Friday, July 1, 2011

ಮಂಗಳಾಚರಣ ಸಂಧಿ - ೪ ನೇ ಚರಣ



 
ಆರು ಮೂರೆರಡೊಂಡು ಸಾವಿರ

ಮೂರೆರಡು ಶತಶ್ವಾಸ ಜಪಗಳ

ಮೂರುವಿಧ ಜೀವರೊಳಗಬ್ಜಜ ಕಲ್ಪಪರಿಯಂತ|

ತಾ ರಚಿಸಿ ಸತ್ವರಿಗೆ ಸುಖ ಸಂ

ಸಾರ ಮಿಶ್ರರಿಗಧಮ ಜನರಿಗ

ಪಾರ ದು:ಖಗಳೀವ ಗುರು ಪವಮಾನ ಸಲಹೆಮ್ಮ || ೪ ||
 ಪ್ರತಿಪದಾರ್ಥ : ಆರು ಮೂರು - ೧೮ (೬x೩), ಎರಡೊಂದು - (೨+೧)೩, ೧೮+೩ = ೨೧ ಹೀಗೆ ಇಪ್ಪತ್ತೊಂದು ಸಾವಿರ, ಮೂರೆರಡು ಶತ - ೬೦೦ (೨೦೦x೨) ಅಂದರೆ ಒಟ್ಟು ಇಪ್ಪತ್ತೊಂದು ಸಾವಿರದ ಆರುನೂರು ಶ್ವಾಸಜಪಗಳು ಎಂದರ್ಥ, ಮೂರುವಿಧ ಜೀವರೊಳು - ಸತ್ವ ರಜಸ್ಸು ತಮಸ್ಸೆಂಬ ಮೂರು ಗುಣಗಳನ್ನು ಹೊಂದಿರುವ ಜೀವಿಗಳೊಳಗೆ,   ಅಬ್ಜಜಕಲ್ಪಪರಿಯಂತ - ಬ್ರಹ್ಮ ಕಲ್ಪ ಸಂಪೂರ್ಣವಾಗುವವರೆಗೂ, ತಾ ರಚಿಸಿ - ತಾನು ಮಾಡಿ, ಸಾತ್ವರಿಗೆ ಸುಖ - ಸತ್ವ ಗುಣ ಹೊಂದಿರುವ ಸಾತ್ವಿಕರಿಗೆ ಸುಖ (ಮೋಕ್ಷ) ಸಂಸಾರ ಮಿಶ್ರರಿಗೆ - ರಜೋಗುಣ (ಸತ್ವ ಹಾಗೂ ತಮೋಗುಣಗಳ ಮಿಶ್ರ) ಹೊಂದಿರುವವರಿಗೆ ಸಂಸಾರ (ಸುಖ ದುಃಖಗಳನ್ನು ಏಕವಾಗಿ ಭೋಜನ ಮಾಡುವಂತಹವರು), ಅಧಮ ಜನರಿಗಪಾರ ದುಃಖಗಳ - ತಮೋಗುಣ ಪ್ರಧಾನವಾದ ಜೀವಗಳಿಗೆ ಸಹಿಸಲಸಾಧ್ಯವಾದಷ್ಟು ದುಃಖವನ್ನು, ಈವ ಗುರುಪವಮಾನ - ಕೊಡುವ ಜೀವೋತ್ತಮರಾದ ವಾಯುದೇವರೆ, ಸಲಹೆಮ್ಮ - ನಮ್ಮನ್ನು ಪಾಲಿಸು.

ನಾಲ್ಕನೇ ಪದ್ಯದಲ್ಲಿ ವಾಯು ದೇವರಿಂದ ಜೀವರುಗಳು ಪಡೆಯುತ್ತಿರುವ ಉಪಕಾರವನ್ನು ಹೇಳಿ ವಾಯುದೇವರನ್ನು ಸ್ತುತಿಸಿದ್ದಾರೆ.  ಈ ಶ್ವಾಸ ಜಪವನ್ನು ಹಂಸಮಂತ್ರವೆಂದು ಕರೆಯುತ್ತಾರೆ.  ಉಚ್ವಾಸವಿಲ್ಲದ ವಿರಾಮ ಕಾಲದಲ್ಲಿ ಹಂಸ: ಎಂದರೆ ಆಯಾಸವಾಗುವುದಿಲ್ಲ.  ಹೀಗಾಗಿ ಇದನ್ನು ವಾಯುದೇವರು ಜೀವರುಗಳಲ್ಲಿ ನಿಂತು ಮಾಡುವ ಹಂಸಜಪ ಎನ್ನುತ್ತಾರೆ. 
ಹಂಸಜಪವು  ಬಾಹ್ಯದ ಭೋಗವಿಷಯಗಳ ಸಂಪರ್ಕವಿಲ್ಲದಂತೆ, ಧ್ಯಾನದಂತೆ ನಡೆಯುತ್ತಿರುತ್ತದೆ. ಯೋಗ ಗ್ರಂಥಗಳು ಇದನ್ನು ಪ್ರಾಣಾಯಾಮದ ಶ್ವಾಸೋಚ್ಛ್ವಾಸಗಳಲ್ಲಿ ನಡೆಯುವ ಓಂ ಎಂಬ “ಅಜಪಾ ಗಾಯತ್ರಿ” ಎಂದಿವೆ.  ಯೋಗ ಪರಿಭಾಷೆಯಲ್ಲಿ ಪ್ರಾಣಶಕ್ತಿಯಿಂದ ಮೂಗಿನ ಮೂಲಕ ಉಸಿರಾಡುತ್ತಾ ವಾಯುವನ್ನು ಒಳಕ್ಕೆ ಸೆಳೆಯುವುದು ಪೂರಕ (ಸೋಹಂ); ಅದೇ ರೀತಿ ಉಸಿರಾಡುತ್ತಾ ಒಳಗೆ ಸೆಳೆದಿದ್ದ ವಾಯುವನ್ನು ಹೊರಕ್ಕೆ ಬಿಡುವುದು ರೇಚಕ (ಸ್ವಾಹಾ); ಪೂರಕ-ರೇಚಕಗಳ ನಡುವೆ ಸೆಳೆದ ವಾಯು ತಾನಾಗಿ ಹೊರಕ್ಕೆ ಹೋಗದಂತೆಯೂ, ಹೊರಗಿನ ವಾಯು ಒಳಕ್ಕೆ ನುಗ್ಗದಂತೆಯೂ ತಡೆಯುವ ಕ್ರಿಯೆ ಕುಂಭಕ.  ಪೂರಕ-ರೇಚಕಗಳ ನಡುವೆ “ಹಂಸ:” ಎಂದರೆ ಆಯಾಸವಾಗುವುದಿಲ್ಲ ಮತ್ತು ಈ ಪೂರಕ-ರೇಚಕಗಳಲ್ಲಿ “ಅಜಹಾ ಹಂಸಗಾಯತ್ರಿ”ಯ “ಓಂ” ಜಪ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಒಕ ದಿನಮು ಲೆಕ್ಕ ಪೆಟ್ಟಿನ ಚಾಲು  ಎನ್ನುತ್ತಾ ತಾತಯ್ಯನವರು  ಒಂದೇ ಒಂದು ದಿನಕ್ಕೂ ಲೆಕ್ಕವಿಡುವುದು ಸಾಮಾನ್ಯ ಮನುಷ್ಯರಿಗೆ ನಿಲುಕದ್ದು  ಎನ್ನುತ್ತಾ  ಹಂಸಜಪದ ಮಹತ್ವವನ್ನು ತಿಳಿಯಪಡಿಸುತ್ತಾರೆ. 

ಈ ಹಂಸ ಮಂತ್ರದ ಸಂಖ್ಯೆಯನ್ನು ಜಗನ್ನಾಥ ದಾಸರು ಚಮತ್ಕಾರವಾಗಿ ವರ್ಣಿಸುತ್ತಾರೆ.  ೬ X ೩ = ೧೮ + ೨ +೧ = ೨೧,೦೦೦ ೩ ಎರಡು ಶತ = ೩೦೦ + ೩೦೦ = ೬೦೦.  ಒಟ್ಟು ೨೧,೬೦೦ ಶ್ವಾಸ ಜಪವನ್ನು ವಾಯುದೇವರು  ೩ ವಿಧ ಜೀವರೊಳಗೂ ನಿಂತು ಬ್ರಹ್ಮ ಕಲ್ಪದವರೆಗೂ ರಚಿಸುತ್ತಾರೆ.  

ಸತತವಾಗಿ ಎಷ್ಟು ಹೊತ್ತಿಗೆ ಎಷ್ಟು ಜಪ ನಮಗಾಗಿ ವಾಯುದೇವರು ಮಾಡುತ್ತಾರೆಂಬುದನ್ನು ಶ್ರೀ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ “ಶ್ರೀಮದ್ಧರಿಕಥಾಮೃತಸಾರ ಸಾರ ಸಂಗ್ರಹ ಹಾಗೂ ಶ್ರೀಜಗನ್ನಾಥದಾಸರ ಉಪಮೆಗಳು” ಎಂಬ ಪುಸ್ತಕದಲ್ಲಿ  ಹೀಗೆ ವಿವರಿಸಿದ್ದಾರೆ 


          ಒಂದು ಘಳಿಗೆಗೆ (೨೪ ನಿಮಿಷ)            ೩೬೬  ಜಪ

            ಒಂದು ತಾಸಿಗೆ (೬೦ ನಿಮಿಷ)           ೯೦೦  ಜಪ

            ಒಂದು ಯಾಮಕ್ಕೆ (೩ ತಾಸು)        ೨೭೦೦  ಜಪ

            ಎರಡು ಯಾಮಕ್ಕೆ                        ೫೪೦೦  ಜಪ

            ಮೂರು ಯಾಮಕ್ಕೆ                       ೮೧೦೦  ಜಪ

            ನಾಲ್ಕು ಯಾಮಕ್ಕೆ                    ೧೦೮೦೦  ಜಪ

            ಒಂದು ದಿನಕ್ಕೆ                         ೨೧೬೦೦  ಜಪ

ಸತ್ವರಿಗೆ ಸುಖ, ಸಂಸಾರಿಗಳಿಗೆ ಮಿಶ್ರ ಹಾಗೂ ಅಧಮ ಜೀವಿಗಳಗೆ ದು:ಖಾನು ದು:ಖವನ್ನು ಕೊಡುವ ಗುರು ಪವಮಾನ ಸಲಹು ಎಮ್ಮನು ಎಂದು ದಾಸರು ವಿನಮ್ರರಾಗಿ ಕೇಳಿ ಕೊಳ್ಳುತ್ತಾರೆ.

ಹೀಗೆ ವಾಯುದೇವರಲ್ಲಿ ದಾಸರ ಭಕ್ತಿ ಪಸರಿಸುತ್ತಾ ಹೋಗುತ್ತದೆ.  ಅದನ್ನೇ ತಮ್ಮ ಪದಗಳಲ್ಲೂ ತಂದಿದ್ದಾರೆ.  ಅವರು “ಹರಿ ಸರ್ವೋತ್ತಮ.. ವಾಯು ಜೀವೋತ್ತಮ” ಎಂದು ವಾಯುದೇವರನ್ನು ಸ್ತುತಿಸುತ್ತಿರುತ್ತಾರೆ.  “ಅಪಮೃತ್ಯು ಪರಿಹರಿಸು ಅನಿಲದೇವ” ಎಂಬ ಕೃತಿಯಲ್ಲಿ  ನಮ್ಮ ಶರೀರವು ಸಾಧನಾ ಶರೀರ, ನಿನ್ನ ದಯದಿಂದ ಸಿಕ್ಕಿದೆ.  ವೇದವಾದೋದಿತ ಜಗನ್ನಾಥ ವಿಠಲನ ಪಾದ ಭಕುತಿಯನ್ನು ಸದಾ ನಮಗೆ ಕೊಟ್ಟು ಮೋದವನ್ನು ಕೊಡಿಸು ಎಂದೂ, “ಪವಮಾನ ನಮ್ಮ ಗುರು ಶ್ರೀ ವಲ್ಲಭನಿಗೆ ಪ್ರತಿಬಿಂಬ” ಸೀತಾರಮಣ ಜಗನ್ನಾಥ ವಿಠಲ ದೂತ ಎಂದೂ ಹಾಡಿದ್ದಾರೆ.  “ಪ್ರಾಣದೇವ ನೀನಲ್ಲದೆ ಕಾಯುವರ ಕಾಣೆ” ಎಂದು ಸ್ತೋತ್ರ ಮಾಡುವಾಗ “ನೀನೇ ಪರಿಸರ, ಭೂತೇಂದ್ರಿಯಗಳ ಅಧಿನಾಥ ಜಗನ್ನಾಥ ವಿಠಲನ ಪ್ರೀತಿ ಪಾತ್ರನಾದೆ” ಎಂದು ಪ್ರಾರ್ಥಿಸಿದ್ದಾರೆ.  ಇನ್ನು “ಬಂದೆ ಗುರುರಾಯ ನಿನ್ನ ಸಂದರ್ಶನವ ಬಯಸಿ” ಎಂಬ ಕೃತಿಯಲ್ಲಂತೂ ವಾಯುದೇವರ ೩ ಅವತಾರಗಳನ್ನು ವರ್ಣಿಸುತ್ತಾ


ರಾಮದೂತನಾಗಿ ತ್ರಿಜಗದೊಳಗೆ ಮೆರೆದವರ

 ಕಾಮಿನೀಮಣಿಗೆ ನೇಮದಿಂದುಂಗುರವನಿತ್ತೆ  ||೧||


ಇನಕುಲದಿ ಜನಿಸಿ ಗುಣಸಾಂದ್ರನಾಗಿ ಬಂಡಿ

ಅನ್ನವನುಂಡು ದುರುಳರ ಚೆಂಡಾದಿದ್ದು ಕೇಳಿ  ||೨||


ಕಟ್ಟಾ ಕಡೆಯಲ್ಲಿ ಯತಿಯಾಗಿ ಕೆಟ್ಟ ಮತಗಳ ತರಿದು

ಪುಟ್ಟ ಜಗನಾಥ ವಿಠಲನ ದಾಸರ ಪೊರೆವುದ ಕೇಳಿ  ||೩||

ಯತಿಯಾಗಿ ಅಂದರೆ ಇಲ್ಲಿ ಮಧ್ವಾಚಾರ್ಯರಾಗಿ ಉಡುಪಿಯಲ್ಲಿ ಪುಟ್ಟ ಜಗನ್ನಾಥ ವಿಠಲ ಎಂದು ಪುಟ್ಟ ಕೃಷ್ಣನನ್ನು ಪೂಜಿಸಿ, ನಿನ್ನ ದಾಸರನ್ನು ಪೊರೆ ಎಂದು ಹಾಡಿ ಹೊಗಳಿ ನಮಿಸಿದ್ದಾರೆ.

ಡಿವಿಜಿಯವರು ತಮ್ಮ ಕಗ್ಗದಲ್ಲಿ  ವಾಯುವಂ ಕಾಣ್ಬನಾರ್ ? ತತ್ಕ್ರಿಯೆಯ ಕಾಣನಾರ್ ?  ಎನ್ನುತ್ತಾ  ಗಾಳಿಯನ್ನು (ವಾಯು ದೇವರನ್ನು) ಕಾಣಲು ಸಾಧ್ಯವಿಲ್ಲವಾದರೂ, ನಾವು ಅದರ ಕೆಲಸವನ್ನು ಕಂಡೇ ಕಾಣುತ್ತೇವೆ.  ರಾಯನಂ ಕಾಣಲಾಗದೆ ಮಂತ್ರಿಯೆಡೆ ಸಾರ್ವ | ದೇಯಾರ್ಥಿವೊಲು ನೀನು – ಮಂಕುತಿಮ್ಮ   -  ಎಂದರೆ ಒಳಗಿರುವ ಪರಮಾತ್ಮನ ಇರುವು ತಿಳಿಯಲು, ನಾವು ಮೊದಲು “ಹಂಸಜಪ”ದ ಮೂಲಕ ಅಂದರೆ “ವಾಯುದೇವಾಂತರ್ಗತ”ವೇ ಪರಮಾತ್ಮನ ಬಳಿಗೆ ಸಾರಬೇಕು ನೇರವಾಗಿ ಭಗವಂತನ ಅನುಗ್ರಹ ನಮಗೆ ಸಿಕ್ಕದು ಎಂಬ ಮಾತನ್ನು ಪುಷ್ಟೀಕರಿಸುತ್ತಾರೆ.

No comments: