Wednesday, July 15, 2015

ಕರುಣಾ ಸಂಧಿ - ೩೦ ನೇ ಪದ್ಯ ( ರಾಮಾವತಾರ )

ರಾಮೋರಾಮೋರಾಮ ಇತಿ ಸರ್ವೇಷಾಮಭವತ್ತದಾ |
ಸರ್ವೋ ರಾಮಮಯೋ ಲೋಕೋ ಯದಾ ರಾಮಸ್ತ್ವ ಪಾಲಯತ್ ||


ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 

ಕಾಯ್ದ ಸುಜನರನು ||೩೦||

ರಾವಣಾದಿನಿಶಾಚರಧ್ವಂಸಿ -  ಪುತ್ರ ಕಾಮೇಷ್ಠಿ ಯಾಗವನ್ನು ಮಾಡಿ ದಶರಥ ಮಹಾರಾಜನು ಆಯಾ ದೇವತೆಗಳನ್ನು ಹವಿಸ್ಸನ್ನು ಸ್ವೀಕರಿಸಲು ಆಹ್ವಾನಿಸಿದನು.  ಆಹ್ವಾನ ಸ್ವೀಕರಿಸಿ ದಯಮಾಡಿಸಿದ ಸಮಸ್ತ ದೇವತೆಗಳೂ ಅಲ್ಲಿಯೇ ಉಪಸ್ಥಿತರಿದ್ದ ಬ್ರಹ್ಮ ದೇವರಲ್ಲಿ ತಮ್ಮ ಅಳಲನ್ನು ಬಿನ್ನಹ ಮಾಡುವರು.  ಬ್ರಹ್ಮ ದೇವರ ವರಪ್ರಸಾದದಿಂದ ಅತಿಶಯ ಮದದಿಂದ ಕೊಬ್ಬಿರುವ ರಾವಣನೆಂಬ ರಾಕ್ಷಸನು ತಮ್ಮನ್ನೆಲ್ಲಾ ಪೀಡಿಸುತ್ತಿರುವನೆಂದೂ, ಸ್ವರ್ಗಲೋಕಾಧಿಪತ್ಯವನ್ನು ಗಳಿಸಿ ಇಂದ್ರದೇವನನ್ನು ಸ್ಥಾನದಿಂದ ಚ್ಯುತರನ್ನಾಗಿಸಲು ಹೊಂಚು ಹಾಕುತ್ತಿರುವನೆಂದೂ, ದುರಹಂಕಾರದಿಂದ ಉನ್ಮತ್ತನಾಗಿ ಋಷಿಗಳನ್ನೂ, ಯಕ್ಷ-ಗಂಧರ್ವರನ್ನೂ ಬಹುವಾಗಿ ಪೀಡಿಸುತ್ತಿರುವನೆಂದು ತಿಳಿಸುತ್ತಾರೆ.  ಬ್ರಹ್ಮದೇವರಿಂದ  ’ಗಂಧರ್ವ-ಯಕ್ಷ-ದೇವ-ರಾಕ್ಷಸ’ರಿಂದ ತಾನು ಅವಧ್ಯನಾಗುವಂತೆ ಪಡೆದಿರುವ ವರಪ್ರಸಾದದಿಂದ ದುಷ್ಟ ರಾವಣನು ಲೋಕಕಂಟಕನಾಗಿರುವನು.  ಆದ್ದರಿಂದ ರಾವಣನ ವಧೆಗೆ ಉಪಾಯವೊಂದನ್ನು ನಿರೂಪಿಸಬೇಕೆಂದು ಸಮಸ್ತ ದೇವತೆಗಳೂ ಬ್ರಹ್ಮದೇವರನ್ನು ಪ್ರಾರ್ಥಿಸುವರು.  ಬ್ರಹ್ಮದೇವರು ರಾವಣನಿಗೆ ಮಾನವರ ವಿಷಯದಲ್ಲಿದ್ದ ಅನಾದರಣೆ ಮತ್ತು ತಾತ್ಸಾರವನ್ನು ತಿಳಿಸುತ್ತಾ ರಾವಣನು ಮಾನವನಿಂದ ತನಗೆ ಮೃತ್ಯು ಬಾರದಿರಲೆಂದು ವರ ಕೇಳಿಲ್ಲವೆಂದು ತಿಳಿಸುವರು.  ಆದ್ದರಿಂದಲೇ ರಾವಣನು ಮಾನವನಿಂದಲೇ ಹತನಾಗಬೇಕು ಮತ್ತು ಭಗವಂತನೇ ಸಾಕ್ಷಾತ್ ಈ ಕಾರ್ಯವನ್ನು ಮಾಡಬೇಕಾಗಿರುವುದರಿಂದ ಸರ್ವ ದೇವತೆಗಳೂ ಶ್ರೀಹರಿಯನ್ನು ಪ್ರಾರ್ಥಿಸಬೇಕೆಂದು ತಿಳಿಸುವರು.  ಅದೇ ಸಮಯಕ್ಕೆ ಅಲ್ಲಿಗೆ ಶಂಖ-ಚಕ್ರ-ಗದಾಪಾಣಿಯಾಗಿ ಆಗಮಿಸಿದ ಶ್ರೀಹರಿಯನ್ನು ದೇವತೆಗಳು ನಾನಾ ವಿಧದಿಂದ ಸ್ತುತಿಸುತ್ತಾ ದಶರಥನ ಸುತನಾಗಿ ಜನಿಸಬೇಕೆಂದು ಪ್ರಾರ್ಥಿಸುತ್ತಾರೆ.   ಭಗವಂತನು ದೇವತೆಗಳಿಗೆ ಅಭಯವನ್ನು ನೀಡುತ್ತಾ ರಾವಣನನ್ನು ಪುತ್ರ-ಪೌತ್ರ-ಅಮಾತ್ಮ-ಮಂತ್ರಿ-ಜ್ಞಾನಿ-ಬಾಂಧವರೊಡನೆ ಸಂಹರಿಸಿ, ಮಾನವ ರೂಪದಲ್ಲಿ ತಾನು ಭೂಲೋಕವನ್ನು ಸಂರಕ್ಷಿಸುವುದಾಗಿ ಆಶ್ವಾಸನೆ ನೀಡುವನು.  ಪುಂಡರೀಕಾಕ್ಷನಾದ ಶ್ರೀಮಹಾವಿಷ್ಣುವು ನಾಲ್ಕು ಅಂಶಗಳಿಂದ ದಶರಥ ಮತ್ತು ಆತನ ನಾಲ್ವರು ಪತ್ನಿಯರಲ್ಲಿ ಭೂಲೋಕದಲ್ಲಿ ಅವತರಿಸುವನು.  ರಾಮಚಂದ್ರನಾಗಿ ಭರತ, ಲಕ್ಷ್ಮಣ ಮತ್ತು ಶತ್ರುಘ್ನನೊಂದಿಗೆ ಅಯೋಧ್ಯೆಯಲ್ಲಿ ಪ್ರಾದುರ್ಭವಿಸುವನು.  ಭಾಗವತ ನವಮಸ್ಕಂಧ ೮ನೆಯ ಅಧ್ಯಾಯದಲ್ಲಿ ಭಗವಂತ ಶ್ರೀರಾಮನಾಗಿ ಅವತರಿಸಿದ್ದನ್ನು "ಅಂಶಾಂಶೇನ ಚತುರ್ಧಾSಗಾತ್ ಪುತ್ರತ್ವಂ ಪ್ರಾರ್ಥಿತಃ ಸುರೈಃ | ರಾಮ ಲಕ್ಷ್ಮಣ ಶತ್ರುಘ್ನ ಭರತಾಶ್ಚೇತಿ ಸಂಜ್ಞಯಾ"  ಎಂದು ವಿವರಿಸಿದ್ದಾರೆ.  ಬ್ರಹ್ಮದೇವರು  ಮಾನವ ರೂಪದಲ್ಲಿ ಅವತರಿಸುವ ಭಗವಂತನ ಭೂಭಾರ ಹರಣ ಕಾರ್ಯದಲ್ಲಿ ನೆರವಾಗಲು, ಸಹಭಾಗಿಗಳಾಗಲು ಸಮಸ್ತ ದೇವತೆಗಳಿಗೂ ಆದೇಶವೀಯುವರು.  ಸಮಸ್ತ ದೇವತೆಗಳೂ ನಾನಾ ವಿಧವಾದ ರೂಪಗಳಲ್ಲಿ ಪ್ರಾಣಿ, ಪಕ್ಷಿ, ಕಪಿಗಳಾಗಿ ಭಗವಂತ ರಾಮನಾಗಿ ನಡೆಸುವ ಲೀಲಾವಿನೋದದಲ್ಲಿ ಪಾಲ್ಗೊಳ್ಳಲು ಆಗಮಿಸುವರು.  ರಾಮಾವತಾರದ ಲೀಲೆ ಅನಾವರಣಗೊಳ್ಳುವುದು, ರಾಮಾಯಣವಾಗುವುದು.

ರಾಮಾಯಣವನ್ನು ಅರಿಯುವ ಪ್ರಯತ್ನವನ್ನು ಮಾಡಿದಾಗ ನಮಗೆ ಮೇಲ್ನೋಟಕ್ಕೆ ರಾಮಾವತಾರವು ರಾವಣನ ವಧೆಗಾಗಿಯೂ, ವಿಜೃಂಭಿಸುತ್ತಿದ್ದ ತಮಸ್ಸನ್ನು ಹತ್ತಿಕ್ಕುವುದಕ್ಕಾಗಿಯೂ ಆಗಿರುವುದೆಂಬ ಅಭಿಪ್ರಾಯವು ಮೂಡುವುದು.   ಆದರೆ ಮಾನವನಾಗಿ ಅವತರಿಸಿದ ಭಗವಂತನು ತನ್ನ ವ್ಯಕ್ತಿತ್ವದ ಮೂಲಕವೂ, ಅನಂತ ಗುಣಗಳ ಮೂಲಕವೂ ಅನೇಕ ದೃಷ್ಟಾಂತಗಳನ್ನು ಸೃಷ್ಟಿಸುವನು.  ಸಕಲ ಗುಣ ಪರಿಪೂರ್ಣನಾಗಿ, ಕಲ್ಯಾಣ ಗುಣಗಳಿಂದ ಶೋಭಿಸುವನು.  ಭಗವಂತನಾದ ಶ್ರೀರಾಮನು "ನಿತ್ಯಪೂರ್ಣ ಸುಖಜ್ಞಪ್ತಿ ಸ್ವರೂಪೋSಸೌ ಯತೋ ವಿಭುಃ" - ರಾಮ ಎಂಬ ಹೆಸರಿನಲ್ಲೇ ನಿತ್ಯಪೂರ್ಣ ಸುಖಜ್ಞಾನ ಸ್ವರೂಪನೆಂಬ ಅರ್ಥ ವಿವರಣೆಯಿದೆ.  ’ರ ಆ ಮ’ ಎಂಬ ಮೂರು ಅಕ್ಷರಗಳ ಸಮ್ಮಿನಲ ರಾಮನೆಂಬ ಶಬ್ದವಾಗುವುದು.  ರ ಎಂದರೆ ಸುಖ, ಮ ಎಂದರೆ ಜ್ಞಾನ ಮತ್ತು ಇವೆರಡರ ನಡುವೆ ಎರಡಕ್ಕೂ ಅನ್ವಯವಾಗುವಂತೆ ಇರುವ ಆ ಎಂದರೆ ಎರಡೂ ಗುಣಗಳೂ ನಿತ್ಯವಾಗಿವೆ, ಪೂರ್ಣವಾಗಿವೆ ಎಂಬರ್ಥವಾಗುತ್ತದೆ.  ಮಾನವನು ವಿಕಾರ ರಹಿತವಾದ ಆತ್ಮನಾಗಿರಬೇಕೆಂಬ ಸತ್ಯವನ್ನು ಪ್ರತಿಪಾದಿಸುವನು.  ಶಾಸ್ತ್ರ, ವೇದಗಳನ್ನು ಆಳವಾಗಿ ಅಭ್ಯಸಿಸಿ ನಾಡಿನ ಸಂಸ್ಕೃತಿಯನ್ನು ಉನ್ನತವಾಗಿಸಬೇಕೆಂಬುದನ್ನು ತಿಳಿಸುವನು.  ಒಬ್ಬ ರಾಜನಾಗಿ ಆಶ್ರಿತರಕ್ಷಕನಾಗಿರಬೇಕೆಂಬುದನ್ನು ತೋರಿಸುವನು.  ಶುದ್ಧಾತ್ಮನಾಗಿ ಗುರು-ಹಿರಿಯರಿಗೆ ವಿಧೇಯನಾಗಿರಬೇಕೆಂಬುದನ್ನು ಸಾಬೀತುಪಡಿಸುವನು.  ತನ್ನ ವನವಾಸಕ್ಕೆ ಕಾರಣಳಾದ ಕೈಕೇಯಿಯನ್ನೂ ಕೂಡ ದ್ವೇಷಿಸದೆ, ಪ್ರೀತಿಸಿ, ಹಿರಿಯರಲ್ಲಿ ಭಕ್ತಿ, ವಿನಯತೆಯನ್ನು ಪ್ರದರ್ಶಿಸುವನು.  ಅನುಜನಾಗಿ ತನ್ನ ಸಹೋದರರನ್ನು ಅಕ್ಕರೆಯಿಂದ ಕಾಣುತ್ತಾ, ಅವರಿಗೆ ತಾನು ದಾರಿತೋರುವನು.  ಧರ್ಮಕಾರ್ಯಗಳಿಗೆ ಅಡ್ಡಿ ಮಾಡುವವರನ್ನು ಸದೆಬಡಿದು ಧರ್ಮರಕ್ಷಕನಾಗಿ ಮೆರೆಯುವನು.   ದಕ್ಷ ರಾಜನಾಗಿ, ಪಿತೃವಾಕ್ಯ ಪರಿಪಾಲಕನಾಗಿ, ಏಕಪತ್ನೀ ವ್ರತಸ್ಥನಾಗಿ ಶ್ರೀರಾಮಚಂದ್ರನು ನಮ್ಮ ಬದುಕಿನಲ್ಲಿ, ಮನೆ-ಮನಗಳಲ್ಲಿ ಹಾಸುಹೊಕ್ಕಾಗಿ ಸುಂದರ ಭಾವವಾಗಿ ನಿಲ್ಲುವನು.

ಭಾಗವತ ಎರಡನೆಯ ಸ್ಕಂಧ ೭ನೆಯ ಅಧ್ಯಾಯದಲ್ಲಿ ರಾಮಾವತಾರವನ್ನು
ಅಸ್ಮತ್ಪ್ರಸಾದಸುಮುಖಃ ಕಲಯಾ ಕಲೇಶ
ಇಕ್ಷ್ವಾಕುವಂಶ ಅವತೀರ್ಯ ಗುರೋರ್ನಿದೇಶೇ |
ತಿಷ್ಠನ್ವನಂ ಸದಯಿತಾನುಜ ಆವಿವೇಶ
ಯಸ್ಮಿನ್ವಿರುಧ್ಯ ದಶಕನ್ಧರ ಆರ್ತಿಮಾರ್ಚ್ಛತ್ || - ಪರಿಪೂರ್ಣನಾದ ಭಗವಂತನು ನಮ್ಮನ್ನು ಅನುಗ್ರಹಿಸುವುದಕ್ಕಾಗಿಯೇ ತನ್ನ ಅಂಶಕಲೆಗಳಾದ ಲಕ್ಷ್ಮಣ, ಭರತ ಮತ್ತು ಶತ್ರುಘ್ನರೊಡನೆ ಶ್ರೀರಾಮಚಂದ್ರನಾಗಿ ಇಕ್ಷ್ವಾಕು ವಂಶದಲ್ಲಿ ಅವತರಿಸುವನು.  ಅವತರಿಸಿ ತಂದೆಯ ಆಜ್ಞೆಯನ್ನು ಪಾಲಿಸುವ ಮಗನಾಗಿ ಪತ್ನೀ ಮತ್ತು ತಮ್ಮನೊಡನೆ ವನವಾಸ ಮಾಡುವನು.  ದೇವತೆಗಳಿಗೆ ಕಂಟಕಪ್ರಾಯನಾಗಿದ್ದು, ರಾಮಚಂದ್ರನ ವನವಾಸದ ಸಮಯದಲ್ಲಿ ವಿರೋಧ ಬೆಳೆಸಿಕೊಂಡಿದ್ದ ದುಷ್ಟದಶಾನನನ್ನು ಸಂಹಾರ ಮಾಡುವನು ಎಂದೂ ನವಮಸ್ಕಂಧದ ೧೦ನೆಯ ಮತ್ತು ೧೧ನೆಯ ಅಧ್ಯಾಯಗಳಲ್ಲಿ ಸಂಪೂರ್ಣ ರಾಮಾಯಣದ ಕಥೆಯನ್ನೂ ವಿವರಿಸಲಾಗಿದೆ.

ಶ್ರೀವಿಷ್ಣು ಸಹಸ್ರನಾಮದ ಫಲಶ್ರುತಿಯಲ್ಲಿ ಈಶ್ವರ ಉವಾಚವೆಂದು "ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ | ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ |  ಶ್ರೀ ರಾಮನಾಮ ವರಾನನೇ ಓಂ ನಮಃ ಇತಿ" ಎಂಬ ಶ್ಲೋಕವಿದೆ.  ರುದ್ರದೇವರು ವಿಷ್ಣು ಸಹಸ್ರನಾಮವನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡ ಮೊದಲಿಗರು.  ಇದರ ಮಹತ್ವವನ್ನು ಪಾರ್ವತಿದೇವಿಗೆ ತಿಳಿಸುತ್ತಾ ಶ್ರೀರಾಮನಾಮದ ಜಪ ವಿಷ್ಣು ಸಹಸ್ರನಾಮದ ಪಾರಾಯಣಕ್ಕೆ ಸಮನಾದದ್ದು ಎಂದಿದ್ದಾರೆ.  ಹೇಗೆಂದರೆ “ರಾ” ಎನ್ನುವುದು ಅಕ್ಷರಮಾಲೆಯಲ್ಲಿ ೨ನೇ ಅಕ್ಷರ, “ಮ” ೫ನೇ ಅಕ್ಷರವಾಗುತ್ತದೆ.  ಆದ್ದರಿಂದ ೨X೫=೧೦, ೨X೫=೧೦, ೨X೫=೧೦, ಆಮೇಲೆ ೧೦X೧೦X೧೦=೧೦೦೦.  ಇದೊಂದೇ ಶ್ಲೋಕ ಪಠಿಸಿದರೆ ವಿಷ್ಣುವಿನ ೧೦೦೦ ನಾಮ ಜಪಿಸಿದಂತೆ ಆಗುತ್ತದೆ.  "ರಾಮನಾಮ"ದ ಜಪ ಅಷ್ಟು ಮಹತ್ವದ್ದೆಂದು ಸಾರಿದ್ದಾರೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ರಾಮಾವತಾರವನ್ನು
"ರಾಘವ ರಾಘವ ರಾಕ್ಷಸತ್ರೋ ಮಾರುತಿ ವಲ್ಲಭ ಜಾನಕಿಕಾಂತ" - ರಘುಕುಲತಿಲಕನೂ, ರಾಕ್ಷಸ ಶತ್ರುವೂ, ಆಂಜನೇಯನಿಗೆ ಸ್ವಾಮಿಯೂ, ಸೀತಾಪತಿಯೂ ಆದ ಶ್ರೀರಾಮನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಖರತರ ನಿಶಿಚರ ದಹನ ಪರಾಮೃತ ರಘುವರ ಮಾನದಭವ ಮಮ ಶರಣಮ್ |
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ರಾವಣ ಕುಂಭಕರ್ಣಾದಿ ದುಷ್ಟ ದೈತ್ಯರನ್ನು ಸಂಹರಿಸಿದ, ಸರ್ವ ಸ್ವತಂತ್ರನಾದ, ಶ್ರೀ ಹನುಮದಾದಿಗಳಿಗೆ ಜ್ಞಾನದಾಯಕನಾದ, ರಾಮಾವತಾರಿಯೂ ಆದ ಬ್ರಹ್ಮಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ, ಪುರುಷೋತ್ತಮನೂ, ಸದಾ ಪ್ರಕಾಶಮಾನನೂ, ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ, ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀಶಂಕರಾಚಾರ್ಯರು  ತಮ್ಮ ಶ್ರೀರಾಮ ಸ್ತೋತ್ರಮ್ ನಲ್ಲಿ

ವಿಶುದ್ಧಂ ಪರಂ ಸಚ್ಚಿದಾನಂದರೂಪಂ | ಗುಣಾಧಾರಮಾಧಾರಹೀನಂ ವರೇಣ್ಯಮ್ ||
ಮಹಾಂತಂ ವಿಭಾಂತಂ ಗುಹಾಂತಂ ಗುಣಾಂತಂ | ಸುಖಾಂತಂ ಸ್ವಯಂ ಧಾಮ ರಾಮಂ ಪ್ರಪದ್ಯೇ || - ಅತ್ಯಂತ ಶುದ್ಧನಾದ, ಪರಮಾತ್ಮ, ಸಚ್ಚಿದಾನಂದ ಸ್ವರೂಪನನ್ನು, ಗುಣಗಳಿಗೆ ಆಧಾರನನ್ನು, ಶ್ರೇಷ್ಠನನ್ನು, ಮಹಾಂತನನ್ನು, ಯಾರಲ್ಲಿ ಬುದ್ಧಿ-ಗುಣ-ಸುಖಗಳು ಬೆಳಗಿ ಲೀನವಾಗುವವೋ, ಯಾರು ತನಗೆ ತಾನೇ ಆಶ್ರಯನೋ ಅಂತಹ ಶ್ರೀರಾಮನಿಗೆ ಶರಣು ಬಂದಿರುವೆನು ಎಂದೂ
ನಮೋ ವಿಶ್ವಕರ್ತ್ರೇ ನಮೋ ವಿಶ್ವಹರ್ತ್ರೇ | ನಮೋ ವಿಶ್ವಭೋಕ್ರ್ತೇ ನಮೋ ವಿಶ್ವಮಾತ್ರೇ ||
ನಮೋ ವಿಶ್ವನೇತ್ರೇ ನಮೋ ವಿಶ್ವಜೇತ್ರೇ | ನಮೋ ವಿಶ್ವಪಿತ್ರೇ ನಮೋ ವಿಶ್ವಮಾತ್ರೇ || - ವಿಶ್ವದ ನಿರ್ಮಾಪಕನೇ ನಿನಗೆ ನಮಸ್ಕಾರವು.  ವಿಶ್ವಸಂಹಾರಕನೇ ನಮಸ್ಕಾರವು.  ವಿಶ್ವದ ಭೋಗ ಮಾಡುವವನೇ ನಮಸ್ಕಾರವು.  ವಿಶ್ವಮಾತ್ರನೇ, ವಿಶ್ವದ ಮುಂದಾಳುವೇ, ವಿಶ್ವ ವಿಜಯಿಯೇ, ವಿಶ್ವದ ತಂದೆ-ತಾಯಿಯೇ ನಿನಗೆ ನಮಸ್ಕಾರವು ಎಂದೂ
ಪವಿತ್ರಂ ಚರಿತ್ರಂ ವಿಚಿತ್ರಂ ತ್ವದೀಯಂ | ನರಾ ಯೇ ಸ್ಮರಂತ್ಯನ್ವಹಂ ರಾಮಚಂದ್ರ ||
ಭವಂತಂ ಭವಾಂತಂ ಭರಂತಂ ಭಜಂತೋ | ಲಭಂತೇ ಕೃತಾಂತಂ ನ ಪಶ್ಯಂತ್ಸ ತೋSನ್ತೇ || - ಶ್ರೀರಾಮಚಂದ್ರ ನಿನ್ನ ಚರಿತ್ರೆಯು ವಿಚಿತ್ರವೂ, ಪವಿತ್ರವೂ ಆಗಿದೆ.  ಯಾರು ಈ ಚರಿತ್ರೆಯನ್ನು ಯಾವಾಗಲೂ ಸ್ಮರಿಸುವರೋ ಅವರು ಕಾಲತ್ರಯಗಳನ್ನು ನಿವಾರಿಸಿ , ತಮ್ಮ ಭ್ರಮೆಗಳನ್ನು ಹೋಗಲಾಡಿಸಿ ನಿನ್ನನ್ನು ಭಜಿಸುತ್ತಾ ಕೃತಕೃತ್ಯರಾಗುವರು.  ಅವರು ನಿನ್ನನ್ನೇ ಹೊಂದುವರು, ಅವರಿಗೆ ಅಂತ್ಯಕಾಲದಲ್ಲಿ ಯಮನ ದರ್ಶನವಿರುವುದಿಲ್ಲ ಎಂದು  ಸ್ತುತಿಸಿದ್ದಾರೆ.  ಹಾಗೇ ತಮ್ಮ
"ಶ್ರೀರಾಮ ಮಾನಸ ಸ್ತೋತ್ರಮ್" ನಲ್ಲಿ
ಜಯ ಜಯತಿ ವಿಷ್ಣೂ ರಾಮನಾಮಾಭಿಧೇಯೋ | ಜಯತಿ ಜಯತಿ ಪೂರ್ಣಃ ಕೋಟಿ ಕಂದರ್ಪಭಾಸಃ || - ಶ್ರೀರಾಮನೆಂಬ ಹೆಸರಿನ ಶ್ರೀವಿಷ್ಣುವಿಗೆ ಜಯವಾಗಲಿ, ಕೋಟಿ ಮದನರ ತೇಜವುಳ್ಳವನೇ, ಪೂರ್ಣನೇ ನಿನಗೆ ಜಯವಾಗಲಿ ಎಂದೂ
ಜಯ ಜಯ ಕರುಣಾಬ್ಧೇSನಂತ ಭಾನುಪ್ರಕಾಶ | ಜಯ ಜಯ ಜಗದೀಶಾವ್ಯಕ್ತ ಮಾಯಾಧಿದೇವ ||
ಜಯ ಜಯ ಧರಣೀಜಾವಲ್ಲಭಾನಂತವೀರ್ಯ | ಜಯ ಜಯ ರಘುನಾಥಾನಾಥಾನಾಥ ಪ್ರಸೀದ || - ಕರುಣಾಸಾಗರ, ಅನಂತಸೂರ್ಯ ಪ್ರಕಾಶ ನಿನಗೆ ಜಯವಾಗಲಿ, ಜಗದೀಶ, ಅವ್ಯಕ್ತ, ಮಾಯಾಧಿಪನೇ ನಿನಗೆ ಜಯವಾಗಲಿ, ಭೂಮಾತೆಯ ಕನ್ಯೆ ಸೀತಾದೇವಿಯ ಪತಿಯೇ, ಅತುಲ ಪರಾಕ್ರಮಿಯೇ ನಿನಗೆ ಜಯವಾಗಲಿ, ಅನಾಥನಾಥ, ರಘುನಾಥ ಪ್ರಸನ್ನನಾಗು, ನಿನಗೆ ಜಯವಾಗಲಿ ಎಂದು ಸ್ತುತಿಸಿ ಪ್ರಾರ್ಥಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ಶ್ರೀರಾಮಾವತಾರವನ್ನು ಒಟ್ಟು ಹನ್ನೆರಡು ಚರಣಗಳಲ್ಲಿ ಸ್ತುತಿಸಿ, ವರ್ಣಿಸಿದ್ದಾರೆ :

ಶ್ರೀರಾಮ ಲಕ್ಷ್ಮಣ ಶುಕಾರಾಮ ಭೂರವತು ಗೌರಾಮಲಾಮಿತಮಹೋ
ಹಾ ರಾಮರಸ್ತುತಯಶೋ ರಾಮಕಾಂತಿ ಸುತನೋ ರಾಮಲಬ್ಧಕಲಹ |
ಸ್ವಾರಾಮವರ್ಯರಿಪು ವೀರಾಮಯರ್ಧಿಕರ ಚೀರಾಮಲಾವೃತಕಟೇ
ಸ್ವಾರಾಮದರ್ಶನಜ ಮಾರಾಮಯಾಗತ ಸುಘೋರಾ ಮನೋರಥ ಹರ || - ಲಕ್ಷ್ಮಣನಿಗೆ ಆಶ್ರಯದಾತನಾದ, ಮನೋಹರವಾದ ಮುಕ್ತಾಹಾರಾದಿ ಆಭರಣಗಳುಳ್ಳ, ದೇವತೆಗಳಿಂದ ವರ್ಣಿಸಲ್ಪಡುವ, ಮಹಾಕೀರ್ತಿಯುಳ್ಳ, ಅತಿಮನೋಹರ ಕಾಂತಿಯುಕ್ತ ಶರೀರವುಳ್ಳ, ಪರಶುರಾಮನೊಂದಿಗೆ ಕಲಹದ ನಾಟಕವಾಡಿದ, ಸ್ವರ್ಗದ ಇಂದ್ರಾದಿ ದೇವತೆಗಳನ್ನು ಸೋಲಿಸಿದ ದೈತ್ಯರಿಗೆ ಹೆದರಿಕೆಯನ್ನುಂಟು ಮಾಡಿದ, ವಲ್ಕಲಧಾರಿಯಾದ, ಪಂಚವಟಿಯ ಉದ್ಯಾನವನ್ನು ಕಂಡು ಶೀರಾಮದರ್ಶನದಿಂದ ಕಾಮಬಾಣ ಪೀಡಿತೆಯಾದ ಶೂರ್ಪಣಖಿಯ ಇಷ್ಟಾರ್ಥ ಭಂಗ ಮಾಡಿದ ಶ್ರೀರಾಮಚಂದ್ರನೇ ನನ್ನನ್ನು ಸದಾಕಾಲ ರಕ್ಷಿಸು ಎಂದೂ
ಧೀಮಾನಮೇಯ ತನು ಧಾಮಾSSರ್ತ ಮಂಗಲದ ನಾಮಾ ರಮಾ ಕಮಲ ಭೂ
ಕಾಮಾರಿ ಪನ್ನಗಪ ಕಾಮಾಹಿವೈರಿ ಗುರು ಸೋಮಾದಿವಂದ್ಯ ಮಹಿಮಾ |
ಸ್ಥೇಮಾದಿನಾSಪಗತ ಸೀಮಾSವತಾತ್ಸಖಲ ಸಾಮಾಜ ರಾನಣರಿಪೂ
ರಾಮಾಭಿಧೋ ಹರಿರಭೌಮಾಕೃತಿಃ ಪ್ರತನ ಸಾಮಾದಿವೇದವಿಷಯಃ || - ಸರ್ವತತ್ತ್ವ ದೇವತೆಗಳಿಗೂ ಪ್ರೇರಕನಾದ, ಬ್ರಹ್ಮಾದಿ ದೇವತೆಗಳಿಂದಲೂ ಸಮಗ್ರವಾಗಿ ತಿಳಿಯಲು ಅಸಾಧ್ಯವಾದ ಮಹಿಮಾತಿಶಯವುಳ್ಳ, ಭಕ್ತಜನರ ದುಃಖಗಳನ್ನು ಪರಿಹರಿಸುವ ಮಂಗಲಕರವಾದ ನಾಮಗಳುಳ್ಳ, ಲಕ್ಷ್ಮೀ ಬ್ರಹ್ಮಾದಿ ದೇವತೆಗಳಿಂದ ವಂದಿತನಾದ, ಸಮಸ್ತ ಚರಾಚರ ಪ್ರಪಂಚದ ಸೃಷ್ಟಿ ಸ್ಥಿತಿ ಪ್ರಲಯಾದಿ ಕರ್ತನಾದ, ಸರ್ವ ಸೈನ್ಯ ಸಹಿತನಾದ ರಾವಣನನ್ನು ಸಂಹರಿಸಿದ, ಅಪ್ರಾಕೃತವಾದ ಶರೀರವುಳ್ಳ, ವೇದ ಪ್ರತಿಪಾದ್ಯನಾದ, ಶ್ರೀರಾಮನೆಂಬ ಹೆಸರಿನಿಂದ ಭೂಮಿಯಲ್ಲಿ ಅವತರಿಸಿದ ಶ್ರೀಹರಿಯು ನಮ್ಮನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ರಾಮಾವತಾರವನ್ನು
ವಿತರಸಿ ದಿಕ್ಷು ರಣೇ ದಿಕ್ಪತಿಕಮನೀಯಂ
ದಶಮುಖ ಮೌಲಿಬಲಿಂ ರಮಣೀಯಂ
ಕೇಶವ ಧೃತ ರಾಮಶರೀರ ಜಯ ಜಗದೀಶ ಹರೇ || -  ದಿಕ್ಪಾಲಕರಿಗೆ ರಣದೀಕ್ಷೆಯನ್ನು ವಿತರಿಸುವ ರಮಣೀಯ ದೃಶ್ಯ, ದಶಕಂಠನ ಮುಕುಟವನ್ನು ಬಲಿಯಾಗಿಸುವ ರಮಣೀಯ ದೃಶ್ಯ, ಕೇಶವ ಧೃತ ರಾಮ ರೂಪನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಮಾನವನ ವಿಕಾಸಕ್ಕೆ ಭಗವಂತನ ರಾಮಾವತಾರವನ್ನು ಸಮನ್ವಯಿಸಿದಾಗ ಶ್ರೀರಾಮನೆಂದರೆ ಮರ್ಯಾದಾ ಪುರುಷೋತ್ತಮನೆಂದೂ, ಅತ್ಯಂತ ಸಂಭಾವಿತನೆಂದೂ ಆರಾಧಿಸುತ್ತೇವೆ. ಸಮಯ ಬಂದಾಗ ದುಷ್ಟ ಶಕ್ತಿಗಳ ನಿವಾರಣೆ ಮಾಡಿದ ಭಗವಂತನೆಂದು ಕೊಂಡಾಗ, ನಮಗೆ ರಾಮ ನಮ್ಮಲ್ಲಿರುವ ದುರ್ವ್ಯಸನಗಳನ್ನು ದಮನ ಮಾಡಲು, ನಮ್ಮ ಮನಸ್ಸನ್ನು ಭಗವಂತನ ಪಾದದಲ್ಲಿ ನೆಲೆಗೊಳಿಸಲು, ಗುರುವಾಗಿ ಹತ್ತಿರವಾಗುತ್ತಾನೆ. ಸಮಚಿತ್ತದಿಂದ ಬದುಕು ನಡೆಸಲು ಆದರ್ಶ ವ್ಯಕ್ತಿಯಾಗಿ ಕಾಣಿಸುತ್ತಾನೆ. ಅನುಕರಿಸಲೇ ಬೇಕಾದ ಸೌಮ್ಯ ಸ್ವಭಾವ, ಗಂಭೀರಾಕೃತಿ, ಇಂದ್ರಿಯಗಳ ನಿಗ್ರಹ ಶಕ್ತಿ, ರೂಪ, ಲಾವಣ್ಯ ಎಲ್ಲವೂ ರಾಮನನ್ನು ನಮ್ಮ ಮನದಲ್ಲಿ ನೆಲೆಗೊಳಿಸಲು ಸುಲಭ ಸಾಧ್ಯವಾಗುವಂತೆ ಮಾಡಿದೆ. ಪತ್ನಿಯೆಡೆಗಿನ ಅನುಪಮ ಪ್ರೇಮ, ಸೋದರ ವಾತ್ಸಲ್ಯ, ಹೀಗೆ ಪಟ್ಟಿ ಮಾಡುತ್ತಾ ಹೋದಾಗ ರಾಮ ಭಗವಂತ ಎನ್ನುವುದಕ್ಕಿಂತ ನಮ್ಮಲ್ಲೇ, ನಮ್ಮೊಳಗೇ ನೆಲೆಸಿರುವ ನಮ್ಮದೇ ಆತ್ಮಸಖ ಎನ್ನುವ ಅತಿ ನಿಕಟ ಸಂಬಂಧದ ಭಾವ ಬರುತ್ತದೆ.  ಪ್ರತಿಯೊಬ್ಬ ಮನುಷ್ಯನೂ ತನಗೊಂದು ಕಷ್ಟ ಬಂದಾಗಲಾಗಲೀ, ದುಃಖ ಬಂದಾಗಲಾಗಲೀ ಅಥವಾ ಅತಿಯಾದ ಸಂತೋಷವೇ ಆದಾಗಲೂ ಕೂಡ ಮೊಟ್ಟ ಮೊದಲು ಉದ್ಗರಿಸುವುದು "ರಾಮಾ" ಎಂದೇ.  ರಾಮಚಂದ್ರನು ನಮ್ಮ ಉಸಿರಿನಲ್ಲಿಯೇ ನೆಲೆಸಿದ್ದಾನೆಂಬುದನ್ನು ಗಮನಿಸಿಕೊಳ್ಳಬೇಕು.


ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ಕೈಗಳಲ್ಲಿ ಶ್ರೀರಾಮ ರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ರಾಮಚಂದ್ರನ ರೂಪದಿಂದವತರಿಸಿದಾಗ ರಮಾದೇವಿಯು ’ಸೀತಾದೇವಿ’ ಆಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ
ಶತಧೃತಿಯ ನುಡಿಗೆ ದಶರಥನ ಗರ್ಬದಿ ಬಂದಿ
ದಿತಿಜರನು ಒರಸಿ ಸುಜನ-ರ | ಸುಜನರನು ಪೊರೆದ ರಘು-
ಪತಿಯೆ ನೀನೊಲಿದು ದಯವಾಗೋ || -  ಬ್ರಹ್ಮದೇವನ ವಿಜ್ಞಾಪನೆಗೆ ದಶರಥರಾಜನ ಹೊಟ್ಟೆಯಲ್ಲಿ ಅವತರಿಸಿ, ದೈತ್ಯರನ್ನು ನಾಶಮಾಡಿ, ಸಜ್ಜನರನ್ನು ರಕ್ಷಿಸಿದ, ಹೇ ರಘುಕುಲದೊಡೆಯ ರಾಮಚಂದ್ರ ನೀನು ಪ್ರಸನ್ನನಾಗಿ, ದಯವಾಗೋ ಎಂದು ಪ್ರಾರ್ಥಿಸಿದ್ದಾರೆ.


ರಾಮಾಯಣದಲ್ಲಿ ಉಲ್ಲೇಖವಿರುವಂತೆ
ಸರ್ವದೇವಮಯೋ ರಾಮಃ ಸ್ಮೃತಶ್ಚಾರ್ತಿ ಪ್ರಣಾಶನಃ | - ಶ್ರೀರಾಮನು ಸರ್ವದೇವಮಯನು.  ಶ್ರೀರಾಮನಲ್ಲಿಯೇ ಎಲ್ಲ ದೇವತೆಗಳೂ ಇರುವರು. ಸ್ಮರಿಸಿಕೊಂಡೊಡನೆಯೇ ಭಕ್ತರ ಪೀಡೆಗಳನ್ನು ವಿನಾಶಗೊಳಿಸುತ್ತಾನೆ.
ರಾಮನಾಮೈವ ನಾಮೈವ ನಾಮೈವ ಮಮ ಜೀವನಮ್ |
ಕಲೌ ನಾಸ್ತ್ಯೇವ ನಾಸ್ತ್ಯೇವ ನಾಸ್ತ್ಯೇವ ಗತಿರನ್ಮಥಾ || - ಶ್ರೀರಾಮನಾಮವೇ - ಜಯರಾಮನಾಮವೇ - ಜಯ ಜಯ ರಾಮನಾಮವೇ ನನ್ನ ಜೀವನವು.  ಕಲಿಯುಗದಲ್ಲಿ ಪರಮಗತಿಯನ್ನು ಹೊಂದಲು ಬೇರೆ ಯಾವ ಉಪಾಯವೂ ಇಲ್ಲ, ಇಲ್ಲ, ಇಲ್ಲ, ಇಲ್ಲವೇ ಇಲ್ಲ. 


ಚಿತ್ರಕೃಪೆ : ಅಂತರ್ಜಾಲ

https://en.wikipedia.org/wiki/Kodandarama_Temple
https://en.wikipedia.org/wiki/Ramateertham
http://www.karnataka.com/hampi/kodanda-rama-temple/

Sunday, June 28, 2015

ಕರುಣಾ ಸಂಧಿ - ೩೦ ನೇ ಪದ್ಯ ( ಪರಶುರಾಮಾವತಾರ )

ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 

ಕಾಯ್ದ ಸುಜನರನು ||೩೦||
ರೇಣುಕಾತ್ಮಜ : ಪದ್ಮ ಪುರಾಣದ  "ಪರಶುರಾಮ ಚರಿತ್ರೆ"ಯಲ್ಲಿ ಜಮದಗ್ನಿ ಋಷಿಯ ಮಗನಾಗಿ ಅವತರಿಸಿದ ’ರಾಮ’ ನಾಮಕನು ’ಪರಶುರಾಮ’ನಾದ ಕಥೆಯ ವಿವರಣೆಯಿದೆ.   ಭೃಗು ಋಷಿಯ ಮಗನಾದ ಜಮದಗ್ನಿಯು ದೇವೇಂದ್ರನನ್ನು ಕುರಿತು ಉಗ್ರವಾದ ತಪಸ್ಸು ಮಾಡಿ, ಕಾಮಧೇನುವೆಂಬ ಹೆಸರುಳ್ಳ ’ಸುರಭಿ’ ನಾಮಕ ಹಸುವನ್ನು ವರವಾಗಿ ಪಡೆಯುವನು.  ಸುರಭಿಯ ಕೃಪೆಯಿಂದ ಜಮದಗ್ನಿ ಮಹರ್ಷಿಯು ಕುಬೇರನಂತೆ ಐಶ್ವರ್ಯವನ್ನು ಹೊಂದಿ ಭೂಲೋಕದ ದೇವೇಂದ್ರನಂತೆ ವೈಭವ ಜೀವನವನ್ನು ನಡೆಸುವನು.  ರೇಣುಕನ ಮಗಳಾದ ರೇಣುಕಾಳನ್ನು ವಿವಾಹವಾಗಿ, ಪುತ್ರಕಾಮೇಷ್ಠಿ ಯಾಗವನ್ನು ಮಾಡಿ, ಮಹಾ ಪ್ರತಾಪಶಾಲಿಯಾದ ಪುತ್ರರತ್ನವನ್ನು ಪಡೆಯುವನು.  ಸರ್ವಗುಣ ಹಾಗೂ ಲಕ್ಷಣಗಳ ಸಂಪನ್ನನಾದ ಶ್ರೀಹರಿಯೇ ತನ್ನ ಮೊಮ್ಮಗನಾಗಿ ಜನಿಸಿರುವನೆಂದು ಭೃಗು ಮಹರ್ಷಿಗಳು ಹೆಮ್ಮೆಯಿಂದಲೂ, ಹರ್ಷದಿಂದಲೂ ಸಂತುಷ್ಟರಾಗುವರು.  ತಾವೇ ಜಮದಗ್ನಿ ಕುಮಾರನಿಗೆ ’ರಾಮ’ನೆಂದು ನಾಮಕರಣ ಮಾಡುವರು.  ಕುಮಾರ ರಾಮನು ಜಮದಗ್ನಿಯ ಮಗನಾದುದರಿಂದ ಜಾಮದಗ್ನ್ಯ ಎಂದೂ, ರೇಣುಕೆಯ ಮಗನಾದುದರಿಂದ ರೇಣುಕಾತ್ಮಜ ಎಂದೂ, ಭೃಗುಮುನಿಯ ಮೊಮ್ಮಗನಾದುದರಿಂದ ಭಾರ್ಗವ ಎಂದೂ ಕರೆಯಲ್ಪಡುವನು.  ಉಪನಯನ ಸಂಸ್ಕಾರ ಪಡೆದ ರಾಮನು ಸಕಲ ಶಾಸ್ತ್ರ ಮತ್ತು ಶಸ್ತ್ರ ಪಾರಂಗತನಾಗುವನು.  ತಪಸ್ಸು ಮಾಡಲು ತೆರಳುವನು.  ಉಗ್ರ ತಪಸ್ಸಿನಿಂದ ಕುಮಾರ ರಾಮನು ಭಗವಂತನಿಂದ ವಿಶೇಷ ಶಕ್ತಿಯನ್ನೂ, ಘೋರವಾದ ಕೊಡಲಿಯನ್ನೂ, ವೈಷ್ಣವ ಧನುಸ್ಸನ್ನೂ ಮತ್ತು ಅನೇಕ ದಿವ್ಯಾಸ್ತ್ರಗಳನ್ನೂ ಪಡೆಯುವನು.  ಭಗವಂತನಿಂದ ರಾಮನಿಗೆ ಮದೋನ್ಮತ್ತರಾದ ರಾಜರನ್ನೆಲ್ಲಾ ಕೊಂದು ಭೂಭಾರ ಹರಣ ಮಾಡಿ  ಭೂಮಂಡಲವನ್ನೆಲ್ಲಾ ಸ್ವಾಧೀನ ಪಡಿಸಿಕೊಂಡು ಧರ್ಮದಿಂದ ಪೃಥ್ವೀ ಪಾಲನೆ ಮಾಡಬೇಕೆಂಬ ಆದೇಶವನ್ನೂ ಪಡೆಯುವನು. 

ಕಾಮಧೇನುವೆಂಬ ಇಂದ್ರಲೋಕದ ಹಸುವಿಗಾಗಿ ನಡೆದ ಹಗರಣದಲ್ಲಿ ತನ್ನ ತಂದೆಗೆ ಹಾನಿಯುಂಟುಮಾಡಿದ್ದ ಕಾರ್ತವೀರ್ಯಾರ್ಜುನ ರಾಜನನ್ನು ಕುಮಾರ ರಾಮನು ತನ್ನ ಕೊಡಲಿಯಿಂದ ಕೊಲ್ಲುವನು.  ಪಟ್ಟಾಭಿಷಿಕ್ತ ರಾಜನನ್ನು ಕೊಂದ ಪಾಪವನ್ನು ಪರಿಹಾರ ಮಾಡಿಕೊಳ್ಳಲು ಕುಮಾರ ರಾಮನು ತಂದೆ ಜಮದಗ್ನಿ ಋಷಿಗಳ ಆದೇಶದಂತೆ ಒಂದು ವರ್ಷಕಾಲ ತೀರ್ಥಯಾತ್ರೆ ಮಾಡಿ ಬರುವನು.  ಒಮ್ಮೆ ತಾಯಿ ರೇಣುಕೆ ಗಂಗಾನದಿಗೆ ನೀರು ತರಲು ಹೋಗಿ ಅಲ್ಲಿ ಚಿತ್ರರಥನೆಂಬ ಗಂಧರ್ವ ಅಪ್ಸರೆಯೊಡನೆ ಜಲಕ್ರೀಡೆಯಾಡುವುದನ್ನು ಕಂಡು ಕ್ಷಣಕಾಲ ಮೈಮರೆಯುವಳು.  ಇದು ಮಾನಸಿಕ ವ್ಯಭಿಚಾರವೆಂದು ಜಮದಗ್ನಿ ಋಷಿಗಳು ತಾಯಿಯನ್ನು ಕೊಲ್ಲುವಂತೆ ತಮ್ಮ ಮಕ್ಕಳಿಗೆ ಆದೇಶಿಸುವರು.  ಆದರೆ ಅವರುಗಳು ಒಪ್ಪುವುದಿಲ್ಲ.  ಆದರೆ ಪರಶುರಾಮ ಮಾತ್ರ ತನ್ನ ತಂದೆಯ ತಪಃಶಕ್ತಿಯನ್ನು ಅರಿತಿದ್ದನಾದ್ದರಿಂದ ಅವರ ಆಜ್ಞೆಯನ್ನು ಶಿರಸಾವಹಿಸಿ, ತಾಯಿಯ ತಲೆಯನ್ನೂ, ತಂದೆಯ ಆಜ್ಞೆಯನ್ನು ಧಿಕ್ಕರಿಸಿದ ಸೋದರರ ತಲೆಗಳನ್ನೂ ಕಡಿಯುವನು.  ಸಂತುಷ್ಟನಾದ ತಂದೆ ಬೇಕಾದ ವರವನ್ನು ಕೇಳು ಎಂದಾಗ, ತನ್ನಿಂದ ಹತರಾದವರೆಲ್ಲರೂ ಬದುಕಲಿ ಮತ್ತು ತಾನು ಅವರನ್ನು ಕೊಂದ ವಿಷಯ ಅವರಿಗೆ ಮರೆತುಹೋಗಲಿ ಎಂದು ಕೇಳುವನು.  ಪರಶುರಾಮನ ತಾಯಿ ರೇಣುಕಾದೇವಿ ಹಾಗೂ ಅವಳ ಮಕ್ಕಳು ನಿದ್ರೆಯಿಂದ ಎದ್ದವರಂತೆ ಸುಖವಾಗಿ ಎಚ್ಚೆತ್ತುಕೊಳ್ಳುವರು.  ಪರಶುರಾಮನಿಂದ ಹತನಾದ ಕಾರ್ತವೀರ್ಯಾರ್ಜುನನ ಮಕ್ಕಳು ಒಮ್ಮೆ ಆಶ್ರಮದಲ್ಲಿ ಪರಶುರಾಮನಿಲ್ಲದಿದ್ದಾಗ ಬಂದು ಜಮದಗ್ನಿ ಮುನಿಯ ತಲೆಯನ್ನು  ಕತ್ತರಿಸಿ ಒಯ್ಯುವರು.  ತಾಯಿಯ ಕೂಗಿಗೆ ಧಾವಿಸಿ ಬಂದ ರಾಮನು ದುಷ್ಟ ಕ್ಷತ್ರಿಯರ ಕುಲವನ್ನೇ ನಾಶ ಮಾಡುವ ಪಣತೊಡುವನು.   ಸಮಸ್ತ ಕ್ಷತ್ರಿಯರನ್ನೆಲ್ಲಾ ವಧಿಸಲು ೨೧ ಬಾರಿ ಭೂ ಪ್ರದಕ್ಷಿಣೆ ಮಾಡುವನು.  ಕೊನೆಗೆ  ಅಶ್ವಮೇಧ ಯಜ್ಞವನ್ನು ಮಾಡಿ ಬ್ರಾಹ್ಮಣರಿಗೆ ಸಪ್ತದೀಪವತಿಯಾದ ಮೇದಿನೀ ಮಂಡಲವನ್ನೆಲ್ಲಾ ದಾನರೂಪವಾಗಿ ನೀಡಿ, ತಾನು ತಪಸ್ಸು ಮಾಡಲು ನರನಾರಾಯಣರ ಆಶ್ರಮಕ್ಕೆ ತೆರಳುವನು.

ಮಹಾಭಾರತ ಶಾಂತಿಪರ್ವದಲ್ಲಿ ಬರುವ ’ಪರಾಶರ ಗೀತಾ’ ದಲ್ಲಿ ತಂದೆಯ ಸ್ಥಾನದ ಮಹತ್ವದ ವಿವರಣೆ ಸಿಗುತ್ತದೆ.  "ಪಿತಾ ಸಖಯೋ ಗುರವಃ" - ಪಿತನಲ್ಲಿ ಅನನ್ಯ ಭಕ್ತಿಯುಳ್ಳ  ಪುತ್ರನಿಗೆ ತಂದೆಯು ಗುರುವೂ, ಸಖನೂ ಆಗಿ ಜನ್ಮ ಜನ್ಮಾಂತರಕ್ಕೆ ಬರುವ ವಿದ್ಯೆಯನ್ನು ಕೊಡುತ್ತಾನೆ.  ತಾಯಿಯು ಇಹ ಜನ್ಮದ ಶರೀರವನ್ನು ಹೊತ್ತು, ಹೆತ್ತು ಪೋಷಿಸುವವಳು.  ಆದರೆ ತಂದೆ ಜನ್ಮಕ್ಕೆ ಕಾರಣನಾಗುವುದಲ್ಲದೆ, ಜನ್ಮ ಜನ್ಮಾಂತರಕ್ಕೂ ಬೆಳಕಾಗಬಲ್ಲ ವಿದ್ಯೆ ನೀಡುವವನಾಗುತ್ತಾನೆ.  ಆದ್ದರಿಂದ ತಂದೆಯೇ ಮಹತ್ವದ ಸ್ಥಾನವನ್ನು ಹೊಂದಿರುವನು.  ತಂದೆಯ ವಾಕ್ಯ ಅನುಶಾಸನವಿದ್ದಂತೆ, ಅದನ್ನು ಪಾಲಿಸಲೇ ಬೇಕೆಂಬುದನ್ನು
ಪಿತಾ ಪರಂ ದೈವತಂ ಮಾನವಾನಾಂ | ಮಾತುರ್ವಿಶಿಷ್ಟಂ ಪಿತರಂ ವದನ್ತಿ |
ಜ್ಞಾನಸ್ಯ ಲಾಭಂ ಪರಮಂ ವದನ್ತಿ | ಜಿತೇನ್ದ್ರಿಯಾರ್ಥಾಃ ಪರಮಾಪ್ನು ವನ್ತಿ ||  - ತಂದೆಯು ಶ್ರೇಷ್ಠನಾದ ದೇವತೆಯಾಗಿರುವನು.  ಜನ್ಮ ನೀಡುವುದಲ್ಲದೆ, ಉಪನಯನ - ಬ್ರಹ್ಮೋಪದೇಶ ಮಾಡಿ, ವಿದ್ಯೆ ಕಲಿಸುವುದರಿಂದ ತಂದೆಯ ಮಾತಿಗೇ ಹೆಚ್ಚು ಮಹತ್ವವಿರುವುದು.  ಪರಶುರಾಮನ ತನ್ನ ತಂದೆಯು ತಾಯಿ ರೇಣುಕೆಗೆ ಶಿಕ್ಷೆ ವಿಧಿಸುವುದಕ್ಕಾಗಿ ತಲೆಯನ್ನು ಕಡಿಯ ಬೇಕೆಂದು ಆಜ್ಞಾಪಿಸಿದಾಗ, ಪರಶುರಾಮನು ಒಂದು ಕ್ಷಣವೂ ಆಲೋಚಿಸದೆ ಆ ಕಾರ್ಯ ಮಾಡುವನು.  ಗುರುವಿನ ಆಜ್ಞೆಯನ್ನು ಶಿರಸಾವಹಿಸುವನು.  ತಂದೆ ಜಮದಗ್ನಿಯು ತನ್ನ ಕಾರ್ಯದಿಂದ ಸಂತುಷ್ಟನಾಗಿ ಬೇಕಾದ ವರವನ್ನು ಕೇಳಿಕೋ ಎಂದಾಗ, ತಾನು ತನ್ನ ತಾಯಿಯನ್ನೂ, ಸೋದರರನ್ನೂ ಮತ್ತೆ ಬದುಕಿಸಿಕೊಳ್ಳಬಹುದೆಂಬುದು ಪರಶುರಾಮನಿಗೆ ತಿಳಿದಿರುವುದು.  ಆದ್ದರಿಂದಲೇ ತಂದೆಯ ಮಾತಿನಂತೆ ನಡೆದು, ಸುಪುತ್ರನೆನಿಸಿಕೊಂಡು, ನಂತರ ತಂದೆಯಿಂದ ವರ ಪಡೆಯುವುದರ ಮೂಲಕ ಪರಿವಾರವನ್ನು ಬದುಕಿಸಿಕೊಳ್ಳುವನು.
ಶ್ರೀಮದ್ಭಾಗವತ ದ್ವಿತೀಯಸ್ಕಂಧ ೭ನೆಯ ಅಧ್ಯಾಯದಲ್ಲಿ ಪರಶುರಾಮಾವತಾರವನ್ನು
ಕ್ಷತ್ರಂ ಕ್ಷಯಾಯ ವಿಧಿನೋಪಭೃತಂ ಮಹಾತ್ಮಾ
ಬ್ರಹ್ಮಧ್ರುಗುಜ್ಝಿತಪಥಂ ನರಕಾರ್ತಿಲಿಪ್ಸು |
ಉದ್ಧನ್ತ್ಯಸಾವವನಿಕಣ್ವಕಮುಗ್ರವೀರ್ಯ-
ಸ್ತ್ರಿಃಸಪ್ತಕೃತ್ವ ಉರುಧಾರಪರಶ್ವಧೇನ || - ಬ್ರಹ್ಮದ್ರೋಹಿಗಳಾಗಿ, ಆರ್ಯ ಮರ್ಯಾದೆಯನ್ನು ಉಲ್ಲಂಘಿಸುವ, ನರಕಕ್ಕೆ ಯೋಗ್ಯರಾದ ದುಷ್ಟ ಕ್ಷತ್ರಿಯರು ಹೆಚ್ಚಿಕೊಂಡು ಬಿಟ್ಟಾಗ ಈ ಪರಮಪುರುಷನು ಮಹಾಪರಾಕ್ರಮಿಯಾದ ಪರಶುರಾಮನ ರೂಪದಲ್ಲಿ ಅವತಾರ ಮಾಡಿ ತೀಕ್ಷ್ಣವಾದ ಅಲುಗುಳ್ಳ ತನ್ನ ಗಂಡುಗೊಡಲಿಯಿಂದ ಇಪ್ಪತ್ತೊಂದು ಬಾರಿ ಅವರನ್ನು ಸಂಹರಿಸಿದನು.

ಅಷ್ಟಮಸ್ಕಂಧದಲ್ಲಿ ೧೩ನೆಯ ಅಧ್ಯಾಯ ಹಾಗೂ ೧೪ನೆಯ ಅಧ್ಯಾಯಗಳಲ್ಲಿ ಪರಶುರಾಮ ಕಾರ್ತವೀರ್ಯಾರ್ಜುನನನ್ನು ಕೊಲ್ಲುವ ಪ್ರಸಂಗ, ತಾಯಿ ರೇಣುಕೆಯ ತಲೆ ಕತ್ತರಿಸುವ ಪ್ರಸಂಗಗಳ ವಿಸ್ತಾರವಾದ ವಿವರಣೆಯಿದೆ.

ಶ್ರೀವಿಷ್ಣು ಸಹಸ್ರನಾಮದಲ್ಲಿ "ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ" - ಶತ್ರುಗಳನ್ನು ತರಿವ ಕೊಡಲಿ ಹೊತ್ತವನು ಖಂಡಪರಶುಃ.  ಪರಶುರಾಮನಾಗಿ, ವಿಶೇಷ ಕೊಡಲಿಯಿಂದ ದುಷ್ಟ ಕ್ಷತ್ರಿಯರ ದಮನ ಮಾಡಿದ ಭಗವಂತ ಖಂಡಪರಶುಃ ಎಂಬ ವಿವರಣೆಯಿದೆ.  ಶತ್ರುಗಳನ್ನು ಖಂಡಿಸುವ ಕೊಡಲಿ ಉಳ್ಳವನು ಎಂಬ ಅರ್ಥವೂ ಆಗುತ್ತದೆ. ಯಾರಿಂದಲೂ ಖಂಡಿಸಲಾಗದ ಪರಶು ಉಳ್ಳವನು ಎಂದೂ ಮೋಕ್ಷ ಯೋಗ್ಯರ ಅವಿದ್ಯೆಯನ್ನು ಖಂಡಿಸಿ ಉದ್ಧರಿಸುವವನು ಎಂಬ ಅರ್ಥ ವಿವರಣೆಗಳೂ ಸಿಗುತ್ತವೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ಪರಶುರಾಮಾವತಾರವನ್ನು
"ರಾಮ ಭೃಗೂದ್ವಹ ಸೂರ್ಜಿತದೀಪ್ತೇ ಕ್ಷತ್ರಕುಲಾಂತಕ ಶಂಭುವರೇಣ್ಯ" - ಭೃಗುಕುಲೋದ್ಧಾರಕನೂ, ಮಹಾಕಾಂತಿಯುಕ್ತನೂ, ದುಷ್ಟ ಕ್ಷತ್ರಿಯನಾಶಕನೂ, ರುದ್ರದೇವರಿಂದ ಪ್ರಾರ್ಥಿತನೂ ಆದ ಪರಶುರಾಮ ದೇವರನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಅವಿಜಿತ ಉನೃಪತಿಸಮಿತಿವಿ ಖಂಡನ ರಮಾವರ ವೀರಪ ಭವ ಮಮ್ಮ ಶರಣಮ್ |
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ಕಾರ್ತವೀರ್ಯಾದಿ ದುಷ್ಟರಾಜ ಸಮೂಹವನ್ನು ಸಂಹರಿಸಿದ, ಭಕ್ತವೀರರನ್ನು ಕಾಪಾಡುವ ಲಕ್ಷ್ಮೀಪತ್ರಿಯಾದ ಭಾರ್ಗವ ಸ್ವರೂಪಿಯಾದ ಬ್ರಹ್ಮಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ, ಪುರುಷೋತ್ತಮನೂ, ಸದಾ ಪ್ರಕಾಶಮಾನನೂ, ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ, ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ
ಧೈರ್ಯಾಂಬುಧೇ ಪರಶುಚರ್ಯಾಧಿಕೃತ್ತ ಖಲವರ್ಯಾವನೀಶ್ವರ ಮಹಾ
ಶೌರ್ಯಾಭಿಭೂತ ಕೃತವೀರ್ಯಾತ್ಮಜಾತ ಭುಜವೀರ್ಯಾವಲೇಪನಿಕರ |
ಭಾರ್ಯಾಪರಾಧ ಕುಪಿತಾರ್ಯಾಜ್ಞಯಾ ಗಲಿತ ನಾರ್ಯಾತ್ಮಸೂಗಲತರೋ
ಕಾರ್ಯಾSಪರಾಧಮವಿಚಾರ್ಯಾರ್ಯಮೌಘಜಯಿ ವೀರ್ಯಾಮಿತಾ ಮಯಿ ದಯಾ || - ಧೈರ್ಯ ಸಾಗರನಾದ, ಮಹಾಪರಾಕ್ರಮದಿಂದ ಸಾವಿರ ಕೈಗಳಿಂದ ಯುದ್ಧ ಮಾಡುತ್ತಿರುವ ಕಾರ್ತವೀರ್ಯಾರ್ಜುನನನ್ನು ಸಂಹರಿಸಿ, ಕೊಡಲಿಯಿಂದಲೇ ಅತಿದುಷ್ಟರಾದ ರಾಜರುಗಳ ಸಮೂಹವನ್ನೇ ನಿರ್ಮೂಲ ಮಾಡಿದ, ಪತ್ನಿ ರೇಣುಕೆಯ ಮಾನಸಾಪರಾಧವನ್ನು ತಿಳಿದು ಕುಪಿತನಾದ ತಂದೆಯ ಆಜ್ಞೆಯಂತೆ ತನ್ನ ತಾಯಿಯ ಕುತ್ತಿಗೆಯನ್ನು ಕಡಿದ, ಸಹಸ್ರಾರು ಸೂರ್ಯರ ಪ್ರಕಾಶಕ್ಕಿಂತಲೂ ಅತಿಶಯವಾದ ಪ್ರಕಾಶವುಳ್ಳ, ಪರಶುರಾಮ ರೂಪಿಯಾದ ಶ್ರೀ ಮಹಾವಿಷ್ಣುವೇ ನನ್ನ ಅನಂತ ಅಪರಾಧಗಳನ್ನು ಮನ್ನಿಸಿ ನನ್ನಲ್ಲಿ ದಯೆ ಇಡುವವನಾಗು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ಪರಶುರಾಮಾವತಾರವನ್ನು
ಕ್ಷತ್ರಿಯರುಧಿರಮಯೇ ಜಗದಪಗತಪಾಪಂ
ಸ್ನಪಯಸಿ ಪಯಸಿ ಶಮಿತ ಭವತಾಪಂ
ಕೇಶವ ಧೃತ ಭೃಗುಪತಿ ರೂಪ ಜಯ ಜಗದೀಶ ಹರೇ - ಕ್ಷತ್ರಿಯರ ರಕ್ತದಿಂದ ಜಗತ್ತಿನ ಪಾಪಗಳನ್ನು ತೊಳೆದು ಓಡಿಸಿದ ಹಾಗೆ, ನಮ್ಮ ಪ್ರಾರಬ್ಧ ಪಾಪಗಳನ್ನು ಶಮನಗೊಳಿಸಿ, ಶುದ್ಧವಾದ ನೀರಿನಿಂದ ಸ್ವಚ್ಛಗೊಳಿಸುವ ಕೇಶವ ಧೃತ ಭೃಗುಪತಿ ರೂಪನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಮಾನವನ ವಿಕಾಸಕ್ಕೆ ಭಗವಂತನ ಪರಶುರಾಮಾವತಾರವನ್ನು ಸಮನ್ವಯಿಸಿದಾಗ ಜೀವವು ವಿಕಾಸಗೊಂಡು ಉನ್ನತಿಗೇರಿ ಮದದಿಂದ ಉದ್ಧಟವಾದ ಪ್ರವರ್ತನೆಯನ್ನು ಬೆಳೆಸಿಕೊಂಡಾಗ ಮತ್ತು ಸಹಜೀವಿಗಳಿಗೆ ಕಂಟಕಪ್ರಾಯವಾಗಿ ಮಾರ್ಪಾಡಾದಾಗ ಪ್ರಕೃತಿ ಅಥವಾ ಭಗವಂತನೇ ಪರಶು ಹಾಗೂ ಪುರುಷನಾಗಿ ನಿಯಂತ್ರಿಸುವನು ಎಂಬುದು ಅರ್ಥವಾಗುತ್ತದೆ.   ದಾನವರೂ ಕಂಟಕಪ್ರಾಯರೂ ಆದ ಅಂಧಕ, ಗಜಾಸುರ, ತ್ರಿಪುರಾಸುರ ಮುಂತಾದ ಅನೇಕರನ್ನು ಕೊಂದು, ತಾಮಸವನ್ನು ಹತ್ತಿಕ್ಕಲು ಭಗವಂತನು ಪರಶು, ಬಾಣ, ಖಡ್ಗ, ಶೂಲ, ನಖ ಪಾಶಗಳನ್ನು ಬಳಸುವನು.  ಹಾಗೇ ನಮ್ಮೊಳಗೆ ಸದಾ ಜಾಗೃತವಾಗುತ್ತಲೇ ಇರುವ ವಿಷಯಾಸಕ್ತಿಗಳನ್ನೂ, ತಾಮಸ ಪ್ರವೃತ್ತಿಗಳನ್ನೂ, ವಿತಂಡ ತರ್ಕಗಳನ್ನೂ ಬೇರು ಸಹಿತ ನಿರ್ಮೂಲನ ಮಾಡಲು ಪರಶುವಿನಂತಹ ವಿವೇಕವನ್ನು ಉಪಯೋಗಿಸಬೇಕಾಗುವುದು.  ಸಾಧನೆಯ ಹಾದಿಯಲ್ಲಿ ನಡೆಯುವ ಸಾಧಕನಿಗೆ ಭಾರ್ಗವರಾಮನಂತನ ಅಪಾರ ಧೈರ್ಯ ಬೇಕಾಗುವುದು.  ಸಾತ್ವಿಕತೆಯನ್ನು ಕಾಪಾಡಿಕೊಳ್ಳಲು ಪರಶುರಾಮನ ಗಂಡುಗೊಡಲಿಯೇ ಬೇಕಾಗುವುದು.   ಪರ್ವತದಂತೆ ಅಚಲವಾಗಿ ನಿಂತು ವಿವೇಕದಿಂದ ಸರ್ವಾಯುಧಗಳನ್ನು ಬಳಸಿ ಸತ್ಯವನ್ನು ಹೃತ್ಕಮಲದಲ್ಲಿ ಸ್ಥಾಪಿಸಿಕೊಳ್ಳುವ ಪ್ರಯತ್ನ ಮಾಡಬೇಕೆಂಬುದನ್ನು ಭಗವಂತನ ಪರಶುರಾಮಾವತಾರವು ಸೂಚಿಸುತ್ತದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ಮುಖದಲ್ಲಿ ಪರಶುರಾಮರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ಪರಶುರಾಮ ರೂಪದಿಂದವತರಿಸಿದಾಗ ರಮಾದೇವಿಯು ’ಹರಿಣಿ’ಯಾಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ
ಕುವಲಯಾಧೀಶ್ವರರ ಬವರ ಮುಖದಲಿ ಕೊಂದು
ಅವನಿ ಭಾರವನು ಇಳುಹಿ-ದ | ಇಳುಹಿದ ಸ್ವಾಮಿಭಾ-
ರ್ಗವರಾಮ ಎಮಗೆ ದಯವಾಗೋ || - ದುಷ್ಟರಾಜ್ಯಾಧಿಪರನ್ನು ಯುದ್ಧರಂಗದಲ್ಲಿ ಸಂಹರಿಸಿ, ಭೂಭಾರವನ್ನು ಇಳಿಸಿದ ಹೇ ಪರಶುರಾಮ ಸ್ವಾಮಿ ದಯತೋರೋ ಎಂದು ಪ್ರಾರ್ಥಿಸಿದ್ದಾರೆ.  

ಚಿತ್ರಕೃಪೆ : ಅಂತರ್ಜಾಲ

http://temple.dinamalar.com/en/new_en.php?id=564
https://en.wikipedia.org/wiki/Thiruvallam_Sree_Parasurama_Temple
http://www.shaivam.org/siddhanta/spke_108.htm

Thursday, June 11, 2015

ಕರುಣಾ ಸಂಧಿ - ೩೦ ನೇ ಪದ್ಯ ( ವಾಮನಾವತಾರ )

ಅಜಿನ ದಂಡ ಕಮಂಡಲ ಮೇಖಲ ರುಚಿರ ಪಾವನ ವಾಮನ ಮೂರ್ತಯೇ |
ಮಿತ ಜಗತ್ರಿತಯಾಯ ಜಿತಾರಯೆ ನಿಗಮ ವಾಕ್ಪಟವೇ ವಟವೇ ನಮ: ||

ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 
ಕಾಯ್ದ ಸುಜನರನು ||೩೦||

ಅತುಳಶೌರ್ಯ ವಾಮನ - ಪ್ರಹ್ಲಾದರಾಜರ ಮೊಮ್ಮಗನಾದ ಬಲಿರಾಜನು ಅಮೃತ ಸಿಗಲಿಲ್ಲವೆಂಬ ಕಾರಣದಿಂದ ದೈತ್ಯರ ಸೈನ್ಯದೊಡನೆ ದೇವತೆಗಳ ಮೇಲೆ ಯುದ್ಧ ಸಾರಿ ಬಂದಾಗ ಇಂದ್ರನು ಬಲಿರಾಜನನ್ನು ಹೊಡೆದು ಸೋಲಿಸಿ, ಇತರ ಪ್ರಮುಖ ದೈತ್ಯರನ್ನೆಲ್ಲಾ ಕೊಲ್ಲುವನು.  ಶುಕ್ರಾಚಾರ್ಯರ ಮೃತಸಂಜೀವನೀ ವಿದ್ಯೆಯ ಪ್ರಯೋಗದ ಕೃಪೆಯಿಂದ  ಮೃತರಾಗಿದ್ದ ದೈತ್ಯರೆಲ್ಲಾ ಮರಳಿ ಬದುಕುವರು.  ಬಲಿರಾಜನು ತನಗೆ ಜೀವದಾನ ಮಾಡಿ ಆಶ್ರಯ ಕೊಟ್ಟ ಶುಕ್ಲಾಚಾರ್ಯರ ಸೇವೆಯನ್ನು ಮಾಡುವನು.   ಮತ್ತೆ ಸ್ವರ್ಗಾಧಿಪತ್ಯವನ್ನು ಪಡೆಯಬೇಕೆಂಬ ಬಲಿರಾಜನ ಆಸೆಗೆ  ಶುಕ್ಲಾಚಾರ್ಯರು ಬಲಿರಾಜನ ಹತ್ತಿರ ವಿಶ್ವಜಿತ್ ಯಾಗವನ್ನು ಮಾಡಿಸುವರು.  ಸಂತೃಪ್ತನಾದ ಅಗ್ನಿದೇವನಿಂದ ಸುವರ್ಣರಥ, ಇಂದ್ರಾಶ್ವಗಳಂತಿರುವ ಅಶ್ವಗಳು, ಸಿಂಹಧ್ವಜ, ಬಿಲ್ಲು, ಬತ್ತಳಿಕೆಗಳು ಮತ್ತು ದಿವ್ಯ ಕವಚವನ್ನು ಬಲಿರಾಜನು ಪಡೆಯುವನು.  ಪಿತಾಮಹನಾದ ಪ್ರಹ್ಲಾದನಿಂದ ಅಮ್ಲಾನ ಪುಷ್ಪಮಾಲೆಯನ್ನೂ, ಶುಕ್ರಾಚಾರ್ಯರಿಂದ ಶಂಖವನ್ನೂ ಪಡೆಯುವನು.  ಸೈನ್ಯ ಸಮೇತನಾಗಿ ಮತ್ತೆ ಅಮರಾವತಿಗೆ ಮುತ್ತಿಗೆ ಹಾಕಿದಾಗ ಬೃಹಸ್ಪತ್ಯಾಚಾರ್ಯರ ಸಲಹೆಯಂತೆ ದೇವತೆಗಳು ರೂಪಾಂತರದಿಂದ ಸ್ವರ್ಗವನ್ನು ಬಿಟ್ಟು ಹೊರಟು ಹೋಗುವರು.  ಬಲಿರಾಜನು ನಿರಾಯಾಸವಾಗಿ ಮೂರು ಲೋಕಗಳನ್ನೂ ವಶಪಡಿಸಿಕೊಳ್ಳುವನು.  ಬಲಿರಾಜನ ಗುರುಗಳನ್ನು ಅನುಸರಿಸುವ ಭಕ್ತಿಯನ್ನು ಮೆಚ್ಚಿ ಶುಕ್ರಾಚಾರ್ಯರು ಇಂದ್ರ ಪದವಿಯು ಸ್ಥಿರವಾಗುವಂತೆ ಮಾಡಲು ನೂರು ಅಶ್ವಮೇಧ ಯಾಗಗಳನ್ನು ಮಾಡಿಸುವರು.

ವಾಮನ ಮಹಾಪುರಾಣದಲ್ಲಿ ತಿಳಿಸಿರುವಂತೆ,  ದೇವತೆಗಳ ತಾಯಿಯಾದ ಅದಿತಿಯು ಇಂದ್ರಾದಿ ದೇವತೆಗಳು ರಾಜ್ಯ ಕಳೆದುಕೊಂಡಿರುವುದನ್ನು ನೋಡಿ ದುಃಖಿಸುವಳು.  ಪತಿಯಾದ ಕಶ್ಯಪರು ದುಃಖಿಸುವುದನ್ನು ಬಿಟ್ಟು ಜಗದ್ಗುರುವಾದ ವಾಸುದೇವನನ್ನು ಸೇವಿಸು ಎನ್ನುವರು.  ಅವರ ಆದೇಶದಂತೆ ಸಂತಾನಾಪೇಕ್ಷೆಗಾಗಿ ಮಾಡುವ ’ಪಯೋವ್ರತ’ವನ್ನು ಮಾಡಿದಾಗ ಸಂತುಷ್ಟನಾದ ಭಗವಂತನು ಪ್ರತ್ಯಕ್ಷನಾಗಿ ವರವೀಯುವನು.  ದೈತ್ಯರು ಅತಿ ಬಲಿಷ್ಠರಾಗಿರುವುದರಿಂದ ಅವರನ್ನು ಉಪಾಯದಿಂದಲೇ ಗೆಲ್ಲಬೇಕೆಂದು ತಿಳಿಸುತ್ತಾ, ಒಂದು ಅಂಶದಿಂದ ನಿನ್ನ ಮಗನಾಗಿ ಜನಿಸಿ ನಿನ್ನ ಮಕ್ಕಳನ್ನು ರಕ್ಷಿಸುವೆನೆಂದು ಅಭಯವನ್ನು ಕೊಡುವನು.  ತಾನು ಕೊಟ್ಟ ವರವನ್ನೇ ನಿಮಿತ್ತ ಮಾಡಿಕೊಂಡು ಶ್ರೀಹರಿಯು, ಅದಿತಿಯ ಗರ್ಭದಿಂದ ವಾಮನಾವತಾರದಲ್ಲಿ ಅವತರಿಸಿದನು.  ಹುಟ್ಟಿದ ಕೂಡಲೇ ಬೆಳೆದು ನಿಂತ ಭಗವಂತನಿಗೆ ಬ್ರಹ್ಮದೇವರು ಜಾತಕರ್ಮಾದಿ ಸಂಸ್ಕಾರಗಳನ್ನು ಮಾಡಿ ಸಂತಸಪಡುವರು.   ದೇವತೆಗಳೆಲ್ಲರೂ ಹರುಷದಿಂದ ಸ್ತುತಿಸಿದಾಗ ಭಗವಂತನು ನಿಮ್ಮೆಲ್ಲರ ಪ್ರಾರ್ಥನೆಯಿಂದ ಅವತರಿಸಿರುವ ನಾನು ಮೂರು ಲೋಕಗಳ ಮುಳ್ಳುಗಳನ್ನೂ ದೂರಮಾಡಿ ಇಂದ್ರನನ್ನು ತ್ರಿಲೋಕಾಧಿಪತಿಯನ್ನಾಗಿ ಮಾಡುವೆನೆಂದನು.  ಓಂಕಾರ ಪ್ರಣವದಿಂದ ಭೂಷಿತವಾದ ವೇದಗಳು ಭಗವಂತನ ಸೇವೆಗೆ ಅಲ್ಲಿ ಉಪಸ್ಥಿತವಾದವು.  ಸಾಂಖ್ಯ, ಯೋಗ, ಸಕಲ ಶಾಸ್ತ್ರಗಳೂ ಆ ಭಗವತ್ ಕೈಂಕರ್ಯಕ್ಕಾಗಿ ಬಂದು ವಾಮನ ವಟುವಿನ ಸನ್ನಿಹಿತವಾದವು.  ಜಡೆ, ಕೊಡೆ, ದಂಡಗಳಿಂದ ಒಪ್ಪುವ ವಾಮನ ಮೂರ್ತಿಯು ಕೈಯಲ್ಲಿ ಕಮಂಡಲವನ್ನು ಪಿಡಿದು ಬಲಿರಾಜನ ಯಜ್ಞವಾಟದೆಡೆಗೆ ಹೊರಡುವನು.   ಬೇಡಲು ಬಂದ ಯಾರಿಗೂ ಇಲ್ಲವೆಂದೇ ಹೇಳದ ಬಲಿರಾಜನಲ್ಲಿ ಭಗವಂತನು  ಅಗ್ನಿಶಾಲೆಯನ್ನು ಕಟ್ಟಲಿಕ್ಕಾಗಿ ಮೂರು ಪಾದ ಭೂಮಿಯನ್ನು ಬೇಡಿದನು.  ಸಂಕಲ್ಪ ಮಾಡಿ ವಟುವಿನ ಕೈಯಲ್ಲಿ ಭೂಮಿ ದಾನದ ಸಂಕಲ್ಪದ ನೀರು ಬಿದ್ದ ಕೂಡಲೇ ಭಗವಂತನು ವಿರಾಟರೂಪವನ್ನು ತಳೆಯುತ್ತಾ ತ್ರಿವಿಕ್ರಮನಾಗುವನು. ಒಂದು ಪಾದದಿಂದ ಸಮಸ್ತ ಭೂಮಂಡಲವನ್ನೇ ಅಳೆಯುವನು, ಎರಡನೆಯ ಪಾದದಿಂದ ಅಂತರಿಕ್ಷವನ್ನಳೆಯುವನು, ಮೂರನೆಯ ಪಾದವನ್ನು ಬಲಿರಾಜನ ಇಚ್ಛೆಯಂತೆಯೇ ಅವನ ಶಿರದಲ್ಲಿರಿಸಿ, ಬಲಿರಾಜನನ್ನು ಸುತಳ ಎಂಬ ಪಾತಾಳ ಲೋಕಕ್ಕೆ ಕಳುಹಿಸುವನು.   

ಶ್ರೀಮದ್ಭಾಗವತ ದ್ವಿತೀಯಸ್ಕಂಧ ೭ನೆಯ ಅಧ್ಯಾಯದಲ್ಲಿ ವಾಮನಾವತಾರವನ್ನು
ಜ್ಯಾಯಾನ್ಗುಣೈರವರಜೋsಪ್ಯದಿತೇಃ ಸುತಾನಾಂ
ಲೋಕಾನ್ವಿಚಕ್ರಮ ಇಮಾನ್ಯದಥಾಧಿಯಜ್ಞಃ |
ಕ್ಷ್ಯಾಂ ವಾಮನೇನ ಜಗೃಹೇ ತ್ರಿಪದಚ್ಛಲೇನ
ಯಾಚ್ಞಾಮೃತೇ ಪಥಿ ಚರನ್ಪ್ರಭುಭಿರ್ನ ಚಾಲ್ಯಃ || - ಅದಿತಿಯ ಪುತ್ರರಲ್ಲಿ ಅತ್ಯಂತ ಚಿಕ್ಕವನಾದರೂ ಗುಣಗಳಲ್ಲಿ ಎಲ್ಲರಿಗಿಂತಲೂ ದೊಡ್ಡವನಾದ ದೇವದೇವನು, ವಾಮನ ಮೂರ್ತಿಯಾಗಿ ಅವತರಿಸಿ ಬಲಿಚಕ್ರವರ್ತಿಯಿಂದ ಮೂರು ಪಾದಗಳಷ್ಟು ಭೂಮಿಯನ್ನು ಬೇಡಿ ಪಡೆಯುವ ನೆಪದಿಂದ ತ್ರಿವಿಕ್ರಮನಾಗಿ ಬೆಳೆದು ನಿಂತವನು ಮೂರು ಲೋಕಗಳನ್ನೂ ಅಳೆಯುವನು.  ಎಂದಿಗೂ ಸನ್ಮಾರ್ಗವನ್ನು ಬಿಡದ ಬಲಿಯನ್ನು ಮಣಿಸಲು ಭಗವಂತನು ಯುಕ್ತಿಯಿಂದ ಬೇಡುವ ಉಪಾಯವನ್ನು ಹೂಡಿ  ಶಕ್ತಿಗಿಂತಲೂ ಯುಕ್ತಿಯಿಂದಲೇ ಜಯ ಸಾಧಿಸಬಹುದೆಂಬುದನ್ನು ಲೋಕಕ್ಕೆ ಸಾಧಿಸಿ ತೋರಿಸುವನು.

ಅಷ್ಟಮಸ್ಕಂಧದಲ್ಲಿ ೧೫ನೆಯ ಅಧ್ಯಾಯದಿಂದ ೨೩ನೆಯ ಅಧ್ಯಾಯದವರೆಗೂ ಬಲಿಚಕ್ರವರ್ತಿ ಹಾಗೂ ಭಗವಂತನ ವಾಮನಾವತಾರದ ಕಥೆಯನ್ನು ವಿಸ್ತಾರವಾಗಿ ತಿಳಿಸಲ್ಪಟ್ಟಿದೆ.  ವಾಮನಮೂರ್ತಿಯು ತ್ರಿವಿಕ್ರಮನಾಗಿ ಬೆಳೆದು ಮೂರು ಲೋಕಗಳನ್ನೂ ಅಳೆದು, ದೇವಾದಿದೇವತೆಗಳಿಗೆಲ್ಲಾ ತೋರಿದ ವಿಶ್ವವ್ಯಾಪಿ ರೂಪದ ವರ್ಣನೆಯು ಸುಂದರವಾಗಿ ಚಿತ್ರಿಸಲಾಗಿದೆ.  


ಶ್ರೀವಿಷ್ಣು ಸಹಸ್ರನಾಮದಲ್ಲಿ "ಉಪೇಂದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ" - ವಾಮನ ಎಂದರೆ ಚಿಕ್ಕ ಗಾತ್ರದವನು ಎಂದರ್ಥವಾಗುತ್ತದೆ.  ಭಗವಂತ ಅಣುವಿಗಿಂತ ಅಣುವಾಗಿ ನಮ್ಮ ಹೃತ್ಕಮಲದಲ್ಲಿ ನೆಲೆಸಿರುವನು.  ’ವಾಮ’ ಎಂದರೆ ಸೌಂದರ್ಯ, ವಾಮನ ಎಂದರೆ ಸೌಂದರ್ಯವನ್ನು ಕೊಡುವವನು.  ಸೌಂದರ್ಯದ ಕೇಂದ್ರ ಬಿಂದು ಕಣ್ಣು ಮತ್ತು ಭಗವಂತನ ಸನ್ನಿಧಾನ ಕಣ್ಣಿನಲ್ಲಿರುವುದು.  ವಾಮನ ಎಂಬ ಪದವನ್ನು ವಾ+ಅಮ+ನ ಎಂದು ಬಿಡಿಸಿದಾಗ ’ವಾ’ ಎಂದರೆ ಜ್ಞಾನ, ’ಅಮ’ ಎಂದರೆ ಅಜ್ಞಾನ ಹಾಗೂ ’ನ’ ಎಂದರೆ ನಯತಿ ಎಂಬರ್ಥವಾಗುವುದು.  ಜ್ಞಾನವನ್ನಾಗಲೀ, ಅಜ್ಞಾನವನ್ನಾಗಲೀ, ಅವರವರ ಯೋಗ್ಯತೆಗೆ ತಕ್ಕಂತೆ ಕರುಣಿಸುವವನೂ, ಜ್ಞಾನಮೂರ್ತಿಯೂ, ಆನಂದಮೂರ್ತಿಯೂ ಆದ ಭಗವಂತನು ವಾಮನನೆನಿಸುವನು  (ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಆಧಾರಿತ).

ಕಾಠಕೋಪನಿಷತ್ತಿನ ದ್ವಿತೀಯಾಧ್ಯಾಯದ ಎರಡನೇ ವಲ್ಲಿಯಲ್ಲಿ
ಊರ್ಧ್ವಂ ಪ್ರಾಣಮುನ್ನಯತ್ಯಪಾನಂ ಪ್ರತ್ಯಗಸ್ಯತಿ | ಮಧ್ಯೇ ವಾಮನಮಾಸೀನಂ, ವಿಶ್ವೇದೇವಾ ಉಪಾಸತೇ || - ಪೂಜನೀಯವಾದ ಪರಮಾತ್ಮನು ಪ್ರಾಣವನ್ನು ಮೇಲಕ್ಕೂ, ಅಪಾನವನ್ನು ಕೆಳಕ್ಕೂ ಕಳುಹಿಸುವನು.  ಮಧ್ಯದಲ್ಲಿ ಆಸೀನನಾಗಿರುವ ಆ ವಾಮನ ರೂಪಿ ಭಗವಂತನನ್ನು ದೇವತೆಗಳೆಲ್ಲರೂ ಆರಾಧಿಸುವರು ಎಂದು ತಿಳಿಸಲಾಗಿದೆ.

ಶ್ರೀಮದಾಚಾರ್ಯರು  ಕಾಠಕೋಪನಿಷದ್ಭಾಷ್ಯದಲ್ಲಿ
ನಮೋ ಭಗವತೇ ತಸ್ಮೈ ಸರ್ವತಃ ಪರಮಾಯ ತೇ |
ಸರ್ವಪ್ರಾಣಿ ಹೃದಿಸ್ಥಾಯ ವಾಮನಾಯ ನಮೋ ನಮಃ || - ಐಶ್ವರ್ಯಾದಿ ಷಡ್ಗುಣ ಸಂಪನ್ನನಾದ ಭಗವಂತನಿಗೆ ನಮಸ್ಕಾರ.  ಇಂದ್ರಿಯಗಳಿಂದಾರಂಭಿಸಿ ಅವ್ಯಕ್ತದವರೆಗೆ ಇರುವ ಎಲ್ಲ ತತ್ವಗಳಿಗಿಂತಲೂ ಉತ್ತಮನಾದ ಎಲ್ಲ ಜೀವಿಗಳ ಹೃದಯದಲ್ಲಿ ವಾಸವಾಗಿರುವ ವಾಮನ ರೂಪಿಯಾದ ನಿನಗೆ ಪುನಃ ಪುನಃ ನಮಸ್ಕಾರ ಎಂದು ಸ್ತುತಿಸಿದ್ದಾರೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ವಾಮನಾವತಾರವನ್ನು
"ವಾಮನ ವಾಮನ ಮಾಣವಶೇಷ ದೈತ್ಯವರಾಂತಕ ಕಾರಣ ರೂಪ"  - ಜ್ಞಾನ ಭಕ್ತ್ಯಾದಿಗಳಿಂದ ಆರಾಧಿತನೂ, ವಟುವೇಷಧಾರಿಯೂ, ಬಲಿಯ ಅಭೀಷ್ಟವನ್ನು ನೆರವೇರಿಸಿದವನೂ, ಇಂದ್ರನಿಗೆ, ತ್ರೈಲೋಕ್ಯವನ್ನು ಕರುಣಿಸಿದವನೂ ವಾಮನನೂ ಆದ ನಿನಗೆ ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಬಲಿಮುಖದಿತಿಸುತ ವಿಜಯ ವಿನಾಶನ ಜಗದವನಾಜಿತ ಭವಮಮ ಶರಣಮ್ |
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ಬಲಿ ಮೊದಲಾದ ಮಹಾ ದೈತ್ಯರನ್ನು ಜಯಿಸಿದ ಜಗದ್ರಕ್ಷಕನಾದ, ಸರ್ವಶ್ರೇಷ್ಠನಾದ, ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ
ಪಿಂಗಾಕ್ಷ ವಿಕ್ರಮ ತುರಂಗಾದಿಸೈನ್ಯ ಚತುರಂಗಾವಲಿಪ್ತ ದನುಜಾ-
ಸಾಂಗಾಧ್ವರಸ್ಥ ಬಲಿ ಸಾಂಗಾವಪಾತ ಹೃಷಿತಾಂಗಾಮರಾಲಿ ನುತ ತೇ |
ಶೃಂಗಾರ ಪಾದನಖ ತುಂಗಾಗ್ರಭಿನ್ನ ಕನಕಾಂಗಾಂಡಪಾತಿ ತಟಿನೀ-
ತುಂಗಾತಿ ಮಂಗಲ ತರಂಗಾಭಿಭೂತ ಭಜಕಾಂಗಾಘ ವಾಮನ ನಮಃ || - ಮಹಾಪರಾಕ್ರಮಿಗಳಾದ ಗರ್ವಿಷ್ಠ ದಾನವರಿಂದ ಕೂಡಿಕೊಂಡು ಯಜ್ಞದಲ್ಲಿ ದೀಕ್ಷಿತನಾದ ಬಲಿಚಕ್ರವರ್ತಿಯನ್ನು, ವಾಮನರೂಪಿಯಾಗಿ ಬಂದು ಮೂರಡಿ ಭೂಮಿಯನ್ನು ಯಾಚಿಸಿ, ತ್ರಿವಿಕ್ರಮ ರೂಪಿಯಾಗಿ ಬೆಳೆದು ಆ ಮೂರು ಅಡಿಯನ್ನೂ ಕೊಡಲು ಆತನನ್ನು ಅಶಕ್ತನನ್ನಾಗಿ ಮಾಡಿ ಸುತಲಕ್ಕೆ ಕಳುಹಿಸಿ, ಇಂದ್ರನಿಗೆ ಮೂರು ಲೋಕಗಳನ್ನೂ ಕೊಟ್ಟು ದೇವತೆಗಳನ್ನು ಹರ್ಷಗೊಳಿಸಿದ, ತ್ರಿವಿಕ್ರಮನಾಗಿ ಬೆಳೆದಾಗ ತನ್ನ ಪಾದಗ್ರದ ಉಗುರಿನಿಂದ ಬ್ರಹ್ಮಾಂಡ ಕಟಾಹವು ಭಿನ್ನವಾಗಿ ಒಳನುಗ್ಗಿದ ಪವಿತ್ರ ಗಂಗೆಯ ಅಲೆಗಳಿಂದ ಭಕ್ತರ ಸಮಸ್ತ ಪಾಪಸಮೂಹಗಳನ್ನೂ ನಾಶಗೊಳಿಸಿದ ವಾಮನರೂಪಿಯಾದ ಪರಮಾತ್ಮನೇ ನಿನಗೆ ನಮಸ್ಕಾರ ಎಂದು ಸ್ತುತಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ನರಸಿಂಹಾವತಾರವನ್ನು
ಛಲಯಸಿ ವಿಕ್ರಮಣೇ ಬಲಿಮದ್ಭುತ ವಾಮನ
ಪದ ನಖ ನೀರಜನಿತ ಜನ ಪಾವನ
ಕೇಶವ ಧೃತವಾಮನರೂಪ ಜಯ ಜಗದೀಶ ಹರೇ - ವಾಮನ ರೂಪಿಯಾದ ಭಗವಂತ ಅದ್ಭುತವಾದ ತ್ರಿವಿಕ್ರಮ ರೂಪವನ್ನು ತಳೆದು ಬಲಿಯನ್ನು ಮೋಹಕಗೊಳಿಸಿದ,  ತನ್ನ ಪಾದದ ಅಂಗುಷ್ಠದ ಉಗುರಿನಿಂದ ಬ್ರಹ್ಮಾಂಡ ಕರ್ಪರವನ್ನು ಒಡೆದು ಗಂಗಾಜನಕನೆನಿಸಿಕೊಂಡು ಬುಧಜನರನ್ನು ಪಾವನಗೊಳಿಸಿದ, ವಾಮನ ರೂಪದ ಕೇಶವನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಶ್ರೀ ಪುರಂದರದಾಸರು ತಮ್ಮ "ಅಚ್ಯುತಾನಂತ ಗೋವಿಂದ" ಎಂದ ಕೃತಿಯಲ್ಲಿ
ವಾಮನ ರೂಪಿಲಿ ಬಂದು | ಬಲಿಯ | ದಾನವ ಬೇಡಲು ಉಚಿತವು ಎಂದು || ಧಾರೆಯನೆರೆಯಲು ಅಂದು | ಬೆಳೆದು | ಧಾರಿಣಿಯೆಲ್ಲವನಳೆದ್ಯೊ ನೀನಂದು || ಎನ್ನುತ್ತಾ ಪುಟ್ಟ ವಾಮನನಾಗಿ ಬಂದು ಬಲಿಯು ದಾನದ ತೀರ್ಥವನ್ನು ಕೈಯಲ್ಲಿ ಬಿಟ್ಟಾಕ್ಷಣ ಬೆಳೆದು ಧಾರಿಣಿಯೆಲ್ಲವನ್ನೂ ಅಳೆದೆಯೆಂದು ಸ್ತುತಿಸಿದ್ದಾರೆ.

ಮಾನವನ ವಿಕಾಸಕ್ಕೆ ಭಗವಂತನ  ವಾಮನಾವತಾರವನ್ನು ಸಮನ್ವಯಿಸಿದರೆ  ವಿಷಯಾಸಕ್ತಿಗಳಿಂದ ದೂರ ಸರಿದು ಪುಟ್ಟ ವಟು ವಾಮನನಂತೆ ವಿಧೇಯತೆ, ವಿನಮ್ರತೆಯಿಂದಲೇ ಲೌಕಿಕ ಭೋಗಗಳನ್ನು ಮೆಟ್ಟಿ ಪಾತಾಳಕ್ಕೆ ಅಟ್ಟಿ,  ಇಂದ್ರಿಯ ನಿಗ್ರಹವನ್ನು ಮಾಡಿ ತ್ರಿವಿಕ್ರಮನಂತೆ ಬೆಳೆದು ನಿಲ್ಲಬೇಕು ಎಂದು ತಿಳಿಯುತ್ತದೆ.   ಯಾವಾಗ ನಮ್ಮ ದೇಹ ಹಾಗೂ ಮನಸ್ಸು ಪೂರ್ಣ ಶುದ್ಧಿಯಾಗುತ್ತದೋ, ಆಗ ನಮ್ಮೊಳಗೇ ಭಗವಂತನ ಇರುವಿಕೆಯ ಅರಿವು ನಮಗಾಗುತ್ತದೆ.  ನಮ್ಮ ಮನಸ್ಸು ಲೌಕಿಕ ಭೋಗಾಸಕ್ತಿಗಳಲ್ಲಿ ಮುಳುಗಿ ಅಸ್ತಿತ್ವವೇ ಇಲ್ಲದಂತಾಗಿರುವುದು.  ಭಗವಂತನ ಸಾಕ್ಷಾತ್ಕಾರವಾಗಲು ನಾವು ಧೃಡ ಮನಸ್ಸಿನವರಾಗಬೇಕು, ಆಧ್ಯಾತ್ಮಿಕವಾಗಿ ಬಲಿಷ್ಠರಾಗಬೇಕು.  ಪುಟ್ಟ ವಟುವಾಗಿ ಬರುವ ವಾಮನ ರೂಪಿ ಭಗವಂತನನ್ನು ಮನದಲ್ಲಿ ಸ್ಥಾಪಿಸಿಕೊಳ್ಳುವ ಪ್ರಯತ್ನ ಪ್ರಾರಂಭಿಸಬೇಕು.  ಧ್ಯಾನದಲ್ಲಿ ವಾಮನರೂಪಿಯನ್ನು ಆರಾಧಿಸುತ್ತಾ ಭಗವಂತನ ವಿಶ್ವವ್ಯಾಪ್ತಿಯೆಡೆಗೆ ಮನಸ್ಸನ್ನು ತಿರುಗಿಸಬೇಕು.  ಪರಮಾತ್ಮನೆಂಬುದು ಒಂದು ಶಕ್ತಿ, ಅವನು ಸರ್ವಾಂತರ್ಯಾಮಿ, ನನ್ನೊಳಗೂ, ಹೊರಗೂ, ಎಲ್ಲೆಲ್ಲೂ ವ್ಯಾಪಿಸಿದ್ದಾನೆ ಎಂದು ತ್ರಿವಿಕ್ರಮರೂಪಿ ಭಗವಂತನನ್ನು ಆರಾಧಿಸಬೇಕು.  ಸರ್ವ ಪ್ರಕಾರಗಳಿಂದಲೂ ನಮ್ಮನ್ನು ಉದ್ಧರಿಸುತ್ತಾನೆ ಎಂಬ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು.  ಭೂಮಂಡಲವೊಂದು ಅನಂತ ಶಕ್ತಿಗಳ ಆಗರ, ಪ್ರತಿಕ್ಷಣ ಘರ್ಷಿಸುವ ಶಕ್ತಿಗಳಿಂದ ಹೊಯ್ದಾಡುವ ವಿಶ್ವವನ್ನು ಭಗವಂತನು ತನ್ನ ಮೂರು ಹೆಜ್ಜೆಗಳನ್ನು ಊರಿ ಸುಸ್ಥಿತಿಗೆ ತಂದನೆಂದು ಕೂಡ ತಿಳಿಯಬಹುದಾಗಿದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ನಾಸಿಕದಲ್ಲಿ ವಾಮನರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ವಾಮನರೂಪದಿಂದವತರಿಸಿದಾಗ ರಮಾದೇವಿಯು ’ಸುಖಾ’ ಆಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ
ವೈರೋಚನೀಯ ಭೂಮಿ ಮೂರು ಪಾದವು ಬೇಡಿ
ಈರಡಿಯೊಳಗಳದೆ ಭ್ಯೂವೋಮ | ಭೂವ್ಯೋಮವಳೆದ ಭಾ-
ಗೀರಥಿಯ ಜನಕ ದಯವಾಗೋ || - ವಿರೋಚನನ ಮಗ ಬಲಿಚಕ್ರವರ್ತಿಯನ್ನು ಮೂರು ಪಾದ ಭೂಮಿ ಬೇಡಿ, ಎರಡು ಪಾದಗಳಲ್ಲಿ, ಭೂಲೋಕ ಮತ್ತು ಅಂತರಿಕ್ಷಗಳನ್ನಳೆದು ಪಾದನಖದಿಂದ ಬ್ರಹ್ಮಾಂಡ ಕರ್ಪರವನ್ನು ಒಡೆದು ಭಾಗೀರಥಿಯ ಜನಕನೆಂದೆನಿಸಿಕೊಂಡ ಹೇ ವಾಮನನೇ ಕೃಪೆತೋರೋ ಎಂದು ಪ್ರಾರ್ಥಿಸಿದ್ದಾರೆ.

ಭಗವಂತನ ವಾಮನಾವತಾರವೂ ಕೂಡ ಅನಂತ ಕರುಣೆಯ ಕಾರ್ಯವೇ ಆಗಿದೆ.  ಬಲಿಯ ಅಹಂಕಾರವನ್ನು ಮೆಟ್ಟಿ,  ಇಂದ್ರನ ಪದವಿಯನ್ನು ಮರಳಿ ಇಂದ್ರನಿಗೆ ದೊರಕಿಸುವುದು ದೇವತೆಗಳ ಮೇಲಿನ ಅಪಾರ ಕಾರುಣ್ಯದಿಂದಲೇ ಎಂಬುದು ತಿಳಿಯುತ್ತದೆ.  ಮೂರು ಲೋಕವನ್ನು ಅಳೆಯುವ ನೆಪದಿಂದ ಬ್ರಹ್ಮಾಂಡ ಕಟಾಹವನ್ನು ಭೇದಿಸಿ, ಗಂಗಾಜನಕನೆಂದೆನಿಕೊಂಡಿದ್ದು ಲೋಕದ ಸಮಸ್ತ ಬುಧಜನರ ಉದ್ಧಾರಕ್ಕಾಗಿಯೂ ಹಾಗೂ ಪಾಪಿಜನರ ಪಾಪ ಪರಿಹಾರಕ್ಕಾಗಿಯೂ ಆಗಿದೆ.  ಇಂತಹ ಕರುಣಾಸಾಗರನ ಕಾರುಣ್ಯಕ್ಕೆ ಯಾವ ಸಾಟಿಯೂ ಇಲ್ಲವೆಂಬುದನ್ನು ತಿಳಿಯಬೇಕಾಗಿದೆ.  ಭಾಗವತ ಅಷ್ಟಮಸ್ಕಂಧದ ೨೨ನೆಯ ಅಧ್ಯಾಯದಲ್ಲಿ ಬಲಿನಿಗ್ರಹವಾದಾಗ ಅಲ್ಲಿಗೆ ಬಂದ ಬಲಿಯ ಪಿತಾಮಹ ಪ್ರಹ್ಲಾದನು ಭಗವಂತನನ್ನೂ, ಅವನ ಕಾರುಣ್ಯವನ್ನೂ ಸ್ತುತಿಸುತ್ತಾ "ಮನ್ಯೇ ಮಹಾನದ್ಯ ಕೃತೋ ಹ್ಯನುಗ್ರಹೋ | ವಿಭ್ರಂಶಿತೋ ಯಚ್ಛ್ರಿಯ ಆತ್ಮಮೋಹನಾತ್" - ಬಲಿಗೆ ಸಕಲೈಶ್ವರ್ಯವನ್ನು ಕೊಟ್ಟವನೂ ನೀನೆ, ಮನಸ್ಸನ್ನು ಮರುಳುಗೊಳಿಸುವ ಸಂಪತ್ತಿನಿಂದ ಜಾರಿಸಿದ್ದೂ ನೀನೆ.  ಇದು ನೀನು ಬಲಿಯ ಮೇಲೆ ತೋರಿರುವ ಅಪಾರ ಕರುಣೆ ಹಾಗೂ ಪರಮಾನುಗ್ರಹವೇ ಆಗಿದೆ ಎಂದಿರುವ ಉಲ್ಲೇಖವಿದೆ.

ಚಿತ್ರಕೃಪೆ : ಅಂತರ್ಜಾಲ

ಕೇರಳದಲ್ಲಿ ವಾಮನರೂಪಿ ಭಗವಂತನ ದೇವಾಲಯದ ಕೊಂಡಿ http://en.wikipedia.org/wiki/Thrikkakara_Temple

ಕಜುರಾಹೋನಲ್ಲಿರುವ ವಾಮನರೂಪಿ ಭಗವಂತನ ದೇವಸ್ಥಾನದ ಅತಿ ಸುಂದರ ಚಿತ್ರಗಳಿಗಾಗಿ ಕೊಂಡಿ http://www.tripadvisor.in/Attraction_Review-g297647-d2665517-Reviews-Vaman_Temple-Khajuraho_Madhya_Pradesh.html

 ತ್ರಿವಿಕ್ರಮ ದೇವಾಲಯದ ಕೊಂಡಿ http://en.wikipedia.org/wiki/Tirukoilur

Monday, May 25, 2015

ಕರುಣಾ ಸಂಧಿ - ೩೦ ನೇ ಪದ್ಯ ( ನರಸಿಂಹಾವತಾರ)

ಭೂಖಂಡಂ ವಾರಣಾಂಡಂ ಪರವರವಿರಟಂ ಡಂಪಡಂಪೋರುಡಂಪಂ |  
ಡಿಂಡಿಂಡಿಂಡಿಂ ಡಿಡಿಂಬಂ ದಹಮಪಿವಹಮೈರ್ಝಂಪಝಂಪೈಶ್ಚ ಝಂಪೈಃ ||
ತ್ಯುಲ್ಯಾಸ್ತುಲ್ಯಾಸ್ತುತುಲ್ಯಾಃ ಧುಮಧುಮಧುಮಕೈಃ ಕುಂಕುಮಾಂಕೈಃಕುಮಾಂಕೈಃ | 
ಏತತ್ತೇ ಪೂರ್ಣಯುಕ್ತಂ ಅಹರಹಕರಹಃ ಪಾತುಮಾಂ ನಾರಸಿಂಹಃ ||

ಮೀನ ಕೂರ್ಮ ವರಾಹ ನರಪಂ-
ಚಾನನಾ
ತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು ||೩೦||


ನರಪಂಚಾನನ - ನರಸಿಂಹಾವತಾರ : ಸನಕಾದಿಗಳ ಶಾಪದಿಂದಾಗಿ ದೈತ್ಯ ಜನ್ಮವನ್ನು ಪಡೆದಿದ್ದ ಜಯ-ವಿಜಯರು ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷನಾಗಿ ಹುಟ್ಟುತ್ತಾರೆ.  ತಾನು ಅಜರಾಮರನಾಗಬೇಕೆಂದು ಬಯಸಿ ಹಿರಣ್ಯಕಶಿಪುವು ಮಂದರಗಿರಿಯ ತಪ್ಪಲಿನಲ್ಲಿ ಘೋರ ತಪಸ್ಸನ್ನು ಪ್ರಾರಂಭಿಸುವನು.  ಅನೇಕ ವರ್ಷಗಳ ಕಾಲ ತಪಸ್ಸು ಮಾಡಿದ್ದರಿಂದ ಹಿರಣ್ಯಕಶಿಪುವಿನ ಶಿರಸ್ಸಿನಿಂದ ಹೊರಟ ಸಧೂಮಾಗ್ನಿಯು ಮೂರುಲೋಕಗಳನ್ನೂ ದಹಿಸಲಾರಂಭಿಸುವುದು.  ಜ್ವಾಲೆಯಿಂದ ತಪ್ತರಾದ ದೇವತೆಗಳು ದೈತ್ಯನ ತಾಮಸ ತಪಸ್ಸಿನ ಜ್ವಾಲೆ ಸಹಿಸಲಸದಳವಾಗಿದೆಯೆಂದು ಬ್ರಹ್ಮದೇವರಲ್ಲಿ ಮೊರೆಯಿಡುವರು.  ಬ್ರಹ್ಮದೇವರು ಹಿರಣ್ಯಕಶಿಪುವಿಗೆ ಪ್ರತ್ಯಕ್ಷರಾಗಿ ಉಗ್ರ ತಪಸ್ಸಿಗೆ ಮೆಚ್ಚಿ ವರ ಬೇಡೆನ್ನಲು, ದೈತ್ಯನು ಬ್ರಹ್ಮದೇವರಿಂದ ಸೃಷ್ಟಿಯಾದ ಯಾವುದರಿಂದಲೂ ತನಗೆ ಮರಣ ಬರಬಾರದೆಂದೂ, ಮರಣವು ಹೊರಗೂ-ಒಳಗೂ ಆಗಬಾರದೆಂದೂ, ಆಯುಧಗಳಿಂದಲೂ, ನೆಲದಲ್ಲಿಯೂ, ಆಕಾಶದಲ್ಲಿಯೂ, ನರಸುರಾಸುರ ಮಹೋರಗರಿಂದಲೂ, ಪ್ರಾಣವಿರುವ - ಇಲ್ಲದಿರುವ ವಸ್ತುಗಳಿಂದಲೂ ಬರಬಾರದೆಂದು ಪ್ರಾರ್ಥಿಸುತ್ತಾನೆ.  ತಾನು ಏಕಛತ್ರಾದಿಪತಿಯಾಗಬೇಕೆಂದೂ, ಲೋಕಪಾಲಕರ ದಿವ್ಯಶಕ್ತಿಗಳು (ಬೇಕಾದವರಿಗೆ ವರವನ್ನೂ, ಬೇಡದವರಿಗೆ ಶಾಪವನ್ನೂ ಕೊಡುವ ಶಕ್ತಿ) ತನಗೂ ಬರಬೇಕೆಂದೂ, ತನ್ನ ತಪೋಮಹಿಮೆಯಿಂದ ಯಾವ ಕುಂದು-ಕೊರತೆಯೂ ಇಲ್ಲದಂತೆ ಆನಂದವಾಗಿರಬೇಕೆಂದೂ ವರವನ್ನು ಬೇಡುತ್ತಾನೆ.  ಬ್ರಹ್ಮದೇವರು ಅಸುರನು ಕೇಳಿದ ವರಗಳನ್ನೆಲ್ಲಾ ಕೊಡುವರು.  ವರಗಳನ್ನು ಪಡೆದ ದೈತ್ಯನು ಅತಿಯಾದ ಮದದಿಂದ ಶ್ರೀಹರಿಯನ್ನು ದ್ವೇಷ ಮಾಡುವನು.  ತಮ್ಮನಾದ ಹಿರಣ್ಯಾಕ್ಷನನ್ನು ಶ್ರೀಹರಿಯು ಕೊಂದನೆಂದು ನಿಂದಿಸುತ್ತಾ ರೋಷ ಕಾರುವನು.  ವಿಪರೀತ ಅಹಂಕಾರದಿಂದ ದೇವಾಸುರ ನರ ಗಂಧರ್ವರನ್ನೆಲ್ಲಾ ಗೆದ್ದು ಹಿಂಸಿಸುವನು.  ಮೂರು ಲೋಕಗಳನ್ನೂ ಆಳಲುಪಕ್ರಮಿಸುವನು.  ಅದೆಷ್ಟು ಭೋಗಗಳನ್ನು ಅನುಭವಿಸಿದರೂ ತೃಪ್ತನಾಗದೆ ಶಾಸ್ತ್ರವಿಹಿತ ಕಾರ್ಯಗಳನ್ನೂ ಮಾಡುವನು.  ಹಿರಣ್ಯಕಶಿಪುವಿನ ಅಟ್ಟಹಾಸವನ್ನು ತಡೆಯಲಾರದ ಸುರಕಿನ್ನರಸಿದ್ಧಸಾಧ್ಯ ಮುನಿಶ್ರೇಷ್ಠರೆಲ್ಲಾ ಪರಮಾತ್ಮನಲ್ಲಿ ಶರಣುಹೊಕ್ಕು ರಕ್ಷಿಸೆಂದು ಪ್ರಾರ್ಥಿಸುವರು.  ಅಶರೀರವಾಣಿಯ ಮೂಲಕ ಭಗವಂತನು ಹಿರಣ್ಯಕಶಿಪುವಿಗೆ ’ಪ್ರಹ್ಲಾದ’ನೆಂಬ ಮಹಾನ್ ಹರಿಭಕ್ತನು ಮಗನಾಗಿ ಜನಿಸುವನೆಂದೂ, ಹಿರಣ್ಯಕಶಿಪುವು ಮಗುವನ್ನು ಕೊಲ್ಲುವ ಪ್ರಯತ್ನ ಮಾಡಿದಾಗ, ದೈತ್ಯನಿಗದೆಷ್ಟೇ ವರಗಳ ಬಲವಿದ್ದರೂ, ತಾನೇ ಆ ದೈತ್ಯನನ್ನು ಸಂಹರಿಸುವುದಾಗಿಯೂ ಭಗವಂತನು ಅಭಯವನ್ನೀಯುವನು.  ಭಗವಂತನ ವಾಣಿಯಂತೆಯೇ ಮುಂದೆ ಪ್ರಹ್ಲಾದನು ಹಿರಣ್ಯಕಶಿಪುವಿನ ಮಗನಾಗಿ ಜನಿಸಿ, ಹರಿಭಕ್ತಿಯನ್ನು ಮೆರೆಸಿದಾಗ, ಹಿರಣ್ಯಕಶಿಪುವು ಮಗುವನ್ನು ಅನೇಕಾನೇಕ ರೀತಿಯಲ್ಲಿ ಹಿಂಸಿಸುವನು.  ಹರಿಸರ್ವೋತ್ತಮನೆಂದು ಸದಾ ಜಪಿಸುವ ಮಗನನ್ನು ತಿದ್ದಲಾಗದೆ ಹಿರಣ್ಯಕಶಿಪುವು ಮಗುವನ್ನು ಶ್ರೀಹರಿಯನ್ನು ತೋರಿಸು, ಇಲ್ಲಿಯೇ ತೋರಿಸು, ಕಂಭದಲ್ಲಿ ತೋರಿಸು ಎಂದು ಆರ್ಭಟಿಸುವನು. ಆ ಕ್ಷಣದಲ್ಲಿ ಭೀಕರ ಶಬ್ದದೊಂದಿಗೆ ಕಂಭವ ನ್ನೊಡೆದುಕೊಂಡು, ನರನೂ ಅಲ್ಲದ, ಸಿಂಹವೂ ಅಲ್ಲದ, ಮೃಗವೂ ಆದ, ನರನೂ ಆದ ಅತಿ ಭಯಂಕರ ರೂಪದಲ್ಲಿ ಭಗವಂತನು "ನರಪಂಚಾನ"ನಾಗಿ ಪ್ರಾದುರ್ಭವಿಸುವನು.   ಪಂಚಾಸ್ಯ ಅಥವಾ ಪಂಚಾನನ ಎಂದರೆ ಸಿಂಹವೆಂದರ್ಥವಾಗುತ್ತದೆ.  ಖಡ್ಗವನ್ನು ಹಿಡಿದು ತನ್ನ ಮೇಲೇರಿ ಬರುತ್ತಿದ್ದ ಹಿರಣ್ಯಕಶಿಪುವಿನ ಕುತ್ತಿಗೆಯನ್ನು ಹಿಡಿದು ಎಳೆದು ತಂದು, ಹೊಸ್ತಿಲ ಮೇಲೆ ಕುಳಿತು, ತನ್ನ ನಖಗಳಿಂದಲೇ ಉದರವನ್ನು ಬಗೆದು, ಕರುಳಿನ ಮಾಲೆಯನ್ನು ತನ್ನ ಕೊರಳಿಗೆ ಧರಿಸಿ ಘರ್ಜಿಸುವನು.  ದೇವತೆಗಳೆಲ್ಲಾ ಪುಷ್ಪವೃಷ್ಟಿ ಮಾಡುತ್ತಾ ಭಗವಂತನನ್ನು ನಾನಾ ವಿಧವಾಗಿ ಸ್ತುತಿಸುವರು.

ಪದ್ಮಪುರಾಣದಲ್ಲಿ ನರಸಿಂಹಾವತಾರದ ವರ್ಣನೆಯನ್ನು ವಿಸ್ತಾರವಾಗಿ ಮಾಡಲಾಗಿದೆ.  ಕಂಭವನ್ನು ಸೀಳಿಕೊಂಡು ಬಂದ ನರಸಿಂಹ ರೂಪಿ ಭಗವಂತನ ಕಾಂತಿಯು ಕೋಟಿಸೂರ್ಯರಿಗಿಂತ ಮಿಗಿಲಾಗಿತ್ತು, ಭೀಕರವಾದ ಹಲ್ಲುಗಳೂ, ನಿಮಿರಿನಿಂತ ಆಯಾಲದ ಕೂದಲುಗಳು, ಮೂರು ಕಣ್ಣುಗಳಲ್ಲಿಯೂ ಕೆಂಗಿಡಗಳು, ಸಾವಿರತೋಳು, ಕೊರಳಲ್ಲಿ ದಿವ್ಯಮಾಲೆ, ಉದರದಲ್ಲಿ ಕೌಸ್ತುಭ, ಮೈ ತುಂಬಾ ದಿವ್ಯಾಭರಣಗಳನ್ನು ಧರಿಸಿ ಪ್ರಾದುರ್ಭಸುತ್ತಾನೆಂದು ವಿವರಿಸಲಾಗಿದೆ.  ಭಗವಂತನ ಇಂತಹ ದಿವ್ಯರೂಪದಲ್ಲಿ ಪುಟ್ಟ ಬಾಲಕ, ಭಕ್ತಾಗ್ರೇಸರ ಪ್ರಹ್ಲಾದನ ಕಣ್ಣುಗಳಿಗೆ ಬ್ರಹ್ಮಾಂಡವೇ ಕಾಣಿಸುತ್ತದೆ.  ನರಹರಿಯ ಕೊರಳ ಮೇಲಿನ ಕೂದಲಿನ ತುದಿಯಲ್ಲಿ ಒಂದೊಂದು ಬ್ರಹಾಂಡವು ಕಾಣಿಸುತ್ತದೆ.  ಮೂರು ಕಣ್ಣುಗಳಲ್ಲಿಯೂ ಸೂರ್ಯ ಚಂದ್ರರು, ಕಿವಿಗಳಲ್ಲಿ ಅಶ್ವಿನೀ ದೇವತೆಗಳು, ಹಣೆಯಲ್ಲಿ ಬ್ರಹ್ಮ ರುದ್ರರು, ಮೂಗಿನಲ್ಲಿ ಆಕಾಶ ಹಾಗೂ ವಾಯುಮುಖದಲ್ಲಿ ಇಂದ್ರ, ಅಗ್ನಿ, ನಾಲಿಗೆಯ ಮೇಲೆ ಸರಸ್ವತಿ, ಕೊರಳಲ್ಲಿ ಮೇರು ಪರ್ವತ, ಹೆಗಲ ಮೇಲೆ ದೊಡ್ಡ ದೊಡ್ಡ ಗುಡ್ಡಗಳು, ಹೊಕ್ಕಳಲ್ಲಿ ಅಂತರಿಕ್ಷ, ಪಾದಗಳಲ್ಲಿ ಪರ್ವತಗಳು, ಬೆರಳುಗಳಲ್ಲಿನ ಕೂದಲುಗಳಲ್ಲಿ ಔಷಧಿಗಳು, ಕಾಲಿನ ಉಗುರುಗಳಲ್ಲಿ ಎಲ್ಲ ಗಿಡಗಳು, ಉಸಿರಿನಲ್ಲಿ ಸಾಂಗ ವೇದಗಳು, ಆದಿತ್ಯ ವಸು, ರುದ್ರ, ವಿಶ್ವೇದೇವತೆಗಳು, ಮರುದ್ಗಣಗಳು, ಗಂಧರ್ವರು, ಅಪ್ಸರೆಯರು ಭಗವಂತನ ಅಂಗಾಂಗಗಳಲ್ಲಿ ಕಾಣಿಸುವರು.  ಕೊರಳಲ್ಲಿ ಶ್ರೀವತ್ಸ ಕೌಸ್ತುಭ, ವನಮಾಲಾ, ವೈಜಯಂತೀ, ಎಲ್ಲ ಕೈಗಳಲ್ಲಿ ಶಂಖ, ಚಕ್ರ, ಗದಾ, ಖಡ್ಗ ಮೊದಲಾದ ಆಯುಧಗಳು ಶೋಭಿಸುವುದನ್ನು ಕಂಡು ಪ್ರಹ್ಲಾದನು ಆನಂದಭಾಷ್ಪಗಳನ್ನುದುರಿಸುತ್ತಾ ಗದ್ಗದ ಕಂಠನಾಗಿ , ಭಕ್ತಿಯಿಂದ ಜಯದೇವ ಜಗನ್ನಾಥ  ನಮಸ್ತೇಸ್ತು ನಮಸ್ತೇಸ್ತು   ಎಂದು ಸ್ತುತಿಸುತ್ತಾ ದೀರ್ಘವಾಗಿ ನಮಸ್ಕರಿಸುತ್ತಾನೆ.

ಶ್ರೀಮದ್ಭಾಗವತ ದ್ವಿತೀಯಸ್ಕಂಧ ೭ನೆಯ ಅಧ್ಯಾಯದಲ್ಲಿ ನೃಸಿಂಹಾವತಾರವನ್ನು
ತ್ರೈವಿಷ್ಟಪೋರುಭಯಹಾ ಸ ನೃಸಿಂಹರೂಪಂ
ಕೃತ್ವಾ ಭ್ರಮದ್ಭ್ರುಕುಟಿದಂಷ್ಟ್ರಕರಾಲವಕ್ತ್ರಮ್ |
ದೈತ್ಯೇನ್ದ್ರಮಾಶು ಗದಯಾಭಿಪತನ್ತಮಾರಾ-
ದೂರೌ ನಿಪಾತ್ಯ ವಿದದಾರ ನಖೈಃ ಸ್ಫುರನ್ತಮ್ || - ದೇವತೆಗಳಿಗೆ ಉಂಟಾಗಿದ್ದ ಮಹಾಭಯವನ್ನು ಧ್ವಂಸ ಮಾಡುವುದಕ್ಕಾಗಿ ಭಗವಂತನು ಅದುರುತ್ತಿರುವ, ಗಂಟುಮುಖ ಮತ್ತು ತೀಕ್ಷ್ಣವಾದ ಕೋರೆದಾಡೆಗಳನ್ನು ಹೊಂದಿದ ಕಡು ಉಗ್ರವಾದ ನೃಸಿಂಹರೂಪವನ್ನು ತಾಳಿದನು.  ಗದೆಯ ಸಮೇತ ತನ್ನ ಮೇಲೆ ಬೀಳಲು ಬಂದ ದೈತ್ಯಚಕ್ರವರ್ತಿ ಹಿರಣ್ಯಕಶಿಪುವನ್ನು ತಡೆದು ತನ್ನ ತೊಡೆಯ ಮೇಲೆ ಬೀಳಿಸಿಕೊಂಡು, ತನ್ನ ನಖಗಳಿಂದಲೇ ಉದರವನ್ನು ಸೀಳಿದನು ಎಂಬ ವರ್ಣನೆಯಿದೆ.

ಭಾಗವತ ಸಪ್ತಮಸ್ಕಂಧ ೮ನೆಯ ಅಧ್ಯಾಯದಲ್ಲಿ ಭಗವಂತ ನರಸಿಂಹಾವತಾರದಲ್ಲಿ ಕಂಭದಿಂದ ಪ್ರಕಟಗೊಂಡಾಗ
ಸತ್ಯಂ ವಿಧಾತುಂ ನಿಜಭೃತ್ಯಭಾಷಿತಂ
ವ್ಯಾಪ್ತಿಂ ಚ ಭೂತೇಷವಖಿಲೇಷು ಚಾತ್ಮನಃ |
ಅದೃಶ್ಯತಾತ್ಯದ್ಭುತರೂಪಮುದ್ವಹನ್
ಸ್ತಮ್ಭೇ ಸಭಾಯಾಂ ನ ಮೃಗಂ ನ ಮಾನುಷಮ್ || - ಪ್ರಕಟಗೊಂಡ ಪರಮಪುರುಷನು ಕೇವಲ  ಮೃಗವೂ ಅಲ್ಲದೆ ಕೇವಲ ಮನುಷ್ಯನೂ ಅಲ್ಲದೆ ಮೃಗ-ಮಾನುಷರೂಪಗಳೆರಡೂ ಕೂಡಿದಂತಿರುವನು.  ತನ್ನ ಭಕ್ತ ಹಾಗೂ ಬ್ರಹ್ಮದೇವರ ಮಾತುಗಳನ್ನು ಸತ್ಯಗೊಳಿಸುವುದಕ್ಕಾಗಿಯೂ ಮತ್ತು ತಾನು ಸಮಸ್ತಭೂತಗಳಲ್ಲಿಯೂ ವ್ಯಾಪ್ತನೆಂಬುದನ್ನು ಪ್ರಮಾಣೀಕರಿಸುವುದಕ್ಕಾಗಿಯೂ ಭಗವಂತನು ನರಸಿಂಹ ರೂಪದಲ್ಲಿ ಪ್ರಕಟಗೊಂಡಿರುವನು.  ರೌದ್ರತೆಯಿಂದ ಕೂಡಿದ್ದ ಭಗವಂತನ ರೂಪವು ಭಯ ಹುಟ್ಟಿಸುವಂತಿರುವುದು. ಹಿರಣ್ಯಕಶಿಪುವನ್ನು ಸಂಹರಿಸಿದ ಭಗವಂತನು ಶಾಂತನಾಗಬೇಕೆಂದು ಎಲ್ಲಾ ದೇವತೆಗಳೂ ಸ್ತುತಿಸಿ ಪಾಡುತ್ತಾರೆ.  ಪ್ರಹ್ಲಾದನೂ ಕೂಡ
ಬ್ರಹ್ಮಾದಯಃ ಸುರಗಣಾ ಮುನಯೋSಥ ಸಿದ್ಧಾಃ
ಸತ್ತ್ವೈಕತಾನಮತಯೋ ವಚಸಾಂ ಪ್ರವಾಹೈಃ |
ನಾರಾಧಿತುಂ ಪುರುಗುಣೈರಧುನಾಪಿ ಪಿಪ್ರುಃ
ಕಿಂ ತೋಷ್ಟುಮರ್ಹತಿ ಸ ಮೇ ಹರಿರುಗ್ರಜಾತೇಃ || -  ಸದಾ ಸತ್ವಗುಣವನ್ನೇ ಹೊಂದಿರುವ ಬ್ರಹ್ಮಾದಿದೇವತೆಗಳು, ಋಷಿ-ಮುನಿಗಳು, ಸಿದ್ಧಪುರುಷರುಗಳ ಸ್ತುತಿಯಿಂದಲೇ ಶಾಂತನಾಗದ ಭಗವಂತನನ್ನು ಅಸುರನಾದ ನಾನು ಸ್ತುತಿಸಿ ಹೇಗೆ ಸಂತೋಷಪಡಿಸಲಿ ಎನ್ನುತ್ತಾ ಅತಿಯಾದ ಪ್ರೇಮದಿಂದ, ಗದ್ಗದನಾಗಿ ಸ್ತುತಿಸಲು ಪ್ರಾರಂಭಿಸುತ್ತಾನೆ.  ನಾನಾ ವಿಧವಾಗಿ ಸ್ತುತಿಸುವ ಪ್ರಹ್ಲಾದನ ಪ್ರೇಮ-ಭಕ್ತಿಯಿಂದ ಸಂತುಷ್ಟನಾಗಿ, ಶಾಂತನಾಗುವ ನರಸಿಂಹನು "ಪ್ರಹ್ಲಾದ ಭದ್ರಂ ಭದ್ರಂ ತೇ ಪ್ರೀತೋSಹಂ ತೇSಸುರೋತ್ತಮ | ವರಂ ವೃಣೀಷ್ವಾಭಿಮತಂ ಕಾಮಪೂರೋSಸ್ಮ್ಯಹಂ ನೃಣಾಮ್ " - ಅಸುರೋತ್ತಮನೇ ನಿನಗೆ ಮಂಗಳವಾಗಲಿ, ಬೇಕಾದ ವರಗಳನ್ನು ಕೇಳಿಕೋ ಎಂದು ಪ್ರಸನ್ನನಾಗಿ ಅಭಯವೀಯುವನು.  ಪ್ರಹ್ಲಾದನು ತನಗೆ ಭಕ್ತಿಯೊಂದೇ ಬೇಕೆನ್ನುತ್ತಾ ತಾನು ನಾರದರು ಹೇಳಿಕೊಟ್ಟ
"ಓಂ ನಮೋ ಭಗವತೇ ತುಭ್ಯಂ ಪುರುಷಾಯ ಮಹಾತ್ಮನೇ | ಹರಯೇ ಅದ್ಭುತಸಿಂಹಾಯ ಬ್ರಹ್ಮಣೇ ಪರಮಾತ್ಮನೇ" - ಸರ್ವೋತ್ತಮನೂ, ಸರ್ವರಿಗೂ ಸ್ವಾಮಿಯೂ, ಅದ್ಭುತ ಸಿಂಹನೂ, ಪ್ರಣವ ಪ್ರತಿಪಾದ್ಯನೂ ಆದ ನಿನಗೆ ನಮಸ್ಕಾರಗಳು ಎಂದು ಸದಾ ಜಪಿಸುವೆನು ಎನ್ನುವನು.

ಶ್ರೀವಿಷ್ಣು ಸಹಸ್ರನಾಮದಲ್ಲಿ "ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ" - ಮೇಲ್ನೋಟಕ್ಕೆ ನರಸಿಂಹನಾಗಿ ಉದ್ಭವಿಸಿ ಹಿರಣ್ಯಕಶಿಪುವನ್ನು ಸಂಹರಿಸಿದ ಎಂಬ ಅರ್ಥವಿದ್ದರೂ, ’ನಾರಸಿಂಹವಪುಃ’ ಎನ್ನುವುದಕ್ಕೆ ವಿಶಿಷ್ಟವಾದ ಅರ್ಥಗಳೂ ಇವೆ.  ’ನಾರ’ ಎಂದರೆ ನರರಲ್ಲಿ ತುಂಬಿರುವ ಅಜ್ಞಾನ, ’ಸಿಂಹ’ ಎಂದರೆ ಸಿಮ್ಮತಿ ಅಥವಾ ನಿವಾರಿಸುವವನು, ’ವ’ ಎಂದರೆ ಜ್ಞಾನ, ’ಪುಃ’ ಎಂದರೆ ಕರುಣಿಸುವವನು ಎಂಬರ್ಥವಿದೆ.  ಆದ್ದರಿಂದ ’ನಾರಸಿಂಹವಪುಃ ಎಂದರೆ ನರರಲ್ಲಿ ತುಂಬಿರುವ ಅಜ್ಞಾನವನ್ನು ಅಳಿಸಿ, ಜ್ಞಾನದ ಬೀಜ ಬಿತ್ತುವವನು ಎಂದರ್ಥವಾಗುತ್ತದೆ.  ಹಾಗೂ ನಾರ (ನಾ+ಅರ) ಎಂದರೆ ದೋಷವಿಲ್ಲದವನು ಮತ್ತು ಸಿಂಹ ಎಂದರೆ ಭಯಂಕರವಾಗಿ ಸರ್ವ ದೋಷವನ್ನೂ ನಾಶಮಾಡುವವನು.  ಆದ್ದರಿಂದ ’ನಾರಸಿಂಹವಪುಃ’ ಎಂದರೆ ಸರ್ವ ದೋಷವನ್ನೂ ನಾಶಮಾಡಿಯೂ ಕೂಡ, ಯಾವುದೇ ದೋಷವಿಲ್ಲದೇ ಇರುವವನು.  ಪ್ರಳಯ ಕಾಲದಲ್ಲಿ ನರವಂಶವನ್ನು ನಾಶಮಾಡಿ, ಸೃಷ್ಟಿ ಕಾಲದಲ್ಲಿ ಪುನಃ ಬೀಜ ಬಿತ್ತಿ ಸೃಷ್ಟಿ ಮಾಡುವವನು.  ಮನುಕುಲದ ಸೃಷ್ಟಿ ಸಂಹಾರಕ್ಕೆ ಕಾರಣನಾದ ಭಗವಂತ ನಾರಸಿಂಹವಪುಃ ಎಂದರ್ಥವಾಗುತ್ತದೆ (ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಆಧಾರ).

ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ನರಸಿಂಹಾವತಾರವನ್ನು "ದೇವ ನೃಸಿಂಹ ಹಿರಣ್ಯಕಶತ್ರೋ ಸರ್ವ ಭಯಾಂತಕ ದೈವತ ಬಂಧೋ" - ತನ್ನಲ್ಲೇ ರಮಿಸುತ್ತಿರುವ ಹಿರಣ್ಯಕಶಿಪು ಸಂಹಾರಕನಾದ ಸರ್ವ ಭಕ್ತರ ಭಯವನ್ನು ನಿರ್ಮೂಲಗೊಳಿಸುವ, ಇಂದ್ರಾದಿ ದೇವತೆಗಳಿಗೆ ಬಂಧುವಾದ, ನರಸಿಂಹ ಸ್ವಾಮಿಯೇ ನಿನಗೆ ನಮಸ್ಕ ರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಅತಿಬಲ ದಿತಿಸುತ ಹೃದಯ ವಿಭೇದನ ಜಯನೃಹರೇSಮಲ ಭವಮಮ ಶರಣಂ |
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ಹಿರಣ್ಯಕಶಿಪು ಸಂಹಾರಕನಾದ, ನಿರ್ದೋಷನಾದ ನೃಸಿಂಹಸ್ವಾಮಿಯೇ ನೀನು ಸರ್ವೋತ್ಕೃಷ್ಟನಾಗಿರುವೆ.  ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದಿದ್ದಾರೆ.

ಶ್ರೀ ಶಂಕರಾಚಾರ್ಯರು ತಮ್ಮ ಶ್ರೀ ಲಕ್ಷ್ಮೀನೃಸಿಂಹ ಪಂಚರತ್ನ ಸ್ತೋತ್ರಮ್ ನಲ್ಲಿ "ತ್ವತ್ಪ್ರಜೀವ-ಪ್ರಿಯಮಿಚ್ಛಸಿ ಚೇನ್ನರಹರಿ - ಪೂಜಾಂ ಕುರು ಸತತಂ" ಎನ್ನುತ್ತಾ ಮನೋರೂಪಿಯಾದ ಭ್ರಮರವೇ ಸಂಸಾರದ ಒಣ ಮರುಭೂಮಿಯಲ್ಲಿ ತಿರುಗುವುದು ಬಿಟ್ಟು ಧ್ಯೇಯವನ್ನು ಬಯಸುವಿಯಾದರೆ "ಭಜಭಜ ಲಕ್ಷ್ಮೀನರಸಿಂಹಾನಘ ಪದ-ಸರಸಿಜ ಮಕರಂದಮ್" - ಶ್ರೀ ಲಕ್ಷ್ಮೀನರಸಿಂಹನ ಸುಂದರ ಚರಣ ಕಮಲಗಳನ್ನು ಭಜಿಸು, ಮಕರಂದವನ್ನು ಸೇವಿಸು ಎನ್ನುತ್ತಾರೆ. 
ಶ್ರೀ ಲಕ್ಷ್ಮೀನೃಸಿಂಹ ಸ್ತೋತ್ರಮ್ ನಲ್ಲಿ  | ಶ್ರೀಮತ್ಪಯೋನಿಧಿ ನಿಕೇತನ ಚಕ್ರಪಾಣೇ | ಭೋಗೀಂದ್ರ ಭೋಗಮಣಿರಂಜಿತ ಪುಣ್ಯ ಮೂರ್ತೇ || ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿ ಪೋತ | ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || - ಕ್ಷೀರಸಾಗರ ನಿವಾಸಿಯೇ, ಸುದರ್ಶನ ಚಕ್ರ ಧರಿಸಿರುವವನೇ, ಭೋಗಾಧಿಪತಿಯೇ, ಸರ್ಪರಾಜನ ಹೆಡೆಯಲ್ಲಿನ ರತ್ನದಿಂದ ಶೋಭಿಸುವವನೇ, ಪುಣ್ಯಮೂರ್ತಿಯೇ, ಯೋಗೀಶ್ವರನೇ, ನಿತ್ಯನೇ, ಸಂಸಾರವೆಂಬ ಸಾಗರದ ನೌಕೆಯಾಗಿರುವವನೇ, ಶ್ರೀ ಲಕ್ಷ್ಮೀನೃಸಿಂಹನೇ ನಿನ್ನ ಕೈಗಳ ಆಶ್ರಯವನ್ನು ಕೊಡು ಎನ್ನುತ್ತಾ ನಾನಾವಿಧವಾಗಿ ಸ್ತುತಿಸುತ್ತಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ
ದಂಭೋಲಿ ತೀಕ್ಷ್ಣನಖ ಸಂಭೇದಿತೇಂದ್ರರಿಪು  ಕುಂಭೀಂದ್ರ ಪಾಹಿ ಕೃಪಯಾ
ಸ್ತಂಭಾರ್ಭಕಾಸಹನ ಡಿಂಭಾಯ ದತ್ತವರ ಗಂಭೀರನಾದ ನೃಹರೇ |
ಅಂಭೋಧಿಜಾನುಸರಣಾಂಭೋಜಭೂ ಪವನ ಕುಂಭೀನಸೇಶ ಖಗರಾಟ್
ಕುಂಭೀಂದ್ರ ಕೃತ್ತಿಧರ ಜಂಭಾರಿ ಷಣ್ಮುಖ ಮುಖಾಂಭೊರುಹಾಭಿನುತ ಮಾಮ್ || - ತನ್ನ ಭಕ್ತನಾದ ಪ್ರಹ್ಲಾದನಿಗೆ ದೈತ್ಯನು ಕೊಡುವ ಉಪಟಳವನ್ನು ನೋಡಿ ಸಹಿಸಲಾರದೆ, ಕಂಭದಿಂದ ಉದ್ಭವಿಸಿ, ಗಂಭೀರವಾಗಿ ಗರ್ಜಿಸಿ, ತೀಕ್ಷ್ಣವಾದ ವಜ್ರಾಯುಧದಂತಿರುವ ತನ್ನ ಉಗುರುಗಳಿಂದಲೇ ಮದಗಜದಂತೆ ಮಹಾಪರಾಕ್ರಮಿಯಾದ ಹಿರಣ್ಯಕಶಿಪುವನ್ನು ಸೀಳಿ, ಭಕ್ತ ಪ್ರಹ್ಲಾದನಿಗೆ ವರಗಳನ್ನು ಕರುಣಿಸಿ, ಬ್ರಹ್ಮ ರುದ್ರೇಂದ್ರಾದಿ ಸಕಲ ದೇವತೆಗಳಿಂದಲೂ ಸ್ತುತ್ಯನಾದ ಮಹಾಲಕ್ಷ್ಮೀ ಸಹಿತನಾದ ಶ್ರೀ ನರಸಿಂಹ ಸ್ವಾಮಿಯೇ ನನ್ನನ್ನು ಸರ್ವ ಆಪತ್ತುಗಳಿಂದಲೂ ಕಾಪಾಡು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ನರಸಿಂಹಾವತಾರವನ್ನು
ತವ ಕರಕಮಲವರೇ  ನಖಮದ್ಭುತಶೃಂಗಂ
ದಲಿತಹಿರಣ್ಯಕಶಿಪು ತನುಭೃಂಗಂ
ಕೇಶವ ಧೃತನರಹರಿರೂಪ ಜಯ ಜಗದೀಶ ಹರೇ || - ನಿನ್ನ ತಾವರೆಯಂತಹ ಕರದಲ್ಲಿರುವ ಬೆಟ್ಟದಂತೆ ಅದ್ಭುತವಾದ ಉಗುರುಗಳಿಂದ ದೈತ್ಯ ಹಿರಣ್ಯಕಶಿಪುನಿನ ದೇಹವನ್ನು ನಾಶಗೊಳಿಸಿದ ನರಹರಿ ರೂಪದ ಕೇಶವನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಶ್ರೀ ಪುರಂದರದಾಸರು ತಮ್ಮ "ಅಚ್ಯುತಾನಂತ ಗೋವಿಂದ" ಎಂದ ಕೃತಿಯಲ್ಲಿ
ನರಸಿಂಹರೂಪವ ತಾಳಿ - ಬಂದೆ | ಕರೆಯೆ ಕಂಭದಿ ಕಂದನ ಮಾತಕೇಳಿ ||
ದುರುಳ ರಕ್ಕಸನನು ಸೀಳಿ - ನಿನ್ನ | ಕೊರಳಲಿ ಧರಿಸಿದೆ ಕರುಳಿನ ಮಾಲಿ || - ಎಂದೂ
"ಮಹದಾದಿ ದೇವ ನಮೋ ಮಹದಾದಿ ದೇವ ನಮೋ | ಮಹಾಮಹಿಮನೆ ನಮೋ | ಪ್ರಹ್ಲಾದವರದ ಅಹೋಬಲ ನಾರಸಿಂಹ"... ಎಂಬ ಕೃತಿಯಲ್ಲಿ ಭಗವಂತನು ನರಸಿಂಹ ರೂಪವ ಧರಿಸಿ ಉದ್ಭವಿಸಿದಾಗ "ತುರುಗಿರಗಳಲ್ಲಾಡೆ ಶರಧಿಗಳು ಕುದಿದುಕ್ಕೆ | ಉರಿಯನುಗುಳುತ ಉದ್ಭವಿಸಿದೆ ನರಸಿಂಹ" - ಸಿಡಿಲಿನಂತೆ ಗರ್ಜಿಸುತ್ತಾ ರಕ್ಕಸನ ಸಂಹಾರಕ್ಕೆ ಬೆಂಕಿಯನ್ನುಗುಳುತ್ತಾ ಪ್ರತ್ಯಕ್ಷವಾದಾಗ ಸಾಗರಗಳು ಕುದಿದು ಉಕ್ಕಿದವು ಎನ್ನುತ್ತಾ ಗಂಭೀರವಾಗಿ, ಭಯ ಭಕ್ತಿಯಿಂದ ವಿವರಿಸುತ್ತಾರೆ.

ಶ್ರೀ ವಿಜಯದಾಸರು ತಮ್ಮ  "ವೀರ ಸಿಂಹನೆ ನಾರ ಸಿಂಹನೆ.." ಎಂಬ ಸುಳಾದಿಯಲ್ಲಿ ನರಸಿಂಹರೂಪಿ ಭಗವಂತನ ರೌದ್ರ ರೂಪವನ್ನು ವರ್ಣಿಸುತ್ತಾ ಭೂಮಂಡಲದಲ್ಲೆಲ್ಲಾ ಸೃಷ್ತಿಯಾದ ಅಲ್ಲೋಲ ಕಲ್ಲೋಲಗಳನ್ನು ತಿಳಿಸುತ್ತಾರೆ.  ಕೋಟಿ ಸಿಡಿಲು ಗಿರಿಗೆ ಬಡಿದಂತೆ ನರಪಂಚಾನನು ಕಂಭದಿಂದ ಪ್ರಾದುರ್ಭವಿಸಿದನೆಂದು ವರ್ಣಿಸುತ್ತಾರೆ.

ಮಾನವನ ವಿಕಾಸಕ್ಕೆ ಭಗವಂತನ ನರಸಿಂಹಾವತಾರವನ್ನು ಸಮನ್ವಯಿಸಿದರೆ ನರಸಿಂಹನು ಹಿರಣ್ಯಕಶಿಪುವಿಗೆ ಉಗ್ರವಾದ ಸಿಂಹನಾದರೆ ಪ್ರಹ್ಲಾದನಿಗೆ ಮನುಷ್ಯ ಹೃದಯದ ಮೃದು ಭಾವವಾಯಿತು.  ಇದು ಶ್ರೀಹರಿಯ ಪರಮ ಕಾರುಣ್ಯ ಹಾಗೂ ಭಕ್ತಪರಾಧೀನತೆಯ ಪ್ರತೀಕವೆನ್ನಬಹುದು.  ಹಿರಣ್ಯಕಶಿಪುವು ತನ್ನ ತಂದೆಯಾದರೂ ಪ್ರಹ್ಲಾದನು ಅವನನ್ನು ತೊರೆದು ಹರಿ ಭಕ್ತಿಯನ್ನು ಅಪ್ಪಿಕೊಂಡನಾದ್ದರಿಂದ ಪುಟ್ಟ ಬಾಲಕನಿಗೆ ಭಗವಂತನ ನರಸಿಂಹರೂಪದ ದರ್ಶನವಾಯಿತು.  ನಾವು ಕೂಡ ಹಿರಣ್ಯಕಶಿಪುಗಳಾದ ಅರಿಶಡ್ವರ್ಗಗಳ ಬೆನ್ನು ಹತ್ತುವುದನ್ನು ಬಿಟ್ಟರೆ, ಶ್ರೀಹರಿಯ ಕರುಣೆಯನ್ನು ಪಡೆಯಬಹುದು ಎಂಬುದಕ್ಕೆ  ಇದು ನಿದರ್ಶನವಾಗುತ್ತದೆ.  ಪ್ರಾಣಿಗಳಲ್ಲಿ ಸಿಂಹ ಅತಿ ಶಕ್ತಿಶಾಲಿ ಪ್ರಾಣಿಯಾದ್ದರಿಂದ ಭಗವಂತನೂ ಸರ್ವ ಶ್ರೇಷ್ಠನಾದವನು.  ನರಸಿಂಹ ರೂಪದ ಉಪಾಸನೆಯನ್ನು ಮಾಡುವ ಸಾಧಕರಿಗೆ ಬರುವ ವಿಘ್ನಗಳೆಲ್ಲವೂ ಹಿರಣ್ಯಕಶಿಪುವಿನಂತೆ ಸಂಹಾರಗೊಂಡು, ಸಾಧನೆಯ ಹಾದಿ ಸುಗಮವಾಗುವುದೆಂಬುದೂ ಕೂಡ ನಂಬಿಕೆಯಾಗಿದೆ.  ತನ್ನ ಭಕ್ತರಾದವರನ್ನು ಭಗವಂತ ರಕ್ಷಿಸಿಯೇ ರಕ್ಷಿಸುತ್ತಾನೆಂಬುದು ಕೂಡ ಸಾಬೀತಾಗುತ್ತದೆ.  ಏಕೆಂದರೆ ಹಿರಣ್ಯಕಶಿಪುವಿನೊಳಗಿದ್ದವನು ಶ್ರೀಹರಿಯ ದ್ವಾರಪಾಲಕರಲ್ಲಿ ಒಬ್ಬನಾದ ಜಯನೆಂಬುವನು.  ನೋಡಲು ಅತ್ಯಂತ ಭೀಕರವಾದ ರೂಪವನ್ನು ಧರಿಸಿ ಬಂದಿದ್ದರೂ ಕೂಡ ಅದು ಭಗವಂತನ ಕಾರುಣ್ಯವೇ ಆಗಿದೆ.  ಏಕೆಂದರೆ ತನ್ನ ಪ್ರಿಯ ಭಕ್ತನಾದ ಜಯನನ್ನು ಉದ್ಧರಿಸುವುದಕ್ಕಾಗಿ ದೈತ್ಯನ ಕರಾರುಗಳಿಗೆಲ್ಲಾ ಹೊಂದುವಂತೆ ಭಗವಂತನು ವಿಶೇಷವಾದ ರೂಪವನ್ನು ಧರಿಸಿ ತನ್ನ ಭಕ್ತನಿಗೆ ಶಾಪವಿಮೋಚನೆ ಮಾಡಿ ಮುಕ್ತಿ ಕೊಡುವುದಕ್ಕಾಗಿಯೇ ಬರುವನು.   ನೋಡುವವರಿಗೆ ಹೊರನೋಟಕ್ಕೆ ಇದು ಉಗ್ರನರಸಿಂಹನ ರೌದ್ರತೆಯೆಂದು ತೋರಿದರೂ, ತನ್ನ ಭಕ್ತನಾದ ಜಯನನ್ನು ಭಗವಂತ ತನ್ನ ತೊಡೆಯ ಮೇಲೆ ಹಾಕಿಕೊಂಡು ಕರುಳು ಬಗೆದು, ದೈತ್ಯನ ಪಾಪ ಕರ್ಮಗಳನ್ನೆಲ್ಲಾ ಕ್ಷಮಿಸಿ ಉದ್ಧರಿಸುವನು.  ಇದು ಎಲ್ಲಾ ತಪ್ಪುಗಳನ್ನೂ ಮನ್ನಿಸಿ, ಮಗುವನ್ನು ಎದೆಗವಚಿಕೊಳ್ಳುವ ತಾಯಿ ವಾತ್ಸಲ್ಯವನ್ನು ತೋರುತ್ತದೆ.  ಸಾಧಕನು ತನ್ನೆಲ್ಲಾ ಅಹಂಕಾರ ಮಮಕಾರಗಳನ್ನು ಬಿಟ್ಟು ಭಗವಂತನನಿಗೆ ಶರಣಾಗತನಾದರೆ, ಕ್ಷಮಿಸಿ, ಮುದ್ದಿಸಿ ಉದ್ಧರಿಸುತ ತಾಯಿಯೇ ಆಗುವನು.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ  ನಾಲಿಗೆಯಲ್ಲಿ ನರಸಿಂಹರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ನರಸಿಂಹರೂಪವೆತ್ತಿದಾಗ ರಮಾದೇವಿಯು ಮಹಾಲಕ್ಷ್ಮೀದೇವಿಯಾಗಿರುತ್ತಾಳೆ ಎಂದಿದ್ದಾರೆ.

ಶ್ರೀಜಗನ್ನಾಥದಾಸರು ನರಸಿಂಹ ರೂಪಿ ಭಗವಂತನು ಕೈವಲ್ಯದಾಯಕನು, ಎಲ್ಲಾ ದುಷ್ಟ ಶಕ್ತಿಗಳಿಂದಲೂ ರಕ್ಷಿಸುವವನು, ದುರ್ಜನ ಕುಲವೈರಿಯೆಂದು ತಮ್ಮ ಸುಳಾದಿ "ದುರಿತವನ ಕುಠಾರಿ ದುರ್ಜನ ಕುಲ ವೈರಿ ಶರಣಾಗತ ವಜ್ರ ಪಂಜರ ಕುಂಜರ" ಎನ್ನುತ್ತಾ ಶರಣಾಗತರನ್ನು ವಜ್ರದಂತಹ ಪಂಜರವನ್ನು ನಿರ್ಮಿಸಿ ಕಾಪಾಡುವವನು ಎಂದು ಸ್ತುತಿಸಿದ್ದಾರೆ.  ತಮ್ಮ ತತ್ವಸುವ್ವಾಲಿಯಲ್ಲಿ

ಕಂದ ಕರೆಯಲು ಕಂಭದಿಂದುದಿಸಿ ರಕ್ಷಿಸಿದಿ
ವಂದಿಸಿದ ಸುರರ ಸಲಹಿದಿ | ಸಲಹಿದಿ ನರಸಿಂಹ
ತಂದೆ ನೀನೆಮಗೆ ದಯವಾಗೋ || - ಕಂದನಾದ ಪ್ರಹ್ಲಾದನು ಕರೆಯಲು ಕಂಭದಿಂದ ಉದ್ಭವಿಸಿ ಕಾಪಾಡಿದೆ. ವಂದಿಸಿದ, ಪ್ರಾರ್ಥಿಸಿದಿ ದೇವಾನುದೇವತೆಗಳನ್ನು ರಕ್ಷಿಸಿದ ಜಗಜ್ಜನಕನಾದ ತಂದೆಯೇ ನಮ್ಮ ಮೇಲೆ ದಯೆತೋರು ಎಂದು ಪ್ರಾರ್ಥಿಸಿದ್ದಾರೆ.

ಶ್ರೀ ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ "ಶ್ಯಾಮಸುಂದರನವನೆ ಚಕ್ರಿ ನರಹರಿಯಂತೆ.... ಪ್ರೇಮಘೋರಗಳೊಂದೆ" - ಸರ್ವರನ್ನೂ ರಕ್ಷಿಸುವ ಭಗವಂತನು ತನ್ನನ್ನು ಪ್ರೇಮದಿಂದ, ಭಕ್ತಿಯಿಂದ ಸೇವಿಸುವ ಗೋಪಿಕೆಯರಿಗೆ ಶ್ಯಾಮಸುಂದರನಾದ ನಾರಾಯಣನಾಗಿ ಕಮನೀಯ ಸ್ವರೂಪನಾಗಿ ಕಾಣುವನು.  ದುಷ್ಟರನ್ನು ಶಿಕ್ಷಿಸಲು ಭಗವಂತನೇ ಶಿಶುಪಾಲನಿಗೆ ಚಕ್ರಧಾರಿಯಾಗಿಯೂ, ಹಿರಣ್ಯಕಶಿಪುವಿಗೆ ನರಸಿಂಹನಾಗಿಯೂ ಅವತರಿಸಿ ಮೃತ್ಯುವಾಗುತ್ತಾನೆ ಎಂದಿದ್ದಾರೆ.

ಚಿತ್ರಕೃಪೆ : ಅಂತರ್ಜಾಲ

 ಆಂಧ್ರಪ್ರದೇಶದ ’ಅಹೋಬಿಲ" ನರಸಿಂಹ ದೇವಸ್ಥಾನದ ಚಿತ್ರಗಳು, ಕೊಂಡಿ - https://www.google.co.in/search?q=Ahobila+Narasimha+temple&tbm=isch&tbo=u&source=univ&sa=X&ei=7eliVbT8AtfluQSiy4KYCA&ved=0CCoQsAQ&biw=1146&bih=692


 http://www.ahobilamutt.org/us/information/visitingahobilam.asp

Saturday, May 2, 2015

ಕರುಣಾ ಸಂಧಿ - ೩೦ ನೇ ಪದ್ಯ (ವರಾಹಾವತಾರ)




 ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು || ೩೦ ||


ವರಾಹ - ವರಾಹಾವತಾರ : ಭಗವಂತನ ಅಸಂಖ್ಯಾತ ಅವತಾರಗಳಲ್ಲಿ ಪ್ರಮುಖವಾಗಿ ಗುರುತಿಸಲ್ಪಟ್ಟಿರುವ ದಶಾವತಾರಗಳಲ್ಲಿ ಮೂರನೆಯ ಅವತಾರವಾಗಿ ವರಾಹಾವತಾರವಾಯಿತು.    ಭಾಗವತ ಎರಡನೆಯ ಸ್ಕಂಧ ಏಳನೆಯ ಅಧ್ಯಾಯದಲ್ಲಿ ಶ್ವೇತವರಾಹ ಕಲ್ಪದಲ್ಲಿ ಮೊದಲು ಭಗವಂತನ ವರಾಹಾವತಾರವಾಯಿತು ಎಂಬ ಉಲ್ಲೇಖವಿದೆ.  ಅಪ್ರಾಕೃತ ದೇಹದಿಂದಲೇ ಯಾಗಕ್ಕೆ ಬೇಕಾದ ಸರ್ವ ಸಾಮಗ್ರಿಗಳನ್ನು ಸೃಷ್ಟಿ ಮಾಡಿ ’ಯಜ್ಞವರಾಹ’ನೆಂದು ಪ್ರಸಿದ್ಧನಾದನು.  ತಾನಾಗಿಯೇ ಮುಳುಗಿ ಹೋಗಿದ್ದ ಭೂಮಿಯನ್ನು ಶ್ವೇತವರಾಹ ಸ್ವಾಮಿಯು ರಸಾತಳದಿಂದ ಕೋರೆದಾಡಿಯ ಕೊನೆಯಲ್ಲಿಟ್ಟುಕೊಂಡು ಮೇಲಕ್ಕೆ ತರುವಾಗ ಆದಿದೈತ್ಯ ಹಿರಣ್ಯಾಕ್ಷನು ತಡೆದಾಗ ಸ್ವಾಮಿಯು ಗದೆಯಿಂದ ಹಿರಣ್ಯಾಕ್ಷನ ದೇಹವನ್ನು ಸೀಳಿ  ಸಂಹರಿಸಿದನೆಂಬ ವಿವರಣೆ ಇದೆ.

ಶ್ರೀವಿಷ್ಣು ಪುರಾಣಮ್ ವರಾಹಾವತಾರವನ್ನು ವರಾಹ ರೂಪವು ದೇವಯಜ್ಞಮಯವಾದದ್ದು ಎಂದು ಸ್ತುತಿಸಲಾಗಿದೆ.  ನೀರಿನಲ್ಲಿ ಮುಳುಗಿದ್ದ ಪೃಥಿವಿಯನ್ನು ಎತ್ತಿ ತರಬೇಕೆಂಬ ಉದ್ದೇಶದಿಂದ ಜನಲೋಕದಲ್ಲಿದ್ದ ಸನಕಾದಿ ಸಿದ್ಧಪುರುಷರಿಂದ ಸ್ತುತಿಸಲ್ಪಡುತ್ತಿದ್ದಾಗ, ನೀರಿನೊಳಗೆ ಪ್ರವೇಶವಾಯಿತು.  ಪಾತಾಳಕ್ಕೆ ಬಂದ ವರಾಹ ರೂಪಿ ಭಗವಂತನನ್ನು ಕಂಡು ಭೂದೇವಿಯು ಅನೇಕ ವಿಧವಾಗಿ ಸ್ತುತಿಸುತ್ತಾ, ನೀನೇ ನನಗೆ ಆಧಾರನೆಂದು ಮೊರೆಯಿಡುತ್ತಾ ನಮಸ್ಕರಿಸುವಳು.  ಪೃಥಿವಿಯ ಸ್ತುತಿಯಿಂದ ಸಂತುಷ್ಟನಾದ ವರಾಹವು ಸಾಮಗಾನದ ಧ್ವನಿಯಲ್ಲಿ ಗರ್ಜಿಸುತ್ತಾ, ತನ್ನ ಕೋರೆದಾಡಿಯಿಂದ ಭೂಮಿಯನ್ನೆತ್ತಿಕೊಂಡು ದೊಡ್ಡ ನೀಲಾಚಲದಂತೆ ರಸಾತಳದಿಂದ ಮೇಲೆದ್ದಿತು.  ಜಲದಿಂದ ಮೇಲೇಳುವಾಗ ವರಾಹದ ಬಾಯಿಯಿಂದ ಬಿರುಗಾಳಿ ಎದ್ದು ಸಮುದ್ರದ ನೀರು, ಉಕ್ಕಿ ಪುಟಿದು ಜನಲೋಕದಲ್ಲಿ ಆಶ್ರಯ ಪಡೆದಿದ್ದ ಸನಂದನಾದಿ ತೇಜಸ್ವಿ ಮುನಿಗಳನ್ನು ತೊಳೆಯುತ್ತದೆ.  ವರಾಹದ ಹೊಟ್ಟೆಯು ನೀರಿನಿಂದ ಒದ್ದೆಯಾಗಿ, ಅದು ತನ್ನ ವೇದೋಮಯ ಶರೀರವನ್ನು ಕೊಡಹುವುದು.  ರೋಮ ರೋಮಗಳಲ್ಲಿ ಆಶ್ರಯ ಪಡೆದಿದ್ದ ಮುನಿಗಳು ಭಯದಿಂದ ನಿರಂತರ ಸ್ತೋತ್ರ ಮಾಡುತ್ತಾರೆ.  ಸಕಲ ದೇವಾದಿದೇವತೆಗಳೂ, ಜನಲೋಕದ ಸಮಸ್ತ ಯೋಗಿಗಳೂ ವರಾಹಾವತಾರವನ್ನು ಯಜ್ಞಪುರುಷನೆಂದೂ, ಪಾದಗಳು ನಾಲ್ಕು ವೇದಗಳೆಂದೂ, ಕೋರೆದಾಡಿಯೇ ಯೂಪವೆಂದೂ, ಹಲ್ಲುಗಳೇ ಯಜ್ಞಗಳೆಂದೂ, ಮುಖವೇ ಹೋಮಕುಂಡವೆಂದೂ, ನಾಲಿಗೆಯೇ ಅಗ್ನಿಯೆಂದೂ, ರೋಮಗಳೇ ದರ್ಭೆಗಳೆಂದೂ ಪರಮಪುರುಷನ ಅವಯವಗಳನ್ನು ಸ್ತುತಿಸುತ್ತಾ ನಮಿಸುತ್ತಾರೆ.  ವರಾಹರೂಪಿ ಭಗವಂತನು ಪೃಥಿವಿಯನ್ನು ಜಲರಾಶಿಯ ಮೇಲೆ ಸ್ಥಾಪಿಸಿ, ಭೂಮಿಯ ಮೇಲ್ಮೈಯನ್ನು ಸಮವಾಗಿ ಮಾಡಿ, ಪರ್ವತಗಳನ್ನು ವಿಭಾಗ ಮಾಡಿ ಸ್ಥಾಪಿಸುವನು.  ಸಪ್ತದ್ವೀಪಗಳಾಗಿ ವಿಂಗಡಿಸಲ್ಪಟ್ಟು, ಭೂಃ ಭುವಃ ಸುವಃ ಮಹಃ ಎಂಬ ನಾಲ್ಕು ಲೋಕಗಳು ನಿರ್ಮಾಣವಾಯಿತೆಂದು ಸುಂದರವಾಗಿ ವರ್ಣಿಸಲ್ಪಟ್ಟಿದೆ.

ಪದ್ಮ ಮಹಾಪುರಾಣದಲ್ಲಿ ವರಾಹಾವತಾರವು ವಿಸ್ತಾರವಾಗಿ ವರ್ಣಿಸಲ್ಪಟ್ಟಿದೆ.  ಭಗವಂತನು ವಿಚಿತ್ರವಾದ ವಿಶ್ವರೂಪಿ ವರಾಹ ಅವತಾರವನ್ನು ಧರಿಸಿದನೆಂಬ ಉಲ್ಲೇಖವಿದೆ.  ವರಾಹದ ಮೂಲ ಎಲ್ಲಿದೆಯೆಂಬುದೇ ತಿಳಿಯದಂತೆ, ಮಧ್ಯವು ಗೋಚರಿಸದೆ, ತುದಿಯಂತೂ ಇಲ್ಲದಂತಹ ವ್ಯಾಪ್ತತೆಯಿರುತ್ತದೆ.  ಮೈ ತುಂಬ ಕಣ್ಣು, ನೋಡಿದಲ್ಲೆಲ್ಲ ಕೈ, ಎಲ್ಲ ಕಡೆಗೂ ಕಾಲು, ಅತೀ ಉದ್ದವಾದ ಕೋರೆದಾಡಿಯನ್ನು ಹೊಂದಿತ್ತೆಂಬ ವಿವರಣೆ ಸಿಕ್ಕುತ್ತದೆ.  ನಾಲ್ಕು ವೇದಗಳು, ಆರು ವೇದಾಂಗಗಳನ್ನು ದೇಹವಾಗಿ ಹೊಂದಿದ್ದ ಯಜ್ಞ ವರಾಹ ರೂಪಿಯನ್ನು ದೇವತೆಗಳು "ನಮೋ ಯಜ್ಞ ವರಾಹಾಯ ಕೃಷ್ಣಾಯ ಶತಬಾಹವೇ | ನಮಸ್ತೇ ವೇದವೇದಾಂಗ ತನವೇ ವಿಶ್ವರೂಪಿಣೇ" ಎಂದು ಸ್ತುತಿಸುತ್ತಾರೆ.



ಭಾಗವತ ಎರಡನೆಯ ಸ್ಕಂಧ ೭ನೆಯ ಅಧ್ಯಾಯದಲ್ಲಿ ವರಾಹಾವತಾರವನ್ನು
ಯತ್ರೋದ್ಯತಃ ಕ್ಷಿತಿತಲೋದ್ಧರಣಾಯ ಬಿಭ್ರ-
ತ್ಕ್ರೌಡೀಂ ತನುಂ ಸಕಲ ಯಜ್ಞಮಯೀಮನನ್ತಃ |
ಅನ್ತರ್ಮಹಾರ್ಣವ ಉಪಾಗತಮಾದಿದೈತ್ಯಂ
ತಂ ದಂಷ್ಟ್ರಯಾದ್ರಿಮಿವ ವಜ್ರಧರೋ ದದಾರ || - ಪ್ರಳಯ ಜಲದಲ್ಲಿ ಮುಳುಗಿದ್ದ ಭೂಮಿಯನ್ನು ಉದ್ಧರಿಸುವುದಕ್ಕೋಸ್ಕರ ಅನಂತನಾದ ಶ್ರೀಭಗವಂತನು ಸಮಸ್ತ ಯಜ್ಞಮಯವಾದ ವರಾಹ ದೇಹವನ್ನು ಕೈಗೊಂಡನು.  ಆ ಅವತಾರದಲ್ಲಿ ಆತನು ಮಹಾ ಸಮುದ್ರದೊಳಗಡೆಯೇ ತನ್ನನ್ನು ಎದುರಿಸಲು ಬಂದ ಆದಿದೈತ್ಯನಾದ ಹಿರಣ್ಯಾಕ್ಷನನ್ನು - ಇಂದ್ರನು ವಜ್ರಾಯುಧದಿಂದ ಪರ್ವತವನ್ನು ಭೇದಿಸಿದಂತೆ - ತನ್ನ ಕೋರೆದಾಡೆಯಿಂದ ಸೀಳಿಹಾಕಿದನು ಎಂದು ವರ್ಣಿಸಲ್ಪಟ್ಟಿದೆ.

ಭಾಗವತ ಮೂರನೆಯ ಸ್ಕಂಧ, ಹದಿಮೂರನೆಯ ಅಧ್ಯಾಯದಲ್ಲಿ ಸ್ವಾಯಂಭುವ ಮನುವು ಭೂಮಿಯು ದಿನ ಪ್ರಳಯದ ನೀರಿನಲ್ಲಿ ಮುಳುಗಿರುವುದರಿಂದ ಪ್ರಜೆಗಳ ವಾಸಕ್ಕೆ ಸ್ಥಳವಿಲ್ಲವಾಗಿದೆ, ಭೂಮಿಯನ್ನು ನೀರಿನಿಂದ ಮೇಲಕ್ಕೆ ತರಬೇಕೆಂದು ಕೇಳಿಕೊಳ್ಳುತ್ತಾರೆ.  ಬ್ರಹ್ಮದೇವರು ಶ್ರೀಮನ್ನಾರಾಯಣನೇ ಭೂಮಿಯನ್ನು ಮೇಲಕ್ಕೆ ತರಬೇಕೆಂದು, ಭಗವಂತನನ್ನು ಧ್ಯಾನಿಸುತ್ತಾರೆ.  ಧ್ಯಾನದ ಸಮಯದಲ್ಲಿಯೇ ಬ್ರಹ್ಮದೇವರ ಮೂಗಿನ ಹೊಳ್ಳೆಯಿಂದ ಅಂಗುಷ್ಠ ಗಾತ್ರದ ವರಾಹವು ಹೊರಗೆ ಬಂದು ಕೂಡಲೇ ಬೃಹದಾಕಾರವಾಗಿ ಬೆಳೆಯಿತು.  ಇದು ಭಗವಂತನದ್ದೇ ಲೀಲೆಯೆಂದು ಬ್ರಹ್ಮದೇವರು ಮತ್ತು ಸ್ವಾಯಂಭುವ ಮನುವು ಯೋಚಿಸುತ್ತಿರಲು ವರಾಹವು ಒಮ್ಮೆ ಗರ್ಜಿಸಿ, ದೇವತೆಗಳೆಲ್ಲರನ್ನೂ ಸಂತೋಷಪಡಿಸುತ್ತದೆ.  ಸಮಸ್ತರೂ ವರಾಹರೂಪಿ ಭಗವಂತನನ್ನು ವೇದಗಳಿಂದ ಸ್ತುತಿಸುತ್ತಿರಲು, ವರಾಹವು ತನ್ನ ಬಾಲವನ್ನು ಮೇಲಕ್ಕೆತ್ತಿಕೊಂಡು, ನೀರೊಳಗೆ ಹೋಗಿ ರಸಾತಳದಲ್ಲಿ ಸೆರೆಸಿಕ್ಕಿದ್ದ ಭೂಮಿಯನ್ನು ಮೇಲಕ್ಕೆ ತರುತ್ತಿರಲು, ಬ್ರಹ್ಮದೇವರಿಂದ ಹುಟ್ಟಿದ್ದ ಆದಿ ಹಿರಣ್ಯಾಕ್ಷನೆಂಬ ದೈತ್ಯನು ಗದಾಪಾಣಿಯಾಗಿ ಭಗವಂತನನ್ನು ಅಡ್ಡಗಟ್ಟುತ್ತಾನೆ.  ವರಾಹದೇವನು ತನ್ನ ದಾಡೆಯಿಂದ ಅವನನ್ನು ಕೊಂದು ಭೂಮಿಯೊಡನೆ ಮೇಲಕ್ಕೆ ಬರುತ್ತಾನೆ.    ತಾನಾಗಿಯೇ ದಿನಪ್ರಳಯ ಜಲದಲ್ಲಿ ಮುಳುಗಿದ್ದ ಭೂಮಿಯನ್ನು ತರುವಾಗ ಅಡ್ಡಬಂದ ಆದಿಹಿರಣ್ಯಾಕ್ಷನನ್ನು ಭಗವಂತನು ಶ್ವೇತವರಾಹ ರೂಪದಲ್ಲಿ, ದಾಡೆಯಿಂದ ಸಂಹರಿಸುತ್ತಾನೆ.    ಏಳನೆಯ ಮನ್ವಂತರದಲ್ಲಿ ಕಶ್ಯಪ-ದಿತಿಯ ಮಗನಾಗಿ ಹುಟ್ಟಿದ್ದ ಹಿರಣ್ಯಾಕ್ಷನು ಭೂಮಿಯನ್ನು ಅಪಹರಿಸಿ, ನೀರಿನಲ್ಲಿ ಮುಳುಗಿದ್ದಾಗ ಭಗವಂತನು ನೀಲವರಾಹ ರೂಪದಿಂದ ಅವತರಿಸಿ, ಹಿರಣ್ಯಾಕ್ಷನ ಕಿವಿಯ ಬುಡದಲ್ಲಿ ಹಸ್ತದಿಂದಲೇ ಹೊಡೆದು ಕೊಲ್ಲುತ್ತಾನೆ.  ಹೀಗೆ ಭಗವಂತನು ಒಂದು ಬಾರಿ ’ಶ್ವೇತವರಾಹ’ನಾಗಿಯೂ ಮತ್ತೊಂದು ಬಾರಿ ’ನೀಲವರಾಹ’ನಾಗಿಯೂ ಅವತರಿಸುತ್ತಾನೆ.

ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ವರಾಹಾವತಾರವನ್ನು "ಸೂಕರ ರೂಪಕ ದಾನವಶತ್ರೋ ಭೂಮಿವಿಧಾರಕ ಯಜ್ಞವರಾಂಗ" - ರಾಕ್ಷಸ ಸಂಹಾರಿಯೂ, ಭೂಮಿಯನ್ನು ಧರಿಸಿರುವವನೂ, ಬ್ರಹ್ಮಾದಿ ದೇವತೆಗಳನ್ನು ತನ್ನ ಶರೀರದಲ್ಲೇ ಧರಿಸಿರುವ ವರಾಹಾವತಾರಿಯಾದ ಶ್ರೀಮಹಾವಿಷ್ಣುವೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಸಗಿರಿವರಧರಾತಲವಹ ಸುಸೂಕರ ಪರಮ ವಿಬೋಧ ಹೇ ಭವ ಮಮ ಶರಣಮ್ |
ಶುಭತಮ ಕಥಾಶಯ ಪರಮಸದೋದಿತ ಜಗದೇಕ ಕಾರಣ ರಾಮರಮಾರಮಣ || -  ವರಾಹರೂಪಿಯಾಗಿ ಭೂಮಿಯನ್ನುದ್ಧರಿಸಿದ, ಪೂರ್ಣಜ್ಞಾನ ರೂಪಿಯಾದ, ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ, ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ, ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ವರಾಹಾವತಾರವನ್ನು
ನೀಲಾಂಬುದಾಭ ಶುಭ ಶೀಲಾದ್ರಿ ದೇಹಧರ ಖೇಲಾಹೃತೋದಧಿಧುನೀ
ಶೈಲಾದಿಯುಕ್ತ ನಿಖಿಲೇಲಾಕಟಾದ್ಯಸುರ ತೂಲಾಟವೀ ದಹನ ತೇ |
ಕೋಲಾಕೃತೇ ಜಲಧಿಕಾಲಾಚಲಾವಯವ ನೀಲಾಬ್ಜದಂಷ್ಟ್ರ ಧರಣೀ
ಲೀಲಾಸ್ಪದೋರುತಲ ಮೂಲಾಶಿಯೋಗಿವರ ಜಾಲಾಭಿ ವಂದಿತ ನಮಃ || - ನೀಲಮೇಘಶ್ಯಾಮನಾದ, ಸಜ್ಜನರಿಗೆ ಇಷ್ಟಾರ್ಥಪ್ರದನಾದ, ಪರ್ವತ ಸಮಾನ ದೇಹಧಾರಿಯಾದ, ಅಸುರನಿಂದ ಅಪಹರಿಸಲ್ಪಟ್ಟ ಭೂಮಿಯನ್ನು ಉದ್ಧರಿಸಲಿಕ್ಕಾಗಿ ಆದಿದೈತ್ಯ ಹಿರಣ್ಯಾಕ್ಷನನ್ನು ಸಂಹರಿಸಿ, ನೀಲಕಮಲದಂತೆ ಭೂಮಿಯನ್ನು ಎತ್ತಿ ದಾಡೆಯಲ್ಲಿಟ್ಟುಕೊಂಡು ಸಮುದ್ರ ಜಲದಲ್ಲಿ ಕ್ರೀಡಾರ್ಥವಾಗಿ ವಿಹರಿಸಿದ, ಭೂಮಿದೇವಿಯನ್ನು ಮಡಿಲಲ್ಲಿರಿಸಿಕೊಂಡು ರಮಿಸಿದ, ಮಹಾಯೋಗಿಗಳಿಂದ ಸದಾ ಧ್ಯಾನಿಸಲ್ಫಡುತ್ತಿರುವ, ಭೂವರಾಹರೂಪಿಯಾದ ಶ್ರೀ ಮಹಾವಿಷ್ಣುವೇ ನಿನಗೆ ಅನಂತ ನಮಸ್ಕಾರಗಳು ಎಂದು ಸ್ತುತಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ವರಾಹಾವತಾರವನ್ನು
ವಸತಿ ದಶನಶಿಖರೇ ಧರಣೀ ತವ ಲಗ್ನಾ
ಶಶಿನಿ ಕಲಂಕಕತ್ರೇವ ನಿಮಗ್ನಾ
ಕೇಶವ ಧೃತಶೂಕರರೂಪ ಜಯ ಜಗದೀಶ ಹರೇ || - ವಿಸ್ತಾರವಾದ ಧರಣಿಯನ್ನು ನಿನ್ನ ಶಿರೋ ಭಾಗದಲ್ಲಿ ಹೊತ್ತಿರುವ ಸೂಕರ ರೂಪದಲ್ಲಿ ಸ್ಥಿತನಾಗಿರುವ ಕೇಶವನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಜೀವ ವಿಕಸನದ ಸಂಕೇತವಾಗಿ ಮತ್ಸ್ಯರೂಪದಲ್ಲಿಯೂ, ಧ್ಯಾನಿಸಲು ಬೇಕಾದ ಭದ್ರವಾದ ಆಸನ ಹಾಗೂ ವಿಷಯಾಸಕ್ತಿಗಳಿಂದ ರಕ್ಷಿಸಿಕೊಳ್ಳಲು ಗಟ್ಟಿಯಾದ ಹೊರ ಕವಚವನ್ನು ಮನೋನಿಗ್ರಹವನ್ನು ಕೂರ್ಮರೂಪದಲ್ಲಿಯೂ ಅನುಸಂಧಾನ ಮಾಡಿಕೊಂಡ ನಂತರ ಬರುವುದು ವರಾಹಾವತಾರ.  ಸಾಧಕನು ವಿಕಸಿತನಾಗಿ, ದೃಢವಾಗಿ ಕುಳಿತ ನಂತರ ಸಮುದ್ರದ ತಳದಲ್ಲಿರುವಂತೆ ಅಂತರಂಗದಲ್ಲಿರುವ ವಿಷಯಾಸಕ್ತಿಗಳೊಳಗೆ ವರಾಹದಂತೆ ನುಗ್ಗಿ, ಬಗ್ಗಡವನ್ನು ಭಕ್ತಿಯೆಂಬ ಕೋರೆದಾಡಿಯಿಂದ ಬಗೆದು ರಸಾತಳದಲ್ಲಿ ಹುದುಗಿರುವ ಶುದ್ಧಾತ್ಮನನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಬೇಕು.  ಬಗ್ಗಡವನ್ನು ಬಿಟ್ಟು, ವಿಷಯಾಸಕ್ತಿಗಳೆಂಬ ಹಿರಣ್ಯಾಕ್ಷನನ್ನು ಭಕ್ತಿಯೆಂಬ ಕೋರೆದಾಡಿಯಿಂದ ವಧಿಸಿ, ಶುದ್ಧಾತ್ಮನನ್ನು ಪರಿಶುಭ್ರವಾದ ಹೃತ್ಕಮಲದಲ್ಲಿ ನೆಲೆಸುವಂತೆ ಮಾಡಿ ಧ್ಯಾನಿಸಬೇಕು.  ಭಗವಂತನ ದಶಾವತಾರಗಳು ಹಂತ ಹಂತವಾಗಿ ಸಾಧಕನನ್ನು ಒಂದೊಂದೇ ಮೆಟ್ಟಿಲು ಏರುವಂತೆ ಮಾಡುವ ಅತಿ ಸುಂದರವಾದ ಅನುಸಂಧಾನವಾಗಿದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ  ಚರ್ಮದಲ್ಲಿ ವರಾಹರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ವರಾಹರೂಪವೆತ್ತಿದಾಗ ಲಕ್ಷ್ಮೀದೇವಿಯು ಧಾತ್ರಿಯಾಗಿರುತ್ತಾಳೆ ಎಂದಿದ್ದಾರೆ.

ಆದಿ ಹಿರಣ್ಯಾಕ್ಷನನ್ನು ಕೊಂದ ಭಗವಂತನನ್ನು ಭೂದೇವಿಯು ನಾನಾವಿಧವಾಗಿ ಸ್ತುತಿಸುತ್ತಾ, ತನ್ನನ್ನು ಉದ್ಧರಿಸಿದ ಭಗವಂತನ ಸ್ವರೂಪವು ತನಗೆ ತಿಳಿಯದೆಂದು ಪ್ರಾರ್ಥಿಸಿಕೊಳ್ಳಲಾಗಿ, ಭಗವಂತನು ಭೂಮಿದೇವಿಗೆ ನೀಡಿದ ತತ್ವೋಪದೇಶವು ವರಾಹಪುರಾಣವೆಂದು ಪ್ರಸಿದ್ಧವಾಯಿತು.  ಆದಿ ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಮೇಲಕ್ಕೆ ತಂದದ್ದೂ, ಮತ್ತೆ ನೀಲವರಾಹನಾಗಿ ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಮೇಲಕ್ಕೆ ತಂದದ್ದು ಭೂಮಿಯ ಮೇಲೆ ಸಾಧನೆಗೋಸ್ಕರ ಹುಟ್ಟಬೇಕಾಗಿದ್ದ ಜೀವರಾಶಿಯ ಮೇಲಿನ ಅಪಾರ ಕಾರುಣ್ಯದಿಂದಲೇ ಎಂದು ತಿಳಿಯುತ್ತದೆ.

ಶ್ರೀ ಜಗನ್ನಾಥದಾಸರು ತಮ್ಮ "ತತ್ವಸುವ್ವಾಲಿ"ಯಲ್ಲಿ ವರಾಹಾವತಾರವನ್ನು
ಸೋಮಪನ ನುಡಿ ಕೇಳಿ ಹೇಮಾಂಬಕನ ಕೊಂದಿ
ಭೂಮಿಯ ನೆಗಹಿದಿ ದಾಡಿಂದ | ದಾಡಿಂದ ನೆಗಹಿದ
ಸ್ವಾಮಿ ಭೂವರಹ ದಯವಾಗೋ || - ಸೋಮಪನ (ಚತುರ್ಮುಖ ಬ್ರಹ್ಮ) ಪ್ರಾರ್ಥನೆಯನ್ನು ಕೇಳಿ ಹಿರಣ್ಯಾಕ್ಷನೆಂಬ ದೈತ್ಯನನ್ನು ಸಂಹರಿಸಿ ಕೋರೆದಾಡಿಯಿಂದ ಭೂಮಿಯನ್ನು ಮೇಲಕ್ಕೆ ಎತ್ತಿದಂತಹ ಸ್ವಾಮಿ ಜಗತ್ತಿನ ಒಡೆಯನೇ ಭೂವರಹನೇ ಕೃಪೆಮಾಡು ಎಂದು ಪ್ರಾರ್ಥಿಸಿದ್ದಾರೆ.

ಶ್ರೀವಿಜಯದಾಸರು ತಮ್ಮ "ವರಾಹ ಸ್ತೋತ್ರ" ಎಂಬ ಸುಳಾದಿಯಲ್ಲಿ ’ಭೂವರಾಹ ಅವತಾರ ಶೃಂಗಾರ ಗುಣಾಕಾರ’, ’ಧಾರುಣೀಧರ’ ’ಸರ್ವಸಾರಭೋಕ್ತ’ ಎಂದೆಲ್ಲಾ ಸ್ತುತಿಸುತ್ತಾ ’ಸೂಕರ ರೂಪವ ತಾಳಿ ಕೋರಿದಾಡಿಲಿಂದ, ಭೀಕರ ಶಬ್ದದಿ ದಶದಿಶೆಗಳೆಲ್ಲ ಬೀರುತ್ತ’...  ಎಂದು ಭೀಕರರೂಪವನ್ನು ವರ್ಣಿಸಿದ್ದಾರೆ.  ’ಇಳೆಯಾ ಬಗೆದು’.. ಎಂದು ಮುಂದುವರೆಸುತ್ತಾ ವರಾಹಾವತಾರದ ಮೂಲ ಉದ್ದೇಶವನ್ನು ಸುಂದರವಾಗಿ ಚಿತ್ರಿಸಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ


ಭಾರತದಲ್ಲಿರುವ ವರಾಹಸ್ವಾಮಿ ದೇವಸ್ಥಾನದ ಕೊಂಡಿಗಳು..
http://gotirupati.com/sri-bhoo-varahaswamy/

https://www.google.co.in/search?q=varahaswamy&safe=active&tbm=isch&tbo=u&source=univ&sa=X&ei=Sds3VbSTCNSdugTa1oH4Cw&ved=0CC4Q7Ak&biw=1105&bih=703#imgrc=hHcaFQzLMW-ixM%253A%3BqwzAaaaMZ2OriM%3Bhttp%253A%252F%252Fwww.tourismguideindia.com%252Fimages%252FKarnataka%252FMysore%252FVarahaswamy%252520Temple.jpg%3Bhttp%253A%252F%252Fwww.tourismguideindia.com%252Fmysore-gallery.htm%3B600%3B398

Saturday, March 28, 2015

ಕರುಣಾ ಸಂಧಿ - ೩೦ ನೇ ಪದ್ಯ (ಕೂರ್ಮಾವತಾರ)


ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು || ೩೦ ||


ಕೂರ್ಮ - ಕೂರ್ಮಾವತಾರ : ಮತ್ಸ್ಯಾವತಾರದ ನಂತರದ್ದು ಕೂರ್ಮಾವತಾರವಾಗಿದೆ.  ಹಿಂದೆ ಒಮ್ಮೆ ರೈವತ ಮನ್ವಂತರದಲ್ಲಿ ಕೂರ್ಮಾವತಾರ-ವಾಗಿರುತ್ತದೆ.  ಮುಂದೆ ವೈವಸ್ವತ ಮನ್ವಂತರದಲ್ಲಿಯೂ ಕೂರ್ಮಾವತಾರವಾಗುತ್ತದೆ.  ಚಾಕ್ಷುಶ ಮನ್ವಂತರದಲ್ಲಿ ಮಂದದ್ರುತ ಅಥವಾ ಮಂದ್ರದ್ಯುಮ್ನನೆಂಬುವನು ಇಂದ್ರನಾಗಿರುತ್ತಾನೆ.  ವೈರಾಜ ಋಷಿಯಿಂದ ಸಂಭೂತಿಯೆಂಬ ಪತ್ನಿಯಲ್ಲಿ ಭಗವಂತನು "ಅಜಿತ" ನಾಮಕನಾಗಿ ಅವತರಿಸಿ, ಸಮುದ್ರಮಥನ ಮಾಡಿ, ಕೂರ್ಮರೂಪದಿಂದ ಮಂದರ ಪರ್ವತವನ್ನು ಧರಿಸುತ್ತಾನೆ.  ಕೂರ್ಮಾವತಾರವು ಸಮುದ್ರಮಥನದ ಸಮಯದಲ್ಲಾದ ಅವತಾರವಾಗಿದೆ ಮತ್ತು ಇದಕ್ಕೆ ಹಿನ್ನೆಲೆಯಾಗಿ ಒಂದು ಕಥೆ / ಕಾರಣವನ್ನೂ ಕಾಣಬಹುದಾಗಿದೆ.  ದೇವತೆಗಳಿಗೂ, ದೈತ್ಯರಿಗೂ ನಡೆಯುತ್ತಿದ್ದ ಯುದ್ಧದಲ್ಲಿ ದೇವತೆಗಳು ಕಂಗೆಡುತ್ತಾರೆ.  ದೂರ್ವಾಸರಿಂದ ದತ್ತವಾದ ಹರಿಯು ಧರಿಸಿದ್ದ ಪುಷ್ಪಮಾಲೆಯನ್ನು ಇಂದ್ರನು ತಿರಸ್ಕರಿಸಿ  ಆನೆಯ ಕುಂಭಸ್ಠಳದಲ್ಲಿಡುತ್ತಾನೆ.  ಐರಾವತವು ಮಾಲೆಯನ್ನು ನೆಲದಲ್ಲಿ ಹೊಸಕಿ ಬಿಡುತ್ತದೆ.  ಇದರಿಂದ ಕೆರಳಿದ ದೂರ್ವಾಸರು ಲೋಕಪಾಲಕರೊಡನೆ ಐಶ್ವರ್ಯ ಭ್ರಷ್ಟನಾಗೆಂದು ಶಪಿಸುತ್ತಾರೆ.  ಮೂರು ಲೋಕಗಳಲ್ಲೂ ಐಶ್ವರ್ಯ ಭ್ರಷ್ಟವಾಗಿ, ಯಾಗಾದಿ ಕಾರ್ಯಗಳೆಲ್ಲಾ ಸ್ಥಗಿತಗೊಳ್ಳುತ್ತವೆ.  ಲಕ್ಷ್ಮೀದೇವಿಯು ಮೂರು ಲೋಕಗಳಿಂದಲೂ ಅಂತರ್ಧಾನವಾಗಿ ಬಿಡುತ್ತಾಳೆ.  ದೇವತೆಗಳು ಬ್ರಹ್ಮದೇವರನ್ನು ಪ್ರಾರ್ಥಿಸಿದಾಗ, ಬ್ರಹ್ಮದೇವರು ತಾವೆಲ್ಲರೂ ಕೂಡಿ ಭಗವಂತನಿಗೇ ವಿಜ್ಞಾಪಿಸಿಕೊಳ್ಳಬೇಕೆನ್ನುತ್ತಾರೆ.  ದೇವತೆಗಳಿಗೆ ಭಗವಂತನು ಮಂಗಳಕರವಾದ ಸ್ಥಿತಿ ಬರುವವರೆಗೆ ಬಲಿ ಮೊದಲಾದ ದೈತ್ಯರೊಡನೆ ಸಂಧಿಯನ್ನು ಮಾಡಿಕೊಂಡು ಅಮೃತ ಪಡೆಯಲು ಪ್ರಯತ್ನಿಸಬೇಕೆನ್ನುತ್ತಾನೆ.  ಮಂದರ ಪರ್ವತವನ್ನು ಕಡಗೋಲನ್ನಾಗಿಯೂ, ವಾಸುಕಿಯನ್ನು ಹಗ್ಗವನ್ನಾಗಿಯೂ ಮಾಡಿಕೊಂಡು ತನ್ನ ಸಹಾಯದಿಂದ ಕ್ಷೀರ ಸಮುದ್ರವನ್ನು ಮಥನವನ್ನು ಮಾಡಬೇಕೆಂದು ತಿಳಿಸುತ್ತಾನೆ.  ಸಮುದ್ರಮಥನ ನಡೆದು, ಅಮೃತವು ದೇವತೆಗಳ ಕೈಸೇರುವವರೆಗೂ ದೈತ್ಯರನ್ನು ಅನುಮೋದಿಸಿಕೊಂಡಿರಬೇಕೆಂದು ಕೂಡ ತಿಳಿಸುತ್ತಾನೆ.  ದೇವತೆಗಳು ಬಲಿಗೆ ವಿಷಯ ತಿಳಿಸಿದಾಗ, ವಿಧೇಯರಾಗಿ ಬಂದ ದೇವತೆಗಳನ್ನು ದೈತ್ಯರಿಂದ ರಕ್ಷಿಸಿ, ಸಮುದ್ರಮಥನಕ್ಕೆ ಸಮ್ಮತಿಸುತ್ತಾನೆ.  ಎಲ್ಲರೂ ಸೇರಿ ಮಂದರಪರ್ವತವನ್ನು ಕಿತ್ತು, ಸ್ವಲ್ಪ ದೂರ ಸಾಗಿಸುವುದರೊಳಗೆ ಭಾರವನ್ನು ತಾಳಲಾರದೆ ಕೆಳಗೆತ್ತಿಹಾಕಿದಾಗ, ದೇವತೆಗಳು ಪರ್ವತದ ಕೆಳಗೆ ಸಿಕ್ಕಿಕೊಂಡು ಪುಡಿಯಾಗುತ್ತಾರೆ.  ಶ್ರೀಹರಿಯು ಪರಮಕರುಣೆಯಿಂದ ಗರುಡಾರೂಢನಾಗಿ ಬಂದು ಗಿರಿಯನ್ನು ಎತ್ತಿಕೊಂಡು ಸುರಾಸುರರೊಡನೆ ಕ್ಷೀರಸಮುದ್ರದ ಮಧ್ಯದಲ್ಲಿ ಇಳಿಸುತ್ತಾನೆ.  ವಾಸುಕಿಗೆ  ಅಮೃತದಲ್ಲಿ ಪಾಲು ಕೊಡುವುದಾಗಿ ಒಪ್ಪಿಸಿ, ಹಗ್ಗವಾಗಿಸಿ, ಮಂದರ ಪರ್ವತಕ್ಕೆ ಸುತ್ತಿ ಕ್ಷೀರಸಮುದ್ರವನ್ನು ಕಡೆಯಲು ಪ್ರಾರಂಭಿಸುತ್ತಾರೆ.  ಸ್ವಲ್ಪ ಹೊತ್ತಿನಲ್ಲೇ ಗಿರಿಯು ನೀರಿನಲ್ಲಿ ಮುಳುಗಿ ಬಿಡುತ್ತದೆ.  ಪರಮಾತ್ಮನು ನೀರಿನಲ್ಲಿ ಮುಳುಗಿ, ಕೂರ್ಮಾವತಾರವನ್ನು ಧರಿಸಿ, ಗಿರಿಯನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು  ಮೇಲೆ ಬರುತ್ತಾನೆ.  ಮಥನ ಕಾರ್ಯವು ನಡೆಯುತ್ತದೆ.  ಗಿರಿಯು ಮೇಲೆ, ಕೆಳಗೆ ಹೋಗುತ್ತಾ ಅಲ್ಲಾಡಿದಾಗ, ಭಗವಂತನು ಅಜಿತರೂಪಕನಾಗಿ ಸಹಸ್ರಾರು ಬಾಹುಗಳಿಂದ ಪರ್ವತವನ್ನು ಆಕ್ರಮಿಸಿಕೊಂಡು, ಮಥನ ಕಾರ್ಯವನ್ನು ನಡೆಸಿಕೊಡುತ್ತಾನೆ.  ಸಮುದ್ರಮಥನ ನಡೆಯುವ ಸಮಯದಲ್ಲಿ ಮೂರುಲೋಕದಿಂದ ಮರೆಯಾಗಿದ್ದ ಲಕ್ಷ್ಮೀದೇವಿಯ ಆವಿರ್ಭಾವವಾಗುತ್ತದೆ. 


ಭಾಗವತ ದ್ವಿತೀಯಸ್ಕಂಧ, ೭ನೆಯ ಅಧ್ಯಾಯದಲ್ಲಿ ಕೂರ್ಮಾವತಾರದ ವರ್ಣನೆಯನ್ನು
ಕ್ಷೀರೋದಧಾವಮರದಾನವಯೂಥಪಾನಾ - | ಮುನ್ಮಥ್ನತಾಮಮೃತಲಬ್ಧಯ ಆದಿದೇವಃ |
ಪೃಷ್ಠೇನ ಕಚ್ಛಪವಪುರ್ವಿದಧಾರ ಗೋತ್ರಂ | ನಿದ್ರಾಕ್ಷಣೋSದ್ರಿಪರಿವರ್ತಕಷಾಣಕಣ್ದೂಃ || - ದೇವತೆಗಳೂ, ದಾನವರೂ ಸೇರಿಕೊಂಡು ಅಮೃತವನ್ನು ಪಡೆಯಲೋಸುಗ ಕ್ಷೀರಸಮುದ್ರವನ್ನು ಕಡೆಯುತ್ತಿದ್ದಾಗ  - ಈ ಆದಿದೇವನು ಆಮೆಯ ದೇಹವನ್ನು ತಾಳಿ ತನ್ನ ಬೆನ್ನಿನ ಮೇಲೆ ಮಂದರ ಗಿರಿಯನ್ನು ಹೊತ್ತುಕೊಂಡನು.  ಆಗ ಸುತ್ತುತ್ತಿದ್ದ ಪರ್ವತದ ಉಜ್ಜುವಿಕೆಯಿಂದಾಗಿ ಮೈನವೆಯು ಕಡಿಮೆಯಾದಂತಾಗಿ ಸ್ವಾಮಿಗೆ ಕ್ಷಣಕಾಲ ಸುಖನಿದ್ರೆಯನ್ನು ಮಾಡಲು ಸಾಧ್ಯವಾಯಿತು ಎಂದು ವರ್ಣಿಸಿದ್ದಾರೆ.

ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ಕೂರ್ಮಾವತಾರವನ್ನು  "ಕೂರ್ಮ ಸ್ವರೂಪಕ ಮಂದರಧಾರಿನ್ ಲೋಕವಿಧಾರಕ ದೇವವರೇಣ್ಯ - ಮಂದರ ಪರ್ವತವನ್ನು ಧರಿಸಿರುವ, ಲೋಕ ಸಂರಕ್ಷಕನಾದ, ದೇವ ಶ್ರೇಷ್ಠನಾದ, ಕೂರ್ಮರೂಪಿಯೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಸುರದಿತಿಜಸುಬಲವಿಲುಲಿತ ಮಂದರಧರ ವರಕೂರ್ಮ ಹೇ ಭವಮಮ ಶರಣಮ್ |
ಶುಭತಮ ಕಥಾಶಯ ಪರಮಸದೋದಿತ ಜಗದೇಕ ಕಾರಣ ರಾಮರಮಾರಮಣ || - ಸುರಾಸುರರು ಅಮೃತವನ್ನು ಪಡೆಯುವುದಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಿದಾಗ ಮುಳುಗುತ್ತಿದ್ದ ಮಂದರ ಪರ್ವತವನ್ನು ಬೆನ್ನಲ್ಲಿ ಧರಿಸಿದವನಾದ, ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನಾದ, ಪುರುಷೋತ್ತಮನಾದ, ಸದಾ ಪ್ರಕಾಶಮಾನನಾದ, ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನಾದ, ಆತ್ಮಾರಾಮನಾದ ಲಕ್ಷ್ಮೀಪತಿಯೇ ನಿನಗೆ ಶರಣು ಹೊಂದುತ್ತೇನೆ ಎಂದು ಪ್ರಾರ್ಥಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ಕೂರ್ಮಾವತಾರವನ್ನು
ಕೂರ್ಮಾಕೃತೇ ತ್ವವತು ನರ್ಮಾತ್ಮ ಪೃಷ್ಠಧೃತ ಭರ್ಮಾತ್ಮ ಮಂದರಗಿರೇ
ಧರ್ಮಾವಲಂಬನ ಸುಧರ್ಮಾಸದಾಂ ಕಲಿತ ಶರ್ಮಾ ಸುಧಾವಿತರಣಾತ್ |
ದುರ್ಮಾನರಾಹುಮುಖ ದುರ್ಮಾಯಿ ದಾನವ ಸುಮರ್ಮಾಭಿಭೇದನ ಪಟೋ
ಘರ್ಮಾರ್ಕಕಾಂತಿವರವರ್ಮಾ ಭವಾನ್ ಭುವನ ನಿರ್ಮಾಣಧೂತವಿಕೃತಿಃ || - ಸಮುದ್ರ ಮಂಥನ ಕಾಲದಲ್ಲಿ ದೇವತೆಗಳಿಂದ ಪ್ರಾರ್ಥಿತನಾಗಿ, ಕೂರ್ಮರೂಪವನ್ನು ಧರಿಸಿ ಮಂದರ ಪರ್ವತವನ್ನು ಧರಿಸಿ, ದೇವತೆಗಳಿಗೆ ಅಮೃತಪ್ರಾಶನ ಮಾಡಿಸಿದ, ರಾಹು ಮೊದಲಾದ ದೈತ್ಯರ ಸಂಹಾರ ಮಾಡಿದ, ವಿಶ್ವವನ್ನು ಸೃಷ್ಟಿಸಿ, ಅದರ ಒಳಗೂ ಹೊರಗೂ ವ್ಯಾಪಿಸಿಕೊಂಡು, ನಿರ್ವಿಕಾರನಾಗಿರುವ, ಅತ್ಯಂತ ಸುಂದರನಾದ, ಕೂರ್ಮರೂಪಿಯಾದ ಭಗವಂತನು ನಮ್ಮನ್ನು ಎಲ್ಲಾ ಆಪತ್ತುಗಳಿಂದಲೂ ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ಕೂರ್ಮಾವತಾರವನ್ನು
ಕ್ಷಿತಿರತಿವಿಪುಲತರೇ ತವ ತಿಷ್ಠತಿ ಪೃಷ್ಠೇ
ಧರಣಿಧರಣಕಿಣಚಕ್ರಗರಿಷ್ಠೇ
ಕೇಶವ ಧೃತ ಕಚ್ಛಪರೂಪ ಜಯ ಜಗದೀಶ ಹರೇ || - ನಿನ್ನ ಬೆನ್ನಿನಲ್ಲಿ ವಿಶಾಲವಾದ ಭೂಮಿಯು ನಿಂತಿದೆ.  ಗರಿಷ್ಠವಾದ ಚಕ್ರಾಕಾರದಲ್ಲಿರುವ ಧರಣಿಯನ್ನು ಧರಿಸಿರುವ, ಕಚ್ಛಪ ರೂಪ ಧರಿಸಿರುವ ಕೇಶವನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಭಗವದ್ಗೀತೆಯ ಎರಡನೆಯ ಅಧ್ಯಾಯದ ೫೮ನೆಯ ಶ್ಲೋಕದಲ್ಲಿ ಭಗವಂತನು
ಯದಾ ಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ |
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಜಾ ಪ್ರತಿಷ್ಠಿತಾ || -  ಹೇಗೆ ಆಮೆಯು ತನ್ನ ಎಲ್ಲಾ ಅಂಗಗಳನ್ನೂ, ಎಲ್ಲಾ ಕಡೆಗಳಿಂದಲೂ ಒಳಗೆ ಎಳೆದುಕೊಂಡು, ಸ್ಥಿರವಾಗಿ ಇರುತ್ತದೆಯೋ, ಹಾಗೆ ಸಾಧಕನು ಕೂಡ ವಿಷಯಾಸಕ್ತಿಗಳೆಡೆಗೆ ಆಕರ್ಷಿತವಾಗುವ ಇಂದ್ರಿಯಗಳನ್ನು, ಜಾಗೃತ, ಸ್ವಪ್ನಾವಸ್ಥೆಯೆಂಬ ಎರಡೂ ಅವಸ್ಥೆಗಳಲ್ಲಿಯೂ ನಿಯಂತ್ರಿಸಬೇಕು ಎಂದಿದ್ದಾನೆ. 

ಮತ್ಸ್ಯಾವತಾರ ಜೀವ ವಿಕಸನದ ಸಂಕೇತವಾಗಿದೆ.  ಪ್ರಳಯ ಜಲದಿಂದ ಆವೃತವಾಗಿದ್ದ ಬ್ರಹ್ಮಾಂಡದಲ್ಲಿ ಜೀವ ವಿಕಸನದ ಸಂಕೇತವಾಗಿ ಜಲಚರಗಳ ಸೃಷ್ಟಿಯಾಗಿತ್ತು.  ಅದರ ಮುಂದಿನ ಹಂತದ ಪ್ರತೀಕವಾಗಿ ಕೂರ್ಮ ಜಲದಲ್ಲಿಯೂ, ನೆಲದಲ್ಲಿಯೂ ಬದುಕಬಲ್ಲ ಜೀವವಾಗಿ ಪ್ರಕಟಗೊಂಡಿದೆ.  ಕೂರ್ಮಾವತಾರವನ್ನು ಮಾನವನ ಜೀವನಕ್ಕೆ ಹೋಲಿಸಿಕೊಂಡಾಗ ಆಧ್ಯಾತ್ಮ ಹಾದಿಯಲ್ಲಿ ನಡೆಯ ಬಯಸುವ ಪ್ರತಿಯೊಬ್ಬ ಸಾಧಕನಿಗೂ ಕೂರ್ಮವು ಅತ್ಯಂತ ಮುಖ್ಯವಾದ ಹಾಗೂ ಮೂಲವಾದ ಸಂದೇಶವನ್ನು ತೋರುತ್ತದೆ.  ಆಮೆಯು ನೀರಿನಲ್ಲಿಯೂ, ನೆಲದಲ್ಲಿಯೂ ತನ್ನನ್ನು ತಾನು ಸುಲಭವಾಗಿ ಹೊಂದಿಸಿಕೊಂಡು ಬದುಕಬಲ್ಲ ಪ್ರಾಣಿಯಾಗಿದೆ.  ಮಾನವನೂ ಕೂಡ ತನ್ನನ್ನು ತಾನು ನೀರಿನಲ್ಲಾಗಲೀ, ನೆಲದಲ್ಲಾಗಲೀ ಹೊಂದಿಸಿಕೊಂಡು ಬದುಕುವ ಛಲವನ್ನು ಹೊಂದಬೇಕೆಂಬ ಸಂದೇಶ ಕೊಡುತ್ತದೆ.  ಕೂರ್ಮದ ಬೆನ್ನು ತುಂಬಾ ಕಠಿಣವಾದ ಕವಚವಾಗಿದೆ.  ಯಾವುದೇ ರೀತಿಯ ಆಪತ್ತು ಬಂದರೂ ಆಮೆಗೆ ರಕ್ಷಣೆಯಾಗಿ ಅದರ ಹೊರ ಕವಚ ಕೆಲಸಮಾಡುತ್ತದೆ.  ಮೇಲು ಹೊದಿಕೆಯಾಗಿ ಕವಚ ಅಷ್ಟು ಗಟ್ಟಿಯಾಗಿದ್ದರೂ ಒಳಗಿರುವ ಆಮೆಯ ಅವಯವಗಳೂ, ಮೈಯೂ ಮೃದುವಾಗಿಯೇ ಇರುತ್ತದೆ.  ಸಾಧಕನಾದವನು ತನ್ನನ್ನು ತಾನು ಋಣಾತ್ಮಕ ಪ್ರಪಂಚದಿಂದ ರಕ್ಷಿಸಿಕೊಳ್ಳಲು ತನ್ನ ಹೊರಮೈಯನ್ನು ಹೀಗೆ ಗಟ್ಟಿಯಾಗಿಸಿಕೊಳ್ಳಬೇಕು.  ಒಳಗಿರುವ ಆತ್ಮ ತುಂಬಾ ಮೃದುವಾದ, ಭಾವನೆಗಳ ಗುಚ್ಛವಾಗಿರುತ್ತದೆ.  ಅದನ್ನು ಘಾಸಿ ಮಾಡಲು ನುಗ್ಗಿ ಬರುವ ಋಣಾತ್ಮಕ ಭಾವಗಳು ಗಟ್ಟಿಯಾದ ಹೊರಮೈಗೆ ಅಪ್ಪಳಿಸಿ ಹಾಗೇ ತಿರುಗಿಹೋಗುವಂತೆ ನಮ್ಮ ಮೃದುವಾದ ಆತ್ಮಕ್ಕೆ ರಕ್ಷಣಾಕವಚವನ್ನು ಹಾಕಿಕೊಳ್ಳಬೇಕೆಂಬುದನ್ನು ಕೂರ್ಮಾವತಾರ ಸೂಚಿಸುತ್ತದೆ.  ಅಪಾಯದ ಮುನ್ಸೂಚನೆ ಸಿಕ್ಕ ಕೂಡಲೆ ಕೂರ್ಮವು ತನ್ನ ಕಾಲುಗಳನ್ನೂ, ತಲೆಯನ್ನೂ ಗಟ್ಟಿಯಾದ ಕವಚದ ಒಳಗೆ ಎಳೆದುಕೊಂಡು ಬಿಡುತ್ತದೆ  ಸಾಧಕನೂ ಕೂಡ ತನ್ನನ್ನು ಬಂದು ಮುತ್ತುವ ವಿಷಯಾಸಕ್ತಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು, ತನ್ನ ಆಂತರ್ಯವನ್ನು ಒಳಮುಖವಾಗಿಸಿಕೊಳ್ಳಬೇಕೆಂಬುದನ್ನು ಸೂಚಿಸುತ್ತದೆ.   ಕೂರ್ಮವು ಬಲು ನಿಧಾನವಾಗಿ ಚಲಿಸುತ್ತದೆ ಆದರೆ ಅದು ತನ್ನ ಗುರಿಯನ್ನೇ ಗಮನವಾಗಿಟ್ಟುಕೊಂಡು ಚಲಿಸುತ್ತದೆ.  ನಿಧಾನವಾದರೂ ಕೂಡ ಅದು ತನ್ನ ಗುರಿಯನ್ನು ತಲುಪುತ್ತದೆ.  ಕೂರ್ಮಾವತಾರವು ಜಾಣ್ಮೆ ಮತ್ತು ತಾಳ್ಮೆಯ ಸಂಕೇತವಾಗಿದೆಯೆಂಬುದನ್ನು ದಾಸರಾಯರು ಕರುಣಾಸಂಧಿಯ ೨೮ನೆಯ ಪದ್ಯದಲ್ಲಿ "ಬೆಟ್ಟ ಬೆನ್ನಲಿ ಹೊರಿಸಿದವರನು ಸಿಟ್ಟು ಮಾಡಿದನೇನೋ ಹರಿ" ಎಂದು ಕೊಂಡಾಡುವುದರ ಮೂಲಕ ತಿಳಿಸಿದ್ದಾರೆ.  ಕೂರ್ಮದ ಚಲನೆ ಏಕಧ್ಯಾನದಿಂದ ಕೂಡಿರುತ್ತದೆ ಮತ್ತು ಮಾನವನು ಕೂಡ ಇದನ್ನೇ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬುದನ್ನು ಸೂಚಿಸುತ್ತದೆ. ಸ್ಥಿರವಾದ ಹೆಜ್ಜೆಗಳನ್ನು ಹಾಕುತ್ತಾ, ಎಲ್ಲಿಯೂ ನಿಲ್ಲದೆ ನಡೆಯುವ ಅಭ್ಯಾಸವನ್ನು ಮಾಡಿಕೊಂಡರೆ ನಿಶ್ಚಯವಾಗಿ ಗುರಿಯನ್ನು ಮುಟ್ಟಬಹುದೆಂಬುದನ್ನು ಭಗವಂತನು ಮಂದರ ಪರ್ವತವನ್ನು ಧಾರಣೆ ಮಾಡುವ ಮೂಲಕ ಕೂರ್ಮವು ಮೂಲವಾಗಿ ಆಧಾರವು ಎಂಬುದನ್ನು ತೋರಿಸಿಕೊಡುತ್ತಾನೆ.  ನಮ್ಮ ದೇಹದಲ್ಲಿನ ಷಟ್ಚಕ್ರಗಳಲ್ಲಿ "ಮೂಲಾಧಾರ" ಚಕ್ರವು ಅತ್ಯಂತ ಮುಖ್ಯವಾದ ಚಕ್ರವಾಗಿದೆ.  ಮೂಲಾಧಾರ ಸ್ಥಾನದಲ್ಲಿ ಕುಂಡಲಿನಿ ಸರ್ಪವು ಮೂರು ಸುತ್ತು ಸುತ್ತಿಕೊಂಡು ಮಲಗಿದೆಯೆಂಬ ನಂಬಿಕೆಯಿದೆ.  ಆಧ್ಯಾತ್ಮ ಸಾಧನೆಯಲ್ಲಿ ನಮ್ಮೊಳಗಿನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುವುದೆಂದರೆ ಮೂಲಾಧಾರ ಚಕ್ರವನ್ನು ಉದ್ದೀಪನಗೊಳಿಸುವುದೆಂದು ಅರ್ಥವಾಗುತ್ತದೆ.  ಮಂದರ ಪರ್ವತವು ಸಮುದ್ರ ಮಥನದಲ್ಲಿ ಸ್ಥಿರವಾಗಿ ನಿಲ್ಲುವಂತೆ ಮಾಡಲು ಭಗವಂತ ಕೂರ್ಮಾವತಾರವೆತ್ತಿದ ಹಾಗೆ ನಮ್ಮೊಳಗಿನ ಪ್ರಾಣ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಲು ಮೂಲಾಧಾರ ಚಕ್ರವೇ ಮೂಲಸ್ಥಾನವಾಗಿದೆ.  ಕೂರ್ಮಾವತಾರವನ್ನು ಮೂಲಾಧಾರ ಚಕ್ರಕ್ಕೆ ಹೋಲಿಸಬಹುದಾಗಿದೆ.

ಆದಿಕೂರ್ಮವೆಂಬ ಮತ್ತೊಂದು ರೂಪದಲ್ಲಿ ಭಗವಂತನು ಬ್ರಹ್ಮಾಂಡವನ್ನೇ ಧಾರಣೆ ಮಾಡಿದವನಾಗಿರುವನೆಂಬ ಉಲ್ಲೇಖವಿದೆ.  ವಿಷ್ಣು ಸಹಸ್ರನಾಮದಲ್ಲಿ "ಧಾತಾ ಧಾತುರುತ್ತಮಃ" - ಇಡೀ ಜಗತ್ತನ್ನು ಧಾರಣೆ ಮಾಡಿರುವ, ಪೋಷಣೆ ಮಾಡುವ, ಎಲ್ಲರಿಗಿಂತಲೂ ಉತ್ತಮನಾದ, ವೇದಗಳನ್ನೂ, ಕಾಲವನ್ನೂ, ಲೋಕಗಳನ್ನೂ ಧರಿಸಿರುವವನಾದ, ಸರ್ವಾಧಾರನಾದ ಭಗವಂತನು ಧಾತುರುತ್ತಮನು ಎಂದು ಸ್ತುತಿಸಲಾಗಿದೆ.  ಸೃಷ್ಟಿಯ ಆದಿಯಿಂದ ಪ್ರಳಯದಲ್ಲಿ ಅಂತ್ಯವಾಗುವವರೆಗೆ ಬ್ರಹ್ಮಾಂಡವನ್ನು ಧಾರಣೆ ಮಾಡಿರುವವನು ಆದಿಕೂರ್ಮ ರೂಪಿ ಭಗವಂತನಾಗಿದ್ದಾನೆ.  ಆಧ್ಯಾತ್ಮದ ಹಾದಿಯಲ್ಲಿ ನಡೆಯ ಬಯಸುವ ಸಾಧಕನಿಗೆ ಧ್ಯಾನಕ್ಕೆ ಕೂಡಲು ಸುಸ್ಥಿರವಾದ, ಭದ್ರವಾದ ಆಸನವು ಅವಶ್ಯವಾಗಿದೆ.  ಆತ್ಮವನ್ನು ಅಂತರ್ಮುಖವಾಗಿಸಿಕೊಳ್ಳಲು ಧ್ಯಾನಕ್ಕೆ ಕುಳಿತುಕೊಳ್ಳುವ ಆಸನವೂ ಕೂಡ ತುಂಬಾ ಮುಖ್ಯವಾಗುತ್ತದೆ.  ಅಮೃತಕ್ಕಾಗಿ ಮಂದರ ಪರ್ವತ ಧರಿಸಿದ ಭಗವಂತನು ಸಾಧಕರಿಗೂ ಮೂಲಾಧಾರವಾಗಿರುವನು.  ಪೀಠದಲ್ಲಿ ಕುಳಿತ ಭಗವಂತನನ್ನು ಪೂಜಿಸುವುದಕ್ಕೂ ಮೊದಲು ಶ್ರೀಹರಿಯು ಕುಳಿತ ಆಸನವನ್ನು ಪೂಜಿಸಬೇಕು.  ಹೀಗೆ ಮಾಡುವಾಗ ಬ್ರಹ್ಮಾಂಡ ಧಾರಿಯಾದ ಕೂರ್ಮರೂಪಿ ಭಗವಂತನನ್ನು ಧ್ಯಾನಿಸುತ್ತಾ ಅನುಸಂಧಾನ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ . 

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೧೮ನೆಯ ಪದ್ಯದಲ್ಲಿ "ಮಧುವಿರೋಧಿಯು ಲೋಚನದಿ" ಎಂದಿದ್ದಾರೆ.  ಕಣ್ಣುಗಳಲ್ಲಿ ನೆಲೆಸಿರುವ ದಿಗ್ದೇವತೆಗಳಾದ ಸೂರ್ಯ ಚಂದ್ರರಿಗೆ ಮಧುಸೂದನ ಪರಮಾತ್ಮನು ಅಭಿಮಾನಿ ದೇವತೆಯಾಗಿದ್ದಾನೆ.  ಮಧುಸೂದನನೆಂದರೆ ಮಧುವಿನಂತೆ ಮೇಲ್ನೋಟಕ್ಕೆ ರಮಣೀಯವಾಗಿ ತೋರುವ ವಿಷಯ ಸುಖ ಅಜ್ಞಾನ ಪರಿಹಾರಕ ರೂಪ, ರೋಗಭಯ, ವಿರೋಧಿಗಳನ್ನು ದೂರ ಮಾಡುವವನು ಎಂಬರ್ಥವಾಗುತ್ತದೆ.  ಮುಂದುವರೆಯುತ್ತಾ ೩೪ನೆಯ ಪದ್ಯದಲ್ಲಿ ಕೂಡ ಕಣ್ಣುಗಳಲ್ಲಿ ಕೂರ್ಮರೂಪಿ ಭಗವಂತನನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ಕೂರ್ಮಾವತಾರವೆತ್ತಿದಾಗ ಲಕ್ಷ್ಮೀದೇವಿಯು ವೇದವತಿಯಾಗಿರುತ್ತಾಳೆ ಎಂದಿದ್ದಾರೆ.

ಕೂರ್ಮಾವತಾರಿ ಭಗವಂತನ ಪೂಜೆ ಹೆಚ್ಚು ಪ್ರಚಲಿತದಲ್ಲಿಲ್ಲ ಆದರೆ ಕೂರ್ಮಶಾಲಗ್ರಾಮಕ್ಕೆ ಮಾತ್ರ ವಿಶೇಷ ಪೂಜೆಯು ಮಾಡಲ್ಪಡುತ್ತದೆ.  ಕೂರ್ಮ ಶಾಲಗ್ರಾಮಕ್ಕೆ ವಿಶೇಷ ಮಹತ್ವವಿದೆ.  ಇದು ತುಂಬಾ ಅಪರೂಪದ ಶಾಲಗ್ರಾಮವಾಗಿರುತ್ತದೆ.  ಕ್ಷೀರಾಭಿಷೇಕ ಮಾಡುವುದರಿಂದ ಅಭೀಷ್ಟಗಳು ನೆರವೇರುತ್ತದೆಂಬ ನಂಬಿಕೆ ಇದೆ.  ಕೂರ್ಮ ಶಾಲಗ್ರಾಮಕ್ಕೆ ಕ್ಷೀರಾಭಿಷೇಕ ಮಾಡಿ, ಕ್ಷೀರಪಾನ ಮಾಡುವುದರಿಂದ ದೈಹಿಕವಾದ ಅನೇಕ ರೋಗ ರುಜಿನಗಳು ವಾಸಿಯಾಗುವುದೆಂಬ ನಂಬಿಕೆ ಕೂಡ ಇದೆ.


ಕೂರ್ಮರೂಪಿಯಾದ ಶ್ರೀಹರಿಯು ಇಂದ್ರಾದಿದೇವತೆಗಳಿಗೆ ಮತ್ತು ನಾರದಾದಿ ಮಹರ್ಷಿಗಳಿಗೆ  ಮಾಡಿದ ತತ್ವೋಪದೇಶವೇ "ಕೂರ್ಮ ಮಹಾಪುರಾಣ"ವಾಯಿತೆಂಬ ಮಾತು  ಕೂರ್ಮಮಹಾಪುರಾಣದಲ್ಲಿಯೇ ಉಲ್ಲೇಖಿತವಾಗಿದೆ.
 

ಶ್ರೀ ಜಗನ್ನಾಥದಾಸರು ತಮ್ಮ "ತತ್ವಸುವ್ವಾಲಿ"ಯಲ್ಲಿ ಕೂರ್ಮಾವತಾರವನ್ನು
ಮಂದರಾದ್ರಿಯ ಧರಿಸಿ ಸಿಂಧುಮಥನವ ಮಾಡಿ
ವೃಂದಾರಕರಿಗೆ ಅಮೃತವ | ಅಮೃತವನುಣಿಸಿದ
ಇಂದಿರಾರಾಧ್ಯ ದಯವಾಗೋ || - ದೇವದಾನವರು ಮಂದರಾದ್ರಿಯನ್ನು ಬಳಸಿ ಸಮುದ್ರ ಮಥನವನ್ನು ಮಾಡುವಾಗ ಮಂದರ ಪರ್ವತವನ್ನು ಕೂರ್ಮರೂಪದಿಂದ ಧರಿಸಿ, ಸಿಂಧುವಿನ ಮಥನವನ್ನು ಮಾಡಿ, ವೃಂದಾರಕರಿಗೆ (ದೇವತೆಗಳಿಗೆ)  ಉಣಿಸಿದ ಇಂದಿರಾರಾಧ್ಯನಾದ ನಾರಾಯಣನೇ ದಯವಾಗೋ ಎಂದು ಸ್ತುತಿಸಿದ್ದಾರೆ.  ಕೂರ್ಮಾವತಾರದ ವರ್ಣನೆಯಲ್ಲಿ ದಾಸರಾಯರು ಭಗವಂತನ ಮೂರು ಅವತಾರಗಳಾದ ಮಂದರ ಪರ್ವತವನ್ನು ಧರಿಸಿದ ಕೂರ್ಮರೂಪ, ದೇವತೆಗಳೊಂದಿಗೆ ಸಮುದ್ರಮಥನ ಮಾಡಿದ ಅಜಿತ ರೂಪ ಮತ್ತು ಅಮೃತವನ್ನು ದೇವತೆಗಳಿಗೆ ಉಣಬಡಿಸಿದ ಮೋಹಿನಿ ರೂಪಗಳನ್ನು ಸ್ಮರಿಸಿದ್ದಾರೆ.  



ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿರುವ ಕೂರ್ಮಾವತಾರದ ಏಕೈಕ ದೇವಸ್ಥಾನದ ಕೊಂಡಿ https://www.google.co.in/search?tbm=isch&q=Kurmavathara+of+Lord+Vishnu&ei=59EWVd7zDY6EuwTNkIHIDg

 http://en.wikipedia.org/wiki/Sri_Kurmam

ಚಿತ್ರಕೃಪೆ : ಅಂತರ್ಜಾಲ

Sunday, March 8, 2015

ಕರುಣಾ ಸಂಧಿ - ೩೦ ನೇ ಪದ್ಯ (ಮತ್ಸ್ಯಾವತಾರ )

ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ  ಸಂಹರಿಸಿ  ಧರ್ಮದಿ  ಕಾಯ್ದ  ಸುಜನರನು  || ೩೦ ||

ವೈವಸ್ವತ ಮನ್ವಂತರದ ಕಾಲದಲ್ಲಿ ಭಗವಂತ ಎತ್ತಿದ ಅವತಾರಗಳಲ್ಲಿ ದಶ ಅವತಾರಗಳ ವರ್ಣನೆಯನ್ನು ಈ ಪದ್ಯದಲ್ಲಿ ದಾಸರಾಯರು ಮಾಡಿಕೊಟ್ಟಿದ್ದಾರೆ.  ವೈವಸ್ವತ ಮನ್ವಂತರದ ಕಾಲದಲ್ಲಿ ಭಗವಂತನದು ಒಟ್ಟು ೧೩ ಅವತಾರಗಳಾಗಿದ್ದವೆಂದು ಶಾಸ್ತ್ರಗಳಲ್ಲಿ ತಿಳಿಸಲ್ಪಟ್ಟಿವೆ.  ಅದರಲ್ಲಿ ೧೦ ಅವತಾರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿರುತ್ತಾರೆ.  ಏಕೆಂದರೆ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಅವತಾರಗಳಾದಾಗ, ಮುಖ್ಯ ಅವತಾರಕ್ಕೆ ಪೋಷಕ ಅವತಾರವಾಗಿ ಬರುವ ಅವತಾರಗಳನ್ನು ಬಿಟ್ಟಿರುತ್ತಾರೆ.  ಈ ಮನ್ವಂತರದಲ್ಲಿಯೂ ಆದ ೧೩ ಅವತಾರಗಳಲ್ಲಿ ಧನ್ವಂತರಿ, ವೇದವ್ಯಾಸರು ಮತ್ತು ಮೋಹಿನಿ ಎಂಬ ಮೂರು ಅವತಾರಗಳನ್ನು ಬಿಟ್ಟಿರುವುದರಿಂದಲೇ ದಶಾವತಾರವೆಂಬ ಲೆಕ್ಕವಾಗಿದೆ.

ಮೀನ  : ಮತ್ಸ್ಯಾವತಾರ -  ಭಾಗವತದ ಪ್ರಥಮ ಸ್ಕಂಧದಲ್ಲಿ ವಿವರಿಸಿರುವಂತೆ,  ಸೃಷ್ಟಿಗೆ ಕಾರಣವಾದ ಜಲದಲ್ಲಿ ಯೋಗನಿದ್ರೆಯಲ್ಲಿ ಪವಡಿಸಿದ್ದ ಭಗವಂತನ ನಾಭಿ ಸರೋವರದಲ್ಲಿ ಹುಟ್ಟಿದ ಕಮಲದಿಂದ ಬ್ರಹ್ಮದೇವರ ಜನ್ಮವಾಯಿತು.  ಭಗವಂತನ ಅಂಗ-ಉಪಾಂಗಗಳ ವಿನ್ಯಾಸದಿಂದ ಸಮಸ್ತ ಲೋಕಗಳ ಕಲ್ಪನೆಯಾಯಿತು.  ಪರಮ ಪವಿತ್ರವಾದ ಭಗವಂತನ ಈ ವಿರಾಟ್ಪುರುಷ ರೂಪದ ಸಾವಿರಾರು ತಲೆಗಳು, ತೋಳುಗಳು, ತೊಡೆಗಳು, ಮುಖಗಳಿಂದಲೇ ಭಗವಂತನ ಅಸಂಖ್ಯ ಅವತಾರಗಳು ಪ್ರಕಟಗೊಳ್ಳುವುವು.  ವಿರಾಟ್ಪುರುಷ ರೂಪದಿಂದ ಅನೇಕ ಅವತಾರಗಳು ಆವಿರ್ಭವಿಸಿದವು.  ಸೃಷ್ಟಿಯ ಕಾರಣಕ್ಕಾಗಿ ಪ್ರಕಟಗೊಂಡ ರೂಪಗಳಲ್ಲಿ ಮತ್ಸ್ಯಾವತಾರವು ಹತ್ತನೆಯ ಅವತಾರವಾಗುತ್ತದೆ.  ಭಾಗವತ ದ್ವಿತೀಯಸ್ಕಂಧ ೭ನೆಯ ಅಧ್ಯಾಯದಲ್ಲಿ ವಿವರಿಸಿರುವಂತೆ ಭಗವಂತನ ನಾಭಿ ಸರೋವರದ ಕಮಲದಿಂದ ಹುಟ್ಟಿದ ಬ್ರಹ್ಮದೇವರು ತಮಗೆ ಯಜ್ಞ ಮಾಡಲು ಯಾವ ಸಾಮಗ್ರಿಯೂ ಇರಲಿಲ್ಲವಾಗಿ ವಿರಾಟ್ಪುರುಷನ ಅವಯವಗಳಲ್ಲಿಯೇ ಯಜ್ಞದ ಪಶು, ಯೂಪಸ್ಥಂಭ, ಕುಶ, ಯಜ್ಞಭೂಮಿ ಮತ್ತು ಯಜ್ಞಕ್ಕೆ ಪ್ರಶಸ್ತವಾದ ಕಾಲಗಳನ್ನು ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡು ಭಗವಂತನನ್ನು ಯಜ್ಞದ ಮೂಲಕ ಪೂಜಿಸುತ್ತಾರೆ.  ಬ್ರಹ್ಮದೇವರ ಸತ್ರಯಾಗದಲ್ಲಿ ಅವತರಿಸುವ ಹಯಗ್ರೀವ ರೂಪಿ ಭಗವಂತನು ಮೂಗಿನಿಂದ ಶ್ವಾಸ ಬಿಡುವಾಗ ಅಪೌರುಷೇಯವಾದ ಮತ್ತು ನಿರ್ದೋಷವಾದ ವೇದಗಳು ಪ್ರಾದುರ್ಭವಿಸುತ್ತವೆ.  ಹೀಗೆ ಪ್ರಾದುರ್ಭವಿಸಿದ ವೇದಗಳನ್ನು ಹಯಗ್ರೀವನೆಂಬ ಅಸುರನು ಅಪಹರಿಸಿದಾಗ, ಭಗವಂತನ ಮೊಟ್ಟ ಮೊದಲ ಮತ್ಸ್ಯಾವತಾರವು ಶ್ವೇತವರಾಹ ಕಲ್ಪದಲ್ಲಿ ಆಗುತ್ತದೆ.  ಮತ್ಸ್ಯಾವತಾರಿಯಾಗಿ ಅವತರಿಸಿ ಹಯಗ್ರೀವಾಸುರನನ್ನು ಸಂಹರಿಸಿ ವೇದಗಳನ್ನು ಬ್ರಹ್ಮದೇವರಿಗೆ ತಂದು ಕೊಡುತ್ತಾನೆ.  ನಂತರ ಚಾಕ್ಷುಷ ಮನ್ವಂತರದ ಪ್ರಳಯ ಕಾಲದಲ್ಲಿ ಎರಡನೆಯ ಬಾರಿಗೆ ಮತ್ಸ್ಯಾವತಾರವಾಗುತ್ತದೆ.  ಭಾಗವತ ದ್ವಿತೀಯ ಸ್ಕಂಧದ ೭ನೆಯ ಅಧ್ಯಾಯದಲ್ಲಿ ಯುಗಾಂತರ ಸಮಯದಲ್ಲಾದ ಮತ್ಸ್ಯಾವತಾರದ ವರ್ಣನೆ ಹೀಗಿದೆ

ಮಸ್ತ್ಯೋ ಯುಗಾಂತಸಮಯೇ ಮನುನೋಪಲಬ್ಧಃ | ಕ್ಷೋಣೀಮಯೋ ನಿಖಿಲಜೀವನಿಕಾಯಕೇತಃ ||
ವಿಸ್ತಂಸಿತಾನುರುಭಯೇ ಸಲಿಲೇ ಮುಖಾನ್ಮ | ಆದಾಯ ತತ್ರ ವಿಜಹಾರ ಹ ವೇದಮಾರ್ಗಾನ್ || 

ಮತ್ಸ್ಯ ಮಹಾಪುರಾಣದಲ್ಲಿ ಶ್ರೀಹರಿಯ ಮತ್ಸ್ಯಾವತಾರದ ವರ್ಣನೆ ವಿಸ್ತಾರವಾಗಿದೆ :
ವಿಷ್ಣೋರ್ಮತ್ಸ್ಯಾವತಾರೇ ಸಕಲ ವಸುಮತೀಮಂಡಲಂ ವ್ಯಶ್ನುವಾನ |
ಸ್ತಸ್ಯಾಸ್ಯೋದೀರಿತಾನಾಂ ಧ್ವನಿರಪಹರತಾದಶ್ರಿಯಂ ವಃ ಶ್ರುತೀನಾಮ್ || - ಅದ್ಭುತವಾದ ಮತ್ಸ್ಯಾವತಾರದ ಆದಿಯಲ್ಲಿ ಮೀನು ಪಾತಾಲ ಮೂಲದಿಂದ ಸಿಡಿದು ಮೇಲೆದ್ದಾಗ ಅದರ ಬಾಲದ ಹೊಡೆತದ ರಭಸದಿಂದ ಸಾಗರದ ನೀರೆಲ್ಲಾ ಚಿಮ್ಮಿ ಪುಟಿದು ಬ್ರಹ್ಮಾಂಡದ ಕೊಪ್ಪರಕ್ಕೇ ಅಪ್ಪಳಿಸಿ ಮತ್ತೆ ಮರಳಿ ಕೆಳಗೆ ಉರುಳಿತು.  ಇಂತಹ ದಿವ್ಯವಾದ ಮೀನಮೂರುತಿಯ ಮುಖದಿಂದ ವೇದಘೋಷವು ಹೊರಹೊಮ್ಮಿತು.  ಮತ್ಸ್ಯಪುರಾಣವು ಸಾಕ್ಷಾತ್ ನಾರಾಯಣನಿಂದಲೇ ಹೇಳಲ್ಪಟ್ಟಿದೆಯೆಂಬ ಮಾತಿದೆ.  ಮತ್ಸ್ಯಾವತಾರದ ಹಿನ್ನೆಲೆಯಲ್ಲಿ ಒಂದು ಕಥೆಯಿದೆ.  ಮಹಾ ಭಕ್ತನಾದ ರಾಜಾ ಸತ್ಯವ್ರತನು ರಾಜ್ಯಭಾರದಿಂದ ವಿಮುಕ್ತನಾಗಿ ಮಲಯಗಿರಿಯಲ್ಲಿ ಉಗ್ರತಪಸ್ಸಿಗೆ ತೊಡಗುತ್ತಾನೆ.  ತಪಸ್ಸಿಗೆ ಮೆಚ್ಚಿ ಬಂದ ಬ್ರಹ್ಮದೇವನನ್ನು ಸತ್ಯವ್ರತನು ವಿಚಿತ್ರವಾದ ಬೇಡಿಕೆಯೊಂದನ್ನು ಕೇಳುತ್ತಾನೆ.  ಪ್ರಳಯ ಕಾಲದಲ್ಲಿ ವಿಶ್ವವನ್ನು ರಕ್ಷಿಸುವ ಭಗವಂತನ ವಿಶಿಷ್ಟ ಲೀಲೆಯನ್ನು ಕಾಣುವ ಶಕ್ತಿಯನ್ನು ಕರುಣಿಸಬೇಕೆಂದು ಬೇಡಲು ಬ್ರಹ್ಮದೇವನು ಒಪ್ಪಿ ವರವೀಯುತ್ತಾನೆ.  ಒಂದು ದಿನ ಸತ್ಯವ್ರತ ರಾಜನು ತನ್ನ ಆಶ್ರಮದಲ್ಲಿ ಪಿತೃದೇವತೆಗಳಿಗೆ ತರ್ಪಣ ಕೊಡುತ್ತಿದ್ದಾಗ ನೀರಿನಲ್ಲಿ ಒಂದು ಪುಟ್ಟ ಮೀನು ರಾಜನ ಬೊಗಸೆಗೆ ಬರಲು  ರಾಜನು ಅದನ್ನು ಕೂಡಲೆ ತನ್ನ ಕಮಂಡಲದಲ್ಲಿ ಇಟ್ಟು ರಕ್ಷಿಸುತ್ತಾನೆ.  ಒಂದು ಹಗಲಿನಲ್ಲಿ ಮೀನು ಕಮಂಡಲುವಿಗಿಂತ ದೊಡ್ಡದಾಗಿ ಬೆಳೆದು ರಕ್ಷಿಸೆಂದು ರಾಜನನ್ನು ಕೇಳುತ್ತದೆ.  ರಾಜನು ಆ ಮೀನಿನ ಮರಿಯನ್ನು ನೀರು ತುಂಬುವ ಹಂಡೆಯಲ್ಲಿ ಇಡಲು, ಹಂಡೆಯಲ್ಲಿ ನಂತರ ಕೊಳಗದಲ್ಲಿ, ಬಾವಿಯಲ್ಲಿ, ಕೆರೆಯಲ್ಲಿ, ದೊಡ್ಡ ಸರೋವರ, ಗಂಗಾನದಿ ಎಲ್ಲವನ್ನೂ ಮೀರಿ ಅತಿಶಯವಾಗಿ ಬೆಳೆದ ಮೀನನ್ನು ಸತ್ಯವ್ರತ ರಾಜನು ಸಾಗರಕ್ಕೇ ತಂದು ಬಿಡುತ್ತಾನೆ.  ಅಚ್ಚರಿಯಿಂದ  ಈ ಪರಿ ಬೆಳೆಯುವ ಸಾಮರ್ಥ್ಯ ಭಗವಂತನಿಗಲ್ಲದೇ ಬೇರೆ ಯಾರಿಗೂ ಇರಲಾಗದೆಂದು ಪ್ರಾರ್ಥಿಸಲು  ಭಗವಂತನು ಕೆಲವು ದಿನಗಳಲ್ಲಿ ಘಟಿಸುವ ಕಲ್ಪ ಪ್ರಳಯದಲ್ಲಿ ಸಮಸ್ತವೂ ಜಲಾವೃತವಾದಾಗ, ತಾನು ಒಂದು ನಾವೆಯನ್ನು ಕಳುಹಿಸುವೆನೆಂದು ತಿಳಿಸುತ್ತಾನೆ.  ಆ ನಾವೆಯಲ್ಲಿ ಜೀವರಾಶಿಯ ಬೀಜಗಳನ್ನೂ, ಔಷಧಿ ವನಸ್ಪತಿಗಳನ್ನೂ ಇಟ್ಟು, ಸತ್ಯವ್ರತ ರಾಜನೂ ಆ ನೌಕೆಯಲ್ಲಿ ಹತ್ತಿದಾಗ, ತಾನು ಸತ್ಯವ್ರತನಿಗೆ ಪ್ರಳಯ ಜಲದಲ್ಲಿ ತೇಲಾಡಿಸಿ, ತಿರುಗಾಡಿಸುವೆನೆಂದು ಅಭಯವೀಯುತ್ತಾನೆ.  ಸತ್ಯವ್ರತನು ಪ್ರಳಯ ಕಾಲದಲ್ಲಿ ತೇಲಿ ಬಂದ ನೌಕೆಯಲ್ಲಿ ಭಗವಂತನ ಆದೇಶದಂತೆಯೇ  ಮಾಡಿ,  ಹಗ್ಗವಾಗಿ ಹರಿದು ಬಂದ ಆದಿಶೇಷನನ್ನು ನೌಕೆಗೆ ಕಟ್ಟಿ ಇನ್ನೊಂದು ತುದಿಯನ್ನು ಭಗವಂತನಾದ ಮತ್ಸ್ಯದ ಕೊಂಬಿಗೆ ಕಟ್ಟುತ್ತಾನೆ.  ಪ್ರಳಯ ಜಲದಿಂದ ಭಗವಂತನು ಸತ್ಯವ್ರತ ರಾಜನನ್ನೂ, ನೌಕೆಯನ್ನೂ ರಕ್ಷಿಸಿ, ಪ್ರಳಯ ಜಲದಲ್ಲಿ ತೇಲಾಡಿಸುತ್ತಾ ತತ್ತ್ವೋಪದೇಶವನ್ನೂ ನೀಡುತ್ತಾನೆ.  ಭಗವಂತನ ಈ ಜ್ಞಾನೋಪದೇಶವೇ ಮತ್ಸ್ಯಪುರಾಣವಾಗಿದೆ.  ಭಗವಂತ ಸತ್ಯವ್ರತ ರಾಜನಿಗೆ ಮಾತ್ರವೇ ಉಪದೇಶ ಮಾಡಲಿಲ್ಲ.  ವೈವಸ್ವತ ಮನ್ವಂತರದಲ್ಲಿ ಮನುವಾಗುವ ಸತ್ಯವ್ರತ ರಾಜನ ಮೂಲಕ ಮುಂದಿನ ಪೀಳಿಗೆಗೆ ಕೊಟ್ಟ ಉಪದೇಶವಾಗಿದೆ.

ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋದ್ಯಾಯದಲ್ಲಿ ಭಗವಂತನ ದಶಾವತಾರವನ್ನು ವರ್ಣಿಸಿದ್ದಾರೆ.  ಮತ್ಸ್ಯಾವತಾರವನ್ನು ಕುರಿತು "ಮತ್ಸ್ಯಕರೂಪ ಲಯೋದವಿಹಾರಿನ್ ವೇದವಿನೇತ್ರ ಚತುರ್ಮುಖ ವಂದ್ಯ - ಪ್ರಳಯ ಜಲದಲ್ಲಿ ವಿಹರಿಸುತ್ತಿರುವ, ಬ್ರಹ್ಮದೇವರಿಂದ ಸ್ತುತ್ಯನಾದ, ವೇದ ಪ್ರವರ್ತಕನಾದ, ಮತ್ಸ್ಯರೂಪಿಯೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಪ್ರಚಲಿತ ಲಯಜಲವಿಹರಣ ಶಾಶ್ವತ ಸುಖಮಯಮೀನ ಹೇಭವಮಮ ಶರಣಮ್
ಶುಭತಮ ಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮರಮಾರಮಣ || - ಪ್ರಲಯ ಜಲದಲ್ಲಿ ಕ್ರೀಡಿಸುತ್ತಿರುವ ನಿತ್ಯ ಸತ್ಯನಾದ, ಸುಖ ಸ್ವರೂಪಿಯಾದ, ಮತ್ಸ್ಯಾವತಾರಿಯಾದ, ಬ್ರಹ್ಮತತ್ವ ಸ್ವರೂಪನಾದ, ಜ್ಞಾನಪ್ರದ ರಮಣೀಯ ಕಥೆಗಳಿಗೆ ಆಶ್ರಯನಾದವನೂ ಸದಾ ಪ್ರಕಾಶಕನೂ, ಜಗತ್ತಿನ ಅಸ್ತಿತ್ವಕ್ಕೆ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀ ಪತಿಯೇ ನಿನಗೆ ಶರಣು ಹೊಂದುತ್ತೇನೆ ಎಂದೂ ಸ್ತುತಿಸಿದ್ದಾರೆ.


ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋದ್ಯಾಯದಲ್ಲಿ ಭಗವಂತನ ದಶಾವತಾರವನ್ನು ವರ್ಣಿಸಿದ್ದಾರೆ.  ಮತ್ಸ್ಯಾವತಾರವನ್ನು ಕುರಿತು "ಮತ್ಸ್ಯಕರೂಪ ಲಯೋದವಿಹಾರಿನ್ ವೇದವಿನೇತ್ರ ಚತುರ್ಮುಖ ವಂದ್ಯ - ಪ್ರಳಯ ಜಲದಲ್ಲಿ ವಿಹರಿಸುತ್ತಿರುವ, ಬ್ರಹ್ಮದೇವರಿಂದ ಸ್ತುತ್ಯನಾದ, ವೇದ ಪ್ರವರ್ತಕನಾದ, ಮತ್ಸ್ಯರೂಪಿಯೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಪ್ರಚಲಿತ ಲಯಜಲವಿಹರಣ ಶಾಶ್ವತ ಸುಖಮಯಮೀನ ಹೇಭವಮಮ ಶರಣಮ್
ಶುಭತಮ ಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮರಮಾರಮಣ || - ಪ್ರಲಯ ಜಲದಲ್ಲಿ ಕ್ರೀಡಿಸುತ್ತಿರುವ ನಿತ್ಯ ಸತ್ಯನಾದ, ಸುಖ ಸ್ವರೂಪಿಯಾದ, ಮತ್ಸ್ಯಾವತಾರಿಯಾದ, ಬ್ರಹ್ಮತತ್ವ ಸ್ವರೂಪನಾದ, ಜ್ಞಾನಪ್ರದ ರಮಣೀಯ ಕಥೆಗಳಿಗೆ ಆಶ್ರಯನಾದವನೂ ಸದಾ ಪ್ರಕಾಶಕನೂ, ಜಗತ್ತಿನ ಅಸ್ತಿತ್ವಕ್ಕೆ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀ ಪತಿಯೇ ನಿನಗೆ ಶರಣು ಹೊಂದುತ್ತೇನೆ ಎಂದೂ ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ಮತ್ಸ್ಯಾವತಾರವನ್ನು

ಪ್ರೋಷ್ಠೀಶವಿಗ್ರಹ ಸುನಿಷ್ಟೀವನೋದ್ಧತ ವಿಶಿಷ್ಟಾಂಬುಚಾರಿ ಜಲಧೇ
ಕೋಷ್ಠಾಂತರಾಹಿತ ವಿಚೇಷ್ಟಾಗಮೌಘ ಪರಮೇಷ್ಠೀಡಿತ ತ್ವಮವ ಮಾಮ್ |
ಪ್ರೇಷ್ಠಾರ್ಕಸೂನುಮನು ಚೇಷ್ಟಾರ್ಥಮಾತ್ಮವಿದತೀಷ್ಟೋ ಯುಗಾಂತಸಮಯೇ
ಸ್ಥೇಷ್ಟಾತ್ಮಶೃಂಗಧೃತ ಕಾಷ್ಟಾಂಬುವಾಹನ ವರಾಷ್ಟಾಪದಪ್ರಭತನೋ || - ಪ್ರಳಯ ಕಾಲದಲ್ಲಿ ಶ್ರೇಷ್ಠವಾದ ಮತ್ಸ್ಯಶರೀರಧಾರಿಯಾಗಿ, ವಿಶಿಷ್ಟವಾದ ತಿಮಿಂಗಿಲಾದಿ ದೊಡ್ಡ ಪ್ರಾಣಿಗಳುಳ್ಳ ಸಾಗರವನ್ನು ಬಾಯಿಯಿಂದೊಮ್ಮೆ ಥೂತ್ಕರಿಸಿ ಉಕ್ಕೇರುವಂತೆ ಮಾಡಿದ, ಉದರಾಂತರ್ಗತದಲ್ಲಿ ಸಮಸ್ತ ವೇದಗಳನ್ನು ಹೊಂದಿರುವ, ಬ್ರಹ್ಮದೇವರಿಂದ ವಂದಿಸಲ್ಪಡುವ, ಅತಿ ದೃಢವಾದ ತನ್ನ ಕೊಂಬಿನಲ್ಲಿ ಮರದ ಶ್ರೇಷ್ಠ ನೌಕೆಯನ್ನು ರಚಿಸಿ, ಆ ನೌಕೆಯಲ್ಲಿ ಮುಂದಿನ ಸೃಷ್ಟಿಗೆ ಅವಶ್ಯಕವಾಗಿರುವ ಬೀಜರೂಪದ ಜೀವರಾಶಿಗಳನ್ನೂ, ಮುಂದೆ ವೈವಸ್ವತ ಮನ್ವಂತರದಲ್ಲಿ ಮನುವಾಗಿ ಬರಬೇಕಾಗಿದ್ದ ರಾಜಾ ಸತ್ಯವ್ರತನ್ನೂ ಕುಳ್ಳಿರಿಸಿಕೊಂಡು, ತತ್ತ್ವೋಪದೇಶ ಮಾಡಿದ, ಚಿನ್ನದಂತೆ ಹೊಳೆಯುವ ಶರೀರವುಳ್ಳ, ಬ್ರಹ್ಮ ಜ್ಞಾನಿಗಳಿಗೆ ಅತಿಪ್ರಿಯನಾದ ಮತ್ಸ್ಯರೂಪಿಯಾದ ಭಗವಂತನೇ ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿ ದಶಾವತಾರದ ವರ್ಣನೆಯನ್ನು ಮಾಡಿದ್ದಾನೆ.  ಮತ್ಸ್ಯಾವತಾರವನ್ನು
ಪ್ರಲಯಪಯೋಧಿಜಲೇ ಧೃತವಾನಸಿ ವೇದಂ
ವಿಹಿತವಹಿತ್ರ ಚರಿತ್ರಮಖೇದಂ
ಕೇಶವ ಧೃತ ಮೀನ ಶರೀರ ಜಯ ಜಗದೀಶ ಹರೇ || ಪ್ರಲಯ ಸಮುದ್ರದ ಜಲದಲ್ಲಿ ವೇದ ರಕ್ಷಕನಾಗಿ ಅವತರಿಸಿದ ಧೃತ (ಧರಿಸಿದ) ಮೀನಿನ ಶರೀರದ ಕೇಶವನೇ, ಜಗದೀಶನೇ ನಿನಗೆ ಜಯ ಜಯವು ಎಂದು ಸ್ತುತಿಸಿದ್ದಾರೆ. 

ಭಗವಂತನ ದಶಾವತಾರಗಳಿಗೂ ಮನು ಕುಲಕ್ಕೂ ಅತ್ಯಂತ ಸಮೀಪದ ಹೋಲಿಕೆ ಇದೆ.  ನೀರಿನಿಂದ ಜೀವ ಚೈತನ್ಯದ ಉತ್ಪನ್ನವಾಯಿತೆಂಬುದರ ಸಂಕೇತ ಮತ್ಸ್ಯಾವತಾರವಾಗಿದೆ. ಭಗವಂತನು ಮತ್ಸ್ಯಾವತಾರಿಯಾಗಿ ಬಂದು ಬ್ರಹ್ಮಾಂಡವನ್ನು ಒಂದು ಪುಟ್ಟ ನೌಕೆಯನ್ನಾಗಿಸಿ, ಅದರೊಳಗೆ ಅನಾದಿಯಾದ ಜೀವರಾಶಿಯನ್ನು ಬೀಜರೂಪದಲ್ಲಿ ರಕ್ಷಿಸಿದಾಗ ನೌಕೆ ಪ್ರಳಯ ಜಲದಲ್ಲಿ ತೇಲಿತು ಮತ್ತು ಮುಂದೆ ಅದರಲ್ಲಿ ಸಂರಕ್ಷಿಸಲ್ಪಟ್ಟ ಬೀಜರೂಪದ ಜೀವರಾಶಿಯಿಂದಲೇ ಭಗವಂತನಿಂದ ಸೃಷ್ಟಿ ಪ್ರಾರಂಭವಾಯಿತು.  ನಮ್ಮ ಪ್ರಸ್ತುತ ಜೀವನದಲ್ಲಿಯೂ ಮತ್ಸ್ಯಾವತಾರವನ್ನು ಹೋಲಿಸಿಕೊಂಡು ನಮಗೆ ನಾವೇ ವಿಶ್ಲೇಷಣೆ ಮಾಡಿಕೊಳ್ಳಬಹುದು.  ಲೌಕಿಕದಲ್ಲಿ ನಮ್ಮ ಕರ್ಮಕ್ಕನುಗುಣವಾಗಿ ಅಸಂಖ್ಯ ಸಮಸ್ಯೆಗಳನ್ನು ತಂದಿರುತ್ತೇವೆ.  ಸಮಸ್ಯೆಯ ಸಾಗರದಲ್ಲಿ ನಾವು ಸಿಕ್ಕಿಕೊಂಡಾಗ, ನಮ್ಮ ಅಂತರಂಗದಲ್ಲಿ ದುಃಖ ಹಾಗೂ ಪ್ರಳಯದ ಜಲವೇ ತುಂಬಿಕೊಂಡಿರುವಾಗ ಭಗವಂತನ ಧ್ಯಾನವನ್ನು ಮಾಡಬೇಕು.  ಬರೀ ಕತ್ತಲು ತುಂಬಿರುವ ಅಂತರಂಗದಲ್ಲಿ, ಮುಳುಗದೆ ತೇಲುವ ಅವಕಾಶವನ್ನು ಭಗವಂತ ನಮ್ಮ ಅಂತಃಸತ್ವದಲ್ಲಿ ಬೆಳಕಿನ ಕಿರಣದ ಮೂಲಕ ಪರಿಹಾರವನ್ನು ಕೊಡುತ್ತಾನೆ.  "ಸಂಕಟ ಬಂದಾಗ ವೆಂಕಟರಮಣ"ನೆನ್ನದೆ "ಸಂತತಂ ಚಿಂತಯೇ ಅನಂತಂ ಅಂತ್ಯಕಾಲೇ ವಿಶೇಷತಃ" ಎಂಬ ಮಾತನ್ನು ಅನ್ವಯಿಸಿಕೊಳ್ಳುತ್ತಾ ಪ್ರಾರ್ಥಿಸಿದಾಗ ನಮ್ಮ ಸಮಸ್ಯೆಗಳಿಗೆ ನಮ್ಮೊಳಗಿನಿಂದಲೇ ಉತ್ತರವೂ ಸಿಕ್ಕುತ್ತದೆ ಎಂಬುದನ್ನು ಮತ್ಸ್ಯಾವತಾರವು ಬಿಂಬಿಸುತ್ತದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೧೮ನೆಯ ಪದ್ಯದಲ್ಲಿ "ಕರ್ಣದಲಿ ಇಪ್ಪನು ವಿಷ್ಣುನಾಮಕ ಶ್ರವಣನೆಂದೆನಿಸಿ" ಎಂದಿದ್ದಾರೆ.  ಕಿವಿಗಳಲ್ಲಿ ನೆಲೆಸಿರುವ ದಿಗ್ದೇವತೆಗಳಿಗೆ ವಿಷ್ಣುನಾಮಕ ಪರಮಾತ್ಮನು ಅಭಿಮಾನಿ ದೇವತೆಯಾಗಿದ್ದಾನೆ .  ಮುಂದುವರೆಯುತ್ತಾ ೩೪ನೆಯ ಪದ್ಯದಲ್ಲಿ ಕೂಡ ಶ್ರವಣಗಳಲ್ಲಿ ಮತ್ಸ್ಯರೂಪಿ ಭಗವಂತನನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ಮತ್ಸ್ಯಾವತಾರವೆತ್ತಿದಾಗ ಲಕ್ಷ್ಮೀದೇವಿಯು ವೇದ ರೂಪಿಯಾಗಿ ಇರುತ್ತಾಳೆ ಎಂದಿದ್ದಾರೆ.

ಶ್ರೀ ಜಗನ್ನಾಥದಾಸರು ತಮ್ಮ "ತತ್ವಸುವ್ವಾಲಿ"ಯಲ್ಲಿಯೂ ದಶಾವತಾರದ ವರ್ಣನೆ ಮಾಡಿದ್ದಾರೆ.  ಮತ್ಸ್ಯಾವತಾರವನ್ನು
ವೇದತತಿಗಳನು; ಕದ್ದೊಯ್ದವನ ಕೊಂದು ಪ್ರಳ-
ಯೋದಧಿ-ಯೊಳಗೆ ಚರಿಸಿ-ದಿ | ಚರಿಸಿ ವೈವಸ್ವತನ
ಕಾಯ್ದ ಮಹಮಹಿಮ ದಯವಾಗೋ || - ವೇದಗಳನ್ನು ಕದ್ದೊಯ್ದಿದ್ದ ಹಯಗ್ರೀವಾಸುರನೆಂಬ ದೈತ್ಯನನ್ನು ಕೊಂದು, ಪ್ರಳಯೋದಕದಲ್ಲಿ ಚರಿಸಿದ, ವಿಹರಿಸಿದ ಭಗವಂತನು ಚಾಕ್ಷುಷ ಮನ್ವಂತರದ ಪ್ರಳಯೋದಕದಲ್ಲಿ ಪುನಃ ಸಂಚಾರ ಮಾಡಿ ವೈವಸ್ವತನನ್ನು ಕಾಪಾಡಿದ ಅದ್ಭುತ ಮಹಿಮನಾದ ಹೇ ಮತ್ಸ್ಯ ಕೃಪೆಮಾಡು ಎನ್ನುತ್ತಾರೆ.
 


ಭಗವಂತನ ಮತ್ಸ್ಯಾವತಾರ ದೇವಸ್ಥಾನದ ಕೊಂಡಿ
http://en.m.wikipedia.org/wiki/Nagalapuram#Vedanarayana_Swamy_Temple
ಚಿತ್ರಕೃಪೆ : ಅಂತರ್ಜಾಲ