Thursday, September 13, 2012

ಕರುಣಾ ಸಂಧಿ - ೬ನೇ ಪದ್ಯ



ಮನದೊಳಗೆ ತಾನಿದ್ದು ಮನವೆಂ

ದೆನಿಸಿಕೊಂಬನು ಮನದ ವೃತ್ತಿಗ

ಳನುಸರಿಸಿ ಭೋಗಗಳನೀವನು ತ್ರಿವಿಧ ಚೇತನಕೆ |

ಮನವನಿತ್ತರೆ ತನ್ನನೀವನು

ತನುವ ದಂಡಿಸಿ ದಿನದಿನದಿ ಸಾ

ಧನವ ಮಾಳ್ಪರಿಗಿತ್ತಪನು ಸ್ವರ್ಗಾದಿಭೋಗಗಳ  ||೬||

ಪ್ರತಿಪದಾರ್ಥ : ಮನದೊಳಗೆ ತಾನಿದ್ದು - ಹುಟ್ಟುವ ಪ್ರತೀ ಜೀವಿಯಲ್ಲೂ ಬಿಂಬರೂಪಿಯಾಗಿದ್ದು, ಮನವೆಂದೆನಿಸಿಕೊಂಬನು - ಜೀವಿಯ ’ಮನಸ್ಸು’ ಎಂದೇ ಕರೆಸಿಕೊಳ್ಳುವವನು, ಮನದ ವೃತ್ತಿಗಳನುಸರಿಸಿ - ಜೀವಿಯ ಮನಸ್ಸಿನ ವೃತ್ತಿಗಳಾದ ಮನಸ್ಸು - ಬುದ್ಧಿ - ಅಹಂಕಾರ - ಚಿತ್ತ ಹಾಗೂ ಚೇತನಗಳ ವರ್ತನೆಗಳನ್ನು ಅನುಸರಿಸುವವನು, ಭೋಗಗಳೀವನು - ವೃತ್ತಿಗಳನ್ನು ಅನುಸರಿಸುತ್ತಾ ಅವುಗಳಿಗೆ ತಕ್ಕಂತಹ ಸುಖ ದುಃಖಗಳೆಂಬ ಭೋಗಗಳನ್ನು ಜೀವಿಗಳಿಗೆ ನೀಡುವವನು, ತ್ರಿವಿಧ ಚೇತನಕೆ - ಸಾತ್ವಿಕ ರಾಜಸ ಮತ್ತು ತಾಮಸವೆಂಬ ಮೂರು ವಿಧವಾದ ಜೀವಿಗಳಿಗೆ, ಮನವನಿತ್ತರೆ ತನ್ನನೀವನು - ಮನಸ್ಸಿನಲ್ಲಿ ನೆಲೆಸಿ ಮನಸ್ಸೆಂದೇ ಕರೆಸಿಕೊಳ್ಳುವ ಭಗವಂತನಿಗೆ ಭಕ್ತರು ತಮ್ಮ ಮನವನ್ನು ಅರ್ಪಿಸಿದರೆ ಭಗವಂತನು ಆ ಭಕ್ತರಿಗೆ ತನ್ನನ್ನೇ ಒಪ್ಪಿಸಿಕೊಂಡು ಬಿಡುವನು, ತನುವ ದಂಡಿಸಿ ಸಾಧನವ ಮಾಳ್ಪರಿಗೆ -  ಇಷ್ಟಾರ್ಥಗಳ ಪೂರೈಕೆಗಾಗಿ ದೇಹವನ್ನು ದಂಡಿಸಿ ಭಗವಂತನನ್ನು ಸ್ಮರಿಸುತ್ತಾ ಸಾಧನೆಯನ್ನು ಮಾಡುವ  ಭಕ್ತರಿಗೆ, ಇತ್ತಪನು ಸ್ವರ್ಗಾದಿ ಭೋಗಗಳ - ಸಾಧನೆಗೆ  ತಕ್ಕಂತಹ ಸ್ವರ್ಗಾದಿಗಳಾದ ಭೋಗಗಳನ್ನು ನೀಡುವವನು.

"ಮನದೊಳಗೆ ತಾನಿದ್ದು ಮನವೆಂದೆನಿಸಿಕೊಂಬನು  -   ಮೂಲತಃ ಮನದೊಳಗೆ ತಾನೂ ಇದ್ದು, ಸ್ಥೂಲ ದೇಹದ ದಶೇಂದ್ರಿಯಗಳಲ್ಲಿ ಶ್ರೇಷ್ಠವಾದ ಮನದೊಳಗೆ, ತಾನೇ ಮನವಾಗಿರುವನು (ನಾಮಪದ) ಎ೦ದು ದಾಸರು ವಿಶ್ಲೇಷಿಸುತ್ತಾರೆ. ಸಾಧನೆಯ ಮೂಲಕ ಚೇತನವನ್ನು ಜೀವ ಜಾಗೃತಿಗೊಳಿಸಿಕೊಂಡರೆ ಮನದೊಳಗೆ ತಾನೇ ಇರುತ್ತಾನೆ.  ತಾನೇ ಇದ್ದು "ಮನ" ಎಂದೆನಿಸಿಕೊಳ್ಳುತ್ತಾನೆ.  ಇನ್ನು ಮನೋವೃತ್ತಿಗಳು ಎಂದರೆ ಬುದ್ಧಿ, ಚಿತ್ತ, ಅಹಂಕಾರ, ಅಂತಃಕರಣ - ಇವುಗಳನ್ನು ಅನುಸರಿಸಿ ಸುಖ-ದು:ಖಗಳನ್ನು ಅನುಭವಿಸುವಂತೆ ಮಾಡುತ್ತಾನೆ.  ಮನಸ್ಸನ್ನು ವಿಷಯಕ್ಕೆ ಎ೦ದರೆ ಲೋಕ ಸುಖಕ್ಕೇ ಮೀಸಲಿಟ್ಟರೆ ಪರಮಾತ್ಮ ನಮ್ಮತ್ತ ನೋಡುವುದಿಲ್ಲ.  ಎಲ್ಲವೂ ಅವನೇ ಆದರೂ ನಾವು ಅವನನ್ನು ಸ್ಮರಿಸುತ್ತೇವೆಂದಾಗ ಮಾತ್ರ ಅವನು ನಮ್ಮನ್ನು ಕಾಪಾಡುತ್ತಾನೆ.  ತ್ರಿವಿಧ ಚೇತನಗಳು - ತಾಮಸ, ರಾಜಸ ಮತ್ತು ಸಾತ್ವಿಕಗಳಿಗೆ ಅವನೇ ಒಡೆಯನಾದರೂ, ಮನಸ್ಸು ನಾವು ಕೊಟ್ಟ ಹಾಗೆ ಅವನು ನಮ್ಮನ್ನು ರಕ್ಷಿಸುತ್ತಾನೆ.  ಭಕ್ತಿ ಇಲ್ಲದೆ ಬರಿಯೆ ದೇಹ ದಂಡನೆ, ವ್ರತಗಳನ್ನು ಮಾಡುತ್ತಾ ಇದ್ದರೆ ಸ್ವರ್ಗಾದಿ ಫಲ ಮಾತ್ರ ಸಿಕ್ಕುತ್ತದೆ.  ಜ್ಞಾನ - ಅಜ್ಞಾನ - ಸಂಶಯ ಎಲ್ಲಕ್ಕೂ ಅವನೇ ಪ್ರೇರಕನಾಗಿದ್ದಾನೆ. ಭಕ್ತಿಭರಿತ ವ್ರತ, ಅನುಷ್ಟಾನುಗಳನ್ನು ಆಚರಿಕೊಳ್ಳುವವರು ಭಾಗವತೋತ್ತಮರು, ಸಾತ್ವಿಕರು, ಮುಕ್ತಿಯೋಗ್ಯರು, ಶ್ರೇಷ್ಠ ಭಕ್ತರೂ ಆಗುತ್ತಾರೆ.  ಮಧ್ಯಮ ವರ್ಗದ ಭಕ್ತರು ಭಗವದ್ವಿಷಯದಲ್ಲಿ ಆಸಕ್ತಿ, ಸರ್ವೋ ಭಗವಧೀನ ಎಂದು ತಿಳಿಯುತ್ತಾರೆ.  ಇವರಿಗೆ ಸ್ವರ್ಗ ಸುಖ ಲಭ್ಯವಾಗುತ್ತದೆ.  ಮನುಷ್ಯರಾಗಿಯೂ ಸುಖವಾಗಿರುತ್ತಾರೆ.  ಇನ್ನು ಅಧಮ ಭಕ್ತರಿಗೆ ತಾರತಮ್ಯ ಜ್ಜಾನ ಶೂನ್ಯ, ತಾವೇ ಭಕ್ತರು ಎಂದುಕೊಂಡು ಉಳಿದವರ ಬಗ್ಗೆ ತಿರಸ್ಕಾರ.  ಇಂಥವರಿಗೆ ಅವರವರ ಯೋಗ್ಯತೆಗನುಸಾರವಾಗಿ ಅಂತಹ ಲೋಕಗಳನ್ನೇ ಕೊಡುತ್ತಾನೆ.


ಪ್ರಾರಂಭದಲ್ಲಿ... ಜೀವದ ಕರ್ಮಾನುಸಾರ, ತ್ರಿವಿಧ ಗುಣಗಳನ್ನು ಆಯಾಯ ಜೀವಿಗಳಿಗೆ ಕೊಟ್ಟು ಮೊಮ್ಮೊದಲು ಪ್ರೇರಕನಾಗಿ ಕ್ರಿಯೆ ಮಾಡಿಸುವವನು (ಯ೦ತ್ರವನ್ನು ಪ್ರಾರ೦ಭಿಸುವ ಕ್ರಿಯೆ). ಮನದ ವೃತ್ತಿಗಳನನುಸರಿಸಿ ಭೋಗಗಳನೀವನು ತ್ರಿವಿಧ ಚೇತನಕೆ.  ಒಮ್ಮೆ ಯಂತ್ರ ಶುರುವಾದ ಮೇಲೆ, ಜೀವ ಮಾಡುವ ಕರ್ಮಕ್ಕೆ ಅನುಸಾರವಾಗಿ – ಚಿತ್ತ – ಬುದ್ಧಿ – ಅಹಂಕಾರ – ಅಂತಃಕರಣಕ್ಕೆ ಪೂರಕವಾಗಿ ಯೋಗ್ಯತಾನುಸಾರ – ಭೋಗಗಳನ್ನು ಕೊಡುತ್ತಾನೆ. ಉದಾಹರಣೆಗೆ ಜೀವಕ್ಕೆ ತಮೋಗುಣ ಹೆಚ್ಚಿದ್ದಾಗ, ಅದರ ಕರ್ಮಕ್ಕನುಸಾರವಾಗಿ, ಅದೇ ಅಹಂಕಾರ ಕೊಡುತ್ತಾನೆ ಅಂತ ಅಲ್ಲ. ಇಲ್ಲಿ ಇದು ಅಹಂಕಾರ ಅಲ್ಲ, ಫಲ. ವಾಹನವನ್ನು ಓಡಿಸುವವರು ನಾವೇ ಆದರೂ, ಪ್ರೇರಕನನ್ನು ನಿರುತ ನೆನೆಯುವುದರಿಂದ ಉತ್ತಮ ಭಾವಗಳನ್ನು ಒಡಗೂಡಿಸಿಕೊಂಡು ಸರಿಯಾದ ದಾರಿಯಲ್ಲಿ ವಾಹನವನ್ನು ನಡೆಸುತ್ತೇವೆ.  ಓಡಿಸುವುದು ರಜೋ ಗುಣ. ನೆನೆಯುವುದು ಸತ್ವ. ನಾನೇ ಎನ್ನುವ ’ಅಹಂ’ ಬಂದಾಗ ಮಾತ್ರ ತಮೋ ಜಾಗೃತವಾಗುತ್ತದೆ.

ಸಕಲ ಸಂಪತ್ತು, ಭೋಗಗಳೂ ನಮ್ಮ ಕರ್ಮ ಫಲದಿಂದ ದೊರಕುವುವು. ರಜೋ + ಸತ್ವ = ಉತ್ತಮ ಭೋಗಗಳ ಜೊತೆಗೆ, ಭಗವಂತನ ಅರಿವು, ಧ್ಯಾನ ಇವುಗಳನ್ನು ಒಗ್ಗೂಡಿಸುತ್ತದೆ.  ರಜೋ+ತಮ = ಭೋಗ ಫಲ ಇದ್ದರೂ, ಅಲ್ಲಿ ಅಹಂ ಅಥವಾ ನಾನೇ ಮಾಡಿದೆನೆಂಬ ಭಾವದಿಂದ ಅರಿವು (-) ಇರುವುದಿಲ್ಲ. ಅದಕ್ಕೆ ತಕ್ಕಂತೆ ಫಲ ಸಿಕ್ಕುತ್ತದೆ.  ಮನದ ವೃತ್ತಿಗಳನನುಸರಿಸಿ ಎಂದರೆ ಇಷ್ಟು ವ್ಯಾಪ್ತವಾಗಿ ಅರ್ಥೈಸಿಕೊಳ್ಳಬೇಕಾಗುತ್ತದೆ.

ಮನವನಿತ್ತರೆ ತನ್ನನೀವನು – ಇದು ಉತ್ತಮ ಮಾರ್ಗ. ಅಪರೋಕ್ಷ ಜ್ಞಾನ ಕೊಡುವವನು ಉದಾಹರಣೆ – ಧ್ರುವ, ಬಲಿ ಮೊದಲಾದವರು. ತನುವ ದಂಡಿಸಿ ದಿನದಿನದಿ ಸಾಧನವ ಮಾಳ್ಪರಿಗಿತ್ತಪನು  -  ಈ ದೇಹವನ್ನು ದಂಡಿಸಿ ಮಾಡುವ ವ್ರತಾದಿಗಳು, ಸಾಧನೆಗಳು, ಅನುಷ್ಠಾನಗಳು, ಇವುಗಳಿಗೆಲ್ಲಾ... ಸ್ವರ್ಗಾದಿ ಭೋಗಗಳನ್ನು ಕೊಡುವವನು ಎಂದು ಅರ್ಥೈಸಿದ್ದಾರೆ.  ಆದರೆ ಸಂಕಲ್ಪ ಮಾಡುವಾಗ ಜ್ಞಾನ, ಭಕ್ತಿ, ವೈರಾಗ್ಯ, ಮೋಕ್ಷ  ಇಷ್ಟನ್ನೇ ಗುರಿಯಾಗಿಟ್ಟುಕೊಂಡು ಮಾಡುವ ಸಾಧನೆ ಶ್ರೇಷ್ಠವಾಗುತ್ತದೆ.  ಪ್ರತಿ ಒಂದು ಕ್ರಿಯೆಗೂ “ನಾಹಂ ಕರ್ತ... ಹರೀರ್ ಕರ್ತ ಅನ್ನುವ ಭಾವ ಸದಾ ಜಾಗೃತವಾಗಿರಬೇಕು.

ಚೇತನವಿಲ್ಲದ ಜೀವಕ್ಕೆ ಯಾವ ಭಾವವೂ ಇಲ್ಲ, ಯಾವ ಗುಣಗಳೂ ಇಲ್ಲ. ಇಂಧನ ತುಂಬಿ ಯಂತ್ರ ಚಾಲನೆ ಮಾಡಿದರೆ ಮಾತ್ರ ಅದಕ್ಕೊಂದು ಚಲನೆ ಬರುವುದು.  ಪ್ರೇರಕ ಇಲ್ಲದಿದ್ದರೆ ಎಷ್ಟೊಂದು ಬೀಜರೂಪದಲ್ಲಿರುವ ಭಾವಗಳು ಚಾಲನೆ ಇಲ್ಲದೆ ಹೋಗಿ ಬಿಡುತ್ತವೆ.  ಪ್ರಾರಂಭದಲ್ಲಿ, ಎಲ್ಲರನ್ನೂ(ಜೀವಗಳನ್ನು) ಅವನೇ ಕ್ರಿಯಾಶೀಲರನ್ನಾಗಿ ಮಾಡಿದರೂ, ’ಅಹಂಭಾವ’ದಿಂದ ಇನ್ನೂ ಬೆಳಕಿಗೆ ಬರಬೇಕಾದ ಬೀಜ ರೂಪದಲ್ಲಿ ಇರುವ ಭಾವಗಳು / ವಿಚಾರಗಳು ಎಲ್ಲವನ್ನೂ ನಾವೇ ಮೊಳಕೆಯೊಡೆಯಲು ಅಡ್ಡಿ ಆಗಿಬಿಡುತ್ತೇವೆ.  ಆದ್ದರಿಂದಲೇ ನಾನು ಎಂಬುದು ಉಪಕರಣವಾಗಬೇಕು, ಸಾಧನವಾಗಬಾರದು. ಈ ದೇಹವೇ ಒಂದು ಸಾಧನ ಎ೦ದು ಭಾವಿಸಬೇಕು. ದೇಹವೇ ನಾವು ಎ೦ಬ ಭಾವ ಬ೦ದೊಡನೆ,  ’ನಾನು’ ಅನ್ನುವ ಭಾವ ಎಲ್ಲಕ್ಕಿಂತ ಹೆಚ್ಚು ಬಲಶಾಲಿಯಾಗಿ, ತಾನೇ ನಿರ್ದೇಶನ ಮಾಡಲು ಪ್ರಾರ೦ಭಿಸಿಬಿಡುತ್ತದೆ.   ’ಅಹಂ’ ಸಾಧನವೆಂದುಕೊಂಡಾಗ, ಅಲ್ಲಿ ಭಗವಂತ ಬರೋದಿಲ್ಲ.  ಅವನು ದೂರದಲ್ಲಿ ನಿಂತು ನೋಡುತ್ತಿರುತ್ತಾನೆ, ತನ್ನನ್ನು ಕರೆಯುತ್ತಾರೇನೋ ಅಂತ ಕಾಯುತ್ತಿರುತ್ತಾನೆ, ಆದರೆ ನಮ್ಮಲ್ಲಿರುವ ‘ಅಹಂ’ ಅವನನ್ನು ಆಹ್ವಾನಿಸುವುದೇ ಇಲ್ಲ.

ಜೀವ ಎಂದರೆ - ಎಲ್ಲಿ ಜ್ಞಾನವಿದೆಯೋ ಅದು, ಇಲ್ಲದ್ದು ಜಡ.  ವೇದಾಂತಿಗಳು ಜ್ಞಾನವೇ ಜೀವವೆಂದರು.  ಇಂದ್ರಿಯಗಳು ಜ್ಞಾನ ಹುಟ್ಟಿಸುವ ಸಾಧನಗಳು, ಅವುಗಳೇ ಜ್ಞಾನವಲ್ಲ. "ಆತ್ಮ" - ಸ್ವಯಂ ಜ್ಞಾನ, ಜ್ಞಾನದ ಸಾಧನ, ಎಲ್ಲವೂ. ಉಪನಿಷತ್ತಿನ ಪ್ರಕಾರ ಆತ್ಮನೇ ದೊಡ್ಡ ಬೆಳಕು.  ಸೂರ್ಯ, ಚಂದ್ರ, ಅಗ್ನಿ ಮೂರೂ ಇಲ್ಲದಾಗ, ನಾಲ್ಕನೆಯದು ಆತ್ಮ (ಬೆಳಕು).  ನಮ್ಮದಾದ ಜ್ಞಾನದ ಸಹಜ ಅರಿವಾಗದಂತೆ, ನಮ್ಮ ಇಂದ್ರಿಯಗಳು ಆವರಣಗಳಾಗಿವೆ.  ಅರಿವಿನ ಪ್ರಾಣನಾದ ಆತ್ಮನಿಗೆ ಅರಿವಿನ ಅನುಭವ ತರಲು ಇಂದ್ರಿಯಗಳ ಬಳಕೆಯಾಗುತ್ತದೆ.  ಜ್ಞಾನ ಬೇರೆ - ಅನುಭವ ಬೇರೆ.  ಅನುಭವ ಕೇವಲ ಚೇತನಕ್ಕೆ, ಜಡಕ್ಕಲ್ಲ. ಮನಸ್ಸೆಂಬ ಸಾಧನದ ಮೂಲಕ ಅನುಭವವನ್ನು ಆತ್ಮನಿಗೆ ಕೊಡಲು, ಭಗವಂತ ಮನದೊಳಗೆ ತಾನೇ ನಿಂತು ಮಾಡಬೇಕು. 

ಮನಸ್ಸು ಒಂದು ಜಡ ಪದಾರ್ಥ.  ಅದರಲ್ಲಿ ಆಲೋಚನೆಗಳು ಹುಟ್ಟಲು ಅದಕ್ಕೆ ಒಂದು ಚೇತನ ಬೇಕು. ಹರಿ ನಮ್ಮ ಮನಸ್ಸಿನಲ್ಲಿ ಎಲ್ಲ ಚಟುವಟಿಕೆಗಳನ್ನೂ ಉಂಟು ಮಾಡುತ್ತಾನೆ, ಅವನೇ ಮನಸ್ಸನ್ನು ಆಳುತ್ತಾನೆ, ಅವನಿಲ್ಲದಿರುತ್ತಿದ್ದರೆ ನಮ್ಮ ಮನಸ್ಸಿನಲ್ಲಿ ಯಾವ ಆಲೋಚನೆಯೂ ಹುಟ್ಟುವುದೇ ಇಲ್ಲ.  ವಿಷ್ಣು ಸಹಸ್ರನಾಮದಲ್ಲಿ "ಭಾವಾಯ ನಮಃ", "ಭೂತಭಾವನಾಯ ನಮಃ", ಮತ್ತು "ಮನುವೇ ನಮಃ" -  ಶ್ರೀಹರಿಯನ್ನು "ಭಾವ" ಎಂದು ಸಂಬೋಧಿಸಿದ್ದಾರೆ.  ಭಾವ ಎಂದರೆ ದ್ರವ್ಯ, ಗುಣ, ಆಲೋಚನಾ ತರಂಗಗಳು, ಭಾವನೆಗಳು, ಕಲ್ಪನೆಗಳು ಎಂದಾಗುತ್ತದೆ.  ಸರ್ವ ವಿಧವಾದ ಭಾವನೆಗಳಿಗೂ ಮೂಲ ಕಾರಣನು ಭಗವಂತನೆಂದೇ ಅರ್ಥವಾಗುತ್ತದೆ.  ಹೀಗೆ ತಾನೇ ಭಾವನೆಗಳಾಗಿ, ಭಾವನೂ ಆಗಿ ನಮ್ಮ ಬುದ್ಧಿ-ಕರ್ಮಗಳಿಗನುಗುಣವಾಗಿ, ಭಾವನೆಗಳನ್ನು ವರ್ಧಿಸುವವನಾಗುತ್ತಾನೆ.  ಮನನಕ್ಕೆ ಸಾಧನನಾದುದರಿಂದ ಭಗವಂತನನ್ನು ಮನಸ್ ಎಂದೂ ಮನುವೆಂದೂ ಕರೆಯಲ್ಪಟ್ಟಿದ್ದಾನೆ.  ಶ್ರೀಹರಿಗಿಂತ ಬೇರೆ ಮಂತ್ರವೇ ಇಲ್ಲ.  ಬ್ರಹ್ಮಾಂಡದ ಪ್ರತಿಯೊಂದು ವಸ್ತುವಿಗೂ ಮತ್ತು ಜೀವರಿಗೂ, ಯಾರು ಯಾರಿಗೆ ಏನೇನು ಕರುಣಿಸಬೇಕೆಂದು ಮನನ ಮಾಡುವ ಮಾಧವನನ್ನು ವಿಷ್ಣುವೆಂದು ಪೂಜಿಸುತ್ತೇವೆ.  ಯಾವ ಜೀವಿ ತನ್ನ ಬುದ್ಧಿಯನ್ನು (ಮನಸ್ಸನ್ನು) ತನ್ನಿಚ್ಛೆಯಂತೆ ಹರಿಯಲು ಬಿಡದೆ, ನಿಯಂತ್ರಿಸಿ ಶ್ರೀಹರಿಯ ಧ್ಯಾನದಲ್ಲಿ ಬಂಧಿಸುತ್ತಾನೋ, ಭಗವಂತನ ನಾಮವನ್ನು ಸದಾಕಾಲ ಮನನ ಮಾಡುತ್ತಿರುತ್ತಾನೋ ಅಂತಹ ಜೀವಿಯನ್ನು ಕಾಪಾಡುವವನು ಭಗವಂತನಾದ್ದರಿಂದ ಆ ಭಗವಂತನೇ ಮಂತ್ರನಾಗಿರುವನು.  ಮನಸ್ಸೆಂದರೆ ಸಂಕಲ್ಪಮಯ ಎಂದು ಅರ್ಥೈಸಿದರೆ, ಸಕಲ ಸಂಕಲ್ಪಕ್ಕೂ ದಿವ್ಯಸಂಕಲ್ಪ ಪೂರ್ಣನು ಪರಮಾತ್ಮನು. ಮಂತ್ರಗಳನ್ನು ಮಾನಸ ಜಪದ ಮೂಲಕ ಸಿದ್ಧಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುವವನು ಮತ್ತು ಪ್ರೇರೇಪಿಸುವವನು ಶ್ರೀಹರಿಯು.  ಹೀಗೆ ಮನದೊಳಗೆ ತಾನೆ ಇದ್ದು, ಸಾಧನೆಗೆ ತಾನೇ ಪ್ರೇರೇಪಿಸುತ್ತಾ, ತಾನೇ ಮನವೆಂದೆನಿಕೊಂಬನು.  ಭಗವಂತನು ಸರ್ವಶಬ್ದವಾಚ್ಯನು.

"ಮನದ ವೃತ್ತಿಗಳನುಸರಿಸಿ ಭೋಗಗಳನೀವ ತ್ರಿವಿಧ ಚೇತನಕೆ" - ಸಮುದ್ರದಲ್ಲಿ ನಿರಂತರ ಲಹರಿಗಳು ಏಳುತ್ತಲೇ ಇರುವಂತೆ ನಮ್ಮ ಮನಸ್ಸಿನಲ್ಲೂ ನಾನಾ ಬಗೆಯ ತರಂಗಗಳು / ಭಾವಗಳು ಏಳುತ್ತಲೇ ಇರುತ್ತವೆ.  ಬ್ರಹ್ಮಸೂತ್ರದಲ್ಲಿ ಹೇಳಿದಂತೆ ಅವುಗಳು ಐದು ಬಗೆ - ಮನಸ್, ಬುದ್ಧಿ, ಅಹಂಕಾರ, ಚಿತ್ತ, ಚೇತನಾ ಎಂದು.  ಮನಸ್ಸು ಒಂದು ಕೆಲಸವನ್ನು ಮಾಡಬೇಕೇ ಬೇಡವೇ, ಒಳ್ಳೆಯದೇ ಕೆಟ್ಟದ್ದೇ ಎಂದು ಯೋಚಿಸುತ್ತದೆ.  ಬುದ್ಧಿ ನಿರ್ಣಯ ಮಾಡುತ್ತದೆ.  ಅಹಂಕಾರ ನಾನು ಕಾರ್ಯ ಸಾಧಿಸುತ್ತೇನೆ, ನಾನು ಫಲ ಉಣ್ಣುತ್ತೇನೆ ಎಂದು ಅಭಿಮಾನ ತೋರುತ್ತದೆ.  ಚಿತ್ತ ಹಿಂದಿನ ಅನುಭವಗಳನ್ನು / ಸಂಸ್ಕಾರವನ್ನು (ಸಂಸ್ಕಾರವೆಂದರೆ ಅನುಭವಗಳ ದಾಖಲಾತಿ)  ನೆನಪಿಸಿಕೊಳ್ಳುತ್ತದೆ.  ಚೇತನ  ಎಲ್ಲಾ ವಿಷಯಗಳನ್ನೂ ಒಳಗೆ ದಾಖಲು ಮಾಡಿಟ್ಟುಕೊಂಡು ಬೇಕಾದಾಗ ಅದು ನಮಗೆ ಸಿಕ್ಕುವಂತೆ ಮಾಡುತ್ತದೆ.  ಸಾತ್ವಿಕರಿಗೆ ಒಳ್ಳೆಯ ರೀತಿಯಲ್ಲಿ ನಾಲ್ಕು ವೃತ್ತಿಗಳು ಬೆಳೆದು ಅಹಂಕಾರ ಇಲ್ಲದಂತಾಗುತ್ತದೆ ಮತ್ತು ಸಾತ್ವಿಕರಲ್ಲದವರಿಗೆ ಅಹಂಕಾರ ಬೆಳೆಯುತ್ತದೆ.  ನಾವು ಮಾಡುವ ಕೆಲಸದ ಬಗ್ಗೆ ಸರಿಯಾದ ಆಲೋಚನೆ, ಮಾಡುವ ಇಚ್ಛೆ, ಪ್ರಾಮಾಣಿಕ ಪ್ರಯತ್ನವಿದ್ದಲ್ಲಿ ಕೆಲಸ ಯಶಸ್ಕರವಾಗುವುದು ಮತ್ತು ಅದರಿಂದ ನಮಗೆ ಸುಖಭೋಗವು ಲಭಿಸುವುದು.  ಆದರೆ ಕೆಲಸದ ಬಗ್ಗೆ ಆಲೋಚನೆಯೇ ತಪ್ಪಾಗಿದ್ದರೆ, ಕೆಲಸವು ಕೈಗೂಡುವುದೂ ಇಲ್ಲ ಮತ್ತು ಅದರಿಂದ ನಮಗೆ ದುಃಖಭೋಗವು ಲಭಿಸುವುದು.  ಯಾವುದೇ ಕಾರ್ಯವನ್ನು ಮಾಡುವ ಸಂಕಲ್ಪದಲ್ಲೇ ನನಗೆ ಈ ಕಾರ್ಯದ ಫಲ ಬೇಡ, ಭಗವಂತನಿಗೇ ಅರ್ಪಿತ, ಅವನ ಕರುಣೆಯೊಂದಿದ್ದರೆ ಸಾಕು ಎಂದುಕೊಂಡಾಗ (ಆಲೋಚನೆಗೆ ಪ್ರೇರಣೆ ನೀಡುವವನೇ ಶ್ರೀಹರಿ) ಭಗವಂತ "ಮನದ"ನಾಗಿದ್ದು ಉತ್ತಮರಿಗೆ ಸುಖಭೋಗ, ಮಧ್ಯಮರಿಗೆ ಸುಖ-ದುಃಖ ಭೋಗ, ಅಧಮರಿಗೆ ದುಃಖಭೋಗಗಳನ್ನೇ ಕೊಡುವನು.  "ಮನದ"ನಾಗಿ ನಮಗೆ ವಿಚಾರಶಕ್ತಿ ನೀಡುವವನು ಭಗವಂತನಾದ್ದರಿಂದ, ನಾವು ನಮಗೆ ವಿಹಿತವಾದ ಕಾರ್ಯಗಳನ್ನೂ, ವೃತ್ತಿಗಳನ್ನೂ ಆರಿಸಿಕೊಳ್ಳಬೇಕು ಮತ್ತು ಆ ವೃತ್ತಿಯ / ಕಾರ್ಯದ ಮೂಲಕವೇ ನಾವು ಶ್ರೀಹರಿಯನ್ನು ಆರಾಧಿಸಬೇಕು.  ಅವಿಹಿತವಾದ ವೃತ್ತಿ / ಆರಾಧನೆಯನ್ನು ಭಗವಂತ ಸ್ವೀಕರಿಸುವುದಿಲ್ಲ ಎನ್ನುತ್ತಾರೆ ಶ್ರೀ ಜಗನ್ನಾಥದಾಸರು.

ಚೇತನರಲ್ಲಿ ಮೂರು ವಿಧರು - ಸಾತ್ವಿಕರು, ರಾಜಸರು ಮತ್ತು ತಾಮಸರು.  ದೇವರು ಹೇಗೆ ಅನಾದಿಯೋ, ಹಾಗೆ ಜೀವ ಕೂಡ ಅನಾದಿ ಮತ್ತು ನಿತ್ಯ.  ಜೀವದ ಪರಿಚಯ ನಮಗೆಂದಿನಿಂದ ಇದೆಯೋ, ಅಂದಿನಿಂದಲೂ ಜೀವ ಜಡದ ಜೊತೆಗೆ ಮಿಶ್ರಣಗೊಂಡಿದ್ದಾನೆ.  ಜಡತ್ವ ಹೋಗಿಸಿ ಜೀವನನ್ನು ನಾವೇ ಎಚ್ಚರಿಸಿಕೊಳ್ಳಬೇಕು.  ಉದಾಹರಣೆಯೊಂದಿಗೆ ಹೇಳುವುದಾದರೆ ತೆಂಗಿನಕಾಯಿಯಂತೆ ಶರೀರದ ಒಳಗೆ ಜೀವ ಬಂಧಿ.  ತೆಂಗಿನಕಾಯಿಯ ಮೇಲೆ ಗೆರಟೆ, ಜುಟ್ಟು ಎಂದಿನಿಂದ ಬಂದಿತು ಎಂಬುದು ತಿಳಿಯದು, ಹಾಗೇ ತೆಂಗಿನ ಗೆರಟೆಯಂತೆ ಸ್ಥೂಲಶರೀರ ಮತ್ತು ಜುಟ್ಟಿನಂತೆ ಲಿಂಗಶರೀರ.  ಹೀಗೆ ಅನಾದಿ ಕಾಲದಿಂದಲೂ ಚೇತನದ ಜೊತೆ ಅಚೇತನ ಸೇರಿಕೊಂಡಿದೆ.  ಅಚೇತನದಿಂದ ಬಿಡುಗಡೆ ಹೊಂದಲು ನಮ್ಮ ಪ್ರಯತ್ನದ ಜೊತೆಗೆ ಭಗವಂತನ ಕರುಣೆಯೂ ಬೇಕು.  ಇದನ್ನು ನಾವು ಅಸಹಜ ಸ್ಥಿತಿಯಿಂದ ಸಹಜ ಸ್ಥಿತಿಗೆ ಮರಳುವುದು - ಮುಕ್ತಿ ಎನ್ನುತ್ತೇವೆ.  ಇದನ್ನು ತಲುಪಲು ನಾವು ಮಾಡುವ ಸಾಧನೆಯೇ ನಮ್ಮ ವ್ಯಕ್ತಿತ್ವದ ವಿಕಾಸ ಹೊಂದುವಿಕೆ.

"ತನುವ ದಂಡಿಸಿ ಸಾಧನೆ ಮಾಳ್ಪರಿಗಿತ್ತಪನು" - ಆಧ್ಯಾತ್ಮದ ಮೊದಲ ಹಂತವೇ ದೇಹ ದಂಡನೆ.  ಮನವನ್ನು ಭಗವಂತನಿಗೇ ಕೊಡುವ ಸಾತ್ವಿಕರು ಕೂಡ ಕೆಲವೊಮ್ಮೆ ಪ್ರಾರಬ್ಧವಶದಿಂದ ವಿಷಯಾಸಕ್ತಿಗಳಿಗಾಗಿ ದೇಹವನ್ನು ದಂಡಿಸಿ, ಕರ್ಮದ ಕೊನೆಯಲ್ಲಿ ಕೃಷ್ಣಾರ್ಪಣ ಎಂದರೂ ಕೂಡ, ಭಗವಂತ ತಾನು ಕೊಟ್ಟ ಮನವನ್ನು ತನಗೆ ಕೊಡದೇ, ವಿಷಯಾಸಕ್ತಿಗಳಲ್ಲಿ ಮುಳುಗಿ, ಅನ್ಯದೇವತೆಗಳಿಗೆ ಕೊಟ್ಟೆವೆಂದು ಕೋಪಿಸಿಕೊಳ್ಳದೆ, ಕೊನೆಗೆ ಕರ್ಮವನ್ನಾದರೂ ಕೊಟ್ಟನಲ್ಲಾ ಎಂದು ಪರಮ ಕಾರುಣ್ಯದಿಂದಲಿ ಸ್ವೀಕರಿಸಿ, ಆ ಕರ್ಮಕ್ಕೆ ತಕ್ಕ ಫಲವಾಗಿ ಸ್ವರ್ಗಾದಿ ಫಲಗಳನ್ನು ಕೊಡುತ್ತಾನೆ.  ತಮ್ಮ ಮನವನ್ನು ಭಗವಂತನಿಗೆ ಅರ್ಪಿಸುವವರು ತನುವನ್ನು ವ್ರತಾಚರಣೆಗಳಲ್ಲಿಯೂ, ಏಕಾದಶಿ ಉಪವಾಸಗಳಲ್ಲಿಯೂ ದಂಡಿಸಿಯೇ ದಂಡಿಸುತ್ತಾರೆ.  ಆದರೆ ಸುಮ್ಮನೆ ತನುವನ್ನು ದಂಡಿಸಿ ಯಾಗ, ಪೂಜೆಗಳೆಂದು ಮಾಡುವವರು ತಮ್ಮ ಮನಸ್ಸನ್ನು ಭಗವಂತನಿಗೆ ಸಮರ್ಪಿಸುತ್ತಾರೆಂಬ ನಂಬಿಕೆಯೇನೂ ಇಲ್ಲ.  ಆದರೆ ಮನಸ್ಸನ್ನು ಕೊಡದೆ ಹೀಗೆ ತನುವನ್ನು ದಂಡಿಸುವುದು ಬರಿಯ ನಶ್ವರ ಫಲಕ್ಕೆ ದಾರಿಯಾಗುವುದು.  ಮಿತಿಮೀರಿ ಶರೀರವನ್ನು ದಂಡಿಸುವುದನ್ನು ಕೂಡ ಪರಮ ಕರುಣಾಮಯಿ ಭಗವಂತ ಒಲ್ಲ, ಯಾವ ಜೀವ ಸಹನೆ, ಶಾಂತಿ, ದಯೆ, ಔದಾರ್ಯಗಳಿಂದ ಬದುಕುತ್ತಾನೋ ಅವನೇ ಉತ್ತಮ ಭಕ್ತನೆಂದೆನಿಕೊಳ್ಳುತ್ತಾನೆ.

"ಸ್ವರ್ಗಾದಿ ಭೋಗಗಳ" - ತ್ರಿವಿಧ ಚೇತನರಲ್ಲಿ ಸಾತ್ವಿಕರಾದ ಉತ್ತಮರು ತಮ್ಮ ಮನಸ್ಸನ್ನೇ ಸರ್ಮರ್ಪಿಸಿದಾಗ ತನ್ನನ್ನೇ - ಮೋಕ್ಷವನ್ನೇ ಕೊಡುತ್ತಾನೆ ಭಗವಂತ.  ಹಾಗೇ ಮಧ್ಯಮರಾದ ರಾಜಸ ಜೀವಿಗಳಲ್ಲಿ ಸ್ವಲ್ಪವಾದರೂ ಭಕ್ತಿ ಇರುವುದರಿಂದ ಅವರಿಗೆ ಸ್ವರ್ಗಲೋಕವನ್ನೇ ನೀಡುತ್ತಾನೆ ಶ್ರೀಹರಿ.  ಆದರೆ ಬರಿಯ ದ್ವೇಷ, ಅಹಂಕಾರಗಳನ್ನೇ ಸಾಧನೆಯನ್ನಾಗಿ ಮಾಡಿಕೊಂಡ ಅಧಮರಾದ ತಾಮಸ ಜೀವಿಗಳಲ್ಲಿ ಲವಲೇಶವೂ ಭಕ್ತಿಯೇ ಇಲ್ಲದಿರುವುದರಿಂದ ಅವರು ದೇಹ ದಂಡಿಸಿ ಎಷ್ಟೇ ಕಾರ್ಯಗಳನ್ನು ಮಾಡಿದರೂ, ಅವರಿಗೆ ಶ್ರೀಹರಿ ಒಲಿಯುವುದಿಲ್ಲ ಮತ್ತು ನರಕವನ್ನೇ ಕೊಡುತ್ತಾನೆನ್ನುತ್ತಾರೆ ಶ್ರೀ ಜಗನ್ನಾಥ ದಾಸರಾಯರು.  ಸಜ್ಜನರಿಗೆ, ಸದ್ಭಕ್ತರಿಗೆ ಕರುಣೆ ತೋರುವುದು ಭಗವಂತನ ವಿಶೇಷ ಗುಣವಾಗುತ್ತದೆ.

ತತ್ವಸುವ್ವಾಲಿಯಲ್ಲಿ ದಾಸರು :
ಮನದೊಳಗೆ ನೀನಿದ್ದು ಮನವೆಂದೆನಿಸಿಕೊಂಡು
ಮನದ ವೃತ್ತಿಗಳನ್ನು ಸೃಜಿಸುವಿ | ಸೃಜಿಪಿ ಸಂಕರ್ಷಣನೆ
ನಿನ್ನ ಕರುಣಕ್ಕೆ ಎಣೆಗಾಣೆ || - ಮನೋವೃತ್ತಿಗಳಿಗೆ ಅಭಿಮಾನಿ ಹಾಗೂ ಅವಾಂತರಾಭಿಮಾನಿ ದೇವತೆಗಳು ಇದ್ದರೂ ಕೂಡ, ಅವರೊಳಗೆ ತಾನೇ ಅಂತರ್ಯಾಮಿಯಾಗಿದ್ದು ಸರ್ವ ಕಾರ್ಯಗಳನ್ನೂ ಮಾಡಿಸಿ, ಅವರನ್ನೂ ಅನುಗ್ರಹಿಸಿ, ಕರುಣೆ ತೋರುವ ಭಗವಂತ ಸಂಕರ್ಷಣನೇ ನಿನಗೆ ಯಾರೂ ಎಣೆಯಿಲ್ಲವೆನ್ನುತ್ತಾರೆ.

ಮರುಳು ಮನವೇ ಕೇಳು ಮರೆವರೇ ಹರಿನಾಮ
ಕರುಣಾಬ್ಧಿ ಕೃಷ್ಣ ಅನುಗಾಲ | ಅನುಗಾಲ ಸಲಹುವನು
ಬರಿದೆ ಚಿಂತ್ಯಾಕೋ ನಿನಗಿನ್ನು ||  -  ಮನದಲ್ಲಿ ಮನವಾಗಿ ನಿಂತಿರುವ ಭಗವಂತನ ಇರುವಿಕೆಯನ್ನು ಗ್ರಹಿಸದೇ, ಮರುಳುತನದಲ್ಲಿ ವಿಷಯಾಸಕ್ತಿಗಳಲ್ಲಿ ಮುಳುಗಿರಬೇಡ.  ಅನವರತ ಹರಿನಾಮ ಸ್ಮರಣೆ ಮಾಡುತ್ತಾ ಮನದ ಕಲ್ಮಶಗಳನ್ನು ತೊಡೆದಾಗ, ಅನುಗಾಲವೂ ತಂದೆ ತನ್ನ ಮಕ್ಕಳನ್ನು ಪೊರೆವಂತೆ ಬಿಡದೇ ಸಲಹುವನು, ಚಿಂತಿಸಬೇಡ ಎನ್ನುತ್ತಾರೆ.

ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು |
ನೆನೆಯದಿನ್ನೊಂದನೆಲ್ಲವ ನೀಡುತದರಾ ||
ಅನುಸಂಧಿಯಲಿ ಜೀವಭಾರವನು ಮರೆಯುವುದು |
ಹನುಮಂತನುಪದೇಶ - ಮಂಕುತಿಮ್ಮ ||  -  ಜೀವನದಲ್ಲಿ ಸಫಲತೆಯನ್ನು ಕಂಡುಕೊಳ್ಳಬೇಕಾದರೆ ಯಾವುದಾದರೊಂದು ಮಹತ್ತರವಾದ ಘನತತ್ತ್ವವೊಂದಕ್ಕೆ ಸಂಪೂರ್ಣ ಶರಣಾಗತರಾಗಲೇಬೇಕು.  ಮತ್ಯಾವ ವಿಚಾರವನ್ನೂ, ಮತ್ತೇನನ್ನೂ ಮನಸ್ಸಿನಲ್ಲಿ ನೆನೆಯದೆ, ಅನವರತ, ಉಸಿರಾಡುವಷ್ಟೇ ಸಹಜವಾಗಿ ನಾವು ನಂಬಿಕೊಂಡ ಘನತತ್ತ್ವದಲ್ಲಿ ಬೆರೆತು ಲೀನವಾಗಿ ಹೋಗಬೇಕು.  ಅದಕ್ಕಾಗಿ ಜೀವನವನ್ನೇ ಮುಡಿಪಾಗಿಸಿ ಬಿಡಬೇಕು.  ಇದೇ ಜನ್ಮಜನ್ಮಾಂತರಗಳಲ್ಲೂ ನಮ್ಮ ಗುರಿಯಾಗಬೇಕು. ಇಂತಹ ಒಂದು ಮಹಾಸಂಕಲ್ಪವನ್ನು ಮಾಡಿಕೊಂಡು ಅದಕ್ಕಾಗಿಯೇ ಸಾಧನೆ ಮಾಡಿದವನು ಹನುಮಂತ.  ಹೀಗೆ ನಾವು ನಮ್ಮೊಳಗೇ ಇರುವ ಆ ಮಹಾತತ್ತ್ವಕ್ಕೆ ಸಂಪೂರ್ಣ ಶರಣಾಗತರಾದಾಗಲೇ ನಮ್ಮ ಜೀವನ ನಮಗೆ ಭಾರವೆನಿಸದೆ ಭವಸಾಗರವನ್ನು ದಾಟುವುದು ಸಾಧ್ಯವಾಗುವುದು.  ಇಲ್ಲಿ ಡಿವಿಜಿಯವರು ಹನುಮಂತನ ದೃಷ್ಟಾಂತವನ್ನು ಕೊಟ್ಟು, ಮನಸ್ಸಿನ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದಾರೆ.  ಒಂದೇ ಒಂದು ಗುರಿ, ಜೀವಿತದ ದಿಕ್ಕನ್ನೇ ಬದಲಿಸಿಬಿಡುತ್ತದೆ.

ಕೈವಾರ ತಾತಯ್ಯನವರು ತಮ್ಮ ಬ್ರಹ್ಮಾಂಡಪುರಿ ಶತಕದಲ್ಲಿ
ಮನಸೇ ಶ್ರೀಹರಿ ಭಜನಮು
ಮನಸೇ ವೈರಾಗ್ಯಶಕ್ತಿ ಮನಸೇ ತತ್ತ್ವಂ |
ಮನಸೇ ಯೋಗರಹಸ್ಯಮು
ಮನಸೇ ತನು ತಾನು ತೆಲುಸು ನಾರೇಯಣಕವಿ ||  -  ಮನಸ್ಸೇ ಶ್ರೀಹರಿಯ ಧ್ಯಾನಕ್ಕೂ, ಭಜನೆಗೂ, ಭಕ್ತಿಗೂ, ವೈರಾಗ್ಯಕ್ಕೂ, ಪರಮಾತ್ಮ ತತ್ತ್ವಕ್ಕೂ, ಯೋಗರಹಸ್ಯಕ್ಕೂ ಮತ್ತು ಆತ್ಮಜ್ಞಾನಕ್ಕೂ ಮೂಲವೆನ್ನುತ್ತಾ..
ಮನಸೇ ಮಾಯಪ್ರಪಂಚಮು
ಮನಸೇ ಮಹಗರ್ವಮೃಗಮು ಮನಸೇ ಲೋಭಂ |
ಮನಸೇ ಆಶಾಪಾಶಮು
ಮನಸೇ ತನ್ನೆರುಗನಿಯದು ನಾರೇಯಣಕವಿ ||  -  ಈ ಮನಸ್ಸೇ ಮದ, ಗರ್ವ, ಲೋಭ, ಆಸೆಗಳಿಗೆ ಕೂಡ ಮೂಲ.  ಆದ್ದರಿಂದ "ಮನಸು ತೆಗಿನವಾಡು ಮಹಾತ್ಮುಡೌನು" - ಅಂದರೆ ಮನಸ್ಸನ್ನು ವಿಷಯಾಸಕ್ತಿಗಳ ಕಡೆಗೆ ಹರಿಯಲು ಬಿಡದೆ, ತಗ್ಗಿಸಿ, ಬಯಕೆಗಳನ್ನು ಬಿಟ್ಟು ಶ್ರೀಹರಿಯ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುತ್ತಾ ಮನಸ್ಸಿನ ಮಹತ್ವದ ಬಗ್ಗೆ ತಿಳಿಸುತ್ತಾರೆ.

ಸಂಗೀತ ಪಿತಾಮಹ ಶ್ರೀತ್ಯಾಗರಾಜರು ತಮ್ಮ ಒಂದು ಕೃತಿ "ಮನಸು ನಿಲ್ಪಶಕ್ತಿಲೇಕ ಪೋತೇ | ಮಧುರ ಘಂಟ ವಿರುಲ ಪೂಜ ಏಮಿ ಜೇಯುನು"? - ಮನಸ್ಸನ್ನು ಭಗವಂತನ ಪಾದದಲ್ಲಿ ದೃಢವಾಗಿ ನಿಲ್ಲಿಸುವ ಸಾಮರ್ಥ್ಯವಿಲ್ಲದೆ, ಮಧುರವಾದ ನಾದ ಹೊರಡಿಸುವ ಘಂಟೆಯನ್ನು ಇಟ್ಟುಕೊಂಡು, ಸುವಾಸನಾಯುಕ್ತ ಹೂವುಗಳನ್ನು ಇಟ್ಟುಕೊಂಡು ಏನು ಪ್ರಯೋಜನವೆಂದು ಕೇಳುತ್ತಾರೆ.  ಇದೆಲ್ಲಾ ಇದ್ದರೂ ಮನಸ್ಸು ಎಲ್ಲೋ ಅಲೆಯುತ್ತಾ, ಯಾವುದೋ ವಿಷಯಾಸಕ್ತಿಗಳ ಬಗ್ಗೆ ಚಿಂತಿಸುತ್ತಾ ಇದ್ದರೆ, ಪೂಜೆ ಮಾಡುವುದರಿಂದ ಯಾವ ಫಲವೂ ಇಲ್ಲವೆನ್ನುತ್ತಾರೆ.  ಕೃತಿಯ ಅನುಪಲ್ಲವಿಯಲ್ಲಿ "ಘನ ದುರ್ಮದುಡೈ ತಾ ಮುನಿಗಿತೇ ? | ಕಾವೇರಿ ಮಂದಾಕಿನಿ ಎಟು ಬ್ರೋಚುನು "? - ಮನಸ್ಸಿನ ತುಂಬ ಬರಿಯ ಮದ ಮಾತ್ಸರ್ಯ, ದುರಹಂಕಾರಗಳನ್ನು ತುಂಬಿಕೊಂಡು ಕಾವೇರಿ, ಗಂಗಾ ನದಿಗಳಲ್ಲಿ ತೀರ್ಥಸ್ನಾನ ಮಾಡುತ್ತೇನೆಂದು ಮುಳುಗಿದರೆ ಅದು ಬರಿಯ ದೇಹಕ್ಕೆ ಬಾಹ್ಯ ಸ್ನಾನವಾಯಿತೇ ಹೊರತು, ಭಗವಂತನ ಸ್ಮರಣೆಯಲ್ಲಿ ಮಾಡಿದ ತೀರ್ಥಸ್ನಾನದ ಪ್ರಕ್ರಿಯೆಯಾಗುವುದಿಲ್ಲ.  ಇದೇ ಮಾತನ್ನು ಶ್ರೀಪುರಂದರ ದಾಸರು ತಮ್ಮ ಪದದಲ್ಲಿ "ತನುವ ನೀರೊಳಗದ್ದಿ ಫಲವೇನು | ಮನದಲ್ಲಿ ದೃಢಭಕ್ತಿ ಇಲ್ಲದ ಮನುಜನು"|| ಎಂದಿದ್ದಾರೆ.  ಶ್ರೀ ತ್ಯಾಗರಾಜರು ತಮ್ಮ ಕೃತಿಯ ಚರಣದಲ್ಲಿ "ಸೋಮಿದಮ್ಮ ಸೊಗಸುಗಂಡ್ರಗೋರಿತೇ | ಸೋಮಯಾಜಿ ಸ್ವರ್ಗಾರ್ಹುಡೌನೋ ? | ಕಾಮಕ್ರೋಧುಡು ತಂಪಂಬೊನರ್ಚಿತೇ | ಗಾಚಿ ರಕ್ಷಿಂಚುನೇ ? ತ್ಯಾಗರಾಜನುತ || -  ಮನಸ್ಸಿನ ನಿಗ್ರಹದ ವಿಷಯವನ್ನೇ ಬಹಳ ಪ್ರಮುಖವಾಗಿ ಇಲ್ಲಿ ಸಂತ ತ್ಯಾಗರಾಜರು ಪರಿಣಾಮಕಾರಿಯಾಗಿ ಒಂದು ನಿದರ್ಶನದಿಂದ ವಿವರಿಸಿದ್ದಾರೆ.  ಅರ್ಥ ತಿಳಿದು ಮಾಡುವ ಕರ್ಮಗಳಿಗೆ ಬಹು ವಿಶಿಷ್ಟವಾದ ಫಲಗಳಿವೆ ಎಂಬುದನ್ನು ತೋರಿಸಿದ್ದಾರೆ.  ಶ್ರೀರಾಮಚಂದ್ರ ಕೂಡ ಸೀತೆಯ ಸುವರ್ಣ ವಿಗ್ರಹವನ್ನು ಪಕ್ಕದಲ್ಲಿಟ್ಟುಕೊಂಡೇ ಅಶ್ವಮೇಧ ಯಾಗವನ್ನು ಆಚರಿಸಿದ್ದು.  ಅದರ ದೃಷ್ಟಾಂತದ ಹಿನ್ನೆಲೆಯಲ್ಲಿ ತ್ಯಾಗರಾಜರು ತಮ್ಮ ಈ ಕೃತಿಯ ಚರಣದಲ್ಲಿ "ಯಜ್ಞದೀಕ್ಷಿತನಾಗಿರುವವನ ಪತ್ನಿ ನವನಾಗರಿಕನನ್ನು ಅಪೇಕ್ಷಿಸಿದರೆ ಯಜ್ಞದ ಫಲವು ದೊರಕುವುದೇ ಎನ್ನುತ್ತಾ ಮನಸ್ಸು ಲೌಕಿಕ ಭೋಗಗಳಲ್ಲಿ ಮುಳುಗಿದ್ದಾಗ ಮಾಡುವ ಪೂಜೆಯಿಂದ ಭಗವಂತ ಪ್ರಸನ್ನನಾಗುವುದಿಲ್ಲ.  ಬಂಧ ಮೋಕ್ಷಗಳಿಗೆ ಕಾರಣವಾದ ಮನಸ್ಸನ್ನು ನಿಗ್ರಹಿಸಲೇ ಬೇಕು ಎಂದಿದ್ದಾರೆ.

ಭಗವದ್ಗೀತೆಯಲ್ಲಿ "ಶ್ರೇಯೋ ಹಿ ಜ್ಞಾನಮಭ್ಯಾಸಾಜ್ಞಾನಾದ್ಧ್ಯಾನಂ ವಿಶಿಷ್ಯತೇ |
ಧ್ಯಾನಾತ್ ಕರ್ಮಫಲತ್ಯಾಗಸ್ಯಾಗಾಚ್ಛಾಂತಿರನಂತರಮ್" ||  - ಅಭ್ಯಾಸಯೋಗಕ್ಕಿಂತ ಜ್ಞಾನವು ಶ್ರೇಷ್ಠವಾದುದು ಏಕೆಂದರೆ ಆಧ್ಯಾತ್ಮಿಕ ಸಾಧನೆಗಳು ಭೌತಿಕ ಶರೀರಕ್ಕೆ ಸಂಬಂಧ ಪಟ್ಟವುಗಳಲ್ಲ.  ಅದು ಆಂತರಿಕ ವ್ಯಕ್ತಿತ್ವವನ್ನು ಸಮಗ್ರಗೊಳಿಸುವ ಸಾಧನೆ.  ಮೊದಲು ಜ್ಞಾನ ಸಂಪಾದನೆಯಾಗಬೇಕು.  ಅಭ್ಯಾಸಕ್ಕಿಂತಲೂ ಜ್ಞಾನ ಶ್ರೇಷ್ಠವಾದುದು.  ಜ್ಞಾನಕ್ಕಿಂತ ಧ್ಯಾನವು ಶ್ರೇಷ್ಠ - ಬರಿಯ ಜ್ಞಾನ ಸಂಪಾದಿಸಿಯೂ ಏನೂ ಫಲವಿಲ್ಲ.  ಗಳಿಸಿದ ಜ್ಞಾನವನ್ನು ಸತತವಾಗಿ ಧ್ಯಾನಿಸುತ್ತಿರಬೇಕು ಮತ್ತು ಜೀವನಕ್ಕೆ ಅಳವಡಿಸಿಕೊಳ್ಳುವ ಪ್ರಯತ್ನ ನಿರಂತರ ಮಾಡುತ್ತಲೇ ಇರಬೇಕು.  ಇದು ಧ್ಯಾನದಿಂದ ಮಾತ್ರ ಸಾಧ್ಯ.  ಹಾಗೇ "ಧ್ಯಾನಕ್ಕಿಂತ ಕರ್ಮಫಲತ್ಯಾಗವು ಶ್ರೇಷ್ಠ" - ಧ್ಯಾನದ ಮೂಲಕ ಸಾಧಕರು ತಮ್ಮ ಮನಸ್ಸು ಮತ್ತು ಇತರ ಇಂದ್ರಿಯಗಳ ನಿಗ್ರಹ ಮಾಡಬೇಕು.  ಈ ಮನಸ್ಸು ಮತ್ತು ಇಂದ್ರಿಯಗಳ ಪರಿಧಿ ದಾಟಿ ಭಗವಂತನಲ್ಲಿ ಪ್ರಜ್ಞೆಯನ್ನು ಲೀನವಾಗಿಸಿಕೊಳ್ಳಲು ನಾವು ಕರ್ಮಫಲವನ್ನು ತ್ಯಾಗ ಮಾಡುವ ಮೂಲಕ ಮಾತ್ರ ಸಾಧ್ಯ ಮಾಡಿಕೊಳ್ಳ ಬಹುದು.  ಇಲ್ಲಿಯೂ ಭಗವಂತ ಮನೋನಿಗ್ರಹವೇ ಅತಿ ಮುಖ್ಯವೆಂಬ ಮಾತನ್ನು ಅರ್ಜುನನಿಗೆ ಉಪದೇಶಿಸುವುದರ ಮೂಲಕ ತಿಳಿಸಿದ್ದಾನೆ.


"ಮನವನಿತ್ತರೆ ತನ್ನನೀವನು" - ವಿದ್ಯುತ್ ಇಲ್ಲದೆ ಹೇಗೆ ಉಪಕರಣಗಳು ಜಡವೋ ಹಾಗೆ ನಮ್ಮ ಮನಸ್ಸೂ ಕೂಡ ಭಗವಂತನಿಲ್ಲದೆ ಜಡವಾಗಿರುತ್ತದೆ. ಮನಸ್ಸು ಕೊಡುವುದೆಂದರೆ ನಮ್ಮ ರಾಗ-ದ್ವೇಷಾದಿಗಳನ್ನೂ, ನಾನೆಂಬ ಅಹಂಕಾರವನ್ನೂ ತ್ಯಜಿಸುವುದು ಮತ್ತು ಸದಾ ಸರ್ವದಾ ಭಗವಂತನ ನಾಮಸ್ಮರಣೆ ಮಾಡುವುದು.  ಮನಸ್ಸೆಂಬುದು ಒಂದು ಪಾತ್ರೆಯಂತೆ ಎಂಬ ಆಲೋಚನೆ ಸಲ್ಲದು.  ಏಕೆಂದರೆ ಹಾಗೆ ಆಲೋಚಿಸಿದಾಗ ಅದರ ಒಳಗಿರುವ ಎಲ್ಲಾ ಕಲ್ಮಶಗಳನ್ನೂ ಹೊರಗೆ ಹಾಕಿ, ತೊಳೆಯಬಹುದೇನೋ ಎಂಬ ಭಾವ ಕೂಡ ಬರಬಹುದು.  ಆದರೆ ಹಾಗೆ ಮಾಡಲು ಸಾಧ್ಯವಿಲ್ಲ.  ಕಲ್ಮಶಗಳನ್ನು ಹೊರಚೆಲ್ಲಿ, ಪಾತ್ರೆಯನ್ನು ಶುದ್ಧಗೊಳಿಸಬೇಕೆಂದರೆ, ನಾವು ಪವಿತ್ರ ಗ್ರಂಥಗಳ ಪಾರಾಯಣ ಮಾಡುವುದು, ಪ್ರವಚನಗಳನ್ನು ಶ್ರವಣ ಮಾಡುವುದು ಮತ್ತು ಸತ್ಸಂಗದಲ್ಲಿ ಸದಾ ನಿರತರಾಗಿರುವುದನ್ನು ಬಿಡದೇ ಅನವರತ ಮಾಡುತ್ತಾ ಬಂದಾಗ ಮನದ ಕಲ್ಮಶಗಳೆಲ್ಲಾ ತೊಳೆದುಹೋಗಿ ಅಲ್ಲಿ ಸದ್ವಿಚಾರಗಳು, ಭಗವಂತನ ಚಿಂತನೆಗಳು ತುಂಬಿಕೊಳ್ಳುತ್ತವೆ.  ಹೀಗೆ ನಿರಂತರ ಶ್ರವಣ, ಪಾರಾಯಣಗಳಿಂದ ನಮ್ಮ ತಾದಾತ್ಮ್ಯತೆ / ತನ್ಮಯತೆ ಹೆಚ್ಚಿ, ಭಗವಂತನ ಕಡೆಗೆ ಮತ್ತಷ್ಟು, ಮಗದಷ್ಟು ಆಕರ್ಷಿತರಾಗುತ್ತೇವೆ. ಮಾನಸ ಪೂಜೆಯನ್ನು ಸದಾ ಮಾಡುತ್ತಿರುವ ಜೀವನಿಗೆ ಭಗವಂತ ಒಲಿದು ತನ್ನನ್ನೇ ಕೊಟ್ಟುಬಿಡುತ್ತಾನೆ.  ಮನಸ್ಸಿನಲ್ಲಿ ತಾನೇ ನಿಂತು ನಮಗೆ ಮನಸ್ಸಿನ ಸಮರ್ಪಣೆಗೆ ಪ್ರೇರಣೆ ಕೊಡುತ್ತಾ, ನಮ್ಮಲ್ಲಿರುವ ಅದ್ಭುತ ಶಕ್ತಿಯನ್ನು ಜಾಗೃತಿಗೊಳಿಸುವ ಕರುಣಾಸಮುದ್ರ ಶ್ರೀಹರಿಗೆ ಪ್ರತಿಯಾಗಿ ನಾವೇನು ಕೊಡಬಲ್ಲೆವು ? ಭಗವಂತ ತಾನು ಒಲಿದು ಕೊಟ್ಟ ಆ ಮನಸ್ಸಿನ ಸಂಪೂರ್ಣ ಚಟುವಟಿಕೆಗಳನ್ನು ಅವನಿಗೇ ಸಮರ್ಪಿಸಿಬಿಡುವುದೊಂದೇ ದಾರಿ.  ಆದರೆ ತಾನು ಕೊಟ್ಟ ಮನಸ್ಸನ್ನು ತನಗೇ ಮರಳಿ ಅರ್ಪಿಸುತ್ತಾರೆಂಬ ಭಾವವಾಗಲೀ, ಅಸಂತೋಷವಾಗಲಿ ಭಗವಂತನಿಗೆ ಇಲ್ಲವೇ ಇಲ್ಲ.  ಕೊಟ್ಟದ್ದನ್ನೇ, ಕೊಟ್ಟಷ್ಟನ್ನೇ ಸ್ವೀಕರಿಸಿ ಸಂತುಷ್ಟನಾಗಿ, ಹೆಚ್ಚಿಸಿ ನಮಗೇ ವಾಪಸ್ಸು ಕೊಡುವಂತಹ ಅಪಾರ ಉದಾರಿ, ಕರುಣಾಮಯಿ ಭಗವಂತ ಎ೦ದು ತಿಳಿಸುತ್ತಾರೆ ಜಗನ್ನಾಥದಾಸರು.

ಚಿ ತ್ರ ಕೃ ಪೆ : ಅಂ ತ ರ್ಜಾ ಲ 

Tuesday, July 31, 2012

ಕರುಣಾ ಸಂಧಿ - ೫ನೇ ಪದ್ಯ

ಮಲಗಿ ಪರಮಾದರದಿ ಪಾಡಲು |
ಕುಳಿತು ಕೇಳುವ ಕುಳಿತು ಪಾಡಲು |
ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ ||
ಸುಲಭನೋ ಹರಿ ತನ್ನವರನರ |
ಘಳಿಗೆ ಬಿಟ್ಟಗಲನು ರಮಾಧವ |
ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ || ೫ ||

ಪ್ರತಿಪದಾರ್ಥ :  ಮಲಗಿ - ಅನಾರೋಗ್ಯದಿಂದಾಗಲೀ, ವೃದ್ಧಾಪ್ಯದಿಂದಾಗಲೀ, ದೈಹಿಕ ದೌರ್ಬಲ್ಯದಿಂದಾಗಲೀ ಅಂತಃಪ್ರಜ್ಞೆಯಿಂದ ಮಲಗಿರುವಾಗ, ಪರಮಾದರದಿ ಪಾಡಲು - ಭಕ್ತಿ - ಶ್ರದ್ಧೆ ಹಾಗೂ ಪ್ರೇಮದಿಂದ ಹಾಡಲು, ಕುಳಿತು ಕೇಳುವ - ಆದರದಿಂದ ಕರೆಯುತ್ತಾ ಮಲಗಿರುವ ಭಕ್ತರ ಸಮೀಪ ತಾನೇ ಬಂದು ಕುಳಿತು ಕಿವಿಗೊಟ್ಟು ಆಲಿಸುವವನು, ಕುಳಿತು ಪಾಡಲು ನಿಲುವ - ಕುಳಿತು ಎಂದರೆ ಯೋಗ್ಯವಾದ ಆಸನಗಳಲ್ಲಿ ಕುಳಿತು ಮಾಡುವ ಜಪ - ತಪ - ಪೂಜೆಗಳನ್ನು ಭಗವಂತ ನಿಂತು ಸ್ವೀಕರಿಸುವನು, ನಿಂತರೆ ನಲಿವ - ನಿಂತರೆ ಎಂದಾಗ ಯೋಗ್ಯವಾದ ಸ್ಥಳದಲ್ಲಿ ನಿಂತು ಅರ್ಘ್ಯವನ್ನು ಕೊಡುವಾಗ ಸಂತಸದಿಂದ ನಲಿಯುವವನು, ನಲಿದರೆ ಒಲಿವೆನು ನಿಮಗೆಂಬ - ಭಕ್ತರು ಭಗವಂತನನ್ನು ಸ್ತುತಿಸುತ್ತಾ ಮೈಮರೆತು ನಲಿಯುತ್ತಾ ನಾಟ್ಯವಾಡುವ ಭಕ್ತರ ಭಕ್ತಿಯ ಪರಾಕಾಷ್ಠೆಗೆ ಮೆಚ್ಚಿ ಒಲಿಯುವವನು, ಸುಲಭನೋ ಹರಿ - ಸರಳವಾಗಿ ಭಕ್ತಿಗೆ ಶ್ರದ್ಧೆಗೆ ಸಮರ್ಪಣೆಗೆ ಮೆಚ್ಚಿ ಧಾವಿಸುವವನು, ತನ್ನವರ ಅರೆಗಳಿಗೆ ಬಿಟ್ಟಗಲನು - ತನ್ನನ್ನೇ ನಂಬಿ ಸ್ತುತಿಸುವ ಸರ್ವವನ್ನೂ ಸಮರ್ಪಿಸುವ ಭಕ್ತರನ್ನು ಒಂದೇ ಒಂದು ಕ್ಷಣಕ್ಕೂ ಬಿಟ್ಟು ದೂರ ಹೋಗದವನು, ರಮಾಧವನ ಒಲಿಸಲರಿಯದೆ - ಇಂತಹ ಸುಲಭವಾಗಿ ಒಲಿಯುವ ರಮೆಯ ಪತಿಯಾದ ಮಾಧವನನ್ನು ಹೇಗೆ ಮೆಚ್ಚಿಸುವುದೆಂದು ತಿಳಿಯದ, ಪಾಮರರು - ವಿವೇಕವಿಲ್ಲದ ಮೂಢ ಜನರು, ಬಳಲುವರು ಭವದೊಳಗೆ - ಸಂಸಾರದ ಬಂಧನದಲ್ಲಿ ಮತ್ತೆ ಮತ್ತೆ ಸಿಲುಕುತ್ತಾ ದುಃಖ ಅನುಭವಿಸುವರು.


ಕರುಣಾಮೂರ್ತಿಯಾದ ಪರಮಾತ್ಮನು ತನ್ನನ್ನು ಸ್ಮರಿಸುವವರನ್ನು ಎಂದೂ ಕೈ ಬಿಡನು. ತನ್ನನ್ನು ಕುರಿತು ಸ್ತುತಿಸುವಾಗ ಹೀಗೇ ಇರಬೇಕೆಂಬ ನಿರ್ದೇಶನವನ್ನು ಅವನು ಕೊಡುವುದೇ ಇಲ್ಲ. ದೇಶ, ಕಾಲ, ನೇಮ, ನಿಷ್ಠೆ ಯಾವುದೂ ಅವನಿಗೆ ಬೇಡ.  ಯಾರು ತನ್ನನ್ನು ಪ್ರೀತಿಯಿಂದ, ಆರ್ತತೆಯಿಂದ, ಮನವನ್ನು ಕೊಟ್ಟು ಭಜಿಸುತ್ತಾರೋ ಅವರಿಗೆ ರಮಾಧವ ಒಲಿದೇ ಒಲಿಯುತ್ತಾನೆ ಎಂದು ಹರಿದಾಸರು ಈ ಪದ್ಯದಲ್ಲಿ ಹೇಳಿದ್ದಾರೆ.  

ಇನ್ನು ಅಧ್ಯಾತ್ಮಿಕವಾಗಿ ತೆಗೆದುಕೊಂಡರೆ ಮಲಗಿ ಪರಮಾದರದಿ ಪಾಡಲು ಎಂದರೆ ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿ ಮಲಗಿಯೇ ವಿಷ್ಣು ಸ್ತೋತ್ರವನ್ನು ಮಾಡಿದವರು.  ಕುಳಿತು ಪಾಡಲು ಎಂದರೆ ಪುಟ್ಟ ಧ್ರುವಕುಮಾರನು ಕುಳಿತೇ ಸ್ತೋತ್ರ ಮಾಡಿದವನು.  ಭಕ್ತ ಪ್ರಹ್ಲಾದನು ನಿಂತು ಪಾಡಿದ್ದರಿಂದ ಪರಮಾತ್ಮ ನರಸಿಂಹ ರೂಪದಿಂದ ನಲಿ ನಲಿಯುತ್ತಾ ಕಂಬದಿಂದ ಬಂದು ಒಲಿದನು.  ನಾರದರಂತಹ ಜ್ಞಾನಿಗಳು ಗೆಜ್ಜೆ ಕಟ್ಟಿ ತಾಳ ಕುಟ್ಟಿ ನಲಿದು ಪಾಡುವುದರಿಂದ, ಭಗವ೦ತನೂ ಅವರೊಡನೆಯೇ ಇದ್ದು ನಲಿಯುತ್ತಲೇ ಇರುತ್ತಾನೆ.  ಹರಿಯನ್ನು ಒಲಿಸಿಕೊಳ್ಳುವುದು ಬಲು ಸುಲಭವು.  ಇಂತಹ ಹರಿಯು ತನ್ನ ಭಕ್ತರನ್ನು ಬಿಟ್ಟು ಎಂದೂ ಅಗಲುವುದೇ ಇಲ್ಲ.  ಭಕ್ತರು ಎಂದಿಗೂ ಅವನ ಮಕ್ಕಳೇ.  ಜಗನ್ನಾಥ ದಾಸರು ತಮ್ಮ ಒಂದು ಕೃತಿ "ಅರಿತವರಿಗೆ ಅತಿ ಸುಲಭ ಹರಿಯ ಪೂಜೆ" ಯಲ್ಲಿ ಪ್ರೀತಿಯಿಂದಲಿ ಭಜಿಸಿ ಮೋದಿಪರ ವೀತಶೋಕರ ಮಾಡಿ ಸಂತೈಸುತಿಹ ಜಗನ್ನಾಥ ವಿಠಲ, ಒಲಿದು ಸರ್ವಕಾಲದಲ್ಲಿ ಎಂದು ಹಾಡಿ ಹೊಗಳಿದ್ದಾರೆ.  ಹಾಗೇ ಪರಮಾತ್ಮನನ್ನು ಒಲಿಸಲು ಅರಿಯದೇ ಪಾಮರರು ಬಳಲುವರು ಭವದೊಳಗೆ ಎಂದು ಹೇಳುತ್ತಾರೆ.
 "ಮಲಗಿ ಪರಮಾದರದಿ ಪಾಡಲು.."   -   ದಶ ಇಂದ್ರಿಯಗಳನ್ನೂ ಲಯಗೊಳಿಸಿ ಧ್ಯಾನಿಸಿದರೆ, ಹೃದಾಕಾಶದಲ್ಲಿ ಕುಳಿತು ಕೇಳುವ ಎನ್ನುವ ವಿಚಾರವನ್ನು ವಿಶ್ಲೇಷಿಸುವ ದಾಸರು, ಮಲಗುವ ಮುನ್ನ ಹರಿಯನ್ನು ಧ್ಯಾನಿಸಿ, ಮನವು ನಿನ್ನಲ್ಲಿ ಲಯಗೊಳ್ಳಲಿ ಅಂತ ಪ್ರಾರ್ಥಿಸಿದ್ದರೆ, ಕನಸುಗಳ ವ್ಯಾಪಾರವೂ ಅಲ್ಲಿ ಇರುವುದಿಲ್ಲ, ಹೃದಯದಾಕಾಶದಲಿ  ಹರಿಯು ವ್ಯಾಪಿಸಿ ಕುಳಿತು ಕೇಳುವ ಎ೦ದು ಅರ್ಥವನ್ನು ವ್ಯಾಖ್ಯಾನಿಸಿದ್ದಾರೆ. ಕುಳಿತು ಧ್ಯಾನಿಸಿದರೆ, ಕಣ್ಣೆದುರಲ್ಲಿ ನಿಲುವ ಎ೦ದಾಗ  ಧ್ಯಾನ ಸ್ಥಿತಿಯಲ್ಲಿ ನಮಗೆ ಗೋಚರವಾಗುತ್ತಾ ಹೋಗುವ ಒಂದು ದೃಷ್ಟಿ (vision) ಕೆಲವೊಮ್ಮೆ ಬೆಳಕು, ಬಣ್ಣಗಳು ಗೋಚರವಾಗುವ ಹಾಗೆ ಎ೦ದು ಅರ್ಥೈಸಬಹುದು.  "ಸುಲಭನೂ ಹರಿ ತನ್ನವರನರೆಘಳಿಗೆ ಬಿಟ್ಟಗಲನೋ".... ಎನ್ನುವಲ್ಲಿ   ತನ್ನವರು ಎ೦ದರೆ ಹರಿಯ ಪರಿವಾರ ಅಲ್ಲ, ಅವನ ಭಕ್ತರು ಎಂದು ಅರ್ಥೈಸಿಕೊಳ್ಳಬೇಕು.  "ರ ಮಾಧವನ ಒಲಿಸಲರಿಯದೆ.." ಅಂದರೆ ರಮೆಯ ಅರಸ,  ಧವನ ಎ೦ದರೆ ಗಂಡ, ಪತಿ ಎ೦ದು ಅರ್ಥ ಆಗುತ್ತದೆ.  ಅವನನ್ನು ಹೀಗೆ ಸುಲಭವಾಗಿ ಒಲಿಸಿಕೊಳ್ಳಲರಿಯದ ಭಕ್ತರು ಎಂದು ಅರ್ಥ ಮಾಡಿಕೊಳ್ಳಬೇಕು.  ಭಗವಂತನ ಕರುಣೆ ಎಂಬುದು ಅದೆಷ್ಟು ವಿಶಾಲವಾದುದೆಂದರೆ, ನಾವು ಒಂದು ಹೆಜ್ಜೆ ಅವನೆಡೆಗೆ ಇಟ್ಟರೆ ಸಾಕು, ಅವನು ೧೦, ೧೦೦, ೧೦೦೦ ಹೆಜ್ಜೆಗಳನ್ನು ನಮ್ಮೆಡೆಗಿಟ್ಟು ಕಂದನೆಡೆಗೆ ಧಾವಿಸುವ ತಾಯಿಯಂತೆ ಬಂದು ರಕ್ಷಿಸುವನು. ಜೀವನದ ಉಳಿದೆಲ್ಲಾ ಸಂಬಂಧಗಳು ಬರೀ ಸೀಮಿತ. ಬಿಂಬರೂಪಿ ಭಗವಂತನ ಸಂಬಂಧ ಮಾತ್ರವೇ ಅವನದೇ ಪ್ರತಿಬಿಂಬವಾದ ನಮ್ಮ ಜೊತೆ ಅನಂತ.  ನಾವು ಭಗವಂತನನ್ನು ಅರಿಯುವ ಪ್ರಯತ್ನ ಮಾಡುತ್ತಾ ನಮ್ಮ ಕೃತಜ್ಞತೆಯನ್ನು ಮಾತ್ರ ಸದಾ ತಿಳಿಸುತ್ತಿರಬೇಕು.

ಮಲಗಿ, ಕುಳಿತು, ನಿಂತು, ಕುಣಿದು, ನಲಿದು, ಒಲಿದು ಎಂದೆಲ್ಲಾ ಬೇರೆ ಬೇರೆಯಾಗಿ ಹೇಳಿರುವುದನ್ನು ಅನೇಕ ರೀತಿಯಾಗಿ ವಿಶ್ಲೇಷಣೆ ಮಾಡಬಹುದು.  ಮಲಗಿ ಎಂದಾಗ ಕುಳಿತುಕೊಳ್ಳಲಾಗದವರು, ಅಶಕ್ತರು ಮಲಗಿಯೇ ಪರಮಾದರದಿಂದ ಹರಿಯ ಸ್ಮರಣೆ ಮಾಡಿದರೂ ಸಾಕು, ಅವನು ಪ್ರೀತಿಯಿಂದ ಪಕ್ಕದಲ್ಲಿ ಕುಳಿತೇ ಕೇಳಿಸಿಕೊಳ್ಳುವನೆಂದೆನ್ನಬಹುದು.  ಜಗನ್ನಾಥ ದಾಸರು ಹರಿ ಪ್ರತ್ಯಕ್ಷನಾಗುವನೆಂದು ಹೇಳಿಲ್ಲ ’ಒಲಿವೆ ನಿಮಗೆಂಬ’ ಎಂದಿದ್ದಾರೆ.  ಹರಿಯ ಕರುಣೆಯನ್ನು ನಾವು ನಾನಾ ರೀತಿಯಲ್ಲಿ ಪ್ರತೀ ನಿಮಿಷವೂ ಪಡೆಯುತ್ತಲೇ ಇದ್ದೇವೆ.  ಇದಕ್ಕಾಗಿ ಮಲಗಿದಾಗಲೂ, ಕುಳಿತಾಗಲೂ, ನಿಂತಾಗಲೂ, ಸದಾ ಅನವರತ ಭಗವಂತನ ನಾಮ ಸ್ಮರಣೆ ಮಾಡುತ್ತಾ ಧನ್ಯವಾದಗಳನ್ನು ಅರ್ಪಿಸುತ್ತಲೇ ಇರಬೇಕೆಂಬ ಅರ್ಥ ಕೂಡ ಆಗುತ್ತದೆ.  ನಾವು ಯಾವಾಗ ಪರಮ ಆದರದಿಂದ, ಭಕ್ತಿಯಿಂದ ಭಗವಂತನ ಸ್ಮರಣೆ ಮಾಡುತ್ತೇವೆಯೋ ಆಗ ಅವನು ನಾವು ಮಲಗಿ, ಕುಳಿತು, ಅಥವಾ ನಿಂತು ಸ್ಮರಣೆ ಮಾಡುತ್ತಿದ್ದೇವೆಯೇ ಎಂಬುದನ್ನು ಪರಿಗಣಿಸುವುದಿಲ್ಲ, ಧಾವಿಸಿ ಬಂದು ನಮಗೆ ಒಲಿಯುವನೆಂದು ಅರ್ಥ.  ಇನ್ನೊಂದು ವಿಧದಲ್ಲಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದಾಗ ನಮಗೆ ತೋರುವುದು, ಜನನ ಮರಣವೆಂಬ ಚಕ್ರದಲ್ಲಿ ನಿರಂತರ ಸುತ್ತುವ ಜೀವ, ಭ್ರೂಣಾವಸ್ಥೆಯಲ್ಲಿ ತಾಯಿಯ ಗರ್ಭದಲ್ಲಿ ಮಲಗಿರುತ್ತಾನೆ, ಜನಿಸಿದ ನಂತರ ತೊಟ್ಟಿಲಲ್ಲಿ ಮಲಗುತ್ತಾನೆ, ಮಗುವಾಗಿ ಎದ್ದು ಕುಳಿತುಕೊಳ್ಳುತ್ತಾನೆ, ಬೆಳೆದಾಗ ನಿಲ್ಲುತ್ತಾನೆ, ಯೌವನ ಬಂದಾಗ ಕುಣಿಯುತ್ತಾನೆ, ಮತ್ತೆ ವಯಸ್ಸಾದಾಗ ಸೋತು ನಿಲ್ಲುತ್ತಾನೆ, ತೀರ ಮುದುಕನಾದಾಗ ನಿಲ್ಲಲಾರದೆ ಕುಳಿತುಕೊಳ್ಳುತ್ತಾನೆ ಮತ್ತು ಮರಣ ಸಮಯವಾದಾಗ ಏಳಲೇ ಆಗದೆ ಮಲಗಿ ಬಿಟ್ಟಿರುತ್ತಾನೆ.  ಹೀಗೇ ಎಲ್ಲಾ ಅವಸ್ಥೆಗಳಲ್ಲೂ ಯಥಾಶಕ್ತಿ ಜ್ಞಾನ ಸಾಧನೆ ಮಾಡಲೇಬೇಕೆಂಬ ಅರ್ಥ ಕೂಡ ಆಗುತ್ತದೆ.  ಗರ್ಭಾವಸ್ಥೆಯಲ್ಲಿಯೂ, ಶಿಶುಗಳಲ್ಲಿಯೂ, ವೃದ್ಧಾಪ್ಯದಲ್ಲಿಯೂ, ಭೌತಿಕ ದೇಹದ ದೌರ್ಬಲ್ಯದಿಂದ ಭಗವಂತನ ಆರಾಧನೆ, ಉಪಾಸನೆ ತೀವ್ರತರವಾಗಿ ಆಗುವುದಿಲ್ಲ ಆದರೆ ಯೌವನಾವಸ್ಥೆಯಲ್ಲಿ ಜೀವಿ ಸದೃಢನಾಗಿರುತ್ತಾನೆ, ಕುಣಿದು, ನಲಿದು ಉಪಾಸನೆ ಮಾಡಬಹುದಾದ ಅವಸ್ಥೆ ಮತ್ತು ಯೋಗ್ಯಕಾಲ ಕೂಡ.  ಆಗ ವಿಷಯಾಸಕ್ತಿಗಳಲ್ಲಿ ಮುಳುಗಿ, ಬೇಕೆನಿಸಿದ್ದನ್ನೆಲ್ಲಾ ಉಂಡು - ಉಟ್ಟು ದೇಹವನ್ನು ವ್ಯರ್ಥ ಮಾಡಿಕೊಳ್ಳುವುದು ಬಿಟ್ಟು ಬಿಡಬೇಕು.  ದೇಹಧಾರಣೆಗೆ ಬೇಕಾದಷ್ಟು ಮಾತ್ರ ಸಾತ್ವಿಕ ಆಹಾರ ತೆಗೆದುಕೊಂಡು, ಶರೀರ ಮತ್ತು ಇಂದ್ರಿಯಗಳನ್ನು ನಿಗ್ರಹಿಸಿ, ಒಳಗೂ - ಹೊರಗೂ ಹರಿಯನ್ನು ಸೇವಿಸಿದಾಗ ಭಗವಂತ ಪರಮ ಕರುಣೆಯಿಂದ ನಮಗೆ ಒಲಿಯುವನು ಎಂಬ ಅರ್ಥ ಕೂಡ ಆಗುತ್ತದೆ.

ಕಲಿಯುಗದಲ್ಲಿ ನಿರಂತರವಾಗಿ ಹರಿ ಸ್ಮರಣೆ,  ನಾಮ ಜಪ ಮಾಡುತ್ತ, ಹರಿಯ ಸ್ತುತಿಗಳನ್ನು ಹಾಡುತ್ತಾ ಜನ್ಮ ಸಾರ್ಥಕ ಮಾಡಿಕೊಳ್ಳಬೇಕೆಂಬುದನ್ನು ನಮ್ಮ ದಾಸ ಪರಂಪರೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಮತ್ತು ಸುಲಭವಾಗಿ ಅರ್ಥವಾಗುವಂತೆ ವಿವರಿಸಿದ್ದಾರೆ.  ಶ್ರೀ ವಿಜಯದಾಸರು "ಕಲಿಯುಗದಿ ಗಾನದಿ ಕೇಶವನೆನಲು ಕೈಗೂಡುವನು ರಂಗವಿಟ್ಠಲ" ಎಂದಿದ್ದಾರೆ ಮತ್ತು ಶ್ರೀ ಪುರಂದರ ದಾಸರು "ಕೀರ್ತನಮಾತ್ರದಿ ಕಲಿಯುಗದಲ್ಲಿ ಮುಕುತಿಯನೀವ ಪುರಂದರ ವಿಟ್ಠಲ" ಎಂದಿದ್ದಾರೆ.  ಕೃತಯುಗ, ತ್ರೇತಾಯುಗ, ದ್ವಾಪರಯುಗಗಳಿಗಿಂತಲೂ ಕಲಿಯುಗದಲ್ಲಿ ಅತ್ಯಂತ ಸುಲಭೋಪಾಯವಾದ, ನಾಮ ಸ್ಮರಣೆಯಿಂದಲೇ ಹರಿಯನ್ನು ಒಲಿಸಿಕೊಳ್ಳಬಹುದೆಂಬ ಮಾತು ಸತ್ಯವೆಂದಿದ್ದಾರೆ.  ಹೀಗೆ ಗಾನ ಮಾಡುವುದಕ್ಕೆ ಯಾವುದೇ ನಿರ್ದಿಷ್ಟ ಆಸನವೇ ಬೇಕೆಂದೇನೂ ಇಲ್ಲ.  ಮಲಗಿಯೂ ಹಾಡಬಹುದು, ಕುಳಿತೂ ಹಾಡಬಹುದು, ನಿಂತೂ ಹಾಡಬಹುದು, ಕುಣಿಯುತ್ತಲೂ ಹಾಡಬಹುದು.  ’ಮಲಗಿ ಪರಮಾದರದಿ ಪಾಡಲು’ ಎಂಬುದನ್ನು ’ಅಪರೋಕ್ಷ ಜ್ಞಾನಿಗಳಿಗಾಗಿ ತಿಳಿಸಿರುವುದು ಎಂಬ ಅರ್ಥದಲ್ಲಿ ಕೂಡ ನೋಡಬಹುದು, ಏಕೆಂದರೆ ಅವರಿಗೆ ಯಾವ ನಿಯಮಗಳೂ ಇರುವುದಿಲ್ಲ.  ಅವರು ಸದಾ ಭಗವಂತನ ಸ್ಮರಣೆಯನ್ನು ಮಾಡುತ್ತಲೇ ಇರುತ್ತಾರೆ.

’ರಮಾಧವನೊಲಿಸಲರಿಯದೇ ಪಾಮರರು ಬಳಲುವರು ಭವದೊಳಗೆ’ - ರಮಾಧವನೆಂದರೆ ರಮೆಯ ರಮಣ ಮಾಧವನು.  ಪಾಮರರಿಗೆ ರಮೆ (ಲಕ್ಷ್ಮೀ) ಮಾತ್ರ ಬೇಕು, ರಮಾರಮಣ ಬೇಡ, ಆದ್ದರಿಂದಲೇ ಭಗವಂತ ನಮ್ಮ ಹತ್ತಿರ ನಾವು ಕರೆಯದೇ ಬರುವುದೇ ಇಲ್ಲ. ಆದರೆ ಭಗವಂತ ನಮ್ಮಿಂದ ದೂರ ಇಲ್ಲವೇ ಇಲ್ಲ, ಅವನು ಸದಾ ನಮ್ಮಂತರಂಗದಲ್ಲಿ ಬಿಂಬರೂಪಿಯಾಗಿ ಇದ್ದೇ ಇದ್ದಾನೆ, ಒಮ್ಮೆ ಪರಮಾದರದಿಂದ ಕೂಗಿದರೂ ಓಗೊಡುತ್ತಾನಾದ್ದರಿಂದಲೇ ಅವನು ’ಸುಲಭನು’  ಆದರೆ ಭಕ್ತರಾದ ಪಾಮರರು ಇದನ್ನು ತಿಳಿಯುವುದಿಲ್ಲ, ಅವನು ದುರ್ಲಭನೆಂದುಕೊಳ್ಳುತ್ತಾರೆ.  ಭಗವಂತ ಹಾಗೇನೂ ತಿಳಿಯುವುದೇ ಇಲ್ಲ.  ತನ್ನ ಭಕ್ತರಾದ ಸಜ್ಜನರನ್ನು ಅವನು ತನ್ನವರೆಂದೇ ತಿಳಿದು, ಅವರ ಬಳಿಯೇ ಇದ್ದು, ಅವರ ಸಾಧನೆಗೆ ಹೆಚ್ಚು ಹೆಚ್ಚು ಅನುಕೂಲ ಮಾಡಿಕೊಡುತ್ತಿರುತ್ತಾನೆ.  ಅವರ ಸಾಧನೆಗಿಂತಲೂ ಅಧಿಕವಾಗಿಯೇ ಅನುಗ್ರಹ ಮಾಡುತ್ತಾನೆ. ಪರಮ ಕರುಣಾಳುವಾದ ಶ್ರೀಹರಿ ಬೇಡುವವನಿಗಿಂತ ಯಾವಾಗಲೂ ಒಂದು ಹೆಜ್ಜೆ ಮುಂದೆಯೇ ಇದ್ದು, ಅನುಗ್ರಹ ಮಾಡುತ್ತಾನೆ.

ತತ್ವಸುವ್ವಾಲಿಯಲ್ಲಿ ಜಗನ್ನಾಥ ದಾಸರು :
ಸುಲಭರಿನ್ನುಂಟೆ ನಿನ್ನುಳಿದು ಲೋಕತ್ರಯದಿ
ಬಲವಂತರುಂಟೆ ಸುರರೊಳು | ಸುರರೊಳು ನೀನು ಬೆಂ-
ಬಲವಾಗಿ ಇರಲು ಭಯವುಂಟೆ ||  - ಸಂಸಾರವೆಂಬ ಭವಸಾಗರದಲ್ಲಿ ನಾನಾ ಭಯಗಳ ಮಧ್ಯೆ ಸಿಕ್ಕಿಕೊಂಡು ಕಂಗಾಲಾಗಿರುವ ಜೀವನು ನಿನ್ನನ್ನೇ ಆಶ್ರಯಿಸುವನು.  ಭಗವಂತ ನಿನಗಿಂತ ಸುಲಭರು ಮತ್ಯಾರು ಇಲ್ಲ.  ನಿನ್ನ ಬೆಂಬಲವೊಂದಿದ್ದರೆ ಯಾವ ಭಯವೂ ನನ್ನನ್ನು ಕಾಡದು ಎನ್ನುತ್ತಾ, ಸುಲಭದಲ್ಲಿ ಒಲಿಸಿಕೊಳ್ಳಬಹುದಾದವನು  ಭಗವಂತ ಎಂದಿದ್ದಾರೆ.

ನಿಲ್ಲಲು ನಿಲ್ಲುವೆನು ಮಲಗಿದರೆ ಮಲಗುವೆನು
ತಿಳಿದು ತಿಳಿಸಿದರೆ ತಿಳಿವೆನು | ತಿಳಿವೆನೊ ದೇಹದ
ನೆಳಲಂತೆ ಇರ್ಪೆ ನಿನಗಾನು ||  -  ಜೀವ ಪರಮಾತ್ಮನ ಪೂರ್ಣ ಅಧೀನನು, ಪ್ರತಿಬಿಂಬರೂಪನು ಎಂಬುದನ್ನು ತಿಳಿಸುತ್ತಾ ಜೀವರ ಸಕಲ ಕ್ರಿಯೆಗಳೂ ಬಿಂಬರೂಪಿಯಾದ ಭಗವಂತನ ಕ್ರಿಯೆಗನುಸಾರವಾಗಿಯೇ ಆಗುವುದೆಂಬ ಯಥಾರ್ಥವು ಸತ್ಯವೆನ್ನುತ್ತಾರೆ ಜಗನ್ನಾಥ ದಾಸರು.



ಚಿತ್ರಕೃಪೆ : ಅಂತರ್ಜಾಲ

Friday, June 29, 2012

ಕರುಣಾ ಸಂಧಿ - ೪ನೇ ಪದ್ಯ



















ಮನವಚಕತಿದೂರ ನೆನೆವರ |
ನನುಸರಿಸಿ ತಿರುಗುವನು ಜಾಹ್ನವಿ |
ಜನಕ ಜನರೊಳಗಿದ್ದು ಜನಿಸುವ ಜಗದುದರ ತಾನು ||
ಘನಮಹಿಮ ಗಾಂಗೇಯನುತ ಗಾ |
ಯನವ ಕೇಳುತ ಗಗನಚರ ವಾ|
ಹನ ದಿವೌಕಸರೊಡನೆ ಚರಿಸುವ 

ಮನೆಮನೆಗಳಲ್ಲಿ || ೪ ||

 ಪ್ರತಿಪದಾರ್ಥ : ಮನ - ಮನಸ್ಸು ಅಥವಾ ನಮ್ಮ ಆಲೋಚನೆಗಳು, ವಚನ - ನಾವಾಡುವ ಮಾತುಗಳು ಅಥವಾ ಭಗವಂತನ ಸ್ತುತಿಗಳು/ಸ್ತೋತ್ರಗಳು, ಅತಿದೂರ - ಮನಸ್ಸಿನ ಮಾತುಗಳಿಗೆ ನಿಲುಕದವನು, ನೆನೆವರನನುಸರಿಸಿ ತಿರುಗುವನು - ಯಾರು ಶುದ್ಧ ಭಕ್ತಿಯಿಂದ ಸದಾ ಭಗವಂತನನ್ನು ಸ್ಮರಿಸುವರೋ ಅವರನ್ನು ಹಿಂಬಾಲಿಸುತ್ತಾ ತಿರುಗಾಡುವವನು, ಜಾಹ್ನವಿ ಜನಕ - ಜಾಹ್ನವಿ ಎಂದರೆ ಗಂಗೆ ಭಗವಂತನ ಉಂಗುಷ್ಠದಿಂದುದ್ಭವಿಸಿದಳಾದ್ದರಿಂದ ಗಂಗೆಯ ಪಿತ, ಜನರೊಳಗಿದ್ದು ಜನಿಸುವ - ಬಿಂಬ ರೂಪಿಯಾಗಿ ಪ್ರತಿಯೊಬ್ಬ ಮನುಷ್ಯನು ಜನಿಸಿದಾಗ ಅವನೊಂದಿಗೆ ತಾನೂ ಜನಿಸುವವನು, ಜಗದುದರ ತಾನು - ಜಗತ್ತನ್ನೇ ತನ್ನ ಉದರದಲ್ಲಿ ಧರಿಸಿರುವವನು, ಘನಮಹಿಮಗಾಂಗೇಯನುತ - ಅತ್ಯಂತ ಗೌರವವುಳ್ಳ ತಮ್ಮ ಅಪೂರ್ವ ಪ್ರತಿಜ್ಞೆಗಳಿಂದ ಸುವಿಖ್ಯಾತರಾದ  ಗಂಗೆಯ ಪುತ್ರನಾದ ಭೀಷ್ಮನಿಂದ ಸ್ತುತಿಸಲ್ಪಡುವವನು, ಗಾಯನವ ಕೇಳುತ - ತನ್ನ ಭಕ್ತರು ಭಕ್ತಿಯಿಂದ ತನ್ನನ್ನು ಸ್ತುತಿಸಿ ಹಾಡುವುದನ್ನು ಕೇಳುವವನು, ಗಗನಚರ ವಾಹನ - ಅಂತರಿಕ್ಷದಲ್ಲಿ ಹಾರಾಡುವ ಗರುಡನು ವಾಹನವಾಗಿರುವವನು, ದಿವೌಕಸರೊಡನೆ - ಸಮಸ್ತ ದೇವತೆಗಳೊಂದಿಗೆ, ಚರಿಸುವ ಮನೆಮನೆಗಳಲ್ಲಿ - ತನ್ನ ಪರಿವಾರ ಸಹಿತವಾಗಿ ಭಕ್ತರನ್ನು ಸಂತೋಷಪಡಿಸಲು ಅವರ ಮನವೆಂಬ ಮನೆಯಲ್ಲಿ ಸದಾ ಸಂಚರಿಸುವವನು.

ನೆನಕೆಯ ಕರೆಗೆ ದೂರವಿದ್ದರೂ, ಮನದ ಕರೆಗೆ ಹತ್ತಿರವಾಗುತ್ತಾನೆ.  ಶುದ್ಧವಾದ ಗಂಗೆಯ ಪಿತನಾದರೂ ಸಾಮಾನ್ಯ ಜನರಲ್ಲಿದ್ದು, ಜನಿಸಿ ತಾನೇ ಜಗದುದರನಾಗಿದ್ದಾನೆ.  ಇಂಥಹ ಘನಮಹಿಮನಾದ ಪರಮಾತ್ಮ ಗಗನಚರನಾಗಿದ್ದರೂ ತನ್ನ ಕುರಿತು ಹಾಡಿಪಾಡಿದವರ ಮನೆಗೆ ತನ್ನ ಪರಿವಾರದೊಡನೆ ಬಂದು ಭಕ್ತರನ್ನು ಪ್ರೇಮದಲಿ ಬಂಧಿಸುತ್ತಾನೆ.  ಜಗನ್ನಾಥ ದಾಸರು ವಿಠಲಯ್ಯ ವಿಠಲಯ್ಯ ಎಂಬ ಕೃತಿಯಲ್ಲಿ “ಶರಣಾಗತರನ್ನು ಪೊರೆವನೆಂಬ ತವ ಬಿರಿದು ಕಾಣೋ ಸಿರಿವರ ಜಗನ್ನಾಥ ವಿಠಲಯ್ಯ ವಿಠಲಯ್ಯ" ಎಂದು ಸ್ತುತಿಸಿದ್ದಾರೆ.

ಗಂಗೆಯ ಪಿತನಾದ ಶ್ರೀಹರಿ ನಮ್ಮ ಮನಸ್ಸಿಗೂ, ಮಾತಿಗೂ ನಿಲುಕಲಾಗದಷ್ಟು ದೂರದಲ್ಲಿದ್ದಾನೆ.  ಭಕ್ತಿಯಿಂದ, ಪ್ರೀತಿಯಿಂದ ನೆನೆದಾಗ ಮಾತ್ರ ಕರುಣೆಯಿಂದ, ತಾಯಿಯಂತೆ ನಮ್ಮನ್ನೇ ಅನುಸರಿಸುತ್ತಾ ನಮ್ಮ ಹಿಂದೆ ಮುಂದೆ ತಿರುಗುತ್ತಿರುತ್ತಾನೆ.  ಪ್ರಳಯ ಕಾಲದಲ್ಲಿ ಜಗತ್ತನ್ನೇ ನುಂಗಿ ಉದರದಲ್ಲಿಟ್ಟುಕೊಂಡು ಕಾಪಾಡುವ ’ಜಗದ್ಭುಕ್’ ಎನಿಸಿಕೊಂಡ ಭಗವಂತ ಜನರೊಳಗೆ ಅಂತರ್ಯಾಮಿಯಾಗಿದ್ದು, ಜನರು ಜನಿಸುವಾಗ ತಾನೂ ಜನಿಸಿ, ಜನರನ್ನು ಕಾಪಾಡುವನು.  ಗರುಡ ವಾಹನ, ಖೇಚರನಂತೆ ಗಗನದಲ್ಲಿ ಚಲಿಸುತ್ತಾ ದೇವತೆಗಳ ಗಾಯನವನ್ನು ಕೇಳುತ್ತಾ, ಸುಖಿಸುವವನು. ತಾನೇ ಮಹಾ ಮಹಿಮನಾಗಿದ್ದರೂ ಕೂಡ, ಗಂಗಾಪುತ್ರನಾದ ಗಾಂಗೇಯನು ಮಾಡಿದ ಸ್ತುತಿಯನ್ನು ಕೇಳುವವನು. ಅಂತಹ ಪರಮ ಕರುಣಾ ಸಿಂಧು ನಮ್ಮ ಗಾಯನವನ್ನೂ ಕೇಳುತ್ತಾನೆ ಮತ್ತು ಸಕಲ ದೇವತೆಗಳೊಂದಿಗೆ ನಮ್ಮ ಮನೆ-ಮನಗಳಲ್ಲಿಯೂ ಸಂಚರಿಸುತ್ತಿರುತ್ತಾನೆ.  “ಜನರೊಳಗಿದ್ದು ಜನಿಸುವ”  - ಜನಿಸುವುದರಿಂದಲೇ ಜನರು “ಜನ”ರೆಂದು ಕರೆಸಿಕೊಳ್ಳುತ್ತಾರೆ.  ಅವರೊಳಗಿದ್ದು, ಅವರು ಜನಿಸಿದಾಗ ಹರಿ ತಾನೂ ಜನಿಸುತ್ತಾನೆಂಬ ಅರ್ಥವಾಗುತ್ತದೆ.

“ಜಾಹ್ನವಿಜನಕ” – ಜಹ್ನುವಿನ ಮಗಳಾಗಿ ಹುಟ್ಟಿದ್ದರಿಂದ ಗಂಗೆ ಜಾಹ್ನವಿಯಾದಳು. 

ಗಂಗಾ ಗಂಗೇತಿ ಯೋ ಬ್ರೂಯಾದ್ ಯೋಜನಾನಾಂ ಶತೈರಪಿ |
ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ ||  -  ನೂರು ಯೋಜನ ದೂರದಿಂದಲಾದರೂ ಕೂಡ ಗಂಗೇ ಎಂದರೆ ಸಾಕು, ಗಂಗೆ ಬಂದು ಪಾಪ ಪರಿಹರಿಸಿ, ನಮ್ಮನ್ನು ಉದ್ಧರಿಸುತ್ತಾಳೆಂದರೆ, ಗಂಗೆಯ ಜನಕನಾದ ಶ್ರೀಹರಿ, ಕರುಣಾ ಸಮುದ್ರನೇ ಆಗಿದ್ದಾನೆ.

ಶ್ರೀಹರಿಯು ಮನೋಭಿಮಾನಿಯಾದ ರುದ್ರನಿಗೂ, ಮುಖ್ಯಪ್ರಾಣನಿಗೂ, ಅಭಿಮಾನಿ ರಮಾದೇವಿಗೂ ಕೂಡ ನಿಲುಕದವನು. ನಮ್ಮ ಮನಕ್ಕೆ ಅತಿದೂರದಲ್ಲಿರುವನು.  ಒಂದು ಲೌಕಿಕ ಸಂಬಂಧವನ್ನು ಅರ್ಥೈಸಿಕೊಳ್ಳಲು ನಾವು ದಿನಗಳೂ, ವರ್ಷಗಳೂ ಕಳೆಯುವಾಗ ಭಗವಂತನ ಗುಣವಿಶೇಷಗಳ ಅಭಿವ್ಯಕ್ತಿ ಮಾಡಲು ಭಾಷೆ, ಪದ, ಸಮಯ.. ಯಾವುದೂ ಸೀಮಿತವಲ್ಲ.  ಮಗು ತಾಯಿಯ ಒಡನಾಡಿಯಾಗಿರುವಂತೆ,  ಪರಮಾತ್ಮ ಜೀವಾತ್ಮದೊಡನೆ ಇದ್ದಾನೆ.  ಭಗವಂತನನ್ನು ನೆನೆವವರಲ್ಲಿ ಯಾಂತ್ರಿಕತೆಯಿದೆ ಆದರೆ ಕರುಣಾಮಯಿ ಭಗವಂತನಲ್ಲಿಲ್ಲ.  ನಾವು ವಿಷಯಾಸಕ್ತಿಗಳಲ್ಲೇ ಮುಳುಗಿ ಭೋಗದಲ್ಲೇ ಮೀಯಲು ಬಯಸುತ್ತಾ ಇರಬಾರದು.  ಹುಟ್ಟಿನಲ್ಲಿ ಪಾಪವಿದ್ದಾಗ, ಮರಣದಲ್ಲೂ ಪಾಪವಿರುತ್ತದೆ (ಅಪಮೃತ್ಯು).  ಗಂಗೆಯ ಸ್ಪರ್ಶದಿಂದಲೇ ಪಾಪ ಪರಿಹಾರವಾಗುವಾಗ, ಅವಳ ಜನಕ ವಿಷ್ಣುವಿನ ಗುಣವಿಶೇಷಗಳನ್ನು ಅರಿಯುವುದರಿಂದ ಪಾಪರಾಶಿಗಳೇ ನಾಶವಾಗಿಬಿಡುತ್ತವೆ.   ಪಾಪ ೧೦೦ ಅಂಶ ಇದ್ದಾಗ, ೨೫ ಅಂಶ ಪಶ್ಚಾತ್ತಾಪ ಪಡುವುದರಿಂದಲೇ ಕರಗಿ ಬಿಡುತ್ತದೆ, ೨೫ ಅಂಶ ಮತ್ತೆಂದೂ ತಪ್ಪು ಮಾಡದೆ ಧರ್ಮ ಕಾರ್ಯ ಮಾಡುವುದರ ಮೂಲಕ ಕರಗುತ್ತದೆ, ೨೫ ಅಂಶ ಪವಿತ್ರ ಕ್ಷೇತ್ರಗಳ ದರ್ಶನ ಮಾಡುವುದರಿಂದ ಮತ್ತು ಕೊನೆಯ ೨೫ ಅಂಶ ಪವಿತ್ರ ಗ್ರಂಥಗಳ ಪಠಣ / ಮನನ ಮಾಡುವುದರ ಮೂಲಕ ಕರಗುತ್ತದೆ ಎಂಬುದು ಶಾಸ್ತ್ರಗಾರರಿಂದ ತಿಳಿಯುತ್ತದೆ.

ಮನವಚನ ಎ೦ದಾಗ, ನಾವು ಎರಡೂ ದೃಷ್ಟಿಯಿಂದಲೂ ಸ್ವಲ್ಪ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡೋಣ. ಮೊದಲು ನೇರ ಅರ್ಥದ ಶಬ್ದ ಎಂಬ ದೃಷ್ಟಿ ಬಂದಾಗ, ನಮ್ಮ ಮನಸ್ಸಿನಲ್ಲಿ ಉತ್ಪತ್ತಿ ಆಗುವ ಮಾತುಗಳು ಎಂದುಕೊಂಡರೆ, ಅಲ್ಲಿ ವಿಧ ವಿಧವಾದ ಸಂದೇಹಗಳು ಇರುತ್ತವೆ.   ಎಲ್ಲಿ ಸಂದೇಹಗಳು ಇರುತ್ತವೋ ಅಲ್ಲಿ ಭಗವಂತನಿರುವುದಿಲ್ಲ.  ಮನದಲ್ಲಿ ಏಳುವ ಎಲ್ಲಾ ಮಾತುಗಳೂ ನಮ್ಮ ಭಾವಗಳೇ ಆಗಿರುತ್ತವೆ ಎಂಬುದೂ ಕೂಡ ಕೆಲವೊಮ್ಮೆ ಸಂದೇಹಾಸ್ಪದವಾಗುತ್ತದೆ. ಉದ್ದೇಶ ಇಲ್ಲದೇ ಇದ್ದರೂ ಅನವಶ್ಯಕ ಶಬ್ದಗಳು  ನಮ್ಮಿಂದ ಹೊರಹೊಮ್ಮಿ ಬಿಡುತ್ತವೆ.  ಆಮೇಲೆ ಅದನ್ನು ನಾವು ನೆನಪು ಮಾಡಿಕೊಂಡರೆ ಮಾತ್ರ, ಅದು ತಪ್ಪು ಎಂದು ಗೊತ್ತಾಗುತ್ತದೆ.  ಆದ್ದರಿಂದ ಈ ಎಲ್ಲಾ ಮಾತುಗಳಿಂದಲೂ ಭಗವಂತ ಖಂಡಿತಾ ನಮ್ಮ ಮನಕ್ಕೆ ಅತಿ ದೂರವೇ ಇರುತ್ತಾನೆ.   ’ಕಾಯಾ ವಾಚಾ’ಕ್ಕಿಂತಲೂ ಮನಸಾ ಮಾತ್ರವೇ ತುಂಬಾ ಮುಖ್ಯವಾಗುತ್ತದೆ.  ನುಡಿದಂತೆಯೇ ನಡೆದಾಗ ಮಾತ್ರ ಬಹುಶ: ಭಗವಂತ ಮನವಚನಕ್ಕೆ ದೂರನಾಗದೆ, ಮನದಲ್ಲಿ ನೆಲೆ ನಿಲ್ಲುತ್ತಾನೆ.  ತನ್ನ ತಾಣದಲ್ಲಿ ಪ್ರಸನ್ನನಾಗಿ ಕುಳಿತು, ಭಕ್ತಿಯನ್ನು ಸೇವಿಸುತ್ತಾನೆ.  ಭಕ್ತಿಯನ್ನು ಸೇವಿಸುತ್ತಾ ಅದೇ ಆಗಿಬಿಡುತ್ತಾನೆ.  ಹಾಗಾಗಬೇಕಾದರೆ ತನು-ಮನ ಶುದ್ಧವಾಗಿರಬೇಕು.   ಹೀಗೆ ನಮ್ಮ ನುಡಿಯನ್ನು ನಡೆಗೆ ಹೊಂದಿಸುತ್ತಾ ಹೋದಾಗ ನಮ್ಮದೇ ಭಾವಗಳು ಶುದ್ಧಿ ಆಗುತ್ತಾ ಹೋಗುತ್ತವೆ ಮತ್ತು ಜೀವದ ಕಣ ಕಣದಲ್ಲೂ ಶುದ್ಧಗೊಳಿಸುವ ಕ್ರಿಯೆ ನಿರಂತರ ನಡೆಯುತ್ತಾ ಹೋಗುತ್ತದೆ.

ಜನರೊಳಗಿದ್ದು ಜನಿಸುವ ಜಗದುದರ ತಾನು - ಗುರು, ತಂದೆ-ತಾಯಿ, ಬಾಧಕ, ನಿಯಾಮಕ ಎಲ್ಲವೂ ಆಗಬಲ್ಲ.  ಭಗವಂತ ಜಗತ್ತಿಗೇ ಜನಕನಾದರೂ, ಜನರಿಂದಲೇ ಹುಟ್ಟಿ ಬಂದು ಅವರ ಮಗ ಎಂದು ಕರೆಸಿಕೊಳ್ಳುವವ.  ಆತ್ಮನಿಗೇ ಹುಟ್ಟು-ಸಾವು ಇಲ್ಲವೆಂದಾಗ, ಭಗವಂತನಿಗೆ ಎಲ್ಲಿಯ ಹುಟ್ಟು?  ನಾವು ದೇಹದೊಂದಿಗೆ ಹುಟ್ಟು-ಸಾವು ಅನುಭವಿಸುತ್ತೇವೆ.  ಆದರೆ ದೇವರು ಕಾಣಿಸಿಕೊಳ್ಳುತ್ತಾನೆ ಹಾಗೂ ಕಾಣೆಯಾಗುತ್ತಾನೆ.  ಹೊಸ ಹೊಸ ರೂಪಗಳಲ್ಲಿ ಭಗವಂತ ಕಾಣಿಸಿಕೊಂಡಾಗ, ಅದನ್ನು ನಾವು ದೇವರ ಅವತಾರ ಎನ್ನುತ್ತೇವೆ.  ಹಾಗೇ ನಮಗೆ ನಮ್ಮ ಮಗ, ಬರಿಯ ಮಗ.  ಅವನು ಬೇರೇನೂ ಆಗಲು ಸಾಧ್ಯವಿಲ್ಲ.  ಆದರೆ ಭಗವಂತ ನಮಗೆ ತಾಯಿ-ತಂದೆ, ಗಂಡ-ಮಗ, ಅಣ್ಣ-ತಮ್ಮ, ಸಖ.. ಎಲ್ಲವೂ ಆಗಬಲ್ಲ.  ಭಾವದಲ್ಲಿ ಭಾವ ಬೆರೆಸಬಲ್ಲ.  ದೇವರ ಉದರ (ಬಸಿರು)ದಿಂದ ಬಂದವರಾದ್ದರಿಂದ ಅವನು ನಮಗೆ ತಾಯಿ.  ರಮಾದೇವಿಯಲ್ಲಿ ಅವನು ಬ್ರಹ್ಮಾಂಡ ಪಿಂಡವನ್ನಿಟ್ಟ, ಆದ್ದರಿಂದ ತಂದೆ.  ನಮ್ಮ ಕರ್ಮ ಕಳೆದು, ಪಾಪ ತೊಳೆದು ಮುಕ್ತಿ ಕೊಡುವ ದೇವರು ನಮಗೆ ಮಗನೂ ಹೌದು - ಅಂದರೆ ನಮಗೆ ಸದ್ಗತಿ ಕೊಡುವವನು ಎಂದರ್ಥ.

ತತ್ವಸುವ್ವಾಲಿಯಲ್ಲಿ ದಾಸರು :
ತಂದೆ ತಾಯಿಯು ಭ್ರಾತೃ ಬಂಧು ಸಖ ಗುರು ಪುತ್ರ
ಎಂದೆಂದು ನೀನೇ ಗತಿ ಗೋತ್ರ | ಗತಿ ಗೋತ್ರ ಇಹ ಪರದಿ
ಇಂದಿರಾರಾಧ್ಯ ಸಲಹೆಮ್ಮ ||  - ದಾಸರು ಪ್ರತಿಯೊಂದ ಸಂಬಂಧವೂ ಎಲ್ಲಾ ಕಾಲಕ್ಕೂ ಭಗವಂತನೇ ಎಂಬ ಮಾತು ಹೇಳಿದ್ದಾರೆ. ’ಗೋ’ ಶಬ್ದಕ್ಕೆ ಭೂಮಿ, ಧೇನು, ಸ್ವರ್ಗ, ವೇದ ಎಂಬೆಲ್ಲಾ ಕೆಲವು ಮುಖ್ಯಾರ್ಥಗಳು ಇವೆ.  ಇವೆಲ್ಲವುಗಳಿಗೂ ರಕ್ಷಕನಾದ್ದರಿಂದ ಭಗವಂತ "ಗೋತ್ರ"ನಾಗುತ್ತಾನೆ.  ಎಲ್ಲವೂ ತಾನೇ ತಾನಾಗಿ, ಯಾವಕಾಲಕ್ಕೂ ನಮ್ಮನ್ನು ಕಾಯುವವನು, ನೀನೇ ನಮಗೆ ಗತಿ ಎಂದಿದ್ದಾರೆ ದಾಸರು.


ನೆನೆವರನನುಸರಿಸಿ ತಿರುಗುವನು - ಭಗವಂತ ಎಂತಹ ಕರುಣಾಮಯಿಯೆಂದರೆ ತನ್ನ ಮಕ್ಕಳೇ ಆದ ಜೀವಿಗಳು ತನ್ನನ್ನು ರಕ್ಷಿಸು ಎಂದು ಬೇಡುವವರೆಗೂ ಕಾಯುವುದಿಲ್ಲ.  ತುಂಬು ವಾತ್ಸಲ್ಯದಿಂದ, ಕರುಣೆಯಿಂದ ಭಕ್ತರನ್ನು ಅನುಸರಿಸಿ ನಮ್ಮ ಹಿಂದೆ ಹಿಂದೆಯೇ ತಿರುಗುತ್ತಾ ನಮ್ಮನ್ನು ಪೊರೆಯುವನು.  "ಗಾಯನವ ಕೇಳುತ ದಿವೌಕಸರೊಡನೆ ಚರಿಸುವ ಮನೆಮನೆಗಳಲ್ಲಿ" ಎಂದಾಗ ಕೂಡ ಶ್ರೀಹರಿ ಸದಾಕಾಲವೂ ವೈಕುಂಠದಲ್ಲಿ ಕುಳಿತಿರುವುದಿಲ್ಲ, ಯಾರು ತನ್ನನ್ನು ಭಕ್ತಿಯಿಂದ ಗುಣ ಕೀರ್ತನೆ ಮಾಡುತ್ತಿರುತ್ತಾರೋ ಅಲ್ಲಿ ಅವರ ಹಿಂದೆ ಮುಂದೆ ತಾನು ಇರುತ್ತೇನೆ ಎನ್ನುತ್ತಾನೆ ಭಗವಂತ. 

ಭಗವಂತನ ಕಾರುಣ್ಯವನ್ನೂ, ಹರಿನಾಮ ಸಂಕೀರ್ತನೆಯ ಮಹಿಮೆಯನ್ನೂ ತಿಳಿಸಿಕೊಡುತ್ತಾ ಕೈವಾರ ತಾತಯ್ಯನವರು "ಅನವರತಮು ಹರಿನಿ-ಆತ್ಮದಲಚಿನವಾರಿ ಯಾಮರುಕವೆನುವೆಂಟ-ದಿರುಗುಚುಂಡು" - ಸದಾ ಕಾಲವೂ ತನ್ನ ನಾಮ ಸ್ಮರಣೆ ಮಾಡುವವರ ಹಿಂದೆಯೇ ತಿರುಗುತ್ತಾ ಬೆಂಗಾವಲಾಗಿ ಇರುತ್ತಾನೆ ಭಗವಂತ ಎನ್ನುತ್ತಾರೆ.  ಹಾಗೂ  "ಶರಣನ್ನವಾರಲನು ಚೇಪಟ್ಟಿ ಯೇವೇಳ ಕಂಟಿರೆಪ್ಪವಲೆನು ಕಾಚಿಯುಂಡು" - ತನ್ನನ್ನು ಕಾಯಾ ವಾಚಾ ಮನಸಾ ನಂಬಿ ಬಂದು ಶರಣಾದವರನ್ನು ಕಣ್ಣಿನ ರೆಪ್ಪೆಯಂತೆ ಕಾಯುವ ಆಪದ್ರಕ್ಷಕನಾಗಿರುತ್ತಾನೆ ಭಗವಂತ ಎನ್ನುತ್ತಾರೆ.

"ಘನಮಹಿಮ"  - ಮಹಾಲಕ್ಷ್ಮಿ ಅನಂತವೇದಗಳಿಂದ ಪ್ರೀತಿಯಿಂದ ಸ್ತುತಿಸುವ ಘನಮಹಿಮೆಯುಳ್ಳವನು ಭಗವಂತ.  ಅಂಥಹ ಶ್ರೀಹರಿಯನ್ನು  ಭೀಷ್ಮನು ಸ್ತುತಿಸುತ್ತಾರೆ.  ರಾಜಸೂಯ ಯಾಗದ ನಂತರ ಅಗ್ರಪೂಜೆಯನ್ನು ಸಲ್ಲಿಸುವಾಗ  ಹಿರಿಯರಾದ ಯಾರಿಗಾದರೂ (ಭೀಷ್ಮ ಅಥವಾ ವೇದವ್ಯಾಸರಿಗೆ) ಸಲ್ಲಿಸಬಹುದಿತ್ತು.  ಆದರೆ ಭೀಷ್ಮ ಎಲ್ಲರಿಗೂ ಶ್ರೀ ಕೃಷ್ಣನ ನಿಜಸ್ವರೂಪವನ್ನು, ಘನಮಹಿಮೆಯನ್ನು ಪರಿಚಯಿಸಲು ಅವನಿಗೇ ಅಗ್ರಪೂಜೆಯನ್ನು ಸಲ್ಲಿಸಲು ನಿರ್ದೇಶಿಸುತ್ತಾರೆ.  ಹೀಗೆ ಭಗವಂತನ ಪ್ರೇರಣೆಯಿಂದಲೇ ಸಮಸ್ತ ಕಾರ್ಯಗಳೂ ನಡೆಯುವುವು.

"ಗಗನಚರವಾಹನ" - ಆಕಾಶದಲ್ಲಿ ಹಾರುವ ಗರುಡನನ್ನು ವಾಹನವನ್ನಾಗಿ ಮಾಡಿಕೊಂಡಿರುವವನು ಶ್ರೀಹರಿ.  ಗರುಡ ವೇದಾಭಿಮಾನಿ.  ಗಗನಚರನಾದಾಗ ಗರುಡನ ರೆಕ್ಕೆಗಳಿಂದ ಸಾಮಗಾನ ಹೊರಡುತ್ತದೆ.  ಈ ಸಾಮಗಾನ ಸೇವೆಯನ್ನು ಸ್ವೀಕರಿಸುತ್ತಾ ಅವನನ್ನು ಅನುಗ್ರಹಿಸುವುದಕ್ಕಾಗಿಯೇ ಭಗವಂತ ಗರುಡನನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ.  ನಾವು ವೇದಪೂರ್ವಕವಾಗಿ ಶ್ರೀಹರಿಯ ಧ್ಯಾನ ಮಾಡಿದಾಗ, ವೇದಾಭಿಮಾನಿ ಗರುಡನನ್ನು ಏರಿ ಭಗವಂತ ಸಾಧಕರ ಹೃದಯದೊಳಗೆ ಹಾರಿ ಬರುತ್ತಾನೆಂಬ ನಂಬಿಕೆಯಿದೆ.

ಜಗನ್ನಾಥ ದಾಸರು ತತ್ವಸುವ್ವಾಲಿಯಲ್ಲಿ :
ಮನವಚನಕಾಯದಿಂದನುಭವಿಪ ವಿಷಯಗಳ
ನಿನಗರ್ಪಿಸುವೆನೋ ನಿಖಿಳೇಶ | ನಿಖಿಳೇಶ ನಿನ್ನ ಪಾ-
ವನಮೂರ್ತಿ ತೋರಿ ಸುಖವೀಯೋ || - ಮನ ವಚನ ಕಾಯದಿಂದ ಅನುಭವಿಸುವ ಎಲ್ಲಾ ವಿಷಯಗಳನ್ನೂ ನಿನಗೇ ಅರ್ಪಿಸುವೆನೋ ನಿಖಿಳೇಶ ಒಪ್ಪಿಸಿಕ್ಕೊಳ್ಳೋ ಹೇ ಸರ್ವೇಶ, ಒಪ್ಪಿಸಿಕೊಂಡು ನಿನ್ನ ಮಂಗಳಸ್ವರೂಪವನ್ನು ತೋರಿ - ತೋರಿಸಿ, ಸುಖವಿತ್ತು ಆನಂದಪಡಿಸು ಸ್ವಾಮಿ ಎನ್ನುತ್ತಾರೆ.



ಚಿತ್ರಕೃಪೆ : ಅಂತರ್ಜಾಲ





Wednesday, May 30, 2012

ಕರುಣಾ ಸಂಧಿ - ೩ನೇ ಪದ್ಯ


ಶ್ರುತಿ ತತಿಗಳಭಿಮಾನಿ ಲಕ್ಶ್ಮೀ |
ಸ್ತುತಿಗಳಿಗೆ ಗೋಚರಿಸದಪ್ರತಿ |
ಹತ ಮಹೈಶ್ವರ್ಯಾದ್ಯಖಿಲ ಸದ್ಗುಣಗಳಾಂಭೋದಿ ||
ಪ್ರತಿದಿವಸ ತನ್ನಂಘ್ರಿ ಸೇವಾ |
ರತ ಮಹಾತ್ಮರು ಮಾಡುತಿಹ ಸಂ |
ಸ್ತುತಿಗೆ ವಶನಾಗುವನಿವನ ಕಾರುಣ್ಯಕೇನೆಂಬೆ  || ೩ ||

 ಪ್ರತಿಪದಾರ್ಥ : ಶ್ರುತಿ ತತಿಗಳಿಗಭಿಮಾನಿ - ವೇದ ಸಮೂಹಗಳಿಗೆ ಅಭಿಮಾನಿಯಾದ, ಲಕುಮಿಸ್ತುತಿಗಳಿಗೆ - ಲಕ್ಷ್ಮೀದೇವಿಯು ಮಾಡುವ ಸ್ತೋತ್ರಗಳಿಗೂ ಸ್ತುತಿಗಳಿಗೂ,  ಗೋಚರಿಸದ - ನಿಲುಕದ,  ಅಪ್ರತಿಹತ - ನಾಶರಹಿತನಾದ,  ಮಹೈಶ್ವರ್ಯಾದಿ - ಅಪರಿಮಿತ ಐಶ್ವರ್ಯಗಳಿಗೆ,  ಅಖಿಳ  ಸದ್ಗುಣಗಣಾಂಭೋಧಿ - ಸಮಸ್ತ ಸುಗುಣಗಳ ಸಾಗರನಾಗಿರುವನು, ಪ್ರತಿದಿವಸ - ದಿನದಿನವೂ ಅನವರತ, ತನ್ನಂಘ್ರಿಸೇವಾರತ - ಚರಣ ಸೇವೆಯಲ್ಲಿ ನಿರತರಾಗಿರುವ, ಮಹಾತ್ಮರು - ನಿಷ್ಕಲ್ಮಶ ಮನಸ್ಸುಳ್ಳ ಭಕ್ತರು, ಮಾಡುತಿಹ ಸಂಸ್ತುತಿಗೆ - ಮಾಡುವ ಭಕ್ತಿಯ ಸ್ತೋತ್ರಗಳಿಗೆ, ವಶನಾಗುವನು - ಒಲಿಯುವನು, ಇವನ ಕಾರುಣ್ಯಕೇನೆಂಬೆ - ಇಂತಹ ಅಂತಃಕರಣವುಳ್ಳ ಭಗವಂತನಿಗೆ ಏನೆಂದು ಹೇಳಲಿ.
 
ಈ ಪದ್ಯದಲ್ಲಿ ಪರಮಾತ್ಮನ ಕಾರುಣ್ಯದ ಬಗ್ಗೆ ವಿವರಿಸುತ್ತಾರೆ ದಾಸರು.  ತಡೆಯಿಲ್ಲದ ಮಹದೈಶ್ವರ್ಯ ಉಳ್ಳವನು.  ಸದ್ಗುಣಗಳ ಆಗರ.  ಇಂಥಹ ಪರಮಾತ್ಮ ಶ್ರುತಿ ತತಿಗಳಿಗೆ ಅಭಿಮಾನಿಯಾದ ಲಕುಮೀ ದೇವಿಗೂ ಗೋಚರಿಸದಂತವನು.  ಆದರೆ ತನ್ನ ಸೇವಾಸಕ್ತರಾದ ಭಕ್ತಿಯಲ್ಲಿ ನಿರತರಾದ ಭಕ್ತರಿಗೆ ಅವರವರ ಯೋಗ್ಯತಾನುಸಾರ ವಶನಾಗುತ್ತಾನೆ.  ಧ್ರುವ – ಪ್ರಹ್ಲಾದರಿಗೆ ಒಲಿದಂಥವನು ನಮ್ಮಂತಹ ಪಾಮರರಿಗೂ ಒಲಿಯುತ್ತಾನೆ.  ದಾಸರು “ಗಿರಿರಾಜ ಗಿರಿರಾಜ “.. ಎಂಬ ತಮ್ಮ ಪದದಲ್ಲಿ ಪರಮಾತ್ಮನನ್ನು ಕರುಣಾಂಬುಧಿ, ಭಕ್ತ ಕುಟುಂಬಿ ಎಂದು ಕರೆಯುತ್ತಾರೆ ಮತ್ತು ಈ ಶಬ್ದಗಳು ಸುಳ್ಳಲ್ಲ ನಿಜ ಜಗನ್ನಾಥ ವಿಠಲ ಎಂದು ಹೇಳುತ್ತಾರೆ.

ವೇದಗಳಿಗೆ ’ವೇದ’ ಎಂಬ ಹೆಸರು ಬಂದಿರುವುದೇ ಅವು ಹರಿಯನ್ನು ತಿಳಿಸುವುದರಿಂದ.  ಪಂಚೇಂದ್ರಿಯಗಳಿಗೆ ಗೋಚರಿಸದ, ಊಹೆಗೂ ನಿಲುಕದ ಶ್ರೀಹರಿಯನ್ನು ವೇದಗಳು ತಿಳಿಸುವುವೇ ? ವೇದಕ್ಕೆ ಗೋಚರಿಸದವನು ಎಂಬ ಮಾತು ಇಲ್ಲಿ ಬಂದಾಗ ಹರಿಯ ಅನಂತಾನಂತ ಗುಣಗಳನ್ನು ಸಂಪೂರ್ಣವಾಗಿ ತಿಳಿಸಲು ವೇದಕ್ಕೆ ಕೂಡ ಸಾಮರ್ಥ್ಯವಿಲ್ಲವೆಂಬ ಅರ್ಥದಿಂದ ತೆಗೆದುಕೊಳ್ಳಬೇಕು.  ಇಂತಹ ಮಹತ್ ಐಶ್ವರ್ಯದಂತಹ ಅಖಿಳ ಸದ್ಗುಣಗಳಿಗೆ ಒಡೆಯನಾದ ಶ್ರೀಹರಿಯು ನಿರಂತರವಾಗಿ ತನ್ನ ಮಹಿಮೆಗಳನ್ನು ಶ್ರವಣ ಮಾಡುವ ಸದಾ ಧ್ಯಾನಿಸುವ ಭಕ್ತರು ಮಾಡುವ ’ಸಂಸ್ತುತಿ’ – ಭಕ್ತಿ ತುಂಬಿದ ಅಂತರಂಗದಿಂದ ಹರಿದು ಬಂದ ಉತ್ತಮವಾದ ಸ್ತುತಿಗೆ ವಶನಾಗಿಯೇ ಬಿಡುತ್ತಾನೆಂದರೆ ಅವನ ಕಾರುಣ್ಯದ ವ್ಯಾಪ್ತಿ ಅದೆಂತಹುದು ಎಂದು ದಾಸರಾಯರು ತಿಳಿಸುತ್ತಾರೆ.  ಸದಾ ತನ್ನ ಜೊತೆಯಲ್ಲೇ ಇರುವ ರಮಾದೇವಿಯ ಸ್ತುತಿಗಳಿಗೇ ಪರಿಪೂರ್ಣವಾಗಿ ಗೋಚರಿಸದೇ ಇರುವ ಭಗವಂತ ನಮ್ಮಂತಹ ಪಾಮರರು ಭಕ್ತಿಯಿಂದ, ಶ್ರದ್ಧೆಯಿಂದ, ಶರಣಾಗತರಾಗಿ ಸ್ತುತಿಸಿದಾಗ ಒಲಿದುಬಿಡುವನು, ಗೋಚರಿಸುವನು.

ಭಗವಂತ “ಅಪ್ರತಿಹತ” ,  ಅಂಭೋದಿ – ಸಾಗರದಂತೆ ಭಗವಂತನ ಗುಣಗಳು.  ಪೂರ್ಣವಾಗಿ ಅರಿಯುವುದು ಮಹಾಲಕ್ಷ್ಮಿಯಿಂದಲೇ ಸಾಧ್ಯವಾಗದುದು.   “ಮಹದೈಶ್ವರ್ಯ” ಎಂದರೆ ಇಲ್ಲಿ ನಿಯಾಮಕತ್ವ - ಬದಲಾವಣೆ ಯಾಗದಿರುವುದು ಎಂದು ಅರ್ಥೈಸಬಹುದು.  ಸತ್+ಚಿ(ಕ್ಷಿ)ತ್+ಆನಂದ+ಆತ್ಮ – ದೋಷಗಳೇ ಇಲ್ಲದ ಕ್ಷಿತ್ ಎಂದರೆ (ವಿ)ಜ್ಞಾನಮಯ, ಆನಂದ – ಸದಾ ಆನಂದಕರವಾಗಿರುವ, ಆತ್ಮ ನೆಂದರೆ ಸ್ವಾಮಿ.  ನಾವು ಸದಾಕಾಲವೂ ಭಗವಂತನ ಈ ಚತುರ್ಗುಣಗಳನ್ನೇ ಆರಾಧಿಸಬೇಕು.  ಜೀವನು ಮುಕ್ತಿಗೆ ತಲುಪಿದಾಗಲೂ ಕೂಡ ಜೀವಾತ್ಮ-ಪರಮಾತ್ಮನ ಸಂಬಂಧದಲ್ಲಿ ಯಾವ ಬದಲಾವಣೆಯೂ ಇಲ್ಲ.  ಆಗಲೂ, ಅಲ್ಲೂ ಭಗವಂತನೇ ಜೀವಾತ್ಮನಿಗೆ “ನಿಯಾಮಕ”.  ಅವನು ಬಿಂಬನಾಗಿ ಚಲಿಸಿದರೆ ಮಾತ್ರವೇ ಪ್ರತಿಬಿಂಬವಾದ ನಮ್ಮಲ್ಲಿ ಚಲನೆ ಬರುವುದು.  ಅಪ್ರತಿಹತ ಎಂದು ಭಗವಂತನ ಅನಂತ ಸದ್ಗುಣಗಳಿಗೂ, ಮಹದೈಶ್ವರ್ಯಕ್ಕೂ, ಎರಡಕ್ಕೂ ಹೋಲಿಸಬಹುದು.  ಸಾಗರಕ್ಕೂ ಮಿತಿಯೆಂಬುದಿದೆ, ಆದರೆ ಭಗವಂತನಿಗೆ ಮಿತಿಯೇ ಇಲ್ಲ.  ಅವನು ಅಮಿತ ಗುಣಸಾಗರನು.  ನಮ್ಮಂತಹ ಪಾಮರರ ಅರಿವಿಗೆ ಬರಲೆಂದು ಇದನ್ನು ಹೋಲಿಕೆಯಾಗಿ ತಿಳಿಸಿದ್ದಾರೆ ಎನ್ನಬಹುದು ಅಷ್ಟೇ.  ಇಂತಹ ಮಹೈಶ್ವರ್ಯಶಾಲಿಯಾದ ಭಗವಂತನನ್ನು ಭಕ್ತರು “ಅರ್ಚಿಸಲರಿಯೆನು ಮೆಚ್ಚಿಸಲರಿಯೆನು ಎನ್ನುತ್ತಾ ಸುಲಭದ ಮುಕ್ತಿಗೆ ಸುಲಭನು ಶ್ರೀಹರಿ.. ಅಪಾರಮಹಿಮನ ಉಪಾಯದಿಂದಲಿ” ಸದಾ ನೆನೆಯುತ್ತಿರಲು ಕರುಣೆ ತೋರುವನು, ಒಲಿವನು ಎನ್ನುತ್ತಾರೆ ಶ್ರೀ ಪುರಂದರದಾಸರು.

ಭಾಗವತದಲ್ಲಿ ಸಕಲ ಶಾಸ್ತ್ರ-ಗ್ರಂಥಗಳನ್ನೂ ತಿಳಿದಿದ್ದ ಉದ್ಧವ.. ಶ್ರೀಕೃಷ್ಣನಲ್ಲಿ ತನಗೆ ಇನ್ನೊಂದು ಜನ್ಮವೆಂಬುದು ಇದ್ದರೆ ತನ್ನನ್ನು ಗೋಪಿಕೆಯರ ಪಾದಧೂಳಿ ತಗುಲುವ ’ಗರಿಕೆ’ ಹುಲ್ಲನ್ನಾಗಿಸು ಎಂದು ಕೇಳಿಕೊಳ್ಳುತ್ತಾನೆ.  ಇದು ಭಕ್ತಿಯ, ಭಗವಂತನಲ್ಲಿ ಶರಣಾಗತಿಯ ಪರಾಕಾಷ್ಠೆಯನ್ನು ಬಿಂಬಿಸುವುದು.

ಕರುಣಾಸಂಧಿಯನ್ನು ಜಗನ್ನಾಥ ದಾಸರು ರಚಿಸಿರುವುದೇ ಭಗವಂತ ಅಪಾರ ಕರುಣಾಮಯಿ, ಪಾಮರರು ಮಾಡುವ ಅಣುವಿನಷ್ಟು ಸಾಧನೆಯ ಪ್ರಯತ್ನವನ್ನೂ ಗುರುತಿಸುವನು ಮತ್ತು ತಕ್ಕ ಫಲವನ್ನು ಕೊಡುವನು ಎಂಬ ತತ್ವವನ್ನು ಸಾರುವ ಉದ್ದೇಶದಿಂದ.  ಜೀವಿಯು ಸಾಧನೆಯ ಸಂಕಲ್ಪ ಮಾಡಿದರೇ ಸಾಕು ಸಿಕ್ಕಬಹುದಾದ ಅತುಳೈಶ್ವರ್ಯದ ವಿಚಾರ ವಿವರಿಸಿ,  ಸರ್ವರನ್ನೂ ಸಾಧನೆಯ ಮಾರ್ಗದ ಕಡೆ ನಡೆಸುವ ಉಪಾಯ ದಾಸವರೇಣ್ಯರದು.

Thursday, April 19, 2012

ಕರುಣಾ ಸಂಧಿ - ೨ನೇ ಪದ್ಯ




 













ಮಳೆಯ ನೀರೋಣಿಯೊಳು ಪರಿಯಲು |
ಬಳಸರೂರೊಳಗಿದ್ದ ಜನರಾ |
ಜಲವು ಹೆದ್ದೊರೆಗೂಡೆ ಮಜ್ಜನ ಪಾನ ಗೈದಪರು ||
ಕಲುಷ ವಚನಗಳಾದರಿಯ ಬಾಂ |
ಬೊಳೆಯ ಪೆತ್ತನ ಪಾದ ಮಹಿಮಾ |
ಜಲಧಿ ಪೊಕ್ಕುದರಿಂದ ಮಾಣ್ದಪರೇ ಮಹೀಸುರರು || ೨ ||

ಪ್ರತಿಪದಾರ್ಥ : ಮಳೆಯ ನೀರೋಣಿಯಲಿ ಪರಿಯಲು - ಮಳೆ ಸುರಿದು ನೀರು ಓಣಿ ಬೀದಿಗಳಲ್ಲಿ ಹರಿಯಲು, ಬಳಸರು ಊರೊಳಗಿದ್ದ ಜನರು - ಊರಿನಲ್ಲಿರುವ ಜನರು ಆ ನೀರನ್ನು ಯಾವುದಕ್ಕೂ ಉಪಯೋಗಿಸುವುದಿಲ್ಲ, ಆ ಜಲವು ಹೆದ್ದೊರೆಗೂಡೆ - ಅದೇ ನೀರು ಯಾವುದಾದರೂ ದೊಡ್ಡ ನದಿಯನ್ನು ಸೇರಿದಾಗ, ಮಜ್ಜನ ಪಾನ ಗೈದಪರು - ಸ್ನಾನ ಮತ್ತು ಪಾನಗಳಿಗೆ ಉಪಯೋಗುವರು, ಕಲುಷ ವಚನಗಳಾದರಿವು - ದೇವವಾಣಿಯಾದ ಸಂಸ್ಕೃತವಲ್ಲದೆ ಪ್ರಾಕೃತ ಭಾಷೆಯಲ್ಲಿದ್ದರೂ, ಬಾಂಬೊಳೆಯ ಪೆತ್ತನ - ಬಾನಿನ ಹೊಳೆ ಅಥವಾ ಗಂಗಾನದಿಯ ಜನಕನಾದ ಶ್ರೀಹರಿಯ, ಪಾದ ಮಹಿಮಾಜಲಧಿ - ತ್ರಿವಿಕ್ರಮ ಅವತಾರದಲ್ಲಿ ಭಗವಂತನ ಪಾದವೆಂಬ ಮಹಿಮಾ ಸಾಗರದಲ್ಲಿ, ಪೊಕ್ಕುದರಿಂದ - ಭಗವಂತನ ಪಾದ ತೊಳೆದು ಮಹಿಮೆಯೆಂಬ ಸಾಗರವನ್ನು ಸೇರಿರುವ ಈ ಪ್ರಾಕೃತಿಕ ಭಾಷೆಯ ಪದಗಳು ಸೇರಿರುವುದರಿಂದ, ಮಾಣ್ದಪರೆ - ಬಿಟ್ಟು ಬಿಡುವರೆ, ಮಹೀಸುರರು - ವೇದ ಶಾಸ್ತ್ರ ನಿಪುಣರಾದ ವಿಪ್ರೋತ್ತಮರು.


ಮಳೆಯ ನೀರು ಬೀದಿಯಲ್ಲಿ ಹರಿದಾಗ ಕೊಚ್ಚೆ ನೀರು ಎಂದೆನಿಸಿಕೊಳ್ಳುತ್ತದೆ.  ಅದೇ ನೀರು ದೊಡ್ಡದಾದ ಹಾಗೂ ಪವಿತ್ರವಾದ ನದಿಗಳನ್ನು ಸೇರಿದಾಗ, ಸೇರಿದ ನದಿಯ ಹೆಸರನ್ನೇ ಪಡೆದು ಸ್ನಾನ – ಪಾನಾದಿಗಳಿಗೆ ಬಳಸಲ್ಪಡುತ್ತದೆ.  ಇಲ್ಲಿ ದಾಸರು “ಹೆದ್ದೊರೆ” ಎಂಬ ಪದವನ್ನು ಉಪಯೋಗಿಸಿ ಕೃಷ್ಣಾ ನದಿಯನ್ನು ಕುರಿತು ಹೇಳುತ್ತಾರೆ.  “ಕೃಷ್ಣೆ”ಯನ್ನು ಹೆದ್ದೊರೆಯೆಂದು ಗ್ರಾಮ್ಯ ಭಾಷೆಯಲ್ಲಿ ಕರೆಯುತ್ತಾರೆ. ಹೇಗೆ ಮಳೆಯ ನೀರು ನದಿಯನ್ನು ಸೇರಿದಾಗ ನದಿಯೇ ಆಗತ್ತದೆಯೋ ಹಾಗೆ ಪರಮಾತ್ಮನ ಬಗ್ಗೆ ಬರೆದಾಗ ಪ್ರಾಕೃತಭಾಷೆಯೂ “ಸಂಸ್ಕೃತ”ದಷ್ಟೇ ಪವಿತ್ರವಾಗಿದೆ ಎಂಬುದು ಜಗನ್ನಾಥ ದಾಸರ ಭಾವ. ಆದ್ದರಿಂದ ಪ್ರಾಕೃತ ಭಾಷೆಯಾದ ಕನ್ನಡದಲ್ಲಿ ಪರಮಾತ್ಮನ ಬಗ್ಗೆ ಹೇಳುತ್ತಿರುವುದು ದೋಷವಲ್ಲ ಎಂದು ದಾಸರು ನಿರೂಪಿಸಿದ್ದಾರೆ.

ಪ್ರಾಚೀನರೂ ಹಾಗೂ ಋಷಿಮುನಿಗಳು ಭಗವಂತನ ಸರ್ವವ್ಯಾಪ್ತತೆಯನ್ನು ಗುರುತಿಸುವಂತಹ ಸೂಕ್ಷ್ಮ ಸಂವೇದನೆಯನ್ನು ಹೊಂದಿದ್ದು ಅವನ ವಿಶೇಷತೆಯನ್ನು ಆರಾಧಿಸುತ್ತಿದ್ದರು. ಸುಪ್ರಸಿದ್ಧವಾದ "ತ್ವಮೇವ ಮಾತಾ ಚ ಪಿತಾ ತ್ವಮೇವ" ಶ್ಲೋಕದಲ್ಲಿ ಕೂಡ ಭಗವಂತನಿಗೆ ಅಸಾಧಾರಣವಾದ ಪಿತೃತ್ವ, ಮಾತೃತ್ವ, ಬಂಧುತ್ವ, ಗುರುತ್ವ ಇತ್ಯಾದಿ ಸಕಲ ಬಾಂಧವ್ಯವನ್ನೂ ಜಗತ್ತಿನೊಡನೆ ವಿಧಿಸುವ, ಗುರುತಿಸುವ ದಿವ್ಯ ದೃಷ್ಟಿಯನ್ನು ಹೊಂದಿದ್ದರು.  ಮಳೆಗರೆಯುವ ಮೇಘದ ಪ್ರಾಕೃತಿಕ ವ್ಯಾಪಾರದಲ್ಲಿಯೂ ಋಷಿಗಳು ಭಗವಂತನನ್ನು ಕಂಡು ಧನ್ಯತೆಯನ್ನು ಅನುಭವಿಸುತ್ತಿದ್ದರು.  ನೀರನ್ನು ತುಂಬಿಕೊಂಡ ಮೇಘಗಳನ್ನು, ಗರ್ಭಧರಿಸುವ ತಾಯಿಯೆಂದೂ ಸೃಷ್ಟಿರೂಪದಲ್ಲಿ ಮಳೆಗರೆಯುವ ಪುರುಷರ ಕಾರ್ಯವನ್ನೂ (ರೇತೋ ವಿಸರ್ಜನ) ಮಾಡುವುದರಿಂದ ತಂದೆಯೆಂದೂ ಕರೆದು, ಭಗವಂತನ ಜೊತೆಗಿನ ಆಪ್ತತೆಯನ್ನು ಅನುಭೂತಿಸುತ್ತಿದ್ದರು. ಜೀವ ನಳನಳಿಸಲು ’ಜೀವನಾಡಿ”ಯಾಗುವ ನದಿಗಳನ್ನು ದೇವತೆಗಳೆ೦ದು ಪೂಜಿಸುತ್ತಿದ್ದರು. ಭಗವ೦ತ ತ್ರಿವಿಕ್ರಮಾವತಾರದಲ್ಲಿ   ತನ್ನ ಎರಡನೆಯ ಪಾದದಿ೦ದ ಅ೦ತರಿಕ್ಷವನ್ನು ಅಳೆಯುವಾಗ, ಎಡಪಾದದ ಉಗುರಿನ ಬಿರಿದ ಭಾಗದಿಂದ ಸ್ಫುರಿಸಿದವಳು ಗಂಗೆ. ಈ ವಿಷ್ಣುಪದಿಯನ್ನು ಬೊಗಸೆಯಲ್ಲಿ ಹಿಡಿದ ಬ್ರಹ್ಮದೇವನು ಶ್ರೀಹರಿಯ ಪಾದಗಳನ್ನು ತೊಳೆದನಾದ್ದರಿಂದ ಗಂಗೆ ಸಕಲರ ಪಾಪಗಳನ್ನೂ ತೊಳೆವ ಪುಣ್ಯವತಿಯೆಂದು ಪೂಜಿಸಲ್ಪಡುವಳು.

ಹೀಗೆ ಉದ್ಭವಿಸಿದ ಗಂಗೆಯನ್ನು ಶ್ರೀ ಶಂಕರಾಚಾರ್ಯರು ತಮ್ಮ “ಗಂಗಾಸ್ತೋತ್ರ”ದಲ್ಲಿ- 
ತವ ಜಲಮಮಲಂ ಯೇನ ನಿಪೀತಂ | ಪರಮಪದಂ ಖಲು ತೇನ ಗೃಹೀತಮ್ |
ಮಾತರ್ಗಂಗೇ ತ್ವಯಿ ಯೋ ಭಕ್ತ: | ಕಿಲ ತಂ ದ್ರಷ್ಟುಂ ನ ಯಮ: ಶಕ್ತ: ||

ಓ ತಾಯೇ ಗಂಗೇ, ನಿನ್ನ ನಿರ್ಮಲ ಜಲವನ್ನು ಕುಡಿಯುವವನು ಪರಮಾತ್ಮನ ಪರಮಪದವನ್ನೇ ಪಡೆಯುವನಲ್ಲವೇ ? ಆ ಯಮನಂತೂ ನಿನ್ನ ಭಕ್ತನ ಕಡೆ ಕಣ್ಣೆತ್ತಿ ನೋಡಲೂ ಶಕ್ತನಲ್ಲ ಎಂದು ಸ್ತುತಿಸುತ್ತಾರೆ.  ಹೀಗೆ ಗಂಗಾನದಿಯಲ್ಲಿ ಸ್ನಾನ ಮಾಡಿದರೆ ಬರಿಯ ಶರೀರ ಮಾತ್ರವಲ್ಲಾ ಮನಸ್ಸೂ ಶುದ್ಧವಾಗುತ್ತದೆ ಎಂಬ ನಂಬಿಕೆಯಿದೆ.

“ಕಲುಷ ವಚನಗಳಾದರಿವು ಬಾಂ | ಬೊಳೆಯ ಪೆತ್ತನ ಪಾದ ಮಹಿಮಾ | ಜಲಧಿ ಪೊಕ್ಕುದರಿಂದ ಮಾಣ್ದಪರೇ ಮಹೀಸುರರು” || ವಿಷ್ಣು ಪಾದೋದ್ಭವಳಾದ ಗಂಗೆಗೇ ಇಷ್ಟು ಮಹಿಮೆ ಇರುವಾಗ ಶ್ರೀಹರಿಯ ಕಥೆಗಳನ್ನೂ, ಮಹಿಮೆಯನ್ನೂ, ಅಹಂಕಾರವನ್ನು ತೊರೆದು, ಅತಿ ಆದರದಿಂದ, ಭಕ್ತಿಯಿಂದ, ಭಗವಂತನ ಸೇವೆಯೆಂಬ ಭಾವದಿಂದ, ಕನ್ನಡ ಭಾಷೆಯಲ್ಲಿ ಬರೆಯುತ್ತಿದ್ದೇನಾದ್ದರಿಂದ ಇದು ಕೂಡ ಸಂಸ್ಕೃತದಷ್ಟೇ ಪವಿತ್ರವಾಗಿದೆ. ಸಂಸ್ಕೃ ಪದಗಳು ವಸ್ತುವಿನ ಗುಣ - ಅಭಿರುಚಿ - ಎಂದು ನಾನಾ ಮುಖಗಳನ್ನು ವಿವರಿಸುತ್ತೆ.  ಆದ್ದರಿಂದ ಅಂತಹ ಒಂದು ಸಮೃದ್ಧ ಭಾಷೆ ಬಿಟ್ಟು, ಕನ್ನಡದಲ್ಲಿ ರಚಿಸಿರುವ ಕೃತಿ ಕೂಡ ಶ್ರೀಹರಿಯ ಸ್ತುತಿಯನ್ನು ಮಾಡುವುದರಿಂದ ಸಂಸ್ಕೃತದಷ್ಟೇ ವಿಶೇಷತೆಯನ್ನು ಡೆದಿದೆ   ಎಂದು ಜಗನ್ನಾಥ ದಾಸರು ಈ ಪದ್ಯದಲ್ಲಿ ಹೇಳುತ್ತಾರೆ.

ಶ್ರೀ ವಿಷ್ಣು ಸಹಸ್ರನಾಮದ  ಫಲಶ್ರುತಿಯಲ್ಲಿ :
"ದ್ಯೌ: ಸ ಚಂದ್ರಾರ್ಕನಕ್ಷತ್ರಂ ಖಂ ದಿಶೋ ಭೂ: ಮಹೋದಧಿ: |
ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನ:" ||

ಪರಮಾತ್ಮನ ವೀರ್ಯದಿಂದಲೇ ಸಕಲ ಜಗತ್ತೂ ಭರಿಸಲ್ಪಟ್ಟು ನಿಂತಿದೆಯೆಂದೂ, ಹಾಗೂ  ಜಗತ್ತಿನ ಸೃಷ್ಟಿಗೂ, ಮೇಘಗರ್ಭದಲ್ಲಿರುವ ನೀರಿಗೂ ನಡುವೆ ಒಂದು ದಿವ್ಯ ಸಂಬಂಧವನ್ನು ವೇದ ಇಲ್ಲಿ ಎತ್ತಿ ಹಿಡಿದಿದೆ.  ಸೃಜನ ಕಾರ್ಯಕ್ಕೆ ಅವಶ್ಯವಾಗಿ ಬೇಕಾಗುವ ಮೂಲದ್ರವ್ಯ ಉದಕವೆಂದೂ, ಆಪವೆಂದೂ, ಸಲಿಲವೆಂದೂ, ವನವೆಂದೂ ಮುಂತಾಗಿ ಸುಮಾರು ನೂರಾ ಒಂದು ದಿವ್ಯ ಶಬ್ದಗಳಲ್ಲಿ ಕರೆದಿದೆ.  “ಘೃತಂ” ಎಂದು ಕೂಡ ಒಂದು ಹೆಸರಿದೆ ನೀರಿಗೆ.  ’ಘೃ’ ಧಾತುವು ಸೇಚನ ಮಾಡುವುದು, ಸಿಂಪಡಿಸುವುದು ಎಂಬ ಕ್ರಿಯಾರ್ಥವನ್ನು ಹೊಂದಿರುವುದರಿಂದ ಮೇಲಿನಿಂದ ಮಳೆಯ ರೂಪದಲ್ಲಿ ಚೆಲ್ಲಲ್ಪಡುವ ನೀರು ಎಂಬುದನ್ನು ಸೂಚಿಸುತ್ತದೆ.  ಇದೇ ಧಾತುವಿಗೆ ’ಬೆಳಗು’ ಎಂಬ ಅರ್ಥವಾದಾಗ ತನ್ನ ಕಾಂತಿಯಿಂದಲೇ ಬೆಳಗುವ ನೀರಿನ ದೀಪ್ತಿಯನ್ನು, ದೈವೀ ಶಕ್ತಿಯನ್ನು ಸೂಚಿಸುತ್ತದೆ.  ಹಾಗೇ ಇದೇ ಧಾತುವಿಗೆ ’ಗತಿ’ ಎಂಬರ್ಥವನ್ನು ಹೇಳಿದಾಗ ಮಳೆಯ ರೂಪದಲ್ಲಿಯೂ ಪರ್ವತದಲ್ಲಿಯೂ ಕೆಳಗೆ ಬೀಳುವ ನೀರು ಎಂದು ಸೂಚಿಸುತ್ತದೆ. “ಜೀವ  ನಳನಳಿಸಲು ’ಜೀವನಾಡಿ"ಯಾಗುವ ಜಲ, ಜೀವನದ ಕಡೆಯ ಪಯಣದಲ್ಲಿ – "ಗಂಗಾಜಲ" ವಾಗುತ್ತದೆ.   ಹೀಗೆ ನೀರು ನಮಗೆ ಅತಿ ಅವಶ್ಯಕವಾದ ವಸ್ತುವಾಗುತ್ತದೆ.

“ಮಳೆಯ ನೀರೋಣಿಯೊಳು ಪರಿಯಲು” – ಪವಿತ್ರವಾದ ಮಳೆಯ ನೀರು ಕೊಳಚೆ ತುಂಬಿದ ಓಣಿಯಲ್ಲಿ ಸುರಿದು ಹರಿಯುತ್ತದೆ.  ಸುರಿವ ಮಳೆಗೆ ಕೊಳಚೆ ಓಣಿ, ಶುದ್ಧವಾದ ಓಣಿ ಎಂಬ ತಾರತಮ್ಯವಿರುವುದಿಲ್ಲ.  ಎಲ್ಲಾ ಕಡೆಯೂ ಸುರಿದು ಹರಿಯುತ್ತದೆ.  ಆಗಲೂ ನೀರು ಪವಿತ್ರವಾಗಿಯೇ ಇದ್ದರೂ ಕೂಡ ಅದು ಅಪವಿತ್ರವೆನ್ನಲಾಗುತ್ತದೆ. ಉಪಯೋಗಕ್ಕೆ ಬಾರದಿರುತ್ತದೆ.

“ಬಳಸರೂರೊಳಗಿದ್ದ ಜನರಾ ಜಲವು ಹೆದ್ದೊರೆಗೂಡೆ ಮಜ್ಜನಪಾನ ಗೈದಪರು” – ಕೊಳಚೆ ಓಣಿಯಲ್ಲಿ ಸುರಿದು ಹರಿದರೂ ಕೂಡ ಕೊನೆಗೆ ಮಳೆಯ ನೀರು ಹಿರಿದಾದ ತೊರೆಯನ್ನೋ, ನದಿಯನ್ನೋ ಸೇರಿದಾಗ, ತಾನೂ ಅದೇ ತೊರೆ ಅಥವಾ ನದಿಯೆಂದು ಗುರುತಿಸಲ್ಪಡುತ್ತದೆ.  ಊರಿನ ಜನಗಳು ಅದು ಕೊಳಚೆ ಓಣಿಯಲ್ಲಿ ಹರಿದಾಗ ಉಪಯೋಗ ಪಡಿಸಿಕೊಳ್ಳದವರು, ನದಿಯನ್ನೋ, ತೊರೆಯನ್ನೋ ಸೇರಿದಾಗ, ಕುಡಿಯಲು, ಸ್ನಾನ ಮಾಡಲು ಉಪಯೋಗಿಸುತ್ತಾರೆ.

ಸಾಗರದ  ನೀರು ಸೂರ್ಯ ರಶ್ಮಿಯ ಮಿಲನದಿಂದ ಆವಿಯಾಗಿ, ಮೋಡದ ಗರ್ಭದಲ್ಲಿ ಹನಿಯಾಗಿ ಸೇರಿ  ಮತ್ತೆ ಭೂಮಿಗೆ ಸುರಿದಾಗ ಎಲ್ಲಾ ರೀತಿಯಲ್ಲೂ ಬಹು ಪವಿತ್ರ ಹಾಗೂ ಪಾವನವಾಗಿರುತ್ತದೆ. ಅದೇ ರೀತಿಯಲ್ಲಿ ಯಾವುದೇ ವಸ್ತುವಾದರೂ ಕೂಡ ಭಗವಂತನ ಸಾನ್ನಿಧ್ಯವಿಲ್ಲದೆ ಪವಿತ್ರವಾಗುವುದಿಲ್ಲ.  ವಿಷ್ಣುಪದಿಯಾದ ಗಂಗೆ “ಹರಿವ ಹರಿಯೇ” ಎನ್ನುವಷ್ಟು ಶ್ರೀಹರಿಯ ಸಾ೦ಗತ್ಯವನ್ನು ಹೊ೦ದಿದ೦ತೆ, ದಾಸರು ರಚಿಸಿರುವ ’ಹರಿಕಥಾಮೃತಸಾರ’ ಗ್ರಂಥವೂ ಕೂಡ ಶ್ರೀಹರಿಯ ಸ್ತುತಿರೂಪವಾಗಿದ್ದು, ಭಗವಂತನ ಮಹಾಸನ್ನಿಧಾನ ಇರುವುದರಿಂದಲೇ ಅದು ಪವಿತ್ರವೆನ್ನಿಸಿದೆ.  

ಮೇಘೋಚ್ಛಿಷ್ಟ ವರ್ಷಧಾರೆಯು ಇಳೆಯನೆಲ್ಲಾ ಆವರಿಸಿ ಕಡಲ ತಡಿಯಲಿ ಹರಿದು ಒಡಲು ಸೇರುವ೦ತೆ, ಜೀವಿಗಳೂ ಕೂಡ ಮಳೆಯ ನೀರಿನಂತೆಯೇ ಹುಟ್ಟು ಸಾವುಗಳ ಚಕ್ರದಲ್ಲಿ ಬಂಧಿತರಾಗಿದ್ದೇವೆ. ಸಾಗರದ ನೀರು ಹೇಗೆ ಆವಿಯಾಗಿ-ಮೋಡವಾಗಿ ಮತ್ತೆ ಮಳೆಹನಿಯಾದಾಗ ಶುದ್ಧ ಮತ್ತು ಪವಿತ್ರವಾಗಿರುತ್ತದೆಯೋ,  ಹಾಗೆಯೇ ನಾವು ನಮ್ಮ ಮನಸ್ಸನ್ನು ಭಗವಂತನ ಪರ ಚಿ೦ತನೆಯಲ್ಲಿ ತೊಡಗಿಸಿಕೊಂಡು, ಮಾಡುವ ಎಲ್ಲಾ ಕರ್ಮಗಳನ್ನೂ ಪ್ರತಿಫಲಾಫೇಕ್ಷೆಯಿಲ್ಲದೆ ಮಾಡುತ್ತಾ ಬಂದರೆ, ನಮ್ಮ ಮನಸ್ಸೂ ಕೂಡ ಪರಿಶುದ್ಧವಾಗುತ್ತಾ ಭಗವಂತನಲ್ಲಿ ನೆಲೆ ಗಾಣುತ್ತದೆ.  ಸಾಗರದ ಗರ್ಭದಲ್ಲಿ ತಿಮಿಂಗಿಲಗಳೂ ಇವೆ, ಸುಂದರ ಮತ್ಸ್ಯಗಳೂ ಇವೆ ಮತ್ತು ಬೆಲೆಬಾಳುವ ಮುತ್ತು ರತ್ನಗಳೂ ಅಡಗಿವೆ.  ನಮ್ಮ ಹುಡುಕಾಟ ಮುತ್ತು ರತ್ನಗಳೆಂಬ ಬೆಲೆಬಾಳುವ ಭಗವಂತನ ಚಿಂತನೆಗಳಾಗಿರಬೇಕೆ ಹೊರತೂ, ವಿಷಯಾಸಕ್ತಿಗಳೆಂಬ ತಿಮಿಂಗಿಲಗಳಾಗಿರಬಾರದು ಎ೦ಬುದು ದಾಸರ ಚಿ೦ತನೆಯಾಗಿದೆ.

ಚಿತ್ರಕೃಪೆ : ಅಂತರ್ಜಾಲ 
ಆಧಾರ ಗ್ರಂಥ : "ವೇದ ಸಂಸ್ಕೃತಿಯ ಪರಿಚಯ"   ಡಾ|| ಕೆ ಎಸ್ ನಾರಾಯಣಾಚರ್ಯ