Friday, June 24, 2011

೧. ಮಂಗಳಾಚರಣ ಸಂಧಿ :- ( ೨ ಹಾಗೂ ೩ ನೇ ಚರಣಗಳು)


ಜಗದುದರನತಿ ವಿಮಲ ಗುಣ ರೂ
ಪಗಳನಾಲೋಚನದಿ ಭಾರತ
ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ |
ಬಗೆಬಗೆಯ ನೂತನವ ಕಾಣುತ
ಮಿಗೆ ಹರುಷದಿಂ ಪೊಗಳಿ ಹಿಗ್ಗುತ
ತ್ರಿಗುಣಮಾನಿ ಮಹಾಲಕುಮಿಸಂತೈಸಲನುದಿನವು || ೨ ||

ಪ್ರತಿಪದಾರ್ಥ : ಜಗದುದರ - ಜಗತ್ತನ್ನೇ ಉದರದಲ್ಲಿ ಉಳ್ಳ ಶ್ರೀಹರಿ, ಅತಿ ವಿಮಲ ಗುಣ ರೂಪಗಳ - ದೋಷವಿಲ್ಲದ ಗುಣಗಳು, ರೂಪಗಳು, ಆಲೋಚನದಿ - ಕೇವಲ ಆಲೋಚನೆಯಿಂದಲೇ ಗ್ರಹಿಸುವ, ಭಾರತ - ಪಂಚಮವೇದ ಎನಿಸಿರುವ ಮಹಾಭಾರತದಲ್ಲಿ ಬಿಂಬಿತವಾಗಿರುವ ಪರಮಾತ್ಮನ ಗುಣಗಳು, ನಿಗಮತತಿಗಳು - ವೇದಗಳ ಸಮೂಹದಲ್ಲಿ  ಬಿಂಬಿತವಾಗಿರುವ  ಭಗವಂತನ ಗುಣಗಳು, ಅತಿಕ್ರಮಿಸಿ - ಮೀರಿಸುವ, ಕ್ರಿಯಾ ವಿಶೇಷಗಳ - ವಿಶೇಷವಾದ ಲೀಲೆಗಳು, ಬಗೆಬಗೆಯ ನೂತನವ ಕಾಣುವ - ವಿವಿಧ ಪ್ರಕಾರದ ಹೊಸತನ್ನು ಕಾಣುವ,  ಮಿಗೆ  ಹರುಷದಿಂ - ಅಪರಿಮಿತ ಆನಂದದಿಂದ, ಪೊಗಳಿ ಹಿಗ್ಗುವ - ಹಾಡಿ, ಸ್ತುತಿಸಿ ಆನಂದ ಪಡುವ, ತ್ರಿಗುಣ ಮಾನಿ -  ಸತ್ವ, ರಜೋ, ತಮೋ ಎಂಬ ಮೂರೂ ಗುಣಗಳಿಗೂ ಅಭಿಮಾನಿ ದೇವತೆಯಾದ, ಮಹಾಲಕುಮಿ - ಮಹಾಲಕ್ಷಿ, ಸಂತೈಸಲನುದಿನವು - ದಿನದಿನವೂ, ಪ್ರತಿದಿನವೂ ಸಲಹಲಿ.


ಜಗದುದರನ – “ಉದರ೦ ಚಿ೦ತ್ಯಮೀಶಸ್ಯ ತನುತ್ವೇsಪ್ಯಖಿಲಭರ೦ ಎ೦ಬ೦ತೆ ವರ್ತಮಾನ ಸ್ಥಾವರ-ಜ೦ಗಮಾತ್ಮಕ ಜಗತ್ತಲ್ಲದೇ ಇನ್ನೂ ಅನ೦ತಾನ೦ತ ಜಗತ್ತುಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು ರಕ್ಷಿಸುತ್ತಿರುವ, ಅತಿವಿಮಲಗುಣ - ಭಗವಂತನ ರೂಪಗುಣಗಳನ್ನು ಆಲೋಚನೆಯಿಂದಲೇ ತಿಳಿಯಬಲ್ಲವಳು ಲಕ್ಷ್ಮೀದೇವಿ.  ಅವನನ್ನೇ ಕುರಿತು ಇರುವ ಭಾರತ-ನಿಗಮಗಳನ್ನೂ ಮೀರಿದಂತಹ – “ನಿಗಮತತಿಗಳತಿಕ್ರಮಿಸಿ” – ಎಂದರೆ ವೇದಗಳು, ಶ್ರುತಿಗಳು ಹೇಳುವ ಪರಮಾತ್ಮನ ಗುಣಗಳಿಗಿಂತ ಅಧಿಕವಾಗಿರುವ ಕ್ರಿಯಾ ವಿಶೇಷಗಳನ್ನೂ ತಿಳಿಯಬಲ್ಲವಳು ಎಂದರ್ಥ. ಪರಮಾತ್ಮನ ನಿತ್ಯಾವಿಯೋಗಿನಿಯಾಗಿರುವ ಲಕ್ಷ್ಮಿದೇವಿಯು ಅವನ ಅನಂತ ರೂಪಗಳಲ್ಲಿನ ಹೊಸ ಹೊಸ ಅಚ್ಚರಿಗಳನ್ನು ಶ್ರೀಹರಿಯೊಡನೆ ಇದ್ದು  ಗಮನಿಸುತ್ತಾ, ಆಶ್ಚರ್ಯ ಪಡುತ್ತಾ, ಸಂತಸ ಪಡುವವಳಾಗಿದ್ದಾಳೆ.   ಇಷ್ಟು ಮಹಿಮಾನ್ವಿತಳಾದ, ಅಪಾರ ಜ್ಞಾನಿಯಾದ  ರಮಾದೇವಿಗೇ ಶ್ರೀಹರಿಯ ಪೂರ್ಣ ಗುಣಗಳನ್ನು ಅರಿಯುವುದು ಕಷ್ಟವೆಂದರೆ ಶ್ರೀ ಹರಿಯ ಮಹಿಮೆ ಅದಿನ್ನೆಂತ ಅಪಾರ..!! ಪ್ರಳಯ ಕಾಲದಲ್ಲಿ ನಾರಾಯಣನು ಜಗದುದರನಾಗಿ ಜಗದ್ಭುಕ್ ಎನ್ನಿಸಿಕೊಂಡಾಗಲೂಕ್ಷೀರ ಶರಧಿ ಶಯನನಾಗಿರುವಾಗಲೂ ಲಕ್ಷ್ಮೀದೇವಿ ವಟಪತ್ರ ರೂಪದಿಂದ ಭೂದೇವಿಯಾಗಿಯೂ.  ನೀರಿನ ರೂಪದಿಂದ ಶ್ರೀದೇವಿಯಾಗಿಯೂಕತ್ತಲ ರೂಪದಿಂದ ದುರ್ಗಾ ದೇವಿಯಾಗಿಯೂ ಇರುತ್ತಾಳೆ.  ಇದೇ ಇವಳ ಭೂದೇವಿ ಶ್ರೀದೇವಿ ಮತ್ತು ದುರ್ಗಾದೇವಿಯ ರೂಪಗಳು.  ಹಾಗೆಯೇ ಶ್ರೀ-ಸತ್ವ, ಭೂ-ರಜಸ್ಸು,ದುರ್ಗಾ-ತಮಸ್ಸು ಎಂಬ ತ್ರಿಗುಣಗಳ ಮಾನಿಯೂ ಆಗಿರುವ ಲಕ್ಷ್ಮೀದೇವಿ ನಮ್ಮನ್ನು ಅನವರತವೂ ಕಾಪಾಡಲಿ ಎಂದು ಕೇಳಿಕೊಳ್ಳುತ್ತಾರೆ.


ನೀನೇ ಗತಿ ಎನಗೇ | ವನಜ ನೇತ್ರೇ ||

ಕೈಲಾಸವೆಂಬೋದು ಕಣ್ಣಿಲಿ ಕಾಣೆನಾ  |
ಮೈಲು ವಾಹನ ಪಿತ ಎತ್ತ ಪೋದನೋ ಕಾಣೆ  ||

ಸತ್ಯಲೋಕವೆಂಬುದು ಮಿಥ್ಯವಾಯಿತು ಕಣೆ
ಎತ್ತ ಪೋದನೋ ಬ್ರಹ್ಮ ಏನು ಮಾಡಲಿ ಅಮ್ಮಾ
ಸರಸಿಜನಾಭನು ಶರಧಿಯೊಳ್ ಮುಳುಗಿದ
ಪುರಂದರ ವಿಠಲನ ಕರುಣೆಗೆ ಪಾತ್ರಳೆ  ||

ಶ್ರೀ ಪುರಂದರ ದಾಸರು... ಪ್ರಳಯ ಸಮಯದಲ್ಲಿ ಜಗದುದರನಾದ ಶ್ರೀಮನ್ನಾರಾಯಣನ ಕೃಪೆಗಾಗಿ ಲಕ್ಷ್ಮೀ ದೇವಿಯ ಮೂಲಕ ಪ್ರಾರ್ಥಿಸುವ ಈ ಪದ್ಯದಲ್ಲಿ... ರಮಾದೇವಿಯ ಅಧಿಕಾರ,ವ್ಯಾಪ್ತಿಯ ವಿವರಗಳನ್ನು ಸುಂದರವಾಗಿ ವರ್ಣಿಸಿದ್ದಾರೆ..

ಡಿವಿಜಿಯವರ “ಮಂಕುತಿಮ್ಮನ ಕಗ್ಗ” ಕೂಡ ಜಗತ್ತಿಗೇ ಮೂಲ ಪುರುಷನಾದ ಶ್ರೀ ಮಹಾವಿಷ್ಣುವಿಗೆ ನಮಿಸುತ್ತಲೇ ಪ್ರಾರಂಭವಾಗುತ್ತದೆ.

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ,
ದೇವ ಸರ್ವೇಶ ಪರಬೊಮ್ಮನೆಂದು ಜನಂ ||
ಆವುದನು ಕಾಣದೊಡಮಳ್ತಿಯಿಂ  ನಂಬಿಹುದೊ |
ಆ ವಿಚಿತ್ರಕೆ ನಮಿಸೋ – ಮಂಕುತಿಮ್ಮ  ||

ಶ್ರೀ ವಿಷ್ಣು, ಜಗತ್ತಿಗೇ ಮೊದಲು ಮತ್ತು ಸೃಷ್ಟಿಗೆ ಕಾರಣನಾದ ಸೃಷ್ಟಿಕರ್ತ. ಅವನು ಮಾಯಾಲೋಲನಾಗಿರುವನು.  ಸರ್ವಾಂತರ್ಯಾಮಿ. ಅವನೇ ಸರ್ವರಿಗೂ ಈಶ್ವರ ಮತ್ತು ಪರಬ್ರಹ್ಮ (ಪರಬೊಮ್ಮ).  ಅವನನ್ನು ಜನಗಳು ವಿವಿಧ ನಾಮಗಳಿಂದ ಸ್ಮರಿಸುತ್ತಾರೆ, ಆರಾಧಿಸುತ್ತಾರೆ.  ಭಗವಂತ ನಮ್ಮ ಕಣ್ಣಿಗೆ ಕಾಣದಿದ್ದರೂ ಕೂಡ ನಾವು ಪ್ರೀತಿಯಿಂದ (ಅಳ್ತಿಯಂ), ಅವನನ್ನು ಅಗಾಧವಾಗಿ ನಂಬುತ್ತೇವೆ.  ಆ ಕಣ್ಣಿಗೆ ಕಾಣದ ಜಗತ್ತಿನ ವಿಚಿತ್ರಕ್ಕೆ ನಮಿಸು ಎನ್ನುತ್ತಾರೆ ಡಿವಿಜಿಯವರು.


ನಿರುಪಮಾನಂದಾತ್ಮಭವ ನಿ
ರ್ಜರ ಸಭಾಸಂಸೇವ್ಯ ಋಜುಗಣ
ದರಸೆ ಸತ್ವಪ್ರಚುರ ವಾಣೀಮುಖ ಸರೋಜೇನ |
ಗರುಡ ಶೇಷ  ಶಶಾಂಕದಳ ಶೇ
ಖರರ ಜನಕ ಜಗದ್ಗುರುವೆ ತ್ವ
ಚ್ಚರಣಗಳಿಗಭಿವಂದಿಸುವೆ ಪಾಲಿಪುದು ಸನ್ಮತಿಯ  || ೩ ||

ಪ್ರತಿಪದಾರ್ಥ :  ನಿರುಪಮಾನಂದ - ಹೋಲಿಕೆಯೇ ಇಲ್ಲದಷ್ಟು ಆನಂದ ಅಥವಾ ಅನುಪಮ ಆನಂದ, ಆತ್ಮಭವ - ಶ್ರೀಹರಿಯ ಸಾಕ್ಷಾತ್ ಪುತ್ರ ಬ್ರಹ್ಮ, ನಿರ್ಜರ ಸಭಾ ಸಂಸೇವ್ಯ - ದೇವತೆಗಳ ಸಮೂಹದಿಂದ ಸೇವಿಸಿಕೊಳ್ಳಲ್ಪಟ್ಟವನು, ಋಜುಗಣದರಸೆ - ಋಜುಗಣದ ಒಡೆಯನಾದ (ಶ್ರೇಷ್ಠನಾದ), ಸತ್ವಪ್ರಚುರ - ಸತ್ವ ಗುಣವನ್ನೇ ಅಧಿಕವಾಗಿ ಉಳ್ಳಂತಹ, ವಾಣೀಮುಖ ಸರೋಜೇನ - ಸರಸ್ವತಿ ದೇವಿಯ ಮುಖವೆಂಬ ಕಮಲಕ್ಕೆ ಸೂರ್ಯನಂತಿರುವ, ಗರುಡ ಶೇಷ ಶಶಾಂಕದಳ ಶೇಖರರ ಜನಕ - ಗರುಡದೇವರು ಶೇಷದೇವರು ಮತ್ತು ಮೃಗಲಾಂಛನವಾದ ಚಂದ್ರ ಕಳೆಯನ್ನು ಶಿರದಲ್ಲಿ ಧರಿಸಿರುವ ರುದ್ರದೇವರುಗಳ ಜನಕನು, ಜಗದ್ಗುರುವೆ - ಜಗತ್ತಿಗೇ ಗುರುವಾಗಿರುವವನು, ತ್ವಚ್ಚರಣಗಳಿಗೆ - ನಿಮ್ಮ ಪಾದಗಳಿಗೆ, ಅಭಿವಂದಿಸುವೆ - ಚೆನ್ನಾಗಿ ನಮಸ್ಕರಿಸುವೆ, ಪಾಲಿಪುದು ಸನ್ಮತಿಯ - ಸುಬುದ್ಧಿ / ಒಳ್ಳೆಯ ಬುದ್ಧಿಯನ್ನು ಕರುಣಿಸು.

ಸದಾ ಆನಂದಮಯನಾಗಿರುವಂತಹವನು ಪರಮಾತ್ಮ, ಅವನ ಆನಂದ ಸೀಮಾತೀತ ಮತ್ತು ಬಣ್ಣಿಸಲಾಗ ದಂತಹುದು ಎನ್ನುತ್ತಾರೆ ದಾಸರು.  ಇಂತಹ ಪರಮಾತ್ಮನ ಭವ – ಅಂದರೆ ಮಗ, ಬ್ರಹ್ಮನನ್ನು ವರ್ಣಿಸುವಾಗ ಋಜುಗಣದ ವಿವರಣೆಯನ್ನೂ ಕೊಡುತ್ತಾರೆ ದಾಸವರ್ಯರು . ಋಜು ಎಂದರೆ  ೨೦೦ ಜನಗಳ ಒಂದು ಗಣ.  ೧೦೦ ಜನ ಬಿಂಬ ಸಾಕ್ಷಾತ್ಕಾರ ಪಡೆದವರು, ಇನ್ನೊಂದು ೧೦೦ ಜನ ಬಿಂಬ ಸಾಕ್ಷಾತ್ಕಾರಕ್ಕಾಗಿ ಸಾಧನೆ ಮಾಡುತ್ತಿರುವವರು.  ಇವರಿಗೆ ಬ್ರಹ್ಮ ದೇವರು ಅರಸರು. ಋಜುಗಣದವರು ೩೨ ಲಕ್ಷಣಗಳುಳ್ಳವರು ಮತ್ತು ಮುಖ್ಯವಾಗಿ ಅಚ್ಛಿನ್ನ ಭಕ್ತರು. ಇವರಿಗೆ ರೋಗ, ಮುಪ್ಪು ಇರುವುದಿಲ್ಲ.  ಅವರ ಮನಸ್ಸಿನಿಂದ ಪರಮಾತ್ಮ ಯಾವಾಗಲೂ ಮರೆಯಾಗುವುದೇ ಇಲ್ಲ.  ಋಜುಗಣಕ್ಕೆ ಬ್ರಹ್ಮ, ಸರಸ್ವತಿ, ವಾಯು, ಭಾರತಿ ಇವರುಗಳು ಸೇರುತ್ತಾರೆ.  ಇಲ್ಲಿ ಬ್ರಹ್ಮನನ್ನು ಉಪಮೆಗೆ ಸಿಗದಂತಹ ಪರಮಾತ್ಮನ "ಆತ್ಮಭವ" ಎಂದು ವರ್ಣಿಸುತ್ತಾರೆ.  ದೇವ ಸಭೆಯಿಂದಲೂ ವಂದಿಸಿಕೊಳ್ಳುವಂತಹವರು ಬ್ರಹ್ಮ ದೇವರು. ತ್ರಿಗುಣಗಳಲ್ಲಿ ಬ್ರಹ್ಮ ದೇವರು ಸತ್ವಗುಣಾಧಿಕರಾಗಿರುವುದರಿಂದ ಅವರು "ಸತ್ವಪ್ರಚುರರು". ಗರುಡ, ಶೇಷ, ರುದ್ರ ಇವರುಗಳ ಜನಕ, ಜಗದ್ಗುರು, ಬ್ರಹ್ಮದೇವನೇ ನಿನ್ನ ಚರಣಗಳಿಗೆ ವಂದಿಸುವೆ, ಸನ್ಮತಿಯನ್ನು ಪಾಲಿಸು.