Saturday, March 28, 2015

ಕರುಣಾ ಸಂಧಿ - ೩೦ ನೇ ಪದ್ಯ (ಕೂರ್ಮಾವತಾರ)


ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು || ೩೦ ||


ಕೂರ್ಮ - ಕೂರ್ಮಾವತಾರ : ಮತ್ಸ್ಯಾವತಾರದ ನಂತರದ್ದು ಕೂರ್ಮಾವತಾರವಾಗಿದೆ.  ಹಿಂದೆ ಒಮ್ಮೆ ರೈವತ ಮನ್ವಂತರದಲ್ಲಿ ಕೂರ್ಮಾವತಾರ-ವಾಗಿರುತ್ತದೆ.  ಮುಂದೆ ವೈವಸ್ವತ ಮನ್ವಂತರದಲ್ಲಿಯೂ ಕೂರ್ಮಾವತಾರವಾಗುತ್ತದೆ.  ಚಾಕ್ಷುಶ ಮನ್ವಂತರದಲ್ಲಿ ಮಂದದ್ರುತ ಅಥವಾ ಮಂದ್ರದ್ಯುಮ್ನನೆಂಬುವನು ಇಂದ್ರನಾಗಿರುತ್ತಾನೆ.  ವೈರಾಜ ಋಷಿಯಿಂದ ಸಂಭೂತಿಯೆಂಬ ಪತ್ನಿಯಲ್ಲಿ ಭಗವಂತನು "ಅಜಿತ" ನಾಮಕನಾಗಿ ಅವತರಿಸಿ, ಸಮುದ್ರಮಥನ ಮಾಡಿ, ಕೂರ್ಮರೂಪದಿಂದ ಮಂದರ ಪರ್ವತವನ್ನು ಧರಿಸುತ್ತಾನೆ.  ಕೂರ್ಮಾವತಾರವು ಸಮುದ್ರಮಥನದ ಸಮಯದಲ್ಲಾದ ಅವತಾರವಾಗಿದೆ ಮತ್ತು ಇದಕ್ಕೆ ಹಿನ್ನೆಲೆಯಾಗಿ ಒಂದು ಕಥೆ / ಕಾರಣವನ್ನೂ ಕಾಣಬಹುದಾಗಿದೆ.  ದೇವತೆಗಳಿಗೂ, ದೈತ್ಯರಿಗೂ ನಡೆಯುತ್ತಿದ್ದ ಯುದ್ಧದಲ್ಲಿ ದೇವತೆಗಳು ಕಂಗೆಡುತ್ತಾರೆ.  ದೂರ್ವಾಸರಿಂದ ದತ್ತವಾದ ಹರಿಯು ಧರಿಸಿದ್ದ ಪುಷ್ಪಮಾಲೆಯನ್ನು ಇಂದ್ರನು ತಿರಸ್ಕರಿಸಿ  ಆನೆಯ ಕುಂಭಸ್ಠಳದಲ್ಲಿಡುತ್ತಾನೆ.  ಐರಾವತವು ಮಾಲೆಯನ್ನು ನೆಲದಲ್ಲಿ ಹೊಸಕಿ ಬಿಡುತ್ತದೆ.  ಇದರಿಂದ ಕೆರಳಿದ ದೂರ್ವಾಸರು ಲೋಕಪಾಲಕರೊಡನೆ ಐಶ್ವರ್ಯ ಭ್ರಷ್ಟನಾಗೆಂದು ಶಪಿಸುತ್ತಾರೆ.  ಮೂರು ಲೋಕಗಳಲ್ಲೂ ಐಶ್ವರ್ಯ ಭ್ರಷ್ಟವಾಗಿ, ಯಾಗಾದಿ ಕಾರ್ಯಗಳೆಲ್ಲಾ ಸ್ಥಗಿತಗೊಳ್ಳುತ್ತವೆ.  ಲಕ್ಷ್ಮೀದೇವಿಯು ಮೂರು ಲೋಕಗಳಿಂದಲೂ ಅಂತರ್ಧಾನವಾಗಿ ಬಿಡುತ್ತಾಳೆ.  ದೇವತೆಗಳು ಬ್ರಹ್ಮದೇವರನ್ನು ಪ್ರಾರ್ಥಿಸಿದಾಗ, ಬ್ರಹ್ಮದೇವರು ತಾವೆಲ್ಲರೂ ಕೂಡಿ ಭಗವಂತನಿಗೇ ವಿಜ್ಞಾಪಿಸಿಕೊಳ್ಳಬೇಕೆನ್ನುತ್ತಾರೆ.  ದೇವತೆಗಳಿಗೆ ಭಗವಂತನು ಮಂಗಳಕರವಾದ ಸ್ಥಿತಿ ಬರುವವರೆಗೆ ಬಲಿ ಮೊದಲಾದ ದೈತ್ಯರೊಡನೆ ಸಂಧಿಯನ್ನು ಮಾಡಿಕೊಂಡು ಅಮೃತ ಪಡೆಯಲು ಪ್ರಯತ್ನಿಸಬೇಕೆನ್ನುತ್ತಾನೆ.  ಮಂದರ ಪರ್ವತವನ್ನು ಕಡಗೋಲನ್ನಾಗಿಯೂ, ವಾಸುಕಿಯನ್ನು ಹಗ್ಗವನ್ನಾಗಿಯೂ ಮಾಡಿಕೊಂಡು ತನ್ನ ಸಹಾಯದಿಂದ ಕ್ಷೀರ ಸಮುದ್ರವನ್ನು ಮಥನವನ್ನು ಮಾಡಬೇಕೆಂದು ತಿಳಿಸುತ್ತಾನೆ.  ಸಮುದ್ರಮಥನ ನಡೆದು, ಅಮೃತವು ದೇವತೆಗಳ ಕೈಸೇರುವವರೆಗೂ ದೈತ್ಯರನ್ನು ಅನುಮೋದಿಸಿಕೊಂಡಿರಬೇಕೆಂದು ಕೂಡ ತಿಳಿಸುತ್ತಾನೆ.  ದೇವತೆಗಳು ಬಲಿಗೆ ವಿಷಯ ತಿಳಿಸಿದಾಗ, ವಿಧೇಯರಾಗಿ ಬಂದ ದೇವತೆಗಳನ್ನು ದೈತ್ಯರಿಂದ ರಕ್ಷಿಸಿ, ಸಮುದ್ರಮಥನಕ್ಕೆ ಸಮ್ಮತಿಸುತ್ತಾನೆ.  ಎಲ್ಲರೂ ಸೇರಿ ಮಂದರಪರ್ವತವನ್ನು ಕಿತ್ತು, ಸ್ವಲ್ಪ ದೂರ ಸಾಗಿಸುವುದರೊಳಗೆ ಭಾರವನ್ನು ತಾಳಲಾರದೆ ಕೆಳಗೆತ್ತಿಹಾಕಿದಾಗ, ದೇವತೆಗಳು ಪರ್ವತದ ಕೆಳಗೆ ಸಿಕ್ಕಿಕೊಂಡು ಪುಡಿಯಾಗುತ್ತಾರೆ.  ಶ್ರೀಹರಿಯು ಪರಮಕರುಣೆಯಿಂದ ಗರುಡಾರೂಢನಾಗಿ ಬಂದು ಗಿರಿಯನ್ನು ಎತ್ತಿಕೊಂಡು ಸುರಾಸುರರೊಡನೆ ಕ್ಷೀರಸಮುದ್ರದ ಮಧ್ಯದಲ್ಲಿ ಇಳಿಸುತ್ತಾನೆ.  ವಾಸುಕಿಗೆ  ಅಮೃತದಲ್ಲಿ ಪಾಲು ಕೊಡುವುದಾಗಿ ಒಪ್ಪಿಸಿ, ಹಗ್ಗವಾಗಿಸಿ, ಮಂದರ ಪರ್ವತಕ್ಕೆ ಸುತ್ತಿ ಕ್ಷೀರಸಮುದ್ರವನ್ನು ಕಡೆಯಲು ಪ್ರಾರಂಭಿಸುತ್ತಾರೆ.  ಸ್ವಲ್ಪ ಹೊತ್ತಿನಲ್ಲೇ ಗಿರಿಯು ನೀರಿನಲ್ಲಿ ಮುಳುಗಿ ಬಿಡುತ್ತದೆ.  ಪರಮಾತ್ಮನು ನೀರಿನಲ್ಲಿ ಮುಳುಗಿ, ಕೂರ್ಮಾವತಾರವನ್ನು ಧರಿಸಿ, ಗಿರಿಯನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು  ಮೇಲೆ ಬರುತ್ತಾನೆ.  ಮಥನ ಕಾರ್ಯವು ನಡೆಯುತ್ತದೆ.  ಗಿರಿಯು ಮೇಲೆ, ಕೆಳಗೆ ಹೋಗುತ್ತಾ ಅಲ್ಲಾಡಿದಾಗ, ಭಗವಂತನು ಅಜಿತರೂಪಕನಾಗಿ ಸಹಸ್ರಾರು ಬಾಹುಗಳಿಂದ ಪರ್ವತವನ್ನು ಆಕ್ರಮಿಸಿಕೊಂಡು, ಮಥನ ಕಾರ್ಯವನ್ನು ನಡೆಸಿಕೊಡುತ್ತಾನೆ.  ಸಮುದ್ರಮಥನ ನಡೆಯುವ ಸಮಯದಲ್ಲಿ ಮೂರುಲೋಕದಿಂದ ಮರೆಯಾಗಿದ್ದ ಲಕ್ಷ್ಮೀದೇವಿಯ ಆವಿರ್ಭಾವವಾಗುತ್ತದೆ. 


ಭಾಗವತ ದ್ವಿತೀಯಸ್ಕಂಧ, ೭ನೆಯ ಅಧ್ಯಾಯದಲ್ಲಿ ಕೂರ್ಮಾವತಾರದ ವರ್ಣನೆಯನ್ನು
ಕ್ಷೀರೋದಧಾವಮರದಾನವಯೂಥಪಾನಾ - | ಮುನ್ಮಥ್ನತಾಮಮೃತಲಬ್ಧಯ ಆದಿದೇವಃ |
ಪೃಷ್ಠೇನ ಕಚ್ಛಪವಪುರ್ವಿದಧಾರ ಗೋತ್ರಂ | ನಿದ್ರಾಕ್ಷಣೋSದ್ರಿಪರಿವರ್ತಕಷಾಣಕಣ್ದೂಃ || - ದೇವತೆಗಳೂ, ದಾನವರೂ ಸೇರಿಕೊಂಡು ಅಮೃತವನ್ನು ಪಡೆಯಲೋಸುಗ ಕ್ಷೀರಸಮುದ್ರವನ್ನು ಕಡೆಯುತ್ತಿದ್ದಾಗ  - ಈ ಆದಿದೇವನು ಆಮೆಯ ದೇಹವನ್ನು ತಾಳಿ ತನ್ನ ಬೆನ್ನಿನ ಮೇಲೆ ಮಂದರ ಗಿರಿಯನ್ನು ಹೊತ್ತುಕೊಂಡನು.  ಆಗ ಸುತ್ತುತ್ತಿದ್ದ ಪರ್ವತದ ಉಜ್ಜುವಿಕೆಯಿಂದಾಗಿ ಮೈನವೆಯು ಕಡಿಮೆಯಾದಂತಾಗಿ ಸ್ವಾಮಿಗೆ ಕ್ಷಣಕಾಲ ಸುಖನಿದ್ರೆಯನ್ನು ಮಾಡಲು ಸಾಧ್ಯವಾಯಿತು ಎಂದು ವರ್ಣಿಸಿದ್ದಾರೆ.

ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ಕೂರ್ಮಾವತಾರವನ್ನು  "ಕೂರ್ಮ ಸ್ವರೂಪಕ ಮಂದರಧಾರಿನ್ ಲೋಕವಿಧಾರಕ ದೇವವರೇಣ್ಯ - ಮಂದರ ಪರ್ವತವನ್ನು ಧರಿಸಿರುವ, ಲೋಕ ಸಂರಕ್ಷಕನಾದ, ದೇವ ಶ್ರೇಷ್ಠನಾದ, ಕೂರ್ಮರೂಪಿಯೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಸುರದಿತಿಜಸುಬಲವಿಲುಲಿತ ಮಂದರಧರ ವರಕೂರ್ಮ ಹೇ ಭವಮಮ ಶರಣಮ್ |
ಶುಭತಮ ಕಥಾಶಯ ಪರಮಸದೋದಿತ ಜಗದೇಕ ಕಾರಣ ರಾಮರಮಾರಮಣ || - ಸುರಾಸುರರು ಅಮೃತವನ್ನು ಪಡೆಯುವುದಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಿದಾಗ ಮುಳುಗುತ್ತಿದ್ದ ಮಂದರ ಪರ್ವತವನ್ನು ಬೆನ್ನಲ್ಲಿ ಧರಿಸಿದವನಾದ, ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನಾದ, ಪುರುಷೋತ್ತಮನಾದ, ಸದಾ ಪ್ರಕಾಶಮಾನನಾದ, ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನಾದ, ಆತ್ಮಾರಾಮನಾದ ಲಕ್ಷ್ಮೀಪತಿಯೇ ನಿನಗೆ ಶರಣು ಹೊಂದುತ್ತೇನೆ ಎಂದು ಪ್ರಾರ್ಥಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ಕೂರ್ಮಾವತಾರವನ್ನು
ಕೂರ್ಮಾಕೃತೇ ತ್ವವತು ನರ್ಮಾತ್ಮ ಪೃಷ್ಠಧೃತ ಭರ್ಮಾತ್ಮ ಮಂದರಗಿರೇ
ಧರ್ಮಾವಲಂಬನ ಸುಧರ್ಮಾಸದಾಂ ಕಲಿತ ಶರ್ಮಾ ಸುಧಾವಿತರಣಾತ್ |
ದುರ್ಮಾನರಾಹುಮುಖ ದುರ್ಮಾಯಿ ದಾನವ ಸುಮರ್ಮಾಭಿಭೇದನ ಪಟೋ
ಘರ್ಮಾರ್ಕಕಾಂತಿವರವರ್ಮಾ ಭವಾನ್ ಭುವನ ನಿರ್ಮಾಣಧೂತವಿಕೃತಿಃ || - ಸಮುದ್ರ ಮಂಥನ ಕಾಲದಲ್ಲಿ ದೇವತೆಗಳಿಂದ ಪ್ರಾರ್ಥಿತನಾಗಿ, ಕೂರ್ಮರೂಪವನ್ನು ಧರಿಸಿ ಮಂದರ ಪರ್ವತವನ್ನು ಧರಿಸಿ, ದೇವತೆಗಳಿಗೆ ಅಮೃತಪ್ರಾಶನ ಮಾಡಿಸಿದ, ರಾಹು ಮೊದಲಾದ ದೈತ್ಯರ ಸಂಹಾರ ಮಾಡಿದ, ವಿಶ್ವವನ್ನು ಸೃಷ್ಟಿಸಿ, ಅದರ ಒಳಗೂ ಹೊರಗೂ ವ್ಯಾಪಿಸಿಕೊಂಡು, ನಿರ್ವಿಕಾರನಾಗಿರುವ, ಅತ್ಯಂತ ಸುಂದರನಾದ, ಕೂರ್ಮರೂಪಿಯಾದ ಭಗವಂತನು ನಮ್ಮನ್ನು ಎಲ್ಲಾ ಆಪತ್ತುಗಳಿಂದಲೂ ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ಕೂರ್ಮಾವತಾರವನ್ನು
ಕ್ಷಿತಿರತಿವಿಪುಲತರೇ ತವ ತಿಷ್ಠತಿ ಪೃಷ್ಠೇ
ಧರಣಿಧರಣಕಿಣಚಕ್ರಗರಿಷ್ಠೇ
ಕೇಶವ ಧೃತ ಕಚ್ಛಪರೂಪ ಜಯ ಜಗದೀಶ ಹರೇ || - ನಿನ್ನ ಬೆನ್ನಿನಲ್ಲಿ ವಿಶಾಲವಾದ ಭೂಮಿಯು ನಿಂತಿದೆ.  ಗರಿಷ್ಠವಾದ ಚಕ್ರಾಕಾರದಲ್ಲಿರುವ ಧರಣಿಯನ್ನು ಧರಿಸಿರುವ, ಕಚ್ಛಪ ರೂಪ ಧರಿಸಿರುವ ಕೇಶವನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಭಗವದ್ಗೀತೆಯ ಎರಡನೆಯ ಅಧ್ಯಾಯದ ೫೮ನೆಯ ಶ್ಲೋಕದಲ್ಲಿ ಭಗವಂತನು
ಯದಾ ಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ |
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಜಾ ಪ್ರತಿಷ್ಠಿತಾ || -  ಹೇಗೆ ಆಮೆಯು ತನ್ನ ಎಲ್ಲಾ ಅಂಗಗಳನ್ನೂ, ಎಲ್ಲಾ ಕಡೆಗಳಿಂದಲೂ ಒಳಗೆ ಎಳೆದುಕೊಂಡು, ಸ್ಥಿರವಾಗಿ ಇರುತ್ತದೆಯೋ, ಹಾಗೆ ಸಾಧಕನು ಕೂಡ ವಿಷಯಾಸಕ್ತಿಗಳೆಡೆಗೆ ಆಕರ್ಷಿತವಾಗುವ ಇಂದ್ರಿಯಗಳನ್ನು, ಜಾಗೃತ, ಸ್ವಪ್ನಾವಸ್ಥೆಯೆಂಬ ಎರಡೂ ಅವಸ್ಥೆಗಳಲ್ಲಿಯೂ ನಿಯಂತ್ರಿಸಬೇಕು ಎಂದಿದ್ದಾನೆ. 

ಮತ್ಸ್ಯಾವತಾರ ಜೀವ ವಿಕಸನದ ಸಂಕೇತವಾಗಿದೆ.  ಪ್ರಳಯ ಜಲದಿಂದ ಆವೃತವಾಗಿದ್ದ ಬ್ರಹ್ಮಾಂಡದಲ್ಲಿ ಜೀವ ವಿಕಸನದ ಸಂಕೇತವಾಗಿ ಜಲಚರಗಳ ಸೃಷ್ಟಿಯಾಗಿತ್ತು.  ಅದರ ಮುಂದಿನ ಹಂತದ ಪ್ರತೀಕವಾಗಿ ಕೂರ್ಮ ಜಲದಲ್ಲಿಯೂ, ನೆಲದಲ್ಲಿಯೂ ಬದುಕಬಲ್ಲ ಜೀವವಾಗಿ ಪ್ರಕಟಗೊಂಡಿದೆ.  ಕೂರ್ಮಾವತಾರವನ್ನು ಮಾನವನ ಜೀವನಕ್ಕೆ ಹೋಲಿಸಿಕೊಂಡಾಗ ಆಧ್ಯಾತ್ಮ ಹಾದಿಯಲ್ಲಿ ನಡೆಯ ಬಯಸುವ ಪ್ರತಿಯೊಬ್ಬ ಸಾಧಕನಿಗೂ ಕೂರ್ಮವು ಅತ್ಯಂತ ಮುಖ್ಯವಾದ ಹಾಗೂ ಮೂಲವಾದ ಸಂದೇಶವನ್ನು ತೋರುತ್ತದೆ.  ಆಮೆಯು ನೀರಿನಲ್ಲಿಯೂ, ನೆಲದಲ್ಲಿಯೂ ತನ್ನನ್ನು ತಾನು ಸುಲಭವಾಗಿ ಹೊಂದಿಸಿಕೊಂಡು ಬದುಕಬಲ್ಲ ಪ್ರಾಣಿಯಾಗಿದೆ.  ಮಾನವನೂ ಕೂಡ ತನ್ನನ್ನು ತಾನು ನೀರಿನಲ್ಲಾಗಲೀ, ನೆಲದಲ್ಲಾಗಲೀ ಹೊಂದಿಸಿಕೊಂಡು ಬದುಕುವ ಛಲವನ್ನು ಹೊಂದಬೇಕೆಂಬ ಸಂದೇಶ ಕೊಡುತ್ತದೆ.  ಕೂರ್ಮದ ಬೆನ್ನು ತುಂಬಾ ಕಠಿಣವಾದ ಕವಚವಾಗಿದೆ.  ಯಾವುದೇ ರೀತಿಯ ಆಪತ್ತು ಬಂದರೂ ಆಮೆಗೆ ರಕ್ಷಣೆಯಾಗಿ ಅದರ ಹೊರ ಕವಚ ಕೆಲಸಮಾಡುತ್ತದೆ.  ಮೇಲು ಹೊದಿಕೆಯಾಗಿ ಕವಚ ಅಷ್ಟು ಗಟ್ಟಿಯಾಗಿದ್ದರೂ ಒಳಗಿರುವ ಆಮೆಯ ಅವಯವಗಳೂ, ಮೈಯೂ ಮೃದುವಾಗಿಯೇ ಇರುತ್ತದೆ.  ಸಾಧಕನಾದವನು ತನ್ನನ್ನು ತಾನು ಋಣಾತ್ಮಕ ಪ್ರಪಂಚದಿಂದ ರಕ್ಷಿಸಿಕೊಳ್ಳಲು ತನ್ನ ಹೊರಮೈಯನ್ನು ಹೀಗೆ ಗಟ್ಟಿಯಾಗಿಸಿಕೊಳ್ಳಬೇಕು.  ಒಳಗಿರುವ ಆತ್ಮ ತುಂಬಾ ಮೃದುವಾದ, ಭಾವನೆಗಳ ಗುಚ್ಛವಾಗಿರುತ್ತದೆ.  ಅದನ್ನು ಘಾಸಿ ಮಾಡಲು ನುಗ್ಗಿ ಬರುವ ಋಣಾತ್ಮಕ ಭಾವಗಳು ಗಟ್ಟಿಯಾದ ಹೊರಮೈಗೆ ಅಪ್ಪಳಿಸಿ ಹಾಗೇ ತಿರುಗಿಹೋಗುವಂತೆ ನಮ್ಮ ಮೃದುವಾದ ಆತ್ಮಕ್ಕೆ ರಕ್ಷಣಾಕವಚವನ್ನು ಹಾಕಿಕೊಳ್ಳಬೇಕೆಂಬುದನ್ನು ಕೂರ್ಮಾವತಾರ ಸೂಚಿಸುತ್ತದೆ.  ಅಪಾಯದ ಮುನ್ಸೂಚನೆ ಸಿಕ್ಕ ಕೂಡಲೆ ಕೂರ್ಮವು ತನ್ನ ಕಾಲುಗಳನ್ನೂ, ತಲೆಯನ್ನೂ ಗಟ್ಟಿಯಾದ ಕವಚದ ಒಳಗೆ ಎಳೆದುಕೊಂಡು ಬಿಡುತ್ತದೆ  ಸಾಧಕನೂ ಕೂಡ ತನ್ನನ್ನು ಬಂದು ಮುತ್ತುವ ವಿಷಯಾಸಕ್ತಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು, ತನ್ನ ಆಂತರ್ಯವನ್ನು ಒಳಮುಖವಾಗಿಸಿಕೊಳ್ಳಬೇಕೆಂಬುದನ್ನು ಸೂಚಿಸುತ್ತದೆ.   ಕೂರ್ಮವು ಬಲು ನಿಧಾನವಾಗಿ ಚಲಿಸುತ್ತದೆ ಆದರೆ ಅದು ತನ್ನ ಗುರಿಯನ್ನೇ ಗಮನವಾಗಿಟ್ಟುಕೊಂಡು ಚಲಿಸುತ್ತದೆ.  ನಿಧಾನವಾದರೂ ಕೂಡ ಅದು ತನ್ನ ಗುರಿಯನ್ನು ತಲುಪುತ್ತದೆ.  ಕೂರ್ಮಾವತಾರವು ಜಾಣ್ಮೆ ಮತ್ತು ತಾಳ್ಮೆಯ ಸಂಕೇತವಾಗಿದೆಯೆಂಬುದನ್ನು ದಾಸರಾಯರು ಕರುಣಾಸಂಧಿಯ ೨೮ನೆಯ ಪದ್ಯದಲ್ಲಿ "ಬೆಟ್ಟ ಬೆನ್ನಲಿ ಹೊರಿಸಿದವರನು ಸಿಟ್ಟು ಮಾಡಿದನೇನೋ ಹರಿ" ಎಂದು ಕೊಂಡಾಡುವುದರ ಮೂಲಕ ತಿಳಿಸಿದ್ದಾರೆ.  ಕೂರ್ಮದ ಚಲನೆ ಏಕಧ್ಯಾನದಿಂದ ಕೂಡಿರುತ್ತದೆ ಮತ್ತು ಮಾನವನು ಕೂಡ ಇದನ್ನೇ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬುದನ್ನು ಸೂಚಿಸುತ್ತದೆ. ಸ್ಥಿರವಾದ ಹೆಜ್ಜೆಗಳನ್ನು ಹಾಕುತ್ತಾ, ಎಲ್ಲಿಯೂ ನಿಲ್ಲದೆ ನಡೆಯುವ ಅಭ್ಯಾಸವನ್ನು ಮಾಡಿಕೊಂಡರೆ ನಿಶ್ಚಯವಾಗಿ ಗುರಿಯನ್ನು ಮುಟ್ಟಬಹುದೆಂಬುದನ್ನು ಭಗವಂತನು ಮಂದರ ಪರ್ವತವನ್ನು ಧಾರಣೆ ಮಾಡುವ ಮೂಲಕ ಕೂರ್ಮವು ಮೂಲವಾಗಿ ಆಧಾರವು ಎಂಬುದನ್ನು ತೋರಿಸಿಕೊಡುತ್ತಾನೆ.  ನಮ್ಮ ದೇಹದಲ್ಲಿನ ಷಟ್ಚಕ್ರಗಳಲ್ಲಿ "ಮೂಲಾಧಾರ" ಚಕ್ರವು ಅತ್ಯಂತ ಮುಖ್ಯವಾದ ಚಕ್ರವಾಗಿದೆ.  ಮೂಲಾಧಾರ ಸ್ಥಾನದಲ್ಲಿ ಕುಂಡಲಿನಿ ಸರ್ಪವು ಮೂರು ಸುತ್ತು ಸುತ್ತಿಕೊಂಡು ಮಲಗಿದೆಯೆಂಬ ನಂಬಿಕೆಯಿದೆ.  ಆಧ್ಯಾತ್ಮ ಸಾಧನೆಯಲ್ಲಿ ನಮ್ಮೊಳಗಿನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುವುದೆಂದರೆ ಮೂಲಾಧಾರ ಚಕ್ರವನ್ನು ಉದ್ದೀಪನಗೊಳಿಸುವುದೆಂದು ಅರ್ಥವಾಗುತ್ತದೆ.  ಮಂದರ ಪರ್ವತವು ಸಮುದ್ರ ಮಥನದಲ್ಲಿ ಸ್ಥಿರವಾಗಿ ನಿಲ್ಲುವಂತೆ ಮಾಡಲು ಭಗವಂತ ಕೂರ್ಮಾವತಾರವೆತ್ತಿದ ಹಾಗೆ ನಮ್ಮೊಳಗಿನ ಪ್ರಾಣ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಲು ಮೂಲಾಧಾರ ಚಕ್ರವೇ ಮೂಲಸ್ಥಾನವಾಗಿದೆ.  ಕೂರ್ಮಾವತಾರವನ್ನು ಮೂಲಾಧಾರ ಚಕ್ರಕ್ಕೆ ಹೋಲಿಸಬಹುದಾಗಿದೆ.

ಆದಿಕೂರ್ಮವೆಂಬ ಮತ್ತೊಂದು ರೂಪದಲ್ಲಿ ಭಗವಂತನು ಬ್ರಹ್ಮಾಂಡವನ್ನೇ ಧಾರಣೆ ಮಾಡಿದವನಾಗಿರುವನೆಂಬ ಉಲ್ಲೇಖವಿದೆ.  ವಿಷ್ಣು ಸಹಸ್ರನಾಮದಲ್ಲಿ "ಧಾತಾ ಧಾತುರುತ್ತಮಃ" - ಇಡೀ ಜಗತ್ತನ್ನು ಧಾರಣೆ ಮಾಡಿರುವ, ಪೋಷಣೆ ಮಾಡುವ, ಎಲ್ಲರಿಗಿಂತಲೂ ಉತ್ತಮನಾದ, ವೇದಗಳನ್ನೂ, ಕಾಲವನ್ನೂ, ಲೋಕಗಳನ್ನೂ ಧರಿಸಿರುವವನಾದ, ಸರ್ವಾಧಾರನಾದ ಭಗವಂತನು ಧಾತುರುತ್ತಮನು ಎಂದು ಸ್ತುತಿಸಲಾಗಿದೆ.  ಸೃಷ್ಟಿಯ ಆದಿಯಿಂದ ಪ್ರಳಯದಲ್ಲಿ ಅಂತ್ಯವಾಗುವವರೆಗೆ ಬ್ರಹ್ಮಾಂಡವನ್ನು ಧಾರಣೆ ಮಾಡಿರುವವನು ಆದಿಕೂರ್ಮ ರೂಪಿ ಭಗವಂತನಾಗಿದ್ದಾನೆ.  ಆಧ್ಯಾತ್ಮದ ಹಾದಿಯಲ್ಲಿ ನಡೆಯ ಬಯಸುವ ಸಾಧಕನಿಗೆ ಧ್ಯಾನಕ್ಕೆ ಕೂಡಲು ಸುಸ್ಥಿರವಾದ, ಭದ್ರವಾದ ಆಸನವು ಅವಶ್ಯವಾಗಿದೆ.  ಆತ್ಮವನ್ನು ಅಂತರ್ಮುಖವಾಗಿಸಿಕೊಳ್ಳಲು ಧ್ಯಾನಕ್ಕೆ ಕುಳಿತುಕೊಳ್ಳುವ ಆಸನವೂ ಕೂಡ ತುಂಬಾ ಮುಖ್ಯವಾಗುತ್ತದೆ.  ಅಮೃತಕ್ಕಾಗಿ ಮಂದರ ಪರ್ವತ ಧರಿಸಿದ ಭಗವಂತನು ಸಾಧಕರಿಗೂ ಮೂಲಾಧಾರವಾಗಿರುವನು.  ಪೀಠದಲ್ಲಿ ಕುಳಿತ ಭಗವಂತನನ್ನು ಪೂಜಿಸುವುದಕ್ಕೂ ಮೊದಲು ಶ್ರೀಹರಿಯು ಕುಳಿತ ಆಸನವನ್ನು ಪೂಜಿಸಬೇಕು.  ಹೀಗೆ ಮಾಡುವಾಗ ಬ್ರಹ್ಮಾಂಡ ಧಾರಿಯಾದ ಕೂರ್ಮರೂಪಿ ಭಗವಂತನನ್ನು ಧ್ಯಾನಿಸುತ್ತಾ ಅನುಸಂಧಾನ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ . 

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೧೮ನೆಯ ಪದ್ಯದಲ್ಲಿ "ಮಧುವಿರೋಧಿಯು ಲೋಚನದಿ" ಎಂದಿದ್ದಾರೆ.  ಕಣ್ಣುಗಳಲ್ಲಿ ನೆಲೆಸಿರುವ ದಿಗ್ದೇವತೆಗಳಾದ ಸೂರ್ಯ ಚಂದ್ರರಿಗೆ ಮಧುಸೂದನ ಪರಮಾತ್ಮನು ಅಭಿಮಾನಿ ದೇವತೆಯಾಗಿದ್ದಾನೆ.  ಮಧುಸೂದನನೆಂದರೆ ಮಧುವಿನಂತೆ ಮೇಲ್ನೋಟಕ್ಕೆ ರಮಣೀಯವಾಗಿ ತೋರುವ ವಿಷಯ ಸುಖ ಅಜ್ಞಾನ ಪರಿಹಾರಕ ರೂಪ, ರೋಗಭಯ, ವಿರೋಧಿಗಳನ್ನು ದೂರ ಮಾಡುವವನು ಎಂಬರ್ಥವಾಗುತ್ತದೆ.  ಮುಂದುವರೆಯುತ್ತಾ ೩೪ನೆಯ ಪದ್ಯದಲ್ಲಿ ಕೂಡ ಕಣ್ಣುಗಳಲ್ಲಿ ಕೂರ್ಮರೂಪಿ ಭಗವಂತನನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ಕೂರ್ಮಾವತಾರವೆತ್ತಿದಾಗ ಲಕ್ಷ್ಮೀದೇವಿಯು ವೇದವತಿಯಾಗಿರುತ್ತಾಳೆ ಎಂದಿದ್ದಾರೆ.

ಕೂರ್ಮಾವತಾರಿ ಭಗವಂತನ ಪೂಜೆ ಹೆಚ್ಚು ಪ್ರಚಲಿತದಲ್ಲಿಲ್ಲ ಆದರೆ ಕೂರ್ಮಶಾಲಗ್ರಾಮಕ್ಕೆ ಮಾತ್ರ ವಿಶೇಷ ಪೂಜೆಯು ಮಾಡಲ್ಪಡುತ್ತದೆ.  ಕೂರ್ಮ ಶಾಲಗ್ರಾಮಕ್ಕೆ ವಿಶೇಷ ಮಹತ್ವವಿದೆ.  ಇದು ತುಂಬಾ ಅಪರೂಪದ ಶಾಲಗ್ರಾಮವಾಗಿರುತ್ತದೆ.  ಕ್ಷೀರಾಭಿಷೇಕ ಮಾಡುವುದರಿಂದ ಅಭೀಷ್ಟಗಳು ನೆರವೇರುತ್ತದೆಂಬ ನಂಬಿಕೆ ಇದೆ.  ಕೂರ್ಮ ಶಾಲಗ್ರಾಮಕ್ಕೆ ಕ್ಷೀರಾಭಿಷೇಕ ಮಾಡಿ, ಕ್ಷೀರಪಾನ ಮಾಡುವುದರಿಂದ ದೈಹಿಕವಾದ ಅನೇಕ ರೋಗ ರುಜಿನಗಳು ವಾಸಿಯಾಗುವುದೆಂಬ ನಂಬಿಕೆ ಕೂಡ ಇದೆ.


ಕೂರ್ಮರೂಪಿಯಾದ ಶ್ರೀಹರಿಯು ಇಂದ್ರಾದಿದೇವತೆಗಳಿಗೆ ಮತ್ತು ನಾರದಾದಿ ಮಹರ್ಷಿಗಳಿಗೆ  ಮಾಡಿದ ತತ್ವೋಪದೇಶವೇ "ಕೂರ್ಮ ಮಹಾಪುರಾಣ"ವಾಯಿತೆಂಬ ಮಾತು  ಕೂರ್ಮಮಹಾಪುರಾಣದಲ್ಲಿಯೇ ಉಲ್ಲೇಖಿತವಾಗಿದೆ.
 

ಶ್ರೀ ಜಗನ್ನಾಥದಾಸರು ತಮ್ಮ "ತತ್ವಸುವ್ವಾಲಿ"ಯಲ್ಲಿ ಕೂರ್ಮಾವತಾರವನ್ನು
ಮಂದರಾದ್ರಿಯ ಧರಿಸಿ ಸಿಂಧುಮಥನವ ಮಾಡಿ
ವೃಂದಾರಕರಿಗೆ ಅಮೃತವ | ಅಮೃತವನುಣಿಸಿದ
ಇಂದಿರಾರಾಧ್ಯ ದಯವಾಗೋ || - ದೇವದಾನವರು ಮಂದರಾದ್ರಿಯನ್ನು ಬಳಸಿ ಸಮುದ್ರ ಮಥನವನ್ನು ಮಾಡುವಾಗ ಮಂದರ ಪರ್ವತವನ್ನು ಕೂರ್ಮರೂಪದಿಂದ ಧರಿಸಿ, ಸಿಂಧುವಿನ ಮಥನವನ್ನು ಮಾಡಿ, ವೃಂದಾರಕರಿಗೆ (ದೇವತೆಗಳಿಗೆ)  ಉಣಿಸಿದ ಇಂದಿರಾರಾಧ್ಯನಾದ ನಾರಾಯಣನೇ ದಯವಾಗೋ ಎಂದು ಸ್ತುತಿಸಿದ್ದಾರೆ.  ಕೂರ್ಮಾವತಾರದ ವರ್ಣನೆಯಲ್ಲಿ ದಾಸರಾಯರು ಭಗವಂತನ ಮೂರು ಅವತಾರಗಳಾದ ಮಂದರ ಪರ್ವತವನ್ನು ಧರಿಸಿದ ಕೂರ್ಮರೂಪ, ದೇವತೆಗಳೊಂದಿಗೆ ಸಮುದ್ರಮಥನ ಮಾಡಿದ ಅಜಿತ ರೂಪ ಮತ್ತು ಅಮೃತವನ್ನು ದೇವತೆಗಳಿಗೆ ಉಣಬಡಿಸಿದ ಮೋಹಿನಿ ರೂಪಗಳನ್ನು ಸ್ಮರಿಸಿದ್ದಾರೆ.  



ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿರುವ ಕೂರ್ಮಾವತಾರದ ಏಕೈಕ ದೇವಸ್ಥಾನದ ಕೊಂಡಿ https://www.google.co.in/search?tbm=isch&q=Kurmavathara+of+Lord+Vishnu&ei=59EWVd7zDY6EuwTNkIHIDg

 http://en.wikipedia.org/wiki/Sri_Kurmam

ಚಿತ್ರಕೃಪೆ : ಅಂತರ್ಜಾಲ

Sunday, March 8, 2015

ಕರುಣಾ ಸಂಧಿ - ೩೦ ನೇ ಪದ್ಯ (ಮತ್ಸ್ಯಾವತಾರ )

ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ  ಸಂಹರಿಸಿ  ಧರ್ಮದಿ  ಕಾಯ್ದ  ಸುಜನರನು  || ೩೦ ||

ವೈವಸ್ವತ ಮನ್ವಂತರದ ಕಾಲದಲ್ಲಿ ಭಗವಂತ ಎತ್ತಿದ ಅವತಾರಗಳಲ್ಲಿ ದಶ ಅವತಾರಗಳ ವರ್ಣನೆಯನ್ನು ಈ ಪದ್ಯದಲ್ಲಿ ದಾಸರಾಯರು ಮಾಡಿಕೊಟ್ಟಿದ್ದಾರೆ.  ವೈವಸ್ವತ ಮನ್ವಂತರದ ಕಾಲದಲ್ಲಿ ಭಗವಂತನದು ಒಟ್ಟು ೧೩ ಅವತಾರಗಳಾಗಿದ್ದವೆಂದು ಶಾಸ್ತ್ರಗಳಲ್ಲಿ ತಿಳಿಸಲ್ಪಟ್ಟಿವೆ.  ಅದರಲ್ಲಿ ೧೦ ಅವತಾರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿರುತ್ತಾರೆ.  ಏಕೆಂದರೆ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಅವತಾರಗಳಾದಾಗ, ಮುಖ್ಯ ಅವತಾರಕ್ಕೆ ಪೋಷಕ ಅವತಾರವಾಗಿ ಬರುವ ಅವತಾರಗಳನ್ನು ಬಿಟ್ಟಿರುತ್ತಾರೆ.  ಈ ಮನ್ವಂತರದಲ್ಲಿಯೂ ಆದ ೧೩ ಅವತಾರಗಳಲ್ಲಿ ಧನ್ವಂತರಿ, ವೇದವ್ಯಾಸರು ಮತ್ತು ಮೋಹಿನಿ ಎಂಬ ಮೂರು ಅವತಾರಗಳನ್ನು ಬಿಟ್ಟಿರುವುದರಿಂದಲೇ ದಶಾವತಾರವೆಂಬ ಲೆಕ್ಕವಾಗಿದೆ.

ಮೀನ  : ಮತ್ಸ್ಯಾವತಾರ -  ಭಾಗವತದ ಪ್ರಥಮ ಸ್ಕಂಧದಲ್ಲಿ ವಿವರಿಸಿರುವಂತೆ,  ಸೃಷ್ಟಿಗೆ ಕಾರಣವಾದ ಜಲದಲ್ಲಿ ಯೋಗನಿದ್ರೆಯಲ್ಲಿ ಪವಡಿಸಿದ್ದ ಭಗವಂತನ ನಾಭಿ ಸರೋವರದಲ್ಲಿ ಹುಟ್ಟಿದ ಕಮಲದಿಂದ ಬ್ರಹ್ಮದೇವರ ಜನ್ಮವಾಯಿತು.  ಭಗವಂತನ ಅಂಗ-ಉಪಾಂಗಗಳ ವಿನ್ಯಾಸದಿಂದ ಸಮಸ್ತ ಲೋಕಗಳ ಕಲ್ಪನೆಯಾಯಿತು.  ಪರಮ ಪವಿತ್ರವಾದ ಭಗವಂತನ ಈ ವಿರಾಟ್ಪುರುಷ ರೂಪದ ಸಾವಿರಾರು ತಲೆಗಳು, ತೋಳುಗಳು, ತೊಡೆಗಳು, ಮುಖಗಳಿಂದಲೇ ಭಗವಂತನ ಅಸಂಖ್ಯ ಅವತಾರಗಳು ಪ್ರಕಟಗೊಳ್ಳುವುವು.  ವಿರಾಟ್ಪುರುಷ ರೂಪದಿಂದ ಅನೇಕ ಅವತಾರಗಳು ಆವಿರ್ಭವಿಸಿದವು.  ಸೃಷ್ಟಿಯ ಕಾರಣಕ್ಕಾಗಿ ಪ್ರಕಟಗೊಂಡ ರೂಪಗಳಲ್ಲಿ ಮತ್ಸ್ಯಾವತಾರವು ಹತ್ತನೆಯ ಅವತಾರವಾಗುತ್ತದೆ.  ಭಾಗವತ ದ್ವಿತೀಯಸ್ಕಂಧ ೭ನೆಯ ಅಧ್ಯಾಯದಲ್ಲಿ ವಿವರಿಸಿರುವಂತೆ ಭಗವಂತನ ನಾಭಿ ಸರೋವರದ ಕಮಲದಿಂದ ಹುಟ್ಟಿದ ಬ್ರಹ್ಮದೇವರು ತಮಗೆ ಯಜ್ಞ ಮಾಡಲು ಯಾವ ಸಾಮಗ್ರಿಯೂ ಇರಲಿಲ್ಲವಾಗಿ ವಿರಾಟ್ಪುರುಷನ ಅವಯವಗಳಲ್ಲಿಯೇ ಯಜ್ಞದ ಪಶು, ಯೂಪಸ್ಥಂಭ, ಕುಶ, ಯಜ್ಞಭೂಮಿ ಮತ್ತು ಯಜ್ಞಕ್ಕೆ ಪ್ರಶಸ್ತವಾದ ಕಾಲಗಳನ್ನು ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡು ಭಗವಂತನನ್ನು ಯಜ್ಞದ ಮೂಲಕ ಪೂಜಿಸುತ್ತಾರೆ.  ಬ್ರಹ್ಮದೇವರ ಸತ್ರಯಾಗದಲ್ಲಿ ಅವತರಿಸುವ ಹಯಗ್ರೀವ ರೂಪಿ ಭಗವಂತನು ಮೂಗಿನಿಂದ ಶ್ವಾಸ ಬಿಡುವಾಗ ಅಪೌರುಷೇಯವಾದ ಮತ್ತು ನಿರ್ದೋಷವಾದ ವೇದಗಳು ಪ್ರಾದುರ್ಭವಿಸುತ್ತವೆ.  ಹೀಗೆ ಪ್ರಾದುರ್ಭವಿಸಿದ ವೇದಗಳನ್ನು ಹಯಗ್ರೀವನೆಂಬ ಅಸುರನು ಅಪಹರಿಸಿದಾಗ, ಭಗವಂತನ ಮೊಟ್ಟ ಮೊದಲ ಮತ್ಸ್ಯಾವತಾರವು ಶ್ವೇತವರಾಹ ಕಲ್ಪದಲ್ಲಿ ಆಗುತ್ತದೆ.  ಮತ್ಸ್ಯಾವತಾರಿಯಾಗಿ ಅವತರಿಸಿ ಹಯಗ್ರೀವಾಸುರನನ್ನು ಸಂಹರಿಸಿ ವೇದಗಳನ್ನು ಬ್ರಹ್ಮದೇವರಿಗೆ ತಂದು ಕೊಡುತ್ತಾನೆ.  ನಂತರ ಚಾಕ್ಷುಷ ಮನ್ವಂತರದ ಪ್ರಳಯ ಕಾಲದಲ್ಲಿ ಎರಡನೆಯ ಬಾರಿಗೆ ಮತ್ಸ್ಯಾವತಾರವಾಗುತ್ತದೆ.  ಭಾಗವತ ದ್ವಿತೀಯ ಸ್ಕಂಧದ ೭ನೆಯ ಅಧ್ಯಾಯದಲ್ಲಿ ಯುಗಾಂತರ ಸಮಯದಲ್ಲಾದ ಮತ್ಸ್ಯಾವತಾರದ ವರ್ಣನೆ ಹೀಗಿದೆ

ಮಸ್ತ್ಯೋ ಯುಗಾಂತಸಮಯೇ ಮನುನೋಪಲಬ್ಧಃ | ಕ್ಷೋಣೀಮಯೋ ನಿಖಿಲಜೀವನಿಕಾಯಕೇತಃ ||
ವಿಸ್ತಂಸಿತಾನುರುಭಯೇ ಸಲಿಲೇ ಮುಖಾನ್ಮ | ಆದಾಯ ತತ್ರ ವಿಜಹಾರ ಹ ವೇದಮಾರ್ಗಾನ್ || 

ಮತ್ಸ್ಯ ಮಹಾಪುರಾಣದಲ್ಲಿ ಶ್ರೀಹರಿಯ ಮತ್ಸ್ಯಾವತಾರದ ವರ್ಣನೆ ವಿಸ್ತಾರವಾಗಿದೆ :
ವಿಷ್ಣೋರ್ಮತ್ಸ್ಯಾವತಾರೇ ಸಕಲ ವಸುಮತೀಮಂಡಲಂ ವ್ಯಶ್ನುವಾನ |
ಸ್ತಸ್ಯಾಸ್ಯೋದೀರಿತಾನಾಂ ಧ್ವನಿರಪಹರತಾದಶ್ರಿಯಂ ವಃ ಶ್ರುತೀನಾಮ್ || - ಅದ್ಭುತವಾದ ಮತ್ಸ್ಯಾವತಾರದ ಆದಿಯಲ್ಲಿ ಮೀನು ಪಾತಾಲ ಮೂಲದಿಂದ ಸಿಡಿದು ಮೇಲೆದ್ದಾಗ ಅದರ ಬಾಲದ ಹೊಡೆತದ ರಭಸದಿಂದ ಸಾಗರದ ನೀರೆಲ್ಲಾ ಚಿಮ್ಮಿ ಪುಟಿದು ಬ್ರಹ್ಮಾಂಡದ ಕೊಪ್ಪರಕ್ಕೇ ಅಪ್ಪಳಿಸಿ ಮತ್ತೆ ಮರಳಿ ಕೆಳಗೆ ಉರುಳಿತು.  ಇಂತಹ ದಿವ್ಯವಾದ ಮೀನಮೂರುತಿಯ ಮುಖದಿಂದ ವೇದಘೋಷವು ಹೊರಹೊಮ್ಮಿತು.  ಮತ್ಸ್ಯಪುರಾಣವು ಸಾಕ್ಷಾತ್ ನಾರಾಯಣನಿಂದಲೇ ಹೇಳಲ್ಪಟ್ಟಿದೆಯೆಂಬ ಮಾತಿದೆ.  ಮತ್ಸ್ಯಾವತಾರದ ಹಿನ್ನೆಲೆಯಲ್ಲಿ ಒಂದು ಕಥೆಯಿದೆ.  ಮಹಾ ಭಕ್ತನಾದ ರಾಜಾ ಸತ್ಯವ್ರತನು ರಾಜ್ಯಭಾರದಿಂದ ವಿಮುಕ್ತನಾಗಿ ಮಲಯಗಿರಿಯಲ್ಲಿ ಉಗ್ರತಪಸ್ಸಿಗೆ ತೊಡಗುತ್ತಾನೆ.  ತಪಸ್ಸಿಗೆ ಮೆಚ್ಚಿ ಬಂದ ಬ್ರಹ್ಮದೇವನನ್ನು ಸತ್ಯವ್ರತನು ವಿಚಿತ್ರವಾದ ಬೇಡಿಕೆಯೊಂದನ್ನು ಕೇಳುತ್ತಾನೆ.  ಪ್ರಳಯ ಕಾಲದಲ್ಲಿ ವಿಶ್ವವನ್ನು ರಕ್ಷಿಸುವ ಭಗವಂತನ ವಿಶಿಷ್ಟ ಲೀಲೆಯನ್ನು ಕಾಣುವ ಶಕ್ತಿಯನ್ನು ಕರುಣಿಸಬೇಕೆಂದು ಬೇಡಲು ಬ್ರಹ್ಮದೇವನು ಒಪ್ಪಿ ವರವೀಯುತ್ತಾನೆ.  ಒಂದು ದಿನ ಸತ್ಯವ್ರತ ರಾಜನು ತನ್ನ ಆಶ್ರಮದಲ್ಲಿ ಪಿತೃದೇವತೆಗಳಿಗೆ ತರ್ಪಣ ಕೊಡುತ್ತಿದ್ದಾಗ ನೀರಿನಲ್ಲಿ ಒಂದು ಪುಟ್ಟ ಮೀನು ರಾಜನ ಬೊಗಸೆಗೆ ಬರಲು  ರಾಜನು ಅದನ್ನು ಕೂಡಲೆ ತನ್ನ ಕಮಂಡಲದಲ್ಲಿ ಇಟ್ಟು ರಕ್ಷಿಸುತ್ತಾನೆ.  ಒಂದು ಹಗಲಿನಲ್ಲಿ ಮೀನು ಕಮಂಡಲುವಿಗಿಂತ ದೊಡ್ಡದಾಗಿ ಬೆಳೆದು ರಕ್ಷಿಸೆಂದು ರಾಜನನ್ನು ಕೇಳುತ್ತದೆ.  ರಾಜನು ಆ ಮೀನಿನ ಮರಿಯನ್ನು ನೀರು ತುಂಬುವ ಹಂಡೆಯಲ್ಲಿ ಇಡಲು, ಹಂಡೆಯಲ್ಲಿ ನಂತರ ಕೊಳಗದಲ್ಲಿ, ಬಾವಿಯಲ್ಲಿ, ಕೆರೆಯಲ್ಲಿ, ದೊಡ್ಡ ಸರೋವರ, ಗಂಗಾನದಿ ಎಲ್ಲವನ್ನೂ ಮೀರಿ ಅತಿಶಯವಾಗಿ ಬೆಳೆದ ಮೀನನ್ನು ಸತ್ಯವ್ರತ ರಾಜನು ಸಾಗರಕ್ಕೇ ತಂದು ಬಿಡುತ್ತಾನೆ.  ಅಚ್ಚರಿಯಿಂದ  ಈ ಪರಿ ಬೆಳೆಯುವ ಸಾಮರ್ಥ್ಯ ಭಗವಂತನಿಗಲ್ಲದೇ ಬೇರೆ ಯಾರಿಗೂ ಇರಲಾಗದೆಂದು ಪ್ರಾರ್ಥಿಸಲು  ಭಗವಂತನು ಕೆಲವು ದಿನಗಳಲ್ಲಿ ಘಟಿಸುವ ಕಲ್ಪ ಪ್ರಳಯದಲ್ಲಿ ಸಮಸ್ತವೂ ಜಲಾವೃತವಾದಾಗ, ತಾನು ಒಂದು ನಾವೆಯನ್ನು ಕಳುಹಿಸುವೆನೆಂದು ತಿಳಿಸುತ್ತಾನೆ.  ಆ ನಾವೆಯಲ್ಲಿ ಜೀವರಾಶಿಯ ಬೀಜಗಳನ್ನೂ, ಔಷಧಿ ವನಸ್ಪತಿಗಳನ್ನೂ ಇಟ್ಟು, ಸತ್ಯವ್ರತ ರಾಜನೂ ಆ ನೌಕೆಯಲ್ಲಿ ಹತ್ತಿದಾಗ, ತಾನು ಸತ್ಯವ್ರತನಿಗೆ ಪ್ರಳಯ ಜಲದಲ್ಲಿ ತೇಲಾಡಿಸಿ, ತಿರುಗಾಡಿಸುವೆನೆಂದು ಅಭಯವೀಯುತ್ತಾನೆ.  ಸತ್ಯವ್ರತನು ಪ್ರಳಯ ಕಾಲದಲ್ಲಿ ತೇಲಿ ಬಂದ ನೌಕೆಯಲ್ಲಿ ಭಗವಂತನ ಆದೇಶದಂತೆಯೇ  ಮಾಡಿ,  ಹಗ್ಗವಾಗಿ ಹರಿದು ಬಂದ ಆದಿಶೇಷನನ್ನು ನೌಕೆಗೆ ಕಟ್ಟಿ ಇನ್ನೊಂದು ತುದಿಯನ್ನು ಭಗವಂತನಾದ ಮತ್ಸ್ಯದ ಕೊಂಬಿಗೆ ಕಟ್ಟುತ್ತಾನೆ.  ಪ್ರಳಯ ಜಲದಿಂದ ಭಗವಂತನು ಸತ್ಯವ್ರತ ರಾಜನನ್ನೂ, ನೌಕೆಯನ್ನೂ ರಕ್ಷಿಸಿ, ಪ್ರಳಯ ಜಲದಲ್ಲಿ ತೇಲಾಡಿಸುತ್ತಾ ತತ್ತ್ವೋಪದೇಶವನ್ನೂ ನೀಡುತ್ತಾನೆ.  ಭಗವಂತನ ಈ ಜ್ಞಾನೋಪದೇಶವೇ ಮತ್ಸ್ಯಪುರಾಣವಾಗಿದೆ.  ಭಗವಂತ ಸತ್ಯವ್ರತ ರಾಜನಿಗೆ ಮಾತ್ರವೇ ಉಪದೇಶ ಮಾಡಲಿಲ್ಲ.  ವೈವಸ್ವತ ಮನ್ವಂತರದಲ್ಲಿ ಮನುವಾಗುವ ಸತ್ಯವ್ರತ ರಾಜನ ಮೂಲಕ ಮುಂದಿನ ಪೀಳಿಗೆಗೆ ಕೊಟ್ಟ ಉಪದೇಶವಾಗಿದೆ.

ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋದ್ಯಾಯದಲ್ಲಿ ಭಗವಂತನ ದಶಾವತಾರವನ್ನು ವರ್ಣಿಸಿದ್ದಾರೆ.  ಮತ್ಸ್ಯಾವತಾರವನ್ನು ಕುರಿತು "ಮತ್ಸ್ಯಕರೂಪ ಲಯೋದವಿಹಾರಿನ್ ವೇದವಿನೇತ್ರ ಚತುರ್ಮುಖ ವಂದ್ಯ - ಪ್ರಳಯ ಜಲದಲ್ಲಿ ವಿಹರಿಸುತ್ತಿರುವ, ಬ್ರಹ್ಮದೇವರಿಂದ ಸ್ತುತ್ಯನಾದ, ವೇದ ಪ್ರವರ್ತಕನಾದ, ಮತ್ಸ್ಯರೂಪಿಯೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಪ್ರಚಲಿತ ಲಯಜಲವಿಹರಣ ಶಾಶ್ವತ ಸುಖಮಯಮೀನ ಹೇಭವಮಮ ಶರಣಮ್
ಶುಭತಮ ಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮರಮಾರಮಣ || - ಪ್ರಲಯ ಜಲದಲ್ಲಿ ಕ್ರೀಡಿಸುತ್ತಿರುವ ನಿತ್ಯ ಸತ್ಯನಾದ, ಸುಖ ಸ್ವರೂಪಿಯಾದ, ಮತ್ಸ್ಯಾವತಾರಿಯಾದ, ಬ್ರಹ್ಮತತ್ವ ಸ್ವರೂಪನಾದ, ಜ್ಞಾನಪ್ರದ ರಮಣೀಯ ಕಥೆಗಳಿಗೆ ಆಶ್ರಯನಾದವನೂ ಸದಾ ಪ್ರಕಾಶಕನೂ, ಜಗತ್ತಿನ ಅಸ್ತಿತ್ವಕ್ಕೆ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀ ಪತಿಯೇ ನಿನಗೆ ಶರಣು ಹೊಂದುತ್ತೇನೆ ಎಂದೂ ಸ್ತುತಿಸಿದ್ದಾರೆ.


ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋದ್ಯಾಯದಲ್ಲಿ ಭಗವಂತನ ದಶಾವತಾರವನ್ನು ವರ್ಣಿಸಿದ್ದಾರೆ.  ಮತ್ಸ್ಯಾವತಾರವನ್ನು ಕುರಿತು "ಮತ್ಸ್ಯಕರೂಪ ಲಯೋದವಿಹಾರಿನ್ ವೇದವಿನೇತ್ರ ಚತುರ್ಮುಖ ವಂದ್ಯ - ಪ್ರಳಯ ಜಲದಲ್ಲಿ ವಿಹರಿಸುತ್ತಿರುವ, ಬ್ರಹ್ಮದೇವರಿಂದ ಸ್ತುತ್ಯನಾದ, ವೇದ ಪ್ರವರ್ತಕನಾದ, ಮತ್ಸ್ಯರೂಪಿಯೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಪ್ರಚಲಿತ ಲಯಜಲವಿಹರಣ ಶಾಶ್ವತ ಸುಖಮಯಮೀನ ಹೇಭವಮಮ ಶರಣಮ್
ಶುಭತಮ ಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮರಮಾರಮಣ || - ಪ್ರಲಯ ಜಲದಲ್ಲಿ ಕ್ರೀಡಿಸುತ್ತಿರುವ ನಿತ್ಯ ಸತ್ಯನಾದ, ಸುಖ ಸ್ವರೂಪಿಯಾದ, ಮತ್ಸ್ಯಾವತಾರಿಯಾದ, ಬ್ರಹ್ಮತತ್ವ ಸ್ವರೂಪನಾದ, ಜ್ಞಾನಪ್ರದ ರಮಣೀಯ ಕಥೆಗಳಿಗೆ ಆಶ್ರಯನಾದವನೂ ಸದಾ ಪ್ರಕಾಶಕನೂ, ಜಗತ್ತಿನ ಅಸ್ತಿತ್ವಕ್ಕೆ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀ ಪತಿಯೇ ನಿನಗೆ ಶರಣು ಹೊಂದುತ್ತೇನೆ ಎಂದೂ ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ಮತ್ಸ್ಯಾವತಾರವನ್ನು

ಪ್ರೋಷ್ಠೀಶವಿಗ್ರಹ ಸುನಿಷ್ಟೀವನೋದ್ಧತ ವಿಶಿಷ್ಟಾಂಬುಚಾರಿ ಜಲಧೇ
ಕೋಷ್ಠಾಂತರಾಹಿತ ವಿಚೇಷ್ಟಾಗಮೌಘ ಪರಮೇಷ್ಠೀಡಿತ ತ್ವಮವ ಮಾಮ್ |
ಪ್ರೇಷ್ಠಾರ್ಕಸೂನುಮನು ಚೇಷ್ಟಾರ್ಥಮಾತ್ಮವಿದತೀಷ್ಟೋ ಯುಗಾಂತಸಮಯೇ
ಸ್ಥೇಷ್ಟಾತ್ಮಶೃಂಗಧೃತ ಕಾಷ್ಟಾಂಬುವಾಹನ ವರಾಷ್ಟಾಪದಪ್ರಭತನೋ || - ಪ್ರಳಯ ಕಾಲದಲ್ಲಿ ಶ್ರೇಷ್ಠವಾದ ಮತ್ಸ್ಯಶರೀರಧಾರಿಯಾಗಿ, ವಿಶಿಷ್ಟವಾದ ತಿಮಿಂಗಿಲಾದಿ ದೊಡ್ಡ ಪ್ರಾಣಿಗಳುಳ್ಳ ಸಾಗರವನ್ನು ಬಾಯಿಯಿಂದೊಮ್ಮೆ ಥೂತ್ಕರಿಸಿ ಉಕ್ಕೇರುವಂತೆ ಮಾಡಿದ, ಉದರಾಂತರ್ಗತದಲ್ಲಿ ಸಮಸ್ತ ವೇದಗಳನ್ನು ಹೊಂದಿರುವ, ಬ್ರಹ್ಮದೇವರಿಂದ ವಂದಿಸಲ್ಪಡುವ, ಅತಿ ದೃಢವಾದ ತನ್ನ ಕೊಂಬಿನಲ್ಲಿ ಮರದ ಶ್ರೇಷ್ಠ ನೌಕೆಯನ್ನು ರಚಿಸಿ, ಆ ನೌಕೆಯಲ್ಲಿ ಮುಂದಿನ ಸೃಷ್ಟಿಗೆ ಅವಶ್ಯಕವಾಗಿರುವ ಬೀಜರೂಪದ ಜೀವರಾಶಿಗಳನ್ನೂ, ಮುಂದೆ ವೈವಸ್ವತ ಮನ್ವಂತರದಲ್ಲಿ ಮನುವಾಗಿ ಬರಬೇಕಾಗಿದ್ದ ರಾಜಾ ಸತ್ಯವ್ರತನ್ನೂ ಕುಳ್ಳಿರಿಸಿಕೊಂಡು, ತತ್ತ್ವೋಪದೇಶ ಮಾಡಿದ, ಚಿನ್ನದಂತೆ ಹೊಳೆಯುವ ಶರೀರವುಳ್ಳ, ಬ್ರಹ್ಮ ಜ್ಞಾನಿಗಳಿಗೆ ಅತಿಪ್ರಿಯನಾದ ಮತ್ಸ್ಯರೂಪಿಯಾದ ಭಗವಂತನೇ ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿ ದಶಾವತಾರದ ವರ್ಣನೆಯನ್ನು ಮಾಡಿದ್ದಾನೆ.  ಮತ್ಸ್ಯಾವತಾರವನ್ನು
ಪ್ರಲಯಪಯೋಧಿಜಲೇ ಧೃತವಾನಸಿ ವೇದಂ
ವಿಹಿತವಹಿತ್ರ ಚರಿತ್ರಮಖೇದಂ
ಕೇಶವ ಧೃತ ಮೀನ ಶರೀರ ಜಯ ಜಗದೀಶ ಹರೇ || ಪ್ರಲಯ ಸಮುದ್ರದ ಜಲದಲ್ಲಿ ವೇದ ರಕ್ಷಕನಾಗಿ ಅವತರಿಸಿದ ಧೃತ (ಧರಿಸಿದ) ಮೀನಿನ ಶರೀರದ ಕೇಶವನೇ, ಜಗದೀಶನೇ ನಿನಗೆ ಜಯ ಜಯವು ಎಂದು ಸ್ತುತಿಸಿದ್ದಾರೆ. 

ಭಗವಂತನ ದಶಾವತಾರಗಳಿಗೂ ಮನು ಕುಲಕ್ಕೂ ಅತ್ಯಂತ ಸಮೀಪದ ಹೋಲಿಕೆ ಇದೆ.  ನೀರಿನಿಂದ ಜೀವ ಚೈತನ್ಯದ ಉತ್ಪನ್ನವಾಯಿತೆಂಬುದರ ಸಂಕೇತ ಮತ್ಸ್ಯಾವತಾರವಾಗಿದೆ. ಭಗವಂತನು ಮತ್ಸ್ಯಾವತಾರಿಯಾಗಿ ಬಂದು ಬ್ರಹ್ಮಾಂಡವನ್ನು ಒಂದು ಪುಟ್ಟ ನೌಕೆಯನ್ನಾಗಿಸಿ, ಅದರೊಳಗೆ ಅನಾದಿಯಾದ ಜೀವರಾಶಿಯನ್ನು ಬೀಜರೂಪದಲ್ಲಿ ರಕ್ಷಿಸಿದಾಗ ನೌಕೆ ಪ್ರಳಯ ಜಲದಲ್ಲಿ ತೇಲಿತು ಮತ್ತು ಮುಂದೆ ಅದರಲ್ಲಿ ಸಂರಕ್ಷಿಸಲ್ಪಟ್ಟ ಬೀಜರೂಪದ ಜೀವರಾಶಿಯಿಂದಲೇ ಭಗವಂತನಿಂದ ಸೃಷ್ಟಿ ಪ್ರಾರಂಭವಾಯಿತು.  ನಮ್ಮ ಪ್ರಸ್ತುತ ಜೀವನದಲ್ಲಿಯೂ ಮತ್ಸ್ಯಾವತಾರವನ್ನು ಹೋಲಿಸಿಕೊಂಡು ನಮಗೆ ನಾವೇ ವಿಶ್ಲೇಷಣೆ ಮಾಡಿಕೊಳ್ಳಬಹುದು.  ಲೌಕಿಕದಲ್ಲಿ ನಮ್ಮ ಕರ್ಮಕ್ಕನುಗುಣವಾಗಿ ಅಸಂಖ್ಯ ಸಮಸ್ಯೆಗಳನ್ನು ತಂದಿರುತ್ತೇವೆ.  ಸಮಸ್ಯೆಯ ಸಾಗರದಲ್ಲಿ ನಾವು ಸಿಕ್ಕಿಕೊಂಡಾಗ, ನಮ್ಮ ಅಂತರಂಗದಲ್ಲಿ ದುಃಖ ಹಾಗೂ ಪ್ರಳಯದ ಜಲವೇ ತುಂಬಿಕೊಂಡಿರುವಾಗ ಭಗವಂತನ ಧ್ಯಾನವನ್ನು ಮಾಡಬೇಕು.  ಬರೀ ಕತ್ತಲು ತುಂಬಿರುವ ಅಂತರಂಗದಲ್ಲಿ, ಮುಳುಗದೆ ತೇಲುವ ಅವಕಾಶವನ್ನು ಭಗವಂತ ನಮ್ಮ ಅಂತಃಸತ್ವದಲ್ಲಿ ಬೆಳಕಿನ ಕಿರಣದ ಮೂಲಕ ಪರಿಹಾರವನ್ನು ಕೊಡುತ್ತಾನೆ.  "ಸಂಕಟ ಬಂದಾಗ ವೆಂಕಟರಮಣ"ನೆನ್ನದೆ "ಸಂತತಂ ಚಿಂತಯೇ ಅನಂತಂ ಅಂತ್ಯಕಾಲೇ ವಿಶೇಷತಃ" ಎಂಬ ಮಾತನ್ನು ಅನ್ವಯಿಸಿಕೊಳ್ಳುತ್ತಾ ಪ್ರಾರ್ಥಿಸಿದಾಗ ನಮ್ಮ ಸಮಸ್ಯೆಗಳಿಗೆ ನಮ್ಮೊಳಗಿನಿಂದಲೇ ಉತ್ತರವೂ ಸಿಕ್ಕುತ್ತದೆ ಎಂಬುದನ್ನು ಮತ್ಸ್ಯಾವತಾರವು ಬಿಂಬಿಸುತ್ತದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೧೮ನೆಯ ಪದ್ಯದಲ್ಲಿ "ಕರ್ಣದಲಿ ಇಪ್ಪನು ವಿಷ್ಣುನಾಮಕ ಶ್ರವಣನೆಂದೆನಿಸಿ" ಎಂದಿದ್ದಾರೆ.  ಕಿವಿಗಳಲ್ಲಿ ನೆಲೆಸಿರುವ ದಿಗ್ದೇವತೆಗಳಿಗೆ ವಿಷ್ಣುನಾಮಕ ಪರಮಾತ್ಮನು ಅಭಿಮಾನಿ ದೇವತೆಯಾಗಿದ್ದಾನೆ .  ಮುಂದುವರೆಯುತ್ತಾ ೩೪ನೆಯ ಪದ್ಯದಲ್ಲಿ ಕೂಡ ಶ್ರವಣಗಳಲ್ಲಿ ಮತ್ಸ್ಯರೂಪಿ ಭಗವಂತನನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ಮತ್ಸ್ಯಾವತಾರವೆತ್ತಿದಾಗ ಲಕ್ಷ್ಮೀದೇವಿಯು ವೇದ ರೂಪಿಯಾಗಿ ಇರುತ್ತಾಳೆ ಎಂದಿದ್ದಾರೆ.

ಶ್ರೀ ಜಗನ್ನಾಥದಾಸರು ತಮ್ಮ "ತತ್ವಸುವ್ವಾಲಿ"ಯಲ್ಲಿಯೂ ದಶಾವತಾರದ ವರ್ಣನೆ ಮಾಡಿದ್ದಾರೆ.  ಮತ್ಸ್ಯಾವತಾರವನ್ನು
ವೇದತತಿಗಳನು; ಕದ್ದೊಯ್ದವನ ಕೊಂದು ಪ್ರಳ-
ಯೋದಧಿ-ಯೊಳಗೆ ಚರಿಸಿ-ದಿ | ಚರಿಸಿ ವೈವಸ್ವತನ
ಕಾಯ್ದ ಮಹಮಹಿಮ ದಯವಾಗೋ || - ವೇದಗಳನ್ನು ಕದ್ದೊಯ್ದಿದ್ದ ಹಯಗ್ರೀವಾಸುರನೆಂಬ ದೈತ್ಯನನ್ನು ಕೊಂದು, ಪ್ರಳಯೋದಕದಲ್ಲಿ ಚರಿಸಿದ, ವಿಹರಿಸಿದ ಭಗವಂತನು ಚಾಕ್ಷುಷ ಮನ್ವಂತರದ ಪ್ರಳಯೋದಕದಲ್ಲಿ ಪುನಃ ಸಂಚಾರ ಮಾಡಿ ವೈವಸ್ವತನನ್ನು ಕಾಪಾಡಿದ ಅದ್ಭುತ ಮಹಿಮನಾದ ಹೇ ಮತ್ಸ್ಯ ಕೃಪೆಮಾಡು ಎನ್ನುತ್ತಾರೆ.
 


ಭಗವಂತನ ಮತ್ಸ್ಯಾವತಾರ ದೇವಸ್ಥಾನದ ಕೊಂಡಿ
http://en.m.wikipedia.org/wiki/Nagalapuram#Vedanarayana_Swamy_Temple
ಚಿತ್ರಕೃಪೆ : ಅಂತರ್ಜಾಲ