Friday, July 11, 2014

ಕರುಣಾ ಸಂಧಿ - ೨೩ ನೇ ಪದ್ಯ

ಚೇತನಾ ಚೇತನ ವಿಲಕ್ಷಣ
ನೂತನ ಪದಾರ್ಥಗಳೊಳಗೆ ಬಲು
ನೂತನತಿ ಸುಂದರಕೆ ಸುಂದರ ರಸಕೆ ರಸರೂಪ |
ಜಾತರೂಪೋದರಭವಾದ್ಯರೊ-
ಳಾತತಪ್ರತಿಮ ಪ್ರಭಾವ ಧ-
ರಾತಳದೊಳೆಮ್ಮೊಡನೆಯಾಡುತಲಿಪ್ಪ ನಮ್ಮಪ್ಪ
  || ೨೩ || 


ಪ್ರತಿಪದಾರ್ಥ : ಚೇತನಾಚೇತನ ವಿಲಕ್ಷಣ - ಭಗವಂತನು ಅಪ್ರಾಕೃತ ಸ್ವರೂಪದವನು, ನೂತನ ಪದಾರ್ಥಗಳೊಳಗೆ ಬಲು ನೂತನ - ಹೊಸತರಲ್ಲಿ ಹೊಸದಾದ ನವನವೀನ, ಅತಿ ಸುಂದರಕೆ ಸುಂದರ -  ಅತ್ಯಂತ ಸುಂದರ ಎಂದು ಯಾವುದಿದೆಯೋ ಅದಕ್ಕಿಂತಲೂ ಭಗವಂತನು ಅತಿ ಸುಂದರನು, ರಸಕೆ ರಸ ರೂಪ -  ರಸಗಳಲ್ಲಿ ಅಂತರ್ಗತನಾಗಿರುವ ಭಗವಂತನಿಂದಲೇ ಆ ಪದಾರ್ಥಗಳು ಸವಿಯಾಗಿರುವುದು, ಜಾತರೂಪೋದರ - ಬ್ರಹ್ಮ ದೇವರು, ಭವ - ಈಶ್ವರ, ಆದ್ಯರೊಳು - ಮೊದಲಾದ ದೇವತೆಗಳಲ್ಲಿ, ಆತತ - ವ್ಯಾಪ್ತನಾಗಿರುವವನು, ಅಪ್ರತಿಮ ಪ್ರಭಾವ - ಅಸಾಮಾನ್ಯ ಅಸದೃಶನಾದವನು, ಧರಾತಳದೊಳು - ಈ ಬ್ರಹ್ಮಾಂಡದಲ್ಲಿ, ನಮ್ಮೊಡನೆಯಾಡುತಲಿಪ್ಪ - ಸದಾ ನಮ್ಮ ಜೊತೆಯಲ್ಲೇ ಇದ್ದು ನಮ್ಮೊಡನೆಯೇ ವಿಹರಿಸುವವನು, ನಮ್ಮಪ್ಪ - ನಮ್ಮನ್ನೆಲ್ಲಾ ಸೃಷ್ಟಿಸಿರುವ ಜಗದೊಡೆಯ.
 
ಸರ್ವಜಗತ್ತಿಗೆ ಸೃಷ್ಟಿಕರ್ತನಾದ ಭಗವ೦ತನು, ತಾನು ಸೃಷ್ಟಿ ಮಾಡಿದ ಜೀವ, ಜಡಪದಾರ್ಥಗಳು ದೋಷಯುಕ್ತವಾಗಿದ್ದರೂ, ತಾನು ಮಾತ್ರ ಸುಲಕ್ಷಣನಾಗಿಯೂ ಮತ್ತು ಪೂರ್‍ಣನಾಗಿಯೂ ಇರುತ್ತಾನೆ. ನವನವೀನವಾಗಿ ನಿರ್ಮಾಣವಾಗುವ ಪದಾರ್ಥಗಳೊಳಗೆ ಆದ್ಯ೦ತನಾಗಿಯೂ, ಸು೦ದರ ಶಬ್ದವಾಚ್ಯನಾಗಿರುವುದರಿ೦ದಲೂ ಅದೇ ಆಕಾರದಲ್ಲಿಯೂ, ನೂತನ ನಾಮಾ೦ಕಿತನಾಗಿಯೂ ಇರುತ್ತಾನೆ. ಸು೦ದರ ಪದಾರ್ಥಗಳಲ್ಲಿನ ಸೌ೦ದರ್ಯನಾಗಿಯೂ, ರಸಪದಾರ್ಥಗಳಲ್ಲಿ ರಸರೂಪನಾಗಿಯೂ, ಬ್ರಹ್ಮರುದ್ರಾದಿ ದೇವತೆಗಳಲ್ಲಿ ವ್ಯಾಪ್ತನಾಗಿಯೂ, ಅಧಿಷ್ಠಾನಸದೃಶವಾದ ಆಕಾರನಾಗಿರುತ್ತಾನೆ. ಈ ಜಗತ್ತಿನಲ್ಲಿ, ಸಮಸ್ತ ಜೀವರಲ್ಲಿಯೂ ಅ೦ತರ್ಗತನಾಗಿದ್ದು, ಬಿ೦ಬಕ್ರಿಯಾದ್ವಾರ ಇ೦ದ್ರಿಯವ್ಯಾಪಾರಗಳನ್ನು ನಡೆಸುವ ಆಟಗಳನ್ನು ಆಡಿಸುತ್ತಿರುತ್ತಾನೆ. ಜೀವನಿಗೂ ಪರಮಾತ್ಮನಿಗೂ ಇರುವ ಸಂಬಂಧ ಅನಂತ ಮತ್ತು ಅನಾದಿಯಾಗಿದೆ.  ಪರಮಾತ್ಮನ ಬಿಂಬರೂಪದ ಚೇತನ ಜೀವದ ಚೇತನಕ್ಕೆ ಚೇತನವನ್ನು ಕೊಡುವುದರಿ೦ದ ಪರಮಾತ್ಮನು ಚೇತನಾಚೇತನ ವಿಲಕ್ಷಣನು.  ಬ್ರಹ್ಮ-ರುದ್ರಾದಿಗಳಿಗೆ ಆ ಶಕ್ತಿ ಕೊಡುವ ಬಿ೦ಬರೂಪಿ ಪರಮಾತ್ಮನು,  ಬ್ರಹ್ಮನ ಶಕ್ತಿಯನ್ನು ತೆಗೆದುಕೊಂಡು ಬ್ರಹ್ಮ ಎನಿಸಿಕೊಳ್ಳುತ್ತಾನೆ, ರುದ್ರನ ಶಕ್ತಿಯನ್ನು ತೆಗೆದುಕೊಂಡು ರುದ್ರ ಎನಿಸಿಕೊಳ್ಳುತ್ತಾನೆ.  ಇಂತಹ ಅತೀವ ಶಕ್ತಿಗಳನ್ನು ಬ್ರಹ್ಮ ರುದ್ರರಿಗೆ ಕೊಟ್ಟು, ಅದೇ ಹೆಸರಿನಿಂದ ಕರೆಸಿಕೊಂಡು, ಅಲ್ಪ ಜೀವಿಗಳಲ್ಲೂ ಅವರದೇ ಹೆಸರಿನಿಂದ ಆಡುತ್ತಿದ್ದಾನೆ.  ಎಲ್ಲರ ಅಪ್ಪ ನಮ್ಮಪ್ಪನಾಗಿದ್ದಾನೆ.

ಭಗವಂತ ಜಗತ್ತನ್ನು ಜೀವ ಅಥವಾ ಚೇತನ, ಜಡ ಅಥವಾ ಅಚೇತನಗಳನ್ನಾಗಿ ವಿಂಗಡಿಸಿ ಸೃಷ್ಟಿಸಿದ.  ಇವೆರಡಕ್ಕೂ ಚೈತನ್ಯ ನೀಡುವವನಾಗಿ ಪರಮಾತ್ಮನಾದ.  ಜಗತ್ತಿನ ಮೂಲ ಕಾರಣಗಳು ಚೇತನ ಮತ್ತು ಅಚೇತನರೆಂದಾಯಿತು.  ಚೇತನರೊಳಗೆ ಚೇತನವನ್ನೂ, ಅಚೇತನಕ್ಕೆ ಅಚೇತನವನ್ನೂ ಕೊಡುವವನು ಭಗವಂತನೇ ಆಗಿದ್ದಾನೆ.    ಅವನು ಸರ್ವಸ್ವತಂತ್ರನಾದವನು ಆದರೆ ಜೀವಿಗಳು ಅಸ್ವತಂತ್ರ ಚೇತನರು.  ಚೇತನಾಚೇತನ ಪ್ರಪಂಚವೆಂದು ನಾವು ಸದಾ ನೋಡುವುದು ಅಸ್ವತಂತ್ರ ಜೀವಿಗಳಿರುವ  ಪ್ರಪಂಚವೇ ಆಗಿರುತ್ತದೆ. 

 

ಚೇತನಾಚೇತನವಿಲಕ್ಷಣ - ಜೀವರಾಶಿಗಳೆಲ್ಲಾ ಅಚೇತನದ ಮುಸುಕಿನೊಳಗಿರುವ ಚೇತನಗಳೇ ಆಗಿವೆ.   ರಮಾ ಬ್ರಹ್ಮಾದಿ ದೇವತೆಗಳೂ ಕೂಡ ಅಚೇತನದ ಮುಸುಕಿನೊಳಗಿರುವ ಚೇತನಗಳೇ ಆಗಿರುತ್ತಾರೆ.  ಭಗವಂತನು ಮಾತ್ರ ಶುದ್ಧ ಚೇತನನು, ಅಚೇತನದ ಆವರಣವಿಲ್ಲದವನು.   ರಮಾ ಬ್ರಹ್ಮಾದಿ ದೇವತೆಗಳೆಲ್ಲರಿಗೂ ಅಚೇತನದ ಆವರಣ ಅನಾವರಣಗೊಳ್ಳುವಿಕೆಯಿದೆ, ಆದರೆ ಭಗವಂತನೊಬ್ಬನಿಗೆ ಮಾತ್ರ ಅನಾದಿ ಕಾಲದಿಂದಲೂ, ಅನಂತ ಕಾಲದಲ್ಲೂ ಯಾವ ಬದಲಾವಣೆಯೂ ಇಲ್ಲ.  ಅವನು ಸದಾ ಚೈತನ್ಯದಾಯಕನಾಗಿರುವವನು.    ಚೇತನರೆಂದರೆ ಜ್ಞಾನಿಗಳು ಎಂದಾಗುತ್ತದೆ.   ಅಚೇತನವನ್ನು ಅ+ಚೇತನ ಎಂದು ಬಿಡಿಸಿದರೆ ’ಅ’ ಅಕ್ಷರ ವಾಚ್ಯನು ಭಗವಂತನೇ ಆಗಿದ್ದಾನೆ.  ಅ ಅಕ್ಷರವು ಓಂಕಾರದ ಪ್ರಥಮ ಅಕ್ಷರವಾಗಿದೆ.  ಭಗವಂತನು ಓಂಕಾರ ವಾಚ್ಯನಾಗಿದ್ದಾನೆ.    ಭಗವಂತನು ಅಕಾರ ವಾಚ್ಯನಾದ ಶುದ್ಧಾತಿಶುದ್ಧವಾದ ಪರಮ ಚೇತನವಾಗಿದ್ದಾನೆ.  ಯಾರಲ್ಲಿಯೂ, ಯಾವಾಗಲೂ ಬಳಕೆಯೇ ಆಗದಂತಹ ವಿಶೇಷ ನಾಮಗಳಿಂದ ಭಗವಂತ ಮಾತ್ರನೇ ವಾಚ್ಯನಾಗುತ್ತಾನೆ.  ಅ, ಅಹಃ, ಅಹಂ ಎಂಬೆಲ್ಲಾ ಅಕ್ಷರಗಳೂ ಭಗವಂತನ ಉಪಾಸನೆಗಾಗಿ ಇರುವ ರಹಸ್ಯ ನಾಮಗಳು.  ವಿಷ್ಣು ಸಹಸ್ರನಾಮದಲ್ಲಿ "ಅಹಃ ಸಂವತ್ಸರೋವ್ಯಾಳಃ..." - ಜ್ಞಾನ ಸ್ವರೂಪಿಯಾದ, ಸ್ವಯಂ ಪ್ರಕಾಶಿತನಾದ, ಅಜ್ಞಾನವಾಗಲೀ, ಅಂಧಕಾರವಾಗಲೀ ಆವರಿಸಲಾಗದವನು ಎಂದು ಸ್ತುತಿಸಲ್ಪಟ್ಟಿದೆ.  ಉಳಿದ ಎಲ್ಲಾ ಪದಾರ್ಥಗಳೂ, ಭಗವಂತನ ಸ್ವಪ್ರಕಾಶಿತ ಪ್ರಕಾಶವನ್ನು ಅನುಸರಿಸಿ ಪ್ರಕಾಶಿಸುವುವು.  ಅವುಗಳಲ್ಲಿ ಭಗವಂತ ಅದೇ ರೂಪದಲ್ಲಿ ಸ್ಥಿತನಾದ್ದರಿಂದಲೇ ಅವುಗಳು ಪ್ರಕಾಶಗೊಳ್ಳುವುವು.    ಭಗವಂತನೆಂಬ ಶುದ್ಧ ಚೇತನವು ಉಳಿದ ಎಲ್ಲಾ ಪದಾರ್ಥಗಳಲ್ಲೂ, ಜೀವಿಗಳಲ್ಲೂ, ರಮಾ ಬ್ರಹ್ಮಾದಿ ದೇವತೆಗಳಲ್ಲೂ ನೆಲೆಸಿ ಪ್ರಕಾಶಿಸಿ ಆ ಚೇತನಗಳು ಪ್ರಕಾಶಿಸುವಂತೆ ಮಾಡುವನು.  ಭಗವಂತನಿಗಿಂತಲೂ ಮಿಗಿಲಾದ ಯಾವುದೇ ಚೇತನವೂ ಇಲ್ಲವೇ ಇಲ್ಲವಾದ್ದರಿಂದಲೇ ಅವನು ಅಚೇತನನೆಸಿಕೊಳ್ಳುತ್ತಾನೆ.  ಭಗವದ್ಗೀತೆಯ ೧೦ನೆಯ ಅಧ್ಯಾಯದಲ್ಲಿ ಭಗವಂತ "ಅಕ್ಷರಾಣಾಮಕಾರೋಸ್ಮಿ".. - ಅಕ್ಷರಗಳಲ್ಲಿ ಅಕಾರವು ನಾನು  ಮತ್ತು "ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ" - ಇಂದ್ರಿಯಗಳಲ್ಲಿ ಮನಸ್ಸು ಮತ್ತು ಭೂತಪ್ರಾಣಿಗಳ ಚೈತನ್ಯ, ಅಂದರೆ ಜೀವನ ಶಕ್ತಿಯು ನಾನು ಎಂದು ತಿಳಿಸಿದ್ದಾನೆ.   

ಭಗವಂತನು  ಯಾರಿಂದಲೂ ನಿಯಂತ್ರಿಸಲಾಗದವನು, ಪರಿಪೂರ್ಣನು, ಸ್ವತಂತ್ರನು.  ಯಾರನ್ನು ಬಿಟ್ಟು ಉಳಿದ ಚೇತನಗಳು ಸ್ವತಂತ್ರವಾಗಿ ಇರಲಾರರೋ, ಅಂತಹವನು ಭಗವಂತನು.  ಭಗವಂತನು "ಅಹಂ" ಎಂದು ಉಪಾಸಿಸಲ್ಪಡುತ್ತಾನೆ.  ಜೀವಿಗಳು ಅನೇಕ ಬಾರಿ ದೇಹ ಬಿಟ್ಟು, ಬಟ್ಟೆ ಬದಲಿಸುವಂತೆ ಅನೇಕ ದೇಹಗಳನ್ನು ಹೊಂದುತ್ತಾರಾದ್ದರಿಂದ ಅವರು "ಹಂ".  ಅಕಾರ ವಾಚ್ಯನಾದವನು ಭಗವಂತನಾದ್ದರಿಂದ ಅವನು ಭಿನ್ನವಾದವನು.  ತಾನು ಎಲ್ಲಕ್ಕಿಂತಲೂ, ಎಲ್ಲರಿಗಿಂತಲೂ ಭಿನ್ನವಾದವನು ತಾನೇ ’ಪುರುಷೋತ್ತಮ’ನು ಏಕೆಂದು ಭಗವದ್ಗೀತೆಯ ೧೫ನೇ ಅಧ್ಯಾಯದಲ್ಲಿ ಭಗವಂತನು
ದ್ವಾವಿಮೌ ಪುರುಷೌ ಲೋಕೇ, ಕ್ಷರಾಶ್ಚಾಕ್ಷರ ಏವ ಚ |
ಕ್ಷರಃ ಸರ್ವಾಣಿ ಭೂತಾನಿ, ಕೂಟಸ್ಥೋಕ್ಷರ ಉಚ್ಯತೇ || - ಜಗತ್ತಿನಲ್ಲಿ ನಾಶವಾಗುವ ಹಾಗೂ ನಾಶವಾಗದೇ ಉಳಿಯುವ ಎರಡು ಪ್ರಕಾರದ ಪುರುಷರಿದ್ದಾರೆ. ಇದರಲ್ಲಿ ಸಂಪೂರ್ಣ ಭೂತಪ್ರಾಣಿಗಳ ಶರೀರಗಳು ನಾಶವಾಗುವಂತಹುದು ಮತ್ತು ಜೀವಾತ್ಮನು ಅವಿನಾಶಿಯೆಂದು ಹೇಳಲಾಗಿದೆ.
ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ |
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ || - ಮೇಲೆ ಹೇಳಿದ ಎರಡು ಪ್ರಕಾರದ ಪುರುಷರಿಗಿಂತಲೂ ಉತ್ತಮನಾದ, ಬೇರೆಯೇ ಆದ ಪುರುಷನೊಬ್ಬನಿದ್ದಾನೆ.  ಅವನು ಮೂರು ಲೋಕಗಳಲ್ಲಿ ಪ್ರವೇಶ ಮಾಡಿ ಎಲ್ಲರ ಧಾರಣೆ - ಪೋಷಣೆ ಮಾಡುತ್ತಾನೆ.  ಆದ್ದರಿಂದ ಅವನನ್ನು ಅವಿನಾಶಿ, ಪರಮೇಶ್ವರ, ಪರಮಾತ್ಮ ಎಂದು ಹೇಳಲಾಗಿದೆ.
ಯಸ್ಮಾತ್ ಕ್ಷರಮತೀತೋಹಮಕ್ಷರಾದಪಿ ಚೋತ್ತಮಃ |
ಅತೋಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ || - ನಾನು ನಾಶವಾಗುವ ಜಡವರ್ಗ, ಕ್ಷೇತ್ರಕ್ಕಿಂತಲೂ ಸರ್ವಥಾ ಅತೀತನಾಗಿದ್ದೇನೆ ಮತ್ತು ಅವಿನಾಶಿ ಎನಿಸಿಕೊಂಡಿರುವ ಜೀವಾತ್ಮನಿಗಿಂತಲೂ ಉತ್ತಮನಾಗಿದ್ದೇನೆ.  ಆದ್ದರಿಂದ ಲೋಕದಲ್ಲಿ ಮತ್ತು ವೇದದಲ್ಲಿ ಕೂಡ "ಪುರುಷೋತ್ತಮ"ನೆಂದು ಸ್ತುತಿಸಲ್ಪಟ್ಟಿದ್ದೇನೆ ಎಂದು ತಿಳಿಸಿದ್ದಾನೆ.
ಭಾಗವತದ ಎರಡನೆಯ ಸ್ಕಂದದಲ್ಲಿ ಭಗವಂತನ ರೂಪವನ್ನು ವಿವರಿಸುತ್ತಾ "ಬ್ರಹ್ಮಾಂಡದಲ್ಲಿ ವ್ಯಕ್ತವಾದ ಭಗವಂತನಿಗೆ ಪುರುಷ ಎಂದು ಹೆಸರು.  ಅವನಿಗೆ ಅನಂತ ತೊಡೆ, ಕಾಲು, ತೋಳು, ಕಣ್ಣು, ಮುಖ ಮತ್ತು ಶಿರಸ್ಸುಗಳುಂಟು.  ೫೦ ಕೋಟಿ ಯೋಜನ ವಿಸ್ತಾರವಾದ ಬ್ರಹ್ಮಾಂಡದಷ್ಟೇ ದೊಡ್ಡ ದೇಹವುಳ್ಳ ಪುರುಷನ ಅವಯವಗಳನ್ನು ಆಶ್ರಯಿಸಿ ೧೪ ಲೋಕಗಳೂ ಸೃಷ್ಟಿಯಾದವು.  ಲೋಕಗಳನ್ನು ಸೃಷ್ಟಿಸಿ ಅವಕ್ಕೆ ಆಧಾರನಾಗಿ, ಅವುಗಳಲ್ಲಿ ವ್ಯಾಪ್ತನಾಗಿ ಅವುಗಳಿಗಿಂತ ಉತ್ತಮನಾದ್ದರಿಂದ ವಿರಾಟಪುರುಷನಾಮಕನಾದ ಭಗವಂತನಿಗೆ ಲೋಕಮಯನೆಂದು ಹೆಸರು" ಎಂದಿದ್ದಾರೆ.
ಕಠೋಪನಿಷತ್ತಿನಲ್ಲಿ
ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾಮೇಕೋ ಬಹೂನಾಂ ಯೋ ವಿದಧಾತಿ ಕಾಮಾನ್ |
ತಮಾತ್ಮಸ್ಥಂ ಯೇನುಪಶ್ಯನ್ತಿ ಧೀರಾಸ್ತೇಷಾಂ ಶಾನ್ತಿಃ ಶಾಶ್ವತೀ ನೇತರೇಷಾಮ್ || - ಪರಮಾತ್ಮನು ಅನಿತ್ಯರಲ್ಲಿ ನಿತ್ಯನು.  ಚೇತನರಲ್ಲಿ ಚೇತನನು.  ಏಕೈಕನಾದರೂ ಬಹುಕಾಮಗಳನ್ನು ನೆರವೇರಿಸುವಂತಹ ಆತ್ಮವನ್ನು ತಮ್ಮ ಆತ್ಮದಲ್ಲಿಯೇ ದರ್ಶಿಸುವಂತಹ ಪ್ರಾಜ್ಞರಿಗೆ ಮಾತ್ರವೇ ಶಾಶ್ವತ ಶಾಂತಿ ಲಭಿಸುತ್ತದೆ, ಇತರರು ಆ ಶಾಂತಿಯನ್ನು ಹೊಂದಲಾರರು ಎಂದು ತಿಳಿಸಿದೆ.

ಭಾಗವತದಲ್ಲಿ ಭಗವಂತನು "ವಿಲಕ್ಷಣ"ನು ಏಕೆಂದರೆ ಚೇತನ ರೂಪಕವಾದ ಈ ಜಗತ್ತು, ಭಗವಂತನ ದೇಹದೊಳಗೆ/ಉದರದೊಳಗೆ ಲಯ ಹೊಂದುತ್ತದೆ,  ಅವನು ಸ್ವತಂತ್ರನಾಗಿ ಚೇತನಾ ಜಗತ್ತು ಪ್ರವರ್ತಿಸುವಂತೆ ಮಾಡುತ್ತಾನಾದ್ದರಿಂದಲೇ ಅವನು ಚೇತನಾ ಚೇತನರಿಗಿಂತಲೂ ವಿಲಕ್ಷಣನಾದವನು ಎಂದಿದ್ದಾರೆ.  ನಮ್ಮ ಯೋಗ್ಯತೆಯಿಂದ ಯಾವ ವಿಷಯಗಳನ್ನು ಅರ್ಥ ಮಾಡಿಕೊಳ್ಳಬಹುದೋ, ನಮ್ಮ ಯೋಗ್ಯತೆಗೆ ಯಾವುದು ನಿಲುಕುವುದೋ, ಅದ್ಯಾವುದೂ ಅಲ್ಲವಾದವನು ಮತ್ತು ಎಲ್ಲವನ್ನೂ ಮೀರಿದವನೇ ಭಗವಂತನು.  ಆದ್ದರಿಂದಲೇ ಅವನು ವಿಲಕ್ಷಣನು. 
ಅಷ್ಟಮಸ್ಕಂಧದ ೩ನೇ ಅಧ್ಯಾಯದಲ್ಲಿ ಬರುವ ಗಜೇಂದ್ರಮೋಕ್ಷದಲ್ಲಿ :
ಸ ವೈ ನ ದೇವಾಸುರಮರ್ತ್ಯತಿರ್ಯಕ್
ಜ್ನ ಸ್ತ್ರೀ ನ ಷಣ್ಡೋ ನ ಪುಮಾನ್ನ ಜನ್ತುಃ |
ನಾಯಂ ಗುಣಃ ಕರ್ಮ ನ ಸನ್ನ ಚಾಸ-
ನ್ನಿಷೇಧಶೇಷೋ ಜಯತಾದಶೇಷಃ ||  - ಭಗವಂತನು ದೇವತೆಯಲ್ಲ, ರಾಕ್ಷಸನಲ್ಲ, ಮನುಷ್ಯನಲ್ಲ, ತಿರ್ಯಗ್ಜಂತುವಲ್ಲ, ಹೆಣ್ಣಲ್ಲ, ಗಂಡಲ್ಲ, ನಪುಂಸಕನೂ ಅಲ್ಲ, ಅಸಾಧಾರಣವಾದ ಅಥವಾ ಸಾಧಾರಣವಾದ ಪ್ರಾಣಿಯೂ ಅಲ್ಲ, ಗುಣವಲ್ಲ, ಕರ್ಮ ಕಾರ್ಯವೂ ಅಲ್ಲ, ಕಾರಣವೂ ಅಲ್ಲ, ಸತ್ತಲ್ಲ-ಅಸತ್ತಲ್ಲ.  ಈ ಸಕಲ ವಸ್ತುಗಳಿಗಿಂತಲೂ ಬೇರೆಯಾಗಿರುವ, ಇವು ಯಾವುವೂ ಅಲ್ಲವೆಂದು ನಿಷೇಧಿಸಿದ ಬಳಿಕ ಉಳಿಯುವ ಸರ್ವಾತ್ಮನಾದವನು ಎಂದು ವರ್ಣಿಸಲಾಗಿದೆ.

ನೂತನ ಪದಾರ್ಥಗಳೊಳಗೆ ಬಲು ನೂತನ - ನೂತನವೆಂದರೆ ಆಗ ತಾನೇ ತಯಾರಿಸಲ್ಪಟ್ಟ ವಸ್ತು ಅಥವಾ ಆಗ ತಾನೇ ಅರಳಿದ ಹೂವು ಎನ್ನಬಹುದು.  ಯಾವುದೇ ವಸ್ತುವಾಗಲೀ, ಹೂವಾಗಲೀ, ಹಣ್ಣಾಗಲೀ ಅದು ಕೆಲವು ದಿನಗಳು, ನಿಮಿಷಗಳು, ಘಳಿಗೆಗಳು ಮಾತ್ರ ನೂತನವಾಗಿರುತ್ತದೆ.  ಈ ಹೊಸತನ ಸ್ವಾಭಾವಿಕವಾಗಿಯೇ ಎಲ್ಲರನ್ನೂ ಆಕರ್ಷಿಸುತ್ತದೆ.  ಹೊಸತನದ ವಿಜೃಂಭಣೆ ಆ ವಸ್ತುವಿನಲ್ಲಿರುವ, ಹೂವಿನಲ್ಲಿರುವ ಅದರ ಗುಣಗಳಾದ ರೂಪ, ರಸ ಹಾಗೂ ಗಂಧವಾಗಿರುತ್ತದೆ.  ಈ ನೂತನ ಪದಾರ್ಥಗಳಿಗೆಲ್ಲ ಕಾರಣವಾದ ಅದರ ಗುಣಗಳು ಪ್ರಕೃತಿಗನುಗುಣವಾಗಿ ಕಡಿಮೆಯಾಗುತ್ತಾ ಬರುತ್ತದೆ.  ಉದಾಹರಣೆಗೆ ಆಗ ತಾನೆ ಸೂರ್ಯ ರಶ್ಮಿ ಸೋಕಿ ಅರಳಿದ ಸುಮ, ಕೆಲವು ಗಂಟೆಗಳಿಗೆಲ್ಲಾ ತನ್ನ ಹೊಸತನ ಕಳೆದುಕೊಂಡು ಬಾಡುತ್ತದೆ, ತನ್ನ ಹೊಸತನ ಅಥವಾ ತಾಜಾತನ ಕಳೆದುಕೊಂಡು ಬಿಡುತ್ತದೆ.  ಆದರೆ ಭಗವಂತನಲ್ಲಿರುವ ರೂಪ ರಸ ಗಂಧಾದಿಗಳು ಎಂದಿಗೂ ನಿತ್ಯ ನೂತನ, ನಿತ್ಯ ಶುದ್ಧವಾದವುಗಳು.  ಎಂದಿಗೂ ಮಾಸದ, ಹಳಸದ ದಿವ್ಯ ಗುಣಗಳು.  ಆದ್ದರಿಂದಲೇ ಅವನು ನಿತ್ಯನೂತನನಾಗಿದ್ದಾನೆ.  ಅನಾದಿಕಾಲದಿಂದಲೂ ಅನವರತ  ಸೇವಿಸುತ್ತಿರುವ ಮಹಾಲಕ್ಷ್ಮಿಯೇ ಎಣಿಸಲಾಗದ ನೂತನಾತಿ ನೂತನ ಗುಣಗಳನ್ನು ಕಂಡು ರೋಮಾಂಚಿತಳಾಗುತ್ತಾಳೆ. 
ಭಗವದ್ಗೀತೆಯ ೭ನೇ ಅಧ್ಯಾಯದ ೮/೯ ಶ್ಲೋಕಗಳಲ್ಲಿ ಭಗವಂತ ಅರ್ಜುನನಿಗೆ
ರಸೋಹಮಪ್ಸು ಕೌಂತೇಯ ಪ್ರಭಾಸ್ಮಿ ಶಶಿಸೂರ್ಯಯೋಃ |
ಪ್ರಣವಃ ಸರ್ವವೇದೇಷು ಶಬ್ಧಃ ಖೇ ಪೌರುಷಂ ನೃಷು || - ನೀರಿನಲ್ಲಿ ರಸವಾಗಿ, ಚಂದ್ರ ಸೂರ್ಯರಲ್ಲಿ ಪ್ರಕಾಶನಾಗಿ, ಎಲ್ಲಾ ವೇದಗಳಲ್ಲಿ ಓಂಕಾರನಾಗಿ, ಆಕಾಶದಲ್ಲಿ ಶಬ್ದ ಮತ್ತು ಪುರುಷರಲ್ಲಿನ ಪುರುಷತ್ವನಾಗಿದ್ದೇನೆ.
ಪುಣ್ಯೋ ಗಂಧಃ ಪೃಥಿವ್ಯಾಂ ಚ ತೇಜಶ್ಚಾಸ್ಮಿ ವಿಭಾವಸೌ - ಪೃಥ್ವಿಯಲ್ಲಿ ಪವಿತ್ರ ಪರಿಮಳ ಮತ್ತು ಅಗ್ನಿಯಲ್ಲಿ ತೇಜಸ್ಸು ನಾನಾಗಿದ್ದೇನೆ ಎಂದಿದ್ದಾನೆ.  ಹೀಗೆ ಎಲ್ಲಾ ಪದಾರ್ಥಗಳಲ್ಲೂ ಭಗವಂತ ಅದೇ ರೂಪದಿಂದ ನೆಲೆಸಿರುವುದರಿಂದಲೇ ಆಯಾ ಪದಾರ್ಥಗಳು ತಮ್ಮ ರಸ, ಗಂಧ, ರೂಪಗಳಿಂದ ಕೆಲವು ಘಳಿಗೆ, ಕೆಲವು ದಿನಗಳಾದರೂ ನೂತನವಾಗಿರುತ್ತವೆ.  ಹೀಗೆ ಸಕಲ ಚರಾಚರಗಳಲ್ಲೂ ಸ್ಥಿತನಾಗಿರುವ ಭಗವಂತ ಸದಾ ನಿತ್ಯನೂತನನೇ ಆಗಿದ್ದಾನೆ.  ಉಳಿದ ಎಲ್ಲಾ ನೂತನ ವಸ್ತುಗಳಲ್ಲೂ ಅತಿ ನೂತನವಾಗಿ ಶೋಭಿಸುವವನಾಗಿದ್ದಾನೆ.   
ಶ್ರೀ ಶಂಕರಾಚಾರ್ಯರು ತಮ್ಮ "ಕೃಷ್ಣಾಷ್ಟಕಮ್" ನಲ್ಲಿ ಭಗವಂತನನ್ನು
ಗುಣಾಕರಂ ಸುಖಾಕರಂ ಕೃಪಾಕರಂ ಕೃಪಾವರಂ |
ಸುರದ್ವಿಷನ್ನಿ ಕಂದನಂ ನಮಾಮಿ ಗೋಪನಂದನಮ್ ||
ನವೀನ ಗೋಪನಾಗರಂ ನವೀನಕೇಲಿಲಂಪಟಂ |
ನಮಾಮಿ ಮೇಘಸುಂದರಂ ತಡಿತ್ಪ್ರಭಾಲಸತ್ಪಟಮ್ || - ಗುಣಗಳ ಖಣಿ, ಸುಖ ಸಮೂಹನ, ಕೃಪಾಕರ, ಶ್ರೇಷ್ಠ ದಯಾಮಯಿ, ದೇವತೆಗಳ ಶತೃಗಳನ್ನು ಸದೆಬಡಿದವನು, ಗೋಪಾಲನು, ನವೀನ ಚತುರ ಗೋಪನು, ನವೀನ ಶೀಲಾ ವಿಹಾರಿ, ಮೋಡವರ್ಣದಂತೆ ಸುಂದರವಾಗಿರುವವನು, ಆಕಾಶದ ಪ್ರಭೆಯಂತೆ ತೇಜವುಳ್ಳ ಪೀತಾಂಬರ ವಸ್ತ್ರ ಧರಿಸಿರುವವನು ಎಂದು ವರ್ಣಿಸುತ್ತಾರೆ.  ಸಕಲ ನೂತನ ಪದಾರ್ಥಗಳಲ್ಲೂ ಭಗವಂತನು ನೆಲೆಸಿರುವುದರಿಂದಲೇ ಆ ವಸ್ತುವಿನ ರೂಪ, ರಸ ಗಂಧಾದಿಗಳು ನೂತನವಾಗಿ ಕಾಣುತ್ತವೆ.

ಅತಿ ಸುಂದರಕೆ ಸುಂದರ -   ಅತಿಶಯವಾದ ಸುಂದರವೆಂದು ಗುರುತಿಸಲ್ಪಡುವ ಎಲ್ಲಾ ವಸ್ತುಗಳಿಗಿಂತಲೂ ಅತೀ ರಮಣೀಯವಾಗಿಯೂ, ಸುಂದರವಾಗಿಯೂ ಇರುವವನು ಭಗವಂತನಾದ್ದರಿಂದಲೇ ಅವನು ಸುಂದರಕೆ ಸುಂದರನು.  ಶ್ರೀ ವಾದಿರಾಜರು ತಮ್ಮ ವೈಕುಂಠ ವರ್ಣನೆಯಲ್ಲಿ :
ಎಂದೆಂದು ನಾಶವಿಲ್ಲದ ಪ್ರಕೃತಿಯು ತಾನೆ ನಿ-
ನ್ನಂದವ ಕಾಣಲಾಗಿ
ಇಂದ್ವರ್ಕಕೋಟಿಗಳ ಪ್ರಭೆಯು ನಿನ್ನ ತೇಜೋ-
ವೃಂದಕ್ಕೆ ಇನ್ನೊಬ್ಬರಿದನೇ || - ನಿತ್ಯ ನಿರ್ವಿಕಾರಳೂ, ತಾನೇ ಅತಿಶಯ ಲಾವಣ್ಯವತಿಯೂ ಆದ ಲಕ್ಷ್ಮೀದೇವಿಯು ಸ್ವಯಂ ಭಗವಂತನ ಅಂದವನ್ನೂ, ಪರಿಯನ್ನೂ ಕಂಡು ಅನಂತ ಚಂದ್ರ ಸೂರ್ಯರಂತಿರುವ ಕಾಂತಿಯುಳ್ಳವನು ಮತ್ತು ಅವನ ಕಾಂತಿಪುಂಜಕ್ಕೆ ಸಮನಾದವನೂ, ಅಧಿಕನೂ ಯಾರೂ ಇಲ್ಲವೇ ಇಲ್ಲವೆಂದು ಆಶ್ಚರ್ಯ ಪಡುತ್ತಿರುವಳೆಂದು ವರ್ಣಿಸಿದ್ದಾರೆ. 
ತತ್ವಸಾರ ಕೃತಿಯ ’ಸ್ಥಿತಿ ಸಂಧಿ’ಯಲ್ಲಿ
ಕಂಜಕಂಬುಕಂಠ ಕೌಮೋದಕೀ ಹಸ್ತ
ಮಂಜುಳಮೂರ್ತಿ ಮಾರಮಣ
ಕುಂಜರಭಯಹಾರಿ ಕುಜನಸಂಹಾರಿ ನಿ-
ರಂಜನ ರಕ್ಷಿಸೋ ಜನರ || - ಪದ್ಮವರ್ಣದ ಶಂಖದಂತಿರುವ ಕಂಠವುಳ್ಳ, ಕೌಮೋದಕೀ ಎಂಬ ಗದೆಯನ್ನು ಧರಿಸಿರುವ ಮೋಹನಾಕಾರನು, ಲಕ್ಷ್ಮೀಪತಿಯು, ಗಜೇಂದ್ರನ ಭಯವನ್ನು ಪರಿಹರಿಸಿದ, ದೈತ್ಯ ಸಂಹಾರಕ, ದೋಷದೂರ ಭಕ್ತಜನರನ್ನು ರಕ್ಷಿಸೋ ಎನ್ನುತ್ತಾ ಮಂಜುಳಮೂರ್ತಿಯ ರೂಪ ವರ್ಣನೆ ಮಾಡುತ್ತಾರೆ.
ಲಕ್ಷ್ಮೀ ಶೋಭಾನೆಯಲ್ಲಿ ಲಕ್ಷ್ಮೀದೇವಿಯು "ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು ಇಂದಿರೆ ಪತಿಯ ನೆನೆದಳು" - ಯಾವ ಕುಂದೂ ಇಲ್ಲದ ಅತಿಶಯ ಸುಂದರನಾದ ಮುಕುಂದನು ತನಗೆ ಪತಿಯಾಗಲೆಂದಳು ಎಂದಿದ್ದಾರೆ.  ಮುಂದುವರೆಯುತ್ತಾ
ಕಂದರ್ಪ ಕೋಟಿಗಳ ಗೆಲುವ ಸೌಂದರ್ಯದ
ಚಂದವಾಗಿದ್ದ ಚೆಲುವನ |
ಇಂದಿರೆ ಕಂಡು ಇವನೆ ತನಗೆ ಪತಿ
ಯೆಂದವನ ಬಳಿಗೆ ನಡೆದಳು || - ಕೋಟಿ ಮನ್ಮಥರನ್ನೂ ಗೆಲ್ಲುವಂಥ ಸೌಂದರ್ಯದಿಂದ ಚಂದವಾಗಿರುವವನು ಭಗವಂತ.  ಅಪಾರವಾದ ಸೌಂದರ್ಯ ರಾಶಿಯಾಗಿರುವ ಮಹಾಲಕ್ಷ್ಮಿಗೆ ಕೋಟಿ ಮನ್ಮಥರನ್ನು ಮೀರಿಸುವ ಸೌಂದರ್ಯದ ಚೆಲುವ ಶ್ರೀಹರಿ ಮಾತ್ರವೇ ಅನುರೂಪನಾದ ಪತಿಯಾಗುತ್ತಾನೆ.  ಆದ್ದರಿಂದಲೇ ಇಂದಿರೆಯು ’ಇವನೇ ತನಗೆ ಪತಿ’ ಎಂದವನ ಬಳಿಯೇ ಸಾಗಿದಳು ಎಂದಿದ್ದಾರೆ.
ತನ್ನ ಸೌಂದರ್ಯದಿಂದನ್ನಂತ ಮಡಿಯಾದ ಲಾ-
ವಣ್ಯದಿ ಮೆರೆವ ನಿಜ ಪತಿಯ |
ಹೆಣ್ಣು ರೂಪವ ಕಂಡು ಕನ್ನೆ ಮಹಲಕ್ಷುಮಿ ಇವ-
ಗನ್ಯರೇಕೆಂದು ಬೆರಗಾದಳು || - ಅತಿಶಯ ಲಾವಣ್ಯವತಿಯಾದ ತನ್ನ ಸೌಂದರ್ಯಕ್ಕಿಂತಲೂ ಅನಂತ ಪಟ್ಟು ಅಧಿಕವಾದ ಲಾವಣ್ಯದಿಂದ ಮೆರೆಯುವ ತನ್ನ ಪತಿಯ ಸ್ತ್ರೀರೂಪವನ್ನು ಕಂಡು ಮಹಾಲಕ್ಷೀದೇವಿಯು ದಿಗ್ಭ್ರಮೆಯಿಂದ ಇವನಿಗೆ ಬೇರೆ ಹೆಣ್ಣುಗಳೇಕೆ ಎಂದುದ್ಗರಿಸಿದಳು ಎನ್ನುತ್ತಾ ಭಗವಂತನ ಸುಂದರೆಕೆ ಅತಿ ಸುಂದರವಾದ ರೂಪವನ್ನು ವರ್ಣಿಸಿದ್ದಾರೆ.
ಉಪನಿಷತ್ತುಗಳೂ, ಶ್ರುತಿಯಲ್ಲಿಯ ಪ್ರಮಾಣ ವಾಕ್ಯಗಳು ಭಗವಂತನು ಸರ್ವದಾ ಸೂರ್ಯಕೋಟಿ ಸಮಪ್ರಭನು, ಶಶಿಕೋಟಿಸಮ ಆಹ್ಲಾದಕ ಕಾಂತಿಯುಳ್ಳವನೆಂದು ಸಾರುತ್ತವೆ.  ಈಶಾವಾಸ್ಯೋಪನಿಷತ್ತಿನಲ್ಲಿ "ಯತ್ತೇ ರೂಪಂ ಕಲ್ಯಾಣತಮಂ" - ಪೂರ್ಣನಾದ ಭಗವಂತನೇ ಜ್ಯೋತಿರ್ಮಯವಾದ ಸೂರ್ಯಮಂಡಲದಿಂದ ಸದ್ಗುಣಪೂರ್ಣಾದ ನಿನ್ನ ರೂಪವು ಮುಚ್ಚಿಕೊಂಡಿದೆ.  ನಿನ್ನ ಕಲ್ಯಾಣತಮವಾದ ರೂಪವನ್ನು ಕಾಣುವಂತೆ ನನ್ನ ಜ್ಞಾನವನ್ನು ವಿಸ್ತರಿಸು, ನಿನ್ನ ಪ್ರಸಾದದಿಂದ ಸುಂದರಕೆ ಅತಿ ಸುಂದರವಾದ ನಿನ್ನ ರೂಪವನ್ನು ಕಾಣುವೆನೆಂದು ಪ್ರಾರ್ಥಿಸಲಾಗಿದೆ.
ಶ್ರೀ ಶಂಕರಾಚಾರ್ಯರು ತಮ್ಮ "ಶ್ರೀ ಕೃಷ್ಣಾಷ್ಟಕಮ್" ನಲ್ಲಿ ಭಗವಂತನ ಸುಂದರ ರೂಪವನ್ನು "ಸುಪಿಚ್ಛಗುಚ್ಛಮಸ್ತಕಂ ಸುನಾದ ವೇಣುಹಸ್ತಕಂ" - ಮನೋಹರವಾದ ನವಿಲುಗರಿಯನ್ನು ತಲೆಯಲ್ಲಿ ಧರಿಸಿರುವವನು, ಮಧುರನಾದದ ಕೊಳಲನ್ನು ಹಿಡಿದಿರುವವನು.  "ಕಸಾರವಿಂದ ಭೂಧರಂ ಸ್ಮಿತಾವಲೋಕ ಸುಂದರಂ" - ಕಮಲದಂತೆ ಕೋಮಲವಾದ ಕೈಯಿಂದ ಭೂಮಿಯನ್ನು (ಗೋವರ್ಧನ ಗಿರಿ) ಎತ್ತಿದ, ಮುಗುಳು ನಗೆಯಿಂದ ಮನೋಹರವಾಗಿ ಕಾಣುವವನು.  "ಕದಂಬ ಸೂನ ಕುಂಡಲಂ ಸುಚಾರುಗಂಡಮಂಡಲಂ" - ಕದಂಬ ಪುಷ್ಪಗಳನ್ನು ಧರಿಸಿರುವ, ಅಂದವಾದ ದುಂಡು ಗಲ್ಲಗಳುಳ್ಳವನು ಎಂದು ವರ್ಣಿಸಿದಾರೆ.  ಶ್ರೀ ಜಗನ್ನಾಥಾಷ್ಟಕ ಸ್ತೋತ್ರಮ್ ನಲ್ಲಿ "ಭಜೇ ಸವ್ಯೇ ವೇಣುಂ ಶಿರಸಿ ಶಿಖಿಪಿಚ್ಛಂ ಕಟಿತಟೇ" - ಬಲಗೈಯಲ್ಲಿ ಕೊಳಲು ಹಿಡಿದಿರುವ, ತಲೆಯಲ್ಲಿ ನವಿಲುಗರಿ ಧರಿಸಿರುವವನು ಎಂದೆಲ್ಲಾ ವಿಧವಿಧವಾಗಿ ವರ್ಣಿಸಿದ್ದಾರೆ.

ಶ್ರೀ ಕುಲಶೇಖರ್ ಆಳ್ವಾರ್ ವಿರಚಿತ "ಮುಕುಂದಮಾಲಾ" ದಲ್ಲಿ
ಚಿಂತಯಾಮಿ ಹರಿಮೇವ ಸಂತತಂ
ಮಂದಮಂದಹಿಸಿತಾನನಾಂಬುಜಮ್ - ಮಂದಹಾಸದಿಂದ ಕೂಡಿದ ಆ ಶ್ರೀಕೃಷ್ಣನ ಮುಖಾರವಿಂದವನ್ನೇ ಧ್ಯಾನಿಸುತ್ತೇನೆಂದಿದ್ದಾರೆ.

ಭಗವದ್ಗೀತೆಯಲ್ಲಿ ವಿಶ್ವರೂಪವನ್ನು ದಿವ್ಯಚಕ್ಷುಗಳನ್ನು ಪಡೆದುಕೊಂಡು ನೋಡಿದ ಅರ್ಜುನನು ಭಗವಂತನಿಗೆ
ಅದೃಷ್ಟಪೂರ್ವಂ ಹೃಷಿತೋಸ್ಮಿ ದೃಷ್ಟ್ವಾ
ಭಯೇನ ಚ ಪ್ರವ್ಯಥಿತಂ ಮನೋ ಮೇ |
ತದೇವ ಮೇ ದರ್ಶಯ ದೇವರೂಪಂ
ಪ್ರಸೀದ ದೇವೇಶ ಜಗನ್ನಿವಾಸ || -  ಮೊದಲೆಂದೂ ನೋಡದ ನಿನ್ನ ಈ ಆಶ್ಚರ್ಯಕರ ರೂಪವನ್ನು ಕಂಡು ಆನಂದಿತನಾಗಿದ್ದರೂ ಕೂಡ ನನ್ನ ಮನಸ್ಸು ಭಯದಿಂದ ವ್ಯಾಕುಲವಾಗಿದೆ.  ನಿನ್ನ ಮನೋಹರವಾದ, ಸುಂದರಕೆ ಅತಿ ಸುಂದರವಾದ ಚತುರ್ಭುಜ ವಿಷ್ಣು ರೂಪವನ್ನೇ ನನಗೆ ತೋರಿಸು ದೇವಾ ಎನ್ನುತ್ತಾ "ಕಿರೀಟಿನಂ ಗದಿನಂ ಚಕ್ರಹಸ್ತಮಿಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ" - ಮುಕುಟವನ್ನು ಧರಿಸಿದ, ಗದೆ ಮತ್ತು ಚಕ್ರವನ್ನು ಕೈಯಲ್ಲಿ ಪಿಡಿದ ನಿನ್ನ ಸುಂದರ ರೂಪವನ್ನೇ ಕಣ್ಣುಗಳಲ್ಲಿಯೂ, ಮನಸ್ಸಿನಲ್ಲಿಯೂ ತುಂಬಿಕೊಳ್ಳಲು ಬಯಸುತ್ತೇನೆ ಅನುಗ್ರಹಿಸು ಎಂದು ಪ್ರಾರ್ಥಿಸುತ್ತಾನೆ.

ಭಗವಂತನ ರೂಪವನ್ನು ಶ್ರೀ ಪುರಂದರ ದಾಸರು "ಈ ಪರಿಯ ಸೊಬಗು ಇನ್ಯಾವ ದೇವರಲಿ ಕಾಣೆ ಗೋಪೀಜನಪ್ರಿಯ ಗೋಪಾಲಗಲ್ಲದೆ" ಎಂಬ ಕೃತಿಯಲ್ಲಿ ಭಗವಂತನನ್ನು ವರ್ಣಿಸುತ್ತಾ "ಲಾವಣ್ಯದಲಿ ನೋಡೆ ಲೋಕ ಮೋಹಕನಯ್ಯ" ಎಂದು ಸುಂದರಕೆ ಅತಿ ಸುಂದರತೆಯನ್ನು ಬಲು ಸೊಗಸಾಗಿ ಮಾಡಿದ್ದಾರೆ.

ರಸಕೆ ರಸರೂಪ -  ತೈತ್ತಿರೋಯೋಪನಿಷತ್ತಿನ ಆನಂದಮಯ ಪ್ರಕರಣದಲ್ಲಿ ಅಸದ್ವಾ ಇದಮಗ್ರ ಆಸೀತ್ | ತತೋ ವೈ ಸದಜಾಯತ ತದಾತ್ಮಾನಗ್ಂ ಸ್ವಯಮಕುರುತ | ತಸ್ಮಾತ್ತತ್ಸುಕೃತಮುಚ್ಯತ ಇತಿ | ಯದ್ವೈತತ್ಸುಕೃತಮ್ | ರಸೋ ವೈ ಸಃ | ರಸಗ್ಂ ಹ್ಯೇವಾಯಂ ಲಭ್ಧ್ಯಾನಂದೀ ಭವತಿ | ಕೋ ಹ್ಯೇವಾಸ್ಯಾತ್ಕಃ ಪ್ರಾಣ್ಯಾತ್ ಯದೇಷ ಆಕಾಶ ಆನಂದೋ ನ ಸ್ಯಾತ್ | ಏಷ ಹ್ಯೇವಾನಂದಯಾತಿ || - ಪ್ರಪಂಚದ ಸೃಷ್ಟಿಗೆ ಪೂರ್ವದಲ್ಲಿ ಅಸನ್ ಎಂದು ಕರೆಯಲ್ಪಟ್ಟ, ಮೂಲರೂಪಿಯಾದ ನಾರಾಯಣನೊಬ್ಬನೇ ಇದ್ದನು.  ನಾರಾಯಣನಿಂದ ವಾಸುದೇವ ರೂಪ ಆವಿರ್ಭವಿಸಿತು.  ವಾಸುದೇವ ರೂಪದಿಂದ ಸಂಕರ್ಷಣ, ಪ್ರದ್ಯುಮ್ನಾದಿ ರೂಪಗಳು ರೂಪಾಂತರಗೊಂಡು ಬಂದವು.  ಹೀಗೆ ರೂಪಾಂತರಗೊಂಡಿದ್ದರಿಂದಲೇ ವಾಸುದೇವ ರೂಪಿ ಭಗವಂತನನ್ನು ’ಸುಕೃತ’ನಾಮಕನೆಂದು ಕರೆಯಲ್ಪಡುವುದು.   ಈ  ಸುಕೃತನಾಮಕನಾದ ವಾಸುದೇವನು ಪೂರ್ಣಾನಂದಮಯನಾಗಿ ತೃಪ್ತಿ ಹೇತುವಾದ ಆನಂದಕರವಾದ ರಸ ಸ್ವರೂಪವಾಗಿ ಇದ್ದಾನೆ.  ಇಂತಹ ರಸ ಸ್ವರೂಪವನ್ನು ಜೀವಿಯು ಹೊಂದಿ, ಭಗವಂತನನ್ನು ಪಡೆದು ಆನಂದವನ್ನು ಪಡೆಯಬಲ್ಲನೇ ಹೊರತು ಬೇರೆ ರೀತಿಯಿಂದಲ್ಲವೆಂದು ತಿಳಿಸುತ್ತಾ ಶ್ರೀಹರಿಯು ರಸರೂಪವೆನ್ನುತ್ತದೆ.  ಪೂರ್ಣಾನಂದಮಯನೂ, ಸದಾನಂದಮಯನೂ ಹಾಗೂ ರಸರೂಪನೂ ಆಗಿರುವ ಭಗವಂತನು ಚೇತನಾಚೇತನರೊಳಗೆ ಆನಂದಮಯರೂಪನಾಗಿಯೇ ಸ್ಥಿತನಾಗಿರುತ್ತಾನೆ.  ಆದ್ದರಿಂದಲೇ ಚೇತನರ ಸ್ವರೂಪಭೂತವಾದ ಆನಂದ ಭಗವಂತನ ಅಧೀನ.  ಭಗವಂತ ಆನಂದಸಾಗರ, ಜೀವಿಗಳು ಆ ಆನಂದದ ಕಣಗಳು.  ಹೀಗೆ ಅನುಸಂಧಾನಪೂರ್ವಕವಾಗಿ ಭಗವಂತನನ್ನು ಧ್ಯಾನಿಸಬೇಕು.

ಶ್ರೀ ಶಂಕರಾಚಾರ್ಯರು ತಮ್ಮ ಜಗನ್ನಾಥಾಷ್ಟಕ ಸ್ತೋತ್ರದಲ್ಲಿ  "ಮುದಾ ಗೋಪೀನಾರೀವದನ ಕಮಲಾಸ್ವಾದಮ ಧುಪಃ" - ತನ್ನ ಸ್ತುತಿ ಮಾಡುತ್ತಾ ಶ್ರೇಷ್ಠವಾದ ಗೀತೆಗಳನ್ನು ಹಾಡುತ್ತಾ, ತನ್ನ ನಾಮ ಸ್ಮರಣೆಯಿಂದಲೇ ಗೋಪಿಕಾ ಸ್ತ್ರೀಯರ ವದನದಲ್ಲಿ ಉಕ್ಕುವ ಆನಂದದ ರಸವನ್ನು ಹೀರುವ ಭ್ರಮರದಂತಿರುವ ಪಾದಗಳುಳ್ಳ ಜಗನ್ನಾಥ ಸ್ವಾಮಿಯೆಂದು ಸ್ತುತಿಸುತ್ತಾರೆ.  ಮುಂದುವರೆಯುತ್ತಾ
ಪರಬ್ರಹ್ಮಾಪೀಡಃ ಕುವಲಯದಲೋತ್ಫುಲ್ಲ ನಯನೋ | ನಿವಾಸೀ ನೀಲಾದ್ರೌ ನಿಹಿತಚರನೋನಂತ ಶಿರಸಿ ||
ರಸಾನಂದೋ ರಾಧಾ ಸರಸವಪುರಾಲಿಂಗನ ಸುಖೋ | ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ || - ಪರಬ್ರಹ್ಮ ಸ್ವರೂಪನು ಅರಳಿದ ಕಮಲದ ದಳಗಳಂತೆ ಪ್ರಫುಲ್ಲಿಕ ಕಣ್ಣುಗಳುಳ್ಳವನು, ನೀಲಾದ್ರಿವಾಸಿ, ಕಾಲಿಯ ಸರ್ಪದ ತಲೆಯ ಮೇಲೆ ತನ್ನ ಚರಣಗಳನ್ನಿಟ್ಟು, ರಸಸ್ವರೂಪಿ ಪರಬ್ರಹ್ಮನು ಅನನ್ಯ ಪ್ರೇಮದ ರಾಧೆಯ ಆಲಿಂಗನದಿಂದ ಆನಂದನಾಗುವ ಜಗನ್ನಾಥ ಸ್ವಾಮಿಯ ದರ್ಶನವಾಗಲಿ ಎಂದಿದ್ದಾರೆ.

ನೂತನಕೆ ನೂತನನಾದವನು, ಸುಂದರಕೆ ಅತಿ ಸುಂದರನು, ರಸಕೆ ರಸರೂಪನಾದವನು ನಮ್ಮಲ್ಲಿ ಯಾವ ನೂತನತೆಯನ್ನು ಕಾಣುತ್ತಾನೆ, ಏನು ಸೌಂದರ್ಯ ಅಥವಾ ಸುಂದರತೆಯನ್ನು ನೋಡುತ್ತಾನೆ ಹಾಗೂ ನಮ್ಮಲ್ಲಿ ಯಾವ ರಸವಿದೆಯೆಂದು ಹೀರುತ್ತಾನೆ ? ಎಲ್ಲವೂ ಅವನ ಸನ್ನಿಧಾನವಿದ್ದಲ್ಲಿ ಮಾತ್ರವೇ ವ್ಯಕ್ತವಾಗುವ ಗುಣಗಳು.  ಕರುಣಾಸಾಗರನಾದ ಭಗವಂತನು ಈ ಎಲ್ಲಾ ರೂಪಗಳಿಂದಲೂ ಚೇತನರೊಳಗೆ ತಾನೇ ಸ್ವಯಂ ಇದ್ದು ಪ್ರಕಾಶಿಸುತ್ತಾ, ನಮ್ಮಿಂದ ಸಮರ್ಪಿಸಲ್ಪಟ್ಟ ಅವುಗಳನ್ನು ತಾನು ಸ್ವೀಕರಿಸಿದಂತೆ ಮಾಡಿ, ನಮಗೆ ಆನಂದವನ್ನು ಕೊಡುತ್ತಾನೆ.

ಜಾತರೂಪೋದರ ಭವಾದ್ಯರೊಳಾತತ - ಜಾತರೂಪ  ಎಂದರೆ ಬಂಗಾರ.  ಬಂಗಾರದ ಮೊಟ್ಟೆಯಂತೆ ಫಳಫಳನೆ ಹೊಳೆಯುವ ಬ್ರಹ್ಮಾಂಡ.  ಬ್ರಹ್ಮಾಂಡವೆಂಬ ಬಂಗಾರದ ಗರ್ಭದಲ್ಲಿ ಜನಿಸಿದವನು ಹದಿನಾಲ್ಕು ಲೋಕಗಳಲ್ಲಿ ವ್ಯಾಪಿಸಿರುವ ಬ್ರಹ್ಮದೇವನು.  ಆದ್ದರಿಂದಲೇ ಬ್ರಹ್ಮದೇವರು ’ಜಾತರೂಪೋದರ’ ಅಥವಾ ಹಿರಣ್ಯಗರ್ಭವೆನ್ನಬಹುದು.  ಅದಲ್ಲದೆ ಮಹತ್ತತ್ವಾವರಣದ ಪರ್ಯಂತ ವ್ಯಾಪ್ತನಾಗಿ, ಅಭಿಮಾನಿ ದೇವತೆಯಾಗಿರುವ ಬ್ರಹ್ಮನ ಗರ್ಭದಲ್ಲಿ ಜಾತರೂಪ ಅಥವಾ ಬಂಗಾರದಂತೆ ಹೊಳೆಯುವ ಬ್ರಹ್ಮಾಂಡವಿದೆಯಾದ್ದರಿಂದಲೇ ಬ್ರಹ್ಮನು ಹಿರಣ್ಯಗರ್ಭ ಅಥವಾ ಜಾತರೂಪೋದರ.  ಇಂತಹ ವಿರಾಟ್ ಸ್ವರೂಪನಾದ ಬ್ರಹ್ಮನಲ್ಲಿ ಭಗವಂತನು ಬ್ರಹ್ಮ ರೂಪದಿಂದಲೇ ಸರ್ವ ವ್ಯಾಪ್ತನಾಗಿದ್ದಾನೆ ಅಥವಾ ’ಆತತ’ನಾಗಿದ್ದಾನೆ.  ’ಭವ’ ಎಂದರೆ ಅಹಂಕಾರ ತತ್ತ್ವಕ್ಕೆ ಅಭಿಮಾನಿ ದೇವತೆಯಾದ ರುದ್ರದೇವನು.  ಅಹಂಕಾರಾವರಣ ಪರ್ಯಂತ ವ್ಯಾಪಿಸಿರುವ ರುದ್ರದೇವನಲ್ಲಿ ಭಗವಂತನು ರುದ್ರರೂಪಿಯಾಗಿ ’ಆತತ’ನಾಗಿದ್ದಾನೆ ಅಥವಾ ವ್ಯಾಪ್ತನಾಗಿದ್ದಾನೆ.  ಉಳಿದ ಇಂದ್ರಾರಿ ಸಕಲ ದೇವತೆಗಳಲ್ಲೂ ಅವರ ವ್ಯಾಪ್ತಿ ಪರ್ಯಂತವೂ ಅದೇ ರೂಪದಲ್ಲಿಯೇ ವ್ಯಾಪ್ತನಾಗಿದ್ದು ಸಕಲ ವ್ಯಾಪಾರಗಳನ್ನು ಮಾಡಿ ಮಾಡಿಸುತ್ತಾನೆ.  ಅಚಿಂತ್ಯ ಶಕ್ತಿಯಾಗಿರುವ ಭಗವಂತನು ಆಯಾ ದೇವತೆಗಳಲ್ಲಿ ಆತತನಾಗಿ, ಆ ತತ್ತ್ವದ, ದೇವತೆಯ ಪ್ರಭಾವಗಳನ್ನು ಪ್ರಕಟಗೊಳಿಸುತ್ತಾನೆ.   ದೇವತೆಗಳಲ್ಲಿ ನೆಲೆಸಿ ತಾನು ಆನಂದಮಯನಾಗಿ ಆಟವಾಡುತ್ತಾನೆ ಮತ್ತು ದೇವತೆಗಳಿಂದ ಆಡಿಸುತ್ತಾನೆ.  ಸರ್ವವ್ಯಾಪ್ತನಾಗಿದ್ದು, ಮಾಡಿ ಮಾಡಿಸುವವನು ಭಗವಂತನೇ ಆದ್ದರಿಂದಲೇ ಆತನು ’ಆತತ’ನಾಗಿದ್ದಾನೆ.

ಶ್ರೀ ವಾದಿರಾಜ ಗುರುಗಳು ತಮ್ಮ ವೈಕುಂಠ ವರ್ಣನೆಯ ತತ್ವಸಾರ ಕೃತಿಯಲ್ಲಿ ಬರುವ ’ಸ್ಥಿತಿ ಸಂಧಿ’ಯಲ್ಲಿ ಭಗವಂತನನ್ನು
ನಾರಾಯಣಾಯ ಪರಿಪೂರ್ಣ ಗುಣಾರ್ಣವಾಯ
ವಿಶ್ವೋದಯ ಸ್ಥಿತಿ ಲಯೋನ್ನಿಯತಿ ಪ್ರದಾಯ |
ಜ್ಞಾನ ಪ್ರದಾಯ ವಿಬುಧಾಸುರ ಸೌಖ್ಯ ದುಃಖ-
ಸತ್ಕಾರಣಾಯ ವಿತತಾಯ ನಮೋ ನಮಸ್ತೇ || - ನಾರಾಯಣನೆಂಬ ನಾಮವು ಭಗವಂತನ ಬಹು ಮಹಿಮೆಗಳನ್ನು ನಿರೂಪಿಸುವ ಅನೇಕ ಅರ್ಥವುಳ್ಳ ನಾಮವು.  ಗುಣಪೂರ್ಣತ್ವ, ನಿರ್ದೋಷತ್ವ, ಸರ್ವಾಶ್ರಯತ್ವ, ಸರ್ವಜ್ಞತ್ವ, ಜ್ಞಾನಪ್ರದತ್ವವೆಲ್ಲವನ್ನೂ ತಿಳಿಸುತ್ತದೆ.  ಸರ್ವ ಕಾಲದಲ್ಲಿಯೂ ಇರುವವನು, ಸ್ವಾತಂತ್ರ್ಯಾದಿ ಗುಣಗಳುಳ್ಳವನು ಅಥವಾ ದೇಶ-ಕಾಲ-ಗುಣಗಳಿಂದ ವ್ಯಾಪ್ತನಾದವನಾದ್ದರಿಂದಲೇ ಜಗತ್ಕರ್ತನಾಗಬಲ್ಲವನು ಎಂದರ್ಥವಾಗುತ್ತದೆ.  ಹೀಗೆ ಅಣುರೇಣು ತೃಣಕಾಷ್ಠನಾಗಿರುವನೆಂಬ ಗುಣವನ್ನು ತಿಳಿಸಲಿಕ್ಕಾಗಿಯೇ ಭಗವಂತನನ್ನು "ವಿತತಾಯ" ಎಂದಿದ್ದಾರೆ.

ಎಮ್ಮೊಡನೆಯಾಡುತಲಿಪ್ಪ ನಮ್ಮಪ್ಪ - ಭಗವಂತ ನಮಗೆ ’ನಮ್ಮಪ್ಪ’ ಮಾತ್ರವಲ್ಲ, ಅವನು ಅಮ್ಮ-ಅಪ್ಪ, ಬಂಧು-ಬಳಗ, ಆತ್ಮಸಖ ಎಲ್ಲವೂ ಆಗಿದ್ದಾನೆ.  ನಮ್ಮೊಳಗಿರುವ ಅಂತರಂಗದ ಅನೇಕ ಮಾತುಗಳನ್ನೂ, ಭಾವಗಳನ್ನೂ ನಾವು ಅವನಲ್ಲಿ ನಿವೇದಿಸಿಕೊಳ್ಳುತ್ತೇವೆ.  ದುಃಖವಾದಾಗ ತಾಯಿಯ ಮಡಿಲಿನಲ್ಲಿ ದುಃಖಿಸುವಂತೆ ಭಗವಂತನ ಸನ್ನಿಧಿಯಲ್ಲಿ ಕಣ್ಣೀರು ಹಾಕುತ್ತೇವೆ.  ಸಂತೋಷವಾದಾಗಲೂ ಸಂಭ್ರಮದಿಂದ ಭಗವಂತನಿಗೆ ವಿಶೇಷ ಪೂಜೆ, ಧ್ಯಾನಗಳ ಮೂಲಕ ಸಮರ್ಪಿಸಿಕೊಳ್ಳುತ್ತೇವೆ.  ಹೀಗೆ ಅವನ ಕರುಣೆಯಿಂದಲೇ ಸಿಕ್ಕಿರುವ ಈ ಬದುಕಿನ ಪ್ರತೀ ಕ್ಷಣವೂ, ಯಾವ ನಿರೀಕ್ಷೆಯನ್ನೂ ಮಾಡದೆ, ನಿಸ್ಸಂಶಯವಾಗಿ ನಮ್ಮನ್ನು ಕಾಪಾಡುವವನು, ನಮ್ಮೊಡನಿರುವವನು ಭಗವಂತನು ಮಾತ್ರನಾಗಿದ್ದಾನೆ.   ಪುಟ್ಟ ಕಂದನಾಗಿ ಶ್ರೀಕೃಷ್ಣನು ಅವತರಿಸಿ, ಭಕ್ತರ ಮನ ಸೂರೆಗೊಂಡು, ಅತಿಶಯವಾದ ಅಕ್ಕರೆಯ ಭಾವವನ್ನು ಎಲ್ಲರೊಳಗೂ ಜಾಗೃತವಾಗಿಸಿ, ದುಷ್ಟ ಸಂಹಾರ ಮಾಡಿ, ಸದಾ ಪ್ರತೀ ಜೀವಿಯನ್ನೂ ಆಕರ್ಷಿಸುತ್ತಿರುವವನಾಗಿದ್ದಾನೆ.  ಅವತಾರ ಮುಗಿದರೂ, ನಮ್ಮೊಳಗೆ, ನಮ್ಮೊಡನೆ ಒಂದಾಗಿ ಉಸಿರಂತೆ ಬೆರೆತು ಹೋಗಿದ್ದಾನೆ.  ಬದುಕೆಂದರೆ ಏನು, ಜೀವನದ ಅರ್ಥವೇನು, ಹೇಗೆ ಬಾಳಬೇಕು ಎಂಬುದನ್ನು ಭಗವಂತನು ಸ್ವಯಂ ರಾಮನಾಗಿ ಅವತರಿಸಿ ನಮಗೆ ತೋರಿಸಿಕೊಟ್ಟಿದ್ದಾನೆ.  ನಮ್ಮೊಡನೆ ಸಾಮಾನ್ಯರಲ್ಲಿ ಸಾಮಾನ್ಯನಂತೆ ಬಂದು, ಸಕಲ ದುಃಖಗಳನ್ನೂ ಅನುಭವಿಸಿ, ವನವಾಸದಂತಹ ಕಷ್ಟವನ್ನೂ ತಾನು ಸಹಿಸಿ, ನಮಗೆ ಆದರ್ಶಪ್ರಾಯನಾಗಿದ್ದಾನೆ.  ಧೀಮಂತ ವ್ಯಕ್ತಿತ್ವವನ್ನು ಪ್ರದರ್ಶಿಸಿ ಜೀವನದ ಉನ್ನತಿಯನ್ನು ಪಡೆಯುವುದನ್ನು ತಿಳಿಸಿದ್ದಾನೆ.  ಕೃಷ್ಣನಾಗಿ ಬಂದು ’ಪ್ರಜ್ಞೆ’ಯಾಗಿ ನಿರಂತರವಾಗಿ ನೆಲೆಸಿದರೆ ರಾಮನಾಗಿ ಬಂದು ಸದಾ ಸರ್ವದಾ
ಮಾತಾ ರಾಮೋ ಮತ್ಪಿತಾ ರಾಮಚಂದ್ರೋ
ಭ್ರಾತಾ ರಾಮೋ ಮತ್ಸಖಾ ರಾಮಚಂದ್ರಃ |
ಸರ್ವಸ್ವಂ ಮೇ ರಾಮಚಂದ್ರೋ ದಯಾಳುಃ
ನಾನ್ಯದ್ ದೈವಂ ನೈವ ಜಾನೇ ನ ಜಾನೇ || ಎಂದು ಸ್ಮರಿಸುವಂತೆ ಮಾಡಿದ್ದಾನೆ.  ಸರ್ವಸ್ವವೂ ಆಗಿರುವ, ಕರುಣಾಸಾಗರನಾಗಿರುವ  ಭಗವಂತನನ್ನು ಕರೆಯಲು, ಸ್ಮರಿಸಲು ನಮಗೆ ಇದಕ್ಕಿಂತ ಬೇರೆ ಯಾವ ಉತ್ತಮ ಶಬ್ದಗಳೂ ಸಿಕ್ಕುವುದಿಲ್ಲವೆಂದೇ ಹೇಳಬೇಕು.

ಶ್ರೀ ಜಗನ್ನಾಥ ದಾಸರು ತಮ್ಮ ತತ್ವಸುವ್ವಾಲಿಯಲ್ಲಿ ಜಾತರೂಪೋದರನಾದ ಬ್ರಹ್ಮನನ್ನು ಕುರಿತು
ಸತ್ಯ ಲೋಕವೆ ಸದನ ತತ್ವಾಭಿಮಾನಿಗಳು
ಭೃತ್ಯರೆನಿಸುವರು ಮಹಲಕ್ಷ್ಮೀ | ಮಹಲಕ್ಷ್ಮಿ ಜನನಿ ಪುರು-
ಷೋತ್ತಮನೆ ಜನಕನೆನಿಸುವ || - ಸತ್ಯಲೋಕದಲ್ಲಿ ನೆಲೆಸಿರುವ ಬ್ರಹ್ಮನಿಗೆ ಮಹಲಕ್ಷ್ಮಿ ದೇವಿಯು ತಾಯಿ, ಭಗವಂತನೇ ತಂದೆ ಎಂದಿದ್ದಾರೆ.

ಆನಂದದ ರಸಮಯನಾದ ಭಗವಂತನನ್ನು ಕುರಿತು
ಆನಂದಮಯ ಪರಮಾನಂದ ರೂಪ ನಿ-
ತ್ಯಾನಂದವರದ ಅಧಮ-ರ | ಅಧಮರಿಗೆ ನಾರಾಯ-
ಣಾನಂದಮಯನೆ ದಯವಾಗೊ || - ಸ್ವರೂಪಾನಂದದಿಂದಲೇ ಸದಾ ಆನಂದ ಪಡುವ, ಪೂರ್ಣಾನಂದನೇ ದೇಹವಾಗುಳ್ಳ, ನಿತ್ಯಾನಂದವನ್ನು ಸಾರ್ವಕಾಲಿಕವಾಗಿ ಅನುಭವಿಸುವವನು ಎಂದಿದ್ದಾರೆ.

ಡಿವಿಜಿಯವರು ಕಗ್ಗದಲ್ಲಿ
ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆ
ಸಲೆ ಬಗೆಯಲದು ಪರಬ್ರಹ್ಮ ವಿಸ್ಫುರಣೆ |
ಥಳಥಳಿಕೆ ವಜ್ರದಲಿ ನೈಜವಿರುವಂತೆಯು
ಜ್ಜ್ವಲತೆ ಬೊಮ್ಮಗೆ ನೈಜ - ಮಂಕುತಿಮ್ಮ || - ಈ ವಿಶ್ವದ ವಿಸ್ತಾರ, ಚಲನೆಯೆಂಬುವುದು ಒಂದು ಆಟ.  ಬ್ರಹ್ಮವಸ್ತುವಿನ ಶಕ್ತಿಯ ವ್ಯಕ್ತತೆ.  ಒಂದು ವಜ್ರ ತಾನು ಥಳಥಳಿಸದೆ ಇರದು. ಥಾಳಥಳ್ಯ ಅದರ ನಿಜವಾದ ಗುಣ.  ಅನೇಕ ವಿಧವಾಗಿ ಉಜ್ಜ್ವಲವಾಗಿ ಪ್ರಕಶಿಸುವುದು ಬ್ರಹ್ಮವಸ್ತುವಿದೆ ಬಹಳ ಸಹಜವೇ ಆಗಿದೆ.
ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ
ಸುಮವಪ್ಪುದಂತೆ ಮರವಗಲು ಮಗುಳ್ದಂತು |
ಅಮಿತ ಪ್ರಪಂಚನಾಕುಂಚನಾವರ್ತನ
ಕ್ರಮವೆ ವಿಶ್ವಚರಿತ್ರೆ - ಮಂಕುತಿಮ್ಮ || -  ಕಮಲದ ಹೂವು ಬೆಳಗಾದರೆ ಅರಳುತ್ತದೆ, ಸಂಜೆಯಾದ ಕೂಡಲೇ ಮೊಗ್ಗಿನಂತಾಗುತ್ತದೆ.  ಪುನಃ ಬೆಳಗಾದರೆ ಅರಳುವಿಕೆ, ಸಂಜೆಯಾದರೆ ಮುದುಡುವಿಕೆ.  ಇದರಂತೆಯೇ ಪ್ರಪಂಚದ ಕಥೆಯೂ ಆಗಿದೆ.  ವಿಶ್ಚವು ಅಮಿತ ಪ್ರಪಂಚನ, ಆಕುಂಚನ, ಆವರ್ತನ, ಹೀಗೆ ಕೊನೆಮೊದಲಿಲ್ಲದೆ ಅರಳುವುದು, ಸಂಕುಚಿಸುವುದು ನಡೆಯುತ್ತಲೇ ಇರುತ್ತದೆ.
ಎತ್ತಣಿನೊ ದೃಕ್ಪರಿಧಿಯಾಚೆಯಿಂದಲನಂತ
ಸತ್ತ್ವ ತೆರೆತೆರೆಯಾಗಿ ಬೀಸಿ ಗೂಢದಲಿ |
ಬಿತ್ತರಿಸುತಿಹುದು ಹೊಸ ಹೊಸತನವನೆಡೆಬಿಡದೆ
ನಿತ್ಯ ನಿತ್ಯವು ಜಗದಿ - ಮಂಕುತಿಮ್ಮ || -  ಹಾಗಾದರೆ ಈ ಪ್ರಪಂಚ / ಬ್ರಹ್ಮಶಕ್ತಿ ಹಳೆಯದಾಯಿತೇ ಎಂದರೆ ಖಂಡಿತಾ ಇಲ್ಲ.  ಎಲ್ಲಿಂದಲೋ ನಮ್ಮ ಕಣ್ಣಿಗೆ ಕಾಣದಂತಹ ದೂರದಿಂದ ಒಂದು ಅನಂತವಾದ ಸತ್ತ್ವ ತೆರೆತೆರೆಯಾಗಿ ಬೀಸುತ್ತಲೇ ಇರುತ್ತದೆ.  ಬ್ರಹ್ಮಶಕ್ತಿ ನಮಗೆ ಗೋಚರಿಸುವುದಿಲ್ಲ, ಆದರೆ ಅದರ ಪ್ರಭಾವ ಮಾತ್ರ ಅನವರತವಾದದ್ದು, ಗೂಢವಾದದ್ದು.  ಹೀಗೆ ಎಡೆಬಿಡದೆ ತನ್ನ ಪ್ರಭಾವವನ್ನು ಹರಿಸುತ್ತಲೇ ಇರುವುದರಿಂದಲೇ ಅದು ದಿನದಿನವೂ ಕಾಣುವ ಹೊಸತನವಾಗಿದೆ ಎಂದಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ

Wednesday, June 18, 2014

ಕರುಣಾ ಸಂಧಿ - ೨೨ ನೇ ಪದ್ಯ


ಮನದೊಳಗೆ ಸುಂದರ ಪದಾರ್ಥವ
ನೆನೆದು ಕೊಡೆ ಕೈಕೊಂಡು ಬಲು ನೂ-
ತನ ಸುಶೋಭಿತ ಗಂಧ ಸುರಸೋಪೇತ ಫಲರಾಶಿ |
ದ್ಯುನದಿನಿವಹಗಳಂತೆ ಕೊಟ್ಟವ-
ರನು ಸದಾ ಸಂತೈಸುವನು ಸ-
ದ್ಗುಣವ ಕದ್ದವರಘವ ಕದಿವನು ಅನಘನೆಂದೆನಿಸಿ  || ೨೨ ||


ಪ್ರತಿಪದಾರ್ಥ : ಮನದೊಳಗೆ - ಮನಸ್ಸಿನಲ್ಲಿಯೇ, ಸುಂದರ ಪದಾರ್ಥವ - ಭಗವಂತನ ಸಮರ್ಪಣೆಗೆ ಯೋಗ್ಯವಾದ ಪೂಜಾ ಪದಾರ್ಥಗಳನ್ನು, ನೆನೆದುಕೊಡೆ - ಅನುಸಂಧಾನದಲ್ಲಿ ಅರ್ಪಿಸಿದರೆ, ಕೈಗೊಂಡು - ಭಗವಂತನು ಸ್ವೀಕರಿಸಿ, ಬಲುನೂತನ - ಹೊಚ್ಚ ಹೊಸದಾದಂತಹ, ಸುಶೋಭಿತ - ಕಂಗೊಳಿಸುತ್ತಿರುವಂತಹ, ಗಂಧ ಸುರಸೋಪೇತ ಫಲರಾಶಿ - ಸಮೀಚೀನ ರಸಗಳೀಂದ ಯುಕ್ತವಾದ ಹಣ್ಣುಗಳ ರಾಶಿಯನ್ನು, ದ್ಯುನದಿ  - ಭಾಗೀರಥಿ, ನಿವಹಗಳಂತೆ - ನಿವಹ ಎಂದರೆ ಉದಕ ಎಂಬರ್ಥವಾಗುವುದಾದ್ದರಿಂದ  ಗಂಗಾ ಪ್ರವಾಹದಂತೆ,  ಕೊಟ್ಟು ಅವರನು ಸದಾ ಸಂತೈಸುವನು - ಅಪರಿಮಿತ ಪ್ರಮಾಣದಲ್ಲಿ ಕೊಟ್ಟು ತನ್ನ ಭಕ್ತರನ್ನು ಸದಾ ಸಂರಕ್ಷಿಸುವನು, ಸದ್ಗುಣವ ಕದ್ದವರ - ಭಗವಂತನ ಗುಣಗಳನ್ನು ಆರಾಧಿಸುವಂತಹ, ಅಘವ ಕದಿವನು - ಪಾಪಗಳನ್ನು ಪರಿಹರಿಸುವನು, ಅನಘನೆಂದೆನಿಸಿ - ದೋಷರಹಿತನಾದ ಭಗವಂತನು ಪಾಪ ಪರಿಹಾರಕನೆಂದೆನಿಸಿಕೊಳ್ಳುವನು.

ಸುಲಕ್ಷಣವಾದ ಪರಮಾತ್ಮನ ರೂಪವನ್ನು ಮನದಿ ನಿಲ್ಲಿಸಿ,  ಜಡ ಪದಾರ್ಥಗಳಾದ  ಪೂಜಾ  ಸಾಧನ ದ್ರವ್ಯಗಳಲ್ಲಿ ಪ್ರತಿಮಾಕಾರನಾದ ಪರಮಾತ್ಮನು ತದ್ವಾಚ್ಯ ಹಾಗೂ ತದಾಕಾರನಾಗಿ ಇರುವನೆ೦ದು  ಅನುಷ್ಠಾನ ಮಾಡಿಕೊ೦ಡು ಪೂಜೆ ಮಾಡಿದಲ್ಲಿ, ಪರಮಾತ್ಮನು ಅದನ್ನು ಸ್ವೀಕಾರಮಾಡುತ್ತಾನೆ. ಎ೦ದೂ ಭೋಗಮಾಡದ೦ತಹ, ಪರಮಾತ್ಮನ ಸ್ವಾಖ್ಯರಸದಿ೦ದ ಯುಕ್ತವಾದ ಫಲಸಮೂಹಗಳನ್ನು, ಉದಕಕ್ಕೂ ಅಲೆಗಳಿಗೂ ಇರುವ ಅಭೇದಂತೆ, ಪರಮಾತ್ಮನ ರೂಪ ಹಾಗೂ ಪದಾರ್ಥಾ೦ತರ್ಗತ  ರೂಪಕ್ಕೂ ಅಭೇದ ಎಂಬ ಐಕ್ಯ ಚಿ೦ತನೆಯಿಂದ ಸಮರ್ಪಿಸಿಕೊಂಡ ಭಕ್ತರನ್ನು ನಿರ೦ತರವಾಗಿ ಕಾಪಾಡುವನು. ಭಕ್ತರು ಕರ್ಮವಶಾತ್ ಮಾಡುವ ದುರ್ವ್ಯಾಪಾರರೂಪವಾದ ಪಾಪಗಳನ್ನು, ನಿರ್ದೋಷಿ ಎನಿಸಿಕೊಳ್ಳುವ ಪರಮಾತ್ಮನು ತಾನು ಅಪಹರಿಸಿ ಅಹಂಕಾರ, ಮಮಕಾರಗಳಿಂದ ಬಿಡಿಸಿ ದಿವ್ಯಜ್ಞಾನವನ್ನು ಕೊಟ್ಟು ಕಾಪಾಡುವನು. ನಮಗೆ ಏನೂ ಇಲ್ಲದಿದ್ದಾಗಲೂ ನಮ್ಮ ಮನಸ್ಸಿನಲ್ಲಿ ಅತ್ಯುತ್ತಮ ಪದಾರ್ಥಗಳನ್ನು ನೆನೆದು, ಅದನ್ನೇ ಪರಮಾತ್ಮನಿಗೆ ಅರ್ಪಿಸಿದರೆ, ಪರಮಾತ್ಮ ನಮಗೆ ಉತ್ತಮ ಫಲರಾಶಿಯನ್ನೇ ಕೊಡುತ್ತಾನೆ.  ಒಂದು ಬಿಂದು ಜಲ, ಒಂದು ತುಳಸೀದಳ, ಒಂದೇ ಒಂದು ಉತ್ತಮವಾದ ಪುಷ್ಪ ಕೊಟ್ಟರೂ ಅವನು ನಮ್ಮನ್ನು ಸಂತೈಸುತ್ತಾನೆ.  ನಾವು ಸದ್ಗುಣವನ್ನು ಕದ್ದರೆ, ನಮ್ಮ ’ಅಘ’ - ಎಂದರೆ ಪಾಪವನ್ನು ಕದ್ದು ಅಘವನ್ನು ಕಳೆವ ಅನಘ ಎನ್ನಿಸಿಕೊಳ್ಳುತ್ತಾನೆ.
 


ನಾವು ಮಾಡುವ ಪೂಜೆಯಲ್ಲಿ ಎರಡು ವಿಧಗಳಿವೆ.  ಮೊದಲನೆಯದು ಮತ್ತು ಅತಿ ಮುಖ್ಯವಾದದ್ದು ಮಾನಸಪೂಜೆ ಮತ್ತು ಎರಡನೆಯದು ಬಹಿರಂಗಪೂಜೆ.  ಮೊದಲನೆಯದಾದ ಮಾನಸಪೂಜೆಯನ್ನು ಬಹಿರಂಗಪೂಜೆಯ ಮೊದಲಿಗೇ ಮಾಡಬೇಕು.  ಮಾನಸಪೂಜೆ ನಮಗಾಗಿ, ನಮ್ಮ ಆತ್ಮೋನ್ನತಿಗಾಗಿ, ಸಾಧನೆಗಾಗಿ ಮಾಡಿಕೊಳ್ಳುವುದು.  ಬಹಿರಂಗಪೂಜೆ ಮನೆಯವರಿಗಾಗಿ, ಮತ್ತು ಸಮಾಜಕ್ಕಾಗಿ, ಸಮುದಾಯಕ್ಕಾಗಿ ಮಾಡುವುದು.  ಈ ಎರಡು ವಿಧದ ಪೂಜೆಗಳಲ್ಲಿ ಬಹಳ ಶ್ರೇಷ್ಠವಾದದ್ದು ಮಾನಸಪೂಜೆ.  ಮಾನಸಪೂಜೆಯಲ್ಲಿ ಪೂಜೆಗಾಗಿ ಬಳಸುವ ಯಾವ ಪೂಜಾ ಸಾಮಗ್ರಿಗಳ ಅವಶ್ಯಕತೆಯೂ ಇರುವುದಿಲ್ಲ.  ನಮ್ಮ ಹೃತ್ಕಮಲದಲ್ಲಿಯೇ ಸ್ಥಿತನಾಗಿರುವ ’ಮೂಲೇಶ’ನಾದ ಭಗವಂತನನ್ನು ಮನಸ್ಸಿನಲ್ಲಿಯೇ ಚೈತನ್ಯಗೊಳಿಸಿಕೊಂಡು, ಬಹಿರಂಗಪೂಜೆಯಲ್ಲಿ ಮಾಡುವ ವಿಧಾನವನ್ನೇ ಅನುಸರಿಸಬಹುದು.  ಆದರೆ ಪ್ರಾಕೃತಿಕವಾಗಿ ಯಾವ ಪದಾರ್ಥದ ಉಪಯೋಗವೂ ಇಲ್ಲಿರುವುದಿಲ್ಲ.  ಮನಸ್ಸಿನಲ್ಲಿಯೇ ರತ್ನಸಿಂಹಾಸನಕ್ಕೆ ಆಹ್ವಾನಿಸಬೇಕು.  "ಗಂಗೇಚ ಯಮುನೇಚೈವ ಗೋದಾವರೀ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರುಂ" ಎಂದು ಪವಿತ್ರ ಮಾಡಿಟ್ಟುಕೊಂಡಿರುವ ಜಲದಿಂದ ಅರ್ಘ್ಯ, ಪಾದ್ಯಗಳನ್ನು ಕೊಟ್ಟು ಉಪಚರಿಸಬೇಕು.  ವಿಶಾಲವಾದ ಮನದಂಗಳದಲ್ಲಿಯೇ ನೆಟ್ಟು ಬೆಳೆಸಿದ ಗಿಡದಿಂದ ಸುಂದರವಾಗಿ ಅರಳಿ, ನಳನಳಿಸುತ್ತಿರುವ ಪುಷ್ಪವನ್ನು ಸಮರ್ಪಿಸಬೇಕು, ತುಪ್ಪದ ದೀಪವನ್ನು ಬೆಳಗಬೇಕು.  ಮನಸ್ಸೆಂಬ ಅಡುಗೆಯ ಮನೆಯಲ್ಲಿ ನಾವೇ ಸ್ವತಃ ತಯಾರು ಮಾಡಿದ ಅನೇಕ ವಿಧದ ಭಕ್ಷ್ಯ, ಭೋಜ್ಯಗಳನ್ನು ಶುದ್ಧಾತಿಶುದ್ಧ ಜಲದ ಸಹಿತವಾಗಿ ಸಮರ್ಪಿಸಬೇಕು.   ಭಗವಂತನಿಗೆ ಕರ್ಪೂರ ಮಂಗಳನೀರಾಜನದ ಸಹಿತವಾಗಿ ಪೂಜೆಯನ್ನು ಪೂರೈಸಬೇಕು.  ಇದು ಒಂದು ವಿಧವಾದರೆ, ನಮ್ಮ ದೇಹದಲ್ಲಿರುವ ಪಂಚತತ್ವಗಳನ್ನೇ ಸಮರ್ಪಿಸಿಕೊಂಡು ಪೂಜಿಸುವುದು ಇನ್ನೊಂದು ವಿಧವಿರುವುದು.  ಭಗವಂತನನ್ನು ಹೃತ್ಕಮಲದ ರತ್ನಸಿಂಹಾಸನದಲ್ಲಿ ಆಹ್ವಾನಿಸಿ ನಮ್ಮ ದೇಹದಲ್ಲಿರುವ ಪಂಚತತ್ವಗಳಲ್ಲಿ ಮೊದಲನೆಯದಾಗಿ ಪೃಥ್ವಿತತ್ವವನ್ನು ಗಂಧವನ್ನಾಗಿಯೂ,  ಆಕಾಶತತ್ವವನ್ನು ಪುಷ್ಪವನ್ನಾಗಿಯೂ,  ವಾಯು ತತ್ವವನ್ನು ಧೂಪವನ್ನಾಗಿಯೂ, ಅಗ್ನಿ ತತ್ವವನ್ನು ದೀಪವನ್ನಾಗಿಯೂ ಮತ್ತು ಜಲತತ್ವವನ್ನು ಅಮೃತವೆಂದು ನೈವೇದ್ಯವನ್ನಾಗಿಯೂ ಸಮರ್ಪಿಸುತ್ತಾ, ಸರ್ವಾತ್ಮನಿಗೆ ಸರ್ವವನ್ನೂ ಸಮರ್ಪಿಸುತ್ತಿದ್ದೇವೆಂಬ ಭಾವದಲ್ಲಿ ಶರಣಾಗತರಾಗುವುದು. 

ಮಾನಸಪೂಜೆಯಲ್ಲಿಯೇ ಮೂರನೆಯ ವಿಧವೆಂದು ಪರಿಗಣಿಸಬಹುದಾದದ್ದು ಭಗವಂತನನ್ನು ನಮಗೆ ಇಷ್ಟವಾದ ರೂಪದಲ್ಲಿ ಅಂತರಂಗದಲ್ಲಿ ಆಹ್ವಾನಿಸಿಕೊಳ್ಳುವುದು.  ಅಂದರೆ ಭಗವಂತನನ್ನು ಪುಟ್ಟ ಮಗುವಾಗಿ ಆಹ್ವಾನಿಸಿದರೆ, ನಾವು ನಮ್ಮ ಮನೆಯಲ್ಲಿನ ಪುಟ್ಟ ಮಗುವಿಗೆ ಹೇಗೆ ಸರ್ವೋಪಚಾರಗಳನ್ನೂ ಮಾಡುತ್ತೇವೋ, ಹಾಗೆಯೇ ಅಂತರಂಗದಲ್ಲಿಯೇ ಆಹ್ವಾನಿಸಿಕೊಂಡ ಮುದ್ದು ಮಗುವನ್ನು ಮೀಯಿಸಿ, ಲಾಲಿಸಿ, ಮುದ್ದಿಸಿ, ಓಲೈಸಿ, ತುತ್ತು ತಿನ್ನಿಸಿ, ಅಂತರಂಗದ ತೊಟ್ಟಿಲಲ್ಲಿ ಲಾಲಿ ಜೋಗುಳ ಹಾಡಿ ತೂಗಿ ಮಲಗಿಸುವುದು ಅತಿ ವಿಶೇಷವಾದ ವಿಧಾನವೆಂದೆನಿಸುವುದು.  ಮಗುವಿನೊಡನೆ ಮಗುವಾಗಿ, ನಾವೂ ಬೆರೆತು, ನಕ್ಕು, ನಲಿದು, ಹಾಡಿ ಪಾಡಿ ಸಂತೋಷಿಸಿದಾಗ ಮನಸ್ಸು ಸಂಪೂರ್ಣವಾಗಿ ಭಗವಂತನಲ್ಲಿಯೇ ಲೀನವಾಗುವುದು.  ಇದು ಅತ್ಯುತ್ಕೃಷ್ಟವಾದ, ಶುದ್ಧ ಭಕ್ತಿಯೆನಿಸುತ್ತದೆ.  ಹೀಗೆ ನಾವು ಯಾವುದೇ ವಿಧವನ್ನು ಅನುಸರಿಸಿ ಮಾನಸಿಕ ಪೂಜೆ ಮಾಡಿದರೂ, ಮನಸ್ಸಿನಲ್ಲಿ ಸಮರ್ಪಿಸಿದ ಸರ್ವವನ್ನೂ ಭಗವಂತ ನಮಗೆ ಪ್ರಾಕೃತಿಕವಾಗಿ ಕೊಟ್ಟು ರಕ್ಷಿಸುತ್ತಾನೆ.  ಮಾನಸಪೂಜೆಯನ್ನು ಮಾಡಿದ ನಂತರವೇ ನಾವು ಭಗವಂತನನ್ನು ನಮ್ಮ ಎದುರಿನಲ್ಲಿರುವ ಪ್ರತಿಮೆಯಲ್ಲಿ ಆಹ್ವಾನಿಸಿ, ಪ್ರತಿಮಾ ಪೂಜೆಯನ್ನು ಬಹಿರಂಗವಾಗಿ ಮಾಡಬೇಕು.  ಹಾಗೆ ಮಾಡದೇ ಪ್ರತಿಮೆಯನ್ನೇ ಭಗವಂತನೆಂದು ತಿಳಿದು ಪೂಜಿಸಬಾರದು. 



ಮನದೊಳಗೆ ಸುಂದರ ಪದಾರ್ಥವ ನೆನೆದು ಕೊಡೆ -  ಮನದೊಳಗೆ ಸುಂದರ ಪದಾರ್ಥವನ್ನು ನೆನೆಯುವುದೆಂದರೆ, ಭಗವಂತನಿಗೆ ನಾವು ಅನೇಕ ಭಕ್ಷ್ಯ ಭೋಜ್ಯಗಳನ್ನು ನೈವೇದ್ಯಕ್ಕೆಂದು ಮಂಡಲ ಮಾಡಿ ಇಟ್ಟಿರುತ್ತೇವೆ.  ಅದರಲ್ಲಿ ಭಗವಂತ ತನ್ನ ಅನೇಕಾನೇಕ ವಿಭೂತಿ ರೂಪಗಳಿಂದ ಸ್ಥಿತನಾಗಿದ್ದಾನೆಂದೂ, ಆ ರೂಪಗಳನ್ನು ನಾವು ಚಿಂತಿಸಿ, ಅವನಿಗೆ ಸಮರ್ಪಿಸಬೇಕು.  ವಿವಿಧ ಭಕ್ಷ್ಯಗಳಲ್ಲಿರುವ ಅವನ ವಿವಿಧ ರೂಪಗಳು ಆ ಪದಾರ್ಥದಲ್ಲಿ ನೆಲೆಸಿರುವ ಸಾಖ್ಯರಸವನ್ನು ಸ್ವೀಕರಿಸಿ, ಮಿಕ್ಕದ್ದನ್ನು ನಮಗೆ ಬಿಟ್ಟು ಬಿಡುತ್ತಾನೆ.  ಅದು ಅವನಿಗೆ ತ್ಯಾಜ್ಯ ಆದರೆ ನಮಗೆ ಮಹಾಪ್ರಸಾದ.  ನಾವು ಹಣ್ಣುಗಳನ್ನು ತಿಂದು ಸಿಪ್ಪೆಯನ್ನು ಹಸುವಿಗೆ ಕೊಡುವಂತೆ ಎನ್ನಬಹುದು.  ಭಗವಂತನಿಗೆ ಪ್ರಾಕೃತಿಕವಾಗಿ ನಾವು ಯಾವ ಪದಾರ್ಥವನ್ನೂ ಸಮರ್ಪಣೆ ಮಾಡಲಾಗುವುದಿಲ್ಲ.  ಏಕೆಂದರೆ ಎಲ್ಲವೂ ಅವನದೇ, ಎಲ್ಲವನ್ನೂ ಅವನೇ ಕೊಟ್ಟಿರುವುದು ಮತ್ತು ಪ್ರಾಕೃತಿಕ ವಸ್ತುಗಳಿಂದ ಭಗವಂತನಿಗೆ ಯಾವ ಲಾಭವೂ ಇಲ್ಲ ನಷ್ಟವೂ ಇಲ್ಲ, ಆನಂದವೂ ಇಲ್ಲ ದುಃಖವೂ ಇಲ್ಲ.  ಅವನು ಸರ್ವದಾ ಸದಾನಂದಮಯನಾಗಿರುವವನು.  ಸೃಷ್ಟಿಯಲ್ಲಿರುವ ಪ್ರತೀ ಪದಾರ್ಥವನ್ನೂ ನಮಗಾಗಿ ಭಗವಂತನೇ ಸೃಷ್ಟಿ ಮಾಡಿ ಕೊಟ್ಟಿದ್ದಾನೆ. ನಾವು ಅವುಗಳನ್ನೇ ಮತ್ತೆ ಭಗವಂತನಿಗೇ ಸಮರ್ಪಿಸಿ ಕೃತಾರ್ಥರಾಗಬೇಕು. ಆದರೆ ನಾವು ಹಾಗೆ ಮಾಡದೆ ಎಲ್ಲವನ್ನೂ ನಾವೇ ಸೃಷ್ಟಿಸಿಕೊಂಡಿದ್ದೇವೆಂಬ ಅಹಂಕಾರದಲ್ಲಿ ಬೀಗುತ್ತೇವೆ.  ಕಷ್ಟಗಳು ಬಂದಾಗ ಮಾತ್ರ ಭಗವಂತನನ್ನು ಸ್ಮರಿಸುತ್ತಾ ಕಾಪಾಡೆಂದು ಬೇಡುತ್ತೇವೆ.  ಎಲ್ಲವನ್ನೂ ಕೊಟ್ಟಿರುವ ಸ್ವಾಮಿಗೆ ನಾವು ಏನನ್ನಾದರೂ ಕೊಡಬಲ್ಲೆವಾದರೆ, ಅದು ನಮ್ಮ ಶುದ್ಧ ಭಕ್ತಿ ಮಾತ್ರವೇ ಆಗಿರುತ್ತದೆ.  ಪಂಚೇಂದ್ರಿಯಗಳನ್ನು ಕೊಟ್ಟು, ಅನುಭವಗಳ ಮೂಲಕ ನಾವು ಆನಂದಿಸುವಂತೆ ಮಾಡಿರುವ ಸರ್ವೇಶನಿಗೆ, ನಾವು ನಮ್ಮನ್ನೇ ಸಮರ್ಪಿಸಿಕೊಳ್ಳುವುದು ಮಾತ್ರವೇ ನಾವು ಅವನಿಗೆ ಸಲ್ಲಿಸುವ ಧನ್ಯವಾದಗಳಾಗುತ್ತವೆ.  ನಮ್ಮನ್ನೇ ನಾವು ಸಮರ್ಪಿಸಿಕೊಳ್ಳುವುದನ್ನೇ ಮಾನಸಪೂಜೆ ಎನ್ನುವುದು.   ಮಾನಸಪೂಜೆಯಿಂದ ನಮ್ಮ ಆತ್ಮದ ಶುದ್ಧಿಯಾಗುತ್ತದೆ, ಮನಸ್ಸು ಆತನಲ್ಲಿ ಲೀನವಾಗುತ್ತದೆ.    ಪೂಜೆಯನ್ನು ಮಾಡುವಾಗ ನಾವು ಎಲ್ಲಾ ತರಹದ ಉಪಚಾರಗಳನ್ನೂ ಭಗವಂತನಿಗೆ ಸಮರ್ಪಿಸಿ, ಪೂಜಿಸುತ್ತೇವೆ.  ಹಾಗೇ ಮನದಲ್ಲಿಯೇ ನೆಲೆಸಿರುವ ಭಗವಂತನನ್ನು ಮನದಲ್ಲಿಯೇ ಸ್ಮರಿಸುತ್ತಾ, ನಮ್ಮ ಕಲ್ಪನೆಯಲ್ಲಿಯೇ ನಾವು ಅತಿ ಸುಂದರವಾದ ಪದಾರ್ಥಗಳನ್ನು ಸಮರ್ಪಿಸಿ, ಷೋಡಶೋಪಚಾರಸಹಿತ ಪೂಜಾವಿಧಿಯನ್ನು ಪೂರೈಸಬೇಕು. 

ಬಹಿರಂಗ ಪೂಜೆಯಲ್ಲಿ ಪ್ರಾಕೃತಿಕವಾಗಿ ಕೊಡುವ ಪದಾರ್ಥಗಳನ್ನೇ ಹೇಗೆ ಭಗವಂತನು ಪ್ರೀತಿಪೂರ್ವಕವಾಗಿ ಸ್ವೀಕರಿಸುತ್ತಾನೆಯೋ, ಹಾಗೇ ಮಾನಸಪೂಜೆಯಲ್ಲಿ ಸಮರ್ಪಿಸುವ ಪದಾರ್ಥಗಳು ಮಾನಸವೇ ಆಗಿರುತ್ತವೆ ಮತ್ತು ಅವುಗಳನ್ನು ಇನ್ನೂ ಅಧಿಕ ಪ್ರೀತಿಯಿಂದ ಭಗವಂತನು ಸ್ವೀಕರಿಸುತ್ತಾನೆ.  ಮಾನಸಿಕವಾಗಿ ಸಮರ್ಪಣೆ ಮಾಡುವ  ಸಮಸ್ತ ಪದಾರ್ಥಗಳೂ ಅತ್ಯುತ್ಕೃಷ್ಟವಾದದ್ದೆಂದು ಭಾವಿಸಿ ಸಮರ್ಪಿಸಬೇಕು.  ನಿತ್ಯ ತೃಪ್ತನೂ, ಕರುಣಾನಿಧಿಯೂ ಆದ ಶ್ರೀಹರಿ, ಎಲ್ಲವನ್ನೂ ಪ್ರೇಮದಿಂದ ಸ್ವೀಕರಿಸಿ ತೃಪ್ತಿಪಡುತ್ತಾನೆ ಮತ್ತು ಒಲಿದು ನಮ್ಮನ್ನು ಕಾಪಾಡುತ್ತಾನೆ.  ಶ್ರೀ ಪುರಂದರ ದಾಸರು ತಮ್ಮ "ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ" ಎಂಬ ಕೃತಿಯಲ್ಲಿ ’ಮಂಗಳಾಭಿಷೇಕಕೆ ಉದಕ ತರುವೆನೆನೆ, ಗಂಗೆಯುಂಗುಷ್ಠದಿ ಪಡೆದಿರುವೆ’, ಪುಷ್ಪವನ್ನು ಸಮರ್ಪಿಸೋಣವೆಂದರೆ ’ಪುಷ್ಪ ಪಲ್ಲವಿಸಿದೆ ಪೊಕ್ಕುಳಲಿ’, ಹಾಸಿಗೆಯನ್ನಾದರೂ ತಂದು ಹಾಸೋಣವೆಂದರೆ ’ಶೇಷನ ಮೇಲೆ ನೀ ಪವಡಿಸಿರ್ಪೆ’ ಹೋಗಲಿ ಬೀಸಣಿಗೆಯನ್ನು ತಂದಾದರೂ ಬೀಸೋಣವೆಂದರೆ ’ಬೀಸುತಿಹನು ಖಗ ತನ್ನ ಪಕ್ಕದಲಿ’ ಎನ್ನುತ್ತಾ ಭಗವಂತನಿಗೆ ಕೊಡಲು ನಮ್ಮಲ್ಲಿ ಏನೂ ಇಲ್ಲವೆಂಬ ಸತ್ಯವನ್ನು ತಿಳಿಸುತ್ತಾರೆ.  ನಿತ್ಯಗುಣ ಪರಿಪೂರ್ಣನಾದ ಶ್ರೀಹರಿಯನ್ನು ಭಕ್ತಿದಾಯಕನೆಂದು ಸ್ತುತಿಸುತ್ತಾ ಕೊಂಡಾಡುವುದೊಂದೇ ನಮಗಿರುವ ಮಾರ್ಗವೆನ್ನುತ್ತಾ ನಮ್ಮ ಸಮರ್ಪಣೆಗಳೆಲ್ಲವೂ ಮಾನಸಪೂಜೆಯ ಮೂಲಕವೇ ಹೆಚ್ಚು ಮಹತ್ವ ಪಡೆಯುವುದೆಂಬುದನ್ನು ವಿವರಿಸುತ್ತಾರೆ.

ಶ್ರೀ ಶಂಕರಾಚಾರ್ಯರು ತಮ್ಮ "ಭಗವನ್ಮಾನಸಪೂಜಾ ಸ್ತೋತ್ರಮ್" ನಲ್ಲಿ

ಹೃದಂ ಭೋಜೇ ಕೃಷ್ಣಃ ಸಜಲ-ಜಲದ ಶ್ಯಾಮಲತನುಃ | ಸರೋಜಾಕ್ಷಃ ಸ್ರಗ್ವೀ ಮುಕುಟಕಟಕಾದ್ಯಾಭರಣವಾನ್ ||
ಶರದ್ರಾಕಾ-ನಾಥ-ಪ್ರತಿಮ-ವದನಃ ಶ್ರೀ ಮುರಲಿಕಾಂ | ವಹನ್ ಧ್ಯೇಯೋ ಗೋಪೀಗಣಪರಿವೃತಃ ಕುಂಕುಮಚಿತಃ || - ನೀರಿನಿಂದ ಕೂಡಿದ ಮೋಡದಂತೆ ಶ್ಯಾಮಲವರ್ಣದ ದೇಹ, ಕಮಲದಂತೆ ಕಣ್ಣುಳ್ಳ, ಕೊರಳಲ್ಲಿ ವನಮಾಲೆ ಧರಿಸಿರುವ, ಮುಕುಟ ಕಡಗ ಮುಂತಾದ ಆಭರಣ ಧರಿಸಿರುವ, ಶರದೃತುವಿನ ಹುಣ್ಣಿಮೆ ಚಂದ್ರದಂತೆ ಮುಖವುಳ್ಳ, ಕೊಳಲನ್ನು ಪಿಡಿದಿಹ, ಗೋಪಿಯರ ಸಮೂಹದಿಂದ ಕೂಡಿದ, ಸರ್ವಾಂಗ ಗಂಧ ಲೇಪಿಸಿರುವ ಶ್ರೀಕೃಷ್ಣನನ್ನು ನನ್ನ ಹೃದಯ ಕಮಲದಲ್ಲಿ ಧ್ಯಾನಿಸುತ್ತೇನೆ ಎನ್ನುತ್ತಾ ಮಾನಸಪೂಜೆಯನ್ನು ಪ್ರಾರಂಭಿಸುತ್ತಾರೆ.  ಮುಂದುವರೆಯುತ್ತಾ ಭಗವಂತನನ್ನು ಕ್ಷೀರಸಾಗರದ್ವೀಪದಿಂದ ಹೃತ್ಕಮಲಕ್ಕೆ ಆಗಮಿಸಿ, ರತ್ನ ಸಿಂಹಾಸನವನ್ನು ಅಲಂಕರಿಸೆಂದು  ಪ್ರಾರ್ಥಿಸುತ್ತಾರೆ.  ಆಚಮನ ಮಾಡಲು ದೇವನದಿ ಗಂಗಾಜಲವನ್ನು ತಂದಿರುವೆ ಸ್ವೀಕರಿಸು ಎನ್ನುತ್ತಾರೆ.  ರುಚಿಯಾದ,  ಪಕ್ವವಾದ ಫಲಗಳನ್ನೂ, ಪರಿಮಳಯುಕ್ತವಾದ ತಾಂಬೂಲವನ್ನೂ ಪ್ರೀತಿಯಿಂದ ತಂದಿರುವೆ, ಉಜ್ವಲವಾದ ಆರತಿಯನ್ನು ಮಾಡುವೆನೆನ್ನುತ್ತಾರೆ.  ಅನೇಕ ಬಗೆಯ ಸುವಾಸನಾ ಹೂಗಳು, ಬಿಲ್ವ, ತುಳಸಿಗಳಿಂದ ಕೂಡಿದ ಪುಷ್ಪಾಂಜಲಿಯನ್ನೂ, ಪ್ರದಕ್ಷಿಣಾ ನಮಸ್ಕಾರಗಳನ್ನೂ ಸ್ವೀಕರಿಸು ಎನ್ನುತ್ತಾ ಎಲ್ಲ ದುರಿತಗಳನ್ನೂ ನಾಶ ಮಾಡುವ ನಿನಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡುತ್ತೇನೆ ಎನ್ನುತ್ತಾರೆ.  ಈ ನಿನ್ನ ದಾಸನ ನೃತ್ಯ, ಸಂಗೀತ, ಸ್ತುತಿಗಳಿಂದ ಸಂತುಷ್ಟನಾಗು ಪ್ರಭುವೇ ನನ್ನಿಂದ ಆದ ನ್ಯೂನತೆಗಳನ್ನು ಬಗೆಯದಿರು ಎಂದು ಬೇಡಿಕೊಳ್ಳುತ್ತಾ ಮಾನಸ ಪೂಜೆಯನ್ನು ಸುಸಂಪನ್ನಗೊಳಿಸುತ್ತಾರೆ.  


ಶ್ರೀವಾದಿರಾಜರು ತಮ್ಮ "ಬಿಡೆನೊ ಬಿಡೆನೊ ನಿನ್ನ ಚರಣಕಮಲವ ಎನ್ನ ಹೃದಯಮಧ್ಯದೊಳಿಟ್ಟು ಭಜಿಸುವೆ ಅನುದಿನ" ಎಂಬ ಕೃತಿಯಲ್ಲಿ ಭಗವಂತನು ನಮ್ಮೊಳಗೇ ಇದ್ದಾನೆ ಮತ್ತು ಅವನನ್ನು ಅನುದಿನ, ಅನವರತ ಭಜಿಸಿದರೆ "ಭಕ್ತಿಯಿಂದ ಭಜಿಸಲು ಸಿರಿ ಹಯವದನನೆ ಪ್ರತ್ಯಕ್ಷವಾಗಿ ಸಲಹುವ ನಮ್ಮನು" ಎಂದು ತಿಳಿಸಿದ್ದಾರೆ.

ಕೈಕೊಂಡು ಬಲು ನೂತನ ಸುಶೋಭಿತ ಗಂಧ ಸುರಸೋಪೇತ ಫಲರಾಶಿ -  ಭಗವಂತ ಭಕ್ತಿಯಿಂದ ಜೀವಿಯು ಸಮರ್ಪಿಸುವ ಪದಾರ್ಥಗಳೆಲ್ಲವನ್ನೂ ಸ್ವೀಕರಿಸುತ್ತಾನೆ.  ತನ್ನನ್ನೇ ಸಮರ್ಪಿಸಿಕೊಳ್ಳುವ ಭಕ್ತರನ್ನು ಭಗವಂತನು ತಂದೆ-ತಾಯಿಗಳು ಮಕ್ಕಳ ತಪ್ಪುಗಳನ್ನು ಎಣಿಸದೇ ಪ್ರೀತಿಸುವಂತೆ ಪ್ರೀತಿಸುತ್ತಾನೆ, ಬೇಡಿದ ಇಷ್ಟಾರ್ಥಗಳನ್ನು ಕೊಟ್ಟು ಸಂತೈಸುತ್ತಾನೆ.  ಜೀವಿಯು ಕಾಯಾ ವಾಚಾ ಮನಸಾ ಸಮರ್ಪಣೆಮಾಡಿಕೊಳ್ಳಬೇಕು.  ಶ್ರೀ ಜಗನ್ನಾಥದಾಸರು ತಮ್ಮ ನರಸಿಂಹ ಸುಳಾದಿಯಲ್ಲಿ "ಬಗೆಯದಿರೆನ್ನ ಅಪರಾಧಕೋಟಿಗಳ" ಎಂದು ಪ್ರಾರ್ಥಿಸುವಂತೆ, ಕ್ಷಣ ಕ್ಷಣವೂ ಜೀವಿ ಭಗವಂತನನ್ನು ಕೇಳಿಕೊಳ್ಳಬೇಕು.  ಹೀಗೆ ನಾವು ಸಮರ್ಪಿಸಿದ ವಸ್ತುಗಳನ್ನು ಸ್ವೀಕರಿಸುವುದರೆ, ಆ ವಸ್ತುಗಳಿಂದ ಅವನಿಗೆ ಯಾವ ಉಪಯೋಗವಾದೀತು ? ಏನೂ ಇಲ್ಲ !  ಸ್ವೀಕರಿಸಿದ ಪ್ರತಿಯೊಂದನ್ನೂ ಮತ್ತೆ ಹೊಚ್ಚ ಹೊಸದಾದ ಪದಾರ್ಥವನ್ನಾಗಿ ಮಾಡಿ,  ಕಂಗೊಳಿಸುವಂತೆ ಮಾಡಿ, ಅದನ್ನು ಸುವಾಸನಾಯುಕ್ತ ಹಾಗೂ ರಸಭರಿತ ಪದಾರ್ಥವನ್ನಾಗಿ ಮಾಡಿ, ನಮಗೇ ಹಿಂತಿರುಗಿಸಿ ಬಿಡುತ್ತಾನೆ.  ನಾವು ಕೊಡುವುದು ಅತ್ಯಲ್ಪವೇ ಆಗಿದ್ದರೂ ಅದನ್ನು ಸ್ವೀಕರಿಸಿ ನಮಗೆ ಅಪಾರವಾಗಿಸಿ ಕೊಡುತ್ತಾನೆ.  ಇದು ಭಗವಂತನ ಅಕ್ಕರೆಯ ಹಾಗೂ ಕಾರುಣ್ಯದ ವಿಧಾನ.

ದ್ಯುನದಿ ನಿವಹಗಳಂತೆ -  ಮಾನಸ ಪೂಜೆಯಲ್ಲಾಗಲೀ, ಬಹಿರಂಗ ಪೂಜೆಯಲ್ಲಾಗಲೀ ನಾವು ಭಕ್ತಿ   ಮತ್ತು ಶ್ರದ್ಧೆಯಿಂದ ಏನನ್ನು ಸಮರ್ಪಣ ಮಾಡುತ್ತೇವೆಯೋ ಅವುಗಳನ್ನು ಕರುಣೆಯಿಂದ ಸ್ವೀಕರಿಸಿ ಭಗವಂತ ಅದೇ ರೀತಿಯ ಅಥವಾ ಸಮರ್ಪಿಸಿದ  ಅದೇ ವಸ್ತುವನ್ನೇ ನಮಗೆ ಗಂಗಾಪ್ರವಾಹದಂತೆ ಅವಿಚ್ಛಿನ್ನವಾಗಿ ನಮ್ಮೆಡೆಗೆ ಹರಿಸುತ್ತಾನೆ.  ದೇವಗಂಗೆ, ವಿಷ್ಣುಪಾದೋದ್ಭವಿಯಾದ್ದರಿಂದ ಅವಳೆಂದೂ ಬತ್ತುವುದಿಲ್ಲ.  ನಿರಂತರವಾಗಿ ಪ್ರವಹಿಸುತ್ತಲೇ ಇರುತ್ತಾಳೆ.  ಅದೇರೀತಿಯಲ್ಲಿ ತನ್ನ ಭಕ್ತರೆಡೆಗೆ ಪರಮಾತ್ಮನು ತನ್ನ ಕಾರುಣ್ಯವನ್ನೂ, ಭೋಗ ಭಾಗ್ಯಗಳನ್ನೂ ನಿರಂತರವಾಗಿ ಪ್ರವಹಿಸುತ್ತಲೇ ಇರುತ್ತಾನೆ.  ಶ್ರೀಹರಿಯ ಕಾರುಣ್ಯದ ಸುಧೆಯೇ ಹಾಗೆ, ಅಖಂಡವಾಗಿ, ಅನಂತವಾಗಿ ಪ್ರವಾಹದಂತೆ ಹರಿಯುತ್ತಲೇ ಇರುತ್ತದೆ.  ಇತರ ದೇವತೆಗಳಾಗಲೀ, ಕಾಮಧೇನು ಕಲ್ಪವೃಕ್ಷಗಳಾಗಲೀ ಸ್ವಲ್ಪ ಮಟ್ಟಿಗೆ ಮಾತ್ರವೇ ಕೊಡಬಲ್ಲರು, ನಿರಂತರವಾಗಿ ಕೊಡಲಾಗುವುದಿಲ್ಲ.  ಆದರೆ ಭಗವಂತನೊಬ್ಬನು ಮಾತ್ರ ತನ್ನನ್ನು ನಂಬಿದ ಭಕ್ತರಿಗೆ ಸತತವಾಗಿ, ಅವಿರತವಾಗಿ ಕೊಡುತ್ತಲೇ ಇರುತ್ತಾನೆ.  ಭಗವಂತನಿಗೆ ನಾವು ಏನನ್ನು ಸಮರ್ಪಿಸಿದರೂ ನಮಗೆ ಅದು ಪ್ರಸಾದ ರೂಪದಲ್ಲಿ ಸಿಕ್ಕುತ್ತದೆ.  ಪರಮಾತ್ಮ ಸ್ವೀಕರಿಸಿದ್ದನ್ನು ಪ್ರಸಾದವೆಂದು ಸೇವಿಸುವುದೆಂದರೆ ಅದು ಗಂಗೆಯಂತೆ ಪವಿತ್ರವಾದ ಮಹತ್ವವುಳ್ಳದ್ದಾಗಿರುತ್ತದೆ.

ಭಗವದ್ಗೀತೆಯ ಎಂಟನೇ ಅಧ್ಯಾಯದಲ್ಲಿ ಸಾಕ್ಷಾತ್ ಶ್ರೀಕೃಷ್ಣನೇ "ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್" - ಎಲ್ಲ ಇಂದ್ರಿಯಗಳನ್ನೂ ಮಣಿಸಿ, ಮನಸ್ಸನ್ನು ಹೃದಯದೊಳಗೆ ಸ್ಥಿರಗೊಳಿಸಿ, ಗೆದ್ದಿರುವ ಮನಸ್ಸಿನಿಂದ ಪ್ರಾಣವನ್ನು ಮಸ್ತಕದಲ್ಲಿ ಸ್ಥಾಪಿಸಿ, ಪರಮಾತ್ಮ ಸಂಬಂಧೀ ಯೋಗಧಾರಣೆಯಲ್ಲಿ ಸ್ಥಿರವಾಗಿ ಯಾವ ಪುರುಷನು ’ಓಂ’ ಎಂಬ ಏಕಾಕ್ಷರರೂಪೀ ಬ್ರಹ್ಮವನ್ನು ಉಚ್ಛರಿಸುವನೋ ಅವನು "ಅಂತವತ್ತು ಫಲಂ ತೇಷಾಂ ತದ್ಭವತ್ಯಲ್ಪಮೇಧಸಾಮ್" - ಹೇಗೆ ಪೂಜಿಸಿದರೂ, ಭಜಿಸಿದರೂ ಕೊನೆಗೆ ನನ್ನನ್ನೇ ಸೇರುತ್ತಾನೆ ಎಂದು ತಿಳಿಸಿದ್ದಾನೆ. 

ಕೊಟ್ಟವರನು ಸದಾ ಸಂತೈಸುವನು - ಯಾವ ಭಕ್ತನು ತನ್ನನ್ನು ತಾನೇ ಸಮರ್ಪಿಸಿಕೊಂಡು ಭಕ್ತಿಯಿಂದ ಪೂಜಿಸುತ್ತಾನೋ ಅವರನ್ನು ಭಗವಂತ ಸದಾ ರಕ್ಷಿಸುತ್ತಾನೆ, ಸಂತೈಸುತ್ತಾನೆ.  ನಾವು ಮನದಲ್ಲಿ ಚಿಂತಿಸುವುದೆಂದರೆ, ಕನಸಿನಲ್ಲಿ ಕಂಡಂತೆ ಎನ್ನಬಹುದು.  ಕನಸಿನಲ್ಲಿ ಕಂಡದ್ದು ಸತ್ಯವಾದದ್ದೇ, ಆದರೆ ಪ್ರಾಕೃತಿಕವಾಗಿ ಅದು ಅಲ್ಲಿರುವುದಿಲ್ಲ ಅಷ್ಟೆ.  ಆದ್ದರಿಂದ ನಾವು ಮನದೊಳಗೆ ಏನನ್ನು ಚಿಂತಿಸುವೆವೋ  ಅದನ್ನು ಅತ್ಯುತ್ತಮವಾದದ್ದೆಂದು ಚಿಂತಿಸಿ ಸಮರ್ಪಿಸಿದಾಗ ಕೂಡ ಭಗವಂತ ಅದನ್ನು ಖಂಡಿತವಾಗಿ ಸ್ವೀಕರಿಸುತ್ತಾನೆ.  ಏಕೆಂದರೆ ನಾವು ಮನದಲ್ಲಿ ಚಿಂತಿಸಿದರೂ, ಕನಸಿನಲ್ಲಿ ಕಂಡರೂ, ಆ ಪದಾರ್ಥದಲ್ಲಿ ಭಗವಂತ ಸ್ವಯಂ ತನ್ನ ವಿಭೂತಿ ರೂಪದಿಂದ ನೆಲೆಸಿದ್ದಾನೆ.  ಅದನ್ನು ನಾವು ಸಮರ್ಪಣೆ ಮಾಡಿದಾಗ ಅವನು ತನ್ನನ್ನು ತಾನೇ ಸ್ವೀಕರಿಸಿದಂತಾಗುತ್ತದೆ.  ಆದ್ದರಿಂದಲೇ ಅವನು "ಸ್ವರಮಣ’ನೆನೆಸಿಕೊಳ್ಳುತ್ತಾನೆ.  ಹೀಗೆ ಅಂತಹ ಕಾಲ್ಪನಿಕವಾಗಿ ಮಾಡಿದ ಪೂಜೆಯನ್ನೂ, ಸಮರ್ಪಣೆಯನ್ನೂ ಸ್ವೀಕರಿಸುತ್ತಾನೆ.  ನಾವು ಮಾಡುವ ಅತ್ಯಲ್ಪ ಪೂಜೆಯನ್ನೂ ಅತಿ ಸಂತುಷ್ಟತೆಯಿಂದ ಸ್ವೀಕರಿಸಿ, ನಮಗೆ ಬೇಕು ಬೇಕಾದದ್ದನ್ನೆಲ್ಲಾ ಗಂಗಾ ಪ್ರವಾಹದಂತೆ ಕೊಡುತ್ತಾನೆ.

ಸದ್ಗುಣವ ಕದ್ದವರಘವ ಕದಿವನು -  ಮಾನವ ಶರೀರ ಸಿಕ್ಕಿರುವುದೇ ಪುರುಷಾರ್ಥಸಾಧನೆಗಾಗಿ  ಎಂಬ ಅರಿವಿನಿಂದ ಇಂದ್ರಿಯಗಳನ್ನು ವಿಷಯ ಪದಾರ್ಥಗಳಲ್ಲಿ ಹರಿಯಬಿಡದೆ, ನಿರಂತರ ಭಗವಂತನ ಧ್ಯಾನದಲ್ಲಿ ನಿಲ್ಲಿಸಬೇಕು.   ಭಾಗವತ ಏಕಾದಶಸ್ಕಂಧದಲ್ಲಿ ಭಗವತ್ಪ್ರೀತಿಯ ಲಕ್ಷಣಗಳನ್ನು ತಿಳಿಸುತ್ತಾ, "ಹರಿಯ ಸ್ಮರಣೆಯನ್ನು ಸದಾ ಮಾಡುತ್ತಾ, ಭಕ್ತಿಯಿಂದ ಹೃದಯದಲ್ಲಿ ಹರಿಯನ್ನು ನಿಲ್ಲಿಸಿಕೊಂಡಿರುವವನು ಭಾಗವತೋತ್ತಮನು" ಎಂದಿದ್ದಾರೆ.  ವೇದಗಳೆಲ್ಲವೂ ವಿವರಿಸುವ ಕರ್ಮಗಳನ್ನು ಜೀವಿಯು ಭಗವಂತನ ಪ್ರೀತಿಗೋಸ್ಕರವಾಗಿಯೇ ಮಾಡಬೇಕು ಎಂಬುದನ್ನು ಯಾರು ಅರಿತು ಶುದ್ಧ ಮನಸ್ಸಿನಿಂದ ಆಚರಿಸುತ್ತಾರೋ, ಅವರು ಭಗವಂತನ ಗುಣಗಳನ್ನು ಕದಿಯುವ ಕಳ್ಳರಾಗುತ್ತಾರೆ ಎಂದಿದೆ ಭಾಗವತ.  ಸದ್ಗುಣಗಳನ್ನು ಕದಿಯುವುದೆಂದರೆ ಭಗವನ್ನಾಮ ಸ್ಮರಣೆಯನ್ನು ಅನವರತ ಮಾಡುತ್ತಲೇ ಇರುವುದು ಎಂಬರ್ಥವಾಗುತ್ತದೆ.  ಯಾರು ಹೀಗೆ ಭಗವಂತನ ಧ್ಯಾನವನ್ನು ಹೃದಯದಲ್ಲಿ ಜತನವಾಗಿ ಮುಚ್ಚಿಟ್ಟುಕೊಂಡು ಸ್ಮರಿಸುತ್ತಾ, ಉಪಾಸನೆ ಮಾಡುತ್ತಾರೋ, ಅಂತಹವರ ಪಾಪಗಳನ್ನು ಭಗವಂತ ತಾನು ಕದ್ದು, ನಮಗೆ ಸುಖವನ್ನು ಕರುಣಿಸುತ್ತಾನೆ.  ಅಘ ಎಂದರೆ ಪಾಪವೆಂದರ್ಥ.  ಈ ಮಾನಸ ಪೂಜೆ ಅಥವಾ ಆರಾಧನೆಯನ್ನು ಮಾಡುವುದು ನಮಗೆ ಮೋಕ್ಷಸಾಧನೆಯಾಗುತ್ತದೆ. 


ಮೋಕ್ಷಪ್ರದನಾಗಿರುವ ಪರಮಾತ್ಮನ ಸ್ವಾತಂತ್ರ್ಯಾದಿ ಗುಣಗಳನ್ನು ನಮ್ಮ ಯೋಗ್ಯತಾನುಸಾರ, ಯಥಾಶಕ್ತಿಯಾಗಿ ಅಂತರಂಗದಲ್ಲಿರಿಸಿಕೊಂಡು ಧ್ಯಾನಿಸುವುದರಿಂದ ಮಾತ್ರ ನಮ್ಮ ಸಕಲ ಪಾಪಗಳೂ ಪರಿಹಾರವಾಗಬಹುದು.  ಭಗವಂತನ ಸದ್ಗುಣಗಳನ್ನು ಕದಿಯುವುದು ಕೂಡ ಅಸ್ವಾತಂತ್ರ್ಯನಾದ ಜೀವಿಗೆ ಸಾಧ್ಯವಿಲ್ಲ.  ಆದರೆ ನಿನ್ನಯ ಸದ್ಗುಣಗಳನ್ನು ಕದಿಯುವ ಯೋಗ್ಯನನ್ನಾಗಿ ಮಾಡು ಎಂದು ಭಗವಂತನಿಗೇ ಶರಣಾಗತರಾಗುವುದನ್ನು ಮಾತ್ರ ಮಾಡಬಹುದು.  ನಮ್ಮ ಮನಸ್ಸಿನಲ್ಲಿ ಏನಾದರೂ ಆಲೋಚನೆಗಳು ಹುಟ್ಟಿದರೆ ಅದು ಅವನ ಅನನ್ಯ ಕಾರುಣ್ಯವೇ ಆಗಿರುತ್ತದೆ.  ಮಾನಸ ಸರೋವರದಲ್ಲಿ ಸಂಚಲನ ಉಂಟಾಗಬೇಕಾದರೆ, ಭಗವತ್ಪ್ರೇರಣೆ ಖಂಡಿತಾ ಇರಲೇಬೇಕು.  ಅನ್ಯಥಾ ಶರಣಂ ನಾಸ್ತಿ ಎಂದು ತನ್ನ ಬಳಿಗೆ ಬಂದವರ ಅಘಗಳನ್ನೆಲ್ಲಾ ಕದ್ದು ಸರ್ವ ಸ್ವತಂತ್ರ್ಯನಾದ ಭಗವಂತನು ಅಘಹರನಾಗುತ್ತಾನೆ.  ಸದಾ ಸರ್ವದಾ "ನ ಹಂ ಕರ್ತಾ ಹರಿಃ ಕರ್ತಾ" ಎಂಬ ಅರಿವು, ಧ್ಯಾನವನ್ನು ಉಸಿರಾಟದಷ್ಟು ಸಹಜವಾಗಿ ಅಳವಡಿಸಿಕೊಳ್ಳುವುದೇ ಭಗವಂತನ ಸದ್ಗುಣಗಳನ್ನು ಕದಿಯುವುದು.  ಅಘವ ಕದಿವನೆಂದರೆ ಅದು ಭಗವಂತನ ಅತಿಶಯ ಕಾರುಣ್ಯವೆಂದು ತಿಳಿಯಬೇಕು.  ಸ್ಮರಣೆ ಮಾತ್ರಕ್ಕೇ ಅವನು, ನಮಗೇ ಅರಿವಿಲ್ಲದಂತೆ ನಮ್ಮ ಅಘಗಳನ್ನು ಕದಿಯದಿರುತ್ತಿದ್ದರೆ, ನಾವು ದಿನನಿತ್ಯ ಮಾಡುವ ಪಾಪಗಳ ಪರ್ವತದ ಅಡಿಯಲ್ಲಿ ಸಿಲುಕಿ, ನಸುಕಿ ನಾಶವಾಗಿಬಿಟ್ಟಿರುತ್ತಿದ್ದೆವು.  ಆದರೆ ಹಾಗಾಗಿಲ್ಲವೆಂದರೆ ನಾವು ಅವನಿಗಾಗಿ ಮಾಡುವ ಅತ್ಯಲ್ಪ ಪೂಜೆಯಿಂದಲೂ, ನಾಮ ಸ್ಮರಣೆಯಿಂದಲೂ ತೃಪ್ತನಾಗುವ ಭಗವಂತ, ಸದ್ದು ಮಾಡದೆ ನಮ್ಮ ಅಘಗಳನ್ನು ಕದ್ದು ಕಳೆದು ಬಿಡುತ್ತಿದ್ದಾನೆಂದೇ ಅರ್ಥೈಸಿಕೊಳ್ಳಬೇಕು.   ನಮ್ಮನ್ನು ಸದಾ ಕಾಡುವ ನಮ್ಮದೇ ಪಾಪಗಳ ರಾಶಿಯಲ್ಲಿ ಮುಳುಗಿದ್ದರೂ, ಅಕಸ್ಮಾತ್ತಾಗಿ ನಾವು ಮಾಡುವ ನಾಮ ಸ್ಮರಣೆಯಿಂದಲೇ ಪ್ರೀತನಾಗಿ ಅವನು, ನಮ್ಮ ಪಾಪಗಳ ದರ್ಶನವನ್ನು ಸಂಪೂರ್ಣವಾಗಿ ನಮಗೆ ಮಾಡಿಸದೆಲೇ, ನಮ್ಮ ಅರಿವಿಗೂ ಬರದಂತೆಯೇ ಕದ್ದೊಯುವುದೇ ಅವನ ಕಾರುಣ್ಯದ ಪರಾಕಾಷ್ಠೆಯನ್ನು ತೋರಿಸುತ್ತದೆ.

ಅನಘನೆಂದೆನಿಸಿ - ಅನಘನೆಂದರೆ ಪಾಪವಿಲ್ಲದವನು, ಶುದ್ಧ, ನಿರ್ಮಲನು ಎಂದರ್ಥ.  ಸಕಲ ಜೀವಾತ್ಮರಿಂದ ಪುಣ್ಯ ಪಾಪ ಕರ್ಮಗಳನ್ನು ಸ್ವತಂತ್ರನಾಗಿ, ನಿಯಾಮಕನಾಗಿ ನಿಂತು ನಿರ್ವಹಿಸುವವನು, ನೆರವೇರಿಸುವವನೂ ಆಗಿರುವುದರಿಂದ ಭಗವಂತನು ಪಾಪ ಪುಣ್ಯಗಳ ಲೇಪವಿಲ್ಲದವನಾಗಿದ್ದಾನೆ.  ಭಗವಂತನು ದಿನ ನಿತ್ಯವೂ, ಅನುಕ್ಷಣವೂ ಸರ್ವ ಸ್ವತಂತ್ರನಾಗಿ ಪಾಪ ಪುಣ್ಯಗಳನ್ನು ದಾಟಿ ಇರುವವನು.   "ಏಷ ಆತ್ಮಾ ಅಪಹತಪಾಪ್ಮಾ ವಿರಜಃ ವಿಶುದ್ಧಃ" - ಈ ಆತ್ಮನು ಯಾವ ದೋಷವೂ ಇಲ್ಲದವನು ಎಂದು ಛಾಂದೋಗ್ಯೋಪನಿಷತ್ತಿನಲ್ಲಿ ಭಗವಂತನನ್ನು ವರ್ಣಿಸಲ್ಪಟ್ಟಿದೆ.  ಭಗವಂತ ದುಃಖವಿಲ್ಲದನಾದ್ದರಿಂದ ಅವನು ಪಾಪರಹಿತನು.   ಕರ್ಮಗಳ ಫಲಕ್ಕೆ ಸ್ವಾಮಿಯಾಗಿರುವ ಭಗವಂತನಿಗೆ ಪಾಪದ ಲೋಪವಿಲ್ಲವಾದ್ದರಿಂದಲೇ ಅವನು ಅನಘನೆನಿಸಿಕೊಳ್ಳುವನು.   ನಾವು ಯಾರನ್ನು ಭಜಿಸುವುದರಿಂದ ನಮ್ಮ ಎಲ್ಲಾ ಅಘಗಳೂ ನಾಶವಾಗಿ ಬಿಡುತ್ತವೋ,  ಅವನು ಅನಘನೆಂದೆನಿಸಿಕೊಳ್ಳುತ್ತಾನೆ.


ಭಗವದ್ಗೀತೆಯ ೪ನೇ ಅಧ್ಯಾಯದ ೧೪ನೇಶ್ಲೋಕದಲ್ಲಿ

ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ |
ಇತಿ ಮಾಂ ಯೋಭಿಜಾನಾತಿ ಕರ್ಮಭಿರ್ನ ಸ ಬದ್ಧ್ಯತೇ || - ಕರ್ಮಗಳ ಫಲದಲ್ಲಿ ನನಗೆ ಸ್ಪೃಹೆ ಇರುವುದಿಲ್ಲ, ಅದಕ್ಕಾಗಿ ನನಗೆ ಕರ್ಮಗಳು ಅಂಟಿಕೊಳ್ಳುವುದಿಲ್ಲ.  ಹೀಗೆ ನನ್ನನ್ನು ತತ್ತ್ವತಃ ತಿಳಿದುಕೊಳ್ಳುವವನೂ ಕರ್ಮಗಳಿಂದ ಬಂಧಿತನಾಗುವುದಿಲ್ಲ ಎಂದು ಭಗವಂತನೇ ತಿಳಿಸಿದ್ದಾನೆ.

ವಿಷ್ಣು ಸಹಸ್ರನಾಮದಲ್ಲಿ ಬರುವಂತೆ "ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ" ಎನ್ನುತ್ತಾ ಭಗವಂತನು ಕೇವಲ ಸದ್ಗುಣಗಳ ಆಗರನು, ಪಾಪಾದಿ ದೋಷರಹಿತನು.  ಅವನನ್ನು ಆರಾಧಿಸುವ, ಸ್ಮರಿಸುವ ನಮ್ಮನ್ನೂ ದೋಷರಹಿತರನ್ನಾಗಿಯೂ, ಪಾಪರಹಿತರನ್ನಾಗಿಯೂ ಮಾಡು ಎಂದು ಪ್ರಾರ್ಥಿಸಬೇಕು.

ಶ್ರೀ ಜಗನ್ನಾಥದಾಸರು ತಮ್ಮ ತತ್ವಸುವ್ವಾಲಿಯಲ್ಲಿ
ಹೃದಯದಲಿ ತವ ರೂಪ ವದನದಲಿ ತವ ನಾಮ
ಉದರದಲಿ ನೈವೇದ್ಯ ಶಿರದಲ್ಲಿ | ಶಿರದಲ್ಲಿ ನಿರ್ಮಾಲ್ಯ
ಪದಜಲಗಳಿರಲು ಭಯವುಂಟೆ || -  ಮನಸ್ಸಿನಲ್ಲಿ ನಿನ್ನ ರೂಪವೂ, ಬಾಯಿಯಲ್ಲಿ ನಾಮಸ್ಮರಣೆಯೂ, ಹೊಟ್ಟೆಯಲ್ಲಿ ನಿನಗೆ ನೈವೇದ್ಯವಾಗಿರುವ ಆಹಾರವೂ, ತಲೆಯಲ್ಲಿ ನಿನಗೆ ಅರ್ಪಿಸಲಾಗಿದ್ದ ತುಳಸಿ, ಪುಷ್ಪಗಳ ನೈರ್ಮಾಲ್ಯವೂ ಮತ್ತು ನನ್ನ ಅವಯವಗಳಲ್ಲಿ ನಿನ್ನ ಪಾದೋದಕಗಳನ್ನೂ ಧರಿಸಿರಲು ನನಗೆಲ್ಲಿಯ ಸಂಸಾರ ಭಯವಿರುವುದು ಎಂದಿದ್ದಾರೆ.

ಮನದಲ್ಲಿ ಹರಿಯ ಚಿಂತನೆ ಉಳ್ಳ ನರನಿಗೆ
ಮನೆಯಾದರೇನು ವನವೇನು | ವನವೇನು ಸತತ ದು-
ರ್ಜನರ ಸಂಗದೊಳು ಇರಲೇನು || -  ಸದಾ ಶ್ರೀಹರಿಯ ಸ್ಮರಣೆ ಮನದಲ್ಲಿ ತುಂಬಿರುವಾಗ, ಮನೆಯಲ್ಲಿ ಗೃಹಸ್ಥನಾಗಿದ್ದರೇನು, ವನದಲ್ಲಿ ವಾಸಪ್ರಸ್ಥನಾಗಿದ್ದರೇನು ಅಥವಾ ಸತತವಾಗಿ ದುರ್ಜನರ ಸಂಗದೊಳಗಿದ್ದರೇನು, ಎಲ್ಲವೂ ಒಂದೇ, ಯಾವುದೂ ವಿಚಲಿತನನ್ನಾಗಿಸುವುದಿಲ್ಲ ಎನ್ನುತ್ತಾರೆ.

ಶೋಕನಾಶನ ವಿಗತಶೋಕ ನೀನೆಂದರಿದು
ನಾ ಕರವಮುಗಿವೆ ಕರುಣಾಳು | ಕರುಣಾಳು ಭಕತರ-
ಶೋಕಗಳ ಕಳೆದು ಸುಖವೀಯೋ || - ವಿಗತಶೋಕ (ದುಃಖರಹಿತ ಮತ್ತು ಶೋಕನಾಶಕ)ನಾದ ನೀನು ಭಕ್ತರ ದುಃಖ (ಪಾಪ)ಗಳನ್ನು ಪರಿಹರಿಸುವವನು ಎಂಬುದನ್ನು ನಾನು ಅರಿತು ನಿನಗೆ ಕರವ ಜೋಡಿಸಿ ಭಕ್ತ ಜನರ ಶೋಕಗಳ (ಪಾಪಗಳ) ಪರಿಹರಿಸಿ ಸುಖವನ್ನು ಅನುಗ್ರಹಿಸೆಂದು ಬೇಡುತ್ತಿರುವೆನು ಎನ್ನುತ್ತಾ ಮಾನಸ ಪೂಜೆಯ ಮಾಡಿ ನಮ್ಮನ್ನೇ ನಾವು ಸಮರ್ಪಿಸಿಕೊಂಡರೆ ಭಗವಂತ ನಮ್ಮನ್ನು ರಕ್ಷಿಸುತ್ತಾನೆಂದಿದ್ದಾರೆ.

ಡಿವಿಜಿಯವರು ತಮ್ಮ ಕಗ್ಗದಲ್ಲಿ
ಬಹಿರದ್ಭುತವ ಮನುಜನಂತರದ್ಭುತವರಿತು
ಗ್ರಹಿಸುವಂತಾಗಿಸಲು ಪೂರ್ವಾನುಭವಿಗಳ್
ಬಹುಪರಿಯುಪಾಯಗಳ ನಿರವಿಸಿಹರದಕೇಕೆ - ಮನುಷ್ಯನ ಜನ್ಮವಾಗಿರುವುದೇ ಹಿರಿದಾದ ಒಂದು ಶಕ್ತಿಯಿದೆಯೆಂಬ ಅನ್ವೇಷಣೆಯನ್ನು ಮಾಡುವುದಕ್ಕೋಸ್ಕರವಾಗಿದೆ.  ಮಾನವ ಶರೀರದೊಳಗಿರುವ ಅಂತರಂಗವೆಂಬುದೊಂದು ಅದ್ಭುತವಾಗಿದೆ.  ಬ್ರಹ್ಮಾಂಡದಲ್ಲಿರುವುದೆಲ್ಲಾ ಪಿಂಡಾಂಡದಲ್ಲಿದೆಯೆಂಬ ಮಾತಿನಂತೆ, ನಮ್ಮಂತರಂಗದಲ್ಲಿರುವ ಶಕ್ತಿಯನ್ನು ಅಥವಾ ಸತ್ವವನ್ನು ಬಾಹ್ಯವಾಗಿರುವ ಶಕ್ತಿಯ / ಸತ್ವದ ಅದ್ಭುತವನ್ನು ಗ್ರಹಿಸಿ, ಎರಡರ ಸಮನ್ವಯವನ್ನು ಸಾಧಿಸಿ, ನಾವು ಅದೇ ಪಥದಲ್ಲಿ ನಡೆಯ ಬೇಕು ಮತ್ತು ಆನಂದಾನುಭವವನ್ನು ಪಡೆಯಬೇಕೆಂದು,  ನಮ್ಮ ಹಿರಿಯರು ಅನೇಕ ಉಪಾಯಗಳನ್ನು ಸೂಚಿಸಿದ್ದಾರೆ.  ಬಹುವಿಧದ ಉಪಾಯಗಳಲ್ಲಿ "ಭಕ್ತಿ"ಯೆಂಬುದು ಬಹು ಮುಖ್ಯವಾದ, ಮೂಲವಾದ ಉಪಾಯ.  ಅದನ್ನು ಡಿವಿಜಿಯವರು "ಬಿಂಬದೊಳಗಮಿತ ಸತ್ತ್ವವ ಪಿಡಿದಿಡುವ ಭಕ್ತಿ" - ಬಾಹ್ಯದಲ್ಲಿರುವ ಶುದ್ಧಸತ್ತ್ವವು ಅನಂತವಾದದ್ದು, ಅದನ್ನು ನಾವು ನಮ್ಮ ಹೊರಗಿನ ಕಣ್ಣು, ಕಿವಿಗಳಿಂದ ಅರಿಯಲಾರೆವು.  ಅದನ್ನು ತಿಳಿಯಬೇಕೆಂದರೆ ನಮ್ಮ ಅಂತರ್ಚಕ್ಷುಗಳು ತೆರೆಯಬೇಕು ಮತ್ತು ಶುದ್ಧಸತ್ತ್ವವು ನಮ್ಮೊಳಗಿದೆಯೆಂಬ ಅರಿವು, ನಂಬಿಕೆ ಬರಬೇಕು.  ಈ ಅರಿವು ಬರಲು ನಮ್ಮನ್ನೇ ನಾವು ಸಮರ್ಪಿಸಿಕೊಂಡು, ಮಾನಸಪೂಜೆ ಮಾಡಬೇಕು. 

ಬಹಿರಂತರೈಕ್ಯವನು ನೆನಪಿಗಾಗಿಸಲೆಂದು
ವಿಹಿತಮ್ ಆಚಮನಾರ್ಘ್ಯ ಪೂಜೆ ನೈವೇದ್ಯ
ಗುಹೆಯೊಳಗಣದ ಹೊರಗಣದ ಕೂಡಿಸುವುಪಾಯ
ಸಹಭಾವವದಕೆ ಸರಿ - ಮಂಕುತಿಮ್ಮ || - ನಮ್ಮಂತರಂಗದಲ್ಲಿರುವುದೂ, ಬಾಹ್ಯದಲ್ಲಿರುವುದೂ, ಎರಡೂ ಒಂದೇ ಎಂಬುದೇ ಸತ್ಯವಾದ ಮಾತು.  ಆ ಸತ್ಯವನ್ನೇ ಮತ್ತೆ ಮತ್ತೆ ಮನದಟ್ಟು ಮಾಡಿಕೊಂಡು ಅಂತರ್ಚಕ್ಷುಗಳನ್ನು ತೆರೆಯುವುದಕ್ಕೆ ಸಾಧನವಾಗಿರುವುದೇ ಷೋಡಶೋಪಚಾರದ ಪೂಜೆಯ ವಿಧಿ ವಿಧಾನಗಳು.  ಮಾನಸಪೂಜೆಯ ನಂತರ ನಾವು ಪ್ರತಿಮೆಯಲ್ಲಿ ಪ್ರಾಣಪ್ರತಿಷ್ಠಾಪನೆಯ ಕ್ರಿಯೆಯ ಮೂಲಕ ಒಳಗಿರುವ ಭಗವಂತನನ್ನೇ ಪ್ರತಿಮೆಯಲ್ಲಿ ಆಹ್ವಾನಿಸುತ್ತೇವೆ, ಸ್ಥಾಪಿಸಿ, ಪೂಜಿಸುತ್ತೇವೆ.  ಹೀಗೆ ಮಾಡುವ ವಿಧಾನದಲ್ಲಿ ಆಹ್ವಾನಿಸುವ ಆ ಶುದ್ಧವಾದ ಅನಂತವಾದ ಸತ್ತ್ವದ ಮಹತ್ವವನ್ನು ಒಪ್ಪಿಕೊಳ್ಳುವುದು, ವಿನಮ್ರತೆಯಿಂದ ಸ್ವಸಮರ್ಪಣೆ ಮಾಡಿಕೊಳ್ಳುವುದು ಮತ್ತು ನಾನಾ ವಿಧವಾದ ನೈವೇದ್ಯವನ್ನು ಅರ್ಪಿಸಿ ನಂತರ ಪ್ರಸಾದವೆಂದು ಎಲ್ಲರೊಂದಿಗೂ ಹಂಚಿಕೊಂಡು ಸ್ವೀಕರಿಸುವುದೆಂಬ ಮೂರು ವಿಧಾನಗಳಿವೆ.  ಮಾನಸಪೂಜೆಯಲ್ಲಿ ಮನಸ್ಸನ್ನು ಸಿದ್ಧ ಮಾಡಿಕೊಂಡು, ಬಾಹ್ಯಪೂಜೆಯಲ್ಲಿ ತೊಡಗಿದಾಗ, ಅಂತರಂಗದ ಕಣ್ಣುಗಳು ತೆರೆದು, ಭಗವಂತನೆಡೆಗೆ ಹೆಜ್ಜೆಯಿಡಲು ತೊಡಗುತ್ತೇವೆಂಬುದೇ ಇದರ ಒಳಾರ್ಥವಾಗುತ್ತದೆ.



ಚಿತ್ರಕೃಪೆ : ಅಂತರ್ಜಾಲ

Sunday, June 1, 2014

ಕರುಣಾ ಸಂಧಿ - ೨೧ ನೇ ಪದ್ಯ


ಕಾಮಧೇನು ಸುಕಲ್ಪತರು ಚಿಂ-
ತಾಮಣಿಗಳಮರೇಂದ್ರ ಲೋಕದಿ
ಕಾಮಿತಾರ್ಥಗಳೀವವಲ್ಲದೆ ಸೇವೆ ಮಾಳ್ಪರಿಗೆ |
ಶ್ರೀಮುಕುಂದನ ಪರಮ ಮಂಗಳ-
ನಾಮ ನರಕಸ್ಥರನು ಸಲಹಿತು
ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು ||೨೧||


ಪ್ರತಿಪದಾರ್ಥ : ಕಾಮಧೇನು - ಇಷ್ಟಾರ್ಥಗಳನ್ನು ಪೂರೈಸುವ ಸ್ವರ್ಗಲೋಕದ ಹಸು, ಸುಕಲ್ಪತರು - ತನ್ನ ಸೇವೆ ಮಾಡಿದವರು ಕಲ್ಪಿಸಿಕೊಂಡದ್ದನ್ನೆಲ್ಲಾ ಕೊಡುವಂತಹ ವೃಕ್ಷ, ಚಿಂತಾಮಣಿ - ಚಿಂತಿಸಿದ್ದನ್ನು ಕೊಡತಕ್ಕಂತಹ ಮಣಿ, ಅಮರೇಂದ್ರಲೋಕದಿ - ದೇವಲೋಕ ಅಥವಾ ಸ್ವರ್ಗಲೋಕದಲ್ಲಿ, ಕಾಮಿತಾರ್ಥಗಳೀವುವಲ್ಲದೆ - ಬೇಡಿದ ಐಹಿಕ ಸುಖ ಭೋಗಗಳನ್ನು ಮಾತ್ರ ಕೊಡುತ್ತವೆ, ಸೇವೆ ಮಾಳ್ಪರಿಗೆ - ತಮ್ಮ ಸೇವೆ ಮಾಡುವಂತಹವರಿಗೆ, ಶ್ರೀಮುಕುಂದನ - ಭಗವಂತನಾದ ಶ್ರೀಹರಿಯ, ಪರಮಮಂಗಳ ನಾಮ - ಮಂಗಳಕರವಾದ / ಶುಭಕರವಾದ ನಾಮ ಸ್ಮರಣೆ, ನರಕಸ್ಥರನು ಸಲಹಿತು - ನರಕದಲ್ಲಿ ನರಳುತ್ತಿದ್ದ ನರಕವಾಸಿಗಳಿಗೂ ಮೋಕ್ಷ ದೊರೆಯುವಂತೆ ಮಾಡುವಂತಹ, ಪಾಮರರ ಪಂಡಿತರೆನಿಸಿ - ಅಜ್ಞಾನಿಗಳ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನಿಗಳನ್ನಾಗಿ ಮಾಡುವಂತಹುದು, ಪುರುಷಾರ್ಥ ಕೊಡುತಿಹುದು - ಧರ್ಮ ಅರ್ಥ ಕಾಮ ಮೋಕ್ಷಗಳನ್ನು ದೊರಕಿಸಿ ಕೊಡುವಂತಹುದು.

ಅಮರ ಲೋಕದಲ್ಲಿರುವಂತಹ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ ಇವೆಲ್ಲಾ ಸೇವೆ ಮಾಡುವಂತಹವರಿಗೆ, ಬೇಡಿದ ಇಷ್ಟಾರ್ಥವನ್ನೇ ಕೊಡುವ ಸಾಮರ್ಥ್ಯವನ್ನು ಹ್ಹೊಂದಿರುತ್ತದೆ. ಆದರೆ ಶಾಶ್ವತವಾದ ಸ್ವರ್ಗಲೋಕ, ಮೋಕ್ಷ, ಬಿಮ್ಬಾಪರೋಕ್ಷ ಇವುಗಳನ್ನು ಕೊಡುವುದಿಲ್ಲ.  ಮೋಕ್ಷಪ್ರದವಾದ  ಮುಕುಂದನ ಮಂಗಳ ನಾಮ ಉಚ್ಚಾರಣ ಮಾತ್ರದಿನ್ದಲೇ ಘೋರವಾದ  ನರಕದಲ್ಲಿ ಬಿದ್ದಂತಹ ಜೀವರುಗಳನ್ನು ಪಾಪಗಳಿಂದ ಮುಕ್ತರನ್ನಾಗಿ ಮಾಡಿ   ಧರ್ಮಾರ್ಥಗಳನ್ನು ಕೊಟ್ಟು ಸಂರಕ್ಷಣೆಯನ್ನು ಮಾಡುತ್ತದೆ.   ಅನಂತಾನಂತ ಕಾಲಗಳಲ್ಲಿ ಬ್ರಹಾಂಡದಲ್ಲಿ ಸೃಷ್ಟಿಗೆ ಬರುವ ಭಕ್ತ ಜನರಿಗೆ ಪುರುಷಾರ್ಥಗಳನ್ನು ಕೊಡುತ್ತದೆ. ಇದರಿಂದ ಭಗವನ್ನಾಮೋಚ್ಛಾರಣೆಯು  ಏತಾದೃಷವಾದದ್ದು ಎಂದು ಅರ್ಥಮಾಡಿಕೊಳ್ಳಬಹುದು.

ಕಾಮಧೇನು - ದೇವಲೋಕದ ಹಸು ಸುರಭಿಯು ಇಂಗಡಲ ಮಥನ ನಡೆದಾಗ ಉದ್ಭವಿಸಿದ ರತ್ನಗಳಲ್ಲಿ ಒಂದಾಗಿದ್ದು ಕಾಮಧೇನುವೆಂದು ಕರೆಯಲ್ಪಡುತ್ತದೆ.  ಕಾಮಧೇನುವೆಂಬುದು ಚಲಿಸುವಂತಹ ಒಂದು ಪಶು ಮತ್ತು ಕೇಳಿದ್ದನ್ನು ಕೊಡುವಂತಹುದು.  ಅಮರೇಂದ್ರರ ಲೋಕದಲ್ಲಿದ್ದು, ಅಲ್ಲಿರುವವರು ಸೇವೆ ಮಾಡಿ, ಒಲಿಸಿಕೊಂಡಾಗ ಮಾತ್ರ ಕೇಳಿದ್ದನ್ನು ಕೊಡುವಂತಹುದು.  ಅದರಲ್ಲೂ ಕೇಳಿದ್ದನ್ನೆಲ್ಲಾ ಕೊಡುವಷ್ಟು ಶಕ್ತಿಯಿಲ್ಲದಿದ್ದರೂ, ಅತಿ ಶ್ರೇಷ್ಠವಾದವುಗಳನ್ನು ಕೊಡಲಾಗದಿದ್ದರೂ, ತನ್ನದೇ ಮಿತಿಯಲ್ಲಿ ಏನನ್ನಾದರೂ ಕೊಡಬಲ್ಲದು.  ಗೋಮಾತೆಯಾಗಿ ಸುರಭಿಯು ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿದಾಗ, ಕ್ಷೀರಾಭಿಷೇಕ ಮಾಡಿದವಳು. 

ಕಾಮಧೇನುವೆಂದು ದೇವಲೋಕದ ಸುರಭಿಗೆ ಮಾತ್ರ ಕರೆಯುವುದಿಲ್ಲ, ವಸಿಷ್ಠ ಮಹರ್ಷಿಗಳ ಗೋಮಾತೆ ನಂದಿನಿಯೂ ಕೂಡ ಕಾಮಧೇನುವೆನಿಸಿಕೊಂಡವಳು.  ವಿಶ್ವಾಮಿತ್ರ ಬ್ರಹ್ಮರ್ಷಿಯಾಗುವುದಕ್ಕೆ ಮುಂಚೆ ವಸಿಷ್ಠರ ಆಶ್ರಮದಲ್ಲಿ ನಂದಿನಿಯೆಂಬ ಕಾಮಧೇನುವಿನಿಂದ ಅತಿಥಿ ಸತ್ಕಾರ ಪಡೆದವನು.  ರಾಜನಾದ ತನಗೇ ಕಾಮಧೇನು ಬೇಕೆಂದು ಬಲವಂತವಾಗಿ ಕಟ್ಟಿ ಎಳೆದೊಯ್ಯಲು ಪ್ರಯತ್ನಿಸಿದನು.  ಸಾಧ್ಯವಾಗದೆ ಸೋತು, ತಪಸ್ಸು ಮಾಡಿ ’ಬ್ರಹ್ಮರ್ಷಿ’ಯಾದನು.  ಹಾಗೆಯೇ ಅಷ್ಟವಸುಗಳೂ ಕೂಡ ಈ ಗೋಮಾತೆಯನ್ನು ಅಪಹರಿಸಲು ಪ್ರಯತ್ನಿಸಿ ಶಾಪಗ್ರಸ್ತರಾದರು.  ಗಂಗಾದೇವಿಯ ಮಕ್ಕಳಾಗಿ ಜನಿಸಿ, ಏಳು ವಸುಗಳು ನೀರು ಪಾಲಾಗಿ ಕೊನೆಗೆ ಅಷ್ಟವಸುವು ಭೀಷ್ಮನಾಗಿ ಜನಿಸಿದನು.

ಜಮದಗ್ನಿ ಮುನಿಯ ಹಸುವಾದ ಕಪಿಲೆಯೂ ಕಾಮಧೇನುವೆಂದೇ ಕರೆಯಲ್ಪಟ್ಟವಳು.  ಭಗವಂತನಿಂದ ಬ್ರಹ್ಮದೇವರಿಗೂ, ಬ್ರಹ್ಮನಿಂದ ಭೃಗುಮುನಿಗೂ, ಭೃಗುಮುನಿಯಿಂದ ಜಮದಗ್ನಿಗೂ ಕೊಡಲ್ಪಟ್ಟವಳು.  ರಾಜಾ ಕಾರ್ತವೀರ್ಯಾರ್ಜುನನು ಜಮದಗ್ನಿ ಮುನಿಯ ಆಶ್ರಮಕ್ಕೆ ಬಂದಾಗ ಕಪಿಲೆಯು ರಾಜನಿಗೆ ಅತಿಥಿ ಸತ್ಕಾರ ಮಾಡಿದಳು.  ರಾಜನು ಗೋಮಾತೆ ತನಗೇ ಬೇಕೆಂದು ಕಟ್ಟಿ, ಸೈನ್ಯದ ಬಲದಿಂದ ಒಯ್ಯಲು ಪ್ರಯತ್ನಿಸಿದಾಗ, ಸಮಸ್ತ ಸೈನ್ಯವನ್ನೂ ನಾಶಗೊಳಿಸಿ, ಅಂತರಿಕ್ಷಕ್ಕೆ ಹಾರಿ ಮರೆಯಾದವಳು.  



ಕಲ್ಪವೃಕ್ಷ - ಕಲ್ಪವೃಕ್ಷವು ಚಲಿಸದಂತಹ ಸ್ಥಾವರ ಪದಾರ್ಥವು.  ಇದು ಸಣ್ಣ ಗಿಡವೂ ಆಗಬಹುದು, ಹೆಮ್ಮರವೂ ಆಗಬಹುದು.   ಈ ಮರದ ಕೆಳಗೆ ಕುಳಿತು ಅದರ ಸುಗಂಧವನ್ನು ಆಘ್ರಾಣಿಸಿದ ಮಾತ್ರಕ್ಕೇ ರೋಗಾದಿಗಳು ಗುಣವಾಗುವುವು, ನೆರಳಲ್ಲಿ ಕುಳಿತರೇ ಪೂರ್ವ ಜನ್ಮದ ಸ್ಮರಣೆ, ಹೀಗೆ ಕಲ್ಪವೃಕ್ಷದ ಮಹಿಮೆ ಅಪಾರವಾಗಿದೆ.  ಆದರೆ ಕಲ್ಪವೃಕ್ಷವೆಂಬ ಮರವು ಬಯಸಿದ್ದನ್ನೆಲ್ಲಾ ಕೊಡುವಷ್ಟು ಸಾಮರ್ಥ್ಯ ಹೊಂದಿದ್ದರೂ ಕೂಡ, ಭಗವಂತನ ನಾಮಸ್ಮರಣೆಯೊಂದೇ ನೀಡಬಲ್ಲಂತಹ ಮುಕ್ತಿ/ಮೋಕ್ಷವೆಂಬ ಅತಿಶಯವಾದ ಹಾಗೂ ಅತ್ಯುತ್ಕೃಷ್ಠವಾದ ಫಲವನ್ನು ನೀಡಲಾರದು.   


ಸತ್ಯಭಾಮದೇವಿಯ ಪ್ರೇರಣೆಯಿಂದ ಶ್ರೀಕೃಷ್ಣನು ದೇವಲೋಕದಲ್ಲಿದ್ದ ಪಾರಿಜಾತ ವೃಕ್ಷವನ್ನು ಕಿತ್ತು ಗರುಡನ ಮೇಲಿಟ್ಟು ಅದನ್ನು ಭೂಲೋಕಕ್ಕೆ ತರುವಾಗ, ದೇವತೆಗಳು  ಯುದ್ಧಕ್ಕೆ ಬರುತ್ತಾರೆ.  ಎಲ್ಲರನ್ನೂ ಸೋಲಿಸಿ ಶ್ರೀಕೃಷ್ಣನು ಹೊರಟಾಗ ಇಂದ್ರನು ಸ್ವಯಂ ಬಂದು ಭಗವಂತನಲ್ಲಿ ಪಾರಿಜಾತ ವೃಕ್ಷವನ್ನು ದೇವಲೋಕದಲ್ಲೇ ಬಿಟ್ಟು ತೆರಳುವಂತೆ ಕೇಳಿಕೊಳ್ಳುತ್ತಾನೆ.  ಈ ಕಲ್ಪವೃಕ್ಷವು ಭೂಲೋಕಕ್ಕೆ ಬಂದರೆ, ಅದರ ನೆರಳಿನಲ್ಲಿ ಕುಳಿತು ಆಲೋಚಿಸಿದ ಕಾಮನೆಗಳೂ ಫಲವಾಗಿ ಬಿಡುವುದರಿಂದ, ದೇವಲೋಕದ ಮಹಿಮೆಯು ತಗ್ಗಿ ಬಿಡುವುದೂ ಮತ್ತು ಜೀವಿಗಳು ಕರ್ಮ ಮಾಡುವುದನ್ನೇ ನಿಲ್ಲಿಸಿ ಬಿಡುವರಾದ್ದರಿಂದಲೇ ತಾನು ಭಗವಂತನ ಜೊತೆಗೆ ಯುದ್ಧ ಮಾಡುವ ಅನಿವಾರ್ಯವಾಯಿತೆಂದು ತಿಳಿಸುತ್ತಾನೆ.  ಶ್ರೀಕೃಷ್ಣನು ತಾನು ಅವತಾರ ಸಮಾಪ್ತಿಯಾಗಿ ವೈಕುಂಠಕ್ಕೆ ಮರಳಿದಾಗ ಕಲ್ಪವೃಕ್ಷವು ಕೂಡ ದೇವಲೋಕಕ್ಕೆ ಮರಳುವುದೆಂದು ತಿಳಿಸುತ್ತಾನೆ.  ಇಷ್ಟು ಮಹಿಮೆಯುಳ್ಳ ಕಲ್ಪವೃಕ್ಷಕ್ಕೂ ಕೂಡ ಮಿತಿಯಿದೆ.  ಆದರೆ ಭಗವಂತನ ಕರುಣೆಗೆ ಯಾವ ಮಿತಿಯೂ ಇಲ್ಲ. 

ಚಿಂತಾಮಣಿ - ಚಿಂತಾಮಣಿಯೆನ್ನುವುದು ಒಂದು ಅನರ್ಘ್ಯ ರತ್ನ.  ಒಂದು ಜಡವಸ್ತುವಾದ ಮಣಿಯ ಒಳಗಿದ್ದು  ಅಚ್ಚರಿಯನ್ನು ಮಾಡಿಸುವವನು ಭಗವಂತನೇ.  ಭಗವಂತ ಮಾಡಿಸದಿದ್ದರೆ, ಜಡವಸ್ತುವಿಗೆ ಇಂತಹ ಮಹಿಮೆಯು ಬರುವುದಿಲ್ಲ.  ಆದರೆ ಇಂತಹ ಅಚ್ಚರಿಯನ್ನು ಮಾಡುವ, ವಿಶೇಷವಾದ ವಸ್ತುಗಳು ಭೂಲೋಕದಲ್ಲಿದ್ದರೆ, ಭೂಮಿಯೇ ಸ್ವರ್ಗವಾಗಿ, ಜನರು ಪುಣ್ಯಕರ್ಮಗಳನ್ನು ಮಾಡುವುದನ್ನೇ ಮರೆತು ಬಿಡುವರೆಂದು ಭಗವಂತನು, ಕಾಮಧೇನು, ಕಲ್ಪತರು, ಚಿಂತಾಮಣಿಗಳೆಂಬ ಕಾಮಿತಾರ್ಥಗಳನ್ನು ಕೊಡುವ ವಿಶಿಷ್ಠ ಗುಣಗಳನ್ನು ಹೊಂದಿರುವವುಗಳನ್ನು ಅಮರಲೋಕದಲ್ಲಿಯೇ ಇಟ್ಟುಬಿಟ್ಟಿದ್ದಾನೆ.  ಸುಲಭದಲ್ಲಿ ಲಭ್ಯವಾಗದಂತೆ ಮಾಡಿದ್ದಾನೆ.  ನರ ಜನ್ಮ ಸಿಕ್ಕಿರುವುದೇ ಭಗವಂತನ ನಾಮಸ್ಮರಣೆ ಮಾಡಿ ಈ ಜನನ-ಮರಣಗಳ ಚಕ್ರದಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೆಂಬ ಉದ್ದೇಶವನ್ನು ಜನರು ಮರೆಯಬಾರದೆಂದು ಭಗವಂತ ಹೀಗೆ ಮಾಡಿದ್ದಾನೆ.

ಭಗವಂತನು ಕಾಮಧೇನು, ಕಲ್ಪತರು, ಚಿಂತಾಮಣಿಗಳ ಮೂಲಕ ಕಾಮಿತಗಳನ್ನು ಬೇಡಿದವರಿಗೆ ನೀಡುವುದು ಅವನ ಅನಂತ ಲೀಲೆಗಳಿಗೆ ದೃಷ್ಟಾಂತಗಳಿದ್ದಂತೆ.

ಅಮರೇಂದ್ರ ಲೋಕ - ಸ್ವರ್ಗಲೋಕ ಅಥವಾ ದೇವತೆಗಳ ಲೋಕವನ್ನು ಅಮರ ಲೋಕವೆನ್ನುತ್ತಾರೆ.  ಅಮರರು ಎಂದರೆ ಸದಾ ಇರುವವರು, ಸಾವಿಲ್ಲದವರು ಇರುವಂತಹ ಲೋಕ.  ಸಾವಿಲ್ಲದವರು ಎಂದರೆ ಸಂಸಾರದ ಜನನ ಮರಣಗಳಿಂದ ಮುಕ್ತರಾದವರು ಎಂಬರ್ಥವಾಗುತ್ತದೆ.  ಇಂತಹ ಅಮರರಿರುವ ಲೋಕಕ್ಕೆ ಇಂದ್ರನೇ ರಾಜನಾಗಿಹನು.  ಯಾವ ಲೋಕದಲ್ಲಿ ಇಂದ್ರನ ಆಳ್ವಿಕೆಯಿದೆಯೋ, ಎಲ್ಲಿ ಅಮರರು ನೆಲೆಸಿದ್ದಾರೋ, ಅಲ್ಲಿ ಬಯಸಿದ್ದನ್ನು ಕೊಡುವ ಕಾಮಧೇನು, ಕಲ್ಪತರು ಮತ್ತು ಚಿಂತಾಮಣಿಗಳೂ ಕೂಡ ನೆಲೆಸಿವೆ.

ಕಾಮಿತಾರ್ಥಗಳೀವುವು ಸೇವೆ ಮಾಳ್ಪರಿಗೆ - ಕಾಮಿತಾರ್ಥಗಳೆಂದರೆ ಬಯಸಿದ ಭಾಗ್ಯವೆಂದಾಗುತ್ತದೆ.   ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳು ತಮ್ಮ ಸೇವೆಯನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ, ಅಂತಹವರು ಬಯಸಿದ ಇಷ್ಟಾರ್ಥಗಳನ್ನೆಲ್ಲಾ ಕೊಡುತ್ತವೆ.  ಆದರೆ ಸುಮ್ಮನೆ ಕೇಳಿದವರಿಗೆ ಕೊಡುವುದಿಲ್ಲ, ಕಾಮಧೇನು, ಕಲ್ಪತರು, ಚಿಂತಾಮಣಿಗಳನ್ನು ಯಾರು ಓಲೈಸಿ, ಸೇವೆಮಾಡಿ, ಒಲಿಸಿಕೊಳ್ಳುತ್ತಾರೋ, ಅಂತಹವರಿಗೆ ಅವರು ಬಯಸಿದ್ದನ್ನು, ತಮ್ಮದೇ ಆದ ಮಿತಿಯೊಳಗೆ ಮಾತ್ರ ಕೊಡಬಲ್ಲವು ಅಷ್ಟೇ.  ಬಯಸಿದ್ದನ್ನೆಲ್ಲಾ ಎಂದಾಗ ಮಿತಿಯಿಲ್ಲದೆ, ಅಮಿತವಾಗಿ ಕೊಟ್ಟುಬಿಡುವುವೆಂದರ್ಥವಾಗುವುದಿಲ್ಲ. 

ಶ್ರೀಮುಕುಂದನ ಪರಮಮಂಗಳ ನಾಮ - ಭಗವಂತನ ನಾಮವಾದ ಮುಕುಂದನೆಂದರೆ ಮುಕ್ತಿಯನ್ನು ದಯಪಾಲಿಸುವವನು ಎಂದರ್ಥವಾಗುತ್ತದೆ.  ಕಾಮಧೇನು, ಕಲ್ಪತರು, ಚಿಂತಾಮಣಿಗಳು ಬಯಸಿದ್ದನ್ನು ಕೊಟ್ಟರೆ, ಭಗವಂತನಾದ ಮುಕುಂದನನ್ನು ಸ್ಮರಿಸಿದರೆ, ಅವನು ಅತ್ಯುತ್ತಮವಾದ ಮುಕ್ತಿಯನ್ನೇ ದಯಪಾಲಿಸಿ ಬಿಡುವನು.  ನಂಬಿದ ಭಕ್ತರನ್ನು ಸದಾ ಪೊರೆಯುವವನು, ಉದ್ಧರಿಸುವವನು, ತನ್ನ ತನುವಿನಲ್ಲೇ ಸ್ಥಳಕೊಟ್ಟು ಪಾಲಿಸುವವನು ಮುಕುಂದನಾಮಕ ಭಗವಂತನು.  ಭಗವಂತನ ನಾಮ ಸ್ಮರಣೆ ಮಾಡುವುದೆಂದರೆ, ಮನಸ್ಸಿನಲ್ಲಿ ಭಗವಂತನನ್ನು ಸ್ಮರಿಸಿಕೊಳ್ಳುತ್ತಾ, ನಾಲಿಗೆಯಲ್ಲಿ ಅವನ ನಾಮಗಳನ್ನು ಉಚ್ಛರಿಸುವುದು ಎಂದರ್ಥವಾಗುತ್ತದೆ. 

ಶ್ರೀ ಕುಲಶೇಖರ ಆಳ್ವಾರ್ ರವರ ರಚನೆಯಾದ "ಮುಕುಂದಮಾಲಾ" ದಲ್ಲಿ  

ಶ್ರೀವಲ್ಲಭೇತಿ ವರದೇತಿ ದಯಾಪರೇತಿ
ಭಕ್ತಪ್ರಿಯೇತಿ ಭವಲುಂಠನಕೋವಿದೇತಿ
ನಾಥೇತಿ ನಾಗಶಯನೇತಿ ಜಗನ್ನಿವಾಸೇತಿ
ಆಲಾಪನಂ ಪ್ರತಿಪದಂ ಕುರು ಮಾಂ ಮುಕುಂದ || - ತನ್ನನ್ನೇ ಸ್ಮರಿಸುವವರಿಗೆ ಭಗವಂತ ತನ್ನ ನಾಮ ಸ್ಮರಣೆಯನ್ನೇ ದಯಪಾಲಿಸುತ್ತಾನೆ, ಸಕಲ ಇಷ್ಟಾರ್ಥಗಳನ್ನೂ ನೆರವೇರಿಸುವ ನಿಧಿಯಂತಿದ್ದಾನೆ.  ಭಕ್ತಪ್ರಿಯನಾಗಿದ್ದಾನೆ, ಸಂಸಾರವೆಂಬ ದುಃಖವನ್ನು ನಾಶಪಡಿಸುವ ಜಗನ್ನಾಥನಾಗಿದ್ದಾನೆ  ಮತ್ತು ಫಣಿಶಾಯಿಯಾಗಿರುವ ಭಗವಂತನು ಮೋಕ್ಷಪ್ರದನಾಗುತ್ತಾನೆ ಎಂದಿದ್ದಾರೆ.

ಕಾಮಧೇನು, ಕಲ್ಪತರು, ಚಿಂತಾಮಣಿಗಳೆಲ್ಲಾ ಅಮರಲೋಕದಲ್ಲಿರುವವರಿಗೆ ಮಾತ್ರ ಕಾಮಿತಾರ್ಥಗಳನ್ನು ಕೊಡಬಲ್ಲವು, ಆದರೆ ಶ್ರೀಮುಕುಂದನ ಪರಮಮಂಗಳವಾದ ನಾಮಸ್ಮರಣೆ ಮಾಡಿದರೆ ಸ್ವರ್ಗಲೋಕ, ಮರ್ತ್ಯ್ಸಲೋಕಗಳಷ್ಟೇ ಅಲ್ಲದೆ ನರಕಲೋಕದಲ್ಲಿರುವವರನ್ನೂ ಕೂಡ ಉದ್ಧರಿಸಿ, ಅವರಿಗೂ ಸ್ವರ್ಗ, ಮೋಕ್ಷಾದಿಗಳೆಂಬ ಭಾಗ್ಯವನ್ನು ಕೊಡಬಲ್ಲದು.

ನರಕಸ್ಥರನು ಸಲಹಿತು -  ಭಗವಂತನ ಪುಣ್ಯ ನಾಮಸ್ಮರಣೆಯು ನರಕದಲ್ಲಿರುವವರನ್ನೂ ಸಲಹುದು ಎಂಬುದಕ್ಕೆ ಪೂರಕವಾಗಿ ಒಂದು ಕಥೆಯಿದೆ.  ನಾರದರು ಒಮ್ಮೆ ಭಗವಂತನ ಮುಂದೆ ನರಕವನ್ನು ನೋಡಬೇಕೆಂಬ ತಮ್ಮ ಕುತೂಹಲವನ್ನು ವ್ಯಕ್ತಪಡಿಸಿದರು.  ಭಗವಂತನ ಅನುಜ್ಞೆಯನ್ನು ಪಡೆದುಕೊಂಡು ಯಮಲೋಕಕ್ಕೆ ಬಂದರು.  ಅಲ್ಲಿಯ ವಾಸಿಗಳು ಯಾತನೆ ಪಡುವುದನ್ನು ಕಂಡರು ಮತ್ತು ಆಶ್ಚರ್ಯ ಪಟ್ಟರು.  "ನಾರಾಯಣೇತಿ ಮಂತ್ರೋಸ್ತಿ ವಾಗಸ್ತಿ ವಶವರ್ತಿನೀ | ತಥಾಪಿ ನರಕೇ ಘೋರೇ ಪತಂತೀತ್ಯೇತದದ್ಭುತಮ್" ಎಂಬ ಯಮನ ಮಾತುಗಳನ್ನು ಕೇಳಿ ನರಕವಾಸಿಗಳಿಗಾಗಿ ಮರುಕ ಪಟ್ಟರು.  ನಾರಾಯಣ ಎಂಬ ಪರಮ ಪವಿತ್ರವಾದ ಮಂತ್ರವಿದೆ ಮತ್ತು ನುಡಿಯಲು ತನ್ನದೇ ಸ್ವಾಧೀನದಲ್ಲಿರುವ ನಾಲಿಗೆಯಿದ್ದರೂ, ಮಂತ್ರವನ್ನು ಜಪಿಸದೆ ನರಕವಾಸಿಗಳಾಗುತ್ತಾರೆಂದು ಚಕಿತರಾದರು.  ಅವರಿಗೆ ತೀವ್ರವಾದ ದುಃಖದ ಜೊತೆಗೆ ಅತಿಯಾದ ವಿಷಾದವೂ ಆಯಿತು.  ಅವರು ನಾರಾಯಣ ನಾಮಸ್ಮರಣೆಯನ್ನು ಎತ್ತರದ ಧ್ವನಿಯಲ್ಲಿ ಮಾಡಲು ಪ್ರಾರಂಭಿಸಿದರು.  ಭಗವಂತನ ನಾಮಾಮೃತದ ಶ್ರವಣ ಮಾಡಿದ ನರಕವಾಸಿಗಳು, ತಮ್ಮ ಪಾಪ ಕಳೆದುಕೊಂಡರು ಮತ್ತು ನಾರದರನ್ನು ಸ್ತುತಿಸುತ್ತಾ ಪುಷ್ಪಕವಿಮಾನದಲ್ಲಿ ಸ್ವರ್ಗಕ್ಕೆ ತೆರಳಿದರು.  ಶ್ರೀಹರಿಯ ನಾಮಸ್ಮರಣೆಯೊಂದೇ ಸಾಕು ಕಲಿಯುಗದಲ್ಲಿ ನರಕವನ್ನು ತಪ್ಪಿಸಲು ಎಂಬುದನ್ನು ಶ್ರೀಪುರಂದರದಾಸರು "ಸ್ಮರಣೆಯೊಂದೇ ಸಾಲದೆ" ಎಂಬ ಕೃತಿಯಲ್ಲಿ ಹಾಡಿದ್ದಾರೆ.

ಶ್ರೀ ವಿಷ್ಣು ಸಹಸ್ರನಾಮದ ಪೂರ್ವ ಪೀಠಿಕೆಯಲ್ಲಿ | ಜಗತ್ಪ್ರಭುಂ ದೇವದೇವಮನನ್ತಂ ಪುರುಷೋತ್ತಮಮ್ | ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ || - ಭಗವಂತನ ಸ್ತುತಿ, ಧ್ಯಾನ ಮುಂತಾದವುಗಳನ್ನು ಯಾರು ನಿರಂತರವಾಗಿ ಮಾಡುತ್ತಿರುತ್ತಾರೋ ಅವರಿಗೆ ಮೃತ್ಯು ಭಯವೂ ಕಾಡುವುದಿಲ್ಲ ಎಂದಿದ್ದಾರೆ.  ಹಾಗೇ ಫಲಶೃತಿಯ ಕೊನೆಯ ಶ್ಲೋಕದಲ್ಲಿ "ಸಂಕೀರ್ತ್ಯ ನಾರಾಯಣ ಶಬ್ದಮಾತ್ರಂ ವಿಮುಕ್ತ ದುಃಖಾ ಸುಖಿನೋ ಭವಂತಿ" - ನಾರಾಯಣ ಎಂಬ ಶಬ್ದವನ್ನು ಉಚ್ಛಾರಣೆ ಮಾಡುವುದರಿಂದ ಮಾತ್ರವೇ ಸಮಸ್ತ ದುಃಖಗಳೂ ಪರಿಹಾರವಾಗಿ ಸುಖಿಯಾಗುತ್ತಾರೆ ಎಂದಿದ್ದಾರೆ.  ಭಗವಂತನ ನಾಮಸ್ಮರಣೆಯ ಮಹಿಮೆಯಿದು.

ಶ್ರೀಕುಲಶೇಖರರು "ಮುಕುಂದಮಾಲ"ದಲ್ಲಿ
ಮಾಭೀಃ ಮಂದಮನೋ ವಿಚಿಂತ್ಯ ಬಹುಧಾ ಯಾಮೀಶ್ಚಿರಂ ಯಾತನಾಃ
ನಾಮೀ ನಃ ಪ್ರಭವಂತಿ ಪಾಪರಿಪವಃ, ಸ್ವಾಮೀ ನನು ಶ್ರೀಧರಃ |
ಆಲಸ್ಯಂ ವ್ಯಪನೀಯ ಭಕ್ತಿಸುಲಭಂ ಧ್ಯಾಯಸ್ವ ನಾರಾಯಣಂ
ಲೋಕಸ್ಯ ವ್ಯಸನಾಪನೋದನಕರೋ ದಾಸಸ್ಯ ಕಿಂ ನ ಕ್ಷಮಃ || - ಮೂಢ ಮನವೇ ನಾನಾಬಗೆಯ ನರಕದ ಯಾತನೆಗಳನ್ನು ನೆನೆದು ಭಯಪಡಬೇಡ.  ಶ್ರೀಹರಿಯೇ ಸ್ವಾಮಿ ಎಂದು ದೃಢವಾಗಿ ನಂಬಿದವರಿಗೆ ಪಾಪವೆಂಬ ಶತೃಗಳೂ ಏನೂ ಮಾಡಲಾರವು.  ಆದ್ದರಿಂದ ಆಲಸ್ಯ ತೊರೆದು ಭಕ್ತಿಗೆ ಸುಲಭವಾಗಿ ಒಲಿಯುವ ನಾರಾಯಣನನ್ನು ಸದಾ ಸ್ಮರಿಸು ಎಂದಿದ್ದಾರೆ.

ಶ್ರೀವಾದಿರಾಜರು "ಮಾತುಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ"  ಎಂದಿದ್ದಾರೆ.  ತಮ್ಮ ಇನ್ನೊಂದು ಕೃತಿ "ಹರಿ ನಾರಾಯಣ ಹರಿ ನಾರಾಯಣ ನಾಮಂ ಜಯ" ದಲ್ಲಿ "ನಾರಾಯಣ ನಾರದಪ್ರಿಯ ನಾರಾಯಣ ನರಕಾಂತಕ" ಎನ್ನುತ್ತಾ ನಾರಾಯಣನು ನರಕಕ್ಕೆ ಅಂತಕನು ಎಂದು ಸ್ತುತಿಸಿದ್ದಾರೆ.

ಪಾಮರರ ಪಂಡಿತರೆನಿಸುವುದು - ಭಗವಂತನ ಮಂಗಳಕರವಾದ ಪುಣ್ಯನಾಮಗಳನ್ನು ಸದಾ ಸ್ಮರಿಸುವುದರಿಂದ ಪಾಮರರೂ ಕೂಡ ಪಂಡಿತರಾಗಿ ಮಾರ್ಪಾಡಾಗುತ್ತಾರೆ.  ವಾಲ್ಮೀಕಿಯು ’ಮರ’ ಎಂಬ ಶಬ್ದವನ್ನು ಉಚ್ಛರಿಸುತ್ತಿರುವಾಗ ಅದು ’ರಾಮ’ ಶಬ್ದವಾಗಿ ಅವರಿಗೆ ಕೇಳಿಸಿ ಪಾಮರರಾಗಿದ್ದ ಅವರು ಪಂಡಿತರಾದ ವಾಲ್ಮೀಕಿಯಾದರು.  ಮಹಾಕಾವ್ಯವಾದ ರಾಮಾಯಣದ ರಚನೆಯಾಯಿತು.   ಕಾಮಧೇನು ಒಂದು ಹಸು, ಕಲ್ಪವೃಕ್ಷ ಒಂದು ಮರ ಮತ್ತು ಚಿಂತಾಮಣಿ ಒಂದು ಕಲ್ಲು.  ಹೀಗೆ ಪಶು, ಮರ ಮತ್ತು ಕಲ್ಲು ಬೇಡಿದ ಇಷ್ಟಾರ್ಥಗಳನ್ನು ನೀಡುವುದೆಂದರೆ, ಅದು ಭಗವಂತನ ಅಚಿಂತ್ಯ ಲೀಲೆಯೆಂದೇ ತಿಳಿಯಬೇಕು.  ಇವುಗಳಿಗೇ ಇಷ್ಟು ಶಕ್ತಿಯಿದ್ದರೆ, ಭಗವಂತನ ರೋಮರೋಮಗಳಲ್ಲೂ ನೆಲೆಸಿರುವ ಅವನ ನಾಮಗಳಿಗೆಷ್ಟು ಮಹಿಮೆಯಿದೆ ಎಂಬುದನ್ನು ಅರಿಯಬೇಕು.  ಭಗವಂತನು ಭಕ್ತಿ ಹಾಗೂ ಶ್ರದ್ಧೆಯಿಂದ ಸ್ಮರಣೆ ಮಾಡಿದ ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನೂ ಕೊಟ್ಟು ಸಲಹುತ್ತಾನೆ.  ಭಗವಂತನ ನಾಮಸ್ಮರಣೆಯನ್ನು ಸದಾ ಮಾಡುವ ಮನಸ್ಸು ಮಲಿನಗೊಳ್ಳಲಾಗಲೀ, ವಿಷಯಾಸಕ್ತಿಗಳ ಬಂಧನಕ್ಕೆ ಸಿಲುಕುವುದಾಗಲೀ ಆಗುವುದೇ ಇಲ್ಲ.

ಶ್ರೀ ಜಗನ್ನಾಥ ದಾಸರು ತಮ್ಮ ತತ್ವ ಸುವ್ವಾಲಿ
ಮನದಲ್ಲಿ ಹರಿಯ ಚಿಂತನೆ ಉಳ್ಳ ನರನಿಗೆ
ಮನೆಯಾದರೇನು ವನವೇನು | ವನವೇನು ಸತತ ದು-
ರ್ಜನರ ಸಂಗದೊಳು ಇರಲೇನು || - ನಿರಂತರವಾಗಿ ಹರಿಸ್ಮರಣೆ ಮಾಡುವ ಭಕ್ತನು ವಿಷಯಭೋಗ ಮಾಡಿದರೂ,  ಲಂಪಟರ ಸಂಗದಲ್ಲಿದ್ದರೂ, ಯಾವ ಹಾನಿಯೂ ಆಗುವುದಿಲ್ಲ.  ಕಾಮಾದಿಗಳ ವಶವಾದವನಿಗೆ ಅರಣ್ಯದಲ್ಲಿದ್ದರೂ ಸಂಸಾರದ ಭಯವು ತಪ್ಪುವುದಿಲ್ಲ.  ಆದರೆ ಇಂದ್ರಿಯಗಳ ಜಯಿಸಿ, ಭಗವಂತನ ಪಾದದಲ್ಲಿ ಮನಸ್ಸು ನಿಲ್ಲಿಸಿ, ನಾಮಸ್ಮರಣೆ ಮಾಡುವವನಿಗೆ ಗೃಹಸ್ಥಾಶ್ರಮವೂ ಕೂಡ ಯಾವ ಭಯವನ್ನೂ ಉಂಟುಮಾಡುವುದಿಲ್ಲ ಎನ್ನುತ್ತಾ ನಾಮಸ್ಮರಣೆಯ ಮಹತ್ವವನ್ನು ತಿಳಿಸಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ

Wednesday, April 16, 2014

ಕರುಣಾ ಸಂಧಿ - ೨೦ ನೇ ಪದ್ಯ


ಅಂಗುಟಾಗ್ರದಿ ಜನಿಸಿದಮರತ-
ರಂಗಿಣಿಯು ಲೋಕತ್ರಯಗಳಘ
ಹಿಂಗಿಸುವಳವ್ಯಾಕೃತಾಕಾಶಾಂತ ವ್ಯಾಪಿಸಿದ |
ಇಂಗಡಲ ಮಗಳೊಡೆಯನಂಗೋ-
ಪಾಂಗಗಳಲಿಪ್ಪಮಲನಂತ ಸು-
ಮಂಗಳಪ್ರದ ನಾಮ ಪಾವನ ಮಾಳ್ಪುದೇನರಿದು ?  ||೨೦||


ಪ್ರತಿಪದಾರ್ಥ :  ಅಂಗುಟಾಗ್ರದಿ - ಭಗವಂತನ ಪಾದಾಂಗುಷ್ಠದ ತುದಿಯಿಂದ, ಜನಿಸಿದ - ಉದ್ಭವಿಸಿದ, ಅಮರ ತರಂಗಿಣಿಯು - ದೇವತಾನದಿಯಾದ ಭಾಗೀರಥಿ, ಲೋಕತ್ರಯಗಳಘ - ಮೂರು ಲೋಕದ ಜೀವಿಗಳ ಪಾಪಗಳನ್ನೂ ಪರಿಹರಿಸುವಳು, ಅವ್ಯಾಕೃತ ಆಕಾಶ - ನಮ್ಮ ಕಣ್ಣಿಗೆ ಕಾಣಿಸುವ ಆಕಾಶದ ಆಚೆಗೆ ಇರುವ ಆಕಾಶದ, ಅಂತ - ಕೊನೆಯಲ್ಲಿ, ವ್ಯಾಪಿಸಿದ - ಹಬ್ಬಿಕೊಂಡಿರುವ, ಇಂಗಡಲಮಗಳ - ಕ್ಷೀರಸಮುದ್ರ ತನಯೆಯಾದ ಮಹಾಲಕ್ಷ್ಮಿಯ, ಒಡೆಯನ - ಲಕ್ಷ್ಮೀ ಪತಿಯಾದ ನಾರಾಯಣನ, ಅಂಗೋಪಾಂಗಗಳಲಿಪ್ಪ - ಕರಣೋಪಕರಣಗಳಲ್ಲಿ, ಅಮಲ - ನಿರ್ಮಲವಾದ, ಅನಂತ - ಯಾರೂ ಸಾಟಿಯಿಲ್ಲದ, ಸುಮಂಗಳಪ್ರದನಾದ - ಸನ್ಮಂಗಳವನ್ನುಂಟು ಮಾಡುವ ಭಗವದ್ರೂಪಗಳ ನಾಮಗಳು, ಪಾವನ ಮಾಳ್ಪುದು - ಸಕಲ ಪಾಪಗಳನ್ನು ಪರಿಹರಿಸಿ ಪಾವನ ಮಾಡುವುದು, ಏನರಿದು - ಇದರಲ್ಲೇನು ಆಶ್ಚರ್ಯವಿದೆ.
ಪರಮಾತ್ಮನು  ತ್ರಿವಿಕ್ರಮನಾಗಿ ಬೆಳೆಯುವ ಪ್ರಕ್ರಿಯೆಯಲ್ಲಿ ತನ್ನ  ಎಡಗಾಲ ಹೆಬ್ಬೆರಳಿನ ಉಗುರಿನ ಕೊನೆ ಬ್ರಹ್ಮಾಂಡದ ಕರ್ಪರಕ್ಕೆ ತಗುಲಿಸಿದಾಗ, ಅದು ಒಡೆದು ಅವ್ಯಾಕೃತಾಕಾಶದಿಂದ ಜಲಧಾರೆ ಹೊರಟು ದೇವಗಂಗೆ, ಅಮರ ತರಂಗಿಣಿ, ವಿಷ್ಣುಪದಿ ಎನಿಸಿ, ಸ್ವರ್ಗ ಭೂ ಪಾತಾಳ ಲೋಕಗಳ ಜನರ ಪಾಪ ಪರಿಹಾರ ಮಾಡಿತು.  ಇಂತಹ ಪವಿತ್ರ ಗಂಗೆಯನ್ನು ತಂದ ಪರಮಾತ್ಮನ ಅಂಗಗಳಲ್ಲಿ ಉಗುರು, ಕೂದಲು ಮುಂತಾದ ಉಪಾಂಗಗಳಲ್ಲಿ ವ್ಯಾಪಿಸಿರುವ, ತನ್ನಿಂದ ಅಭಿನ್ನ ರೂಪಗಳ ಮಹಿಮೆಯನ್ನು ಬಣ್ಣಿಸುವ ಪರಮಾತ್ಮನ ನಾಮವು ಪಾಪವೇ  ಪರಿಹಾರ ಮಾಡುತ್ತದೆ. ಹರಿಯ ಕಾಲಬೆರಳ ಉಗುರಿನಿಂದ ಬಂದ ನದಿಯ ನೀರಿಗೇ ಇಷ್ಟು ಮಹಿಮೆ ಇದ್ದ ಮೇಲೆ, ಅವನಿಗೇ ಇನ್ನೆಷ್ಟು ಮಹಿಮೆ ಇರಬೇಡ.  ಕರಚರಣಾದಿ ಏಕಾದಶೇನ್ದ್ರಿಯಗಳಿಗೆ ನಿಯಾಮಕನಾದ, ಪಾರತನ್ತ್ರಾದಿ ದೋಷಗಳಿಂದ ನಿರ್ಮಲನಾದ, ಆದ್ಯತಶೂನ್ಯನಾದ, ಮಹಿಮೋಪೇತನಾದ, ಸಜ್ಜನರಿಗೆ ಮೋಕ್ಷ ಕೊಡುವ ಆ ಪರಮಾತ್ಮನ ಧ್ಯಾನಾನುಸಂಧಾನದಿಂದ ಉಚ್ಚರಿಸತಕ್ಕ ನಾಮವು ಸರ್ವದೋಷಗಳಿ೦ದ ಪವಿತ್ರರನ್ನಾಗಿ ಮಾಡುತ್ತದೆ.

ಅಂಗುಟಾಗ್ರದಿ ಜನಿಸಿದ ಅಮರ ತರಂಗಿಣಿ - ಪಂಚಭೂತಗಳ ಸಮ್ಮಿಶ್ರಣದಿಂದಾದ ಭೂಮಂಡಲದ ಕವಚವು ಅತಿ ಕಾಠಿಣ್ಯಕರವಾದ ಲಕ್ಷಣವುಳ್ಳದ್ದು.  ನಮ್ಮ ಕಣ್ಣಿಗೆ ಕಾಣುವುದು ಪಂಚಭೂತಗಳಲ್ಲೊಂದಾದ ಮಣ್ಣು ಮಾತ್ರವು.  ಆದರೆ ನಮ್ಮ ಕಣ್ಣಿಗೆ ಕಾಣದ ನೂರಾರು ಕೋಟಿ ಯೋಜನದ ದೂರದಲ್ಲಿರುವುದು ಶುದ್ಧವಾದ ಕವಚವು.  ಭಗವಂತ ವಾಮನನವತಾರವೆತ್ತಿ ಬಲಿಯ ಮನೆಗೆ ಬಂದು ೩ ಪಾದ ಭೂಮಿ ದಾನ ಬೇಡಿದ.  ಭಗವಂತನೇ ಬಂದಿದ್ದರೂ ತಾನು ಕೊಟ್ಟ ಮಾತಿಗೆ ತಪ್ಪುವುದಿಲ್ಲವೆಂದು ಬಲಿ ಚಕ್ರವರ್ತಿ ದಾನ ಕೊಡಲು ಮುಂದಾದಾಗ, ಭಗವಂತ ತನ್ನ ಒಂದು ಪುಟ್ಟ ಪಾದದಿಂದ ಇಡೀ ಭೂಮಂಡಲವನ್ನೇ ಅಳೆದನು.  ಎರಡನೆಯ ಪಾದವನ್ನು ಆಕಾಶದತ್ತ ಎತ್ತಿದಾಗ, ಪುಟ್ಟ ಪಾದವು ಬೆಳೆಯಲಾರಂಭಿಸಿತು.  ಬೆಳೆಯುತ್ತಾ ಬೆಳೆಯುತ್ತಾ ಎಲ್ಲಾ ಲೋಕಗಳನ್ನೂ  ಮೀರಿ ಬೆಳೆಯುತ್ತದೆ.  ಭಾಗವತ ಅಷ್ಟಮಸ್ಕಂದದಲ್ಲಿ ಬರುವ ಬಲಿ ಚಕ್ರವರ್ತಿಯ ಕಥೆಯಲ್ಲಿ ಭಗವಂತನ ಪಾದ ಬೆಳೆದುದನ್ನು ವಿವರಿಸಲಾಗಿದೆ. 

ವಾಮನನಾಗಿ ಬಂದ ಪುಟ್ಟ ಬಾಲಕ ತ್ರಿವಿಕ್ರಮರೂಪಿಯಾಗಿ ಬೆಳೆಯಲಾರಂಭಿಸಿದಾಗ ಭಗವಂತನ ಆ ವಿರಾಟ್ ದೇಹದಲ್ಲಿ ಭೂಮಿ, ಆಕಾಶ, ದಿಕ್ಕುಗಳು, ಅತಲಾದಿ ಏಳು ಲೋಕಗಳೂ, ಏಳು ಸಮುದ್ರಗಳೂ, ದೇವಮುನಿ, ಮನುಷ್ಯಾದಿ ಸರ್ವಸ್ವವೂ ಕಾಣಿಸಿಕೊಂಡವು.  ಬಲಿಚಕ್ರವರ್ತಿಯು ಭಗವಂತನ ಶರೀರದ ಪ್ರತೀ ಅವಯವದಲ್ಲೂ ಗುಣತ್ರಯಾತ್ಮಕವಾದ ಸಕಲ ಪ್ರಪಂಚವನ್ನೂ ಕಂಡನು.  ಬೆಳೆಯುತ್ತಲೇ ಹೋದ ಭಗವಂತನ ಶರೀರ ಹಾಗೂ ಪಾದವು ಮೇಲೆ ಹೋಗುತ್ತಾ ಮಹರ್ಲೋಕ, ಜನೋಲೋಕ, ತಪೋಲೋಕಗಳನ್ನೆಲ್ಲಾ ದಾಟಿ ಸತ್ಯಲೋಕವನ್ನೂ ಆಕ್ರಮಿಸಿಕೊಂಡುಬಿಟ್ಟಿತು.   ಹೀಗೆ ಬೆಳೆಯುತ್ತಾ ಸಾಗಿದ ಪಾದದ ಹೆಬ್ಬೆರಳ ಉಗುರಿನ ತುದಿ ಮಾತ್ರ ತಲುಪಿ ಕಠಿಣವಾದ ಭೂಮಂಡಲದ ಕವಚ ಬಿರುಕುಬಿಟ್ಟಿತು.  ಬ್ರಹ್ಮಾಂಡದ ಹೊರಗಿನ ಜಲಾವರಣದ ಶುದ್ದ ಜಲವು ಬಿರುಕಿನಿಂದ ಒಳಗೆ ಸುರಿಯಿತು.  ಶುದ್ಧಜಲವನ್ನು ಕಂಡ ಬ್ರಹ್ಮದೇವರು ಅದನ್ನು ಕಮಂಡಲುವಿನಲ್ಲಿ ಸಂಗ್ರಹಿಸಿ, ಭಗವಂತನ ಪಾದವನ್ನು ತೊಳೆದರು.  ಭಗವಂತನ ಉಗುರಿನಿಂದ ಉದ್ಭವಿಸಿದ ಶುದ್ಧಜಲವು, ಭಗವಂತನ ಪಾದ ತೊಳೆಯಲುಪಯೋಗಿಸಲ್ಪಟ್ಟಿದ್ದರಿಂದ, ಪವಿತ್ರಜಲವಾಯಿತು, ಗಂಗೆಯಾದಳು.  ಅಂಗುಟಾದ್ರಿಯಲ್ಲಿ ಜನಿಸಿದವಳಾದ್ದರಿಂದ ದೇವಗಂಗೆಯಾದಳು.  ಅನೇಕ ಸಾವಿರ ವರ್ಷಗಳ ನಂತರ ಸಪ್ತಋಷಿ ಮಂಡಲಕ್ಕೆ ಹೋಗಿ, ಅಲ್ಲಿಂದ ಚಂದ್ರ ಮಂಡಲಕ್ಕೆ ಬಂದಳು.  ಅಲ್ಲಿ ಸೂರ್ಯನ ಕಿರಣಗಳನ್ನು ನೇರವಾಗಿ ಸ್ವೀಕರಿಸಿ, ಇನ್ನೂ ಹೆಚ್ಚು ಪವಿತ್ರಳಾಗಿ, ಹಿಮಾಲಯದ ಮೂಲಕ ಪೃಥ್ವಿಗೆ ಹರಿದು ಬಂದಳು.  ಮುಂದೆ ಅನೇಕ ಸಾವಿರ ವರ್ಷಗಳ ನಂತರ ದೇವತೆಗಳು ಅವಳನ್ನು ಮತ್ತೆ ದೇವಲೋಕಕ್ಕೇ ಕರೆಸಿಕೊಂಡರು.  ಹೀಗೆ ಅಮರಲೋಕಕ್ಕೆ ಮರಳಿ ತೆರಳಿದ ಗಂಗೆಯು ಅಮರತರಂಗಿಣಿಯಾದಳು. 

ಗಂಗೆಯುದ್ಭವವನ್ನು ಶ್ರೀ ಜಗನ್ನಾಥ ದಾಸರು ತಮ್ಮ "ಭಾಗೀರಥ್ಯಾದಿ ನದಿಗಳ ತಾರತಮ್ಯ" ಎಂಬ ಪದದಲ್ಲಿ
ಹರಿಪಾದನಖದ ಸಂಸ್ಪರ್ಶ ಮಾತ್ರದಿಂದಲಿ
ಸುರತರಂಗಿಣಿ ಶ್ರೇಷ್ಠಳೆನಿಸುವಳು ನದಿಗಳೊಳು
ದಶರಥಾಂಗನದಾ ವಿಧೃತಪಾಣಿ ಮಾಧವನು, ದೊರೆಮೆನಿಪನಾ ತೀರ್ಥಕೆ.. || - ಶ್ರೀಹರಿಯ ನಖ ಸ್ಪರ್ಶದಿಂದ ಬಂದವಳಾದ ಗಂಗೆಯಲ್ಲಿ ಮಾಧವನು ಸ್ವತಃ ನೆಲೆಸಿದ್ದಾನೆ ಎನ್ನುತ್ತಾ ಗಂಗೆಯ ಶ್ರೇಷ್ಠತೆಯನ್ನು ತಿಳಿಸಿದ್ದಾರೆ.
ಗಂಗೆಯನ್ನು ಜಾಹ್ನವಿಯೆಂದು ದಾಸರಾಯರು ತಮ್ಮ ಇನ್ನೊಂದು ಕೀರ್ತನೆ  "ಜನನಿ ಜಾಹ್ನವಿ ಜಗತ್ರಯ ಪಾವನಿ | ಪ್ರಣತಕಾಮದೆ ಪದ್ಮಜಾಂಡ ಸಂಭೂತೆ " ಯಲ್ಲಿ "ಕಾರುಣಿಕ ಬಹಿರಾವರಣದಿಂದ ನೀ ಪೊರಟು"  ಎಂದು ಗಂಗೆ ವಿಷ್ಣು ಪಾದೋದ್ಭವೆ ಎಂಬುದನ್ನು ತಿಳಿಸುತ್ತಾರೆ.  ಮುಂದುವರೆಯುತ್ತಾ  "ಸೃಷ್ಟೀ ಶ ಪದಜಾತೆ ವಿಶ್ವಮಂಗಳ ಮಹೋತ್ಕೃಷ್ಟ ತೀರ್ಥಗಳೊಳುತ್ತಮಳೆನಿಸುವೇ" ಎನ್ನುತ್ತಾ ಗಂಗೆಯ ಶ್ರೇಷ್ಠತೆಯನ್ನು ತಿಳಿಸಿದ್ದಾರೆ.

ಗಂಗೆಯ ಶ್ರೇಷ್ಠತೆಯನ್ನು ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ನದೀ ತಾರತಮ್ಯ ಸ್ತೋತ್ರದಲ್ಲಿ "ವಿಷ್ಣು ಪಾದಾಬ್ಜ ಸಂಭೂತಾ ಗಂಗಾ ಸರ್ವಾಧಿಕಾ ಮತಾ" - ಗಂಗೆ ನದಿಗಳಲ್ಲೆಲ್ಲಾ ಅತಿ ಪಾವನಳು, ಶ್ರೇಷ್ಠಳೇಕೆಂದರೆ ಅವಳು ಶ್ರೀಹರಿಯ ಪಾದಕಮಲದಿಂದ ಉದ್ಭವಿಸಿದವಳು ಎಂದು ಕೊಂಡಾಡಿದ್ದಾರೆ.  


ಲೋಕತ್ರಯಗಳಘ ಹಿಂಗಿಸುವಳು - ಗಂಗೆಯನ್ನುಳಿದು ಇತರ ನದಿಗಳೆಲ್ಲಾ ಭೂಲೋಕದಲ್ಲಿ ಮಾತ್ರ ಹರಿಯುತ್ತವೆ, ಆದರೆ ಗಂಗೆ ಮೂರೂ ಲೋಕಗಳಲ್ಲೂ ಸಂಚರಿಸುವವಳಾದ್ದರಿಂದಲೇ ಅವಳು ಶ್ರೇಷ್ಠಳಾಗಿದ್ದಾಳೆ. ಸೂರ್ಯ ವಂಶದ ರಾಜನಾದ ಭಗೀರಥನು ತನ್ನ ತಂದೆಯ ತಂದೆಯರಾದ (ಪೂರ್ವಜರಾದ) ಸಗರ ಕುಮಾರರ ಮುಕ್ತಿಗಾಗಿ ಗಂಗೆಯನ್ನು ಕುರಿತು ತಪಸ್ಸು ಮಾಡಿ ಭೂಲೋಕಕ್ಕೆ ಕರೆದುತಂದನು.  ಅರವತ್ತು ಸಾವಿರ ಮಂದಿ ಸಗರ ಕುಮಾರರು ಕಪಿಲ ಮುನಿಯ ಶಾಪಾಗ್ನಿಯಿಂದ ಸುಟ್ಟು ಬೂದಿಯಾಗಿದ್ದರು.  ಭಗೀರಥನ ತಪಸ್ಸಿನಿಂದಾಗಿ ಭೂಲೋಕಕ್ಕೆ ಇಳಿದ ಗಂಗೆಯು ನಂತರ ಪಾತಾಳದಲ್ಲಿಯೂ ಹರಿದು ತ್ರಿಪಥಗಾ ಎನಿಸಿದಳು.  ದೇವಲೋಕದಲ್ಲಿ ಮಂದಾಕಿನಿಯೆಂದೂ, ಭೂಲೋಕದಲ್ಲಿ ಭಾಗೀರಥಿಯೆಂದೂ ಮತ್ತು ಪಾತಾಳದಲ್ಲಿ ಭೋಗವತೀಯೆಂಬ ಹೆಸರುಗಳಿಂದ ತ್ರಿಲೋಕಪಾವನೆಯಾಗಿ, ಲೋಕತ್ರಯಗಳ ಅಘವನ್ನು ಹಿಂಗಿಸುವಳು.

ಶ್ರೀ ವಾದಿರಾಜರು ತಮ್ಮ ತೀರ್ಥಪ್ರಬಂಧದಲ್ಲಿ ಗಂಗೆಯ ಸ್ತೋತ್ರವನ್ನು ೮ ಶ್ಲೋಕಗಳಿಂದ ಮಾಡಿದ್ದಾರೆ.  ಅದರಲ್ಲಿ
ತ್ವಂ ದೀನೇಷು ದಯಾವತೀತಿ ವಿದಿತಂ ಯದ್ಬ್ರಹ್ಮಹಸ್ತಾಶ್ರಯಂ
ಪ್ರಾಪ್ತಾಥಾಚ್ಯುತಪಾದ ಸಂಗಮಹಿತಾಪಶ್ಚಾಚ್ಚ ನಾಕಂ ಗತಾ |
ಸೌವರ್ಣಾಚಲಶೃಂಗಮೇತ್ಯ ಮುದಿತಾ ಶಂಭೋಃ ಶಿರಃಸಂಗತಾ-
ಪ್ಯಾಸ್ಮಾಕಕ್ಷಿತಿಮಂಡಲೇ ತ್ರಿಪಥಗೇ ತುಷ್ಟಾಸ್ಯಭೀಷ್ಟಪ್ರದಾ  - ಸ್ವರ್ಗ, ಮರ್ತ್ಯ ಮತ್ತು ಪಾತಾಳಗಳಲ್ಲಿ ಸಂಚರಿಸುವುದರಿಂದ ತ್ರಿಪಥಗಾ ಎಂಬ ಹೆಸರುಳ್ಳ ಗಂಗೆಯೇ ನೀನು ಪಾಪದಿಂದ ದುಃಖಿತರಾದವರಲ್ಲಿ ದಯಾವಂತಳೆಂದು ತಿಳಿಯಲ್ಪಟ್ಟಿದೆ.  ಬ್ರಹ್ಮ ಹಸ್ತಾಶ್ರಯದಿಂದ ಶ್ರೀಹರಿಯ ಪಾದ ಸಂಪರ್ಕದಿಂದ ಪೂಜ್ಯಳಾಗಿದ್ದೀಯೆ ಎಂದು ಗಂಗೆಯ ಶ್ರೇಷ್ಠತೆಯನ್ನು ಸ್ತುತಿಸಿದ್ದಾರೆ.

ಸ್ಕಾಂದಪುರಾಣದ ಕಾಶೀ ಖಂಡದಲ್ಲಿ ಗಂಗೆಯ ಮಹಿಮೆಯನ್ನು ಸಾರುವ
ಗಚ್ಛಂಸ್ತಿಷ್ಠನ್ ಜಪನ್ ಧ್ಯಾಯನ್ ಭುಂಜನ್ ಜಾಗೃತ್ ಸ್ವಪನ್ ವದನ್ | ಯಃ ಸ್ಮರೇತ್ ಸತತಂ ಗಂಗಾಂ ಸ ಹಿ ಮುಚ್ಯೇತ ಬಂಧನಾತ್ || - ನಡೆದಾಡುವಾಗ, ನಿಂತುಕೊಂಡಾಗ, ಜಪಮಾಡುವಾಗ, ಧ್ಯಾನಗೈಯುವಾಗ, ಊಟ ಮಾಡುವಾಗ, ಎಚ್ಚರವಿದ್ದಾಗ ಮತ್ತು  ಮಾತನಾಡುವಾಗ, ಹೀಗೆ ಸದಾ ಯಾರು ಗಂಗೆಯನ್ನು ನೆನೆಯುವರೋ ಅವರು ಸಂಸಾರ ಬಂಧನದಿಂದ ಮುಕ್ತರಾಗುವರೆಂಬುದನ್ನು ತಿಳಿಸಲಾಗಿದೆ.    ಗಂಗೆಯ ಮಹಾತ್ಮ್ಯವನ್ನು ತಿಳಿದು ಗೋವಿಂದನಲ್ಲಿ ಭಕ್ತಿ ಮಾಡುವ ಮಾನವರ ಮೇಲೆ ಗಂಗೆಯು ಸುಪ್ರಸನ್ನಳಾಗುವಳು ಎಂಬ ಮಾತೂ ಸಹ ಉಕ್ತವಾಗಿದೆ.

ಅವ್ಯಾಕೃತಾಕಾಶಾಂತ ವ್ಯಾಪಿಸಿದ -  ಅವ್ಯಾಕೃತಾಕಾಶ ಎಂದರೆ ಏನೂ ಇಲ್ಲದ ಎಂದರ್ಥವಾಗುತ್ತದೆ.  ನಮ್ಮ ಕಣ್ಣಿಗೆ ಕಾಣುವ ಈ ಭೂತಾಕಾಶವು ಪ್ರಳಯ ಕಾಲದಲ್ಲಿ ಲಯವಾಗುವಂತಹುದು.  ಸಮಸ್ತವೂ ಲಯವಾಗಿ, ಇಲ್ಲವಾದಾಗ ಉಳಿಯುವುದೇ ಏನೂ ಇಲ್ಲದ, ವಿವರಣೆಗೆ ಸಿಕ್ಕದ ಖಾಲಿಜಾಗ ಅಥವಾ ಅವ್ಯಾಕೃತಾಕಾಶವೆನ್ನುವುದು.  ಕಣ್ಣಿಗೆ ಕಾಣುವ ಈ ಭೂತಾಕಾಶವು ಸಾಂತ (ಮಿತಿಯುಳ್ಳದ್ದು), ಆದರೆ ಕಣ್ಣಿಗೆ ಕಾಣದ ಅವ್ಯಾಕೃತಾಕಾಶವು ಅನಂತ (ಮಿತಿಯೇ ಇಲ್ಲದ್ದು) ಮತ್ತು ಸದಾಕಾಲವೂ ಇರುವಂತಹುದು.  ಭಗವಂತನು ಅನಂತನಾಗಿದ್ದು, ಅಮಿತನು, ಸದಾಕಾಲವೂ ಇರುವಂತಹವನಾಗಿದ್ದಾನೆ.  ಅವನು ಸರ್ವವ್ಯಾಪ್ತನು.  ಅಣುಅಣುವಿನಲ್ಲೂ, ಕಣಕಣಗಳಲ್ಲೂ ವ್ಯಾಪ್ತನು.  ಶ್ರೀ ಜಗನ್ನಾಥದಾಸರು ತಮ್ಮ "ಸ್ಮರಿಸು ಸಂತತ ಹರಿಯನು ಮನವೇ" ಎಂಬ ಕೃತಿಯಲ್ಲಿ | "ಅಣುವಿನೊಳಗಣುವಹನು ಘನಕೆ ಘನತರನಹನು ಅಣು ಮಹದ್ವಿಲಕ್ಷಣಾ ಕಲ್ಯಾಣ ಗುಣಜ್ಞಾನ ಘನಲಕ್ಷಣಾ ಸಂಪೂರ್ಣ" || ಎಂದು ಭಗವಂತನ ಸರ್ವವ್ಯಾಪ್ತತೆಯನ್ನು ವಿವರಿಸಿದ್ದಾರೆ. 
ಭಗವದ್ಗೀತೆಯ  ಹತ್ತನೇ ಅಧ್ಯಾಯದಲ್ಲಿ ಭಗವಂತ ಅರ್ಜುನನಿಗೆ ತನ್ನನ್ನು ಕುರಿತು ತಾನೇ
ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ | ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ || - ಎಲೈ ಕುರುಶ್ರೇಷ್ಠನೇ, ಈಗ ನಾನು ನನ್ನ ದಿವ್ಯ ವಿಭೂತಿಗಳಲ್ಲಿ ಮುಖ್ಯವಾದವುಗಳನ್ನು ನಿನಗೆ ತಿಳಿಸುತ್ತೇನೆ.  ಏಕೆಂದರೆ ನನ್ನ ವಿಸ್ತಾರಕ್ಕೆ ಕೊನೆಯೇ ಇಲ್ಲ ಎಂದಿದ್ದಾನೆ.  ಇದು ಭಗವಂತನ ಸರ್ವವ್ಯಾಪ್ತತೆಯ ವಿವರಣೆಯಾಗುತ್ತದೆ.  

ಇಂಗಡಲ ಮಗಳೊಡೆಯ -  ಇಂಗಡಲು ಎಂದರೆ ಸಿಹಿಯಾದ, ಮಧುರವಾದ ಹಾಲಿನ ಕಡಲು, ಕ್ಷೀರ ಸಮುದ್ರ.  ಇಂಗಡಲಿನಲ್ಲಿ ಉದಿಸಿದವಳು ಮಹಾಲಕ್ಷ್ಮೀ ದೇವಿ, ಕ್ಷೀರ ಸಮುದ್ರರಾಜ ಕುಮಾರಿ.  ದಾಸರಾಯರು ಲಕ್ಷ್ಮೀದೇವಿಯನ್ನು ತಮ್ಮ "ಇಂದಿರೆ ಇಂದುವದನೇ ಸರಸಿಜಸದನೇ".. ಎಂಬ ಕೃತಿಯಲ್ಲಿ "ಪಾಲಗಡಲ ಸಂಭೂತೆ ಕಾಲ ದೇಶದಿ ವ್ಯಾಪಿತೆ" ಎಂದಿದ್ದಾರೆ.   ಶ್ರೀಸೂಕ್ತದಲ್ಲಿ "ಲಕ್ಷ್ಮೀಂ ಕ್ಷೀರ ಸಮುದ್ರರಾಜ ತನಯೇ.." ಎಂದು ಸ್ತುತಿಸಲಾಗಿದೆ.  ಶ್ರೀ ವಾದಿರಾಜರು ತಮ್ಮ "ಲಕ್ಷ್ಮೀ ಶೋಭಾನೆ"ಯಲ್ಲಿ "ಪಾಲಸಾಗರವನ್ನು ಲೀಲೆಯಲಿ ಕಡೆಯಲು | ಬಾಲೆ ಮಹಲಕ್ಷ್ಮಿ ಉದಿಸಿದಳು" ಎನ್ನುತ್ತಾ ಸಮುದ್ರ ಮಥನದಲ್ಲಿ ಕ್ಷೀರಸಾಗರವನ್ನೇ ಕಡೆಯಲಾಗಿತ್ತೆಂಬ ಮಾತನ್ನು ತಿಳಿಸಿದ್ದಾರೆ.  ಇಂತಹ ಇಂಗಡಲ ಮಗಳಾಗಿ ಜನಿಸಿದ ಮಹಾಲಕ್ಷ್ಮಿಗೂ ಒಡೆಯನಾದವನು ಶ್ರೀಹರಿಯಾಗಿದ್ದಾನೆ.  ಪ್ರಳಯ ಕಾಲದಲ್ಲಿಯೂ ಭಗವಂತನ ಜೊತೆ ಸದಾ ಇರುವವಳು ಲಕ್ಷ್ಮೀದೇವಿ ಮಾತ್ರ.  ಸರ್ವದಾ ಶ್ರೀಹರಿಯ ಜೊತೆಯಲ್ಲಿಯೇ ಇರುವಂತಹ ಲಕ್ಷ್ಮೀದೇವಿಯೇ ಸರ್ವ ವ್ಯಾಪ್ತಳು ಎಂದಾಗ, ಅವಳಿಗೂ ಒಡೆಯನಾದ ಭಗವಂತನು ಅಮಿತನು ಎನ್ನುವುದು ತಿಳಿಯುತ್ತದೆ.  ಜಗನ್ನಾಥ ದಾಸರು ತತ್ವ ಸುವಾಲಿಯಲ್ಲಿ
ಪಾಲ್ಗಡಲಮಗಳಾಳ್ದನಾಳ್ಗಳೊಳಗಪ್ರತಿಮ
ಓಲೈಪ ಜನರ ಸಲಹೆಂದು | ಸಲಹೆಂದು ಬಿನ್ನೈಪೆ
ಫಲ್ಗುಣಾಗ್ರಜನೆ ಪ್ರತಿದಿನ || - ಪಾಲ್ಗಡಲ ಮಗಳಾದ ಲಕ್ಷ್ಮೀದೇವಿಯನ್ನಾಳಿದ ನಾಳ್ಗಳೊಳಗೆಲ್ಲಾ ಅಪ್ರತಿಮನಾದವನಾದ ಭಗವಂತನೇ ಸಲಹು ಎಂದಿದ್ದಾರೆ.

ಅಂಗೋಪಾಂಗಗಳಲಿಪ್ಪ ಅನಂತ ಸುಮಂಗಳಪ್ರದ ನಾಮ -   ಭಗವದ್ಗೀತೆಯ ೧೧ನೇ ಅಧ್ಯಾಯದಲ್ಲಿ "ಅನೇಕ ವಕ್ತ್ರ ನಯನಮನೇಕಾದ್ಭುತ ದರ್ಶನಮ್ | ಅನೇಕ ವಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್" || - ಅನೇಕ ಮುಖಗಳು, ಕಣ್ಣುಗಳು ಹೊಂದಿರುವ ಅನೇಕ ಬಗೆಯ ದಿವ್ಯವಾದ ಭೂಷಣಗಳಿಂದ ಅಲಂಕೃತನಾದ, ಅನೇಕ ವಿಧವಾದ ದಿವ್ಯ ಶಸ್ತ್ರಗಳನ್ನು ಧರಿಸಿರುವ, ದಿವ್ಯ ಗಂಧವನ್ನು ಪೂಸಿಕೊಂಡಿರುವ, ಎಲ್ಲ ಪ್ರಕಾರದ ಆಶ್ಚರ್ಯಗಳಿಂದ ಒಳಗೊಂಡ, ಅನಂತಸ್ವರೂಪನಾದ ಭಗವಂತನನ್ನು ಕಂಡೆ ಎಂದು ಅರ್ಜುನ ತಿಳಿಸಿದ್ದಾನೆ.  ಅವ್ಯಾಕೃತಾಕಾಶದಲ್ಲಿ ಭಗವಂತನ ಜೊತೆಗೇ ಸರ್ವ ವ್ಯಾಪ್ತಳಾಗಿರುವವಳು ಲಕ್ಷ್ಮೀದೇವಿ ಮಾತ್ರ.  ಆದರೆ ಭಗವಂತನು ಲಕ್ಷ್ಮೀದೇವಿಯ ಒಳಗೂ ವ್ಯಾಪ್ತನು, ಹೊರಗೂ ವ್ಯಾಪ್ತನಾದ್ದರಿಂದಲೇ ಅವನು ಅಮಿತನು.  ಭಗವಂತನ ಸರ್ವವ್ಯಾಪ್ತಿತ್ವವನ್ನು ’ಶ್ವೇತಾಶ್ವತರೋಪನಿಷತ್ತ್’ನಲ್ಲಿ "ಏಕೋ ದೇಸ್ಸರ್ವಭೂತೇಷು ಗೂಢಸ್ಸರ್ವವ್ಯಾಪ್ತೀ " ಎಂದು ಪ್ರಾರಂಭವಾಗುವ ಶ್ಲೋಕದಲ್ಲಿ ತಿಳಿಸಲ್ಪಟ್ಟಿದೆ.  ವಿಷ್ಣು ಸಹಸ್ರನಾಮದ ಫಲಶೃತಿಯಲ್ಲಿ ಕೂಡ "ಏಕೋ ವಿಷ್ಣುರ್ಮಹದ್ಭೂತಂ".. ಎಂಬ ಮಾತಿನ ಮೂಲಕ ಭಗವಂತನ ಮಹಾ ವಿಭೂತಿಯ ಉಲ್ಲೇಖವಾಗಿದೆ.  ಭಗವಂತ ಒಬ್ಬನೇ ಸರ್ವ ವ್ಯಾಪ್ತನು ಅವನೇ ಸರ್ವವನ್ನೂ ನಿರ್ವಹಣೆ ಮಾಡುವವನು ಎಂಬ ಉಲ್ಲೇಖವಿದೆ.  ಭಗವಂತನು ಹೇಗೆ ಸರ್ವವ್ಯಾಪ್ತನೋ, ಹಾಗೇ ಅವನ ಪ್ರತಿಯೊಂದ ಅಂಗಗಳೂ, ಉಪಾಂಗಗಳೂ ಕೂಡ ಅದೇ ಪರಿಯಲ್ಲಿ ವ್ಯಾಪ್ತವಾಗಿರುವುದು.  ಅಂದರೆ ಭಗವಂತನ ಶರೀರವು ಹೇಗೆ ಸರ್ವ ವ್ಯಾಪ್ತಿಯನ್ನು ಹೊಂದಿರುವುದೋ, ಹಾಗೆ ಅವನ ಅಂಗಾಂಗಗಳೂ ಅವ್ಯಾಕೃತಾಕಾಶ ಪರ್ಯಂತ ವ್ಯಾಪ್ತವಾಗಿವೆ.  ಅಂಗಾಂಗಗಳಿಗಿರುವ ಉಪಾಂಗಗಳೂ ಕೂಡ ಅಷ್ಟೇ ವ್ಯಾಪ್ತತೆಯನ್ನು ಹೊಂದಿವೆ.  ಭಗವಂತನ ಅಂಗವಾದ ಅವನ ಪಾದದ ಬೆರಳು ಎಷ್ಟು ವ್ಯಾಪ್ತಿಯನ್ನು ಹೊಂದಿದೆಯೋ, ಅಷ್ಟೇ ವ್ಯಾಪ್ತಿಯನ್ನು ಬೆರಳಿನ ಉಪಾಂಗವಾದ ನಖವೂ ಕೂಡ ಹೊಂದಿದೆ.  ಪಾದವು ಸರ್ವ್ಯ ವ್ಯಾಪ್ತವಾಗಿದೆ, ಪಾದದ ಬೆರಳೂ ಸರ್ವ ವ್ಯಾಪ್ತವಾಗಿದೆ ಹಾಗೇ ಬೆರಳಿನ ನಖವೂ ಸರ್ವ ವ್ಯಾಪ್ತತೆಯನ್ನು ಹೊಂದಿದೆ.  ಹೀಗೆ ಅವನ ಸರ್ವಾಂಗಗಳಲ್ಲಿಯೂ, ಉಪಾಂಗಗಳಲ್ಲಿಯೂ ಮಿತಿಯಿಲ್ಲದಂತೆ ವ್ಯಾಪ್ತವಾಗಿರುವುದೇ ಭಗವಂತನ ಅನಂತ ನಾಮಗಳು.  ನಾಮಗಳು ಸುಮಂಗಳಪ್ರದವಾಗಿರುವುದೇಕೆಂದರೆ, ನಾಮೋಚ್ಛಾರಣೆಯಿಂದಲೇ ಸಕಲವೂ ಮಂಗಳವಾಗುವುದು.  ಭಗವಂತನಿಗೆ ಎಷ್ಟು ಸಹಸ್ರ ರೂಪಗಳಿವೆಯೋ, ಅಷ್ಟೇ ಸಹಸ್ರ ನಾಮಗಳೂ ಇವೆ.  ಭಗವಂತನ ಪ್ರತಿಯೊಂದು ಅಂಗವೂ ಅವನ ಒಂದೊಂದು ರೂಪಗಳೇ ಆಗಿರುವುದರಿಂದ, ಅವನ ಅಂಗಾಂಗಗಳಲ್ಲಿ ಸುಮಂಗಳಪ್ರದವಾದ ಅನೇಕ, ಅನಂತ ನಾಮಗಳು ಸೇರಿಕೊಂಡಿವೆ.  ಅಂತ್ಯವಿಲ್ಲದ ಅವ್ಯಾಕೃತಾಕಾಶ ಪರ್ಯಂತ ವ್ಯಾಪಿಸಿರುವ ಭಗವಂತನು "ಅಣೋರಣೀಯನು ಹಾಗೂ ಮಹತೋ ಮಹೀಯನು".  ಅವನ ವ್ಯಾಪ್ತಿಯಂತೆಯೇ ವ್ಯಾಪಿಸಿರುವ ಅವನ ನಾಮಗಳೂ ಕೂಡ ಮಹತ್ತಾದವುಗಳು.  ಭಗವಂತನ ಅಂಗಾಂಗಗಳಲ್ಲಿ ವ್ಯಾಪಿಸಿರುವ ಅವನ ಅನಂತ ನಾಮಗಳಿಗೂ ಅಭಿಮಾನಿ ದೇವತೆ ಲಕ್ಷ್ಮೀದೇವಿಯಾಗಿದ್ದಾಳೆ.  ಮಂಗಳಪ್ರದಳಾದ ಲಕ್ಷ್ಮೀದೇವಿಯು ನಿರವದ ಸೇವಿಸುವ, ಅಭಿಮಾನಿಸುವ ನಾಮಗಳು ಮಂಗಳಪ್ರದವೇ ಆಗಿವೆ.

ಸರ್ವಾಂಗಗಳಲ್ಲೂ ಮಿತಿಯಿಲ್ಲದಂತೆ ವ್ಯಾಪ್ತವಾಗಿರುವ ಭಗವಂತನ ಅಸಂಖ್ಯ, ಅನಂತ ನಾಮಗಳು  "ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಂ" ಎಂದು ವಿಷ್ಣು ಸಹಸ್ರನಾಮ ಧ್ಯಾನ ಶ್ಲೋಕಗಳಲ್ಲಿ ತಿಳಿಸಲ್ಪಟ್ಟಿದೆ.  ಪವಿತ್ರವೆಂದು ಪರಿಗಣಿಸಲ್ಪಡುವ ಎಲ್ಲಾ ವಸ್ತುಗಳನ್ನೂ ಪವಿತ್ರವಾಗಿಸುವುದೇ ಭಗವಂತನ ನಾಮದ ಮಹಿಮೆ.  ಶ್ರೀ ಪುರಂದರ ದಾಸರು "ನೀನ್ಯಾಯೋ ನಿನ್ನ ಹಂಗ್ಯಾಕೋ - ನಿನ್ನ - ನಾಮದ ಬಲವೆನಗಿದ್ದರೆ ಸಾಕೋ" ಎಂದು ನಾಮಕ್ಕಿರುವ ಶಕ್ತಿಯನ್ನು ತಿಳಿಸಿದ್ದಾರೆ.  ತಮ್ಮ ಇನ್ನೊಂದು "ನಿನ್ನ ನಾಮವಿದ್ದರೆ ಸಾಕೊ | ಮುನಿದರೆ ಮುನಿ ನಿನ್ನಾಣೆ ಶ್ರೀರಾಮ"  ಎಂಬ ಕೃತಿಯಲ್ಲಿ ನಾಮ ಸ್ಮರಣೆ ಮಾತ್ರದಿಂದಲೇ ಪಾಪಗಳೆಲ್ಲವೂ ಛಿನ್ನ ಛಿದ್ರವಾಗುವುದೆಂದೂ, ನಾಮದ ಬಲವೇ ತನ್ನ ಪಾಪವನ್ನು ಕೋಪದಿಂದಲಿ ತರಿದು,  ಕರ್ಮಗಳನ್ನೆಲ್ಲಾ ಝಾಡಿಸಿ, ತನ್ನನ್ನು ವೈಕುಂಠಕ್ಕೆ ಕೊಂಡೊಯ್ದು ಪರಮಾನಂದವನ್ನೀವುದು ಎಂದಿದ್ದಾರೆ.  ಮತ್ತೊಂದು ಕೃತಿ "ನಿನ್ನ ನಾಮವೆ ಎನಗೆ ಅಮೃತಾನ್ನವು" ಎಂಬುದರಲ್ಲಿ ಒಂದೊಂದು ನಾಮವನ್ನು ಜಪಿಸುತ್ತಿದ್ದರೆ ಒಂದೊಂದು ಭಕ್ಷ್ಯ ಸವಿದಂತಾಗುವುದೆಂದೂ,  ಭಗವಂತನೊಲಿದರೆ ಹಸಿವೆಯೆಂಬುದೇ ಇರುವುದಿಲ್ಲವೆಂದೂ ತಿಳಿಸಿದ್ದಾರೆ.  ಹೀಗಿದೆ ಭಗವಂತನ ನಾಮಸ್ಮರಣೆಯ ಶಕ್ತಿ ಹಾಗೂ ಮಹತ್ವ.  ಪರಮಪುರುಷನಾದ ಪರಮಾತ್ಮನನ್ನು ಧ್ಯಾನಿಸಿದರೆ, ದರ್ಶನ ಮಾಡಿದರೆ, ಧ್ಯಾನಿಸಿದರೆ, ಕೀರ್ತನೆ ಮಾಡಿದರೆ, ಸ್ತೋತ್ರ ಮಾಡಿದರೆ, ಪೂಜಿಸಿದರೆ, ಸ್ಮರಿಸಿದರೆ, ನಮಸ್ಕರಿಸಿದರೆ ಸರ್ವ ಪಾಪಗಳೂ ಪರಿಹಾರವಾಗುವುದು.  ಮಂಗಲಾನಾಂಚ ಮಂಗಲಂ ಎಂದರೆ ಸುಖಕ್ಕೆ ಸಾಧನವಾಗಿರುವುದು ಎಂದರ್ಥವಾಗುತ್ತದೆ.  ಎಲ್ಲಾ ಸಾಧನಗಳೂ ಕೂಡ ಪರಮಾನಂದ ಲಕ್ಷಣವಾದವುಗಳಾದ್ದರಿಂದಲೂ, ಪರಮಮಂಗಲವಾಗಿರುವುದರಿಂದಲೂ, ಭಗವಂತನು ಮಂಗಲಗಳಿಗೂ ಮಂಗಲ ಎಂದು ಸ್ತುತಿಸಲ್ಪಟ್ಟಿದ್ದಾನೆ.

ಪಾವನ ಮಾಳ್ಪುದೇನರಿದು -   ಪಾವನವೆಂದರೇ ಪವಿತ್ರವೆಂದೇ ಅರ್ಥವಾಗುತ್ತದೆ.  ಧರ್ಮದ ವಿಚಾರಗಳೆಲ್ಲವೂ ಪವಿತ್ರವಾದ ವಿಚಾರಗಳೇ ಮತ್ತು ಪಾಪಪರಿಹಾರಕ ವಿಚಾರಗಳೇ ಆಗಿವೆ.  ಆದರೆ ಪವಿತ್ರವಾದ ವಿಚಾರಗಳಲ್ಲಿಯೂ ಅತಿ ಪವಿತ್ರವಾದ ಭಗವಂತನ ವಿಚಾರಗಳನ್ನು ವಿವರಿಸಿವಾಗ "ಪಾವನ"ವೆಂಬ ಶಬ್ದ ವಿಶೇಷವಾಗಿ ಉಪಯೋಗಿಸಲ್ಪಡುತ್ತದೆ.  ಪಾವನ ಎಂದರೆ  ಪವಿತ್ರವಾಗಿರುವುದನ್ನೂ, ಶುದ್ಧವಾಗಿರುವುದನ್ನೂ ಇನ್ನೂ ಹೆಚ್ಚು ಪವಿತ್ರವಾಗಿಸುವುದು, ಶುದ್ಧವಾಗಿಸುವುದು ಎಂದು ಅರ್ಥೈಸಬಹುದು.  ವಿಷ್ಣು ಸಹಸ್ರನಾಮದಲ್ಲಿ "ಭೂತ ಭವ್ಯ ಭವನ್ನಾಥಃ ಪವನಃ ಪಾವನೋನಲಃ" - ಯಾರು ಅತಿ ಶುದ್ಧವಾಗಿರುವರೋ ಅವರು ಮತ್ತೆಲ್ಲವನ್ನೂ ಶುದ್ಧಮಾಡಬಲ್ಲವನೋ ಅವರು ’ಪಾವನನು’ ಎಂದು ತಿಳಿಸಲ್ಪಟ್ಟಿದೆ.  ಪವನಃ ಪಾವನೋನಲಃ ಎಂದರೆ ವಾಯುವನ್ನು ಯಾವಾಗಲೂ ಸಂಚರಿಸುವಂತೆ ಮಾಡುವವನು ಎಂಬ ಅರ್ಥವೂ ಆಗುತ್ತದೆ.  ಭಗವದ್ಗೀತೆಯ ೧೦ನೇ ಅಧ್ಯಾಯದ ೩೧ನೇ ಶ್ಲೋಕದಲ್ಲಿ ಭಗವಂತನು "ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್ | ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ" || -  ನಾನು ಪವಿತ್ರಗೊಳಿಸುವವರಲ್ಲಿ ವಾಯುವು, ಶಸ್ತ್ರಧಾರಿಗಳಲ್ಲಿ ಶ್ರೀರಾಮನು, ಮೀನುಗಳಲ್ಲಿ ಮೊಸಳೆಯೂ ಹಾಗೂ ನದಿಗಳಲ್ಲಿ ಭಾಗೀರಥಿ ಗಂಗೆಯು ನಾನೇ ಆಗಿದ್ದೇನೆ ಎಂದು ತಿಳಿಸಿದ್ದಾನೆ.

ಗಂಗೆಯ ಮಹಿಮೆಯನ್ನು ಮತ್ತು ಸರ್ವ ಪಾಪಗಳನ್ನು ನಶಿಸುವವಳೆಂಬುದನ್ನು ’ಸ್ಕಂದಮಹಾಪುರಾಣ’ದಲ್ಲಿ "ಓಂ ನಮಃ ಶಿವಾಯೈ ಗಂಗಾಯೈ ಶಿವದಾಯೈ ನಮೋ ನಮಃ | ನಮಸ್ತೇ ವಿಷ್ಣುರೂಪಿಣ್ಯೈ ಬ್ರಹ್ಮಮೂರ್ತ್ಯೈ ನಮೋಸ್ತುತೇ || ಎಂಬ ಸ್ತೋತ್ರದಲ್ಲಿ ವಿವರಿಸಲ್ಪಟ್ಟಿದೆ.  ಶ್ರೀ ಶಂಕರಾಚಾರ್ಯರು ಗಂಗೆಯ ಮಹಿಮೆಯನ್ನು ತಮ್ಮ ’ಗಂಗಾಷ್ಟಕಮ್’ ನಲ್ಲಿ "ಕಣಮಣು ಪರಿಮಾಣಂ ಪ್ರಾಣಿನೋ ಯೇ ಸ್ಪೃಶಂತಿ" - ನಿನ್ನ ಒಂದು ಕಣದ ಪರಮಾಣುವನ್ನು ಪ್ರಾಣಿಗಳು ಸ್ಪರ್ಶಿಸಿದರೆ ಪ್ರಾಣಿಗಳ ಕಲಿ ಕಲ್ಮಶಗಳನ್ನು ಜನ್ಮ ಜನ್ಮಾಂತರದ ಪಾಪಗಳನ್ನು ಪರಿಹರಿಸುತ್ತೀಯೇ ಎಂದು ಸ್ತುತಿಸಿದ್ದಾರೆ.    ಶ್ರೀಮದಾಚಾರ್ಯರು ತಮ್ಮ ’ಶ್ರೀ ಗಂಗಾಸ್ತೋತ್ರಮ್’ ನಲ್ಲಿ "ಹರಿಪದ ಪಾದ್ಯತರಂಗಿಣಿ ಗಂಗೇ".. "ತವ ಜಲಮಮಲಂ ಯೇನ ನಿಪೀತಂ ಪರಮಪದಂ ಖಲು ತೇಹ ಗೃಹೀತಂ" - ಗಂಗೆ ನಿನ್ನ ಜಲಪಾನ ಮಾಡಿದವರು ಪರಮಪದ ಹೊಂದುತ್ತಾರೆ, "ಪತಿತೋದ್ಧಾರಿಣಿ ಜಾನ್ಹವಿ ಗಂಗೇ" - ಪಾಪ ನಿವಾರಿಸುವ ಜಾನ್ಹವಿ ಗಂಗೇ, "ಕಲ್ಪಲತಾಮಿವ ಫಲದಾಂ ಲೋಕೇ" - ಕಲ್ಪವೃಕ್ಷದಂತೆ ಲೋಕದಲ್ಲಿ ಫಲನೀಡುವವಳೇ ಎಂದೆಲ್ಲಾ ಗಂಗೆಯ ಮಹಿಮೆಯನ್ನು ಸುಂದರವಾಗಿ ವರ್ಣಿಸಿದ್ದಾರೆ.  ಭಗವಂತನು ತ್ರಿವಿಕ್ರಮಾವತಾರವೆತ್ತಿದಾಗ ಅಂಗುಷ್ಠದ ನಖದ ಒಂದು ಸಣ್ಣ ಸ್ಪರ್ಶದಿಂದಲೇ ಧರೆಗಿಳಿದ ಗಂಗೆ ಅತ್ಯಂತ ಪಾವನಳು ಎನಿಸಿಕೊಂಡಳು.  ಭಗವಂತನ ಸರ್ವಾಂಗಗಳ ಸ್ಪರ್ಶವೇನಾಗಲಿಲ್ಲ ಮತ್ತು ಸ್ಪರ್ಶವು ಸಾರ್ವಕಾಲಿಕವಾಗಿಯೂ ಇಲ್ಲ.  ಆದರೂ ಆ ಜಲ ಅತಿ ಶುದ್ಧ, ಪವಿತ್ರ, ಪಾವನವೆನಿಸಿಕೊಂಡಿದೆ ಮತ್ತು ಗಂಗೆಯು ಮೂರೂ ಲೋಕಗಳ ಅಘ ಹಿಂಗಿಸುವವಳು ಎನಿಸಿಕೊಂಡಿದ್ದಾಳೆ.   ಶ್ರೀಹರಿಯ ಅನಂತಾನಂತ ನಾಮಗಳು ಅವನ ಸರ್ವಾಂಗೋಪಾಂಗಗಳಲ್ಲಿ ನೆಲೆಸಿ ಸದಾ ಸಾರ್ವಕಾಲಿಕ ಸಂಬಂಧ ಪಟ್ಟು, ವಾಚ್ಯವಾಗಿರುವಂತಹವು.  ಹಾಗೆಂದಮೇಲೆ ಮೂರುಲೋಕಗಳ ಅಘ ಹಿಂಗಿಸುವ ಗಂಗೆಗಿಂತಲೂ ಅತ್ಯಂತ ಪರಮ, ಪವಿತ್ರ ಹಾಗೂ ಪಾವನವು ಶ್ರೀಹರಿಯ ಅನಂತ ನಾಮಗಳು.  ಈ ನಾಮಗಳ ಅರ್ಚನೆ, ಉಪಾಸನೆ, ಸಂಕೀರ್ತನೆಗಳು ಸದ್ಗತಿಗೆ ಮಾರ್ಗವಾಗಿ, ಭಕ್ತರ ಸರ್ವ ಪಾಪಗಳನ್ನೂ ನಾಶಪಡಿಸುವುದೆಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲವು. 

ಕೇವಲ ನಖದ ತುದಿಯನ್ನು ಸ್ಪರ್ಶಿಸಿದ ಗಂಗೆಯೇ ಸರ್ವ ಪಾಪಗಳನ್ನು ತೊಳೆಯುವ ’ಅಮರ ತರಂಗಿಣಿ’ಯಾಗಬಹುದಾದರೆ, ಭಗವಂತನ ಸರ್ವ ಅಂಗಗಳನ್ನೂ, ಉಪಾಂಗಗಳನ್ನು ಸ್ಮರಿಸುವ, ಸ್ಪರ್ಶಿಸುವ ಅವನ ನಾಮಗಳು ಸುಮಂಗಳಪ್ರದವಾಗಿ, ಸ್ಮರಿಸುವವರೆಲ್ಲರನ್ನೂ ಪಾವನರನ್ನಾಗಿಸುವುದರಲ್ಲಿ ಯಾವ ಸಂಶಯವೂ ಇಲ್ಲ.  ಭಗವದ್ಗೀತೆಯ ೧೧ನೇ ಅಧ್ಯಾಯದ ೩೬ನೇ ಶ್ಲೋಕದಲ್ಲಿ ಅರ್ಜುನನು | ಸ್ಥಾನೇ ಹೃಷಿಕೇಶ ತವ ಪ್ರಕೀರ್ತ್ಯಾ ಜಗತ್ಪ್ರಹೃಷ್ಯತ್ಯನುರಜ್ಯತೇ ಚ | ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ || - ಹೇ ಅಂತರ್ಮಾಮಿಯೇ ನಿನ್ನ ನಾಮ, ಗುಣ ಮತ್ತು ಪ್ರಭಾವದ ಕೀರ್ತನೆಯಿಂದ ಜಗತ್ತು ಅತಿ ಹರ್ಷಿತವಾಗುತ್ತಾ, ಪ್ರೇಮ ವಿಹ್ವಲವಾಗುತ್ತಾ ಇದೆ.  ಹಾಗೆಯೇ ಭಯಗೊಂಡ ರಾಕ್ಷಸರು ಹತ್ತು ದಿಕ್ಕುಗಳಲ್ಲಿಯೂ ಓಡಿ ಹೋಗುತ್ತಿದ್ದಾರೆ.  ಹಾಗೂ ಸಿದ್ಧರ ಸಮುದಾಯವೆಲ್ಲ ನಮಸ್ಕರಿಸುತ್ತಿದೆ ಎಂದು ಭಗವಂತನನ್ನು ಸ್ತುತಿಸಿದ್ದಾನೆ. 

ಶ್ರೀ ಜಗನ್ನಾಥದಾಸರು ತತ್ವ ಸುವ್ವಾಲಿಯಲ್ಲಿ

ಜಲದೊಳಗೆ ಮಿಂದು ನಿರ್ಮಲರಾದೆವೆಂದು ತ-
ಮ್ಮೊಳು ತಾವೆ ಹಿಗ್ಗಿ ಸುಖಿಸೋರು | ಸುಖಿಸೋರು ಪರಮ ಮಂ-
ಗಳ ಮೂರ್ತಿ ನಿನ್ನ ನೆನೆಯದೆ || - ಭಗವಂತನ ನಖ ಸ್ಪರ್ಶದಿಂದಲೇ ಪವಿತ್ರಳಾದವಳೆಂದು ಗಂಗೆಯನ್ನು ಎಷ್ಟು ಕೊಂಡಾಡಿದರೂ ಕೂಡ ಗಂಗೇ ತಾನೇ ಸ್ವಯಂ ಪಾಪಗಳನ್ನು ಪರಿಹರಿಸಲಾರಳು.  ನಾವು ನಿರ್ಮಲರಾಗಬೇಕೆಂಬ ಇಚ್ಛೆ ನಮಗೆ ಇದ್ದರೆ, ನಾವು ಗಂಗೆಯಲ್ಲಿ ಮುಳುಗುವಾಗ ಭಗವಂತನನ್ನು ನೆನೆಯಬೇಕು.

ಜಡಭೂತಜಲ ಜನರ ಮಡಿಮಾಡಲಾಪರೆ
ಜಡಧಿ ಮಂದಿರನ ಶುಭನಾಮ | ಶುಭನಾಮ ಮೈಲಿಗೆಯ
ಬಿಡಿಸಿ ಮಂಗಳವ ಕೊಡದೇನೊ || - ಅಚೇತನರಾದ ನದ್ಯಾದಿ ಜಲಗಳು ಸ್ನಾನ ಮಾಡಿದ ಮಾತ್ರಕ್ಕೇ ನಮ್ಮ ಪಾಪಗಳನ್ನೆಲ್ಲಾ ತೊಳೆದು ಶುದ್ಧಮಾಡಬಲ್ಲದೇ ?  ಮನಸ್ಸಿಟ್ಟು ಭಗವಂತನ ಮಂಗಳನಾಮವನ್ನು ಸ್ಮರಿಸುತ್ತಾ, ಯಾವ ತೀರ್ಥ, ಯಾವ ಜಲದಲ್ಲಿ ಮುಳುಗಿದರೂ ಕೂಡ ಮನಸ್ಸಿನಲ್ಲಿಯ ಮೈಲಿಗೆಯನ್ನೆಲ್ಲಾ ತೊಳೆದು ಶುದ್ಧರಾಗಬಹುದು.

ಸ್ವಚ್ಛಗಂಗೆಯ ಒಳಗೆ ಅಚ್ಯುತನ ಸ್ಮರಿಸಿದೊಡೆ
ಅಚ್ಚಮಡಿಯೆಂದು ಕರೆಸೋರು | ಕರೆಸೋರು ಕೈವಲ್ಯ
ನಿಶ್ಚಯವು ಕಂಡ್ಯ ನಿಮಗಿನ್ನು || - ಪಾದಾಂಗುಷ್ಠದಿಂದ ಉದ್ಭವಿಸಿದ ಸ್ವಚ್ಛಳಾದ ಗಂಗೆಯಲ್ಲಿ ಮೀಯುವಾಗ ಭಗವಂತನಾದ ಅಚ್ಯುತನನ್ನು ಸ್ಮರಿಸಿಕೊಂಡರೆ ಸಾಕು ಸ್ವಚ್ಛವಾಗಿಯೂ, ಅಚ್ಚಮಡಿಯಾಗಿ, ಕೈವಲ್ಯವೇ ಪ್ರಾಪ್ತಿಯಾಗುವುದು ನಿಶ್ಚಯವು.

ಅನಘ ರೋಗಘ್ನ ಎಂದಿನಿತು ಮಂಗಳನಾಮ
ನೆನೆಯೆ ದುರಿತಗಳು ಬರಲುಂಟೆ | ಬರಲುಂಟೆ ಲೋಕದ
ಜನರ ಧನ್ವಂತ್ರಿ ಕಾಪಾಡೋ || - ಭಗವಂತನ ನಾಮಗಳದೆಷ್ಟು ಪವಿತ್ರ ಮತ್ತು ಮಂಗಳಕರವೆಂದರೆ, ಎಂತಹ ಭೀಕರ ರೋಗವಾದರೂ ಕೂಡ, ನಾಮಸ್ಮರಣೆ ಮಾಡುವುದರಿಂದಲೇ ರೋಗಮುಕ್ತರನ್ನಾಗಿಸುವ ವಿಶ್ವದ ವೈದ್ಯ ಧನ್ವಂತರಿದೇವನು ಎನ್ನುತ್ತಾರೆ.


ಚಿತ್ರಕೃಪೆ : ಅಂತರ್ಜಾಲ



Wednesday, March 12, 2014

ಕರುಣಾ ಸಂಧಿ - ೧೯ ನೇ ಪದ್ಯ


ಪಾಪಕರ್ಮವ ಸಹಿಸುವರೆ ಲ-
ಕ್ಷ್ಮೀಪತಿಗೆ ಸಮರಾದ ದಿವಿಜರ-
ನೀ ಪಯೋಜಭವಾಂಡದೊಳಗಾವಲ್ಲಿ ನಾ ಕಾಣೆ |
ಗೋಪ ಗುರುವಿನ ಮಡದಿ ಭೃಗು ನಗ-
ಚಾಪ ಮೊದಲಾದವರು ಮಾಡ್ದ ಮ-
ಹಾಪರಾಧಗಳೆಣಿಸಿದನೆ ಕರುಣಾಸಮುದ್ರ ಹರಿ  ||೧೯||
 

ಪ್ರತಿಪದಾರ್ಥ : ಪಾಪಕರ್ಮವ ಸಹಿಸುವರೆ - ಅಸುರಾವೇಶದಿಂದಾಗಲೀ ಅಜ್ಞಾನದಿಂದಾಗಲೀ ಮಾಡುವ ಪಾಪಕೃತ್ಯಗಳನ್ನು ಸಹಿಸಿಕೊಳ್ಳುವಲ್ಲಿ, ಲಕ್ಷ್ಮೀಪತಿಗೆ - ಲಕ್ಶ್ಮೀದೇವಿಯ ಪತಿಯಾದ ಶ್ರೀಹರಿಗೆ, ಸಮರಾದ - ಸಾಟಿಯಿಲ್ಲದ ಸಮವಿಲ್ಲದ, ದಿವಿಜರನು - ದೇವತೆಗಳನ್ನೂ, ಈ ಪಯೋಜ ಭವಾಂಡದೊಳಗೆ - ಈ ಬ್ರಹ್ಮಾಂಡದಲ್ಲಿ, ಆವಲ್ಲಿ ನಾ ಕಾಣೆ - ಎಲ್ಲಿಯೂ ನಾನು ಕಂಡಿಲ್ಲ, ಗೋಪ - ಎಂದರೆ ಸ್ವರ್ಗಾಧಿಪತಿ ಇಂದ್ರ (ಅತಿಶಯವಾಗಿ ಮಳೆ ಸುರಿಸಿ ಗೋವುಗಳಿಗೂ ಜನರಿಗೂ ಹಿಂಸೆ ಕೊಟ್ಟವನು) ಮತ್ತು ಗೋಪ ಎಂದರೆ ನಂದಗೋಪ ಗೋವುಗಳ ಪರಿಪಾಲಕ, ಗುರುವಿನ ಮಡದಿ - ದೇವಗುರು ಬೃಹಸ್ಪತಿಯ ಪತ್ನಿ ತಾರೆ ಚಂದ್ರನ ಸಂಗ ಮಾಡಿ ಬುಧನನ್ನು ಪಡೆದವಳು, ಭೃಗು - ತ್ರಿಮೂರ್ತಿಗಳಲ್ಲಿ ಶ್ರೇಷ್ಠರಾರೆಂದು ಪರೀಕ್ಷಿಸುವ ಸಂದರ್ಭದಲ್ಲಿ ಶ್ರೀ ಹರಿಯ ವಕ್ಷಸ್ಥಳಕ್ಕೆ ಪಾದಪ್ರಹಾರ ಮಾಡಿದವರು, ನಗಚಾಪ - ತ್ರಿಪುರಾಸುರಸ ಸಂಹಾರದಲ್ಲಿ ಈಶ್ವರ ವಿಷ್ಣುವನ್ನೇ ಬಾಣವಾಗಿ ಉಪಯೋಗಿಸಿದ ಮತ್ತು ರಾವಣನ ಸಂಹಾರದ ನಂತರ ಬೆಟ್ಟವನ್ನೇ ಧನುಸ್ಸಾಗಿಸಿಕೊಂಡು (ನಗಚಾಪ) ಶ್ರೀರಾಮನ ಮೇಲೆ ಉಪಯೋಗಿಸಿದ, ಮೊದಲಾದವರು - ಇವರುಗಳೆಲ್ಲ, ಮಾಡಿದ ಮಹಾಪರಾಧಗಳ - ಮಾಡಿದ ಇಂತಹ ಮಹಾ ಅಪರಾಧಗಳನ್ನೆಲ್ಲಾ, ಎಣಿಸಿದನೆ - ಲಕ್ಷ್ಯಕ್ಕೆ ತೆಗೆದುಕೊಂಡನೇ, ಕರುಣಾಸಮುದ್ರ ಹರಿ - ಕರುಣೆಯ ಸಾಗರವೇ ಆಗಿರುವಂತಹ ಶ್ರೀಹರಿ.                               

ಶ್ರೀಹರಿಯು ತನ್ನ ಭಕ್ತರು ಅವಿದ್ಯಾವಶಾತ್ ಅಸುರಾವೇಷಗಳಿಂದ ಮಾಡಿದ ಪಾಪಗಳನ್ನು ನಂತರ ಪಶ್ಚಾತ್ತಾಪ ಪಟ್ಟು ಕ್ಷಮೆ ಬೇಡಿದರೆ, ಕ್ಷಮಾಗುಣದಲ್ಲಿ  ಅಸೀಮನಾದುದರಿ೦ದ, ಭಗವ೦ತನು ಕ್ಷಮಿಸಿಬಿಡುತ್ತಾನೆ.  ಏಕೆಂದರೆ ಅಸುರಾವೇಶಾದಿಗಳು ಪಾಪ ಪರಿಹಾರವಾದ ಉತ್ತರದಲ್ಲಿ, ಅನುಸ೦ಧಾನಪೂರ್ವಕವಾಗಿ, ಬಿ೦ಬಕ್ರಿಯಾದ್ವಾರ ಪ್ರತಿಬಿ೦ಬಕ್ರಿಯಾದಿ೦ದ ಆದದ್ದೆ೦ದು ತಿಳಿದು ದೇವರನ್ನು ಪ್ರಾಥಿ೯ಸುವುದರಿ೦ದ, ಸಹನೆಯಿ೦ದ ಕ್ಷಮಿಸಿಬಿಡುತ್ತಾನೆ.  ಪಾಪ ಮಾಡಿದ ಗೋಪ ಎಂದರೆ ಚಂದ್ರನ ತಪ್ಪನ್ನೂ,   ಲೋಕಪಾಲಕನಾದ ಚಂದ್ರನ ಗುರುಪತ್ನಿ-ಗಮನ ದೋಷವನ್ನು ಕ್ಷಮಿಸಿದ.  ಗೋಪ ಎಂದರೆ ಸ್ವರ್ಗ ಪಾಲಕ ಇಂದ್ರನೆಂದೂ ಅರ್ಥ ಮಾಡಬಹುದು.  ಈ ದೇವೇಂದ್ರನನ್ನು ಪಾರಿಜಾತ ಪ್ರಸಂಗ, ಗೋವರ್ಧನಗಿರಿ ಪ್ರಸಂಗ, ಖಾಂಡವ ದಹನ, ಅಹಲ್ಯಾ ಪ್ರಸಂಗವೆಂಬಷ್ಟೂ ಅಪರಾಧಗಳನ್ನು ಕ್ಷಮಿಸಿದ್ದಾನೆ.  ಹಾಗೇ ಬೃಹಸ್ಪತಾಚಾರ್ಯರ ಪತ್ನಿ ತಾರಾದೇವಿಯ ಚಂದ್ರ ಪರಿಗ್ರಹಣವನ್ನೂ ಮನ್ನಿಸಿ ಪಂಚ ಪತಿವ್ರತೆಯರಲ್ಲಿ ಒಬ್ಬಳನ್ನಾಗಿ ಮಾಡಿದ.  ಇನ್ನು ನಗಚಾಪ ಎಂದರೆ ರುದ್ರ ದೇವರು.  ರುದ್ರದೇವರು ಬಾಣಾಸುರನ ಪ್ರಸಂಗದಲ್ಲಿ ಹರಿ ವಿರುದ್ಧ ಯುದ್ಧಕ್ಕೆ ನಿಂತವರು.  ರಾವಣ ಸಂಹಾರವಾದ ಮೇಲೆ ರಾಮನನ್ನೇ ಯುದ್ಧಕ್ಕೆ ಕರೆದರು.  ಅಂತಹ ರುದ್ರದೇವರನ್ನು ಸ್ನೇಹಿತನಂತೆ ಕಂಡಿದ್ದಾನೆ ಶ್ರೀಹರಿ.  ಭೃಗುಮುನಿಗಳು ಸರ್ವೋತ್ತಮರು ಯಾರೆಂದು ಪರೀಕ್ಷೆ ಮಾಡಲು ಹರಿಯ ಎದೆಯನ್ನೇ ಒದ್ದರು.  ಇನ್ನು ದ್ವಾಪರದಲ್ಲಿ ವ್ಯಾಧನಾಗಿ ಕೃಷ್ಣನ ಕಾಲಿಗೆ ಹಕ್ಕಿಯೆಂದು ತಿಳಿದು ಬಾಣದಲ್ಲಿ ಹೊಡೆದವರು. ಕ್ಷಮಾಮಹಿಮನಾದ ಪರಮಾತ್ಮ ಅಂತಹವರನ್ನು ಕೂಡಾ ಕ್ಷಮಿಸಿದ್ದಾನೆ, ತನ್ನ ಭಕ್ತರನ್ನು ಮಕ್ಕಳಂತೆ ಕಾಣುತ್ತಾನೆ.  ವಿಶೇಷ ಕಾರಣದಿಂದ ತಪ್ಪು ಮಾಡಿದರೂ ಕ್ಷಮೆಕೋರಿ ಪಶ್ಚಾತ್ತಾಪ ಪಡುತ್ತಾರೆ ಈ ಭಕ್ತರುಗಳು.  ದೇವತೆಗಳು ಮಾಡಿದ ಪಾಪಕರ್ಮವನ್ನು ಸಹಿಸುವ ರೀತಿಯಲ್ಲಿ ಪರಮಾತ್ಮನು ದೈತ್ಯರು ಮಾಡಿದ ಪಾಪಕರ್ಮವನ್ನು ಸಹಿಸುವುದಿಲ್ಲ. ಏಕೆ೦ದರೆ ದೇವತೆಗಳ೦ತೆ ಸ್ವಾಮಿಭೃತ್ಯನ್ಯಾಯದಿ೦ದ ಶ್ರೀಹರಿಯಲ್ಲಿ ಭಕ್ತಿ ಮಾಡದೆ, ದೈತ್ಯರು ದ್ವೇಷ ಮಾಡುವುದರಿ೦ದ, ಅವರ ಪಾಪಕೃತ್ಯಗಳನ್ನು ಕ್ಷಮಿಸುವುದಿಲ್ಲ."

ಪಾಪಕರ್ಮವ ಸಹಿಸುವರೆ -     ಪಾಪ ಕರ್ಮವನ್ನು ಭಗವಂತನಲ್ಲದೆ ಇನ್ಯಾವ ದೇವತೆಗಳೂ ಸಹಿಸುವುದಿಲ್ಲ.  ಹೀಗೇಕೆಂದರೆ ಅನ್ಯ ದೇವತೆಗಳೆಲ್ಲರೂ ಪರಮಾತ್ಮನ ಅನನ್ಯ ಭಕ್ತರು.  ಪರಮಾತ್ಮನ ನಿಂದನೆಯನ್ನಾಗಲೀ, ಅವನ ಪೂಜೆಯಲ್ಲಿ ಲೋಪವನ್ನಾಗಲೀ ಅನ್ಯ ದೇವತೆಗಳು ಸಹಿಸುವುದಿಲ್ಲ.  ಭಗವಂತನ ವಿಸ್ಮರಣೆಯನ್ನು ಕೂಡ ಬೇರೆ ದೇವತೆಗಳು ಸಹಿಸುವುದಿಲ್ಲ.  ಭಗವಂತ ಅದೆಷ್ಟು ಕರುಣಾಮಯಿಯೆಂದರೆ, ಅವನನ್ನು ಪೂಜಿಸುತ್ತೇವೆಂಬ ಸಂಕಲ್ಪ ಮಾಡಿದರೇ ಸಾಕು, ಪೂಜೆಯ ಪ್ರಾರಂಭದಲ್ಲೇ ಫಲಕೊಟ್ಟು, ರಕ್ಷಿಸುವನು.    ದಾಸರಾಯರು ತಮ್ಮ "ಕಾಯೋ ಕಾಯೋ" ಎಂಬ ಕೃತಿಯಲ್ಲಿ  "ನೀ ದಯ ಮಾಡದಿರೀ ದಿವಿಜರು ಒಲಿದಾದರಿಸುವರೆ ವೃಕೋದರ ವಂದ್ಯ" ಎಂದಿದ್ದಾರೆ.  ಪಾಪ ಕರ್ಮವೆಂದರೆ ನಿಷಿದ್ಧವಾದ, ಧರ್ಮ ಶಾಸ್ತ್ರಕ್ಕೆ ವಿರೋಧವಾದ ಕರ್ಮಗಳನ್ನು ಮಾಡುವುದು ಮತ್ತು ವಿಹಿತವಾದ ಕರ್ಮಗಳನ್ನೂ, ಅನುಷ್ಠಾನಗಳನ್ನೂ ಮಾಡದೇ ಇರುವುದು ಎಂದರ್ಥವಾಗುತ್ತದೆ.  ಶ್ರೀಹರಿಯ ವಿಸ್ಮರಣೆಗೆ ಕಾರಣವಾಗುವಂತಹ ಕರ್ಮಗಳೆಲ್ಲವೂ ಪಾಪಕರ್ಮಗಳಾಗುತ್ತವೆ.  ಸಜ್ಜನರು ಹರಿಸ್ಮರಣೆಯನ್ನು ಮರೆತರೆ ಶ್ರೀಹರಿ ಕುಪಿತನಾಗುತ್ತಾನೆ.  ಅದೂ ಕೂಡ ಅವನ ಕರುಣೆಯೆಂದೇ ತಿಳಿಯಬೇಕು.  ಏಕೆಂದರೆ ಮಕ್ಕಳು ತಪ್ಪು ಮಾಡಿದಾಗ ತಂದೆ-ತಾಯಿಗಳು ಮಕ್ಕಳ ಮೇಲೆ ಕುಪಿತರಾಗುತ್ತಾರೆ.  ಕೋಪಿಸಿಕೊಂಡರೂ, ಬುದ್ಧಿ ಹೇಳಿ ತಿದ್ದುತ್ತಾರೆ.  ಸಜ್ಜನರಿಗೂ, ಸದ್ಭಕ್ತರಿಗೂ ಭಗವಂತ ತಂದೆ-ತಾಯೆಯಾಗಿ ಕಾಪಾಡುತ್ತಾನೆ.  ಆದ್ದರಿಂದಲೇ ಸಜ್ಜನರು ತನ್ನ ಸ್ಮರಣೆಯನ್ನು ಮರೆತಾಗ ಕೋಪಿಸಿಕೊಂಡು, ಅವರಿಗೆ ಅರಿವು ಕೊಡುತ್ತಾನೆ.  ವಿಸ್ಮರಣೆಯಿಂದಾಗಿ ಅವರು ಮಾಡಿದ ಪಾಪಕರ್ಮವನ್ನು ಸಹಿಸುತ್ತಾನೆ.  ಎಲ್ಲಾ ದೇವತೆಗಳನ್ನೂ ಭಗವಂತನ ಪರಿವಾರವೆಂದು ಆರಾಧಿಸುವವರಿಗೆ ಮಾತ್ರ ಪಾಪ ಪರಿಹಾರವಾಗುತ್ತದೆ.  
ಶ್ರೀ ಜಗನ್ನಾಥದಾಸರು ತಮ್ಮ "ಆ ವೆಂಕಟಗಿರಿನಿಲಯನಂಘ್ರಿ ರಾಜೀವ ಯುಗಳಗಾ ನಮಿಸುವೆನು" ಎಂಬ ಕೃತಿಯಲ್ಲಿ
ಮನವಾಕ್ಕಾಯದಿ ಬಿಡದೆ ಸೇವಿಸುವ
ಜನರ ಸಂಚಿತ ಕುಕರ್ಮಗಳ
ಮನೆಯ ಮುರಿದು ಆಗಾಮಿ ಫಲಂಗಳ
ಅನುಭವಕೀಯದೆ ಪ್ರಾರಬ್ದಾ
ಉಣಿಸಿ ಸುಲಭದಲಿ ತನ್ನ ಮೂರ್ತಿ ಚಿಂ
ತನೆ ಇತ್ತು ಸ್ವರೂಪಸುಖಾ
ಅನುದಿನದಲಿ ವ್ಯಕ್ತಮಾಡಿಸಿ ಕೊ
ಟ್ಟನಿಮಿತ್ತಾಪ್ತನೆನಿಸುತಿಪ್ಪ || ಎಂದು ಸದಾ ಸರ್ವದಾ ಸೇವಿಸುವ ಭಕ್ತರ ಕುಕರ್ಮಗಳನ್ನು ಕಳೆದು ಉದ್ಧರಿಸುವನೆಂದು ತಿಳಿಸಿದ್ದಾರೆ. 

ಶ್ರೀಮದಾಚಾರ್ಯರು ತಮ್ಮ ’ಸದಾಚಾರ ಸ್ಮೃತಿ’ಯಲ್ಲಿ "ಸ್ಮರ್ತವ್ಯಃ ಸತತಂ ವಿಷ್ಣುಃ ವಿಸ್ಮರ್ತವ್ಯೋ ನ ಚಾತುಚಿತ್" ಎಂದಿದ್ದಾರೆ.  ಭಗವಂತನ ನಾಮಸ್ಮರಣೆಯನ್ನು ಭಕ್ತಿಯಿಂದ ಮಾಡಿದಾಗ ಮಾತ್ರ ಪಾಪ ಕರ್ಮಗಳನ್ನು ಕಳೆಯುವನು.  ಸುಮ್ಮನೆ ಮಾಡಬೇಕೆಂದಾಗಲೀ ಅಥವಾ ತಾನು ಮಾಡಿರುವ ಪಾಪಗಳನ್ನು ಕಳೆದುಕೊಳ್ಳಬೇಕೆಂದಾಗಲೀ ಮಾಡಬಾರದು.  ಹರಿನಾಮೋಚ್ಛಾರಣೆಯನ್ನು ಭಕ್ತಿರಹಿತವಾಗಿ ಮಾಡಿದರೆ ಅದು ದೋಷ ಅಥವಾ ಪಾಪವಾಗುತ್ತದೆ.  ಅದರಿಂದ ಪಾಪವು ಹೆಚ್ಚಾಗುತ್ತದೆ.  ಭಕ್ತಿ ಪೂರ್ವಕವಾಗಿ ನಾಮೋಚ್ಛಾರಣೆ ಮಾಡುವುದಕ್ಕೆ ಯಾವ ವಿಧಿ ವಿಧಾನ, ಆಸನ, ನಿಯಮವೆಂದು ಏನೂ ಇಲ್ಲ.  ಮನಸ್ಸನ್ನು ಭಗವಂತನ ಪಾದದಲ್ಲಿ ಸ್ಥಿರಗೊಳಿಸಿ, ನಾಮಸ್ಮರಣೆ ಮಾಡಬೇಕು.

ಭಾಗವತ ಆರನೇ ಸ್ಕಂದದ ಎರಡನೆಯ ಅಧ್ಯಾಯದಲ್ಲಿ
ಸರ್ವೇಷಾಮಪ್ಯಘವತಾಮಿದಮೇವ ಸುನಿಷ್ಕೃತಮ್ |
ನಾಮವ್ಯಾಹರಣಂ ವಿಷ್ಣೋರ್ಯತಸ್ತದ್ವಿಷಯಾ ಮಶಿಃ || - ಜೀವಿಯು ಯಾವ ವಿಧದ ಪಾಪವನ್ನೇ ಮಾಡಿದ್ದರೂ ಕೂಡ, ಅವನ ಎಲ್ಲಾ ಪಾತಕಗಳಿಗೂ ನಾರಾಯಣ ನಾಮವನ್ನು ಉಚ್ಛರಿಸುವುದೇ ಮುಖ್ಯವಾದ ಪ್ರಾಯಶ್ಚಿತ್ತವೆಂದು ತಿಳಿಸಲಾಗಿದೆ.  ಇದೇ ಸ್ಕಂದ ಹಾಗೂ ಅಧ್ಯಾಯದಲ್ಲಿ ಬರುವ ಅಜಾಮಿಳನ ಕಥೆಯಲ್ಲಿ ನಾರಾಯಣ ನಾಮೋಚ್ಛಾರಣೆಯ ಮಹತ್ವವನ್ನು ವಿವರಿಸಿದ್ದಾರೆ .  ಅಜಾಮಿಳನು ಮೊದಲಿಗೆ ಒಬ್ಬ ಸದಾಚಾರಿ ಬ್ರಾಹ್ಮಣನಾಗಿದ್ದನು.  ಆದರೆ ಒಂದು ದಿನ ಅವನು ಪೂಜೆಗಾಗಿ ಹೂವು, ಹಣ್ಣು ಹಾಗೂ ಸಮಿತ್ತುಗಳನ್ನು ತರಲು ಕಾಡಿಗೆ ಹೋಗಿದ್ದಾಗ ಹೆಣ್ಣಿನ ಮೋಹಕ್ಕೆ ಬಿದ್ದು ಸದಾಚಾರವನ್ನು ಬಿಟ್ಟು, ಧರ್ಮಪತ್ನಿಯನ್ನು ತೊರೆದ.  ಗಳಿಸಿದ್ದ ಸಂಪತ್ತೆಲ್ಲಾ ಕರಗಿ ಬೀದಿಗೆ ಬಿದ್ದ, ಕಳ್ಳತನ ಮಾಡಿ, ಜೂಜಾಡಿ ಹಣ ಸಂಪಾದಿಸಿದ.  ಅಷ್ಟುಹೊತ್ತಿಗೆ ಅಜಾಮಿಳನಿಗೆ ವಯಸ್ಸಾಗಿ, ಅಂತ್ಯಕಾಲ ಸಮೀಪಿಸಿತ್ತು.  ಯಮಕಿಂಕರರು ಬಂದು ಎಳೆದೊಯ್ಯುವಾಗ, ಭಯದಿಂದ ಅಜಾಮಿಳ ತನ್ನ ೮ ವರ್ಷದ ಕೊನೆಯ ಮಗನನ್ನು ’ನಾರಾಯಣ’ ಎಂದು ಕರೆದ.  ಮಗನ ಹೆಸರೆಂದು ಉಚ್ಛರಿಸಿದ ನಾಮ ಭಗವಂತನ ನಾಮವೆಂಬ ಸತ್ಯ ಅವನಿಗೆ ತನ್ನ ಪೂರ್ವ ಸಂಸ್ಕಾರದಿಂದ ತಿಳಿಯಿತು.  ಅರಿವು ಮೂಡಿದ ಅಜಾಮಿಳ ಭಕ್ತಿಪೂರ್ವಕವಾಗಿ ಭಗವಂತನ ನಾಮೋಚ್ಛಾರಣೆ ಮಾಡತೊಡಗಿದ.  ವಿಷ್ಣುದೂತರು ಬಂದು ಅವನನ್ನು ಬಿಡಿಸಿದರು.  ಅರಿವು ಮೂಡಿದ್ದ ಅಜಾಮಿಳ, ತಾನು ಅದುವರೆಗೆ ಮಾಡಿದ್ದ ಪಾಪಗಳನ್ನು ನೆನೆದು ಪಶ್ಚಾತ್ತಾಪಗೊಂಡು ಹರಿದ್ವಾರಕ್ಕೆ ಹೋಗಿ ನಿರಂತರ ಭಗವಂತನ ಸ್ಮರಣೆಯನ್ನು ಮಾಡುತ್ತಾ ಕಾಲಕಳೆದ.  ಕೊನೆಗೊಂದು ದಿನ ದಿವ್ಯವಿಮಾನದಲ್ಲಿ ವಿಷ್ಣುಲೋಕಕ್ಕೆ ತೆರಳಿದ.  ಈ ದೃಷ್ಟಾಂತದಿಂದ ಹರಿಸ್ಮರಣೆಯನ್ನು ಭಕ್ತಿಪೂರ್ವಕವಾಗಿಯೂ, ಶುದ್ಧ ಮನಸ್ಸಿನ ಪಶ್ಚಾತ್ತಾಪದಿಂದಲೂ ಮಾಡಿದಾಗ ಮಾತ್ರ ಪಾಪ ಪರಿಹಾರವಾಗುವುದೆಂಬುದು ಅರ್ಥವಾಗುತ್ತದೆ. 

ಶ್ರೀ ಪುರಂದರ ದಾಸರ ತಮ್ಮ "ಯಾರಿದ್ದರೇನಯ್ಯಾ ನೀನಿಲ್ಲದೆನಗಿಲ್ಲ" ಎಂಬ ಕೃತಿಯಲ್ಲಿ  |ಅಜಾಮಿಳನು ಕುಲಗೆಡಲು ಕಾಲದೂತರು ಬರಲು | ನಿಜಸುತನ ಕರೆಯೆ ನೀ ಅತಿ ವೇಗದಿ | ತ್ರಿಜಗದೊಡೆಯಾ ಪುರಂದರ ವಿಟ್ಠಲನ ಕರುಣದಲಿ | ನಿಜದೂತರನು ಕಳುಹಿ ಪೊರೆದೆಗಡ ಹರಿಯೇ || ಎಂದು ಅಜಾಮಿಳನ ಕಥೆಯನ್ನು ತಿಳಿಸಿದ್ದಾರೆ.

ಗೋಪ - ಗೋ ಎಂದರೆ ಮೇಲ್ನೋಟಕ್ಕೆ ಗೋವು, ಹಸು ಎಂಬರ್ಥವಿದ್ದರೂ ಕೂಡ, ಹಸುಗಳನ್ನು ಮೇಯಿಸುವವನೂ ಗೋಪನು.  ಇಂದ್ರನು ಕೃಷ್ಣನನ್ನು ಇಂತಹ ಒಬ್ಬ ಗೋಪನೆಂದು ತಿಳಿದು ಅಪರಾಧ ಮಾಡಿದ.  ಆ ಸಮಯದಲ್ಲಿ ಇಂದ್ರ ಸ್ವತಃ ಅಸುರಾವೇಶಕ್ಕೆ ಸಿಲುಕಿದ್ದ.  ಇಂದ್ರನೂ ’ಗೋಪ’ನೇ ಆಗುತ್ತಾನೆ, ’ಗೋ’ ಎಂದರೆ ಸ್ವರ್ಗ ಮತ್ತು ’ಪ’ ಎಂದರೆ ಅಧಿಪತಿ ಎಂದಾಗುತ್ತದೆ.  ಸ್ವರ್ಗಾಧಿಪತಿಯಾದ ಇಂದ್ರನೂ ಗೋಪನೇ ಆಗುತ್ತಾನೆ.  ಗೋವರ್ಧನಗಿರಿ ಪ್ರಕರಣದಲ್ಲಿ ಇಂದ್ರ ಕೃಷ್ಣನನ್ನು ಸಾಧಾರಣ ಗೋಪನೆಂದೇ ತಿಳಿದು ತಪ್ಪು ಮಾಡಿದ.  ಭಗವಂತ ಗೋವರ್ಧನಗಿರಿ ಎತ್ತಿ ಹಿಡಿದು ಭಕ್ತರನ್ನು ರಕ್ಷಿಸಿದ ಮತ್ತು ಇಂದ್ರನ ಅಹಂಕಾರವನ್ನು ದಮನ ಮಾಡಿದ.  ಹಾಗೇ ಪಾರಿಜಾತಪ್ರಕರಣದಲ್ಲಿ ಕೂಡ ಎಲ್ಲಾ ದೇವತೆಗಳನ್ನೂ ಸೇರಿಸಿಕೊಂಡು ಭಗವಂತನ ಮೇಲೆ ಆಕ್ರಮಣ ಮಾಡಿದ್ದ.  ಅಪರಾಧಗಳನ್ನು ಮಾಡಿ ಪಶ್ಚಾತ್ತಾಪದಿಂದ ಶರಣು ಬಂದಾಗ, ಭಗವಂತನು ಕರುಣೆಯಿಂದ ಇಂದ್ರನ ಈ ಎರಡೂ ಅಪರಾಧಗಳನ್ನೂ ಕ್ಷಮಿಸಿದ.

ಗುರುವಿನ ಮಡದಿ - ದೇವಗುರು ಭೃಹಸ್ಪತ್ಯಾಚಾರ್ಯರ  "ಮಡದಿ ತಾರೆಯನ್ನು," ಚಂದ್ರ ಮೋಹಿತಗೊಂಡು ಬಲಾತ್ಕಾರ ಮಾಡಿದಾಗ, ಅವಳು ಪ್ರತಿಭಟಿಸಲಿಲ್ಲ.  ಚಂದ್ರನನ್ನು ಸೇರಿ ’ಬುಧ’ನನ್ನು ಮಗನಾಗಿ ಪಡೆದಳು.  ಪತಿಯ ಶಿಷ್ಯನಾದ ಚಂದ್ರ ಅವಳಿಗೆ ಮಗನಿದ್ದಂತೆ.  ಹೀಗಿದ್ದರೂ ಅವಳು ಚಂದ್ರನನ್ನು ಪ್ರತಿಭಟಿಸದೇ ಇದ್ದದ್ದು ಮಹಾಪರಾಧವೇ.  ಆದರೆ ಪಶ್ಚಾತ್ತಾಪದಿಂದ ದಗ್ಧಳಾಗಿ ಬಂದು ಭಗವಂತನಲ್ಲಿ ಶರಣಾದಾಗ, ಭಗವಂತ ಅವಳನ್ನು ಈ ಅಪರಾಧಕ್ಕೆ ಶಿಕ್ಷಿಸಲಿಲ್ಲ.  ತಾರೆಯನ್ನು ಪ್ರಾತಃಸ್ಮರಣೀಯರಾದ ಪಂಚಕನ್ಯೆಯರಲ್ಲಿ ಒಬ್ಬಳನ್ನಾಗಿಸಿದ "ಕರುಣಾಮಯಿಯಾಗಿದ್ದಾನೆ.

ಭೃಗು - ಮಹಾಜ್ಞಾನಿಯಾದ ಭೃಗು ಋಷಿಗಳು ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರೆಂದು ನಿರ್ಣಯಿಸುತ್ತೇನೆಂದು ಹೊರಟಿರುತ್ತಾರೆ.  ವೈಕುಂಠಕ್ಕೆ ತೆರಳಿ ಅಲ್ಲಿ ಭಗವಂತ ರಮಾದೇವಿಯೊಡನಿರುವುದನ್ನು ಕಾಣುತ್ತಾರೆ.  ಕಣ್ಣು ಮುಚ್ಚಿ ಕುಳಿತ ಶ್ರೀಹರಿಯ ವಕ್ಷಸ್ಥಳಕ್ಕೆ ಕ್ರೋಧಾವೇಶದಿಂದ ಕಾಲಿನಿಂದ ಒದೆಯುತ್ತಾರೆ.  ಸರ್ವೋತ್ತಮನಾದ, ಸಾಕ್ಷಾತ್ ಭಗವಂತನಿಗೇ ಕಾಲಲ್ಲಿ ಒದ್ದು ಅಪರಾಧವೆಸಗುತ್ತಾರೆ.  ಪಾಪ ಮಾಡಿದ ಋಷಿಗಳು ಪಶ್ಚಾತ್ತಾಪ ಪಡುವುದಿಲ್ಲವಾದ್ದರಿಂದ ಅವರನ್ನು ಭಗವಂತ ಶಿಕ್ಷಿಸುತ್ತಾನೆ.  ಪರಮ ಜ್ಞಾನಿಯಾದ ಋಷಿಗಳನ್ನು, ಅವಿವೇಕಿ, ಅಜ್ಞಾನಿಯಾಗಿ ನೀಚಕುಲದಲ್ಲಿ ’ಜರಾ’ ಎಂಬ ಬೇಡನಾಗಿ ಹುಟ್ಟುವಂತೆ ಮಾಡುತ್ತಾನೆ.  ಬೇಡನಾಗಿ ಜರಾ ಬಿಟ್ಟ ಬಾಣವನ್ನು ಹೂವೆಂದು ಸ್ವೀಕರಿಸುತ್ತಾನೆ.  ಬಾಣ ಬಿಟ್ಟ ಬೇಡನಿಗೆ ತನ್ನ ಸ್ವರೂಪದ ಅರಿವನ್ನು ಕೊಡುತ್ತಾನೆ.  ಆಗ ಪಶ್ಚಾತ್ತಾಪದಿಂದ ಶರಣಾಗಿ, ತನ್ನ ಅಪರಾಧಕ್ಕೆ ಮತ್ತೆಂತಹ ಘೋರ ಶಿಕ್ಷೆಯನ್ನು ಕೊಡುವೆಯೋ ಪರಮಾತ್ಮ ಎಂದು ದುಃಖಿತರಾದಾಗ, ಭಗವಂತ ಅವರನ್ನು ಉದ್ಧರಿಸಿ ಕರುಣಾಸಾಗರನಾಗುತ್ತಾನೆ.

ನಗಚಾಪ - ನಗ ಎಂದರೆ ಬೆಟ್ಟವೆಂದು ಅರ್ಥ.  ಯಾರು ಬೆಟ್ಟವನ್ನೇ ಧನುಸ್ಸಾಗಿ ಮಾಡಿಕೊಂಡಿರುವನೋ ಅವನೇ ’ನಗಚಾಪ’ನಾದ, ಶಿವನು.  ಭಾಗವತದ ಸಪ್ತಮಸ್ಕಂದದಲ್ಲಿ ತ್ರಿಪುರಾಸುರರ ಸಂಹಾರದ ಕಥೆ ಬರುತ್ತದೆ.  ಮಯನ ಸಹಾಯದಿಂದ ಅಸುರರು ಬೆಳ್ಳಿ, ಬಂಗಾರ ಹಾಗೂ ಕಬ್ಬಿಣಗಳಿಂದ ಮಾಡಿದ ಮೂರು ಪಟ್ಟಣಗಳನ್ನು ಮಾಡಿಕೊಳ್ಳುತ್ತಾರೆ.  ಅದರಲ್ಲಿ ಅಡಗಿ ಸುರರನ್ನು ಪೀಡಿಸುತ್ತಾರೆ.  ದೇವತೆಗಳು ಶಿವನನ್ನ ಮೊರೆಹೋಗುತ್ತಾರೆ.  ಶಿವ ಪಾಶುಪತಾಸ್ತ್ರದಿಂದ ಎಲ್ಲವನ್ನೂ ಸುಟ್ಟುಬಿಡುತ್ತಾನೆ,  ಆದರೆ ಮಯನು ತಯಾರಿಸಿದ ಸಿದ್ಧಾಮೃತರಸದಲ್ಲಿ ಅಸುರರನ್ನು ಅದ್ದಿ ತೆಗೆದಾಗ ಅವರು ಇಮ್ಮಡಿ ಶಕ್ತಿಯಿಂದ ವಿಜೃಂಭಿಸುತ್ತಾರೆ.  ಶಿವನ ಸಹಾಯಕ್ಕೆ ಬಂದ ವಿಷ್ಣುವು ಗೋವಾಗಿಯೂ, ಬ್ರಹ್ಮ ಕರುವಾಗಿಯೂ ಬಂದು ಸಿದ್ಧಾಮೃತರಸವನ್ನು ಸಂಪೂರ್ಣವಾಗಿ ಕುಡಿದುಬಿಡುತ್ತಾರೆ.  ಆಕಳು ಮತ್ತು ವತ್ಸನನ್ನು ನೋಡಿದರೂ ಏನೂ ಮಾಡದೆ, ಕಾವಲಿದ್ದ ಅಸುರರು ಮೋಹಪಾಶಕ್ಕೆ ಒಳಗಾಗುತ್ತಾರೆ.  ಭಗವಂತ ಸಮಸ್ತ ದೇವತೆಗಳ ಶಕ್ತಿಗಳಿಂದ ಕೂಡಿದ ಆಯುಧಗಳನ್ನು ಶಿವನಿಗೆ ಒದಗಿಸುತ್ತಾನೆ.  ರಥ, ಸೂತ, ಧ್ವಜ, ಧನಸ್ಸು ಮತ್ತು ಕವಚಗಳನ್ನು ಕೊಟ್ಟು, ಅಭಿಮಾನಿ ದೇವತೆಗಳನ್ನು ನಿಲ್ಲಿಸುತ್ತಾನೆ .  ತಾನೇ ’ಬಾಣ’ರೂಪನಾಗಿ ಶಿವನ ಧನುಸ್ಸಿನಿಂದ ’ನಾರಾಯಣಬಾಣ’ವಾಗಿ ಅಸುರರ ಸಂಹಾರ ಮಾಡುತ್ತಾನೆ.   ಹೀಗೆ  ಭಗವಂತನು ತ್ರಿಪುರಾಸುರರ ಸಂಹಾರದ ಕೀರ್ತಿಯನ್ನು ಕೊಟ್ಟು ರುದ್ರದೇವರನ್ನು "ತ್ರಿಪುರಾರಿ" ಎನ್ನಿಸಿ, ಕರುಣಿಸಿದವನು.   ದಶಮಸ್ಕಂದದಲ್ಲಿ ಬಾಣಾಸುರನ ವಧೆಯ ಕಥೆ ತಿಳಿಸಲ್ಪಟ್ಟಿದೆ.   ಬಾಣಾಸುರನು ಬಲಿಚಕ್ರವರ್ತಿಯ ಮಗನು ಮತ್ತು ಸಾವಿರ ತೋಳುಗಳನ್ನು ಹೊಂದಿದ್ದನು.  ಒಮ್ಮೆ ಶಂಕರನ ತಾಂಡವ ನೃತ್ಯಕ್ಕೆ ಸಾವಿರಾರು ವಾದ್ಯಗಳನ್ನು ಒಟ್ಟಾಗಿ ನುಡಿಸಿ, ಪ್ರಸನ್ನಗೊಳಿಸಿ, ಶಿವ ತನ್ನ ಪಟ್ಟಣವನ್ನು ರಕ್ಷಣೆ ಮಾಡಬೇಕೆಂಬ ಕೋರಿಕೆಯನ್ನು ವರವಾಗಿ ಪಡೆಯುತ್ತಾನೆ.  ಒಮ್ಮೆ ಬಾಣಾಸುರನು ತನ್ನ ಸಾವಿರ ತೋಳುಗಳಿಂದ ಯುದ್ಧ ಮಾಡಿ ಜಯಿಸಲು ಸಮಾನರು ಯಾರೂ ಇಲ್ಲವೆಂಬ ಅಹಂಕಾರದಿಂದ ಮಾತಾಡುತ್ತಾನೆ. ಶಂಕರ ಅಂತಹ ಮಹಾತ್ಮನೊಬ್ಬ ಬರುವನೆಂದು ಎಚ್ಚರಿಸಿದ್ದನು.  ರುಗ್ಮಿಯ ಮಗಳು ರುಗ್ಮವತಿ ತನ್ನ ನೀತಪತಿಯಾದ ಪ್ರದ್ಯುಮ್ನನನ್ನು ವರಿಸಿ, ಅನಿರುದ್ಧನನ್ನು ಪುತ್ರನನ್ನಾಗಿ ಪಡೆಯುತ್ತಾಳೆ.  ಬಾಣಾಸುರನ ಮಗಳಾದ ಉಷೆ ತನ್ನ ನೀತಪತಿಯಾದ ಅನಿರುದ್ಧನನ್ನು ಮಿತ್ರಳಾದ ಚಿತ್ರಲೇಖೆಯ ಮೂಲಕ ಗಗನಮಾರ್ಗದಿಂದ ಕರೆಸಿಕೊಂಡು, ಗಾಂಧರ್ವ ವಿವಾಹವಾಗುತ್ತಾಳೆ.  ತನ್ನ ಮಗಳ ಅಂತಃಪುರದಲ್ಲಿ ಅನಿರುದ್ಧನಿರುವುದನ್ನು ತಿಳಿದು ಬಾಣಾಸುರನು ಯುದ್ಧ ಪ್ರಾರಂಭಿಸಿದನು.  ನಾರದರಿಂದ ಯುದ್ಧದ ವಿಷಯ ತಿಳಿದು ಶ್ರೀಕೃಷ್ಣನು ಬಾಣನ ಪಟ್ಟಣಕ್ಕೆ ಬಂದು ಸಮಸ್ತ ಸೈನ್ಯವನ್ನೂ ನಾಶಮಾಡಿದನು.  ಬಾಣಾಸುರವ ಪಟ್ಟಣವನ್ನು ರಕ್ಷಣೆ ಮಾಡುತ್ತೇನೆಂಬ ವರಕೊಟ್ಟಿದ್ದ ಶಿವನು ಅನಿವಾರ್ಯವಾಗಿ ಶ್ರೀಕೃಷ್ಣನೊಡನೆ ಯುದ್ಧಕ್ಕೆ ನಿಲ್ಲುತ್ತಾನೆ.  ಯುದ್ಧದಲ್ಲಿ ಪರಾಜಯಗೊಂಡ ಶಿವನು ತನ್ನ ಭಕ್ತನಾದ ಬಾಣನನ್ನು ಕೊಲ್ಲಬೇಡವೆಂದು ಶ್ರೀಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ.  ಭಗವಂತ ಬಾಣಾಸುರನ ೧೦೦೦ ತೋಳುಗಳನ್ನು ಕತ್ತರಿಸಿ, ಕೇವಲ ಎರಡು ತೋಳುಗಳನ್ನು ಉಳಿಸುತ್ತಾನೆ.  ತನಗೆ ಎದುರಾಗಿ ಯುದ್ಧಮಾಡಿದ ಶಂಕರನ ಅಪರಾಧವನ್ನು ಪರಿಗಣಿಸದೇ,  ಶಿವನ ಪ್ರಾರ್ಥನೆಯಂತೆ ಬಾಣನನ್ನು ಉಳಿಸಿ ಕರುಣಿಸುತ್ತಾನೆ.

ಪಾಪಕರ್ಮವನ್ನು ಸಹಿಸುವುದೆಂದರೆ ನಿಷಿದ್ಧ ಕರ್ಮಗಳನ್ನು ಮಾಡುತ್ತಲೇ ಇರುವುದನ್ನು ಸಹಿಸುವುದೆಂದರ್ಥವಲ್ಲ.  ಅಸುರಾವೇಶಕ್ಕೊಳಗಾಗಿ, ತಾಮಸ ಕರ್ಮಗಳನ್ನು ಮಾಡುತ್ತಾ ಯಾರು ಭಗವಂತನ ವಿಸ್ಮರಣೆ ಮಾಡುತ್ತಾರೋ ಅವರು ತಮ್ಮ ಕುಕರ್ಮಗಳಿಗೆ ತಕ್ಕ ಫಲವನ್ನು ಅನುಭವಿಸಲೇಬೇಕು.  ಆದರೆ ಯಾರು ತಮ್ಮ ಪಾಪಕರ್ಮಗಳನ್ನು ಅರಿತು ನಿಜವಾಗಿಯೂ ಪಶ್ಚಾತ್ತಾಪದಿಂದ ಭಗವಂತನ ಸ್ಮರಣೆ ಮಾಡುತ್ತಾರೋ, ಅಂತಹ ಪಾಪಕರ್ಮಗಳನ್ನು ಭಗವಂತನು ಸಹಿಸುತ್ತಾನೆಂದು ಅರ್ಥವಾಗುತ್ತದೆ.  ಹಾಗೆಂದು ಎಲ್ಲರಿಗೂ ಪ್ರಾಯಶ್ಚಿತ್ತ ಕರ್ಮಗಳು ಫಲಪ್ರದವಾಗುವುದಿಲ್ಲ.  ಪ್ರಾಯಶ್ಚಿತ್ತದಲ್ಲೂ ಯಾರು ಭಗವಂತನಿಗೆ ವಿನಮ್ರರಾಗಿರುತ್ತಾರೋ ಅವರಿಗೆ ಮಾತ್ರ ಇದು ಫಲಪ್ರದವಾಗುತ್ತದೆ.  ಯಾರು ಶುದ್ಧ ಭಕ್ತಿಯಿಂದ ಸ್ಮರಣೆ ಮಾಡುತ್ತಾರೋ ಅವರು ಪಾಪಿಗಳಾಗಿದ್ದರೂ ಕೂಡ ಭಗವಂತ ಅವರ ಅಪರಾಧಗಳನ್ನು ಸ್ಮರಿಸಿ, ಇಷ್ಟಾರ್ಥಗಳನ್ನು ಕರುಣೆಯಿಂದ ಪೂರೈಸುತ್ತಾನೆ.  ಶ್ರೀ ಕುಲಶೇಖರ್ ಆಳ್ವಾರ್ ವಿರಚಿತ ’ಮುಕುಂದಮಾಲಾ ಸ್ತೋತ್ರ’ದಲ್ಲಿ "ಶ್ರೀಮನ್ನಾಮ ಪ್ರೋಚ್ಯ ನಾರಾಯಣಾಖ್ಯಂ | ಕೇನ ಪ್ರಾಪುರ್ವಾಂಛಿತಂ ಪಾಪಿನೋSಪಿ|| - ನಾರಾಯಣ ಎಂಬ ನಾಮ ಸ್ಮರಣೆಯಿಂದ ಪಾಪಿಗಳೂ ಕೂಡ ಇಷ್ಟಾರ್ಥಗಳನ್ನು ಪಡೆಯುತ್ತಾರಾದ್ದರಿಂದ ಯಾರು ಬೇಕಾದರೂ ಭಗವನ್ನಾಮ ಸ್ಮರಣೆ ಮಾಡಬಹುದು ಎಂದಿದ್ದಾರೆ.

ಭಗವದ್ಗೀತೆಯಲ್ಲಿ ಭಗವಂತ
ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇSಪಿ ಸ್ಯುಃ ಪಾಪಯೋನಯಃ |
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇSಪಿ ಯಾಂತಿ ಪರಾಂ ಗತಿಮ್ || - ಎಲ್ಲೈ ಅರ್ಜುನ ಸ್ತ್ರೀಯರು, ವೈಶ್ಯರು, ಶೂದ್ರರು ಹಾಗೆಯೇ ಚಂಡಾಲರು / ಪಾಪಿಗಳು ಯಾರೇ ಆಗಿರಲಿ, ಅವರು ಕೂಡ ನನ್ನಲ್ಲಿ ಶರಣಾಗಿ ಪರಮ ಗತಿಯನ್ನೇ ಪಡೆಯುತ್ತಾರೆ ಎಂದಿದ್ದಾನೆ.

ಶ್ರೀ ಶಂಕರಾಚಾರ್ಯರು ತಮ್ಮ "ಗೋವಿಂದಾಷ್ಟಕಮ್" ನಲ್ಲಿ :
ಗೋವಿಂದಾಷ್ಟಕಮೇತದಧೀತೇ ಗೋವಿಂದಾರ್ಪಿತ ಚೇತಾಯೋ |
ಗೋವಿಂದಾಚ್ಯುತ ಮಾಧವ ವಿಷ್ಣೋ  ಗೋಕುಲನಾಯಕ ಕೃಷ್ಣೇತಿ ||
ಗೋವಿಂದಾಂಘ್ರಿ ಸರೋಜಧ್ಯಾನ ಸುಧಾಜಲಧೌತ ಸಮಸ್ತಾಘಃ |
ಗೋವಿಂದಂ ಪರಮಾನಂದಾಮೃತ ಮಂತಸ್ಥಂಸ ಸಮಭ್ಯೇತಿ || - ಯಾರು ಗೋವಿಂದನಿಗೆ ಮನವನ್ನರ್ಪಿಸಿ ಗೋವಿಂದ, ಅಚ್ಯುತ, ಮಾಧವ, ವಿಷ್ಣುವೇ, ಗೋಕುಲನಾಯಕ, ಕೃಷ್ಣನೆನ್ನುತ್ತ ಗೋವಿಂದನನ್ನು ಸ್ಮರಿಸುತ್ತಾರೋ ಅವರು ಗೋವಿಂದನ ಚರಣ ಕಮಲ ಸುಧಾಜಲದಿಂದ ಎಲ್ಲ ಪಾಪಗಳನ್ನೂ ತೊಳೆದು ತನ್ನಲ್ಲಿರುವ ಪರಮಾನಂದಾಮೃತ ರೂಪಿ ಗೋವಿಂದನನ್ನೇ ಪಡೆಯುವರು ಎಂದಿದ್ದಾರೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ವಸುವ್ವಾಲಿಯಲ್ಲಿ
ಪುಣ್ಯಪಾಪಾದಿಗಳು ನಿನ್ನಾಧೀನದೊಳಿರಲು
ಎನ್ನದೆಂದರುಹಿ ದಣಿಸುವಿ | ದಣಿಸುವುದು ಧರ್ಮವೇ
ನಿನ್ನರಿವ ಜ್ಞಾನ ಕರುಣಿಸೊ || -  ನೀನೇ ಸರ್ವಕರ್ತ, ಪುಣ್ಯಪಾಪಾದಿ ಕರ್ಮಗಳನ್ನು ಮಾಡಿ, ನಿನ್ನ ಅಧೀನನು, ದಾಸನೂ ಆದ ನನ್ನಿಂದ ಮಾಡಿಸುವೆ ಎಂಬ  ಜ್ಞಾನವನ್ನು ನನಗೆ ಕೊಟ್ಟು, ಆ ಮೂಲಕ ಪಾಪಪುಣ್ಯಗಳ ಲೇಪನವಾಗದಂತೆ ಅನುಗ್ರಹಿಸು ಎಂದಿದ್ದಾರೆ.

ಪಾಪ ಪುಣ್ಯಗಳು ಬರಲಾಪವೆ ನಿನ್ನುಳಿದು
ಪ್ರಾಪಕನು ನೀನೆ ಇರಲಾಗಿ | ಇರಲಾಗಿ ತಿಳಿಯದುದೆ
ಪಾಪ ತಿಳಿಯುವುದೆ ಮಹಪುಣ್ಯ || - ಭಗವಂತ ಪಾಪಪುಣ್ಯಗಳೆಲ್ಲಕ್ಕೂ ನೀನೇ ಪ್ರಾಪಕನು ಎಂದು ಅರಿಯದಿರುವುದೇ ಪಾಪ ಹಾಗೂ ಸರ್ವನಿಯಾಮಕ ನೀನೇ ಎಂಬುದನ್ನು ತಿಳಿಯುವುದೇ ಪುಣ್ಯ ಎಂದಿದ್ದಾರೆ.

ಡಿವಿಜಿಯವರು ಕಗ್ಗದಲ್ಲಿ "ಪುಣ್ಯಪಾಪ ಋಣಾನುಬಂಧ ವಾಸಗೆಗಳಿವು | ಜನ್ಮಾಂತರದ ಕರ್ಮಶೇಷದಂಶಗಳು|| ಎಂದಿದ್ದಾರೆ.  ಎಲ್ಲದಕ್ಕೂ ಭಗವಂತನೇ ಕಾರಣವೆಂಬುದನ್ನು "ಪಾರಬ್ಧ ಕರ್ಮಮುಂ ದೈವಿಕದ ಲೀಲೆಯುಂ" ಎಂದಿದ್ದಾರೆ.  ಭಗವಂತನಿಗೆ ಶರಣಾಗದ "ಪಾಪಿಯನ್ನು ಪ್ರೋತ್ಸಹಿಸಿ (ಪಾಪಕರ್ಮಗಳನ್ನೇ ಮಾಡುವ ಪ್ರೇರಣೆ ಕೊಡುವುದು) ಸುಕೃತಿಯ ಪರೀಕ್ಷಿಸುತ ವೇಪಿಪನು ವಿಧಿ" - ಸುಜೀವಿಗಳನ್ನು ನಾನಾವಿಧವಾಗಿ ಪರೀಕ್ಷಿಸುತ್ತಾ ಪಕ್ವ ಮಾಡುತ್ತಾನೆ.  ಭೂಮಂಡಲದಲ್ಲಿ ಒಂದು ಸತ್ವಯುತವಾದ ಪಾಕವನ್ನು ಭಗವಂತ ತಯಾರಿಸುತ್ತಾನೆಂಬುದನ್ನು "ತಾಪಿಸುತೆ ತಣಿಯಿಸುತೆ ಕುಲುಕಿಸುತೆ ಋತುವೈದ್ಯ | ಭೂಪುಟದಿ ಜೀವರಸಗಳ ಪಚಿಸುವಂತೆ" || - ಸೂರ್ಯ ತನ್ನ ತಾಪದಿಂದ ಭೂಮಂಡಲದ ವಸ್ತುಗಳನ್ನು ಕಿರಣಗಳ ಮೂಲಕ ಗ್ರಹಿಸಿ ಪಾಕ ಮಾಡುತ್ತಾನೆ ಮತ್ತು ವೈದ್ಯನಾಗಿ ಋತುಗಳ ಮೂಲಕ ಸುಡುತ್ತಾನೆ, ಮಳೆಗೆ ಕಾರಣನಾಗಿ ತಂಪು ಮಾಡುತ್ತಾನೆ, ಪ್ರವಾಹ, ಭೂಕಂಪಗಳನ್ನು ಮಾಡಿ ಕುಲುಕಿಸುತ್ತಾನೆ.  ಹೀಗೆ ಮಾಡಿ ಪಾಕ ಸೃಷ್ಟಿಮಾಡಿ ಪಾಪಿಗಳನ್ನು ಪ್ರಚೋದಿಸಿ, ಸುಕೃತಿಗಳನ್ನು ತಾವು ಮಾಡಿದ ಒಳ್ಳೆಯ ಕರ್ಮಗಳ ಮೂಲಕ ಪರೀಕ್ಷಿಸಿ ಅವರವರಿಗೆ ತಕ್ಕುದಾದ ಗತಿಯನ್ನು ಕೊಡುತ್ತಾನೆ ಎಂದಿದ್ದಾರೆ.  ಒಟ್ಟಿನಲ್ಲಿ ಎಲ್ಲಕ್ಕೂ ಆ ಭಗವಂತನೇ ಒಡೆಯ ಸರ್ವಸ್ವತಂತ್ರ ಮತ್ತು ಕಾರಣಪುರುಷ ಎಂಬುದನ್ನು "ಒಟ್ಟಿನಲಿ ತತ್ತ್ವವಿದು ವಿಕಟರಸಿಕನೊ ಧಾತ | ತೊಟ್ಟಿಲನು ತೂಗುವನು, ಮಗುವ ಜಿಗುಟುವನು"| ಎಂಬ ಮಾತಿನಲ್ಲಿ ವ್ಯಕ್ತಪಡಿಸಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ

Friday, February 28, 2014

ಕರುಣಾ ಸಂಧಿ - ೧೮ ನೇ ಪದ್ಯ

ಭುವನ ಪಾವನಚರಿತ ಪುಣ್ಯ
ಶ್ರವಣ ಕೀರ್ತನ ಪಾಪನಾಶನ
ಕವಿಭಿರೀಡಿತ ಕೈರವದಳ ಶ್ಯಾಮ   ನಿಸ್ಸೀಮ |
ಯುವತಿ ವೇಷದಿ ಹಿಂದೆ ಗೌರೀ
ಧವನ ಮೋಹಿಸಿ ಕೆಡಿಸಿ ಉಳಿಸಿದ
ಇವನ ಮಾವಯ ಗೆಲುವನಾವನು ಈ ಜಗತ್ರಯದಿ  ||೧೮||

ಪ್ರತಿಪದಾರ್ಥ : ಭುವನ ಪಾವನಚರಿತ - ೧೪ ಲೋಕಗಳನ್ನೂ ಪವಿತ್ರಗೊಳಿಸುವಂತಹ ಮಹಿಮೆಯ ಕಥೆಯನ್ನುಳ್ಳವನು, ಪುಣ್ಯ ಶ್ರವಣ ಕೀರ್ತನ - ತನ್ನ ಕಥಾ ಶ್ರವಣ ಮಾಡುವವರಿಗೂ ಶ್ರವಣ ಮಾಡುವವರಿಗೂ ಪುಣ್ಯ ಕೊಡುವವನು, ಪಾಪನಾಶನ - ಸಮಸ್ತ ಪಾಪಗಳನ್ನೂ ನಾಶ ಮಾಡುವವನು, ಕವಿಭಿರೀಡಿತ - ಕವಿ ಎಂದರೆ ಜ್ಞಾನಿಗಳು ಈ ಡಿತ ಎಂದರೆ ಸ್ತುತನಾದವನು ಎಂದರ್ಥ, ಕೈರವದಳ ಶ್ಯಾಮ - ನೈದಿಲೆ ದಳದ ನೀಲವರ್ಣದಂತೆ ವಿಶಿಷ್ಟವಾದ ಕಾಂತಿಯುಳ್ಳವನು, ನಿಸ್ಸೀಮ - ದೇಶ ಕಾಲ ಗುಣಗಳಲ್ಲಿ ಮಿತಿಯಿಲ್ಲದವನು, ಯುವತಿ ವೇಶದಿ - ಸಮುದ್ರ ಮಥನ ಸಮಯದಲ್ಲಿ ಮೋಹಿನಿ ವೇಷ ಧರಿಸಿ, ಹಿಂದೆ - ಶಿವ ಮೋಹಿನಿ ರೂಪವನ್ನು ನೋಡಬೇಕೆಂದು ಪ್ರಾರ್ಥಿಸಿದಾಗ, ಗೌರಿಧವನ - ಪಾರ್ವತಿ ಪತಿಯಾದ ಶಿವನ, ಮೋಹಿಸಿ - ಮೋಹಗೊಳಿಸಿ, ಕೆಡಿಸಿ - ಆ ಸಮಯದಲ್ಲಿ ಶಿವನಿಗೆ ಅಜ್ಞಾನ ಕೊಟ್ಟು, ಉಳಿಸಿದ - ರಕ್ಷಿಸಿದ, ಇವನ ಮಾಯವ ಗೆಲುವನಾವನು - ಭಗವಂತನಾದ ಶ್ರೀಹರಿಯ ಮಾಯೆಯನ್ನು ಯಾರಿಂದ ಗೆಲ್ಲಲು ಸಾಧ್ಯವಿದೆ, ಈ ಜಗತ್ರಯದಿ - ಮೂರು ಲೋಕಗಳಲ್ಲಿಯೂ.
 

ಚತುರ್ದಶ ಲೋಕಗಳಲ್ಲಿ ಪವಿತ್ರತರವಾದ ಚರಿತ್ರೆಗಳುಳ್ಳ ಜೀವರು ಮೋಕ್ಷ ಪಡೆಯುವುದಕ್ಕಾಗಿ ಪುಣ್ಯಕಾರ್ಯವಾದ ಸಚ್ಚಾಸ್ತ್ರಗಳ ಶ್ರವಣ ಮತ್ತು ಪಠಣ ಮಾಡುವುದರಿ೦ದ, ಇ೦ತಹ ಸುಜೀವರ ಪಾಪನಾಶನೂ ಆದ  ಭಗವ೦ತನು, ಬ್ರಹ್ಮಾದಿ ದೇವತೆಗಳಿಂದ ಸ್ತುತಿಸಲ್ಪಟ್ಟವನೂ,  ನೈದಿಲೆಯಂತೆ ನೀಲವರ್ಣದವನೂ, ವಿಶಿಷ್ಟವಾದ ಕಾಂತಿಯುಳ್ಳವನೂ ಆಗಿರುವ ಮಹಾ ನಿಸ್ಸೀಮನು. ಬ್ರಹ್ಮಜ್ಞಾನಿಗಳಿ೦ದ ಸ್ತುತ್ಯನಾದ ಅತ್ಯ೦ತ ಪರಾಕ್ರಮಶಾಲಿಯೂ ಆಗಿದ್ದಾನೆ.   ಅಮೃತ ಮಂಥನ ಕಾಲದಲ್ಲಿ ಇವನು ಧರಿಸಿದ ಮೋಹಿನಿ ವೇಷವನ್ನು ನೋಡಲಿಲ್ಲವೆಂದು ಪಾರ್ವತೀ ಪತಿಯಾದ ರುದ್ರನು ಕೇಳಿದಾಗ, ಮೋಹಿನಿ ರೂಪವನ್ನು ತಾಳಿ ನಿಂತ ವಿಷ್ಣುವನ್ನು ಹೆಣ್ಣೆಂದೇ ಭಾವಿಸಿ, ರುದ್ರನು ವರ್ತಿಸಿದಾಗ, ಅಜ್ಞಾನವನ್ನು ಕೊಟ್ಟು ಕೆಡಿಸಿ, ನ೦ತರ ಜ್ಞಾನವನ್ನು ಕೊಟ್ಟು ಸ೦ರಕ್ಷಣೆ ಮಾಡುತ್ತಾನೆ. ಇಂತಹವನ ಮಾಯೆಯನ್ನು ಮೂರು ಜಗದಲ್ಲಿ ಯಾರಿಗಾದರೂ ಗೆಲ್ಲಲು ಸಾಧ್ಯವೇ ?  ಮನ್ಮಥ ದಹನ ಮಾಡಿದ ಫಾಲಾಕ್ಷನದೇ ಈ ಪಾಡಾದ ಮೇಲೆ ಬೇರೆಯವರ ಪಾಡೇನು ? 

ಹಿಂದಿನ ಪದ್ಯದಲ್ಲಿ ಶ್ರೀ ಜಗನ್ನಾಥದಾಸರು ಶ್ರೀಹರಿಯು ಸಜ್ಜನ ಭಕ್ತರಿಗೆ ಕರುಣಿಸುವ ಮೋಕ್ಷಸುಖದ ವಿಷಯವನ್ನು ತಿಳಿಸಿದ್ದರು.  ಈ ಪದ್ಯದಲ್ಲಿ, ಭಕ್ತನು ಸಂಸಾರದಲ್ಲಿದ್ದರೂ, ಅವನಿಗೆ ವಿಷಯ ಸುಖಗಳನ್ನು ನೀಡಿ, ಆ ಸುಖದಲ್ಲಿಯೇ ಅವನು ಮುಳುಗದಂತೆಯೂ ಎಚ್ಚರಿಸುವ, ರಕ್ಷಿಸುವ ಭಗವಂತನ ಕಾರುಣ್ಯವನ್ನು ವಿವರಿಸುತ್ತಾರೆ.  ಭಗವಂತನ ಕಾರುಣ್ಯಕ್ಕೆ ಮಿತಿಯಿಲ್ಲವೆಂಬುದಕ್ಕೆ,  ಅತ್ಯದ್ಭುತವಾದ, ಅತಿಶಯ ಸುಂದರವಾದ ಮೋಹಿನೀ ರೂಪವನ್ನು ನೋಡಿ ಮೋಹಿಸಿದ ರುದ್ರದೇವರ ದೃಷ್ಣಾಂತವನ್ನು ತಿಳಿಸಿದ್ದಾರೆ.  ಭಗವಂತನ ಗುಣಗಳನ್ನು ಅನೇಕ ವಿಶೇಷ ಪದಪುಂಜಗಳಿಂದ ವರ್ಣಿಸಿದ್ದಾರೆ.   

ಭುವನಪಾವನಚರಿತ - ಭಗವಂತನ ಪಾವನವಾದ ಪುಣ್ಯಕರವಾದ ಚರಿತ್ರೆಯನ್ನು ಕೇಳುವುದರಿಂದ ಭೂಮಂಡಲದ ಸಕಲ ಜೀವರಾಶಿಗಳಿಗೂ ಪುಣ್ಯ ಬರುತ್ತದೆ.  ಆದ್ದರಿಂದಲೇ ಭಗವಂತನು ಭುವನ ಪಾವನ ಚರಿತನು.  ಶ್ರೀಹರಿಯ ಕಥೆಯನ್ನು ಶ್ರವಣ ಮಾಡುವುದರಿಂದಲೇ ಅವನು ಭಕ್ತರ ಶ್ರವಣೇಂದ್ರಿಯಗಳ ಮೂಲಕ ಹೃದಯಕ್ಕೆ ಪ್ರವೇಶಿಸಿ, ಅಲ್ಲಿ ತುಂಬಿರುವ ಪಾಪಗಳನ್ನೆಲ್ಲಾ ನಾಶಮಾಡುತ್ತಾನೆ.

ಪುಣ್ಯಶ್ರವಣಕೀರ್ತನ - ಯಾರ ಗುಣಗಳನ್ನು ಉಪಾಸಿಸುವುದರಿಂದಲೂ, ಶ್ರವಣ ಮಾಡುವುದರಿಂದಲೂ, ಹೃದಯದಲ್ಲಿ ತುಂಬಿಸಿಕೊಳ್ಳುವುದರಿಂದಲೂ, ಅರಿಯುವ ಪ್ರಯತ್ನ ಮಾಡುವುದರಿಂದಲೂ ಮತ್ತು ಅರಿತ ಕಿಂಚಿತ್ತನ್ನು ಮತ್ತೊಬ್ಬರಿಗೆ ತಿಳಿಸುವೆವೋ, ಅವನು ಪುಣ್ಯಶ್ರವಣಕೀರ್ತನನು.  ಭಾಗವತದಲ್ಲಿ ಲಕ್ಷ್ಮೀದೇವಿಯಲ್ಲಿರುವ ಭಕ್ತಿ ಬೇರೆ ಯಾರಲ್ಲೂ ಇಲ್ಲವೆಂದೂ, ಭಗವಂತನ ಮಂಗಳಕರವಾದ ಕೀರ್ತಿಯನ್ನು ಆವೃತ್ತಿಮಾಡುವ ಇಚ್ಛೆಯಿಂದಲೂ ಮತ್ತು ಭಗವಂತನ ಗುಣಗಳ ಉಪದೇಶವನ್ನು ಹೊಂದಬೇಕೆಂಬ ಇಚ್ಛೆಯಿಂದಲೂ, ಸಾಕ್ಷಾತ್ ಲಕ್ಷ್ಮೀದೇವಿಯೇ ಸದಾ ಕಾಲವೂ ಭಗವಂತನ ಪುಣ್ಯಕೀರ್ತಿಯ ಶ್ರವಣವನ್ನು ಅಪೇಕ್ಷಿಸುವಳು ಎಂಬ ಮಾತು ಉಲ್ಲೇಖವಾಗಿದೆ.  ವಿಷ್ಣು ಸಹಸ್ರನಾಮದಲ್ಲಿ "ಪುಣ್ಯಕೀರ್ತಯೇ ನಮಃ" ಮತ್ತು "ಪುಣ್ಯಶ್ರವಣಕೀರ್ತನಾಯ ನಮಃ" ಎಂದಿದೆ.  ಭಗವಂತನು ಅನಂತ ಕಲ್ಯಾಣ ಗುಣ ಸಂಪನ್ನನು. ಅವನ ತೇಜಸ್ಸು ಅದ್ಭುತ ಹಾಗೂ ಅವನ ಕೀರ್ತಿ ಅಪಾರ.  ಭಗವಂತನ ಅಪಾರ ಕೀರ್ತಿಯನ್ನು ಸದಾ ಧ್ಯಾನಿಸುವವರಿಗೆ ಯಶಸ್ಸು ಖಂಡಿತವಾಗಿ ಸಿಕ್ಕುವುದು.  ಭಗವಂತನ ಅಪಾರ ಮಹಿಮೆಯನ್ನು ಕೇಳುವುದರಿಂದಲೇ ಆತ್ಮಲಾಭ, ಆತಿಶಯಾನಂದ, ನಿರತಿಶಯ ಸುಖವು ಲಭಿಸುವುದು ಮತ್ತು ಪುಣ್ಯ ಪ್ರಾಪ್ತಿಯಾಗುವುದು.  ಭಗವಂತನ ಸಾಕ್ಷಾತ್ಕಾರವಾದವರಿಂದ ಭಗವಂತನ ಅಚಿಂತ್ಯ ಮಹಿಮೆಯನ್ನು ಕೇಳುವುದೇ ಸದ್ಗತಿಗೆ ದಾರಿಯಾಗುತ್ತದೆ.  ಭಾಗವತದಲ್ಲಿ ತಿಳಿಸಿರುವಂತೆ ಪರೀಕ್ಷಿತ್ ಮಹಾರಾಜ ಭಗವಂತನ ಪುಣ್ಯ ಕಥೆಯನ್ನು ಶ್ರವಣ ಮಾಡಿಯೇ ಸದ್ಗತಿ ಪಡೆದನು.  ಭಾಗವತದ ಮೊದಲನೇ ಸ್ಕಂದದಲ್ಲಿ "ಶೃಣುತ್ವಾಂ ಸ್ವಕಥಾಂ ಕೃಷ್ಣಃ ಪುಣ್ಯಶ್ರವಣಕೀರ್ತನಃ | ಹೃದ್ಯಂತಃಸ್ಥೋ ಹ್ಯಭದ್ರಾಣಿ ವಿಧುನೋತಿ ಸುಹೃತ್ ಸತಾಮ್"|| - ಪುಣ್ಯಶ್ರವಣಕೀರ್ತನ ಎಂಬ ನಾಮವುಳ್ಳವನಾದ ಶ್ರೀಕೃಷ್ಣ ಪರಮಾತ್ಮನು ತನ್ನ ಕಥೆಯನ್ನು ಕೇಳುವವರ ಅಂತಃಕರಣದೊಳಗೆ ಪ್ರವೇಶಿಸುತ್ತಾನೆ ಮತ್ತು ಅವರ ಸಕಲ ಪಾಪಗಳನ್ನೂ ಪರಿಹರಿಸುತ್ತಾನೆ ಎಂಬ ಮಾತು ತಿಳಿಸಲಾಗಿದೆ.  ಬೃಹದಾರಣ್ಯಕ ಉಪನಿಷತ್ತಿನ ಪಂಚಮಾಧ್ಯಾಯದ ಎರಡನೆಯ ಶಾಖೆಯಲ್ಲಿ "ಪುಣ್ಯೋ ವೈ ಪುಣ್ಯೇನ ಕರ್ಮಣಾ ಭವತಿ" - ಪುಣ್ಯ ಕರ್ಮಗಳನ್ನು ಮಾಡುವುದರಿಂದ ಮನುಷ್ಯನು ಪುಣ್ಯವಂತನಾಗುತ್ತಾನೆ ಎಂಬ ಉಲ್ಲೇಖವಿದೆ.  ಭಗವಂತನ ಗುಣಗಳನ್ನು ಉಪಾಸಿಸುವುದೇ ಜೀವಿ ಮಾಡಬಹುದಾದ ಪುಣ್ಯ ಕರ್ಮವು.  ಸದಾ ನಿರತವೂ ಸಂಕೀರ್ತನೆಯನ್ನು ಮಾಡುತ್ತಾ, ಶ್ರವಣ ಮಾಡುತ್ತಾ ಇರುವುದರಿಂದ ನಮ್ಮೊಳಗಿನಲ್ಲಿ ವಿಚಾರಶಕ್ತಿಯು ಬೆಳೆಯುತ್ತದೆ ಮತ್ತು ಧನಾತ್ಮಕ ಭಾವಗಳ ಧಾರೆಯೇ ಹರಿಯುತ್ತದೆ, ಸದಾಚಾರ ಬೆಳೆಯುತ್ತದೆ.  ಶಾಂತಿ, ಧೈರ್ಯ ಹೆಚ್ಚುತ್ತದೆ.   ಸಂತತಂ ಚಿಂತಯೇ ಅನಂತಂ ಎಂಬುದನ್ನು ಅಭ್ಯಾಸ ಮಾಡಿಕೊಂಡಾಗ, ಅಂತ್ಯಕಾಲದಲ್ಲಿ ವಿಶೇಷವಾಗಿ ಭಗವಂತನ ಸ್ಮರಣೆ ಸಿಕ್ಕುತ್ತದೆ.  ವಿಷ್ಣುಸಹಸ್ರನಾಮದ ಫಲಶ್ರುತಿಯಲ್ಲಿ "ಯ ಇದಂ ಶ್ರುಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ | ನಾ ಶುಭಂ ಪ್ರಾಪ್ನುಯಾತ್ ಕಿಂಚಿತ್ ಸೋಮುತ್ರೇಹ ಚ ಮಾನವಃ || - ಯಾರು ಭಗವಂತನ ಸಹಸ್ರನಾಮವನ್ನು ನಿತ್ಯವೂ ಕೇಳುವರೋ, ಹಾಡುವರೋ ಅವರಿಗೆ ಇಲ್ಲಿಯಾಗಲೀ, ಪರಲೋಕದಲ್ಲಿಯಾಗಲೀ ಸ್ವಲ್ಪವೂ ಕೆಡುಕಾಗುವುದಿಲ್ಲ ಎಂದಿದ್ದಾರೆ. 

ಪಾಪನಾಶನ - ವಿಷ್ಣು ಸಹಸ್ರನಾಮದಲ್ಲಿ "ದೇವಕೀನನ್ದನಃ (ದೇವಕೀ ನಂದನ) ಸ್ರಷ್ಟಾ ಕ್ಷಿತೀಶಃ ಪಾಪನಾಶನಃ" -  ದೇವಕೀ ಪುತ್ರನಾದ ಏಕೋ ದೇವನಾದ ಶ್ರೀಕೃಷ್ಣನೇ ಏಕಮೇವಾದ್ವಿತೀಯನಾದ ನಾರಾಯಣನು.  ಇವನ ನಾಮ ಸಂಕೀರ್ತನೆ ಮಾಡಿದರೆ, ಬೆಂಕಿಯು ಧಾತುವನ್ನು ಕರಗಿಸಿಬಿಡುವಂತೆ, ಸರ್ವ ಪಾಪಗಳನ್ನೂ ಸುಟ್ಟು ಭಸ್ಮ ಮಾಡಿಬಿಡುವನು ಎಂದು ತಿಳಿಸಲಾಗಿದೆ.  ಹಾಗೇ  ಫಲಶೃತಿಯಲ್ಲಿ "ಸರ್ವ ಪಾಪ ವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್"  - ಸರ್ವ ಪಾಪಗಳನ್ನೂ ಶುದ್ಧಗೊಳಿಸುವ ಒಂದೇ ಒಂದು ಆತ್ಮ, ಅವನೇ  ಪರಬ್ರಹ್ಮ ಎಂಬ ಉಲ್ಲೇಖವಿದೆ.  ಬೃಹದಾರಣ್ಯಕ ಉಪನಿಷತ್ತಿನ ಪಂಚಮಾಧ್ಯಾಯದ ಎರಡನೆಯ ಶಾಖೆಯಲ್ಲಿ "ಪಾಪಃ ಪಾಪೇನೇತಿ" - ಭಗವಂತನನ್ನು ಧ್ಯಾನಿಸದೆ ಪಾಪ ಕರ್ಮಗಳನ್ನು ಮಾಡುವವನು ಪಾಪಿಯಾಗುತ್ತಾನೆ ಎಂದಿದೆ.  ಭಗವದ್ಗೀತೆಯ ೧೬ನೇ ಅಧ್ಯಾಯದಲ್ಲಿ ಭಗವಂತ "ತಾನಹಂ ದ್ವಿಷತಃ ಕ್ರೂರಾನ್ಸಂಸಾರೇಷು ನರಾಧಮಾನ್ | ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು"|| - ನನ್ನನ್ನು ದ್ವೇಷಿಸುವ ಪಾಪಿಗಳೂ, ಕ್ರೂರಕರ್ಮಿಗಳೂ ಆದ ನರಾಧಮರನ್ನು ನಾನು ಸಂಸಾರದಲ್ಲಿ ಪದೇ ಪದೇ ಅಸುರೀ ಯೋನಿಗಳಲ್ಲಿ ಜನಿಸುವಂತೆ ಮಾಡುತ್ತೇನೆ ಎಂದಿದ್ದಾನೆ.  ಶರಣು ಬಂದ ಭಕ್ತರಿಗೆ ಭಗವಂತನು ಪಾಪನಾಶನನೂ ಹೌದು ಮತ್ತು ಪಾಪಿಗಳನ್ನು (ಅಸುರರನ್ನು) ಸಂಹರಿಸುವವನೂ ಆಗಿರುವನು.  ಪುಣ್ಯಧಾಮನ ಗುಣಗಳ ವಿಶೇಷತೆಯನ್ನು ಕೇಳುವುದರಿಂದಲೇ ಸಕಲ ಪಾಪವೂ ಪರಿಹಾರವಾಗುವುದಾದ್ದರಿಂದಲೇ ಭಗವಂತನು ಪಾಪನಾಶನ ನಾಮಕನು.   ಭಕ್ತಿಯಿಂದ ಒಮ್ಮೆ ಕೂಗಿದರೂ ಸಾಕು, ಓಡಿ ಬಂದು ಬಿಡುವ ಕರುಣಾಮಯಿ.  ಸಮುದ್ರ ಮಥನದ ಸಮಯದಲ್ಲಿ ಪಾಪಾಭಿಮಾನಿ ಅಸುರರಿಗೆ ಅಮೃತ ಸಿಕ್ಕದಂತೆ ಮಾಡಿ   ಅವರನ್ನು ನಾಶಮಾಡಿದವನು.

ಭಾಗವತದ ದಶಮಸ್ಕಂದದಲ್ಲಿ ಬರುವ ಗೋಪೀಗೀತಮ್ ನಲ್ಲಿ "ಪ್ರಣತದೇಹಿನಾಂ ಪಾಪಕರ್ಶನಂ" - ಶರಣಾಗತರಾದವರ ಪಾಪಗಳನ್ನು ಹೋಗಲಾಡಿಸುವವನು ಎಂಬ ಉಲ್ಲೇಖವಿದೆ.

ಕವಿಭಿರೀಡಿತ - ಆದಿ ಕವಿಯಾದ ಬ್ರಹ್ಮನಿಂದಲೂ, ಜ್ಞಾನಿಗಳಿಂದಲೂ ಸ್ತುತಿಸಿಕೊಳ್ಳುವವನು.  ಋಷಿಗಳು, ಮುನಿಗಳು, ದೇವಾನುದೇವತೆಗಳೆಲ್ಲರೂ ಸರ್ವದಾ ಸ್ತುತಿಸಿದರೂ ಅವನ ಮಹಿಮೆಯ ಗುಣಗಾನ ಮಾಡುವುದಾಗುವುದಿಲ್ಲ.  ಸಾಕ್ಷಾತ್ ಮಹಾಲಕ್ಷ್ಮಿಯಿಂದಲೂ ಅವನ ಅನಂತ ಗುಣಗಳನ್ನು ಸಂಪೂರ್ಣವಾಗಿ ಅರಿತು ಸ್ತುತಿಸುವುದಾಗುವುದಿಲ್ಲ.  ಸ್ತುತಿಸಿದಷ್ಟೂ ಗೋಚರವಾಗದ ಅನೇಕ ಗುಣಗಳನ್ನು ಉಳಿಸಿಕೊಂಡಂತಹ ಭಗವಂತ ಅಪ್ರತಿಮ ಮಹಿಮೆಯುಳ್ಳವನು.  ದಾಸ ಪರಂಪರೆಯಲ್ಲಿ ಬಂದ ಎಲ್ಲಾ ದಾಸರುಗಳೂ ಭಗವಂತನ ಗುಣವಿಶೇಷಣಗಳನ್ನು ಸ್ತುತಿಸಿ, ಲಕ್ಷಾಂತರ ಕೀರ್ತನೆಗಳನ್ನು ಸುಲಭ ಹಾಗೂ ಸರಳ ಕನ್ನಡದಲ್ಲಿಯೇ ರಚಿಸಿ ಹಾಡಿದ್ದಾರೆ.

ಭಾಗವತದ ದಶಮಸ್ಕಂದದಲ್ಲಿ ಬರುವ ಗೋಪೀಗೀತಮ್ ನಲ್ಲಿ "ತವ ಕಥಾಮೃತಂ ತಪ್ತಜೀವನಂ ಕವಿಭಿರೀಡಿತಂ ಕಲ್ಮಷಾಪಹಮ್" - ಭಗವಂತನ ಲೀಲೆಯ ಕಥಾಪ್ರಸಂಗಗಳು ಅಮೃತ ಸ್ವರೂಪಗಳೇ ಆಗಿವೆ.  ವಿರಹಿಗಳಿಗೆ ಅದನ್ನು ಬಿಟ್ಟು ಬೇರೇನೂ ಬೇಕಾಗುವುದೇ ಇಲ್ಲ.  ದೊಡ್ಡ ದೊಡ್ಡ ಜ್ಞಾನಿಗಳು ಮತ್ತು ಮಹಾ ಕವಿಗಳು ನಿನ್ನ ಚರಿತಾಮೃತವನ್ನು ಹಾಡಿ ಹೊಗಳಿದ್ದಾರೆ ಎಂದಿದ್ದಾರೆ.

ಕೈವರದಳಶ್ಯಾಮ - ಕನ್ನೈದಿಲೆಯ ಬಣ್ಣವನ್ನು ಹೋಲುವ ಕಪ್ಪುಬಣ್ಣದವನಾದವನು ಭಗವಂತ.  ಆದ್ದರಿಂದಲೇ ಅವನು ಕೈವರದಳಶ್ಯಾಮ.  ಅರಳಿದ ನೈದಿಲೆಯಂತೆ ಅತಿಮೋಹಕ ಬಣ್ಣವನ್ನೂ, ರೂಪವನ್ನೂ ಹೊಂದಿದವನು ಶ್ರೀಹರಿ.  ದರ್ಶನ ಮಾತ್ರದಿಂದಲೇ ಸರ್ವರನ್ನೂ ಸೆಳೆಯುವವನು, ಹೃತ್ಕಮಲವನ್ನು ಅರಳಿಸಿ, ಆನಂದಾನುಭೂತಿಯ ಅನುಭವವನ್ನು ಕೊಡುವವನು.  ದೇವಕಿ - ವಸುದೇವರ ಪುತ್ರನಾಗಿ ಸೆರೆಮನೆಯಲ್ಲಿ ಜನಿಸಿದರೂ ತನ್ನ ವಿಷ್ಣು ರೂಪವನ್ನು ತೋರಿಸಿ ಆನಂದಪಡಿಸಿದವನು.  ಬಾಲಕೃಷ್ಣನಾಗಿ ತನ್ನ ಲೀಲಾವಿನೋದಗಳಿಂದ ಸರ್ವರನ್ನೂ ಸಂತೋಷಪಡಿಸಿದವನು, ಕೈವರದಳಶ್ಯಾಮನು.

ನಿಸ್ಸೀಮ - ತನಗೆ ತಾನೇ ಸಾಟಿಯಾದಂತಹವನು, ಅಸಾಧ್ಯನು, ಎಲ್ಲಾ ಸೀಮೆಯನ್ನೂ ಮೀರಿ ಅಸೀಮಾತೀತನಾಗಿ ನಿಂತವನು, ಅತೀತನು, ಭಗವಂತನು ನಿಸ್ಸೀಮನು.  ಕಾಮದೇವನನ್ನೇ ಸುಟ್ಟು ಹಾಕಿದ ವೈರಾಗ್ಯಪತಿ ಮಹಾರುದ್ರನನ್ನೇ ಮೋಹಿನಿ ವೇಷದಲ್ಲಿ ಮರುಳು ಮಾಡಿ ಕಂಗೆಡಿಸಿದವನು ಭಗವಂತನು, ಅವನ ಮಹಿಮೆಗೆಲ್ಲಿದೆ ಸೀಮೆ?

ಯುವತಿವೇಷದಿ - ಅಮೃತ ಮಂಥನದ ಸಮಯದಲ್ಲಿ ಮೋಹಿನಿ ರೂಪದಿಂದ ಬಂದ ಭಗವಂತನ ಅಸಾಧಾರಣ ಸೌಂದರ್ಯವನ್ನು ನೋಡುವ ಅವಕಾಶ ದೇವತೆಗಳಿಗೆ ಲಭಿಸಿತು.  ಅಸುರರಿಗೆ ಭಗವಂತ ಕಣ್ಣು ಮುಚ್ಚಲು ತಿಳಿಸಿಬಿಟ್ಟ.  ಅಸುರರು ಸುಂದರಿ ಸ್ತ್ರೀಯೆಂಬ ದೃಷ್ಟಿಯಿಂದ ನೋಡಿದರು.  ಆದ್ದರಿಂದಲೇ ಅವರಿಗೆ ಕಣ್ಣುಮುಚ್ಚಲು ಆಜ್ಞಾಪಿಸಿದ ಭಗವಂತ.  ದೇವತೆಗಳು ಅತಿಶಯವಾದ, ಅನುಪಮ ಸೌಂದರ್ಯವನ್ನು ಕಣ್ಣರಳಿಸಿ ನೋಡಿ, ಮನದಲ್ಲಿ ತುಂಬಿಸಿಕೊಂಡರು.  ಅವರು ಸ್ತ್ರೀರೂಪವೆಂದು ನೋಡದೆ ಜಗನ್ಮಾತೆಯೆಂಬ ದೃಷ್ಟಿಯಿಂದಲೇ ನೋಡಿದ್ದರಿಂದ ಭಗವಂತನು ಅವರಿಗೆ ಕರುಣಿಸಿದ.

ಗೌರೀಧವನ ಮೋಹಿಸಿ - ಭಾಗವತ ಅಷ್ಟಮಸ್ಕಂದದಲ್ಲಿ ಭಗವಂತನು ಮೋಹಿನೀ ರೂಪ ಧರಿಸಿದ ಕಥೆಯು ಹೇಳಲ್ಪಟ್ಟಿದೆ.  ಮೋಹಿನೀರೂಪದ ವರ್ಣನೆಯನ್ನು ಕೇಳಿ ರುದ್ರದೇವರು ತಾವೂ ಶ್ರೀಹರಿಯ ಈ ಮನಮೋಹಕ ರೂಪವನ್ನು ಕಾಣಬೇಕೆಂದು ಗಿರಿಜಾ ಸಮೇತನಾಗಿ ವಿಷ್ಣು ಲೋಕಕ್ಕೆ ಬರುತ್ತಾನೆ.  ಭಗವಂತನನ್ನು ನಾನಾ ರೀತಿಯಲ್ಲಿ ಸ್ತುತಿಸುತ್ತಾ, ತಾನು ಎಲ್ಲಾ ಗುಣಪೂರ್ಣ ರೂಪಗಳನ್ನು ನೋಡಿದ್ದರೂ ಸ್ತ್ರೀರೂಪ ನೋಡಿಲ್ಲವಾಗಿ, ತನಗೆ ಆ ಅತಿಶಯ ಲಾವಣ್ಯವತಿಯ ರೂಪವನ್ನು ತೋರಿಸುವಂತ ಪ್ರಾರ್ಥಿಸಿಕೊಳ್ಳುತ್ತಾನೆ.  ಭಗವಂತ ಮಾಯವಾಗಿ ಹೋದಾಗ, ಶಂಕರನು ಪಾರ್ವತೀ ಹಾಗೂ ಪ್ರಥಮಗಣಗಳೊಡನೆ ಎಲ್ಲಾ ದಿಕ್ಕುಗಳಲ್ಲೂ ತಿರುಗಿ ನೋಡುತ್ತಾ ಇರುವಾಗಲೇ ಜಗನ್ಮೋಹಕ ಸುಂದರಿಯನ್ನು ಉಪವನದಲ್ಲಿ ಕಾಣುತ್ತಾನೆ.  ದರ್ಶನ ಮಾತ್ರದಿಂದಲೇ ಪಾರ್ವತೀ ಹಾಗೂ ಪ್ರಥಮಗಣಗಳನ್ನೂ ಮರೆತು ಧಾವಿಸಿಬಿಡುತ್ತಾನೆ.  ಮೋಹಿನಿಯು ಮರಗಳ ಮರೆಯಲ್ಲಿ ಅವಿತಿಟ್ಟುಕೊಂಡರೂ ರುದ್ರನು ಬಿಡದೇ ಬೆನ್ನಟ್ಟಿಹೋಗುವನು. ವಿಷ್ಣುವನ್ನು ಹೆಣ್ಣೆಂದೇ ಭಾವಿಸಿ, ರುದ್ರನು ವರ್ತಿಸಿದಾಗ, ಅಜ್ಞಾನವನ್ನು ಕೊಟ್ಟು ಕೆಡಿಸಿ, ನ೦ತರ ಜ್ಞಾನವನ್ನು ಕೊಟ್ಟು ಸ೦ರಕ್ಷಣೆ ಮಾಡುತ್ತಾನೆ. ಹೀಗೆ ಯುವತಿವೇಷವ ಧರಿಸಿ ಗೌರೀಧವನ
ನ್ನು ಮೋಹಿಸುವಂತೆ ಮಾಡಿದ ಭಗವಂತನು.   ಭಗವಂತನ ಅಪರಿಮಿತ ಮಹಿಮೆಯನ್ನು ವರ್ಣಿಸುತ್ತಾ ರುದ್ರದೇವರು ಪಾರ್ವತಿದೇವಿಗೆ ಈ ಪ್ರಸಂಗವನ್ನು ಯಾರು ಬಾರಿಬಾರಿಗೂ ಸಂಕೀರ್ತಿಸುತ್ತಾರೋ ಅಥವಾ ಶ್ರವಣ ಮಾಡುತ್ತಾರೋ ಅವರಿಗೆ ನಿಷ್ಫಲವೆಂಬುದೇ ಇರುವುದಿಲ್ಲ.  ಸಂಸಾರದ ಸಮಸ್ತ ಕ್ಲೇಶಗಳೂ ಕಳೆದುಹೋಗುವುವು ಎಂದಿದ್ದಾರೆಂಬುದನ್ನು  ಭಾಗವತದಲ್ಲಿ ಉಲ್ಲೇಖಿಸಲಾಗಿದೆ.

ಕೆಡಿಸಿ ಉಳಿಸಿದ - ಜಗದೇಕ ಸೌಂದರ್ಯವತಿಯಾದ ಪಾರ್ವತಿಯನ್ನು ಮದುವೆಯಾಗಿದ್ದರೂ ಶಿವನು ಕಾಮವನ್ನೇ ಸುಟ್ಟು, ಜಯಿಸಿದವನು.  ಆದರೆ ಅತಿಲಾವಣ್ಯಮತಿ ಮೋಹಿನಿಯನ್ನು ಕಂಡು ಭಗವಂತನ ಮಾಯೆಯಲ್ಲಿ ಸಿಲುಕಿ, ಶಿವನು ಮೋಹಿತನಾಗುತ್ತಾನೆ.   ಶ್ರೀಹರಿಯ ಮಾಯೆಯಿಂದ ತಾನು ಮೋಹಿತನಾದೆನೆಂದು ತಿಳಿದು ಶಿವನು ನಾಚುತ್ತಾನೆ.  ಭಗವಂತನು ರುದ್ರದೇವನಿಗೆ ನಾನು ನಿನ್ನನ್ನು ಮೋಹಗೊಳಿಸಿದರೂ ಕೂಡ ನೀನು ದೈವವಶದಿಂದ ದಾಟಿ ವಿವೇಕವನ್ನು ಹೊಂದಿದೆ.  ಆದ್ದರಿಂದ ನೀನು ನಿಜವಾಗಿಯೂ ಪರಮ ವಿರಕ್ತನು, ನಿನ್ನಂತೆ ಕಾಮಾದಿಗಳನ್ನು ಯಾರೂ ಜಯಿಸಲಾರರು ಎಂದನು.   ಭಗವಂತನನು ತನ್ನ ಮೋಹಿನಿ ರೂಪದಿಂದ ಶಿವನ ಚಿತ್ತ ಸ್ವಾಸ್ಥ್ಯ ಕೆಡಿಸಿದ, ಮೋಹಪಾಶದಿಂದ ಅರಿವು ತಳೆದ ರುದ್ರದೇವನನ್ನು ಹೊಗಳಿ ಉಳಿಸಿದನು.  ಇದು ಶ್ರೀಹರಿಯ ಕಾರುಣ್ಯದ ಮಹಿಮೆ.

ಇವನ ಮಾಯವ ಗೆಲುವನಾವನು ಈ ಜಗತ್ರಯದಿ -  ಭಗವಂತನ ಮಾಯೆ ಎಂದರೆ ಸಾಮರ್ಥ್ಯ, ಶಕ್ತಿ ಅಥವಾ ಇಚ್ಛೆ ಎಂಬರ್ಥವು ಮತ್ತು ಭಗವಂತನ ಪತ್ನಿ ಮಾಯಾದೇವಿ ರೂಪಿಯಾದ ಲಕ್ಷ್ಮೀದೇವಿ.  ಬ್ರಹ್ಮಾದಿ ದೇವತೆಗಳಿಂದ ಪ್ರಾರಂಭಿಸಿ ಜೀವಿಗಳವರೆಗೂ ಯಾರಿಗೂ ಈ ಎರಡೂ ಮಾಯೆಗಳನ್ನು ಗೆಲ್ಲುವುದು ಸಾಧ್ಯವೇ ಇಲ್ಲ,  ಭಗವಂತನ ಲೀಲೆಗಳೂ, ಅವನ ಮಾಯೆಯ ಪ್ರಭಾವವೂ ಇರುತ್ತದೆ.  ಯಾರಿಂದಲೂ ಅದನ್ನು ಗೆಲ್ಲುವುದಾಗುವುದಿಲ್ಲ.  ಆದರೆ ಭಗವಂತನ ಕರುಣೆಯೂ ಅಪಾರ.  ಶ್ರದ್ಧೆ ಹಾಗೂ ಭಕ್ತಿಯಿಂದ ಯಾರು ಸಂಪೂರ್ಣವಾಗಿ ಶರಣಾಗತರಾಗುವರೋ, ಅವರನ್ನು ಸಂಸಾರವೆಂಬ ಬಂಧನ ಅಥವಾ ಮಾಯೆಯಿಂದ ಬಿಡಿಸಿ ಉದ್ಧರಿಸುವನು.  ಭಗವಂತನು ದುರ್ಜನರನ್ನೂ, ತಾಮಸಿಗರನ್ನೂ ತನ್ನ ಮಾಯೆಯಿಂದ ಕೆಡಿಸಿ, ಪರಮಪುರುಷಾರ್ಥವಾದ ಮುಕ್ತಿ, ಮೋಕ್ಷದಿಂದ ಅವರು ವಂಚಿತರಾಗುವಂತೆ ಮಾಡುವನು.  ಸಜ್ಜನರನ್ನೂ, ಸಾತ್ವಿಕರನ್ನೂ ಮಾಯೆಯಿಂದ ಬಿಡಿಸಿ, ಮುಕ್ತಿ ಹಾಗೂ ಮೋಕ್ಷಗಳನ್ನು ಕೊಟ್ಟು ರಕ್ಷಿಸುವನು.  ಶ್ರೀ ಪುರಂದರ ದಾಸರು ತಮ್ಮ "ಚಂದ್ರಚೂಡ ಶಿವ ಶಂಕರ ಪಾರ್ವತಿ ರಮನ ನಿನಗೆ ನಮೋ ನಮೋ" ಎಂಬ ಕೃತಿಯಲ್ಲಿ "ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ | ಜಾಲಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ" || ಎಂದು ಸ್ತುತಿಸಿದ್ದಾರೆ.

ಭಗವದ್ಗೀತೆಯಲ್ಲಿ ಭಗವಂತ :
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ |
ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ||  - ಎಲೈ ಭಾರತಾ ! ಎಲ್ಲಾ ಪ್ರಕಾರಗಳಿಂದಲೂ ಪರಮಾತ್ಮನಿಗೇ ಶರಣಾಗು.  ಆ ಪರಮಾತ್ಮನ ಕೃಪೆಯಿಂದಲೇ ನೀನು ಪರಮ ಶಾಂತಿಯನ್ನು ಹಾಗೂ ಸನಾತನ ಪರಮಧಾಮವನ್ನೂ ಹೊಂದುವೆ ಎಂದಿದ್ದಾನೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ವಸುವ್ವಾಲಿಯಲ್ಲಿ :

ಎಲ್ಲರಂದದಿ ಲಕ್ಷ್ಮೀನಲ್ಲನೆಂದೆನಬೇಡ
ಬಲ್ಲಿದನು ಕಂಡ್ಯ ಭಗವಂತ | ಭಗವಂತನ ಮಹಿಮೆ
ಬಲ್ಲವರು ಇಲ್ಲ ಜಗದೊಳು || - ಎಲ್ಲರೂ ತಿಳಿದಂತೆ ಭಗವಂತನನ್ನು ಲಕ್ಷ್ಮೀರಮಣನೆಂದು ಮಾತ್ರ ತಿಳಿಯಬೇಡ.  ಶ್ರೀಹರಿಯು ಷಡ್ಗುಣೈಶ್ವರ್ಯಪೂರ್ಣನಾದ, ಅಚಿಂತ್ಯವಾದ, ಅದ್ಭುತವಾದ ಸಾಮರ್ಥ್ಯವುಳ್ಳವನು.  ಭಗವಂತನ ಮಹಿಮೆಗಳನ್ನು ಪೂರ್ಣವಾಗಿ ತಿಳಿದವರು ಯಾರೂ ಇಲ್ಲವೇ ಇಲ್ಲ.

ಶ್ರೀಯರಸನೆ ನಿನ್ನ ಮಾಯಕ್ಕೆ ಎಣೆಗಾಣೆ
ಹೇಯವಿಷಯಗಳ ಜನರಿಗೆ | ಜನರಿಗುಣಿಸಿ ಉಪಾ-
ದೇಯವೆಂತೆಂದು ಸುಖಿಸುವಿ || - ಭಗವಂತನ ಇಚ್ಛೆ, ಶಕ್ತಿಗಳೆಂಬ ಮಾಯೆಗೆ ಯಾರೂ, ಯಾವುದೂ ಸಾಟಿಯಲ್ಲ.  ಪ್ರಾಕೃತಿಕ ಬಂಧನದಲ್ಲಿ ಸಿಲುಕಿಸಿ ಜೀವರಿಗೆ ಲೌಕಿಕ ಭೋಗಗಳೇ ಪರಮ ಪುರುಷಾರ್ಥಗಳೆಂದೂ, ಆದರರಿಂದ ಸ್ವೀಕರಿಸಲು ಯೋಗ್ಯವೂ ಎಂಬ ಮಾಯೆಯಲ್ಲಿ ಮುಳುಗಿಸಿ, ಅವರು ತಮ್ಮ ’ಅಹಂ ಮಮಕಾರ’ಗಳೊಳಗೇ ಮುಳುಗುವಂತೆ ಮಾಡುತ್ತಾನೆ.  ಭವವೆಂಬ ಪಾಶದಲ್ಲಿ ಬಂಧಿಸುವವನೂ ಅವನೇ, ಬಿಡಿಸಿ ಉದ್ಧರಿಸುವವನೂ ಅವನೇ.  ಜೀವಿಗಳಲ್ಲಿ ತಾನಿದ್ದು ಭಗವಂತನು ಶುಭವಿಷಯಗಳನ್ನು ಭೋಗಿಸಿದರೂ, ಎಲ್ಲದರಿಂದಲೂ ರಹಿತನಾಗಿದ್ದು ಸುಖಿಸುವ ಪೂರ್ಣಾನಂದನಾಗಿದ್ದಾನೆ.



ಚಿತ್ರಕೃಪೆ : ಅಂತರ್ಜಾಲ