Wednesday, January 29, 2014

ಕರುಣಾ ಸಂಧಿ - ೧೫ ನೇ ಪದ್ಯ



ಸ್ಮರಿಸುವವರಪರಾಧಗಳ ತಾ
ಸ್ಮರಿಸ ಸಕಲೇಷ್ಟಪ್ರದಾಯಕ
ಮರಳಿ ತನಗರ್ಪಿಸಲು ಕೊಟ್ಟುದನಂತಮಡಿ ಮಾಡಿ |
ಪರಿಪರಿಯಲುಂಡುಣಿಸಿ ಸುಖಸಾ
ಗರದಿ ಲೋಲಾಡಿಸುವ ಮಂಗಳ
ಚರಿತ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ ||೧೫||


ಪ್ರತಿಪದಾರ್ಥ : ಸ್ಮರಿಸುವವರ - ಯಾರು ಭಗವಂತನ ಸ್ಮರಣೆಯನ್ನು ಸದಾ ಸರ್ವದಾ ಮಾಡುವರೋ ಅವರ, ಅಪರಾಧಗಳ - ಅಂತಹ ಭಕ್ತರು ಮಾಡುವ ತಪ್ಪುಗಳನ್ನು, ತಾ ಸ್ಮರಿಸ - ಲಕ್ಷ್ಯಕ್ಕೆ ತೆಗೆದುಕೊಳ್ಳುವವನಲ್ಲ, ಸಕಲೇಷ್ಟಪ್ರದಾಯಕ - ಅಂತಹ ತನ್ನ ಭಕ್ತರ ಸಮಸ್ತ ಕೋರಿಕೆಗಳನ್ನೂ ನೆರವೇರಿಸುವನು, ಮರಳಿ ತನಗರ್ಪಿಸಲು - ಸರ್ವಕ್ಕೂ ಒಡೆಯನು ಭಗವಂತನೇ ಅವನಿಂದಲೇ ಇದು ತನಗೆ ಸಿಕ್ಕಿರುವುದೆಂಬ ಮನೋಭಾವದಿಂದ ಪುನಃ ಅವನಿಗೇ ಅರ್ಪಿಸಿದರೆ, ಕೊಟ್ಟುದನಂತಮಡಿ ಮಾಡಿ - ಭಕ್ತರು ತನಗೆ ಒಪ್ಪಿಸಿದ್ದನ್ನು ಅವರು ಕೊಟ್ಟಿದ್ದಕ್ಕಿಂತ ಅನೇಕ ಪಟ್ಟುಗಳಷ್ಟು ಹೆಚ್ಚಿಸಿ, ಪರಿಪರಿಯಲುಂಡುಣಿಸಿ - ಜ್ಞಾನಾನಂದಾದಿ ಫಲಗಳನ್ನು ಕೊಡುವನು ವಿವಿಧ ಬಗೆಗಳಲ್ಲಿ ತಾನೂ ಉಂಡು ಭಕ್ತರಿಗೂ ಉಣಿಸುವನು, ಸುಖಸಾಗರದಲಿ - ಐಶ್ವರ್ಯ ಭೋಗಗಳನ್ನಿತ್ತು ಸುಖ ಸಾಗರದಲ್ಲಿ, ಓಲಾಡಿಸುವ - ತೇಲುವಂತೆ ಮಾಡುವನು ಹೊರಳಾಡಿಸುವನು,  ಮಂಗಳಚರಿತ - ಮಂಗಳಮಯವಾದ ಚಾರಿತ್ರ್ಯವನ್ನು ಉಳ್ಳವನು ಲವಲೇಶವೂ ದುಃಖವಿಲ್ಲದವನು, ಚಿನ್ಮಯ ಗಾತ್ರ - ಸಚ್ಚಿದಾನಂದ ಶರೀರವುಳ್ಳವನು, ಲೋಕ ಪವಿತ್ರ - ಪವಿತ್ರವಾದ ಲಿಂಗ ದೇಹವನ್ನು ಭಂಗಗೊಳಿಸಿ ಪವಿತ್ರ ಮಾಡುವವನು, ಸುಚರಿತ್ರ - ಸಜ್ಜನರ ಸಾತ್ವಿಕರನ್ನು ರಕ್ಷಿಸುವಂತಹ ಒಳ್ಳೆಯ ಚರಿತ್ರೆಯುಳ್ಳವನು.

ಭಗವಂತನನ್ನು ನಾವು ಭಕ್ತಿಯಿಂದ ಸ್ಮರಿಸಿದಾಗ, ಅವನು ನಮ್ಮನ್ನು ಸ್ಮರಿಸುತ್ತಾನೆ.  ಆದರೆ ನಮ್ಮ ಅಪರಾಧಗಳನ್ನು ಸ್ಮರಿಸುವುದಿಲ್ಲ, ಕ್ಷಮಿಸಿ ಬಿಡುತ್ತಾನೆ.  ದೇವೇಂದ್ರನು ಕೃಷ್ಣನನ್ನು ಗೊಲ್ಲನೆಂದು ತಿಳಿದು ಅಪರಾಧ ಮಾಡಿದ್ದಾನೆ.  ಮಳೆಗಾಗಿ ತನ್ನನ್ನು ಪೂಜಿಸಲಿಲ್ಲವೆಂದು ಮುಸಲಧಾರೆಯನ್ನುಂಟುಮಾಡಿ ಶ್ರೀಕೃಷ್ಣ ಮತ್ತು ಅವನ ಭಕ್ತರಿಗೆ ಅಪರಾಧ ಮಾಡಿದ್ದಾನೆ.  ಆದರೆ ಅದನ್ನು ತಿಳಿದು ಕೃಷ್ಣನಲ್ಲಿ ಕ್ಷಮೆ ಯಾಚಿಸಿದಾಗ, ಕೃಷ್ಣ ಅವನನ್ನು ಕ್ಷಮಿಸಿದ್ದಾನೆ.  ಇನ್ನು ಭೃಗು ಮುನಿಗಳು ವೈಕುಂಠಕ್ಕೆ ಬಂದಾಗ ವೈಕುಂಠನಾಥ ಪರಮಾತ್ಮ ಎದ್ದು ತಮ್ಮನ್ನು ಆದರಿಸಲಿಲ್ಲವೆಂದು ಪರಮಾತ್ಮನಿಗೆ ಅಪರಾಧ ಮಾಡಿದ್ದಾರೆ.  ಆದರೆ ವೈಕುಂಠಪತಿಯನ್ನು ಅವರು ಕ್ಷಮೆ ಕೋರಿದಾಗ ಅವರಿಗಾಗಿ, ಧರೆಗಿಳಿದುಬಂದು ತಿರುಪತಿ ತಿಮ್ಮಪ್ಪನೆಂದು ಬೇಡಿದ್ದನ್ನು ಕೊಡುವವನೆಂಬ ಖ್ಯಾತಿಗೆ ಒಳಗಾಗಿದ್ದಾನೆ.  ಹೀಗೆ ಮಂಗಳಚರಿತ, ಚಿನ್ಮಯಗಾತ್ರ, ಲೋಕಪವಿತ್ರ, ಸುಚರಿತ್ರನಾದ ಭಗವಂತ ಸ್ಮರಿಸುವವರ ಅಪರಾಧಗಳನ್ನು ಸ್ಮರಿಸದೆ, ಸಕಲೇಷ್ಟಪ್ರದಾಯಕನಾಗಿ ಪ್ರಸಿದ್ಧಿಗೊಂಡಿದ್ದಾನೆ.

ಭಕ್ತಿಯೆಂದರೆ ನನ್ನಿಂದ ಭಗವಂತ ಸಾಧನೆ ಮಾಡಿಸುತ್ತಿದ್ದಾನೆಂಬ ಅರಿವು ಬರುವುದೇ ಆಗಿದೆ.  ಭಕ್ತರು ಭಗವಂತ ಕರುಣೆಯಿಂದ  ಕೊಟ್ಟಿರುವುದನ್ನೇ, ಮರಳಿ ಅವನಿಗೆ ಸಮರ್ಪಣೆ ಮಾಡಿದರೂ ಕೂಡ ಅವನು ಭಕ್ತರ  ಅಪರಾಧಗಳನ್ನು ಸ್ಮರಿಸುವುದಿಲ್ಲ.  ನಾವು ಕೊಟ್ಟಿದ್ದನ್ನೇ ಮತ್ತೆ ಅನಂತಮಡಿ ಮಾಡಿ, ವಿಧವಿಧವಾಗಿ ತಾನು ಉಂಡು, ನಮಗೇ ಉಣಿಸುತ್ತಾನೆ.  ಸುಖ ಭೋಗಗಳನ್ನು ಕೊಟ್ಟು ಓಲಾಡಿಸುತ್ತಾನೆ.  ಸಕಲಾರ್ಥಗಳನ್ನೂ ಕೊಟ್ಟು ರಕ್ಷಿಸುತ್ತಾನೆ.  ಭಕ್ತರು ಪೂಜೆ ಮಾಡುವಾಗ ಮಾಡುವ ಅನೇಕ ಅಪರಾಧಗಳನ್ನು ಕ್ಷಮಿಸುತ್ತಾನೆ.  ಹೂವು ತಂದು ತೊಳೆಯದೇ ಸಮರ್ಪಿಸುತ್ತೇವೆ, ತುಳಸಿಯನ್ನು ತೊಳೆದು ಸಮರ್ಪಿಸುತ್ತೇವೆ, ಪೂಜೋಪಕರಣಗಳಿಗೆ ಪಾದ ಸ್ಪರ್ಶ ಮಾಡಿಬಿಟ್ಟಿರುತ್ತೇವೆ, ಕಪ್ಪು ಬಣ್ಣದ ಬಟ್ಟೆ ತೊಟ್ಟಿರುತ್ತೇವೆ, ಒದ್ದೆ ಬಟ್ಟೆ ಉಟ್ಟು ಪೂಜಾ ವಿಧಿಗಳನ್ನು ಮಾಡಿರುತ್ತೇವೆ.  ಹೀಗೆ ನಾವು ಮಾಡುವ ಅನಂತ ಅಪರಾಧಗಳನ್ನು ಸ್ಮರಿಸದೆ, ಶುದ್ಧ ಮನಸ್ಸು, ಭಕ್ತಿಯಿಂದ ಮಾಡಿದ ಪೂಜೆಯನ್ನು ಸಕಲೇಷ್ಟಪ್ರದಾಯಕನಾಗಿ ಭಗವಂತನು ಸ್ವೀಕರಿಸುತ್ತಾನೆ.  ಶ್ರೀಮಧಾಚಾರ್ಯರು ಸದಾಚಾರ ಸ್ಮೃತಿಯಲ್ಲಿ ತಿಳಿಸಿರುವ ಮುಖ್ಯ ಸಂದೇಶವೇ "ಭಗವಂತನ ವಿಸ್ಮರಣೆ".  ಯಾವಾಗ ನಾವು ಭಗವಂತನ ಆದೇಶಗಳನ್ನು ಪಾಲಿಸುವುದಿಲ್ಲವೋ, ಆಗ ’ವಿಸ್ಮರಣೆ’ಯಾಗುತ್ತದೆ.  ಈ ವಿಸ್ಮರಣೆಗೆ ಪ್ರಾಯಶ್ಚಿತ್ತವೆಂದರೆ ನಿರಂತರ ಭಗವಂತನ "ಸ್ಮರಣೆ’ ಮಾಡುವುದು ಎಂದಿದ್ದಾರೆ.


ಸ್ಮರಿಸುವವರಪರಾಧಗಳ ತಾ ಸ್ಮರಿಸ - ನಮಗೆ ತಂದೆ-ತಾಯಿಯಾಗಿ ಜೋಪಾನ ಮಾಡುವ ಭಗವಂತನನ್ನು ಸ್ಮರಿಸದಿರುವುದೇ ಮಹಾಪರಾಧವಾಗುತ್ತದೆ.  ನಮ್ಮೊಳಗೂ ತಾನು ಅನೇಕ ವಿಭೂತಿರೂಪಗಳಲ್ಲಿದ್ದು ಸರ್ವ ಕಾರ್ಯಗಳನ್ನೂ ಮಾಡಿ, ನಮ್ಮಿಂದ ಮಾಡಿಸುತ್ತಾನೆ.  ನಮ್ಮ ಹೊರಗೂ ಇದ್ದು ನಮ್ಮನ್ನು ಕರುಣೆಯಿಂದ ರಕ್ಷಿಸುತ್ತಾನೆ.  ನಮಗೆ ಸುಖ, ಭೋಗಗಳನ್ನು ಕೊಟ್ಟು ಸಂತೋಷ ಪಡಿಸುತ್ತಾನೆ, ಮೋಕ್ಷ ಸಾಧನೆಯನ್ನೂ ಮಾಡಿಸುತ್ತಾನೆ.  ತಂದೆ ಹೇಗೆ ಯಾವ ಪ್ರತಿಫಲವನ್ನೂ ನಿರೀಕ್ಷಿಸದೆ ತನ್ನ ಮಗುವನ್ನು ಅತೀ ಜತನದಿಂದಲೂ, ಅಕ್ಕರೆಯಿಂದಲೂ ಕಾಪಾಡುತ್ತಾನೋ ಹಾಗೆ ಭಗವಂತ ತನ್ನ ಮಕ್ಕಳಾದ ನಮ್ಮನ್ನು ಯಾವ ಪ್ರತಿಫಲಾಪೇಕ್ಷೆಯನ್ನೂ ಬಯಸದೆ ರಕ್ಷಿಸುತ್ತಾನೆ.  ಮಕ್ಕಳಾದ ನಾವು ಅವನನ್ನು ಮರೆಯುವುದೆಂದರೆ ಅದು ಘೋರ ಅಪರಾಧ ಮಾಡಿದಂತೆ.  ಭಕ್ತರು ಭಗವಂತನ ಉಪಕಾರವನ್ನು ಸ್ಮರಿಸಿದರೆ ಸಾಕು, ಅವನು ಪ್ರಸನ್ನನಾಗಿ ಎಲ್ಲಾ ಅಪರಾಧಗಳನ್ನೂ ಮರೆತುಬಿಡುತ್ತಾನೆ.  ಶುದ್ಧ ಮನಸ್ಸಿನಿಂದ ಸ್ಮರಿಸಿ ನಾವು ಏನನ್ನು ಕೊಟ್ಟರೂ ಭಗವಂತ ಅದನ್ನು ಅನಂತಮಡಿ ಮಾಡಿ ಸ್ವೀಕರಿಸುತ್ತಾನೆ.  ಒಂದೇ ಒಂದು ಉದ್ಧರಣೆ ನೀರನ್ನು ಸಮರ್ಪಿಸಿದರೂ ಕೂಡ ಅದನ್ನೇ ಮಹಾನೈವೇದ್ಯವೆಂದು ಸ್ವೀಕರಿಸಿ ಸಲಹುತ್ತಾನೆ. 


ಭಗವದ್ಗೀತೆಯಲ್ಲಿ ಶ್ರೀಕೃಷ್ಣನು :

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ |
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ || -  ಯಾವ ಭಕ್ತನು ಪತ್ರ, ಪುಷ್ಪ, ಫಲ, ಜಲ ಇತ್ಯಾದಿಗಳನ್ನು ಭಕ್ತಿಯಿಂದ ನನಗೆ ಸಮರ್ಪಿಸುತ್ತಾನೋ, ಆ ಶುದ್ಧ ಬುದ್ಧಿಯುಳ್ಳ ನಿಷ್ಮಾಮ ಪ್ರೇಮೀ ಭಕ್ತನು ಭಕ್ತಿಯಿಂದ ಅರ್ಪಿಸಿದ ಆ ಪತ್ರ ಪುಷ್ಪಾದಿಗಳನ್ನು ನಾನು ಸಗುಣರೂಪದಿಂದ ಪ್ರಕಟನಾಗಿ ಪ್ರೀತಿಯಿಂದ ತಿಂದುಬಿಡುವೆನೆಂದಿದ್ದಾನೆ.

ಅನನ್ಯ ಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ |

ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ || - ಯಾರು ಅನನ್ಯ ಚಿತ್ತನಾಗಿ ನನ್ನನ್ನು ಸದಾಕಾಲ ಸ್ಮರಿಸುತ್ತಾ ನಿತ್ಯ  ನಿರಂತರ ಧ್ಯಾನಿಸುವರೋ ಅವರಿಗೆ ನಾನು ಸುಲಭವಾಗಿ ಪ್ರಾಪ್ತವಾಗುತ್ತೇನೆ ಎಂದಿದ್ದಾನೆ. ಪ್ರತಿಯೊಂದು ರೀತಿಯ ಅಪರಾಧಗಳಿಗೂ ಒಂದು ಪ್ರಾಯಶ್ಚಿತ್ತವಿದೆ.  ನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ, ಭಗವದ್ಗೀತೆಯ ಒಂದು ಅಧ್ಯಾಯ ಪಠಣ ಮಾಡುತ್ತೇವೆ.  "ಮಂತ್ರಹೀನಂ, ಕ್ರಿಯಾಹೀನಂ, ಭಕ್ತಿಹೀನಂ ರಮಾಪತೇ | ಯತ್ಕೃತಂ ತು ಮಯಾ ದೇವ ಪರಿಪೂರ್ಣಂ ತದಸ್ತು ಮೇ" ಎಂದು ನಾವು ಮಾಡಿದ ಮಂತ್ರಲೋಪ, ವರ್ಣಲೋಪ ದೋಷಗಳನ್ನು ಸರಿಪಡಿಸೆಂದು ಕೋರುತ್ತಾ, "ಅಚ್ಯುತ, ಅನಂತ, ಗೋವಿಂದ" ನಾಮತ್ರಯ ಸ್ಮರಣೆ ಮಾಡುವುದು ನಮ್ಮ ಶತಾಪರಾಧಗಳಿಗೆ ಪ್ರಾಯಶ್ಚಿತ್ತವಾಗುತ್ತದೆ.  ನಾಮಸ್ಮರಣೆ ಅತ್ಯಂತ ಶ್ರೇಷ್ಠ ಹಾಗೂ ಸಾಮರ್ಥ್ಯವುಳ್ಳದ್ದು.  ದೇವತೆಗಳೂ ಕೂಡ ಕೆಲವೊಮ್ಮೆ ಅಸುರಾವೇಶದಿಂದ ಅಪರಾಧ ಮಾಡುತ್ತಾರೆ.  ಕೃಷ್ಣನನ್ನು ವಿರೋಧಿಸಿ  ಇಂದ್ರದೇವ ಅಪರಾಧ ಮಾಡಿದ ಆದರೆ ಗೋವರ್ಧನೋದ್ಧಾರನಾದ ಭಗವಂತನನ್ನು ಕಂಡು ಪಶ್ಚಾತ್ತಾಪದಿಂದ ನಾಮ ಸ್ಮರಣೆ ಮಾಡಿ, ಭಗವಂತನನ್ನು ಒಲಿಸಿಕೊಂಡು, ಅಪರಾಧದಿಂದ ಮುಕ್ತನಾದ.  ಜೊತೆಗೇ ತನ್ನ ಮಗನಾದ ಅರ್ಜುನನನ್ನು ಸದಾ ಕಾಪಾಡುವ ವರವನ್ನೂ ಪಡೆದುಕೊಂಡ.  ಜಗನ್ನಾಥ ದಾಸರು ತಮ್ಮ "ಇದು ನಿನಗೆ ಧರ್ಮವೇ ಇಂದಿರೇಶ" ಎಂಬ ಕೃತಿಯಲ್ಲಿ ಶರಣಾಗತ ರಕ್ಷಕನಾದ ನೀನು  ಕ್ಷಣಕನಂತಪರಾಧವೆಣಿಸದೆ ನನ್ನ ಬಿನ್ನಹ ಸ್ವೀಕರಿಸಿ ಉದ್ಧರಿಸು ಎಂದಿದ್ದಾರೆ.  "ನಿನ್ನ ಪೋಲುವ ಕರುಣಿಗಳನಾರ ಕಾಣೆ ಪ್ರಪನ್ನ ತಾ ಪಾಪಹರನೇ" ಎಂಬ ಕೃತಿಯಲ್ಲಿ "ಸದ್ಧರ್ಮ ತೊರೆದು ಮರೆದು" ಬಿದ್ದಿರುವ ಎನ್ನಪರಾಧಗಳ ಎಣಿಸದಿರು ಅಜಭವಶರಣ್ಯ ಪರಿಪೂರ್ಣೇಂದಿರಾಗಾರ ಎಂದು ಬೇಡಿದ್ದಾರೆ.  ಕರುಣಾಳುಗಳಿಗೇ ದೊರೆಯಾದ ಭಗವಂತನನ್ನು ಸದಾ "ಸ್ಮರಿಸು ಸಂತತ ಹರಿಯನು ಮನವೇ" ಎನ್ನುತ್ತಾ ಅಂತರಂಗಕ್ಕೆ ತಾನು ಮಾಡಬೇಕಾಗಿರುವ ಒಂದೇ ಒಂದು ಕೆಲಸವನ್ನು ನೆನಪು ಮಾಡಿಕೊಟ್ಟಿದ್ದಾರೆ.  ಹೀಗೆ ಸದಾ ಸ್ಮರಿಸುತ್ತಿರುವ ಭಕ್ತರನ್ನು ಅಪರಾಧಗಳೆಣಿಸದಲೇ ಪೊರೆಯುವವನೇ ಪರಮ ಕರುಣಾಳು ಶ್ರೀಹರಿ.  ಸದಾ ಮಾಡುವ ಸ್ಮರಣೆಯಿಂದ ಭಗವಂತನಿಗೇನೂ ಆಗಬೇಕಿಲ್ಲ, ಆದರೆ ಸ್ಮರಿಸುವ ಭಕ್ತರು ಮಾತ್ರ ಸದಾ ಆನಂದದಿಂದಿರುವ ಉತ್ತಮ ಅವಕಾಶ ಪಡೆದುಕೊಳ್ಳುತ್ತಾರೆ.

ಸಕಲೇಷ್ಟಪ್ರದಾಯಕ - ಸಕಲ ಇಷ್ಟಾರ್ಥಗಳನ್ನೂ ಕರುಣಿಸುವವನು.  ಭಕ್ತರು ತನ್ನನ್ನು ಮರೆತು ಸ್ಮರಿಸದೇ ಇದ್ದಾಗ ಕೂಡ ಭಗವಂತ ಅವರ ಮೇಲಿನ ಕರುಣೆಯಿಂದಲೇ, ಪ್ರೇಮದಿಂದಲೇ ಅವರ ಅಪರಾಧಕ್ಕೆ ಸಿಟ್ಟಾಗುತ್ತಾನೆ.  ಆದರೆ ತನ್ನ ಭಕ್ತರನ್ನೆಂದಿಗೂ ಕೈಬಿಡುವುದಿಲ್ಲ.  ಅವರನ್ನು ಶಿಕ್ಷಿಸಿ, ಸರಿದಾರಿಗೆ ತರುತ್ತಾನೆ.  ಮಕ್ಕಳು ತಪ್ಪು ಮಾಡಿದಾಗ ಕೆಲವೊಮ್ಮೆ ತಾಯಿಯಿಂದ ಪೆಟ್ಟು ತಿನ್ನುತ್ತವೆ.  ಆದರೆ ಪೆಟ್ಟು ತಿಂದು ಅಳಲು ಪ್ರಾರಂಭಿಸಿದ ಮಗುವನ್ನು ತಾಯಿ ಎದೆಗವಚಿಕೊಂಡು ಮುದ್ದಿಸುತ್ತಾಳೆ.  ಹಾಗೇ ಭಕ್ತರು ಕೂಡ ತಾವು ಮಾಡಿದ ಅಪರಾಧದಿಂದ ಪಶ್ಚಾತ್ತಾಪಗೊಂಡು, ಶರಣಾಗತರಾಗಿ ಸ್ಮರಿಸಿದಾಗ ಅತಿಶಯವಾದ ಅಕ್ಕರೆಯಿಂದ ಅವರು ಬೇಡಿದ ಎಲ್ಲಾ ಇಷ್ಟಾರ್ಥಗಳನ್ನೂ ಕೊಟ್ಟು ’ಸಕಲೇಷ್ಟಪ್ರದಾಯಕ’ನಾಗುತ್ತಾನೆ.  


ಮರಳಿ ತನಗರ್ಪಿಸಲು - ನಮದೆನ್ನುವುದೇನೂ ಇಲ್ಲ ಎಲ್ಲವೂ ಭಗವಂತನದೇ, ಎಲ್ಲಕ್ಕೂ ಒಡೆಯನು ಅವನೇ.  ಹಾಗೆ ಅವನು ನಮಗೆ, ನಮ್ಮ ಸುಖಕ್ಕೆ ಕೊಟ್ಟಿರುವುದನ್ನೇ ನಾವು ಮರಳಿ ಅವನಿಗರ್ಪಿಸಿದರೆ ಅವನು ತನ್ನದೇ ವಸ್ತುವನ್ನು ತನಗೇ ಮರಳಿ ಕೊಟ್ಟಿದ್ದಾರೆಂದು ನಮ್ಮ ಅಪರಾಧವನ್ನು ಸ್ಮರಿಸುವುದಿಲ್ಲ.  ತನಗೆ ಶುದ್ಧ ಭಕ್ತಿಯಿಂದ ಸಮರ್ಪಿಸಿದಾಗ ಅದನ್ನು ಸ್ವೀಕರಿಸಿ, ನಮಗೆ ಸಕಲ ಇಷ್ಟಾರ್ಥಗಳನ್ನೂ ಕೊಡುತ್ತಾನೆ.  ಭಗವಂತನಿಂದ ಪಡೆದುದನ್ನೇ ನಾವು ಮರಳಿ ಅವನಿಗೆ ಸಮರ್ಪಿಸುವುದೇ ಮೋಕ್ಷ ಸಾಧನೆಯಾಗುತ್ತದೆ.  ನಾವೆಷ್ಟೇ ಅಲ್ಪವಾದುದನ್ನು ಕೊಟ್ಟರೂ ಅವನೆಂದೂ ಅದನ್ನು ಉಪೇಕ್ಷೆ ಮಾಡುವುದಿಲ್ಲ.  ಶುದ್ಧ ಭಕ್ತಿಯಿಂದಾದ ಸಮರ್ಪಣೆಯನ್ನು ಸ್ವೀಕರಿಸಿ ಅದನ್ನು ಅನಂತಮಡಿ ಮಾಡಿ ಮತ್ತೆ ನಮಗೇ ಮರಳಿಸುತ್ತಾನೆ.   


ಪರಿಪರಿಯಲುಂಡುಣಿಸಿ ಸುಖಸಾಗರದಿ ಲೋಲಾಡಿಸುವ - ತಾನೇ ಕೊಟ್ಟದ್ದನ್ನು ತನಗೇ ಮರಳಿ ಸಮರ್ಪಣೆ ಮಾಡಿದಾಗ ಅತ್ಯಂತ ಸಂತೋಷದಿಂದ ಸ್ವೀಕರಿಸುತ್ತಾನೆ.  ಬಿಂಬರೂಪಿಯಾದ ಭಗವಂತ ತಾನು ಮೊದಲು ಉಂಡು ಪ್ರತಿಬಿಂಬರೂಪಿಗಳಾದ ನಮಗೆ ಉಣಿಸುತ್ತಾನೆ.    ಅಸ್ವತಂತ್ರ ಜೀವಿಗಳು ಸ್ವತಃ ಏನನ್ನೂ ಮಾಡಲಾರೆವಾದ್ದರಿಂದ ಭಗವಂತ ತಾನು ಉಂಡು, ನಮಗೆ ಉಣಿಸುತ್ತಾನೆ.   ನಮ್ಮನ್ನು ಸುಖ ಸಾಗರದಿ ಓಲಾಡುಸುತ್ತಾನೆ.  ಪ್ರತೀ ಜೀವಿಗೂ ಅವರವರ ಯೋಗ್ಯತಾನುಸಾರ ಸುಖ, ಭೋಗಗಳನ್ನು ಕೊಟ್ಟರೂ, ತಮಗೆ ಲಭ್ಯವಿದ್ದಷ್ಟರಿಂದಲೇ ಜೀವಿಗಳು ಪೂರ್ಣ ಸುಖದ ಅನುಭವ ಪಡೆಯುತ್ತಾರೆ.  ಮಾಡಿದ ಅಪರಾಧಗಳನ್ನು ಅರಿತು ಪಶ್ಚಾತ್ತಾಪದಿಂದ ನೊಂದ ಭಕ್ತರ ಸಮರ್ಪಿಸಿದ್ದನ್ನು ಸ್ವೀಕರಿಸಿ ಅವರಿಗೆ ಸಂತೋಷವಿತ್ತು ಸುಖ ಸಾಗರದಲ್ಲಿ ತೇಲಾಡಿಸುತ್ತಾನೆ.


ಮಂಗಳಚರಿತ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ - ಮಂಗಳಚರಿತನೆಂದರೆ ಶುಭಕರ, ಮಂಗಳವನ್ನುಂಟುಮಾಡುವವನು.  ಚಿನ್ಮಯಗಾತ್ರನೆಂದರೆ ಆನಂದ ಸ್ವರೂಪನಾದ ಲಕ್ಷ್ಮಿಯ ರಕ್ಷಕನು.  ಲೋಕಪವಿತ್ರನೆಂದರೆ  ಅಪವಿತ್ರವಾದ, ದೋಷಪೂರಿತವಾದ ಲಿಂಗ ದೇಹವನ್ನು ಭಂಗಗೊಳಿಸಿ ಸಕಲ ಜೀವರನ್ನೂ ಪವಿತ್ರವಾಗಿಸುವವನು.  ಮಾಡಿದ ಅಪರಾಧಗಳಿಗೆ ಪಶ್ಚಾತ್ತಾಪಪಟ್ಟ ಪ್ರತಿ ಜೀವಿಗೂ ಅವರ ಪಾಪಗಳನ್ನು ಕಳೆದು ಕರುಣೆಯಿಂದ ಪವಿತ್ರರನ್ನಾಗಿಸುವವನು.  ಸುಚರಿತ್ರನೆಂದರೆ ಒಳ್ಳೆಯ ಚರಿತ್ರೆಯುಳ್ಳವನು ಮತ್ತು ಸಜ್ಜನರನ್ನು ರಕ್ಷಿಸುವವನು.  ತನ್ನಲ್ಲೇ ಸಕಲವನ್ನೂ ಸಮಸ್ತವನ್ನೂ ಸಮರ್ಪಣೆ ಮಾಡಿರುವ ಭಕ್ತರನ್ನು ಭಗವಂತ ಮಿತ್ರನಾಗಿ, ಸಖನಾಗಿ ಸದಾಕಾಲವೂ ಕರುಣೆಯಿಂದ ಕಾಪಾಡುತ್ತಾನೆ.


ಶ್ರೀ ಜಗನ್ನಾಥ ದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ


ನಡೆನುಡಿಗಳಪರಾಧ ಒಡೆಯ ನೀನೆಣಿಸಿದರೆ

ಬಡವ ನಾನೆಂತು ಬದುಕ-ಲೋ | ಬದುಕಲೋ ಕರುಣಾಳು
ಕಡೆಬೀಳ್ವದೆಂತೋ ಭವದಿಂದ || -  ಕರುಣಾಳುವಾದ ಭಗವಂತ, ಜಗದೊಡೆಯನಾದ ನೀನು ನನ್ನ ನಡೆ ನುಡಿಗಳಲ್ಲಿರುವ ಅಪರಾಧಗಳನ್ನು ಎಣಿಸಲಾರಂಭಿಸಿದರೆ ದೀನನೂ ಮತ್ತು ಬಡವನೂ ಆದ ನಾನು ಬದುಕುವುದೇ ಸಾಧ್ಯವಿಲ್ಲ. 

ಕೃಪಣವತ್ಸಲನೆ ಎನ್ನಪರಾಧಗಳ ನೋಡೆ

ಕುಪಿತನಾಗುವುದೆ ಕಮಲಾಕ್ಷ | ಕಮಲಾಕ್ಷ ನೀನೆನಗೆ
ಉಪಕಾರಿ ಎಂದು ಸ್ಮರಿಸುವೆ || - ದೀನಬಂಧುವಾದ ಭಗವಂತನೇ ನನ್ನ ಅಪರಾಧಗಳಿಗೆ ನೀನು ಕುಪಿತನಾಗುವುದು ಸರಿಯೇ ? ನೀನು ನನಗೆ ಅನಿಮಿತ್ತ ಉಪಕಾರಿಯೆಂದು ನಿನ್ನನ್ನು ನಾನು ಸದಾ ಸ್ಮರಿಸುವೆ, ಉದ್ಧರಿಸು.

ಎನಗೆ ನಿನ್ನಲಿ ಭಕುತಿ ಇನಿತಿಲ್ಲದಿದ್ದರೂ

ಅನಿಮಿತ್ತ ಬಂಧು ಸಲಹುವಿ | ಸಲಹುವಿ ಸರ್ವದಾ
ಎಣೆಗಾಣೆ ನಿನ್ನ ಕರುಣಕ್ಕೆ || - ಮಾಡುವ ಪ್ರತೀ ಕರ್ಮಕ್ಕೂ ಪ್ರತ್ಯುಪಕಾರ ಬಯಸುವ ಲೌಕಿಕ ಭಾವಗಳಂತಲ್ಲ ನೀನು.  ನಿಮಿತ್ತವೇ ಇಲ್ಲದೆ ಉಪಕಾರ ಮಾಡುವ, ಕರುಣೆ ತೋರುವ, ರಕ್ಷಿಸುವ, ಸದಾ ಸಲಹುವ  ಆತ್ಮಬಂಧು.  ಸರ್ವದಾ, ಸರ್ವ ದೇಹಗಳಲ್ಲೂ, ಸರ್ವ ದೇಶಗಳಲ್ಲೂ, ಸರ್ವ ಕಾಲಗಳಲ್ಲೂ ನನ್ನನ್ನು ಪೊರೆಯುವ ನಿನ್ನ ಕಾರುಣ್ಯಕ್ಕೆ ಸಮನಾದದ್ದು ಬೇರೊಂದು ಇಲ್ಲವೇ ಇಲ್ಲ.  ದಯಾಮೂರ್ತಿಯೇ ನನ್ನನ್ನು ಸಲಹು.

ನಿತ್ಯವೂ ಜೀವಿಗಳು "ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ" ಎಂದು ಪ್ರಾರ್ಥಿಸುತ್ತೇವೆ.  ಭಗವಂತ ಗೀತೆಯಲ್ಲಿ "ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ" ಎನ್ನುತ್ತಾ ತಾನು ಸದಾ ಭಕ್ತರನ್ನು ರಕ್ಷಿಸುವೆನೆಂದು ತಿಳಿಸಿದ್ದಾನೆ.


ಡಿವಿಜಿಯವರು ಕಗ್ಗದಲ್ಲಿ "ಪರದೈವವನು ತೊರೆಯೆ ಗತಿ ನರನಿಗಿಲ್ಲ" ಎನ್ನುತ್ತಾ "ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ"  ಎಂದಿದ್ದಾರೆ -  ಜೀವಿಗಳಿಗೆ ಭಗವಂತನೇ ಸರ್ವಸ್ವ, ಬಿಂಬರೂಪಿಯಾದ ಅವನ ಸ್ಮರಣೆ ಬಿಟ್ಟರೆ ಬೇರೆ ಗತಿಯಿಲ್ಲ.


ದಂಡನಿರ್ಣಯದಿ  ನೀಂ ಕ್ಷಮಿಸೆನಲ್ ನ್ಯಾಯಪತಿ |

ಹಿಂದಿನಾ ನಿನ್ನೊಳ್ತನವನ್ ಅಂದಿನಳಲನ್ ||
ತಂದೆಬಗೆಯಿಂ ಬಗೆದು ಶಾಸನೋಗ್ರವನಿನಿತು |
ಕುಂದಿಸಲಿಕಾಗದೇಂ ? - ಮಂಕುತಿಮ್ಮ || - ಅಪರಾಧಿಯು ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ತನ್ನನ್ನು ಕ್ಷಮಿಸೆಂದು ಬೇಡಿದರೆ, ನ್ಯಾಯಾಧೀಶರು ಅಪರಾಧಿಯ ಹಿಂದಿನ ಒಳ್ಳೆಯ ನಡವಳಿಕೆಯನ್ನೂ, ಅಪರಾಧ ಮಾಡಿದ ಸನ್ನಿವೇಶ-ಸಂದರ್ಭವನ್ನೂ ಅವಲೋಕಿಸಿ ಶಿಕ್ಷೆಯನ್ನು ಸ್ವಲ್ಪವಾದರೂ ಕಡಿಮೆ ಮಾಡುವುದಿಲ್ಲವೇ, ಹಾಗೇ ಭಗವಂತನೂ ಕೂಡ ಪಶ್ಚಾತ್ತಾಪದಿಂದ ಬೇಡಿಕೊಂಡ ಭಕ್ತರ ಅಪರಾಧಗಳನ್ನು ಸ್ಮರಿಸದೆ, ರಕ್ಷಿಸುತ್ತಾನೆ.  ಮಗು ಸಚ್ಚಾರಿತ್ರನಾಗಲಿ ಎಂಬ ಆಸೆಯಿಂದ ಹೇಗೆ ತಂದೆಯು ಮಗುವನ್ನು ಶಿಕ್ಷಿಸುತ್ತಾನೋ, ಹಾಗೇ ಭಗವಂತ ಕೂಡ.

ತಕ್ಕಡಿಯ ದೈವ ಪಿಡಿದದರೊಂದು ತಟ್ಟೆಯಲಿ |

ಒಕ್ಕುವುದು ಬಿಡದೆ ಜೀವಿಯ ಪಾಪಚಯವ ||
ಇಕ್ಕುವುದು ಸುಕೃತಗಳನಿನ್ನೊಂದರೊಳಗಲ್ಲಿ |
ಭಕ್ತಿ ಪಶ್ಚಾತ್ತಾಪ - ಮಂಕುತಿಮ್ಮ || - ಭಗವಂತ ನ್ಯಾಯ ನಿರ್ಣಯ ಮಾಡಲು ತಕ್ಕಡಿ ಹಿಡಿದಿರುವನಂತೆ.  ಒಂದು ತಟ್ಟೆಯಲ್ಲಿ ಜೀವಿಯ ಮಾಡಿರುವ ಅಪರಾಧಗಳನ್ನೂ, ಪಾಪಗಳನ್ನೂ  ಮತ್ತೊಂದು ತಟ್ಟೆಯಲ್ಲಿ ಜೀವಿಯು ಮಾಡಿರುವ ಒಳ್ಳೆಯ ಕೆಲಸಗಳನ್ನೂ, ಪುಣ್ಯರಾಶಿಯನ್ನೂ ಇಡುವನಂತೆ.  ಪಾಪದ ತಟ್ಟೆ ಭಾರವಾಗಿದ್ದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ.  ಶಿಕ್ಷೆ ಕಡಿಮೆ ಮಾಡೆಂದು ಬೇಡಿದರೂ ಕೂಡ ಭಗವಂತ ಕರಗುವುದಿಲ್ಲ.  ಆದರೆ ತಾನು ಮಾಡಿದ ಪಾಪಗಳಿಗಾಗಿಯೂ, ಅಪರಾಧಗಳಿಗಾಗಿಯೂ ಜೀವಿ ಪಶ್ಚಾತ್ತಾಪ ಪಟ್ಟಾಗ ಮಾತ್ರ ಭಗವಂತ ಅಪರಾಧಗಳನ್ನು ಸ್ಮರಿಸದೆ ಕಾಪಾಡುತ್ತಾನೆ.

ಪ್ರಾರಬ್ಧದಲಿ ನಿನ್ನ ಪುಣ್ಯವಿನಿತಾನುಮಿರೆ |

ಸೇರೆ ಪಶ್ಚಾತ್ತಾಪ ಭಾರವದರೊಡನೆ ||
ದಾರುಣದ ಕರ್ಮನಿಯತಿಯನಿನಿತು ಶಿಥಿಲಿಪುದು |
ಕಾರುಣ್ಯದಿಂ ದೈವ - ಮಂಕುತಿಮ್ಮ || - ಜೀವಿಯು ಅನುಭವಿಸುತ್ತಿರುವ ಪ್ರಾರಬ್ಧ ಕರ್ಮದಲ್ಲಿ ಕಿಂಚಿತ್ತೇನಾದರೂ ಪುಣ್ಯವು ಇದ್ದರೆ, ಅದರ ಜೊತೆಗೆ ತಾನು ಮಾಡಿದ ಅಪರಾಧಗಳಿಗೆಲ್ಲಾ ಪಶ್ಚಾತ್ತಾಪ ಪಟ್ಟರೆ ಅನುಭವಿಸಬೇಕಾದ ಉಗ್ರ ಶಿಕ್ಷೆ ಸ್ವಲ್ಪ ಕಡಿಮೆಯಾಗುತ್ತದೆ.  ಇದು ಬೇರೆ ಏನೂ ಅಲ್ಲ, ಭಗವಂತನ ಕಾರುಣ್ಯ ಅಷ್ಟೆ ಎಂದಿದ್ದಾರೆ.



 ಚಿತ್ರಕೃಪೆ : ಅಂತರ್ಜಾಲ

Wednesday, January 15, 2014

ಕರುಣಾ ಸಂಧಿ - ೧೪ ನೇ ಪದ್ಯ

ಬಾಲಕನ ಕಲಭಾಷೆ ಜನನಿಯು
ಕೇಳಿ ಸುಖಪಡುವಂತೆ ಲಕುಮೀ
ಲೋಲ ಭಕುತರು ಮಾಡುತಿಹ 
ಸಂಸ್ತುತಿಗೆ ಹಿಗ್ಗುವನು |
ತಾಳ ತನ್ನವರಲ್ಲಿ ಮಾಡುವ
ಹೇಳನವ ಹೆದ್ದೈವ ವಿದುರನ
ಆಲಯದಿ ಪಾಲುಂಡು ಕುರುಪನ 
ಮಾನವನೆ ಕೊಂಡ ||೧೪||
ಪ್ರತಿಪದಾರ್ಥ : ಬಾಲಕನ ಕಲಭಾಷೆ - ಮುದ್ದು ಮಗುವಿನ ಅಸ್ಪಷ್ಟ ತೊದಲು ನುಡಿಗಳನ್ನು, ಜನನಿಯು ಕೇಳಿ ಸುಖ ಪಡುವಂತೆ - ತಾಯಿಯು ಮಗುವಿನ ಇಂಪಾದ ತೊದಲು ನುಡಿಗಳನ್ನು ಕೇಳಿ ಆನಂದದಿಂದ ಸುಖ ಪಡುವಂತೆ, ಲಕುಮೀ ಲೋಲ - ಲಕ್ಷ್ಮೀಪತಿಯಾದ ಶ್ರೀಹರಿಯು, ಭಕುತರು ಮಾಡುತಿಹ - ತನ್ನ ಭಕ್ತರು ತನ್ನನ್ನು ಆರಾಧಿಸುತ್ತಾ ತನ್ನ ಗುಣಗಳನ್ನು, ಸ್ತುತಿಸುವಂತೆ - ಹೊಗಳಿ ಸ್ತುತಿಸುವುದನ್ನು ಕೇಳಿ, ಹಿಗ್ಗುವನು - ಅತ್ಯಂತ ಪ್ರಸನ್ನನಾಗುವನು, ತಾಳ ತನ್ನವರಲ್ಲಿ ಮಾಡುವ ಹೇಳನವ - ತನ್ನ ಭಕ್ತರ ಬಗ್ಗೆ ಬೇರೆಯವರು ಮಾಡುವ ಅವಮಾನವನ್ನು ನಿಂದನೆಯನ್ನು ಭಗವಂತನು ಸಹಿಸಲಾರನು, ಹೆದ್ದೈವ - ಎಲ್ಲರಿಗೂ ಹಿಯಿಯವನಾದ ಸರ್ವೋತ್ತಮನಾದ ಭಗವಂತನು, ವಿದುರನ ಆಲಯದಿ - ವಿದುರನೆಂಬ ಪ್ರೀತಿಯ ಭಕ್ತನ ಮನೆಯಲ್ಲಿ, ಪಾಲುಂಡು - ಹಾಲು ಕುಡಿದು ಆತಿಥ್ಯ ಸ್ವೀಕರಿಸಿ, ಕುರುಪನ - ಕುರು ಕುಲಾಧಿಪತಿಯಾದ ದುರ್ಯೋಧನನ, ಮಾನವನೆ ಕೊಂಡ - ದುರ್ಯೋಧನನ ಆಹ್ವಾನ ತಿರಸ್ಕರಿಸಿ ಅವನ ಅವಮಾನಕ್ಕೆ ಕಾರಣನಾಗಿ ಕೊನೆಗೆ ಅವನ ಸರ್ವನಾಶಕ್ಕೂ ಕಾರಣನಾದನು.

ಪುಟ್ಟ ಮಗುವಿನ ತಪ್ಪು / ತೊದಲು ಮಾತು ಕೇಳಿ ತಾಯಿ ಆನಂದ ಪಡುವಂತೆ, ಭಗವಂತ ಭಕ್ತರ ತಪ್ಪುಗಳನ್ನೆಲ್ಲಾ ಕ್ಷಮಿಸಿ, ಭಕ್ತರು ತೋರುವ ಅಲ್ಪ ಭಕ್ತಿಗೆ ಕರುಣೆ ತೋರಿಸುತ್ತಾನೆ.  ’ಬಾಲ ಕ’ ಎಂದರೆ ಕ - ಬ್ರಹ್ಮದೇವ, ಬಾಲ - ಪರಮಾತ್ಮನ ಮಗ, ಸತತವಾಗಿ ಹಿಂಬಾಲಿಸುವವನು.  ಬ್ರಹ್ಮದೇವ ಭಗವಂತನ ಮಗ ಹಾಗೂ ಸತತ ಹಿಂಬಾಲಕ.  ಬ್ರಹ್ಮ ದೇವರು ಪುಟ್ಟ ಬಾಲಕ, ಅವರು ತೊದಲುತ್ತಾರೆ, ಅವರ ಈ ತೊದಲು ನುಡಿಯೇ ಜನನಿಯಾದ ಲಕ್ಷ್ಮೀದೇವಿಗೂ ಜನನಿಯಂತಿರುವ ಭಗವಂತನಿಗೂ  ಅತೀ ಪ್ರಿಯವಾಗುವುದು.  ಭಗವಂತ ಲಕ್ಷ್ಮೀದೇವಿಗೆ ಗರ್ಭಧಾರಣೆ ಮಾಡಿಸಿ, ಬ್ರಹ್ಮಾಂಡವನ್ನು ಸೃಷ್ಟಿಸುತ್ತಾನೆ.  ಜೊತೆಗೇ ತಾನು ನೇರವಾಗಿಯೂ ಮತ್ತು ತನ್ನ ಅಂಗಾಂಗಗಳಿಂದಲೂ ಸೃಷ್ಟಿಸುತ್ತಾನೆ,  ಆದ್ದರಿಂದ ಅವನು ಜನನಿಯೂ ಹೌದು ಜನಕನೂ ಹೌದು.  ಅಚಿಂತ್ಯಾದ್ಭುತನಾದ ಪರಮಾತ್ಮ ಜೀವಿಗಳಿಗೆ ಜನನ ಕೊಡುವುದು ಸಾಧನೆಗಾಗಿ, ಸ್ಥಿತಿ ಕೊಡುವುದು ಸಾಧನೆಯನ್ನು ಬೆಳೆಸಿಕೊಳ್ಳುವುದಕ್ಕಾಗಿ ಮತ್ತು ಸಾವನ್ನು ಕೊಡುವುದು ಝರ್ಝರಿತವಾದ ದೇಹ ಕಳಚಿ ಹೊಸ ದೇಹವನ್ನು ಕೊಡುವುದಕ್ಕೋಸ್ಕರ.  ಹೀಗೆ ಸಾಧನೆಯನ್ನು ಸತತವಾಗಿ ಮುಂದುವರೆಯುವಂತೆ ಮಾಡುವವನು, ಜನನಿಯೂ ಜನಕನೂ ಆದ ಭಗವಂತನು.  ಸಾಧನೆಯಿಲ್ಲದೇ ಫಲವಿಲ್ಲ.  ಜೀವಿಗಳು ಏನನ್ನು ಮಾಡಿದರೂ, ಮಾಡುವಾಗ ಲಕ್ಷ್ಮೀನಾರಾಯಣ ’ಪ್ರೇರಣಯ’ ಎಂದು ಹೇಳಿಕೊಂಡು ಮಾಡಬೇಕು.  "ನ ಹಂ ಕರ್ತಾ ಹರಿಃ ಕರ್ತ" ಎನ್ನುವ ಅರಿವು ಸದಾ ಜಾಗೃತವಾಗಿರಬೇಕು. 

ಪ್ರಳಯ ಕಾಲದಲ್ಲಿ ವಟಪತ್ರಶಾಯಿಯಾಗಿ ಮಗುವಾಗಿ ಮಲಗಿದಾಗ ಲಕ್ಷ್ಮೀದೇವಿ ತಾಯಿಯಾಗಿಯೂ ಲಾಲಿಸುತ್ತಾಳೆ.  ಹಾಗೇ ಸೃಷ್ಟಿ ಕಾರ್ಯ ಮಾಡೆಂದು ವೇದಗಳಿಂದ ಸ್ತುತಿಸುತ್ತಾ, ಜೀವರುಗಳಿಗೆ ಮೋಕ್ಷ ಕೊಡಲೇಳೆಂದು ಎಬ್ಬಿಸುವಳು.   ಬ್ರಹ್ಮ ದೇವನ ತೊದಲು ನುಡಿಯು ನಿಜ ಅರ್ಥದಲ್ಲಿ ಭಗವಂತನ ಸಂಸ್ತುತಿಯೇ ಆಗಿದೆ.  ಹಾಗೆ ನಾವು ಕೂಡ ಪರಮಾತ್ಮನ ಸ್ಮರಣೆ ಮಾಡುವಾಗ ನಮ್ಮ ತನು ಮನವೆಲ್ಲವೂ ಅದೇ ಭಾವದಲ್ಲಿ ಲೀನವಾಗಿಟ್ಟುಕೊಂಡು, ನಮ್ಮ ಪ್ರಾರ್ಥನೆಯನ್ನು ಸಂಸ್ತುತಿಯಾಗಿಸಬೇಕು.   ಭಕ್ತಿಯಿಲ್ಲದೇ ಮಾಡುವ ಆರಾಧನೆಯಿಂದಾಗಿ ಯಾವ ಫಲವೂ ಸಿಕ್ಕುವುದಿಲ್ಲ.  ಸಂಸ್ತುತಿ ಎಂದರೆ, ಭಕ್ತಿಯಿಂದ ಆರಾಧಿಸುವುದು.   ಭಗವಂತನ ಮುಂದೆ ಕುಳಿತಾಗ ಎಂದಿಗೂ ದುಖಃದಿಂದ ಕಣ್ಣೀರು ಸುರಿಸಬಾರದು.  ಭಗವಂತನ ಪಾದದಲ್ಲಿ ಮನಸ್ಸನ್ನು ನೆಲೆಗೊಳಿಸಿ, ಒಳಗಿನಿಂದ ಬರುವ ಸಾತ್ವಿಕ ತರಂಗಗಳಿಂದ, ಆನಂದ ಭಾಷ್ಪ ಸುರಿಸಬೇಕು.  ಭಗವಂತನ ಸ್ಮರಣೆ ಮಾಡುವಾಗಲೂ, ಸ್ತುತಿಸುವಾಗಲೂ ಶುದ್ಧವಾಗಿಯೂ, ಸ್ಪಷ್ಟವಾಗಿಯೂ ಇದ್ದು, ಶಕ್ತಿ ಮತ್ತು ಜ್ಞಾನವನ್ನು ಕೊಡುಯೆಂದು ಪ್ರಾರ್ಥಿಸಿಕೊಳ್ಳಬೇಕು.  ಏನೇನೋ ಕ್ಷುಲ್ಲಕ ಕಾರಣಗಳನ್ನು ನಮಗೆ ನಾವೇ ಕೊಟ್ಟುಕೊಳ್ಳುತ್ತಾ, ಭಗವದಾರಾಧನೆಯನ್ನು ತಪ್ಪಿಸಬಾರದು.  ಪೂಜೆಯ ಸಮಯದಲ್ಲಿ ಕೂಡ, ನಮ್ಮದೇ ಭೌತಿಕ ಕಾರಣಗಳಿಂದ ಭಗವಂತನ ಸ್ಮರಣೆ / ಸ್ತೋತ್ರದಲ್ಲಿ ತಪ್ಪು ಮತ್ತು ತೊದಲು ನುಡಿಗಳು ಇರಬಾರದು. 


ಬಾಲಕನ ಕಲಭಾಷೆ ಜನನಿಯು ಕೇಳಿ ಸುಖಪಡುವಂತೆ - ’ಕಲ’ ಎಂದರೆ ಮಂದವಾಗಿ ಅಸ್ಪಷ್ಟವಾಗಿದ್ದರೂ ಕೇಳಲು ಮಧುರವಾದಂತಹ ಧ್ವನಿ ಅಥವಾ ಭಾಷೆಯಾಗಿದೆ.  ಮಗುವಿನ ತೊದಲು ನುಡಿ ಕೇಳುವುದೆಂದರೆ ತಾಯಿಗೆ ಅಪರಿಮಿತ ಸಂತೋಷವಿರುತ್ತದೆ.  ಹಾಗೇ ತನ್ನ ಭಕ್ತರು ನುಡಿವ ಅಸ್ಪಷ್ಟವಾದ ತೊದಲು ನುಡಿಗಳ ಸ್ತುತಿಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿ ಭಗವಂತನು ಹಿಗ್ಗುತ್ತಾನೆ.  ಪುಟ್ಟ ಮಕ್ಕಳ ತೊದಲು ನುಡಿ ಎಂದರೆ ಅದು ಅಸ್ಪಷ್ಟವಾಗಿರುವುದರ ಜೊತೆಗೆ ಅಸಂಬದ್ಧವೂ ಮತ್ತು ಅಶುದ್ಧವೂ ಕೂಡ ಆಗಿರುತ್ತದೆ.  ಹಾಗೇ ತನ್ನ ಭಕ್ತರ ಅಸಂಬದ್ಧ, ಅಶುದ್ಧ ನುಡಿಗಳನ್ನು ಭಗವಂತ ಅಪಾರ ಕರುಣೆಯಿಂದಲೇ ಸ್ವೀಕರಿಸುತ್ತಾನೆ.  ಜನನಿಯಂತೆ ಸುಖಿಸುತ್ತಾ, ತಪ್ಪುಗಳನ್ನು ಎಣಿಸದೆಲೆ, ಸ್ತೋತ್ರ ಮಾಡುವ ಭಾವವನ್ನೂ, ಭಕ್ತಿಯನ್ನೂ ಮಾತ್ರ ಸ್ವೀಕರಿಸಿ, ಭಕ್ತರನ್ನು ಪೊರೆಯುತ್ತಾನೆ.  ಜಗನ್ನಾಥ ದಾಸರು  "ನೀಚನಲ್ಲವೇ ಇವನು ನೀಚನಲ್ಲವೇ"  ಎಂಬ ತಮ್ಮ ಕೃತಿಯಲ್ಲಿ "ಜನನಿ ಜನಕರಂತೆ ಜನಾರ್ದನನು ಸಲಹುತಿರಲು ಬಿಟ್ಟು | ಧನಿಕರ ಮನೆಮನೆಗಳರಸಿ ಶುನಕನಂತೆ ತಿರುಗುವವನು ನೀಚನು ಎಂದಿದ್ದಾರೆ.   ದಾಸರಾಯರು ತಮ್ಮ ನರಸಿಂಹ ಸುಳಾದಿಯಲ್ಲಿ "ಭಗವಂತ ನೀನೆ ದಯಾಳು ಎಂದರಿದು ನಾ ಪೊಗಳಿದೆನೊ, ಯಥಾಮತಿಯೊಳಗೆ ಲೇಶ, ಬಗೆಯದಿರೆನ್ನಪರಾಧ ಕೋಟಿಗಳನು, ಜಗತೀಪತಿ ತನ್ನ ಮಗುವಿನ ತೊದಲು ಮಾತುಗಳನು ಕೇಳಿ ತಾ ನಗುತಲಿ ಕಾಮಿತ ಬಗೆ ಬಗೆಯಿಂದ ಪೂರ್ತಿಸಿ ಮಿಗೆ ಹರುಷದಿ ಬಿಗಿದಪ್ಪಿ ಮೋದಿಪನಲ್ಲದೆ ಶಿಶುವಿನ ತೆಗೆದು ಬಿಸುಟು ಮತ್ತೆ ಹಗೆಗೊಂಬನೇನೋ ತ್ರೈಯುಗನೇ" ಎನ್ನುತ್ತಾ ಭಗವಂತ ಭಕ್ತರನ್ನು ಜನನಿಯಾಗಿಯೂ ಜನಕನಾಗಿಯೂ ಪೊರೆಯುವನೆಂಬುದನ್ನು ತಿಳಿಸುತ್ತಾರೆ.


ಲಕುಮೀಲೋಲ ಹೆದ್ದೈವ - ಲಕ್ಷ್ಮೀಪತಿಯಾದ ಶ್ರೀಹರಿಯು ಸರ್ವ ದೇವಾನು ದೇವತೆಗಳಲ್ಲೂ ಉತ್ತಮನು, ಪರಮ ಪುರುಷನು ಆಗಿದ್ದಾನೆ.  ಅವನೇ ಹಿರಿದಾದ ದೈವ ಮತ್ತು ಹೆದ್ದೈವವು.  ಸಮುದ್ರ ಮಥನದಲ್ಲಿ ಲಕ್ಷ್ಮೀದೇವಿ ಉದಿಸಿದಾಗ ಬೇರೆ ಎಲ್ಲಾ ದೇವತೆಗಳನ್ನೂ ತಿರಸ್ಕರಿಸಿ, ಹರಿ ಸರ್ವೋತ್ತಮನೆಂದು ಅವನಿಗೇ ಒಲಿದಳು, ವರಿಸಿದಳು, ವಂದಿಸಿದಳು.  ಸಮಸ್ತ ಜೀವರಾಶಿಗಳ ಮನದೊಳಗೆ ಮನವಾಗಿ, ಆನಂದಮಯನಾಗಿರುವವನು ಭಗವಂತ.  ಅವನಿಗೆ ಯಾರು ಸ್ತುತಿಸಿದರೂ ಅಥವಾ ಬಿಟ್ಟರೂ ಏನೂ ಆಗಬೇಕಿಲ್ಲ.  ಅವನು ಭಕ್ತರ ಸಂಸ್ತುತಿಯನ್ನು ಆಲಿಸಿ, ಹಿಗ್ಗುವನೆಂದರೆ, ಅದು ನಮ್ಮ ಉದ್ಧಾರಕ್ಕಾಗಿಯೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ.


ತಾಳ ತನ್ನವರಲ್ಲಿ ಮಾಡುವ ಹೇಳನವ - ಭಗವಂತ ತನ್ನ ಭಕ್ತರನ್ನು ತನ್ನ ಮಕ್ಕಳಂತೇ ಪಾಲಿಸುವ, ಪೋಷಿಸುವ, ಪೊರೆಯುವ.  ಭಕ್ತ ಪರಾಧೀನನಾಗಿದ್ದಾನೆ.  ತನ್ನ ಮಗುವಿನಲ್ಲಿ ಅದೆಷ್ಟೇ ದೋಷವಿದ್ದರೂ ಕೂಡ ಬೇರೆಯವರು ಅವಹೇಳನ ಮಾಡಿದಾಗ ತಾಯಿ ಹೇಗೆ ಸಹಿಸುವುದಿಲ್ಲವೋ ಹಾಗೆ ಭಗವಂತ ಕೂಡ ತನ್ನ ಭಕ್ತರನ್ನು ಯಾರಾದರೂ ಅವಮಾನಿಸಿದರೆ, ನೋಯಿಸಿದರೆ, ಅದನ್ನು ಸಹಿಸನು.  ತನ್ನ ಭಕ್ತರನ್ನು ದ್ವೇಷಿಸುವವರನ್ನು ಕಂಡು ಶ್ರೀಹರಿ ಉಗ್ರನಾಗುತ್ತಾನೆ.  ನವವಿಧ ಭಕ್ತಿಯಿರುವಂತೆ, ನವವಿಧ ದ್ವೇಷಗಳಲ್ಲಿ ತನ್ನ ಭಕ್ತರನ್ನು ದ್ವೇಷಿಸುವುದೂ ಒಂದೆಂದು ಪರಿಗಣಿಸಿಬಿಟ್ಟಿದ್ದಾನೆ.  ಪುಟ್ಟ ಬಾಲಕ ಪ್ರಹ್ಲಾದನನ್ನು ದ್ವೇಷಿಸಿದ ತಂದೆ ಹಿರಣ್ಯಕಶಿಪುವನ್ನು ಉಗ್ರವಾಗಿಯೇ ಭಗವಂತ ಶಿಕ್ಷಿಸಿದರೂ ಅದು ಭಗವಂತನ ಕ್ರೋಧವಲ್ಲ, ವಾಸ್ತವವಾಗಿ ಪ್ರಹ್ಲಾದನ ಭಕ್ತಿಗೆ ಒಲಿದ ಕಾರುಣ್ಯವೇ ಆಗಿದೆ.   "ದಾಸರಿಗುಂಟೆ ಭಯ ಶೋಕ ಹರಿ" ಎಂಬ ಕೃತಿಯಲ್ಲಿ "ಏನು ಮಾಡಿದಪರಾಧವ ಕ್ಷಮಿಸುವ | ಏನು ಕೊಟ್ಟುದನು ಕೈಗೊಂಬ | ಏನು ಬೇಡಿದಿಷ್ಟಾರ್ಥವ ಕೊಡುವ | ದಯಾನಿಧಿ ಅನುಪಮನೆಂಬ ಹರಿ" ಎಂದಿದ್ದಾರೆ.


ವಿದುರನ ಆಲಯದಿ ಪಾಲುಂಡ - ಸಂಧಾನಕ್ಕಾಗಿ ಬಂದ ಶ್ರೀಕೃಷ್ಣ ಕೌರವೇಂದ್ರನು ನೀಡಿದ ಭೋಜನದ ಆಮಂತ್ರಣವನ್ನು ತಿರಸ್ಕರಿಸಿ, ವಿದುರನ ಮನೆಗೆ ಹೋಗಿ ಹಾಲು ಕುಡಿದ.  ಇದು ದುರ್ಯೋಧನನಿಗೆ ದೊಡ್ಡ ಅವಮಾನವಾಗಿತ್ತು.  ಶ್ರೀಮದಾಚಾರ್ಯರು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ "ಸಂಪೂಜಿತಃ ಸರ್ವ ಸಮರ್ಪಣೇನ" ಎಂದಿದ್ದಾರೆ.  ಇದರ ಅರ್ಥ ವಿದುರ ಭಗವಂತನಿಗೆ ಬರಿಯ ಹಾಲನ್ನಲ್ಲದೆ, ತನ್ನನ್ನೇ ಸಮರ್ಪಿಸಿಕೊಳ್ಳುತ್ತಾನೆ.  ಕಡುಬಡವನಾದರೂ ವಿದುರ ಹಾಲಿನ ಜೊತೆ ತನ್ನ ಆತ್ಮ ಸಮರ್ಪಣೆ ಮಾಡಿಕೊಂಡಿದ್ದನ್ನು ಶ್ರೀಕೃಷ್ಣ ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ ಉದ್ಧರಿಸುತ್ತಾನೆ.  ದುರ್ಯೋಧನ ರಾಜಾತಿಥ್ಯವನ್ನೇ ನೀಡಬಲ್ಲವನಾಗಿದ್ದರೂ ಭಗವಂತ ಅದನ್ನು ಸ್ವೀಕರಿಸಲಿಲ್ಲ.  ವಿದುರ ಕಡುಬಡವನಾದರೂ ತನ್ನಲ್ಲಿದ್ದ ಎಲ್ಲವನ್ನೂ, ಜೊತೆಗೆ ತನ್ನನ್ನೂ ಭಗವಂತನಿಗೆ ಸಮರ್ಪಿಸಿಕೊಂಡುಬಿಡುತ್ತಾನೆ.   ಶ್ರೀಕೃಷ್ಣನು ಸಂಧಾನಕ್ಕಾಗಿ ಕೌರವರ ಅರಮನೆಗೆ ಬಂದಾಗ, ಪರಮ ಭಕ್ತನಾದ ವಿದುರನು ’ಅತಿಥಿ ದೇವೋ ಭವ’ ಎಂದು ಒಂದು ಕುಡಿಕೆ ಹಾಲನ್ನು ಕೊಡುತ್ತಾನೆ.  ಶ್ರೀಕೃಷ್ಣನಿಗೆ ಪಾದಾಭಿಷೇಕವಾದ ಹಾಲಿನ ಬಿಂದುಗಳು ಸಮೃದ್ಧಿಯಾಗಿ, ಕಡಲಾಗಿ, ಕೌರವ ಚಕ್ರವರ್ತಿ ದುರ್ಯೋಧನನ ಅರಮನೆಯೇ ಮುಳುಗುವಂತೆ ಮಾಡಿ, ಕೃಷ್ಣ ಪರಮಾತ್ಮನು ಕೌರವನ ಮಾನವನ್ನೇ ಕೊಂಡ ಎಂದು ಗದುಗಿನ ಭಾರತದಲ್ಲಿ ಕುಮಾರವ್ಯಾಸರು ಹೇಳುತ್ತಾರೆ.


ಅನವರತವೂ ಭಗವಂತನ ನಾಮ ಸ್ಮರಣೆ ಮಾಡುತ್ತಾ, ಹರಿಕಥೆಗಳನ್ನು ಆಲಿಸುತ್ತಾ ಮನವನ್ನು ಭಗವಂತನೆಂಬ ಮನದೊಳಗೆ ನೆಲೆಯಾಗಿಸಿದ್ದರೆ, ಭಗವಂತನೆಂದಿಗೂ ನಮ್ಮನ್ನು ಪೊರೆಯುವನು.  ಇಂತಹ ಕರುಣಾಮಯಿಯಾದ ಶ್ರೀಹರಿಯ ಕಾರುಣ್ಯ ನಮಗೆ ಲಭಿಸಬೇಕಾದರೆ ನಾವು "ಹರಿಭಕ್ತರಿದ್ದೆಡೆಗೆ ಹರಿದು ಹೋಗಲಿ ಬೇಕು | ಹರಿಯ ನಾಮತ್ರಯಾಂಕಿತರಿಗೆರಗಲು ಬೇಕು | ಗುರುಹಿರಿಯರವಗುಣಗಳೆಣಿಸದಿರ ಬೇಕು || ಎಂದು ಜಗನ್ನಾಥ ದಾಸರು ತಮ್ಮ "ಇನಿತೆಂದು ಶಾಸ್ತ್ರ ಪೇಳುವವು" ಎಂಬ ಕೃತಿಯಲ್ಲಿ ತಿಳಿಸಿದ್ದಾರೆ.


ಶ್ರೀ ಜಗನ್ನಾಥ ದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ :

ಸುಲಭರಿನ್ನುಂಟೆ ನಿನ್ನುಳಿದು ಲೋಕತ್ರಯದಿ
ಬಲವಂತರುಂಟೆ ಸುರರೊಳು | ಸುರರೊಳು ನೀನು ಬೆಂ-
ಬಲವಾಗಿ ಇರಲು ಭಯವುಂಟೆ - ಭಕ್ತರಿಗೆ ತಮ್ಮ ಜೀವಿತ ಕಾಲದಲ್ಲಿ ಬರುವ ಎಲ್ಲಾ ತರಹದ ಭಯಗಳನ್ನೂ ಪರಿಹರಿಸುವವನು ಶ್ರೀಹರಿಯೊಬ್ಬನೇ ಆಗಿದ್ದಾನೆ.  ಸ್ಮರಿಸಿದ ಮಾತ್ರವೇ, ಕರೆಗೆ ಓಗೊಡುವ ಮಗುವಿನಂತೆ ಧಾವಿಸುವ ಭಗವಂತನು ಅತೀ ಸುಲಭನೂ ಹಾಗೂ ಅಷ್ಟೇ ಬಲವಂತನು.  ಅವನೇ ಸ್ವತಃ ಭಕ್ತರಿಗೆ ಬೆಂಬಲವಾಗಿರಲು ಯಾವುದೇ ಚಿಂತೆಯೂ, ಭಯವೂ ಇಲ್ಲವೇ ಇಲ್ಲ.

ಶ್ರೀನಾಥ ನಿನ್ನವರ ನಾನಾಪರಾಧಗಳ

ನೀನೆಣಿಸದವರ ಸಲಹಿದಿ | ಸಲಹಿದಿ ಸರ್ವಜ್ಞ
ಏನೆಂಬೆ ನಿನ್ನ ಕರುಣಕ್ಕೆ - ಶ್ರುತಿ ಸ್ಮೃತಿಗಳು ಸ್ವಯಂ ಭಗವಂತನ ಆಜ್ಞೆಗಳು ಮತ್ತು ನಾನಾ ವಿಧಿನಿಷೇಧಗಳನ್ನು ನಿರೂಪಿಸುವಂತಹವು.  ಭಕ್ತರು ಅವುಗಳನ್ನು ನಿಷ್ಠವಾಗಿ ಆಚರಣೆ ಮಾಡಬೇಕು ಮತ್ತು ಅವುಗಳನ್ನು ಅತಿಕ್ರಮಿಸುವುದು ಅಪರಾಧವಾಗುತ್ತದೆ.  ಹಾಗೆ ಮಾಡುವುದು ಶ್ರೀಹರಿಯ ಆಜ್ಞೆಯನ್ನು ಉಲ್ಲಂಘಿಸಿದಂತೆಯೇ.  ಆದರೆ ಈ ರೀತಿಯ ಅಪರಾಧಗಳನ್ನು ಎಣಿಕೆಗೆ ಬಾರದಷ್ಟು ಸಂಖ್ಯೆಯಲ್ಲಿ ಪ್ರತಿದಿನವೂ ಭಕ್ತರು ಮಾಡುತ್ತಲೇ ಇರುತ್ತಾರೆ.  ಸರ್ವಾಂತರ್ಯಾಮಿಯಾದ ಭಗವಂತ  ಎಲ್ಲವೂ ತಿಳಿದಿದ್ದರೂ ಕೂಡ, ನಾವು ಮಾಡುವ ಸಂಸ್ತುತಿಗೆ ಹಿಗ್ಗುತ್ತಾ, ನಮ್ಮನ್ನು ಉದ್ಧರಿಸುವವನು ಆ ಹೆದ್ದೈವನಾಗಿದ್ದಾನೆ.

ನಾ ನಿನ್ನ ಮರೆತರೂ ನೀನೆನ್ನ ಮರೆಯದಲೆ

ಸಾನುರಾಗದಲಿ ಸಲಹುವಿ | ಸಲಹುವಿ ಸರ್ವಜ್ಞ
ಏನೆಂಬೆ ನಿನ್ನ ಕರುಣಕ್ಕೆ -  ತಾಯಿಯೆಂದಿಗೂ ತನ್ನ ಮಗುವನ್ನು ಮರೆಯುವುದಿಲ್ಲ, ಅಲಕ್ಷಿಸುವುದಿಲ್ಲ.  ಹಾಗೇ ಭಗವಂತ ಕೂಡ ತನ್ನ ಭಕ್ತರು ತನ್ನನ್ನು ಮರೆತರೂ ಕೂಡ, ತಾನು ಅವರನ್ನು ಮರೆಯದೇ, ವಾತ್ಸಲ್ಯದಿಂದ, ಕಾರುಣ್ಯದಿಂದ ಕಾಪಾಡುವನು.

ಪರಮಾತ್ಮನಿಗೆ ತನ್ನ ಭಕ್ತ ಕಡುಬಡವನೋ  ಅಥವಾ ಶ್ರೀಮಂತನೋ, ರಾಜಾತಿಥ್ಯ ನೀಡಬಲ್ಲವನೋ ಅಥವಾ ಇಲ್ಲವೋ ಎಂಬ ಯಾವ ಅಂಶಗಳೂ ಮುಖ್ಯವಲ್ಲವೇ ಅಲ್ಲ.  ಬ್ರಹ್ಮಾಂಡದಲ್ಲಿರುವ ಪ್ರತೀ ಜೀವಿಗೂ ಜನನಿಯೂ ಮತ್ತು ಜನಕನೂ ಎರಡೂ ಆಗಿರುವ ಭಗವಂತನಿಗೆ ಪ್ರಿಯರು - ಅಪ್ರಿಯರು, ಮಿತ್ರರು - ದ್ವೇಷಿಗಳು ಎಂಬೆಲ್ಲಾ ತಾರತಮ್ಯಗಳು ಖಂಡಿತವಾಗಿಯೂ ಇಲ್ಲ.  ಆದರೆ ತನ್ನ ಭಕ್ತರನ್ನು ದ್ವೇಷಿಸುವವರನ್ನು ಭಗವಂತ ತಾಳನು ಎಂದು ಮಾತ್ರ ತಿಳಿಯುತ್ತದೆ.  ಶ್ರೀಹರಿಯು ಎಲ್ಲರಲ್ಲೂ ಸಮಾನವಾಗಿ ವ್ಯಾಪಿಸಿರುವನು.  

ಭಗವದ್ಗೀತೆಯಲ್ಲಿ ಭಗವಂತ
ಸಮೋಹಂ ಸರ್ವಭೂತೇಷು ನ ಮೇ ದ್ವೇಷ್ಯೋಸ್ತಿನಪ್ರಿಯಃ |
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ || - ನಾನು ಎಲ್ಲಾ ಪ್ರಾಣಿಗಳಲ್ಲಿಯೂ ಸಮಭಾವದಿಂದ  ವ್ಯಾಪಕವಾಗಿದ್ದೇನೆ.  ನನಗೆ ಅಪ್ರಿಯರಾದವರು ಯಾರೂ ಇಲ್ಲ ಮತ್ತು ಪ್ರಿಯರಾದವರೂ ಯಾರೂ ಇಲ್ಲ.  ಆದರೆ ಯಾವ ಭಕ್ತರು ನನ್ನನ್ನು ಪ್ರೇಮಭಾವದಿಂದ ಭಜಿಸುತ್ತಾರೋ ಅವರು ನನ್ನಲ್ಲಿದ್ದಾರೆ ಮತ್ತು ನಾನು ಕೂಡ ಅವರಲ್ಲಿ ಪ್ರತ್ಯಕ್ಷವಾಗಿ ಪ್ರಕಟವಾಗಿದ್ದೇನೆ ಎಂದು ತಿಳಿಸಿದ್ದಾನೆ.
ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್ | ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ || - ನಿರಂತರವಾಗಿ ನನ್ನ ಧ್ಯಾನಾದಿಗಳಲ್ಲಿ ತೊಡಗಿರುವ ಹಾಗೂ ಪ್ರೇಮದಿಂದ ಭಜಿಸುವ ಭಕ್ತರಿಗೆ ನಾನು ನನ್ನನ್ನು ಪಡೆಯುವಂತಹ ತತ್ತ್ವಜ್ಞಾನರೂಪ ಯೋಗವನ್ನು ಕರುಣಿಸುತ್ತೇನೆ ಎಂದಿದ್ದಾನೆ.

ವಿಷ್ಣು ಸಹಸ್ರನಾಮದಲ್ಲಿ "ವಸುರ್ವ ಸುಮನಾಃ ಸತ್ಯ ಸಮಾತ್ಮ ಸಮ್ಮಿತ ಸಮಃ" : ವಸವೇ ನಮಃ - ವಸವಃ ಎಂದರೆ ಎಲ್ಲವನ್ನೂ ಆಚ್ಛಾದಿಸಿ ವ್ಯಾಪಿಸಿರುವವನು.  ವಸು ಮನಸೇ ನಮಃ - ವಸು ಮನಸೇ ಎಂದರೆ ನಿತ್ಯ ನಿರ್ಮಲನು, ಕ್ಷಮಾಶೀಲನು ಮತ್ತು ಸರ್ವರಲ್ಲಿರುವ ಸದ್ಗುಣಗಳನ್ನು ಮಾತ್ರ ಗುರುತಿಸಿ ಉದ್ಧರಿಸುವವನು ಎಂದರ್ಥ.  ಸಮಾತ್ಮನೇ ನಮಃ - ಸಮಾತ್ಮನೇ ಎಂದರೆ ಯಾವ ವಿಕಾರಗಳೂ ಇಲ್ಲದೆ ರಾಗ ದ್ವೇಷಾದಿ ಭಿನ್ನ ಭಾವಗಳಿಲ್ಲದೆ ಸಕಲ ವಸ್ತುಗಳಲ್ಲಿಯೂ, ಜೀವಿಗಳಲ್ಲಿಯೂ ಚೈತನ್ಯ ರೂಪದಲ್ಲಿ ಸಮವಾಗಿ ಏಕಪ್ರಕಾರವಾಗಿರುವವನು.  ಎಲ್ಲವೂ ತನ್ನದೇ ಸೃಷ್ಟಿಯಾಗಿರುವುದರಿಂದ ಎಲ್ಲರನ್ನೂ, ಎಲ್ಲರಲ್ಲೂ ತಾನೇ ವ್ಯಾಪಿಸಿದ್ದೇನೆಂಬ ಅರ್ಥ.  
 
ಚಿತ್ರಕೃಪೆ : ಅಂತರ್ಜಾಲ