Sunday, September 18, 2011

ಮಂಗಳಾಚರಣ ಸಂಧಿ - ೧೧ ನೇ ಪದ್ಯ...

ಕೃತ್ತಿವಾಸನೆ ಹಿಂದೆ ನೀ ನಾ
ಲ್ವತ್ತು ಕಲ್ಪಸಮೀರನಲಿ ಶಿ
ಷ್ಯತ್ವ ವಹಿಸಿ ಅಖಿಳಾಗಮಾರ್ಥಗಳೋದಿ ಜಲಧಿಯಲಿ |
ಹತ್ತು ಕಲ್ಪದಿ ತಪವ ಗೈದಾ
ದಿತ್ಯರೊಳಗುತ್ತಮನೆನಿಸಿ ಪುರು
ಷೋತ್ತಮನ ಪರಿಯಂಕ ಪದವೈದಿದೆಯೊ ಮಹದೇವ ||೧೧||


ಪ್ರತಿಪದಾರ್ಥ : ಕೃತ್ತಿವಾಸನೆ - ಮೃಗದ ಚರ್ಮವನ್ನು ಧರಿಸಿರುವ ರುದ್ರದೇವನೆ, ಹಿಂದೆ ನೀ - ರುದ್ರ ಪದವಿಗೆ ಬರುವ ಮೊದಲು ನೀನು, ನಾಲ್ವತ್ತು ಕಲ್ಪ - ಬ್ರಹ್ಮನ ೪೦ ದಿನಗಳ ಕಾಲ, ಸಮೀರನಲಿ - ವಾಯುದೇವರಲ್ಲಿ, ಶಿಷ್ಯತ್ವವಹಿಸಿ - ಶಿಷ್ಯನಾಗಿದ್ದುಕೊಂಡು, ಅಖಿಳಾಗಮಾರ್ಥಗಳೋದಿ - ಸಮಸ್ತ ಶಾಸ್ತ್ರಗಳ ಅಧ್ಯಯನವನ್ನು ಮಾಡಿ, ಜಲಧಿಯೊಳು - ಲವಣ ಸಮುದ್ರದಲ್ಲಿ, ಹತ್ತು ಕಲ್ಪದಿ - ಬ್ರಹ್ಮನ ೧೦ ದಿನಗಳ ಕಾಲ, ತಪವ ಗೈದು - ತಪಸ್ಸನ್ನು ಮಾಡಿ, ಆದಿತ್ಯರೊಳಗೆ - ದೇವತೆಗಳಲ್ಲಿ, ಉತ್ತಮನೆನಿಸಿ - ಶ್ರೇಷ್ಠನೆಂದೆನಿಸಿಕೊಂಡು, ಪುರುಷೋತ್ತಮನ - ಶ್ರೀಹರಿಯ, ಪರಿಯಂಕಪದವ - ಶಯನವಾದ ಶೇಷ ಪದವಿಯನ್ನು, ಐದಿದೆಯೋ ಮಹದೇವ - ಪಡೆದೆಯೋ ಮಹದೇವ.

ಇಲ್ಲಿ ರುದ್ರದೇವರನ್ನು “ಕೃತ್ತಿವಾಸನೆ” ಎಂದು ಸಂಬೋಧಿಸಿದ್ದಾರೆ. “ಕೃತ್ತಿ” ಎಂದರೆ ಚರ್ಮ ಎಂಬ ಅರ್ಥ ಬರುತ್ತದೆ, ಸಂಸ್ಕೃತದಲ್ಲಿ ಕೃತ್ತಿ ಎಂದರೆ ಛೇದನ - ಕತ್ತರಿಸಲಿಕ್ಕೆ ಬರುವಂತಹುದು. ರುದ್ರ ದೇವರು ಹುಲಿಯ ತೊಗಲನ್ನು ಬಟ್ಟೆಯಾಗಿ ಉಳ್ಳವರು. ಚರ್ಮಮಯವಾದ ಶರೀರದ ಒಳಗೆ “ಮನೋಮಯ” ಸ್ವರೂಪದಲ್ಲಿ ಇರುತ್ತಾರೆ ರುದ್ರ ದೇವರು. ಆದ್ದರಿಂದ ಅವರಿಗೆ ಚರ್ಮಾಂಬರನೆಂದೂ ಕರೆಯುತ್ತಾರೆ (“ಗಜ ಚರ್ಮಾಂಬರ”ನೆಂದೂ ಕರೆಯುವ ಕಾರಣವೇನೆಂದರೆ – “ಗಜ” ಸಂಪತ್ತಿನ ಸಂಕೇತ. ಶಿವ ಗಜನನ್ನು, ಸಂಪತ್ತನ್ನು ಬಿಟ್ಟು ಅದರ ತೊಗಲನ್ನು ತೊಟ್ಟವನು. ಇದು ವೈರಾಗ್ಯದ ಸೂಚಕ). ನಾವು ಈ ಚರ್ಮವನ್ನು (ಶರೀರ) ಛೇದಿಸಿಕೊಂಡು, ಮನೋಮಯ ಕೋಶಕ್ಕೆ ತಲುಪಿದಾಗಲೇ ನಮಗೆ ರುದ್ರ ದೇವರ ಅನುಗ್ರಹವಾಗುವುದೆಂದು ಅರ್ಥೈಸಿ ಕೊಳ್ಳಬಹುದು.


ಶ್ರೀ ಶಂಕರರು "ಶಿವ ಮಾನಸ ಪೂಜಾ" ಎಂಬ ರಚನೆಯಲ್ಲಿ

"ಆತ್ಮಾ ತ್ವಂ ಗಿರಿಜಾ ಮತಿ: ಸಹಚರಾಃ ಪ್ರಾಣಾಃ ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿ: |
ಸಂಚಾರಃ ಪದಯೋ: ಪ್ರದಕ್ಷಿಣವಿಧಿ: ಸ್ತೋತ್ರಾಣಿ ಸರ್ವಾಗಿರೋ
ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ||


ನಮ್ಮ ಶರೀರವನ್ನೇ ಆಲಯವನ್ನಾಗಿಸಿ, ನಮ್ಮ ಸಂಚಾರವನ್ನು ಪ್ರದಕ್ಷಿಣೆಯಾಗಿಸಿ, ನಿದ್ರೆಯನ್ನು ಸಮಾಧಿ ಸ್ಥಿತಿ ಎಂದು ವಿವರಿಸುತ್ತಾ ನಮ್ಮ ಮನಸ್ಸನ್ನು ಹೇಗೆ ಶಿವನಲ್ಲಿ ಲೀನವಾಗಿಸಿ ಮಾನಸ ಪೂಜೆಯನ್ನು ಮಾಡಬೇಕೆಂದು ತಿಳಿಸುತ್ತಾರೆ.


ಹಾಗೇ ಶಿವಾನಂದಲಹರಿಯಲ್ಲಿ

ಆಶಾಪಾಶ ಕ್ಲೇಶಕುರ್ವಾಸನಾದಿ -
ಭೇದೋಧ್ಯುಕ್ತೈರ್ದಿವ್ಯಗಂಧೈರಮಂದೈ: |
ಆಶಾಶಾಟೀಕಸ್ಯ ಪಾದಾರವಿಂದಂ
ಚೇತಃಪೇಟೀಂ ವಾಸಿತಾಂ ಮೇ ತನೋತು ||


ಇಲ್ಲಿ ಮನಸ್ಸನ್ನು ಪೆಟ್ಟಿಗೆಗೆ ಹೋಲಿಸುತ್ತಾರೆ. ಲೌಕಿಕ ವಿಷಯಗಳ ಆಸೆಗಳಲ್ಲಿ ಆಸಕ್ತಿ ಸಾಕು, ಅದು ಹಗ್ಗದಂತೆ ನಮ್ಮನ್ನು ಬಂಧಿಸುತ್ತದೆ. ಆದ್ದರಿಂದ ಈ ವಿಷಯಾಸಕ್ತಿಗಳನ್ನೆಲ್ಲಾ ನಿನ್ನ ಪಾದಾರವಿಂದಕ್ಕರ್ಪಿಸುವಂತೆ ಮಾಡಿ, ನನ್ನ ಮನಸ್ಸೆಂಬ ಪೆಟ್ಟಿಗೆಯನ್ನು ದಿವ್ಯ ಪರಿಮಳದಿಂದ ಕೂಡಿರುವಂತೆ ಮಾಡು, ಅಲ್ಲಿ ನೀನು ನೆಲೆಸು ಎಂದು ಪ್ರಾರ್ಥಿಸುತ್ತಾರೆ. ಆಶಾಪಾಶಕ್ಲೇಶಗಳು ದುರ್ಗಂಧದ ವಸ್ತುಗಳು ಎಂಬರ್ಥ.

ಜಗನ್ನಾಥ ದಾಸರು ರುದ್ರ ದೇವರ ಸಾಧನಾ ಪದವಿ ಬಗ್ಗೆ ತಿಳಿಸುತ್ತಾ ಹಿಂದೆ ಅವರು ಶಿವ ಪದವಿಗೆ ಬರುವ ಮುನ್ನವೂ ಸಾಧನೆ ಮಾಡಿದ್ದರು. ಈಗಲೂ ಮಾಡುತ್ತಿದ್ದಾರೆನ್ನುತ್ತಾರೆ. ಈ ಸಾಧನೆಯಿಂದ ಅವರು ಶ್ರೀ ಹರಿಯ ಪರಿಯಂಕ ಅಂದರೆ ಶೇಷ ಪದವಿಯನ್ನು ಪಡೆಯುವವರಾಗುತ್ತಾರೆ. ಶೇಷ ಹಾಗೂ ರುದ್ರ ಇಬ್ಬರೂ ಒಂದೇ ರೂಪದವರು. ರುದ್ರ ದೇವರೇ ಮುಂದೆ ಶೇಷನಾಗುವವರು. ರುದ್ರ ದೇವರು ಶೇಷದೇವನಾದಾಗ ಅವರೇ ನಮಗೆ ವಾಕ್ ಕೊಡುವವರು ಹಾಗೂ ನಮ್ಮ ಮಾತುಗಳನ್ನು ನಿಯಂತ್ರಿಸುವವರು. ರುದ್ರ ದೇವರ ಅನುಗ್ರಹವಿಲ್ಲದೆ ಯಾವ ಸಾಧನೆಯೂ ಇಲ್ಲ. ನಾವು ಎಷ್ಟೇ ತಿಳಿದರೂ ತಿಳಿಯುವುದು ಇನ್ನೂ ಉಳಿದೇ ಇರುತ್ತದೆ. ಆದ್ದರಿಂದ ದೇವತೆಗಳೂ ಕೂಡ ಕಲ್ಪ ಕಲ್ಪದಲ್ಲಿಯೂ ತಮ್ಮ ಸಾಧನೆಯನ್ನು ಮುಂದುವರೆಸುತ್ತಲೇ ಇರುತ್ತಾರೆ. ರುದ್ರ ದೇವರು ಶೇಷ ಪದವಿಗಾಗಿ ೫೦ ಕಲ್ಪಗಳು ಸಾಧನೆ ಮಾಡುತ್ತಾರೆ. ೪೦ ಕಲ್ಪಗಳು ವಾಯುದೇವರಲ್ಲಿ ಅಭ್ಯಾಸ ಮಾಡಿ ಇನ್ನೂ ೧೦ ಕಲ್ಪ ತಾವು ಅಧ್ಯಯನ ಮಾಡಿದ ಜ್ಞಾನವನ್ನು ಲವಣ ಸಮುದ್ರದಲ್ಲಿ ಕುಳಿತು ಧ್ಯಾನ ಮಾಡಿ ಮನನ ಮಾಡಿಕೊಂಡರೆಂದು ತಿಳಿಯುತ್ತದೆ. ಇದರಿಂದ ಅವರ ಶೇಷ ಪದವಿಯ ಸಾಧನೆ ೫೦ ಕಲ್ಪಗಳು ಮತ್ತು ಈ ಸಾಧನೆಯ ನಂತರ ೧೦೦ನೆಯ ಕಲ್ಪದಲ್ಲಿ ಅವರು ಶೇಷ ಪದವಿಯನ್ನು ಪಾರ್ವತಿ ಸಹಿತವಾಗಿ ಸೇರುತ್ತಾರೆ. ಸಾಧನೆಯಲ್ಲಿ ರುದ್ರ ದೇವರು ಅತ್ಯುತ್ತಮ ಪದವಿಗೇರಿದವರು.

ಜಗನ್ನಾಥ ದಾಸರು ಶೇಷದೇವರ ಕುರಿತು ರಚಿಸಿರುವ ಒಂದು ಕೀರ್ತನೆಯಲ್ಲಿ ಶೇಷದೇವರನ್ನು..

ಬಲು ರಮ್ಯವಾಗಿದೆ ಶ್ರೀಹರಿಯ ಮಂಚ | ಯಲ ಋಣಿ ಕುಳರಾಜ ರಾಜೇಶ್ವರನ ಮಂಚ || ||

ಪವನತನಯನೆನಿಪ ಪಾವನಕರ ಮಂಚ | ಭುವನತ್ರಯನ ಪೊತ್ತ ಭಾರಿ ಮಂಚ |
ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ | ಶಿವರೂಪದಲ್ಲಿ ಶ್ರೀಹರಿಯ ವಲಿಸಿದ ಮಂಚ ||||

ನೀರಾಂಬರವನ್ನುಟ್ಟು ನಳನಳಿಸುವ ಮಂಚ | ನಾಲಿಗೆ ಎರಡುಳ್ಳ ನೈಜ ಮಂಚ |
ನಾಲ್ವತ್ತು ಕಲ್ಪದಿ ತಪವಮಾಡಿದ ಮಂಚ | ತಾಲ ಮುಲ ಹಲವ ಪಿಡಿದಿಹ ಮಂಚ ||||

ರಾಮನನುಜನಾಗಿ ಶರಾದ ಜಯಿಸಿದ ಮಂಚ | ತಾಮಸ ರುದ್ರನ ಪಡೆದ ಮಂಚ |
ಭೀಮನನುಜನೊಳು ಆವೇಶಿಸಿದ ಮಂಚ | ಜೀಮೂತ ಮಲ್ಲರನು ಕಟ್ಟಿದ ಮಂಚ ||||

ಜೀವನಾಮಕನಾಗಿ ವ್ಯಾಪ್ತನಾದ ಹರಿಯ | ಸೇವಿಸಿ ಸುಖಿಸುವ ದಿವ್ಯ ಮಂಚ |
ಸಾವಿರ ಮುಖದಿಂದ ತುತಿಸಿ ಹಿಗ್ಗುವ ಮಂಚ | ದೇವಕಿಯ ಜಠರದಿ ಜನಿಸಿದ ಮಂಚ ||||

ವಾರುಣಿ ದೇವಿಗೆ ವರನೆನಿಸಿದ ಮಂಚ | ಸಾರುವ ಭಕ್ತರ ಪೊರೆವ ಮಂಚ |
ಕಾರುಣ್ಯ ನಿಧಿ ಜಗನ್ನಾಥ ವಿಠಲನ | ವಿಹಾರಕ್ಕೆ ಯೋಗ್ಯವಾದ ಶೇಷ ಮಂಚ ||||

ಎನ್ನುತ್ತಾ ಸುಂದರವಾಗಿ ವರ್ಣಿಸುತ್ತಾರೆ.


ಶೇಷ - ಕಾಲದ ಸಂಕೇತ. ಎಲ್ಲಾ ನಾಶವಾದ ನಂತರ ಉಳಿಯುವುದು “ಕಾಲ” ಮಾತ್ರ. ಶೇಷ ಶಕ್ತಿಯೆಂದರೆ ಇಡೀ ವಿಶ್ವವನ್ನು ಧಾರಣೆ ಮಾಡುವ ಶಕ್ತಿ ಎಂದರ್ಥ. ಕಾಲಾಭಿಮಾನಿ, ಕಾಲವನ್ನು ನಿಯಂತ್ರಿಸುವವನು ಎಂದರ್ಥ. ಭಗವಂತ ಕಾಲಾತೀತ, ಏಕೆಂದರೆ ಅವನು ಕಾಲನನ್ನು ತನ್ನಡಿಯಲ್ಲಿ ಹಾಕಿಕೊಂಡು ಮಲಗಿರುವವನು.

ಶೇಷ ಕುಂಡಲಿನಿ ಶಕ್ತಿ, ನಮ್ಮೊಳಗೇ ಇರುವವನು. ಈ ಶೇಷ ದೇವರು (ಶಕ್ತಿ) ಜಾಗೃತವಾದಾಗ, ಸರ್ಪದ ಸಹಸ್ರಾರು ಹೆಡೆಗಳು ಬಿಚ್ಚಿ ನಮಗೆ ಭಗವಂತ ಕಾಣುತ್ತಾನೆ. ಅವನು ಶೇಷಶಾಯಿ. ಕ್ಷೀರ ಸಮುದ್ರವೆಂದರೆ ಜ್ಞಾನಾನಂದಮಯವಾದ ಲೋಕ ಎಂದರ್ಥವಾಗುತ್ತದೆ. ಆ ಜ್ಞಾನಾನಂದಮಯ ಲೋಕದ ಅರಿವು ಶೇಷ ಶಕ್ತಿ ಜಾಗೃತವಾದಾಗ ನಮ್ಮ ಹೃದಯ ಸಮುದ್ರದಲ್ಲಿ ಮಾತ್ರ ಕಾಣ ಸಿಗುವಂತಹುದು. ಪ್ರಪಂಚ ಸೃಷ್ಟಿಯಾಗುವುದಕ್ಕಿಂತ ಮುಂಚಿನಿಂದಲೂ ಸಾಧನೆ ಮಾಡುತ್ತಿರುವ ಆದಿತ್ಯರೆಲ್ಲರಲ್ಲೂ ಉತ್ತಮರು ರುದ್ರ ದೇವರು. ಪುರುಷೋತ್ತಮನ ಪರಿಯಂಕನಾಗುವವ ಎಂದರೆ ಉತ್ತರ ಕಲ್ಪಕ್ಕೆ ದೇವರ ಪರಿಯಂಕಪದವಿ (ಮಂಚದ) “ಶೇಷ” ಪದವಿ ಪಡೆಯುವವರಾಗಿ ಸದಾ ಭಗವಂತನ ಜೊತೆಯಲ್ಲೇ ಇರುವಂತಹ ಮಹಾಭಾಗ್ಯ ಪಡೆದವರಾದ್ದರಿಂದಲೇ ರುದ್ರ ದೇವರು “ಮಹಾದೇವನು”.

ಶ್ರೀ ಮಧ್ವಾಚಾರ್ಯರ ಶಿಷ್ಯರೂ ಹಾಗೂ ತ್ರಿವಿಕ್ರಮ ಪಂಡಿತರ ಮಗನೂ ಆದ ಶ್ರೀ ನಾರಾಯಣ ಪಂಡಿತರು
ರುದ್ರ ದೇವರ ಕುರಿತು ಹೇಳಿದಂತೆ ನಾವು ಸದಾ ರುದ್ರ ದೇವರನ್ನು


ನಮಃ ಶಿವ ಶಿವಾ ಶಿವ ಶಿವ ಶಿವಾರ್ದ್ರಗ್ರಂಥಾ ಶಿವಂ |
ನಮೋ ಹರ ಹರಾ ಹರ ಅಂತರೀಮೇದೃಶಂ |
ನಮೋ ಭವ ಭವಾ ಭವ ಪ್ರಭಾವ ಭೂತಯೇ ಸಂಪದಂ |
ನಮೋ ಮೃಡನಂ ನಮೋ ನಮೋ ಉಮೇಶ ತುಭ್ಯಂ ನಮಃ ||


ಎಂದು ಪ್ರಾರ್ಥಿಸುತ್ತಿದ್ದರೆ ಮನೋನಿಯಾಮಕರಾದ ರುದ್ರ ದೇವರು ನಮ್ಮ ಮನಸ್ಸು ಧೃಡವಾಗಿ ಶ್ರೀಹರಿಯಲ್ಲಿ ನೆಲೆಸುವಂತೆ ಅನುಗ್ರಹಿಸುತ್ತಾರೆ.

ಡಿವಿಜಿಯವರು ತಮ್ಮ ಕಗ್ಗದಲ್ಲಿ ಹೀಗೇ ಹೇಳುತ್ತಾ..


ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು |  

ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||  
ಬೇಸರದ ಪಾತಕ ಸ್ಮೃತಿಯ ಚುಚ್ಚದಿರ್ : ಎನ್ನು - |  
ತೀಶನನು ಬೇಡುತಿರೊ – ಮಂಕುತಿಮ್ಮ ||


ಈ ಪ್ರಪಂಚ ಬ್ರಹ್ಮನ ವೈಭವೋಪೇತವಾದ ಒಂದು ಆಲಯ. ಇದರ ವೈಭವದ ಛಲಕುಗಳನ್ನು ನೋಡಿ, ನನಗೂ ಬೇಕು ಎಂಬ ಆಸೆ ಬರಬಹುದು. ಆದ್ದರಿಂದ ತಿಮ್ಮಗುರುವೆ ನೀನು ಈಶ್ವರನನ್ನು ಆಸೆಗಳನ್ನು ಕೆಣಕಿ ಅವು ನನಗೇ ಬೇಕು ಎಂಬ ಮನಸ್ಸು ಕೊಡಬೇಡ. ಈ ಲೌಕಿಕದ ವಸ್ತುಗಳು, ವ್ಯಕ್ತಿಗಳು ನನ್ನನ್ನು ಪಾಶದಂತೆ ಬಿಗಿಯದಿರಲಿ, ನಿನ್ನನ್ನು ಮರೆತು ನಾನು ಯಾವಾಗ ಪಾಪ ಮಾಡುತ್ತೇನೋ ಮತ್ತು ಅದು ನನ್ನ ಅಂತರಂಗ ಚುಚ್ಚುವುದೋ ತಿಳಿಯುವುದಿಲ್ಲ. ಆ ನೋವು, ಯಾತನೆಯನ್ನು ನಾನು ಭರಿಸಲಾರೆ. ನನಗೆ ಆ ಕಷ್ಟ ಕೊಡಬೇಡ, ನಿನ್ನ ಸ್ಮರಣೆಯೇ ಎಂದೆಂದೂ ನನಗೆ ಇರಲಿ ಎಂದು ಕೇಳಿ ಕೊಳ್ಳುತ್ತಾರೆ.
 




ಚಿತ್ರಕೃಪೆ : ಅಂತರ್ಜಾಲ