Tuesday, December 31, 2013

ಕರುಣಾ ಸಂಧಿ - ೧೩ ನೇ ಪದ್ಯ



ಧನವ ಸಂರಕ್ಷಿಸುವ ಫಣಿ ತಾ
ನುಣದೆ ಮತ್ತೊಬ್ಬರಿಗೆ ಕೊಡದನು
ದಿನದಿ ನೋಡುತ ಸುಖಿಸುವಂದದಿ ಲಕುಮಿವಲ್ಲಭನು|
ಪ್ರಣತರನು ಕಾಯ್ದಿಹನು ನಿಷ್ಕಾ
ಮನದಿ ನಿತ್ಯಾನಂದಮಯ ದು
ರ್ಜನರ ಸೇವೆಯನೊಲ್ಲನಪ್ರತಿಮಲ್ಲ ಜಗಕೆಲ್ಲ ||೧೩||



ಪ್ರತಿಪದಾರ್ಥ :  ಧನವ ಸಂರಕ್ಷಿಸುವ ಫಣಿ - ಭೂಮಿಯಲ್ಲಿ ಹೂತಿಟ್ಟ ನಿಧಿಯನ್ನು ಸಂರಕ್ಷಿಸುವ ಸರ್ಪವು,  ತಾನುಣದೆ, ಮತ್ತೊಬ್ಬರಿಗೆ ಕೊಡದೆ -   ತಾನೂ ಅನುಭವಿಸದೆ, ಮತ್ತೊಬ್ಬರಿಗೂ ನೀಡದೆ, ಅನುದಿನದಿ - ಪ್ರತಿದಿನವೂ, ನೋಡುತ - ಸುಮ್ಮನೆ ಧನವನ್ನು ನೋಡುತ್ತಲೇ ಕುಳಿತು, ಸುಖಿಸುವಂದದಿ - ಧನವು ಜೋಪಾನವಾಗಿದೆ ಎಂಬ ಸಂತೃಪ್ತ ಭಾವದಿಂದ ಸುಖ ಪಡುವ ರೀತಿಯಲ್ಲಿ, ಲಕುಮಿವಲ್ಲಭನು - ಲಕ್ಷ್ಮೀಪತಿಯಾದ ಶ್ರೀಹರಿಯು, ಪ್ರಣತರನು - ಶರಣಾಗತರಾದ ಭಕ್ತರನ್ನು, ನಿಷ್ಕಾಮನದಿ - ಯಾವುದೇ ತರಹದ ಪ್ರತಿಫಲಾಪೇಕ್ಷೆಯೂ ಇಲ್ಲದೆ, ಕಾಯ್ದಿಹನು - ಸರ್ಪ ನಿಧಿಯನ್ನು ಕಾಯುವಂತೆ (ಸರ್ಪಗಾವಲಿನಂತೆ) ಕಾಪಾಡುತ್ತಾನೆ, ನಿತ್ಯಾನಂದಮಯ - ಭಗವಂತನು ನಿತ್ಯವೂ ನಿರತವೂ ಆನಂದಮಯನು, ದುರ್ಜನರ ಸೇವೆಯನೊಲ್ಲ - ನಿಜವಾದ ಶ್ರದ್ಧೆ ಭಕ್ತಿಗಳಿಲ್ಲದೆ ತೋರಿಕೆಗಾಗಿ ಸೇವೆಯನ್ನು  ಮಾಡುವವರ  ಸೇವೆಯನ್ನು ಸ್ವೀಕರಿಸುವವನಲ್ಲ, ಅಪ್ರತಿಮಲ್ಲ - ಮೂರು ಲೋಕಗಳಿಗೂ ಸಾಟಿಯಿಲ್ಲದ 
ಜಗಕೆಲ್ಲ - ಜಗಜ್ಜಟ್ಟಿಯಾಗಿರುವನು.                                                                                                                                      

                                                                                                                               
ಇಲ್ಲಿ ದಾಸರಾಯರು ಫಣಿಯು ಹಣವನ್ನು ಹೇಗೆ ಕಾಪಾಡುತ್ತದೆಯೆಂಬುದನ್ನು ವಿವರಿಸುತ್ತಾರೆ.  ಅದು  ಹಣವನ್ನು ತಾನೂ ಉಪಯೋಗಿಸುವುದಿಲ್ಲ ಮತ್ತೊಬ್ಬರಿಗೂ ಕೊಡುವುದಿಲ್ಲ, ಹೇಗೆ ತನಗೆ ಉಪಯೋಗವಿಲ್ಲದಿದ್ದರೂ ಹಣವನ್ನು ಕಾಪಾಡುತ್ತದೆಯೋ ಹಾಗೆ ಫಣಿಶಯನನಾದ ಭಗವಂತನು ಜೀವಿಗಳಿಗೆ ಸುಖವನ್ನು ಕೊಡುತ್ತಾನೆ.  ಕಾದಿಟ್ಟು ಕೊಡುತ್ತಾನೆ ಆದರೆ ಅದರಿಂದ ಅವನಿಗೆ ಪ್ರಯೋಜನವೇನೂ ಇಲ್ಲ.  ಕೇವಲ ಜೀವಿಗಳ ಸುಖಕ್ಕಾಗಿ ಆನಂದವನ್ನು ಕಾದಿಟ್ಟು ಕೊಡುತ್ತಾನೆ.  ಇದನ್ನು ದಾಸರು ಫಣಿ ಕಾಯುವ ಧನದ ಉಪಮೆಯ ಮೂಲಕ  ಪರಮಾತ್ಮನ ಕರುಣೆಯನ್ನು ಹೇಳುತ್ತಿದ್ದಾರೆ.  ಪರಮಾತ್ಮ ಪ್ರಣತರನ್ನು ತತ್ವಾಭಿಮಾನಿಗಳಾದ ಬ್ರಹ್ಮ, ವಾಯು, ಶೇಷ ಮೊದಲಾದವರಿಗೆ ಕೊಡುತ್ತಾನೆ.  ಅಸುರ ತತ್ವಾಭಿಮಾನಿಗಳಿಗೆ ಕೊಡುವುದಿಲ್ಲ.  ಪಾಪ ಪುರುಷನೆಂಬ ಪಾಪಿಯ ಕೈಗೆ ಕೊಡದೆ ನಮ್ಮನ್ನು ಕಾಪಾಡುತ್ತಾನೆ.  ಭಗವಂತನು ಪ್ರತೀ ಜೀವಿಗೂ ಸ್ವರೂಪ ಶರೀರದ ಮೇಲೆ ೨೫ ಶರೀರಗಳನ್ನು ಕೊಟ್ಟಿದ್ದಾನೆ.  ಪರಮಾತ್ಮನ ರಕ್ಷಾ ಕವಚ ಜೀವಿಗಳಿಗೆ ಹೀಗಿರುತ್ತದೆ .  ಸಜ್ಜನರು ಕರುಣಾಳು ಭಗವಂತನಿಗೆ ನಿಧಿಯಿದ್ದಂತೆ.  ಹಾಗಾಗಿ ಪರಮಾತ್ಮ ಅವರನ್ನು ಕರುಣೆಯಿಂದ ಕಾಪಾಡುತ್ತಾನೆ.  ಹಾಗೇ ಪರಮಾತ್ಮ ಕೂಡ ಸಜ್ಜನರಿಗೆ ನಿಧಿಯಂತೆ.  ಸಜ್ಜನರು ಪರಮಾತ್ಮನನ್ನು ಬಿಟ್ಟು ಆಲೋಚಿಸಬಾರದು, ಅಗಲಬಾರದು.  ಪರಮಾತ್ಮನು ಎಂತಹ ಕರುಣಿ ಎಂಬುದನ್ನು ದಾಸರಾಯರು ಈ ಕೃತಿಯಲ್ಲಿ ಕರುಣಿಸೆನಗಿನಿತು ಕರುಣಾಳು | ನಿನ್ನ ಚರಣದಲ್ಲಿ ಭಕುತಿ ವಿಷಯದ ವಿರುಕುತಿ ||  ಚರಣದಲ್ಲಿ ಬಿಂಬನೇ ಸರ್ವ ಪ್ರಯೋಜನವ ಮಾಡಿ ಪ್ರತಿ ಬಿಂಬರಿಗೆ ತತ್ಫಲಗಳೀವ.   ಕಾವ ಬಿಂಬ ಸ್ವತಂತ್ರ - ಪ್ರತಿಬಿಂಬ ಅಸ್ವತಂತ್ರತಮನೆಂಬ ಸುಜ್ಞಾನ ಪೂರ್ವಕ ನಿನ್ನ ಭಜಿಪ ಸುಖ.. ಕರುಣಿಸೆನಗಿನಿತು ಕರುಣಾಳು ಎಂದು ಕೇಳಿಕೊಳ್ಳುತ್ತಿದ್ದಾರೆ. 

ಧನವ ಸಂರಕ್ಷಿಸುವ ಫಣಿ - "ಫಣಿ" ಎಂದರೆ ಶೇಷನ ಅವತಾರ.   ರಾಮಾವತಾರವಾದಾಗ ಶೇಷನು ಲಕ್ಷ್ಮಣನಾಗಿ ತನ್ನ ಸ್ವಾಮಿಯನ್ನು ಅತೀ ಜೋಪಾನವಾಗಿ ಕಾಪಾಡಿದ.  ದಂಡಕಾರಣ್ಯದಲ್ಲಿ ಪರ್ಣಕುಟೀರದೊಳಗೆ ತನ್ನ ಸ್ವಾಮಿ ಶ್ರೀರಾಮ ಹಾಗೂ ಸೀತೆಯರನ್ನಿರಿಸಿ, ರಾತ್ರಿಯೆಲ್ಲಾ ನಿದ್ರಿಸದೆ ಎಚ್ಚರದಿಂದ ಕಾವಲು ಕಾಯ್ದ ಶೇಷ.  ಪ್ರೀತಿ ಭಕ್ತಿಗಳಿಂದ ಅವರನ್ನು ಅನುದಿನವೂ ಶೇಷನು
 ನೋಡುತ್ತಾ ಸುಖಿಸುತ್ತಾನೆ. 
ತಾನುಣದೆ ಮತ್ತೊಬ್ಬರಿಗೆ ಕೊಡದನುದಿನದಿ ನೋಡುತ -   ಭೂಮಿಯಲ್ಲಿ ಹುದುಗಿಸಿಟ್ಟ ನಿಧಿಯನ್ನು ನಾಗರಹಾವು ಬಹಳ ಜತನದಿಂದ ಕಾಯುತ್ತದೆ.  ಆ ನಿಧಿಯನ್ನು ಅನುಭವಿಸುವುದೂ ಇಲ್ಲ, ಮತ್ತೊಬ್ಬರಿಗೆ ಅನುಭವಿಸಲು ಬಿಡುವುದೂ ಇಲ್ಲ ಆದರೆ ಸದಾ ನಿಧಿಯನ್ನು ನೋಡುತ್ತಾ ಸುಖಿಸುತ್ತದೆ.  ಭಗವಂತನಿಗೂ ಹೀಗೆ ತನ್ನ ಭಕ್ತರನ್ನು ಸುಖದಿಂದ ಕಾಪಾಡುವ ಆಸೆ, ತನಗೇನೂ ಸುಖ ಬರಬೇಕಾಗಿಲ್ಲವಾದರೂ,  ಅಥವಾ ತನಗೇನೂ ದುಃಖ ನಿವಾರಣೆ ಆಗಬೇಕಾಗಿಲ್ಲದಿದ್ದರೂ ಅವನು ನಮ್ಮನ್ನು ನಿಧಿ ಕಾಯುವ ಫಣಿಯಂತೆ ಕಾಯುತ್ತಾನೆ, ಪೊರೆಯುತ್ತಾನೆ.  ನಿಧಿ ಕಾಯುವ ಫಣಿಯೂ ನಿಷ್ಕಾಮನೆಯಿಂದಲೇ ಕಾಯುತ್ತದೆ ಮತ್ತು ಭಗವಂತನಿಗೂ ಕಾಮನೆಯಿಲ್ಲ.  ಎಲ್ಲವೂ ತನ್ನದೇ, ಬ್ರಹ್ಮಾಂಡದ ಒಡೆಯನೇ ಅವನು.  ಆದರೂ ಭಕ್ತರು / ಸಜ್ಜನರೆಂದರೆ ಅವನಿಗೆ "ನಿಧಿ"ಯಂತೆ.  ಪ್ರತಿಫಲಾಪೇಕ್ಷೆಯೇ ಇಲ್ಲದೆ ಸಂರಕ್ಷಿಸುವವನು ಪರಮಾತ್ಮ.  ಗುಪ್ತವಾಗಿ ನಿಧಿಯನ್ನು ನಾನಾ ವಿಧದಲ್ಲಿ ಜತನವಾಗಿರಿಸಿ ಹೇಗೆ ಭೂಗತ ಮಾಡಿ ಕಾಪಾಡುವೆವೋ ಹಾಗೆ  ಭಗವಂತ ನಮ್ಮನ್ನು ಕಾಪಾಡುತ್ತಾನೆ.   "ಜೀವ" ಭಗವಂತನಿಗೆ ಬಂಗಾರವಿದ್ದಂತೆ, ಅದನ್ನು ಶರೀರವೆಂಬೋ ಅಭೇದ್ಯವಾದ ಸ್ಥೂಲ ಕೋಟೆಯೊಳಗೆ ಅನೇಕ ಆವರಣಗಳನ್ನು ಸೃಷ್ಟಿಸಿ ಒಳಗಿಟ್ಟು ಜತನವಾಗಿ ಕಾಪಾಡುತ್ತಾನೆ.  ಹೀಗೆ ಸೃಷ್ಟಿ ಮಾಡಿದ ಜೀವನನ್ನು ಭಗವಂತ ಯೋಗ್ಯರಾದವರಿಗೆ ಮಾತ್ರವೇ ಕೊಡುತ್ತಾನೆ, ಅಸುರರಿಗಲ್ಲ.  ಯೋಗ್ಯರೆಂದರೆ ತತ್ವಾಭಿಮಾನಿ ದೇವತೆಗಳೆಂದರ್ಥ.  ಅಸಂಖ್ಯಾತ ತತ್ವಾಭಿಮಾನಿ ದೇವತೆಗಳು ಜೀವಿಯೆಂಬ ಭಕ್ತನನ್ನು (ನಿಧಿಯನ್ನು) ಅನುಭವಿಸುತ್ತಾರೆ.  ಶರೀರವೆಂಬ ಸ್ಥೂಲದೇಹದಲ್ಲೇ ಆಗಲಿ, ಸೂಕ್ಷ್ಮ ದೇಹದಲ್ಲೇ ಆಗಲಿ, ಎಲ್ಲಿಯೂ ಅಸುರರಿಗೆ ಪ್ರವೇಶವಿಲ್ಲ.  ಈ ರೀತಿಯ ಭದ್ರವಾದ ಕೋಟೆಯಂತಹ ಶರೀರವನ್ನು ಕೊಟ್ಟು ಸಂಸಾರದಲ್ಲಿ ಬಂಧಿಸಿಟ್ಟು ಶ್ರೀಹರಿಯು ರಕ್ಷಣೆಯನ್ನು ಮಾಡಿ, ಸಾಧನೆಯನ್ನೂ ಮಾಡಿಸುವವನು ಭಗವಂತ.  ಆದ್ದರಿಂದಲೇ ಈ ಶರೀರವನ್ನು ಸಾಧನಾ ಶರೀರವೆಂದು ಕರೆಯುವುದು.
ಲಕುಮಿ ವಲ್ಲಭನು - ಜೀವರನ್ನು ಕಾಪಾಡಿ ಶ್ರೀಹರಿಗೆ ಯಾವ ಲಾಭವಾಗಲೀ, ನಷ್ಟವಾಗಲೀ ಇಲ್ಲ.  ಆತ ತನ್ನ ಮನದನ್ನೆಯಾದ ಲಕ್ಷ್ಮಿಯ ಮುದ್ದು ಮಕ್ಕಳು ಜೀವರು, ಮತ್ತು ಅವರ ಮೇಲಿನ ಪ್ರೀತಿ ಮತ್ತು ಕರುಣೆಯಿಂದ ಲಕ್ಷ್ಮೀದೇವಿಯು ಅವರನ್ನು ಕಾಪಾಡೆಂದು ಕೇಳಿಕೊಳ್ಳುತ್ತಾಳಾದ್ದರಿಂದಲೇ ಕಾಪಾಡುತ್ತಾನೆ.  ಸಂಪತ್ತಿಗೇ ಅಧಿದೇವತೆಯಾದ ಲಕ್ಷ್ಮೀದೇವಿಯ ವಲ್ಲಭನಾದ ಭಗವಂತನಿಗೆ ಜೀವರು ಏನನ್ನು ತಾನೇ ಕೊಟ್ಟು ತೃಪ್ತಿಪಡಿಸಲು ಸಾಧ್ಯ?

ಪ್ರಣತರನು ಕಾದಿಹನು - ಜೀವರನ್ನು ತತ್ವಾಭಿಮಾನಿ ದೇವತೆಗಳಾದ ಬ್ರಹ್ಮದೇವರು, ವಾಯುದೇವರು ಮುಂತಾದವರಿಗೆ ಕೊಟ್ಟು ಬಿಡುತ್ತಾನೆ ಭಗವಂತ.  ಪ್ರಣತರು ಎಂದರೆ ವಾಯುದೇವರ ಭಕ್ತರು.  ಯಾರು ವಾಯುದೇವರ ಮುಖಾಂತರ ಭಗವಂತನನ್ನು ಪ್ರಾರ್ಥಿಸುತ್ತೇವೋ ಅವರಿಗೆ ಮಾತ್ರ ಅವನು ಒಲಿಯುತ್ತಾನೆ.  "ವಾಯುದೇವಾಂತರ್ಗತ" ಎನ್ನಬೇಕು.  ಪ್ರಣತರನ್ನು ಭಗವಂತ ಕಾಯುತ್ತಾನೆ.  ಪ್ರಣತರು ನಮ್ಮನ್ನು ಕಾಯುತ್ತಾರೆ.
ನಿಷ್ಮಾಮನದಿ ನಿತ್ಯಾನಂದಮಯ - ಸಕಲ ಸಜ್ಜನರೂ, ಭಕ್ತರೂ ತಮ್ಮ ತಮ್ಮ ಹೃದಯ ಕಮಲವೆಂಬ ಗುಹೆಯಲ್ಲಿ ಸದಾ ಬಚ್ಚಿಟ್ಟುಕೊಂಡಿರುವಂತಹ ಮಹಾ ಶ್ರೇಷ್ಠವಾದ ನಿಧಿ ಭಗವಂತ.   ನಿತ್ಯಾನಂದಮಯನಾದ ಶ್ರೀಹರಿಗೆ ಭಕ್ತರು ’ನಿಧಿ’ ಮತ್ತು ಭಕ್ತರಿಗೆ ಭಗವಂತ ’ನಿಧಿ’.  ಭಕ್ತರು ಭಗವಂತನನ್ನು ಭಕ್ತಿ ಪ್ರೀತಿಗಳಿಂದ ಆರಾಧಿಸಿದರೆ, ಭಗವಂತನು ತನ್ನ ಭಕ್ತರನ್ನು ಅತ್ಯಂತ ವಾತ್ಸಲ್ಯ ಮತ್ತು ಕರುಣೆಯಿಂದ ಕಾಪಾಡುತ್ತಾನೆ ಎಂದರ್ಥ.
ದುರ್ಜನರ ಸೇವೆಯನೊಲ್ಲ - ಭಗವಂತನು ಸಜ್ಜನರನ್ನು ಅವರ ಭಕ್ತಿಗೆ ಮೆಚ್ಚಿ ಅವರಿಂದ ಸೇವೆ ಸ್ವೀಕರಿಸಿ ಅವರನ್ನು ಕಾಪಾಡುತ್ತಾನೆ.  ಅದೂ ಕೂಡ ತನಗಾಗಿಯೇನೂ ಅಲ್ಲ, ಜೀವರಿಗೆ ಮೋಕ್ಷ ಕೊಡುವುದಕ್ಕಾಗಿ ಮತ್ತು ಅವರಿಂದ ಸಾಧನೆಯನ್ನು ಮಾಡಿಸುವುದಕ್ಕಾಗಿ ಅಷ್ಟೆ.  ತನ್ನನ್ನು ಪೂಜಿಸದ ದುರ್ಜನರನ್ನು ಅವನು ಕೋಪದಿಂದಲಾಗಲೀ, ದ್ವೇಷದಿಂದಲಾಗಲೀ ನಾಶವನ್ನೇನೂ ಪಡಿಸುವುದಿಲ್ಲ.  ಆದರೆ ಅವರು ತಮ್ಮ ಸ್ವಾರ್ಥಕ್ಕಾಗಿ ಸೇವೆ ಮಾಡಲಿಚ್ಛಿಸಿದರೆ, ಅದನ್ನು ಭಗವಂತ ಒಲ್ಲ.

ಜಗಕೆಲ್ಲ ಅಪ್ರತಿಮಲ್ಲ - ಭಗವಂತನು ಸರ್ವ ಶಕ್ತನು.  ಅವನನ್ನು ಯಾರು ಏನೂ ಮಾಡಲಾರರು.  ಅವನಿಗೆ ಯಾರಿಂದಲೂ ಯಾವ ಅಪಾಯವಾಗಲೀ, ಭಯವಾಗಲೀ ಇಲ್ಲ.  ಅವನಿಗೆ ಯಾರ ಸಹಾಯವೂ ಬೇಕಾಗಿಲ್ಲ.   ಅವನು ಸಜ್ಜನರಿಂದ ಮಾತ್ರ ಸೇವೆಯನ್ನು ಸ್ವೀಕರಿಸುತ್ತಾನೆ ಮತ್ತು ಅವರನ್ನು ಅನುಗ್ರಹಿಸಿ, ರಕ್ಷಣೆ ಮಾಡುತ್ತಾನೆ.


ನಿಷ್ಕಾಮನದಿ ಕಾದಿಹನು - ಶೇಷದೇವರು ಭಗವಂತನಿಗೆ ಪರ್ಯಂಕ.  ಶೇಷಶಯನನಾದ ಶ್ರೀಹರಿ ಸದಾ ಶೇಷನ ಸೇವೆಯನ್ನು ಸ್ವೀಕರಿಸುತ್ತಿರುವನು.  ಲಕ್ಷ್ಮಣನಾಗಿ  ನಿತ್ಯ ನಿರಂತರವಾಗಿ ನಿಷ್ಕಾಮದಿಂದ ಸ್ವಾಮಿಯ ಪಾದವಂದನೆ ಮಾಡುತ್ತಿದ್ದನು. 


ಭಕ್ತರು ಭಗವಂತನನ್ನು  ಭಕ್ತಿ ಹಾಗೂ ಪ್ರೀತಿಗಳಿಂದ ಆರಾಧಿಸಿದಾಗ ಭಗವಂತ ಭಕ್ತರನ್ನು ವಾತ್ಸಲ್ಯ ಕರುಣೆಗಳಿಂದ ರಕ್ಷಿಸುತ್ತಾನೆ.  ನಮ್ಮ ಹೃತ್ಕಮಲದಲ್ಲಿಯೇ ನೆಲೆಸಿರುವ ಮೂಲೇಶನನ್ನು ನಾವು ಸದಾ ಧ್ಯಾನಿಸುತ್ತಾ ವಿಷಯಾಸಕ್ತ ವಿಚಾರಗಳೆಂಬ ರಾಕ್ಷಸರು ಬಾಧೆ ಮಾಡದಂತೆ ಜತನವಾಗಿ ಕಾಯ್ದುಕೊಳ್ಳಬೇಕು.  ಎಲ್ಲಿ ಈ ರಾಕ್ಷಸರು ನೆಲೆಸಿರುತ್ತಾರೋ ಅಲ್ಲಿ ಭಗವಂತ ಇರುವುದಿಲ್ಲ, ಮರೆಯಾಗಿಬಿಡುತ್ತಾನೆ.  ಹಾಗಾಗದಂತೆ ನೋಡಿಕೊಳ್ಳುವುದೆಂದರೆ ’ಫಣಿ’ ನಿಧಿಯನ್ನು ಕಾಯ್ದಂತೆ ಕಾಯ್ದುಕೊಂಡು ನಮ್ಮ ಅಂತರಂಗವನ್ನು ಶುದ್ಧಿಗೊಳಿಸಿಕೊಳ್ಳಬೇಕು.  ಅಂತರಂಗವನ್ನು ಶುದ್ಧಿಗೊಳಿಸಿಕೊಳ್ಳುವುದೆಂದರೆ ನಾವು ನಿಷಿದ್ಧಾನ್ನ ಪದಾರ್ಥಗಳನ್ನೂ, ಪಾನಗಳನ್ನೂ ತ್ಯಜಿಸಬೇಕು, ಉಪವಾಸ, ವ್ರತ, ಪೂಜೆ, ಧ್ಯಾನಗಳನ್ನು  ಮಾಡಿಕೊಳ್ಳುವುದೆಂದು ಅರ್ಥ. 


ಪ್ರಣತರಲ್ಲಿ ಮುಖ್ಯನಾದ ವಾಯುದೇವರನ್ನು ಜಗನ್ನಾಥದಾಸರು ತಮ್ಮ ತತ್ವಸುವ್ವಾಲಿಯಲ್ಲಿ :


ಆಖಣಾಶ್ಮನೆ ನಿನ್ನ ಸೋಕಲರಿಯವು ದೋಷ

ಶ್ರೀಕಂಠಮುಖ್ಯಸುರರಿಗೆ | ಸುರರಿಗಿಲ್ಲವೊ ಭಾರ-
ತೀಕಾಂತ ನಿನಗೆ ಬಹದೆಂತೋ || - ದೇವಾಸುರರಲ್ಲಿ ಯುದ್ಧವಾದಾಗ ಅಸುರರು ರುದ್ರದೇವರ ಬಲದಿಂದ ವಿಜೃಂಭಿಸಿದರು.  ದೇವತೆಗಳು ಉದ್ಗೀಥನಾಮಕ ಶ್ರೀಹರಿಯನ್ನು ಉಪಾಸಿಸಿ ಅಸುರರನ್ನು ಗೆಲ್ಲುವ ಪ್ರಯತ್ನ ಮಾಡಿದರು.  ಯಾವುದೇ ದೇವತೆಯ ಪ್ರತಿಮೆಯನ್ನು ಮಾಡಿ ಅದರಲ್ಲಿ ಉದ್ಗೀಥನನ್ನು ಉಪಾಸಿಸಲು ಆರಂಭಿಸಿದರೂ ಅಸುರರು ಆ ಪ್ರತಿಮೆಯನ್ನು ಅಪವಿತ್ರ ಮಾಡಿ ಬಿಡುತ್ತಿದ್ದರು.  ಕೊನೆಗೆ ದೇವತೆಗಳು ಮುಖ್ಯಪ್ರಾಣನ ಪ್ರತಿಮೆಯನ್ನು ಮಾಡಿ ಉಪಾಸನೆ ಮಾಡಲಾರಂಭಿಸಿದರು.  ಅಸುರರು ಮುಖ್ಯಪ್ರಾಣ ದೇವರ ಪ್ರತಿಮೆಯ ಮೇಲೆ ಬೀಳಲು, ಮಣ್ಣು ಹೆಂಟೆಯು ವಜ್ರದ ಬಂಡೆಯ ಮೇಲೆ ಬಿದ್ದರೆ ಹೇಗೆ ಪುಡಿಯಾಗುವುದೋ ಹಾಗೆ ಚದುರಿ ಹೋದರು.  ಶ್ರೀಹರಿಗೆ ವಾಯುದೇವರು ಶ್ರೇಷ್ಠ ಪ್ರತಿಮೆ.  ಯಾರು ಅತಿ ಶುದ್ಧವಾದ ವಾಯುದೇವರ ಪ್ರತಿಮೆಯಲ್ಲಿ ಭಗವಂತನನ್ನು ಆರಾಧಿಸುವರೋ ಅವರು ಭಗವಂತನಿಗೆ ಅತಿ ಪ್ರಿಯರಾಗುತ್ತಾರೆಂದು ನುಡಿದಿದ್ದಾರೆ. 

ಸತತ ಸ್ಮರಿಸುತ ನಿನ್ನ ನುತಿಸಿ ಬೇಡಿ-ಕೊಳುವೆ

ಹಿತದಿಂದ ನಿನ್ನ ವಿಜ್ಞಾನ | ವಿಜ್ಞಾನ ನಿಜಭಾಗ-
ವತರ ಸಂಗವನೆ ಕರುಣಿಸೋ || - ಸತತವೂ ಸ್ಮರಿಸುತ್ತಾ  ಸ್ತೋತ್ರ ಮಾಡುತ್ತಾ ನಿನ್ನನ್ನೇ ಬೇಡುತ್ತಾ ಶರಣಾಗುವೆ.  ನನ್ನ ಉದ್ಧರಿಸಲೋಸುಗ ನಿನ್ನ ಸಂಬಂಧವಾದ ಜ್ಞಾನವನ್ನೂ, ವಿಜ್ಞಾನವನ್ನೂ ಕೊಟ್ಟು, ಪರಮ ಭಾಗವತರ ಸಂಗವನ್ನೂ ದಯಪಾಲಿಸಿ, ಕರುಣೆಯಿಂದ ರಕ್ಷಿಸು ಎನ್ನುತ್ತಾರೆ.  ಇದೇ ಅಂತರಂಗವನ್ನು ಶುದ್ಧಿಗೊಳಿಸಿಕೊಳ್ಳುವುದರ ಅರ್ಥ.  ಸದಾ ಸ್ಮರಣೆ, ನಿತ್ಯ ನಿರಂತರ ಧ್ಯಾನ, ಸ್ತೋತ್ರಗಳೇ ನಮ್ಮೊಳಗಿರುವ ಎಲ್ಲಾ ಕೊಳೆಯನ್ನೂ ತೊಳೆದು ಪವಿತ್ರವಾಗಿಸುವ ಸಾಧನವಾಗಿದೆ.

ಚಿತ್ರಕೃಪೆ : ಅಂತರ್ಜಾಲ












No comments: