಿಗೆ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ಬಿಡಬೇಕು, ಅವನ ಇರುವನ್ನು ಅರಿಯಬೇಕು.  ಹೀಗೆ ನಾವು ನಿರಂತರವಾಗಿ ಮಾಡಿದಾಗಲೇ,   ನಮಗೆ, ಅರಣಿಯೊಳಗೆ ಅನಲ ಕಾಣುವಂತೆ, ಚಿನ್ಮಯನ ಅರಿವು ಮೂಡುವುದು.  ಸಮುದ್ರ ಮಥನದಲ್ಲಿ ಆದಂತೆ ನಾವು, ನಮ್ಮೊಳಗೇ ಇರುವ ಅಸುರೀ ಶಕ್ತಿಗಳನ್ನು ಜಯಿಸಿ ಸಾತ್ವಿಕ ಭಾವವನ್ನು ಅಪ್ಪಿಕೊಂಡಾಗ ನಮಗೆ  ಸಿಕ್ಕುವುದೇ - ಚಿನ್ಮಯನ ಇರುವಿನ  “ಜ್ಞಾನ”, ನಮ್ಮೊಳಗಿನ ದೈವೀಕ “ಶಕ್ತಿ”ಯ ಪರಿಚಯ, ಭಗವಂತನೆಂಬ ಅಮೃತದ ಗಡಿಗೆ.

ಬೇರೆ ಬೇರೆ ದೇವತೆಗಳಲ್ಲಿ ಕಲಿಯ ಆವೇಶ ಹೆಚ್ಚು ಇರುವುದರಿಂದ ಭಗವಂತ ಬೇಗ ಪ್ರಕಟವಾಗುವುದಿಲ್ಲ, ಅವ್ಯಕ್ತನಾಗಿರುತ್ತಾನೆ.  ಉಪಾಸನೆ – ಸಾಧನೆಗಳಿಂದ ವ್ಯಕ್ತನಾಗುತ್ತಾನೆ.  ಆದರೆ ವಿಭೂತಿ ಚೇತನಗಳಾದ ಬ್ರಹ್ಮ-ವಾಯು ದೇವರುಗಳಲ್ಲಿ ವ್ಯಕ್ತನಾಗಿಯೇ ಇರುತ್ತಾನೆ.  ರುದ್ರ ದೇವರಲ್ಲಿ ಪರಮಾತ್ಮ ತೋರಿಯೂ ತೋರದಂತೆ ಇರುತ್ತಾನೆ.  ಕಾಷ್ಠವನ್ನು ನಿರಂತರ ಘರ್ಷಣೆಗೆ ಒಳಪಡಿಸಿದಾಗ ಹೇಗೆ ಅಗ್ನಿಯ ದರ್ಶನವಾಗುವುದೋ, ಹಾಗೇ  ನಿರಂತರ ಘರ್ಷಣೆಯಿಂದ, ರುದ್ರ ದೇವರಲ್ಲಿ ಭಗವಂತ ಪ್ರಕಟಗೊಳ್ಳುತ್ತಾನೆ. 

ಜಗನ್ನಾಥ ದಾಸರು ಈ ಪದ್ಯದಲ್ಲಿ ಭಗವಂತನನ್ನು “ದಾಮೋದರ”ನೆಂದು ಸಂಬೋಧಿಸಿದ್ದಾರೆ.  “ದಾಮ” ಎಂದರೆ ಹಗ್ಗ – ಹೊಟ್ಟೆಗೆ ಹಗ್ಗದಿಂದ  ಕಟ್ಟಲ್ಪಟ್ಟವನು ದಾಮೋದರನೆಂದರೆ ಅದು ಕೃಷ್ಣಾವತಾರದ ಒಂದು ಪ್ರಸಂಗಕ್ಕೆ ಮಾತ್ರ ಸೀಮಿತವಾಗಿ ಬಿಡುತ್ತದೆ ಹಾಗೂ  ಇದು ಭಗವಂತನ ಅನಾದಿ ನಾಮವೂ ಹೌದು.  ಇದಕ್ಕೆ  ಆಧ್ಯಾತ್ಮಿಕವಾದ ಅನೇಕ ವಿಶಿಷ್ಟ ಅರ್ಥಗಳು ಇವೆ.  ನಾವು ಉಪಯೋಗಿಸುವ ಪ್ರತಿಯೊಂದು ಶಬ್ದಕ್ಕೂ ಒಂದು ಭೌತಿಕ, ಪ್ರಾಕೃತಿಕ ಮತ್ತು ಅಪ್ರಾಕೃತಿಕವೆಂಬ ಅರ್ಥಗಳಿರುತ್ತವೆ. ಇಲ್ಲಿ ದಾಮೋದರ ಎಂಬ ನಾಮ ಬೇರೆಯೇ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿದೆ. “ದಮ” ಎಂದರೆ “ಇಂದ್ರಿಯ ನಿಗ್ರಹ ಉಳ್ಳವನು, ಎಲ್ಲಾ ಇಂದ್ರಿಯಗಳನ್ನೂ ಭಗವಂತನೆಡೆಗೆ ಕೇಂದ್ರೀಕರಿಸಬಲ್ಲವನು” ಮತ್ತು ಇಂತಹ ಸಾಧಕರನ್ನು ಉದ್ಧಾರ ಮಾಡುವವನು / ಉದರದಲ್ಲಿ ಇಟ್ಟುಕೊಂಡು ಸಲಹುವವನು “ದಾಮೋದರ”.  ಅಕ್ಷರಗಳನ್ನು ಬಿಡಿಸಿ ನೋಡಿದಾಗ ದಾಮೋದರ ಎಂಬ ಪದ ಐದು ಭಾಗಗಳಾಗಿ ಬಿಡಿಸಿಕೊಳ್ಳುತ್ತದೆ – ದ + ಅಮ + ಉತ್ + ಅ + ರ ಆದಾಗ, ಉತ್ಕೃಷ್ಠನಾದ, ನಾವು ತಿಳಿಯಬಲ್ಲ ಈ ಪ್ರಪಂಚದಿಂದ ಅತೀತನಾದ, ಅಳತೆಯಿಲ್ಲದೆ ಅಪರಿಮಿತನಾಗಿ ಸಮಸ್ತ ಅಭೀಷ್ಟಗಳನ್ನೆಲ್ಲ ಪ್ರಸಾದಿಸುವವನಾದ, ಅನಂದಸ್ವರೂಪನು, ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾದವನು ಎಂದರ್ಥವಾಗುತ್ತದೆ.  ಮತ್ತು ದಾಮರಾದ ಉದರು, ದಮನಶೀಲರು ಎಂದಾಗ – ಉದ ಎಂದರೆ ಜೀವಿ, ಇಂದ್ರಿಯ ನಿಗ್ರಹ ಮಾಡಿದ ಸಾತ್ವಿಕ ಜೀವಿ, ದಮನಶೀಲರಿಗೆ ರಂ – ಆನಂದ ನೀಡುವವನು ದಾಮೋದರ ಎಂದೂ ಆಗುತ್ತದೆ.  ಹೀಗೆ ದಾಮೋದರನೆಂಬ ಭಗವಂತನ ಒಂದು ಹೆಸರಿಗೆ ಇನ್ನೂ ಅನೇಕ ವಿಶೇಷ ಅರ್ಥಗಳು ಇವೆ.

ಮುಂದುವರೆಯುತ್ತಾ ಜಗನ್ನಾಥ ದಾಸರು  “ಬ್ರಹ್ಮಾದಿಗಳ ಮನದಲಿ ತೋರಿ ತೋರದೆಲೆ” ಎನ್ನುತ್ತಾರೆ.  ಬ್ರಹ್ಮಾದಿಗಳು ಎಂದರೆ ಬ್ರಹ್ಮ, ವಾಯು, ಲಕ್ಷ್ಮೀ, ಸರಸ್ವತಿ, ಭಾರತಿಯರಲ್ಲಿ ಸುಮನದಲ್ಲಿ ಪರಿಮಳದಂತೆಯೂ, ರುದ್ರಾದಿ ದೇವತೆಗಳಲ್ಲಿ ಅರನಣಿಯೊಳಗಿಪ್ಪಂತೆಯೂ ಇರುತ್ತಾನೆ.  ಅಂದರೆ ಪರಶುಕ್ಲತ್ರಯರಲ್ಲಿ “ತೋರಿ” ಇರುತ್ತಾನೆ.  ಬಾಕಿ ದೇವತೆಗಳಲ್ಲಿ “ತೋರದೆಲೆ” ಇರುತ್ತಾನೆ.   

ಪುಷ್ಪಗತ ದೃಷ್ಟಾಂತದಿಂದ ಕಾರ್ಯಭೂತವಾದ ಈ ಜಗತ್ತಿಗೇ ಕಾರಣಭೂತ ದೇವರು ಇದ್ದಾನೆ ಎಂದೂ ಸ್ಮೃತಿ, ಶೃತಿಗಳಿಂದ ಅಧರಿಸಿದ ದಾಸರು ಅರಣಿಗತ ಅಗ್ನಿ ಪ್ರಾಪ್ತಿಗೆ ಮಥನದಂತೆ ಗುರುಸೇವಾ, ಶಾಸ್ತ್ರಾಭ್ಯಾಸ ಮೊದಲಾದ ಸೇವಾ ಹೊರತು ದೇವರು ದೊರಕುವುದಿಲ್ಲ ಎಂಬರ್ಥ ತಿಳಿಸಲು ಎರಡು ದೃಷ್ಟಾಂತಗಳನ್ನು ಕೊಟ್ಟಿದ್ದಾರೆ.  ಕುಸುಮದಲ್ಲಿ ಪರಿಮಳವು ಇರುವ ಹಾಗೆ, ಆರಣಿಯಲ್ಲಿ ಅಗ್ನಿ ಇರುವ ಹಾಗೆ, ಬ್ರಹ್ಮಾದಿಗಳ ಮನಸ್ಸಿನಲ್ಲಿ ಕಾಣಿಸಿಕೊಂಡ, ಜ್ಞಾನಪ್ರದ ಸ್ವಾಮಿಯ ದಯ ಸಂಪಾದಿಸುವ ಮೋಕ್ಷಾಕಾಂಕ್ಷಿಗಳು ಪೂರ್ವೋಕ್ತ ಭಾಗವತರಾದ ಬ್ರಹ್ಮಾದಿಗಳನ್ನು ಸದಾ ತಾರತಮ್ಯ ಕ್ರಮದಿಂದ ಸ್ತುತಿಸತಕ್ಕದೆಂದು ಆದೇಶಿಸುತ್ತಾರೆ.

ನಾವು ಯಾರಿಗೆ ನಮಸ್ಕರಿಸಿದರೂ ಅದು ಅವರ ಒಳಗಿರುವಂತ ಭಗವಂತನಿಗೇ ನಮ್ಮ ನಮಸ್ಕಾರ ಸಲ್ಲುವುದು.  “ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ” ಎಂಬ ಮಾತಿನಂತೆ, ಎಲ್ಲಿ, ಯಾವ ಸನ್ನಿಧಾನ ಶುದ್ಧವಾಗಿದೆಯೋ ಅಂತಹ ಸನ್ನಿಧಾನಕ್ಕೆ ನಾವು ನಮಸ್ಕರಿಸಬೇಕು.  ಇದಕ್ಕೆ ಉದಾಹರಣೆ ಕೊಡುವುದಾದರೆ : ಗೋವು, ವೃಕ್ಷಗಳಲ್ಲಿ ತುಳಸೀ, ಅರಳಿ.. ಅಂದರೆ ಇದರ ಅರ್ಥ ಈ ಸನ್ನಿಧಾನಗಳಲ್ಲಿ ಭಗವಂತನ ಅಭಿವ್ಯಕ್ತ ಶುದ್ಧವಾಗಿರುತ್ತದೆ, ಪವಿತ್ರವಾಗಿರುತ್ತದೆ ಎಂದು.  ಆದ್ದರಿಂದ ಎಲ್ಲಿ ವಿಶೇಷ ಅಭಿವ್ಯಕ್ತಿ ಇದೆಯೋ ಅಲ್ಲಿ ನಾವು ನಮಸ್ಕರಿಸುತ್ತೇವೆ. ಇಲ್ಲಿ ಪರಮ ಭಾಗವತರು ಎಂದರೆ ಭಗವಂತನನ್ನು ನಿರಂತರ ಧ್ಯಾನಿಸುವವರು, ಅವನ ಇರುವಿಕೆಯ ಅರಿವು ಉಳ್ಳವರು.  ಇವರಲ್ಲಿ ಭಗವಂತನ ಸನ್ನಿಧಾನ ತುಂಬಾ ವಿಶೇಷವಾಗಿ ಅಭಿವ್ಯಕ್ತವಾಗುವುದಾದ್ದರಿಂದ, ಅವರಿಗೆ ನಾವು ನಮಿಸೋಣ, ನಿರಂತರ ಅವರ ಸಂಪರ್ಕದಿಂದ ನಮ್ಮ ಮನಸ್ಸೂ ಅರಳಿ ನಮಗೂ ಭಗವಂತನ ಅರಿವಿನ ಪರಿಮಳವನ್ನು ಶ್ರೀ ವಾಯುದೇವರು ನಮ್ಮ ಅನುಭವಕ್ಕೆ ತಂದುಕೊಡಲಿ ಎಂದು ಪ್ರಾರ್ಥಿಸುತ್ತಾ ಶ್ರೀ ಜಗನ್ನಾಥ ದಾಸರು ಮಂಗಳಾಚರಣ ಸಂಧಿಯನ್ನು ಮುಗಿಸುತ್ತಾರೆ.