Saturday, May 2, 2015

ಕರುಣಾ ಸಂಧಿ - ೩೦ ನೇ ಪದ್ಯ (ವರಾಹಾವತಾರ)




 ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು || ೩೦ ||


ವರಾಹ - ವರಾಹಾವತಾರ : ಭಗವಂತನ ಅಸಂಖ್ಯಾತ ಅವತಾರಗಳಲ್ಲಿ ಪ್ರಮುಖವಾಗಿ ಗುರುತಿಸಲ್ಪಟ್ಟಿರುವ ದಶಾವತಾರಗಳಲ್ಲಿ ಮೂರನೆಯ ಅವತಾರವಾಗಿ ವರಾಹಾವತಾರವಾಯಿತು.    ಭಾಗವತ ಎರಡನೆಯ ಸ್ಕಂಧ ಏಳನೆಯ ಅಧ್ಯಾಯದಲ್ಲಿ ಶ್ವೇತವರಾಹ ಕಲ್ಪದಲ್ಲಿ ಮೊದಲು ಭಗವಂತನ ವರಾಹಾವತಾರವಾಯಿತು ಎಂಬ ಉಲ್ಲೇಖವಿದೆ.  ಅಪ್ರಾಕೃತ ದೇಹದಿಂದಲೇ ಯಾಗಕ್ಕೆ ಬೇಕಾದ ಸರ್ವ ಸಾಮಗ್ರಿಗಳನ್ನು ಸೃಷ್ಟಿ ಮಾಡಿ ’ಯಜ್ಞವರಾಹ’ನೆಂದು ಪ್ರಸಿದ್ಧನಾದನು.  ತಾನಾಗಿಯೇ ಮುಳುಗಿ ಹೋಗಿದ್ದ ಭೂಮಿಯನ್ನು ಶ್ವೇತವರಾಹ ಸ್ವಾಮಿಯು ರಸಾತಳದಿಂದ ಕೋರೆದಾಡಿಯ ಕೊನೆಯಲ್ಲಿಟ್ಟುಕೊಂಡು ಮೇಲಕ್ಕೆ ತರುವಾಗ ಆದಿದೈತ್ಯ ಹಿರಣ್ಯಾಕ್ಷನು ತಡೆದಾಗ ಸ್ವಾಮಿಯು ಗದೆಯಿಂದ ಹಿರಣ್ಯಾಕ್ಷನ ದೇಹವನ್ನು ಸೀಳಿ  ಸಂಹರಿಸಿದನೆಂಬ ವಿವರಣೆ ಇದೆ.

ಶ್ರೀವಿಷ್ಣು ಪುರಾಣಮ್ ವರಾಹಾವತಾರವನ್ನು ವರಾಹ ರೂಪವು ದೇವಯಜ್ಞಮಯವಾದದ್ದು ಎಂದು ಸ್ತುತಿಸಲಾಗಿದೆ.  ನೀರಿನಲ್ಲಿ ಮುಳುಗಿದ್ದ ಪೃಥಿವಿಯನ್ನು ಎತ್ತಿ ತರಬೇಕೆಂಬ ಉದ್ದೇಶದಿಂದ ಜನಲೋಕದಲ್ಲಿದ್ದ ಸನಕಾದಿ ಸಿದ್ಧಪುರುಷರಿಂದ ಸ್ತುತಿಸಲ್ಪಡುತ್ತಿದ್ದಾಗ, ನೀರಿನೊಳಗೆ ಪ್ರವೇಶವಾಯಿತು.  ಪಾತಾಳಕ್ಕೆ ಬಂದ ವರಾಹ ರೂಪಿ ಭಗವಂತನನ್ನು ಕಂಡು ಭೂದೇವಿಯು ಅನೇಕ ವಿಧವಾಗಿ ಸ್ತುತಿಸುತ್ತಾ, ನೀನೇ ನನಗೆ ಆಧಾರನೆಂದು ಮೊರೆಯಿಡುತ್ತಾ ನಮಸ್ಕರಿಸುವಳು.  ಪೃಥಿವಿಯ ಸ್ತುತಿಯಿಂದ ಸಂತುಷ್ಟನಾದ ವರಾಹವು ಸಾಮಗಾನದ ಧ್ವನಿಯಲ್ಲಿ ಗರ್ಜಿಸುತ್ತಾ, ತನ್ನ ಕೋರೆದಾಡಿಯಿಂದ ಭೂಮಿಯನ್ನೆತ್ತಿಕೊಂಡು ದೊಡ್ಡ ನೀಲಾಚಲದಂತೆ ರಸಾತಳದಿಂದ ಮೇಲೆದ್ದಿತು.  ಜಲದಿಂದ ಮೇಲೇಳುವಾಗ ವರಾಹದ ಬಾಯಿಯಿಂದ ಬಿರುಗಾಳಿ ಎದ್ದು ಸಮುದ್ರದ ನೀರು, ಉಕ್ಕಿ ಪುಟಿದು ಜನಲೋಕದಲ್ಲಿ ಆಶ್ರಯ ಪಡೆದಿದ್ದ ಸನಂದನಾದಿ ತೇಜಸ್ವಿ ಮುನಿಗಳನ್ನು ತೊಳೆಯುತ್ತದೆ.  ವರಾಹದ ಹೊಟ್ಟೆಯು ನೀರಿನಿಂದ ಒದ್ದೆಯಾಗಿ, ಅದು ತನ್ನ ವೇದೋಮಯ ಶರೀರವನ್ನು ಕೊಡಹುವುದು.  ರೋಮ ರೋಮಗಳಲ್ಲಿ ಆಶ್ರಯ ಪಡೆದಿದ್ದ ಮುನಿಗಳು ಭಯದಿಂದ ನಿರಂತರ ಸ್ತೋತ್ರ ಮಾಡುತ್ತಾರೆ.  ಸಕಲ ದೇವಾದಿದೇವತೆಗಳೂ, ಜನಲೋಕದ ಸಮಸ್ತ ಯೋಗಿಗಳೂ ವರಾಹಾವತಾರವನ್ನು ಯಜ್ಞಪುರುಷನೆಂದೂ, ಪಾದಗಳು ನಾಲ್ಕು ವೇದಗಳೆಂದೂ, ಕೋರೆದಾಡಿಯೇ ಯೂಪವೆಂದೂ, ಹಲ್ಲುಗಳೇ ಯಜ್ಞಗಳೆಂದೂ, ಮುಖವೇ ಹೋಮಕುಂಡವೆಂದೂ, ನಾಲಿಗೆಯೇ ಅಗ್ನಿಯೆಂದೂ, ರೋಮಗಳೇ ದರ್ಭೆಗಳೆಂದೂ ಪರಮಪುರುಷನ ಅವಯವಗಳನ್ನು ಸ್ತುತಿಸುತ್ತಾ ನಮಿಸುತ್ತಾರೆ.  ವರಾಹರೂಪಿ ಭಗವಂತನು ಪೃಥಿವಿಯನ್ನು ಜಲರಾಶಿಯ ಮೇಲೆ ಸ್ಥಾಪಿಸಿ, ಭೂಮಿಯ ಮೇಲ್ಮೈಯನ್ನು ಸಮವಾಗಿ ಮಾಡಿ, ಪರ್ವತಗಳನ್ನು ವಿಭಾಗ ಮಾಡಿ ಸ್ಥಾಪಿಸುವನು.  ಸಪ್ತದ್ವೀಪಗಳಾಗಿ ವಿಂಗಡಿಸಲ್ಪಟ್ಟು, ಭೂಃ ಭುವಃ ಸುವಃ ಮಹಃ ಎಂಬ ನಾಲ್ಕು ಲೋಕಗಳು ನಿರ್ಮಾಣವಾಯಿತೆಂದು ಸುಂದರವಾಗಿ ವರ್ಣಿಸಲ್ಪಟ್ಟಿದೆ.

ಪದ್ಮ ಮಹಾಪುರಾಣದಲ್ಲಿ ವರಾಹಾವತಾರವು ವಿಸ್ತಾರವಾಗಿ ವರ್ಣಿಸಲ್ಪಟ್ಟಿದೆ.  ಭಗವಂತನು ವಿಚಿತ್ರವಾದ ವಿಶ್ವರೂಪಿ ವರಾಹ ಅವತಾರವನ್ನು ಧರಿಸಿದನೆಂಬ ಉಲ್ಲೇಖವಿದೆ.  ವರಾಹದ ಮೂಲ ಎಲ್ಲಿದೆಯೆಂಬುದೇ ತಿಳಿಯದಂತೆ, ಮಧ್ಯವು ಗೋಚರಿಸದೆ, ತುದಿಯಂತೂ ಇಲ್ಲದಂತಹ ವ್ಯಾಪ್ತತೆಯಿರುತ್ತದೆ.  ಮೈ ತುಂಬ ಕಣ್ಣು, ನೋಡಿದಲ್ಲೆಲ್ಲ ಕೈ, ಎಲ್ಲ ಕಡೆಗೂ ಕಾಲು, ಅತೀ ಉದ್ದವಾದ ಕೋರೆದಾಡಿಯನ್ನು ಹೊಂದಿತ್ತೆಂಬ ವಿವರಣೆ ಸಿಕ್ಕುತ್ತದೆ.  ನಾಲ್ಕು ವೇದಗಳು, ಆರು ವೇದಾಂಗಗಳನ್ನು ದೇಹವಾಗಿ ಹೊಂದಿದ್ದ ಯಜ್ಞ ವರಾಹ ರೂಪಿಯನ್ನು ದೇವತೆಗಳು "ನಮೋ ಯಜ್ಞ ವರಾಹಾಯ ಕೃಷ್ಣಾಯ ಶತಬಾಹವೇ | ನಮಸ್ತೇ ವೇದವೇದಾಂಗ ತನವೇ ವಿಶ್ವರೂಪಿಣೇ" ಎಂದು ಸ್ತುತಿಸುತ್ತಾರೆ.



ಭಾಗವತ ಎರಡನೆಯ ಸ್ಕಂಧ ೭ನೆಯ ಅಧ್ಯಾಯದಲ್ಲಿ ವರಾಹಾವತಾರವನ್ನು
ಯತ್ರೋದ್ಯತಃ ಕ್ಷಿತಿತಲೋದ್ಧರಣಾಯ ಬಿಭ್ರ-
ತ್ಕ್ರೌಡೀಂ ತನುಂ ಸಕಲ ಯಜ್ಞಮಯೀಮನನ್ತಃ |
ಅನ್ತರ್ಮಹಾರ್ಣವ ಉಪಾಗತಮಾದಿದೈತ್ಯಂ
ತಂ ದಂಷ್ಟ್ರಯಾದ್ರಿಮಿವ ವಜ್ರಧರೋ ದದಾರ || - ಪ್ರಳಯ ಜಲದಲ್ಲಿ ಮುಳುಗಿದ್ದ ಭೂಮಿಯನ್ನು ಉದ್ಧರಿಸುವುದಕ್ಕೋಸ್ಕರ ಅನಂತನಾದ ಶ್ರೀಭಗವಂತನು ಸಮಸ್ತ ಯಜ್ಞಮಯವಾದ ವರಾಹ ದೇಹವನ್ನು ಕೈಗೊಂಡನು.  ಆ ಅವತಾರದಲ್ಲಿ ಆತನು ಮಹಾ ಸಮುದ್ರದೊಳಗಡೆಯೇ ತನ್ನನ್ನು ಎದುರಿಸಲು ಬಂದ ಆದಿದೈತ್ಯನಾದ ಹಿರಣ್ಯಾಕ್ಷನನ್ನು - ಇಂದ್ರನು ವಜ್ರಾಯುಧದಿಂದ ಪರ್ವತವನ್ನು ಭೇದಿಸಿದಂತೆ - ತನ್ನ ಕೋರೆದಾಡೆಯಿಂದ ಸೀಳಿಹಾಕಿದನು ಎಂದು ವರ್ಣಿಸಲ್ಪಟ್ಟಿದೆ.

ಭಾಗವತ ಮೂರನೆಯ ಸ್ಕಂಧ, ಹದಿಮೂರನೆಯ ಅಧ್ಯಾಯದಲ್ಲಿ ಸ್ವಾಯಂಭುವ ಮನುವು ಭೂಮಿಯು ದಿನ ಪ್ರಳಯದ ನೀರಿನಲ್ಲಿ ಮುಳುಗಿರುವುದರಿಂದ ಪ್ರಜೆಗಳ ವಾಸಕ್ಕೆ ಸ್ಥಳವಿಲ್ಲವಾಗಿದೆ, ಭೂಮಿಯನ್ನು ನೀರಿನಿಂದ ಮೇಲಕ್ಕೆ ತರಬೇಕೆಂದು ಕೇಳಿಕೊಳ್ಳುತ್ತಾರೆ.  ಬ್ರಹ್ಮದೇವರು ಶ್ರೀಮನ್ನಾರಾಯಣನೇ ಭೂಮಿಯನ್ನು ಮೇಲಕ್ಕೆ ತರಬೇಕೆಂದು, ಭಗವಂತನನ್ನು ಧ್ಯಾನಿಸುತ್ತಾರೆ.  ಧ್ಯಾನದ ಸಮಯದಲ್ಲಿಯೇ ಬ್ರಹ್ಮದೇವರ ಮೂಗಿನ ಹೊಳ್ಳೆಯಿಂದ ಅಂಗುಷ್ಠ ಗಾತ್ರದ ವರಾಹವು ಹೊರಗೆ ಬಂದು ಕೂಡಲೇ ಬೃಹದಾಕಾರವಾಗಿ ಬೆಳೆಯಿತು.  ಇದು ಭಗವಂತನದ್ದೇ ಲೀಲೆಯೆಂದು ಬ್ರಹ್ಮದೇವರು ಮತ್ತು ಸ್ವಾಯಂಭುವ ಮನುವು ಯೋಚಿಸುತ್ತಿರಲು ವರಾಹವು ಒಮ್ಮೆ ಗರ್ಜಿಸಿ, ದೇವತೆಗಳೆಲ್ಲರನ್ನೂ ಸಂತೋಷಪಡಿಸುತ್ತದೆ.  ಸಮಸ್ತರೂ ವರಾಹರೂಪಿ ಭಗವಂತನನ್ನು ವೇದಗಳಿಂದ ಸ್ತುತಿಸುತ್ತಿರಲು, ವರಾಹವು ತನ್ನ ಬಾಲವನ್ನು ಮೇಲಕ್ಕೆತ್ತಿಕೊಂಡು, ನೀರೊಳಗೆ ಹೋಗಿ ರಸಾತಳದಲ್ಲಿ ಸೆರೆಸಿಕ್ಕಿದ್ದ ಭೂಮಿಯನ್ನು ಮೇಲಕ್ಕೆ ತರುತ್ತಿರಲು, ಬ್ರಹ್ಮದೇವರಿಂದ ಹುಟ್ಟಿದ್ದ ಆದಿ ಹಿರಣ್ಯಾಕ್ಷನೆಂಬ ದೈತ್ಯನು ಗದಾಪಾಣಿಯಾಗಿ ಭಗವಂತನನ್ನು ಅಡ್ಡಗಟ್ಟುತ್ತಾನೆ.  ವರಾಹದೇವನು ತನ್ನ ದಾಡೆಯಿಂದ ಅವನನ್ನು ಕೊಂದು ಭೂಮಿಯೊಡನೆ ಮೇಲಕ್ಕೆ ಬರುತ್ತಾನೆ.    ತಾನಾಗಿಯೇ ದಿನಪ್ರಳಯ ಜಲದಲ್ಲಿ ಮುಳುಗಿದ್ದ ಭೂಮಿಯನ್ನು ತರುವಾಗ ಅಡ್ಡಬಂದ ಆದಿಹಿರಣ್ಯಾಕ್ಷನನ್ನು ಭಗವಂತನು ಶ್ವೇತವರಾಹ ರೂಪದಲ್ಲಿ, ದಾಡೆಯಿಂದ ಸಂಹರಿಸುತ್ತಾನೆ.    ಏಳನೆಯ ಮನ್ವಂತರದಲ್ಲಿ ಕಶ್ಯಪ-ದಿತಿಯ ಮಗನಾಗಿ ಹುಟ್ಟಿದ್ದ ಹಿರಣ್ಯಾಕ್ಷನು ಭೂಮಿಯನ್ನು ಅಪಹರಿಸಿ, ನೀರಿನಲ್ಲಿ ಮುಳುಗಿದ್ದಾಗ ಭಗವಂತನು ನೀಲವರಾಹ ರೂಪದಿಂದ ಅವತರಿಸಿ, ಹಿರಣ್ಯಾಕ್ಷನ ಕಿವಿಯ ಬುಡದಲ್ಲಿ ಹಸ್ತದಿಂದಲೇ ಹೊಡೆದು ಕೊಲ್ಲುತ್ತಾನೆ.  ಹೀಗೆ ಭಗವಂತನು ಒಂದು ಬಾರಿ ’ಶ್ವೇತವರಾಹ’ನಾಗಿಯೂ ಮತ್ತೊಂದು ಬಾರಿ ’ನೀಲವರಾಹ’ನಾಗಿಯೂ ಅವತರಿಸುತ್ತಾನೆ.

ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ವರಾಹಾವತಾರವನ್ನು "ಸೂಕರ ರೂಪಕ ದಾನವಶತ್ರೋ ಭೂಮಿವಿಧಾರಕ ಯಜ್ಞವರಾಂಗ" - ರಾಕ್ಷಸ ಸಂಹಾರಿಯೂ, ಭೂಮಿಯನ್ನು ಧರಿಸಿರುವವನೂ, ಬ್ರಹ್ಮಾದಿ ದೇವತೆಗಳನ್ನು ತನ್ನ ಶರೀರದಲ್ಲೇ ಧರಿಸಿರುವ ವರಾಹಾವತಾರಿಯಾದ ಶ್ರೀಮಹಾವಿಷ್ಣುವೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಸಗಿರಿವರಧರಾತಲವಹ ಸುಸೂಕರ ಪರಮ ವಿಬೋಧ ಹೇ ಭವ ಮಮ ಶರಣಮ್ |
ಶುಭತಮ ಕಥಾಶಯ ಪರಮಸದೋದಿತ ಜಗದೇಕ ಕಾರಣ ರಾಮರಮಾರಮಣ || -  ವರಾಹರೂಪಿಯಾಗಿ ಭೂಮಿಯನ್ನುದ್ಧರಿಸಿದ, ಪೂರ್ಣಜ್ಞಾನ ರೂಪಿಯಾದ, ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ, ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ, ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ವರಾಹಾವತಾರವನ್ನು
ನೀಲಾಂಬುದಾಭ ಶುಭ ಶೀಲಾದ್ರಿ ದೇಹಧರ ಖೇಲಾಹೃತೋದಧಿಧುನೀ
ಶೈಲಾದಿಯುಕ್ತ ನಿಖಿಲೇಲಾಕಟಾದ್ಯಸುರ ತೂಲಾಟವೀ ದಹನ ತೇ |
ಕೋಲಾಕೃತೇ ಜಲಧಿಕಾಲಾಚಲಾವಯವ ನೀಲಾಬ್ಜದಂಷ್ಟ್ರ ಧರಣೀ
ಲೀಲಾಸ್ಪದೋರುತಲ ಮೂಲಾಶಿಯೋಗಿವರ ಜಾಲಾಭಿ ವಂದಿತ ನಮಃ || - ನೀಲಮೇಘಶ್ಯಾಮನಾದ, ಸಜ್ಜನರಿಗೆ ಇಷ್ಟಾರ್ಥಪ್ರದನಾದ, ಪರ್ವತ ಸಮಾನ ದೇಹಧಾರಿಯಾದ, ಅಸುರನಿಂದ ಅಪಹರಿಸಲ್ಪಟ್ಟ ಭೂಮಿಯನ್ನು ಉದ್ಧರಿಸಲಿಕ್ಕಾಗಿ ಆದಿದೈತ್ಯ ಹಿರಣ್ಯಾಕ್ಷನನ್ನು ಸಂಹರಿಸಿ, ನೀಲಕಮಲದಂತೆ ಭೂಮಿಯನ್ನು ಎತ್ತಿ ದಾಡೆಯಲ್ಲಿಟ್ಟುಕೊಂಡು ಸಮುದ್ರ ಜಲದಲ್ಲಿ ಕ್ರೀಡಾರ್ಥವಾಗಿ ವಿಹರಿಸಿದ, ಭೂಮಿದೇವಿಯನ್ನು ಮಡಿಲಲ್ಲಿರಿಸಿಕೊಂಡು ರಮಿಸಿದ, ಮಹಾಯೋಗಿಗಳಿಂದ ಸದಾ ಧ್ಯಾನಿಸಲ್ಫಡುತ್ತಿರುವ, ಭೂವರಾಹರೂಪಿಯಾದ ಶ್ರೀ ಮಹಾವಿಷ್ಣುವೇ ನಿನಗೆ ಅನಂತ ನಮಸ್ಕಾರಗಳು ಎಂದು ಸ್ತುತಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ವರಾಹಾವತಾರವನ್ನು
ವಸತಿ ದಶನಶಿಖರೇ ಧರಣೀ ತವ ಲಗ್ನಾ
ಶಶಿನಿ ಕಲಂಕಕತ್ರೇವ ನಿಮಗ್ನಾ
ಕೇಶವ ಧೃತಶೂಕರರೂಪ ಜಯ ಜಗದೀಶ ಹರೇ || - ವಿಸ್ತಾರವಾದ ಧರಣಿಯನ್ನು ನಿನ್ನ ಶಿರೋ ಭಾಗದಲ್ಲಿ ಹೊತ್ತಿರುವ ಸೂಕರ ರೂಪದಲ್ಲಿ ಸ್ಥಿತನಾಗಿರುವ ಕೇಶವನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಜೀವ ವಿಕಸನದ ಸಂಕೇತವಾಗಿ ಮತ್ಸ್ಯರೂಪದಲ್ಲಿಯೂ, ಧ್ಯಾನಿಸಲು ಬೇಕಾದ ಭದ್ರವಾದ ಆಸನ ಹಾಗೂ ವಿಷಯಾಸಕ್ತಿಗಳಿಂದ ರಕ್ಷಿಸಿಕೊಳ್ಳಲು ಗಟ್ಟಿಯಾದ ಹೊರ ಕವಚವನ್ನು ಮನೋನಿಗ್ರಹವನ್ನು ಕೂರ್ಮರೂಪದಲ್ಲಿಯೂ ಅನುಸಂಧಾನ ಮಾಡಿಕೊಂಡ ನಂತರ ಬರುವುದು ವರಾಹಾವತಾರ.  ಸಾಧಕನು ವಿಕಸಿತನಾಗಿ, ದೃಢವಾಗಿ ಕುಳಿತ ನಂತರ ಸಮುದ್ರದ ತಳದಲ್ಲಿರುವಂತೆ ಅಂತರಂಗದಲ್ಲಿರುವ ವಿಷಯಾಸಕ್ತಿಗಳೊಳಗೆ ವರಾಹದಂತೆ ನುಗ್ಗಿ, ಬಗ್ಗಡವನ್ನು ಭಕ್ತಿಯೆಂಬ ಕೋರೆದಾಡಿಯಿಂದ ಬಗೆದು ರಸಾತಳದಲ್ಲಿ ಹುದುಗಿರುವ ಶುದ್ಧಾತ್ಮನನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಬೇಕು.  ಬಗ್ಗಡವನ್ನು ಬಿಟ್ಟು, ವಿಷಯಾಸಕ್ತಿಗಳೆಂಬ ಹಿರಣ್ಯಾಕ್ಷನನ್ನು ಭಕ್ತಿಯೆಂಬ ಕೋರೆದಾಡಿಯಿಂದ ವಧಿಸಿ, ಶುದ್ಧಾತ್ಮನನ್ನು ಪರಿಶುಭ್ರವಾದ ಹೃತ್ಕಮಲದಲ್ಲಿ ನೆಲೆಸುವಂತೆ ಮಾಡಿ ಧ್ಯಾನಿಸಬೇಕು.  ಭಗವಂತನ ದಶಾವತಾರಗಳು ಹಂತ ಹಂತವಾಗಿ ಸಾಧಕನನ್ನು ಒಂದೊಂದೇ ಮೆಟ್ಟಿಲು ಏರುವಂತೆ ಮಾಡುವ ಅತಿ ಸುಂದರವಾದ ಅನುಸಂಧಾನವಾಗಿದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ  ಚರ್ಮದಲ್ಲಿ ವರಾಹರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ವರಾಹರೂಪವೆತ್ತಿದಾಗ ಲಕ್ಷ್ಮೀದೇವಿಯು ಧಾತ್ರಿಯಾಗಿರುತ್ತಾಳೆ ಎಂದಿದ್ದಾರೆ.

ಆದಿ ಹಿರಣ್ಯಾಕ್ಷನನ್ನು ಕೊಂದ ಭಗವಂತನನ್ನು ಭೂದೇವಿಯು ನಾನಾವಿಧವಾಗಿ ಸ್ತುತಿಸುತ್ತಾ, ತನ್ನನ್ನು ಉದ್ಧರಿಸಿದ ಭಗವಂತನ ಸ್ವರೂಪವು ತನಗೆ ತಿಳಿಯದೆಂದು ಪ್ರಾರ್ಥಿಸಿಕೊಳ್ಳಲಾಗಿ, ಭಗವಂತನು ಭೂಮಿದೇವಿಗೆ ನೀಡಿದ ತತ್ವೋಪದೇಶವು ವರಾಹಪುರಾಣವೆಂದು ಪ್ರಸಿದ್ಧವಾಯಿತು.  ಆದಿ ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಮೇಲಕ್ಕೆ ತಂದದ್ದೂ, ಮತ್ತೆ ನೀಲವರಾಹನಾಗಿ ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಮೇಲಕ್ಕೆ ತಂದದ್ದು ಭೂಮಿಯ ಮೇಲೆ ಸಾಧನೆಗೋಸ್ಕರ ಹುಟ್ಟಬೇಕಾಗಿದ್ದ ಜೀವರಾಶಿಯ ಮೇಲಿನ ಅಪಾರ ಕಾರುಣ್ಯದಿಂದಲೇ ಎಂದು ತಿಳಿಯುತ್ತದೆ.

ಶ್ರೀ ಜಗನ್ನಾಥದಾಸರು ತಮ್ಮ "ತತ್ವಸುವ್ವಾಲಿ"ಯಲ್ಲಿ ವರಾಹಾವತಾರವನ್ನು
ಸೋಮಪನ ನುಡಿ ಕೇಳಿ ಹೇಮಾಂಬಕನ ಕೊಂದಿ
ಭೂಮಿಯ ನೆಗಹಿದಿ ದಾಡಿಂದ | ದಾಡಿಂದ ನೆಗಹಿದ
ಸ್ವಾಮಿ ಭೂವರಹ ದಯವಾಗೋ || - ಸೋಮಪನ (ಚತುರ್ಮುಖ ಬ್ರಹ್ಮ) ಪ್ರಾರ್ಥನೆಯನ್ನು ಕೇಳಿ ಹಿರಣ್ಯಾಕ್ಷನೆಂಬ ದೈತ್ಯನನ್ನು ಸಂಹರಿಸಿ ಕೋರೆದಾಡಿಯಿಂದ ಭೂಮಿಯನ್ನು ಮೇಲಕ್ಕೆ ಎತ್ತಿದಂತಹ ಸ್ವಾಮಿ ಜಗತ್ತಿನ ಒಡೆಯನೇ ಭೂವರಹನೇ ಕೃಪೆಮಾಡು ಎಂದು ಪ್ರಾರ್ಥಿಸಿದ್ದಾರೆ.

ಶ್ರೀವಿಜಯದಾಸರು ತಮ್ಮ "ವರಾಹ ಸ್ತೋತ್ರ" ಎಂಬ ಸುಳಾದಿಯಲ್ಲಿ ’ಭೂವರಾಹ ಅವತಾರ ಶೃಂಗಾರ ಗುಣಾಕಾರ’, ’ಧಾರುಣೀಧರ’ ’ಸರ್ವಸಾರಭೋಕ್ತ’ ಎಂದೆಲ್ಲಾ ಸ್ತುತಿಸುತ್ತಾ ’ಸೂಕರ ರೂಪವ ತಾಳಿ ಕೋರಿದಾಡಿಲಿಂದ, ಭೀಕರ ಶಬ್ದದಿ ದಶದಿಶೆಗಳೆಲ್ಲ ಬೀರುತ್ತ’...  ಎಂದು ಭೀಕರರೂಪವನ್ನು ವರ್ಣಿಸಿದ್ದಾರೆ.  ’ಇಳೆಯಾ ಬಗೆದು’.. ಎಂದು ಮುಂದುವರೆಸುತ್ತಾ ವರಾಹಾವತಾರದ ಮೂಲ ಉದ್ದೇಶವನ್ನು ಸುಂದರವಾಗಿ ಚಿತ್ರಿಸಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ


ಭಾರತದಲ್ಲಿರುವ ವರಾಹಸ್ವಾಮಿ ದೇವಸ್ಥಾನದ ಕೊಂಡಿಗಳು..
http://gotirupati.com/sri-bhoo-varahaswamy/

https://www.google.co.in/search?q=varahaswamy&safe=active&tbm=isch&tbo=u&source=univ&sa=X&ei=Sds3VbSTCNSdugTa1oH4Cw&ved=0CC4Q7Ak&biw=1105&bih=703#imgrc=hHcaFQzLMW-ixM%253A%3BqwzAaaaMZ2OriM%3Bhttp%253A%252F%252Fwww.tourismguideindia.com%252Fimages%252FKarnataka%252FMysore%252FVarahaswamy%252520Temple.jpg%3Bhttp%253A%252F%252Fwww.tourismguideindia.com%252Fmysore-gallery.htm%3B600%3B398

Saturday, March 28, 2015

ಕರುಣಾ ಸಂಧಿ - ೩೦ ನೇ ಪದ್ಯ (ಕೂರ್ಮಾವತಾರ)


ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು || ೩೦ ||


ಕೂರ್ಮ - ಕೂರ್ಮಾವತಾರ : ಮತ್ಸ್ಯಾವತಾರದ ನಂತರದ್ದು ಕೂರ್ಮಾವತಾರವಾಗಿದೆ.  ಹಿಂದೆ ಒಮ್ಮೆ ರೈವತ ಮನ್ವಂತರದಲ್ಲಿ ಕೂರ್ಮಾವತಾರ-ವಾಗಿರುತ್ತದೆ.  ಮುಂದೆ ವೈವಸ್ವತ ಮನ್ವಂತರದಲ್ಲಿಯೂ ಕೂರ್ಮಾವತಾರವಾಗುತ್ತದೆ.  ಚಾಕ್ಷುಶ ಮನ್ವಂತರದಲ್ಲಿ ಮಂದದ್ರುತ ಅಥವಾ ಮಂದ್ರದ್ಯುಮ್ನನೆಂಬುವನು ಇಂದ್ರನಾಗಿರುತ್ತಾನೆ.  ವೈರಾಜ ಋಷಿಯಿಂದ ಸಂಭೂತಿಯೆಂಬ ಪತ್ನಿಯಲ್ಲಿ ಭಗವಂತನು "ಅಜಿತ" ನಾಮಕನಾಗಿ ಅವತರಿಸಿ, ಸಮುದ್ರಮಥನ ಮಾಡಿ, ಕೂರ್ಮರೂಪದಿಂದ ಮಂದರ ಪರ್ವತವನ್ನು ಧರಿಸುತ್ತಾನೆ.  ಕೂರ್ಮಾವತಾರವು ಸಮುದ್ರಮಥನದ ಸಮಯದಲ್ಲಾದ ಅವತಾರವಾಗಿದೆ ಮತ್ತು ಇದಕ್ಕೆ ಹಿನ್ನೆಲೆಯಾಗಿ ಒಂದು ಕಥೆ / ಕಾರಣವನ್ನೂ ಕಾಣಬಹುದಾಗಿದೆ.  ದೇವತೆಗಳಿಗೂ, ದೈತ್ಯರಿಗೂ ನಡೆಯುತ್ತಿದ್ದ ಯುದ್ಧದಲ್ಲಿ ದೇವತೆಗಳು ಕಂಗೆಡುತ್ತಾರೆ.  ದೂರ್ವಾಸರಿಂದ ದತ್ತವಾದ ಹರಿಯು ಧರಿಸಿದ್ದ ಪುಷ್ಪಮಾಲೆಯನ್ನು ಇಂದ್ರನು ತಿರಸ್ಕರಿಸಿ  ಆನೆಯ ಕುಂಭಸ್ಠಳದಲ್ಲಿಡುತ್ತಾನೆ.  ಐರಾವತವು ಮಾಲೆಯನ್ನು ನೆಲದಲ್ಲಿ ಹೊಸಕಿ ಬಿಡುತ್ತದೆ.  ಇದರಿಂದ ಕೆರಳಿದ ದೂರ್ವಾಸರು ಲೋಕಪಾಲಕರೊಡನೆ ಐಶ್ವರ್ಯ ಭ್ರಷ್ಟನಾಗೆಂದು ಶಪಿಸುತ್ತಾರೆ.  ಮೂರು ಲೋಕಗಳಲ್ಲೂ ಐಶ್ವರ್ಯ ಭ್ರಷ್ಟವಾಗಿ, ಯಾಗಾದಿ ಕಾರ್ಯಗಳೆಲ್ಲಾ ಸ್ಥಗಿತಗೊಳ್ಳುತ್ತವೆ.  ಲಕ್ಷ್ಮೀದೇವಿಯು ಮೂರು ಲೋಕಗಳಿಂದಲೂ ಅಂತರ್ಧಾನವಾಗಿ ಬಿಡುತ್ತಾಳೆ.  ದೇವತೆಗಳು ಬ್ರಹ್ಮದೇವರನ್ನು ಪ್ರಾರ್ಥಿಸಿದಾಗ, ಬ್ರಹ್ಮದೇವರು ತಾವೆಲ್ಲರೂ ಕೂಡಿ ಭಗವಂತನಿಗೇ ವಿಜ್ಞಾಪಿಸಿಕೊಳ್ಳಬೇಕೆನ್ನುತ್ತಾರೆ.  ದೇವತೆಗಳಿಗೆ ಭಗವಂತನು ಮಂಗಳಕರವಾದ ಸ್ಥಿತಿ ಬರುವವರೆಗೆ ಬಲಿ ಮೊದಲಾದ ದೈತ್ಯರೊಡನೆ ಸಂಧಿಯನ್ನು ಮಾಡಿಕೊಂಡು ಅಮೃತ ಪಡೆಯಲು ಪ್ರಯತ್ನಿಸಬೇಕೆನ್ನುತ್ತಾನೆ.  ಮಂದರ ಪರ್ವತವನ್ನು ಕಡಗೋಲನ್ನಾಗಿಯೂ, ವಾಸುಕಿಯನ್ನು ಹಗ್ಗವನ್ನಾಗಿಯೂ ಮಾಡಿಕೊಂಡು ತನ್ನ ಸಹಾಯದಿಂದ ಕ್ಷೀರ ಸಮುದ್ರವನ್ನು ಮಥನವನ್ನು ಮಾಡಬೇಕೆಂದು ತಿಳಿಸುತ್ತಾನೆ.  ಸಮುದ್ರಮಥನ ನಡೆದು, ಅಮೃತವು ದೇವತೆಗಳ ಕೈಸೇರುವವರೆಗೂ ದೈತ್ಯರನ್ನು ಅನುಮೋದಿಸಿಕೊಂಡಿರಬೇಕೆಂದು ಕೂಡ ತಿಳಿಸುತ್ತಾನೆ.  ದೇವತೆಗಳು ಬಲಿಗೆ ವಿಷಯ ತಿಳಿಸಿದಾಗ, ವಿಧೇಯರಾಗಿ ಬಂದ ದೇವತೆಗಳನ್ನು ದೈತ್ಯರಿಂದ ರಕ್ಷಿಸಿ, ಸಮುದ್ರಮಥನಕ್ಕೆ ಸಮ್ಮತಿಸುತ್ತಾನೆ.  ಎಲ್ಲರೂ ಸೇರಿ ಮಂದರಪರ್ವತವನ್ನು ಕಿತ್ತು, ಸ್ವಲ್ಪ ದೂರ ಸಾಗಿಸುವುದರೊಳಗೆ ಭಾರವನ್ನು ತಾಳಲಾರದೆ ಕೆಳಗೆತ್ತಿಹಾಕಿದಾಗ, ದೇವತೆಗಳು ಪರ್ವತದ ಕೆಳಗೆ ಸಿಕ್ಕಿಕೊಂಡು ಪುಡಿಯಾಗುತ್ತಾರೆ.  ಶ್ರೀಹರಿಯು ಪರಮಕರುಣೆಯಿಂದ ಗರುಡಾರೂಢನಾಗಿ ಬಂದು ಗಿರಿಯನ್ನು ಎತ್ತಿಕೊಂಡು ಸುರಾಸುರರೊಡನೆ ಕ್ಷೀರಸಮುದ್ರದ ಮಧ್ಯದಲ್ಲಿ ಇಳಿಸುತ್ತಾನೆ.  ವಾಸುಕಿಗೆ  ಅಮೃತದಲ್ಲಿ ಪಾಲು ಕೊಡುವುದಾಗಿ ಒಪ್ಪಿಸಿ, ಹಗ್ಗವಾಗಿಸಿ, ಮಂದರ ಪರ್ವತಕ್ಕೆ ಸುತ್ತಿ ಕ್ಷೀರಸಮುದ್ರವನ್ನು ಕಡೆಯಲು ಪ್ರಾರಂಭಿಸುತ್ತಾರೆ.  ಸ್ವಲ್ಪ ಹೊತ್ತಿನಲ್ಲೇ ಗಿರಿಯು ನೀರಿನಲ್ಲಿ ಮುಳುಗಿ ಬಿಡುತ್ತದೆ.  ಪರಮಾತ್ಮನು ನೀರಿನಲ್ಲಿ ಮುಳುಗಿ, ಕೂರ್ಮಾವತಾರವನ್ನು ಧರಿಸಿ, ಗಿರಿಯನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು  ಮೇಲೆ ಬರುತ್ತಾನೆ.  ಮಥನ ಕಾರ್ಯವು ನಡೆಯುತ್ತದೆ.  ಗಿರಿಯು ಮೇಲೆ, ಕೆಳಗೆ ಹೋಗುತ್ತಾ ಅಲ್ಲಾಡಿದಾಗ, ಭಗವಂತನು ಅಜಿತರೂಪಕನಾಗಿ ಸಹಸ್ರಾರು ಬಾಹುಗಳಿಂದ ಪರ್ವತವನ್ನು ಆಕ್ರಮಿಸಿಕೊಂಡು, ಮಥನ ಕಾರ್ಯವನ್ನು ನಡೆಸಿಕೊಡುತ್ತಾನೆ.  ಸಮುದ್ರಮಥನ ನಡೆಯುವ ಸಮಯದಲ್ಲಿ ಮೂರುಲೋಕದಿಂದ ಮರೆಯಾಗಿದ್ದ ಲಕ್ಷ್ಮೀದೇವಿಯ ಆವಿರ್ಭಾವವಾಗುತ್ತದೆ. 


ಭಾಗವತ ದ್ವಿತೀಯಸ್ಕಂಧ, ೭ನೆಯ ಅಧ್ಯಾಯದಲ್ಲಿ ಕೂರ್ಮಾವತಾರದ ವರ್ಣನೆಯನ್ನು
ಕ್ಷೀರೋದಧಾವಮರದಾನವಯೂಥಪಾನಾ - | ಮುನ್ಮಥ್ನತಾಮಮೃತಲಬ್ಧಯ ಆದಿದೇವಃ |
ಪೃಷ್ಠೇನ ಕಚ್ಛಪವಪುರ್ವಿದಧಾರ ಗೋತ್ರಂ | ನಿದ್ರಾಕ್ಷಣೋSದ್ರಿಪರಿವರ್ತಕಷಾಣಕಣ್ದೂಃ || - ದೇವತೆಗಳೂ, ದಾನವರೂ ಸೇರಿಕೊಂಡು ಅಮೃತವನ್ನು ಪಡೆಯಲೋಸುಗ ಕ್ಷೀರಸಮುದ್ರವನ್ನು ಕಡೆಯುತ್ತಿದ್ದಾಗ  - ಈ ಆದಿದೇವನು ಆಮೆಯ ದೇಹವನ್ನು ತಾಳಿ ತನ್ನ ಬೆನ್ನಿನ ಮೇಲೆ ಮಂದರ ಗಿರಿಯನ್ನು ಹೊತ್ತುಕೊಂಡನು.  ಆಗ ಸುತ್ತುತ್ತಿದ್ದ ಪರ್ವತದ ಉಜ್ಜುವಿಕೆಯಿಂದಾಗಿ ಮೈನವೆಯು ಕಡಿಮೆಯಾದಂತಾಗಿ ಸ್ವಾಮಿಗೆ ಕ್ಷಣಕಾಲ ಸುಖನಿದ್ರೆಯನ್ನು ಮಾಡಲು ಸಾಧ್ಯವಾಯಿತು ಎಂದು ವರ್ಣಿಸಿದ್ದಾರೆ.

ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ಕೂರ್ಮಾವತಾರವನ್ನು  "ಕೂರ್ಮ ಸ್ವರೂಪಕ ಮಂದರಧಾರಿನ್ ಲೋಕವಿಧಾರಕ ದೇವವರೇಣ್ಯ - ಮಂದರ ಪರ್ವತವನ್ನು ಧರಿಸಿರುವ, ಲೋಕ ಸಂರಕ್ಷಕನಾದ, ದೇವ ಶ್ರೇಷ್ಠನಾದ, ಕೂರ್ಮರೂಪಿಯೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಸುರದಿತಿಜಸುಬಲವಿಲುಲಿತ ಮಂದರಧರ ವರಕೂರ್ಮ ಹೇ ಭವಮಮ ಶರಣಮ್ |
ಶುಭತಮ ಕಥಾಶಯ ಪರಮಸದೋದಿತ ಜಗದೇಕ ಕಾರಣ ರಾಮರಮಾರಮಣ || - ಸುರಾಸುರರು ಅಮೃತವನ್ನು ಪಡೆಯುವುದಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಿದಾಗ ಮುಳುಗುತ್ತಿದ್ದ ಮಂದರ ಪರ್ವತವನ್ನು ಬೆನ್ನಲ್ಲಿ ಧರಿಸಿದವನಾದ, ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನಾದ, ಪುರುಷೋತ್ತಮನಾದ, ಸದಾ ಪ್ರಕಾಶಮಾನನಾದ, ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನಾದ, ಆತ್ಮಾರಾಮನಾದ ಲಕ್ಷ್ಮೀಪತಿಯೇ ನಿನಗೆ ಶರಣು ಹೊಂದುತ್ತೇನೆ ಎಂದು ಪ್ರಾರ್ಥಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ಕೂರ್ಮಾವತಾರವನ್ನು
ಕೂರ್ಮಾಕೃತೇ ತ್ವವತು ನರ್ಮಾತ್ಮ ಪೃಷ್ಠಧೃತ ಭರ್ಮಾತ್ಮ ಮಂದರಗಿರೇ
ಧರ್ಮಾವಲಂಬನ ಸುಧರ್ಮಾಸದಾಂ ಕಲಿತ ಶರ್ಮಾ ಸುಧಾವಿತರಣಾತ್ |
ದುರ್ಮಾನರಾಹುಮುಖ ದುರ್ಮಾಯಿ ದಾನವ ಸುಮರ್ಮಾಭಿಭೇದನ ಪಟೋ
ಘರ್ಮಾರ್ಕಕಾಂತಿವರವರ್ಮಾ ಭವಾನ್ ಭುವನ ನಿರ್ಮಾಣಧೂತವಿಕೃತಿಃ || - ಸಮುದ್ರ ಮಂಥನ ಕಾಲದಲ್ಲಿ ದೇವತೆಗಳಿಂದ ಪ್ರಾರ್ಥಿತನಾಗಿ, ಕೂರ್ಮರೂಪವನ್ನು ಧರಿಸಿ ಮಂದರ ಪರ್ವತವನ್ನು ಧರಿಸಿ, ದೇವತೆಗಳಿಗೆ ಅಮೃತಪ್ರಾಶನ ಮಾಡಿಸಿದ, ರಾಹು ಮೊದಲಾದ ದೈತ್ಯರ ಸಂಹಾರ ಮಾಡಿದ, ವಿಶ್ವವನ್ನು ಸೃಷ್ಟಿಸಿ, ಅದರ ಒಳಗೂ ಹೊರಗೂ ವ್ಯಾಪಿಸಿಕೊಂಡು, ನಿರ್ವಿಕಾರನಾಗಿರುವ, ಅತ್ಯಂತ ಸುಂದರನಾದ, ಕೂರ್ಮರೂಪಿಯಾದ ಭಗವಂತನು ನಮ್ಮನ್ನು ಎಲ್ಲಾ ಆಪತ್ತುಗಳಿಂದಲೂ ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ಕೂರ್ಮಾವತಾರವನ್ನು
ಕ್ಷಿತಿರತಿವಿಪುಲತರೇ ತವ ತಿಷ್ಠತಿ ಪೃಷ್ಠೇ
ಧರಣಿಧರಣಕಿಣಚಕ್ರಗರಿಷ್ಠೇ
ಕೇಶವ ಧೃತ ಕಚ್ಛಪರೂಪ ಜಯ ಜಗದೀಶ ಹರೇ || - ನಿನ್ನ ಬೆನ್ನಿನಲ್ಲಿ ವಿಶಾಲವಾದ ಭೂಮಿಯು ನಿಂತಿದೆ.  ಗರಿಷ್ಠವಾದ ಚಕ್ರಾಕಾರದಲ್ಲಿರುವ ಧರಣಿಯನ್ನು ಧರಿಸಿರುವ, ಕಚ್ಛಪ ರೂಪ ಧರಿಸಿರುವ ಕೇಶವನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಭಗವದ್ಗೀತೆಯ ಎರಡನೆಯ ಅಧ್ಯಾಯದ ೫೮ನೆಯ ಶ್ಲೋಕದಲ್ಲಿ ಭಗವಂತನು
ಯದಾ ಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ |
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಜಾ ಪ್ರತಿಷ್ಠಿತಾ || -  ಹೇಗೆ ಆಮೆಯು ತನ್ನ ಎಲ್ಲಾ ಅಂಗಗಳನ್ನೂ, ಎಲ್ಲಾ ಕಡೆಗಳಿಂದಲೂ ಒಳಗೆ ಎಳೆದುಕೊಂಡು, ಸ್ಥಿರವಾಗಿ ಇರುತ್ತದೆಯೋ, ಹಾಗೆ ಸಾಧಕನು ಕೂಡ ವಿಷಯಾಸಕ್ತಿಗಳೆಡೆಗೆ ಆಕರ್ಷಿತವಾಗುವ ಇಂದ್ರಿಯಗಳನ್ನು, ಜಾಗೃತ, ಸ್ವಪ್ನಾವಸ್ಥೆಯೆಂಬ ಎರಡೂ ಅವಸ್ಥೆಗಳಲ್ಲಿಯೂ ನಿಯಂತ್ರಿಸಬೇಕು ಎಂದಿದ್ದಾನೆ. 

ಮತ್ಸ್ಯಾವತಾರ ಜೀವ ವಿಕಸನದ ಸಂಕೇತವಾಗಿದೆ.  ಪ್ರಳಯ ಜಲದಿಂದ ಆವೃತವಾಗಿದ್ದ ಬ್ರಹ್ಮಾಂಡದಲ್ಲಿ ಜೀವ ವಿಕಸನದ ಸಂಕೇತವಾಗಿ ಜಲಚರಗಳ ಸೃಷ್ಟಿಯಾಗಿತ್ತು.  ಅದರ ಮುಂದಿನ ಹಂತದ ಪ್ರತೀಕವಾಗಿ ಕೂರ್ಮ ಜಲದಲ್ಲಿಯೂ, ನೆಲದಲ್ಲಿಯೂ ಬದುಕಬಲ್ಲ ಜೀವವಾಗಿ ಪ್ರಕಟಗೊಂಡಿದೆ.  ಕೂರ್ಮಾವತಾರವನ್ನು ಮಾನವನ ಜೀವನಕ್ಕೆ ಹೋಲಿಸಿಕೊಂಡಾಗ ಆಧ್ಯಾತ್ಮ ಹಾದಿಯಲ್ಲಿ ನಡೆಯ ಬಯಸುವ ಪ್ರತಿಯೊಬ್ಬ ಸಾಧಕನಿಗೂ ಕೂರ್ಮವು ಅತ್ಯಂತ ಮುಖ್ಯವಾದ ಹಾಗೂ ಮೂಲವಾದ ಸಂದೇಶವನ್ನು ತೋರುತ್ತದೆ.  ಆಮೆಯು ನೀರಿನಲ್ಲಿಯೂ, ನೆಲದಲ್ಲಿಯೂ ತನ್ನನ್ನು ತಾನು ಸುಲಭವಾಗಿ ಹೊಂದಿಸಿಕೊಂಡು ಬದುಕಬಲ್ಲ ಪ್ರಾಣಿಯಾಗಿದೆ.  ಮಾನವನೂ ಕೂಡ ತನ್ನನ್ನು ತಾನು ನೀರಿನಲ್ಲಾಗಲೀ, ನೆಲದಲ್ಲಾಗಲೀ ಹೊಂದಿಸಿಕೊಂಡು ಬದುಕುವ ಛಲವನ್ನು ಹೊಂದಬೇಕೆಂಬ ಸಂದೇಶ ಕೊಡುತ್ತದೆ.  ಕೂರ್ಮದ ಬೆನ್ನು ತುಂಬಾ ಕಠಿಣವಾದ ಕವಚವಾಗಿದೆ.  ಯಾವುದೇ ರೀತಿಯ ಆಪತ್ತು ಬಂದರೂ ಆಮೆಗೆ ರಕ್ಷಣೆಯಾಗಿ ಅದರ ಹೊರ ಕವಚ ಕೆಲಸಮಾಡುತ್ತದೆ.  ಮೇಲು ಹೊದಿಕೆಯಾಗಿ ಕವಚ ಅಷ್ಟು ಗಟ್ಟಿಯಾಗಿದ್ದರೂ ಒಳಗಿರುವ ಆಮೆಯ ಅವಯವಗಳೂ, ಮೈಯೂ ಮೃದುವಾಗಿಯೇ ಇರುತ್ತದೆ.  ಸಾಧಕನಾದವನು ತನ್ನನ್ನು ತಾನು ಋಣಾತ್ಮಕ ಪ್ರಪಂಚದಿಂದ ರಕ್ಷಿಸಿಕೊಳ್ಳಲು ತನ್ನ ಹೊರಮೈಯನ್ನು ಹೀಗೆ ಗಟ್ಟಿಯಾಗಿಸಿಕೊಳ್ಳಬೇಕು.  ಒಳಗಿರುವ ಆತ್ಮ ತುಂಬಾ ಮೃದುವಾದ, ಭಾವನೆಗಳ ಗುಚ್ಛವಾಗಿರುತ್ತದೆ.  ಅದನ್ನು ಘಾಸಿ ಮಾಡಲು ನುಗ್ಗಿ ಬರುವ ಋಣಾತ್ಮಕ ಭಾವಗಳು ಗಟ್ಟಿಯಾದ ಹೊರಮೈಗೆ ಅಪ್ಪಳಿಸಿ ಹಾಗೇ ತಿರುಗಿಹೋಗುವಂತೆ ನಮ್ಮ ಮೃದುವಾದ ಆತ್ಮಕ್ಕೆ ರಕ್ಷಣಾಕವಚವನ್ನು ಹಾಕಿಕೊಳ್ಳಬೇಕೆಂಬುದನ್ನು ಕೂರ್ಮಾವತಾರ ಸೂಚಿಸುತ್ತದೆ.  ಅಪಾಯದ ಮುನ್ಸೂಚನೆ ಸಿಕ್ಕ ಕೂಡಲೆ ಕೂರ್ಮವು ತನ್ನ ಕಾಲುಗಳನ್ನೂ, ತಲೆಯನ್ನೂ ಗಟ್ಟಿಯಾದ ಕವಚದ ಒಳಗೆ ಎಳೆದುಕೊಂಡು ಬಿಡುತ್ತದೆ  ಸಾಧಕನೂ ಕೂಡ ತನ್ನನ್ನು ಬಂದು ಮುತ್ತುವ ವಿಷಯಾಸಕ್ತಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು, ತನ್ನ ಆಂತರ್ಯವನ್ನು ಒಳಮುಖವಾಗಿಸಿಕೊಳ್ಳಬೇಕೆಂಬುದನ್ನು ಸೂಚಿಸುತ್ತದೆ.   ಕೂರ್ಮವು ಬಲು ನಿಧಾನವಾಗಿ ಚಲಿಸುತ್ತದೆ ಆದರೆ ಅದು ತನ್ನ ಗುರಿಯನ್ನೇ ಗಮನವಾಗಿಟ್ಟುಕೊಂಡು ಚಲಿಸುತ್ತದೆ.  ನಿಧಾನವಾದರೂ ಕೂಡ ಅದು ತನ್ನ ಗುರಿಯನ್ನು ತಲುಪುತ್ತದೆ.  ಕೂರ್ಮಾವತಾರವು ಜಾಣ್ಮೆ ಮತ್ತು ತಾಳ್ಮೆಯ ಸಂಕೇತವಾಗಿದೆಯೆಂಬುದನ್ನು ದಾಸರಾಯರು ಕರುಣಾಸಂಧಿಯ ೨೮ನೆಯ ಪದ್ಯದಲ್ಲಿ "ಬೆಟ್ಟ ಬೆನ್ನಲಿ ಹೊರಿಸಿದವರನು ಸಿಟ್ಟು ಮಾಡಿದನೇನೋ ಹರಿ" ಎಂದು ಕೊಂಡಾಡುವುದರ ಮೂಲಕ ತಿಳಿಸಿದ್ದಾರೆ.  ಕೂರ್ಮದ ಚಲನೆ ಏಕಧ್ಯಾನದಿಂದ ಕೂಡಿರುತ್ತದೆ ಮತ್ತು ಮಾನವನು ಕೂಡ ಇದನ್ನೇ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬುದನ್ನು ಸೂಚಿಸುತ್ತದೆ. ಸ್ಥಿರವಾದ ಹೆಜ್ಜೆಗಳನ್ನು ಹಾಕುತ್ತಾ, ಎಲ್ಲಿಯೂ ನಿಲ್ಲದೆ ನಡೆಯುವ ಅಭ್ಯಾಸವನ್ನು ಮಾಡಿಕೊಂಡರೆ ನಿಶ್ಚಯವಾಗಿ ಗುರಿಯನ್ನು ಮುಟ್ಟಬಹುದೆಂಬುದನ್ನು ಭಗವಂತನು ಮಂದರ ಪರ್ವತವನ್ನು ಧಾರಣೆ ಮಾಡುವ ಮೂಲಕ ಕೂರ್ಮವು ಮೂಲವಾಗಿ ಆಧಾರವು ಎಂಬುದನ್ನು ತೋರಿಸಿಕೊಡುತ್ತಾನೆ.  ನಮ್ಮ ದೇಹದಲ್ಲಿನ ಷಟ್ಚಕ್ರಗಳಲ್ಲಿ "ಮೂಲಾಧಾರ" ಚಕ್ರವು ಅತ್ಯಂತ ಮುಖ್ಯವಾದ ಚಕ್ರವಾಗಿದೆ.  ಮೂಲಾಧಾರ ಸ್ಥಾನದಲ್ಲಿ ಕುಂಡಲಿನಿ ಸರ್ಪವು ಮೂರು ಸುತ್ತು ಸುತ್ತಿಕೊಂಡು ಮಲಗಿದೆಯೆಂಬ ನಂಬಿಕೆಯಿದೆ.  ಆಧ್ಯಾತ್ಮ ಸಾಧನೆಯಲ್ಲಿ ನಮ್ಮೊಳಗಿನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುವುದೆಂದರೆ ಮೂಲಾಧಾರ ಚಕ್ರವನ್ನು ಉದ್ದೀಪನಗೊಳಿಸುವುದೆಂದು ಅರ್ಥವಾಗುತ್ತದೆ.  ಮಂದರ ಪರ್ವತವು ಸಮುದ್ರ ಮಥನದಲ್ಲಿ ಸ್ಥಿರವಾಗಿ ನಿಲ್ಲುವಂತೆ ಮಾಡಲು ಭಗವಂತ ಕೂರ್ಮಾವತಾರವೆತ್ತಿದ ಹಾಗೆ ನಮ್ಮೊಳಗಿನ ಪ್ರಾಣ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಲು ಮೂಲಾಧಾರ ಚಕ್ರವೇ ಮೂಲಸ್ಥಾನವಾಗಿದೆ.  ಕೂರ್ಮಾವತಾರವನ್ನು ಮೂಲಾಧಾರ ಚಕ್ರಕ್ಕೆ ಹೋಲಿಸಬಹುದಾಗಿದೆ.

ಆದಿಕೂರ್ಮವೆಂಬ ಮತ್ತೊಂದು ರೂಪದಲ್ಲಿ ಭಗವಂತನು ಬ್ರಹ್ಮಾಂಡವನ್ನೇ ಧಾರಣೆ ಮಾಡಿದವನಾಗಿರುವನೆಂಬ ಉಲ್ಲೇಖವಿದೆ.  ವಿಷ್ಣು ಸಹಸ್ರನಾಮದಲ್ಲಿ "ಧಾತಾ ಧಾತುರುತ್ತಮಃ" - ಇಡೀ ಜಗತ್ತನ್ನು ಧಾರಣೆ ಮಾಡಿರುವ, ಪೋಷಣೆ ಮಾಡುವ, ಎಲ್ಲರಿಗಿಂತಲೂ ಉತ್ತಮನಾದ, ವೇದಗಳನ್ನೂ, ಕಾಲವನ್ನೂ, ಲೋಕಗಳನ್ನೂ ಧರಿಸಿರುವವನಾದ, ಸರ್ವಾಧಾರನಾದ ಭಗವಂತನು ಧಾತುರುತ್ತಮನು ಎಂದು ಸ್ತುತಿಸಲಾಗಿದೆ.  ಸೃಷ್ಟಿಯ ಆದಿಯಿಂದ ಪ್ರಳಯದಲ್ಲಿ ಅಂತ್ಯವಾಗುವವರೆಗೆ ಬ್ರಹ್ಮಾಂಡವನ್ನು ಧಾರಣೆ ಮಾಡಿರುವವನು ಆದಿಕೂರ್ಮ ರೂಪಿ ಭಗವಂತನಾಗಿದ್ದಾನೆ.  ಆಧ್ಯಾತ್ಮದ ಹಾದಿಯಲ್ಲಿ ನಡೆಯ ಬಯಸುವ ಸಾಧಕನಿಗೆ ಧ್ಯಾನಕ್ಕೆ ಕೂಡಲು ಸುಸ್ಥಿರವಾದ, ಭದ್ರವಾದ ಆಸನವು ಅವಶ್ಯವಾಗಿದೆ.  ಆತ್ಮವನ್ನು ಅಂತರ್ಮುಖವಾಗಿಸಿಕೊಳ್ಳಲು ಧ್ಯಾನಕ್ಕೆ ಕುಳಿತುಕೊಳ್ಳುವ ಆಸನವೂ ಕೂಡ ತುಂಬಾ ಮುಖ್ಯವಾಗುತ್ತದೆ.  ಅಮೃತಕ್ಕಾಗಿ ಮಂದರ ಪರ್ವತ ಧರಿಸಿದ ಭಗವಂತನು ಸಾಧಕರಿಗೂ ಮೂಲಾಧಾರವಾಗಿರುವನು.  ಪೀಠದಲ್ಲಿ ಕುಳಿತ ಭಗವಂತನನ್ನು ಪೂಜಿಸುವುದಕ್ಕೂ ಮೊದಲು ಶ್ರೀಹರಿಯು ಕುಳಿತ ಆಸನವನ್ನು ಪೂಜಿಸಬೇಕು.  ಹೀಗೆ ಮಾಡುವಾಗ ಬ್ರಹ್ಮಾಂಡ ಧಾರಿಯಾದ ಕೂರ್ಮರೂಪಿ ಭಗವಂತನನ್ನು ಧ್ಯಾನಿಸುತ್ತಾ ಅನುಸಂಧಾನ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ . 

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೧೮ನೆಯ ಪದ್ಯದಲ್ಲಿ "ಮಧುವಿರೋಧಿಯು ಲೋಚನದಿ" ಎಂದಿದ್ದಾರೆ.  ಕಣ್ಣುಗಳಲ್ಲಿ ನೆಲೆಸಿರುವ ದಿಗ್ದೇವತೆಗಳಾದ ಸೂರ್ಯ ಚಂದ್ರರಿಗೆ ಮಧುಸೂದನ ಪರಮಾತ್ಮನು ಅಭಿಮಾನಿ ದೇವತೆಯಾಗಿದ್ದಾನೆ.  ಮಧುಸೂದನನೆಂದರೆ ಮಧುವಿನಂತೆ ಮೇಲ್ನೋಟಕ್ಕೆ ರಮಣೀಯವಾಗಿ ತೋರುವ ವಿಷಯ ಸುಖ ಅಜ್ಞಾನ ಪರಿಹಾರಕ ರೂಪ, ರೋಗಭಯ, ವಿರೋಧಿಗಳನ್ನು ದೂರ ಮಾಡುವವನು ಎಂಬರ್ಥವಾಗುತ್ತದೆ.  ಮುಂದುವರೆಯುತ್ತಾ ೩೪ನೆಯ ಪದ್ಯದಲ್ಲಿ ಕೂಡ ಕಣ್ಣುಗಳಲ್ಲಿ ಕೂರ್ಮರೂಪಿ ಭಗವಂತನನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ಕೂರ್ಮಾವತಾರವೆತ್ತಿದಾಗ ಲಕ್ಷ್ಮೀದೇವಿಯು ವೇದವತಿಯಾಗಿರುತ್ತಾಳೆ ಎಂದಿದ್ದಾರೆ.

ಕೂರ್ಮಾವತಾರಿ ಭಗವಂತನ ಪೂಜೆ ಹೆಚ್ಚು ಪ್ರಚಲಿತದಲ್ಲಿಲ್ಲ ಆದರೆ ಕೂರ್ಮಶಾಲಗ್ರಾಮಕ್ಕೆ ಮಾತ್ರ ವಿಶೇಷ ಪೂಜೆಯು ಮಾಡಲ್ಪಡುತ್ತದೆ.  ಕೂರ್ಮ ಶಾಲಗ್ರಾಮಕ್ಕೆ ವಿಶೇಷ ಮಹತ್ವವಿದೆ.  ಇದು ತುಂಬಾ ಅಪರೂಪದ ಶಾಲಗ್ರಾಮವಾಗಿರುತ್ತದೆ.  ಕ್ಷೀರಾಭಿಷೇಕ ಮಾಡುವುದರಿಂದ ಅಭೀಷ್ಟಗಳು ನೆರವೇರುತ್ತದೆಂಬ ನಂಬಿಕೆ ಇದೆ.  ಕೂರ್ಮ ಶಾಲಗ್ರಾಮಕ್ಕೆ ಕ್ಷೀರಾಭಿಷೇಕ ಮಾಡಿ, ಕ್ಷೀರಪಾನ ಮಾಡುವುದರಿಂದ ದೈಹಿಕವಾದ ಅನೇಕ ರೋಗ ರುಜಿನಗಳು ವಾಸಿಯಾಗುವುದೆಂಬ ನಂಬಿಕೆ ಕೂಡ ಇದೆ.


ಕೂರ್ಮರೂಪಿಯಾದ ಶ್ರೀಹರಿಯು ಇಂದ್ರಾದಿದೇವತೆಗಳಿಗೆ ಮತ್ತು ನಾರದಾದಿ ಮಹರ್ಷಿಗಳಿಗೆ  ಮಾಡಿದ ತತ್ವೋಪದೇಶವೇ "ಕೂರ್ಮ ಮಹಾಪುರಾಣ"ವಾಯಿತೆಂಬ ಮಾತು  ಕೂರ್ಮಮಹಾಪುರಾಣದಲ್ಲಿಯೇ ಉಲ್ಲೇಖಿತವಾಗಿದೆ.
 

ಶ್ರೀ ಜಗನ್ನಾಥದಾಸರು ತಮ್ಮ "ತತ್ವಸುವ್ವಾಲಿ"ಯಲ್ಲಿ ಕೂರ್ಮಾವತಾರವನ್ನು
ಮಂದರಾದ್ರಿಯ ಧರಿಸಿ ಸಿಂಧುಮಥನವ ಮಾಡಿ
ವೃಂದಾರಕರಿಗೆ ಅಮೃತವ | ಅಮೃತವನುಣಿಸಿದ
ಇಂದಿರಾರಾಧ್ಯ ದಯವಾಗೋ || - ದೇವದಾನವರು ಮಂದರಾದ್ರಿಯನ್ನು ಬಳಸಿ ಸಮುದ್ರ ಮಥನವನ್ನು ಮಾಡುವಾಗ ಮಂದರ ಪರ್ವತವನ್ನು ಕೂರ್ಮರೂಪದಿಂದ ಧರಿಸಿ, ಸಿಂಧುವಿನ ಮಥನವನ್ನು ಮಾಡಿ, ವೃಂದಾರಕರಿಗೆ (ದೇವತೆಗಳಿಗೆ)  ಉಣಿಸಿದ ಇಂದಿರಾರಾಧ್ಯನಾದ ನಾರಾಯಣನೇ ದಯವಾಗೋ ಎಂದು ಸ್ತುತಿಸಿದ್ದಾರೆ.  ಕೂರ್ಮಾವತಾರದ ವರ್ಣನೆಯಲ್ಲಿ ದಾಸರಾಯರು ಭಗವಂತನ ಮೂರು ಅವತಾರಗಳಾದ ಮಂದರ ಪರ್ವತವನ್ನು ಧರಿಸಿದ ಕೂರ್ಮರೂಪ, ದೇವತೆಗಳೊಂದಿಗೆ ಸಮುದ್ರಮಥನ ಮಾಡಿದ ಅಜಿತ ರೂಪ ಮತ್ತು ಅಮೃತವನ್ನು ದೇವತೆಗಳಿಗೆ ಉಣಬಡಿಸಿದ ಮೋಹಿನಿ ರೂಪಗಳನ್ನು ಸ್ಮರಿಸಿದ್ದಾರೆ.  



ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿರುವ ಕೂರ್ಮಾವತಾರದ ಏಕೈಕ ದೇವಸ್ಥಾನದ ಕೊಂಡಿ https://www.google.co.in/search?tbm=isch&q=Kurmavathara+of+Lord+Vishnu&ei=59EWVd7zDY6EuwTNkIHIDg

 http://en.wikipedia.org/wiki/Sri_Kurmam

ಚಿತ್ರಕೃಪೆ : ಅಂತರ್ಜಾಲ

Sunday, March 8, 2015

ಕರುಣಾ ಸಂಧಿ - ೩೦ ನೇ ಪದ್ಯ (ಮತ್ಸ್ಯಾವತಾರ )

ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ  ಸಂಹರಿಸಿ  ಧರ್ಮದಿ  ಕಾಯ್ದ  ಸುಜನರನು  || ೩೦ ||

ವೈವಸ್ವತ ಮನ್ವಂತರದ ಕಾಲದಲ್ಲಿ ಭಗವಂತ ಎತ್ತಿದ ಅವತಾರಗಳಲ್ಲಿ ದಶ ಅವತಾರಗಳ ವರ್ಣನೆಯನ್ನು ಈ ಪದ್ಯದಲ್ಲಿ ದಾಸರಾಯರು ಮಾಡಿಕೊಟ್ಟಿದ್ದಾರೆ.  ವೈವಸ್ವತ ಮನ್ವಂತರದ ಕಾಲದಲ್ಲಿ ಭಗವಂತನದು ಒಟ್ಟು ೧೩ ಅವತಾರಗಳಾಗಿದ್ದವೆಂದು ಶಾಸ್ತ್ರಗಳಲ್ಲಿ ತಿಳಿಸಲ್ಪಟ್ಟಿವೆ.  ಅದರಲ್ಲಿ ೧೦ ಅವತಾರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿರುತ್ತಾರೆ.  ಏಕೆಂದರೆ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಅವತಾರಗಳಾದಾಗ, ಮುಖ್ಯ ಅವತಾರಕ್ಕೆ ಪೋಷಕ ಅವತಾರವಾಗಿ ಬರುವ ಅವತಾರಗಳನ್ನು ಬಿಟ್ಟಿರುತ್ತಾರೆ.  ಈ ಮನ್ವಂತರದಲ್ಲಿಯೂ ಆದ ೧೩ ಅವತಾರಗಳಲ್ಲಿ ಧನ್ವಂತರಿ, ವೇದವ್ಯಾಸರು ಮತ್ತು ಮೋಹಿನಿ ಎಂಬ ಮೂರು ಅವತಾರಗಳನ್ನು ಬಿಟ್ಟಿರುವುದರಿಂದಲೇ ದಶಾವತಾರವೆಂಬ ಲೆಕ್ಕವಾಗಿದೆ.

ಮೀನ  : ಮತ್ಸ್ಯಾವತಾರ -  ಭಾಗವತದ ಪ್ರಥಮ ಸ್ಕಂಧದಲ್ಲಿ ವಿವರಿಸಿರುವಂತೆ,  ಸೃಷ್ಟಿಗೆ ಕಾರಣವಾದ ಜಲದಲ್ಲಿ ಯೋಗನಿದ್ರೆಯಲ್ಲಿ ಪವಡಿಸಿದ್ದ ಭಗವಂತನ ನಾಭಿ ಸರೋವರದಲ್ಲಿ ಹುಟ್ಟಿದ ಕಮಲದಿಂದ ಬ್ರಹ್ಮದೇವರ ಜನ್ಮವಾಯಿತು.  ಭಗವಂತನ ಅಂಗ-ಉಪಾಂಗಗಳ ವಿನ್ಯಾಸದಿಂದ ಸಮಸ್ತ ಲೋಕಗಳ ಕಲ್ಪನೆಯಾಯಿತು.  ಪರಮ ಪವಿತ್ರವಾದ ಭಗವಂತನ ಈ ವಿರಾಟ್ಪುರುಷ ರೂಪದ ಸಾವಿರಾರು ತಲೆಗಳು, ತೋಳುಗಳು, ತೊಡೆಗಳು, ಮುಖಗಳಿಂದಲೇ ಭಗವಂತನ ಅಸಂಖ್ಯ ಅವತಾರಗಳು ಪ್ರಕಟಗೊಳ್ಳುವುವು.  ವಿರಾಟ್ಪುರುಷ ರೂಪದಿಂದ ಅನೇಕ ಅವತಾರಗಳು ಆವಿರ್ಭವಿಸಿದವು.  ಸೃಷ್ಟಿಯ ಕಾರಣಕ್ಕಾಗಿ ಪ್ರಕಟಗೊಂಡ ರೂಪಗಳಲ್ಲಿ ಮತ್ಸ್ಯಾವತಾರವು ಹತ್ತನೆಯ ಅವತಾರವಾಗುತ್ತದೆ.  ಭಾಗವತ ದ್ವಿತೀಯಸ್ಕಂಧ ೭ನೆಯ ಅಧ್ಯಾಯದಲ್ಲಿ ವಿವರಿಸಿರುವಂತೆ ಭಗವಂತನ ನಾಭಿ ಸರೋವರದ ಕಮಲದಿಂದ ಹುಟ್ಟಿದ ಬ್ರಹ್ಮದೇವರು ತಮಗೆ ಯಜ್ಞ ಮಾಡಲು ಯಾವ ಸಾಮಗ್ರಿಯೂ ಇರಲಿಲ್ಲವಾಗಿ ವಿರಾಟ್ಪುರುಷನ ಅವಯವಗಳಲ್ಲಿಯೇ ಯಜ್ಞದ ಪಶು, ಯೂಪಸ್ಥಂಭ, ಕುಶ, ಯಜ್ಞಭೂಮಿ ಮತ್ತು ಯಜ್ಞಕ್ಕೆ ಪ್ರಶಸ್ತವಾದ ಕಾಲಗಳನ್ನು ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡು ಭಗವಂತನನ್ನು ಯಜ್ಞದ ಮೂಲಕ ಪೂಜಿಸುತ್ತಾರೆ.  ಬ್ರಹ್ಮದೇವರ ಸತ್ರಯಾಗದಲ್ಲಿ ಅವತರಿಸುವ ಹಯಗ್ರೀವ ರೂಪಿ ಭಗವಂತನು ಮೂಗಿನಿಂದ ಶ್ವಾಸ ಬಿಡುವಾಗ ಅಪೌರುಷೇಯವಾದ ಮತ್ತು ನಿರ್ದೋಷವಾದ ವೇದಗಳು ಪ್ರಾದುರ್ಭವಿಸುತ್ತವೆ.  ಹೀಗೆ ಪ್ರಾದುರ್ಭವಿಸಿದ ವೇದಗಳನ್ನು ಹಯಗ್ರೀವನೆಂಬ ಅಸುರನು ಅಪಹರಿಸಿದಾಗ, ಭಗವಂತನ ಮೊಟ್ಟ ಮೊದಲ ಮತ್ಸ್ಯಾವತಾರವು ಶ್ವೇತವರಾಹ ಕಲ್ಪದಲ್ಲಿ ಆಗುತ್ತದೆ.  ಮತ್ಸ್ಯಾವತಾರಿಯಾಗಿ ಅವತರಿಸಿ ಹಯಗ್ರೀವಾಸುರನನ್ನು ಸಂಹರಿಸಿ ವೇದಗಳನ್ನು ಬ್ರಹ್ಮದೇವರಿಗೆ ತಂದು ಕೊಡುತ್ತಾನೆ.  ನಂತರ ಚಾಕ್ಷುಷ ಮನ್ವಂತರದ ಪ್ರಳಯ ಕಾಲದಲ್ಲಿ ಎರಡನೆಯ ಬಾರಿಗೆ ಮತ್ಸ್ಯಾವತಾರವಾಗುತ್ತದೆ.  ಭಾಗವತ ದ್ವಿತೀಯ ಸ್ಕಂಧದ ೭ನೆಯ ಅಧ್ಯಾಯದಲ್ಲಿ ಯುಗಾಂತರ ಸಮಯದಲ್ಲಾದ ಮತ್ಸ್ಯಾವತಾರದ ವರ್ಣನೆ ಹೀಗಿದೆ

ಮಸ್ತ್ಯೋ ಯುಗಾಂತಸಮಯೇ ಮನುನೋಪಲಬ್ಧಃ | ಕ್ಷೋಣೀಮಯೋ ನಿಖಿಲಜೀವನಿಕಾಯಕೇತಃ ||
ವಿಸ್ತಂಸಿತಾನುರುಭಯೇ ಸಲಿಲೇ ಮುಖಾನ್ಮ | ಆದಾಯ ತತ್ರ ವಿಜಹಾರ ಹ ವೇದಮಾರ್ಗಾನ್ || 

ಮತ್ಸ್ಯ ಮಹಾಪುರಾಣದಲ್ಲಿ ಶ್ರೀಹರಿಯ ಮತ್ಸ್ಯಾವತಾರದ ವರ್ಣನೆ ವಿಸ್ತಾರವಾಗಿದೆ :
ವಿಷ್ಣೋರ್ಮತ್ಸ್ಯಾವತಾರೇ ಸಕಲ ವಸುಮತೀಮಂಡಲಂ ವ್ಯಶ್ನುವಾನ |
ಸ್ತಸ್ಯಾಸ್ಯೋದೀರಿತಾನಾಂ ಧ್ವನಿರಪಹರತಾದಶ್ರಿಯಂ ವಃ ಶ್ರುತೀನಾಮ್ || - ಅದ್ಭುತವಾದ ಮತ್ಸ್ಯಾವತಾರದ ಆದಿಯಲ್ಲಿ ಮೀನು ಪಾತಾಲ ಮೂಲದಿಂದ ಸಿಡಿದು ಮೇಲೆದ್ದಾಗ ಅದರ ಬಾಲದ ಹೊಡೆತದ ರಭಸದಿಂದ ಸಾಗರದ ನೀರೆಲ್ಲಾ ಚಿಮ್ಮಿ ಪುಟಿದು ಬ್ರಹ್ಮಾಂಡದ ಕೊಪ್ಪರಕ್ಕೇ ಅಪ್ಪಳಿಸಿ ಮತ್ತೆ ಮರಳಿ ಕೆಳಗೆ ಉರುಳಿತು.  ಇಂತಹ ದಿವ್ಯವಾದ ಮೀನಮೂರುತಿಯ ಮುಖದಿಂದ ವೇದಘೋಷವು ಹೊರಹೊಮ್ಮಿತು.  ಮತ್ಸ್ಯಪುರಾಣವು ಸಾಕ್ಷಾತ್ ನಾರಾಯಣನಿಂದಲೇ ಹೇಳಲ್ಪಟ್ಟಿದೆಯೆಂಬ ಮಾತಿದೆ.  ಮತ್ಸ್ಯಾವತಾರದ ಹಿನ್ನೆಲೆಯಲ್ಲಿ ಒಂದು ಕಥೆಯಿದೆ.  ಮಹಾ ಭಕ್ತನಾದ ರಾಜಾ ಸತ್ಯವ್ರತನು ರಾಜ್ಯಭಾರದಿಂದ ವಿಮುಕ್ತನಾಗಿ ಮಲಯಗಿರಿಯಲ್ಲಿ ಉಗ್ರತಪಸ್ಸಿಗೆ ತೊಡಗುತ್ತಾನೆ.  ತಪಸ್ಸಿಗೆ ಮೆಚ್ಚಿ ಬಂದ ಬ್ರಹ್ಮದೇವನನ್ನು ಸತ್ಯವ್ರತನು ವಿಚಿತ್ರವಾದ ಬೇಡಿಕೆಯೊಂದನ್ನು ಕೇಳುತ್ತಾನೆ.  ಪ್ರಳಯ ಕಾಲದಲ್ಲಿ ವಿಶ್ವವನ್ನು ರಕ್ಷಿಸುವ ಭಗವಂತನ ವಿಶಿಷ್ಟ ಲೀಲೆಯನ್ನು ಕಾಣುವ ಶಕ್ತಿಯನ್ನು ಕರುಣಿಸಬೇಕೆಂದು ಬೇಡಲು ಬ್ರಹ್ಮದೇವನು ಒಪ್ಪಿ ವರವೀಯುತ್ತಾನೆ.  ಒಂದು ದಿನ ಸತ್ಯವ್ರತ ರಾಜನು ತನ್ನ ಆಶ್ರಮದಲ್ಲಿ ಪಿತೃದೇವತೆಗಳಿಗೆ ತರ್ಪಣ ಕೊಡುತ್ತಿದ್ದಾಗ ನೀರಿನಲ್ಲಿ ಒಂದು ಪುಟ್ಟ ಮೀನು ರಾಜನ ಬೊಗಸೆಗೆ ಬರಲು  ರಾಜನು ಅದನ್ನು ಕೂಡಲೆ ತನ್ನ ಕಮಂಡಲದಲ್ಲಿ ಇಟ್ಟು ರಕ್ಷಿಸುತ್ತಾನೆ.  ಒಂದು ಹಗಲಿನಲ್ಲಿ ಮೀನು ಕಮಂಡಲುವಿಗಿಂತ ದೊಡ್ಡದಾಗಿ ಬೆಳೆದು ರಕ್ಷಿಸೆಂದು ರಾಜನನ್ನು ಕೇಳುತ್ತದೆ.  ರಾಜನು ಆ ಮೀನಿನ ಮರಿಯನ್ನು ನೀರು ತುಂಬುವ ಹಂಡೆಯಲ್ಲಿ ಇಡಲು, ಹಂಡೆಯಲ್ಲಿ ನಂತರ ಕೊಳಗದಲ್ಲಿ, ಬಾವಿಯಲ್ಲಿ, ಕೆರೆಯಲ್ಲಿ, ದೊಡ್ಡ ಸರೋವರ, ಗಂಗಾನದಿ ಎಲ್ಲವನ್ನೂ ಮೀರಿ ಅತಿಶಯವಾಗಿ ಬೆಳೆದ ಮೀನನ್ನು ಸತ್ಯವ್ರತ ರಾಜನು ಸಾಗರಕ್ಕೇ ತಂದು ಬಿಡುತ್ತಾನೆ.  ಅಚ್ಚರಿಯಿಂದ  ಈ ಪರಿ ಬೆಳೆಯುವ ಸಾಮರ್ಥ್ಯ ಭಗವಂತನಿಗಲ್ಲದೇ ಬೇರೆ ಯಾರಿಗೂ ಇರಲಾಗದೆಂದು ಪ್ರಾರ್ಥಿಸಲು  ಭಗವಂತನು ಕೆಲವು ದಿನಗಳಲ್ಲಿ ಘಟಿಸುವ ಕಲ್ಪ ಪ್ರಳಯದಲ್ಲಿ ಸಮಸ್ತವೂ ಜಲಾವೃತವಾದಾಗ, ತಾನು ಒಂದು ನಾವೆಯನ್ನು ಕಳುಹಿಸುವೆನೆಂದು ತಿಳಿಸುತ್ತಾನೆ.  ಆ ನಾವೆಯಲ್ಲಿ ಜೀವರಾಶಿಯ ಬೀಜಗಳನ್ನೂ, ಔಷಧಿ ವನಸ್ಪತಿಗಳನ್ನೂ ಇಟ್ಟು, ಸತ್ಯವ್ರತ ರಾಜನೂ ಆ ನೌಕೆಯಲ್ಲಿ ಹತ್ತಿದಾಗ, ತಾನು ಸತ್ಯವ್ರತನಿಗೆ ಪ್ರಳಯ ಜಲದಲ್ಲಿ ತೇಲಾಡಿಸಿ, ತಿರುಗಾಡಿಸುವೆನೆಂದು ಅಭಯವೀಯುತ್ತಾನೆ.  ಸತ್ಯವ್ರತನು ಪ್ರಳಯ ಕಾಲದಲ್ಲಿ ತೇಲಿ ಬಂದ ನೌಕೆಯಲ್ಲಿ ಭಗವಂತನ ಆದೇಶದಂತೆಯೇ  ಮಾಡಿ,  ಹಗ್ಗವಾಗಿ ಹರಿದು ಬಂದ ಆದಿಶೇಷನನ್ನು ನೌಕೆಗೆ ಕಟ್ಟಿ ಇನ್ನೊಂದು ತುದಿಯನ್ನು ಭಗವಂತನಾದ ಮತ್ಸ್ಯದ ಕೊಂಬಿಗೆ ಕಟ್ಟುತ್ತಾನೆ.  ಪ್ರಳಯ ಜಲದಿಂದ ಭಗವಂತನು ಸತ್ಯವ್ರತ ರಾಜನನ್ನೂ, ನೌಕೆಯನ್ನೂ ರಕ್ಷಿಸಿ, ಪ್ರಳಯ ಜಲದಲ್ಲಿ ತೇಲಾಡಿಸುತ್ತಾ ತತ್ತ್ವೋಪದೇಶವನ್ನೂ ನೀಡುತ್ತಾನೆ.  ಭಗವಂತನ ಈ ಜ್ಞಾನೋಪದೇಶವೇ ಮತ್ಸ್ಯಪುರಾಣವಾಗಿದೆ.  ಭಗವಂತ ಸತ್ಯವ್ರತ ರಾಜನಿಗೆ ಮಾತ್ರವೇ ಉಪದೇಶ ಮಾಡಲಿಲ್ಲ.  ವೈವಸ್ವತ ಮನ್ವಂತರದಲ್ಲಿ ಮನುವಾಗುವ ಸತ್ಯವ್ರತ ರಾಜನ ಮೂಲಕ ಮುಂದಿನ ಪೀಳಿಗೆಗೆ ಕೊಟ್ಟ ಉಪದೇಶವಾಗಿದೆ.

ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋದ್ಯಾಯದಲ್ಲಿ ಭಗವಂತನ ದಶಾವತಾರವನ್ನು ವರ್ಣಿಸಿದ್ದಾರೆ.  ಮತ್ಸ್ಯಾವತಾರವನ್ನು ಕುರಿತು "ಮತ್ಸ್ಯಕರೂಪ ಲಯೋದವಿಹಾರಿನ್ ವೇದವಿನೇತ್ರ ಚತುರ್ಮುಖ ವಂದ್ಯ - ಪ್ರಳಯ ಜಲದಲ್ಲಿ ವಿಹರಿಸುತ್ತಿರುವ, ಬ್ರಹ್ಮದೇವರಿಂದ ಸ್ತುತ್ಯನಾದ, ವೇದ ಪ್ರವರ್ತಕನಾದ, ಮತ್ಸ್ಯರೂಪಿಯೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಪ್ರಚಲಿತ ಲಯಜಲವಿಹರಣ ಶಾಶ್ವತ ಸುಖಮಯಮೀನ ಹೇಭವಮಮ ಶರಣಮ್
ಶುಭತಮ ಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮರಮಾರಮಣ || - ಪ್ರಲಯ ಜಲದಲ್ಲಿ ಕ್ರೀಡಿಸುತ್ತಿರುವ ನಿತ್ಯ ಸತ್ಯನಾದ, ಸುಖ ಸ್ವರೂಪಿಯಾದ, ಮತ್ಸ್ಯಾವತಾರಿಯಾದ, ಬ್ರಹ್ಮತತ್ವ ಸ್ವರೂಪನಾದ, ಜ್ಞಾನಪ್ರದ ರಮಣೀಯ ಕಥೆಗಳಿಗೆ ಆಶ್ರಯನಾದವನೂ ಸದಾ ಪ್ರಕಾಶಕನೂ, ಜಗತ್ತಿನ ಅಸ್ತಿತ್ವಕ್ಕೆ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀ ಪತಿಯೇ ನಿನಗೆ ಶರಣು ಹೊಂದುತ್ತೇನೆ ಎಂದೂ ಸ್ತುತಿಸಿದ್ದಾರೆ.


ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋದ್ಯಾಯದಲ್ಲಿ ಭಗವಂತನ ದಶಾವತಾರವನ್ನು ವರ್ಣಿಸಿದ್ದಾರೆ.  ಮತ್ಸ್ಯಾವತಾರವನ್ನು ಕುರಿತು "ಮತ್ಸ್ಯಕರೂಪ ಲಯೋದವಿಹಾರಿನ್ ವೇದವಿನೇತ್ರ ಚತುರ್ಮುಖ ವಂದ್ಯ - ಪ್ರಳಯ ಜಲದಲ್ಲಿ ವಿಹರಿಸುತ್ತಿರುವ, ಬ್ರಹ್ಮದೇವರಿಂದ ಸ್ತುತ್ಯನಾದ, ವೇದ ಪ್ರವರ್ತಕನಾದ, ಮತ್ಸ್ಯರೂಪಿಯೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಪ್ರಚಲಿತ ಲಯಜಲವಿಹರಣ ಶಾಶ್ವತ ಸುಖಮಯಮೀನ ಹೇಭವಮಮ ಶರಣಮ್
ಶುಭತಮ ಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮರಮಾರಮಣ || - ಪ್ರಲಯ ಜಲದಲ್ಲಿ ಕ್ರೀಡಿಸುತ್ತಿರುವ ನಿತ್ಯ ಸತ್ಯನಾದ, ಸುಖ ಸ್ವರೂಪಿಯಾದ, ಮತ್ಸ್ಯಾವತಾರಿಯಾದ, ಬ್ರಹ್ಮತತ್ವ ಸ್ವರೂಪನಾದ, ಜ್ಞಾನಪ್ರದ ರಮಣೀಯ ಕಥೆಗಳಿಗೆ ಆಶ್ರಯನಾದವನೂ ಸದಾ ಪ್ರಕಾಶಕನೂ, ಜಗತ್ತಿನ ಅಸ್ತಿತ್ವಕ್ಕೆ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀ ಪತಿಯೇ ನಿನಗೆ ಶರಣು ಹೊಂದುತ್ತೇನೆ ಎಂದೂ ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ಮತ್ಸ್ಯಾವತಾರವನ್ನು

ಪ್ರೋಷ್ಠೀಶವಿಗ್ರಹ ಸುನಿಷ್ಟೀವನೋದ್ಧತ ವಿಶಿಷ್ಟಾಂಬುಚಾರಿ ಜಲಧೇ
ಕೋಷ್ಠಾಂತರಾಹಿತ ವಿಚೇಷ್ಟಾಗಮೌಘ ಪರಮೇಷ್ಠೀಡಿತ ತ್ವಮವ ಮಾಮ್ |
ಪ್ರೇಷ್ಠಾರ್ಕಸೂನುಮನು ಚೇಷ್ಟಾರ್ಥಮಾತ್ಮವಿದತೀಷ್ಟೋ ಯುಗಾಂತಸಮಯೇ
ಸ್ಥೇಷ್ಟಾತ್ಮಶೃಂಗಧೃತ ಕಾಷ್ಟಾಂಬುವಾಹನ ವರಾಷ್ಟಾಪದಪ್ರಭತನೋ || - ಪ್ರಳಯ ಕಾಲದಲ್ಲಿ ಶ್ರೇಷ್ಠವಾದ ಮತ್ಸ್ಯಶರೀರಧಾರಿಯಾಗಿ, ವಿಶಿಷ್ಟವಾದ ತಿಮಿಂಗಿಲಾದಿ ದೊಡ್ಡ ಪ್ರಾಣಿಗಳುಳ್ಳ ಸಾಗರವನ್ನು ಬಾಯಿಯಿಂದೊಮ್ಮೆ ಥೂತ್ಕರಿಸಿ ಉಕ್ಕೇರುವಂತೆ ಮಾಡಿದ, ಉದರಾಂತರ್ಗತದಲ್ಲಿ ಸಮಸ್ತ ವೇದಗಳನ್ನು ಹೊಂದಿರುವ, ಬ್ರಹ್ಮದೇವರಿಂದ ವಂದಿಸಲ್ಪಡುವ, ಅತಿ ದೃಢವಾದ ತನ್ನ ಕೊಂಬಿನಲ್ಲಿ ಮರದ ಶ್ರೇಷ್ಠ ನೌಕೆಯನ್ನು ರಚಿಸಿ, ಆ ನೌಕೆಯಲ್ಲಿ ಮುಂದಿನ ಸೃಷ್ಟಿಗೆ ಅವಶ್ಯಕವಾಗಿರುವ ಬೀಜರೂಪದ ಜೀವರಾಶಿಗಳನ್ನೂ, ಮುಂದೆ ವೈವಸ್ವತ ಮನ್ವಂತರದಲ್ಲಿ ಮನುವಾಗಿ ಬರಬೇಕಾಗಿದ್ದ ರಾಜಾ ಸತ್ಯವ್ರತನ್ನೂ ಕುಳ್ಳಿರಿಸಿಕೊಂಡು, ತತ್ತ್ವೋಪದೇಶ ಮಾಡಿದ, ಚಿನ್ನದಂತೆ ಹೊಳೆಯುವ ಶರೀರವುಳ್ಳ, ಬ್ರಹ್ಮ ಜ್ಞಾನಿಗಳಿಗೆ ಅತಿಪ್ರಿಯನಾದ ಮತ್ಸ್ಯರೂಪಿಯಾದ ಭಗವಂತನೇ ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿ ದಶಾವತಾರದ ವರ್ಣನೆಯನ್ನು ಮಾಡಿದ್ದಾನೆ.  ಮತ್ಸ್ಯಾವತಾರವನ್ನು
ಪ್ರಲಯಪಯೋಧಿಜಲೇ ಧೃತವಾನಸಿ ವೇದಂ
ವಿಹಿತವಹಿತ್ರ ಚರಿತ್ರಮಖೇದಂ
ಕೇಶವ ಧೃತ ಮೀನ ಶರೀರ ಜಯ ಜಗದೀಶ ಹರೇ || ಪ್ರಲಯ ಸಮುದ್ರದ ಜಲದಲ್ಲಿ ವೇದ ರಕ್ಷಕನಾಗಿ ಅವತರಿಸಿದ ಧೃತ (ಧರಿಸಿದ) ಮೀನಿನ ಶರೀರದ ಕೇಶವನೇ, ಜಗದೀಶನೇ ನಿನಗೆ ಜಯ ಜಯವು ಎಂದು ಸ್ತುತಿಸಿದ್ದಾರೆ. 

ಭಗವಂತನ ದಶಾವತಾರಗಳಿಗೂ ಮನು ಕುಲಕ್ಕೂ ಅತ್ಯಂತ ಸಮೀಪದ ಹೋಲಿಕೆ ಇದೆ.  ನೀರಿನಿಂದ ಜೀವ ಚೈತನ್ಯದ ಉತ್ಪನ್ನವಾಯಿತೆಂಬುದರ ಸಂಕೇತ ಮತ್ಸ್ಯಾವತಾರವಾಗಿದೆ. ಭಗವಂತನು ಮತ್ಸ್ಯಾವತಾರಿಯಾಗಿ ಬಂದು ಬ್ರಹ್ಮಾಂಡವನ್ನು ಒಂದು ಪುಟ್ಟ ನೌಕೆಯನ್ನಾಗಿಸಿ, ಅದರೊಳಗೆ ಅನಾದಿಯಾದ ಜೀವರಾಶಿಯನ್ನು ಬೀಜರೂಪದಲ್ಲಿ ರಕ್ಷಿಸಿದಾಗ ನೌಕೆ ಪ್ರಳಯ ಜಲದಲ್ಲಿ ತೇಲಿತು ಮತ್ತು ಮುಂದೆ ಅದರಲ್ಲಿ ಸಂರಕ್ಷಿಸಲ್ಪಟ್ಟ ಬೀಜರೂಪದ ಜೀವರಾಶಿಯಿಂದಲೇ ಭಗವಂತನಿಂದ ಸೃಷ್ಟಿ ಪ್ರಾರಂಭವಾಯಿತು.  ನಮ್ಮ ಪ್ರಸ್ತುತ ಜೀವನದಲ್ಲಿಯೂ ಮತ್ಸ್ಯಾವತಾರವನ್ನು ಹೋಲಿಸಿಕೊಂಡು ನಮಗೆ ನಾವೇ ವಿಶ್ಲೇಷಣೆ ಮಾಡಿಕೊಳ್ಳಬಹುದು.  ಲೌಕಿಕದಲ್ಲಿ ನಮ್ಮ ಕರ್ಮಕ್ಕನುಗುಣವಾಗಿ ಅಸಂಖ್ಯ ಸಮಸ್ಯೆಗಳನ್ನು ತಂದಿರುತ್ತೇವೆ.  ಸಮಸ್ಯೆಯ ಸಾಗರದಲ್ಲಿ ನಾವು ಸಿಕ್ಕಿಕೊಂಡಾಗ, ನಮ್ಮ ಅಂತರಂಗದಲ್ಲಿ ದುಃಖ ಹಾಗೂ ಪ್ರಳಯದ ಜಲವೇ ತುಂಬಿಕೊಂಡಿರುವಾಗ ಭಗವಂತನ ಧ್ಯಾನವನ್ನು ಮಾಡಬೇಕು.  ಬರೀ ಕತ್ತಲು ತುಂಬಿರುವ ಅಂತರಂಗದಲ್ಲಿ, ಮುಳುಗದೆ ತೇಲುವ ಅವಕಾಶವನ್ನು ಭಗವಂತ ನಮ್ಮ ಅಂತಃಸತ್ವದಲ್ಲಿ ಬೆಳಕಿನ ಕಿರಣದ ಮೂಲಕ ಪರಿಹಾರವನ್ನು ಕೊಡುತ್ತಾನೆ.  "ಸಂಕಟ ಬಂದಾಗ ವೆಂಕಟರಮಣ"ನೆನ್ನದೆ "ಸಂತತಂ ಚಿಂತಯೇ ಅನಂತಂ ಅಂತ್ಯಕಾಲೇ ವಿಶೇಷತಃ" ಎಂಬ ಮಾತನ್ನು ಅನ್ವಯಿಸಿಕೊಳ್ಳುತ್ತಾ ಪ್ರಾರ್ಥಿಸಿದಾಗ ನಮ್ಮ ಸಮಸ್ಯೆಗಳಿಗೆ ನಮ್ಮೊಳಗಿನಿಂದಲೇ ಉತ್ತರವೂ ಸಿಕ್ಕುತ್ತದೆ ಎಂಬುದನ್ನು ಮತ್ಸ್ಯಾವತಾರವು ಬಿಂಬಿಸುತ್ತದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೧೮ನೆಯ ಪದ್ಯದಲ್ಲಿ "ಕರ್ಣದಲಿ ಇಪ್ಪನು ವಿಷ್ಣುನಾಮಕ ಶ್ರವಣನೆಂದೆನಿಸಿ" ಎಂದಿದ್ದಾರೆ.  ಕಿವಿಗಳಲ್ಲಿ ನೆಲೆಸಿರುವ ದಿಗ್ದೇವತೆಗಳಿಗೆ ವಿಷ್ಣುನಾಮಕ ಪರಮಾತ್ಮನು ಅಭಿಮಾನಿ ದೇವತೆಯಾಗಿದ್ದಾನೆ .  ಮುಂದುವರೆಯುತ್ತಾ ೩೪ನೆಯ ಪದ್ಯದಲ್ಲಿ ಕೂಡ ಶ್ರವಣಗಳಲ್ಲಿ ಮತ್ಸ್ಯರೂಪಿ ಭಗವಂತನನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ಮತ್ಸ್ಯಾವತಾರವೆತ್ತಿದಾಗ ಲಕ್ಷ್ಮೀದೇವಿಯು ವೇದ ರೂಪಿಯಾಗಿ ಇರುತ್ತಾಳೆ ಎಂದಿದ್ದಾರೆ.

ಶ್ರೀ ಜಗನ್ನಾಥದಾಸರು ತಮ್ಮ "ತತ್ವಸುವ್ವಾಲಿ"ಯಲ್ಲಿಯೂ ದಶಾವತಾರದ ವರ್ಣನೆ ಮಾಡಿದ್ದಾರೆ.  ಮತ್ಸ್ಯಾವತಾರವನ್ನು
ವೇದತತಿಗಳನು; ಕದ್ದೊಯ್ದವನ ಕೊಂದು ಪ್ರಳ-
ಯೋದಧಿ-ಯೊಳಗೆ ಚರಿಸಿ-ದಿ | ಚರಿಸಿ ವೈವಸ್ವತನ
ಕಾಯ್ದ ಮಹಮಹಿಮ ದಯವಾಗೋ || - ವೇದಗಳನ್ನು ಕದ್ದೊಯ್ದಿದ್ದ ಹಯಗ್ರೀವಾಸುರನೆಂಬ ದೈತ್ಯನನ್ನು ಕೊಂದು, ಪ್ರಳಯೋದಕದಲ್ಲಿ ಚರಿಸಿದ, ವಿಹರಿಸಿದ ಭಗವಂತನು ಚಾಕ್ಷುಷ ಮನ್ವಂತರದ ಪ್ರಳಯೋದಕದಲ್ಲಿ ಪುನಃ ಸಂಚಾರ ಮಾಡಿ ವೈವಸ್ವತನನ್ನು ಕಾಪಾಡಿದ ಅದ್ಭುತ ಮಹಿಮನಾದ ಹೇ ಮತ್ಸ್ಯ ಕೃಪೆಮಾಡು ಎನ್ನುತ್ತಾರೆ.
 


ಭಗವಂತನ ಮತ್ಸ್ಯಾವತಾರ ದೇವಸ್ಥಾನದ ಕೊಂಡಿ
http://en.m.wikipedia.org/wiki/Nagalapuram#Vedanarayana_Swamy_Temple
ಚಿತ್ರಕೃಪೆ : ಅಂತರ್ಜಾಲ

Saturday, February 28, 2015

ಕರುಣಾ ಸಂಧಿ - ೩೦ ನೇ ಪದ್ಯ - ಒಂದು ಮುನ್ನುಡಿ


ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು || ೩೦ ||


 ಪ್ರತಿಪದಾರ್ಥ : ಮೀನ - ಮತ್ಸ್ಯನಾಗಿ ಭೂಮಿಯನ್ನೂ ವೇದಗಳನ್ನೂ ರಕ್ಷಿಸಿದ ರೂಪ,  ಕೂರ್ಮ - ಆಮೆಯಾಗಿ ಬೆನ್ನಮೇಲೆ ಮಂದರ ಪರ್ವತವನ್ನು ಹೊತ್ತು ಸಮುದ್ರ ಮಥನ ಮಾಡಿಸಿದ ರೂಪ, ವರಾಹ - ರಸಾತಳದಿಂದ ಭೂಮಿಯನ್ನು ಕೋರೆದಾಡಿಗಳ ಮೇಲಿಟ್ಟು ಕೊಂಡು ತಂದ ಸೂಕರ ರೂಪ, ನರಪಂಚಾನನ - ನರ ಹಾಗೂ ಸಿಂಹಗಳ ಮಿಶ್ರಣ ರೂಪ ಧರಿಸಿ ಪುಟ್ಟ ಬಾಲಕ ಪ್ರಹ್ಲಾದನನ್ನು ಉದ್ಧರಿಸಿದ ರೂಪ, ಅತುಳ ಶೌರ್ಯ ವಾಮನ - ಬಲಿಚಕ್ರವರ್ತಿಯಿಂದ ೩ ಪಾದ ಭೂಮಿ ದಾನ ಬೇಡಿ ಸಮಸ್ತ ಲೋಕಗಳನ್ನು ಅಳೆದ ರೂಪ,  ರೇಣುಕಾತ್ಮಜ - ಕ್ಷತ್ರಿಯಕುಲ ನಾಶಕ್ಕೆ ಕಾರಣಾಗಲು ಜಮದಗ್ನಿ ಹಾಗೂ ರೇಣುಕೆಯರ ಮಗನಾಗಿ ಪರಶುರಾಮನ ರೂಪ, ರಾವಣಾದಿ ನಿಶಾಚರ ಧ್ವಂಸಿ - ರಾವಣ ಮೊದಲಾದ ಅಸುರರೆಲ್ಲರ ನಾಶಕ್ಕೆ ಕಾರಣನಾದ ಶ್ರೀರಾಮಚಂದ್ರನ ರೂಪ, ಧೇನುಕಾಸುರ ಮಥನ - ಧೇನುಕನೆಂಬ ರಾಕ್ಷಸನನ್ನು ಸಂಹಾರ ಮಾಡಿದ ರೂಪ, ತ್ರಿಪುರವ ಹಾನಿಗೈಸಿದ ನಿಪುಣ - ತ್ರಿಪುರಾಸುರರ ಪತ್ನಿಯರ ಪಾತಿವ್ರತ್ಯ ವ್ರತ ಭಂಗ ಮಾಡಿಸಿ ಅವರುಗಳ ನಾಶಕ್ಕೆ ಕಾರಣವಾದ ಬುದ್ಧರೂಪ, ಕಲಿಮುಖ ದಾನವರ ಸಂಹರಿಸಿ - ಕಲ್ಕಿ ಅವತಾರದಿಂದ ಕಲಿಯೇ ಮುಂತಾದ ದೈತ್ಯರನ್ನು ನಾಶ ಮಾಡಿದ ರೂಪ, ಧರ್ಮದಿ ಕಾಯ್ದ ಸುಜನರನು - ಸಜ್ಜನರಾದ ಭಕ್ತರನ್ನು ಧರ್ಮದಿಂದ ಸಂರಕ್ಷಿಸುವವನು.

ಕರುಣಾಸಂಧಿಯ ೩೦ನೆಯ ಪದ್ಯದಲ್ಲಿ ದಾಸರಾಯರು ದಶಾವತಾರದ ವರ್ಣನೆಯ ಮೂಲಕ ಭಗವಂತನ ಕಾರುಣ್ಯವನ್ನು ವಿಸ್ತಾರವಾಗಿ ವಿವರಿಸಿದ್ದಾರೆ.  ಅಸಂಖ್ಯಾವತಾರಗಳನ್ನು ಎತ್ತಿ ತನ್ನದೇ ಸೃಷ್ಟಿಯಾದ ಭೂಮಂಡಲವನ್ನೂ, ಮನುಕುಲವನ್ನೂ ಕಾಪಾಡುವ ಭಗವಂತನ ಅಪಾರ ಕರುಣೆಯು ವಿವರಣೆಯ ನಿಲುಕಿಗೆ ಸಿಲುಕುವಂತಹುದಲ್ಲದಿದ್ದರೂ, ಅದನ್ನು ಅರಿಯುವ, ತಾವು ಅರಿತದ್ದನ್ನು ಮತ್ತು ತಮ್ಮ ಅನುಭವವನ್ನು ಮತ್ತೊಬ್ಬರಿಗೂ ಯಥಾ ಶಕ್ತ್ಯಾನುಸಾರ ತಿಳಿಸುವುದರ ಮೂಲಕ  ಭಗವಂತನನ್ನು ಸ್ತುತಿಸುವ ಪ್ರಯತ್ನವನ್ನು ಶ್ರೀ ಜಗನ್ನಾಥದಾಸರು ಮಾಡಿದ್ದಾರೆ.

ಭಗವಂತನು ಕಲ್ಪಗಳ ಲಯ ಕಾಲದಲ್ಲಿ ಅವತಾರಗಳನ್ನು ಎತ್ತುತ್ತಾ, ಬ್ರಹ್ಮಾಂಡವನ್ನೂ,  ಅನಾದಿಯಾದ ಬೀಜರೂಪದಲ್ಲಿರುವ ಜೀವರಾಶಿಯನ್ನೂ  ಪ್ರಳಯ ಜಲದಲ್ಲಿ ಕೊಚ್ಚಿ ಹೋಗದಂತೆ ಕಾಪಾಡುತ್ತಲೇ ಇದ್ದಾನೆ.  ಪ್ರಕೃತಿಯಲ್ಲಿ ವಿಕೋಪ ಉಂಟಾದಾಗ, ಪರಿಸ್ಥಿತಿಯಲ್ಲಿ ಏರುಪೇರಾದಾಗ, ಭಗವಂತ ಅಲ್ಲಿಯ ಸಂದರ್ಭಕ್ಕನುಗುಣವಾಗಿ ಅವತರಿಸಿ, ಸಮತೋಲನವನ್ನು ಕಾಪಾಡುತ್ತಾನೆ.  ಭಗವಂತನ ಅಸಂಖ್ಯಾತ ಅವತಾರಗಳಲ್ಲಿ ಹತ್ತು ಅವತಾರಗಳನ್ನು ಮಾತ್ರ ’ದಶಾವತಾರ’ಗಳೆಂದು ಪ್ರಮುಖವಾಗಿ ಪರಿಗಣಿಸಲಾಗಿದೆ.  ಭಗವಂತನ ಲೀಲಾವಿನೋದವನ್ನು ಅವತಾರಗಳೆಂದು ವರ್ಣಿಸುವ ಅನೇಕ ಕೃತಿಗಳು ನಮ್ಮ ದಾಸ ಸಾಹಿತ್ಯದಲ್ಲಿ ದೊರಕುತ್ತವೆ.  ಇಲ್ಲಿ ಶ್ರೀ ಜಗನ್ನಾಥ ದಾಸರು ಭಗವಂತನ ಅಪಾರವಾದ ಕಾರುಣ್ಯವನ್ನು ಗುರುತಿಸುತ್ತಾ ಅವನ ಅವತಾರಗಳನ್ನು ವರ್ಣಿಸುತ್ತಾರೆ.  ಭಗವಂತನ ಲೀಲೆಗಳನ್ನು ವಿವರಿಸುವುದೇ ಅತ್ಯಂತ ಸೊಬಗಿನ ವಿಷಯವಾದರೆ, ದಶಾವತಾರವು ಎಲ್ಲಾ ಸಾತ್ವಿಕರನ್ನೂ, ದಾಸ ಪರಂಪರೆಯನ್ನೂ ಸೂಜಿಗಲ್ಲಿನಂತೆ ಸೆಳೆಯುವ ಅತ್ಯಾಕರ್ಷಕವಾದ ಸಂಗತಿಯಾಗಿದೆ.  ಕ್ಷಣ ಮಾತ್ರದಲ್ಲಿ ಅವತಾರ ಪುರುಷನಾಗಿ ನಾನಾವಿಧ ರೂಪಗಳಲ್ಲಿ ಲೀಲಾಜಾಲವಾಗಿ ಪ್ರಕಟವಾಗಿ, ನಂಬಿದ ಭಕ್ತರನ್ನೂ, ಅವರು ನೆಲೆಸಲು ಅವಶ್ಯಕವಾಗಿ ಬೇಕಾಗಿರುವ ಭೂಮಂಡಲವನ್ನೂ, ಕಾಪಾಡುವ ಅವನ ಪರಿಯು ವರ್ಣನೆಗೆ ನಿಲುಕದ ವಿಶೇಷವಾಗಿದೆ.  ಆದರೂ ಭಗವಂತನನ್ನೂ ಅವನ ಚಿತ್ರವಿಚಿತ್ರ ಲೀಲಾವಿನೋದಗಳನ್ನೂ ತಮ್ಮದೇ ಆದ ಧಾಟಿಯಲ್ಲಿಯೂ ಪದಪುಂಜಗಳ ಗುಚ್ಛದಲ್ಲಿಯೂ ಹಿಡಿದಿಡುವ ಪ್ರಯತ್ನ ಅವಿರತವಾಗಿ ನಡೆಯುತ್ತಲೇ ಇದೆ.

ಶ್ರೀ ಪುರಂದರದಾಸರು ಒಂದು  ಸುಳಾದಿಯಲ್ಲಿ :
ಅಚ್ಯುತಾನಂತಗೋವಿಂದ ಮುಕುಂದ
ವಾಮನ ವಾಸುದೇವ ನಾರಾಯಣ ಹರಿ
ಸಚ್ಚದಾನಂದ ಸ್ವರೂಪ ಗೋಪಾಲ ಪುರುಷೋತ್ತಮ
ಪರಂಧಾಮ ನಾರಾಯಣ
ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ
ಭಾರ್ಗವ ರಾಮ ಶ್ರೀಕೃಷ್ಣ ಬೌದ್ಧ ಕಲ್ಕಿ
ಅವತಾರ ಅನಂತಾವತಾರ ನಾರಾಯಣ
ಹರಿ ಅಚುತಾನಂತ ಗೋವಿಂದ
ಅಪಾರ ಮಹಿಮ ಶ್ರೀ ನಾರಾಯಣ ಅಹೋ
ಸರ್ಪಶಯನನೆ ನಾರಾಯಣ
ಶ್ರೀ ಪುರಂದರವಿಠಲ ವಿಭುವೆ ತಿರುವೆಂಗಳಪ್ಪ
ಎನ್ನಪ್ಪ ನೀ ನಾರಾಯಣ || - ಅನಂತಾವತಾರದ ಅಚುತಾನಂತ ನಾರಾಯಣನು ಅಪಾರ ಮಹಿಮನು ಎನ್ನುತ್ತಾ ತಿರುವೆಂಗಳಪ್ಪನು ಎನ್ನಪ್ಪನು ಎಂದು ಸ್ತುತಿಸಿದ್ದಾರೆ.  ಹಾಗೂ ತಮ್ಮ ಮತ್ತೊಂದು "ನೆಲೆಸೆನ್ನ ಹೃದಯ ಮಂದಿರದಿ - ಶ್ರೀ ಹರಿಯೆ ನೀ | ಸಲಿಸೆಮ್ಮ ಮನದಿಷ್ಟ ಅನುದಿನ ದಯದಿ" ಎಂಬ  ಕೃತಿಯಲ್ಲಿ

ನಾರುವಿ ಭಾರವ ಪೊರುವಿ - ಬಲು - |
ಬೇರುಗಳನೆ ಕಿತ್ತು ಮೆಲುವಿ - ಕರಿ - |
ವೈರಿ ರೂಪಗೊಂಡ ಗರುವಿ - ಬ್ರಹ್ಮ - |
ಚಾರಿ ಖಳರ ಕತ್ತರಿಸುವಿ |
ವೀರದಶರಥಸುತ ಸುರಾರ್ಚಿತ |
ಜಾರತನದಲಿ ವ್ರತವ ಕೆಡಿಸುತ |
ತೋರಿ ಮೆರೆವನೆ ತರಳ ಬಲು ಗಂ - |
ಭೀರ ಕುದುರೆಯನೇರಿ ಮೆರೆವನೆ ||  ಎನ್ನುತ್ತಾ ಮಾರ್ಮಿಕವಾಗಿ ನಾರುವಿ - ಮತ್ಸ್ಯ, ಭಾರವ ಪೊರುವಿ - ಕೂರ್ಮ, ಬೇರುಗಳನೆ ಕಿತ್ತು ಮೆಲುವಿ - ವರಾಹ, ವೈರಿ ರೂಪಗೊಂಡ ಗರುವಿ - ನಾರಸಿಂಹ, ಬ್ರಹ್ಮಚಾರಿ - ವಾಮನ ಎಂದು ಅತಿ ಸುಂದರವಾಗಿ ದಶಾವತಾರದ ವರ್ಣನೆಯನ್ನು ಮಾಡಿದ್ದಾರೆ.

ಶ್ರೀ ಜಗನ್ನಾಥ ದಾಸರಾಯರು ತಮ್ಮ "ರಮಾ ಮನೋಹರನೆ ದೀನ - ಪತಿತಪಾವನಾ" ಎಂಬ ಕೃತಿಯಲ್ಲಿ ಒಂದೊಂದೇ ಪದಗಳಿಂದ ಭಗವಂತನ ದಶಾವತಾರಗಳನ್ನು
ಚೆಂದದಿಂದ ವೇದ ತಂದ | ಮಂದರೋದ್ಧಾರಾ ಅರ | ವಿಂದನಯನ ಬಂಧು ರಕ್ಷಿಸೋ | ಇಂದು ಭೂಧರಾ ||
ಕರುಳಮಾಲೆ ಧರಿಸಿದ ಶ್ರೀ | ವರದ ವಾಮನಾ ಧೃತ | ಕರದ ಪರಶುರಾಮ ರಾಘವ | ಯರು ಕುಲೋತ್ತಮಾ ||
ಲೋಕ ಮೋಹಕ ಬುದ್ಧನಾಗಿ | ತೇಜಿಯೇರಿದಾ ಜಗ | ದೇಕ ಜಗನ್ನಾಥ ವಿಠಲ | ಭೀಕರಾಂತಿಕಾ || - ಎಂದು ಅತ್ಯಂತ ಸರಳವಾಗಿ ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ "ಹೆಜ್ಜೆ ನೋಡೋಣ ಬಾರೆ" ಎಂಬ ಕೃತಿಯಲ್ಲಿ | ಮಚ್ಛನಾಗಿ ವೇದವ ತಂದವನಂತೆ ಕೂರ್ಮನಾಗಿ ಭೂಧರ ಪೊತ್ತವನಂತೆ ವರಹ ನರಹರಿಯಾಗಿ ದುರುಳರ ಸೀಳಿದ ಚೆಲುವ ರೂಪದಿ ದಾನವ ಬೇಡಿ ತುಳಿದ ಪುಟ್ಟ ||
ಮಾತೃದ್ರೋಹ ಮಾಡಿದ ಪರಶುರಾಮನ | ಪಿತೃವಾಕ್ಯವ ನಡೆಸಿದ ಶ್ರೀರಾಮನ | ಕೃಷ್ಣಾವತಾರನ ಬೌದ್ಧಸ್ವರೂಪನ | ಹಯವನೇರಿದ ಕಲ್ಕಿ ಹಯವದನನ್ನ || ಎನ್ನುತ್ತಾ  ದಶಾವತಾರವನ್ನು ವರ್ಣಿಸಿದ್ದಾರೆ.  ಇಷ್ಟೆಲ್ಲಾ ಲೀಲಾವಿನೋದಗಳನ್ನು ಮಾಡಿದ,  ಸಮಸ್ತ ಲೋಕಗಳನ್ನೂ ಭೇದಿಸಿದ ಭಗವಂತನ ಹೆಜ್ಜೆಯನ್ನು "ಪುಟ್ಟ ಹೆಜ್ಜೆ" ಎಂದು ಆಪ್ಯಾಯಮಾನವಾಗಿ,  ಮಮತೆಯ ಸೆಲೆ ಉಕ್ಕುವಂತೆ ವರ್ಣಿಸಿ  ಹಾಡಿದ್ದಾರೆ.  ತಮ್ಮ ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ ಎಂಬ ಕೃತಿಯಲ್ಲಿ | ಮತ್ಸ್ಯ ಕೂರ್ಮರೂಪ ಸೂಕರ ನರಹರಿ ಕಾಯ | ವಾಮನ ಭಾರ್ಗವ ರಾಮನೆನಿಪ ಭೂಪ ಕೃಷ್ಣ ಸುವ್ವಿ | ವಾಮನ ಭಾರ್ಗವ ರಾಮನೆನಿಪ ಭೂಪ ಕೃಷ್ಣನಾದ | ಬೌದ್ಧ ಕಲ್ಕಿ ರೂಪ ಪ್ರಸಿದ್ಧವಂತೆ ಸುವ್ವಿ || ಎಂದಿದ್ದಾರೆ.




ಚಿತ್ರಕೃಪೆ : ಅಂತರ್ಜಾಲ

Wednesday, February 11, 2015

ಕರುಣಾ ಸಂಧಿ - ೨೯ ನೇ ಪದ್ಯ



ಖೇದ ಮೋದ ಜಯಾಪಜಯ ಮೊದ
ಲಾದ ದೋಷಗಳಿಲ್ಲ ಚಿನ್ಮಯ
ಸಾದರದಿ ತನ್ನಂಘ್ರಿಕಮಲವ ನಂಬಿ ತುತಿಸುವರ |
ಕಾದುಕೊಂಡಿಹ ಪರಮಕರುಣಮ-
ಹೋದಧಿಯು ತನ್ನವರು ಮಾಡ್ದಪ-
ರಾಧಗಳ ನೋಡದೆಲೆ ಸಲಹುವ ಸರ್ವಕಾಮದನು || ೨೯ ||


ಪ್ರತಿಪದಾರ್ಥ : ಖೇದ - ದುಃಖ, ಮೋದ - ಸಂತೋಷ, ಜಯ - ಗೆಲುವು, ಅಪಜಯ - ಸೋಲು, ಮೊದಲಾದ ದೋಷಗಳಿಲ್ಲ - ಮುಂತಾದ ಯಾವುದೇ ತರಹದ ದೋಷಗಳೂ ಇಲ್ಲದಿರುವುದು, ಸಾದರದಿ - ಭಕ್ತಿಯಿಂದ, ತನ್ನಂಘ್ರಿಕಮಲವ - ತನ್ನ ಪಾದ ಕಮಲಗಳನ್ನು, ನಂಬಿ ತುತಿಸುವರ - ನಂಬಿಕೆಯಿಂದ ಸ್ತುತಿಸುವವರನ್ನು, ಕಾದುಕೊಂಡಿಹ - ಕಾಯುತ್ತಿರುವನು ಅಥವಾ ಸದಾ ಸಂರಕ್ಷಿಸುತ್ತಿರುವನು, ಪರಮ ಕರುಣಮಹೋದದಿಯು - ಅತ್ಯಂತ ಕರುಣಾಸಾಗರನಾಗಿರುವವನು, ತನ್ನವರು - ತನ್ನ ಭಕ್ತರು, ಮಾಡ್ದಪರಾಧಗಳ - ಮಾಡಿದ ಎಲ್ಲಾ ತಪ್ಪುಗಳನ್ನೂ, ನೋಡದಲೆ ಸಲಹುವ - ತಪ್ಪೆಂದು ತಿಳಿಯದೆ ರಕ್ಷಿಸುವನು, ಸರ್ವಕಾಮದನು - ಸರ್ವರಿಗೂ ಸರ್ವ ಅಭೀಷ್ಟಗಳನ್ನೂ ಪೂರೈಸುವವನು.

ನಿತ್ಯನರಕನಿವಾಸಿಗಳಾಗಿ, ಅ೦ಧ:ತಮಸ್ಸಿನಲ್ಲಿ ಲಿ೦ಗಭ೦ಗರಾಗಿ ಬಹುವಾಗಿ ದು:ಖವನ್ನು ಅನುಭವಿಸುವ ಕಲಿಯಾದಿ ದೈತ್ಯರಿಗೂ, ಸಚ್ಚಿದಾನ೦ದರೂಪಿ ಪರಮಾತ್ಮನೇ ಬಿ೦ಬಸ್ವರೂಪಿಯಾದರೂ ಕೂಡ, ಖೇದ ದು:ಖಗಳು ಎ೦ದಿಗೂ ಭಗವ೦ತನಿಗೆ ಇಲ್ಲ. ಹಾಗೆಯೇ ಬ್ರಹ್ಮಾದಿಗಳಿಗೆ ಬಿ೦ಬನಾದ ಹರಿಗೆ, ನಿತ್ಯಸುಖ ಲೋಕವಾದ ವೈಕು೦ಠದಲ್ಲಿ ಆನ೦ದಾತಿಶಯದಿ೦ದ  ಅನುಭವಿಸುವ ಸ೦ತೋಷವೂ ಕೂಡ ಉ೦ಟಾಗುವುದಿಲ್ಲ. ಜಗತ್ತಿನ ಸಕಲ ವ್ಯಾಪಾರಗಳ ಬಿ೦ಬರೂಪಿಯಾಗಿದ್ದರೂ, ಭಗವ೦ತನಿಗೆ ತಾನು ಜಯಶೀಲನಾಗುವ ಅಥವಾ ಅನ್ಯರಿ೦ದ ಅಪಜಯವಾಗುವ, ಜೀವನಿಷ್ಟವಾದ ಈ ದೋಷಗಳೂ ಇರುವುದಿಲ್ಲ. ತನ್ನ ಪಾದ ಕಮಲಗಳನ್ನು ಸದಾ ಸೇವಿಸುತ್ತಾ ಸರ್ವೋತ್ತಮನಾದವನು ಇವನೇ ಎ೦ದು ಧೃಢವಾಗಿ ನ೦ಬಿ ಸ್ತೋತ್ರಮಾಡುವ ಭಕ್ತರ ಸಮೀಪದಲ್ಲಿ ನಿತ್ಯವಾಸಿಯಾಗಿ ಭಗವ೦ತನು ಕಾದುಕೊ೦ಡಿರುತ್ತಾನೆ. ಇ೦ತಹ ಪರಮ ಕರುಣಾಸಮುದ್ರನಾದ ಭಗವ೦ತನು, ಪೂರ್ವೋಕ್ತಪ್ರಕಾರ ಚಿ೦ತಿಸುವ ಭಕ್ತರಿ೦ದ ಸ೦ಭವಿಸಬಹುದಾದ ದೋಷಗಳನ್ನು ಎಣಿಸದೆ, ಸ೦ರಕ್ಷಣೆ ಮಾಡುವುದರ ಜೊತೆಗೆ ಬೇಡಿದ೦ತಹಾ ಇಷ್ಟಾರ್ಥಗಳನ್ನು ಕೂಡಾ ಯೋಗ್ಯತಾನುಸಾರ ಅನುಗ್ರಹಿಸುತ್ತಾನೆ ಎ೦ದು ದಾಸರಾಯರು ತಿಳಿಸುತ್ತಾರೆ.

ಖೇದ ಮೋದ ಜಯಾಪಜಯ ಮೊದಲಾದ ದೋಷಗಳಿಲ್ಲ -  ಖೇದವೆಂದರೆ ದುಃಖ ಮತ್ತು ಮೋದವೆಂದರೆ ಸುಖ ಎಂಬರ್ಥವನ್ನು ತೆಗೆದುಕೊಂಡಾಗ, ಸುಖ-ದುಃಖಗಳು ಎಂದಿಗೂ ಒಟ್ಟಿಗೆ ಬರುವುದಿಲ್ಲವೆಂಬುದು ತಿಳಿಯುತ್ತದೆ.  ಅತಿಯಾದ ಸುಖ ಬಂದಾಗ ಅದರ ಹಿಂದೆಯೇ ದುಃಖವು ಖಂಡಿತಾ ಬರುತ್ತದೆ.  ಅದೇರೀತಿ ದುಃಖದ ನಂತರ ಕೂಡ ಸುಖವು ಬಂದೇ ಬರುತ್ತದೆ.  ಮೊದಲು ಸುಖವನ್ನು ಅನುಭವಿಸಿದರೆ, ದುಃಖ ಬಂದಾಗ ಅದರ ಪ್ರಮಾಣ ಹೆಚ್ಚಾಗಿರುತ್ತದೆ.  ಹಾಗೇ ದುಃಖದ ನಂತರ ಸುಖವು ಬಂದಾಗ, ದುಃಖದಿಂದ ಅನುಭವಿಸಿದ ಸಂಕಟಗಳೆಲ್ಲಾ ಮರೆತು ಹೋಗುತ್ತದೆ.  ಸುಖದ ನಂತರ ಬರುವ ದುಃಖವು ಹೆಚ್ಚು ನೋವು ಕೊಡುವುದರಿಂದ ಸುಖವೂ ಕೂಡ ದೋಷವೆಂದೇ ತೋರುತ್ತದೆ.  ಆದರೆ ಭಗವಂತನಿಗೆ ಇವು ಯಾವುದೂ ಇಲ್ಲ, ಅವನು ನಿತ್ಯಾನಂದನೂ, ನಿತ್ಯಸುಖಿಯೂ ಆಗಿರುವನು.  ’ಮೋದ’ವೆಂದರೇ ಸುಖವೆಂಬ ಅರ್ಥವಾಗುವುದಿಲ್ಲ.  ಮೋದವೆಂಬುದು ಸುಖದ ಒಂದು ಮಜಲು ಅಷ್ಟೇ.  ಸುಖಕ್ಕೆ ಮೋದ, ಪ್ರಮೋದ ಮತ್ತು ಆನಂದವೆಂಬ ಮೂರು ಮಜಲುಗಳಿವೆ.  ಒಂದು ವಸ್ತುವನ್ನು ಕಂಡಾಗ ಆಗುವ ಖುಷಿಯೇ ಮೋದವು.  ಆ ವಸ್ತುವನ್ನು ಕಂಡದ್ದಕ್ಕಿಂತಲೂ, ಪಡೆದಾಗ ಆಗುವುದು ಪ್ರಮೋದವು.  ವಸ್ತುವು ನಿರೀಕ್ಷಣೆಗಿಂತ ಹೆಚ್ಚಾಗಿ ಸಿಕ್ಕಾಗ ಆಗುವ ಅತಿಯಾದ ಆನಂದವು ಪ್ರಮೋದವಾಗುವುದು.   ಭಗವಂತನಿಗೆ ಯಾವ ನಿರೀಕ್ಷಣೆಯೂ ಇಲ್ಲ, ಏನು ಕಂಡರೂ, ಏನು ಸಿಕ್ಕರೂ ಅವನಲ್ಲಿ ಯಾವ ಬದಲಾವಣೆಯೂ ಆಗದೇ ಇರುವುದರಿಂದಲೇ ಅವನು ನಿತ್ಯಾನಂದನು.  ಜೀವಿಗಳಿಗೆ ಖೇದ ಮೋದಗಳಾಗಲು ಯಾವುದಾದರೂ ವಿಷಯ ಅಥವಾ ಘಟನೆ ಕಾರಣವಾಗುತ್ತದೆ.  ಆದರೆ ಸ್ವತಃ ಆನಂದ ಸ್ವರೂಪನೇ ಆಗಿರುವ ಭಗವಂತನಿಗೆ, ಕಾರಣೀಭೂತವಾಗಿ ಬರುವ ಖೇದ ಮೋದಗಳು ಇರುವುದಿಲ್ಲ.  ಅವನಿಗೆ ಸುಖವೂ ಇಲ್ಲ, ದುಃಖವೂ ಇಲ್ಲ, ಮೋದವೂ ಇಲ್ಲ, ಪ್ರಮೋದವೂ ಇಲ್ಲ.  ಎಲ್ಲವೂ ಅವನೇ

ತೈತ್ತಿರೀಯೋಪನಿಷತ್ತಿನಲ್ಲಿ "ತಸ್ಯ ಪ್ರಿಯಮೇವ ಶಿರಃ | ಮೋದೋ ದಕ್ಷಿಣಃ ಪಕ್ಷಃ | ಪ್ರಮೋದ ಉತ್ತರಃ ಪಕ್ಷಃ | ಆನಂದ ಆತ್ಮಾ | ಬ್ರಹ್ಮ ಪುಚ್ಛಂ ಪ್ರತಿಷ್ಠಾ" ಎಂಬ ಉಲ್ಲೇಖವಿದೆ.  ಇದನ್ನು ಶ್ರೀಮದಾಚಾರ್ಯರು ತಮ್ಮ ಭಾಷ್ಯದಲ್ಲಿ "ಶಿರಃ ಪ್ರಿಯೇ ಸ್ಥಿತಂ ತಸ್ಯ ಪರೇಯಂ ಪ್ರಿಯನಾಮಕಮ್ | ಮೋದಪ್ರಮೋದಯೋರ್ಬಾಹೂ ಮೋದನಾಚ್ಚ ಪ್ರಮೋದನಾತ್" - ಆನಂದಸ್ವರೂಪನಾದ ನಾರಾಯಣನ ಶಿರಸ್ಸು ಮುಕ್ತರಿಂದ ಹೊಂದಲ್ಪಡುವುದರಿಂದ ಪ್ರಿಯವೆಂದು ಕರೆಯಲ್ಪಡುತ್ತದೆ.  ಭಗವಂತನು ಸ್ವರೂಪಭೂತವಾಗಿ ಅಪ್ರಕೃಷ್ಟ ಮತ್ತು ಪ್ರಕೃಷ್ಟ (ಉತ್ಕೃಷ್ಟ) ವಿಷಯ ಜನ್ಯ ಆನಂದಗಳಾದ ಮೋದ ಮತ್ತು ಪ್ರಮೋದಗಳನ್ನು ಉಳ್ಳವನಾದ್ದರಿಂದ ಅವನ ಬಾಹುಗಳು ಮೋದ-ಪ್ರಮೋದವೆಂಬ ಹೆಸರುಗಳನ್ನು ಪಡೆದಿವೆ ಎಂದು ವಿವರಿಸಿದ್ದಾರೆ.  ಹೀಗೆ ಸ್ವರೂಪದಲ್ಲೇ ಮೋದ-ಪ್ರಮೋದಗಳನ್ನು ಹೊಂದಿರುವ ಭಗವಂತನಿಗೆ ಹೊಸದಾಗಿ ಯಾವ ಖೇದ ಮೋದಗಳೂ ಅನ್ವಯಿಸುವುದಿಲ್ಲ. 

ಜಯಾಪಜಯಗಳೂ ಕೂಡ ಭಗವಂತನಿಗೆ ಇಲ್ಲ.  ಭಗವಂತನು ’ಜಯಂತ’ನು, ನಿರಂತರವಾಗಿ ಜಯವನ್ನೇ ಸ್ವಭಾವತಃ ಪಡೆದಿರುವವನು, ಜಯಾಪಜಯಗಳಿಗೆ ಒಡೆಯನಾದವನು.  ಅವನಿಗೆ ಈ ಲೌಕಿಕದ ಜಯಾಪಜಯಗಳ ಗೊಡವೆಯಿಲ್ಲ.  ಯಾವ ದೋಷಗಳೂ ಇಲ್ಲದ ನಿರ್ದೋಷನು.  ಭಗವದ್ಗೀತೆಯ ೫ನೆಯ ಅಧ್ಯಾಯದ ೧೯ನೆಯ ಶ್ಲೋಕದಲ್ಲಿ "ನಿರ್ದೋಷಂ ಹಿ ಸಮಂ ಬ್ರಹ್ಮ" - ಸಚ್ಚಿದಾನಂದಘನ ಪರಮಾತ್ಮನು ನಿರ್ದೋಷನೂ, ಸಮನೂ ಆಗಿದ್ದಾನೆ ಎಂಬ ಉಲ್ಲೇಖವಿದೆ.  "ನ ಪ್ರಹೃಷ್ಯೇತ್ಪ್ರಿಯಂ ಪ್ರಾಪ್ಯ ನೋದ್ವಿಜೇತ್ಪ್ರಾಪ್ಯ ಚಾಪ್ರಿಯಮ್ | ಸ್ಥಿರಬುದ್ಧಿರಸಂ ಮೂಢೋ ಬ್ರಹ್ಮವಿದ್ ಬ್ರಹ್ಮಣಿ ಸ್ಥಿತಃ" - ಪ್ರಿಯ ವಸ್ತು ದೊರಕಿದಾಗ ಹರ್ಷಿತನಾಗದ, ಅಪ್ರಿಯ ವಸ್ತು ಪ್ರಾಪ್ತವಾದಾಗ ಉದ್ವಿಗ್ನನಾಗದ, ಸ್ಥಿರಬುದ್ಧಿಯುಳ್ಳ ಸಂಶಯರಹಿತ ಬ್ರಹ್ಮವೇತ್ತನಾದ ಪುರುಷನು ಸಚ್ಚಿದಾನಂದಘನ ಪರಬ್ರಹ್ಮ ಪರಮಾತ್ಮನನ್ನು ಪಡೆಯುತ್ತಾನೆ ಎಂದು ತಿಳಿಸಿದೆ.  ಸ್ಥಿರಬುದ್ದಿಯನ್ನು ಸಾಧಿಸಿದ ಜೀವಿಗೆ ಪರಮಾತ್ಮ ದೊರೆಯುತ್ತಾನೆಂದರೆ, ಪರಮಾತ್ಮನು ಯಾವ ದೋಷಗಳೂ ಇಲ್ಲದ, ಪರಮ ಸದ್ಗುಣಗಳ ಆಗರನಾದವನು ಎಂಬುದು ತಿಳಿಯುತ್ತದೆ.

ಲೌಕಿಕ ಪ್ರಪಂಚದಲ್ಲಿ ನಾವು ಏನನ್ನಾದರೂ ಗೆದ್ದಾಗ, ಜಯ ಲಭಿಸಿದಾಗ, ಹೊರಗಿನಿಂದ ಬಂದ ಈ ಗೆಲುವು ನಮಗೆ ನಮ್ಮೊಳಗಿನ ಆತ್ಮಕ್ಕೆ ಸೋಲು ತರಬಹುದು.  ಏಕೆಂದರೆ ಗೆಲುವಿನ ಜೊತೆಗೇ ’ನಾನು ಗೆದ್ದೆ’ ಎಂಬ ಅಹಂಕಾರವೂ ಬರುತ್ತದೆ ಮತ್ತು ಇದು ಒಳಗಿನ ಸೋಲಿಗೆ ಕಾರಣವಾಗುತ್ತದೆ.  ಜೀವಿಯು ಹೊರಗಿನಿಂದಾಗಲೀ, ಒಳಗಿನಿಂದಾಗಲೀ ಏನನ್ನಾದರೂ ಗೆದ್ದರೂ, ಪಡೆದುಕೊಂಡರೂ ಅದು ಜೀವಿಗೆ ಮಾತ್ರವೇ ಸೀಮಿತವಾಗುತ್ತದೆ.  ಜೀವಿಯು ಮಾತ್ರವೇ ಸುಖ-ದುಃಖಗಳನ್ನು ಅನುಭವಿಸುತ್ತಾನೆ.  ಹಾಗಾದರೆ ಜೀವಿಯ ಒಳಗೇ ಜೀವಿಯ ಜೊತೆಗೇ ಇರುವ ಭಗವಂತನಿಗೆ ಏಕೆ ಇದು ಅನ್ವಯಿಸುವುದಿಲ್ಲವೆಂಬುದು ಪ್ರಶ್ನೆಯಾದಾಗ, ಭಗವಂತನು ’ವಿಶಿಷ್ಟನು’, ಆದ್ದರಿಂದ ಭಗವಂತನಿಗೆ ಯಾವುದರ ಲೇಪನವೂ ಆಗುವುದಿಲ್ಲ ಎನ್ನುತ್ತದೆ ಉಪನಿಷತ್ತುಗಳು.  ಇದನ್ನು ಒಂದು ದೃಷ್ಟಾಂತದ ಮೂಲಕ ವಿವರಿಸಬಹುದಾಗಿದೆ - ಒಂದು ಮನೆಗೆ ಬೆಂಕಿ ಹತ್ತಿಕೊಂಡಾಗ, ಅದರಲ್ಲಿರುವ ಸಮಸ್ತ ವಸ್ತುಗಳೂ, ಗೋಡೆಗಳೂ ಸಹ ಸುಟ್ಟು ಕರಕಲಾಗಿ ಹೋಗುತ್ತದೆ.  ಆದರೆ ಅದೇ ಮನೆಯಲ್ಲಿ ಇರುವ ಗಾಳಿಯೂ, ಆಕಾಶವೂ ಮಾತ್ರ ಸುಡುವುದಿಲ್ಲ.  ಏಕೆಂದರೆ ಗಾಳಿ, ಆಕಾಶಗಳು ಆ ಮನೆಯಲ್ಲಿದ್ದ ಇತರ ಎಲ್ಲಾ ವಸ್ತುಗಳಿಗಿಂತಲೂ ವಿಶಿಷ್ಟವಾದವುಗಳು.  ಹಾಗೇ ಭಗವಂತನು ಜೀವಿಯ ಒಳಗೇ ಇದ್ದರೂ ಅವನು ವಿಶಿಷ್ಟನಾದ್ದರಿಂದ ಅವನಿಗೆ ಖೇದ-ಮೋದ, ಜಯಾಪಜಯಗಳು ಅನ್ವಯಿಸುವುದಿಲ್ಲ. (ಶ್ರೀ ಬನ್ನಂಜೆಯವರ ಪ್ರವಚನ ಆಧಾರಿತ).

ಭಗವಂತನು ದೋಷರಹಿತನು, ಆನಂದಾತ್ಮಕನು ಎಂಬುದನ್ನು ಶ್ರೀ ವಿಜಯದಾಸರು ತಮ್ಮ ಕೃತಿಯಲ್ಲಿ
ಅನಂತ ಕಲ್ಯಾಣ ಗುಣಪರಿಪೂರ್ಣ ನಿತ್ಯನಿರ್ದೋಷಾ
ಜ್ಞಾನಾನಂದಾತ್ಮಕ ವಿಷ್ಣುರ್ಮೇಸ್ವಾಮಿ ತ್ರಿಲೋಕಕರ್ತಾ
ನೀನೆ ಸ್ವಾತಂತ್ರ ಬೊಮ್ಮಾದಿಗಳು ನಿನ್ನ ದಾಸಾನುದಾಸರು
ಅನಂತ ಅನಂತ ಕಾಲದಲ್ಲಿ ನಿಜವೆಂದು ಪೇಳುತ್ತ
ಮಾನುಷೋತ್ತಮ ಹೀಗೆ ಬಲುಕಾಲವರ್ಚಿಸಲು
ಮನದೊಳಗೆ ವಿಜಯ ವಿಠ್ಠಲನು ಕೃಪೆಯಿಂದ ಧ್ಯಾನಕೆ ಪೊಳೆವ || ಎಂದು ಸುಂದರವಾಗಿ ತಿಳಿಸಿದ್ದಾರೆ.

ಚಿನ್ಮಯ - ಭಗವಂತನು ’ಮೋದ ಚಿನ್ಮಯ ಗಾತ್ರ ಲೋಕ ಪವಿತ್ರ ಸುಚರಿತ್ರ’ ನಾದವನು ಎಂದು ಮಂಗಳಾಚರಣ ಸಂಧಿಯಲ್ಲಿಯೇ ದಾಸರಾಯರು ನುಡಿದಿದ್ದಾರೆ.  ಶ್ರೀಹರಿಯು ಚಿನ್ಮಯನು.  ಪಾಂಚಭೌತಿಕ ಶರೀರವಿಲ್ಲದವನು.  ಅಪರೋಕ್ಷ ಜ್ಞಾನಿಗಳಿಗೂ ಖೇದ-ಮೋದಗಳಿಲ್ಲವೆಂದು ಭಗವಂತನೇ ಗೀತೆಯಲ್ಲಿ ತಿಳಿಸಿದ್ದಾನೆ.  ಸ್ವಾಭಾವಿಕವಾಗಿಯೇ ಕರುಣೆಯುಳ್ಳವರು ಜ್ಞಾನಿಗಳಾಗಲು ಸಾಧ್ಯವಾಗುತ್ತದೆ.  ಬ್ರಹ್ಮಾದಿ ದೇವತೆಗಳೆಲ್ಲರೂ ಜ್ಞಾನಿಗಳೇ ಆಗಿದ್ದರೂ ಅವರು ಚಿನ್ಮಯರಲ್ಲ.  ಅವರಿಗೂ ಪ್ರಾಕೃತ ಶರೀರಗಳೂ, ಅಂತಃಕರಣಗಳೂ ಇವೆ ಮತ್ತು ಪ್ರಾರಬ್ಧ ಕರ್ಮವೂ ಕೂಡ ಇರುವುದರಿಂದಲೇ ಹಲವು ಬಾರಿ ಅವರು ಯೋಗ್ಯರಲ್ಲದವರಿಗೆ ಕರುಣೆ ತೋರಿಸಿ, ಕಷ್ಟಕ್ಕೆ ಸಿಲುಕುತ್ತಾರೆ.  ಇದಕ್ಕೆ ದೃಷ್ಟಾಂತವೆಂದರೆ ಈಶ್ವರನು ವೃಕಾಸುರನಂಥ ಅಸುರನಿಗೆ ಕರುಣೆಯಿಂದ ವರಕೊಟ್ಟದ್ದು.  ವರ ಪಡೆದ ಅಸುರ ಶಿವನ ತಲೆಯ ಮೇಲೆಯೇ ಕೈಯಿಡಲು ಬಂದಿದ್ದ.  ಹಾಗೇ ದುರ್ವಾಸ ಮುನಿಗಳು ಅಂಬರೀಷನಲ್ಲಿ ಸಿಟ್ಟುಗೊಂಡಿದ್ದು.  ಯಾರಿಂದಲೂ ರಕ್ಷಣೆ ಸಿಕ್ಕದೆ ಕೊನೆಗೆ ರಾಜನಿಗೇ ಶರಣಾಗಿದ್ದು, ಮುನಿಗಳ ಪ್ರಾರಬ್ಧಕರ್ಮವೇ ಆಗಿದೆ.  ಚಿನ್ಮಯನಾದ ಭಗವಂತನು ತನ್ನ ಸಜ್ಜನ ಭಕ್ತರಿಗೆ ಅವರವರ ಯೋಗ್ಯತೆಗನುಸಾರವಾಗಿಯೂ, ಅವರ ಸಾಧನೆಗನುಗುಣವಾಗಿಯೂ ತನ್ನ ಸ್ವಾಭಾವಿಕ ಕರುಣೆಯನ್ನು ಹರಿಸುತ್ತಾನೆ.

ಸಾದರದಿ ತನ್ನಂಘ್ರಿ ಕಮಲವ ನಂಬಿ ತುತಿಸುವರ ಕಾದುಕೊಂಡಿಹ -  ಭಗವಂತನ ಕರುಣೆಯಿಂದ ಸಮಸ್ತ ಸುಖಗಳನ್ನೂ ಪಡೆದಿರುವ ಭಕ್ತನ ಹೃತ್ಕಮಲದಲ್ಲಿಯೇ ನೆಲೆಸಿ ಭಗವಂತನು ಭಕ್ತನನ್ನು ಸದಾ ರಕ್ಷಿಸುತ್ತಿರುವನು.  ಸಮಸ್ತವೂ ಭಗವಂತನ ಸೃಷ್ಟಿಯೇ ಆಗಿದೆ, ಎಲ್ಲ ಚರಾಚರ ವಸ್ತುಗಳಲ್ಲೂ ಭಗವಂತನ ಸನ್ನಿಧಾನವಿದ್ದೇ ಇದೆ.  ಇದನ್ನು ತಿಳಿದು ಯಾವ ಭಕ್ತನು ಭಗವಂತನನ್ನು ಸದಾ ಸ್ಮರಿಸುತ್ತಾ, ಅವನಿಂದಲೇ ಪಡೆದದ್ದೆಲ್ಲವನ್ನೂ ಅವನಿಗೇ ಸಮರ್ಪಿಸುವನೋ, ಅಂತಹ ಭಕ್ತನೆಡೆಗೆ ಭಗವಂತನ ಕರುಣೆಯು ಸಾಗರದೋಪಾದಿಯಲ್ಲಿ ಹರಿಯುತ್ತಿರುತ್ತದೆ.  ದಾಸರಾಯರು ತಮ್ಮ "ತತ್ವಸುವ್ವಾಲಿ"ಯಲ್ಲಿ
ಖಂ ವಾಯು ಮಗ್ನಿಂ ಸಲಿಲಂ ಮಹೀಂ ಚ | ಜ್ಯೋತೀಂಷಿ ಸತ್ತ್ವಾನಿ ದಿಶೋ ದೃಮಾದೀನ್ | ಸರಿತ್ ಸಮುದ್ರಾಂಶ್ಚ ಹರೇಃ ಶರೀರಂ | ಯತ್ಕಿಂಚ ಭೂತಂ ಪ್ರಣಮೆದನನ್ಯಮ್ || - ಗಗನ, ಗಾಳಿ, ಅಗ್ನಿ, ನೀರು, ಭೂಮಿ, ನಕ್ಷತ್ರಗಳು, ದಿಕ್ಕುಗಳು, ಗಿಡಬಳ್ಳಿಗಳು, ಸರೋವರದಿಂದ ಸಮುದ್ರದವರೆಗೆ ಒಟ್ಟಾರೆ ವಿಶ್ವದಲ್ಲಿ ಏನೇನು ಅಸ್ತಿತ್ವವನ್ನು ಪಡೆದಿದೆಯೋ ಅದೆಲ್ಲವೂ ಹರಿಯ ಶರೀರ, ಹರಿಯ ಪ್ರತಿಮೆಗಳು. 
ಅದೆಲ್ಲದಕ್ಕೂ ವಂದಿಸಬೇಕು ಎನ್ನುತ್ತಾ ಪರಮಾತ್ಮನ ವ್ಯಾಪ್ತಿಯ ಆಳವನ್ನು ತಿಳಿಸುತ್ತಾ ಪ್ರತಿ ವಸ್ತುವಿನಲ್ಲೂ ಭಗವಂತನ ಸಾನಿಧ್ಯವನ್ನು ಧ್ಯಾನಿಸುತ್ತಾ ಶರಣಾಗಬೇಕೆಂಬ ಉನ್ನತ ಭಾವವನ್ನು ಹೇಳಿದ್ದಾರೆ. ಆರಾಧಿಸಬೇಕು. 

ಮೂರುವಿಧ ಗುಣಗಳ ಜೀವರಾಶಿಗಳಲ್ಲಿ, ಸಾತ್ವಿಕ ಸ್ವಭಾವದ ಜೀವಿಗಳು ಸದಾ ಭಗವಂತನನ್ನು ಸ್ತುತಿಸುತ್ತಾ, ಸಂಪೂರ್ಣವಾಗಿ ನಂಬಿಕೆಯಿಂದ ಶರಣಾಗುವವರಾಗುತ್ತಾರೆ.  ಇಂತಹ ಸಾತ್ವಿಕರಲ್ಲಿ ಭಗವಂತನಿಗೆ ಸ್ವಾಭಾವಿಕವಾಗಿಯೇ ಕರುಣೆಯಿರುವುದರಿಂದ, ಅವರನ್ನು ಸದಾ ರಕ್ಷಿಸುತ್ತಾನೆ.  ಶ್ರೀಕೃಷ್ಣನು ಭಗವದ್ಗೀತೆಯ ೯ನೆಯ ಅಧ್ಯಾಯದ ೨೨ನೆಯ ಶ್ಲೋಕದಲ್ಲಿ
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ | ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ || - ಅನನ್ಯ ಪ್ರೇಮೀ ಭಕ್ತರು ಪರಮೇಶ್ವರನಾದ ನನ್ನನ್ನು ನಿರಂತರ ಚಿಂತಿಸುತ್ತಾ ನಿಷ್ಕಾಮ ಭಾವದಿಂದ ಭಜಿಸುತ್ತಾರೆ.  ಹೀಗೆ ನಿತ್ಯ ನಿರಂತರ ಚಿಂತಿಸುವ ಮನುಷ್ಯರ ಯೋಗಕ್ಷೇಮವನ್ನು ನಾನೇ ಸ್ವತಃ ವಹಿಸಿಕೊಳ್ಳುವೆನು ಎಂದಿದ್ದಾನೆ. 
ದಿನದಿನವೂ, ಕ್ಷಣ ಕ್ಷಣವೂ ಭಕ್ತರು "ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ | ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷೋ ಜಗತ್ಪತೇ" ಎಂದು ಯಾರು ಸಂಪೂರ್ಣ ಶರಣಾಗತರಾಗಿ, ಭಗವಂತನನ್ನು ನಂಬುತ್ತಾರೋ, ಅವರನ್ನು ಭಗವಂತನು ಎಂದಿಗೂ ಕೈಬಿಡದೆ ಬಹಳ ಆದರದಿಂದ, ಅಕ್ಕರೆಯಿಂದ, ಕಾರುಣ್ಯದಿಂದ, ತಂದೆ-ತಾಯಿಗಳಂತೆ, ಶರಣಜನ ಮಂದಾರನಂತೆ,  ಆಕಾಶದವೋಲ್ ಎತ್ತ ನೋಡಿದರೂ ಇದ್ದು ರಕ್ಷಿಸುತ್ತಾನೆ. 

ತನ್ನನ್ನು ಭಕ್ತರು ಸ್ತುತಿಸಬೇಕೆಂಬ ಬಯಕೆ ಭಗವಂತನಿಗೇನೂ ಇಲ್ಲ.  ಸಾತ್ವಿಕ ಭಕ್ತರು ತಮ್ಮ ಸ್ವಭಾವದಂತೆ ಭಗವಂತನನ್ನು ಸದಾ ಸ್ತುತಿಸುತ್ತಲೇ ಇರುತ್ತಾರೆ.  ಆದರೆ ಸಾತ್ವಿಕರ ಈ ಸ್ವಭಾವವು ಅವರ ಅಂತರಂಗದಲ್ಲಿ ಹುದುಗಿರುವ ವಿಷಯವಾಗಿದೆ.  ಅದು ಪ್ರಕಟವಾಗಬೇಕು, ವ್ಯಕ್ತವಾಗಬೇಕೆಂದರೆ, ಸಾತ್ವಿಕರೂ, ಜ್ಞಾನಿಗಳೂ ಆದ ಭಕ್ತರು ಭಗವಂತನನ್ನು ಸ್ತುತಿಸಬೇಕಾಗುತ್ತದೆ.  ಹೀಗೆ ಅವರ ಈ ಸಾತ್ವಿಕ ಸ್ವಭಾವವು ಹೆಚ್ಚು ಹೆಚ್ಚು ವ್ಯಕ್ತವಾದಂತೆಲ್ಲಾ, ಭಗವಂತನ ಕರುಣಾರಸವೂ ಸಾಗರದಂತೆ ಹೆಚ್ಚು ಹೆಚ್ಚು ಹರಿಯುತ್ತದೆ.  ಹೇಗೆ ಸಾಗರದ ಹನಿಗಳನ್ನು ಲೆಕ್ಕ ಮಾಡಲಾಗುವುದಿಲ್ಲವೋ, ಹಾಗೆ ಭಗವಂತನ ಕಾರುಣ್ಯದ ಕಡಲಿನ ಉದ್ದ, ಅಗಲ, ಆಳವನ್ನು ಅಳೆಯಲಾಗುವುದಿಲ್ಲ.  ತನ್ನ ಭಕ್ತರ ಶುದ್ಧ ಗುಣವಾದ ಸಾತ್ವಿಕ ಭಾವವು ವ್ಯಕ್ತವಾಗಲೆಂದೇ ಭಗವಂತನನ್ನು ತನ್ನ ಸ್ತುತಿಯನ್ನು ಬಯಸುತ್ತಾನೆಯೇ ಹೊರತು, ಯಾರು ಸ್ತುತಿಸಿದರೂ, ಸ್ತುತಿಸದಿದ್ದರೂ ಅದರಿಂದ ಭಗವಂತನಿಗೆ ಯಾವ ಲಾಭವೂ ಇಲ್ಲ, ನಷ್ಟವೂ ಇಲ್ಲ.

 ಶ್ರೀ ಶಂಕರಾಚಾರ್ಯರು ತಮ್ಮ "ಜಗನ್ನಾಥಾಷ್ಟಕ ಸ್ತೋತ್ರಮ್" ನಲ್ಲಿ  "ಅಹೋ ದೀನಾನಾಥಂ ನಿಹಿತಮಚಲಂ ಪಾತುಮನಿಶಂ" - ದೀನ, ಅನಾಥನಾದ, ನಿನ್ನ ಸನ್ನಿಧಿಯಲ್ಲಿರುವ ಜಡವಾದ ನನ್ನನ್ನು ಸದಾ ರಕ್ಷಿಸು ಎನ್ನುತ್ತಾ ನಂಬಿಕೆಯಿಂದ ಶರಣಾಗುವುದನ್ನು ತಿಳಿಸಿದ್ದಾರೆ.

ಪರಮ ಕರುಣಾಮಹೋದಧಿಯು -  ಭಗವಂತನು ಸರ್ವ ಗುಣ ಸಂಪೂರ್ಣನು.  ಅವನ ಎಲ್ಲಾ ಗುಣಗಳೂ ಪೂರ್ಣವಾಗಿವೆ ಮತ್ತು ಭಗವಂತನು ಗುಣಸಾಗರನಾಗಿದ್ದಾನೆ.  ಗುಣ ಸಾಗರದಲ್ಲಿನ ಒಂದೊಂದು ಹನಿಯಲ್ಲಿಯೂ ಭಗವಂತನು ಅದೇ ಗುಣವಿಶೇಷಣನಾಗಿ ಪರಿಪೂರ್ಣನಾಗಿದ್ದಾನೆ.  ವೇದಗಳೂ ಕೂಡ ಭಗವಂತನನ್ನು "ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ | ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ" ಎಂದು ವರ್ಣಿಸಿವೆ.   ಮಹೋದಧಿಯೆಂದರೆ ಅತಿ ದೊಡ್ಡ ಸಾಗರವೆಂಬ ಅರ್ಥವಾಗುತ್ತದೆ.  ಭಗವಂತನ ಸರ್ವ ಗುಣಗಳಲ್ಲಿ ಕರುಣೆಯೂ ಒಂದಾಗಿದೆ.  ಒಂದೇ ಒಂದು ಗುಣವೇ ಒಂದು ಮಹೋದಧಿಯಂತಿದ್ದರೆ ಉಳಿದ ಎಲ್ಲಾ ಗುಣಗಳೂ ಅಷ್ಟೇ ವ್ಯಾಪ್ತಿಯಲ್ಲಿವೆಯೆಂಬರ್ಥವಾಗುತ್ತದೆ.  ಇಂತಹ ಅನೇಕ ಗುಣಗಳ ಮಹೋದಧಿಗಳಿಗೇ ಒಡೆಯನಾದವನು ಮತ್ತು ಇಂತಹ ಅನೇಕ ರಸಗಳ, ಗುಣಗಳ ಮಹೋದಧಿಗಳನ್ನೊಳಗೊಂಡ ಏಕರಸ "ಆನಂದ"ದ ಆಶ್ರಯವು ಭಗವಂತನೇ ಆಗಿದ್ದಾನೆ.  ಹೀಗೆಂದು ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯ ೧೪ನೆಯ ಅಧ್ಯಾಯದ ೨೭ನೆಯ ಶ್ಲೋಕದಲ್ಲಿ "ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ" ಎಂದು ತಾನೇ ತಿಳಿಸಿದ್ದಾನೆ.  ಕರುಣೆಯೆಂಬ ಮಹೋದಧಿಯು ಕರುಣಾರಸದ ಕೋಟ್ಯಾಂತರ ಬಿಂದುಗಳಿಂದ ತುಂಬಿರುವುದು.  ಹನಿಹನಿಯಾಗಿ ಭಗವಂತನು ಕರುಣೆಯ ರಸದ ಸಿಂಚನವನ್ನು ಭಕ್ತರಿಗೆ ಸದಾ ಒದಗಿಸುತ್ತಲೇ ಇರುತ್ತಾನೆ.  ಕರುಣೆಯ ಮಹೋದಧಿಯು ಎಂದಿಗೂ ಬತ್ತುವುದೇ ಇಲ್ಲ.

ತನ್ನವರು ಮಾಡ್ದಪರಾಧಗಳ ನೋಡದಲೆ ಸಲಹುವ - ನಮ್ಮವರೆನಿಸಿಕೊಳ್ಳುವವರು ಮಾಡಿದ ಅಪರಾಧಗಳನ್ನು ಎಣಿಸದೆ ಕ್ಷಮಿಸಿ ಕರುಣೆ ತೋರುವುದು ಸಜ್ಜನಿಕೆಯ ಲಕ್ಷಣವಾಗುತ್ತದೆ.  ಸಾಮಾನ್ಯ ಜನರಿಗೇ ಇಷ್ಟು ಸಜ್ಜನಿಕೆಯು ಇದ್ದರೆ, ಕರುಣಾಸಾಗರನಾದ ಭಗವಂತನ ಕ್ಷಮಾ ಗುಣವನ್ನು ಅಳೆಯುವುದು ಅಸಾಧ್ಯವೇ ಆಗಿದೆ.  ದಾಸರಾಯರು ಹಿಂದಿನ ಪದ್ಯಗಳಲ್ಲಿ ಭಗವಂತನನ್ನು ’ಸ್ಮರಿಸುವವರಪರಾಧಗಳ ತಾ ಸ್ಮರಿಸ’ ಮತ್ತು ’ಮಹಾಪರಾಧಗಳೆಣಿಸಿದರೆ ಕರುಣಾಸಮುದ್ರ ಹರಿ’ ಎಂದೆಲ್ಲಾ ವಿವರಿಸಿದ್ದಾರೆ.  ಇಲ್ಲಿ ಮತ್ತೆ ಅದೇ ಕರುಣಾರಸವನ್ನು ’ತನ್ನವರು ಮಾಡ್ದಪರಾಧಗಳ ನೋಡದೆಲೆ ಸಲಹುವ’ ಎಂದಿರುವುದರಲ್ಲಿ ಏನು ವಿಶೇಷವಿದೆಯೆಂದರೆ ತನ್ನವರಾದ ಭಕ್ತರು ಮಾಡಿದ ಅಪರಾಧಗಳನ್ನು ಸ್ಮರಿಸದಿರುವುದೂ, ಎಣಿಸದಿರುವುದೂ ಮಾತ್ರವಲ್ಲದೆ ನೋಡದಿರುವುದೂ ಕೂಡ ಭಗವಂತನ ಒಂದು ವೈಶಿಷ್ಟ್ಯವೆಂದು ವರ್ಣಿಸಿರುವುದು.  ಸಜ್ಜನರು ತಮ್ಮ ಜೀವಕ್ಕೇ ಅಪಾಯ ತಂದವರ ಅಪರಾಧಗಳನ್ನು ಕೂಡ ’ಅಪರಾಧವೆಂದು ಪರಿಗಣಿಸಿಯೇ’ ಕ್ಷಮಿಸಿಬಿಡಬಹುದು.  ಆದರೆ ಭಗವಂತನು ತನ್ನವರು ಮಾಡಿದ ಅಪರಾಧಗಳನ್ನು ನೋಡದೆಲೇ, ಅಪರಾಧವೆಂದು  ಪರಿಗಣಿಸದೆಲೇ ಕ್ಷಮಿಸಿ ಸಲಹುವವನು.
ಭಾಗವತ ದಶಮಸ್ಕಂದದ ೮೯ನೆಯ ಅಧ್ಯಾಯದಲ್ಲಿ ಒಂದು ಪ್ರಸಂಗದ ಉಲ್ಲೇಖವಿದೆ.  ದ್ವಾರಕಾ ಪಟ್ಟಣದ ಬ್ರಾಹ್ಮಣ ದಂಪತಿಗಳಿಗೆ ಮಕ್ಕಳು ಹುಟ್ಟಿ ಭೂ ಸ್ಪರ್ಶವಾದ ಕೂಡಲೇ ಸತ್ತುಹೋಗುತ್ತಿರುತ್ತವೆ.  ಹೀಗೆ ಒಂಬತ್ತು ಮಕ್ಕಳನ್ನು ಕಳೆದುಕೊಂಡು ಗೋಳಾಡುವ ಬ್ರಾಹ್ಮಣನಿಗೆ ಅರ್ಜುನನು ಹತ್ತನೆಯ ಶಿಶುವನ್ನು ತಾನು ರಕ್ಷಿಸುವುದಾಗಿಯೂ, ಸಾಧ್ಯವಾಗದಿದ್ದರೆ ಅಗ್ನಿಪ್ರವೇಶ ಮಾಡುವುದಾಗಿಯೂ ಪ್ರತಿಜ್ಞೆ ಮಾಡುತ್ತಾನೆ.  ಜನಿಸಿದ ಹತ್ತನೆಯ ಶಿಶು ಆಕಾಶದಲ್ಲಿ ಮಾಯವಾಗುತ್ತದೆ.  ಅರ್ಜುನನ ಅಹಂಕಾರದ ಮಾತುಗಳನ್ನು ಬ್ರಾಹ್ಮಣನು ಹೀನಾಯವಾಗಿ ನಿಂದಿಸಿದಾಗ, ಅರ್ಜುನ ಯಮಲೋಕಕ್ಕೇ ತೆರಳಿ ಮಕ್ಕಳನ್ನು ಹುಡುಕುತ್ತಾನೆ.  ಅಲ್ಲಿ ಕಾಣದಿದ್ದ ಮಕ್ಕಳನ್ನು ಬೇರೆಲ್ಲಾ ಲೋಕಗಳಲ್ಲಿಯೂ ಹುಡುಕಿ, ಸಿಕ್ಕದೆ, ಹತಾಶನಾಗಿ ಅಗ್ನಿಪ್ರವೇಶಕ್ಕೆ ಸಿದ್ಧನಾಗುತ್ತಾನೆ.  ಅಗ್ನಿಪ್ರವೇಶ ಮಾಡದಂತೆ ತಡೆದ ಶ್ರೀಕೃಷ್ಣನು ಅರ್ಜುನನ್ನು ತನ್ನ ಜೊತೆ ತನ್ನ ಅನಂತಸ್ವರೂಪವಾದ ಪುರುಷೋತ್ತಮನ ಲೋಕಕ್ಕೆ ಕರೆದೊಯ್ದು ಅಲ್ಲಿ ಬಾಲಕರನ್ನು ತೋರಿಸುತ್ತಾನೆ.  ಭಗವಂತನ ಕರುಣೆ, ಕೃಪೆಯಿಲ್ಲದೇ ತನ್ನ ಬಲ-ಪೌರುಷಗಳಿಗೆ ಯಾವುದೇ ಶಕ್ತಿಯಿಲ್ಲವೆಂಬುದನ್ನು ತಿಳಿದು ಅರ್ಜುನನು ಭಗವಂತನಿಗೆ ನಮಸ್ಕರಿಸುತ್ತಾನೆ.  ಹೀಗೆ ಅರ್ಜುನನ ಅಪರಾಧವನ್ನು ನೋಡದೆಲೇ ಭಗವಂತನು ತನ್ನ ಭಕ್ತನನ್ನು ಸಲಹಿದನು ಎಂಬುದು ತಿಳಿಯುತ್ತದೆ.

ಸರ್ವಕಾಮದನು - ಸರ್ವಕಾಮದನಾದ ಭಗವಂತನು ಲೌಕಿಕ ಹಾಗೂ ಅಲೌಕಿಕದ ಎಲ್ಲಾ ಕಾಮನೆಗಳನ್ನೂ ಪೂರೈಸುವವನಾಗಿರುತ್ತಾನೆ.  ವಿಷ್ಣು ಸಹಸ್ರನಾಮದಲ್ಲಿಯೂ ಭಗವಂತನ ಸರ್ವಕಾಮದ ಗುಣವನ್ನು "ಭಾರಭೃತ್ ಕಥಿತೋ ಯೋಗೀ ಯೋಗೀಶಃ ಸರ್ವಕಾಮದಃ" ಎಂದು ವಿವರಿಸಲ್ಪಟ್ಟಿದೆ.  ದಾಸರಾಯರು ಇಲ್ಲಿ ಭಗವಂತನನ್ನು  ಸರ್ವಕಾಮದನು ಎಂದು ವಿಶೇಷ ಗುಣವಾಚಕದಿಂದ ಸಂಬೋಧಿಸಿ, ಹರಿಕಥಾಮೃತಸಾರಕ್ಕೂ ವಿಷ್ಣು ಸಹಸ್ರನಾಮಕ್ಕೂ ಕೊಂಡಿಯನ್ನು ಕಲ್ಪಿಸಿದ್ದಾರೆ. 
ಭಾಗವತ ಎರಡನೆಯ ಸ್ಕಂದದ ತೃತೀಯೋಧ್ಯಾಯದ ೯ನೆಯ ಶ್ಲೋಕದಲ್ಲಿ "ಅಕಾಮಃ ಸರ್ವಕಾಮೋ ವಾ ಮೋಕ್ಷಕಾಮ ಉದಾರಧೀಃ | ತೀವ್ರೇಣ ಭಕ್ತಿಯೋಗೇನ ಯಜೇತ ಪುರುಷಂ ಪರಮ್" - ಉದಾರವಾದ ಮನಸ್ಸುಳ್ಳ ಬುದ್ಧಿಶಾಲಿಯಾದ ಮನುಷ್ಯನು ನಿಷ್ಕಾಮನಾಗಿರಲಿ ಇಲ್ಲವೇ ಎಲ್ಲ ಕಾಮನೆಗಳಿಂದಲೂ ಕೂಡಿರಲಿ ಅಥವಾ ಮೋಕ್ಷಕಾಮನಾಗಿರಲಿ, ಆತನು ತೀವ್ರವಾದ ಭಕ್ತಿಯೋಗದಿಂದ ಆ ಭಗವಂತನಾದ ಪುರುಷೋತ್ತಮನನ್ನೇ ಭಜಿಸಬೇಕು ಎಂಬ ಉಲ್ಲೇಖವಿದೆ.

ಭಾಗವತ ತೃತೀಯಸ್ಕಂದ ೧೪ನೆಯ ಅಧ್ಯಾಯದಲ್ಲಿ
ತಸ್ಮಿನ್ಪ್ರಸನ್ನೇ ಸಕಲಾಶಿಷಾಂ ಪ್ರಭೌ | ಕಿಂ ದುರ್ಲಭಂ ತಾಭಿರಲಂ ಲವಾತ್ಮಭಿಃ | ಅನನ್ಯದೃಷ್ಟ್ಯಾ ಭಜತಾಂ ಗುಹಾಶಯಃ | ಸ್ವಯಂ ವಿಧತ್ತೇ ಸ್ವಗತಿಂ ಪರಃ ಪರಾಮ್ || - ಭಗವಂತನೇ ಎಲ್ಲಾ ಕಾಮನೆಗಳನ್ನೂ ಈಡೇರಿಸುವ ಸಾಮರ್ಥ್ಯವುಳ್ಳವನು.  ಅವನು ಪ್ರಸನ್ನನಾದರೆ ದುರ್ಲಭವಾದುದು ಯಾವುದೂ ಇಲ್ಲ.  ಎಲ್ಲವನ್ನೂ ಕೊಡುವ ಸರ್ವಕಾಮದನಾದ ಭಗವಂತನನ್ನು ಅನನ್ಯಭಾವದಿಂದ ಭಜಿಸಿದರೆ, ಕರುಣಾಮಯಿ ಸ್ವಾಮಿಯು ತನ್ನ ಪರಮಪದವನ್ನೇ ಅನುಗ್ರಹಿಸುವನು ಎಂದು ತಿಳಿಸಲಾಗಿದೆ.

ಭಗವದ್ಗೀತೆಯ ೬ನೆಯ ಅಧ್ಯಾಯದ ೧೫ನೆಯ ಶ್ಲೋಕ
ಯುಂಜನ್ನೆವಂ ಸದಾತ್ಮಾನಾಂ ಯೋಗೀ ನಿಯತಮಾನಸಃ | ಶಾಂತಿಂ ನಿರ್ವಾಣಪರಮಾಂ ಮತ್ಸಂಸ್ಥಾಮಧಿಗಚ್ಛತಿ || - ಮನಸ್ಸನ್ನು ವಶಪಡಿಸಿಕೊಂಡಿರುವ ಯೋಗಿಯು ಈ ಪ್ರಕಾರವಾಗಿ ಆತ್ಮವನ್ನು ಪರಮೇಶ್ವರ ಸ್ವರೂಪನಾದ ನನ್ನಲ್ಲಿ ನಿರಂತರವಾಗಿ ತೊಡಗಿಸುತ್ತ ನನ್ನಲ್ಲಿರುವ ಪರಮಾನಂದದ ಪರಾಕಾಷ್ಠಾರೂಪಿ (ಪರಮಗತಿ)ಯಾದ ಶಾಂತಿಯನ್ನು ಪಡೆಯುತ್ತಾನೆಂದು  ತಿಳಿಸುತ್ತಾ ಶ್ರೀಕೃಷ್ಣನು ಭಗವಂತನಾದ ತಾನು ಪರಮಗತಿಯಾದ ಮೋಕ್ಷವನ್ನೇ ಕರುಣಿಸುವ ಸರ್ವಕಾಮದನು ಎಂದು ತಿಳಿಸಿದ್ದಾನೆ.
ಕಠೋಪನಿಷತ್ತಿನ ದ್ವಿತೀಯಾಧ್ಯಾಯದ ೬ನೆಯ ವಲ್ಲಿಯ ೧೪ನೆಯ ಶ್ಲೋಕದಲ್ಲಿ "ಯದಾ ಸರ್ವೇ ಪ್ರಮುಚ್ಯನ್ತೇ, ಕಾಮಾ ಯೇSಸ್ಯ ಹೃದಿಶ್ರಿತಾಃ | ಅಥ ಮರ್ತ್ಯೋSಮೃತೋ ಭವತ್ಯತ್ರ ಬ್ರಹ್ಮ ಸಮಶ್ನುತೇ" - ಹೃದಯದಲ್ಲಿರುವ ಕೋರಿಕೆಗಳನ್ನೆಲ್ಲಾ ಯಾವಾಗ ಪೂರ್ತಿಯಾಗಿ ಹೋಗಲಾಡಿಸಿಕೊಳ್ಳುವರೋ, ಆಗ ಮರ್ತ್ಯನು ಅಮೃತನಾಗಿ ಅಲ್ಲಿಯೇ ಬ್ರಹ್ಮವನ್ನು ಚೆನ್ನಾಗಿ ಹೊಂದುತ್ತಾನೆ ಎಂಬ ಉಲ್ಲೇಖವಿದೆ.

ಹೀಗೆ, ಜೀವನಿಷ್ಟವಾದ ದೋಷಗಳಿಂದ ವಿದೂರನಾದ ಚಿನ್ಮಯರೂಪಿ ಭಗವ೦ತನನ್ನು ಸರ್ವೋತ್ತಮನೆ೦ದು ಧೃಢವಾಗಿ ನ೦ಬಿ, ಅವನ ಗುಣಗಳನ್ನು ಸದಾ ಸ್ತುತಿಸುವವರ ಸಮೀಪದಲ್ಲಿಯೇ ಇದ್ದು,  ಸರ್ವಕಾಮದನಾದ ಭಗವ೦ತನು ಕರುಣಾಖ್ಯ ಮಹಾಸಮುದ್ರ ಉಳ್ಳವನಾಗಿ, ಇ೦ತಹ ಭಕ್ತರ ಅಪರಾಧಗಳನ್ನು ಎಣಿಸದೆ ಸ೦ರಕ್ಷಣೆಯನ್ನು ಮಾಡಿ,  ಅವರ ಇಷ್ಟಾರ್ಥಗಳನ್ನು ಯೋಗ್ಯತಾನುಸಾರ ಕೊಡುವವನಾಗುತ್ತಾನೆ ಎ೦ದು ದಾಸರಾಯರು ತಿಳಿಸಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ

Sunday, December 14, 2014

ಕರುಣಾ ಸಂಧಿ - ೨೮ ನೇ ಪದ್ಯ




ಕೊಟ್ಟುದನು ಕೈಕೊಂಬರೆಕ್ಷಣ
ಬಿಟ್ಟಗಲ ತನ್ನವರ ದುರಿತಗ-
ಳಟ್ಟುವನು ದೂರದಲಿ ದುರಿತಾರಣ್ಯಪಾವಕನು |
ಬೆಟ್ಟ ಬೆನ್ನಲಿ ಹೊರಿಸಿದವರೊಳು
ಸಿಟ್ಟು ಮಾಡಿದನೇನೊ ಹರಿ ಕಂ-
ಗೆಟ್ಟ ಸುರರಿಗೆ ಸುಧೆಯನುಣಿಸಿದ ಮುರಿದನಹಿತರನು  || ೨೮ ||


ಪ್ರತಿಪದಾರ್ಥ : ಕೊಟ್ಟುದನು ಕೈಗೊಂಬ - ಶುದ್ಧವಾದ ಮನಸ್ಸಿನಿಂದಲೂ ಪ್ರೀತಿಯಿಂದಲೂ ಭಕ್ತರು ಏನನ್ನೇ ಸಮರ್ಪಿಸಿದರೂ ಸ್ವೀಕರಿಸುವವನು, ಅರೆಕ್ಷಣ ಬಿಟ್ಟಗಲ ತನ್ನವರ - ಒಂದು ಕ್ಷಣದಲ್ಲಿ ಅರೆಕ್ಷಣ ಸಮಯದಷ್ಟೂ ಭಕ್ತರನ್ನು ಬಿಟ್ಟು ಅಗಲಿ ಹೋಗದವನು, ದುರಿತಗಳಟ್ಟುವನು ದೂರದಲಿ - ಭಕ್ತರ ಕಷ್ಟಗಳನ್ನು ಅತಿ ದೂರಕ್ಕೆ ಓಡಿಸುವವನು, ದುರಿತಾರಣ್ಯಪಾವಕನು - ಜನ್ಮಾರ್ಜಿತ ಪಾಪಗಳೆಂಬ ಅರಣ್ಯವನ್ನು ಅಗ್ನಿಯಾಗಿ ಭಸ್ಮಗೊಳಿಸಿ ಬಿಡುವವನು, ಬೆಟ್ಟ ಬೆನ್ನಲಿ ಪೊರಸಿದವರೊಳು - ಸಮುದ್ರ ಮಥನ ಕಾಲದಲ್ಲಿ ಕೂರ್ಮರೂಪಿ ಭಗವಂತನ ಬೆನ್ನಮೇಲೆ ಮಂದರ ಪರ್ವತವನ್ನು ಹೊರಿಸಿದಂತಹವರ ಮೇಲೆ, ಸಿಟ್ಟು ಮಾಡಿದನೇನೋ ಹರಿ - ಭಗವಂತನು ಕೋಪಿಸಿಕೊಂಡನೇ, ಕಂಗೆಟ್ಟ ಸುರರಿಗೆ - ಅಮೃತವನ್ನು ದಾನವರು ಅಪಹರಿಸಿದಾಗ  ಕಂಗೆಟ್ಟಿದ್ದ ದೇವತೆಗಳಿಗೆ, ಸುಧೆಯನುಣಿಸಿದ - ಅಮೃತವನ್ನು ಪಾನ ಮಾಡಿಸುವನು, ಮುರಿದನಹಿತರನು - ತನಗೆ ವಿರೋಧಿಗಳಾದ ದಾನವರ ಅಮೃತಪಾನದ ಆಸೆಯನ್ನು ಮುರಿದು ಅವರನ್ನು ಸಂಹರಿಸಿದನು

ಭಗವ೦ತನ ಕಾರುಣ್ಯವನ್ನು ದಾಸರಾಯರು ಈ ಪದ್ಯದಲ್ಲಿ ವಿವರಿಸುತ್ತಾ, ತನ್ನ ನಿಜಭಕ್ತರು ಜ್ಞಾನಾನುಸ೦ಧಾನದಿ೦ದ ಕೊಟ್ಟ೦ತಹ ನೈವೇದ್ಯ ಪದಾರ್ಥಗಳಲ್ಲಿನ ಸ್ವಾಖ್ಯರಸವನ್ನು ಸ್ವೀಕರಿಸಿ, ಅರೆಕ್ಷಣವಾದರೂ ಭಕ್ತರನಗಲದೆ, ಅವರ ಸತ್ಸಾಧನೆಗೆ ಪ್ರತಿಬ೦ಧಕಗಳಾಗುವ ಅಜ್ಞಾನಾದಿ ದೋಷಗಳನ್ನು ನಿವಾರಣೆ ಮಾಡುತ್ತಾನೆ ಎ೦ದು ತಿಳಿಸಿದ್ದಾರೆ. ಹಾಗೆಯೇ ಭಗವ್ದ್ವೇಷಿಗಳಾದ ದೈತ್ಯರನ್ನು, ಸೂರ್ಯನು ಕತ್ತಲೆಯನ್ನು ನಿಮಿಷಮಾತ್ರದಲಿ ನಿವಾರಿಸುವ ಹಾಗೆ ದೈತ್ಯರೆ೦ಬ ಅ೦ಧಕಾರವನ್ನು ಓಡಿಸುತ್ತಾನೆ. ಜನನ ಮರಣಗಳಿಗೆ ಧಾತುವಾದ ಕರ್ಮಗಳು, ಯಾವತ್ತೂ ಸ೦ಚಿತ ಪಾಪಕರ್ಮಗಳೇ ಆಗಿರುವುದರಿ೦ದ, ಭಕ್ತರ ದುರಿತಗಳ ಅರಣ್ಯಕ್ಕೆ ಭಗವ೦ತನು ಅಗ್ನಿಸದೃಶನಾಗುತ್ತಾನೆ.  ಪರಮಾತ್ಮನ ಕೂರ್ಮಾವತಾರದಲ್ಲಿ ದೇವತೆಗಳು ಮ೦ದರ ಪರ್ವತವನ್ನು ತನ್ನ ಬೆನ್ನ ಮೇಲೆ ಹೊರಿಸಿದರೂ ಕೂಡ, ಭಗವ೦ತನು ಕೋಪಗೊಳ್ಳದೆ, ಅವರಿಗೆ ಅಮೃತಪಾನವನ್ನೇ ಮಾಡಿಸುತ್ತಾನೆ. ಆದರೆ ದೈತ್ಯರು ಎಷ್ಟೇ ಕಷ್ಟದಿ೦ದ ಪ್ರಯತ್ನ ಪಟ್ಟರೂ ಕೂಡ ಅವರನ್ನು ಅಮೃತದಿ೦ದ ವ೦ಚಿಸಿ ಅವರ ಅಭಿಲಾಷೆಯನ್ನು ಭ೦ಗಗೊಳಿಸುತ್ತಾನೆ. 

ಕೊಟ್ಟುದನು ಕೈಕೊಂಬ -   
ಜಗತ್ಕಾರಣನಾದ ಭಗವ೦ತನಿ೦ದಲೇ ಸಕಲ ಚರಾಚರಾವಸ್ತುಗಳು ನಿರ್ಮಿಸಲ್ಪಟ್ಟಿದ್ದು, ಅದರ ಉಪ ಭೋಗವನ್ನು ನಾವು ಪಡೆಯುತ್ತಿದ್ದೇವೆ.  ಈಶಾವಾಸ್ಯೋಪನಿಷತ್‍ನಲ್ಲಿ "ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್" - ಜಗತ್ತೆಲ್ಲವನ್ನೂ ಭಗವಂತನು ತನ್ನ ಪ್ರವೃತ್ತಿಗಾಗಿ ಸೃಷ್ಟಿಸಿದ್ದಾನೆಂದು ತಿಳಿಸಲಾಗಿದೆ.  ಒಳಗೆ ಪ್ರೇರಕನಾಗಿ ಭಗವಂತನಿಲ್ಲದಿದ್ದರೆ ಜಗತ್ತಿನ ಒಂದು ಹುಲ್ಲು ಕಡ್ಡಿಯೂ ಕೂಡ ಪ್ರವರ್ತಿಸಲಾರದು ಎಂದೂ ಮತ್ತು "ಈಶಸ್ಯ ಆವಾಸಯೋಗ್ಯಂ ಈಶಾವಾಸ್ಯಂ | ಜಗತ್ಯಾಂ ಪ್ರಕೃತೌ " - ಪ್ರಕೃತಿಯಲ್ಲಿ ಈಶನ ಆವಾಸಕ್ಕೆ ಅರ್ಹವಾದುದು ಈಶಾವಾಸ್ಯವು ಎಂಬ ಉಲ್ಲೇಖವಿದೆ.  ಇದರರ್ಥವು ಸಕಲ ಚರಾಚರ ವಸ್ತುಗಳಲ್ಲೂ ಭಗವಂತನೇ ನೆಲೆಸಿದ್ದಾನೆ.  ಎಲ್ಲವೂ ಅವನ ಆವಾಸವೇ ಆಗಿದೆ ಎಂದಾಗಿದೆ.  ಹೀಗೆ ಎಲ್ಲವನ್ನೂ ಭಗವಂತನೇ ಕೊಟ್ಟಿರುವಾಗ, ಎಲ್ಲದರಲ್ಲೂ ಅವನೇ ನೆಲೆಸಿರುವಾಗ,  ನಮ್ಮ ಬಳಿಯಲ್ಲಿ ಅವನಿಗಾಗಿ ಕೊಡುವುದಕ್ಕೆ ಅವನದಲ್ಲದೇ ಇರುವ ಯಾವ ವಸ್ತುವೂ ಇಲ್ಲ.   ಸರ್ವವ್ಯಾಪ್ತನಾದ ಭಗವಂತನು ತಾನೇ ನಮಗೆ ಮೊದಲು ಕೊಟ್ಟಿದ್ದರೂ ಅದನ್ನೇ ನಾವು ಮರಳಿ ಅವನಿಗರ್ಪಿಸಿದಾಗ ಆನಂದದಿಂದ ಸ್ವೀಕರಿಸುತ್ತಾನೆ.  ನಮ್ಮದೇ ಎಂಬಂತಹ ಸ್ವಂತದ್ದು ಯಾವುದೂ ಇಲ್ಲದಿರುವುದರಿಂದ ನಾವು ಭಗವಂತನಿಗೆ ನಮ್ಮನ್ನೇ, ನಮ್ಮ ಆತ್ಮವನ್ನೇ ಸಮರ್ಪಣೆ ಮಾಡಿಕೊಳ್ಳಬೇಕು.  ಅದೂ ಕೂಡ ಅವನ ಕಾರುಣ್ಯದಿಂದಲೇ ಬಂದಿರುವುದು.  ಶ್ರೀ ಪುರಂದರದಾಸರು ಹೇಳಿದಂತೆ "ಕೆರೆಯ ನೀರನು ಕೆರೆಗೇ ಚೆಲ್ಲಬೇಕು" ಅನ್ಯಥಾ ಉಪಯೋಗಿಸಿ, ವ್ಯರ್ಥ ಮಾಡುವ ಅಧಿಕಾರ ಜೀವನಿಗೆ ಇರುವುದಿಲ್ಲ.  ಹರಿಯ ಕರುಣದೊಳಾದ ಭಾಗ್ಯವನ್ನು ಹರಿಗೇ ಸಮರ್ಪಣೆ ಮಾಡಬೇಕು.  ಸಮರ್ಪಿಸುವ ವಸ್ತು ಯಾವುದೇ ಆಗಿದ್ದರೂ ಕೂಡ ಅದರ ಹಿಂದಿನ ಭಾವ ಮಾತ್ರ ಶುದ್ಧವಾಗಿರಬೇಕು.  ಭಕ್ತಿಯಿಂದ, ಶ್ರದ್ಧೆಯಿಂದ ಭಗವಂತ ನಮಗಾಗಿ ಕೊಟ್ಟದ್ದನ್ನು ನಾವು ಅವನಿಗೆ ಹಿಂತಿರುಗಿಸುವಾಗ ಶುದ್ಧ ಮನಸ್ಸಿನಿಂದ ಸಮರ್ಪಿಸಬೇಕು.  ಭಗವಂತನಿಗೆ ಭಕ್ತರಿಂದ ಯಾವ ನಿರೀಕ್ಷೆಯೂ ಇಲ್ಲ.  ಅವನನ್ನು ಸುಪ್ರೀತಗೊಳಿಸಲು ದುಬಾರಿ ಬೆಲೆಯ ಯಾವ ವಸ್ತುಗಳನ್ನೂ ಕೊಡಬೇಕಾಗಿಲ್ಲ.  ಇಲ್ಲಿ ವಸ್ತು ಮುಖ್ಯವಾಗುವುದಿಲ್ಲ ಅದರ ಹಿಂದಿರುವ ಭಾವವೇ ಮುಖ್ಯವಾಗುತ್ತದೆ.  ಶ್ರದ್ಧೆಯಿಂದ, ಭಕ್ತಿಯಿಂದ ಭಗವಂತನಿಗೆ ಒಂದೇ ಒಂದು ದಳ ಶ್ರೀತುಳಸಿಯನ್ನೂ, ಒಂದು ಬಿಂದು ಗಂಗೋದಕವನ್ನು ಕೊಟ್ಟರೂ ಸಾಕು.  ಅತ್ಯಂತ ಕರುಣೆಯಿಂದ ಸ್ವೀಕರಿಸಿ ರಕ್ಷಿಸುತ್ತಾನೆ ಎಂದು ಶ್ರೀ ಪುರಂದರದಾಸರು ತಮ್ಮ "ಹೂವ ತರುವರ ಮನೆಗೆ ಹುಲ್ಲ ತರುವ" ಎಂಬ ಕೃತಿಯಲ್ಲಿ ತಿಳಿಸಿದ್ದಾರೆ.  ಸರ್ವವ್ಯಾಪ್ತನಾದ ಭಗವಂತನು ಕೊಟ್ಟಿರುವ ಎಲ್ಲವನ್ನೂ ಅವನಿಗೇ ಸಮರ್ಪಿಸಬೇಕೆಂಬುದನ್ನು ಶ್ರೀ ವಿಜಯದಾಸರು ತಮ್ಮ ಒಂದು ಸುಳಾದಿಯಲ್ಲಿ
ನೀನಿತ್ತ ಸುಕೃತವೊ ನೀನಿತ್ತಾಗ್ರಜನನ
ನೀನಿತ್ತ ಸೌಭಾಗ್ಯ ನೀನಿತ್ತ ಪದವಿ
ನೀನಿತ್ತ ಸತಿಸುತರು ನೀನಿತ್ತ ಸಂಬಂಧ
ನೀನಿತ್ತ ತುರಗಾದಿ ಸಕಲ ಒಡವೆ
ನಾನು ಭುಂಜಿಸಿ ನಿನಗೆ ಅರ್ಪಿಸುವೆ ಎಂದಿದ್ದಾರೆ.
ಭಾಗವತ ದಶಮಸ್ಕಂದ ೮೧ನೆಯ ಅಧ್ಯಾಯದ ೩ನೇ ಶ್ಲೋಕದಲ್ಲಿ "ಅಣ್ವಪ್ಯುಪಾಹೃತಂ ಭಕ್ತೈಃ ಪ್ರೇಮ್ಣಾ ಭೂರ್ಯೇವ ಮೇ ಭವೇತ್" - ಭಕ್ತರು ಪ್ರೇಮ ಪೂರ್ವಕವಾಗಿ ತರುವ ಅತ್ಯಲ್ಪವಾದ ಕಾಣಿಕೆಯನ್ನೂ ಕೂಡ ನಾನು ಅಪಾರವಾದ ಅನರ್ಘ್ಯವಾದ ಕಾಣಿಕೆಯೆಂದು ಸ್ವೀಕರಿಸುತ್ತೇನೆ ಎಂದಿದ್ದಾನೆ.  ಹಾಗೇ ಮುಂದಿನ ೪ನೆಯ ಶ್ಲೋಕದಲ್ಲಿ
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ | ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ || - ಭಕ್ತಿಯಿಂದ ಒಂದೇ ಒಂದು ಪತ್ರೆಯನ್ನಾಗಲಿ, ಪುಷ್ಪವನ್ನಾಗಲೀ, ಫಲವನ್ನಾಗಲೀ, ಜಲವನ್ನಾಗಲೀ ಅರ್ಪಿಸಿದರೆ ಅಂತಹ ಭಕ್ತನ ಶುದ್ಧಾಂತಃಕರಣವಾದ ಪ್ರೇಮೋಪಹಾರವನ್ನು ಸ್ವೀಕರಿಸುತ್ತೇನೆ ಮತ್ತು ಆದರದಿಂದ ಸೇವಿಸುತ್ತೇನೆ ಎಂದಿದ್ದಾನೆ.  ಸುಧಾಮನ ಒಂದು ಹಿಡಿ ಅವಲಕ್ಕಿ, ಗಜೇಂದ್ರನ ಒಂದು ಪುಷ್ಪವನ್ನೇ ಸ್ವೀಕರಿಸಿ ಉದ್ಧರಿಸಿದವನ ಕಾರುಣ್ಯಕ್ಕೆ ಯಾವ ಎಣೆಯೂ ಇಲ್ಲ.  ನಾವು ಮನದೊಳಗೇ ಸುಂದರ ಪದಾರ್ಥಗಳನ್ನು ಕಲ್ಪಿಸಿಕೊಂಡು ಅದನ್ನು ಸಮರ್ಪಿಸಿದರೂ ಕೂಡ ಶ್ರೀಹರಿ ಸಂತುಷ್ಟನಾಗುತ್ತಾನೆ.  ಆ ಕಲ್ಪನೆ ಕೂಡ ಅವನ ಕಾರುಣ್ಯದಿಂದಲೇ ಬಂದಿದ್ದೆಂಬುದನ್ನು ತಿಳಿಯಬೇಕಷ್ಟೆ. 

ಅರೆಕ್ಷಣ ಬಿಟ್ಟಗಲ ತನ್ನವರ - ದಾಸರಾಯರು ಭಗವಂತನು ತನ್ನ ಭಕ್ತರನ್ನು ಒಂದರೆಕ್ಷಣವೂ ಬಿಟ್ಟು ಅಗಲದೆ ಕಾಪಾಡುತ್ತಾನೆಂಬುದನ್ನು ಅನೇಕ ವಿಧದಲ್ಲಿ, ವಿವಿಧ ದೃಷ್ಟಾಂತಗಳೊಂದಿಗೆ ವಿವರಿಸುತ್ತಲೇ ಬಂದಿದ್ದಾರೆ.  ಒಮ್ಮೆ ’ಆಗಸವೋಲೆತ್ತ ನೋಡಿದರೂ’ ಎನ್ನುತ್ತ ಹಿಂದೆ-ಮುಂದೆ, ಒಳಗೆ-ಹೊರಗೆ, ಎಡ-ಬಲದಿ ಇಂದಿರೇಶನಿದ್ದು ರಕ್ಷಿಸುತ್ತಾನೆನ್ನುತ್ತಾರೆ.  ಇನ್ನೊಮ್ಮೆ ’ಒಡಲ ನೆಳಲಂದದಲಿ ಹರಿ ನಮ್ಮೊಡನೆ ತಿರುಗುವ ಒಂದರೆಕ್ಷಣ ಬಿಡದೆ’ ಎನ್ನುತ್ತಾರೆ.   ಇಲ್ಲಿ ’ಅರೆಕ್ಷಣ ಬಿಟ್ಟಗಲ ತನ್ನವರ’ ಎಂಬ ಮಾತನ್ನು ಮತ್ತೆ ಹೇಳುವುದು, ಶ್ರೀಹರಿಯ ಪರಮ ಕಾರುಣ್ಯವನ್ನು ಅದೆಷ್ಟು ಕೊಂಡಾಡಿದರೂ ಸಾಲದು ಎಂಬ ಭಾವನೆಯಿಂದ  ಮಾತ್ರವೇ ಆಗಿದೆ. 
ಶ್ರೀ ಪುರಂದರ ದಾಸರು ತಮ್ಮ "ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ" ಎಂಬ ಕೃತಿಯಲ್ಲಿ ’ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು, ನಿಶೆ ಹಗಲು ಶ್ರೀಹರಿಯ ನೆನೆಯಬೇಕು’ ಎಂದಿದ್ದಾರೆ.  ಯಾರು ಹೀಗೆ ಭಗವಂತನನ್ನು ಸರ್ವದಾ ನೆಚ್ಚಿ ನೆನೆಯುತ್ತಾರೋ ಅವರನ್ನು ತಾನೇ ಸ್ವತಃ ರಕ್ಷಿಸುತ್ತೇನೆಂದು ಶ್ರೀಕೃಷ್ಣನು ಭಗವದ್ಗೀತೆಯ ೯ನೆಯ ಅಧ್ಯಾಯದ ೨೨ನೆಯ ಶ್ಲೋಕದಲ್ಲಿ
ಅನನ್ಯಾಶ್ಚಿನ್ತಯನ್ತೋ ಮಾಂ ಯೇ ಜನಾಃ ಪರ್ಯುಪಾಸತೇ | ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ || - "ಯಾವ ಅನ್ಯ ಚಿಂತೆಯನ್ನೂ ಮಾಡದೆ ಒಂದೇ ಮನಸ್ಸಿನಿಂದ ಯಾರು ನನ್ನನ್ನು ಪೂಜಿಸುತ್ತಾ, ಸಂಕೀರ್ತನೆ ಮಾಡುತ್ತಾ, ಸ್ಮರಣೆ ಮಾಡುತ್ತಾ, ಪ್ರಾರ್ಥನೆ ಮಾಡುತ್ತಾ, ಚರಣಕಮಲಗಳನ್ನು ಸೇವಿಸುತ್ತಾ, ಸ್ನೇಹವನ್ನು ಬೆಳೆಸಿಕೊಳ್ಳುತ್ತಾ ಸಂಪೂರ್ಣವಾಗಿ ಶರಣಾಗುತ್ತಾರೋ, ಅಂತಹ ನಿತ್ಯಯುಕ್ತರ ಯೋಗಕ್ಷೇಮವನ್ನು ನಾನೇ ವಹಿಸಿಕೊಳ್ಳುತ್ತೇನೆ" ಎಂದು ತಿಳಿಸಿದ್ದಾನೆ.

ದುರಿತಗಳಟ್ಟುವನು ದೂರದಲಿ - ಭಗವಂತನಿಗೆಂದು ಕೊಡಲು ಭಕ್ತರಿಗೆ ತಮ್ಮದೇ ಎಂಬ ಯಾವುದೇ ವಸ್ತುವಿಲ್ಲ. ಅದಕ್ಕೆಂದೇ ಭಗವಂತನು ಮೊದಲು ತಾನೇ ಭಕ್ತರಿಗೆ ಕೊಡುತ್ತಾನೆ ಮತ್ತು ತಾನು ಕೊಟ್ಟದ್ದನ್ನೇ ಅನುಭವಿಸು ಎನ್ನುತ್ತಾನೆ.   ಈಶಾವಾಸ್ಯೋಪನಿಷತ್ತಿನಲ್ಲಿ "ತೇನ ಈಶೇನ ತ್ಯಕ್ತೇನ ದತ್ತೇನ ಭುಂಜೀಥಾಃ" -  ತೇನ ಎಂದರೆ ಈಶನಿಂದ ಮತ್ತು ತ್ಯಕ್ತೇನ ಎಂದರೆ ಕೊಡಲ್ಪಟ್ಟಿದ್ದರಿಂದ ಭುಂಜೀಥಾಃ ಎಂದರೆ ಅನುಭವಿಸು  ಎಂಬ ಉಲ್ಲೇಖವಿದೆ.  ಇದರರ್ಥವು ಭಗವಂತನು ಕೊಟ್ಟದ್ದನ್ನು ನಾವು ಉಣ್ಣಬೇಕು, ಆದರೆ ಉಣ್ಣುವುದಕ್ಕೆ ಮೊದಲು ಅದನ್ನು ಅವನಿಗೇ ಸಮರ್ಪಿಸಬೇಕು.  ನೈವೇದ್ಯಕ್ಕೆಂದು ಇಟ್ಟ ಪ್ರತಿಯೊಂದು ಪದಾರ್ಥಗಳಲ್ಲೂ ಭಗವಂತನ ಅನೇಕ ವಿಭೂತಿ ರೂಪಗಳ ಸನ್ನಿಧಾನವಿರುತ್ತದೆ.  ಆ ರೂಪಗಳನ್ನು ಭಕ್ತಿಯಿಂದ ನೆನೆಯುತ್ತಾ, ಆ ಪದಾರ್ಥಗಳಿಗೆ ಬದ್ಧರಾದ ಅಭಿಮಾನಿ ದೇವತೆಗಳನ್ನು ಸ್ಮರಿಸಿ ಸಮರ್ಪಣೆ ಮಾಡಬೇಕು.  ಭಗವದರ್ಪಣೆಯಾದದ್ದನ್ನು ನಾವು ಪ್ರಸಾದವೆಂದು ಸ್ವೀಕರಿಸಬೇಕು.  ಹೀಗೆ ಭಗವಂತನ ಪ್ರಸಾದವನ್ನು ಉಣ್ಣುವವರ ದುರಿತಗಳು ಪರಿಹಾರವಾಗುತ್ತವೆ ಎಂದರ್ಥವಾಗುತ್ತದೆ.  ಭಗವದ್ಗೀತೆಯ ೩ನೆಯ ಅಧ್ಯಾಯದ ೧೩ನೆಯ ಶ್ಲೋಕದಲ್ಲಿ
"ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ" - ಯಜ್ಞಮಾಡಿ ಉಳಿದ ಅನ್ನವನ್ನು ಪ್ರಸಾದವೆಂದು ಸೇವಿಸುವ ಶ್ರೇಷ್ಠ ಪುರುಷರು ಎಲ್ಲಾ ಪಾಪಗಳಿಂದಲೂ ಮುಕ್ತರಾಗುತ್ತಾರೆ ಎಂದು ಭಗವಂತನೇ ತಿಳಿಸಿದ್ದಾನೆ.  ತನ್ನ ಭಕ್ತರುಗಳು ತಮ್ಮ ಪಾಪಗಳನ್ನು ಪರಿಹಾರ ಮಾಡಿಕೊಳ್ಳಲೆಂದೇ ಭಗವಂತನು ಏನೂ ಇಲ್ಲದ ಭಕ್ತನಿಗೆ ಎಲ್ಲವನ್ನೂ ಕೊಡುತ್ತಾನೆ.  ಕೊಟ್ಟುದನ್ನು ಮರಳಿ ತನಗರ್ಪಿಸಲಿಯೆಂದು ಕೇಳುತ್ತಾನೆ.  ಹೀಗೆ ಕೊಟ್ಟ ಅಲ್ಪವನ್ನು ಸ್ವೀಕರಿಸಿ, ಬೆಟ್ಟದಷ್ಟು ದುರಿತಗಳನ್ನು ಪರಿಹರಿಸಿ ಉದ್ಧರಿಸುತ್ತಾನೆ.  ಭಗವದರ್ಪಣೆ ಮಾಡುವ ವಸ್ತುಗಳಲ್ಲಿನ ಸ್ವಾಖ್ಯ ರಸವನ್ನಷ್ಟೇ ಸ್ವೀಕರಿಸಿ, ಭಗವಂತನು ಮಿಕ್ಕದ್ದನ್ನು ನಮಗೇ ಬಿಟ್ಟುಬಿಡುತ್ತಾನೆ.  ಅವನು ಸ್ವಾಖ್ಯರಸ ಸ್ವೀಕರಿಸಿ ಬಿಟ್ಟದ್ದೇ ನಮಗೆ ಅಮೃತವಾಗುತ್ತದೆ. 
ದಾಸರಾಯರು ತತ್ವಸುವ್ವಾಲಿಯಲ್ಲಿ ಸಂಪೂರ್ಣ ಹರಿಗರ್ಪಿತವಾದ ಬದುಕು, ಶರೀರವೆಂದರೆ ಹೇಗಿರಬೇಕೆಂಬುದನ್ನು
ನಡೆವುದೇ ಹರಿಯಾತ್ರೆ ನುಡಿವುದೇ ಹರಿನಾಮ
ಕುಡಿವ ನೀರುಗಳೆ ಅಭಿಷೇಕ | ಅಭಿಷೇಕ ದಿನದಿನದಿ
ಒಡಲಿಗುಂಬನ್ನ ನೈವೇದ್ಯ || - ಎಂದು ತಿಳಿಸುತ್ತಾ, ಭಗವಂತನು ಕೊಟ್ಟಿದ್ದನ್ನು ಅವನಿಗೇ ಮರಳಿಸುವ ಸರ್ವ ಸಮರ್ಪಣೆಯ ಮಾರ್ಗ ತೋರಿಸಿದ್ದಾರೆ.

ಶ್ರೀ ಶಂಕರಾಚಾರ್ಯರು ತಮ್ಮ "ಶ್ರೀಕೃಷ್ಣಾಷ್ಟಕಮ್"ನಲ್ಲಿ
ಸಮಸ್ತ ದೋಷಶೋಷಣಂ ಸಮಸ್ತ ಲೋಕ ಪೋಷಣಂ ನಮಾಮಿ ನಂದ ಲಾಲಸಮ್ || - ತನ್ನ ಭಕ್ತರ ದೋಷಗಳನ್ನು ಸದಾ ನಿವಾರಿಸುವ, ಲೋಕ ರಕ್ಷಿಸುವ ಶ್ರೀಕೃಷ್ಣನಿಗೆ ಭಕ್ತಿಯಿಂದ ನಮಿಸುತ್ತೇನೆ ಎಂದಿದ್ದಾರೆ.  ಹಾಗೂ ತಮ್ಮ "ಭಗವನ್ಮಾನಸಪೂಜಾ ಸ್ತೋತ್ರಮ್" ನಲ್ಲಿ ’ತವ ಪ್ರಾದಕ್ಷಿಣ್ಯಕ್ರಮಣ ಮಘವಿಧ್ವಂಸಿ ರಚಿತಂ’ - ನಿನ್ನ ಪ್ರದಕ್ಷಿಣೆಯ ಪ್ರತಿಯೊಂದು ಹೆಜ್ಜೆಯೂ ಪಾಪಗಳನ್ನು ನಿವಾರಿಸುತ್ತದೆ ಮತ್ತು ’ನಮಸ್ಕಾರೋಷ್ಟಾಂಗಃ ಸಕಲದುರಿತ ಧ್ವಂಸನ ಪಟುಃ’ - ಎಲ್ಲಾ ದುರಿತಗಳನ್ನೂ ನಾಶಮಾಡುವ ನಿನಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡುತ್ತಿರುವೆನು ಎಂದು ಸ್ತುತಿಸಿದ್ದಾರೆ.

ಶ್ರೀವಿಜಯದಾಸರು ತಮ್ಮ ಒಂದು ಸುಳಾದಿಯಲ್ಲಿ
ಎಲೊ ಎಲೊ ದುರಿತವೆ ಓಡು ಓಡು ಎನ್ನ
ಬಳಿಯಲ್ಲಿ ಮೊದಲಂತೆ ತಲೆ ಬಲಿತು ನಿಂದೆಯಾದರೆ ನಿನ್ನ
ಕುಲಕೆ ಕ್ಷೇಮವಿಲ್ಲ ಕೈಲೆ ಕಡ್ಡಿಯನಿತ್ತೆ
ಮರೆತವರ ಗಂಡ ಸಿರಿಕೃಷ್ಣ ಕಂಡರೆ ನಿನ್ನ
ತಲೆಯ ಚೆಂಡಾಡುವ ಭೂತ ಬಲಿಯನೀವ
ತಿಳಿದುಕೊ ನಿನ್ನೊಳು ನೀನು ಮೊದಲಂತೆ ನಾನಲ್ಲ
ಸುಲಭ ವಿಜಯವಿಠಲ ಒಲಿದರೆ ಭಯವಿಲ್ಲ || - ಎನ್ನುತ್ತಾ ತನಗೆ ಒಲಿದ ಭಗವಂತನು ನಿನ್ನನ್ನು ಕಂಡರೆ ನಿನ್ನ ತಲೆಯನ್ನು ಚೆಂಡಾಡಿ ಬಿಡುತ್ತಾನೆಂದ ತಮ್ಮನ್ನು ಬೆದರಿಸುವ ದುರಿತಗಳಿಗೆ ಸವಾಲನ್ನೆಸೆಯುತ್ತಾರೆ. ಇದು ಭಗವಂತನಲ್ಲಿ ಭಕ್ತನ ನಿಷ್ಠೆಯ ಉತ್ತುಂಗವನ್ನು ಬಿಂಬಿಸುತ್ತದೆ. 

ದುರಿತಾರಣ್ಯಪಾವಕನು -  ಭಗವಂತನು ಭಕ್ತರ ದುರಿತ ಎಂಬ ಅರಣ್ಯಕ್ಕೆ ಅಗ್ನಿಯಂತಿದ್ದಾನೆ.  ಕಾಡ್ಗಿಚ್ಚು ಇಡೀ ಕಾಡನ್ನೇ ಸುಟ್ಟು ಭಸ್ಮ ಮಾಡುವಂತೆ ಭಗವಂತನು ಭಕ್ತರ ದುರಿತ, ’ಸಂಸಾರ’ವೆಂಬ ಅರಣ್ಯವನ್ನು ಸುಟ್ಟು ಭಸ್ಮ ಮಾಡುತ್ತಾನಾದ್ದರಿಂದಲೇ ಅವನು ದುರಿತಾರಣ್ಯಪಾವಕನಾಗುತ್ತಾನೆ.  ದಾಸರಾಯರು ತಮ್ಮ "ನರಸಿಂಹ ಸುಳಾದಿ"ಯನ್ನು ’ದುರಿತವನ ಕುಠಾರಿ, ದುರ್ಜನ ಕುಲವೈರಿ’ ಎಂಬ ಸಂಬೋಧನೆಯಿಂದಲೇ ಪ್ರಾರಂಭಿಸಿದ್ದಾರೆ.   ತಮ್ಮ  "ನಮೋ ನಮಸ್ತೇ ನರಸಿಂಹ ದೇವಾ ಸ್ಮರಿಸುವವರ ಕಾವಾ" ಕೃತಿಯಲ್ಲಿ ’ತಪನ ಕೋಟಿ ಪ್ರಭಾವ ಶರೀರಾ ದುರಿತೌಘವಿದೂರಾ | ಪ್ರಪಿತಾಮಹ ಮಂದಾರ ಖಳವಿಪಿನ ಕುಠಾರಾ’ ಎನ್ನುತ್ತಾ ಸಕಲ ದುರಿತಗಳ ಪಾವಕನು ಭಗವಂತನೆಂದು ಸ್ತುತಿಸಿದ್ದಾರೆ.  ತಮ್ಮ ಇನ್ನೊಂದು "ನರಸಿಂಹಾ ಪಾಹಿ ಲಕ್ಷ್ಮೀ ನರಸಿಂಹ"  ಎಂಬ ಕೃತಿಯಲ್ಲಿ ’ಜಯಜಯ ದೇವವರೇಣ್ಯ ಮಹದ್ಭಯ ನಿವಾರಣನೆ ಅಗಣ್ಯ ಗುಣಾಶ್ರಯ ಘೋರ ದುರಿತಾರಣ್ಯ ಧನಂಜಯ’..  ಎಂದೆಲ್ಲಾ ಸ್ತುತಿಸಿ ಪಾಡಿದ್ದಾರೆ.

ಭಗವಂತನಲ್ಲಿ ಭಕ್ತಿ ಮಾಡುತ್ತಾ ಅವನ ಗುಣಗಳ ಜ್ಞಾನವನ್ನು ಪಡೆದುಕೊಳ್ಳುವುದರಿಂದಲೇ ಭಕ್ತರ ಸಕಲ ದುರಿತಗಳೂ ಭಸ್ಮವಾಗಿ ಬಿಡುತ್ತದೆಂದು ಭಗವದ್ಗೀತೆಯ ೪ನೆಯ ಅಧ್ಯಾಯದ ೩೭ನೆಯ ಶ್ಲೋಕದಲ್ಲಿ "ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ಕುರುತೇ ತಥಾ" - ಜ್ಞಾನರೂಪೀ ಅಗ್ನಿಯು ಸರ್ವ ಕರ್ಮಗಳನ್ನೂ ಬೂದಿಮಾಡಿ ಬಿಡುತ್ತದೆ ಎಂದು ಭಗವಂತನೇ ತಿಳಿಸಿದ್ದಾನೆ.  ೧೮ನೆಯ ಅಧ್ಯಾಯದ ೬೬ನೆಯ ಶ್ಲೋಕದಲ್ಲಿ "ಅಹಂ ತ್ವಾಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ" - ನಾನು ಮಾತ್ರವೇ ನಿನ್ನನ್ನು ಎಲ್ಲ ಪಾಪಗಳಿಂದ ಬಿಡುಗಡೆಗೊಳಿಸುವವನು ಎಂದೂ ತಿಳಿಸಿದ್ದಾನೆ.

ಶ್ರೀ ಪುರಂದರದಾಸರು ತಮ್ಮ ಒಂದು ಉಗಾಭೋಗದಲ್ಲಿ
ಬೆಟ್ಟದಂಥ ದುರಿತವು ಸುತ್ತಮುತ್ತು ಇರಲಾಗೆ
ಕೃಷ್ಣ ನಾಮದ ಕಿಡಿಬಿದ್ದು ದುರಿತ ಬೇವುದ ಕಂಡೆ
ಎಲೆ ಎಲೆ ದುರಿತವೆ, ನಿಲ್ಲ-ನಿಲ್ಲದೆ ಹೋಗು
ಎಲೆ ಎಲೆ ದುರಿತವೆ, ತಿರುಗಿ ನೋಡದೆ ಹೋಗು
ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು
ಎನ್ನೊಡೆಯ ಪಂಢರಿರಾಯ ಪುರಂದರ ವಿಠಲ ಕಂಡರೆ
ಶಿರವ ಚೆಂಡಾಡುವನು - ತಿರುಗಿ ನೋಡದೆ ಹೋಗು - ಭಗವಂತನ ನಾಮದ ಒಂದು ಕಿಡಿಯೇ ಸಾಕು ಬೆಟ್ಟದಂಥಹ ದುರಿತವನ್ನು ಸುಟ್ಟು ಭಸ್ಮ ಮಾಡಲು ಎನ್ನುತ್ತಾ ಭಗವಂತನು ದುರಿತಾರಣ್ಯಪಾವಕನು ಎಂದು ಸ್ತುತಿಸಿದ್ದಾರೆ.

ಬೆಟ್ಟ ಬೆನ್ನಲಿ ಹೊರಿಸಿದವರಲಿ ಸಿಟ್ಟು ಮಾಡಿದನೇನೋ - ದಾಸರಾಯರು ಇಲ್ಲಿ ಭಗವಂತನ ಕೂರ್ಮಾವತಾರದ ವಿಚಾರವನ್ನು ತಿಳಿಸಿದ್ದಾರೆ.  ಜ್ಞಾನ, ದಾನಾದಿಗಳನ್ನು ಮಾಡುತ್ತಾ, ಸದಾ ಭಗವಂತನ ಧ್ಯಾನವನ್ನೇ ಮಾಡುವ ದೇವತೆಗಳು ತಮ್ಮ ಪ್ರಾರಬ್ಧವಶದಿಂದ ಏನಾದರೂ ಅಪರಾಧಗಳನ್ನು ಮಾಡಿದರೆ, ಭಗವಂತನು ಸಿಟ್ಟು ಮಾಡುವುದಿಲ್ಲ,  ಅವರನ್ನು ಕ್ಷಮಿಸಿಬಿಡುತ್ತಾನೆ.  ಸಮುದ್ರ ಮಥನದ ಕಾಲದಲ್ಲಿ ಮಂದರಪರ್ವತ ಕ್ಷೀರಸಾಗರದಲ್ಲಿ ಮುಳುಗಿದಾಗ, ದೇವತೆಗಳು ಕಂಗೆಟ್ಟು ಶ್ರೀಹರಿಯನ್ನು ಪ್ರಾರ್ಥಿಸಿದರು.  ಕೂರ್ಮರೂಪಿಯಾದ ಭಗವಂತನ ಬೆನ್ನಮೇಲೆ ಬೆಟ್ಟವನ್ನು ಹೊರೆಸಿ,  ಸಮುದ್ರಮಥನವನ್ನು ಮಾಡಿದರು.  ಭಗವಂತನು ಕೋಪಿಸಿಕೊಳ್ಳದೇ, ಅಮೃತವನ್ನು ಅಸುರರು ಅಪಹರಿಸಿಬಿಟ್ಟಾಗ, ಮೋಹಿನಿ ಅವತಾರವನ್ನು ತಳೆದು, ದೇವತೆಗಳಿಗೆ ತನ್ನ ಸ್ವಹಸ್ತದಿಂದಲೇ ಅಮೃತವನ್ನು ಪಾನ ಮಾಡಿಸಿದ.  ಮತ್ತೊಂದು ದೃಷ್ಟಾಂತವಾಗಿ ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿ ಹಿಡಿದ ಪ್ರಸಂಗವು ಭಾಗವತದಲ್ಲಿ ಉಲ್ಲೇಖಿತವಾಗಿದೆ.  ಗೋಕುಲವಾಸಿಗಳು ಶ್ರೀಕೃಷ್ಣನ ಆದೇಶದ ಮೇರೆಗೆ ಗೋ-ಬ್ರಾಹ್ಮಣ-ಪರ್ವತಗಳ ಪೂಜೆಯನ್ನು ಮಾಡಿದರು.  ತನಗೆ ಪೂಜೆಯಾಗಲಿಲ್ಲವೆಂಬ ಕೋಪದಲ್ಲಿ, ಅಹಂಕಾರದಿಂದ ಇಂದ್ರದೇವನು ಒನಕೆ ಗಾತ್ರದ ಹನಿಗಳಿಂದ ೭ ದಿನಗಳ ಕಾಲ ಮಳೆಸುರಿಸಿದನು.  ಭಗವಂತನು ತನ್ನ ಕಿರಿಬೆರಳಿನಲ್ಲಿಯೇ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದು ಸಮಸ್ತ ಗೋಪಾಲಕರನ್ನೂ, ಗೋವುಗಳನ್ನೂ ರಕ್ಷಿಸಿದನು.  ಇಂದ್ರದೇವನು ತನ್ನ ಅಹಂಕಾರವನ್ನು ಕಳೆದು ಭಗವಂತನಲ್ಲಿ ಶರಣಾಗತನಾಗಿ
ನಮಸ್ತುಭ್ಯಂ ಭಗವತೇ ಪುರುಷಾಯ ಮಹಾತ್ಮನೇ | ವಾಸುದೇವಾಯ ಕೃಷ್ಣಾಯ ಸಾತ್ವತಾಂ ಪತಯೇ ನಮಃ || - ಸರ್ವಾಂತರ್ಯಾಮಿಯಾದ ಪರಮ ಪುರುಷನಾದ ವಾಸುದೇವನಿಗೆ ನಮಿಸುವೆ ಎಂದು ಸ್ತುತಿಸಿದಾಗ ಭಗವಂತನು ಇಂದ್ರದೇವನ ಅಪರಾಧವನ್ನು ಕ್ಷಮಿಸಿ ಅವನಿಗೆ ಅಭಯವನ್ನಿತ್ತನು.  ಹೀಗೆ ತನ್ನ ಭಕ್ತರು ಅಪರಾಧಗಳನ್ನು ಮಾಡಿದಾಗಲೂ ಭಗವಂತನು ಸಿಟ್ಟುಗೊಳ್ಳದೆ, ಅವರನ್ನು ಕ್ಷಮಿಸಿ, ಅಪರಾಧದ ಅರಿವು ಮೂಡಿಸಿ ರಕ್ಷಿಸುತ್ತಾನೆ ಎಂದರ್ಥವಾಗುತ್ತದೆ.
ಶ್ರೀ ಪುರಂದರದಾಸರು  "ಮಂದರಧರ ದೇವ ಮೊರೆಹೊಕ್ಕವರ ಕಾಯ್ವ" ಎನ್ನುತ್ತಾ ಕೂರ್ಮಾವತಾರಿ ಭಗವಂತನು ಶರಣಾದವರನ್ನು ಸದಾ ರಕ್ಷಿಸುತ್ತಾನೆಂದು ಭರವಸೆ ಕೊಡುತ್ತಾ ’ಗೋಚರನಂದದಲಿ - ಗಿರಿಯ ತಾಳಿದೆ ಬೆನ್ನಿನಲಿ’ ಎಂದು ಸ್ತುತಿಸಿದ್ದಾರೆ.

ಶ್ರೀಬನ್ನಂಜೆ ಗೋವಿಂದಾಚಾರ್ಯರು ಬೆಟ್ಟ ಬೆನ್ನಲಿ ಹೊರಿಸುವುದನ್ನು ಒಂದು ವಿಚಾರಾತ್ಮಕ ಕೋನದಿಂದ ವಿಶ್ಲೇಷಣೆ ಮಾಡಿದ್ದಾರೆ.   ಪ್ರತಿಯೊಬ್ಬ ಸಾಧಕ ಭಕ್ತನೂ ಭಗವಂತನ ಬೆನ್ನಲ್ಲಿ ಬೆಟ್ಟವನ್ನು ಪ್ರತಿದಿನವೂ ಹೊರಿಸುತ್ತಲೇ ಇದ್ದಾನೆ ಎಂದು ತಿಳಿಸಿದ್ದಾರೆ.  ಸಮುದ್ರಮಂಥನವನ್ನು ನಮ್ಮ ಅಂತರಂಗದ ಮಂಥನವೆಂಬ ದೃಷ್ಟಿಕೋನದಿಂದ ನೋಡಿದಾಗ ಮಂದರ ಪರ್ವತವು ನಮ್ಮ ಮನಸ್ಸೆಂದಾಗುತ್ತದೆ.  ಶಾಸ್ತ್ರಾಧ್ಯಯನವನ್ನು ಮಾಡಿ, ಅದನ್ನು ನಮ್ಮ ಅಂತರಂಗಕ್ಕಿಳಿಸಿಕೊಂಡು, ಅದನ್ನು ಮನಸ್ಸೆಂಬ ಮಂದರದಿಂದ ಮಂಥನ ಮಾಡಬೇಕು.  ಮಂದರಪರ್ವತವನ್ನು ಮುಳುಗದ ಹಾಗೆ ಸ್ಥಿತಿಗೊಳಿಸಿದಂತೆ ನಮ್ಮ ಮನಸ್ಸು ಕೂಡ ಮುಳುಗದೇ ಇರುವಂತೆ, ಓಲಾಡದೆ ಸ್ಥಿರವಾಗಿ ನಿಲ್ಲಬೇಕೆಂದರೆ ಅದಕ್ಕೆ ಭಗವಂತನ ಕರುಣೆಯೆಂಬ ಬೆನ್ನು ಆಸರೆಯಾಗುತ್ತದೆ.  ಕೂರ್ಮಾವತಾರಿ ಭಗವಂತನ ಬೆನ್ನಮೇಲೆ ನಮ್ಮ ಮನಸ್ಸೆಂಬ ಮಂದರಪರ್ವತವನ್ನು ಹೊರಿಸಿದರೂ ಕೂಡ ಭಗವಂತನು ಸಿಟ್ಟು ಮಾಡುವುದಿಲ್ಲ.   ಮಜ್ಜಿಗೆಯನ್ನು ಕಡೆದು ನವನೀತವನ್ನು ತೆಗೆವಂತೆ, ನಮ್ಮೊಳಗೆ ಶಾಸ್ತ್ರದ ಮಂಥನ ನಡೆದು, ಒಳಗಿನ ಶುದ್ಧಾಂತಃಕರಣವು ಪುಟಿದೇಳಬೇಕು.  ಭಗವಂತನೆಡೆಗಿನ ಭಕ್ತಿಯು ಬೆಣ್ಣೆಯಂತೆ ಶುದ್ಧವಾಗಿ, ತೇಲಬೇಕು.  ಹೀಗೆ ಅಂತರಂಗದ ಮಂಥನವನ್ನು ಮನಸ್ಸಿನಿಂದ ಮಾಡಬೇಕೆಂದರೆ, ಅದಕ್ಕೆ ಭಗವಂತನ ಕರುಣೆ ಬೇಕೇಬೇಕು.  ಮನಸ್ಸೆಂಬ ಬೆಟ್ಟ ಭದ್ರವಾಗಿ ನಿಲ್ಲಲು ಭಗವಂತನ ಬೆನ್ನು ಆಧಾರವಾಗಿ ನಿಲ್ಲಬೇಕು.  ಸಾಧನೆಯ ಹಾದಿಯಲ್ಲಿರುವ ಸಾಧಕರು ಹೀಗೆ ತಮ್ಮ ಮಂದರಪರ್ವತ (ಮನಸ್ಸು)ವನ್ನು ಪ್ರತಿದಿನವೂ  ಭಗವಂತನ ಬೆನ್ನ ಮೇಲೆ ಹೊರಿಸುತ್ತಾರೆ.

ಹರಿ ಕಂಗೆಟ್ಟ ಸುರರಿಗೆ ಸುಧೆಯನುಣಿಸಿದ -  ಸಮುದ್ರಮಥನದಿಂದ ಬಂದ ಅಮೃತವನ್ನು ಅಸುರರು ಅಪಹರಿಸಿದಾಗ, ಸುರರಾದ ದೇವತೆಗಳು ಕಂಗೆಟ್ಟಿದ್ದರು.  ಮೋಹಕವಾದ ಸ್ತ್ರೀವೇಷವನ್ನು ಧರಿಸಿ ಶ್ರೀಹರಿ ಅಸುರರಿಂದ ಅಮೃತವನ್ನು ಪಡೆದುಕೊಂಡು ಸುರರಿಗೆ ಸ್ವತಃ ಉಣಿಸಿ, ರಕ್ಷಿಸಿದ.  ಕುರುಕ್ಷೇತ್ರ ಯುದ್ಧದಲ್ಲಿ ತನ್ನ ಬಂಧು ಬಾಂಧವರನ್ನು ಯುದ್ಧ ಭೂಮಿಯಲ್ಲಿ ಕಂಡು ಅರ್ಜುನ ಯುದ್ಧ ಮಾಡಲ್ಲೊಲ್ಲದೆ, ಬಿಡಲೂ ಆಗದೆ ಕಂಗೆಟ್ಟಾಗ, ಶ್ರೀಕೃಷ್ಣನು  ’ಗೀತೋಪದೇಶ’ದ ಸುಧೆಯನ್ನು ಉಣಿಸಿದನು.  ಅರ್ಜುನನು ಶಸ್ತ್ರಹಿಡಿಯುವಂತೆ ಮಾಡಿ, ಕೌರವರ ಸೈನ್ಯವನ್ನು ನಾಶ ಮಾಡಿಸಿದನು.  ಭಗವಂತನು ತಾನು ಶ್ರೀಕೃಷ್ಣನಾಗಿ ಅವತಾರ ಮಾಡಿದ ಕಥೆಯನ್ನು ಶುಕಾಚಾರ್ಯರು ಪರೀಕ್ಷಿತ್ ರಾಜನಿಗೆ  ಹೇಳುವಂತೆ ಮಾಡಿ, ಭಕ್ತಜನರಿಗೆ ’ಭಾಗವತ’ದ ಸುಧೆಯನ್ನು ಉಣಿಸಿದನು.  ಹೀಗೆ ಭಗವಂತನು ಸದಾಕಾಲವೂ ಅಮೃತವನ್ನು ಉಣಿಸುತ್ತಾ ಕಂಗೆಟ್ಟ ಸುರರನ್ನು ರಕ್ಷಿಸುತ್ತಲೇ ಇದ್ದಾನೆಯೆಂದು ತಿಳಿಯಬಹುದು.  ಭಗವಂತನು ಯಾರು ಶ್ರೀಕೃಷ್ಣನ ಕಥೆಯನ್ನು ಕೇಳುವರೋ, ಓದುವರೋ ಅವರೆಲ್ಲರಿಗೂ ದುರಿತಗಳ ಪರಿಹಾರ ಮಾಡಿ,   ಶಾಶ್ವತ ಸುಖವಾದ ಮೋಕ್ಷವನ್ನೇ ಕೊಟ್ಟು ಉದ್ಧರಿಸುತ್ತಾನೆಂದು ಭಾಗವತದಲ್ಲಿ ಉಲ್ಲೇಖವಿದೆ.

ಮುರಿದನಹಿತರನು - ಅಹಿತರು ಎಂದರೆ ದಾನವರು, ಭಗವಂತನಲ್ಲಿ ಭಕ್ತಿ ಮಾಡದವರು ಎಂದಾಗುತ್ತದೆ.  ಅಮೃತ ಬಂದ ಘಳಿಗೆಯಲ್ಲಿ ಅದನ್ನು ಅಪಹರಿಸಿ, ಸುರರನ್ನು ಕಂಗೆಡಿಸಿದ್ದ ಅಹಿತರಾದ ದಾನವರನ್ನು ಭಗವಂತನು ಸಂಹರಿಸಿದನು (ಮುರಿದನು).  ಯುದ್ಧಭೂಮಿಯಲ್ಲಿ ಕಂಗೆಟ್ಟು ನಿಂತ ಅರ್ಜುನನಿಗೆ ಗೀತೋಪದೇಶ ಮಾಡಿ, ಅವನ ಕೈಯಿಂದಲೇ ಭಗವಂತನು ಅಹಿತರಾದ ಕೌರವರ ಸೈನ್ಯವನ್ನು ಧ್ವಂಸ ಮಾಡಿಸಿದನು.  ಭಗವಂತನು ತನಗೆ ಸೋದರಮಾವನೇ ಆದರೂ, ಅಹಿತನಾಗಿದ್ದ ಕಂಸನನ್ನು ಸಂಹರಿಸಿದನು.  ನೂರು ತಪ್ಪುಗಳಾಗುವ ತನಕ ಸಹಿಸಿಕೊಂಡು ಶಿಶುಪಾಲನನ್ನು ವಧಿಸಿ, ಜರಾಸಂಧನನ್ನು ಭೀಮಸೇನನು ಸಂಹರಿಸುವಂತೆ ಮಾಡಿ ಧರ್ಮ ಸಂಸ್ಥಾಪನೆಯ ಕಾರ್ಯವನ್ನು ಮಾಡಿದನು.  ವಸುಂಧರೆಯನ್ನೇ ಕಕ್ಷೆಯಿಂದ ತಪ್ಪಿಸಿದ್ದ ತಪ್ಪಿಗಾಗಿ ಹಿರಣ್ಯಾಕ್ಷನನ್ನು ಸಂಹರಿಸಿದನು.  ತನ್ನ ಭಕ್ತನಾದ ಪುಟ್ಟ ಬಾಲಕ ಪ್ರಹ್ಲಾದನನ್ನು ಕಾಪಾಡಲೋಸುಗ ನರಸಿಂಹಾವತಾರವನ್ನೇ ಎತ್ತಿ ಅಹಿತನಾಗಿದ್ದ ಹಿರಣ್ಯಕಷಿಪುವನ್ನು ಸಂಹರಿಸಿದನು.  ಹೀಗೆ ಭಗವಂತನು ಅಹಿತರಾದವರನ್ನು ಮುರಿದು ಧರ್ಮ ಸಂಸ್ಥಾಪಿಸುವವನಾಗಿದ್ದಾನೆ.  ಸುಜನರ ಹಿತ ಕಾಯಲೋಸುಗ ಅಹಿತರನು ನಿವಾರಿಸಲು ಮರಳಿ ಮರಳಿ ಭಗವಂತನು ಧರೆಯಲಿ ಅವತಾರವೆತ್ತುತ್ತಾನೆ.
 





ಚಿತ್ರಕೃಪೆ : ಅಂತರ್ಜಾಲ

Sunday, November 30, 2014

ಕರುಣಾ ಸಂಧಿ - ೨೭ ನೇ ಪದ್ಯ



ಕಣ್ಣಿಗೆವೆಯಂದದಲಿ, ಕೈ ಮೈ
ತಿಣ್ಣಿಗೊದಗುವ ತೆರದಿ, ಪಲ್ಗಳು
ಪಣ್ಣು ಫಲಗಳನಗಿದು ಜಿಹ್ವೆಗೆ ರಸವೀವಂತೆ |
ಪುಣ್ಯ ಫಲವೀವಂದದಲಿ ನುಡಿ-
ವೆಣ್ಣುನಾಣ್ಮಾಂಡದೊಳು ಲಕ್ಷ್ಮಣ-
ನಣ್ಣನೊದಗುವ ಭಕ್ತರವಸರಕಮರಗಣಸಹಿತ  ||೨೭||

ಪ್ರತಿಪದಾರ್ಥ : ಕಣ್ಣಿಗೆವೆಯಂದದಲಿ - ಕಣ್ಣುಗಳೀಗೆ ಸದಾ ರಕ್ಷಣೆ ಕೊಡುವ ರೆಪ್ಪೆಗಳಂತೆ, ಕೈ ಮೈ ತಿಣ್ಣಿಗೊದಗುವ ತೆರದಿ - ತಿಣ್ಣು ಎಂದರೆ ತಿನಿಸು ದೇಹದಲ್ಲಿ ನೋವು ತುರಿಕೆ  ಉಂಟಾದಾಗ  ಕೈಗಳು  ಸಹಾಯಕ್ಕೆ ಧಾವಿಸುವಂತೆ,  ಪಲ್ಗಳು  ಪಣ್ಣು ಫಲಗಳನಗಿದು - ಹಲ್ಲುಗಳು ಪಕ್ವವಾದ ಫಲಗಳನ್ನು ಜಗಿದು ಜಗಿದು, ಜಿಹ್ವೆಗೆ ರಸವ ನೀವಂತೆ -  ನಾಲಿಗೆಗೆ ರಸವನ್ನು ಉಣಿಸುವಂತೆ, ಪುಣ್ಯ ಫಲವೀವಂದದಲಿ - ಜೀವಿಯು ಜನ್ಮಾಂತರಗಳಲ್ಲಿ ಸಂಪಾದಿಸಿದ ಪುಣ್ಯವು ಸುಖವನ್ನು ಕೊಡುವಂತೆ, ನುಡಿವೆಣ್ಣು - ವಾಗ್ದೇವತೆ ಸರಸ್ವತಿದೇವಿ, ಆಣ್ಮ - ವಾಗ್ದೇವತೆಯ ಪತಿಯಾದ ಬ್ರಹ್ಮದೇವನ, ಅಂಡದೊಳು - ಸೃಷ್ಟಿಯಾದ ಬ್ರಹ್ಮಾಂಡದೊಳಗೆ, ಲಕ್ಷ್ಮಣನಣ್ಣ - ಪ್ರೀತಿ ಕಾರುಣ್ಯಕ್ಕೆ ಪ್ರತೀಕನಾದ ಲಕ್ಷ್ಮಣಿಗೆ ಅಣ್ಣನಾದ ಶ್ರೀರಾಮಚಂದ್ರನು, ಒದಗುವ - ಧಾವಿಸಿ ಬರುವ, ಭಕ್ತರವಸರಕೆ - ಭಕ್ತರಿಗೆ ಸಂಕಷ್ಟದ ಸಮಯ ಬಂದಾಗಲೆಲ್ಲಾ, ಅಮರಗಣ ಸಹಿತ - ತನ್ನ ಪರಿವಾರ ದೇವತೆಗಳೆಲ್ಲರ ಸಮೇತನಾಗಿ,  ಒದಗುವ -  ದೊರಕುವನು.
ಸ್ವಪ್ರಯೋಜನರಹಿತನಾಗಿದ್ದರೂ ಭಗವ೦ತನು ತನ್ನ ನಿಜಭಕ್ತರನ್ನು ಹೇಗೆ ಸ೦ರಕ್ಷಿಸುವನು ಎ೦ಬುದನ್ನು ದಾಸರಾಯರು ತಮ್ಮ ಈ ಪದ್ಯದಲ್ಲಿ ದೇಹದಲ್ಲಿರುವ ಆವಯವಗಳನ್ನು ದೃಷ್ಟಾ೦ತವಾಗಿಸುತ್ತಾ ವಿವರಿಸುತ್ತಾರೆ. ಸರ್ವಪದಾರ್ಥಗಳನ್ನು ನೋಡುವ೦ತಹ ಕಣ್ಣುಗಳು, ತಮಗೆ ಸಹಾಯಭೂತವಾಗಿ ಅತಿ ಸಮೀಪದಲ್ಲಿ ಇರುವ ಕಣ್ಣುರೆಪ್ಪೆಗಳನ್ನು ದೃಷ್ಟಿಸಲು ಹೇಗೆ ಸಾಧ್ಯವಾಗುವುದಿಲ್ಲವೋ ಅದೇ ರೀತಿಯಲ್ಲಿ ಬಿ೦ಬ-ಪ್ರತಿಬಿ೦ಬ ಜೀವರು ಕ್ಷೀರವಾರಿಯ೦ತೆ ಕಲೆತೇ ಇದ್ದರೂ, ಜೀವನಿಗೆ ಬಿ೦ಬ ಕಾಣಿಸುವುದಿಲ್ಲ, ಬಿ೦ಬನ ರಕ್ಷಣೆ ಇಲ್ಲದ ಪ್ರತಿಬಿ೦ಬನಿಗೆ ಅಸ್ತಿತ್ವವೇ ಇಲ್ಲ. ದೇಹದೊಳಗೆ ತಿನಸು(ತುರಿಕೆ) ಉದ್ಭವಿಸಿದರೆ, ಹಸ್ತಗಳು ತುರಿಸಿ ತಿನಸನ್ನು ಶಮನ ಮಾಡುವ೦ತೆ, ವಿಷಯಸ೦ಬ೦ಧವಾಗಿ ಕಷ್ಟಗಳು ಪ್ರಾಪ್ತವಾಗಲು, ಜ್ಞಾನಾನುಸ೦ಧಾನವೆ೦ಬ ಕರಗಳಿ೦ದ ದು:ಖಾದಿಗಳು ಪರಿಹಾರಗೊಳಿಸುತ್ತಾನೆ. ದ೦ತಗಳು ಹಣ್ಣುಗಳ ಭಕ್ಷಣೆಯನ್ನು ಮಾಡಿ ಸಿಪ್ಪೆಯನ್ನು ದೂರವಾಗಿಸಿ, ಸುರಸವನ್ನು ಜಿಹ್ವೆಗೆ ಕೊಡುವಾಗ ದ೦ತಗಳಿಗೆ ಹೇಗೆ ಯಾವ ಸ್ವಪ್ರಯೋಜನವೂ ಇಲ್ಲವೋ, ಅದೇ ರೀತಿಯಲ್ಲಿ ಪರಮಾತ್ಮನು ಸಿಪ್ಪೆ ಸದೃಶವಾದ ಈ ಲಿ೦ಗದೇಹವನ್ನು ಬೇರ್ಪಡಿಸಿ, ಜೀವನಿಗೆ ಸ್ವರೂಪಾನ೦ದದ ಅನುಭವವನ್ನು ಕೊಡುತ್ತಾನೆ. ಇವುಗಳು ಪರಮಾತ್ಮನ ಕಾರುಣ್ಯ ಹಾಗೂ ಗುಣಪೂರ್ಣತ್ವದ ನಿದರ್ಶನಗಳಾಗಿವೆ. ಲಕ್ಷ್ಮಣಾಗ್ರಜನು  ದೇವತೆಗಳ ಸಮೂಹ ಸಹಿತನಾಗಿ, ಭಕ್ತರ ಕಷ್ಟಕಾಲ ಪ್ರಾಪ್ತವಾದ ಸಮಯದಲ್ಲಿ ಬ೦ದು ರಕ್ಷಿಸುತ್ತಾನೆ ಎ೦ದು ದಾಸರಾಯರು ಸದೃಷ್ಟಾ೦ತವಾಗಿ ವಿವರಿಸುತ್ತಾರೆ.

ಭಗವಂತನ ಮೂರು ವಿಧದ ರಕ್ಷಣೆಯ ವಿವರಣೆಯನ್ನು ದಾಸರಾಯರು ಕೊಡುತ್ತಾರೆ.  ಮೂರು ವಿಧದ ರಕ್ಷಣೆಗೆ ಮೂರು ಸ್ಥರದ ಅಧಿಕಾರಿಗಳನ್ನು ಉಲ್ಲೇಖಿಸುತ್ತಾರೆ.  ಮೊದಲನೆಯವರಾಗಿ "ಉತ್ತಮ ಅಧಿಕಾರಿಗಳು" ಬರುತ್ತಾರೆ.  ಇವರು "ಬ್ರಹ್ಮಾದಿ ತತ್ತ್ವೇಶ್ವರ" ದೇವತೆಗಳಾಗುತ್ತಾರೆ.   ಇದಕ್ಕೆ ಉಪಮಾನವಾಗಿ ಕಣ್ಣುಗಳನ್ನು ರೆಪ್ಪೆಯು   ನಿರಂತರವಾಗಿ ಕಾಪಾಡುವಂತೆ ಉತ್ತಮ ಅಧಿಕಾರಿಗಳನ್ನು ಭಗವಂತ ಕಾಪಾಡುತ್ತಾನೆಂಬುದನ್ನು ತಿಳಿಸಿದ್ದಾರೆ.  ಎರಡನೆಯ ಸ್ಥರದ ಅಧಿಕಾರಿಗಳನ್ನು "ಮಧ್ಯಮಾಧಿಕಾರಿಗಳು" ಎನ್ನುತ್ತಾರೆ.  ಇವರು "ಕರ್ಮಜರಿಂದ ದೇವಗಂಧರ್ವ"ರವರೆಗಿನ ಜೀವರುಗಳು.   ಇವರನ್ನು ಭಗವಂತನು ಕೈ ಮೈ ತಿಣ್ಣಿಗೊದಗುವ ತೆರದಿ, ಅವರಿಗೆ ಬಾಧೆ ಅಥವಾ ಸಂಕಷ್ಟ ಬಂದಾಗ ಧಾವಿಸಿ ಬಂದು ಕಾಪಾಡುತ್ತಾನೆ.  ಮೂರನೆಯ ಸ್ಥರದವರು "ಅಧಮಾಧಿಕಾರಿ"ಗಳಾಗುತ್ತಾರೆ.  ಇವರು "ಮನುಷ್ಯ ಗಂಧರ್ವರು ಹಾಗೂ ಸಾತ್ವಿಕ" ಜೀವರುಗಳು.  ಇವರನ್ನು ಪಲ್ಲುಗಳು ಫಲವನ್ನು ಭಕ್ಷಿಸಿ, ಸಿಪ್ಪೆಯನ್ನು ಬೇರ್ಪಡಿಸುವಂತೆ, ಲಿಂಗ ದೇಹವನ್ನು ಬೇರೆಮಾಡಿ ಸ್ವರೂಪಾನಂದವನ್ನು ಕೊಟ್ಟು ರಕ್ಷಿಸುತ್ತಾನೆ.  

ಕಣ್ಣಿಗೆವೆಯಂದದಲಿ - ಕಣ್ಣಿಗೆ ಎವೆ ಎಂದರೆ ಅದು ಕಣ್ಣಿನ ರೆಪ್ಪೆಯೆಂದರ್ಥವಾಗುತ್ತದೆ.  ಕಣ್ಣುಗಳು ಮನುಷ್ಯನ ದೇಹದ ಒಂದು ಅತ್ಯಂತ ಪ್ರಮುಖವಾದ ಅಂಗವಾಗಿದೆ.  ಕಣ್ಣುಗಳಿಂದಲೇ ನಾವು ಪ್ರಪಂಚವನ್ನು ಕಾಣುವುದು.  ಕಣ್ಣುಗಳು ಅತ್ಯಂತ ಸೂಕ್ಷ್ಮವಾದ ಅಂಗವೂ ಆಗಿದೆ.  ಅಣು ಮಾತ್ರದ ಧೂಳಿನ ಕಣ ಕಣ್ಣೊಳಗೆ ಬಿದ್ದರೂ ಸಾಕು, ಕಣ್ಣು ಕೆಂಪಗಾಗಿ, ನೋವಾಗಿ, ಮುಚ್ಚಿಕೊಳ್ಳುತ್ತವೆ.  ರೆಪ್ಪೆಗಳು ಕಣ್ಣುಗಳನ್ನು ಅತೀ ಜತನದಿಂದ ರಕ್ಷಿಸುತ್ತವೆ.  ಅಪಾಯದ ಅರಿವು ನಮಗೆ ಆಗುವ ಮುನ್ನವೇ ರೆಪ್ಪೆಗಳು ಕಣ್ಣುಗಳನ್ನು ತಮ್ಮ ಮಡಿಲಿನಲ್ಲಿ  ಮುಚ್ಚಿ, ಸಂರಕ್ಷಿಸಿರುತ್ತವೆ.  ರೆಪ್ಪೆಗಳು ತಮ್ಮನ್ನು ಎಷ್ಟೊಂದು ಜತನದಿಂದ ಕಾಪಾಡುತ್ತಿವೆಯೆಂಬ ಸಣ್ಣ ಅರಿವು ಕೂಡ ಕಣ್ಣುಗಳಿಗೆ ಇರುವುದಿಲ್ಲ.  ರೆಪ್ಪೆಗಳಿಲ್ಲದೆ ಕಣ್ಣುಗಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲಾಗುವುದಿಲ್ಲ.  ರೆಪ್ಪೆಗಳು ಹಾಗೂ ಕಣ್ಣುಗಳ ಈ ಸಂಬಂಧ ಅತ್ಯಂತ ಆಳವಾದದ್ದು.  ಆದರೆ ಈ ಅನೂಹ್ಯ ಸಂಬಂಧದ ಮುಖ್ಯ ವಿಚಾರವೇನೆಂದರೆ, ಸದಾ ತಮ್ಮನ್ನು ಇಷ್ಟು ಚುರುಕಿನಿಂದ, ಜಾಗರೂಕತೆಯಿಂದ ಕಾಪಾಡುವ ರೆಪ್ಪೆಗಳನ್ನು ಕಣ್ಣುಗಳು ಎಂದಿಗೂ ವೀಕ್ಷಿಸುವುದಿಲ್ಲ.  ಜಗತ್ತಿನ ಸಮಸ್ತವನ್ನೂ ವೀಕ್ಷಿಸಿ, ಅಕ್ಷಿಪಟಲದ ಮೂಲಕ ಜೀವನಿಗೆ ಅರಿವು ಮೂಡಿಸುವ ಕಣ್ಣುಗಳು, ತಮ್ಮ ಆಪ್ತರಕ್ಷಕರಾದ, ತಮಗೆ ಸಮೀಪದಲ್ಲಿಯೇ ಇರುವ ರೆಪ್ಪೆಗಳನ್ನು ಮಾತ್ರ ಒಮ್ಮೆಯೂ ಭೇಟಿಯಾಗುವುದೇ ಇಲ್ಲ.  ರೆಪ್ಪೆಗಳೂ, ಕಣ್ಣುಗಳೂ ಎದುರೆದುರಿಗೆ ಬರುವ ಸಾಧ್ಯತೆ ಇಲ್ಲವೇ ಇಲ್ಲ.  ಹೀಗೇ ಭಗವಂತನು ಜೀವನ ಒಳಗೂ, ಹೊರಗೂ ಇದ್ದು, ಸದಾ ರಕ್ಷಿಸುತ್ತಿದ್ದರೂ, ಜೀವನು ಭಗವಂತನನ್ನು ಗುರುತಿಸುವುದೇ ಇಲ್ಲ.  ರೆಪ್ಪೆಗಳು, ಕಣ್ಣುಗಳನ್ನು ಕೇವಲ ಹೊರಗಿನಿಂದ ಮಾತ್ರ ರಕ್ಷಿಸುತ್ತವೆ, ಆದರೆ ಭಗವಂತನು ಜೀವನನ್ನು ಒಳಗೆ, ಹೊರಗೆ, ಹಿಂದೆ, ಮುಂದೆಲ್ಲಾ ಆಗಸದವೋಲ್ ಇದ್ದು ಅನವರತ ರಕ್ಷಿಸುತ್ತಲೇ ಇದ್ದಾನೆ.  ಇದೇ ಗ್ರಂಥದ ಮಾತೃಕಾ ಸಂಧಿಯ ೮ನೆಯ ಚರಣದಲ್ಲಿ ದಾಸರಾಯರು ಭಗವಂತನು ಯಾವ ಇಂದ್ರಿಯದಲ್ಲಿ ಯಾವ ರೂಪದಲ್ಲಿ ನೆಲೆಸಿದ್ದಾನೆಂಬುದನ್ನು ಸೂಚಿಸುತ್ತಾ "ಭೇಶ ಭಾಸ್ಕರರಕ್ಷಿಯುಗಳಕೆ" - ಬಲದ ಕಣ್ಣಿಗೆ ಸೂರ್ಯದೇವ, ಅಂತರ್ಗತ ಶ್ರೀ ನಾರಾಯಣ ರೂಪದಿಂದಲೂ, ಎಡದ ಕಣ್ಣಿಗೆ ಚಂದ್ರದೇವ, ಅಂತರ್ಗತನಾಗಿ ದಧಿವಾಮನ ರೂಪದಿಂದಲೂ ಇದ್ದು ನೇತ್ರೇಂದ್ರಿಯಗಳನ್ನು ನಿಯಮನ ಮಾಡುತ್ತಾ ಸಂರಕ್ಷಿಸುತ್ತಿದ್ದಾನೆಂಬುದನ್ನು ವಿವರಿಸಿದ್ದಾರೆ.

ಕೇನೋಪನಿಷತ್ತಿನಲ್ಲಿ "ಯಚ್ಚಕ್ಷುಷಾ ನ ಪಶ್ಯತಿ ಯೇನ ಚಕ್ಷೂಂಪಿ ಪಶ್ಯತಿ" - ಯಾರನ್ನು ಜೀವಾತ್ಮನು ಚಕ್ಷುಸ್ಸಿನಿಂದ ಕಾಣಲಾರನೋ, ಯಾರಿಂದ ಚಕ್ಷುರಿಂದ್ರಿಯಗಳು ಕಾಣಲು ಶಕ್ತಿ ಪಡೆಯುತ್ತವೋ ಅವನೇ ಬ್ರಹ್ಮನೆಂದು ತಿಳಿ ಎಂದು ಹೇಳಲಾಗಿದೆ.

ಕಠೋಪನಿಷತ್ತಿನಲ್ಲಿ "ಸೂರ್ಯೋ ಯಥಾ ಸರ್ವಲೋಕಸ್ಯ ಚಕ್ಷುಃ" - ಎಲ್ಲ ಜೀವರ ಚಕ್ಷುರಿಂದ್ರಿಯಗಳಲ್ಲಿ ಅಭಿಮಾನಿ ದೇವತೆಯಾಗಿರುವ ಸೂರ್ಯನಿದ್ದಾನೆಂದು ತಿಳಿಸಿದೆ.  ಶ್ರೀಮದಾಚಾರ್ಯರು ತಮ್ಮ ಭಾಷ್ಯದಲ್ಲಿ  
ಸೂರ್ಯೋ ಯಥಾಂತರಂ ಚಕ್ಷುಃ ಪ್ರತಿಬಿಂಬೋಸ್ಯ ಬಾಹ್ಯಕಃ |
ಬಾಹ್ಯಚಕ್ಷುರ್ಗತೈರ್ ದೋಷೈಃ ಅಂತಶ್ಚಕ್ಷುರ್ನ ಲಿಪ್ಯತೇ ||
ಅಂತಶ್ಚಕ್ಷುರ್ದೇವತಾ ತು ಬಾಹ್ಯ ಚಕ್ಷುರಚೇತನಮ್ |
ಏವಂ ಬಾಹ್ಯಃ ಸ್ವತಂತ್ರತ್ವಾತ್ ಜೀವೇಭ್ಯಃ ಪುರುಷೋತ್ತಮಃ |
ಅಸ್ವತಂತ್ರಸ್ಯ ಜೀವಸ್ಯ ದುಃಖೈರ್ನೈವ ಹಿ ಲಿಪ್ಯತೇ  || - ಚಕ್ಷುರಿಂದ್ರಿಯಗಳಿಗೆ ಅಭಿಮಾನಿಯಾದ ಸೂರ್ಯನು ’ಅಂತರ್ ಚಕ್ಷು’ ಎನಿಸುತ್ತಾನೆ.  ಬಾಹ್ಯದಲ್ಲಿ ಕಾಣುವ ಈ ಇಂದ್ರಿಯ ಚಕ್ಷುವು ಒಳಗಿರುವ ಸೂರ್ಯನ ಪ್ರತಿಬಿಂಬವಾಗಿದೆ.  ಹೊರಗಿನ ಜಡವಾದ ಇಂದ್ರಿಯ, ಕಣ್ಣುಗಳಿಂದ ಉಂಟಾಗುವ ಯಾವುದೇ ದೋಷವೂ ಒಳಗಿನ ಅಭಿಮಾನಿದೇವತೆ ಸೂರ್ಯನಿಗೆ ಲೇಪನವಾಗುವುದಿಲ್ಲ.  ಇದೇ ರೀತಿಯಲ್ಲಿಯೇ ಎಲ್ಲಾ ಜೀವರಿಗಿಂತಲೂ ಅತ್ಯಂತ ಭಿನ್ನನಾಗಿ ಭಗವಂತನು ಸ್ವತಂತ್ರನಾಗಿರುತ್ತಾನೆ.  ಅಸ್ವತಂತ್ರನಾದ ಜೀವನ ಸುಖ-ದುಃಖಗಳು ಭಗವಂತನಿಗೆ ಲೇಪನವಾಗುವುದಿಲ್ಲ ಎಂದಿದ್ದಾರೆ.

ಪ್ರಶ್ನೋಪನಿಷತ್ತಿನ ತೃತೀಯ ಪ್ರಶ್ನಃ ಅಧ್ಯಾಯದಲ್ಲಿ ಭಗವಂತನು ಮುಖ್ಯ ಪ್ರಾಣನ ರೂಪದಲ್ಲಿ ಜೀವನ ಸರ್ವೇಂದ್ರಿಯಗಳಲ್ಲೂ ವ್ಯಾಪಿಸಿದ್ದಾನೆಂಬುದನ್ನು "ಪಾಯೂಪಸ್ಥೇSಪಾನಂ ಚಕ್ಷುಃ ಶ್ರೋತ್ರೇ ಮುಖನಸಿಕಾಭ್ಯಾಂ ಪ್ರಾಣಃ ಸ್ವಯಂ ಪ್ರಾತಿಷ್ಠತೇ" - ಮುಖ್ಯ ಪ್ರಾಣವು ಪಾಯೂಪ ಸ್ಥಲದಲ್ಲಿ (ಅಪಾನ) ಅಪಾನವನ್ನು ನೇಮಕ ಮಾಡುತ್ತದೆ ಮತ್ತು ತಾನು ಸ್ವತಃ ಮುಖದಲ್ಲಿಯೂ ನಾಸಿಕದಿಂದಲೂ ಪ್ರಕಟಗೊಂಡು ಚಕ್ಷುಗಳಲ್ಲಿಯೂ, ಶ್ರೋತ್ರಗಳಲ್ಲಿಯೂ ಸಂಚರಿಸುತ್ತದೆ ಎಂದು ಉಲ್ಲೇಖಿಸಲಾಗಿದೆ.

ಕಣ್ಣಿಗೆ ರೆಪ್ಪೆಗಳು ಸದಾ ರಕ್ಷಣೆ ಒದಗಿಸುವಂತೆ ಶ್ರೀಕೃಷ್ಣನು ಅರ್ಜುನನಿಗೆ ಸದಾ ಜೊತೆಯಲ್ಲಿಯೇ ಇದ್ದು ರಕ್ಷಣೆಯನ್ನು ಒದಗಿಸಿದನೆಂಬುದು ಭಾಗವತದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. 

ದಾಸರಾಯರು ತಮ್ಮ "ಫಲವಿದು ಬಾಳ್ದುದಕೆ" ಕೃತಿಯಲ್ಲಿ
ಪಕ್ಷ್ಮಗಳಕ್ಷಿಗಳ್ ರಕ್ಷಿಸುವಂದದಿ | ಅಕ್ಷರ ಪುರುಷನಪೇಕ್ಷೆಯಲಿ | ಕುಕ್ಷಿಯೊಳಬ್ಜಜ ತ್ರ್ಯಕ್ಷಾದ್ಯಮರರ | ಈಕ್ಷಿಸಿ ಕರುಣದಿ ರಕ್ಷಿಪನಂದದಿ || - ಧೂಳು ಎದ್ದಾಗ ಕಣ್ಣಿಗೆ ಯಾರೂ ನಿನ್ನ ರಕ್ಷಣೆಯನ್ನು ನೀನೇ ಮಾಡಿಕೋ ಎಂದು ತಿಳಿಸುವುದಿಲ್ಲ.  ಅದಕ್ಕೆ ತನ್ನ ರಕ್ಷಣೆ ಮಾಡಿಕೊಳ್ಳುವಷ್ಟು ಬುದ್ಧಿಯಾಗಲೀ, ಸಾಮರ್ಥ್ಯವಾಗಲಿ ಇಲ್ಲ.  ಅದನ್ನು ರಕ್ಷಿಸಲು, ಅದರ ಆಜ್ಞೆ, ಅಪೇಕ್ಷೆ ಏನನ್ನೂ ಪಡೆಯದೆ ನಿರ್ವ್ಯಾಜವಾಗಿ ರೆಪ್ಪೆಯು ಕಣ್ಣನ್ನು ಸರಿಯಾದ ಸಮಯಕ್ಕೆ ರಕ್ಷಣೆ ಮಾಡುವುದು.  ಹಾಗೆಯೇ ಅಕ್ಷರ ಪುರುಷನಾದ ಶ್ರೀಹರಿ ಯಾವ ಅಪೇಕ್ಷೆಯೂ ಇಲ್ಲದೆ ನಮ್ಮನ್ನು ರಕ್ಷಿಸುವನು ಎಂದಿದ್ದಾರೆ.

ಕೈ ಮೈತಿಣ್ಣಿಗೊದಗುವ ತೆರದಿ -  ತಿಣ್ಣಿ ಎಂದರೆ ತಿಂಡಿ, ತಿನಿಸಾಗುವುದು (ನವೆ, ಕೆರೆಯುವಿಕೆ) ಎಂದರ್ಥವಾಗುತ್ತದೆ.  ದೇಹದ ಯಾವುದೇ ಭಾಗದಲ್ಲಿಯಾದರೂ ನವೆ, ತುರಿಕೆಯಾದಾಗ ನಮ್ಮ ಕೈಗಳು ತುರಿಸಲು ಧಾವಿಸುತ್ತವೆ.  ಮನಸ್ಸು ತುರಿಸಿಕೊಳ್ಳುವುದು ಬೇಡವೆಂದುಕೊಂಡರೂ, ಕೈ ಸುಮ್ಮನಿರುವುದಿಲ್ಲ.  ಹಾಗೇ ಜೀವನು ತನ್ನನ್ನು ತಾನೇ ರಕ್ಷಿಸಿಕೊಂಡು ಬಿಡುವೆ, ಭಗವಂತನೇಕೆ ಬೇಕು ಎಂದು ಕೊಂಡರೂ, ಆ ಕಾರುಣ್ಯನಿಧಿಯಾದ ಪರಮಾತ್ಮನು ಸುಮ್ಮನಿರುವುದಿಲ್ಲ, ರಕ್ಷಿಸಲು ಧಾವಿಸುತ್ತಾನೆ.  ತುರಿಸಲು ಧಾವಿಸುವ ಕೈಗೂ, ತುರಿಕೆಯುಂಟಾದ ಚರ್ಮಕ್ಕೂ ಸಾಮ್ಯತೆಯಿದೆ.  ಏಕೆಂದರೆ ಎರಡೂ ನಮ್ಮದೇ ದೇಹದ ಎರಡು ಭಾಗಗಳಾಗಿವೆ.  ಆದರೆ ಧಾವಿಸಿ ಬರುವ ಭಗವಂತನಿಗೂ ಮತ್ತು ಭಕ್ತನಿಗೂ ಯಾವ ಸಾಮ್ಯತೆಯೂ ಇಲ್ಲವೇ ಇಲ್ಲ.    ತನಗೆ ಯಾವ ಉಪಯೋಗ ಅಥವಾ ಪ್ರಯೋಜನವೇನೂ ಇಲ್ಲದಿದ್ದರೂ ಭಗವಂತನು ಭಕ್ತನನ್ನು ರಕ್ಷಿಸುತ್ತಾನೆಂದರೆ ಅದು ಅವನ ಅಪಾರವಾದ ಕರುಣೆ ಮತ್ತು  ಅವನು ’ಭಕ್ತ’ನೆಂಬ ಒಂದೇ ಒಂದು ಕಾರಣ ಮಾತ್ರವಾಗಿರುತ್ತದೆ.   ಬಿಂಬರೂಪಿಯಾದ ಭಗವಂತನ ಕ್ರಿಯೆಗಳೆಲ್ಲವೂ ಯಾವಾಗಲೂ ಪ್ರಬಲವಾಗಿರುತ್ತವೆ.  ಆದರೆ ಪ್ರತಿಬಿಂಬನಾದ ಜೀವನ ಕ್ರಿಯೆಗಳೆಲ್ಲವೂ ಅಲ್ಪವಾಗಿರುತ್ತವೆ.  ಏಕೆಂದರೆ ಜೀವನು ಭಗವಂತನ ಅಧೀನನೇ ಆಗಿದ್ದಾನೆ.  ಈ ಉಪಮಾನ ಅನ್ವಯವಾಗುವ ’ಮಧ್ಯಮಾಧಿಕಾರಿ’ಗಳಿಗೆ ತಿನಿಸಾಗುವುದೆಂದರೆ, ವಿಷಯ ಸಂಬಂಧವಾದ ದುಃಖವೆಂದು ತಿಳಿಯಬಹುದು.  ಹೀಗೆ ತಿನಿಸಾದಾಗ, ಭಗವಂತನು ಜ್ಞಾನದ ಅನುಸಂಧಾನ (ತುರಿಸಲು ಧಾವಿಸುವ ಕೈಯಿದ್ದಂತೆ)ವಿತ್ತು, ಅವರನ್ನು ರಕ್ಷಿಸುತ್ತಾನೆಂದು ತಿಳಿಯಬೇಕು.  ಈ ದೃಷ್ಟಾಂತದಲ್ಲಿ ಭಕ್ತನ ಕಣ್ಣುಗಳು, ತುರಿಸಲು ಧಾವಿಸುವ ಕೈಗಳನ್ನು ನೋಡಬಹುದಾಗಿದೆ. 

ಮೈಗೊದಗುವ ತಿನಿಸು ತುರಿಸಿಕೊಂಡಾಗ ತತ್ಕಾಲಕ್ಕೆ ಅಲ್ಪ ಸಮಾಧಾನ ಹಾಗೂ ಸುಖವನ್ನು ಕೊಟ್ಟರೂ ಕೂಡ, ಕೊನೆಯಲ್ಲಿ ನೋವು, ಉರಿಗಳನ್ನು ಉಳಿಸಿ ದುಃಖಕ್ಕೆ ದೂಡುತ್ತದೆ.  ಹಾಗೆಯೇ ತಾಮಸಿಗರಿಗೆ ಶ್ರೀಹರಿಯು ಸಂಸಾರದಲ್ಲಿ ಕೊಡುವ ಸುಖವು ಕೊನೆಗೆ ತಮಸ್ಸಿನಲ್ಲಿ ಅಧಿಕ ದುಃಖಕ್ಕೆ ಕಾರಣವಾಗಿಸುತ್ತದೆ.

ಮೈ ತಿಣ್ಣಿಗೆ ದೂರದಿಂದ ಧಾವಿಸಿ ಬರುವ ಕೈಗಳಂತೆ, ಗಜೇಂದ್ರ ಮೋಕ್ಷದ ಕಥೆಯಲ್ಲಿ ಗಜೇಂದ್ರನ ರಕ್ಷಣೆಗೆ ಭಗವಂತ ಗರುಡಾರೂಢನಾಗಿ ಹಾರಿ ಬಂದನೆಂಬುದನ್ನು ಭಾಗವತ ತಿಳಿಸುತ್ತದೆ.

ಪಲ್ಗಳು ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ - ಹಲ್ಲುಗಳು ಹಣ್ಣುಗಳನ್ನು ಅಗಿದಗಿದು, ನಾಲಿಗೆಗೆ ಅದರ ಸವಿ, ರಸವನ್ನು ನೀಡುತ್ತದೆ.  ನಾಲಿಗೆಯು ರುಚಿಯನ್ನು ಆಸ್ವಾದಿಸುತ್ತದೆ.  ಹಲ್ಲುಗಳು ತಾವು ಏನನ್ನೂ ಸವಿಯುವುದಿಲ್ಲ.  ಭಗವಂತನು ಕೂಡಾ ಹಾಗೆಯೇ, ಭಕ್ತನ ಸಾಧನಾ ಶರೀರದಲ್ಲಿ ತಾನು ನಿಂತು, ತಾನೇ ಸುಕರ್ಮಗಳನ್ನು ಮಾಡಿ, ಭಕ್ತನಿಂದ ಮಾಡಿಸಿ, ಅದರ ಫಲವನ್ನು ಮಾತ್ರ ಜೀವನಿಗೆ ಉಣಿಸುತ್ತಾನೆ.  ತಾನೇನನ್ನೂ ತೆಗೆದುಕೊಳ್ಳುವುದಿಲ್ಲ.  ಜೀವನ ಸಾಧನಾ ಶರೀರದಲ್ಲಿ ತಾನಿದ್ದು, ಅನೇಕ ಬಗೆಯ ಶಾಸ್ತ್ರ ಸಮ್ಮತವಾದ ಆಚರಣೆಗಳನ್ನೂ, ಪೂಜಾ ವಿಧಿ-ವಿಧಾನಗಳನ್ನೂ, ಉಪವಾಸ-ವ್ರತಗಳನ್ನೂ ಮಾಡಿಸಿ, ಅದರಿಂದ ಉತ್ಪತ್ತಿಯಾದ ಶುಭ ಕರ್ಮಫಲ ರಸವನ್ನು ಜೀವಿಗೇ ಉಣ್ಣಿಸುತ್ತಾನೆ.  ಇದರಿಂದ ಹಲ್ಲಿಗೇನೂ ಫಲವಿರುವುದಿಲ್ಲ.  ಹಾಗೇ ಭಗವಂತನು ಭಕ್ತನ ಲಿಂಗ ದೇಹವನ್ನು ಬಿಡಿಸಿ, ಸ್ವರೂಪ ದೇಹದಿಂದ ಬೇರ್ಪಡಿಸಿ ಜೀವನಿಗೆ ಸ್ವರೂಪಾನಂದ ಸುಖವನ್ನು ಉಣಿಸುತ್ತಾನೆ.  ಎಲ್ಲಿಯವರೆಗೆ ಜೀವನಿಗೆ ಲಿಂಗ ದೇಹವೆಂಬ ಹೊದಿಕೆ ಇರುತ್ತದೋ ಅಲ್ಲಿಯವರೆಗೆ ಸ್ವರೂಪವು ವ್ಯಕ್ತವಾಗುವುದಿಲ್ಲ.  ಭಗವಂತನ ಅಪರಿಮಿತವಾದ ಕಾರುಣ್ಯದಿಂದಲೇ ಜೀವನ ಉದ್ಧಾರವಾಗುತ್ತದೆ.  ತನಗೆ ಯಾವ ಪ್ರಯೋಜನವೂ ಇಲ್ಲದೇ ಶ್ರೀಹರಿಯು ಇದನ್ನು ಏಕೆ ಮಾಡುತ್ತಾನೆಂದರೆ ಅಲ್ಲಿ ಪಾಲಕನಾದ ಅರಸನಾಗಿ ಜೀವನನ್ನು ಪಾಲಿಸುವುದು ಭಗವಂತನ ಸಲ್ಲಕ್ಷಣವಾಗುತ್ತದೆ.  ಅನಂತ ಗುಣಪೂರ್ಣನಾದ ಸ್ವಾಮಿಯು ತನ್ನ ಭಕ್ತರನ್ನು ಪಾಲಿಸಲೇ ಬೇಕೆಂಬ ತನ್ನದೇ ನಿಯಮಕ್ಕೆ ಬದ್ಧನಾಗಿದ್ದಾನೆಂದು ತಿಳಿಯಬಹುದಾಗಿದೆ.

ಪುಣ್ಯಫಲವೀವಂದದಲಿ - ನಾವು ಮಾಡುವ ಎಲ್ಲಾ ಪುಣ್ಯ ಕರ್ಮಗಳೂ ಹೇಗೆ ನಮಗೆ ಸಕಾಲದಲ್ಲಿ ಫಲ ನೀಡುತ್ತವೆಯೋ ಹಾಗೆಯೇ ಭಗವಂತನು ನಮಗೆ ಸಕಾಲದಲ್ಲಿ ರಕ್ಷಣೆಯನ್ನು  ನೀಡುತ್ತಾನೆ.  ಹಲ್ಲುಗಳು ಕೆಲವೊಮ್ಮೆ ಹಣ್ಣುಗಳನ್ನು ಅಗೆದು ತಿನ್ನುವಾಗ, ನಾಲಿಗೆಯನ್ನೂ ಕಚ್ಚುತ್ತದೆ.  ಇದೂ ಕೂಡ ಭಗವಂತನ ಕಾರುಣ್ಯವೆಂದೇ ತಿಳಿಯಬೇಕು.  ಏಕೆಂದರೆ ಭಗವಂತನು ತನ್ನನ್ನು ಮರೆತು ವಿಷಯ ಸುಖದಲ್ಲಿ ಮುಳುಗುವ ಭಕ್ತನನ್ನು ಎಚ್ಚರಿಸುವುದಕ್ಕಾಗಿಯೇ ಹಲ್ಲುಗಳು ನಾಲಿಗೆಯನ್ನು ಕಡಿಯುವಂತೆ ಮಾಡಿರುತ್ತಾನೆ.  ನಾವು ಮಾಡಿದ ಸುಕರ್ಮಗಳು ಹೀಗೆ ನಾಲಿಗೆಯನ್ನು ಕಚ್ಚುವ ಸಂದರ್ಭ ಬರುವುದಿಲ್ಲ.  ಪುಣ್ಯ ಕರ್ಮಗಳು ಪುಣ್ಯ ಫಲಗಳನ್ನೇ ಕೊಡುತ್ತವೆ.  ಅಂದರೆ ಪುಣ್ಯ ಕರ್ಮಗಳಿಂದ ಸಂಗ್ರಹವಾದ ಪುಣ್ಯವೇ ನಮಗೆ ಫಲವನ್ನು ಕೊಡುವುದಿಲ್ಲ.  ನಮ್ಮ ಪುಣ್ಯದ ಶೇಖರಣೆಯ ಅನುಸಾರವಾಗಿ ಭಗವಂತ ನಮಗೆ ಸುಫಲಗಳನ್ನೂ, ಸುಖವನ್ನೂ ನೀಡುತ್ತಾನೆ.  ಇದನ್ನೇ ನಾವು ’ಮಾಡಿದ ಪುಣ್ಯ’ ಕಾಪಾಡಿತು ಎಂದುಕೊಳ್ಳುತ್ತೇವೆ ಅಷ್ಟೇ.  ಪುಣ್ಯ ಎಂಬ ಶಬ್ದಕ್ಕೇ ನಾವು ’ಸುಫಲ’ ಎಂಬ ಅರ್ಥವನ್ನು ಗ್ರಹಿಸುತ್ತೇವೆ.

ಭಗವದ್ಗೀತೆಯ ೨ನೆಯ ಅಧ್ಯಾಯದ ೧೬ನೆಯ ಶ್ಲೋಕದಲ್ಲಿ
ನಾಸತೋ ವಿದ್ಯತ್ಯೇ ಭಾವೋ ನಾಭಾವೋ ವಿದ್ಯತೇ ಸತಃ |
ಉಭಯೋರಪಿ ದೃಷ್ಟೋನ್ತಸ್ತ್ವನಯೋಸ್ತತ್ತ್ವದರ್ಶಿಭಿಃ || - ಪ್ರಕೃತಿಗೂ ಅಳಿವಿಲ್ಲ, ಭಗವಂತನಿಗೂ ಅಳಿವಿಲ್ಲ.  ಅರ್ಜುನನು ತನ್ನ ಗುರು-ಹಿರಿಯರನ್ನು ಕೊಲ್ಲುವುದು ಪಾಪವಲ್ಲವೇ ಎಂದು ಶ್ರೀಕೃಷ್ಣನನ್ನು ಪ್ರಶ್ನಿಸಿದಾಗ, ಭಗವಂತನು ’ಸತ್ತಿನಿಂದ ಅಭಾವವಿಲ್ಲ, ಅಸತ್ತಿನಲ್ಲಿ ಭಾವವಿಲ್ಲ’ ಎಂದು ಉತ್ತರಿಸಿದನು.  ಹಾಗೆಂದರೆ ಒಳ್ಳೆಯ ಕೆಲಸ ಅಥವಾ ಸತ್ಕರ್ಮಗಳನ್ನು ಮಾಡುವುದರಿಂದ ದುಃಖವಾಗುವುದಿಲ್ಲ ಮತ್ತು ಅಸತ್ಕರ್ಮಗಳನ್ನು ಮಾಡುವುದರಿಂದ ಸುಖವಾಗುವುದಿಲ್ಲ ಎಂದರ್ಥವಾಗುತ್ತದೆ.  ಆದ್ದರಿಂದ ಸತ್ಕರ್ಮಗಳನ್ನೇ ಮಾಡುತ್ತಿದ್ದರೆ, ಅದರ ಫಲಗಳನ್ನು ಭಗವಂತ ನಮಗೆ ಸರಿಯಾದ ಸಮಯಕ್ಕೆ ಒದಗಿಸಿ, ರಕ್ಷಿಸುತ್ತಾನೆ.  ಕರ್ಮ ಮಾಡುವುದಷ್ಟೇ ನಮ್ಮ ಕೆಲಸವಾಗಬೇಕೇ ಹೊರತು, ಅದರ ಫಲದಲ್ಲಿ ಅಧಿಕಾರ ಸಾಧಿಸುವುದಾಗಬಾರದು.  ಇದನ್ನು ಭಗವದ್ಗೀತೆಯ ಇದೇ ಅಧ್ಯಾಯದಲ್ಲಿ ಭಗವಂತನು
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂತೋಸ್ತ್ವ ಕರ್ಮಣಿ || - ಕರ್ಮ ಮಾಡುವುದು ಜೀವನ ಕೈಯಲ್ಲಿದೆ ಆದರೆ ಕರ್ಮಫಲ ಮಾತ್ರ ಭಗವಂತನ ಕೈಯಲ್ಲಿದೆ.  ಯಾವಾಗಲೂ ನಾವು ಕರ್ತವ್ಯಶೀಲರಾಗಿ ಇರಬೇಕು ಮತ್ತು ಮಾಡಿದ ಕರ್ಮವನ್ನು ಭಗವದರ್ಪಣೆ ಮಾಡಬೇಕು.  ಇಂತಹ ಕರ್ಮ ಮಾಡಿದರೆ, ನನಗಿಂತಹುದೇ ಫಲಬೇಕೆಂದು ಬಯಸುವುದು ತಪ್ಪಲ್ಲ, ಆದರೆ ಅದನ್ನು ಕೊಡುವವನು ಭಗವಂತನೆಂಬ ಭಾವ ಜಾಗೃತವಾಗಿರಬೇಕು.  ನಾವು ಬಯಸಿದ್ದು ನಮಗೆ ಒಳ್ಳೆಯದಲ್ಲದೇ ಇರಬಹುದು.  ಸರಿ ತಪ್ಪುಗಳ ಪರಿಜ್ಞಾನ ಜೀವನಿಗೆ ಇರುವುದಿಲ್ಲ.  ಭಗವಂತ ನಮ್ಮ ಯೋಗ್ಯತಾನುಸಾರವಾಗಿ, ನಮಗೆ ಸರಿಯಾದದ್ದನ್ನೇ, ಸರಿಯಾದ ಸಮಯದಲ್ಲಿಯೇ ಕೊಡುತ್ತಾನೆಂಬ ನಂಬಿಕೆ ಇರಬೇಕು.  ಹೀಗೆ ಫಲಾಫಲಗಳ ಅಪೇಕ್ಷೆಯಿಲ್ಲದೆ ಮಾಡಿದ ಸುಕರ್ಮ ಪುಣ್ಯವಾಗುತ್ತದೆ.  ಪುಣ್ಯವೇ ಫಲವನ್ನು ಕೊಡುವುದಿಲ್ಲ, ಆದರೆ ಅದು ಸುಖಕ್ಕೆ ಸಾಧನವಾಗುತ್ತದೆ.  ಭಗವಂತನು ನಮ್ಮಿಂದ ಕರ್ಮಗಳನ್ನು ಮಾಡಿಸುವುದೂ, ಅದಕ್ಕೆ ತಕ್ಕ ಫಲವೀಯುವುದೂ, ಎರಡೂ ಸುಂದರವಾಗಿಯೇ ಇರುತ್ತವೆಯೆಂದು ಕಣ್ಣು-ರೆಪ್ಪೆ, ಕೈ-ಹಲ್ಲುಗಳ ದೃಷ್ಟಾಂತದಿಂದ ತಿಳಿಯುತ್ತದೆ.  ಶೇಖರಿಸಿಟ್ಟ ಪುಣ್ಯ ಮುಂದೆ ಬರಬಹುದಾದ ಪಾಪಗಳಿಂದ ತೀವ್ರವಾಗಿ ಬಾಧಿಸುವುದನ್ನು ತಡೆಯುತ್ತದೆ.  ಪುಣ್ಯವೆನ್ನುವುದು ಜಡವಸ್ತುವಲ್ಲ, ಅದು ಸುಂದರವಾದ, ಸೂಕ್ಷ್ಮವಾದ ಸಾತ್ವಿಕವಾದ ದಿವ್ಯ ಚೇತನವಾದ್ದರಿಂದಲೇ ಪೂರ್ಣಾನಂದಮಯನಾದ ಭಗವಂತನು  ಕರ್ಮ ಮಾಡಿಸುವಲ್ಲಿ, ಫಲ ಕೊಡುವುದರಲ್ಲಿ, ಎಲ್ಲದರಲ್ಲಿಯೂ ಒಂದು ಸುಂದರತೆಯಿದೆ, ಅಂದವಿದೆ ಎನ್ನಬಹುದಾಗಿದೆ.  ಪುಣ್ಯಫಲವೆಂಬುದು ನಾವು ಶಾರೀರಿಕವಾಗಿ ಮಾಡುವ ಕರ್ಮಗಳಿಗನುಗುಣವಾಗಿ ದೊರೆಯುವುದಿಲ್ಲ.  ಆದರೆ ಆ ಕರ್ಮವನ್ನು ಮಾಡುವಾಗ ನಮಗಿದ್ದ ಭಾವನೆಗೆ ಅನುಗುಣವಾಗಿ ದೊರೆಯುತ್ತದೆ.  ಯಾವುದೇ ಕರ್ಮವನ್ನಾದರೂ ಸುಮನಸ್ಸಿನಿಂದ ಮತ್ತು ಶ್ರದ್ಧೆಯಿಂದ ಮಾಡಿದಾಗ ಮಾತ್ರ ನಾವು ಅದರಿಂದ ಒಳ್ಳೆಯ ಫಲವನ್ನು ಅಪೇಕ್ಷಿಸಬಹುದಾಗಿದೆ.

ನುಡಿವೆಣ್ಣಿನಾಣ್ಮಾಂಡದೊಳು - ಭಗವಂತನು  ನುಡಿವೆಣ್ಣಿನ ಮೂಲಕವೇ ಜೀವನ ಹತ್ತಿರ ಪುಣ್ಯ ಕರ್ಮಗಳನ್ನು ಮಾಡಿಸುವುದು.   ಸಕಲ ಶಾಸ್ತ್ರಗಳು, ವಿಧಿ ನಿಷೇಧ ವಚನಗಳೆಲ್ಲವೂ ಶ್ರೀಹರಿಯ ಆಜ್ಞೆಯಾಗಿದೆ.  ಭಗವಂತನ ಆಜ್ಞೆಯಿಂದಲೇ ವಾಗಿಂದ್ರಿಯವು ಕೆಲಸ ಮಾಡುತ್ತದೆ.    
ಕೇನೋಪನಿಷತ್‍ನಲ್ಲಿ | ಯದ್ವಾಚಾಽನಭ್ಯುದಿತಂ, ಯೇನ ವಾಗಭ್ಯುದ್ಯತೇ | ತದೇವ ಬ್ರಹ್ಮಾ ತ್ವಂವಿದ್ಧಿ, ನೇದಂ ಯದಿದಮುಪಾಸತೇ || - ಯಾವ ಆತ್ಮವನ್ನು ವಾಗಿಂದ್ರಿಯದಿಂದ ಗ್ರಹಿಸಲಾಗುವುದಿಲ್ಲವೋ, ಯಾವ ಶಕ್ತಿಯ ಮೂಲಕ ವಾಗಿಂದ್ರಿಯವು ಕೆಲಸ ಮಾಡುವುದೋ, ಆ ಆತ್ಮನೇ ಪರಮಾತ್ಮನೆಂದು ತಿಳಿಯಬೇಕು ಎಂಬ ಉಲ್ಲೇಖವಿದೆ. 
ನುಡಿವೆಣ್ಣಿನಾಣ್ಮ(ಪತಿ)ನಾದ ಬ್ರಹ್ಮನ ಅಂಡ ಬ್ರಹ್ಮಾಂಡ.  ಬ್ರಹ್ಮಾಂಡದಲ್ಲಿ ಸಕಲ ಜೀವರಾಶಿಗಳಿಗೂ ಭಗವಂತನ ವಿಧಿ ನಿಷೇಧಗಳು ಅನ್ವಯಿಸುತ್ತವೆ.  ಭಗವಂತನ ಆಜ್ಞೆಯನ್ನು ಮೀರುವುದು ನಿಷಿದ್ಧ ಮತ್ತು ಪಾಪಕರ್ಮವಾಗುತ್ತದೆ.  ಹರಿಯಾಜ್ಞೆಯೇನೆಂದರೆ ಜೀವನು ಸಾಧನಾ ಶರೀರವನ್ನು ಪಡೆದಿರುವುದರಿಂದ ಮೂರು ರೀತಿಯ ತಪಸ್ಸನ್ನು ಅವಶ್ಯವಾಗಿ ಮಾಡಲೇಬೇಕೆಂಬುದು.  ಅವುಗಳನ್ನು ಶ್ರೀಕೃಷ್ಣನು ಭಗವದ್ಗೀತೆಯ ೧೭ನೆಯ ಅಧ್ಯಾಯದ ೧೪, ೧೫ ಮತ್ತು ೧೬ನೇ ಶ್ಲೋಕಗಳಲ್ಲಿ ಶರೀರ ಸಂಬಂಧವಾದ ಕರ್ಮಗಳ ಮೂಲಕ ಮಾಡುವ "ಶಾರೀರಿಕ ತಪಸ್ಸು", ವಾಣಿಯ ಸಂಬಂಧೀ ಮಾಡುವ "ವಾಙ್ಮಯ ತಪಸ್ಸು" ಮತ್ತು ಮನಸಂಬಂಧೀ ಮಾಡುವ "ಭಾವನೆಗಳ ತಪಸ್ಸು" ಎಂದು ವಿವರಿಸಿದ್ದಾನೆ.  ಭಗವಂತ ಹೀಗೆ ವಿಧಿ ನಿಷೇಧಗಳನ್ನರಿತು ಮೂರು ವಿಧದ ತಪಸ್ಸನ್ನು ಮಾಡುವ ಭಕ್ತರಿಗೆ ಪುಣ್ಯ ಫಲಗಳನ್ನು ಅಂದವಾಗಿ ನೀಡುತ್ತಾನೆ ಎಂದಿದ್ದಾರೆ ದಾಸರಾಯರು.

ನುಡಿವೆಣ್ಣು ಎಂಬುದು ವಾಗ್ದೇವಿಯಾದ ಸರಸ್ವತಿಗೆ ಅನ್ವಯಿಸುತ್ತದೆ. ಭಗವಂತನು ನುಡಿವೆಣ್ಣಿನ ಮೂಲಕವೇ ಜೀವನ ಹತ್ತಿರ ಪುಣ್ಯ ಕರ್ಮಗಳನ್ನು ಮಾಡಿಸುವುದು.  ಭಗವಂತನ ಆರಾಧನೆಯಾಗಿ ಯಾವುದೇ ಮಂತ್ರ, ವೇದಘೋಷ, ಸೂಕ್ತ ಪಾರಾಯಣಗಳನ್ನು ಪ್ರಾರಂಭಿಸುವ ಮೊದಲು ನಾವು ವಾಗ್ದೇವಿಯಾದ ಸರಸ್ವತಿಯನ್ನು "ಓಂ ಪ್ರಣೋ ದೇವೀ ಸರಸ್ವತೀ ವಾಜೇಭಿ ರ್‍ವಾಜಿನೀವತಿ, ಧೀನಾ ಮವಿತ್ರ್ಯವತು" ಎಂದು ಪ್ರಾರ್ಥಿಸುತ್ತೇವೆ. ಒಂದೊಂದು ಅಕ್ಷರವೂ ಭಗವಂತನ ರೂಪವೆಂದು ನಮ್ಮ ಶಾಸ್ತ್ರಗಳು ತಿಳಿಸುತ್ತವೆ.  ನಾವು ಆಡುವ ಪ್ರತೀ ಮಾತು ಕೂಡ ಭಗವಂತನ ಕುರಿತಾಗಿಯೇ ಇರಬೇಕು ಮತ್ತು ಅದನ್ನು ತಪಸ್ಸೆಂದು ಗ್ರಹಿಸಿ ಆಚರಿಸಬೇಕೆಂಬುದನ್ನು ಭಗವದ್ಗೀತೆಯ ೧೭ನೆಯ ಅಧ್ಯಾಯದ ೧೫ನೆಯ ಶ್ಲೋಕದಲ್ಲಿ ಶ್ರೀ ಕೃಷ್ಣನು
ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ | ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ || - ಆಡುವ ಮಾತುಗಳು ಉದ್ವೇಗರಹಿತವಾಗಿರಬೇಕು, ಮತ್ತೊಬ್ಬರ ಮನ ನೋಯಿಸದಂತಿರಬೇಕು, ಅರ್ಥಪೂರ್ಣವಾಗಿರಬೇಕು, ವ್ಯರ್ಥಾಲಾಪವಾಗಿರಬಾರದು, ಶ್ರವಣ ಮನಕಾನಂದವೀಯುವಂತಿರಬೇಕು.  ಯಾವುದು ಭಗವಂತನ ಗುಣಗಳನ್ನು ತಿಳಿಸುವುದೋ, ಭಗವಂತನ ನಾಮ ಜಪವಾಗಿದೆಯೋ, ಶಾಸ್ತ್ರಗಳ ಅಧ್ಯಯನವಾಗಿದೆಯೋ ಅದೇ ವಾಣಿಯ ಮೂಲಕ ಮಾಡುವ "ವಾಙ್ಮಯ ತಪಸ್ಸು" ಎಂದಿದ್ದಾನೆ.  ಹೀಗೆ ವಾಙ್ಮಯ ತಪಸ್ಸನ್ನು ಮಾಡುವುದು ಪುಣ್ಯಕರ್ಮವಾಗುತ್ತದೆ.  ಅದರ ಫಲವನ್ನು ಭಗವಂತನು ನಮಗೆ ಸರಿಯಾದ ಸಮಯಕ್ಕೆ ಕೊಟ್ಟು ಕಾಪಾಡುತ್ತಾನೆ.

ಲಕ್ಷ್ಮಣನ ಅಣ್ಣ -  ಲಕ್ಷ್ಮಣನು ಚಿಕ್ಕಂದಿನಿಂದಲೂ ತನ್ನ ಹಿರಿಯಣ್ಣನಾದ ರಾಮನಿಗೆ ಅತಿ ಪ್ರಿಯನಾಗಿದ್ದನು.  ತನ್ನದೇ ಮತ್ತೊಂದು ಪ್ರಾಣವು ಹೊರಗೆ ಬಂದು ತಮ್ಮ ಲಕ್ಷ್ಮಣನ ರೂಪದಲ್ಲಿದೆಯೆಂದೇ ಶ್ರೀರಾಮನು ಭಾವಿಸಿದ್ದನು.  ಲಕ್ಷ್ಮಣನು ಸದಾ ಅಣ್ಣನ ಜೊತೆಗೇ ಇರುತ್ತಿದ್ದನು.  ಶ್ರೀರಾಮಚಂದ್ರನ ಪಟ್ಟಾಭಿಷೇಕದ ಸಮಯದಲ್ಲಿ ಕೈಕೇಯಿಗೆ ಕೊಟ್ಟ ವರಗಳ ಪ್ರಭಾವದಿಂದ  ಧರ್ಮ ಪಾಶದಿಂದ ಕಟ್ಟಲ್ಪಟ್ಟ ದಶರಥ ಮಹಾರಾಜನು ರಾಮನನ್ನು, ಕಾಡಿಗೆ ಕಳುಹಿಸಬೇಕಾಯಿತು.  ತಂದೆಯ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ರಾಮನನ್ನು, ಅವನಿಗೆ ಅತಿ ಪ್ರಿಯನಾದ ಲಕ್ಷ್ಮಣನು ಅತೀ ಶ್ರೇಷ್ಠವಾದ ಸೋದರ ಭಾವವನ್ನು ವ್ಯಕ್ತಪಡಿಸುತ್ತಾ ಅನುಸರಿಸುತ್ತಾನೆ.  ದಂಡಕಾರಣ್ಯದಲ್ಲಿ ಅಣ್ಣನನ್ನು ಬೆನ್ನು ಬಿಡದೆ ಸದಾ ಜೊತೆಯಲ್ಲಿದ್ದು ಸೇವೆ ಮಾಡುತ್ತಾನೆ.  ಲಕ್ಷ್ಮಣನು ಉತ್ಕೃಷ್ಠವಾದ ಭಕ್ತಿ ಮತ್ತು ಸೋದರ ಪ್ರೇಮದ ಪ್ರತೀಕನಾಗುತ್ತಾನೆ.  ಹೀಗೆ ಆದರ್ಶವನ್ನು ಮೆರೆದ ಲಕ್ಷ್ಮಣನ ಅಣ್ಣನೆಂದು ಸಂಬೋಧಿಸಿಕೊಂಡು, ಭಗವಂತನು ತನ್ನ ಭಕ್ತನಾದ ಲಕ್ಷ್ಮಣನಿಗೆ ಧನ್ಯತಾ ಭಾವವನ್ನು ಕೊಟ್ಟಿರುವುದು ಕೂಡ ಶ್ರೀಹರಿಯ ಕಾರುಣ್ಯವೇ ಆಗಿದೆ.

ಒದಗುವ ಭಕ್ತರವಸರಕೆ -  ಅವಸರಕೆ ಎಂದರೆ ಜೀವನ ಸುಕರ್ಮಗಳು ಪರಿಪಕ್ವವಾಗುವ ಕಾಲಕ್ಕೆ ಸರಿಯಾಗಿ ಎಂದು ಅರ್ಥೈಸಬಹುದು.  ಭಕ್ತರಾಧೀನನಾದ ಶ್ರೀರಾಮಚಂದ್ರನು  ಎಲ್ಲಾ ಆಪತ್ತುಗಳನ್ನೂ ಪರಿಹರಿಸತಕ್ಕವನೆಂಬುದು ರಾಮಾಯಣದಲ್ಲಿ "ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ | ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್" - ಭಕ್ತರ ಆಪತ್ತುಗಳನ್ನು ಪರಿಹರಿಸತಕ್ಕವನೂ, ಸಕಲ ಸಂಪತ್ತುಗಳನ್ನು ಕೊಡತಕ್ಕವನೂ, ಸರ್ವಲೋಕ ಮನೋಹರನೂ ಆಗಿರುವ ಶ್ರೀರಾಮನಿಗೆ ಪುನಃ ಪುನಃ ನಮಸ್ಕರಿಸುತ್ತೇನೆ ಎಂದು ಪ್ರಾರ್ಥಿಸುವುದನ್ನು ತಿಳಿಸುತ್ತದೆ.  ಆಪತ್ತುಗಳು ಎದುರಾದಾಗ "ಆಪತ್ಕಾಲೇ ತು ಸಮ್ಪ್ರಾಪ್ತೇ ಸ್ಮರ್ತವ್ಯೋ ಹರಿರೀಶ್ವರಃ" - ಆಪತ್ಕಾಲವು ಒದಗಿ ಬಂದಾಗ ಸರ್ವಲೋಕೇಶ್ವರನಾದ ಹರಿಯನ್ನು ಸ್ಮರಿಸಬೇಕು ಎಂದು ಕೂಡ ತಿಳಿಸಿದೆ.  ಹೀಗೆ ಶರಣಾಗತರಾಗಿ ಪ್ರಾರ್ಥಿಸಿಕೊಂಡಾಗ
ಅಗ್ರತಃ ಪೃಷ್ಠತಶ್ಚೈವ ಪಾರ್ಶ್ವತಶ್ಚ ಮಹಾಬಲೌ |  ಆಕರ್ಣಪೂರ್ಣಧನ್ವಾನೌ ರಕ್ಷೇತಾಂ ರಾಮಲಕ್ಷ್ಮಣೌ || - ಕರ್ಣ ಪರ್ಯಂತವಾಗಿ ಧನುಸ್ಸಿನ ಶಿಂಜಿನಿಯನ್ನು ಸೆಳೆದು ಹಿಡಿದಿರುವ ಮಹಾಬಲಿಷ್ಠನಾದ ಲಕ್ಷ್ಮಣನ ಅಣ್ಣನಾದ ರಾಮಚಂದ್ರನು ತಮ್ಮ ಲಕ್ಷ್ಮಣ ಸಮೇತವಾಗಿ ಮುಂದೆ-ಹಿಂದೆ ಮತ್ತು ಅಕ್ಕ-ಪಕ್ಕಗಳಲ್ಲಿ ನಮ್ಮನ್ನು ರಕ್ಷಿಸಲು ಸಕಾಲಕ್ಕೆ ಧಾವಿಸಿ ಬಂದೊದಗುತ್ತಾನೆ ಎಂಬ ಉಲ್ಲೇಖವಿದೆ.   ಶ್ರೀರಾಮಚಂದ್ರನು ಸಾವಿರಾರು ವರ್ಷಗಳ ಕಾಲ ’ರಾಮರಾಜ್ಯ’ದಲ್ಲಿ ಪಶು, ಪಕ್ಷಿ, ಪ್ರಜೆಗಳೆಲ್ಲರನ್ನೂ ಆನಂದ ಪಡಿಸಿ, ಸಂತೃಪ್ತಿಯಿಂದ ರಾಜ್ಯವಾಳಿದ.  ಅವತಾರವನ್ನು ಮುಗಿಸಿ ತನ್ನ ಧಾಮಕ್ಕೆ ಹೊರಟ ಭಗವಂತನ ಹಿಂದೆ ಹಿಂಡು ಹಿಂಡಾಗಿ ವನಚರಗಳು, ಪಶುಗಳು, ಪಕ್ಷಿಗಳು, ಮನುಷ್ಯರು, ಮರ-ಗಿಡ-ಬಳ್ಳಿಗಳೂ ಕೂಡ ರಾಮಚಂದ್ರನನ್ನು ಅನುಸರಿಸಿಕೊಂಡು ಹೋಗುವರೆಂಬ ಉಲ್ಲೇಖವಿದೆ.  ಭಗವಂತನ ನಿರ್ಗಮನದ ಸಮಯದಲ್ಲಿ ಅಯೋಧ್ಯೆಯಲ್ಲಿ ಉಸಿರಾಡುವ ಒಂದೇ ಒಂದು ಪ್ರಾಣಿಯೂ ಉಳಿದಿರುವುದಿಲ್ಲ.  ಭಕ್ತಪರಾಧೀನನೂ, ಕರುಣಾಸಾಗರನೂ ಆದ ಭಗವಂತನು ಬ್ರಹ್ಮದೇವರಿಗೆ "ಏಷಾಂ ಲೋಕಂ ಜನೌಘಾನಾಂ ದಾತುಮಹರ್ಸಿ ಸುವ್ರತ" - ನನ್ನನ್ನನುಸರಿಸಿ ಬಂದಿರುವ ಈ ನನ್ನ ಭಕ್ತ ಸಮುದಾಯಕ್ಕೆ ಉತ್ತಮವಾದ ಲೋಕಗಳನ್ನು ಅನುಗ್ರಹಿಸು ಎಂದು ಆದೇಶಿಸುತ್ತಾನೆ.  ಇದು ಲಕ್ಷ್ಮಣನ ಅಣ್ಣನಾದ ಶ್ರೀರಾಮನ ಕಾರುಣ್ಯವಾಗಿದೆ.

ಅಮರಗಣಸಹಿತ - ಜೀವನು ಸಾಧನಾ ಶರೀರವನ್ನು ಪಡೆದುಕೊಂಡು ಬಂದಿದ್ದರೂ ಕೂಡ, ಅವನು ಅಸ್ವತಂತ್ರನು ಮತ್ತು ಭಗವಂತನ ಅಧೀನನೇ ಆಗಿರುವುದರಿಂದ, ತಾನೇ ಸ್ವತಃ ಏನನ್ನೂ ಮಾಡಲಾರದವನಾಗಿದ್ದಾನೆ.  ಭಗವಂತನೇ ಜೀವನಲ್ಲಿ ನಿಂತು, ಮಾಡಿ ಮಾಡಿಸುತ್ತಾನೆ.  ತಾನೊಬ್ಬನೇ ಅಲ್ಲದೆ, ತನ್ನ ಜೊತೆ ಜೊತೆಗೇ ರಮಾದೇವಿ, ಬ್ರಹ್ಮ, ವಾಯು ಮುಂತಾದ ದೇವತೆಗಳ ಸಮೂಹವನ್ನೇ, ಜೀವಿಯ ಪ್ರತಿ ಅಂಗಗಳಲ್ಲೂ ನಿಲ್ಲಿಸಿ, ಅವರಿಂದ ಪ್ರೇರಿಸಿ, ಮಾಡಿಸುತ್ತಾನೆ.  ಯಾವ ಜೀವನೂ ಭಗವಂತನಿಗೆ ಹೆಚ್ಚೂ ಅಲ್ಲ, ತೃಣವೂ ಅಲ್ಲ.  ಸಾಧನಾ ಮಾರ್ಗದಲ್ಲಿ ನಡೆಯಬೇಕೆಂಬ ಜೀವನಿಗೆ ತನ್ನ ಪರಿವಾರದ ಎಲ್ಲಾ ದೇವತೆಗಳಿಂದಲೂ ಅವಕಾಶ ಒದಗಿಸಿ ಜೀವನ ಸಾಧನೆ ಮುನ್ನಡೆಯುವಂತೆ ಮಾಡುತ್ತಾನೆ.  ಭಗವಂತ ಯಾವುದೇ ಕೆಲಸವನ್ನು ಮಾಡಲು ನಿರ್ಧರಿಸಿದರೂ, ಅವನ ಪರಿವಾರ ದೇವತೆಗಳು, ಭಗವಂತನ ಅವತಾರಕ್ಕೆ ಮೊದಲೇ ಬಂದು, ಅಲ್ಲಿ ಎಲ್ಲವನ್ನೂ ಸಜ್ಜುಗೊಳಿಸಿ, ಭಗವಂತನ ಆಗಮನಕ್ಕೆ ಕಾತುರದಿಂದ ಕಾಯುತ್ತಾರೆ.  ರಾವಣನ ವಧೆಯಾಗಿ, ಭೂಭಾರ ಹರಣವಾಗಬೇಕಾದ ಕಾಲದಲ್ಲಿ, ಶ್ರೀಹರಿಗೆ ಸಹಾಯಕ್ಕೆ ಯೋಗ್ಯರಾದ ಪ್ರಾಣಿವಿಶೇಷಗಳನ್ನು ಭೂಮಿಯಲ್ಲಿ ಸೃಷ್ಟಿಸಿ ಎಂದು ಬ್ರಹ್ಮ ದೇವರು ದೇವತೆಗಳಿಗೆ ಆದೇಶಿಸುತ್ತಾರೆ.  ಹೀಗೆ ಭಗವಂತ ಭಕ್ತನನ್ನು ಅನುಗ್ರಹಿಸಲು, ತಾನೊಬ್ಬನೇ ಬರದೆ ತನ್ನ ಅಮರಗಣ ಸಹಿತವಾಗಿ ಬಂದು ಉದ್ಧರಿಸುತ್ತಾನೆ.  ತನ್ನ ಇಚ್ಛಾಮಾತ್ರದಿಂದಲೇ, ತಾನೊಬ್ಬನೇ ಎಲ್ಲಾ ಕಾರ್ಯವನ್ನೂ ನಡೆಸಬಲ್ಲ ಭಗವಂತನು ತನ್ನ ಅಮಿತ ಕಾರುಣ್ಯ, ವಾತ್ಸಲ್ಯಗಳಿಂದಾಗಿ ಹೀಗೆ ತನ್ನ ಅಮರಗಣ ಸಹಿತವಾಗಿ, ತನ್ನ ಭಕ್ತರನ್ನು ಉದ್ಧರಿಸುತ್ತಾನೆ.
 
ಮೇಲಿನ ದೃಷ್ಟಾಂತಗಳನ್ನು ಗಮನಿಸಿದಾಗ, ಕಣ್ಣುಗಳನ್ನು ಅಪಾಯ ಬಾರದಂತೆ ಜೋಪಾನ ಮಾಡುವ ರೆಪ್ಪೆಯ೦ತೆ, ನವೆಯು೦ಟಾದಾಗ ತುರಿಸುವ ಕೈಗಳ೦ತೆ, ಸಾಧನಾ ಪಥದಲ್ಲಿ ಸಾಗುವ ಜೀವಿಗೆ ಭಗವ೦ತನು ನಡುನಡುವೆ ಬರುವ ಪ್ರತಿಬ೦ಧಕಗಳ ಸರಣಿಯನ್ನು ಸರಿಪಡಿಸಿ ನ೦ತರ ಅದನ್ನು ನಿವಾರಿಸುತ್ತಾನೆ ಎ೦ಬುದು ವೇದ್ಯವಾಗುತ್ತದೆ.


ಚಿತ್ರಕೃಪೆ : ಅಂತರ್ಜಾಲ