Sunday, November 30, 2014

ಕರುಣಾ ಸಂಧಿ - ೨೭ ನೇ ಪದ್ಯ



ಕಣ್ಣಿಗೆವೆಯಂದದಲಿ, ಕೈ ಮೈ
ತಿಣ್ಣಿಗೊದಗುವ ತೆರದಿ, ಪಲ್ಗಳು
ಪಣ್ಣು ಫಲಗಳನಗಿದು ಜಿಹ್ವೆಗೆ ರಸವೀವಂತೆ |
ಪುಣ್ಯ ಫಲವೀವಂದದಲಿ ನುಡಿ-
ವೆಣ್ಣುನಾಣ್ಮಾಂಡದೊಳು ಲಕ್ಷ್ಮಣ-
ನಣ್ಣನೊದಗುವ ಭಕ್ತರವಸರಕಮರಗಣಸಹಿತ  ||೨೭||

ಪ್ರತಿಪದಾರ್ಥ : ಕಣ್ಣಿಗೆವೆಯಂದದಲಿ - ಕಣ್ಣುಗಳೀಗೆ ಸದಾ ರಕ್ಷಣೆ ಕೊಡುವ ರೆಪ್ಪೆಗಳಂತೆ, ಕೈ ಮೈ ತಿಣ್ಣಿಗೊದಗುವ ತೆರದಿ - ತಿಣ್ಣು ಎಂದರೆ ತಿನಿಸು ದೇಹದಲ್ಲಿ ನೋವು ತುರಿಕೆ  ಉಂಟಾದಾಗ  ಕೈಗಳು  ಸಹಾಯಕ್ಕೆ ಧಾವಿಸುವಂತೆ,  ಪಲ್ಗಳು  ಪಣ್ಣು ಫಲಗಳನಗಿದು - ಹಲ್ಲುಗಳು ಪಕ್ವವಾದ ಫಲಗಳನ್ನು ಜಗಿದು ಜಗಿದು, ಜಿಹ್ವೆಗೆ ರಸವ ನೀವಂತೆ -  ನಾಲಿಗೆಗೆ ರಸವನ್ನು ಉಣಿಸುವಂತೆ, ಪುಣ್ಯ ಫಲವೀವಂದದಲಿ - ಜೀವಿಯು ಜನ್ಮಾಂತರಗಳಲ್ಲಿ ಸಂಪಾದಿಸಿದ ಪುಣ್ಯವು ಸುಖವನ್ನು ಕೊಡುವಂತೆ, ನುಡಿವೆಣ್ಣು - ವಾಗ್ದೇವತೆ ಸರಸ್ವತಿದೇವಿ, ಆಣ್ಮ - ವಾಗ್ದೇವತೆಯ ಪತಿಯಾದ ಬ್ರಹ್ಮದೇವನ, ಅಂಡದೊಳು - ಸೃಷ್ಟಿಯಾದ ಬ್ರಹ್ಮಾಂಡದೊಳಗೆ, ಲಕ್ಷ್ಮಣನಣ್ಣ - ಪ್ರೀತಿ ಕಾರುಣ್ಯಕ್ಕೆ ಪ್ರತೀಕನಾದ ಲಕ್ಷ್ಮಣಿಗೆ ಅಣ್ಣನಾದ ಶ್ರೀರಾಮಚಂದ್ರನು, ಒದಗುವ - ಧಾವಿಸಿ ಬರುವ, ಭಕ್ತರವಸರಕೆ - ಭಕ್ತರಿಗೆ ಸಂಕಷ್ಟದ ಸಮಯ ಬಂದಾಗಲೆಲ್ಲಾ, ಅಮರಗಣ ಸಹಿತ - ತನ್ನ ಪರಿವಾರ ದೇವತೆಗಳೆಲ್ಲರ ಸಮೇತನಾಗಿ,  ಒದಗುವ -  ದೊರಕುವನು.
ಸ್ವಪ್ರಯೋಜನರಹಿತನಾಗಿದ್ದರೂ ಭಗವ೦ತನು ತನ್ನ ನಿಜಭಕ್ತರನ್ನು ಹೇಗೆ ಸ೦ರಕ್ಷಿಸುವನು ಎ೦ಬುದನ್ನು ದಾಸರಾಯರು ತಮ್ಮ ಈ ಪದ್ಯದಲ್ಲಿ ದೇಹದಲ್ಲಿರುವ ಆವಯವಗಳನ್ನು ದೃಷ್ಟಾ೦ತವಾಗಿಸುತ್ತಾ ವಿವರಿಸುತ್ತಾರೆ. ಸರ್ವಪದಾರ್ಥಗಳನ್ನು ನೋಡುವ೦ತಹ ಕಣ್ಣುಗಳು, ತಮಗೆ ಸಹಾಯಭೂತವಾಗಿ ಅತಿ ಸಮೀಪದಲ್ಲಿ ಇರುವ ಕಣ್ಣುರೆಪ್ಪೆಗಳನ್ನು ದೃಷ್ಟಿಸಲು ಹೇಗೆ ಸಾಧ್ಯವಾಗುವುದಿಲ್ಲವೋ ಅದೇ ರೀತಿಯಲ್ಲಿ ಬಿ೦ಬ-ಪ್ರತಿಬಿ೦ಬ ಜೀವರು ಕ್ಷೀರವಾರಿಯ೦ತೆ ಕಲೆತೇ ಇದ್ದರೂ, ಜೀವನಿಗೆ ಬಿ೦ಬ ಕಾಣಿಸುವುದಿಲ್ಲ, ಬಿ೦ಬನ ರಕ್ಷಣೆ ಇಲ್ಲದ ಪ್ರತಿಬಿ೦ಬನಿಗೆ ಅಸ್ತಿತ್ವವೇ ಇಲ್ಲ. ದೇಹದೊಳಗೆ ತಿನಸು(ತುರಿಕೆ) ಉದ್ಭವಿಸಿದರೆ, ಹಸ್ತಗಳು ತುರಿಸಿ ತಿನಸನ್ನು ಶಮನ ಮಾಡುವ೦ತೆ, ವಿಷಯಸ೦ಬ೦ಧವಾಗಿ ಕಷ್ಟಗಳು ಪ್ರಾಪ್ತವಾಗಲು, ಜ್ಞಾನಾನುಸ೦ಧಾನವೆ೦ಬ ಕರಗಳಿ೦ದ ದು:ಖಾದಿಗಳು ಪರಿಹಾರಗೊಳಿಸುತ್ತಾನೆ. ದ೦ತಗಳು ಹಣ್ಣುಗಳ ಭಕ್ಷಣೆಯನ್ನು ಮಾಡಿ ಸಿಪ್ಪೆಯನ್ನು ದೂರವಾಗಿಸಿ, ಸುರಸವನ್ನು ಜಿಹ್ವೆಗೆ ಕೊಡುವಾಗ ದ೦ತಗಳಿಗೆ ಹೇಗೆ ಯಾವ ಸ್ವಪ್ರಯೋಜನವೂ ಇಲ್ಲವೋ, ಅದೇ ರೀತಿಯಲ್ಲಿ ಪರಮಾತ್ಮನು ಸಿಪ್ಪೆ ಸದೃಶವಾದ ಈ ಲಿ೦ಗದೇಹವನ್ನು ಬೇರ್ಪಡಿಸಿ, ಜೀವನಿಗೆ ಸ್ವರೂಪಾನ೦ದದ ಅನುಭವವನ್ನು ಕೊಡುತ್ತಾನೆ. ಇವುಗಳು ಪರಮಾತ್ಮನ ಕಾರುಣ್ಯ ಹಾಗೂ ಗುಣಪೂರ್ಣತ್ವದ ನಿದರ್ಶನಗಳಾಗಿವೆ. ಲಕ್ಷ್ಮಣಾಗ್ರಜನು  ದೇವತೆಗಳ ಸಮೂಹ ಸಹಿತನಾಗಿ, ಭಕ್ತರ ಕಷ್ಟಕಾಲ ಪ್ರಾಪ್ತವಾದ ಸಮಯದಲ್ಲಿ ಬ೦ದು ರಕ್ಷಿಸುತ್ತಾನೆ ಎ೦ದು ದಾಸರಾಯರು ಸದೃಷ್ಟಾ೦ತವಾಗಿ ವಿವರಿಸುತ್ತಾರೆ.

ಭಗವಂತನ ಮೂರು ವಿಧದ ರಕ್ಷಣೆಯ ವಿವರಣೆಯನ್ನು ದಾಸರಾಯರು ಕೊಡುತ್ತಾರೆ.  ಮೂರು ವಿಧದ ರಕ್ಷಣೆಗೆ ಮೂರು ಸ್ಥರದ ಅಧಿಕಾರಿಗಳನ್ನು ಉಲ್ಲೇಖಿಸುತ್ತಾರೆ.  ಮೊದಲನೆಯವರಾಗಿ "ಉತ್ತಮ ಅಧಿಕಾರಿಗಳು" ಬರುತ್ತಾರೆ.  ಇವರು "ಬ್ರಹ್ಮಾದಿ ತತ್ತ್ವೇಶ್ವರ" ದೇವತೆಗಳಾಗುತ್ತಾರೆ.   ಇದಕ್ಕೆ ಉಪಮಾನವಾಗಿ ಕಣ್ಣುಗಳನ್ನು ರೆಪ್ಪೆಯು   ನಿರಂತರವಾಗಿ ಕಾಪಾಡುವಂತೆ ಉತ್ತಮ ಅಧಿಕಾರಿಗಳನ್ನು ಭಗವಂತ ಕಾಪಾಡುತ್ತಾನೆಂಬುದನ್ನು ತಿಳಿಸಿದ್ದಾರೆ.  ಎರಡನೆಯ ಸ್ಥರದ ಅಧಿಕಾರಿಗಳನ್ನು "ಮಧ್ಯಮಾಧಿಕಾರಿಗಳು" ಎನ್ನುತ್ತಾರೆ.  ಇವರು "ಕರ್ಮಜರಿಂದ ದೇವಗಂಧರ್ವ"ರವರೆಗಿನ ಜೀವರುಗಳು.   ಇವರನ್ನು ಭಗವಂತನು ಕೈ ಮೈ ತಿಣ್ಣಿಗೊದಗುವ ತೆರದಿ, ಅವರಿಗೆ ಬಾಧೆ ಅಥವಾ ಸಂಕಷ್ಟ ಬಂದಾಗ ಧಾವಿಸಿ ಬಂದು ಕಾಪಾಡುತ್ತಾನೆ.  ಮೂರನೆಯ ಸ್ಥರದವರು "ಅಧಮಾಧಿಕಾರಿ"ಗಳಾಗುತ್ತಾರೆ.  ಇವರು "ಮನುಷ್ಯ ಗಂಧರ್ವರು ಹಾಗೂ ಸಾತ್ವಿಕ" ಜೀವರುಗಳು.  ಇವರನ್ನು ಪಲ್ಲುಗಳು ಫಲವನ್ನು ಭಕ್ಷಿಸಿ, ಸಿಪ್ಪೆಯನ್ನು ಬೇರ್ಪಡಿಸುವಂತೆ, ಲಿಂಗ ದೇಹವನ್ನು ಬೇರೆಮಾಡಿ ಸ್ವರೂಪಾನಂದವನ್ನು ಕೊಟ್ಟು ರಕ್ಷಿಸುತ್ತಾನೆ.  

ಕಣ್ಣಿಗೆವೆಯಂದದಲಿ - ಕಣ್ಣಿಗೆ ಎವೆ ಎಂದರೆ ಅದು ಕಣ್ಣಿನ ರೆಪ್ಪೆಯೆಂದರ್ಥವಾಗುತ್ತದೆ.  ಕಣ್ಣುಗಳು ಮನುಷ್ಯನ ದೇಹದ ಒಂದು ಅತ್ಯಂತ ಪ್ರಮುಖವಾದ ಅಂಗವಾಗಿದೆ.  ಕಣ್ಣುಗಳಿಂದಲೇ ನಾವು ಪ್ರಪಂಚವನ್ನು ಕಾಣುವುದು.  ಕಣ್ಣುಗಳು ಅತ್ಯಂತ ಸೂಕ್ಷ್ಮವಾದ ಅಂಗವೂ ಆಗಿದೆ.  ಅಣು ಮಾತ್ರದ ಧೂಳಿನ ಕಣ ಕಣ್ಣೊಳಗೆ ಬಿದ್ದರೂ ಸಾಕು, ಕಣ್ಣು ಕೆಂಪಗಾಗಿ, ನೋವಾಗಿ, ಮುಚ್ಚಿಕೊಳ್ಳುತ್ತವೆ.  ರೆಪ್ಪೆಗಳು ಕಣ್ಣುಗಳನ್ನು ಅತೀ ಜತನದಿಂದ ರಕ್ಷಿಸುತ್ತವೆ.  ಅಪಾಯದ ಅರಿವು ನಮಗೆ ಆಗುವ ಮುನ್ನವೇ ರೆಪ್ಪೆಗಳು ಕಣ್ಣುಗಳನ್ನು ತಮ್ಮ ಮಡಿಲಿನಲ್ಲಿ  ಮುಚ್ಚಿ, ಸಂರಕ್ಷಿಸಿರುತ್ತವೆ.  ರೆಪ್ಪೆಗಳು ತಮ್ಮನ್ನು ಎಷ್ಟೊಂದು ಜತನದಿಂದ ಕಾಪಾಡುತ್ತಿವೆಯೆಂಬ ಸಣ್ಣ ಅರಿವು ಕೂಡ ಕಣ್ಣುಗಳಿಗೆ ಇರುವುದಿಲ್ಲ.  ರೆಪ್ಪೆಗಳಿಲ್ಲದೆ ಕಣ್ಣುಗಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲಾಗುವುದಿಲ್ಲ.  ರೆಪ್ಪೆಗಳು ಹಾಗೂ ಕಣ್ಣುಗಳ ಈ ಸಂಬಂಧ ಅತ್ಯಂತ ಆಳವಾದದ್ದು.  ಆದರೆ ಈ ಅನೂಹ್ಯ ಸಂಬಂಧದ ಮುಖ್ಯ ವಿಚಾರವೇನೆಂದರೆ, ಸದಾ ತಮ್ಮನ್ನು ಇಷ್ಟು ಚುರುಕಿನಿಂದ, ಜಾಗರೂಕತೆಯಿಂದ ಕಾಪಾಡುವ ರೆಪ್ಪೆಗಳನ್ನು ಕಣ್ಣುಗಳು ಎಂದಿಗೂ ವೀಕ್ಷಿಸುವುದಿಲ್ಲ.  ಜಗತ್ತಿನ ಸಮಸ್ತವನ್ನೂ ವೀಕ್ಷಿಸಿ, ಅಕ್ಷಿಪಟಲದ ಮೂಲಕ ಜೀವನಿಗೆ ಅರಿವು ಮೂಡಿಸುವ ಕಣ್ಣುಗಳು, ತಮ್ಮ ಆಪ್ತರಕ್ಷಕರಾದ, ತಮಗೆ ಸಮೀಪದಲ್ಲಿಯೇ ಇರುವ ರೆಪ್ಪೆಗಳನ್ನು ಮಾತ್ರ ಒಮ್ಮೆಯೂ ಭೇಟಿಯಾಗುವುದೇ ಇಲ್ಲ.  ರೆಪ್ಪೆಗಳೂ, ಕಣ್ಣುಗಳೂ ಎದುರೆದುರಿಗೆ ಬರುವ ಸಾಧ್ಯತೆ ಇಲ್ಲವೇ ಇಲ್ಲ.  ಹೀಗೇ ಭಗವಂತನು ಜೀವನ ಒಳಗೂ, ಹೊರಗೂ ಇದ್ದು, ಸದಾ ರಕ್ಷಿಸುತ್ತಿದ್ದರೂ, ಜೀವನು ಭಗವಂತನನ್ನು ಗುರುತಿಸುವುದೇ ಇಲ್ಲ.  ರೆಪ್ಪೆಗಳು, ಕಣ್ಣುಗಳನ್ನು ಕೇವಲ ಹೊರಗಿನಿಂದ ಮಾತ್ರ ರಕ್ಷಿಸುತ್ತವೆ, ಆದರೆ ಭಗವಂತನು ಜೀವನನ್ನು ಒಳಗೆ, ಹೊರಗೆ, ಹಿಂದೆ, ಮುಂದೆಲ್ಲಾ ಆಗಸದವೋಲ್ ಇದ್ದು ಅನವರತ ರಕ್ಷಿಸುತ್ತಲೇ ಇದ್ದಾನೆ.  ಇದೇ ಗ್ರಂಥದ ಮಾತೃಕಾ ಸಂಧಿಯ ೮ನೆಯ ಚರಣದಲ್ಲಿ ದಾಸರಾಯರು ಭಗವಂತನು ಯಾವ ಇಂದ್ರಿಯದಲ್ಲಿ ಯಾವ ರೂಪದಲ್ಲಿ ನೆಲೆಸಿದ್ದಾನೆಂಬುದನ್ನು ಸೂಚಿಸುತ್ತಾ "ಭೇಶ ಭಾಸ್ಕರರಕ್ಷಿಯುಗಳಕೆ" - ಬಲದ ಕಣ್ಣಿಗೆ ಸೂರ್ಯದೇವ, ಅಂತರ್ಗತ ಶ್ರೀ ನಾರಾಯಣ ರೂಪದಿಂದಲೂ, ಎಡದ ಕಣ್ಣಿಗೆ ಚಂದ್ರದೇವ, ಅಂತರ್ಗತನಾಗಿ ದಧಿವಾಮನ ರೂಪದಿಂದಲೂ ಇದ್ದು ನೇತ್ರೇಂದ್ರಿಯಗಳನ್ನು ನಿಯಮನ ಮಾಡುತ್ತಾ ಸಂರಕ್ಷಿಸುತ್ತಿದ್ದಾನೆಂಬುದನ್ನು ವಿವರಿಸಿದ್ದಾರೆ.

ಕೇನೋಪನಿಷತ್ತಿನಲ್ಲಿ "ಯಚ್ಚಕ್ಷುಷಾ ನ ಪಶ್ಯತಿ ಯೇನ ಚಕ್ಷೂಂಪಿ ಪಶ್ಯತಿ" - ಯಾರನ್ನು ಜೀವಾತ್ಮನು ಚಕ್ಷುಸ್ಸಿನಿಂದ ಕಾಣಲಾರನೋ, ಯಾರಿಂದ ಚಕ್ಷುರಿಂದ್ರಿಯಗಳು ಕಾಣಲು ಶಕ್ತಿ ಪಡೆಯುತ್ತವೋ ಅವನೇ ಬ್ರಹ್ಮನೆಂದು ತಿಳಿ ಎಂದು ಹೇಳಲಾಗಿದೆ.

ಕಠೋಪನಿಷತ್ತಿನಲ್ಲಿ "ಸೂರ್ಯೋ ಯಥಾ ಸರ್ವಲೋಕಸ್ಯ ಚಕ್ಷುಃ" - ಎಲ್ಲ ಜೀವರ ಚಕ್ಷುರಿಂದ್ರಿಯಗಳಲ್ಲಿ ಅಭಿಮಾನಿ ದೇವತೆಯಾಗಿರುವ ಸೂರ್ಯನಿದ್ದಾನೆಂದು ತಿಳಿಸಿದೆ.  ಶ್ರೀಮದಾಚಾರ್ಯರು ತಮ್ಮ ಭಾಷ್ಯದಲ್ಲಿ  
ಸೂರ್ಯೋ ಯಥಾಂತರಂ ಚಕ್ಷುಃ ಪ್ರತಿಬಿಂಬೋಸ್ಯ ಬಾಹ್ಯಕಃ |
ಬಾಹ್ಯಚಕ್ಷುರ್ಗತೈರ್ ದೋಷೈಃ ಅಂತಶ್ಚಕ್ಷುರ್ನ ಲಿಪ್ಯತೇ ||
ಅಂತಶ್ಚಕ್ಷುರ್ದೇವತಾ ತು ಬಾಹ್ಯ ಚಕ್ಷುರಚೇತನಮ್ |
ಏವಂ ಬಾಹ್ಯಃ ಸ್ವತಂತ್ರತ್ವಾತ್ ಜೀವೇಭ್ಯಃ ಪುರುಷೋತ್ತಮಃ |
ಅಸ್ವತಂತ್ರಸ್ಯ ಜೀವಸ್ಯ ದುಃಖೈರ್ನೈವ ಹಿ ಲಿಪ್ಯತೇ  || - ಚಕ್ಷುರಿಂದ್ರಿಯಗಳಿಗೆ ಅಭಿಮಾನಿಯಾದ ಸೂರ್ಯನು ’ಅಂತರ್ ಚಕ್ಷು’ ಎನಿಸುತ್ತಾನೆ.  ಬಾಹ್ಯದಲ್ಲಿ ಕಾಣುವ ಈ ಇಂದ್ರಿಯ ಚಕ್ಷುವು ಒಳಗಿರುವ ಸೂರ್ಯನ ಪ್ರತಿಬಿಂಬವಾಗಿದೆ.  ಹೊರಗಿನ ಜಡವಾದ ಇಂದ್ರಿಯ, ಕಣ್ಣುಗಳಿಂದ ಉಂಟಾಗುವ ಯಾವುದೇ ದೋಷವೂ ಒಳಗಿನ ಅಭಿಮಾನಿದೇವತೆ ಸೂರ್ಯನಿಗೆ ಲೇಪನವಾಗುವುದಿಲ್ಲ.  ಇದೇ ರೀತಿಯಲ್ಲಿಯೇ ಎಲ್ಲಾ ಜೀವರಿಗಿಂತಲೂ ಅತ್ಯಂತ ಭಿನ್ನನಾಗಿ ಭಗವಂತನು ಸ್ವತಂತ್ರನಾಗಿರುತ್ತಾನೆ.  ಅಸ್ವತಂತ್ರನಾದ ಜೀವನ ಸುಖ-ದುಃಖಗಳು ಭಗವಂತನಿಗೆ ಲೇಪನವಾಗುವುದಿಲ್ಲ ಎಂದಿದ್ದಾರೆ.

ಪ್ರಶ್ನೋಪನಿಷತ್ತಿನ ತೃತೀಯ ಪ್ರಶ್ನಃ ಅಧ್ಯಾಯದಲ್ಲಿ ಭಗವಂತನು ಮುಖ್ಯ ಪ್ರಾಣನ ರೂಪದಲ್ಲಿ ಜೀವನ ಸರ್ವೇಂದ್ರಿಯಗಳಲ್ಲೂ ವ್ಯಾಪಿಸಿದ್ದಾನೆಂಬುದನ್ನು "ಪಾಯೂಪಸ್ಥೇSಪಾನಂ ಚಕ್ಷುಃ ಶ್ರೋತ್ರೇ ಮುಖನಸಿಕಾಭ್ಯಾಂ ಪ್ರಾಣಃ ಸ್ವಯಂ ಪ್ರಾತಿಷ್ಠತೇ" - ಮುಖ್ಯ ಪ್ರಾಣವು ಪಾಯೂಪ ಸ್ಥಲದಲ್ಲಿ (ಅಪಾನ) ಅಪಾನವನ್ನು ನೇಮಕ ಮಾಡುತ್ತದೆ ಮತ್ತು ತಾನು ಸ್ವತಃ ಮುಖದಲ್ಲಿಯೂ ನಾಸಿಕದಿಂದಲೂ ಪ್ರಕಟಗೊಂಡು ಚಕ್ಷುಗಳಲ್ಲಿಯೂ, ಶ್ರೋತ್ರಗಳಲ್ಲಿಯೂ ಸಂಚರಿಸುತ್ತದೆ ಎಂದು ಉಲ್ಲೇಖಿಸಲಾಗಿದೆ.

ಕಣ್ಣಿಗೆ ರೆಪ್ಪೆಗಳು ಸದಾ ರಕ್ಷಣೆ ಒದಗಿಸುವಂತೆ ಶ್ರೀಕೃಷ್ಣನು ಅರ್ಜುನನಿಗೆ ಸದಾ ಜೊತೆಯಲ್ಲಿಯೇ ಇದ್ದು ರಕ್ಷಣೆಯನ್ನು ಒದಗಿಸಿದನೆಂಬುದು ಭಾಗವತದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. 

ದಾಸರಾಯರು ತಮ್ಮ "ಫಲವಿದು ಬಾಳ್ದುದಕೆ" ಕೃತಿಯಲ್ಲಿ
ಪಕ್ಷ್ಮಗಳಕ್ಷಿಗಳ್ ರಕ್ಷಿಸುವಂದದಿ | ಅಕ್ಷರ ಪುರುಷನಪೇಕ್ಷೆಯಲಿ | ಕುಕ್ಷಿಯೊಳಬ್ಜಜ ತ್ರ್ಯಕ್ಷಾದ್ಯಮರರ | ಈಕ್ಷಿಸಿ ಕರುಣದಿ ರಕ್ಷಿಪನಂದದಿ || - ಧೂಳು ಎದ್ದಾಗ ಕಣ್ಣಿಗೆ ಯಾರೂ ನಿನ್ನ ರಕ್ಷಣೆಯನ್ನು ನೀನೇ ಮಾಡಿಕೋ ಎಂದು ತಿಳಿಸುವುದಿಲ್ಲ.  ಅದಕ್ಕೆ ತನ್ನ ರಕ್ಷಣೆ ಮಾಡಿಕೊಳ್ಳುವಷ್ಟು ಬುದ್ಧಿಯಾಗಲೀ, ಸಾಮರ್ಥ್ಯವಾಗಲಿ ಇಲ್ಲ.  ಅದನ್ನು ರಕ್ಷಿಸಲು, ಅದರ ಆಜ್ಞೆ, ಅಪೇಕ್ಷೆ ಏನನ್ನೂ ಪಡೆಯದೆ ನಿರ್ವ್ಯಾಜವಾಗಿ ರೆಪ್ಪೆಯು ಕಣ್ಣನ್ನು ಸರಿಯಾದ ಸಮಯಕ್ಕೆ ರಕ್ಷಣೆ ಮಾಡುವುದು.  ಹಾಗೆಯೇ ಅಕ್ಷರ ಪುರುಷನಾದ ಶ್ರೀಹರಿ ಯಾವ ಅಪೇಕ್ಷೆಯೂ ಇಲ್ಲದೆ ನಮ್ಮನ್ನು ರಕ್ಷಿಸುವನು ಎಂದಿದ್ದಾರೆ.

ಕೈ ಮೈತಿಣ್ಣಿಗೊದಗುವ ತೆರದಿ -  ತಿಣ್ಣಿ ಎಂದರೆ ತಿಂಡಿ, ತಿನಿಸಾಗುವುದು (ನವೆ, ಕೆರೆಯುವಿಕೆ) ಎಂದರ್ಥವಾಗುತ್ತದೆ.  ದೇಹದ ಯಾವುದೇ ಭಾಗದಲ್ಲಿಯಾದರೂ ನವೆ, ತುರಿಕೆಯಾದಾಗ ನಮ್ಮ ಕೈಗಳು ತುರಿಸಲು ಧಾವಿಸುತ್ತವೆ.  ಮನಸ್ಸು ತುರಿಸಿಕೊಳ್ಳುವುದು ಬೇಡವೆಂದುಕೊಂಡರೂ, ಕೈ ಸುಮ್ಮನಿರುವುದಿಲ್ಲ.  ಹಾಗೇ ಜೀವನು ತನ್ನನ್ನು ತಾನೇ ರಕ್ಷಿಸಿಕೊಂಡು ಬಿಡುವೆ, ಭಗವಂತನೇಕೆ ಬೇಕು ಎಂದು ಕೊಂಡರೂ, ಆ ಕಾರುಣ್ಯನಿಧಿಯಾದ ಪರಮಾತ್ಮನು ಸುಮ್ಮನಿರುವುದಿಲ್ಲ, ರಕ್ಷಿಸಲು ಧಾವಿಸುತ್ತಾನೆ.  ತುರಿಸಲು ಧಾವಿಸುವ ಕೈಗೂ, ತುರಿಕೆಯುಂಟಾದ ಚರ್ಮಕ್ಕೂ ಸಾಮ್ಯತೆಯಿದೆ.  ಏಕೆಂದರೆ ಎರಡೂ ನಮ್ಮದೇ ದೇಹದ ಎರಡು ಭಾಗಗಳಾಗಿವೆ.  ಆದರೆ ಧಾವಿಸಿ ಬರುವ ಭಗವಂತನಿಗೂ ಮತ್ತು ಭಕ್ತನಿಗೂ ಯಾವ ಸಾಮ್ಯತೆಯೂ ಇಲ್ಲವೇ ಇಲ್ಲ.    ತನಗೆ ಯಾವ ಉಪಯೋಗ ಅಥವಾ ಪ್ರಯೋಜನವೇನೂ ಇಲ್ಲದಿದ್ದರೂ ಭಗವಂತನು ಭಕ್ತನನ್ನು ರಕ್ಷಿಸುತ್ತಾನೆಂದರೆ ಅದು ಅವನ ಅಪಾರವಾದ ಕರುಣೆ ಮತ್ತು  ಅವನು ’ಭಕ್ತ’ನೆಂಬ ಒಂದೇ ಒಂದು ಕಾರಣ ಮಾತ್ರವಾಗಿರುತ್ತದೆ.   ಬಿಂಬರೂಪಿಯಾದ ಭಗವಂತನ ಕ್ರಿಯೆಗಳೆಲ್ಲವೂ ಯಾವಾಗಲೂ ಪ್ರಬಲವಾಗಿರುತ್ತವೆ.  ಆದರೆ ಪ್ರತಿಬಿಂಬನಾದ ಜೀವನ ಕ್ರಿಯೆಗಳೆಲ್ಲವೂ ಅಲ್ಪವಾಗಿರುತ್ತವೆ.  ಏಕೆಂದರೆ ಜೀವನು ಭಗವಂತನ ಅಧೀನನೇ ಆಗಿದ್ದಾನೆ.  ಈ ಉಪಮಾನ ಅನ್ವಯವಾಗುವ ’ಮಧ್ಯಮಾಧಿಕಾರಿ’ಗಳಿಗೆ ತಿನಿಸಾಗುವುದೆಂದರೆ, ವಿಷಯ ಸಂಬಂಧವಾದ ದುಃಖವೆಂದು ತಿಳಿಯಬಹುದು.  ಹೀಗೆ ತಿನಿಸಾದಾಗ, ಭಗವಂತನು ಜ್ಞಾನದ ಅನುಸಂಧಾನ (ತುರಿಸಲು ಧಾವಿಸುವ ಕೈಯಿದ್ದಂತೆ)ವಿತ್ತು, ಅವರನ್ನು ರಕ್ಷಿಸುತ್ತಾನೆಂದು ತಿಳಿಯಬೇಕು.  ಈ ದೃಷ್ಟಾಂತದಲ್ಲಿ ಭಕ್ತನ ಕಣ್ಣುಗಳು, ತುರಿಸಲು ಧಾವಿಸುವ ಕೈಗಳನ್ನು ನೋಡಬಹುದಾಗಿದೆ. 

ಮೈಗೊದಗುವ ತಿನಿಸು ತುರಿಸಿಕೊಂಡಾಗ ತತ್ಕಾಲಕ್ಕೆ ಅಲ್ಪ ಸಮಾಧಾನ ಹಾಗೂ ಸುಖವನ್ನು ಕೊಟ್ಟರೂ ಕೂಡ, ಕೊನೆಯಲ್ಲಿ ನೋವು, ಉರಿಗಳನ್ನು ಉಳಿಸಿ ದುಃಖಕ್ಕೆ ದೂಡುತ್ತದೆ.  ಹಾಗೆಯೇ ತಾಮಸಿಗರಿಗೆ ಶ್ರೀಹರಿಯು ಸಂಸಾರದಲ್ಲಿ ಕೊಡುವ ಸುಖವು ಕೊನೆಗೆ ತಮಸ್ಸಿನಲ್ಲಿ ಅಧಿಕ ದುಃಖಕ್ಕೆ ಕಾರಣವಾಗಿಸುತ್ತದೆ.

ಮೈ ತಿಣ್ಣಿಗೆ ದೂರದಿಂದ ಧಾವಿಸಿ ಬರುವ ಕೈಗಳಂತೆ, ಗಜೇಂದ್ರ ಮೋಕ್ಷದ ಕಥೆಯಲ್ಲಿ ಗಜೇಂದ್ರನ ರಕ್ಷಣೆಗೆ ಭಗವಂತ ಗರುಡಾರೂಢನಾಗಿ ಹಾರಿ ಬಂದನೆಂಬುದನ್ನು ಭಾಗವತ ತಿಳಿಸುತ್ತದೆ.

ಪಲ್ಗಳು ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ - ಹಲ್ಲುಗಳು ಹಣ್ಣುಗಳನ್ನು ಅಗಿದಗಿದು, ನಾಲಿಗೆಗೆ ಅದರ ಸವಿ, ರಸವನ್ನು ನೀಡುತ್ತದೆ.  ನಾಲಿಗೆಯು ರುಚಿಯನ್ನು ಆಸ್ವಾದಿಸುತ್ತದೆ.  ಹಲ್ಲುಗಳು ತಾವು ಏನನ್ನೂ ಸವಿಯುವುದಿಲ್ಲ.  ಭಗವಂತನು ಕೂಡಾ ಹಾಗೆಯೇ, ಭಕ್ತನ ಸಾಧನಾ ಶರೀರದಲ್ಲಿ ತಾನು ನಿಂತು, ತಾನೇ ಸುಕರ್ಮಗಳನ್ನು ಮಾಡಿ, ಭಕ್ತನಿಂದ ಮಾಡಿಸಿ, ಅದರ ಫಲವನ್ನು ಮಾತ್ರ ಜೀವನಿಗೆ ಉಣಿಸುತ್ತಾನೆ.  ತಾನೇನನ್ನೂ ತೆಗೆದುಕೊಳ್ಳುವುದಿಲ್ಲ.  ಜೀವನ ಸಾಧನಾ ಶರೀರದಲ್ಲಿ ತಾನಿದ್ದು, ಅನೇಕ ಬಗೆಯ ಶಾಸ್ತ್ರ ಸಮ್ಮತವಾದ ಆಚರಣೆಗಳನ್ನೂ, ಪೂಜಾ ವಿಧಿ-ವಿಧಾನಗಳನ್ನೂ, ಉಪವಾಸ-ವ್ರತಗಳನ್ನೂ ಮಾಡಿಸಿ, ಅದರಿಂದ ಉತ್ಪತ್ತಿಯಾದ ಶುಭ ಕರ್ಮಫಲ ರಸವನ್ನು ಜೀವಿಗೇ ಉಣ್ಣಿಸುತ್ತಾನೆ.  ಇದರಿಂದ ಹಲ್ಲಿಗೇನೂ ಫಲವಿರುವುದಿಲ್ಲ.  ಹಾಗೇ ಭಗವಂತನು ಭಕ್ತನ ಲಿಂಗ ದೇಹವನ್ನು ಬಿಡಿಸಿ, ಸ್ವರೂಪ ದೇಹದಿಂದ ಬೇರ್ಪಡಿಸಿ ಜೀವನಿಗೆ ಸ್ವರೂಪಾನಂದ ಸುಖವನ್ನು ಉಣಿಸುತ್ತಾನೆ.  ಎಲ್ಲಿಯವರೆಗೆ ಜೀವನಿಗೆ ಲಿಂಗ ದೇಹವೆಂಬ ಹೊದಿಕೆ ಇರುತ್ತದೋ ಅಲ್ಲಿಯವರೆಗೆ ಸ್ವರೂಪವು ವ್ಯಕ್ತವಾಗುವುದಿಲ್ಲ.  ಭಗವಂತನ ಅಪರಿಮಿತವಾದ ಕಾರುಣ್ಯದಿಂದಲೇ ಜೀವನ ಉದ್ಧಾರವಾಗುತ್ತದೆ.  ತನಗೆ ಯಾವ ಪ್ರಯೋಜನವೂ ಇಲ್ಲದೇ ಶ್ರೀಹರಿಯು ಇದನ್ನು ಏಕೆ ಮಾಡುತ್ತಾನೆಂದರೆ ಅಲ್ಲಿ ಪಾಲಕನಾದ ಅರಸನಾಗಿ ಜೀವನನ್ನು ಪಾಲಿಸುವುದು ಭಗವಂತನ ಸಲ್ಲಕ್ಷಣವಾಗುತ್ತದೆ.  ಅನಂತ ಗುಣಪೂರ್ಣನಾದ ಸ್ವಾಮಿಯು ತನ್ನ ಭಕ್ತರನ್ನು ಪಾಲಿಸಲೇ ಬೇಕೆಂಬ ತನ್ನದೇ ನಿಯಮಕ್ಕೆ ಬದ್ಧನಾಗಿದ್ದಾನೆಂದು ತಿಳಿಯಬಹುದಾಗಿದೆ.

ಪುಣ್ಯಫಲವೀವಂದದಲಿ - ನಾವು ಮಾಡುವ ಎಲ್ಲಾ ಪುಣ್ಯ ಕರ್ಮಗಳೂ ಹೇಗೆ ನಮಗೆ ಸಕಾಲದಲ್ಲಿ ಫಲ ನೀಡುತ್ತವೆಯೋ ಹಾಗೆಯೇ ಭಗವಂತನು ನಮಗೆ ಸಕಾಲದಲ್ಲಿ ರಕ್ಷಣೆಯನ್ನು  ನೀಡುತ್ತಾನೆ.  ಹಲ್ಲುಗಳು ಕೆಲವೊಮ್ಮೆ ಹಣ್ಣುಗಳನ್ನು ಅಗೆದು ತಿನ್ನುವಾಗ, ನಾಲಿಗೆಯನ್ನೂ ಕಚ್ಚುತ್ತದೆ.  ಇದೂ ಕೂಡ ಭಗವಂತನ ಕಾರುಣ್ಯವೆಂದೇ ತಿಳಿಯಬೇಕು.  ಏಕೆಂದರೆ ಭಗವಂತನು ತನ್ನನ್ನು ಮರೆತು ವಿಷಯ ಸುಖದಲ್ಲಿ ಮುಳುಗುವ ಭಕ್ತನನ್ನು ಎಚ್ಚರಿಸುವುದಕ್ಕಾಗಿಯೇ ಹಲ್ಲುಗಳು ನಾಲಿಗೆಯನ್ನು ಕಡಿಯುವಂತೆ ಮಾಡಿರುತ್ತಾನೆ.  ನಾವು ಮಾಡಿದ ಸುಕರ್ಮಗಳು ಹೀಗೆ ನಾಲಿಗೆಯನ್ನು ಕಚ್ಚುವ ಸಂದರ್ಭ ಬರುವುದಿಲ್ಲ.  ಪುಣ್ಯ ಕರ್ಮಗಳು ಪುಣ್ಯ ಫಲಗಳನ್ನೇ ಕೊಡುತ್ತವೆ.  ಅಂದರೆ ಪುಣ್ಯ ಕರ್ಮಗಳಿಂದ ಸಂಗ್ರಹವಾದ ಪುಣ್ಯವೇ ನಮಗೆ ಫಲವನ್ನು ಕೊಡುವುದಿಲ್ಲ.  ನಮ್ಮ ಪುಣ್ಯದ ಶೇಖರಣೆಯ ಅನುಸಾರವಾಗಿ ಭಗವಂತ ನಮಗೆ ಸುಫಲಗಳನ್ನೂ, ಸುಖವನ್ನೂ ನೀಡುತ್ತಾನೆ.  ಇದನ್ನೇ ನಾವು ’ಮಾಡಿದ ಪುಣ್ಯ’ ಕಾಪಾಡಿತು ಎಂದುಕೊಳ್ಳುತ್ತೇವೆ ಅಷ್ಟೇ.  ಪುಣ್ಯ ಎಂಬ ಶಬ್ದಕ್ಕೇ ನಾವು ’ಸುಫಲ’ ಎಂಬ ಅರ್ಥವನ್ನು ಗ್ರಹಿಸುತ್ತೇವೆ.

ಭಗವದ್ಗೀತೆಯ ೨ನೆಯ ಅಧ್ಯಾಯದ ೧೬ನೆಯ ಶ್ಲೋಕದಲ್ಲಿ
ನಾಸತೋ ವಿದ್ಯತ್ಯೇ ಭಾವೋ ನಾಭಾವೋ ವಿದ್ಯತೇ ಸತಃ |
ಉಭಯೋರಪಿ ದೃಷ್ಟೋನ್ತಸ್ತ್ವನಯೋಸ್ತತ್ತ್ವದರ್ಶಿಭಿಃ || - ಪ್ರಕೃತಿಗೂ ಅಳಿವಿಲ್ಲ, ಭಗವಂತನಿಗೂ ಅಳಿವಿಲ್ಲ.  ಅರ್ಜುನನು ತನ್ನ ಗುರು-ಹಿರಿಯರನ್ನು ಕೊಲ್ಲುವುದು ಪಾಪವಲ್ಲವೇ ಎಂದು ಶ್ರೀಕೃಷ್ಣನನ್ನು ಪ್ರಶ್ನಿಸಿದಾಗ, ಭಗವಂತನು ’ಸತ್ತಿನಿಂದ ಅಭಾವವಿಲ್ಲ, ಅಸತ್ತಿನಲ್ಲಿ ಭಾವವಿಲ್ಲ’ ಎಂದು ಉತ್ತರಿಸಿದನು.  ಹಾಗೆಂದರೆ ಒಳ್ಳೆಯ ಕೆಲಸ ಅಥವಾ ಸತ್ಕರ್ಮಗಳನ್ನು ಮಾಡುವುದರಿಂದ ದುಃಖವಾಗುವುದಿಲ್ಲ ಮತ್ತು ಅಸತ್ಕರ್ಮಗಳನ್ನು ಮಾಡುವುದರಿಂದ ಸುಖವಾಗುವುದಿಲ್ಲ ಎಂದರ್ಥವಾಗುತ್ತದೆ.  ಆದ್ದರಿಂದ ಸತ್ಕರ್ಮಗಳನ್ನೇ ಮಾಡುತ್ತಿದ್ದರೆ, ಅದರ ಫಲಗಳನ್ನು ಭಗವಂತ ನಮಗೆ ಸರಿಯಾದ ಸಮಯಕ್ಕೆ ಒದಗಿಸಿ, ರಕ್ಷಿಸುತ್ತಾನೆ.  ಕರ್ಮ ಮಾಡುವುದಷ್ಟೇ ನಮ್ಮ ಕೆಲಸವಾಗಬೇಕೇ ಹೊರತು, ಅದರ ಫಲದಲ್ಲಿ ಅಧಿಕಾರ ಸಾಧಿಸುವುದಾಗಬಾರದು.  ಇದನ್ನು ಭಗವದ್ಗೀತೆಯ ಇದೇ ಅಧ್ಯಾಯದಲ್ಲಿ ಭಗವಂತನು
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂತೋಸ್ತ್ವ ಕರ್ಮಣಿ || - ಕರ್ಮ ಮಾಡುವುದು ಜೀವನ ಕೈಯಲ್ಲಿದೆ ಆದರೆ ಕರ್ಮಫಲ ಮಾತ್ರ ಭಗವಂತನ ಕೈಯಲ್ಲಿದೆ.  ಯಾವಾಗಲೂ ನಾವು ಕರ್ತವ್ಯಶೀಲರಾಗಿ ಇರಬೇಕು ಮತ್ತು ಮಾಡಿದ ಕರ್ಮವನ್ನು ಭಗವದರ್ಪಣೆ ಮಾಡಬೇಕು.  ಇಂತಹ ಕರ್ಮ ಮಾಡಿದರೆ, ನನಗಿಂತಹುದೇ ಫಲಬೇಕೆಂದು ಬಯಸುವುದು ತಪ್ಪಲ್ಲ, ಆದರೆ ಅದನ್ನು ಕೊಡುವವನು ಭಗವಂತನೆಂಬ ಭಾವ ಜಾಗೃತವಾಗಿರಬೇಕು.  ನಾವು ಬಯಸಿದ್ದು ನಮಗೆ ಒಳ್ಳೆಯದಲ್ಲದೇ ಇರಬಹುದು.  ಸರಿ ತಪ್ಪುಗಳ ಪರಿಜ್ಞಾನ ಜೀವನಿಗೆ ಇರುವುದಿಲ್ಲ.  ಭಗವಂತ ನಮ್ಮ ಯೋಗ್ಯತಾನುಸಾರವಾಗಿ, ನಮಗೆ ಸರಿಯಾದದ್ದನ್ನೇ, ಸರಿಯಾದ ಸಮಯದಲ್ಲಿಯೇ ಕೊಡುತ್ತಾನೆಂಬ ನಂಬಿಕೆ ಇರಬೇಕು.  ಹೀಗೆ ಫಲಾಫಲಗಳ ಅಪೇಕ್ಷೆಯಿಲ್ಲದೆ ಮಾಡಿದ ಸುಕರ್ಮ ಪುಣ್ಯವಾಗುತ್ತದೆ.  ಪುಣ್ಯವೇ ಫಲವನ್ನು ಕೊಡುವುದಿಲ್ಲ, ಆದರೆ ಅದು ಸುಖಕ್ಕೆ ಸಾಧನವಾಗುತ್ತದೆ.  ಭಗವಂತನು ನಮ್ಮಿಂದ ಕರ್ಮಗಳನ್ನು ಮಾಡಿಸುವುದೂ, ಅದಕ್ಕೆ ತಕ್ಕ ಫಲವೀಯುವುದೂ, ಎರಡೂ ಸುಂದರವಾಗಿಯೇ ಇರುತ್ತವೆಯೆಂದು ಕಣ್ಣು-ರೆಪ್ಪೆ, ಕೈ-ಹಲ್ಲುಗಳ ದೃಷ್ಟಾಂತದಿಂದ ತಿಳಿಯುತ್ತದೆ.  ಶೇಖರಿಸಿಟ್ಟ ಪುಣ್ಯ ಮುಂದೆ ಬರಬಹುದಾದ ಪಾಪಗಳಿಂದ ತೀವ್ರವಾಗಿ ಬಾಧಿಸುವುದನ್ನು ತಡೆಯುತ್ತದೆ.  ಪುಣ್ಯವೆನ್ನುವುದು ಜಡವಸ್ತುವಲ್ಲ, ಅದು ಸುಂದರವಾದ, ಸೂಕ್ಷ್ಮವಾದ ಸಾತ್ವಿಕವಾದ ದಿವ್ಯ ಚೇತನವಾದ್ದರಿಂದಲೇ ಪೂರ್ಣಾನಂದಮಯನಾದ ಭಗವಂತನು  ಕರ್ಮ ಮಾಡಿಸುವಲ್ಲಿ, ಫಲ ಕೊಡುವುದರಲ್ಲಿ, ಎಲ್ಲದರಲ್ಲಿಯೂ ಒಂದು ಸುಂದರತೆಯಿದೆ, ಅಂದವಿದೆ ಎನ್ನಬಹುದಾಗಿದೆ.  ಪುಣ್ಯಫಲವೆಂಬುದು ನಾವು ಶಾರೀರಿಕವಾಗಿ ಮಾಡುವ ಕರ್ಮಗಳಿಗನುಗುಣವಾಗಿ ದೊರೆಯುವುದಿಲ್ಲ.  ಆದರೆ ಆ ಕರ್ಮವನ್ನು ಮಾಡುವಾಗ ನಮಗಿದ್ದ ಭಾವನೆಗೆ ಅನುಗುಣವಾಗಿ ದೊರೆಯುತ್ತದೆ.  ಯಾವುದೇ ಕರ್ಮವನ್ನಾದರೂ ಸುಮನಸ್ಸಿನಿಂದ ಮತ್ತು ಶ್ರದ್ಧೆಯಿಂದ ಮಾಡಿದಾಗ ಮಾತ್ರ ನಾವು ಅದರಿಂದ ಒಳ್ಳೆಯ ಫಲವನ್ನು ಅಪೇಕ್ಷಿಸಬಹುದಾಗಿದೆ.

ನುಡಿವೆಣ್ಣಿನಾಣ್ಮಾಂಡದೊಳು - ಭಗವಂತನು  ನುಡಿವೆಣ್ಣಿನ ಮೂಲಕವೇ ಜೀವನ ಹತ್ತಿರ ಪುಣ್ಯ ಕರ್ಮಗಳನ್ನು ಮಾಡಿಸುವುದು.   ಸಕಲ ಶಾಸ್ತ್ರಗಳು, ವಿಧಿ ನಿಷೇಧ ವಚನಗಳೆಲ್ಲವೂ ಶ್ರೀಹರಿಯ ಆಜ್ಞೆಯಾಗಿದೆ.  ಭಗವಂತನ ಆಜ್ಞೆಯಿಂದಲೇ ವಾಗಿಂದ್ರಿಯವು ಕೆಲಸ ಮಾಡುತ್ತದೆ.    
ಕೇನೋಪನಿಷತ್‍ನಲ್ಲಿ | ಯದ್ವಾಚಾಽನಭ್ಯುದಿತಂ, ಯೇನ ವಾಗಭ್ಯುದ್ಯತೇ | ತದೇವ ಬ್ರಹ್ಮಾ ತ್ವಂವಿದ್ಧಿ, ನೇದಂ ಯದಿದಮುಪಾಸತೇ || - ಯಾವ ಆತ್ಮವನ್ನು ವಾಗಿಂದ್ರಿಯದಿಂದ ಗ್ರಹಿಸಲಾಗುವುದಿಲ್ಲವೋ, ಯಾವ ಶಕ್ತಿಯ ಮೂಲಕ ವಾಗಿಂದ್ರಿಯವು ಕೆಲಸ ಮಾಡುವುದೋ, ಆ ಆತ್ಮನೇ ಪರಮಾತ್ಮನೆಂದು ತಿಳಿಯಬೇಕು ಎಂಬ ಉಲ್ಲೇಖವಿದೆ. 
ನುಡಿವೆಣ್ಣಿನಾಣ್ಮ(ಪತಿ)ನಾದ ಬ್ರಹ್ಮನ ಅಂಡ ಬ್ರಹ್ಮಾಂಡ.  ಬ್ರಹ್ಮಾಂಡದಲ್ಲಿ ಸಕಲ ಜೀವರಾಶಿಗಳಿಗೂ ಭಗವಂತನ ವಿಧಿ ನಿಷೇಧಗಳು ಅನ್ವಯಿಸುತ್ತವೆ.  ಭಗವಂತನ ಆಜ್ಞೆಯನ್ನು ಮೀರುವುದು ನಿಷಿದ್ಧ ಮತ್ತು ಪಾಪಕರ್ಮವಾಗುತ್ತದೆ.  ಹರಿಯಾಜ್ಞೆಯೇನೆಂದರೆ ಜೀವನು ಸಾಧನಾ ಶರೀರವನ್ನು ಪಡೆದಿರುವುದರಿಂದ ಮೂರು ರೀತಿಯ ತಪಸ್ಸನ್ನು ಅವಶ್ಯವಾಗಿ ಮಾಡಲೇಬೇಕೆಂಬುದು.  ಅವುಗಳನ್ನು ಶ್ರೀಕೃಷ್ಣನು ಭಗವದ್ಗೀತೆಯ ೧೭ನೆಯ ಅಧ್ಯಾಯದ ೧೪, ೧೫ ಮತ್ತು ೧೬ನೇ ಶ್ಲೋಕಗಳಲ್ಲಿ ಶರೀರ ಸಂಬಂಧವಾದ ಕರ್ಮಗಳ ಮೂಲಕ ಮಾಡುವ "ಶಾರೀರಿಕ ತಪಸ್ಸು", ವಾಣಿಯ ಸಂಬಂಧೀ ಮಾಡುವ "ವಾಙ್ಮಯ ತಪಸ್ಸು" ಮತ್ತು ಮನಸಂಬಂಧೀ ಮಾಡುವ "ಭಾವನೆಗಳ ತಪಸ್ಸು" ಎಂದು ವಿವರಿಸಿದ್ದಾನೆ.  ಭಗವಂತ ಹೀಗೆ ವಿಧಿ ನಿಷೇಧಗಳನ್ನರಿತು ಮೂರು ವಿಧದ ತಪಸ್ಸನ್ನು ಮಾಡುವ ಭಕ್ತರಿಗೆ ಪುಣ್ಯ ಫಲಗಳನ್ನು ಅಂದವಾಗಿ ನೀಡುತ್ತಾನೆ ಎಂದಿದ್ದಾರೆ ದಾಸರಾಯರು.

ನುಡಿವೆಣ್ಣು ಎಂಬುದು ವಾಗ್ದೇವಿಯಾದ ಸರಸ್ವತಿಗೆ ಅನ್ವಯಿಸುತ್ತದೆ. ಭಗವಂತನು ನುಡಿವೆಣ್ಣಿನ ಮೂಲಕವೇ ಜೀವನ ಹತ್ತಿರ ಪುಣ್ಯ ಕರ್ಮಗಳನ್ನು ಮಾಡಿಸುವುದು.  ಭಗವಂತನ ಆರಾಧನೆಯಾಗಿ ಯಾವುದೇ ಮಂತ್ರ, ವೇದಘೋಷ, ಸೂಕ್ತ ಪಾರಾಯಣಗಳನ್ನು ಪ್ರಾರಂಭಿಸುವ ಮೊದಲು ನಾವು ವಾಗ್ದೇವಿಯಾದ ಸರಸ್ವತಿಯನ್ನು "ಓಂ ಪ್ರಣೋ ದೇವೀ ಸರಸ್ವತೀ ವಾಜೇಭಿ ರ್‍ವಾಜಿನೀವತಿ, ಧೀನಾ ಮವಿತ್ರ್ಯವತು" ಎಂದು ಪ್ರಾರ್ಥಿಸುತ್ತೇವೆ. ಒಂದೊಂದು ಅಕ್ಷರವೂ ಭಗವಂತನ ರೂಪವೆಂದು ನಮ್ಮ ಶಾಸ್ತ್ರಗಳು ತಿಳಿಸುತ್ತವೆ.  ನಾವು ಆಡುವ ಪ್ರತೀ ಮಾತು ಕೂಡ ಭಗವಂತನ ಕುರಿತಾಗಿಯೇ ಇರಬೇಕು ಮತ್ತು ಅದನ್ನು ತಪಸ್ಸೆಂದು ಗ್ರಹಿಸಿ ಆಚರಿಸಬೇಕೆಂಬುದನ್ನು ಭಗವದ್ಗೀತೆಯ ೧೭ನೆಯ ಅಧ್ಯಾಯದ ೧೫ನೆಯ ಶ್ಲೋಕದಲ್ಲಿ ಶ್ರೀ ಕೃಷ್ಣನು
ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ | ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ || - ಆಡುವ ಮಾತುಗಳು ಉದ್ವೇಗರಹಿತವಾಗಿರಬೇಕು, ಮತ್ತೊಬ್ಬರ ಮನ ನೋಯಿಸದಂತಿರಬೇಕು, ಅರ್ಥಪೂರ್ಣವಾಗಿರಬೇಕು, ವ್ಯರ್ಥಾಲಾಪವಾಗಿರಬಾರದು, ಶ್ರವಣ ಮನಕಾನಂದವೀಯುವಂತಿರಬೇಕು.  ಯಾವುದು ಭಗವಂತನ ಗುಣಗಳನ್ನು ತಿಳಿಸುವುದೋ, ಭಗವಂತನ ನಾಮ ಜಪವಾಗಿದೆಯೋ, ಶಾಸ್ತ್ರಗಳ ಅಧ್ಯಯನವಾಗಿದೆಯೋ ಅದೇ ವಾಣಿಯ ಮೂಲಕ ಮಾಡುವ "ವಾಙ್ಮಯ ತಪಸ್ಸು" ಎಂದಿದ್ದಾನೆ.  ಹೀಗೆ ವಾಙ್ಮಯ ತಪಸ್ಸನ್ನು ಮಾಡುವುದು ಪುಣ್ಯಕರ್ಮವಾಗುತ್ತದೆ.  ಅದರ ಫಲವನ್ನು ಭಗವಂತನು ನಮಗೆ ಸರಿಯಾದ ಸಮಯಕ್ಕೆ ಕೊಟ್ಟು ಕಾಪಾಡುತ್ತಾನೆ.

ಲಕ್ಷ್ಮಣನ ಅಣ್ಣ -  ಲಕ್ಷ್ಮಣನು ಚಿಕ್ಕಂದಿನಿಂದಲೂ ತನ್ನ ಹಿರಿಯಣ್ಣನಾದ ರಾಮನಿಗೆ ಅತಿ ಪ್ರಿಯನಾಗಿದ್ದನು.  ತನ್ನದೇ ಮತ್ತೊಂದು ಪ್ರಾಣವು ಹೊರಗೆ ಬಂದು ತಮ್ಮ ಲಕ್ಷ್ಮಣನ ರೂಪದಲ್ಲಿದೆಯೆಂದೇ ಶ್ರೀರಾಮನು ಭಾವಿಸಿದ್ದನು.  ಲಕ್ಷ್ಮಣನು ಸದಾ ಅಣ್ಣನ ಜೊತೆಗೇ ಇರುತ್ತಿದ್ದನು.  ಶ್ರೀರಾಮಚಂದ್ರನ ಪಟ್ಟಾಭಿಷೇಕದ ಸಮಯದಲ್ಲಿ ಕೈಕೇಯಿಗೆ ಕೊಟ್ಟ ವರಗಳ ಪ್ರಭಾವದಿಂದ  ಧರ್ಮ ಪಾಶದಿಂದ ಕಟ್ಟಲ್ಪಟ್ಟ ದಶರಥ ಮಹಾರಾಜನು ರಾಮನನ್ನು, ಕಾಡಿಗೆ ಕಳುಹಿಸಬೇಕಾಯಿತು.  ತಂದೆಯ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ರಾಮನನ್ನು, ಅವನಿಗೆ ಅತಿ ಪ್ರಿಯನಾದ ಲಕ್ಷ್ಮಣನು ಅತೀ ಶ್ರೇಷ್ಠವಾದ ಸೋದರ ಭಾವವನ್ನು ವ್ಯಕ್ತಪಡಿಸುತ್ತಾ ಅನುಸರಿಸುತ್ತಾನೆ.  ದಂಡಕಾರಣ್ಯದಲ್ಲಿ ಅಣ್ಣನನ್ನು ಬೆನ್ನು ಬಿಡದೆ ಸದಾ ಜೊತೆಯಲ್ಲಿದ್ದು ಸೇವೆ ಮಾಡುತ್ತಾನೆ.  ಲಕ್ಷ್ಮಣನು ಉತ್ಕೃಷ್ಠವಾದ ಭಕ್ತಿ ಮತ್ತು ಸೋದರ ಪ್ರೇಮದ ಪ್ರತೀಕನಾಗುತ್ತಾನೆ.  ಹೀಗೆ ಆದರ್ಶವನ್ನು ಮೆರೆದ ಲಕ್ಷ್ಮಣನ ಅಣ್ಣನೆಂದು ಸಂಬೋಧಿಸಿಕೊಂಡು, ಭಗವಂತನು ತನ್ನ ಭಕ್ತನಾದ ಲಕ್ಷ್ಮಣನಿಗೆ ಧನ್ಯತಾ ಭಾವವನ್ನು ಕೊಟ್ಟಿರುವುದು ಕೂಡ ಶ್ರೀಹರಿಯ ಕಾರುಣ್ಯವೇ ಆಗಿದೆ.

ಒದಗುವ ಭಕ್ತರವಸರಕೆ -  ಅವಸರಕೆ ಎಂದರೆ ಜೀವನ ಸುಕರ್ಮಗಳು ಪರಿಪಕ್ವವಾಗುವ ಕಾಲಕ್ಕೆ ಸರಿಯಾಗಿ ಎಂದು ಅರ್ಥೈಸಬಹುದು.  ಭಕ್ತರಾಧೀನನಾದ ಶ್ರೀರಾಮಚಂದ್ರನು  ಎಲ್ಲಾ ಆಪತ್ತುಗಳನ್ನೂ ಪರಿಹರಿಸತಕ್ಕವನೆಂಬುದು ರಾಮಾಯಣದಲ್ಲಿ "ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ | ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್" - ಭಕ್ತರ ಆಪತ್ತುಗಳನ್ನು ಪರಿಹರಿಸತಕ್ಕವನೂ, ಸಕಲ ಸಂಪತ್ತುಗಳನ್ನು ಕೊಡತಕ್ಕವನೂ, ಸರ್ವಲೋಕ ಮನೋಹರನೂ ಆಗಿರುವ ಶ್ರೀರಾಮನಿಗೆ ಪುನಃ ಪುನಃ ನಮಸ್ಕರಿಸುತ್ತೇನೆ ಎಂದು ಪ್ರಾರ್ಥಿಸುವುದನ್ನು ತಿಳಿಸುತ್ತದೆ.  ಆಪತ್ತುಗಳು ಎದುರಾದಾಗ "ಆಪತ್ಕಾಲೇ ತು ಸಮ್ಪ್ರಾಪ್ತೇ ಸ್ಮರ್ತವ್ಯೋ ಹರಿರೀಶ್ವರಃ" - ಆಪತ್ಕಾಲವು ಒದಗಿ ಬಂದಾಗ ಸರ್ವಲೋಕೇಶ್ವರನಾದ ಹರಿಯನ್ನು ಸ್ಮರಿಸಬೇಕು ಎಂದು ಕೂಡ ತಿಳಿಸಿದೆ.  ಹೀಗೆ ಶರಣಾಗತರಾಗಿ ಪ್ರಾರ್ಥಿಸಿಕೊಂಡಾಗ
ಅಗ್ರತಃ ಪೃಷ್ಠತಶ್ಚೈವ ಪಾರ್ಶ್ವತಶ್ಚ ಮಹಾಬಲೌ |  ಆಕರ್ಣಪೂರ್ಣಧನ್ವಾನೌ ರಕ್ಷೇತಾಂ ರಾಮಲಕ್ಷ್ಮಣೌ || - ಕರ್ಣ ಪರ್ಯಂತವಾಗಿ ಧನುಸ್ಸಿನ ಶಿಂಜಿನಿಯನ್ನು ಸೆಳೆದು ಹಿಡಿದಿರುವ ಮಹಾಬಲಿಷ್ಠನಾದ ಲಕ್ಷ್ಮಣನ ಅಣ್ಣನಾದ ರಾಮಚಂದ್ರನು ತಮ್ಮ ಲಕ್ಷ್ಮಣ ಸಮೇತವಾಗಿ ಮುಂದೆ-ಹಿಂದೆ ಮತ್ತು ಅಕ್ಕ-ಪಕ್ಕಗಳಲ್ಲಿ ನಮ್ಮನ್ನು ರಕ್ಷಿಸಲು ಸಕಾಲಕ್ಕೆ ಧಾವಿಸಿ ಬಂದೊದಗುತ್ತಾನೆ ಎಂಬ ಉಲ್ಲೇಖವಿದೆ.   ಶ್ರೀರಾಮಚಂದ್ರನು ಸಾವಿರಾರು ವರ್ಷಗಳ ಕಾಲ ’ರಾಮರಾಜ್ಯ’ದಲ್ಲಿ ಪಶು, ಪಕ್ಷಿ, ಪ್ರಜೆಗಳೆಲ್ಲರನ್ನೂ ಆನಂದ ಪಡಿಸಿ, ಸಂತೃಪ್ತಿಯಿಂದ ರಾಜ್ಯವಾಳಿದ.  ಅವತಾರವನ್ನು ಮುಗಿಸಿ ತನ್ನ ಧಾಮಕ್ಕೆ ಹೊರಟ ಭಗವಂತನ ಹಿಂದೆ ಹಿಂಡು ಹಿಂಡಾಗಿ ವನಚರಗಳು, ಪಶುಗಳು, ಪಕ್ಷಿಗಳು, ಮನುಷ್ಯರು, ಮರ-ಗಿಡ-ಬಳ್ಳಿಗಳೂ ಕೂಡ ರಾಮಚಂದ್ರನನ್ನು ಅನುಸರಿಸಿಕೊಂಡು ಹೋಗುವರೆಂಬ ಉಲ್ಲೇಖವಿದೆ.  ಭಗವಂತನ ನಿರ್ಗಮನದ ಸಮಯದಲ್ಲಿ ಅಯೋಧ್ಯೆಯಲ್ಲಿ ಉಸಿರಾಡುವ ಒಂದೇ ಒಂದು ಪ್ರಾಣಿಯೂ ಉಳಿದಿರುವುದಿಲ್ಲ.  ಭಕ್ತಪರಾಧೀನನೂ, ಕರುಣಾಸಾಗರನೂ ಆದ ಭಗವಂತನು ಬ್ರಹ್ಮದೇವರಿಗೆ "ಏಷಾಂ ಲೋಕಂ ಜನೌಘಾನಾಂ ದಾತುಮಹರ್ಸಿ ಸುವ್ರತ" - ನನ್ನನ್ನನುಸರಿಸಿ ಬಂದಿರುವ ಈ ನನ್ನ ಭಕ್ತ ಸಮುದಾಯಕ್ಕೆ ಉತ್ತಮವಾದ ಲೋಕಗಳನ್ನು ಅನುಗ್ರಹಿಸು ಎಂದು ಆದೇಶಿಸುತ್ತಾನೆ.  ಇದು ಲಕ್ಷ್ಮಣನ ಅಣ್ಣನಾದ ಶ್ರೀರಾಮನ ಕಾರುಣ್ಯವಾಗಿದೆ.

ಅಮರಗಣಸಹಿತ - ಜೀವನು ಸಾಧನಾ ಶರೀರವನ್ನು ಪಡೆದುಕೊಂಡು ಬಂದಿದ್ದರೂ ಕೂಡ, ಅವನು ಅಸ್ವತಂತ್ರನು ಮತ್ತು ಭಗವಂತನ ಅಧೀನನೇ ಆಗಿರುವುದರಿಂದ, ತಾನೇ ಸ್ವತಃ ಏನನ್ನೂ ಮಾಡಲಾರದವನಾಗಿದ್ದಾನೆ.  ಭಗವಂತನೇ ಜೀವನಲ್ಲಿ ನಿಂತು, ಮಾಡಿ ಮಾಡಿಸುತ್ತಾನೆ.  ತಾನೊಬ್ಬನೇ ಅಲ್ಲದೆ, ತನ್ನ ಜೊತೆ ಜೊತೆಗೇ ರಮಾದೇವಿ, ಬ್ರಹ್ಮ, ವಾಯು ಮುಂತಾದ ದೇವತೆಗಳ ಸಮೂಹವನ್ನೇ, ಜೀವಿಯ ಪ್ರತಿ ಅಂಗಗಳಲ್ಲೂ ನಿಲ್ಲಿಸಿ, ಅವರಿಂದ ಪ್ರೇರಿಸಿ, ಮಾಡಿಸುತ್ತಾನೆ.  ಯಾವ ಜೀವನೂ ಭಗವಂತನಿಗೆ ಹೆಚ್ಚೂ ಅಲ್ಲ, ತೃಣವೂ ಅಲ್ಲ.  ಸಾಧನಾ ಮಾರ್ಗದಲ್ಲಿ ನಡೆಯಬೇಕೆಂಬ ಜೀವನಿಗೆ ತನ್ನ ಪರಿವಾರದ ಎಲ್ಲಾ ದೇವತೆಗಳಿಂದಲೂ ಅವಕಾಶ ಒದಗಿಸಿ ಜೀವನ ಸಾಧನೆ ಮುನ್ನಡೆಯುವಂತೆ ಮಾಡುತ್ತಾನೆ.  ಭಗವಂತ ಯಾವುದೇ ಕೆಲಸವನ್ನು ಮಾಡಲು ನಿರ್ಧರಿಸಿದರೂ, ಅವನ ಪರಿವಾರ ದೇವತೆಗಳು, ಭಗವಂತನ ಅವತಾರಕ್ಕೆ ಮೊದಲೇ ಬಂದು, ಅಲ್ಲಿ ಎಲ್ಲವನ್ನೂ ಸಜ್ಜುಗೊಳಿಸಿ, ಭಗವಂತನ ಆಗಮನಕ್ಕೆ ಕಾತುರದಿಂದ ಕಾಯುತ್ತಾರೆ.  ರಾವಣನ ವಧೆಯಾಗಿ, ಭೂಭಾರ ಹರಣವಾಗಬೇಕಾದ ಕಾಲದಲ್ಲಿ, ಶ್ರೀಹರಿಗೆ ಸಹಾಯಕ್ಕೆ ಯೋಗ್ಯರಾದ ಪ್ರಾಣಿವಿಶೇಷಗಳನ್ನು ಭೂಮಿಯಲ್ಲಿ ಸೃಷ್ಟಿಸಿ ಎಂದು ಬ್ರಹ್ಮ ದೇವರು ದೇವತೆಗಳಿಗೆ ಆದೇಶಿಸುತ್ತಾರೆ.  ಹೀಗೆ ಭಗವಂತ ಭಕ್ತನನ್ನು ಅನುಗ್ರಹಿಸಲು, ತಾನೊಬ್ಬನೇ ಬರದೆ ತನ್ನ ಅಮರಗಣ ಸಹಿತವಾಗಿ ಬಂದು ಉದ್ಧರಿಸುತ್ತಾನೆ.  ತನ್ನ ಇಚ್ಛಾಮಾತ್ರದಿಂದಲೇ, ತಾನೊಬ್ಬನೇ ಎಲ್ಲಾ ಕಾರ್ಯವನ್ನೂ ನಡೆಸಬಲ್ಲ ಭಗವಂತನು ತನ್ನ ಅಮಿತ ಕಾರುಣ್ಯ, ವಾತ್ಸಲ್ಯಗಳಿಂದಾಗಿ ಹೀಗೆ ತನ್ನ ಅಮರಗಣ ಸಹಿತವಾಗಿ, ತನ್ನ ಭಕ್ತರನ್ನು ಉದ್ಧರಿಸುತ್ತಾನೆ.
 
ಮೇಲಿನ ದೃಷ್ಟಾಂತಗಳನ್ನು ಗಮನಿಸಿದಾಗ, ಕಣ್ಣುಗಳನ್ನು ಅಪಾಯ ಬಾರದಂತೆ ಜೋಪಾನ ಮಾಡುವ ರೆಪ್ಪೆಯ೦ತೆ, ನವೆಯು೦ಟಾದಾಗ ತುರಿಸುವ ಕೈಗಳ೦ತೆ, ಸಾಧನಾ ಪಥದಲ್ಲಿ ಸಾಗುವ ಜೀವಿಗೆ ಭಗವ೦ತನು ನಡುನಡುವೆ ಬರುವ ಪ್ರತಿಬ೦ಧಕಗಳ ಸರಣಿಯನ್ನು ಸರಿಪಡಿಸಿ ನ೦ತರ ಅದನ್ನು ನಿವಾರಿಸುತ್ತಾನೆ ಎ೦ಬುದು ವೇದ್ಯವಾಗುತ್ತದೆ.


ಚಿತ್ರಕೃಪೆ : ಅಂತರ್ಜಾಲ

Thursday, November 20, 2014

ಕರುಣಾ ಸಂಧಿ - ೨೬ ನೇ ಪದ್ಯ


ಬಿಟ್ಟವರ ಭವಪಾಶದಿಂದಲಿ
ಕಟ್ಟುವನು ಬಹು ಕಠಿಣನಿವ ಶಿ-
ಷ್ಟೇಷ್ಟನೆಂದರಿದನವರತ ಸದ್ಭಕ್ತಿಪಾಶದಲಿ |
ಕಟ್ಟುವರ ಭವ ಕಟ್ಟು ಬಿಡಿಸುವ
ಸಿಟ್ಟಿನವನಿವನಲ್ಲ ಕಾಮದ
ಕೊಟ್ಟು ಕಾವನು ಸಕಲ ಸೌಖ್ಯವನಿಹಪರಂಗಳಲಿ || ೨೬ ||

ಪ್ರತಿಪದಾರ್ಥ : ಬಿಟ್ಟವರ - ಭಗವಂತನನ್ನು ಸ್ಮರಿಸದೆ ಭಜಿಸದೆ ಅರ್ಚಿಸದೆ ಮರೆತವರನ್ನು, ಭವಪಾಶದಿಂದಲಿ - ಸಂಸಾರವೆಂಬ ಹಗ್ಗದಿಂದಲಿ, ಕಟ್ಟುವನು - ಬಿಗಿಯುವನು ಕಟ್ಟಿ ಹಾಕುವನು, ಬಹು ಕಠಿಣನಿವ - ನಿಷ್ಠುರನಾಗುವವನು, ಶಿಷ್ಟೇಷ್ಟನೆಂದು ಅರಿತು - ಯೋಗ್ಯರಿಗೆ ಇಷ್ಟನಾದವನು ಶಿಷ್ಟಜನರನ್ನು ಉದ್ಧರಿಸುವವನು ಬ್ರಹ್ಮಾದಿ ದೇವತೆಗಳಿಗೆ ಪ್ರಿಯನಾದವನು ಎಂದು ತಿಳಿದು, ಅನವರತ - ನಿರಂತರವೂ, ಸದ್ಭಕ್ತಿ ಪಾಶದಲಿ - ಸದ್ಭಕ್ತಿ ಎಂಬ ಹಗ್ಗದಲ್ಲಿ, ಕಟ್ಟುವರ - ಕಟ್ಟಿಹಾಕುವವನು, ಭವಕಟ್ಟು ಬಿಡಿಸುವ - ಸಂಸಾರದ ಬಂಧನದಿಂದ ಮುಕ್ತಿಗೊಳಿಸುವವನು ಸದ್ಗತಿ ಕೊಡುವವನು, ಸಿಟ್ಟಿನವನಿವನಲ್ಲ - ತನ್ನ ಪ್ರೀತಿಯ ಭಕ್ತರ ಮೇಲೆಂದಿಗೂ ಸಿಟ್ಟು ಮಾಡಿಕೊಳ್ಳದವನು, ಕಾಮದ - ಬೇಡಿದ ಇಷ್ಟಾರ್ಥಗಳನ್ನು ಕೊಡುವವನು, ಸಕಲ ಸೌಖ್ಯವನು ಇಹಪರಂಗಳಲಿ - ಇಹದಲ್ಲಿ ಸಕಲ ಭೋಗಗಳನ್ನೂ ಪರಲೋಕದಲ್ಲಿ ಸಮಸ್ತ ಸುಖವನ್ನೂ ಕೊಟ್ಟು ಸಂರಕ್ಷಿಸುವವನು (ಪರದಲ್ಲಿ ಸುಖವೆಂದರೆ ಮುಕ್ತಿ ಎಂಬ ಅರ್ಥವಾಗುವುದು).

ಲೌಕಿಕ ಭೋಗಗಳಿ೦ದ, ಸ೦ಪತ್ತುಗಳಿ೦ದ ಮದೋನ್ಮತ್ತನಾಗಿ ಭಗವ೦ತನ ಸರ್ವೋತ್ತಮತ್ವವನ್ನು ತಿಳಿಯದೆ, ತತ್ವಜ್ಞಾನವನ್ನು ಸ೦ಪಾದಿಸದೆ, ಸತ್ಕಾಮಕರ್ಮಗಳನ್ನು ಅನುಷ್ಟಾನ ಮಾಡದೇ ಇರುವ೦ತಹ ಜೀವನನ್ನು, ಪರಮಾತ್ಮನು ಜನನ ಮರಣಾಖ್ಯರೂಪವಾದ ಸ೦ಸಾರವೆ೦ಬ ಹಗ್ಗದಿ೦ದ ಬಿಗಿದು, ನರಕವಾಸವಾಗುವ ಸಮಯದಲ್ಲಿ ದಯಾರಹಿತನಾಗಿ ಬಹು ತರವಾದ ಕ್ಲೇಷಗಳನ್ನು ಉ೦ಟು ಮಾಡುತ್ತಾನೆ. ಜೀವನು ಭಗವ೦ತನನ್ನು ಗುಣಪೂರ್ಣನೆ೦ತಲೂ, ಸರ್ವೋತ್ತಮನೆ೦ತಲೂ ಅರಾಧಿಸುತ್ತ, ಸತ್ಕಾಮಕರ್ಮಗಳಲ್ಲಿ ತನ್ನನ್ನು ತೊಡಗಿಸಿಕೊ೦ಡು, ಮಾಹಾತ್ಮ್ಯಜ್ಞಾನಪೂರ್ವಕ ಸುಧೃಡಸ್ನೇಹದಿ೦ದ, ಪರಮಾತ್ಮನ ಪ್ರತಿಮೆಯನ್ನು ತನ್ನ ಹೃದಯಾಕಾಶದಲ್ಲಿ ಧ್ಯಾನೋಪಾಸನೆಯಿ೦ದ ನಿಲ್ಲಿಸಿ, ಭಕ್ತಿಪೂರ್ವಕವಾಗಿ ತನ್ನನ್ನು ಸಮರ್ಪಿಸಿಕೊಳ್ಳಬೇಕಾಗುತ್ತದೆ ಎ೦ದು ದಾಸರಾಯರು ತಿಳಿಸುತ್ತಾರೆ. ಅ೦ತಹ ಸುಜೀವನನ್ನು ಭಗವ೦ತನು ಸ೦ಸಾರಕ್ಕೆ ಕಾರಣವಾದ ಲಿ೦ಗದೇಹವೆ೦ಬ ಹಗ್ಗದ ಕಟ್ಟನ್ನು ವಿರಜಾಸ್ನಾನದಿ೦ದ ಭೇದಿಸಿ, ದಿವ್ಯಲೋಕಗಳನ್ನು ಕೊಟ್ಟು ಕಾಪಾಡುತ್ತಾನೆ. ಬೇಡಿದಿಷ್ಟಾರ್ಥಗಳನ್ನು ಅನುಗ್ರಹಿಸಿ, ತ್ರಿಗುಣೋಪಾಧಿಯಿ೦ದ ಮಾಡುವ ದೋಷಕಾರ್ಯಗಳಲ್ಲಿ, ಪರಮಾತ್ಮನ ಅನುಸ೦ಧಾನವಿರುವುದರಿ೦ದ, ತಾನು ಕೋಪಿಸಿಕೊಳ್ಳದೆ ಅಪರೋಕ್ಷಜ್ಞಾನವನ್ನು ಕೊಟ್ಟು, ಸ೦ಚಿತಾಗಾಮಿಗಳಿ೦ದ ಬರುವ ಪಾಪಕರ್ಮಗಳಿ೦ದ ನಿರ್ಲಿಪ್ತನನ್ನಾಗಿ ಮಾಡುತ್ತಾ, ಜೀವನ್ಮುಕ್ತರನ್ನಾಗಿಸಿ, ಪ್ರಳಯಾ೦ತಕ್ಕೆ ಮೋಕ್ಷವನ್ನು ದಯಪಾಲಿಸುತ್ತಾನೆ.

ಬಿಟ್ಟವರ ಭವಪಾಶದಿಂದಲಿ ಕಟ್ಟುವನು - ಬಿಟ್ಟವರ ಎಂದರೆ ಯಾರು ಭಗವಂತನನ್ನು ಬಿಟ್ಟರೋ ಅವರು ಎಂದರ್ಥವಾಗುತ್ತದೆ.  ಭಗವಂತನನ್ನು ಬಿಡುವುದೆಂದರೆ ಏನು ಎಂಬ ಪ್ರಶ್ನೆ ಬಂದಾಗ, ಭಗವಂತನನ್ನು ಜೀವನು ಎಂದಿಗೂ, ಒಂದು ಕ್ಷಣಕ್ಕೂ ಬಿಡಲಾಗುವುದಿಲ್ಲವೆಂದು ತಿಳಿಯುತ್ತದೆ.  "ದ್ವಾ ಸುಪರ್ಣ" ಎಂಬ ಶ್ರುತಿಗಣುಗುಣವಾಗಿ, ಭಗವಂತನೂ ಜೀವನೂ ಇಬ್ಬರೂ ದೇಹವೆಂಬ ವೃಕ್ಷದಲ್ಲಿ ಎರಡು ಪಕ್ಷಿಗಳು.  ಸದಾ ಒಟ್ಟಿಗೇ ಇರುವಂತಹವರು.  ಜೀವನೂ ಪರಮಾತ್ಮನನ್ನು ಬಿಟ್ಟು ಇರಲಾರ, ಪರಮಾತ್ಮನೂ ಜೀವನನ್ನು ಬಿಟ್ಟು ಒಂದರೆಕ್ಷಣವೂ ಇರಲಾರನು.  ಆದರೆ ಇಲ್ಲಿ ಬಿಟ್ಟವರ ಎಂದು ಉಪಯೋಗವಾಗಿರುವ ಪದಕ್ಕೆ ದಾಸರಾಯರು, ಭಗವಂತನನ್ನು ವಿಸ್ಮರಣೆ ಮಾಡಿದವರು ಎಂದರ್ಥೈಸುತ್ತಾರೆ.  ಭಗವಂತನನ್ನು ಭಕ್ತಿಯಿಂದ ಆರಾಧಿಸುವುದಕ್ಕಾಗಿಯೇ ಜೀವನು ಸಾಧನಾ ಶರೀರವನ್ನು ಪಡೆದಿರುತ್ತಾನೆ.  ಆದರೆ ತಾನು ಬಂದ ಮೂಲ ಉದ್ದೇಶವನ್ನೇ ಮರೆತು, ಭಗವಂತನನ್ನೇ ವಿಸ್ಮರಣೆ ಮಾಡುತ್ತಾ ವಿಷಯಾಸಕ್ತಿಗಳಲ್ಲಿ ಮುಳುಗಿದವರನ್ನು ’ಬಿಟ್ಟವರು’ ಎಂದು ಕರೆದಿದ್ದಾರೆ.  ಹೀಗೆ ಯಾರು ತನ್ನನ್ನು ಮರೆತು ಲೌಕಿಕ ಜಗತ್ತಿನಲ್ಲಿ ಮುಳುಗುತ್ತಾರೋ, ಅಂತಹವರನ್ನು ಭಗವಂತನು ಸಂಸಾರ ಬಂಧನಗಳಲ್ಲಿ ಕಟ್ಟಿಹಾಕಿ ಪುನಃ ಪುನಃ ಜನ್ಮವೆತ್ತುವಂತೆ ಮಾಡುತ್ತಾನೆ.  ಭವ ಎಂದರೆ ಸಂಸಾರವೆಂದೂ ಪಾಶವೆಂದರೆ ಹಗ್ಗವೆಂದೂ ತಿಳಿಯುತ್ತದೆ.  ಸಾಧನೆಯ ಮಾರ್ಗವನ್ನು ಆಯ್ದುಕೊಂಡು, ಭಗವಂತನಲ್ಲಿ ಭಕ್ತಿ ಮೂಡುವ ತನಕವೂ ವ್ಯರ್ಥ ಜನ್ಮಗಳು ಆಗುತ್ತಲೇ ಇರುತ್ತವೆ. ವ್ಯರ್ಥ ಜನ್ಮಗಳೆಂದರೆ ಮಾನವ ಜನ್ಮವಲ್ಲವೆಂದೂ ಕೂಡ ಊಹಿಸಬಹುದು.  ಅರಿವಿಲ್ಲದ, ಜ್ಞಾನದಾಹವಿಲ್ಲದ ಕ್ರಿಮಿ, ಕೀಟಗಳ, ಪ್ರಾಣಿಗಳ ಜನ್ಮಗಳನ್ನು ಕೂಡ ಪಡೆಯಬಹುದು. ನಾವು ಪಡೆದಿರುವ ಈ ಮಾನವ ಜನ್ಮವು ಹಿಂದೆ ನಾವು ಮಾಡಿದ ಯಾವುದೋ ಪುಣ್ಯ ವಿಶೇಷದಿಂದಾಗಿಯೇ ನಮಗೆ ಲಭ್ಯವಾಗಿದೆಯೆಂದು ತಿಳಿಯಬೇಕು.  ಆದರೆ ಸಿಕ್ಕಿರುವ ಈ ಅದ್ಭುತವಾದ, ಅಮೂಲ್ಯವಾದ ಅವಕಾಶದ ಜನ್ಮವನ್ನು ಭಗವಂತನ ಸ್ಮರಣೆ ಮಾಡದೇ ಬಿಟ್ಟು ಬಿಟ್ಟರೆ, ಮುಂದೆ ನಮಗೆ ಮತ್ತೊಂದು ಉತ್ತಮ ಜನ್ಮ ಸಿಕ್ಕುವುದೆಂಬ ಭರವಸೆಯೇ ಇಲ್ಲವಾಗುತ್ತದೆ.   ಆದ್ದರಿಂದ ಭಗವಂತನಲ್ಲಿ ಶರಣಾಗಿ, ಅವನನ್ನು ಭಕ್ತಿಯ ಪಾಶದಿಂದ ಕಟ್ಟಿದರೆ ಮಾತ್ರ ನಮಗೆ ಭವಪಾಶದಿಂದ ಬಿಡುಗಡೆ ಸಿಕ್ಕುತ್ತದೆ.  ನಾವು ಅವನನ್ನು ಕಟ್ಟಿದರೆ ಮಾತ್ರ ಅವನು ನಮ್ಮನ್ನು ಬಿಡಿಸುತ್ತಾನೆ.  ನಾವು ಅವನನ್ನು ಬಿಟ್ಟರೆ ಅವನು ನಮ್ಮನ್ನು ಕಟ್ಟಿಹಾಕಿ ಬಿಡುತ್ತಾನೆ. 

ಶ್ರೀ ಶಂಕರಾಚಾರ್ಯರು ತಮ್ಮ "ಭಜಗೋವಿಂದ ಸ್ತೋತ್ರ"ದಲ್ಲಿ
ಪುನರಪಿ ಜನನಂ ಪುನರಪಿ ಮರಣಂ | ಪುನರಪಿ ಜನನೀ ಜಠರೇ ಶಯನಮ್ ||
ಇಹ ಸಂಸಾರೇ ಖಲು ದುಸ್ತಾರೇ | ಕೃಪಯಾ ಪಾರೇ ಪಾಹಿ ಮುರಾರೇ || - ವಿಷಯಾಸಕ್ತಿಗಳಲ್ಲಿ ಮುಳುಗಿ ಪುನಃ ಹುಟ್ಟುವುದು, ಪುನಃ ಸಾಯುವುದು, ಪುನಃ ತಾಯಿಯ ಗರ್ಭವಾಸದ ದುಃಖ ಅನುಭವಿಸುವುದು, ಈ ದುಸ್ತಾರವಾದ ಸಂಸಾರದಲ್ಲಿ ಸಿಲುಕುವಿದರಿಂದ ಪಾರು ಮಾಡು ಮುರಾರೇ ಎಂದು ಪ್ರಾರ್ಥಿಸುತ್ತಾ ಭಗವಂತನಲ್ಲಿ ಶರಣಾಗು ಮೂಢ ಮನುಜನೇ, ಸದಾ ಗೋವಿಂದನನ್ನು ಭಜಿಸು ಎನ್ನುತ್ತಾರೆ.  ಭಗವಂತನನ್ನು ಬಿಟ್ಟರೆ ಹೀಗೇ ಜನನ ಮರಣಗಳ ಚಕ್ರದಲ್ಲಿ ತಿರುಗುತ್ತಲೇ ಇರಬೇಕಾಗುತ್ತದೆ.  ಆದ್ದರಿಂದಲೇ  | ಗೇಯಂ ಗೀತಾ ನಾಮ ಸಹಸ್ರಂ | ಧ್ಯೇಯಂ ಶ್ರೀಪತಿರೂಪ ಮಜಸ್ರಮ್ || - ಭಗವದ್ಗೀತೆಯನ್ನೂ, ವಿಷ್ಣು ಸಹಸ್ರನಾಮವನ್ನೂ ನಿರಂತರವಾಗಿ ಪಠಿಸುತ್ತಿರಬೇಕು ಮತ್ತು ಶ್ರೀಪತಿಯ ಅದ್ಭುತವಾದ ರೂಪವನ್ನು ಸದಾ ಸ್ಮರಿಸುತ್ತಾ ಇರಬೇಕು.  ಆಗಲೇ ಭಗವಂತ ಕಟ್ಟಿದ್ದ ಭವ ಪಾಶವನ್ನು ಬಿಡಿಸುವನು ಎಂದಿದ್ದಾರೆ.

ನಮ್ಮ ಹೃದಯಾಕಾಶದಲ್ಲಿರುವ ಭಗವಂತನನ್ನು ಒಳಗಣ್ಣು ತೆರೆದು ನೋಡುವ ಪ್ರಯತ್ನ ಮಾಡುತ್ತಾ, ಸದಾ ಚಿನ್ಮಯನ ಚಿಂತನೆ ಮಾಡುತ್ತಾ ಅವನನ್ನು ನಾವು ಕಟ್ಟಿದರೆ, ಅವನು ನಮ್ಮ ಲಿಂಗ ದೇಹವನ್ನು ಭಂಗ ಮಾಡಿ, ನಮಗೆ ಮುಕ್ತಿ ಕೊಡುವನು ಎಂಬ ಅರ್ಥ ಕೂಡ ಆಗುತ್ತದೆ.  ಭಕ್ತರನ್ನು ಭಗವಂತನು ಇಹ-ಪರ ಎರಡರಲ್ಲೂ ಪೊರೆಯುವವನು.  ಯಾವುದೋ ಕಾರಣಕ್ಕೆ ತನ್ನ ನಿಜವಾದ ಭಕ್ತ ತನ್ನಿಂದ ದೂರವಾದರೆ, ಭಗವಂತನು ಪರಮ ಕಾರುಣ್ಯದಿಂದ ಅವರನ್ನು ಮತ್ತೆ ತನ್ನ ಸನಿಹಕ್ಕೆ ಕರೆದುಕೊಳ್ಳುತ್ತಾನೆ.

ಕೆಲವು ಸಂದರ್ಭಗಳಲ್ಲಿ ಪ್ರಾರಬ್ಧ ವಶದಿಂದ ಕೂಡಾ ಭಗವಂತನ ವಿಸ್ಮರಣೆಯಾಗುವುದು.  ಇದಕ್ಕೆ ಉದಾಹರಣೆಯಾಗಿ ಭಾಗವತದ ನವಮಸ್ಕಂದದಲ್ಲಿ ಬರುವ ಸೌಭರಿಮುನಿಗಳ ಕಥೆಯನ್ನು ಉಲ್ಲೇಖಿಸಬಹುದು.  ಸೌಭರಿ ಮುನಿಗಳು ತಪಸ್ವಿಗಳಾದರೂ, ಒಂದು ದಿನ ಯಮುನಾ ನದಿಯಲ್ಲಿ ಮೀನಿನ ಜೋಡಿಗಳು ಜೊತೆಯಾಗಿ ವಿಹರಿಸುವುದನ್ನು ಕಂಡು ವಿಚಲಿತರಾಗಿ ತಮಗೂ ಗೃಹಸ್ಥ ಜೀವನ ಬೇಕೆಂದು ಬಯಸುತ್ತಾರೆ.  ವೃದ್ಧರಾದ ಮುನಿಗಳು ತಮ್ಮ ತಪೋಬಲದಿಂದ ನವಯುವಕನಾಗಿ ಮಾಂಧಾತೃ ರಾಜನ ೫೦ ಮಂದಿ ಹೆಣ್ಣುಮಕ್ಕಳನ್ನು ಮದುವೆಯಾಗುತ್ತಾರೆ.  ಒಮ್ಮೆಲೇ ೫೦ ಶರೀರಗಳನ್ನು ಧರಿಸಿ ಏಕಕಾಲದಲ್ಲಿ ಪತ್ನಿಯರೊಡನೆ ಗೃಹಸ್ಥ ಜೀವನ ನಡೆಸಿ, ಒಬ್ಬೊಬ್ಬರಲ್ಲಿ ನೂರು ನೂರು ಮಕ್ಕಳನ್ನು ಪಡೆಯುತ್ತಾರೆ.  ಕೊನೆಗೊಂದು ದಿನ ವಿರಕ್ತರಾಗಿ ಕಾಡಿಗೆ ಹೋಗಿ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಕಠಿಣ ತಪಸ್ಸು ಮಾಡಿ ಅಗ್ನಿಯಿಂದ ದೇಹವನ್ನು ದಹಿಸುತ್ತಾರೆ.  ಅವರ  ಪತ್ನಿಯರೂ ಸಹಗಮನ ಮಾಡುತ್ತಾರೆ.  ಹೀಗೆ ಅಪರೋಕ್ಷ ಜ್ಞಾನಿಯಾಗಿದ್ದ ಮುನಿಗಳಿಗೇ ಭಗವಂತನ ವಿಸ್ಮರಣೆಯಾಗುತ್ತದೆ.  ಮೀನುಗಳು ಕ್ರೀಡಿಸುವುದನ್ನು ಕಂಡ ಮಾತ್ರಕ್ಕೇ ಅವರು ಗೃಹಸ್ಥ ಜೀವನಕ್ಕೇ ಸಿಲುಕಿಬಿಡುತ್ತಾರೆ.  ಹೀಗೆ ಸಾತ್ವಿಕರಲ್ಲೂ ಕೂಡ ಕೆಲವೊಮ್ಮೆ ಪ್ರಾರಬ್ಧ ವಶದಿಂದ ಭಗವಂತನಲ್ಲಿ ವಿಸ್ಮರಣೆ ಉಂಟಾಗುತ್ತದೆ, ಆದರೆ ಭಗವಂತನು ಅವರನ್ನು ಕಠಿಣವಾಗಿ ಶಿಕ್ಷಿಸುವುದಿಲ್ಲ.  ಸಾತ್ವಿಕರಿಗೆ ಹೀಗೆ ಪ್ರಾರಬ್ಧದಿಂದ ಭಗವಂತನ ವಿಸ್ಮರಣೆಯಾದರೆ, ರಾಜಸಿಗರು ಸ್ವಭಾವತಃ ಸಂಸಾರದಲ್ಲಿ ಮಗ್ನರಾಗಿದ್ದು, ಭಗವಂತನನ್ನು ಉದಾಸೀನ ಮಾಡುತ್ತಾರೆ.  ಆದರೆ ತಾಮಸಿಗರು ಮಾತ್ರ ತಮ್ಮ ತಮೋ ಗುಣದಿಂದಲೇ ಭಗವಂತನನ್ನು ದ್ವೇಷಿಸುತ್ತಾರೆ.  ಅಂತಹವರಿಗೆ ಭಗವಂತನು ಭಗವದ್ಗೀತೆಯ ೧೬ನೇ ಅಧ್ಯಾಯದ ೧೯ ಮತ್ತು ೨೦ನೇ ಶ್ಲೋಕಗಳಲ್ಲಿ :
ತಾನಹಂ ದ್ವಿಷತಃ ಕ್ರೂರಾನ್ಸಂಸಾರೇಷು ನರಾಧಮಾನ್ | ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು || - ನನ್ನನ್ನು ದ್ವೇಷಿಸುವ ಪಾಪಿ, ಕ್ರೂರಕರ್ಮಿಗಳೂ ಆದ ನರಾಧಮರನ್ನು ನಾನು ಸಂಸಾರದಲ್ಲಿ ಪದೇ-ಪದೇ ಅಸುರೀ ಯೋನಿಗಳಲ್ಲಿ ಹಾಕುತ್ತಲೇ ಇರುತ್ತೇನೆ

ಆಸುರೀಂ ಯೋನಿಮಾಪನ್ನಾ ಮೂಢಾ ಜನ್ಮನಿ ಜನ್ಮನಿ | ಮಾಮಪ್ರಾಪ್ಯೈವ ಕೌಂತೇಯ ತತೋ ಯಾಂತ್ಯಧಮಾಂ ಗತಿಮ್ || - ಆ ಮೂಢರು ನನ್ನನ್ನು ಪಡೆಯದೆ ಜನ್ಮ ಜನ್ಮಗಳಲ್ಲಿ ಅಸುರೀ ಯೋನಿಯನ್ನೇ ಪಡೆಯುತ್ತಾರೆ.  ಬಳಿಕ ಅದಕ್ಕಿಂತಲೂ ಅತಿ ನೀಚ ಗತಿಯನ್ನೇ ಹೊಂದುತ್ತಾ, ಘೋರವಾದ ನರಕದಲ್ಲಿ ಬೀಳುತ್ತಾರೆ ಎಂದಿದ್ದಾನೆ.

ಬಹು ಕಠಿಣನಿವ - ತಪ್ಪು ಮಾಡಿದವರ ಕಡೆಗೆ ಮೃದು ಭಾವವನ್ನು ಹೊಂದುವುದು  ಕೂಡ ತಪ್ಪು ಮಾಡಿದಂತೆಯೇ ಆಗುತ್ತದೆ.  ತಪ್ಪಿತಸ್ಥರನ್ನು ಶಿಕ್ಷಿಸಬೇಕು ಮತ್ತು ಸರಿಯಾದ ದಾರಿಗೆ ತರಬೇಕಾಗುತ್ತದೆ.  ಮಾಡಿದ ತಪ್ಪನ್ನು ಬೆಂಬಲಿಸಿದಾಗ ಮಗುವಿನ ಮೇಲೆ ಅತೀ ಮೋಹ ಅಥವಾ ಕುರುಡು ಪ್ರೀತಿಯ ಪ್ರದರ್ಶನವಾಗುತ್ತದೆಯೇ ಹೊರತು, ಮಗುವಿಗೆ ಒಳ್ಳೆಯದಾಗುವುದಿಲ್ಲ.  ತಂದೆ ತಾಯಿಗಳು ಒಂದೊಂದು ಜನ್ಮಕ್ಕಷ್ಟೇ ಸೀಮಿತರಾಗಿರುವವರು.  ಪ್ರಸ್ತುತ ಜನ್ಮದಲ್ಲಿಯ ಸಂಸಾರವೆಂಬ ನಾಟಕದ ಪಾತ್ರಧಾರಿಗಳು.  ಆದರೆ ಭಗವಂತ ಸಮಸ್ತ ಜನ್ಮಗಳಲ್ಲೂ ಜೊತೆಗಿರುವ  ಪಾಲಕನಾಗಿದ್ದಾನೆ.  ಭಗವಂತನು ಪಾತ್ರಧಾರಿಯಲ್ಲ, ಜೀವನ ನಾಟಕದ ಸೂತ್ರಧಾರಿಯಾಗಿದ್ದಾನೆ.  ಅನಾದಿ ಕಾಲದಿಂದಲೂ ಮತ್ತು ಅನಂತ ಕಾಲದವರೆಗೂ ಜೊತೆಗಿರುವ ಭಗವಂತನು ಜೀವನು ಮಾಡುವ ತಪ್ಪಿಗೆ ಶಿಕ್ಷೆಕೊಟ್ಟು, ಉದ್ಧರಿಸುತ್ತಾನೆ.  ತನ್ನ ಮಗುವಿಗೆ ಏನು ಬೇಕೆಂದು ಅದು ಕೇಳದೆಯೇ ತಿಳಿದುಕೊಂಡು ಒದಗಿಸುವ ತಾಯಿಯಂತೆ, ಭಗವಂತನು ನಮಗೆ ಅತ್ಯವಶ್ಯಕವಾಗಿ ಬೇಕಿರುವುದನ್ನು ಕೊಟ್ಟು ನಮ್ಮ ಸ್ವರೂಪೋದ್ಧಾರವನ್ನು ಮಾಡುವವನು.  ಶಿಕ್ಷಿಸುತ್ತಾನೆಂದು ತಿಳಿದರೂ ಕೂಡ ಭಗವಂತನು ಎಂದಿಗೂ ಕಠಿಣನಲ್ಲ.  ಅವನು ಶಿಕ್ಷಿಸಿದರೂ ಕೂಡ, ಅದು ಅವನ ಕಾರುಣ್ಯದ ಪರಮಾವಧಿಯೇ ಆಗಿರುತ್ತದೆಯೇ ಹೊರತು ಬೇರೇನೂ ಅಲ್ಲ.  ತನ್ನನ್ನು ದ್ವೇಷಿಸುವವರನ್ನು ಭಗವಂತ ಶಿಕ್ಷಿಸುತ್ತಾನೆಂಬುದಕ್ಕೆ ಮಹಾಭಾರತದ ಪ್ರಸಂಗದ ದೃಷ್ಟಾಂತವಿದೆ.  ಶ್ರೀಕೃಷ್ಣನು ಸಂಧಾನಕ್ಕಾಗಿ ಬಂದಾಗ, ವಿದುರನ ಮನೆಯಲ್ಲಿ ಹಾಲು ಕುಡಿದು ದುರ್ಯೋದನನ ಮಾನವನ್ನು ಕಳೆಯುತ್ತಾನೆ, ಅವನನ್ನು ಶಿಕ್ಷಿಸುತ್ತಾನೆ.  ಆದರೆ ಭಗವಂತನು ಎಲ್ಲಿ ಅಧರ್ಮವಿರುವುದೋ, ಯಾರು ತನ್ನನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೋ, ಅವರನ್ನು ಮಾತ್ರ, ಅವರ ಉದ್ಧಾರಕ್ಕಾಗಿಯೇ ಕಠಿಣನಾಗುವವನು.  ಯಾರು ತನ್ನ ನಿಯಮಗಳನ್ನು ಅನುಸರಿಸಿಕೊಂಡು ಸಾತ್ವಿಕ ಜೀವನವನ್ನು ನಡೆಸುತ್ತಾರೋ, ಅವರ ಮೇಲೆ ಸಿಟ್ಟು ಮಾಡಿಕೊಳ್ಳುವಂತಹ ಕಠಿಣನಿವನಲ್ಲ ಎಂದಿದ್ದಾರೆ ದಾಸರಾಯರು.  

ಭಾಗವತದ ನವಮ ಸ್ಕಂದದಲ್ಲಿ ಬರುವ ಅಂಬರೀಷನ ಕಥೆಯಲ್ಲಿ ಭಗವಂತನ ಕಾರುಣ್ಯದ ಬಗ್ಗೆ ಮತ್ತು ತನ್ನ ಭಕ್ತರನ್ನು ಹೇಗೆ ರಕ್ಷಿಸುತ್ತಾನೆಂಬುದನ್ನು ತಿಳಿಸಲಾಗಿದೆ.  ಪರಮ ಭಕ್ತನಾದ ಅಂಬರೀಷನು ದೂರ್ವಾಸರ ಶಾಪಕ್ಕೆ ಒಳಗಾದಾಗ, ಭಗವಂತನು ತನ್ನ ಭಕ್ತನ ರಕ್ಷಣೆಗಾಗಿ ಸುದರ್ಶನ ಚಕ್ರವನ್ನೇ ಕಳುಹಿಸುತ್ತಾನೆ.  ಭಗವಂತನಲ್ಲಿ ಸಂಪೂರ್ಣವಾಗಿ ಶರಣಾಗಿದ್ದ ಭಕ್ತ ಅಂಬರೀಷನು, ದೂರ್ವಾಸರ ಶಾಪಕ್ಕೆ ಹೆದರದೆ, ಭಗವಂತನ ಧ್ಯಾನ ಮಾಡುತ್ತಾನೆ.  ಕರೆ ಕೇಳಿ ಭಗವಂತ ಸುದರ್ಶನ ಚಕ್ರವನ್ನು ಕಳುಹಿಸಿ ಭಕ್ತನನ್ನು ರಕ್ಷಿಸುತ್ತಾನೆ.  ತನ್ನನ್ನು ನಂಬಿದವರನ್ನು ತಾನು ರಕ್ಷಿಸುತ್ತೇನೆ ಎಂಬುದನ್ನು ಲೋಕಕ್ಕೆ ತಿಳಿಸುತ್ತಾನೆ.  ಅಂಬರೀಷನ ಕಥೆಯನ್ನು ಶ್ರೀ ಪುರಂದರದಾಸರು ತಮ್ಮ "ಒಂದೇ ಕೂಗಳತೆ ವೈಕುಂಠ" ಎಂಬ ಕೃತಿಯಲ್ಲಿ  
ಅಂಬರೀಷ ದ್ವಾದಶಿವ್ರತ ಮಾಡಲು | ದೊಂಬಿ ಮಾಡಿದ ದೂರ್ವಾಸಮುನಿ ||
ಕುಂಭಿನೀಪತಿ ಕೃಷ್ಣ ಕಾಯೆಂದು ಮೊರೆಯಿಡೆ | ಬೆಂಬತ್ತಿ ಚಕ್ರದಿಂ ಮುನಿಶಾಪವ ಕಳೆದ || ಎಂದು ೪ ಸಾಲುಗಳಲ್ಲಿಯೇ ಕಥೆಯನ್ನು ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ.

ಶಿಷ್ಟೇಷ್ಟನೆಂದರಿತು -  ಶಿಷ್ಟರನ್ನು ಇಷ್ಟ ಪಡುವವನಾದ್ದರಿಂದ ಭಗವಂತನು ಶಿಷ್ಟೇಷ್ಟ ನಾಮಕನಾಗುತ್ತಾನೆ.  ಶಿಷ್ಟರೆಂದರೆ ಸಜ್ಜನರು ಎಂದರ್ಥವಾಗುತ್ತದೆ.  ಯಾರು ಸದಾಚಾರಿಗಳಾಗಿದ್ದು ತಮಗೆ ಲಭ್ಯವಾಗಿರುವ ಧನ, ದ್ರವ್ಯಗಳನ್ನು ಭಗವಂತನ ಅನುಗ್ರಹವೆಂದು ತಿಳಿದು, ಸದ್ವಿನಿಯೋಗ ಮಾಡುತ್ತಾರೋ ಅವರು ಶಿಷ್ಟರೆನಿಸಿಕೊಳ್ಳುತ್ತಾರೆ.  ಸಂಪ್ರದಾಯದಿಂದ ಬಂದಿರುವ ಅನುಷ್ಠಾನಗಳನ್ನು ಮಾಡುವವರು, ವಿಧಿ ನಿಯಮಗಳನ್ನು ಅನುಸರಿಸುವವರು, ಶಾಸ್ತ್ರಗಳನ್ನು ಓದಿದವರು ಶಿಷ್ಟರೆನಿಸಿಕೊಳ್ಳುತ್ತಾರೆ.  ರಮಾ ಬ್ರಹ್ಮಾದಿ  ದೇವತೆಗಳು ಶಿಷ್ಟರಾದ್ದರಿಂದಲೇ ಶ್ರೀಹರಿಗೆ ಇಷ್ಟವಾಗುತ್ತಾರೆ. ಎಂದು ಎಲ್ಲಾ ಶೃತಿ, ಸ್ಮೃತಿ, ವೇದ, ಪುರಾಣಗಳು ತಿಳಿಸುತ್ತವೆ.  ಭಗವಂತನು ಶಿಷ್ಟೇಷ್ಟನೆಂದು ಅರಿಯುವುದು ಶಾಸ್ತ್ರಗಳ ಅಧ್ಯಯನದಿಂದ ಮಾತ್ರ ಸಾಧ್ಯವಿದೆ.  ಭಗವಂತನ ಅನಂತ ಗುಣಗಳನ್ನು ಅರಿಯುವ ಪ್ರಯತ್ನ ಮಾಡಲು ನಾವು ನಿರಂತರವಾಗಿ ಹರಿಕಥಾ ಶ್ರವಣ, ಮನನ, ಧ್ಯಾನ, ನಿದಿಧ್ಯಾಸನಗಳನ್ನು ಮಾಡುತ್ತಲೇ ಇರಬೇಕು. ಭಗವಂತನಲ್ಲಿ ಭಕ್ತಿ ಮಾಡಬೇಕೆಂದರೆ ಅವನ ಗುಣಗಳನ್ನು ಅರಿಯಬೇಕು.  ಯಾರು ಹೀಗೆ ಶಿಷ್ಟರೆನಿಸಿಕೊಳ್ಳುವರೋ ಅವರು ಭಗವಂತನಿಗೆ ಇಷ್ಟವಾಗುತ್ತಾರೆ.  ಅವರನ್ನು ರಕ್ಷಿಸುವವನಾಗಿ ಭಗವಂತನು ಶಿಷ್ಟೇಷ್ಟನೆನಿಸಿಕೊಳ್ಳುತ್ತಾನೆ. 

ಶ್ರೀ ವಿಷ್ಣು ಸಹಸ್ರನಾಮದಲ್ಲಿ "ಇಷ್ಟೋ ವಿಶಿಷ್ಟಃ ಶಿಷ್ಟೇಷ್ಟಃ.." ಎಂಬ ಉಲ್ಲೇಖವಿದೆ.  ತನ್ನನ್ನು ನಿರಂತರವೂ ಸ್ತುತಿಸುವ, ಧ್ಯಾನಿಸುವ ಸಂತರಿಗೆ ತಾನು ಪ್ರಿಯನಾದವನು ಎಂದರ್ಥವಾಗುತ್ತದೆ.  ಭಗವದ್ಗೀತೆಯ ೭ನೇ ಅಧ್ಯಾಯ ೧೭ನೆಯ ಶ್ಲೋಕದಲ್ಲಿ "ಪ್ರಿಯೋ ಹಿ ಜ್ಞಾನಿನೋSತ್ಯರ್ಥಮಹಂ ಸ ಚ ಮಮ ಪ್ರಿಯಃ" - ನನ್ನನ್ನು ತತ್ತ್ವದಿಂದ ತಿಳಿದ ಜ್ಞಾನಿಗೆ ನಾನು ಅತ್ಯಂತ ಪ್ರಿಯನಾಗಿದ್ದೇನೆ ಮತ್ತು ಆ ಜ್ಞಾನಿಯು ನನಗೆ ಅತ್ಯಂತ ಪ್ರಿಯನಾಗಿದ್ದಾನೆಂದು ಭಗವಂತನೇ ತಿಳಿಸಿದ್ದಾನೆ.

ಭಾಗವತದ ಅಷ್ಟಮಸ್ಕಂದ, ೨೪ನೆಯ ಅಧ್ಯಾಯದ ೫೨ನೆಯ ಶ್ಲೋಕದಲ್ಲಿ
ತ್ವಂ ಸರ್ವಲೋಕಸ್ಯ ಸುಹೃತ್ಪ್ರಿಯೇಶ್ವರೋ ಹ್ಯಾತ್ಮಾ ಗುರುರ್ಜ್ಞಾನಮಭೀಷ್ಟ ಸಿದ್ಧಿಃ | ತಥಾಪಿ ಲೋಕೋ ನ ಭಗನ್ತಮನ್ದಧೀರ್ಜಾನಾತಿ ಸನ್ತಂ ಹೃದಿ ಬದ್ಧಕಾಮಃ || - ಸಮಸ್ತ ಜನರಿಗೂ ಹಿತೈಷಿಯೂ, ಪ್ರಿಯನಾದವನೂ, ಆತ್ಮ ಸ್ವರೂಪನೂ ಆಗಿರುವೆ ಎಂಬ ಮಾತು ಇದೆ.

ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯರು ಶ್ರೀವಿಷ್ಣು ಭಗವಂತನೇ ಇಷ್ಟನು, ವಿಶಿಷ್ಟನು, ಶಿಷ್ಟನು ಎಂಬುದನ್ನು  ತಮ್ಮ ಷಟ್ಪ್ರಶ್ನೋಪನಿಷತ್ ಭಾಷ್ಯದಲ್ಲಿ
ನಮೋ ನಮೋSಸ್ತು ಹರಯೇ ಪ್ರೇಷ್ಠ ಪ್ರೇಷ್ಠತಮಾಯ ತೇ | ಪರಮಾನಂದಸಂದೋಹಸಾಂದ್ರಾನಂದವಪುಷ್ಮತೇ || - ಅತ್ಯಂತ ಪ್ರೀತಿಪಾತ್ರರಾದವರಲ್ಲಿಯೇ ಅತ್ಯಂತ ಪ್ರೀತಿಪಾತ್ರನಾದ, ಅಪರಿಮಿತಾನಂದ ಸ್ವರೂಪನಾದ, ಆನಂದಮಯ ಶರೀರವುಳ್ಳ, ಪಾಪಹರನಾದ ನಿನಗೆ ನಮಸ್ಕಾರ ಎಂದೂ
ತಲವಕಾರೋಪನಿಷದ್ಭಾಷ್ಯದಲ್ಲಿ
ಯಶ್ಚಿದಾನಂದಸಚ್ಛಕ್ತಿ ಸಂಪೂರ್ಣೋ ಭಗವಾನ್ ಪರಃ | ನಮೋSಸ್ತು ವಿಷ್ಣವೇ ತಸ್ಮೈ ಪ್ರೇಯಸೇ ಮೇ ಪರಾತ್ಮನೇ || - ಜ್ಞಾನ, ಆನಂದ ಹಾಗೂ ನಿರ್ದುಷ್ಟವಾದ ಶಕ್ತಿ ಇವುಗಳಿಂದ ಪೂರ್ಣನಾಗಿರುವ ನನಗೆ ಪ್ರಿಯ ವಸ್ತುಗಳಲ್ಲೆಲ್ಲ ಅತ್ಯಧಿಕ ಪ್ರಿಯನಾಗಿರುವ, ಆ ಸರ್ವೋತ್ತಮನಾದ ಶ್ರೀವಿಷ್ಣುವಿಗೆ ನನ್ನ ನಮಸ್ಕಾರ ಎಂದು ತಿಳಿಸಿದ್ದಾರೆ.

ದಾಸರಾಯರು ತಮ್ಮ ತತ್ವಸುವ್ವಾಲಿಯಲ್ಲಿ
ನೀ ನಡೆದು ನುಡಿದಂತೆ ನಾ ನಡೆದು ನುಡಿಯುವೆ
ಜ್ಞಾನಿಗಳ ಅರಸ ಗುಣಪೂರ್ಣ | ಗುಣಪೂರ್ಣ ದೊರೆ ಎನ್ನ
ಹೀನತೆಯ ನೋಡಿ ಬಿಡುವರೇ || - ನೀನು ಮಾಡಿಸಿದಂತೆ ನಾನು ಮಾಡುವವನು, ನೀನು ಜ್ಞಾನಿಗಳ ಅರಸನೂ, ಗುಣಪೂರ್ಣನೂ ಆಗಿರುವೆ ಎಂದು ಭಗವಂತನನ್ನು ಸ್ತುತಿಸಿದ್ದಾರೆ.

ಅನವರತ ಸದ್ಭಕ್ತಿಪಾಶದಲಿ -   ಶ್ರೀಮದಾಚಾರ್ಯರ ಬ್ರಹ್ಮಸೂತ್ರಾಣುಭಾಷ್ಯಕ್ಕೆ ವ್ಯಾಖ್ಯಾನವಾಗಿರುವ ಶ್ರೀ ರಾಘವೇಂದ್ರ ತೀರ್ಥ ವಿರಚಿತ ’ತತ್ವಮಂಜರಿ’ಯಲ್ಲಿ "ಮಾಹಾತ್ಮ್ಯ ಜ್ಞಾನ ಪೂರ್ವಕ ಸುದೃಢ ಸ್ನೇಹವೇ ಭಕ್ತಿಯು" ಎಂದು ತಿಳಿಸಲ್ಪಟ್ಟಿದೆ.   ಭಗವಂತನಲ್ಲಿ ಭಕ್ತಿ ಮಾಡುವುದೆಂದರೆ, ಅವನ ಗುಣಗಳನ್ನು ಆಳವಾಗಿ ಅಭ್ಯಸಿಸುವುದು.  ಭಗವಂತನಿಗೆ ಅತ್ಯಂತ ಪ್ರಿಯರಾದ ಸಾಧು ಸಂತರನ್ನು ಸತ್ಕರಿಸುವುದು.  ಹಾಗೂ ಸಕಲ ಜೀವರಾಶಿಯಲ್ಲೂ ಸ್ನೇಹದಿಂದ ವರ್ತಿಸುವುದೇ, ಮೊದಲಾದವುಗಳಾಗುತ್ತವೆ.  ಸದ್ಭಕ್ತಿ ಪಾಶವೆಂದರೆ, ಭಗವಂತನೆಡೆಗಿನ ಪ್ರೇಮವನ್ನು ಉತ್ಕೃಷ್ಟವಾಗಿ, ಆಳವಾಗಿ ಬೆಳೆಸಿಕೊಳ್ಳುವುದು.  ಭಕ್ತಿಯು ಉತ್ತುಂಗದ ಶಿಖರವೇರಿದಾಗ, ಅದೇ ಸಪ್ರೇಮದ, ಭಕ್ತಿಯ ಪಾಶವಾಗಿ ಭಗವಂತನನ್ನು ಕಟ್ಟಿಹಾಕುತ್ತದೆ.  ಅನವರತವೂ ಧ್ಯಾನ ಮಾಡುತ್ತಾ, ಗುಣಗಳನ್ನು ಚಿಂತಿಸುತ್ತಾ, ಸಮಸ್ತವನ್ನೂ ಭಗವದರ್ಪಣ ಮಾಡಿ, ಸಾತ್ವಿಕ ಜೀವನ ನಡೆಸುವುದು ಎಂದರ್ಥವಾಗುತ್ತದೆ.  ಭಕ್ತಿಯಲ್ಲಿಯೂ ಕೂಡ ನವವಿಧಗಳಿವೆ.  ಅವುಗಳು "ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದ ಸೇವನಂ | ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮ ನಿವೇದನಂ" ಎಂದು ಹೇಳಲ್ಪಟ್ಟಿವೆ.  ಹರಿಯ ಕಥೆಗಳನ್ನು ಶ್ರವಣ ಮಾಡುತ್ತಾ, ಹರಿಯ ಗುಣಗಳನ್ನು ಕೀರ್ತನೆ ಮಾಡುತ್ತಾ, ಸ್ಮರಣೆಯೊಂದೇ ಸಾಲದೇ ಗೋವಿಂದನ ಎಂದು ಸ್ಮರಣೆ ಮಾಡುತ್ತಾ, ಅರ್ಚಿಸುತ್ತಾ, ಪೂಜಿಸುತ್ತಾ, ವಂದಿಸುತ್ತಾ, ನಿನ್ನ ದಾಸರ ದಾಸಾನುದಾಸನು ನಾನು ಎಂದು ಆತ್ಮ ಸಮರ್ಪಣೆ ಮಾಡಿಕೊಳ್ಳುತ್ತಾ ಇರಬೇಕು.  ಶುದ್ಧ ಮನಸ್ಸಿನಿಂದ ಭಗವಂತನನ್ನು ಹೇಗೆ ಅರ್ಚಿಸಿದರೂ, ಕರೆದರೂ ಅವನು ಒಲಿಯುತ್ತಾನೆ.  ಅರ್ಜುನ ಭಗವಂತನನ್ನು ತನ್ನ ’ಸಖ’ನೆಂದೇ ತಿಳಿದಿದ್ದ.  ಎಲ್ಲದರಲ್ಲೂ, ಯಾವಾಗಲೂ, ಎಲ್ಲರಲ್ಲೂ ಭಗವಂತನ ಗುಣಗಳನ್ನೇ ಕಾಣುತ್ತಾ, ಅನವರತ ಚಿಂತಿಸಿದವರ ಭಕ್ತಿಪಾಶಕ್ಕೆ ಭಗವಂತನು ಖಂಡಿತವಾಗಿಯೂ ಒಲಿಯುತ್ತಾನೆ.  ಶ್ರೀ ವಿಜಯದಾಸರು ತಮ್ಮ "ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ" ಎಂಬ ಕೃತಿಯಲ್ಲಿ ’ನಿನ್ನ ನಾಮ ಬಿಡುವನಲ್ಲ, ನನ್ನ ನೀನು ಬಿಡಲುಸಲ್ಲ’ ಎಂದು ಭಗವಂತನನ್ನು ಭಕ್ತಿಯ ಪಾಶದಲ್ಲಿ ಕಟ್ಟಿ ಹಾಕುವ ಮಾತನಾಡುತ್ತಾರೆ. 

ದಾಸರಾಯರು ತಮ್ಮ ಫಲವಿದು ಬಾಳ್ದುದಕೆ ಎಂಬ ಕೃತಿಯಲ್ಲಿ
ನಿಚ್ಚ ಸುಭಕುತಿಯೊಳಚ್ಯುತನಂಘ್ರಿಗ-
ಳರ್ಚಿಸಿ ಮೆಚ್ಚಿಸುತೆಚ್ಚರದಿ |
ತುಚ್ಛ ವಿಷಯಗಳನಿಚ್ಛೈಸದೆ ಯ-
ದೃಚ್ಛಾ ಲಾಭದಿ ಪ್ರೋಚ್ಯನಾಗುವದೇ || - ಅಚ್ಯುತನ ಅಂಘ್ರಿಗಳ ಅರ್ಚಿಸುವುದೇ ಬದುಕಿನ ಉದ್ದೇಶವಾಗಬೇಕು. ಭಗವಂತನಲ್ಲಿ ಮಾತ್ರ ಭಕ್ತಿ ಮಾಡಿದರೆ ಸಾಲದು, ಅವನ ಸೇವಕರಾದ, ನಮ್ಮ ಇಂದ್ರಿಯಗಳ ಅಭಿಮಾನಿ ದೇವತೆಗಳ ಸಮೇತ ನಾವು ಸುಭಕುತಿಯನು ಮಾಡಬೇಕು ಎನ್ನುತ್ತಾರೆ.  ಹಾಗೇ ಅನ್ಯಥಾ ಶರಣಂ ನಾಸ್ತಿ ಎಂದು ’ನಿಚ್ಚ ಭಕುತಿ’ - ನಿಶ್ಚಯವಾದ ಭಕುತಿಯನ್ನು ಮಾಡಬೇಕು ಎನ್ನುತ್ತಾರೆ
ಹರಿಕಥೆ ಪರಮಾದರದಲಿ ಕೇಳುತ | ಮರೆದು ತನುವ ಸುಖ ಸುರಿಯುತಲಿ || - ಸಾರ್ಥಕ ಬದುಕಿಗಾಗಿ ಹರಿಕಥೆಯನ್ನು, ಹರಿಯ ದಶಾವತಾರಾದಿ ಕಥೆಗಳನ್ನು, ರಾಮಕೃಷ್ಣಾವತಾರಾದಿ ಮಹಿಮೆಗಳನ್ನು ಪರಮಾದರದಿ ಕೇಳುತ್ತಲೇ ಇರಬೇಕು ಎನ್ನುತ್ತಾರೆ.

ಕಟ್ಟುವರ ಭವಕಟ್ಟು ಬಿಡಿಸುವ - ಭಗವಂತನು ತನ್ನನ್ನು ಯಾರು ಭಕ್ತಿಯ ಪಾಶದಿಂದ ಕಟ್ಟಿ ಹಾಕುತ್ತಾರೋ ಅವರನ್ನು ಸಂಸಾರವೆಂಬ ಭವ ಬಂಧನದಿಂದ ಬಿಡಿಸುತ್ತಾನೆ.  ತನ್ನನ್ನು ಕಟ್ಟಿಹಾಕಿದರೆ ನಮ್ಮನ್ನು ಬಿಡಿಸುತ್ತಾನೆ, ನಾವು ಭಗವಂತನನ್ನು ಬಿಟ್ಟರೆ, ನಮ್ಮನ್ನು ಕಟ್ಟಿಹಾಕುತ್ತಾನೆಂದು ಅರ್ಥವಾಗುತ್ತದೆ.  ಭಕ್ತರ ಭಕ್ತಿಯ ಕಟ್ಟು ಎಂಬುದು ಭಗವಂತನಿಗೆ ನಿಜ ಅರ್ಥದಲ್ಲಿ ಯಾವ ಕಟ್ಟೂ ಆಗುವುದಿಲ್ಲ, ಏಕೆಂದರೆ ಅವನು ಯಾವ ಕಟ್ಟಿಗೂ ನಿಲುಕದವನು, ಎಲ್ಲವನ್ನೂ ಮೀರಿದ ಸರ್ವತಂತ್ರ ಸ್ವತಂತ್ರನಾಗಿದ್ದಾನೆ.  ಆದರೆ ಯಾರು ಭಕ್ತಿ ಮತ್ತು ಶ್ರದ್ಧೆಯಿಂದ ಅವನನ್ನು ಹೃತ್ಕಮಲವೆಂಬ ಸಿಂಹಾಸನದಲ್ಲಿ ಕೂಡಿಸಿ, ಆರಾಧಿಸುತ್ತಾರೋ, ಸೇವಿಸುತ್ತಾರೋ, ಅವರ ಪ್ರೀತಿಗೆ ವಶನಾಗಿ, ಅಲ್ಲಿಯೇ ನೆಲೆಸುತ್ತಾನೆ ಎಂದರ್ಥವಾಗುತ್ತದೆ.  ಅಪಾರ ಕರುಣೆ, ವಾತ್ಸಲ್ಯದಿಂದ ಸದಾ ದರ್ಶನವಿತ್ತು, ಉದ್ಧರಿಸುತ್ತಾನೆ.  ಒಮ್ಮೆ ಭವ ಪಾಶದ ಕಟ್ಟು ಬಿಡಿಸಿಕೊಂಡರೆ, ಭಗವಂತನ ನಿಜ ಮಂದಿರದಲ್ಲಿ ಆಶ್ರಯಕೊಟ್ಟು, ಜನನ ಮರಣ ರಹಿತವಾದ ಆನಂದದಲ್ಲಿ ನೆಲೆಸುವಂತೆ ಮಾಡುತ್ತಾನೆ.

ಸಿಟ್ಟಿನವನಿವನಲ್ಲ - ಅಪರೋಕ್ಷ ಜ್ಞಾನಿಗಳಾದ ದೇವತೆಗಳು ಕೂಡ ಪ್ರಮಾದವಶಾತ್  ಅಪರಾಧಗಳಿ೦ದ ಕ್ಷೋಭೆಗೊಳಗಾಗಿ ಪರಿತಪಿಸುತ್ತಿರುವಾಗ, ಅವರ ಸಾಧನೆಯ ಹಾದಿಯಲ್ಲಿ ಯಾವ ಶಿಕ್ಷೆಯೂ ಆಗದೆ, ಮುಕ್ತಿಯಲ್ಲಿ ಸಿಗುವ ಸ್ವರೂಪಾನ೦ದದಲ್ಲಿ ಕಿ೦ಚಿತ್ ಹ್ರಾಸ ಮಾಡುತ್ತಾನೆ ಎ೦ದು ತಿಳಿಸಲ್ಪಟ್ಟಿದೆ. ಸಾಧನಾ ಹಾದಿಯಲ್ಲಿರುವವರಿಗೆ ಭಗವ೦ತನ ಸ೦ಪೂರ್ಣ ಕಾರುಣ್ಯದ ಅನುಗ್ರಹ ಎ೦ದಿಗೂ ಇರುತ್ತದೆ ಎನ್ನುವ ಈ ಅ೦ಶದಿ೦ದ, ಭಗವ೦ತನು 'ಸಿಟ್ಟಿನವನಿವನಲ್ಲ' ಎ೦ದು ದಾಸರಾಯರು ವರ್ಣಿಸಿದ್ದಾರೆ.

ಭಾಗವತದ ದಶಮಸ್ಕಂದದಲ್ಲಿ ಬರುವ ಗೋವರ್ಧನಗಿರಿಯ ದೃಷ್ಟಾಂತ ಕೂಡ ಭಗವಂತನು ಕಠಿಣನಲ್ಲವು ಎಂಬುದನ್ನು ನಿರೂಪಿಸುತ್ತದೆ.  ಇಂದ್ರನು ಕುಂಭದ್ರೋಣಾಕಾರವಾಗಿ ಏಳು ದಿನಗಳ ಕಾಲ ಎಡೆಬಿಡದೆ ಮಳೆ ಸುರಿಸಿದಾಗ ಭಗವಂತನು ತನ್ನ ಕಿರುಬೆರಳಿನಲ್ಲಿ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದು, ಗೋಪಾಲಕರನ್ನು ರಕ್ಷಿಸಿ, ಇಂದ್ರನ ಗರ್ವ ಮುರಿದನು.  ಇಂದ್ರನ ಗರ್ವ ಮುರಿಯುವಂತಹ ಸಣ್ಣ ಶಿಕ್ಷೆಯನ್ನು ಮಾತ್ರವೇ ಕೊಟ್ಟ ಭಗವಂತ ಕಠಿಣನಲ್ಲದೆ, ಕರುಣಾಸಾಗರನು ಎಂಬುದು ರುಜುವಾತಾಗುತ್ತದೆ.  ’ಸಿಟ್ಟಿನವನಿವನಲ್ಲ’ ಎಂದರೆ ಕಂಡ ಕಂಡದ್ದಕ್ಕೆಲ್ಲಾ ಕೋಪಿಸಿಕೊಂಡು, ಶಿಕ್ಷಿಸುವವನಲ್ಲವೆಂದೂ ಅರ್ಥವಾಗುತ್ತದೆ.  ಕೆಟ್ಟ ಮಾತುಗಳಿಂದ ನಿಂದಿಸಿದ ಶಿಶುಪಾಲನ ಶಿರಚ್ಛೇದನ ಮಾಡಿ, ಭಗವಂತನು ಅವನನ್ನು ಉದ್ಧರಿಸಿದನು.  ಹರಿದ್ವೇಷ ಮಾಡಿದ ಹಿರಣ್ಯಕಶಿಪು ಹಾಗೂ ಹಿರಣ್ಯಾಕ್ಷರನ್ನು ಕೂಡ ಉದ್ಧರಿಸಿ ಅವರನ್ನು ದೈತ್ಯಾಂಶದಿಂದ ಬೇರ್ಪಡಿಸಿ, ತನ್ನ ಉದರದೊಳಗೇ ಸೇರಿಸಿಕೊಂಡ.  ಏಕೆಂದರೆ ಇವರು ಸ್ವರೂಪದಲ್ಲಿ ಭಗವಂತನ ಪರಮ ಭಕ್ತರಾದ ಜಯವಿಜಯರೇ ಆಗಿದ್ದರು.  ಹೀಗೆ ವಿಸ್ಮರಣೆಯಲ್ಲಿ ಸಿಲುಕಿದ ಭಕ್ತರನ್ನು ಭಗವಂತ ತಾನೇ ತನ್ನ ಹತ್ತಿರ ಕರೆದುಕೊಳ್ಳುತ್ತಾನೆ.

ಕಾಮದ ಕೊಟ್ಟು ಕಾವನು ಸಕಲ ಸೌಖ್ಯವನಿಹಪರಂಗಳಲಿ - ಕಾಮದ ಎಂದರೆ ಸಕಲವನ್ನೂ ಕೊಡುವವನು.  ಬೇಡಿದ ವರವನ್ನು, ಇಚ್ಛೆಯನ್ನು ಪೂರೈಸುವವನು ಎಂದರ್ಥವಾಗುತ್ತದೆ.  ಭಾಗವತದ ಒಂದು ದೃಷ್ಟಾಂತದಲ್ಲಿ ಗೋಪಾಲರು ಶ್ರೀಕೃಷ್ಣನಲ್ಲಿ ಅಧಿಕ ಭಕ್ತಿಯನ್ನು ಮಾಡಿ, ತಮಗೆ ವೈಕುಂಠವನ್ನು ತೋರಿಸುವಂತೆ ಮನಸ್ಸಿನಲ್ಲಿಯೇ ಆಸೆ ಪಡುತ್ತಾರೆ.  ಭಗವಂತನು ಅವರನ್ನು ಯಮುನಾ ನದಿಯಲ್ಲಿ ಮುಳುಗಿಸಿ, ವೈಕುಂಠವನ್ನೂ, ಅಲ್ಲಿರುವ ತನ್ನನ್ನೂ ತೋರಿಸಿ, ಅನುಗ್ರಹಿಸುತ್ತಾನೆ.  ಹೀಗೆ ಭಗವಂತನು ಇಹದಲ್ಲಿ ಬಯಸಿದ್ದನ್ನು ಕೊಡುವುದು ಮಾತ್ರವಲ್ಲದೇ ಪರದಲ್ಲಿಯೂ ಮುಕ್ತಿಯನ್ನು ಕೊಟ್ಟು, ಮುಕ್ತಿಯಲ್ಲಿ ಆನಂದವನ್ನೂ ಕರುಣಿಸಿ ಕಾಯುತ್ತಾನೆ.

ಡಿವಿಜಿಯವರು ಕಗ್ಗದಲ್ಲಿ
ಋಣದ ಮೂಟೆಯ ಹೊರಿಸಿ, ಪೂರ್ವಾರ್ಜಿತದ ಹುರಿಯ | ಕುಣಿಕೆಯಲಿ ನಿನ್ನ ಕೊರಳನು ಬಿಗಿದು ವಿಧಿಯು || - ನಾವು ಮಾಡುವ ಪ್ರತಿಯೊಂದು ಕರ್ಮವೂ ಪೂರ್ವಾರ್ಜಿತವೇ ಆಗಿರುತ್ತದೆ.  ಪ್ರತಿಯೊಂದು ಪಾಪ ಕರ್ಮವೂ ಹೊಸ ಋಣಗಳನ್ನು ಬೆಳೆಸುತ್ತದೆ.  ಋಣದ ಹುರಿಯ ಕುಣಿಕೆಯಲಿ ಕೊರಳನ್ನು ಬಿಗಿದು ’ವಿಧಿ’ ನಾಮಕ ಭಗವಂತನು ಮತ್ತೆ ಮತ್ತೆ ಸಂಸಾರವೆಂಬ ಭವ ಕಟ್ಟಿನಲ್ಲಿ ಬೀಳಿಸುತ್ತಾನೆ ಎಂದಿದ್ದಾರೆ.
ಬಂಧನಗಳೆಲ್ಲವನು ದಾಟಿ, ಹೊಳೆ ನೆರೆ ನೀರು | ಸಂಧಿಪುದು ಕಡಲ ನೀರ್ಗಳನ್ ; ಅಂತು ಜೀವನ್ ||
ಇಂದ್ರಿಯದ ಕಟ್ಟುಗಳ ಮೀರ್ದೀಕ್ಷೆಯೋಟದಿಂ | ಸಂದರುಶಿಪನು ಪರನ ಮಂಕುತಿಮ್ಮ || - ಜೀವನು ಇಂದ್ರಿಯಗಳ ಕಟ್ಟುಗಳಿಂದ ಬಿಡಿಸಿಕೊಂಡು, ಒಂದು ಹೊಳೆಯ ನೀರು ಹೇಗೆ ಎಲ್ಲಾ ಅಡಚಣೆಗಳನ್ನೂ ದಾಟಿ ಹರಿದು ಸಮುದ್ರ ಸೇರುವುದೋ, ಹಾಗೆ ಭಗವಂತನ ದರ್ಶನಕ್ಕೆ ಮನಸ್ಸು ತಿರುಗಿಸಬೇಕು ಎನ್ನುತ್ತಾರೆ.



 ಚಿತ್ರಕೃಪೆ : ಅಂತರ್ಜಾಲ

Sunday, November 9, 2014

ಕರುಣಾ ಸಂಧಿ - ೨೫ ನೇ ಪದ್ಯ


ಒಡಲ ನೆಳಲ೦ದದಲಿ ಹರಿ ನ |
ಮ್ಮೊಡನೆ ತಿರುಗುವ ಒ೦ದರಕ್ಷಣ|
ಬಿಡದೆ ಬೆ೦ಬಲನಾಗಿ      ಭಕ್ತಾಧೀನನೆ೦ದೆನಿಸಿ ||
ತಡೆವ ದುರಿತೌಘಗಳ ಕಾಮದ |
ಕೊಡುವ ಸಕಲೇಷ್ಟಗಳ ಸ೦ತತ |
ನಡೆವ ನಮ್ಮ೦ದದಲಿ ನವಸುವಿಶೇಷ ಸನ್ಮಹಿಮ || ೨೫ ||

ಪ್ರತಿಪದಾರ್ಥ : ಒಡಲ - ದೇಹದ, ನೆಳಲಂದದಲಿ - ನೆರಳಿನಂತೆ, ಹರಿ - ಭಗವಂತನು, ನಮ್ಮೊಡನೆ - ನಮ್ಮ ಜೊತೆಯಲ್ಲಿ, ತಿರುಗುವನೊಂದರೆಕ್ಷಣ - ಅನುಸರಿಸುವನು ಒಂದೇ ಒಂದು ಕ್ಷಣವೂ, ಬಿಡದೆ - ಬಿಡದೆ, ಬೆಂಬಲನಾಗಿ - ನಮ್ಮ ಜೊತೆಗಾರನಾಗಿ ನಮ್ಮ ಬೆನ್ನುಬಲವಾಗಿ, ಭಕ್ತಾಧೀನನೆಂದೆನಿಸಿ - ಭಕ್ತರಿಗೆ ಅಧೀನನೆಂದೆನಿಸಿಕೊಳ್ಳುತ್ತಾ, ತಡೆವ - ನಿಲ್ಲಿಸುವ ಅಥವಾ ದೂರ ಮಾಡುವ, ದುರಿತ - ಪಾಪ, ಓಘ - ರಾಶಿಗಳನ್ನು, ಕಾಮದ - ಮನೋಭೀಷ್ಟಗಳನ್ನು, ಕೊಡುವ - ಅನುಗ್ರಹಿಸುವ, ಸಕಲೇಷ್ಟಗಳ - ಸಮಸ್ತ ಇಷ್ಟಗಳನ್ನೂ, ಸಂತತ - ಸದಾ ಕಾಲವೂ, ನಡೆವ - ನಮ್ಮ ಜೊತೆಯಲ್ಲಿಯೇ ಸಾಗುವ, ನಮ್ಮಂದದಲಿ - ನಮ್ಮ ಇಚ್ಛೆಯಂತೆಯೇ,  ನವ ಸುವಿಶೇಷ ಸನ್ಮಹಿಮ - ಹೊಸತರಲ್ಲಿಯೇ ಹೊಚ್ಚ ಹೊಸತಾಗಿಯೇ ಕಾಣುವಂತಹ ಅಪಾರ ಮಹಿಮೆಯನ್ನುಳ್ಳವನು.


ನಮ್ಮ ದೇಹದ ನೆರಳು ನಮ್ಮನ್ನು ಅನುಸರಿಸಿಕೊ೦ಡು ಬರುವ ರೀತಿಯಲ್ಲಿ, ಭಕ್ತಾಧೀನ ಎ೦ದೆನಿಸಿಕೊಳ್ಳುವುದಕ್ಕಾಗಿ, ಕ್ಷಣಕಾಲವೂ ಬಿಡದೆ, ಭಕ್ತರ ಸ೦ಗಡ ನಿಬ೯೦ದವಿಲ್ಲದೆ, ಪರಮಾತ್ಮನು ಬೆ೦ಬಲನಾಗಿ ಇರುತ್ತಾನೆ. ಭಕ್ತರ ಸಾಧನೆಗೆ ಪ್ರತಿಬ೦ಧಕಗಳಾಗುವ, ದುಷ್ಟವಾದ ಪೂರ್ವಕೃತ ಪಾಪಕರ್ಮಗಳು ಒದಗುವ ಕಾಲದಲ್ಲಿ, ಅವುಗಳನು ನಿಗ್ರಹಿಸುತ್ತಾನೆ. ಅಷ್ಟೇ ಅಲ್ಲದೆ ತನ್ನ ಭಕ್ತರ ಅಲೌಕಿಕ ಅಭೀಷ್ಟಗಳನ್ನು ಪೂರೈಸುತ್ತ, ಸ್ವರೂಪಯೋಗ್ಯತಾನುಸಾರ ಅನುಗ್ರಹಿಸುತ್ತಾನೆ. ಭಗವ೦ತನ ಗುಣಗಳಲ್ಲಿ ಅವರ್ಣನೀಯವಾದ, ನೂತನವಾದ, ಸಮೀಚೀನವಾದ, ನಿರ್ದುಷ್ಟವಾದ ಮಹಿಮೆಯನ್ನು ಉಳ್ಳವನಾಗಿದ್ದಾನೆ. ದೇಹ ಎ೦ಬುದು ಬಿ೦ಬ ಸದೃಶವಾದರೆ, ನೆರಳು ಎ೦ಬುದು ಪ್ರತಿಬಿ೦ಬವಾಗುತ್ತದೆ. ಬಿ೦ಬ ಸದೃಶನಾದ, ಬಿ೦ಬರೂಪನಾದ ಪರಮಾತ್ಮನು,  ಹರಿಯೇ ಎ೦ದು ಅರ್ಥೈಸಿಕೊಳ್ಳಬೇಕು. ಅದರ೦ತೆಯೇ ಪ್ರತಿಬಿ೦ಬನು ಜೀವನಾಗುತ್ತಾನೆ, ಪ್ರತಿಬಿ೦ಬ ಸದೃಶನಾಗುತ್ತಾನೆ. ಪರಮಾತ್ಮನಿಗೂ, ಜೀವಿಗೂ ಅನಾದ್ಯನ೦ತ ಕಾಲಕ್ಕೂ ಅವಿಯೋಗವಿರುವುದರಿ೦ದ ಬಿ೦ಬರೂಪಿ ಪರಮಾತ್ಮನು ಪ್ರತಿಬಿ೦ಬರೂಪನಾದ ಜೀವನನ್ನು ನಿರ೦ತರವಾಗಿ ಕಾಪಾಡುತ್ತಲೇ ಇರುತ್ತಾನೆ.

ನಮ್ಮ ದೇಹದ ನೆರಳು ನಮ್ಮನ್ನು ಬಿಡದೆ ಇರುವ ಹಾಗೆ, ಪರಮಾತ್ಮನು ಸ೦ಚಾರಮಾಡುವನು ಎ೦ದರೆ, ದೇಹದ ನೆರಳಿಗೆ, ದೇಹದ ಕ್ರಿಯೆಯನ್ನು ಹೊರತು ಪಡಿಸಿದರೆ ಕ್ರಿಯೆ ಇರುವುದಿಲ್ಲವೂ, ಹಾಗೆಯೇ ಬಿ೦ಬ ಕ್ರಿಯೆ ಇರದ ಹೊರತು ಪ್ರತಿಬಿ೦ಬ ಕ್ರಿಯೆ ಇರುವುದಿಲ್ಲ ಎ೦ದು ದಾಸರು ತಿಳಿಸುತ್ತಾರೆ. ಬಿ೦ಬರೂಪಿಯಾದ ಪರಮಾತ್ಮನು ಸ್ವರೂಪಯೋಗ್ಯತಾನುಸಾರ ವ್ಯಾಪಾರಗಳನ್ನು ಮಾಡಿದರೆ ಜೀವನಾದ ಪ್ರತಿಬಿ೦ಬನೂ ಮಾಡುತ್ತಾನೆ. ಪರಮಾತ್ಮ ತನ್ನ ಸವೋ೯ತ್ತಮತ್ವಾದಿ ಮಹಾತ್ಮೆಯು ಭಕ್ತರಲ್ಲದೇ ಅನ್ಯರಿ೦ದ ಅಚ್ಛಾದಿತವಾದಾಗ ಭಕ್ತರ ದ್ವಾರ ಪ್ರಚುರ ಮಾಡಿಸುವುನಾದ್ದರಿ೦ದ ತಾನು ಭಕ್ತರಾಧೀನನೆನೆಸಿಕೊಳ್ಳುತ್ತಾನೆ.

ಒಡಲ ನೆಳಲಂದದಲಿ - ಭಗವಂತನ ಹಾಗೂ ಭಕ್ತನ ಸಂಬಂಧವು ದೇಹ ಮತ್ತು ನೆರಳಿನ ಸಂಬಂಧದಂತೆ ಶಾಶ್ವತವಾದದ್ದು.  ಈ ದೃಷ್ಟಾಂತದಲ್ಲಿ ಭಗವಂತ ಭಕ್ತನಿಗೆ ನೆರಳಿನಂತೆ ಎಂದಾಗ, ಭಕ್ತನು ಬಿಂಬನಾಗುತ್ತಾನೆ ಮತ್ತು ಭಗವಂತ ಪ್ರತಿಬಿಂಬನಾಗುತ್ತಾನೆ.  ಪ್ರತಿಬಿಂಬವೆಂಬುದು ಸದಾ ಬಿಂಬಕ್ಕೆ ಅಧೀನವಾಗಿರುವಂತಹುದು.  ಬಿಂಬ ಚಲಿಸಿದರೆ ಮಾತ್ರ ಪ್ರತಿಬಿಂಬದಲ್ಲಿ ಚಲನೆಯುಂಟಾಗುವುದು.  ಆದರೆ ವಾಸ್ತವದಲ್ಲಿ ಭಗವಂತನೇ ಬಿಂಬರೂಪಿಯಾಗಿರುವುದು.  ತಾನು ಮಾಡಿ, ಭಕ್ತನಿಂದ ಮಾಡಿಸಿದರೆ ಮಾತ್ರ ಪ್ರತಿಬಿಂಬನಾದ ಭಕ್ತನಲ್ಲಿ ಚಲನೆ ತೋರುವುದು, ಇಲ್ಲದಿದ್ದರೆ ಇಲ್ಲ.  ತಂದೆ ತಾಯಿಗಳು ಮಗುವು ಬೆದರಿ ಅತ್ತಾಗ, ಬಿದ್ದು ಪೆಟ್ಟುಮಾಡಿಕೊಂಡಾಗ, ಕಿರುಚಿಕೊಂಡಾಗ ಮಾತ್ರ ಓಡಿ ಬಂದು ಓಲೈಸುತ್ತಾರೆ.  ಆದರೆ ದಾಸರಾಯರು ಇಲ್ಲಿ ಭಗವಂತನನ್ನು ನಮ್ಮ ದೇಹದ ನೆರಳಿನಂತೆ ಸದಾ ನಮ್ಮೊಡನೆಯೇ ಇರುವವನು ಎಂದು ಬಿಂಬಿಸಿದ್ದಾರೆ.  ಎಲ್ಲಿ ಬೆಳಕಿರುತ್ತದೋ ಅಲ್ಲಿ ಮಾತ್ರ ನೆರಳಿರುತ್ತದೆ.  ಭಗವಂತನು ನೆರಳೂ ಆಗಿದ್ದಾನೆ, ಬಿಸಿಲೂ ಆಗಿದ್ದಾನೆ.  ನಂಬಿದ ಭಕ್ತರಿಗೆ ಬೆಳಕಿನಂತೆ ಜ್ಞಾನ ಕೊಟ್ಟು ಅವರಿಗೆ ಅವರದೇ ಶರೀರದ ನೆರಳಿನಂತಿದ್ದು ಸದಾ ಕಾಪಾಡುತ್ತಾನೆ.  ಆದರೆ ನಂಬದ ತಾಮಸಿಗರಿಗೆ ಬಿಸಿಲಿನ ತಾಪವನ್ನು ಅಧಿಕ ಪಡಿಸುತ್ತಾ ಸುಡುತ್ತಾನೆ.  ಸೂರ್ಯನಿಗೆ ಮುಖ ಮಾಡಿ ನಾವು ನಿಂತಾಗ, ನಮ್ಮ ನೆರಳು ನಮ್ಮ ಹಿಂದಿರುತ್ತದೆ.  ನಮ್ಮ ಮುಂದೆ ಸೂರ್ಯನಾರಾಯಣನಿರುತ್ತಾನೆ, ನಮ್ಮ ಹಿಂದೆ ನಮ್ಮದೇ ನೆರಳಿನಂತಿದ್ದು, ಭಗವಂತನು ನಮ್ಮನ್ನು ರಕ್ಷಿಸುತ್ತಿರುತ್ತಾನೆ.  ನಾವು ಭಗವಂತನಿಗೆ ವಿಮುಖರಾಗಿ, ಸೂರ್ಯನಿಗೆ ಬೆನ್ನು ತಿರುಗಿಸಿ ನಿಂತಾಗ ನಮ್ಮ ನೆರಳು ಎಲ್ಲಿಯೂ ಕಾಣಿಸುವುದೇ ಇಲ್ಲ.  ಭಗವಂತನೂ ಇಲ್ಲ, ನೆರಳೂ ಇಲ್ಲದಂತಾಗುತ್ತದೆ.  ಸಂಸಾರವೆಂಬ ತಾಪತ್ರಯಗಳ ಕೋಟಲೆಯಲ್ಲಿ ಬೆಂದು, ಬಳಲಿ ಅನನ್ಯ ಭಾವದಿಂದ ಭಗವಂತನಿಗೆ ಶರಣಾದರೆ, ಬರಡು ಹಾದಿಯಲ್ಲಿ ಒಂದೇ ಒಂದು ಮರ ತಂಪಾಗಿ ಕಾಣಸಿಗುತ್ತದೆ.  ಮರದ ನೆರಳಿನಲ್ಲಿ ವಿಶ್ರಮಿಸಿಕೊಂಡು, ದಣಿವಾರಿಸಿಕೊಳ್ಳುವಂತೆ ಮಾಡಿ, ತಂಪೆರೆದು ಭಗವಂತನು ರಕ್ಷಿಸುತ್ತಾನೆ.  ಶ್ರೀ ಬನ್ನಂಜೆಯವರು ನೆರಳನ್ನು ತಮಸ್ಸು ಅಥವಾ ಕತ್ತಲು ಎಂದೂ ಬೆಳಕನ್ನು ಜ್ಞಾನವೆಂದೂ ವಿಶ್ಲೇಷಿಸಿದ್ದಾರೆ.  ಬೆಳಕಿದ್ದಲ್ಲಿ ಮಾತ್ರ ನೆರಳಿರುತ್ತದೆ.  ಹಾಗೆಯೇ ಭಗವಂತನೆಂಬ ಬೆಳಕಿನ ಜ್ಞಾನ ಯಾರಿಗಿರುತ್ತದೋ, ಅವರಿಗೆ ಭಗವಂತನು ಸ್ವಯಂ ನೆರಳಿನಂತಿದ್ದು ಕಾಪಾಡುತ್ತಾನೆ.  ಬಿಂಬನಾದ ಭಗವಂತನನ್ನು ಪ್ರತಿಬಿಂಬನಾದ ಭಕ್ತನು "ನನ್ನನ್ನು ಹೀಗೇ ಪಾಲಿಸು, ಹೀಗೇ ಲಾಲಿಸು, ಸದಾ ಹೀಗೇ ನನ್ನೊಡನೆ ಇದ್ದು ರಕ್ಷಿಸು, ಬಿಂಬ ಚಲಿಸಿದರೆ ಮಾತ್ರವೇ ಪ್ರತಿಬಿಂಬ ಚಲಿಸುವುದು,  ನನ್ನನ್ನು ನಿನ್ನ ಪ್ರತಿಬಿಂಬವಾಗಿ ಸ್ವೀಕರಿಸಿ, ಸದಾ ಕಾಪಾಡು" ಎಂದು ಕೇಳಿಕೊಳ್ಳಬೇಕು.  ಬಿಂಬನಾದ ಶ್ರೀಹರಿ ಎಲ್ಲರಿಗೂ ಪ್ರತಿಬಿಂಬದಂತೆ ವರ್ತಿಸುತ್ತಾನೆಂದರೆ ಅದು ಅವನ ಕಾರುಣ್ಯದ ಪರಮಾವಧಿ ಮತ್ತು ಉತ್ಕೃಷ್ಟ ಭಕ್ತಪರಾಧೀನತೆಯ ಸಂಕೇತವೆಂದು ತಿಳಿಯಬೇಕು.  
ತತ್ವಸುವ್ವಾಲಿಯಲ್ಲಿ ಶ್ರೀ ಜಗನ್ನಾಥ ದಾಸರು
ತತ್ತತ್ಪದಾರ್ಥದೊಳು ತತ್ತದಾಕಾರನಾಗಿ
ಎತ್ತ ನೋಡಿದರು ಇರುತಿರ್ಪ | ಇರುತಿರ್ಪ ಹರಿಗೆ ನಾ
ಭೃತ್ಯನೆಂಬುವುದೇ ಬಲು ಧರ್ಮ || - ಆಯಾ ವಸ್ತುಗಳಲ್ಲಿ, ಆಯಾ ರೂಪಗಳಲ್ಲಿಯೇ ಎಲ್ಲೆಲ್ಲಿ ನೋಡಿದರೂ, ಅಲ್ಲಿ ಇರುತ್ತಿರುವ ಶ್ರೀಹರಿಗೆ ನಾನು (ಜೀವಿಯು) ಎಂದೆಂದಿಗೂ ಸರ್ವಾಧೀನನು ಮತ್ತು ದಾಸನು.  ಹಾಗೆ ತಿಳಿಯುವುದೇ ಉತ್ತಮವಾದ ಧರ್ಮವು ಎಂದಿದ್ದಾರೆ.
ಎನ್ನಪ್ಪ ಎನ್ನಮ್ಮ ಎನ್ನಯ್ಯ ಎನ್ನಣ್ಣ
ಎನ್ನರಸ ಎನ್ನ ಕುಲದೈವ | ಕುಲದೈವ ಇಹಪರದಿ
ಎನ್ನ ಬಿಟ್ಟಗಲದೇ ಇರು ಕಂಡ್ಯ || -  ನನಗೆ ಅಪ್ಪ, ಅಮ್ಮ, ಅಯ್ಯ, ಅಣ್ಣ, ಅರಸ, ಕುಲದೈವ ಎಲ್ಲವೂ ನೀನೇ, ಇಹದಲ್ಲಿಯೂ ಹಾಗೂ ಪರದಲ್ಲಿಯೂ ಎಂದು ಯಾರು ಭಗವಂತನನ್ನು ಸಂಪೂರ್ಣ ಶರಣಾಗತಿಯಿಂದ ಆರಾಧಿಸುತ್ತಾರೋ, ಅವರನ್ನು ಭಗವಂತ ಒಡಲನೆರಳಂದದಲಿ ಮುಚ್ಚಟೆಯಿಂದ ಕಾಪಾಡುತ್ತಾನೆ ಎಂದಿದ್ದಾರೆ.

ಹರಿ ನಮ್ಮೊಡನೆ ತಿರುಗುವ - ಒಂದರೆಕ್ಷಣವೂ ನಮ್ಮನ್ನು ಬಿಟ್ಟಗಲದೆ ಶ್ರೀಹರಿಯು ನಮ್ಮೊಡನೆಯೇ ಇದ್ದು, ನಮ್ಮೊಡನೆಯೇ ತಿರುಗುತ್ತಾ ನಮ್ಮನ್ನು ರಕ್ಷಿಸುತ್ತಿದ್ದಾನೆ.   ಜೀವಿಯು ತನ್ನ ಕರ್ಮಕ್ಕನುಗುಣವಾಗಿ, ಶಿಥಿಲವಾದ ಹಿಂದಿನ ದೇಹವನ್ನು ಬಿಟ್ಟು ಮತ್ತೊಂದು ಹೊಸ ದೇಹ ಧರಿಸುವಾಗಲೂ, ಭಗವಂತ ಕೂಡ ಜೀವಿಯ ಜೊತೆಗೇ ದೇಹದಿಂದ ದೇಹಕ್ಕೆ ತಿರುಗುತ್ತಾನೆ.  ಜೀವಾತ್ಮನಿಗೂ ಹುಟ್ಟು ಸಾವುಗಳಿಲ್ಲ,  ಪರಮಾತ್ಮನಿಗೂ ಹುಟ್ಟು ಸಾವುಗಳಿಲ್ಲ. ಜೀವ ದೇಹ ಬಿಟ್ಟು ನಿರ್ಗಮಿಸಿದಾಗ ಅದನ್ನು ಸಾವೆಂದೂ, ಮತ್ತೊಂದು ದೇಹದಲ್ಲಿ ಪ್ರವೇಶಿಸಿದಾಗ ಹುಟ್ಟು ಎಂದೂ ಗುರುತಿಸಲ್ಪಡುತ್ತದೆ.  ಇದೇ ಪ್ರಕಾರ ಭಗವಂತನೂ ಕೂಡ ದೇಹದಿಂದ ದೇಹಕ್ಕೆ ತಿರುಗುತ್ತಾನೆ.  ಯಾವ ಕ್ಷಣ ದೇವನು ಶರೀರದಿಂದ ನಿರ್ಗಮಿಸುತ್ತಾನೋ, ಅದು ಜೀವನ ಸಾವಾಗುತ್ತದೆ.  ಸಾವಿನ ದುಃಖ, ಸಂಕಟಗಳೆಲ್ಲಾ ಜೀವಿಗೆ ಮಾತ್ರವೇ ಹೊರತು ಅದು ಭಗವಂತನಿಗಿಲ್ಲ.  ಬಿಂಬನಾದ ಭಗವಂತ ದೇಹದಿಂದ ನಿರ್ಗಮಿಸಿದರೆ, ಪ್ರತಿಬಿಂಬನಾದ ಜೀವನೂ ನಿರ್ಗಮಿಸಲೇಬೇಕು.  ಬಿಂಬ-ಪ್ರತಿಬಿಂಬ ಕ್ರಿಯೆಯಾಗುತ್ತದೆ.  ಬಿಂಬ ಪ್ರತಿಬಿಂಬಗಳಿಗೆ ಪೂರ್ಣವಾಗಿ ಸಾಮ್ಯತೆ ಎಂದಿಗೂ ಇಲ್ಲ.  ಶರೀರಕ್ಕೆ ಕಣ್ಣು, ಮೂಗುಗಳೆಂಬ ಇಂದ್ರಿಯಗಳಿವೆಯೇ ಹೊರತು, ನೆರಳಿಗೆ ಅವುಗಳ್ಯಾವುವೂ ಇಲ್ಲ.  ಆದ್ದರಿಂದಲೇ ಇಲ್ಲಿ ಭಗವಂತನನ್ನು ಒಡಲನೆರಳಂದದಲಿ ಹರಿ ನಮ್ಮೊಡನೆ ತಿರುಗುವ ಎಂದು ದಾಸರಾಯರು ವರ್ಣಿಸಿದ್ದಾರೆ.  ಭಗವಂತನು ಜನ್ಮ ಜನ್ಮಗಳಲ್ಲೂ, ನಮ್ಮೊಡನೆಯೇ ಇದ್ದು ಕಾಪಾಡುವ ತಂದೆ-ತಾಯಿಯು ಎಂಬುದನ್ನು ದಾಸರಾಯರು ತಮ್ಮ ಕೃತಿ "ಸಂತರೆನಬಹುದು ಸಜ್ಜನರಿವರನಾ" ಎಂಬುದರಲ್ಲಿ "ಜನುಮ ಜನುಮಗಳಲ್ಲಿ ಎನಗೆ ಜನನೀ ಜನಕ | ಅನುಜ ತನುಜಾಪ್ತ ಪೋದನ ಭೂಷಣಾ | ಅನಿಮಿತ್ತ ಬಂಧು ಒಬ್ಬನೇ ಎನಿಸುತಿಪ್ಪ ಸ | ಜ್ಜನರಿಗಿಹ ಪರ ಸೌಖ್ಯ ರೂಪನೆಂಬುವರಾ" ಎಂದು ಹೇಳುವುದರ ಮೂಲಕ ಖಚಿತ ಪಡಿಸುತ್ತಾನೆ.  ಭಗವಂತನು ಸದಾ ನಮ್ಮೊಡನೆಯೇ ಇದ್ದು ರಕ್ಷಿಸುತ್ತಾನೆಂಬುದನ್ನು ದಾಸರಾಯರು ತಮ್ಮ ತತ್ವಸುವ್ವಾಲಿಯಲ್ಲಿ

ಏಸೇಸು ಕಲ್ಪ(ಜನ್ಮ)ದಲಿ ಬೇಸರಾಗದೆ ಜೀವ-
ರಾಶಿಗಳಿಗನ್ನ ಕೊಡುತಿರ್ಪ | ಕೊಡುತಿರ್ಪ ನಮ್ಮನ್ನು
ಉದಾಸೀನ ಮಾಡಿ ಬಿಡುವೋನೆ || - ಸ್ವಲ್ಪವೂ ಬೇಸರ ಪಡದೆ ಭಗವಂತನು ಪ್ರತಿ ಜನ್ಮದಲ್ಲಿಯೂ ನಮ್ಮೊಡನಿದ್ದು, ನಮಗನ್ನವನ್ನು ಒದಗಿಸುತ್ತಿದ್ದಾನಾದ್ದರಿಂದ ಈಗಲೂ ನಮ್ಮನ್ನು ಉದಾಸೀನ ಮಾಡದೆ ಕಾಪಾಡುವನು ಎನ್ನುತ್ತಾರೆ.  ಮುಂದುವರೆಯುತ್ತಾ
ಹಿಂದೆ ಜನ್ಮಾಂತರದಿ ತಂದು ಕೊಟ್ಟವರಾರು
ಇಂದು ಮುಂದೀಪ ಪ್ರಭುವಾರು | ಪ್ರಭುವಾರು ಎಲೆ ಮನವೆ
ಮಂದಮತಿಯಾಗಿ ಕೆಡಬೇಡ || -  ಜನ್ಮಜನ್ಮಾಂತರಗಳಿಂದಲೂ ಬೇಕು ಬೇಡಗಳನ್ನೆಲ್ಲಾ ಒದಗಿಸಿಕೊಟ್ಟು ಕಾಪಾಡಿದವನಾದ ಪ್ರಭುವು ಭಗವಂತನೇ ಎಂಬುದನ್ನು ಮಂದಮತಿಯಾಗಿ (ಅಹಂ ಎಂಬ ಅಹಂಕಾರದಲ್ಲಿ) ಮರೆತು ಬಿಡಬೇಡ ಎಂದು ಜೀವನಿಗೆ ಆದೇಶಿಸುತ್ತಾರೆ.

ಭಗವಂತನು ನಮಗೆ ಎಂದಿಗೂ ಅನಿಮಿತ್ತ ಬಂಧುವೇ ಆಗಿದ್ದಾನೆಂಬುದನ್ನು
ಎನಗೆ ನಿನ್ನಲಿ ಭಕುತಿ ಇನಿತಿಲ್ಲದಿದ್ದರೂ
ಅನಿಮಿತ್ತಬಂಧು ಸಲಹೂವಿ | ಸಲಹೂವಿ ಸರ್ವದಾ
ಎಣೆಗಾಣೆ ನಿನ್ನ ಕರುಣಕ್ಕೆ || - ಭಗವಂತನಿಗೆ ಯಾರಲ್ಲಿಯೂ ದ್ವೇಷವಾಗಲೀ, ತಾರತಮ್ಯವಾಗಲಿ ಇಲ್ಲವೇ ಇಲ್ಲ.  ನಾವು ಅವನಲ್ಲಿ ಭಕುತಿಯನ್ನು ಮಾಡದಿದ್ದರೂ, ಅವನು ನಮಗಾಗಿಯೇ ಸುಂದರವಾದ ಪ್ರಪಂಚವನ್ನು ಸೃಷ್ಟಿಸಿದ್ದಾನೆ.   ಯಾರ ಅನುಮತಿಗೂ ಕಾಯದೆ ಉಪಯೋಗಿಸಲು ಯಥೇಚ್ಛವಾಗಿ ಗಾಳಿ, ನೀರು, ಬೆಳಕು ಎಲ್ಲವನ್ನೂ ದಯಪಾಲಿಸಿದ್ದಾನೆ.  ಹೀಗೆ ಕೇಳದೆಯೇ ಸೌಲಭ್ಯಗಳನ್ನು ಕೊಟ್ಟಿದ್ದೂ ಅಲ್ಲದೆ, ಬೇಡಿದ್ದನ್ನೂ ಕೊಟ್ಟು ಸದಾ ರಕ್ಷಿಸುತ್ತಾನಾದ್ದರಿಂದಲೇ ಭಗವಂತ ನಮಗೆ ಅನಿಮಿತ್ತ ಬಂಧುವಾಗಿದ್ದಾನೆ ಎಂದಿದ್ದಾರೆ.

ಒಳಹೊರಗೆ ನೀನಿದ್ದು ತಿಳಿಯಗೊಡದೆ ಜಗವ
ಹಲವು ಕರ್ಮಗಳ ನೀ ಮಾಡಿ | ನೀ ಮಾಡಿ ಮಾಡಿಸುತ
ಫಲಗಳನೀವೆ ಜನರೀಗೆ || - ಹರಿನಮ್ಮೊಡನೆ ತಿರುಗುವ ಎನ್ನುವ ಮಾತಿಗೆ ಪುಷ್ಟಿಕೊಡುವಂತೆ ತತ್ವಸುವ್ವಾಲಿಯಲ್ಲಿ ಒಳಗೂ, ಹೊರಗೂ ನೀನಿದ್ದು, ಎಷ್ಟು ಜನ್ಮಗಳನ್ನೆತ್ತಿದೆನೋ, ಯಾವ ಯಾವ ತಾಪತ್ರಯಗಳ ಕೋಟಲೆಗಳನ್ನು ದಾಟಿ ಬಂದೆನೋ, ಅದ್ಯಾವುದೂ ಅರಿವಾಗದಂತೆ, ಹಲವಾರು ಸುಕರ್ಮಗಳನ್ನು ನೀನು ಮಾಡಿ, ನಮ್ಮಿಂದ ಮಾಡಿಸುತ್ತಿದ್ದೀಯ.  ಅದರ ಫಲಗಳನ್ನು ಮಾತ್ರ ನೀನು ತೆಗೆದುಕೊಳ್ಳದೆ, ನಮಗೇ ಕೊಟ್ಟು ಬಿಟ್ಟಿದ್ದೀಯ ಎಂದಿದ್ದಾರೆ.

ಒಂದರೆಕ್ಷಣ ಬಿಡದೆ ಬೆಂಬಲನಾಗಿ - ಜನ್ಮ ಜನ್ಮಾಂತರಗಳಲ್ಲೂ ಶ್ರೀಹರಿ ನಮ್ಮೊಡನೆಯೇ, ನಮ್ಮೊಳಗೇ ಇದ್ದು ಪ್ರತಿ ಕ್ಷಣವೂ ರಕ್ಷಿಸುತ್ತಿರುವನೆಂಬುದು ಸತ್ಯವಾದ ವಿಷಯ.  ಪ್ರತೀ ಬಾರಿ ಜೀವನು ದೇಹ ಬದಲಿಸಬೇಕಾದಾಗಲೂ ಭಗವಂತನು ಕೂಡ ಜೀವನ ಜೊತೆಗೆ ಶಿಥಿಲವಾದ ದೇಹದಿಂದ ಹೊರ ನಡೆದು ಹೊಸತೊಂದು ಶರೀರದೊಳಗೆ ಸೇರುತ್ತಾನೆ.  ಜೀವನು ದೇವನ ಅರಿವನ್ನು ಮರೆತು ಅಜ್ಞಾನಿಯಾದರೂ ಕೂಡ ಭಗವಂತನು ಜೀವನನ್ನು ಎಂದಿಗೂ ಮರೆಯುವುದೂ ಇಲ್ಲ, ಉದಾಸೀನ ಮಾಡುವುದೂ ಇಲ್ಲ.  ಸರ್ವ ವ್ಯಾಪ್ತನಾದ ಶ್ರೀಹರಿಯು ಜೀವನ ರಕ್ಷಣೆಯನ್ನು ಹಿಂದೆ ಮುಂದೆ, ಎಡ ಬಲ ಎಲ್ಲ ಕಡೆಯೂ ಇದ್ದು, ಜೀವನ ಒಳಗೂ, ಹೊರಗೂ ಇದ್ದು ಸದಾ ರಕ್ಷಿಸುತ್ತಿರುತ್ತಾನೆಂಬ ಮಾತನ್ನು ದಾಸರಾಯರು ತಮ್ಮ ಫಲವಿದು ಬಾಳ್ದುದಕೆ ಎಂಬ ಕೃತಿಯಲ್ಲಿ
ಒಂ-ದು ರೂಪದೊಳನಂತ ರೂಪವು
ಪೊಂದಿಪ್ಪವು ಗುಣಗಣ ಸಹಿತ
ಹಿಂದೆ-ಮುಂದೆ ಎಂದೆಂದಿಗೂ ಶ್ರೀ ಗೋ-
ವಿಂದಗೆ ಸರಿ ಮಿಗಿಲಿಲ್ಲೆಂತೆಂಬುದೆ || - ಭಗವಂತನ ಗುಣ ರೂಪಗಳು ಅನಂತ ಮಾತ್ರವೇ ಅಲ್ಲ, ಆ ಅನಂತಗಳಲ್ಲಿ ಮತ್ತೆ ಅನಂತ ರೂಪಗಳಿವೆ.  ಸಂಪೂರ್ಣ ಬ್ರಹ್ಮಾಂಡವನ್ನೇ ವ್ಯಾಪಿಸಿರುವ ಒಂದು ರೂಪವಾದರೆ, ಹಿಂದಿನ ಬ್ರಹ್ಮಾಂಡಗಳು, ಮುಂದೆ ಬರಬೇಕಾದ ಬ್ರಹ್ಮಾಂಡಗಳೆಲ್ಲದರಲ್ಲೂ ಭಗವಂತನ ಅನಂತ ರೂಪಗಳಿವೆ.  ಒಂದೊಂದು ಬ್ರಹ್ಮಾಂಡದಲ್ಲೂ ಅನಂತ ವಸ್ತುಗಳು, ಪದಾರ್ಥಗಳು, ಜೀವ ರಾಶಿಗಳೂ ಇವೆ.  ಅವೆಲ್ಲವುಗಳಲ್ಲೂ ಭಗವಂತನ ಒಂದೊಂದು ರೂಪಗಳಿವೆ.  ಜೀವನನ್ನು ವ್ಯಾಪಿಸಿರುವ ರೂಪವೂ ಒಂದಾದರೆ, ಜೀವನ ಅಂಗಾಂಗಗಳಲ್ಲಿಯೂ, ನರನಾಡಿಗಳಲ್ಲಿಯೂ ಅನಂತಾನಂತ ರೂಪಗಳಿಂದ ವ್ಯಾಪಿಸಿದ್ದಾನೆ.  ಇದನ್ನೇ ದಾಸರಾಯರು ತಮ್ಮ ತತ್ವಸುವ್ವಾಲಿಯಲ್ಲಿ "ನಾನಾ ಪದಾರ್ಥದೊಳು ನಾನಾ ಪ್ರಕಾರದಲ್ಲಿ ನೀನಿದ್ದು ಜಗವ ನಡೆಸುವಿ" ಎಂದು ಸ್ತುತಿಸಿದ್ದಾರೆ.  ದಾಸರಾಯರು ತಮ್ಮ "ಪಿಡಿ ಎನ್ನ ಕೈಯ್ಯ ರಂಗಯ್ಯ" ಎಂಬ ಕೃತಿಯಲ್ಲಿ ಭಗವಂತನನ್ನು "ಅನಿಮಿತ್ತ ಬಂಧೋ ನೀನೇ ಗತಿ ಗುಣ ಗಣ ಸಿಂಧೋ" ಎಂದೂ ಇನ್ನೊಂದು ಕೃತಿ "ನಮೋ ನಮಸ್ತೇ ನರಸಿಂಹ ದೇವಾ | ಸ್ಮರಿಸುವವರ ಕಾವಾ" ಎಂಬುದರಲ್ಲಿ "ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ | ನಿನಗೆ ಬಿನ್ನೈಸುವೆ" ಎನ್ನುತ್ತಾ ಭಗವಂತನು ನಮ್ಮನ್ನು ಒಂದರೆಕ್ಷಣ ಬಿಡದೆ ಬೆಂಬಲನಾಗಿ, ಅನಿಮಿತ್ತ ಬಂಧುವಾಗಿ, ನಮ್ಮೊಡನೆಯೇ ತಿರುಗುತ್ತಿರುತ್ತಾನೆ ಎಂದಿದ್ದಾರೆ.  ಇನ್ನೊಂದು ಕೃತಿ "ಅಪಮೃತ್ಯು ಪರಿಹರಿಸೊ ಅನಿಲದೇವಾ | ಕೃಪಣ ವತ್ಸಲನೆ ಕಾಯ್ವರ ಕಾಣೆ ನಿನ್ನುಳಿದು" ಎಂಬುದರಲ್ಲಿ ಭಗವಂತನು ಭಕ್ತರನ್ನು ಒಂದರೆಕ್ಷಣವೂ ಬಿಟ್ಟಿರುವುದಿಲ್ಲವೆಂಬುದನ್ನು "ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು | ಎನಗಿಲ್ಲವಾವಾವ ಜನ್ಮದಲ್ಲಿ | ಅನುದಿನ ನೀನೆಮ್ಮನುದಾಸೀನ ಮಾಡುವುದು | ಅನುಚಿತವು ಜಗಕೆ ಸಜ್ಜ ಶಿಖಾಮಣಿಯೆ" ಎನ್ನುತ್ತಾ ಭಕ್ತರ ಹಾಗೂ ಭಗವಂತನ ಸಂಬಂಧದ ತೀವ್ರತೆಯನ್ನು ತೋರಿಸಿದ್ದಾರೆ.

ಭಕ್ತಾಧೀನನೆಂದೆನಿಸಿ -  ಭಗವಂತನು ಭಕ್ತರಾಧೀನನೆಂಬುದನ್ನು ದಾಸರಾಯರು ಕರುಣಾಸಂಧಿಯಲ್ಲಿ ವಿಧವಿಧವಾಗಿ ವರ್ಣಿಸಿದ್ದಾರೆ.  ಪುಂಡರೀಕ, ಸುಧಾಮ, ಶಿಶುಪಾಲ, ಭೀಷ್ಮಾಚಾರ್ಯರ ದೃಷ್ಟಾಂತಗಳನ್ನು ಕೊಟ್ಟು, ಸದುಪಾಸನೆಯಿಂದ ಭಗವಂತನನ್ನು ಒಲಿಸಿಕೊಂಡಲ್ಲಿ, ಭಕ್ತಿಗೆ ಒಲಿದು ತನ್ನನ್ನೇ ಕೊಟ್ಟು ಬಿಡುವನು ಎಂಬುದನ್ನು ನಿರೂಪಿಸಿದ್ದಾರೆ.  ತನಗಾಗಿ ಏನನ್ನೂ ಮಾಡಿಕೊಳ್ಳದೆ, ಸಕಲವನ್ನೂ ಭಕ್ತರಿಗಾಗಿಯೇ ಸೃಷ್ಟಿಸಿ, ತಾನೂ ಎಲ್ಲ ವಸ್ತುಗಳಲ್ಲೂ, ಜೀವರಾಶಿಯಲ್ಲೂ ನೆಲೆಸಿ, ಆನಂದಿಸುತ್ತಾನೆ.  ಅವರವರ ಯೋಗ್ಯತೆಗೆ ಅನುಸಾರವಾಗಿ ಆನಂದವನ್ನು ಕೊಟ್ಟು ಕಾಪಾಡುತ್ತಾನೆ.  ಭಗವಂತ ಮಾಡಿರುವ ಅತಿಶಯವಾದ ಸೃಷ್ಟಿಯೊಂದೇ ಅಲ್ಲ, ಭಗವಂತನ ಅಪಾರ ಕಾರುಣ್ಯವು, ಅನಂತ ಗುಣಗಳೂ ಭಕ್ತರಿಗಾಗಿಯೇ, ಭಕ್ತರಿಂದಲೇ ಪ್ರಕಟವಾಗುತ್ತವೆ.  ಭಕ್ತರು ಭಗವಂತನನ್ನು ದೀನನಾಗಿ ಮೊರೆಯಿಡದಿದ್ದರೆ, ಭಗವಂತನ ಕಾರುಣ್ಯವು ಹೇಗೆ ವ್ಯಕ್ತವಾಗಬೇಕು.  ಗಜೇಂದ್ರನು ಹತ್ತು ಸಾವಿರ ವರ್ಷಗಳ ಕಾಲ ತಾನೇ ಹೋರಾಡಿ, ಮೊಸಳೆಯಿಂದ ಬಿಡುಗಡೆಯಾಗದಿದ್ದಾಗ, ದೀನನಾಗಿ ಮೊರೆಯಿಟ್ಟ.  ಕಾರುಣ್ಯನಿಧಿ ಶ್ರೀಹರಿಯು "ಕರಿ ಹರಿ ಎನ್ನಲು ಮೊರೆಯ ಲಾಲಿಸಿ" ಧಾವಿಸಿ ಬಂದು ರಕ್ಷಿಸಿದವನು.  ಇದರಿಂದ ಭಗವಂತನ ಕಾರುಣ್ಯದ ಗುಣ ಲೋಕಕ್ಕೇ ವ್ಯಕ್ತವಾಯಿತು. ಶ್ರೀ ಜಗನ್ನಾಥ ದಾಸರು ತಮ್ಮ ಒಂದು ಕೃತಿ "ಇದನೆ ಪಾಲಿಸು ಜನ್ಮ ಜನ್ಮಗಳಲಿ" ಎಂಬುದರಲ್ಲಿ "ಪುಣ್ಯಪಾಪ ಜಯಾಪಜಯ ಕೀರ್ತಿ ಅಪಕೀರ್ತಿ | ಮನ್ಯುಮೋಹಾಸಕ್ತಿ ಕಾಮಲೋಭ | ನಿನ್ನಾಧೀನವು ಎನ್ನದಲ್ಲವೆಂದಿಗು" ಎಂದಿದ್ದಾರೆ.  ಇನ್ನೊಂದು ಕೃತಿ "ನಿನ್ನ ಸಂಕಲ್ಪಾನುಸಾರ ಮಾಡೋ | ಎನ್ನ ಸಾಕುವ ದೊರೆಯೆ ತಿಳಿದು ನೀ ನೋಡೋ" ಎನ್ನುವುದರಲ್ಲಿ "ಜನರೊಳಗೆ ನೀನಿದ್ದು ಜನ್ಮಗಳಲ್ಲಿ | ಗುಣಕಾಲಕರ್ಮ ಸ್ವಭಾವಂಗಳಾ | ಅನುಸರಿಸಿ ಪುಣ್ಯ ಪಾಪಗಳ ಮಾಡಿಸಿ ಫಲಗ | ಳುಣಿಸಿ ಮುಕ್ತರ ಮಾಡಿ ಪೊರೆವೆ ಕರುಣಾಳು " ಎಂದು ಭಗವಂತನ ಕಾರುಣ್ಯವನ್ನೂ, ಅವನು ಭಕ್ತಾಧೀನನೆಂಬುದನ್ನೂ ವಿವರಿಸಿದ್ದಾರೆ.  ಇನ್ನೊಂದು ಕೃತಿ "ಶ್ರೀ ವೆಂಕಟಾಚಲ ನಿವಾಸ ನಿನ್ನ | ಸೇವಾನುಸೇವಕರ ದಾಸಾ ಎನಿಸಿ" ಎಂಬುದರಲ್ಲಿ "ಅನಿಮಿತ್ತ ಬಂಧು ನೀಯೆನ್ನ ಬಿಡುವುದನುಚಿತವೋ ಲೋಕಪಾವನ್ನಚರಿತ" ಎನ್ನುತ್ತಾ "ನೀನಲ್ಲದೆನಗೆ ಗತಿಯಿಲ್ಲ ಪವ | ಮಾನವಂದಿತ ಕೇಳೋ ಸೊಲ್ಲ ಎನ್ನ | ಜ್ಞಾನೇಚ್ಛೆ ಕ್ರಿಯಂಗಳೆಲ್ಲಾ ನಿನ್ನ | ಧೀನವಲ್ಲವೆ ಲಕ್ಷ್ಮೀನಲ್ಲಾ" ಎನ್ನುತ್ತಾರೆ.  ಹೀಗೆ ಅರ್ತಿಯಿಂದ ಶರಣಾದವರಿಗೆ ಭಗವಂತನು ತನ್ನನ್ನೇ ಕೊಟ್ಟು, ಭಕ್ತಿಗೆ ಅಧೀನನಾಗಿ ಬಿಡುತ್ತಾನೆ.   ಭಕ್ತರು ಹೇಗೆ ಬಿಂಬನಾದ ಭಗವಂತನಿಗೆ ಸಂಪೂರ್ಣ ಅಧೀನರಾಗಿದ್ದಾರೋ, ಹಾಗೇ ಭಗವಂತನೂ ಕೂಡ ಭಕ್ತರ ಅಪರಿಮಿತ ಭಕ್ತಿಗೆ ಅಧೀನನಾಗಿದ್ದಾನೆ.  ಕರು ತಾಯಿಯ ಹಾಲು ಕುಡಿಯಲು ಕೆಚ್ಚಲನ್ನು ಗುದ್ದುತ್ತದೆ, ಕಂದನ ಸ್ಪರ್ಶ ಮಾತ್ರದಿಂದಲೇ ತಾಯ ಕೆಚ್ಚಲಲ್ಲಿ ಹಾಲು ಸುರಿಯಲಾರಂಭಿಸುತ್ತದೆ.  ಹಾಗೇ ಭಕ್ತನೆನಿಸಿಕೊಂಡವನು ತನ್ನ ನಾಲಿಗೆಯಿಂದ ಶ್ರೀಹರಿಯ ಸ್ಮರಣೆ / ಜಪ ಮಾಡಿದರೆ ಮಾತ್ರವೇ ಭಗವಂತನ ಕಾರುಣ್ಯ ಸುಧೆ ಹರಿಯಲಾರಂಭಿಸುವುದು.  ಕಾರುಣ್ಯಸುಧೆ ಹರಿದಾಗ ಮಾತ್ರವೇ ಅವನಿಗೆ ಕರುಣಾಸಾಗರನೆಂಬ ಬಿರುದು ಸಲ್ಲುವುದು.  ಹೀಗೆ ಭಕ್ತರಿಂದಲೇ ಭಗವಂತನ ಗುಣಗಳು ಕೂಡ ಶೋಭಿಸುವುದು.  ಭಕ್ತರು ತನ್ನ ನಾಮ ಸ್ಮರಣೆ ಮಾಡಿದಾಗ ಭಗವಂತ ಅಧೀನನಾದರೆ, ಭಕ್ತರು ಸಕಲ ಅರ್ಥಗಳಲ್ಲೂ ಎಂದೆಂದಿಗೂ ಭಗವಂತನ ಅಧೀನರೇ ಆಗಿದ್ದಾರೆ. 

ದಾಸರಾಯರು ತತ್ವಸುವ್ವಾಲಿಯಲ್ಲಿ

ಹಗಲು ಇರುಳು ಸ್ಮರಣೆ ಒದಗುತಿರೆ ಜಿಹ್ವೆಯೊಳು
ಬಗೆಯಲಿನ್ನುಂಟೆ ಸಾಧನಗಳು | ಸಾಧನಗಳೇತಕ್ಕೆ
ಜಗದೊಳಗೆ ಇನ್ನು ಅವರಿಗೆ || - ಸದಾ ನಾಲಿಗೆಯ ಮೇಲೆ ಭಗವಂತನ ನಾಮ ಸ್ಮರಣೆ ಇರುವವರಿಗೆ ಬೇರೆ ಯಾವ ಸಾಧನೆಗಳೂ ಬೇಡವೆಂಬ ಅರ್ಥವಲ್ಲ.  ಅಪರೋಕ್ಷ ಜ್ಞಾನಿಗಳೂ, ಮೋಕ್ಷ ನಿಶ್ಚಿತರಾದವರೂ ಕೂಡ, ಸದಾಕಾಲವೂ ಭಗವಂತನ ನಾಮ ಸ್ಮರಣೆಯನ್ನು ಮಾಡುತ್ತಲೇ ಇರಬೇಕು.  ಹೀಗೆ ಮಾಡುವುದರಿಂದ ಅವನ ಅನಂತ ಗುಣಗಳನ್ನು ಹೆಚ್ಚು ಹೆಚ್ಚು ತಿಳಿದುಕೊಳ್ಳಲಾಗುತ್ತದೆ.  ಮೋಕ್ಷದಲ್ಲಿ ಸಿಗುವ ಆನಂದವನ್ನು ಕೂಡ ಭಗವಂತ ಅನೇಕ ಪಟ್ಟು ಅಧಿಕವಾಗಿ ಕೊಡುತ್ತಾನೆ ಎಂದು ತಿಳಿಯಬೇಕು ಎನ್ನುತ್ತಾರೆ.

ತಡೆವ ದುರಿತೌಘಗಳ - ಭಗವಂತನು ಸರ್ವ ವ್ಯಾಪ್ತನಾದವನು.  ಎಲ್ಲಾ ಜೀವರಾಶಿಗಳಲ್ಲೂ, ತಾನಿದ್ದು, ತಾನು ಮಾಡಿ ನಮ್ಮಿಂದ ಮಾಡಿಸುತ್ತಾನೆ.  ನಮ್ಮ ಯೋಗ್ಯತಾನುಸಾರವಾಗಿ ನಮ್ಮಿಂದ ಕರ್ಮಗಳು ನಡೆಯುವಂತೆ ಮಾಡುತ್ತಾನೆ.  ಹೀಗೆ ಭಕ್ತರು ನಿಯಮದಂತೆ ಮಾಡುವ ವಿಧಿವಿಧಾನಗಳಿಗೆ ತಕ್ಕುದಾದ ಪುಣ್ಯಫಲಗಳನ್ನು ಜೀವಿಗಳಿಗೇ ಉಣ್ಣಿಸುತ್ತಾನೆ.  ಸುಖ ದುಃಖಗಳ ಬಾಧ್ಯತೆ ಜೀವಿಗೆ ಆಗುವುದೇ ಹೊರತು ದೇವನಿಗಲ್ಲ.  ಜೀವಿಗಳು ಭಗವಂತನಿಗೆ ವಿಮುಖರಾಗಿದ್ದರೆ, ನಮ್ಮನ್ನು ರಕ್ಷಿಸುವವರು ಬೇರೆ ಯಾರೂ ಇರುವುದಿಲ್ಲ.  ಎಲ್ಲರನ್ನೂ, ಎಲ್ಲಾ ಕಾಲದಲ್ಲಿಯೂ, ಎಲ್ಲಾ ರೀತಿಯಿಂದಲೂ ಕಾಪಾಡುವವನು ಭಗವಂತನೊಬ್ಬನೇ.  ಹಾಗೆಂದರೆ ಈ ಮಾತಿಗೆ ಭಗವಂತ ಅನಿರ್ದಿಷ್ಟವಾಗಿ, ಸರ್ವರನ್ನೂ ಕಾಪಾಡುತ್ತಾನೆಂದು ಅರ್ಥವಲ್ಲ.  ಭಗವಂತನ ಕಾರುಣ್ಯ ಆಯಾ ಜೀವಿಗಳಿಗೆ ಅವರವರ ಯೋಗ್ಯತಾನುಸಾರವಾಗಿ ಮಾತ್ರವೇ ಲಭಿಸುವುದು ಎಂದರ್ಥವಾಗುತ್ತದೆ.   ಸಣ್ಣ ಸಾಮರ್ಥ್ಯದ ವಿದ್ಯುತ್ ಬಲ್ಬಿನಲ್ಲಿ ಹೆಚ್ಚಿನ ವಿದ್ಯುಚ್ಚಕ್ತಿ ಹರಿಸಿದಾಗ, ಅದು ತಡೆದುಕೊಳ್ಳಲಾಗದೆ ಸುಟ್ಟು ಕರಕಲಾಗುತ್ತದೆ.  ಹಾಗೇ ಯಾರಿಗೆ ಎಷ್ಟು ಮಾತ್ರ ಲಭ್ಯವಿದೆಯೋ ಅಷ್ಟನ್ನು ಮಾತ್ರ ಭಗವಂತನು ಕರುಣಿಸುತ್ತಾನೆ.   ದಾಸರಾಯರು ತಮ್ಮ "ದಾಸೋಹಂ ತವ ದಾಸೋಹಂ" ಎಂಬ ಕೃತಿಯಲ್ಲಿ ಭಗವಂತನನ್ನು "ಕರ್ಮಬಂಧ ಮಹಕರ್ಮ ವಿಮೋಚಕ ಕರ್ಮನಿಗ್ರಹ ವಿಕರ್ಮನಾಶತವ" ಎಂದು ವರ್ಣಿಸುತ್ತಾ ಜೀವಿಯು ಅನುಭವಿಸುವ ಎಲ್ಲಾ ಕರ್ಮಗಳನ್ನೂ ನಿಗ್ರಹಿಸುವವನೂ, ನಾಶಪಡಿಸುವವನೂ ಭಗವಂತನೊಬ್ಬನೇ ಎಂದು ತಿಳಿಸಿದ್ದಾರೆ. 

ದಾಸರಾಯರು ತತ್ವಸುವ್ವಾಲಿಯಲ್ಲಿ
ಕರ್ತೃ ಕರ್ಮಗಳಲ್ಲಿ ಕಾರಣಕ್ರಿಯೆಗಳಲಿ
ನಿತ್ಯ ನೀನಿದ್ದು ನಡೆಸೂವೆ | ನಡೆಸೂವಿ ಜೀವರ
ಕೃತಕೃತ್ಯರನು ಮಾಡಿ ಸಲಹೂವಿ || - ಕರ್ತೃನಲ್ಲಿ, ಕರ್ಮಗಳಲ್ಲಿ, ಕಾರಣ ಕ್ರಿಯೆಗಳಲ್ಲಿ, ದೇಹೇಂದ್ರಿಯಗಳಲ್ಲಿ, ಕಾಲದಲ್ಲಿ, ಎಲ್ಲದರಲ್ಲೂ ನೀನೇ ಅಂತರ್ಯಾಮಿಯಾಗಿದ್ದು, ಮಾಡಿ ಮಾಡಿಸುವೆ.  ಜೀವರಿಗೆ ಸುಫಲಗಳನ್ನು ಕೊಟ್ಟು, ಅವರನ್ನು ಕೃತಕೃತ್ಯರನ್ನಾಗಿ ಮಾಡುವೆ ಎಂದಿದ್ದಾರೆ.
ಅಧಿಭೂತ ಅಧ್ಯಾತ್ಮ ಅಧಿದೈವ ತಾಪ ಕಳೆ-
ಯುವುದು ನಿನ್ನ ದಿವ್ಯತ್ರಯನಾಮ | ತ್ರಯನಾಮ ಸರ್ವದಾ
ಒದಗಲೊ ಬಂದು ವದನಕ್ಕೆ || - ಸರ್ವ ವಿಧದ ತಾಪತ್ರಯಗಳನ್ನೂ ಕಳೆದು ರಕ್ಷಿಸುವವನು ನೀನೇ ಎಂದಿದ್ದಾರೆ.

ಕಾಮದ ಕೊಡುವ ಸಕಲೇಷ್ಟಗಳ ಸಂತತ - ಕಾಮದ ಎಂದರೆ ಬೇಡಿದ್ದನ್ನೆಲ್ಲಾ ಕೊಡುವವನು ಎಂದರ್ಥವಾಗುತ್ತದೆ.  ಭಗವಂತನು ನಮಗೆ ತಾಯಿ-ತಂದೆಯಾದ್ದರಿಂದ ಬೇಡಿದ್ದನ್ನು ಕೊಡುವುದರ ಜೊತೆಗೇ ಬೇಡದೆ ಇದ್ದ ಅನೇಕ ಅಗತ್ಯಗಳನ್ನು ಪೂರೈಸಿ ಜೀವಿಗೆ ಅನುಕೂಲ ಮಾಡಿಕೊಟ್ಟಿದ್ದಾನೆ.  ಮಗುವಿಗೆ ತನಗೇನು ಬೇಕು ಎಂದು ಗೊತ್ತಿರುವುದಿಲ್ಲ.  ಹಸಿವಾದರೂ ಅಳುತ್ತದೆ, ನಿದ್ರೆ ಬಂದರೂ ಅಳುತ್ತದೆ, ನೋವಾಗಲೀ, ಬೇಸರವಾಗಲೀ, ಎಲ್ಲದಕ್ಕೂ ಅಳುವುದೊಂದೇ ಗೊತ್ತಿರುವುದು.  ಆದರೆ ತಾಯಿಯಾದವಳಿಗೆ ತನ್ನ ಪುಟ್ಟ ಕಂದ ಯಾವಾಗ ಯಾವುದಕ್ಕಾಗಿ ಅಳುತ್ತಾನೆ, ಯಾವುದರ ಅವಶ್ಯಕತೆ ಆ ಸಮಯದಲ್ಲಿ ಇದೆ ಎಂಬುದನ್ನು ತಿಳಿದು, ಅದನ್ನು ಕೊಟ್ಟು, ಸಂತೈಸುತ್ತಾಳೆ.  ಮಗು ಕೇಳದೆಯೇ ಅಪಾರ ಮಮತೆ, ಅಕ್ಕರೆಯ ಧಾರೆಯನ್ನೇ ಹರಿಸುತ್ತಾಳೆ.  ಯಾವಾಗಲೂ ಮಗುವಿನ ನೆಮ್ಮದಿಗಾಗಿ ಸುಖಕ್ಕಾಗಿ ಅನುಕೂಲಗಳನ್ನು ಮಾಡುತ್ತಲೇ ಇರುತ್ತಾಳೆ.  ಭಗವಂತನು ಹಾಗೆಯೇ ಅಪಾರ ಕರುಣೆ, ವಾತ್ಸಲ್ಯದಿಂದ ತನ್ನ ಭಕ್ತರ ಸುಖಕ್ಕಾಗಿ ಅನುಕೂಲಗಳನ್ನು ಒದಗಿಸಿ, ಕಣ್ಣಿನ ರೆಪ್ಪೆಯಂತೆ ಕಾಪಾಡುತ್ತಲೇ ಇರುತ್ತಾನೆ.  ಕಾಮದ ಎನ್ನುವ ಪದದಲ್ಲಿ "ಕಾ" ಎಂಬ ಅಕ್ಷರವನ್ನು ಕಾ+ಅಮ್ ಎಂದು ಬಿಡಿಸಿದಾಗ, ಕಾ ಎಂದರೆ ಆನಂದ ಮತ್ತು ಅಮ ಎಂದರೆ ಕೊಡುವವನು ಎಂದರ್ಥವಾಗುತ್ತದೆ.  ಜ್ಞಾನಿಗಳಿಗೆ ಸದಾ ಕಾಲವೂ ಆನಂದವನ್ನು ಕೊಡುವವನೇ ಕಾಮದನೆನಿಸಿಕೊಳ್ಳುತ್ತಾನೆ.  ಹಾಗೇ ಅಜ್ಞಾನಿಗಳಿಗೂ, ಅದರಲ್ಲೇ ಆನಂದ ಕೊಡುವವನು ಎನ್ನಿಸಿಕೊಳ್ಳುತ್ತಾನೆ.  ಭಗವಂತ ಯಾರು ಯಾವುದನ್ನು ಬೇಡಿದರೆ ಅದನ್ನೇ ಕೊಟ್ಟು ಆನಂದಪಡಿಸುತ್ತಾನೆ.

ವಿಷ್ಣು ಸಹಸ್ರನಾಮದಲ್ಲಿ "ಭಾರಭೃತ್ ಕಥಿತೋ ಯೋಗೀ ಯೋಗೀಶಃ ಸರ್ವಕಾಮದಃ" ಎಂಬ ಉಲ್ಲೇಖವಿದೆ.  ಸರ್ವಕಾಮದಃ ಎಂದರೆ ಎಲ್ಲರ ಇಷ್ಟಗಳನ್ನು ಅಥವಾ ಎಲ್ಲಾ ಇಷ್ಟಗಳನ್ನೂ ನೀಡುವವನು ಎಂದಾಗುತ್ತದೆ.  ನಮಗೆ ನಿಜವಾಗಲೂ ನಮ್ಮ ನಿಜವಾದ ಕಾಮನೆ ಏನು ಎಂಬುದೇ ತಿಳಿದಿಲ್ಲ.  ಮಕ್ಕಳಂತೆ ಅರಿವಿಲ್ಲದೆ, ಆರೋಗ್ಯಕ್ಕೆ ಹಾನಿಕರವಾದ್ದನ್ನೆಲ್ಲಾ, ಕಾಮನೆಗೆ ಬಲಿಯಾಗಿ ಬಯಸುತ್ತೇವೆ, ಹಟಮಾಡಿ ಆಪತ್ತು ತಂದುಕೊಳ್ಳುತ್ತೇವೆ.  ಆದ್ದರಿಂದ ಸರ್ವಕಾಮದನಾದ ಭಗವಂತನಲ್ಲಿ ನಾವು ಏನನ್ನೂ ಬೇಡದೆ ಶರಣಾಗತರಾಗಬೇಕು.  ತಾಯಿಯಂತೆ ಭಗವಂತನಿಗೂ ನಮಗೇನು ಬೇಕು ಎನ್ನುವುದು ತಿಳಿದಿರುವುದು ಮತ್ತು ಅವನು ಅದನ್ನು ಕೊಡುವನು.  ಧರ್ಮಕ್ಕೆ ವಿರೋಧವಾದದ್ದನ್ನು ಬಯಸಿ ನಮ್ಮ ಜನ್ಮವನ್ನು ವ್ಯರ್ಥ ಮಾಡಿಕೊಳ್ಳಬಾರದು.  ಬಯಸಿದರೂ ಪರಮಾತ್ಮನ ದರ್ಶನವನ್ನೂ, ಮುಕ್ತಿಯನ್ನೂ ಬೇಡಬೇಕು.  ಇದನ್ನೇ ತಮ್ಮ ಜೀವಿತದ ಕಾಮನೆಯಾಗುಳ್ಳವರು, ಭಗವಂತ ಪರೀಕ್ಷೆಗಾಗಿ ಭೋಗವನ್ನು ಕೊಟ್ಟರೂ ಸ್ವೀಕರಿಸುವುದಿಲ್ಲ.  ಸಂತ ತ್ಯಾಗರಾಜರು ತಮ್ಮ ಮನೆಗೆ ಹುಡುಕಿಕೊಂಡು ಬಂದಿದ್ದ ಐಶ್ವರ್ಯವನ್ನು ಸ್ವೀಕರಿಸದೆ, ಹಿಂತಿರುಗಿಸಿಬಿಟ್ಟರು.  ರಾಮನಾಮಕ್ಕೆ ಸಮವಾದ್ದು ಯಾವುದೂ ಇಲ್ಲವೆಂದೂ ಭೋಗ ದ್ರವ್ಯ ಪದಾರ್ಥಗಳು ಮನೆಯಲ್ಲಿದ್ದರೆ ಶ್ರೀರಾಮ ದರ್ಶನಕ್ಕೆ ಅಡ್ಡಿಯಾಗುವುದೆಂದು ತಿರಸ್ಕರಿಸಿಬಿಟ್ಟರು.

ಭಾಗವತ ದ್ವಿತೀಯಸ್ಕಂದದ ೩ನೆಯ ಅಧ್ಯಾಯದ ೧೦ನೇ ಶ್ಲೋಕದಲ್ಲಿ ಶುಕಮುನಿಗಳು ಪರೀಕ್ಷಿತ್ ರಾಜನಿಗೆ
ಅಕಾಮಃ ಸರ್ವಕಾಮೋ ವಾ ಮೋಕ್ಷಕಾಮ ಉದಾರಧೀಃ | ತೀವ್ರೇಣ ಭಕ್ತಿಯೋಗೇನ ಯಜೇತ ಪುರುಷಂ ಪರಂ || - ಯಾವುದೇ ತರಹದ ಕಾಮನೆಯುಳ್ಳವನಾದರೂ, ಭಗವಂತನನ್ನೆ ಬಯಸುವವನಾದರೂ, ಮುಮುಕ್ಷುವೇ ಆಗಿದ್ದರೂ ಕೂಡ ತೀವ್ರವಾದ ಭಕ್ತಿಯೋಗದಿಂದ ಪರಮಪುರುಷ ನಾರಾಯಣನನ್ನೇ ಸೇವಿಸಬೇಕು ಎಂದು ತಿಳಿಸಿದ್ದಾರೆ.

ಸ್ಕಾಂದ ಪುರಾಣದಲ್ಲಿಯೂ
ಅಕಾಮೋ ಧರ್ಮಕಾಮೋ ವಾ ಮೋಕ್ಷಕಾಮೋಪಿ ಯೋ ಭವೇತ್ | ಅಥವಾ ಸರ್ವಕಾಮೋ ಯಃ ಸ ವಿಷ್ಣುಂ ಪುರುಷಂ ಯಜೇತ್ || - ಕೇವಲ ಭಗವಂತನನ್ನೇ ಬಯಸುವ ಏಕಾಂತ ಭಕ್ತನಾದರೂ ಸರಿ, ಅಥವಾ ಮೋಕ್ಷಾರ್ಥಿಯಾದರೂ ಸರಿ ಎಲ್ಲರೂ ಪರಮಪುರುಷ ನಾರಾಯಣನನ್ನೇ ಸೇವಿಸಬೇಕು ಎಂದಿದ್ದಾರೆ.
ಕಠೋಪನಿಷತ್ತಿನ ದ್ವಿತೀಯೋಧ್ಯಾಯದ ಪಂಚಮವಲ್ಲಿಯಲ್ಲಿ ಕೂಡ "ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್" - ಭಗವಂತನು ಏಕೈಕನಾಗಿದ್ದರೂ ಕೂಡ ಬಹುಕಾಮಗಳನ್ನು ನೆರವೇರಿಸುವಂತಹವನು ಎಂದು ಉಲ್ಲೇಖಿಸಿದ್ದಾರೆ.

ನಡೆವ ನಮ್ಮಂದದಲಿ - ಭಗವಂತನು ಸರ್ವ ಶ್ರೇಷ್ಠನೂ, ಪರಮಪುರುಷನೂ ಆಗಿದ್ದರೂ ಕೂಡ ರಾಮಾವತಾರದಲ್ಲಿ ತಾನು ಸಾಮಾನ್ಯನಾದ ಮಾನವ, ರಾಜಾ ದಶರಥನ ಪುತ್ರ ಎಂದುಕೊಂಡೇ, ನಮ್ಮೊಡನೆಯೇ ಬೆರೆತು, ಕಷ್ಟ ಹಾಗೂ ವನವಾಸಗಳನ್ನು ಅನುಭವಿಸಿದವನು.  ಬಂದ ದುರಿತಗಳನ್ನೆಲ್ಲಾ ಹೇಗೆ ಎದುರಿಸಬೇಕೆಂದು ಮರ್ಯಾದಾ ಪುರುಷೋತ್ತಮನಾಗಿ ತೋರಿಸಿಕೊಟ್ಟವನು.  ಜನನ ಮರಣಗಳಿಲ್ಲದ ಭಗವಂತನು ದೇವಕಿ ಗರ್ಭದಲ್ಲುದಿಸಿ, ಪುಟ್ಟ ಮಗುವಾಗಿ ಅನೇಕ ಲೀಲೆಗಳನ್ನು ತೋರಿಸಿ ಎಲ್ಲರನ್ನೂ ಕರ್ಷಿಸಿದವನು ಶ್ರೀಕೃಷ್ಣ ಪರಮಾತ್ಮನು.  ಗೋವತ್ಸನಾಗಿ, ಬಾಲಲೀಲೆಗಳಿಂದ ತಾಯಿಯನ್ನೂ, ಗೋಪಿಕೆಯರನ್ನೂ, ಸರ್ವರನ್ನೂ ಬೆರಗುಗೊಳಿಸಿದವನು.  ಹೀಗೆ ನಮ್ಮೊಳಗೇ ಇದ್ದು, ನಮ್ಮೊಡನೆಯೇ ಬೆರೆತು, ನಮ್ಮಂತೆಯೇ ವ್ಯವಹರಿಸುವ ಭಗವಂತನು ಇದೆಲ್ಲವನ್ನೂ ತನ್ನ ಭಕ್ತರ ಮೇಲಿನ ಅಪಾರ ಕರುಣೆಯಿಂದ ಮಾತ್ರವೇ ಮಾಡುವವನು.  ನಮ್ಮನ್ನು ಸದಾ ರಕ್ಷಿಸುವವನು.  ಗೋಪಿಕೆಯರು ಭಾಗವತದ ದಶಮಸ್ಕಂದದ ೩೧ನೆಯ ಅಧ್ಯಾಯದಲ್ಲಿ ಬರುವ "ಗೋಪಿಕಾಗೀತೆ" ಯಲ್ಲಿ
ವಿಷಜಲಾಪ್ಯಯಾದ್ವ್ಯಾಲರಾಕ್ಷಸಾ -
ದ್ವರ್ಷಮಾರುತಾದ್ವೈದ್ಯುತಾನಲಾತ್ |
ವೃಷಮಯಾತ್ಮಜಾದ್ವಿಶ್ವತೋಭಯಾ -
ದೃಷಭ ತೇ ವಯಂ ರಕ್ಷಿತಾ ಮುಹುಃ || - ಯಮುನಾ ನದಿಯಲ್ಲಿದ್ದ ವಿಷಮಿಶ್ರಿತವಾದ ಜಲದ ಪಾನದಿಂದ ಸನ್ನಿಹಿತವಾಗಿದ್ದ ಮೃತ್ಯುವಿನಿಂದಲೂ, ಹೆಬ್ಬಾವಿನ ರೂಪದಲ್ಲಿದ್ದ ಅಘಾಸುರನಿಂದಲೂ, ಇಂದ್ರನ ದೆಸೆಯಿಂದ ಬಂದ ಪ್ರಚಂಡ ಮಳೆ-ಗಾಳಿ-ಸಿಡಿಲಿನಿಂದಲೂ ನಮ್ಮನ್ನು ರಕ್ಷಿಸಿರುವೆ.  ವೃಷಭಾಸುರನಿಂದಲೂ, ಮಯಾಸುರನ ಮಗನಾದ ತೃಣಾವರ್ತನಿಂದಲೂ ನಮ್ಮನ್ನು ಕಾಪಾಡಿರುವೆ.  ಹೀಗೆ ಸದಾ ಸರ್ವದಾ ನಮ್ಮನ್ನು ರಕ್ಷಿಸುತ್ತಿರುವವನು ಪರಮಪುರುಷನಾದ ನೀನೇ ಭಗವಂತ ಎಂದು ಕೊಂಡಾಡಿದ್ದಾರೆ.

ನವಸುವಿಶೇಷ ಸನ್ಮಹಿಮ - ಭಗವಂತನು ಯಾವಾಗಲೂ ’ನವ’ ಎಂದರೆ ಹೊಸತಾಗಿರುವವನು.  ಅವನನ್ನು ಹೇಗೆ ವರ್ಣಿಸಿದರೂ ಹೊಸದಾಗಿ ಕಾಣುವವನು.  ಹೇಗೆ ಹೊಗಳಿದರೂ ಸಾಲದಾಯಿತೆಂಬ ಭಾವವನ್ನು ಕೊಡುವವನು, ಹೋಲಿಕೆಗೇ ನಿಲುಕದಂತಹ ಅಸಾಮಾನ್ಯನು, ಅಪ್ರತಿಮನು, ಅಕಳಂಕನು ಎಂದು ಗುಣವಿಶೇಷಣಗಳನ್ನು ಹೇಳುತ್ತಲೇ ಹೋಗಬಹುದು.  ಯಾವುದೇ ದೃಷ್ಟಾಂತ ಕೊಟ್ಟರೂ ಅದು ಅವನ ಒಂದೇ ಒಂದು ಗುಣಕ್ಕೂ ಸಮವಲ್ಲದೇ ಹೋಗುವುದು.  ಎಲ್ಲವನ್ನೂ ಮೀರಿ ನಿಂತಿರುವವನು, ಪರಮಪುರುಷನು ಭಗವಂತನು. ದೃಷ್ಟಾಂತಗಳನ್ನು ಕೊಟ್ಟಷ್ಟೂ, ದೃಷ್ಟಾಂತಗಳು ಹಳತಾಗುವುವೇ ಹೊರತು ಭಗವಂತನು ನವನವೀನನಾಗಿಯೇ ಕಂಗೊಳಿಸುವನು.  ಇನ್ನು ’ನವ’ ಎಂದರೆ ಒಂಬತ್ತು ಮಂದಿ ಪ್ರಜಾಪತಿಗಳನ್ನು ಸೃಷ್ಟಿಸಿ, ಇವರ ಮೂಲಕ ಮುಂದಿನ ಸೃಷ್ಟಿ ಕಾರ್ಯವನ್ನು ವಿಸ್ತರಿಸಿದವನು ಎಂದು ಕೂಡ ಅರ್ಥೈಸಬಹುದು.  ಶ್ರೀ ಬನ್ನಂಜೆಯವರು ತಮ್ಮ ವ್ಯಾಖ್ಯಾನದಲ್ಲಿ ಭಗವಂತನು ’ಪ್ರಣವ’ನು ಎಂದಿದ್ದಾರೆ.  ಈ ಪ್ರಣವ ಎನ್ನುವ ಪದದಲ್ಲಿ ಕೂಡ ನವ ಇದೆಯಾದ್ದರಿಂದ ಭಗವಂತನು ಎಲ್ಲಾ ವೇದಗಳಿಂದಲೂ ಸ್ತುತಿಸಲ್ಪಟ್ಟಿರುವವನು ಎಂದಿದ್ದಾರೆ.  "ಸು" ಎಂಬ ಅಕ್ಷರದಿಂದ ಸ್ತುತ್ಯನು, ಆನಂದಮಯನು, ಆನಂದರೂಪನು ಎಂದು ಕೂಡ ತಿಳಿಯಬಹುದು.  "ವಿಶೇಷ" ಎಂದರೆ ನವ ಪ್ರಜಾಪತಿಗಳನ್ನು ಸೃಷ್ಟಿಸುವ ಮೊದಲು ವಿ - ಶೇಷರನ್ನು ಸೃಷ್ಟಿಸಿದವನು ಎಂದು ಕೂಡ ಅರ್ಥಮಾಡಿಕೊಳ್ಳಬಹುದು. ’ವಿ’ ಎಂದರೆ ಗರುಡ ಮತ್ತು ’ಶೇಷ’ ಎಂದರೆ ಶೇಷದೇವರು (ರುದ್ರದೇವರು) ಎಂದರ್ಥ.  ಸನ್ಮಹಿಮನು ಎಂದರೆ ಬ್ರಹ್ಮಾಂಡದಲ್ಲಿರುವ ಎಲ್ಲರಿಗಿಂತಲೂ, ಎಲ್ಲಕ್ಕಿಂತಲೂ ಅತ್ಯಧಿಕವಾದ ಮಹಿಮೆಯುಳ್ಳವನು, ಮಹತ್ವವುಳ್ಳವನು  ಎಂದಾಗುತ್ತದೆ.

ಭಗವದ್ಗೀತೆಯ ೧೦ನೆಯ ಅಧ್ಯಾಯದ ೨೦ನೆಯ ಶ್ಲೋಕದಲ್ಲಿ
ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ |
ಅಹಮಾದಿಶ್ವ ಮಧ್ಯಂ ಚ ಭೂತಾನಾಮಂತ ಏವ ಚ || - ಎಲ್ಲಾ ಪ್ರಾಣಿಗಳ ಹೃದಯಗಳಲ್ಲಿ ಇರುವ ಆತ್ಮನು ನಾನಾಗಿದ್ದೇನೆ.  ಹಾಗೆಯೇ ಸಮಸ್ತ ಪ್ರಾಣಿಗಳ ಆದಿ, ಮಧ್ಯ ಮತ್ತು ಅಂತ್ಯವೂ ನಾನೇ ಆಗಿದ್ದಾನೆ ಎನ್ನುತ್ತಾ  ಭಗವಂತ ನಮ್ಮೊಳಗೇ, ನಮ್ಮೊಡನೇ ಸದಾ ಇದ್ದು  ಎಲ್ಲವನ್ನೂ ತಾನು ಮಾಡಿ ಮಾಡಿಸುತ್ತಾ,  ರಕ್ಷಿಸುತ್ತಿದ್ದೇನೆ ಎಂದು ತಿಳಿಸಿದ್ದಾನೆ.  ನಮ್ಮೊಳಗೇ ಇರುವವನು, ಒಡಲನೆಳಲಿನಂದದಲ್ಲಿರುವವನು, ನಮ್ಮೊಡನೆಯೇ ತಿರುಗುವವನಾದ ಭಗವಂತನ ಕಾರುಣ್ಯಕ್ಕೆ ಎಲ್ಲೆ, ಪರಿಧಿ ಯಾವುದೂ ಇಲ್ಲ.  
ಚಿತ್ರಕೃಪೆ : ಅಂತರ್ಜಾಲ

Saturday, November 1, 2014

ಕರುಣಾ ಸಂಧಿ - ೨೪ ನೇ ಪದ್ಯ

 
ತಂದೆ ತಾಯ್ಗಳು ತಮ್ಮ ಶಿಶುವಿಗೆ
ಬಂದ ಭಯಗಳ ಪರಿಹರಿಸಿ ನಿಜ-
ಮಂದಿರದಿ ಬೇಡಿದುದನಿತ್ತಾದರಿಸುವಂದದಲಿ |
ಹಿಂದೆ ಮುಂದೆಡಬಲದಿ ಒಳ ಹೊರ-
ಗಿಂದಿರೇಶನು ತನ್ನವರನೆಂ-
ದೆಂದು ಸಲಹುವನಾಗಸದವೋಲೆತ್ತ ನೋಡಿದರು  || ೨೪ ||

ಪ್ರತಿಪದಾರ್ಥ : ತಂದೆತಾಯ್ಗಳು - ನಮ್ಮನ್ನು ಹೆತ್ತ ಅಪ್ಪ ಅಮ್ಮ, ತಮ್ಮ ಶಿಶುವಿಗೆ - ತಾವು ಹೆತ್ತ ತಮ್ಮ ಮಗುವಿಗೆ, ಬಂದ ಭಯಗಳ - ಮಗುವಿಗೆ ಬರುವ ಎಲ್ಲಾ ತರಹದ ಭಯಗಳನ್ನೂ, ಪರಿಹರಿಸಿ - ನಿವಾರಿಸಿ, ನಿಜಮಂದಿರದಿ - ತಮ್ಮ ಮನೆಯಲ್ಲಿ, ಬೇಡಿದುದನಿತ್ತು - ಮಗುವು ಬಯಸಿದ್ದನ್ನು ಕೊಟ್ಟು, ಆದರಿಸುವಂದದಲಿ - ಸಂತೈಸುತ್ತಾ ಮುದ್ದಿಸುವಂತೆ, ಹಿಂದೆ ಮುಂದೆ ಎಡ ಬಲದಿ ಒಳ ಹೊರಗೆ - ಸರ್ವಾಂತರ್ಯಾಮಿಯೂ ಸರ್ವ ವ್ಯಾಪ್ತನೂ ಆದ ಭಗವಂತನು ನಮ್ಮ ಸುತ್ತಲೂ ಎಲ್ಲೆಡೆಯಲ್ಲಿಯೂ, ಇಂದಿರೇಶನು - ಇಂದಿರೆಯ ಪತಿಯಾದ ಶ್ರೀಹರಿಯು,  ತನ್ನವರನು - ತನ್ನ ನಿಜ ಭಕ್ತರನ್ನು, ಎಂದೆಂದು - ಸರ್ವಕಾಲವೂ, ಸಲಹುವನು - ಸಂರಕ್ಷಿಸುವನು, ಆಗಸದವೋಲ್ - ಆಕಾಶದಂತೆ ವ್ಯಾಪಿಸಿರುವನು, ಎತ್ತ ನೋಡಿದರು - ಎತ್ತಣಿಂದೆತ್ತ ನೋಡಿದರೂ.


ಹೆತ್ತವರು ತಮ್ಮ ಮಕ್ಕಳು ಹೊರಗೆ ಆಡುವ ಸಮಯದಲ್ಲಿ, ದುಷ್ಟಗ್ರಹ ಸೋಕಿ ಅ೦ಜಿದರೆ, ಮನೆಗೆ ಕರೆತ೦ದು, ಭಯ ಪರಿಹಾರಾರ್ಥವಾಗಿ ಮ೦ತ್ರ ತ೦ತ್ರಗಳಿ೦ದ ಉಪಚರಿಸಿ, ಸ್ವಗೃಹವನ್ನು ಬಿಟ್ಟುಹೋಗದೆ ಇರತಕ್ಕ ಮಾರ್ಗವನ್ನು ಹೇಗೆ ಕಲ್ಪಿಸುತ್ತಾರೋ ಹಾಗೆಯೆ ಪರಮಾತ್ಮನು ತನ್ನ ಭಕ್ತರನ್ನು ಸರ್ವಕಾಲದಲ್ಲಿಯೂ, ಸರ್ವ ದೇಶದಲ್ಲಿಯೂ ಸ೦ರಕ್ಷಣೆ ಮಾಡುವನು. ಭಕ್ತರು ಆಟವಾಡುವ ಸ್ಥಳ ಎ೦ದರೆ, ಅಸೃಜ್ಯ ರಾಶಿಯಿ೦ದ ಸೃಷ್ಟಿಗೆ ಬರುವ ಪ್ರದೇಶವಾದ ಆಟದ ಬಯಲು ಆಗಿರುತ್ತದೆ. ದುಷ್ಟ ಸಹವಾಸ ಎ೦ದರೆ ಅದು ಈ ಲಿ೦ಗದೇಹವಾಗಿರುತ್ತದೆ. ದುಷ್ಟಗ್ರಹಗಳು ಎ೦ದರೆ ಅಹ೦ಮಮತಾದಿಗಳಾಗಿರುತ್ತವೆ. ಭಯವು ಎ೦ದರೆ ಅಹ೦ಮಮತಾದಿಗಳಿ೦ದ ಜನ್ಯವಾಗುವ ಪಾಪಕರ್ಮಗಳಿ೦ದ ಭಯ ಪಡುವುದು ಎ೦ದಾಗುತ್ತದೆ. ಮ೦ತ್ರ ತ೦ತ್ರಗಳು ಎ೦ದರೆ ಜ್ಜಾನ, ಭಕ್ತಿ ವೈರಾಗ್ಯವನ್ನು ಹುಟ್ಟಿಸುವುದು ಎ೦ದು ಅರ್ಥೈಸಿಕೊಳ್ಳಬೇಕು. ಇನ್ನು ನಿಜ ಮ೦ದಿರ ಎ೦ದರೆ ಅದು ವೈಕು೦ಠ ಲೋಕವಾಗಿರುತ್ತದೆ.

ಈ ಪ್ರಕಾರ ಅಸೃಜ್ಯರಾಶಿಯಿ೦ದ ಸೃಷ್ಟಿಗೆ ಬ೦ದ ಕೂಡಲೇ ಅಹ೦ಮಮತಾದಿಗಳು ಸೋಕಿ, ಅವುಗಳಿ೦ದ ಜನ್ಯವಾಗುವ ಪಾಪಕರ್ಮಗಳನ್ನು ಮಾಡಿ, ಭಯಪಡುವ ಜೀವರಾಶಿಗೆ ಜ್ಜಾನ, ಭಕ್ತಿ ವೈರಾಗ್ಯ ಎ೦ಬ ಮ೦ತ್ರಗಳನ್ನು ಅವರ ದೇಹದಲ್ಲಿ ಪ್ರವೇಶ ಮಾಡಿಸಿ, ಆ ಭಯವನ್ನು ಓಡಿಸಿ ಬಹಿರ್ ಸ೦ಚಾರಕ್ಕೆ ಕಾರಣವಾದ ಲಿ೦ಗದೇಹವನ್ನು ದುಷ್ಟ ಸ್ನೇಹದಿ೦ದ ಬೇಪ೯ಡಿಸಿ, ನಿಜಮ೦ದಿರವಾದ ವೈಕು೦ಠ ಲೋಕಕ್ಕೆ ಕರೆದುಕೊ೦ಡು ಹೋಗಿ, ಸ್ವರೂಪ ಯೋಗ್ಯತಾನುಸಾರ ಬೇಡಿದ್ದಕ್ಕೆ ಭ೦ಗ ಬಾರದ೦ತೆ ಫಲಾನುಭಾವ ಕೊಟ್ಟು ಸ೦ರಕ್ಷಣೆ ಮಾಡುತ್ತಾನೆ.

ತಂದೆ ತಾಯ್ಗಳು  - ತಂದೆ ತಾಯಿಗಳು ತಮ್ಮ ಕಾಳಜಿಯನ್ನು ಮಾಡದೆ, ಸದಾ ತಮ್ಮ ಮಕ್ಕಳ ಕ್ಷೇಮವನ್ನು ಬಯಸುತ್ತಾರೆ.  ಪ್ರೀತಿಯಿಂದ ಸಕಲ ಸೌಲಭ್ಯಗಳನ್ನೂ ಕೊಟ್ಟು ಸದಾ ಬೆಂಗಾವಲಿರುತ್ತಾರೆ.  ಯಾವ ಆಪತ್ತುಗಳೂ ಬಾರದಂತೆ ಜಾಗೃತವಾಗಿ ನೋಡಿಕೊಳ್ಳುತ್ತಾರೆ, ಮಕ್ಕಳು ಕೇಳಿದ್ದನ್ನೆಲ್ಲಾ ಕೊಟ್ಟು ಆದರಿಸುತ್ತಾರೆ.  ಹಾಗೆಯೇ ಭಗವಂತನೂ ಕೂಡ, ಎತ್ತಲಿಂದೆತ್ತ ನೋಡಿದರೂ ಕಾಣುವ ಆಕಾಶದಂತೆ, ನಮ್ಮೊಳಗೂ ಹೊರಗೂ ಎತ್ತೆತ್ತಲೂ ಇದ್ದು ನಮ್ಮನ್ನು ಸದಾ ರಕ್ಷಿಸುತ್ತಾನೆ.

ದಾಸರಾಯರು ಹರಿಕಥಾಮೃತಸಾರ ಕೃತಿಯಲ್ಲಿ ಭಗವಂತನ ಕಾರುಣ್ಯವನ್ನೂ ಮತ್ತು ಅವನು ನಮ್ಮನ್ನು ರಕ್ಷಿಸುವ ಪರಿಯನ್ನೂ ಅತಿಶಯವಾಗಿ, ದೃಷ್ಟಾಂತಗಳೊಂದಿಗೆ ವಿವರಿಸುತ್ತಾರೆ.  ಭಾಗವತ ಸಪ್ತಮ ಸ್ಕಂದ ನವಮೋಧ್ಯಾಯದಲ್ಲಿ ಪ್ರಹ್ಲಾದನು  "ಬಾಲಸ್ಯ ನೇಹ ಶರಣಂ ಪಿತರೌ ನೃಸಿಂಹ | ನಾರ್ತಸ್ಯ ಚಾಗದಮುದನ್ವತಿ ಮಜ್ಜತೋ ನೌಃ" -  ನೀನು ಉಪೇಕ್ಷೆ ಮಾಡಿದರೆ ತಂದೆ ತಾಯಿಗಳೂ ಕೂಡ ತಮ್ಮ ಬಾಲಕನನ್ನು ರಕ್ಷಿಸಲಾರರು.  ರಕ್ಷಣೆಗಾಗಿ ಮಾಡಿದ ಯಾವುದೇ ಉಪಾಯವೂ ಫಲಿಸುವುದೇ ಇಲ್ಲವೆಂದು ಸ್ತುತಿಸುತ್ತಾನೆ.  ಏನೂ ತಿಳಿಯದ, ಯಾವುದನ್ನೂ ತಾನೇ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿರುವ ಪುಟ್ಟ ಕಂದನ ಬೇಕು ಬೇಡಗಳನ್ನೆಲ್ಲಾ ತಂದೆ ತಾಯಿಗಳು ಹೇಗೆ ತಾವೇ ತಿಳಿದುಕೊಂಡು ಮಗುವನ್ನು ಓಲೈಸಿ ಲಾಲಿಸುತ್ತಾರೋ, ಹಾಗೇ ಭಗವಂತ ತನ್ನನ್ನು ನಂಬಿ ಬಂದ ಭಕ್ತರನ್ನು ಅವರ ಅವಶ್ಯಕತೆಗಳನ್ನೆಲ್ಲಾ ಪೂರೈಸಿ, ಅವರನ್ನು ಓಲೈಸುತ್ತಾನೆ, ಲಾಲಿಸುತ್ತಾನೆ ಮತ್ತು ಸಂರಕ್ಷಿಸುತ್ತಾನೆ.  ಮಗುವಿಗಿಂತಲೂ ಕಡೆಯಾಗಿ, ಏನೂ ತಿಳಿಯದೆ ಅಜ್ಞಾನದಲ್ಲಿ ಮುಳುಗಿರುವ ಜೀವಿಗಳನ್ನು ಎಚ್ಚರಿಸುತ್ತಾನೆ, ಜ್ಞಾನ ನೀಡುತ್ತಾನೆ ಮತ್ತು ಮೋಕ್ಷವನ್ನೂ ಕೊಡುತ್ತಾನೆ.  ಮೋಕ್ಷವಷ್ಟೇ ಸಾಲದೆಂದು ಮೋಕ್ಷದಲ್ಲಿ ಆನಂದವನ್ನೂ ಕರುಣಿಸುತ್ತಾನೆ.

ಜೀವಿಯ ಪ್ರಾಕೃತಿಕ ಶರೀರಕ್ಕೆ ತಂದೆ-ತಾಯಿಯಾದವರು ದೇಹದ ಜನನಕ್ಕೆ ಕಾರಣರಾಗುತ್ತಾರೆ ಮತ್ತು ಈ ಜನ್ಮದ ದೇಹಕ್ಕೆ ಮಾತ್ರ ತಂದೆ-ತಾಯಿಗಳಾಗುತ್ತಾರೆ.  ಹಿಂದಿನ ಜನ್ಮಗಳಲ್ಲಿ ಅವರು ಇರಲಿಲ್ಲ, ಮುಂದಿನ ಜನ್ಮಗಳಲ್ಲಿ ಇರುವುದಿಲ್ಲ.  ಆದರೆ ಜೀವಿಯನ್ನು ಸದಾ ಕಾಲವೂ, ಯಾವುದೇ ದೇಹದಲ್ಲಿದ್ದರೂ ಕಾಪಾಡುವವನು ಮತ್ತು ಎಲ್ಲರಿಗೂ, ಇಡೀ ಬ್ರಹ್ಮಾಂಡಕ್ಕೇ ಭಗವಂತನು ತಂದೆ-ತಾಯಿಯಾದವನು.  ಪುಟ್ಟ ಮಕ್ಕಳು ಆಡಲು ಬಿಟ್ಟರೆ, ತಮ್ಮಷ್ಟಕ್ಕೇ ಆಟವಾಡಿಕೊಳ್ಳುತ್ತಾ ತಂದೆ-ತಾಯಿಗಳನ್ನು ಮರೆತು ಆಟದಲ್ಲಿ ಲೀನವಾಗಿರುತ್ತಾರೆ.  ಆದರೆ ಯಾವುದೋ ಹುಳವನ್ನೋ, ಇನ್ನೇನನ್ನೋ ನೋಡಿ ಬೆಚ್ಚಿ, ಬೆದರಿದಾಗ ಚೀರುತ್ತಾ ತಂದೆ-ತಾಯಿಯರನ್ನು ಹುಡುಕುತ್ತಾರೆ.   ಕಂಗಾಲಾದ ಕಂದನನ್ನು ಕಂಡು ತಂದೆ-ತಾಯಿಗಳು ಧಾವಿಸಿ ಬಂದು ಎತ್ತಿಕೊಂಡು, ಅಪ್ಪಿಕೊಂಡು ಸಮಾಧಾನ ಪಡಿಸುತ್ತಾರೆ.  ಅದೇ ರೀತಿ ಭಗವಂತ ಜೀವರನ್ನು ಸೃಷ್ಟಿಸಿ ತನ್ನದೇ ಆದ ಬ್ರಹ್ಮವನ (ಸಂಸಾರ)ದಲ್ಲಿ ಆಟ ಆಡಲು ಬಿಟ್ಟುಬಿಡುತ್ತಾನೆ.  ಜೀವರು ತಮ್ಮ ತಮ್ಮ ಕರ್ಮಗಳಿಗನುಸಾರವಾಗಿ ಸಂಸಾರದಲ್ಲಿ ಮುಳುಗಿ ಭಗವಂತನನ್ನು ಮರೆತು ಆಡತೊಡಗುತ್ತಾರೆ.  ಭಯದಿಂದ ಚೀರುತ್ತಾ ತಂದೆ-ತಾಯಿಯರನ್ನು ಹುಡುಕುವ ಕಂಗೆಟ್ಟ ಕಂದನಂತೆ ಜೀವಿಯೂ ಕೂಡ ತನಗೆ ಕಷ್ಟ ಬಂದಾಗ, ನೋವಾದಾಗ ಭಗವಂತನನ್ನು ಕರೆದರೆ ಹೆತ್ತವರಂತೆಯೇ ಧಾವಿಸಿ ಬಂದು ಭಗವಂತ ನಮ್ಮನ್ನು ರಕ್ಷಿಸುತ್ತಾನೆ.  ಆದರೆ ಕರೆಯುವ ಆ ಕರೆಯಲ್ಲಿ, ಶರಣಾಗತಿಯ, ಆರ್ತತೆಯ, ಅನನ್ಯತೆಯ ಭಾವವಿರಬೇಕು.  ನೀನೇ ಗತಿ ಎಂಬ ಅಳಲು ಬರಬೇಕು.  ಇದರ ಅರ್ಥವೆಂದರೆ ಭಗವಂತ ಈ ಜೀವನವನ್ನು ಸಾಧನೆಗಾಗಿಯೇ ಕೊಟ್ಟಿದ್ದಾನೆ, ಮೊದಲು ಸಂಸಾರದಲ್ಲಿದ್ದು ಅದರಲ್ಲಡಗಿರುವ ಭಯ, ದೋಷಗಳನ್ನು ಕಂಡುಕೊಂಡು ಮೋಕ್ಷ ಕೊಡುವ ಭಗವಂತನಿಗೆ ಶರಣಾಗತರಾಗಬೇಕು.  ಸಾಧನೆಯ ಮೂಲಕ ಅಪರೋಕ್ಷ ಜ್ಞಾನ ಪಡೆದ ಜೀವಿಯನ್ನು ತಂದೆ-ತಾಯಿಯಂತೆ ಬಂದೆತ್ತಿಕೊಂಡು ಹೋಗಿ, ಮೋಕ್ಷಾನಂದವನ್ನು ಕೊಟ್ಟು, ಜೊತೆಗೆ ಬೇಕಾದ್ದನ್ನೆಲ್ಲವನ್ನೂ ಕೊಟ್ಟು ರಕ್ಷಿಸುತ್ತಾನೆ.

ತತ್ಚಸುವ್ವಾಲಿಯಲ್ಲಿ ದಾಸರಾಯರು | ತಂದೆ ತಾಯಿಯು ಭ್ರಾತೃ ಬಂಧು ಸಖ ಗುರು ಪುತ್ರ | ಎಂದೆಂದು ನೀನೇ ಗತಿ ಗೋತ್ರ | ಗತಿ ಗೋತ್ರ ಇಹ ಪರದಿ | ಇಂದಿರಾರಾಧ್ಯ ಸಲಹೆಮ್ಮ || - ಲಕ್ಷ್ಮೀದೇವಿಯಿಂದಲೂ ಆರಾಧ್ಯನಾದ ಭಗವಂತನೇ ನೀನೆ ತಂದೆ, ತಾಯಿ, ಭ್ರಾತೃ, ಬಂಧು, ಬಳಗ, ಸಖ, ಗುರು, ಪುತ್ರ ಎಲ್ಲವೂ.  ಎಂದೆಂದಿಗೂ, ಯಾವ ಕಾಲಕ್ಕೂ, ಇಹದಲ್ಲೂ, ಪರದಲ್ಲೂ, ಲೋಕಾಲೋಕಗಳಲ್ಲೂ ನೀನೇ ಜ್ಞಾನವನ್ನಿತ್ತು ರಕ್ಷಿಸುವವನು ಎಂದಿದ್ದಾರೆ.

ಶ್ರೀ ಮಧ್ವಾಚಾರ್ಯರ ದ್ವಾದಶ ಸ್ತೋತ್ರದ ತೃತೀಯ ಅಧ್ಯಾಯದ ಮೊದಲ ಶ್ಲೋಕದಲ್ಲಿ ಆಚಾರ್ಯರು "ಹರಿರೇವಪರೋ ಹರಿರೇವ ಗುರು ಹರಿರೇವ  ಜಗತ್ ಪಿತೃ ಮಾತೃಗತಿ" ಎನ್ನುತ್ತಾ ಭಗವಂತ ನಮಗೆ ಗುರು, ತಂದೆ, ತಾಯಿ ಸಮಸ್ತವೂ ಎಂದಿದ್ದಾರೆ.

ಶ್ರೀ ಪುರಂದರ ದಾಸರು ತಮ್ಮ  "ನಂಬಿದೆ ನಿನ್ನ ಪಾದವ ವೆಂಕಟರಮಣ" ಕೃತಿಯಲ್ಲಿ ನಿನ್ನ ಪಾದಾಂಬುಜ ಯುಗಳವನ್ನು ನಂಬಿರುವೆನು, ಚಂದದಿ ಎನ್ನನ್ನು ಸಲಹು ಎನ್ನುತ್ತಾರೆ.  ಇಲ್ಲಿ ಪಾದಗಳನ್ನು ನಂಬಿರುವೆನೆಂದರೆ, ಅದು ಅನ್ಯ ಗತಿಯಿಲ್ಲವು, ನೀನೇ ಗತಿಯು ಎಂಬ ಮಟ್ಟದಲ್ಲಿನ ನಂಬಿಕೆಯನ್ನು ಬಿಂಬಿಸುತ್ತದೆ.  ಇದೇ ಕೃತಿಯಲ್ಲಿ ಮುಂದುವರೆಯುತ್ತಾ ಭಗವಂತನನ್ನು |ತಂದೆಯು ನೀನೇ ತಾಯಿಯು ನೀನೇ | ಬಂಧು ಬಳಗವು ನೀನೇ | ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ | ಬಂದೆನ್ನ ಸಲಹೋ ಮುಕುಂದ ಮುರಾರಿ" ಎನ್ನುತ್ತಾ ಪ್ರಾಕೃತಿಕ ಪ್ರಪಂಚದ ಎಲ್ಲಾ ಸಂಬಂಧಗಳಿಗಿಂತಲೂ ಮಿಗಿಲಾದದ್ದು ಮತ್ತು ಎಲ್ಲಾ ಸಂಬಂಧಗಳೂ ನೀನೊಬ್ಬನೇ, ನೀನೇ ಗತಿಯೆನಗೆ ಎಂಬ ಭಾವ ವ್ಯಕ್ತಪಡಿಸುತ್ತಾರೆ.  ಎರಡನೆಯ ಚರಣದಲ್ಲಿ "ಚಿಕ್ಕಂದು ಮೊದಲು ನಿನ್ನಯ ಪಾದವ | ಹೊಕ್ಕು ಜೀವಿಸುತಲಿಯೆನು | ಫಕ್ಕನೆ ಜ್ಞಾನದ ಅಕ್ಕರದಿಂದಲಿ | ಮಕ್ಕಳ ಮಾಣಿಕ್ಯ ರುಕ್ಮಿಣಿ ರಮಣ" ಎನ್ನುತ್ತಾ ಶ್ರೀ ಜಗನ್ನಾಥದಾಸರು ತಿಳಿಸಿದಂತಹ, ಸಾಧನೆಗಾಗಿಯೇ ಬಂದಿರುವಂತಹುದು ನಮ್ಮ  ಜೀವನ ಎಂಬುದನ್ನು ಪ್ರತಿಬಿಂಬಿಸುತ್ತಾರೆ.  ಕೊನೆಯಲ್ಲಿ "ಎನ್ನನ್ನು ನೀ ಮರೆಯದೇ ಸಲಹಿ ಕೃಪೆತೋರು" ಎಂದು ಅರ್ಥಿಯಿಂದ ಪ್ರಾರ್ಥಿಸುತ್ತಾರೆ.

ಶಿಶುವಿಗೆ ಬಂದ ಭಯಗಳ ಪರಿಹರಿಸಿ -  ತನ್ನನ್ನು ತಾನು ಸಂರಕ್ಷಿಸಿಕೊಳ್ಳಲಾಗದ ಪುಟ್ಟ ಕಂದ ಅನೇಕ ತರಹದ ಭಯಗಳಿಂದ ಬಾಧಿಸಲ್ಪಡುತ್ತದೆ.  ಕ್ರಿಮಿ ಕೀಟಗಳು, ಆಪತ್ತುಗಳು, ಹಸಿವು ನಿದ್ರೆಗಳು, ಚಳಿ ಗಾಳಿ ಹೀಗೆ ಹಲವು ರೀತಿಯ ಭಯಗಳಿಂದ ತತ್ತರಿಸುವ ಶಿಶುವನ್ನು ತಂದೆ ತಾಯಿಗಳು ತಮ್ಮ ಸುಭದ್ರ ಬಾಹುಗಳಿಂದ ರಕ್ಷಿಸಿ, ಅಕ್ಕರೆಯ ಬೆಚ್ಚನೆಯ ಸ್ಪರ್ಶದಿಂದ ಸಂತೈಸುತ್ತಾರೆ.  ಹಸಿವಾದಾಗ ಆಹಾರ ಕೊಡುತ್ತಾರೆ, ನಿದ್ರೆ ಬಂದಾಗ ಜೋಗುಳ ಹಾಡಿ, ಮಲಗಿಸುತ್ತಾರೆ.  ಹಾಗೇ ಭಗವಂತ ಕೂಡ ತನ್ನನ್ನು ನಂಬಿ ಶರಣಾದ ಭಕ್ತರನ್ನು ತಂದೆ-ತಾಯಿಯಂತೆಯೇ ಅಕ್ಕರೆಯಿಂದ, ಬೆಚ್ಚನೆಯ ಸ್ಪರ್ಶದಿಂದ, ತೋಳಲ್ಲಿ ಓಲಾಡಿಸಿ, ತೂಗಿ ರಕ್ಷಿಸುತ್ತಾನೆ.  ಸಕಲ ವಿಧದ ಭಯಗಳನ್ನೂ ಪರಿಹರಿಸಿ, ಸುಖ ಶಾಂತಿಯನ್ನು ಕರುಣಿಸುತ್ತಾನೆ.  ಹೇಗೆ ಯಾವುದೇ ರೀತಿಯಿಂದಲೂ ಮಗು ಪೀಡಿತನಾಗದಂತೆ ಹಿಂದೆ ಮುಂದೆ, ಎಡಬಲಗಳಲ್ಲಿದ್ದು, ಕಣ್ಣಲ್ಲಿ ಕಣ್ಣಿಟ್ಟು ತಂದೆ ತಾಯಿಗಳು ರಕ್ಷಿಸುತ್ತಾರೆಯೋ, ಹಾಗೆಯೇ ಭಗಂತನು ತನ್ನನ್ನು ನಂಬಿದ ಭಕ್ತರನ್ನು ಸದಾ, ಸರ್ವದಾ ಕಾಪಾಡುತ್ತಾನೆ.

ನಿಜ ಮಂದಿರದಿ - ಭಗವಂತನು ಬ್ರಹ್ಮಾಂಡದ ಸೃಷ್ಟಿಕರ್ತನು.  ಪ್ರಳಯ ಕಾಲದಲ್ಲಿ ಸೂಕ್ಷ್ಮ ರೂಪದಲ್ಲಿ ಸಮಸ್ತವನ್ನೂ ತನ್ನ ಉದರದಲ್ಲಿಟ್ಟುಕೊಂಡು ಜಗದ್ಭುಕ್ ಎನಿಸಿಕೊಂಡವನು.  ಹೀಗೆ ಸೃಷ್ಟಿಗೆ ಮುನ್ನ ಬ್ರಹ್ಮಾಂಡವಿದ್ದ ಜಾಗವೆಂದರೆ ಭಗವಂತನ ಉದರ ಮತ್ತು ಅದೇ ಜೀವರಾಶಿಗೆ ನಿಜ ಮಂದಿರವು.  ನಮ್ಮ ಕರ್ಮಗಳಿಗನುಗುಣವಾಗಿ ನಾವು ಕರ್ಮಭೂಮಿಯಾದ ಇಲ್ಲಿ ಬಂದಿದ್ದೇವೆ.  ಇದು ನಮ್ಮ ನಿಜವಾದ ಮಂದಿರವಲ್ಲ.  ನಿಷ್ಕಾಮ ಕರ್ಮಗಳನ್ನು ಮಾಡುತ್ತಾ, ನಿರಂತರವೂ ಭಗವಂತನ ಧ್ಯಾನ ಮಾಡುತ್ತಾ ನಮ್ಮ ನಿಜ ಮಂದಿರವಾದ ಭಗವಂತನ ಪಾದದಲ್ಲಿ ಶರಣಾಗುವುದೇ ನಮ್ಮ ಧ್ಯೇಯವಾಗಬೇಕು.  ತನ್ನವರಾದ ಭಕ್ತರ ಹೃತ್ಕಮಲವೇ ಭಗವಂತನಿಗೂ ನಿಜಮಂದಿರವು.  ಅಲ್ಲಿಯೇ ಸದಾ ಭಗವಂತನ ಆರಾಧನೆ ನಡೆಯುತ್ತಿರಬೇಕು.  ಜನನವಾಗುತ್ತಿದ್ದಂತೆಯೇ ಜೀವಿಗೆ ಅಹಂಮಮಗಳು ಅಂಟಿಕೊಳ್ಳುವುದರಿಂದ ಜೀವಿಯು ತನ್ನ ಜನ್ಮದ ಉದ್ದೇಶವನ್ನೇ ಮರೆತುಬಿಟ್ಟಿರುತ್ತಾನೆ.  ಅರಿಷಡ್ವರ್ಗಗಳ ಮುಷ್ಟಿಗೆ ಸಿಲುಕಿ ಭೌತಿಕ ಪ್ರಪಂಚವೇ ಸಮಸ್ತವೂ ಎಂದು ಭಾವಿಸುತ್ತಾ ತಾನು ವಾಸಿಸುತ್ತಿರುವ ಲೌಕಿಕ ಮನೆಯೇ ತನ್ನ ನಿಜವಾದ ಮನೆಯೆಂದು ತಿಳಿದುಕೊಂಡಿರುತ್ತಾನೆ.  ಆದರೆ ಅದು ಸತ್ಯವಲ್ಲ.  ಶ್ರೀ ಪುರಂದರದಾಸರು ತಮ್ಮ "ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ" ಎಂಬ ಕೃತಿಯಲ್ಲಿ ಇಲ್ಲಿರುವುದು ಕಳ್ಳಮನೆ, ಸುಳ್ಳುಮನೆ ಎಂದೆಲ್ಲಾ ವಿವರಿಸಿದ್ದಾರೆ.  ವೈಕುಂಠವಾಸಿಯಾದ ಪದುಮನಾಭನ ದಿವ್ಯ ಪಾದಾರವಿಂದಗಳೇ ನಮ್ಮ ನಿಜ ಮಂದಿರವಾಗಿದೆ.  ದಾಸರಾಯರು ತಮ್ಮ ಇನ್ನೊಂದು ಕೃತಿ "ಬ್ರಹ್ಮಾಂಡದೊಳಗೆ ಅರಸಿ ನೋಡಲು, ನಮ್ಮೂರೇ ವಾಸಿ" ಎನ್ನುತ್ತಾ ಜೀವಿಗಳ ನಿಜವಾದ ಊರು ರಮೆಯರಸನು ಸದಾ ವಾಸಿಸುವ ವೈಕುಂಠವೆಂದು ಸಾರಿದ್ದಾರೆ.  ಸೃಷ್ಟಿಯಾದಾಗ ಲಿಂಗದೇಹದ ಮೂಲಕ ಅಹಂಮಮಗಳು ಗಂಟುಬಿದ್ದು ಒದ್ದಾಡುತ್ತಾ, ಭೀತಿಗೊಳ್ಳುತ್ತಾ ಬದುಕುವ ಜೀವಿಗೆ ಭಗವಂತನಲ್ಲಿ ಶರಣಾಗತನಾಗುವುದೇ ಪರಿಹಾರ.  ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳೊಂದಿಗೆ ಸಾಧನೆ ಮಾಡುವ ಜೀವಿಗಳನ್ನು ಪರಮಾತ್ಮ ಮುಕ್ತಿಕೊಟ್ಟು ತನ್ನದೇ ನಿಜಮಂದಿರವಾದ ವೈಕುಂಠದಲ್ಲಿರಿಸಿ, ಸ್ವರೂಪಾನಂದವನ್ನೂ ಇತ್ತು ಸಲಹುತ್ತಾನೆ.

ಬೇಡಿದುದನಿತ್ತಾದರಿಸುವಂದದಲಿ - ಮಗುವಿನ ಹುಟ್ಟಿಗೆ ಕಾರಣವಾಗುವ ತನುವನ್ನು ಕೊಡುತ್ತಾನಾದ್ದರಿಂದ ಅವನು ತಂದೆಯಾಗುತ್ತಾನೆ.  ತಂದೆ ಶಬ್ದದಲ್ಲಿಯೇ ತನ್ - ತನು ಎಂಬ ಶಬ್ದವಡಗಿದೆ.  ತಂದೆ ಮೊದಲು ಮಗುವಿನ ಜನ್ಮಕ್ಕೆ ಕಾರಣನಾಗುತ್ತಾನೆ.  ಮುಂದೆ ಮಗುವಿಗೆ ಬ್ರಹ್ಮೋಪದೇಶ ಮಾಡುವ ಮೂಲಕ ಅವನಿಗೆ ಸಂಸ್ಕಾರ ಕೊಟ್ಟು, ಮತ್ತೊಮ್ಮೆ ತಂದೆಯಾಗುತ್ತಾನೆ, ವಿದ್ಯೆ ನೀಡಿ ಉಜ್ವಲ ಭವಿಷ್ಯದತ್ತ ಕೈ ಹಿಡಿದು ನಡೆಸುತ್ತಾ ತಂದೆಯಾಗುತ್ತಾನೆ, ಹಸಿವು ಬಾಯಾರಿಕೆಗಳನ್ನು ಪೂರೈಸಿ ತನುವಿಗೆ ಪೋಷಣೆ ನೀಡುತ್ತಾ ತಂದೆಯಾಗುತ್ತಾನೆ.  ಶಿಶುವಿಗೆ ಬರುವ ಎಲ್ಲಾ ರೀತಿಯ ಭಯಗಳನ್ನೂ, ಸಂಕಷ್ಟಗಳನ್ನೂ ಪರಿಹರಿಸುತ್ತಾ, ಕಾಪಾಡುತ್ತಾ ತಂದೆಯಾಗುತ್ತಾನೆ.  ಹೀಗೆ ಮಗುವಿದೆ ತಂದೆ ನಾನಾ ವಿಧದಲ್ಲಿ, ರೂಪದಲ್ಲಿ ತಂದೆಯೆನಿಸಿಕೊಳ್ಳುತ್ತಾನೆ.  ಮಗುವಿನ ರೂಪದಲ್ಲಿ ಬಂದ ಆತ್ಮ ತನ್ನ ತಂದೆಯಿಂದ ಈ ಎಲ್ಲಾ ತರಹದ ರಕ್ಷಣೆಯನ್ನೂ ಬೇಡುತ್ತದೆ ಮತ್ತು ಪಡೆದುಕೊಳ್ಳುತ್ತದೆ.  ಮಗುವಾಗಿ ಬೇಡಿದ ಪ್ರತಿಯೊಂದನ್ನೂ ಪೂರೈಸುವವನೇ ತಂದೆಯಾಗುತ್ತಾನೆ.  ಬೇಡಿದುದನೆಲ್ಲವನ್ನೂ ಇತ್ತು, ಜೊತೆಗೆ ಸಮ್ಮಾನವನ್ನೂ ಕೊಟ್ಟು, ಆದರಿಸುತ್ತಾ ಪ್ರೀತಿಯಿಂದ ಮಗುವನ್ನು ಬೆಳೆಸುವವನು ತಂದೆಯಾಗುತ್ತಾನೆ.  

ತಾಯಿಯಾದವಳು ತನ್ನ ಮಗುವನ್ನು ಪ್ರೀತಿಸುವ, ಆದರಿಸುವ ವಿಧಾನವೇ ಬೇರೆಯಾಗಿರುತ್ತದೆ.  ತನ್ನ ಶಿಶುವೆಂಬ ಮೋಹ ಪಾಶದಲ್ಲಿ ಸಿಲುಕಿ ಮಗುವನ್ನು ಮಮತೆಯ ಸೆರಗಿನಲ್ಲಿ ಬಚ್ಚಿಟ್ಟುಕೊಂಡು ಅತಿಯಾದ ಎಚ್ಚರಿಕೆಯಿಂದ ರಕ್ಷಿಸುತ್ತಾಳೆ.  ಮಗುವಿನಿಂದ ತನಗೆ ಯಾವುದೇ ರೀತಿಯ ತೊಂದರೆ ಬಂದರೂ, ನೋವಾದರೂ ತಾಯಿ ಸಹಿಸಿಕೊಳ್ಳುತ್ತಾಳೆ.  ಮಮತೆಯಿಂದ ಆದರಿಸುತ್ತಾಳೆ.  ತನಗಿಲ್ಲದಿದ್ದರೂ ಪರವಾಗಿಲ್ಲವೆಂದು ಆಹಾರ ಕೊಟ್ಟು ಸಂತಸ ಪಡುತ್ತಾಳೆ.  ಮಗು ಎಷ್ಟೇ ಕೆಟ್ಟವನಿದ್ದರೂ, ತಾಯಿಯ ಮಮತೆಯಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ.  ಶ್ರೀ ಶಂಕರಾಚಾರ್ಯರು "ಕುಪುತ್ರ"ನಿರಬಹುದೇ ಹೊರತು, "ಕುಮಾತೆ" ಎಂದಿಗೂ ಇರುವುದಿಲ್ಲ ಎಂದು ತಿಳಿಸಿದ್ದಾರೆ.  ತಾಯಿ ಮಗು ಬೇಡಿದುದನೆಲ್ಲಾ ಕೊಟ್ಟು ಆದರಿಸುತ್ತಾಳೆ.  ಭಗವಂತನಾದರೂ ಅಷ್ಟೇ, ಅಪಾರ ಕರುಣೆಯಿಂದ ಭಕ್ತನ ಸಮಸ್ತ ಅಪರಾಧಗಳನ್ನೂ ಮರೆತು, ಧಾವಿಸಿ ಬಂದು ಬೇಡಿದುದನಿತ್ತು ಆದರಿಸುತ್ತಾನೆ.

ದಾಸರಾಯರು ತಮ್ಮ ತತ್ವಸುವ್ವಾಲಿಯಲ್ಲಿ "ತಂದೆ ಮಕ್ಕಳನು ಪೊರೆವಂದದಲಿ ಶ್ರೀಕಾಂತ | ಎಂದೆಂದು ತನ್ನ ಭಕುತರ ಸಲಹುವ" ಎಂದು ತಿಳಿಸಿದ್ದಾರೆ.

ದಾಸರಾಯರ ತತ್ವಸುವ್ವಾಲಿಯಲ್ಲಿ " | ಅಚ್ಯುತನೆ ನಿನ್ನಂಥ ಹುಚ್ಚು ದೊರೆಗಳ ಕಾಣೆ | ಕಚ್ಚಿ ಬೈದೊದ್ದ ಭಕತರ | ಭಕತರಪರಾಧಗಳ ತುಚ್ಛಗೈದವರ ಸಲಹಿದಿ || - ಭಗವಂತನ ಮಮತೆಯ ಎಲ್ಲೆಯನ್ನು ನಾವು ಅಳೆಯಲಾಗುವುದೇ ಇಲ್ಲ.  ಕಚ್ಚಿ ರುಚಿ ನೋಡಿ ಫಲಗಳನ್ನು ಸಮರ್ಪಿಸಿದ ಶಬರಿ, ಬಾಲ್ಯದಿಂದಲೂ ನಿಂದಿಸಿದ ಶಿಶುಪಾಲ, ಕಾಲಿನಿಂದ ಎದೆಗೇ ಒದ್ದ ಭೃಗುಮುನಿಯಂತಹ ಭಕ್ತರನ್ನೆಲ್ಲಾ ರಕ್ಷಿಸಿ, ಅವರು ಬೇಡಿದುದನಿತ್ತು ಆದರಿಸಿದೆ ಎನ್ನುತ್ತಾರೆ.

ಹಿಂದೆ ಮುಂದೆಡಬಲದಿ - ನಮ್ಮ ಹಿಂದೆ ಮುಂದೆ, ಎಡಕ್ಕೆ ಬಲಕ್ಕೆ, ಒಳಗೆ ಹೊರಗೆ ಎಲ್ಲಾ ಕಡೆಯಲ್ಲೂ ಸರ್ವವ್ಯಾಪ್ತನಾದ ಭಗವಂತನು ಇದ್ದು, ನಮ್ಮನ್ನು ರಕ್ಷಿಸುತ್ತಿದ್ದಾನೆ.  ಈ ಜನ್ಮದ ತಂದೆ ತಾಯಿಗಳು ಈಗಷ್ಟೇ ಸೀಮಿತರು.  ಅವರು ಹಿಂದಿನ ಜನ್ಮದಲ್ಲೂ ಇರಲಿಲ್ಲ, ಮುಂದಿನ ಜನ್ಮದಲ್ಲೂ ಇರುವುದಿಲ್ಲ.  ಆದರೆ ಭಗವಂತ ನಮ್ಮ ಹಿಂದಿನ ಎಲ್ಲಾ ಜನ್ಮಗಳಲ್ಲೂ ತಂದೆತಾಯಿಯಂತೆ ಕಾಪಾಡಿದ.  ಮುಂದಿನ ಎಲ್ಲಾ ಜನ್ಮಗಳಲ್ಲೂ ಕಾಪಾಡುತ್ತಾನೆ.  ಎಡಬಲದಿ ಎಂದರೆ ನಮ್ಮ ದೇಹದೊಳಗೆ ಎಡಬಲ ಭಾಗಗಳಲ್ಲಿರುವ ೭೨೦೦೦ ನಾಡಿಗಳಲ್ಲಿ ತನ್ನ ಪರಿವಾರವಾದ ತತ್ವಾಭಿಮಾನಿ ದೇವತೆಗಳ ಸಹಿತವಾಗಿ ಸದಾ ರಕ್ಷಿಸುತ್ತಿದ್ದಾನೆ ಎಂದರ್ಥವಾಗುತ್ತದೆ.

ಸರ್ವಾಂತರ್ಯಾಮಿಯಾದ ಭಗವಂತನ ಇರುವನ್ನು ಶ್ರೀ ಪುರಂದರದಾಸರು ತಮ್ಮ "ಒಳಗೆ ವಿಠಲ ಹೊರಗೆ ವಿಠಲ, ಒಳಗೆ ಹೊರಗೆ ವಿಠಲಾ ವಿಠಲ, ಎಡಕೆ ವಿಠಲ ಬಲಕೆ ವಿಠಲ, ಎಡಕೆ ಬಲಕೆ ವಿಠಲಾ ವಿಠಲಾ" ಎಂಬ ಕೃತಿಯಲ್ಲಿ ತಿಳಿಸಿದ್ದಾರೆ.  ಮುಂದುವರೆಯುತ್ತಾ ಬಂಧು ವಿಠಲ ಬಳಗ ವಿಠಲ ಎನ್ನುತ್ತಾ, ನಮ್ಮ ಸರ್ವಸ್ವವೂ ಭಗವಂತನೇ, ನಮ್ಮ ಧ್ಯಾನ ಸದಾ ಅವನ ಪಾದದಲ್ಲಿಯೇ ನೆಲೆಸಿರಬೇಕೆಂಬುದನ್ನು ಸೂಚಿಸಿದ್ದಾರೆ.  ಶ್ರೀ ವಿಜಯದಾಸರು ತಮ್ಮ ಒಂದು ಉಗಾಭೋಗದಲ್ಲಿ, ತಮ್ಮದೇ ಅನುಭವವನ್ನು ಹೀಗೆ ಹೇಳಿದ್ದಾರೆ 
ಒಂದು ಕೈಯಲಿ ಖಡ್ಗ ಒಂದು ಕೈಯಲಿ ಹಲಗೆ | ಅಂದವಾಗಿ ಪಿಡಿದುಕೊಂಡು ದಿವಾರಾತ್ರಿಯಲಿ |
ಬಂದು ಬದಿಯಲಿ ನಿತ್ಯ ಬಾರಾಸನಾಗಿ ನಿಂದು | ಹಿಂದು ಮುಂದುಪದ್ರವವಾಗದಂತೆ |
ಇಂದಿರೆರಮಣ ಕಾಯುತ್ತಲಿರೆ | ಎನಗಾವ ಭಯವಿಲ್ಲ ಬಂಧಕಗಳಿಲ್ಲ |
ಧನ್ಯ ಧನ್ಯ ಕಂದರ್ಪನಯ್ಯ ಸಿರಿ ವಿಜಯವಿಠಲರಾಯ | ಆಪತ್ತು ಬರಲೀಸ ನೋಡಿ || - ಇಂದಿರೆರಮಣನಾದ ಭಗವಂತನು ಕೈಯಲ್ಲಿ ಖಡ್ಗ ಹಿಡಿದು ನಿಂತು ಹಿಂದೆ ಮುಂದೆಲ್ಲೂ ಉಪದ್ರವವಾಗದಂತೆ ಕಾಯುತ್ತಾ, ರಕ್ಷಿಸುತ್ತಿರುವಾಗ ಯಾವ ತಾಪತ್ರಯಗಳ ಭಯವೂ ನಮ್ಮನ್ನು ಕಾಡುವುದಿಲ್ಲ ಮತ್ತು ನಮಗೆ ಯಾವ ಆಪತ್ತೂ ಬರಲೀಸನು.

ಭಗವದ್ಗೀತೆಯ ೧೪ನೆಯ ಅಧ್ಯಾಯದ  ೪ನೇ ಶ್ಲೋಕದಲ್ಲಿ ಭಗವಂತ ಅರ್ಜುನನಿಗೆ
ಸರ್ವಯೋನಿಷು ಕೌಂತೇಯ, ಮೂರ್ತಯಃ ಸಂಭವಂತಿ ಯಾಃ |
ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದಃ ಪಿತಾ || -  ಸಮಸ್ತ ವಿಶ್ವದ ಅಭಿವ್ಯಕ್ತಿಯ ಒಟ್ಟು ಕಾರಣವೇ ಮಹತ್ ತತ್ವ ಮತ್ತು ಅದನ್ನೇ ’ಬ್ರಹ್ಮನ್’ ಎಂದು ಕರೆಯುತ್ತಾರೆ.     ಎಲ್ಲಾ ಜೀವರಾಶಿಗಳೂ ಉತ್ಪತ್ತಿಯಾಗುವುದು ಪ್ರಕೃತಿ ಮಾತೆಯಿಂದಲಾದ್ದರಿಂದಲೇ,  ಬ್ರಹ್ಮ ರೂಪವಾದ ಮೂಲ ಪ್ರಕೃತಿಯು ಸಮಸ್ತ ಭೂತಗಳ ಯೋನಿಯಾಗಿದೆ.  ನಾನಾ ಪ್ರಕಾರದ ಎಲ್ಲ ಯೋನಿಗಳಲ್ಲಿಯೂ ಹುಟ್ಟುವ ಶರೀರಧಾರೀ ಪ್ರಾಣಿಗಳಿಗೆಲ್ಲರಿಗೂ ಗರ್ಭ ಧರಿಸುವ ತಾಯಿಯಾಗಿ ಪ್ರಕೃತಿಯಿದ್ದರೆ ಬೀಜವನ್ನು ಸ್ಥಾಪಿಸುವ ತಂದೆಯಾಗಿ ನಾನಿದ್ದೇನೆ ಎನ್ನುತ್ತಾ ತಾನೇ ತಂದೆಯೂ ಹೌದು ತಾಯಿಯೂ ಹೌದು ಎಂದು ತಿಳಿಸಿದಿದ್ದಾನೆ.

ಮುಂಡಕೋಪನಿಷತ್ತಿನಲ್ಲಿ "ಪುಮಾನ್ ರೇತಃಸಿಂಚತಿ ಯೋಷಿತಾಯಾಂ ಬಹ್ವೀಃ ಪ್ರಜಾಃ ಪುರುಷಾತ್ಸಂಪ್ರಸೂತಾಃ" - ಇಲ್ಲಿ ಪುಮಾನ್ ಎಂದರೆ ಗಂಡಿನಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಮತ್ತು ಯೋಷಿತಾ ಎಂದರೆ ಹೆಣ್ಣಿನಲ್ಲಿ ವಿಶೇಷವಾಗಿ ಸನ್ನಿಹಿತಳಾಗಿರುವ ಲಕ್ಷ್ಮಿದೇವಿಯು.  ಜಡಪ್ರಕೃತಿಯ ಅಭಿಮಾನಿಯಾದ ಲಕ್ಷ್ಮೀದೇವಿಯಲ್ಲಿ ಭಗವಂತನು ಬೀಜಪ್ರದ ಮಾಡುತ್ತಾನೆ.  ತಾಯಿ ಲಕ್ಷ್ಮೀದೇವಿಯು ಆ ಬೀಜಕ್ಕೆ ಒಂದು ಆಕಾರ ಕೊಡುತ್ತಾಳೆ.  ಸ್ತ್ರೀ ಗರ್ಭಿಣಿಯಾದಾಗಲೇ ಅವಳಲ್ಲಿ ಲಕ್ಷ್ಮೀದೇವಿಯು ಪೂರ್ಣ ಪ್ರಮಾಣದಲ್ಲಿ ನೆಲೆಸುವುದು.  ತಾಯಿಯ ಗರ್ಭದಲ್ಲಿ ಬೆಳೆಯುವ ಶಿಶು ನೆಲೆಸಿರುವ ಗರ್ಭವನ್ನು ಗರ್ಭಗುಡಿಯೆಂದೇ ಕರೆದಿದ್ದಾರೆ ಮತ್ತು ಆ ಶಿಶುವನ್ನು ಬೆಳೆಸುವವನು ಭಗವಂತನೆಂದು ಆರಾಧಿಸುತ್ತಾರೆ.  ಇದು ಅತ್ಯಂತ ಭವ್ಯವಾದ, ದಿವ್ಯವಾದ ಸುಂದರವಾದ ಅನುಸಂಧಾನವಾಗಿದೆ.  (ಆಧಾರ - ಶ್ರೀ ಬನ್ನಂಜೆಯವರ ’ಭಗವದ್ಗೀತಾ’ ವಿವರಣೆ).  ಹೀಗೆ ಭಗವಂತನು ಜಡಪ್ರಕೃತಿಗೆ ಅಭಿಮಾನಿಯಾದ ಲಕ್ಷ್ಮೀದೇವಿಯಲ್ಲಿ ನೆಲೆಸಿ ತಾಯಿಯೆನಿಸಿಕೊಳ್ಳುತ್ತಾನೆ ಮತ್ತು ಗರ್ಭದಾನ ಮಾಡಿ ಉತ್ಪತ್ತಿಗೆ ಕಾರಣನಾಗಿ ತಂದೆಯೂ ಆಗುತ್ತಾನೆ. 

ಒಳಹೊರಗಿಂದಿರೇಶನು ತನ್ನವರನೆಂದೆಂದು ಸಲಹುವನು - ಭಗವಂತನು ಜೀವಿಯ ಒಳಗೂ, ಹೊರಗೂ, ಸರ್ವಾಂತರ್ಯಾಮಿಯಾಗಿದ್ದು ಅತಿ ಜತನದಿಂದ ರಕ್ಷಿಸುತ್ತಾನೆ.  ಒಳ ಹೊರಗೆಂಬ ಪದಗಳನ್ನು ಆಳವಾಗಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದಾಗ ವಿಶೇಷವಾದ ಆಧ್ಯಾತ್ಮಿಕ ಅರ್ಥಗಳು ಗೋಚರಿಸುತ್ತವೆ.  ಮೇಲೆ ತಿಳಿಸಿದಂತೆ ಹಿಂದೆ ಎಂದರೆ ನಮ್ಮ ಹಿಂದಿನ ಜನ್ಮಗಳಲ್ಲೂ ಮುಂದೆ ಎಂದರೆ ನಮ್ಮ ಮುಂದಿನ ಜನ್ಮಗಳಲ್ಲೂ ಭಗವಂತನೇ ಸದಾ ರಕ್ಷಕನು ಎಂಬರ್ಥ.  ಹಾಗೇ ಈಗಿರುವ ಜನ್ಮದ ವಿಚಾರಕ್ಕೆ ಬಂದಾಗ ಅವನು ಒಳಗೂ ಹೊರಗೂ ಇದ್ದು ರಕ್ಷಿಸುತ್ತಿದ್ದಾನೆ ಎಂದು ತಿಳಿಯಬೇಕು.  ಒಳಗೆ ಎಂದರೆ ಲಯಕಾಲದಲ್ಲಿ ಸರ್ವವನ್ನೂ ಭಕ್ಷಿಸಿ ಜಗದ್ಭುಕ್ ಎನಿಸಿಕೊಂಡ ಪರಮಾತ್ಮ ಸೂಕ್ಷ್ಮ ರೂಪದಲ್ಲಿದ್ದ ಜೀವರಾಶಿಯನ್ನೂ ಉದರದಲ್ಲಿಟ್ಟುಕೊಂಡು ಕಾಪಾಡುತ್ತಾನೆ ಎಂದಾಗುತ್ತದೆ.  ಅಂತೆಯೇ ಸೃಷ್ಟಿ ಕಾಲದಲ್ಲಿ ಹೊರಗೆ ಬಂದಾಗಲೂ ಸರ್ವವ್ಯಾಪ್ತನಾಗಿ, ಸರ್ವಾಂತರ್ಯಾಮಿಯಾಗಿದ್ದು ನಮ್ಮನ್ನು ರಕ್ಷಿಸುತ್ತಾನೆ.  ಇಂದಿರೇಶನು ಸಮಸ್ತ ಜೀವರಾಶಿಯನ್ನೂ ತನ್ನವರೆಂದೇ, ತನ್ನ ಮಕ್ಕಳೆಂದೇ ಸಲಹುವನು.

ಶ್ರೀ ಜಗನ್ನಾಥ ದಾಸರು ತಮ್ಮ ತತ್ವಸುವ್ವಾಲಿಯಲ್ಲಿ
ಜಗದುದರ ನೀನಾಗಿ ಜಗದೊಳಗೆ ನೀನಿಪ್ಪೆ
ಜಗದಿ ಜೀವರನು ಸೃಜಿಸು-ವಿ | ಸೃಜಿಸಿ ಜೀವರೊಳಿದ್ದು
ಜಗದನ್ನನೆಂದು ಕರೆಸು-ವಿ || - ಜಗತ್ತನ್ನೇ ನಿನ್ನ ಹೊಟ್ಟೆಯಲ್ಲಿಟ್ಟುಕೊಂಡಿದ್ದರೂ, ಅದರೊಳಗೂ ನೀನಿದ್ದು, ನೀನೇ ನೀನಾಗಿಯೂ ಇದ್ದು, ನೀನು ಸೃಷ್ಟಿ ಮಾಡಿದ ಜಗತ್ತಿನಲ್ಲೂ ಅನೇಕ ರೂಪಗಳಿಂದ ಇದ್ದು, ಸರ್ವಪ್ರಕಾರದಿಂದಲೂ ನಿಯಮನ ಮಾಡುತ್ತಿರುವೆ.  ಜೀವರನ್ನು ಹುಟ್ಟಿಸುವವನೂ ನೀನೇ ಅವರೊಳಗಿದ್ದೂ ಕಾರ್ಯಗಳನ್ನು ಮಾಡಿ, ಮಾಡಿಸುವವನೂ ನೀನೇ ಎಂದಿದ್ದಾರೆ.

ಆಗಸದವೋಲೆತ್ತ ನೋಡಿದರು - ಶ್ರೀಹರಿಯು ಸರ್ವವ್ಯಾಪ್ತನೂ, ಸರ್ವಾಂತರ್ಯಾಮಿಯೂ ಆಗಿರುವುದರಿಂದ ನಾವು ಎತ್ತೆತ್ತ ನೋಡಿದರೂ ಕಾಣುವ ಆಗಸದಂತೆ ನಮ್ಮನ್ನು ಸಂರಕ್ಷಿಸುತ್ತಿದ್ದಾನೆ ಎಂಬ ಸುಂದರವಾದ ಉಪಮೆಯನ್ನು ಕೊಟ್ಟಿದ್ದಾರೆ ಜಗನ್ನಾಥದಾಸರು.  ಭಾಗವತ ತೃತೀಯ ಸ್ಕಂದದಲ್ಲಿ ಬರುವ ವಿವರಣೆಯಲ್ಲಿ ಸೃಷ್ಟಿಯ ಪ್ರಾರಂಭದಲ್ಲಿ ಭಗವಂತನು ಜಡಪ್ರಕೃತಿಗೆ ಅಭಿಮಾನಿಯಾದ ಲಕ್ಷ್ಮೀದೇವಿಯಲ್ಲಿ ಗರ್ಭದಾನ ಮಾಡಿದ ಪರಿಣಾಮವಾಗಿ ’ಮಹತ್ತತ್ತ್ವ’ವೂ, ತದಭಿಮಾನಿ ಬ್ರಹ್ಮದೇವರೂ ಸೃಷ್ಟಿಯಾದರೆಂದು ತಿಳಿಸಿದೆ.  ಭಗವಂತನ ಇಚ್ಛೆಯಂತೆ ಮಹತ್ತತ್ತ್ವವು ವಿಕಾರಹೊಂದಿ ಮೂರು ಬಗೆಯ ಅಹಂಕಾರಗಳಾದ ವೈಕಾರಿಕಾಹಂಕಾರ, ತೈಜಸಾಹಂಕಾರ ಮತ್ತು ತಾಮಸಾಹಂಕಾರಗಳು ಹುಟ್ಟಿದವು.  ತಾಮಸಾಹಂಕಾರದಿಂದ ಪಂಚಭೂತಗಳು ಹುಟ್ಟಿದವು.  ಪಂಚಭೂತಗಳಲ್ಲಿ ಒಂದಾದ ’ಆಕಾಶ’ವು (ಆಗಸ) ಹುಟ್ಟಿತು.  ಪದಾರ್ಥಗಳನ್ನು ತಿಳಿಸಿಕೊಡುವುದು, ಶ್ರೀಹರಿಯನ್ನು ತಿಳಿಸಿಕೊಡುವುದು ಆಕಾಶದ ಸ್ವಾಭಾವಿಕ ಲಕ್ಷಣವಾಗಿದೆ.  ಆಕಾಶವು ಜೀವರಾಶಿಗಳಿಗೆ ಅವಕಾಶ ಕೊಡುವಂತಹುದು.  ಒಳಹೊರಗೆ ದಿಗ್ರೂಪವಾಗಿದ್ದು, ಪ್ರಾಣಾದಿ ಪಂಚ ವಾಯುಗಳೂ, ಇಂದ್ರಿಯಗಳೂ, ಜೀವರೂ ವಾಸ ಮಾಡುವುದಕ್ಕೆ ಅರ್ಹವಾಗಿರುವಂತಿರುವುದು.  ಬ್ರಹ್ಮಾಂಡದ ಸೃಷ್ಟಿಗೆ ಮುನ್ನವೇ ಬ್ರಹ್ಮಾಂಡದ ಹೊರವಲಯದಲ್ಲಿ ಬ್ರಹ್ಮಾಂಡಕ್ಕೆ  ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ, ಅಹಂಕಾರ ಮತ್ತು ಮತ್ತತ್ತ್ವದ ಆವರಣಗಳು ಸೃಷ್ಟಿಯಾದವು.  


ಪಂಚಭೂತಗಳ ಆವರಣ ಸೃಷ್ಟಿಯನ್ನು ಶ್ರೀ ವಾದಿರಾಜಗುರುಗಳು ತಮ್ಮ ಸೃಷ್ಟಿ ಪ್ರಕರಣ ಸುಳಾದಿಯಲ್ಲಿ "ತಾಮಸದಿಂದ ಪಂಚಭೂತಂಗಳ ಸೃಜಿಸಿ | ಯೋಮಾಂತರದಿ ಪಂಚದೇವರ ಕೂಡಿಸಿ" ಎಂದು ವರ್ಣಿಸಿದ್ದಾರೆ.  ಆಕಾಶವು ನಿರಾಕಾರವೂ ಅವ್ಯಕ್ತವೂ ಆಗಿದೆ ಆದರೆ ಸರ್ವವ್ಯಾಪ್ತವಾಗಿದೆ.

ಭಗವದ್ಗೀತೆಯಲ್ಲಿ "ಯಥಾ ಸರ್ವಗತಂ ಸೌಕ್ಷ್ಮ್ಯಾದಾಕಾಶಂ ನೋಪಲಿಪ್ಯತೇ" - ಪಂಚ ಮಹಾಭೂತಗಳಲ್ಲಿ ಆಕಾಶ ಭೂತವು ಅತ್ಯಂತ ಸೂಕ್ಷ್ಮವಾದುದು.  ಯಾವುದೇ ವಸ್ತುವಾದರೂ ಸೂಕ್ಷ್ಮವಾದಷ್ಟೂ ಅದರ ವ್ಯಾಪ್ತಿ ವಿಸ್ತರಿಸುತ್ತದೆ ಮತ್ತು ಅದು ಬೇರೆ ಯಾವುದೇ ವಸ್ತುವಿನಿಂದಲೂ ಮಲಿನವಾಗದೆ ಅತ್ಯಂತ ಪವಿತ್ರವಾಗಿರುತ್ತದೆ.  ಹೀಗೆ ಸರ್ವವ್ಯಾಪ್ತವಾದ ಆಗಸದಂತೆ ಭಗವಂತನೂ ಸರ್ವ ವ್ಯಾಪ್ತನಾಗಿ ನಮ್ಮನ್ನು ಸದಾ ಸರ್ವದಾ ರಕ್ಷಿಸುತ್ತಿದ್ದಾನೆ.  ಎತ್ತೆತ್ತ ನೋಡಿದರೂ ಅಲ್ಲಿ ಭಗವಂತನ ಸನ್ನಿಧಿ ತಿಳಿಯುತ್ತದೆ.

ತತ್ವಸುವ್ವಾಲಿಯಲ್ಲಿ ಶ್ರೀ ಜಗನ್ನಾಥ ದಾಸರು ಆಗಸದವೋಲು, ಸರ್ವವ್ಯಾಪ್ತನಾದ ಭಗವಂತನನ್ನು "ನೀನಿಲ್ಲದಾಸ್ಥಾನ ಈ ನಳಿನಜಾಂಡದೊಳು ನಾನೆಲ್ಲಿ ಕಾಣೆ ನರಸಿಂಹ" ಎಂದು ವರ್ಣಿಸಿದ್ದಾರೆ.   



ಚಿತ್ರಕೃಪೆ : ಅಂತರ್ಜಾಲ