Wednesday, April 16, 2014

ಕರುಣಾ ಸಂಧಿ - ೨೦ ನೇ ಪದ್ಯ


ಅಂಗುಟಾಗ್ರದಿ ಜನಿಸಿದಮರತ-
ರಂಗಿಣಿಯು ಲೋಕತ್ರಯಗಳಘ
ಹಿಂಗಿಸುವಳವ್ಯಾಕೃತಾಕಾಶಾಂತ ವ್ಯಾಪಿಸಿದ |
ಇಂಗಡಲ ಮಗಳೊಡೆಯನಂಗೋ-
ಪಾಂಗಗಳಲಿಪ್ಪಮಲನಂತ ಸು-
ಮಂಗಳಪ್ರದ ನಾಮ ಪಾವನ ಮಾಳ್ಪುದೇನರಿದು ?  ||೨೦||


ಪ್ರತಿಪದಾರ್ಥ :  ಅಂಗುಟಾಗ್ರದಿ - ಭಗವಂತನ ಪಾದಾಂಗುಷ್ಠದ ತುದಿಯಿಂದ, ಜನಿಸಿದ - ಉದ್ಭವಿಸಿದ, ಅಮರ ತರಂಗಿಣಿಯು - ದೇವತಾನದಿಯಾದ ಭಾಗೀರಥಿ, ಲೋಕತ್ರಯಗಳಘ - ಮೂರು ಲೋಕದ ಜೀವಿಗಳ ಪಾಪಗಳನ್ನೂ ಪರಿಹರಿಸುವಳು, ಅವ್ಯಾಕೃತ ಆಕಾಶ - ನಮ್ಮ ಕಣ್ಣಿಗೆ ಕಾಣಿಸುವ ಆಕಾಶದ ಆಚೆಗೆ ಇರುವ ಆಕಾಶದ, ಅಂತ - ಕೊನೆಯಲ್ಲಿ, ವ್ಯಾಪಿಸಿದ - ಹಬ್ಬಿಕೊಂಡಿರುವ, ಇಂಗಡಲಮಗಳ - ಕ್ಷೀರಸಮುದ್ರ ತನಯೆಯಾದ ಮಹಾಲಕ್ಷ್ಮಿಯ, ಒಡೆಯನ - ಲಕ್ಷ್ಮೀ ಪತಿಯಾದ ನಾರಾಯಣನ, ಅಂಗೋಪಾಂಗಗಳಲಿಪ್ಪ - ಕರಣೋಪಕರಣಗಳಲ್ಲಿ, ಅಮಲ - ನಿರ್ಮಲವಾದ, ಅನಂತ - ಯಾರೂ ಸಾಟಿಯಿಲ್ಲದ, ಸುಮಂಗಳಪ್ರದನಾದ - ಸನ್ಮಂಗಳವನ್ನುಂಟು ಮಾಡುವ ಭಗವದ್ರೂಪಗಳ ನಾಮಗಳು, ಪಾವನ ಮಾಳ್ಪುದು - ಸಕಲ ಪಾಪಗಳನ್ನು ಪರಿಹರಿಸಿ ಪಾವನ ಮಾಡುವುದು, ಏನರಿದು - ಇದರಲ್ಲೇನು ಆಶ್ಚರ್ಯವಿದೆ.
ಪರಮಾತ್ಮನು  ತ್ರಿವಿಕ್ರಮನಾಗಿ ಬೆಳೆಯುವ ಪ್ರಕ್ರಿಯೆಯಲ್ಲಿ ತನ್ನ  ಎಡಗಾಲ ಹೆಬ್ಬೆರಳಿನ ಉಗುರಿನ ಕೊನೆ ಬ್ರಹ್ಮಾಂಡದ ಕರ್ಪರಕ್ಕೆ ತಗುಲಿಸಿದಾಗ, ಅದು ಒಡೆದು ಅವ್ಯಾಕೃತಾಕಾಶದಿಂದ ಜಲಧಾರೆ ಹೊರಟು ದೇವಗಂಗೆ, ಅಮರ ತರಂಗಿಣಿ, ವಿಷ್ಣುಪದಿ ಎನಿಸಿ, ಸ್ವರ್ಗ ಭೂ ಪಾತಾಳ ಲೋಕಗಳ ಜನರ ಪಾಪ ಪರಿಹಾರ ಮಾಡಿತು.  ಇಂತಹ ಪವಿತ್ರ ಗಂಗೆಯನ್ನು ತಂದ ಪರಮಾತ್ಮನ ಅಂಗಗಳಲ್ಲಿ ಉಗುರು, ಕೂದಲು ಮುಂತಾದ ಉಪಾಂಗಗಳಲ್ಲಿ ವ್ಯಾಪಿಸಿರುವ, ತನ್ನಿಂದ ಅಭಿನ್ನ ರೂಪಗಳ ಮಹಿಮೆಯನ್ನು ಬಣ್ಣಿಸುವ ಪರಮಾತ್ಮನ ನಾಮವು ಪಾಪವೇ  ಪರಿಹಾರ ಮಾಡುತ್ತದೆ. ಹರಿಯ ಕಾಲಬೆರಳ ಉಗುರಿನಿಂದ ಬಂದ ನದಿಯ ನೀರಿಗೇ ಇಷ್ಟು ಮಹಿಮೆ ಇದ್ದ ಮೇಲೆ, ಅವನಿಗೇ ಇನ್ನೆಷ್ಟು ಮಹಿಮೆ ಇರಬೇಡ.  ಕರಚರಣಾದಿ ಏಕಾದಶೇನ್ದ್ರಿಯಗಳಿಗೆ ನಿಯಾಮಕನಾದ, ಪಾರತನ್ತ್ರಾದಿ ದೋಷಗಳಿಂದ ನಿರ್ಮಲನಾದ, ಆದ್ಯತಶೂನ್ಯನಾದ, ಮಹಿಮೋಪೇತನಾದ, ಸಜ್ಜನರಿಗೆ ಮೋಕ್ಷ ಕೊಡುವ ಆ ಪರಮಾತ್ಮನ ಧ್ಯಾನಾನುಸಂಧಾನದಿಂದ ಉಚ್ಚರಿಸತಕ್ಕ ನಾಮವು ಸರ್ವದೋಷಗಳಿ೦ದ ಪವಿತ್ರರನ್ನಾಗಿ ಮಾಡುತ್ತದೆ.

ಅಂಗುಟಾಗ್ರದಿ ಜನಿಸಿದ ಅಮರ ತರಂಗಿಣಿ - ಪಂಚಭೂತಗಳ ಸಮ್ಮಿಶ್ರಣದಿಂದಾದ ಭೂಮಂಡಲದ ಕವಚವು ಅತಿ ಕಾಠಿಣ್ಯಕರವಾದ ಲಕ್ಷಣವುಳ್ಳದ್ದು.  ನಮ್ಮ ಕಣ್ಣಿಗೆ ಕಾಣುವುದು ಪಂಚಭೂತಗಳಲ್ಲೊಂದಾದ ಮಣ್ಣು ಮಾತ್ರವು.  ಆದರೆ ನಮ್ಮ ಕಣ್ಣಿಗೆ ಕಾಣದ ನೂರಾರು ಕೋಟಿ ಯೋಜನದ ದೂರದಲ್ಲಿರುವುದು ಶುದ್ಧವಾದ ಕವಚವು.  ಭಗವಂತ ವಾಮನನವತಾರವೆತ್ತಿ ಬಲಿಯ ಮನೆಗೆ ಬಂದು ೩ ಪಾದ ಭೂಮಿ ದಾನ ಬೇಡಿದ.  ಭಗವಂತನೇ ಬಂದಿದ್ದರೂ ತಾನು ಕೊಟ್ಟ ಮಾತಿಗೆ ತಪ್ಪುವುದಿಲ್ಲವೆಂದು ಬಲಿ ಚಕ್ರವರ್ತಿ ದಾನ ಕೊಡಲು ಮುಂದಾದಾಗ, ಭಗವಂತ ತನ್ನ ಒಂದು ಪುಟ್ಟ ಪಾದದಿಂದ ಇಡೀ ಭೂಮಂಡಲವನ್ನೇ ಅಳೆದನು.  ಎರಡನೆಯ ಪಾದವನ್ನು ಆಕಾಶದತ್ತ ಎತ್ತಿದಾಗ, ಪುಟ್ಟ ಪಾದವು ಬೆಳೆಯಲಾರಂಭಿಸಿತು.  ಬೆಳೆಯುತ್ತಾ ಬೆಳೆಯುತ್ತಾ ಎಲ್ಲಾ ಲೋಕಗಳನ್ನೂ  ಮೀರಿ ಬೆಳೆಯುತ್ತದೆ.  ಭಾಗವತ ಅಷ್ಟಮಸ್ಕಂದದಲ್ಲಿ ಬರುವ ಬಲಿ ಚಕ್ರವರ್ತಿಯ ಕಥೆಯಲ್ಲಿ ಭಗವಂತನ ಪಾದ ಬೆಳೆದುದನ್ನು ವಿವರಿಸಲಾಗಿದೆ. 

ವಾಮನನಾಗಿ ಬಂದ ಪುಟ್ಟ ಬಾಲಕ ತ್ರಿವಿಕ್ರಮರೂಪಿಯಾಗಿ ಬೆಳೆಯಲಾರಂಭಿಸಿದಾಗ ಭಗವಂತನ ಆ ವಿರಾಟ್ ದೇಹದಲ್ಲಿ ಭೂಮಿ, ಆಕಾಶ, ದಿಕ್ಕುಗಳು, ಅತಲಾದಿ ಏಳು ಲೋಕಗಳೂ, ಏಳು ಸಮುದ್ರಗಳೂ, ದೇವಮುನಿ, ಮನುಷ್ಯಾದಿ ಸರ್ವಸ್ವವೂ ಕಾಣಿಸಿಕೊಂಡವು.  ಬಲಿಚಕ್ರವರ್ತಿಯು ಭಗವಂತನ ಶರೀರದ ಪ್ರತೀ ಅವಯವದಲ್ಲೂ ಗುಣತ್ರಯಾತ್ಮಕವಾದ ಸಕಲ ಪ್ರಪಂಚವನ್ನೂ ಕಂಡನು.  ಬೆಳೆಯುತ್ತಲೇ ಹೋದ ಭಗವಂತನ ಶರೀರ ಹಾಗೂ ಪಾದವು ಮೇಲೆ ಹೋಗುತ್ತಾ ಮಹರ್ಲೋಕ, ಜನೋಲೋಕ, ತಪೋಲೋಕಗಳನ್ನೆಲ್ಲಾ ದಾಟಿ ಸತ್ಯಲೋಕವನ್ನೂ ಆಕ್ರಮಿಸಿಕೊಂಡುಬಿಟ್ಟಿತು.   ಹೀಗೆ ಬೆಳೆಯುತ್ತಾ ಸಾಗಿದ ಪಾದದ ಹೆಬ್ಬೆರಳ ಉಗುರಿನ ತುದಿ ಮಾತ್ರ ತಲುಪಿ ಕಠಿಣವಾದ ಭೂಮಂಡಲದ ಕವಚ ಬಿರುಕುಬಿಟ್ಟಿತು.  ಬ್ರಹ್ಮಾಂಡದ ಹೊರಗಿನ ಜಲಾವರಣದ ಶುದ್ದ ಜಲವು ಬಿರುಕಿನಿಂದ ಒಳಗೆ ಸುರಿಯಿತು.  ಶುದ್ಧಜಲವನ್ನು ಕಂಡ ಬ್ರಹ್ಮದೇವರು ಅದನ್ನು ಕಮಂಡಲುವಿನಲ್ಲಿ ಸಂಗ್ರಹಿಸಿ, ಭಗವಂತನ ಪಾದವನ್ನು ತೊಳೆದರು.  ಭಗವಂತನ ಉಗುರಿನಿಂದ ಉದ್ಭವಿಸಿದ ಶುದ್ಧಜಲವು, ಭಗವಂತನ ಪಾದ ತೊಳೆಯಲುಪಯೋಗಿಸಲ್ಪಟ್ಟಿದ್ದರಿಂದ, ಪವಿತ್ರಜಲವಾಯಿತು, ಗಂಗೆಯಾದಳು.  ಅಂಗುಟಾದ್ರಿಯಲ್ಲಿ ಜನಿಸಿದವಳಾದ್ದರಿಂದ ದೇವಗಂಗೆಯಾದಳು.  ಅನೇಕ ಸಾವಿರ ವರ್ಷಗಳ ನಂತರ ಸಪ್ತಋಷಿ ಮಂಡಲಕ್ಕೆ ಹೋಗಿ, ಅಲ್ಲಿಂದ ಚಂದ್ರ ಮಂಡಲಕ್ಕೆ ಬಂದಳು.  ಅಲ್ಲಿ ಸೂರ್ಯನ ಕಿರಣಗಳನ್ನು ನೇರವಾಗಿ ಸ್ವೀಕರಿಸಿ, ಇನ್ನೂ ಹೆಚ್ಚು ಪವಿತ್ರಳಾಗಿ, ಹಿಮಾಲಯದ ಮೂಲಕ ಪೃಥ್ವಿಗೆ ಹರಿದು ಬಂದಳು.  ಮುಂದೆ ಅನೇಕ ಸಾವಿರ ವರ್ಷಗಳ ನಂತರ ದೇವತೆಗಳು ಅವಳನ್ನು ಮತ್ತೆ ದೇವಲೋಕಕ್ಕೇ ಕರೆಸಿಕೊಂಡರು.  ಹೀಗೆ ಅಮರಲೋಕಕ್ಕೆ ಮರಳಿ ತೆರಳಿದ ಗಂಗೆಯು ಅಮರತರಂಗಿಣಿಯಾದಳು. 

ಗಂಗೆಯುದ್ಭವವನ್ನು ಶ್ರೀ ಜಗನ್ನಾಥ ದಾಸರು ತಮ್ಮ "ಭಾಗೀರಥ್ಯಾದಿ ನದಿಗಳ ತಾರತಮ್ಯ" ಎಂಬ ಪದದಲ್ಲಿ
ಹರಿಪಾದನಖದ ಸಂಸ್ಪರ್ಶ ಮಾತ್ರದಿಂದಲಿ
ಸುರತರಂಗಿಣಿ ಶ್ರೇಷ್ಠಳೆನಿಸುವಳು ನದಿಗಳೊಳು
ದಶರಥಾಂಗನದಾ ವಿಧೃತಪಾಣಿ ಮಾಧವನು, ದೊರೆಮೆನಿಪನಾ ತೀರ್ಥಕೆ.. || - ಶ್ರೀಹರಿಯ ನಖ ಸ್ಪರ್ಶದಿಂದ ಬಂದವಳಾದ ಗಂಗೆಯಲ್ಲಿ ಮಾಧವನು ಸ್ವತಃ ನೆಲೆಸಿದ್ದಾನೆ ಎನ್ನುತ್ತಾ ಗಂಗೆಯ ಶ್ರೇಷ್ಠತೆಯನ್ನು ತಿಳಿಸಿದ್ದಾರೆ.
ಗಂಗೆಯನ್ನು ಜಾಹ್ನವಿಯೆಂದು ದಾಸರಾಯರು ತಮ್ಮ ಇನ್ನೊಂದು ಕೀರ್ತನೆ  "ಜನನಿ ಜಾಹ್ನವಿ ಜಗತ್ರಯ ಪಾವನಿ | ಪ್ರಣತಕಾಮದೆ ಪದ್ಮಜಾಂಡ ಸಂಭೂತೆ " ಯಲ್ಲಿ "ಕಾರುಣಿಕ ಬಹಿರಾವರಣದಿಂದ ನೀ ಪೊರಟು"  ಎಂದು ಗಂಗೆ ವಿಷ್ಣು ಪಾದೋದ್ಭವೆ ಎಂಬುದನ್ನು ತಿಳಿಸುತ್ತಾರೆ.  ಮುಂದುವರೆಯುತ್ತಾ  "ಸೃಷ್ಟೀ ಶ ಪದಜಾತೆ ವಿಶ್ವಮಂಗಳ ಮಹೋತ್ಕೃಷ್ಟ ತೀರ್ಥಗಳೊಳುತ್ತಮಳೆನಿಸುವೇ" ಎನ್ನುತ್ತಾ ಗಂಗೆಯ ಶ್ರೇಷ್ಠತೆಯನ್ನು ತಿಳಿಸಿದ್ದಾರೆ.

ಗಂಗೆಯ ಶ್ರೇಷ್ಠತೆಯನ್ನು ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ನದೀ ತಾರತಮ್ಯ ಸ್ತೋತ್ರದಲ್ಲಿ "ವಿಷ್ಣು ಪಾದಾಬ್ಜ ಸಂಭೂತಾ ಗಂಗಾ ಸರ್ವಾಧಿಕಾ ಮತಾ" - ಗಂಗೆ ನದಿಗಳಲ್ಲೆಲ್ಲಾ ಅತಿ ಪಾವನಳು, ಶ್ರೇಷ್ಠಳೇಕೆಂದರೆ ಅವಳು ಶ್ರೀಹರಿಯ ಪಾದಕಮಲದಿಂದ ಉದ್ಭವಿಸಿದವಳು ಎಂದು ಕೊಂಡಾಡಿದ್ದಾರೆ.  


ಲೋಕತ್ರಯಗಳಘ ಹಿಂಗಿಸುವಳು - ಗಂಗೆಯನ್ನುಳಿದು ಇತರ ನದಿಗಳೆಲ್ಲಾ ಭೂಲೋಕದಲ್ಲಿ ಮಾತ್ರ ಹರಿಯುತ್ತವೆ, ಆದರೆ ಗಂಗೆ ಮೂರೂ ಲೋಕಗಳಲ್ಲೂ ಸಂಚರಿಸುವವಳಾದ್ದರಿಂದಲೇ ಅವಳು ಶ್ರೇಷ್ಠಳಾಗಿದ್ದಾಳೆ. ಸೂರ್ಯ ವಂಶದ ರಾಜನಾದ ಭಗೀರಥನು ತನ್ನ ತಂದೆಯ ತಂದೆಯರಾದ (ಪೂರ್ವಜರಾದ) ಸಗರ ಕುಮಾರರ ಮುಕ್ತಿಗಾಗಿ ಗಂಗೆಯನ್ನು ಕುರಿತು ತಪಸ್ಸು ಮಾಡಿ ಭೂಲೋಕಕ್ಕೆ ಕರೆದುತಂದನು.  ಅರವತ್ತು ಸಾವಿರ ಮಂದಿ ಸಗರ ಕುಮಾರರು ಕಪಿಲ ಮುನಿಯ ಶಾಪಾಗ್ನಿಯಿಂದ ಸುಟ್ಟು ಬೂದಿಯಾಗಿದ್ದರು.  ಭಗೀರಥನ ತಪಸ್ಸಿನಿಂದಾಗಿ ಭೂಲೋಕಕ್ಕೆ ಇಳಿದ ಗಂಗೆಯು ನಂತರ ಪಾತಾಳದಲ್ಲಿಯೂ ಹರಿದು ತ್ರಿಪಥಗಾ ಎನಿಸಿದಳು.  ದೇವಲೋಕದಲ್ಲಿ ಮಂದಾಕಿನಿಯೆಂದೂ, ಭೂಲೋಕದಲ್ಲಿ ಭಾಗೀರಥಿಯೆಂದೂ ಮತ್ತು ಪಾತಾಳದಲ್ಲಿ ಭೋಗವತೀಯೆಂಬ ಹೆಸರುಗಳಿಂದ ತ್ರಿಲೋಕಪಾವನೆಯಾಗಿ, ಲೋಕತ್ರಯಗಳ ಅಘವನ್ನು ಹಿಂಗಿಸುವಳು.

ಶ್ರೀ ವಾದಿರಾಜರು ತಮ್ಮ ತೀರ್ಥಪ್ರಬಂಧದಲ್ಲಿ ಗಂಗೆಯ ಸ್ತೋತ್ರವನ್ನು ೮ ಶ್ಲೋಕಗಳಿಂದ ಮಾಡಿದ್ದಾರೆ.  ಅದರಲ್ಲಿ
ತ್ವಂ ದೀನೇಷು ದಯಾವತೀತಿ ವಿದಿತಂ ಯದ್ಬ್ರಹ್ಮಹಸ್ತಾಶ್ರಯಂ
ಪ್ರಾಪ್ತಾಥಾಚ್ಯುತಪಾದ ಸಂಗಮಹಿತಾಪಶ್ಚಾಚ್ಚ ನಾಕಂ ಗತಾ |
ಸೌವರ್ಣಾಚಲಶೃಂಗಮೇತ್ಯ ಮುದಿತಾ ಶಂಭೋಃ ಶಿರಃಸಂಗತಾ-
ಪ್ಯಾಸ್ಮಾಕಕ್ಷಿತಿಮಂಡಲೇ ತ್ರಿಪಥಗೇ ತುಷ್ಟಾಸ್ಯಭೀಷ್ಟಪ್ರದಾ  - ಸ್ವರ್ಗ, ಮರ್ತ್ಯ ಮತ್ತು ಪಾತಾಳಗಳಲ್ಲಿ ಸಂಚರಿಸುವುದರಿಂದ ತ್ರಿಪಥಗಾ ಎಂಬ ಹೆಸರುಳ್ಳ ಗಂಗೆಯೇ ನೀನು ಪಾಪದಿಂದ ದುಃಖಿತರಾದವರಲ್ಲಿ ದಯಾವಂತಳೆಂದು ತಿಳಿಯಲ್ಪಟ್ಟಿದೆ.  ಬ್ರಹ್ಮ ಹಸ್ತಾಶ್ರಯದಿಂದ ಶ್ರೀಹರಿಯ ಪಾದ ಸಂಪರ್ಕದಿಂದ ಪೂಜ್ಯಳಾಗಿದ್ದೀಯೆ ಎಂದು ಗಂಗೆಯ ಶ್ರೇಷ್ಠತೆಯನ್ನು ಸ್ತುತಿಸಿದ್ದಾರೆ.

ಸ್ಕಾಂದಪುರಾಣದ ಕಾಶೀ ಖಂಡದಲ್ಲಿ ಗಂಗೆಯ ಮಹಿಮೆಯನ್ನು ಸಾರುವ
ಗಚ್ಛಂಸ್ತಿಷ್ಠನ್ ಜಪನ್ ಧ್ಯಾಯನ್ ಭುಂಜನ್ ಜಾಗೃತ್ ಸ್ವಪನ್ ವದನ್ | ಯಃ ಸ್ಮರೇತ್ ಸತತಂ ಗಂಗಾಂ ಸ ಹಿ ಮುಚ್ಯೇತ ಬಂಧನಾತ್ || - ನಡೆದಾಡುವಾಗ, ನಿಂತುಕೊಂಡಾಗ, ಜಪಮಾಡುವಾಗ, ಧ್ಯಾನಗೈಯುವಾಗ, ಊಟ ಮಾಡುವಾಗ, ಎಚ್ಚರವಿದ್ದಾಗ ಮತ್ತು  ಮಾತನಾಡುವಾಗ, ಹೀಗೆ ಸದಾ ಯಾರು ಗಂಗೆಯನ್ನು ನೆನೆಯುವರೋ ಅವರು ಸಂಸಾರ ಬಂಧನದಿಂದ ಮುಕ್ತರಾಗುವರೆಂಬುದನ್ನು ತಿಳಿಸಲಾಗಿದೆ.    ಗಂಗೆಯ ಮಹಾತ್ಮ್ಯವನ್ನು ತಿಳಿದು ಗೋವಿಂದನಲ್ಲಿ ಭಕ್ತಿ ಮಾಡುವ ಮಾನವರ ಮೇಲೆ ಗಂಗೆಯು ಸುಪ್ರಸನ್ನಳಾಗುವಳು ಎಂಬ ಮಾತೂ ಸಹ ಉಕ್ತವಾಗಿದೆ.

ಅವ್ಯಾಕೃತಾಕಾಶಾಂತ ವ್ಯಾಪಿಸಿದ -  ಅವ್ಯಾಕೃತಾಕಾಶ ಎಂದರೆ ಏನೂ ಇಲ್ಲದ ಎಂದರ್ಥವಾಗುತ್ತದೆ.  ನಮ್ಮ ಕಣ್ಣಿಗೆ ಕಾಣುವ ಈ ಭೂತಾಕಾಶವು ಪ್ರಳಯ ಕಾಲದಲ್ಲಿ ಲಯವಾಗುವಂತಹುದು.  ಸಮಸ್ತವೂ ಲಯವಾಗಿ, ಇಲ್ಲವಾದಾಗ ಉಳಿಯುವುದೇ ಏನೂ ಇಲ್ಲದ, ವಿವರಣೆಗೆ ಸಿಕ್ಕದ ಖಾಲಿಜಾಗ ಅಥವಾ ಅವ್ಯಾಕೃತಾಕಾಶವೆನ್ನುವುದು.  ಕಣ್ಣಿಗೆ ಕಾಣುವ ಈ ಭೂತಾಕಾಶವು ಸಾಂತ (ಮಿತಿಯುಳ್ಳದ್ದು), ಆದರೆ ಕಣ್ಣಿಗೆ ಕಾಣದ ಅವ್ಯಾಕೃತಾಕಾಶವು ಅನಂತ (ಮಿತಿಯೇ ಇಲ್ಲದ್ದು) ಮತ್ತು ಸದಾಕಾಲವೂ ಇರುವಂತಹುದು.  ಭಗವಂತನು ಅನಂತನಾಗಿದ್ದು, ಅಮಿತನು, ಸದಾಕಾಲವೂ ಇರುವಂತಹವನಾಗಿದ್ದಾನೆ.  ಅವನು ಸರ್ವವ್ಯಾಪ್ತನು.  ಅಣುಅಣುವಿನಲ್ಲೂ, ಕಣಕಣಗಳಲ್ಲೂ ವ್ಯಾಪ್ತನು.  ಶ್ರೀ ಜಗನ್ನಾಥದಾಸರು ತಮ್ಮ "ಸ್ಮರಿಸು ಸಂತತ ಹರಿಯನು ಮನವೇ" ಎಂಬ ಕೃತಿಯಲ್ಲಿ | "ಅಣುವಿನೊಳಗಣುವಹನು ಘನಕೆ ಘನತರನಹನು ಅಣು ಮಹದ್ವಿಲಕ್ಷಣಾ ಕಲ್ಯಾಣ ಗುಣಜ್ಞಾನ ಘನಲಕ್ಷಣಾ ಸಂಪೂರ್ಣ" || ಎಂದು ಭಗವಂತನ ಸರ್ವವ್ಯಾಪ್ತತೆಯನ್ನು ವಿವರಿಸಿದ್ದಾರೆ. 
ಭಗವದ್ಗೀತೆಯ  ಹತ್ತನೇ ಅಧ್ಯಾಯದಲ್ಲಿ ಭಗವಂತ ಅರ್ಜುನನಿಗೆ ತನ್ನನ್ನು ಕುರಿತು ತಾನೇ
ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ | ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ || - ಎಲೈ ಕುರುಶ್ರೇಷ್ಠನೇ, ಈಗ ನಾನು ನನ್ನ ದಿವ್ಯ ವಿಭೂತಿಗಳಲ್ಲಿ ಮುಖ್ಯವಾದವುಗಳನ್ನು ನಿನಗೆ ತಿಳಿಸುತ್ತೇನೆ.  ಏಕೆಂದರೆ ನನ್ನ ವಿಸ್ತಾರಕ್ಕೆ ಕೊನೆಯೇ ಇಲ್ಲ ಎಂದಿದ್ದಾನೆ.  ಇದು ಭಗವಂತನ ಸರ್ವವ್ಯಾಪ್ತತೆಯ ವಿವರಣೆಯಾಗುತ್ತದೆ.  

ಇಂಗಡಲ ಮಗಳೊಡೆಯ -  ಇಂಗಡಲು ಎಂದರೆ ಸಿಹಿಯಾದ, ಮಧುರವಾದ ಹಾಲಿನ ಕಡಲು, ಕ್ಷೀರ ಸಮುದ್ರ.  ಇಂಗಡಲಿನಲ್ಲಿ ಉದಿಸಿದವಳು ಮಹಾಲಕ್ಷ್ಮೀ ದೇವಿ, ಕ್ಷೀರ ಸಮುದ್ರರಾಜ ಕುಮಾರಿ.  ದಾಸರಾಯರು ಲಕ್ಷ್ಮೀದೇವಿಯನ್ನು ತಮ್ಮ "ಇಂದಿರೆ ಇಂದುವದನೇ ಸರಸಿಜಸದನೇ".. ಎಂಬ ಕೃತಿಯಲ್ಲಿ "ಪಾಲಗಡಲ ಸಂಭೂತೆ ಕಾಲ ದೇಶದಿ ವ್ಯಾಪಿತೆ" ಎಂದಿದ್ದಾರೆ.   ಶ್ರೀಸೂಕ್ತದಲ್ಲಿ "ಲಕ್ಷ್ಮೀಂ ಕ್ಷೀರ ಸಮುದ್ರರಾಜ ತನಯೇ.." ಎಂದು ಸ್ತುತಿಸಲಾಗಿದೆ.  ಶ್ರೀ ವಾದಿರಾಜರು ತಮ್ಮ "ಲಕ್ಷ್ಮೀ ಶೋಭಾನೆ"ಯಲ್ಲಿ "ಪಾಲಸಾಗರವನ್ನು ಲೀಲೆಯಲಿ ಕಡೆಯಲು | ಬಾಲೆ ಮಹಲಕ್ಷ್ಮಿ ಉದಿಸಿದಳು" ಎನ್ನುತ್ತಾ ಸಮುದ್ರ ಮಥನದಲ್ಲಿ ಕ್ಷೀರಸಾಗರವನ್ನೇ ಕಡೆಯಲಾಗಿತ್ತೆಂಬ ಮಾತನ್ನು ತಿಳಿಸಿದ್ದಾರೆ.  ಇಂತಹ ಇಂಗಡಲ ಮಗಳಾಗಿ ಜನಿಸಿದ ಮಹಾಲಕ್ಷ್ಮಿಗೂ ಒಡೆಯನಾದವನು ಶ್ರೀಹರಿಯಾಗಿದ್ದಾನೆ.  ಪ್ರಳಯ ಕಾಲದಲ್ಲಿಯೂ ಭಗವಂತನ ಜೊತೆ ಸದಾ ಇರುವವಳು ಲಕ್ಷ್ಮೀದೇವಿ ಮಾತ್ರ.  ಸರ್ವದಾ ಶ್ರೀಹರಿಯ ಜೊತೆಯಲ್ಲಿಯೇ ಇರುವಂತಹ ಲಕ್ಷ್ಮೀದೇವಿಯೇ ಸರ್ವ ವ್ಯಾಪ್ತಳು ಎಂದಾಗ, ಅವಳಿಗೂ ಒಡೆಯನಾದ ಭಗವಂತನು ಅಮಿತನು ಎನ್ನುವುದು ತಿಳಿಯುತ್ತದೆ.  ಜಗನ್ನಾಥ ದಾಸರು ತತ್ವ ಸುವಾಲಿಯಲ್ಲಿ
ಪಾಲ್ಗಡಲಮಗಳಾಳ್ದನಾಳ್ಗಳೊಳಗಪ್ರತಿಮ
ಓಲೈಪ ಜನರ ಸಲಹೆಂದು | ಸಲಹೆಂದು ಬಿನ್ನೈಪೆ
ಫಲ್ಗುಣಾಗ್ರಜನೆ ಪ್ರತಿದಿನ || - ಪಾಲ್ಗಡಲ ಮಗಳಾದ ಲಕ್ಷ್ಮೀದೇವಿಯನ್ನಾಳಿದ ನಾಳ್ಗಳೊಳಗೆಲ್ಲಾ ಅಪ್ರತಿಮನಾದವನಾದ ಭಗವಂತನೇ ಸಲಹು ಎಂದಿದ್ದಾರೆ.

ಅಂಗೋಪಾಂಗಗಳಲಿಪ್ಪ ಅನಂತ ಸುಮಂಗಳಪ್ರದ ನಾಮ -   ಭಗವದ್ಗೀತೆಯ ೧೧ನೇ ಅಧ್ಯಾಯದಲ್ಲಿ "ಅನೇಕ ವಕ್ತ್ರ ನಯನಮನೇಕಾದ್ಭುತ ದರ್ಶನಮ್ | ಅನೇಕ ವಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್" || - ಅನೇಕ ಮುಖಗಳು, ಕಣ್ಣುಗಳು ಹೊಂದಿರುವ ಅನೇಕ ಬಗೆಯ ದಿವ್ಯವಾದ ಭೂಷಣಗಳಿಂದ ಅಲಂಕೃತನಾದ, ಅನೇಕ ವಿಧವಾದ ದಿವ್ಯ ಶಸ್ತ್ರಗಳನ್ನು ಧರಿಸಿರುವ, ದಿವ್ಯ ಗಂಧವನ್ನು ಪೂಸಿಕೊಂಡಿರುವ, ಎಲ್ಲ ಪ್ರಕಾರದ ಆಶ್ಚರ್ಯಗಳಿಂದ ಒಳಗೊಂಡ, ಅನಂತಸ್ವರೂಪನಾದ ಭಗವಂತನನ್ನು ಕಂಡೆ ಎಂದು ಅರ್ಜುನ ತಿಳಿಸಿದ್ದಾನೆ.  ಅವ್ಯಾಕೃತಾಕಾಶದಲ್ಲಿ ಭಗವಂತನ ಜೊತೆಗೇ ಸರ್ವ ವ್ಯಾಪ್ತಳಾಗಿರುವವಳು ಲಕ್ಷ್ಮೀದೇವಿ ಮಾತ್ರ.  ಆದರೆ ಭಗವಂತನು ಲಕ್ಷ್ಮೀದೇವಿಯ ಒಳಗೂ ವ್ಯಾಪ್ತನು, ಹೊರಗೂ ವ್ಯಾಪ್ತನಾದ್ದರಿಂದಲೇ ಅವನು ಅಮಿತನು.  ಭಗವಂತನ ಸರ್ವವ್ಯಾಪ್ತಿತ್ವವನ್ನು ’ಶ್ವೇತಾಶ್ವತರೋಪನಿಷತ್ತ್’ನಲ್ಲಿ "ಏಕೋ ದೇಸ್ಸರ್ವಭೂತೇಷು ಗೂಢಸ್ಸರ್ವವ್ಯಾಪ್ತೀ " ಎಂದು ಪ್ರಾರಂಭವಾಗುವ ಶ್ಲೋಕದಲ್ಲಿ ತಿಳಿಸಲ್ಪಟ್ಟಿದೆ.  ವಿಷ್ಣು ಸಹಸ್ರನಾಮದ ಫಲಶೃತಿಯಲ್ಲಿ ಕೂಡ "ಏಕೋ ವಿಷ್ಣುರ್ಮಹದ್ಭೂತಂ".. ಎಂಬ ಮಾತಿನ ಮೂಲಕ ಭಗವಂತನ ಮಹಾ ವಿಭೂತಿಯ ಉಲ್ಲೇಖವಾಗಿದೆ.  ಭಗವಂತ ಒಬ್ಬನೇ ಸರ್ವ ವ್ಯಾಪ್ತನು ಅವನೇ ಸರ್ವವನ್ನೂ ನಿರ್ವಹಣೆ ಮಾಡುವವನು ಎಂಬ ಉಲ್ಲೇಖವಿದೆ.  ಭಗವಂತನು ಹೇಗೆ ಸರ್ವವ್ಯಾಪ್ತನೋ, ಹಾಗೇ ಅವನ ಪ್ರತಿಯೊಂದ ಅಂಗಗಳೂ, ಉಪಾಂಗಗಳೂ ಕೂಡ ಅದೇ ಪರಿಯಲ್ಲಿ ವ್ಯಾಪ್ತವಾಗಿರುವುದು.  ಅಂದರೆ ಭಗವಂತನ ಶರೀರವು ಹೇಗೆ ಸರ್ವ ವ್ಯಾಪ್ತಿಯನ್ನು ಹೊಂದಿರುವುದೋ, ಹಾಗೆ ಅವನ ಅಂಗಾಂಗಗಳೂ ಅವ್ಯಾಕೃತಾಕಾಶ ಪರ್ಯಂತ ವ್ಯಾಪ್ತವಾಗಿವೆ.  ಅಂಗಾಂಗಗಳಿಗಿರುವ ಉಪಾಂಗಗಳೂ ಕೂಡ ಅಷ್ಟೇ ವ್ಯಾಪ್ತತೆಯನ್ನು ಹೊಂದಿವೆ.  ಭಗವಂತನ ಅಂಗವಾದ ಅವನ ಪಾದದ ಬೆರಳು ಎಷ್ಟು ವ್ಯಾಪ್ತಿಯನ್ನು ಹೊಂದಿದೆಯೋ, ಅಷ್ಟೇ ವ್ಯಾಪ್ತಿಯನ್ನು ಬೆರಳಿನ ಉಪಾಂಗವಾದ ನಖವೂ ಕೂಡ ಹೊಂದಿದೆ.  ಪಾದವು ಸರ್ವ್ಯ ವ್ಯಾಪ್ತವಾಗಿದೆ, ಪಾದದ ಬೆರಳೂ ಸರ್ವ ವ್ಯಾಪ್ತವಾಗಿದೆ ಹಾಗೇ ಬೆರಳಿನ ನಖವೂ ಸರ್ವ ವ್ಯಾಪ್ತತೆಯನ್ನು ಹೊಂದಿದೆ.  ಹೀಗೆ ಅವನ ಸರ್ವಾಂಗಗಳಲ್ಲಿಯೂ, ಉಪಾಂಗಗಳಲ್ಲಿಯೂ ಮಿತಿಯಿಲ್ಲದಂತೆ ವ್ಯಾಪ್ತವಾಗಿರುವುದೇ ಭಗವಂತನ ಅನಂತ ನಾಮಗಳು.  ನಾಮಗಳು ಸುಮಂಗಳಪ್ರದವಾಗಿರುವುದೇಕೆಂದರೆ, ನಾಮೋಚ್ಛಾರಣೆಯಿಂದಲೇ ಸಕಲವೂ ಮಂಗಳವಾಗುವುದು.  ಭಗವಂತನಿಗೆ ಎಷ್ಟು ಸಹಸ್ರ ರೂಪಗಳಿವೆಯೋ, ಅಷ್ಟೇ ಸಹಸ್ರ ನಾಮಗಳೂ ಇವೆ.  ಭಗವಂತನ ಪ್ರತಿಯೊಂದು ಅಂಗವೂ ಅವನ ಒಂದೊಂದು ರೂಪಗಳೇ ಆಗಿರುವುದರಿಂದ, ಅವನ ಅಂಗಾಂಗಗಳಲ್ಲಿ ಸುಮಂಗಳಪ್ರದವಾದ ಅನೇಕ, ಅನಂತ ನಾಮಗಳು ಸೇರಿಕೊಂಡಿವೆ.  ಅಂತ್ಯವಿಲ್ಲದ ಅವ್ಯಾಕೃತಾಕಾಶ ಪರ್ಯಂತ ವ್ಯಾಪಿಸಿರುವ ಭಗವಂತನು "ಅಣೋರಣೀಯನು ಹಾಗೂ ಮಹತೋ ಮಹೀಯನು".  ಅವನ ವ್ಯಾಪ್ತಿಯಂತೆಯೇ ವ್ಯಾಪಿಸಿರುವ ಅವನ ನಾಮಗಳೂ ಕೂಡ ಮಹತ್ತಾದವುಗಳು.  ಭಗವಂತನ ಅಂಗಾಂಗಗಳಲ್ಲಿ ವ್ಯಾಪಿಸಿರುವ ಅವನ ಅನಂತ ನಾಮಗಳಿಗೂ ಅಭಿಮಾನಿ ದೇವತೆ ಲಕ್ಷ್ಮೀದೇವಿಯಾಗಿದ್ದಾಳೆ.  ಮಂಗಳಪ್ರದಳಾದ ಲಕ್ಷ್ಮೀದೇವಿಯು ನಿರವದ ಸೇವಿಸುವ, ಅಭಿಮಾನಿಸುವ ನಾಮಗಳು ಮಂಗಳಪ್ರದವೇ ಆಗಿವೆ.

ಸರ್ವಾಂಗಗಳಲ್ಲೂ ಮಿತಿಯಿಲ್ಲದಂತೆ ವ್ಯಾಪ್ತವಾಗಿರುವ ಭಗವಂತನ ಅಸಂಖ್ಯ, ಅನಂತ ನಾಮಗಳು  "ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಂ" ಎಂದು ವಿಷ್ಣು ಸಹಸ್ರನಾಮ ಧ್ಯಾನ ಶ್ಲೋಕಗಳಲ್ಲಿ ತಿಳಿಸಲ್ಪಟ್ಟಿದೆ.  ಪವಿತ್ರವೆಂದು ಪರಿಗಣಿಸಲ್ಪಡುವ ಎಲ್ಲಾ ವಸ್ತುಗಳನ್ನೂ ಪವಿತ್ರವಾಗಿಸುವುದೇ ಭಗವಂತನ ನಾಮದ ಮಹಿಮೆ.  ಶ್ರೀ ಪುರಂದರ ದಾಸರು "ನೀನ್ಯಾಯೋ ನಿನ್ನ ಹಂಗ್ಯಾಕೋ - ನಿನ್ನ - ನಾಮದ ಬಲವೆನಗಿದ್ದರೆ ಸಾಕೋ" ಎಂದು ನಾಮಕ್ಕಿರುವ ಶಕ್ತಿಯನ್ನು ತಿಳಿಸಿದ್ದಾರೆ.  ತಮ್ಮ ಇನ್ನೊಂದು "ನಿನ್ನ ನಾಮವಿದ್ದರೆ ಸಾಕೊ | ಮುನಿದರೆ ಮುನಿ ನಿನ್ನಾಣೆ ಶ್ರೀರಾಮ"  ಎಂಬ ಕೃತಿಯಲ್ಲಿ ನಾಮ ಸ್ಮರಣೆ ಮಾತ್ರದಿಂದಲೇ ಪಾಪಗಳೆಲ್ಲವೂ ಛಿನ್ನ ಛಿದ್ರವಾಗುವುದೆಂದೂ, ನಾಮದ ಬಲವೇ ತನ್ನ ಪಾಪವನ್ನು ಕೋಪದಿಂದಲಿ ತರಿದು,  ಕರ್ಮಗಳನ್ನೆಲ್ಲಾ ಝಾಡಿಸಿ, ತನ್ನನ್ನು ವೈಕುಂಠಕ್ಕೆ ಕೊಂಡೊಯ್ದು ಪರಮಾನಂದವನ್ನೀವುದು ಎಂದಿದ್ದಾರೆ.  ಮತ್ತೊಂದು ಕೃತಿ "ನಿನ್ನ ನಾಮವೆ ಎನಗೆ ಅಮೃತಾನ್ನವು" ಎಂಬುದರಲ್ಲಿ ಒಂದೊಂದು ನಾಮವನ್ನು ಜಪಿಸುತ್ತಿದ್ದರೆ ಒಂದೊಂದು ಭಕ್ಷ್ಯ ಸವಿದಂತಾಗುವುದೆಂದೂ,  ಭಗವಂತನೊಲಿದರೆ ಹಸಿವೆಯೆಂಬುದೇ ಇರುವುದಿಲ್ಲವೆಂದೂ ತಿಳಿಸಿದ್ದಾರೆ.  ಹೀಗಿದೆ ಭಗವಂತನ ನಾಮಸ್ಮರಣೆಯ ಶಕ್ತಿ ಹಾಗೂ ಮಹತ್ವ.  ಪರಮಪುರುಷನಾದ ಪರಮಾತ್ಮನನ್ನು ಧ್ಯಾನಿಸಿದರೆ, ದರ್ಶನ ಮಾಡಿದರೆ, ಧ್ಯಾನಿಸಿದರೆ, ಕೀರ್ತನೆ ಮಾಡಿದರೆ, ಸ್ತೋತ್ರ ಮಾಡಿದರೆ, ಪೂಜಿಸಿದರೆ, ಸ್ಮರಿಸಿದರೆ, ನಮಸ್ಕರಿಸಿದರೆ ಸರ್ವ ಪಾಪಗಳೂ ಪರಿಹಾರವಾಗುವುದು.  ಮಂಗಲಾನಾಂಚ ಮಂಗಲಂ ಎಂದರೆ ಸುಖಕ್ಕೆ ಸಾಧನವಾಗಿರುವುದು ಎಂದರ್ಥವಾಗುತ್ತದೆ.  ಎಲ್ಲಾ ಸಾಧನಗಳೂ ಕೂಡ ಪರಮಾನಂದ ಲಕ್ಷಣವಾದವುಗಳಾದ್ದರಿಂದಲೂ, ಪರಮಮಂಗಲವಾಗಿರುವುದರಿಂದಲೂ, ಭಗವಂತನು ಮಂಗಲಗಳಿಗೂ ಮಂಗಲ ಎಂದು ಸ್ತುತಿಸಲ್ಪಟ್ಟಿದ್ದಾನೆ.

ಪಾವನ ಮಾಳ್ಪುದೇನರಿದು -   ಪಾವನವೆಂದರೇ ಪವಿತ್ರವೆಂದೇ ಅರ್ಥವಾಗುತ್ತದೆ.  ಧರ್ಮದ ವಿಚಾರಗಳೆಲ್ಲವೂ ಪವಿತ್ರವಾದ ವಿಚಾರಗಳೇ ಮತ್ತು ಪಾಪಪರಿಹಾರಕ ವಿಚಾರಗಳೇ ಆಗಿವೆ.  ಆದರೆ ಪವಿತ್ರವಾದ ವಿಚಾರಗಳಲ್ಲಿಯೂ ಅತಿ ಪವಿತ್ರವಾದ ಭಗವಂತನ ವಿಚಾರಗಳನ್ನು ವಿವರಿಸಿವಾಗ "ಪಾವನ"ವೆಂಬ ಶಬ್ದ ವಿಶೇಷವಾಗಿ ಉಪಯೋಗಿಸಲ್ಪಡುತ್ತದೆ.  ಪಾವನ ಎಂದರೆ  ಪವಿತ್ರವಾಗಿರುವುದನ್ನೂ, ಶುದ್ಧವಾಗಿರುವುದನ್ನೂ ಇನ್ನೂ ಹೆಚ್ಚು ಪವಿತ್ರವಾಗಿಸುವುದು, ಶುದ್ಧವಾಗಿಸುವುದು ಎಂದು ಅರ್ಥೈಸಬಹುದು.  ವಿಷ್ಣು ಸಹಸ್ರನಾಮದಲ್ಲಿ "ಭೂತ ಭವ್ಯ ಭವನ್ನಾಥಃ ಪವನಃ ಪಾವನೋನಲಃ" - ಯಾರು ಅತಿ ಶುದ್ಧವಾಗಿರುವರೋ ಅವರು ಮತ್ತೆಲ್ಲವನ್ನೂ ಶುದ್ಧಮಾಡಬಲ್ಲವನೋ ಅವರು ’ಪಾವನನು’ ಎಂದು ತಿಳಿಸಲ್ಪಟ್ಟಿದೆ.  ಪವನಃ ಪಾವನೋನಲಃ ಎಂದರೆ ವಾಯುವನ್ನು ಯಾವಾಗಲೂ ಸಂಚರಿಸುವಂತೆ ಮಾಡುವವನು ಎಂಬ ಅರ್ಥವೂ ಆಗುತ್ತದೆ.  ಭಗವದ್ಗೀತೆಯ ೧೦ನೇ ಅಧ್ಯಾಯದ ೩೧ನೇ ಶ್ಲೋಕದಲ್ಲಿ ಭಗವಂತನು "ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್ | ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ" || -  ನಾನು ಪವಿತ್ರಗೊಳಿಸುವವರಲ್ಲಿ ವಾಯುವು, ಶಸ್ತ್ರಧಾರಿಗಳಲ್ಲಿ ಶ್ರೀರಾಮನು, ಮೀನುಗಳಲ್ಲಿ ಮೊಸಳೆಯೂ ಹಾಗೂ ನದಿಗಳಲ್ಲಿ ಭಾಗೀರಥಿ ಗಂಗೆಯು ನಾನೇ ಆಗಿದ್ದೇನೆ ಎಂದು ತಿಳಿಸಿದ್ದಾನೆ.

ಗಂಗೆಯ ಮಹಿಮೆಯನ್ನು ಮತ್ತು ಸರ್ವ ಪಾಪಗಳನ್ನು ನಶಿಸುವವಳೆಂಬುದನ್ನು ’ಸ್ಕಂದಮಹಾಪುರಾಣ’ದಲ್ಲಿ "ಓಂ ನಮಃ ಶಿವಾಯೈ ಗಂಗಾಯೈ ಶಿವದಾಯೈ ನಮೋ ನಮಃ | ನಮಸ್ತೇ ವಿಷ್ಣುರೂಪಿಣ್ಯೈ ಬ್ರಹ್ಮಮೂರ್ತ್ಯೈ ನಮೋಸ್ತುತೇ || ಎಂಬ ಸ್ತೋತ್ರದಲ್ಲಿ ವಿವರಿಸಲ್ಪಟ್ಟಿದೆ.  ಶ್ರೀ ಶಂಕರಾಚಾರ್ಯರು ಗಂಗೆಯ ಮಹಿಮೆಯನ್ನು ತಮ್ಮ ’ಗಂಗಾಷ್ಟಕಮ್’ ನಲ್ಲಿ "ಕಣಮಣು ಪರಿಮಾಣಂ ಪ್ರಾಣಿನೋ ಯೇ ಸ್ಪೃಶಂತಿ" - ನಿನ್ನ ಒಂದು ಕಣದ ಪರಮಾಣುವನ್ನು ಪ್ರಾಣಿಗಳು ಸ್ಪರ್ಶಿಸಿದರೆ ಪ್ರಾಣಿಗಳ ಕಲಿ ಕಲ್ಮಶಗಳನ್ನು ಜನ್ಮ ಜನ್ಮಾಂತರದ ಪಾಪಗಳನ್ನು ಪರಿಹರಿಸುತ್ತೀಯೇ ಎಂದು ಸ್ತುತಿಸಿದ್ದಾರೆ.    ಶ್ರೀಮದಾಚಾರ್ಯರು ತಮ್ಮ ’ಶ್ರೀ ಗಂಗಾಸ್ತೋತ್ರಮ್’ ನಲ್ಲಿ "ಹರಿಪದ ಪಾದ್ಯತರಂಗಿಣಿ ಗಂಗೇ".. "ತವ ಜಲಮಮಲಂ ಯೇನ ನಿಪೀತಂ ಪರಮಪದಂ ಖಲು ತೇಹ ಗೃಹೀತಂ" - ಗಂಗೆ ನಿನ್ನ ಜಲಪಾನ ಮಾಡಿದವರು ಪರಮಪದ ಹೊಂದುತ್ತಾರೆ, "ಪತಿತೋದ್ಧಾರಿಣಿ ಜಾನ್ಹವಿ ಗಂಗೇ" - ಪಾಪ ನಿವಾರಿಸುವ ಜಾನ್ಹವಿ ಗಂಗೇ, "ಕಲ್ಪಲತಾಮಿವ ಫಲದಾಂ ಲೋಕೇ" - ಕಲ್ಪವೃಕ್ಷದಂತೆ ಲೋಕದಲ್ಲಿ ಫಲನೀಡುವವಳೇ ಎಂದೆಲ್ಲಾ ಗಂಗೆಯ ಮಹಿಮೆಯನ್ನು ಸುಂದರವಾಗಿ ವರ್ಣಿಸಿದ್ದಾರೆ.  ಭಗವಂತನು ತ್ರಿವಿಕ್ರಮಾವತಾರವೆತ್ತಿದಾಗ ಅಂಗುಷ್ಠದ ನಖದ ಒಂದು ಸಣ್ಣ ಸ್ಪರ್ಶದಿಂದಲೇ ಧರೆಗಿಳಿದ ಗಂಗೆ ಅತ್ಯಂತ ಪಾವನಳು ಎನಿಸಿಕೊಂಡಳು.  ಭಗವಂತನ ಸರ್ವಾಂಗಗಳ ಸ್ಪರ್ಶವೇನಾಗಲಿಲ್ಲ ಮತ್ತು ಸ್ಪರ್ಶವು ಸಾರ್ವಕಾಲಿಕವಾಗಿಯೂ ಇಲ್ಲ.  ಆದರೂ ಆ ಜಲ ಅತಿ ಶುದ್ಧ, ಪವಿತ್ರ, ಪಾವನವೆನಿಸಿಕೊಂಡಿದೆ ಮತ್ತು ಗಂಗೆಯು ಮೂರೂ ಲೋಕಗಳ ಅಘ ಹಿಂಗಿಸುವವಳು ಎನಿಸಿಕೊಂಡಿದ್ದಾಳೆ.   ಶ್ರೀಹರಿಯ ಅನಂತಾನಂತ ನಾಮಗಳು ಅವನ ಸರ್ವಾಂಗೋಪಾಂಗಗಳಲ್ಲಿ ನೆಲೆಸಿ ಸದಾ ಸಾರ್ವಕಾಲಿಕ ಸಂಬಂಧ ಪಟ್ಟು, ವಾಚ್ಯವಾಗಿರುವಂತಹವು.  ಹಾಗೆಂದಮೇಲೆ ಮೂರುಲೋಕಗಳ ಅಘ ಹಿಂಗಿಸುವ ಗಂಗೆಗಿಂತಲೂ ಅತ್ಯಂತ ಪರಮ, ಪವಿತ್ರ ಹಾಗೂ ಪಾವನವು ಶ್ರೀಹರಿಯ ಅನಂತ ನಾಮಗಳು.  ಈ ನಾಮಗಳ ಅರ್ಚನೆ, ಉಪಾಸನೆ, ಸಂಕೀರ್ತನೆಗಳು ಸದ್ಗತಿಗೆ ಮಾರ್ಗವಾಗಿ, ಭಕ್ತರ ಸರ್ವ ಪಾಪಗಳನ್ನೂ ನಾಶಪಡಿಸುವುದೆಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲವು. 

ಕೇವಲ ನಖದ ತುದಿಯನ್ನು ಸ್ಪರ್ಶಿಸಿದ ಗಂಗೆಯೇ ಸರ್ವ ಪಾಪಗಳನ್ನು ತೊಳೆಯುವ ’ಅಮರ ತರಂಗಿಣಿ’ಯಾಗಬಹುದಾದರೆ, ಭಗವಂತನ ಸರ್ವ ಅಂಗಗಳನ್ನೂ, ಉಪಾಂಗಗಳನ್ನು ಸ್ಮರಿಸುವ, ಸ್ಪರ್ಶಿಸುವ ಅವನ ನಾಮಗಳು ಸುಮಂಗಳಪ್ರದವಾಗಿ, ಸ್ಮರಿಸುವವರೆಲ್ಲರನ್ನೂ ಪಾವನರನ್ನಾಗಿಸುವುದರಲ್ಲಿ ಯಾವ ಸಂಶಯವೂ ಇಲ್ಲ.  ಭಗವದ್ಗೀತೆಯ ೧೧ನೇ ಅಧ್ಯಾಯದ ೩೬ನೇ ಶ್ಲೋಕದಲ್ಲಿ ಅರ್ಜುನನು | ಸ್ಥಾನೇ ಹೃಷಿಕೇಶ ತವ ಪ್ರಕೀರ್ತ್ಯಾ ಜಗತ್ಪ್ರಹೃಷ್ಯತ್ಯನುರಜ್ಯತೇ ಚ | ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ || - ಹೇ ಅಂತರ್ಮಾಮಿಯೇ ನಿನ್ನ ನಾಮ, ಗುಣ ಮತ್ತು ಪ್ರಭಾವದ ಕೀರ್ತನೆಯಿಂದ ಜಗತ್ತು ಅತಿ ಹರ್ಷಿತವಾಗುತ್ತಾ, ಪ್ರೇಮ ವಿಹ್ವಲವಾಗುತ್ತಾ ಇದೆ.  ಹಾಗೆಯೇ ಭಯಗೊಂಡ ರಾಕ್ಷಸರು ಹತ್ತು ದಿಕ್ಕುಗಳಲ್ಲಿಯೂ ಓಡಿ ಹೋಗುತ್ತಿದ್ದಾರೆ.  ಹಾಗೂ ಸಿದ್ಧರ ಸಮುದಾಯವೆಲ್ಲ ನಮಸ್ಕರಿಸುತ್ತಿದೆ ಎಂದು ಭಗವಂತನನ್ನು ಸ್ತುತಿಸಿದ್ದಾನೆ. 

ಶ್ರೀ ಜಗನ್ನಾಥದಾಸರು ತತ್ವ ಸುವ್ವಾಲಿಯಲ್ಲಿ

ಜಲದೊಳಗೆ ಮಿಂದು ನಿರ್ಮಲರಾದೆವೆಂದು ತ-
ಮ್ಮೊಳು ತಾವೆ ಹಿಗ್ಗಿ ಸುಖಿಸೋರು | ಸುಖಿಸೋರು ಪರಮ ಮಂ-
ಗಳ ಮೂರ್ತಿ ನಿನ್ನ ನೆನೆಯದೆ || - ಭಗವಂತನ ನಖ ಸ್ಪರ್ಶದಿಂದಲೇ ಪವಿತ್ರಳಾದವಳೆಂದು ಗಂಗೆಯನ್ನು ಎಷ್ಟು ಕೊಂಡಾಡಿದರೂ ಕೂಡ ಗಂಗೇ ತಾನೇ ಸ್ವಯಂ ಪಾಪಗಳನ್ನು ಪರಿಹರಿಸಲಾರಳು.  ನಾವು ನಿರ್ಮಲರಾಗಬೇಕೆಂಬ ಇಚ್ಛೆ ನಮಗೆ ಇದ್ದರೆ, ನಾವು ಗಂಗೆಯಲ್ಲಿ ಮುಳುಗುವಾಗ ಭಗವಂತನನ್ನು ನೆನೆಯಬೇಕು.

ಜಡಭೂತಜಲ ಜನರ ಮಡಿಮಾಡಲಾಪರೆ
ಜಡಧಿ ಮಂದಿರನ ಶುಭನಾಮ | ಶುಭನಾಮ ಮೈಲಿಗೆಯ
ಬಿಡಿಸಿ ಮಂಗಳವ ಕೊಡದೇನೊ || - ಅಚೇತನರಾದ ನದ್ಯಾದಿ ಜಲಗಳು ಸ್ನಾನ ಮಾಡಿದ ಮಾತ್ರಕ್ಕೇ ನಮ್ಮ ಪಾಪಗಳನ್ನೆಲ್ಲಾ ತೊಳೆದು ಶುದ್ಧಮಾಡಬಲ್ಲದೇ ?  ಮನಸ್ಸಿಟ್ಟು ಭಗವಂತನ ಮಂಗಳನಾಮವನ್ನು ಸ್ಮರಿಸುತ್ತಾ, ಯಾವ ತೀರ್ಥ, ಯಾವ ಜಲದಲ್ಲಿ ಮುಳುಗಿದರೂ ಕೂಡ ಮನಸ್ಸಿನಲ್ಲಿಯ ಮೈಲಿಗೆಯನ್ನೆಲ್ಲಾ ತೊಳೆದು ಶುದ್ಧರಾಗಬಹುದು.

ಸ್ವಚ್ಛಗಂಗೆಯ ಒಳಗೆ ಅಚ್ಯುತನ ಸ್ಮರಿಸಿದೊಡೆ
ಅಚ್ಚಮಡಿಯೆಂದು ಕರೆಸೋರು | ಕರೆಸೋರು ಕೈವಲ್ಯ
ನಿಶ್ಚಯವು ಕಂಡ್ಯ ನಿಮಗಿನ್ನು || - ಪಾದಾಂಗುಷ್ಠದಿಂದ ಉದ್ಭವಿಸಿದ ಸ್ವಚ್ಛಳಾದ ಗಂಗೆಯಲ್ಲಿ ಮೀಯುವಾಗ ಭಗವಂತನಾದ ಅಚ್ಯುತನನ್ನು ಸ್ಮರಿಸಿಕೊಂಡರೆ ಸಾಕು ಸ್ವಚ್ಛವಾಗಿಯೂ, ಅಚ್ಚಮಡಿಯಾಗಿ, ಕೈವಲ್ಯವೇ ಪ್ರಾಪ್ತಿಯಾಗುವುದು ನಿಶ್ಚಯವು.

ಅನಘ ರೋಗಘ್ನ ಎಂದಿನಿತು ಮಂಗಳನಾಮ
ನೆನೆಯೆ ದುರಿತಗಳು ಬರಲುಂಟೆ | ಬರಲುಂಟೆ ಲೋಕದ
ಜನರ ಧನ್ವಂತ್ರಿ ಕಾಪಾಡೋ || - ಭಗವಂತನ ನಾಮಗಳದೆಷ್ಟು ಪವಿತ್ರ ಮತ್ತು ಮಂಗಳಕರವೆಂದರೆ, ಎಂತಹ ಭೀಕರ ರೋಗವಾದರೂ ಕೂಡ, ನಾಮಸ್ಮರಣೆ ಮಾಡುವುದರಿಂದಲೇ ರೋಗಮುಕ್ತರನ್ನಾಗಿಸುವ ವಿಶ್ವದ ವೈದ್ಯ ಧನ್ವಂತರಿದೇವನು ಎನ್ನುತ್ತಾರೆ.


ಚಿತ್ರಕೃಪೆ : ಅಂತರ್ಜಾಲ



No comments: