Sunday, September 27, 2015

ಕರುಣಾ ಸಂಧಿ - ೩೦ ನೇ ಪದ್ಯ ( ಕಲ್ಕ್ಯಾವತಾರ )

ಮೀನ ಕೂರ್ಮ ವರಾಹ ನರಪಂ- ಚಾನನಾತುಳಶೌರ್ಯ ವಾಮನ ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ | ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 
ಕಾಯ್ದ ಸುಜನರನು ||೩೦||
ಕಲಿಮುಖ  ದಾನವರ   ಸಂಹರಿಸಿ   ಧರ್ಮದಿ  ಕಾಯ್ದ
ಸುಜನರನು : ಕಲ್ಕ್ಯಾವತಾರವು ಭಗವಂತನ ದಶಾವತಾರಗಳಲ್ಲಿ ಹತ್ತನೆಯದು ಹಾಗೂ ಕೊನೆಯದಾಗಿದೆ.  ಈ ಅವತಾರವು ಕಲಿಯುಗಾಂತ್ಯದಲ್ಲಿ ಆಗಿ ಸಮಸ್ತ ದುಷ್ಟರನ್ನು ದಮನಗೊಳಿಸುವುದಾಗಿದೆ.  ಭಗವಂತನಲ್ಲಿ ಅತಿಯಾದ ದ್ವೇಷವನ್ನು ಮಾಡುವ ’ಕಲಿ’ಯೇ ಈ ಯುಗಕ್ಕೆ ಪ್ರಭುವಾಗಿರುವುದರಿಂದ ’ಕಲಿಯುಗ’ವೆಂದೇ ಹೆಸರು ಬಂದಿದೆ.  ಕಲಿಯುಗದ ವರ್ಣನೆಯನ್ನು ಭಾಗವತ ದ್ವಾದಶಸ್ಕಂಧ, ೨ನೆಯ ಅಧ್ಯಾಯದಲ್ಲಿ ವಿಸ್ತಾರವಾಗಿ   "ವಿತ್ತಮೇವ ಕಲೌ ನೃಣಾಂ ಜನ್ಮಾಚಾರ ಗುಣೋದಯಃ" - ಹಣ ಮತ್ತು ಬಲ ಎಲ್ಲಕ್ಕೂ ಅಳತೆಗೋಲು ಮತ್ತು ಪ್ರಮಾಣಗಳಾಗಿರುವುದು.  ಯಾರಲ್ಲಿ ಹೆಚ್ಚು ಹಣವಿರುವುದೋ ಆತನೇ ಕುಲೀನನೆಂದೂ, ಗುಣಶಾಲಿಯೆಂದೂ, ಯಾರು ಹೆಚ್ಚು ಬಲವಂತನೋ ಅವನೇ ಧರ್ಮಿಷ್ಠನೆಂದೂ ಪರಿಗಣಿಸಲ್ಪಡುವನು.  ವಿವಾಹಗಳಲ್ಲಿ ಹೆಣ್ಣು-ಗಂಡುಗಳ ನಡುವಿನ ಕಾಮಾಭಿರುಚಿಯೇ ನಿಯಾಮಕವೆನಿಸುವುದು.  ಛಲ, ಕುಟಿಲ, ಮೋಸ, ಅಧರ್ಮ ಕಾರ್ಯಗಳ ಪಾಲನೆ, ಕಪಟ ಸಂನ್ಯಾಸಿಗಳ ಆಶ್ರಮಗಳು, ಬೂಟಾಟಿಕೆಯ ದಂಡ-ಕಮಂಡಲಗಳ ಉಪಯೋಗ ಮುಂತಾದವುಗಳೇ ಪ್ರಮುಖವಾಗಿ ತುಂಬಿರುವುವು.  ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವುದು, ಯಾವುದೇ ಮಾರ್ಗ ಅನುಸರಿಸಿಯಾದರೂ ಸರಿ ತನ್ನ ಕಾರ್ಯ ಸಾಧಿಸಿಕೊಳ್ಳುವುದು, ಕೇವಲ ತನ್ನ ಕುಟುಂಬವನ್ನು ರಕ್ಷಿಸುವುದೇ ಕಲಿಯುಗದ ಪರಮ ಪುರುಷಾರ್ಥಗಳಾಗುವುವು.  ಕೇವಲ ಕೀರ್ತಿ ಸಂಪಾದನೆಗೋಸ್ಕರವೇ ಧರ್ಮಾನುಷ್ಠಾನ ಆಚರಣೆಯಾಗುವುದು ಎಂದು ವಿವರಿಸಲ್ಪಟ್ಟಿದೆ.

ಕಲಿ ದೋಷದ ಪರಿಣಾಮದಿಂದ ಪ್ರಾಣಿಗಳು ಮತ್ತು ಜೀವಿಗಳ ದೇಹಗಳು ಕೃಶವಾಗುವುವು, ಆಯಸ್ಸು ಕಡಿಮೆಯಾಗುವುದು.  ಪಾಷಂಡಿಗಳ ಧರ್ಮವೇ ಎಲ್ಲೆಲ್ಲೂ ತಾಂಡವವಾಡುತ್ತಾ ಆಳುವ ಜನಗಳೇ ಭಕ್ಷಕರಂತೆ ಪ್ರವರ್ತಿಸುವರು.  ಹೀಗೆ ಅಧರ್ಮ-ಆಪತ್ತುಗಳು ಉತ್ತುಂಗಕ್ಕೇರಿದಾಗ ಸ್ವಯಂ ಭಗವಂತನೇ ಧರ್ಮ ಸಂರಕ್ಷಣೆಗಾಗಿ ಅವತರಿಸುವನು.   ೧೬ನೆಯ ಶ್ಲೋಕದಲ್ಲಿ "ಇತ್ಥಂ ಕಲೌ ಗತಪ್ರಾಯೇ ಜನೇ ತು ಖರಧರ್ಮಿಣಿ |  ಧರ್ಮತ್ರಾಣಾಯ ಸತ್ತ್ವೇನ ಭಗವಾನವತರಿಷ್ಯತಿ"  ಎಂದು ಕಲ್ಕಿ ಅವತಾರವನ್ನು ತಿಳಿಸಿದೆ.  ಮುಂದಿನ ೧೮ನೆಯ ಶ್ಲೋಕದಲ್ಲಿ "ಶಮ್ಭಲ ಗ್ರಾಮ ಮುಖ್ಯಸ್ಯ ಬ್ರಾಹ್ಮಣಸ್ಯ ಮಹಾತ್ಮನಃ | ಭವನೇ ವಿಷ್ಣುಯಶಸಃ ಕಲ್ಕಿಃ ಪ್ರಾದುರ್ಭವಿಷ್ಯತಿ" - ಶ್ರೀಹರಿಯು ಶಂಭಲವೆಂಬ ಗ್ರಾಮದಲ್ಲಿ ವಾಸಿಸುವ ವಿಷ್ಣುಯಶಸ ಎಂಬ ಹೆಸರಿನ ಮಹಾತ್ಮನಾದ ಬ್ರಾಹ್ಮಣ ಶ್ರೇಷ್ಠನ ಮನೆಯಲ್ಲಿ ’ಕಲ್ಕಿ’ ಎಂಬ ಹೆಸರಿನಿಂದ ಅವತರಿಸುವನು.  ಅಣಿಮಾ ಮೊದಲಾದ ಅಷ್ಟೈಶ್ವರ್ಯಗಳಿಂದಲೂ, ಜ್ಞಾನ ಮುಂತಾದ ಆರು ಗುಣಗಳಿಂದಲೂ ಸಂಪನ್ನನಾದ ಭಗವಂತನು, ದೇವತೆಗಳು ತನಗೆ ಸಮರ್ಪಿಸುವ "ದೇವದತ್ತ"ನೆಂಬ ಮಹಾವೇಗಶಾಲಿಯಾದ ಹಯವನ್ನೇರಿ ಭೂಮಂಡಲವೆಲ್ಲಾ ಸಂಚರಿಸುತ್ತಾ ರಾಜವೇಷದಿಂದ ತಮ್ಮನ್ನು ತಾನೇ ಮರೆಸಿಕೊಂಡಿರುವ ತಾಮಸಿಗರೆಲ್ಲರನ್ನೂ ಒಂದೇ ದಿನದಲ್ಲಿ ಸಂಹಾರ ಮಾಡುವನು ಎಂದು ವಿವರಿಸಿದೆ.  ನಂತರ ಕೇವಲ ಸಜ್ಜನರು ಮಾತ್ರ ಭೂಮಿಯಲ್ಲಿ ಉಳಿದುಕೊಳ್ಳುವರು ಮತ್ತು ಭಗವಂತನು ಮತ್ತೆ ಯಜ್ಞ ಯಾಗಾದಿಗಳನ್ನು ಪ್ರಾರಂಭಿಸಿ, ಕೃತಯುಗವನ್ನು ಆರಂಭಿಸುವನು ಎಂದು ತಿಳಿಸಲಾಗಿದೆ.
 


ವಿಷ್ಣು ಸಹಸ್ರನಾಮದಲ್ಲಿ "ಯುಗಾದಿಕೃತ್ ಯುಗಾವರ್ತೋ" ಎಂಬ ನಾಮದಿಂದ ಭಗವಂತನನ್ನು ಸ್ತುತಿಸಲಾಗಿದೆ.  ಆದಿಯಲ್ಲಿ ಬ್ರಹ್ಮ-ಸರಸ್ವತಿ ಹಾಗೂ ಪ್ರಾಣ-ಭಾರತಿಯರನ್ನು ಸೃಷ್ಟಿ ಮಾಡಿದ ಭಗವಂತನು ಯುಗಾದಿಕೃತ್ ಎಂದೆನಿಸಿಕೊಳ್ಳುವನು.  ಯುಗದ ಆದಿಗೆ ಕಾರಣನಾದ ಭಗವಂತ ಯುಗದ ಆವರ್ತನೆಗೂ ಕಾರಣನಾಗುವನು.  ದುಷ್ಟರನ್ನು ಶಿಕ್ಷಿಸುತ್ತಾ, ಯುಗದ ನಂತರ ಯುಗ, ಚತುರ್ಯುಗದ ನಂತರ ಚತುರ್ಯುಗ, ಮನ್ವಂತರದ ನಂತರ ಮನ್ವಂತರ, ಹೀಗೆ ವಿಶ್ವದ ಆವರ್ತನೆಗೆ ಕಾರಣಕರ್ತನಾಗಿ, ಪ್ರತಿಯೊಂದು ಗಂಡು ಹೆಣ್ಣಿನಲ್ಲಿ ಕುಳಿತು ಸೃಷ್ಟಿ ಚಕ್ರವನ್ನು ತಿರುಗಿಸುವ ಭಗವಂತನು ಯುಗಾವರ್ತಃ ಎನಿಸಿಕೊಳ್ಳುವನು.  ಸಮಸ್ತ ಮ್ಲೇಚ್ಛರನ್ನು ಸಂಹರಿಸಿ ಕಲಿಯುಗದ ನಂತರ ಕೃತಯುಗದ ಆವರ್ತನೆಯನ್ನು ಮಾಡುವನು ಎಂದು ವಿವರಿಸಲ್ಪಟ್ಟಿದೆ.



ಭಾಗವತ ದ್ವಿತೀಯಸ್ಕಂಧ, ೭ನೆಯ ಅಧ್ಯಾಯದಲ್ಲಿ ಕಲ್ಕ್ಯವತಾರವನ್ನು   
ಯರ್ಹ್ಯಾಲಯೇಷ್ವಪಿ ಸತಾಂ ನ ಹರೇಃ ಕಥಾಃ ಸ್ಯುಃ
ಪಾಖಣ್ಡಿನೋ ದ್ವಿಜಜನಾ ವೃಷಲಾ ನೃದೇವಾಃ |
ಸ್ವಾಹಾ ಸ್ವಧಾ ವಷಡಿತಿ ಸ್ಮ ಗಿರೋ ನ ಯತ್ರ
ಶಾಸ್ತಾ ಭವಿಷ್ಯತಿ ಕಲೇರ್ಭಗವಾನ್ಯುಗಾನ್ತೇ || - ಕಲಿಯುಗದ ಕೊನೆಯಲ್ಲಿ ಸತ್ಪುರುಷರ ಮನೆಗಳಲ್ಲಿಯೂ ಶ್ರೀಹರಿಯ ಕಥೆಯ ಶ್ರವಣ-ಕೀರ್ತನ-ಉತ್ಸವಾದಿಗಳು ನಡೆಯಲು ಅವಕಾಶವಾಗುವುದಿಲ್ಲ.  ಪಾಷಂಡಿ ಜನರೂ, ಧರ್ಮಘಾತುಕರೂ ರಾಜರಾಗುವರು.  ದೇವತೆಗಳನ್ನೂ, ಪಿತೃಗಳನ್ನೂ ಕುರಿತು ಮಾಡುವ ಯಜ್ಞ ಮತ್ತು ಶ್ರಾದ್ಧಗಳ ಸದ್ದೂ, ಸ್ವಾಹಾ-ಸ್ವಧಾ-ವಷಟ್ಕಾರಗಳೂ ಕೇಳುವುದಿಲ್ಲ.  ಇಂತಹ ಸಮಯದಲ್ಲಿ ಕಲಿಯುಗವನ್ನು ಹತೋಟಿಗೆ ತರುವುದಕ್ಕಾಗಿ ಭಗವಂತನು ಕಲ್ಕಿರೂಪದಲ್ಲಿ ಅವತರಿಸುವನು ಎಂದೂ
ಏಕಾದಶಸ್ಕಂಧ, ೪ನೆಯ ಅಧ್ಯಾಯದಲ್ಲಿ "ಶೂದ್ರಾನ್ಕಲೌ ಕ್ಷಿತಿಭುಜೋ ನ್ಯಹನಿಷ್ಯದನ್ತೇ" - ಕಲಿಯುಗದ ಅಂತ್ಯದಲ್ಲಿ ಕಲ್ಕ್ಯಾವತಾರವನ್ನು ಮಾಡಿ ಅಧರ್ಮಿಷ್ಠರಾದ ರಾಜರನ್ನು ಸಂಹರಿಸುತ್ತಾನೆ ಎಂದೂ ತಿಳಿಸಲಾಗಿದೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ  ಭಗವಂತನ ಕಲ್ಕ್ಯಾವತಾರವನ್ನು
ದುಷ್ಟಕುಲಾಂತಕ ಕಲ್ಕಿಸ್ವರೂಪ ಧರ್ಮವಿವರ್ಧನ ಮೂಲಯುಗಾದೇ
ನಾರಾಯಣಾಮಲ ಕಾರಣಮೂರ್ತೇ ಪೂರ್ಣಗುಣಾರ್ಣವ ನಿತ್ಯಸುಬೋಧ || - ದುಷ್ಟ ಶಿಕ್ಷಕನೂ ಧರ್ಮರಕ್ಷಕನೂ ಕೃತಯುಗ ಪ್ರವರ್ತಕನೂ ಆದ ಕಲ್ಕಿಯನ್ನು, ಶ್ರೇಷ್ಠನೂ ಸರ್ವಕ್ಕೂ ಕಾರಣ ಮೂರ್ತಿಯೂ, ಗುಣ ಪರಿಪೂರ್ಣನೂ ಸದಾ ಜ್ಞಾನ ಸ್ವರೂಪಿಯೂ ಆದ ಶ್ರೀಮನಾರಾಯಣನನ್ನು ವಂದಿಸುತ್ತೇನೆ ಎಂದೂ

ನವಮೋಧ್ಯಾಯದಲ್ಲಿ
ಕಲಿಮಲಹುತವಹ ಸುಭಗ ಮಹೋತ್ಸವ ಶರಣದ ಕಲ್ಕೀಶ ಹೇಭವಮಮ ಶರಣಮ್
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || -  ಕಲಿದೋಷಹಾರಕದ, ಭಾಗ್ಯವಂತರಾದ, ಕೃತಯುಗದ ಜನರಿಗೆ ಮಹದಾನಂದವನ್ನುಂಟು ಮಾಡುವ, ಶರಣಾಗತ ರಕ್ಷನಾದ, ಕಲ್ಕ್ಯಾವತಾರಿಯಾದ ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ  ಕಲ್ಕ್ಯಾವತಾರವನ್ನು
ಕ್ರುದ್ಧಾಹಿತಾಸುಹೃತಿ ಸಿದ್ಧಾಸಿ ಖೇಟಧರ ಶುದ್ಧಾಶ್ವಯಾನ ಕಮಲಾ |
ಶುದ್ಧಾಂತ ಮಾಂ ರುಚಿ ಪಿನದ್ದಾಖಿಲಾಂಗ ನಿಜಮದ್ಧಾSವ ಕಲ್ಕ್ಯಭಿಧ ಭೋಃ || - ಕಲಿಯುಗದ ಅಂತ್ಯದಲ್ಲಿ, ದುಷ್ಟಜನರ ನಿರ್ಮೂಲನಕ್ಕೆ ಖಡ್ಗಚರ್ಮಧಾರಿಯಾಗಿ ಬಿಳಿಕುದುರೆಯನ್ನೇರಿ ಸರ್ವರನ್ನು ಸಂಹರಿಸುವ, ಲಕ್ಷ್ಮೀಪತಿಯಾದ, ಅತಿಯಾದ ಕಾಂತಿಯಿಂದ ಬೆಳಗುತ್ತಿರುವ ಕಲ್ಕಿನಾಮಕ ಶ್ರೀ ಪರಮಾತ್ಮನೆ, ನಿನ್ನ ಭಕ್ತನಾದ ನನ್ನನ್ನು ಚೆನ್ನಾಗಿ ರಕ್ಷಿಸು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ  ಕಲ್ಕ್ಯಾವತಾರವನ್ನು
ಮ್ಲೇಚ್ಛನಿವಹನಿಧನೇ ಕಲಯಸಿ ಕರವಾಲಂ
ಧೂಮಕೇತುಮಿವ ಕಿಮಪಿ ಕರಾಲಂ
ಕೇಶವ ಧೃತ ಕಲ್ಕಿ ಶರೀರ ಜಯ ಜಗದೀಶ ಹರೇ || -    ಕಲಿಯುಗದ ಕಡೆಯಲ್ಲಿ ಮ್ಲೇಚ್ಛರ ನಾಶಕ್ಕಾಗಿ ಭಯಾನಕ ಖಡ್ಗವನು ಪಿಡಿದು ಧೂಮಕೇತುವಿನಂತೆ ಅವತರಿಸಿದ ಕಲ್ಕಿ ರೂಪದ ಹರಿಯೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.


ಮಾನವನ ವಿಕಾಸಕ್ಕೆ ಭಗವಂತನ  ಕಲ್ಕ್ಯಾವತಾರವನ್ನು ಸಮನ್ವಯಿಸಿಕೊಂಡಾಗ ಪ್ರಪಂಚದ ಭವಿಷ್ಯವನ್ನು ಸೂಚಿಸುವುದು.  ವಿಕಾಸದ ಅಬ್ಬರ ಹಾಗೂ ಭರದಲ್ಲಿ ಮಾನವನು ಮಿತಿಮೀರಿದಾಗ, ಪ್ರಕೃತಿಯು ತನ್ನನ್ನು ಸಹಜ ಸ್ಥಿತಿಗೆ ತಂದುಕೊಳ್ಳಲು ನಡೆಸುವ ಹೋರಾಟವೆಂದು ಅರ್ಥೈಸಬಹುದೇನೋ.  ಮಾನವನು ಪ್ರಳಯಾಂತಕನಾಗಿ ಪ್ರಕೃತಿಗೇ ಹಾನಿಯನ್ನು ಉಂಟುಮಾಡುವಾಗ, ಕಾಲವನ್ನು ಗೆಲ್ಲುವತ್ತ ಸಾಗಿದಾಗ ಹಿಂಸೆ ಮತ್ತು ಅಧರ್ಮಗಳು ವಿಜೃಂಭಿಸುವುವು.  ಇಂತಹ ತೀವ್ರತರವಾದ ವಿಷಮ ಪರಿಸ್ಥಿತಿಯಲ್ಲಿ ಖಡ್ಗವನ್ನು ಝಳಪಿಸುತ್ತಾ, ಬಿಳಿಯ ಕುದುರೆಯನೇರಿ ಬರುವ ಕಲ್ಕಿ ರೂಪಿ ಭಗವಂತನು ಶಾಂತಿಯನ್ನು ಸ್ಥಾಪಿಸಿ ಮತ್ತೆ ಕೃತಯುಗ ಅಥವಾ ಸತ್ಯಯುಗದ ಸ್ಥಾಪನೆ ಮಾಡುವನು ಎಂದು ತಿಳಿಯಬಹುದಾಗಿದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ಶರೀರದ ಉಪಸ್ಥದಲ್ಲಿ ಕಲ್ಕಿ ರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು  ಕಲ್ಕಿಯ ರೂಪದಿಂದವತರಿಸಿದಾಗ ರಮಾದೇವಿಯು ’ಪ್ರಭಾ’ ಆಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ 

ಕಲಿಯ ವ್ಯಾಪಾರ ವೆಗ್ಗಳವಾಗೆ ತಿಳಿದು ’ಶಂ-
ಫಲಿ’ ಎಂಬ ಪುರದಿ ದ್ವಿಜನಲ್ಲಿ | ದ್ವಿಜನಲ್ಲಿ ಜನಿಸಿ ಕಲಿ-
ಮಲವ ಹರಿಸಿದ ಕಲ್ಕಿ ದಯವಾಗೋ || - ದೈತ್ಯಧಮನಾದ ಕಲಿಯ ಶಕ್ತಿಯಿಂದಾಗುವ ದುಷ್ಕರ್ಮಗಳು ಮಿತಿಮೀರಲು, ಈ ಪರಿಸ್ಥಿತಿಯನ್ನು ತಿಳಿದ ಸರ್ವಜ್ಞನಾದ ಶ್ರೀಹರಿಯು ಶಂಭಲವೆಂಬ ಗ್ರಾಮದಲ್ಲಿ, ಬ್ರಾಹ್ಮಣನಲ್ಲಿ ಅವತರಿಸಿ ಕಲಿಯ ದೋಷವನ್ನು, ಪರಿಹಾರ ಮಾಡಿದ ಕಲ್ಕಿರೂಪನಾದ ಹೇ ಭಗವನ್ ದಯವಾಗೋ ಎಂದು ಪ್ರಾರ್ಥಿಸಿದ್ದಾರೆ.

ಜೀವ ಕುಲವನ್ನೂ, ಜೀವ ಕುಲವು ಸಾಧನೆಯ ಮೂಲಕ ತನ್ನ ಅಂತಿಮ ಗುರಿಯನ್ನು ತಲುಪಲು ಬೇಕಾಗಿರುವ ಭೂಮಂಡಲವನ್ನೂ,  ಸಾತ್ವಿಕ ಸಜ್ಜನರನ್ನೂ ಸದಾ ಸರ್ವದಾ ಸಂರಕ್ಷಣೆಯನ್ನು ಮಾಡಲು ಭಗವಂತನು ನಾನಾ ಅವತಾರಗಳನ್ನು ಆವಿರ್ಭವಿಸುತ್ತಾ, ತನ್ನ ಲೀಲಾ ವಿನೋದಗಳನ್ನು ಪ್ರಕಟಿಸುತ್ತಾ, ಪರಮ ಕಾರುಣ್ಯವನ್ನು ಹರಿಸುವನು.



ಚಿತ್ರಕೃಪೆ : ಅಂತರ್ಜಾಲ


https://en.wikipedia.org/wiki/Kalki
https://en.wikipedia.org/wiki/Kalki_Purana
http://www.sumadhwaseva.com/dashavatara/kalkyaavata/
http://www.indiaprofile.com/monuments-temples/kalkitemple.htm
http://theinnerworld.in/travel/the-coming-of-bhagwan-kalki/

No comments: