Sunday, September 27, 2015

ಕರುಣಾ ಸಂಧಿ - ೩೦ ನೇ ಪದ್ಯ ( ಕಲ್ಕ್ಯಾವತಾರ )

ಮೀನ ಕೂರ್ಮ ವರಾಹ ನರಪಂ- ಚಾನನಾತುಳಶೌರ್ಯ ವಾಮನ ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ | ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 
ಕಾಯ್ದ ಸುಜನರನು ||೩೦||
ಕಲಿಮುಖ  ದಾನವರ   ಸಂಹರಿಸಿ   ಧರ್ಮದಿ  ಕಾಯ್ದ
ಸುಜನರನು : ಕಲ್ಕ್ಯಾವತಾರವು ಭಗವಂತನ ದಶಾವತಾರಗಳಲ್ಲಿ ಹತ್ತನೆಯದು ಹಾಗೂ ಕೊನೆಯದಾಗಿದೆ.  ಈ ಅವತಾರವು ಕಲಿಯುಗಾಂತ್ಯದಲ್ಲಿ ಆಗಿ ಸಮಸ್ತ ದುಷ್ಟರನ್ನು ದಮನಗೊಳಿಸುವುದಾಗಿದೆ.  ಭಗವಂತನಲ್ಲಿ ಅತಿಯಾದ ದ್ವೇಷವನ್ನು ಮಾಡುವ ’ಕಲಿ’ಯೇ ಈ ಯುಗಕ್ಕೆ ಪ್ರಭುವಾಗಿರುವುದರಿಂದ ’ಕಲಿಯುಗ’ವೆಂದೇ ಹೆಸರು ಬಂದಿದೆ.  ಕಲಿಯುಗದ ವರ್ಣನೆಯನ್ನು ಭಾಗವತ ದ್ವಾದಶಸ್ಕಂಧ, ೨ನೆಯ ಅಧ್ಯಾಯದಲ್ಲಿ ವಿಸ್ತಾರವಾಗಿ   "ವಿತ್ತಮೇವ ಕಲೌ ನೃಣಾಂ ಜನ್ಮಾಚಾರ ಗುಣೋದಯಃ" - ಹಣ ಮತ್ತು ಬಲ ಎಲ್ಲಕ್ಕೂ ಅಳತೆಗೋಲು ಮತ್ತು ಪ್ರಮಾಣಗಳಾಗಿರುವುದು.  ಯಾರಲ್ಲಿ ಹೆಚ್ಚು ಹಣವಿರುವುದೋ ಆತನೇ ಕುಲೀನನೆಂದೂ, ಗುಣಶಾಲಿಯೆಂದೂ, ಯಾರು ಹೆಚ್ಚು ಬಲವಂತನೋ ಅವನೇ ಧರ್ಮಿಷ್ಠನೆಂದೂ ಪರಿಗಣಿಸಲ್ಪಡುವನು.  ವಿವಾಹಗಳಲ್ಲಿ ಹೆಣ್ಣು-ಗಂಡುಗಳ ನಡುವಿನ ಕಾಮಾಭಿರುಚಿಯೇ ನಿಯಾಮಕವೆನಿಸುವುದು.  ಛಲ, ಕುಟಿಲ, ಮೋಸ, ಅಧರ್ಮ ಕಾರ್ಯಗಳ ಪಾಲನೆ, ಕಪಟ ಸಂನ್ಯಾಸಿಗಳ ಆಶ್ರಮಗಳು, ಬೂಟಾಟಿಕೆಯ ದಂಡ-ಕಮಂಡಲಗಳ ಉಪಯೋಗ ಮುಂತಾದವುಗಳೇ ಪ್ರಮುಖವಾಗಿ ತುಂಬಿರುವುವು.  ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವುದು, ಯಾವುದೇ ಮಾರ್ಗ ಅನುಸರಿಸಿಯಾದರೂ ಸರಿ ತನ್ನ ಕಾರ್ಯ ಸಾಧಿಸಿಕೊಳ್ಳುವುದು, ಕೇವಲ ತನ್ನ ಕುಟುಂಬವನ್ನು ರಕ್ಷಿಸುವುದೇ ಕಲಿಯುಗದ ಪರಮ ಪುರುಷಾರ್ಥಗಳಾಗುವುವು.  ಕೇವಲ ಕೀರ್ತಿ ಸಂಪಾದನೆಗೋಸ್ಕರವೇ ಧರ್ಮಾನುಷ್ಠಾನ ಆಚರಣೆಯಾಗುವುದು ಎಂದು ವಿವರಿಸಲ್ಪಟ್ಟಿದೆ.

ಕಲಿ ದೋಷದ ಪರಿಣಾಮದಿಂದ ಪ್ರಾಣಿಗಳು ಮತ್ತು ಜೀವಿಗಳ ದೇಹಗಳು ಕೃಶವಾಗುವುವು, ಆಯಸ್ಸು ಕಡಿಮೆಯಾಗುವುದು.  ಪಾಷಂಡಿಗಳ ಧರ್ಮವೇ ಎಲ್ಲೆಲ್ಲೂ ತಾಂಡವವಾಡುತ್ತಾ ಆಳುವ ಜನಗಳೇ ಭಕ್ಷಕರಂತೆ ಪ್ರವರ್ತಿಸುವರು.  ಹೀಗೆ ಅಧರ್ಮ-ಆಪತ್ತುಗಳು ಉತ್ತುಂಗಕ್ಕೇರಿದಾಗ ಸ್ವಯಂ ಭಗವಂತನೇ ಧರ್ಮ ಸಂರಕ್ಷಣೆಗಾಗಿ ಅವತರಿಸುವನು.   ೧೬ನೆಯ ಶ್ಲೋಕದಲ್ಲಿ "ಇತ್ಥಂ ಕಲೌ ಗತಪ್ರಾಯೇ ಜನೇ ತು ಖರಧರ್ಮಿಣಿ |  ಧರ್ಮತ್ರಾಣಾಯ ಸತ್ತ್ವೇನ ಭಗವಾನವತರಿಷ್ಯತಿ"  ಎಂದು ಕಲ್ಕಿ ಅವತಾರವನ್ನು ತಿಳಿಸಿದೆ.  ಮುಂದಿನ ೧೮ನೆಯ ಶ್ಲೋಕದಲ್ಲಿ "ಶಮ್ಭಲ ಗ್ರಾಮ ಮುಖ್ಯಸ್ಯ ಬ್ರಾಹ್ಮಣಸ್ಯ ಮಹಾತ್ಮನಃ | ಭವನೇ ವಿಷ್ಣುಯಶಸಃ ಕಲ್ಕಿಃ ಪ್ರಾದುರ್ಭವಿಷ್ಯತಿ" - ಶ್ರೀಹರಿಯು ಶಂಭಲವೆಂಬ ಗ್ರಾಮದಲ್ಲಿ ವಾಸಿಸುವ ವಿಷ್ಣುಯಶಸ ಎಂಬ ಹೆಸರಿನ ಮಹಾತ್ಮನಾದ ಬ್ರಾಹ್ಮಣ ಶ್ರೇಷ್ಠನ ಮನೆಯಲ್ಲಿ ’ಕಲ್ಕಿ’ ಎಂಬ ಹೆಸರಿನಿಂದ ಅವತರಿಸುವನು.  ಅಣಿಮಾ ಮೊದಲಾದ ಅಷ್ಟೈಶ್ವರ್ಯಗಳಿಂದಲೂ, ಜ್ಞಾನ ಮುಂತಾದ ಆರು ಗುಣಗಳಿಂದಲೂ ಸಂಪನ್ನನಾದ ಭಗವಂತನು, ದೇವತೆಗಳು ತನಗೆ ಸಮರ್ಪಿಸುವ "ದೇವದತ್ತ"ನೆಂಬ ಮಹಾವೇಗಶಾಲಿಯಾದ ಹಯವನ್ನೇರಿ ಭೂಮಂಡಲವೆಲ್ಲಾ ಸಂಚರಿಸುತ್ತಾ ರಾಜವೇಷದಿಂದ ತಮ್ಮನ್ನು ತಾನೇ ಮರೆಸಿಕೊಂಡಿರುವ ತಾಮಸಿಗರೆಲ್ಲರನ್ನೂ ಒಂದೇ ದಿನದಲ್ಲಿ ಸಂಹಾರ ಮಾಡುವನು ಎಂದು ವಿವರಿಸಿದೆ.  ನಂತರ ಕೇವಲ ಸಜ್ಜನರು ಮಾತ್ರ ಭೂಮಿಯಲ್ಲಿ ಉಳಿದುಕೊಳ್ಳುವರು ಮತ್ತು ಭಗವಂತನು ಮತ್ತೆ ಯಜ್ಞ ಯಾಗಾದಿಗಳನ್ನು ಪ್ರಾರಂಭಿಸಿ, ಕೃತಯುಗವನ್ನು ಆರಂಭಿಸುವನು ಎಂದು ತಿಳಿಸಲಾಗಿದೆ.
 


ವಿಷ್ಣು ಸಹಸ್ರನಾಮದಲ್ಲಿ "ಯುಗಾದಿಕೃತ್ ಯುಗಾವರ್ತೋ" ಎಂಬ ನಾಮದಿಂದ ಭಗವಂತನನ್ನು ಸ್ತುತಿಸಲಾಗಿದೆ.  ಆದಿಯಲ್ಲಿ ಬ್ರಹ್ಮ-ಸರಸ್ವತಿ ಹಾಗೂ ಪ್ರಾಣ-ಭಾರತಿಯರನ್ನು ಸೃಷ್ಟಿ ಮಾಡಿದ ಭಗವಂತನು ಯುಗಾದಿಕೃತ್ ಎಂದೆನಿಸಿಕೊಳ್ಳುವನು.  ಯುಗದ ಆದಿಗೆ ಕಾರಣನಾದ ಭಗವಂತ ಯುಗದ ಆವರ್ತನೆಗೂ ಕಾರಣನಾಗುವನು.  ದುಷ್ಟರನ್ನು ಶಿಕ್ಷಿಸುತ್ತಾ, ಯುಗದ ನಂತರ ಯುಗ, ಚತುರ್ಯುಗದ ನಂತರ ಚತುರ್ಯುಗ, ಮನ್ವಂತರದ ನಂತರ ಮನ್ವಂತರ, ಹೀಗೆ ವಿಶ್ವದ ಆವರ್ತನೆಗೆ ಕಾರಣಕರ್ತನಾಗಿ, ಪ್ರತಿಯೊಂದು ಗಂಡು ಹೆಣ್ಣಿನಲ್ಲಿ ಕುಳಿತು ಸೃಷ್ಟಿ ಚಕ್ರವನ್ನು ತಿರುಗಿಸುವ ಭಗವಂತನು ಯುಗಾವರ್ತಃ ಎನಿಸಿಕೊಳ್ಳುವನು.  ಸಮಸ್ತ ಮ್ಲೇಚ್ಛರನ್ನು ಸಂಹರಿಸಿ ಕಲಿಯುಗದ ನಂತರ ಕೃತಯುಗದ ಆವರ್ತನೆಯನ್ನು ಮಾಡುವನು ಎಂದು ವಿವರಿಸಲ್ಪಟ್ಟಿದೆ.



ಭಾಗವತ ದ್ವಿತೀಯಸ್ಕಂಧ, ೭ನೆಯ ಅಧ್ಯಾಯದಲ್ಲಿ ಕಲ್ಕ್ಯವತಾರವನ್ನು   
ಯರ್ಹ್ಯಾಲಯೇಷ್ವಪಿ ಸತಾಂ ನ ಹರೇಃ ಕಥಾಃ ಸ್ಯುಃ
ಪಾಖಣ್ಡಿನೋ ದ್ವಿಜಜನಾ ವೃಷಲಾ ನೃದೇವಾಃ |
ಸ್ವಾಹಾ ಸ್ವಧಾ ವಷಡಿತಿ ಸ್ಮ ಗಿರೋ ನ ಯತ್ರ
ಶಾಸ್ತಾ ಭವಿಷ್ಯತಿ ಕಲೇರ್ಭಗವಾನ್ಯುಗಾನ್ತೇ || - ಕಲಿಯುಗದ ಕೊನೆಯಲ್ಲಿ ಸತ್ಪುರುಷರ ಮನೆಗಳಲ್ಲಿಯೂ ಶ್ರೀಹರಿಯ ಕಥೆಯ ಶ್ರವಣ-ಕೀರ್ತನ-ಉತ್ಸವಾದಿಗಳು ನಡೆಯಲು ಅವಕಾಶವಾಗುವುದಿಲ್ಲ.  ಪಾಷಂಡಿ ಜನರೂ, ಧರ್ಮಘಾತುಕರೂ ರಾಜರಾಗುವರು.  ದೇವತೆಗಳನ್ನೂ, ಪಿತೃಗಳನ್ನೂ ಕುರಿತು ಮಾಡುವ ಯಜ್ಞ ಮತ್ತು ಶ್ರಾದ್ಧಗಳ ಸದ್ದೂ, ಸ್ವಾಹಾ-ಸ್ವಧಾ-ವಷಟ್ಕಾರಗಳೂ ಕೇಳುವುದಿಲ್ಲ.  ಇಂತಹ ಸಮಯದಲ್ಲಿ ಕಲಿಯುಗವನ್ನು ಹತೋಟಿಗೆ ತರುವುದಕ್ಕಾಗಿ ಭಗವಂತನು ಕಲ್ಕಿರೂಪದಲ್ಲಿ ಅವತರಿಸುವನು ಎಂದೂ
ಏಕಾದಶಸ್ಕಂಧ, ೪ನೆಯ ಅಧ್ಯಾಯದಲ್ಲಿ "ಶೂದ್ರಾನ್ಕಲೌ ಕ್ಷಿತಿಭುಜೋ ನ್ಯಹನಿಷ್ಯದನ್ತೇ" - ಕಲಿಯುಗದ ಅಂತ್ಯದಲ್ಲಿ ಕಲ್ಕ್ಯಾವತಾರವನ್ನು ಮಾಡಿ ಅಧರ್ಮಿಷ್ಠರಾದ ರಾಜರನ್ನು ಸಂಹರಿಸುತ್ತಾನೆ ಎಂದೂ ತಿಳಿಸಲಾಗಿದೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ  ಭಗವಂತನ ಕಲ್ಕ್ಯಾವತಾರವನ್ನು
ದುಷ್ಟಕುಲಾಂತಕ ಕಲ್ಕಿಸ್ವರೂಪ ಧರ್ಮವಿವರ್ಧನ ಮೂಲಯುಗಾದೇ
ನಾರಾಯಣಾಮಲ ಕಾರಣಮೂರ್ತೇ ಪೂರ್ಣಗುಣಾರ್ಣವ ನಿತ್ಯಸುಬೋಧ || - ದುಷ್ಟ ಶಿಕ್ಷಕನೂ ಧರ್ಮರಕ್ಷಕನೂ ಕೃತಯುಗ ಪ್ರವರ್ತಕನೂ ಆದ ಕಲ್ಕಿಯನ್ನು, ಶ್ರೇಷ್ಠನೂ ಸರ್ವಕ್ಕೂ ಕಾರಣ ಮೂರ್ತಿಯೂ, ಗುಣ ಪರಿಪೂರ್ಣನೂ ಸದಾ ಜ್ಞಾನ ಸ್ವರೂಪಿಯೂ ಆದ ಶ್ರೀಮನಾರಾಯಣನನ್ನು ವಂದಿಸುತ್ತೇನೆ ಎಂದೂ

ನವಮೋಧ್ಯಾಯದಲ್ಲಿ
ಕಲಿಮಲಹುತವಹ ಸುಭಗ ಮಹೋತ್ಸವ ಶರಣದ ಕಲ್ಕೀಶ ಹೇಭವಮಮ ಶರಣಮ್
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || -  ಕಲಿದೋಷಹಾರಕದ, ಭಾಗ್ಯವಂತರಾದ, ಕೃತಯುಗದ ಜನರಿಗೆ ಮಹದಾನಂದವನ್ನುಂಟು ಮಾಡುವ, ಶರಣಾಗತ ರಕ್ಷನಾದ, ಕಲ್ಕ್ಯಾವತಾರಿಯಾದ ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ  ಕಲ್ಕ್ಯಾವತಾರವನ್ನು
ಕ್ರುದ್ಧಾಹಿತಾಸುಹೃತಿ ಸಿದ್ಧಾಸಿ ಖೇಟಧರ ಶುದ್ಧಾಶ್ವಯಾನ ಕಮಲಾ |
ಶುದ್ಧಾಂತ ಮಾಂ ರುಚಿ ಪಿನದ್ದಾಖಿಲಾಂಗ ನಿಜಮದ್ಧಾSವ ಕಲ್ಕ್ಯಭಿಧ ಭೋಃ || - ಕಲಿಯುಗದ ಅಂತ್ಯದಲ್ಲಿ, ದುಷ್ಟಜನರ ನಿರ್ಮೂಲನಕ್ಕೆ ಖಡ್ಗಚರ್ಮಧಾರಿಯಾಗಿ ಬಿಳಿಕುದುರೆಯನ್ನೇರಿ ಸರ್ವರನ್ನು ಸಂಹರಿಸುವ, ಲಕ್ಷ್ಮೀಪತಿಯಾದ, ಅತಿಯಾದ ಕಾಂತಿಯಿಂದ ಬೆಳಗುತ್ತಿರುವ ಕಲ್ಕಿನಾಮಕ ಶ್ರೀ ಪರಮಾತ್ಮನೆ, ನಿನ್ನ ಭಕ್ತನಾದ ನನ್ನನ್ನು ಚೆನ್ನಾಗಿ ರಕ್ಷಿಸು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ  ಕಲ್ಕ್ಯಾವತಾರವನ್ನು
ಮ್ಲೇಚ್ಛನಿವಹನಿಧನೇ ಕಲಯಸಿ ಕರವಾಲಂ
ಧೂಮಕೇತುಮಿವ ಕಿಮಪಿ ಕರಾಲಂ
ಕೇಶವ ಧೃತ ಕಲ್ಕಿ ಶರೀರ ಜಯ ಜಗದೀಶ ಹರೇ || -    ಕಲಿಯುಗದ ಕಡೆಯಲ್ಲಿ ಮ್ಲೇಚ್ಛರ ನಾಶಕ್ಕಾಗಿ ಭಯಾನಕ ಖಡ್ಗವನು ಪಿಡಿದು ಧೂಮಕೇತುವಿನಂತೆ ಅವತರಿಸಿದ ಕಲ್ಕಿ ರೂಪದ ಹರಿಯೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.


ಮಾನವನ ವಿಕಾಸಕ್ಕೆ ಭಗವಂತನ  ಕಲ್ಕ್ಯಾವತಾರವನ್ನು ಸಮನ್ವಯಿಸಿಕೊಂಡಾಗ ಪ್ರಪಂಚದ ಭವಿಷ್ಯವನ್ನು ಸೂಚಿಸುವುದು.  ವಿಕಾಸದ ಅಬ್ಬರ ಹಾಗೂ ಭರದಲ್ಲಿ ಮಾನವನು ಮಿತಿಮೀರಿದಾಗ, ಪ್ರಕೃತಿಯು ತನ್ನನ್ನು ಸಹಜ ಸ್ಥಿತಿಗೆ ತಂದುಕೊಳ್ಳಲು ನಡೆಸುವ ಹೋರಾಟವೆಂದು ಅರ್ಥೈಸಬಹುದೇನೋ.  ಮಾನವನು ಪ್ರಳಯಾಂತಕನಾಗಿ ಪ್ರಕೃತಿಗೇ ಹಾನಿಯನ್ನು ಉಂಟುಮಾಡುವಾಗ, ಕಾಲವನ್ನು ಗೆಲ್ಲುವತ್ತ ಸಾಗಿದಾಗ ಹಿಂಸೆ ಮತ್ತು ಅಧರ್ಮಗಳು ವಿಜೃಂಭಿಸುವುವು.  ಇಂತಹ ತೀವ್ರತರವಾದ ವಿಷಮ ಪರಿಸ್ಥಿತಿಯಲ್ಲಿ ಖಡ್ಗವನ್ನು ಝಳಪಿಸುತ್ತಾ, ಬಿಳಿಯ ಕುದುರೆಯನೇರಿ ಬರುವ ಕಲ್ಕಿ ರೂಪಿ ಭಗವಂತನು ಶಾಂತಿಯನ್ನು ಸ್ಥಾಪಿಸಿ ಮತ್ತೆ ಕೃತಯುಗ ಅಥವಾ ಸತ್ಯಯುಗದ ಸ್ಥಾಪನೆ ಮಾಡುವನು ಎಂದು ತಿಳಿಯಬಹುದಾಗಿದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ಶರೀರದ ಉಪಸ್ಥದಲ್ಲಿ ಕಲ್ಕಿ ರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು  ಕಲ್ಕಿಯ ರೂಪದಿಂದವತರಿಸಿದಾಗ ರಮಾದೇವಿಯು ’ಪ್ರಭಾ’ ಆಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ 

ಕಲಿಯ ವ್ಯಾಪಾರ ವೆಗ್ಗಳವಾಗೆ ತಿಳಿದು ’ಶಂ-
ಫಲಿ’ ಎಂಬ ಪುರದಿ ದ್ವಿಜನಲ್ಲಿ | ದ್ವಿಜನಲ್ಲಿ ಜನಿಸಿ ಕಲಿ-
ಮಲವ ಹರಿಸಿದ ಕಲ್ಕಿ ದಯವಾಗೋ || - ದೈತ್ಯಧಮನಾದ ಕಲಿಯ ಶಕ್ತಿಯಿಂದಾಗುವ ದುಷ್ಕರ್ಮಗಳು ಮಿತಿಮೀರಲು, ಈ ಪರಿಸ್ಥಿತಿಯನ್ನು ತಿಳಿದ ಸರ್ವಜ್ಞನಾದ ಶ್ರೀಹರಿಯು ಶಂಭಲವೆಂಬ ಗ್ರಾಮದಲ್ಲಿ, ಬ್ರಾಹ್ಮಣನಲ್ಲಿ ಅವತರಿಸಿ ಕಲಿಯ ದೋಷವನ್ನು, ಪರಿಹಾರ ಮಾಡಿದ ಕಲ್ಕಿರೂಪನಾದ ಹೇ ಭಗವನ್ ದಯವಾಗೋ ಎಂದು ಪ್ರಾರ್ಥಿಸಿದ್ದಾರೆ.

ಜೀವ ಕುಲವನ್ನೂ, ಜೀವ ಕುಲವು ಸಾಧನೆಯ ಮೂಲಕ ತನ್ನ ಅಂತಿಮ ಗುರಿಯನ್ನು ತಲುಪಲು ಬೇಕಾಗಿರುವ ಭೂಮಂಡಲವನ್ನೂ,  ಸಾತ್ವಿಕ ಸಜ್ಜನರನ್ನೂ ಸದಾ ಸರ್ವದಾ ಸಂರಕ್ಷಣೆಯನ್ನು ಮಾಡಲು ಭಗವಂತನು ನಾನಾ ಅವತಾರಗಳನ್ನು ಆವಿರ್ಭವಿಸುತ್ತಾ, ತನ್ನ ಲೀಲಾ ವಿನೋದಗಳನ್ನು ಪ್ರಕಟಿಸುತ್ತಾ, ಪರಮ ಕಾರುಣ್ಯವನ್ನು ಹರಿಸುವನು.



ಚಿತ್ರಕೃಪೆ : ಅಂತರ್ಜಾಲ


https://en.wikipedia.org/wiki/Kalki
https://en.wikipedia.org/wiki/Kalki_Purana
http://www.sumadhwaseva.com/dashavatara/kalkyaavata/
http://www.indiaprofile.com/monuments-temples/kalkitemple.htm
http://theinnerworld.in/travel/the-coming-of-bhagwan-kalki/

Sunday, September 6, 2015

ಕರುಣಾ ಸಂಧಿ - ೩೦ ನೇ ಪದ್ಯ ( ಬುದ್ಧಾವತಾರ )

ತತ: ಕಲೌ ಸಂಪ್ರವೃತ್ತೇ ಸಂಮೋಹಾಯ ಸುರದ್ವಿಷಾಂ |
ಬುದ್ಧೋ ನಾಮ್ನಾಜಿನಸುತ: ಕೀಕಟೇಷು ಭವಿಷ್ಯತಿ ||


ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 

ಕಾಯ್ದ ಸುಜನರನು ||೩೦||


ತ್ರಿಪುರವ ಹಾನಿಗೈಸಿದ ನಿಪುಣ - ಶ್ರೀಕೃಷ್ಣನ ಅವತಾರ ಸಮಾಪ್ತಿಯಾದ ನಂತರ, ಒಂಬತ್ತನೆಯ ಅವತಾರವಾಗಿ ಭಗವಂತನು ಬುದ್ಧಾವತಾರವನ್ನು ತಳೆದನು.   ಬುದ್ಧನಾಗಿ ಅವತರಿಸಿದ ಭಗವಂತನು ಧರ್ಮದಂತೆ ಕಾಣುವ ಅಧರ್ಮವನ್ನು, ಧರ್ಮಾಭಾಸವನ್ನು, ಪಾಷಂಡಧರ್ಮವನ್ನು ಅಸುರರಿಗೆ ಬೋಧಿಸುವನು.  ಅಸುರ ಸ್ತ್ರೀಯರ ಎದುರಿಗೆ ಪಾತಿವ್ರತ್ಯ ಧರ್ಮವನ್ನು ತೆಗಳುವನು. 

ತಾರಕಾಸುರನಿಗೆ ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿ ಎಂಬ ಮೂವರು ಮಕ್ಕಳು.  ಸುರರಿಂದ ಸೋಲಿಸಲ್ಪಟ್ಟ ಅಸುರರು ಮಯನನ್ನು ಮೊರೆಹೊಕ್ಕಾಗ, ಮಯನು ತಾರಾಕ್ಷನಿಗೆ ಬಂಗಾರದಿಂದ, ಕಮಲಾಕ್ಷನಿಗೆ ಬೆಳ್ಳಿಯಿಂದ ಮತ್ತು ವಿದ್ಯುನ್ಮಾಲಿಗೆ ಕಬ್ಬಿಣದಿಂದ ಮೂರು ಸಂಚಾರಿ ಪಟ್ಟಣಗಳನ್ನು ನಿರ್ಮಿಸುವನು.  ಬ್ರಹ್ಮದೇವರಿಂದ ಮೂರು ಪಟ್ಟಣಗಳು ಒಂದೆಡೆ ಸೇರಿದಾಗ, ಒಂದೇ ಬಾಣದಿಂದ ಏಕಕಾಲದಲ್ಲಿ ಹೊಡೆದರೆ ಮಾತ್ರ ನಾಶವಾಗುವುವೆಂಬ ವರ ಪಡೆದಿರುವರು.  ಮಯನ ಉಪದೇಶದಿಂದ ಅಸುರರು ಬಹುಕಾಲ ಧರ್ಮಮಾರ್ಗದಲ್ಲಿರುವರು.  ಅವರಿಗೆ ಅವರ ಪತ್ನಿಯರ ಪಾತಿವ್ರತ್ಯದ ಬಲವೂ ಸೇರಿ ಅವರನ್ನು ಕೊಲ್ಲುವುದು ಯಾರಿಂದಲೂ ಸಾಧ್ಯವಿರುವುದಿಲ್ಲ.   ಇದೆಲ್ಲಾ ಬಲದಿಂದ ಕೊಬ್ಬಿದ ಅಸುರರು ತಮ್ಮ ಸಂಚಾರಿ ಪಟ್ಟಣಗಳಲ್ಲಿ ಅಡಗಿ ಕುಳಿತುಕೊಂಡು ದೇವತೆಗಳನ್ನು ಪೀಡಿಸುವರು.  ದೇವತೆಗಳು ರುದ್ರದೇವರನ್ನು ರಕ್ಷಿಸೆಂದು ಪ್ರಾರ್ಥಿಸಲು, ಶಿವನು ಪಾಶುಪತಾಸ್ತ್ರವನ್ನು ಪ್ರಯೋಗಿಸುವನು.  ಬಾಣಾಗ್ನಿಯಿಂದ ಉರಿದು ತ್ರಿಪುರವಾಸಿಗಳಾದ ಅಸುರರು ಮೃತರಾಗುವರು.  ಆಗ ಪುನಃ ಅಸುರರ ರಕ್ಷಣೆಗೆ ಬರುವ ಮಯನು ಸಿದ್ಧಾಮೃತರಸ ಕೂಪವನ್ನು ನಿರ್ಮಿಸಿ, ಸತ್ತ ಅಸುರರನ್ನು ಅದರಲ್ಲಿ ಅದ್ದಿ ಮತ್ತೆ ಬದುಕಿಸುವನು.  ಹೀಗೆ ಬದುಕಿದ ಅಸುರರು ದ್ವಿಗುಣ ಶಕ್ತಿಯಿಂದ, ಬಲ, ದರ್ಪದಿಂದ ಬೆಳೆದು ನಿಂತು, ಸಿಡಿಲನ್ನೇ ಕುಡಿಯುವಂತೆ ಉರಿಯುತ್ತಾ ಬರುವರು.  ಭಗ್ನ ಸಂಕಲ್ಪರಾದ ರುದ್ರದೇವರು ಹತಾಶರಾಗಿ ಕುಳಿತುಬಿಡುವರು.  ಆ ಸಮಯದಲ್ಲಿ ಭಗವಂತನಾದ ಶ್ರೀಹರಿಯು ತಾನು ಅತಿಶಯವಾದ ಆಕಳ ರೂಪವನ್ನು ಧರಿಸಿ, ಕರುವಿನ ರೂಪದಲ್ಲಿ ಬ್ರಹ್ಮದೇವರನ್ನು ಕರೆದುಕೊಂಡು ಬಂದು ಸಿದ್ಧಾಮೃತರಸದ ಕೊಳದಲ್ಲಿದ್ದ ಸಮಸ್ತ ರಸವನ್ನೂ ಹೀರಿ ಬಿಡುವರು.  ವಿಚಿತ್ರವೂ, ಅತಿಶಯವೂ ಆಗಿದ್ದ ಈ ಆಕಳು ಮತ್ತು ಕರುವನ್ನು ಕಾವಲಿನವರು ನೋಡಿದರೂ ಕೂಡ, ಮೋಡಿಗೊಳಗಾದವರಂತೆ, ಸುಮ್ಮನೆ ನೋಡುತ್ತಾ ನಿಲ್ಲುವರು.  ಹೀಗೆ ಆಕಳನ್ನು ಓಡಿಸದೆ, ಕಾವಲಿನವರು ಭ್ರಮೆಯಿಂದ ನೋಡುತ್ತಿರುವಂತೆಯೇ ಗೋವು ಹಾಗೂ ವತ್ಸ ಮಾಯವಾಗುವರು.  ಇದರಿಂದ ಮಯನು ಇದು ಭಗವಂತನದೇ ಮಹಿಮೆಯೆಂದು ಅರಿತುಕೊಂಡು ಚಿಂತಿಸುತ್ತಿದ್ದ ದೈತ್ಯರಿಗೆ ’ದೇವತೆಯಾಗಲೀ, ಅಸುರನಾಗಲೀ ಭಗವಂತನು ಕೊಟ್ಟ ಸುಖ ಹಾಗೂ ದುಃಖಗಳನ್ನು ಅನುಭವಿಸಲೇ ಬೇಕು’ ಎಂದು ತಿಳಿಸುವನು. ಭಗವಂತನು ಅಸುರರ ಪತ್ನಿಯರಿಗೆ ಯಜ್ಞವು ಪಾಪಕರವಾದ ಪಶುಹಿಂಸಾರೂಪವಾದುದು.  ಪತ್ನಿಯಾದವಳು ಹೀಗೆ ಪತಿ ಆಚರಿಸುವ ಯಜ್ಞ ಕಾರ್ಯದಲ್ಲಿ ಪತಿಯೊಂದಿಗೆ ಇರುವವಳಾದ್ದರಿಂದ ಪತಿಪತ್ನಿ ಭಾವಕ್ಕೆ ಮಹತ್ವ ನೀಡಬಾರದೆಂದು ಬೋಧಿಸುವನು.  ಭಗವಂತನ ಬೋಧನೆಯಿಂದ ತ್ರಿಪುರಾಸುರರಿಗೆ ಪತ್ನಿಯರ ಪಾತಿವ್ರತ್ಯ ಧರ್ಮದ ರಕ್ಷೆ ಇಲ್ಲವಾಗುವುದು.  ಅದೇ ಸಮಯದಲ್ಲಿ ಭಗವಂತನು ರುದ್ರದೇವರಿಗೆ ಭೂದೇವಿ ಹಾಗೂ ಸಮಸ್ತ ದೇವತಾ ಶಕ್ತಿಗಳಿಂದ ಯುದ್ಧೋಪಕರಣಗಳನ್ನು ಒದಗಿಸಿ ಬಲವನ್ನು ಅನುಗ್ರಹಿಸುವನು.  ರಥ, ಸೂತ, ಧ್ವಜ, ಧನುಸ್ಸು ಮತ್ತು ಕವಚಗಳಿಗೆ ಅಭಿಮಾನಿ ದೇವತೆಗಳಾಗಿ ನಿಂತ ದೇವತೆಗಳಂತೆಯೇ ಶ್ರೀಹರಿಯೂ ತಾನು ಕೂಡ "ಬಾಣ"ರೂಪವನ್ನು ಧರಿಸುವನು.  ಶಂಕರನು ಅಭಿಜಿನ್ಮುಹೂರ್ತದಲ್ಲಿ ನಾರಾಯಣ ಬಾಣದಿಂದ ತ್ರಿಪುರಗಳನ್ನು ಸುಟ್ಟು, ತ್ರಿಪುರಾರಿ ಎನಿಸುವನು.   ಬಾಣದ ತುದಿಯಲ್ಲಿ ಭಗವಂತನು ತಾನೆ ಬೆಂಕಿಯಾಗಿ ನಿಂತು ತ್ರಿಪುರಗಳ ದಹನ ಕಾರ್ಯ ಮಾಡಿ ಅದರ ಯಶಸ್ಸನ್ನು ಶಂಕರಿನಿಗಿತ್ತು ’ತ್ರಿಪುರಾರಿ’ ಎನಿಸುವಂತೆ ಮಾಡುವನು.  ಶಿವನು ತ್ರಿಪುರಾಸುರರ ಮೂರು ಪಟ್ಟಣಗಳನ್ನು ಭಗವಂತನ ತೇಜಸ್ಸಿಗೆ ಆಹುತಿಯಾಗಿಸುವನು. 

ತ್ರಿಪುರಾಸುರರು ಶಿವನಿಂದ ಹತರಾದ ಮೇಲೆ ಭೂತಳದಲ್ಲಿ ಪುನಃ ಹುಟ್ಟುವರು.  ದಿವ್ಯವಾದ ತತ್ವಜ್ಞಾನವನ್ನು ಹೊಂದಿ, ಮೋಕ್ಷ ಸಾಧನೆಯಲ್ಲಿ ನಿರತರಾಗಿ ಸಾವಿರಾರು ದುಷ್ಟರಿಗೆ ತತ್ವಜ್ಞಾನದ ಉಪದೇಶ ಮಾಡುವರು.  ತ್ರಿಪುರಾಸುರರಲ್ಲಿ ಮೊದಲನೆಯವನಾದ ತಾರಾಕ್ಷನು ಶುದ್ಧೋದನನೆಂಬ ಹೆಸರುಳ್ಳ ಜಿನನಾಗಿ ಹುಟ್ಟುವನು.  ಅವನ ಮಗನಾಗಿ ಭಗವಂತನು ಆವಿರ್ಭವಿಸುವನು.  ಶುದ್ಧೋದನನಿಗೆ ಹುಟ್ಟಿದ್ದ ಮಗವನ್ನು ದೂರ ಸರಿಸಿ, ಭಗವಂತನು ಶಿಶುರೂಪದಲ್ಲಿ ಪ್ರಕಟಗೊಳ್ಳುವನು. ದಾನವರಿಗೆ ದಾರಿ ತಪ್ಪಿಸಿ, ಇವರ ಕೈವಶವಾಗಿ ಬಂಧನದಲ್ಲಿದ್ದ "ಜ್ಞಾನ"ದ ಬಿಡುಗಡೆಗಾಗಿ ಭಗವಂತನು ಬುದ್ಧಾವತಾರ ತಾಳುವನು.  ಆಗ ತಾನೆ ಹುಟ್ಟಿದ ಮಗು ಶುದ್ಧೋದನ ಮತ್ತು ಇತರರು ಮಾಡುತ್ತಿದ್ದ ವೈದಿಕ ಕರ್ಮಗಳ ಆಚರಣೆಯನ್ನು ಕಂಡು ಗಟ್ಟಿಯಾಗಿ ನಗಲು ಪ್ರಾರಂಭಿಸುವುದು.  ಆಶ್ಚರ್ಯಗೊಂಡ ಜಿನ ಮೊದಲಾದವರು ಮಗುವನ್ನು ಯಾರೆಂದು ಕೇಳಲು ಮಗು ತಾನು ’ಬುದ್ಧ’ನೆಂದು ಉತ್ತರಿಸುವುದು.  ಭಗವಂತನು ದೇವತೆಗಳ ಸಹಾಯದಿಂದ ಅಸುರರಲ್ಲಿ ತನ್ನದೇ ರೂಪದ ವಿಷಯದಲ್ಲಿ ಭರವಸೆ ಮೂಡಿಸಲು ತನ್ನ ಜೊತೆ ಯುದ್ಧ ಮಾಡುವಂತೆ ಪ್ರೇರೇಪಿಸುವನು.  ಸಮಸ್ತ ದೇವತೆಗಳೂ ತನ್ನ ಮೇಲೆ ಪ್ರಯೋಗಿಸಿದ ಆಯುಧಗಳೆಲ್ಲವನೂ ಶಿಶುರೂಪಿ ಭಗವಂತನು ನುಂಗುವನು.  ವಿಷ್ಣು ರೂಪಿ ಭಗವಂತನು ಶಿಶುವಿನ ಮೇಲೆ ಪ್ರಯೋಗಿಸಿದ ಸುದರ್ಶನ ಚಕ್ರವನ್ನು ಹಿಡಿದು, ಆಸನವನ್ನಾಗಿ ಮಾಡಿ ಅದರ ಮೇಲೆ ಕುಳಿತುಕೊಳ್ಳುವನು.  ದೇವತೆಗಳು ನೀನೇ ಸರ್ವೋತ್ತಮನೆಂದು ತಿಳಿಸಿ, ಹೊರಟುಹೋಗುವರು.  ಇದರಿಂದ ಜಿನ ಮೊದಲಾದ ದೈತ್ಯರು ಭಗವಂತನ ಮಾತುಗಳನ್ನು ಪ್ರಮಾಣವನ್ನಾಗಿ ನಂಬುವರು.  ಭಗವಂತ ಬೋಧಿಸಿದ ಸರ್ವವೂ ಶಾಸ್ತ್ರಮಯವಾಗಿದ್ದರೂ ಕೂಡ, ಅಸುರರು ಅದರ ಅಂತರಾರ್ಥ ತಿಳಿಯದೇ ವಿಪರೀತಾರ್ಥವನ್ನು ತಿಳಿದು, ಮೋಹಕ್ಕೆ ಒಳಗಾಗುವರು.    ಹೀಗೆ ದೇವತೆಗಳಿಗೆ ಅಂತರಾರ್ಥವನ್ನು ತಿಳಿಯುವಂತೆ ಬೋಧಿಸಿದ ತತ್ವವನ್ನು "ಪ್ರಶಾಂತ ವಿದ್ಯೆ"ಯೆಂದು ಕರೆಯುವರು.  ಭಗವಂತನು, ಅಸುರರಿಗೆ, ಅಧರ್ಮಿಗಳಿಗೆ ಮೋಹಕವಾಗಿ ಮಿಥ್ಯಾಜ್ಞಾನವನ್ನು ಬಣ್ಣಿಸುವನು.  ತಾಮಸ ಮೂಲದವರಾದ ಕಾರಣ, ಸಾತ್ವಿಕಾರ್ಥವನ್ನು ಅರಿಯುವ ಅವಕಾಶವಿರುವುದಿಲ್ಲ.  ದುಷ್ಟರಿಗೆ ಪವಿತ್ರವಾದ ತತ್ವಜ್ಞಾನವು ದೊರೆಯದಂತೆ ಮಾಡಲೆಂದೇ ಬುದ್ಧಾವತಾರವಾಯಿತು ಎಂದು ತಿಳಿಯಬೇಕು.

ಭಾಗವತ ೨ನೆಯ ಸ್ಕಂಧ ೭ನೆಯ ಅಧ್ಯಾಯದಲ್ಲಿ ಬುದ್ಧಾವತಾರವನ್ನು

ದ್ವೇವದ್ವಿಷಾಂ ನಿಗಮವರ್ತ್ಮನಿ ನಿಷ್ಠಿತಾನಾಂ
ಪೂರ್ಭಿರ್ಮಯೇನ ವಿಹಿತಾಭಿರದೃಶ್ಯತೂರ್ಭಿಃ |
ಲೋಕಾನ್ ಘ್ನತಾಂ ಮತಿವಿಮೋಹಮತಿಪ್ರಲೋಭಂ
ವೇಷಂ ವಿಧಾಯ ಬಹು ಭಾಷ್ಯತ ಔಪಧರ್ಮ್ಯಮ್ || - ದೇವತೆಗಳ ಶತ್ರುಗಳಾದ ದಾನವರು ಮಾಯಾಸುರನು ಮಾಡಿಕೊಟ್ಟ ಅದೃಶ್ಯವಾದ ವೇಗವುಳ್ಳ ಪುರಗಳಲ್ಲಿ ವಾಸಿಸುತ್ತಾ ಮನುಷ್ಯರನ್ನು ಹಿಂಸಿಸುವಾಗ ಭಗವಂತನು ಜನರ ಮನಸ್ಸಿನಲ್ಲಿ ಮೋಹವನ್ನೂ, ಪ್ರಲೋಭನೆಯನ್ನೂ ಉಂಟು ಮಾಡುವ ವೇಷವನ್ನು ಧರಿಸಿ ಬುದ್ಧದೇವರ ರೂಪದಲ್ಲಿ ಬಹುಪ್ರಕಾರದ ಉಪಧರ್ಮಗಳನ್ನು ಉಪದೇಶ ಮಾಡುವನು ಎಂದೂ 

ಏಕಾದಶಸ್ಕಂಧ ೪ನೆಯ ಅಧ್ಯಾಯದಲ್ಲಿ "ವಾದೈರ್ವಿಮೋಹಯತಿ ಯಜ್ಞಕೃತೋSತದರ್ಹಾನ್" - ಆದಿಪುರುಷನು ಬೌದ್ಧಾವತಾರವನ್ನೆತ್ತಿ ಯಜ್ಞಕ್ಕೆ ಅನಧಿಕಾರಿಗಳಾದವರು ಯಜ್ಞ ಮಾಡುವುದನ್ನು ನೋಡಿ ಅನೇಕ ಪ್ರಕಾರವಾದ ತರ್ಕ-ವಿತರ್ಕಗಳಿಂದ ಅವರನ್ನು ಯಜ್ಞ ಕರ್ಮದಿಂದ ವಿಮುಖರನ್ನಾಗಿ ಮಾಡುವನು ಎಂದೂ ಉಲ್ಲೇಖಿಸಲಾಗಿದೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ  ಭಗವಂತನ ಬೌದ್ಧಾವತಾರವನ್ನು
ಚಂದ್ರಶತಾನನ ಕುಂದಸುಹಾಸ ನಂದಿತ ದೈವತಾSSನಂದ ಸುಪೂರ್ಣ
ದೈತ್ಯ ವಿಮೋಹಕ ನಿತ್ಯಸುಖಾದೇ ದೇವಸುಬೋಧಕ ಬುದ್ಧ ಸ್ವರೂಪ || - ನೂರಾರು ಚಂದ್ರರಷ್ಟು ಪ್ರಕಾಶಮಾನನಾದ ಮಲ್ಲಿಗೆ ಹೂವಿನಂತೆ ಮಂದಸ್ಮಿತವುಳ್ಳ ದೇವತೆಗಳಿಗೆ ಸಂತೋಷಕಾರಿಯಾದ ಪೂರ್ಣಾನಂದ ಸ್ವರೂಪಿಯಾದ ಶ್ರೀಕೃಷ್ಣನನ್ನು, ದೈತ್ಯರಿಗೆ ಮೋಹಪ್ರದನೂ, ಜ್ಞಾನಿಗಳಿಗೆ ಮೋಕ್ಷಪ್ರದನೂ, ದೇವತೆಗಳಿಗೆ ಜ್ಞಾನಪ್ರದನೂ ಆದ ಬುದ್ಧನನ್ನು ನಮಸ್ಕರಿಸುತ್ತೇನೆ ಎಂದೂ

ನವಮೋಧ್ಯಾಯದಲ್ಲಿ
ದಿತಿಸುತ ಮೋಹನ ವಿಮಲ ವಿಬೋಧನ ಪರಗುಣ ಬುದ್ಧ ಹೇ ಭವ ಮಮ ಶರಣಮ್
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ದೈತ್ಯರನ್ನು ಮೋಹಗೊಳಿಸಿದ ಬ್ರಹ್ಮಾದಿಗಳಿಗೆ ಜ್ಞಾನಪ್ರದನಾದ ಜ್ಞಾನಾನಂದಾದಿಗುಣಗಳುಳ್ಳ ಬುದ್ಧಾವತಾರಿಯಾದ ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ  ಬೌದ್ಧಾವತಾರವನ್ನು
ಬುದ್ಧಾವತಾರ ಕವಿ ಬದ್ಧಾನುಕಂಪ ಕುರು ಬದ್ಧಾಂಜಲೌ ಮಯಿ ದಯಾಂ
ಶೌದ್ಧೋದನಿ ಪ್ರಮುಖ ಸೈದ್ಧಾಂತಿಕಾಸುಗಮ ಬೌದ್ಧ, ಗಮ ಪ್ರಣಯನ || - ಅಜ್ಞಾನಿಗಳಿಗೆ ತಿಳಿಯಲು ಅಸಾಧ್ಯವಾದ ಬೌದ್ಧಾಗಮವನ್ನು ರಚಿಸಿದ, ಜ್ಞಾನಿಗಳಲ್ಲಿ ಅನುಗ್ರಹ ಬುದ್ಧಿಯಿಂದಿರುವ ಬುದ್ಧರೂಪಿಯಾದ ಪರಮಾತ್ಮನೇ ಕೈಮುಗಿದು ಬೇಡುತ್ತಿರುವ ನನ್ನನ್ನು ಅನುಗ್ರಹಿಸು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ  ಬೌದ್ಧಾವತಾರವನ್ನು
ನಿಂದಸಿ ಯಜ್ಞ ವಿಧೇರಹಹ ಶ್ರುತಿಜಾತಂ
ಸದಯ ಹೃದಯದರ್ಶಿತ ಪಶುಘಾತಂ
ಕೇಶವ ಧೃತ ಬುದ್ಧ ಶರೀರ ಜಯ ಜಗದೀಶ ಹರೇ || -    ಶ್ರುತಿ ಜನ್ಯ ಯಜ್ಞ ವಿಧೇಯಕವೆನ್ನುತ್ತ ಪ್ರಾಣಿಹತ್ಯೆ ಮಾಡುವವರನ್ನು ಖಂಡಿಸುವ ಸಹೃದಯಿ ಬುದ್ಧ ರೂಪನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಮಾನವನ ವಿಕಾಸಕ್ಕೆ ಭಗವಂತನ  ಬೌದ್ಧಾವತಾರವನ್ನು ಸಮನ್ವಯಿಸಿಕೊಂಡಾಗ ವಿಕಾಸಗೊಂಡಿರುವ ಮಿದುಳಿನಿಂದ ಅತಿ ಜ್ಞಾನ ಪಡೆದು ಅದನ್ನು ದುರುಪಯೋಗ ಪಡಿಸಿಕೊಂಡು, ಬಂಧನದಲ್ಲಿ ಸಿಲುಕಿರುವಾಗ,  ಬಿಡುಗಡೆಯ ದಾರಿಯನ್ನು ಸೂಚಿಸುವುದು.  ಜ್ಞಾನವು ಅಪಾತ್ರರ, ಸ್ವಾರ್ಥಿಗಳ ವಶವಾದಾಗ, ನಡೆಯುವುದೆಲ್ಲಾ ಅನಾಚಾರ, ಅನೀತಿ, ಅಧರ್ಮಗಳೇ ಆಗುವುವು.  ಗಟ್ಟಿಯಲ್ಲದ, ಪೊಳ್ಳು ಸಂಸ್ಕಾರ, ಸಂಸ್ಕೃತಿಗಳು ಅಟ್ಟಹಾಸ ಮಾಡುತ್ತಾ ಜ್ಞಾನವನ್ನು ಬಂಧಿಸುವುವು.  ಪ್ರದರ್ಶನದ, ಡಂಬಾಚಾರದ, ಅನಾಗರಿಕರ ವಶದಿಂದ ಜ್ಞಾನದ ಬಿಡುಗಡೆ ಮಾಡುವುದೇ ಬೌದ್ಧಾವತಾರವೆನ್ನಬಹುದು.  ಶುದ್ಧವಾದ ಜ್ಞಾನವನ್ನು ಕಾಪಾಡುವ ಭಗವಂತನು, ಸಾತ್ವಿಕರನ್ನು ರಕ್ಷಿಸುವ ಸಲುವಾಗಿ, ಧರ್ಮವನ್ನು ಸಂಸ್ಥಾಪಿಸುವ ಸಲುವಾಗಿ, ಬುದ್ಧನಾಗಿ ಅವತರಿಸುವನೆಂದು ತಿಳಿಯಬಹುದು.  ಭಗವದ್ಗೀತೆಯಲ್ಲಿ ಭಗವಂತ ಸ್ವತಃ ನುಡಿದಿರುವ   "ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ" ಎಂಬ ಭರವಸೆಯ ಮಾತುಗಳು ಬುದ್ಧಾವತಾರಕ್ಕೆ ಬೆಳಕು ಚೆಲ್ಲುವುದೆಂದು ತಿಳಿಯಬಹುದು.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ಶರೀರದ ಗುದಭಾಗದಲ್ಲಿ ಬುದ್ಧ ರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು  ಬುದ್ಧನ ರೂಪದಿಂದವತರಿಸಿದಾಗ ರಮಾದೇವಿಯು ’ದೇವಕಿ’ಯಾಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ  

ಜಿನನೆಂಬ ದನುಜ ಸಜ್ಜನ ಕರ್ಮವನು ಮಾಡೆ
ಜನಿಸಿ ಅವರಲ್ಲಿ ದುರ್ಬುದ್ಧಿ | ದುರ್ಬುದ್ಧಿ ಕವಿಸಿದ
ವಿನುತ ಶ್ರೀಬುದ್ಧ ದಯವಾಗೋ || - ಜಿನನೆಂಬ ದಾನವನು ಸುಜೀವರಿಗೆ ಅರ್ಹವಾದ ವೇದೋಕ್ತ ಕರ್ಮಗಳನು ಮಾಡುತ್ತಿರಲು, ಅವತರಿಸಿ, ಜಿನ ಮತ್ತು ಅವನ ಅನುಯಾಯಿಗಳಲ್ಲಿ, ದುರ್ಬುದ್ಧಿ ಕವಿಸಿದ, ಮಿಥ್ಯಾಜ್ಞಾನವು ಅವರನ್ನು ಆವರಿಸುವಂತೆ ಮಾಡಿದ, ಬ್ರಹ್ಮಾದಿಗಳಿಂದ ವಿಶೇಷವಾಗಿ ಸ್ತುತ್ಯನಾದ, ಬುದ್ಧರೂಪೀ ಶ್ರೀಹರಿಯೇ ಕೃಪೆಮಾಡು ಎಂದು ಪ್ರಾರ್ಥಿಸಿದ್ದಾರೆ.

ದಶಾವತಾರದಲ್ಲಿ ಉಲ್ಲೇಖಿಸಲ್ಪಟ್ಟಿರುವ ಒಂಭತ್ತನೆಯ ಅವತಾರವಾದ ಬುದ್ಧಾವತಾರದ ಭಗವಂತನನ್ನು ಆಗಲೇ ಹುಟ್ಟಿದ ಶಿಶುರೂಪದಲ್ಲಿಯೂ, ಸುರರ ಆಯುಧಗಳನ್ನೆಲ್ಲಾ ನುಂಗುತ್ತಿರುವ ರೂಪದಲ್ಲಿಯೂ, ವಿಷ್ಣುವಿನ ಸುದರ್ಶನ ಚಕ್ರವನ್ನು ಆಸನವನ್ನಾಗಿ ಮಾಡಿಕೊಂಡ ರೂಪವನ್ನೂ, ನಗುಮುಖದಿಂದ ಜ್ಞಾನಮುದ್ರೆ ತೋರುತ್ತಾ ಉಪದೇಶ ಮಾಡುವ ರೂಪವನ್ನೂ ಅನುಸಂಧಾನ ಮಾಡಿಕೊಂಡು ಧ್ಯಾನಿಸಿ, ಪ್ರಾರ್ಥಿಸಬೇಕೆಂದು ಶ್ರೀಮದಾಚಾರ್ಯರು ತಿಳಿಸಿರುವರು.

ಅಗ್ನಿ ಪುರಾಣದಲ್ಲಿ ಬುದ್ಧರೂಪಿ ಭಗವಂತನು ಗೌರವರ್ಣದಿಂದ ಶೋಭಿಸುತ್ತಿರುವನು, ಪೀತ ವಸ್ತ್ರಧಾರಿಯೆನಿಸುವನು, ಪದ್ಮಾಸನದಲ್ಲಿ ಕುಳಿತು, ಒಂದು ಕರವು ಅಭಯಮುದ್ರೆಯಿಂದಲೂ, ಇನ್ನೊಂದು ಕರವು ಆಶೀರ್ವಾದರೂಪದಿಂದಲೂ ಶೋಭಿಸುವುದೆಂದು ವರ್ಣಿಸಲಾಗಿದೆ.  ಬುದ್ಧಾವತಾರದಲ್ಲಿ ಭಗವಂತನು ಶಸ್ತ್ರಧಾರಣೆಯನ್ನು ಮಾಡಲೇ ಇಲ್ಲ.  ಬೋಧ ಮಾಡಿ, ಉಪದೇಶ ಕೊಟ್ಟು ಮಹಿಮೆಯನ್ನು ತಿಳಿಸಿರುವನು.
 ಚಿತ್ರಕೃಪೆ : ಅಂತರ್ಜಾಲ