Tuesday, April 16, 2013

ಕರುಣಾ ಸಂಧಿ -೯ ನೇ ಪದ್ಯ



















ಒಬ್ಬನಲಿ ನಿಂತಾಡುವನು ಮ
ತ್ತೊಬ್ಬನಲಿ ನೋಡುವನು ಬೇಡುವ
ನೊಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ |
ಅಬ್ಬರದ ಹೆದ್ದೈವನಿವ ಮ
ತ್ತೊಬ್ಬರನು ಲೆಕ್ಕಿಸನು ಲೋಕದೊ
ಳೊಬ್ಬನೇ ತಾ ಬಾಧ್ಯಬಾಧಕನಾಹ ನಿರ್ಭೀತ || ೯ ||


ಪ್ರತಿಪದಾರ್ಥ : ಒಬ್ಬನಲಿ ನಿಂತಾಡುವನು - ಪಾದಗಳಿಗೆ ಅಭಿಮಾನಿ ದೇವತೆಯಾದ ಜಯಂತನಲ್ಲಿ ಅಂತರ್ಗತನಾಗಿದ್ದು ನಿಲ್ಲಲು ಓಡಾಡುವುದನ್ನು ಮಾಡುವನು, ಮತ್ತೊಬ್ಬನಲಿ ನೋಡುವನು - ಕಣ್ಣುಗಳಿಗೆ ಅಭಿಮಾನಿ ದೇವತೆಯಾದ ಸೂರ್ಯನಲ್ಲಿ ಅಂತರ್ಗತನಾಗಿದ್ದು ನೋಡುವುದನ್ನು ಮಾಡುವನು, ಬೇಡುವನು ಒಬ್ಬನಲಿ - ಹಸ್ತಗಳಿಗೆ ಅಭಿಮಾನಿ ದೇವತೆಯಾದ ದಕ್ಷ ಹಾಗೂ ಇಂದ್ರರಲ್ಲಿ ಅಂತರ್ಗತನಾಗಿದ್ದು ಬೇಡುವ ಹಾಗೂ ಕೊಡುವ ಕೆಲಸಗಳನ್ನು ಮಾಡುವನು, ಮಾತಾಡುವನು - ವದನದ ತತ್ವಾಭಿಮಾನಿ ದೇವತೆಯಾದ ಅಗ್ನಿಯಲ್ಲಿ ಅಂತರ್ಗತನಾಗಿದ್ದು ಮಾತನಾಡುವನು,  ಬೆರಗಾಗಿ - ಮನೋಭಿಮಾನಿಯಾದ  ರುದ್ರದೇವರಲ್ಲಿ ಅಂತರ್ಗತನಾಗಿದ್ದು  ಆಶ್ಚರ್ಯ ವ್ಯಕ್ತಪಡಿಸುವನು, ಅಬ್ಬರದ ಹೆದ್ದೈವನಿವ - ಜ್ಞಾನೇಂದ್ರಿಯ ಅಭಿಮಾನಿ ದೇವತೆಗಳಲ್ಲಿದ್ದು ಜ್ಞಾನ ಕಾರ್ಯಗಳನ್ನೂ ಕರ್ಮೇಂದ್ರಿಯ ಅಭಿಮಾನಿ ದೇವತೆಗಳಲ್ಲಿದ್ದು ಅವುಗಳ ಕಾರ್ಯಗಳನ್ನೂ ಮಾಡಿಸುವ ಅದ್ಭುತವಾದ ಹಿರಿಯ ದೈವನಿವನು, ಮತ್ತೊಬ್ಬರನು ಲೆಕ್ಕಿಸನು - ಸರ್ವೋತ್ತಮನೂ ದೇವದೇವೋತ್ತಮನೂ ಆದ ಭಗವಂತನು ಬೇರೆ ಯಾವ ದೇವತೆಗಳನ್ನೂ ಲೆಕ್ಕಿಸಬೇಕಾಗಿಲ್ಲದವನು, ಲೋಕದೊಳೊಬ್ಬನೇ ತಾ - ಸರ್ವ ವ್ಯಾಪ್ತನಾಗಿರುವಂತಹ ಭಗವಂತನು ತಾನು ಒಬ್ಬನೇ ಇನ್ನೊಬ್ಬರಿಲ್ಲ, ಬಾಧ್ಯ - ಎಲ್ಲದಕ್ಕೂ ತಾನೊಬ್ಬನೇ ಹೊಣೆಗಾರನಾಗಿರುವವನು ತನ್ನ ಭಕ್ತರಲ್ಲಿ ಅತ್ಯಂತ ಕರುಣೆಯುಳ್ಳವನಾಗಿರುವನು,  ಬಾಧಕನಾಹ - ತನ್ನನ್ನು ಲೆಕ್ಕಿಸದೆ ಲೋಕಕ್ಕೆ ಬಾಧಕರಾಗಿರುವ ತಮೋಜೀವಿಗಳಿಗೆ ಬಾಧಕನಾಗಿರುವವನು, ನಿರ್ಭೀತ - ಲವಲೇಶವೂ ಭಯವಿಲ್ಲದವನು.
ಜಗತ್ತಿನಲ್ಲಿ ನಡೆಯುವ ಸಕಲ ಕಾರ್ಯಗಳೂ ಪರಮಾತ್ಮನ ಶಕ್ತಿಯಿಂದ, ಅವನ ಇಚ್ಛೆಯಿಂದ, ಅವನು ನಡೆಸಿದಂತೆಯೇ ನಡೆಯುತ್ತದೆ.  ಸರ್ವಂ ಕಲ್ಪಿದ ಬ್ರಹ್ಮ ಎಂಬ ಮಾತನ್ನು ಇಲ್ಲಿ ಪೂರ್ಣವಾಗಿ ಹೇಳುತ್ತಾರೆ.  ಒಬ್ಬನಲಿ ನಿಂತಾಡುವನು ಎಂದರೆ  ಪಾದಗಳ ಅಭಿಮಾನಿ ದೇವತೆಯಾದ ಇಂದ್ರಪುತ್ರ ಜಯಂತನಲ್ಲಿ ಅಂತರ್ಗತನಾಗಿ ಶ್ರೀ ಹರಿಯು ’ಯಜ್ಞ’ ನಾಮಕನಾಗಿ ವಿಹರಿಸುತ್ತಾನೆ.  ಅಂದರೆ ಭಗವಂತನ ಕ್ರಿಯೆಯೇ ಜಯಂತನ ಕ್ರಿಯೆ - ಜಯಂತನ ಕ್ರಿಯೆಯೇ ಜೀವದ ಕ್ರಿಯೆ - ಜೀವದ ಕ್ರಿಯೆಯೇ ಸ್ಥೂಲದೇಹದ ಪಾದಗಳ (ಇಂದ್ರಿಯ) ಕ್ರಿಯೆಯಾಗಿ ನಿಲ್ಲುವ ಶಕ್ತಿ, ಓಡಾಡುವ ಶಕ್ತಿ ಕೊಡುತ್ತಾನೆ.  ಮತ್ತೊಬ್ಬನಲಿ ನೋಡುವ ಎಂದರೆ ನೇತ್ರಾಭಿಮಾನಿ ಸೂರ್ಯನ ಮೂಲಕ ನೋಡುವ ಶಕ್ತಿಯನ್ನು ಕೊಡುತ್ತಾನೆ.  ಇನ್ನು ಬೇಡುವ ಎಂದರೆ ಹಸ್ತಾಭಿಮಾನಿ ದಕ್ಷ ಪ್ರಜೇಶ್ವರನಲ್ಲಿ ಪದ್ಮನಾಭ ರೂಪದಿಂದ ಕೈ ಚಾಚುವಂತೆ ಮಾಡುತ್ತಾನೆ.  ವಾಗಾಭಿಮಾನಿ ಎಂದರೆ ಅಗ್ನಿ ಅಂತರ್ಗತ ಪರಶುರಾಮ, ಋಷಿಕೇಶ ರೂಪದಿಂದ ಮಾತನಾಡುವ ಶಕ್ತಿ ಕೊಡುತ್ತಾನೆ.  ಮನೋಭಿಮಾನಿ ರುದ್ರಾಂತರ್ಗತ ಗೋವಿಂದ ರೂಪದಿಂದ ಆಶ್ಚರ್ಯ ವ್ಯಕ್ತಪಡಿಸುವ ಶಕ್ತಿ ಕೊಡುತ್ತಾನೆ.  ಯಾರನ್ನೂ ಲೆಕ್ಕಿಸಬೇಕಿಲ್ಲ.  ಅವನೇ ಬಾಧ್ಯ ಮತ್ತು ಅವನೇ ಬಾಧಕ.

ಜಗನ್ನಾಥ ದಾಸರ  "ಆವ ಭಯವಿಲ್ಲ ಪರಾವರೇಶನ ಸಕಲ ಠಾವಿನಲಿ ಚಿಂತಿಸುವ ಭವಜ್ಞ ಜನರಿಗೆ" ಎನ್ನುವ ಕೃತಿಯ ೪ನೇ ಚರಣದಲ್ಲಿ "ನೋಡುವುದೆ ಹರಿಮೂರ್ತಿ, ಕೇಳುವುದೆ ಹರಿಕೀರ್ತಿ, ಆಡುವುದೆ ಹರಿವಾರ್ತೆ, ಮಾಡುವುದೆ ಹರಿಪೂಜೆ, ನೀಡುವುದೆ ಅವದಾನ, ಬೇಡುವುದೆ ಪುರುಷಾರ್ಥ, ಕೂಡುವುದು ಸಾಯುಜ್ಯ ಎಂದು ಹೇಳುತ್ತಾ ೫ನೇ ಚರಣದಲ್ಲಿ ಅಂತರ್ಬಹಿರ್ವ್ಯಾಪ್ತನಾದ ಶ್ರೀ ಜಗನ್ನಾಥ ವಿಠಲ ಆವ ದೇಶದಲಿ, ಆವ ಕಾಲದಲಿ, ಪಾಸಾಟಿ ಇಲ್ಲ ಎನ್ನುತ್ತಾ ಆರ್ಭಟಿಸುತಿಪ್ಪ ಜನರಿಗೆ ಆವ ಭಯವಿಲ್ಲ ಎಂದು ಪರಮಾತ್ಮನ ಪರಾಕಾಷ್ಠಯನ್ನು ನಮಿಸುತ್ತಾರೆ, ಕೊಂಡಾಡುತ್ತಾರೆ.

 "ಸರ್ವಂ ಕಲ್ವಿದಂ ಬ್ರಹ್ಮ" - ಎಲ್ಲವೂ ಭಗವಂತನೇ ಎಂದು ಉಪನಿಷತ್ ತಿಳಿಸುತ್ತದೆ.  ಜ್ಞಾನಿಗಳಿಗೆ ಪ್ರತಿಯೊಂದು ಚಟುವಟಿಕೆಯಲ್ಲೂ ದೇವರು ಕಾಣುತ್ತಾನೆ, ಆದರೆ ಅಜ್ಞಾನಿಗಳಾದ ನಾವು ಅದನ್ನು ತಿಳಿಯದೇ ಎಲ್ಲವನ್ನೂ ನಾವು ಮಾಡಿದೆವೆಂದುಕೊಳ್ಳುತ್ತೇವೆ.  ಯಾವುದೇ ಒಳ್ಳೆಯ ಕಾರ್ಯವಾದರೂ ಭಗವಂತ ತಾನೇ ನಮ್ಮೊಳಗೆ ನಿಂತು ನಮ್ಮ ಪರವಾಗಿ ಮಾಡಿ, ನಮ್ಮಿಂದ ಮಾಡಿಸುತ್ತಾನೆಂಬ ಸತ್ಯ ಅರಿತುಕೊಳ್ಳಬೇಕು.  ಶ್ರೀಹರಿಯು ಕರ್ತೃವೂ ತಾನೇ, ಕ್ರಿಯೆಯೂ ತಾನೇ, ದೃಷ್ಟಾರನೂ ಅವನೇ, ಭೋಕ್ತಾರನೂ ಅವನೇ, ಹೀಗೆ ಸರ್ವ ಕ್ರಿಯೆಗಳಲ್ಲೂ ವ್ಯಾಪಿಸಿಕೊಂಡಿದ್ದರೂ, ಅದು ಯಾವುದಕ್ಕೂ ಅಂಟಿಕೊಳ್ಳದಿರುವ ಸರ್ವಸ್ವತಂತ್ರನೂ ಅವನೇ.

ಒಬ್ಬನೊಳಗೆ ನಿಂತು ಆಡುವವನೂ ಅವನೆ ಅದಕ್ಕೆ ತದ್ವಿರುದ್ಧವಾಗಿ ಇನ್ನೊಬ್ಬನೊಳಗೆ ನಿಂತು ನೋಡುವವನೂ ಅವನೇ, ಹೀಗೆ ವಿರುದ್ಧ ಕ್ರಿಯೆಗಳನ್ನು ಮಾಡಿ ಮತ್ತೊಬ್ಬನಲ್ಲಿ ಅಚ್ಚರಿ ಹುಟ್ಟಿಸುವವನೂ ಅವನೇ.  ಅಬ್ಬರದ ಹೆದ್ದೈವನಿವನು, ಇವನಿಗೆ ಯಾರ ಅಂಕೆಯೂ ಇಲ್ಲ, ಇವನನ್ನು ಯಾರೂ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ, ಹಾಗೆ ಮಾಡಿದರೂ ಕೂಡ ಲೆಕ್ಕಿಸುವುದೂ ಇಲ್ಲ, ಇವನೇ ಭಗವಂತ.  ಜಗದುದರನಾಗಿದ್ದರೂ ಕೂಡ ಹಿಡಿ ಮಣ್ಣು ತಿಂದು, ಏಕೆ ತಿಂದೆಯೆಂದು ಕೇಳಿದರೆ, ಪುಟ್ಟ ಬಾಯಿ ತೆರೆದು ಬ್ರಹ್ಮಾಂಡವನ್ನೇ ತೋರಿಸಿಬಿಟ್ಟ.  ಆದರೆ ಅವನಿಗೆ ತನ್ನ ಭಕ್ತರು ಅತಿ ಪ್ರಿಯರು.  ಕರುಕಟ್ಟುವ ಹಗ್ಗದಿಂದ ಕಟ್ಟಿಸಿಕೊಂಡೂ ಬಿಟ್ಟ.  ಹಾಗೇ ಕೌರವರೂ ಹಗ್ಗದಿಂದ ಕಟ್ಟಲು ಬಂದಾಗ ವಿಶ್ವರೂಪವನ್ನೇ ತೋರಿ ಭಯಂಕರವಾಗಿ ಬೆದರಿಸಿ, ಯುದ್ಧದಲ್ಲಿ ಸರ್ವನಾಶವನ್ನೇ ಕೊಟ್ಟ.  ಇಲ್ಲಿ ಗೋಪಿಗೆ ಬಾಧ್ಯನಾದ, ಕೌರವರಿಗೆ ಬಾಧಕನಾದ.  ಭಗವಂತನು ಅಚಿಂತ್ಯಾದ್ಭುತ ಚರಿತನು, ಅಘಟನಾ ಘಟನ ಸಮರ್ಥನು, ಅತ್ಯಂತ ಶ್ರೇಷ್ಠನು, ಸರ್ವೋತ್ತಮನು, ಸರ್ವತಂತ್ರ ಸ್ವತಂತ್ರನು, ಆಪ್ತ ಕಾಮನು ಮತ್ತು ಸ್ವರಮಣನು.  ಯಾರ ಹಂಗಾಗಲೀ, ಭಯವಾಗಲೀ ಅವನಿಗಿಲ್ಲ.  ಆದ್ದರಿಂದಲೇ ಭಗವಂತ ಅಬ್ಬರದ ಹೆದ್ದೈವ, ನಿರ್ಭೀತ.  ವಿವಿಧ ರೂಪಗಳಿಂದ ಇಂದ್ರಿಯಾಭಿಮಾನಿ ದೇವತೆಗಳ ಮೂಲಕ ಕರ್ಮಗಳನ್ನು ಮಾಡಿಸುವ ಅದ್ಭುತವಾದ ಹಿರಿಯ ದೈವ ಭಗವಂತನೆಂದೂ ಅರ್ಥೈಸಿಕೊಳ್ಳಬಹುದು.

ಶ್ರೀಹಯವದನ ಪುರಾಣಿಕರು ತಮ್ಮ ಪುಸ್ತಕದಲ್ಲಿ "ಒಬ್ಬನಲಿ ನಿಂತಾಡುವನು...." ವಾಕ್ಯವನ್ನು ಜೀವಿಗಳ ಶರೀರದ ಇಂದ್ರಿಯ ಅಂತಃಕರಣಗಳನ್ನು ಪ್ರೇರೇಪಿಸುವ ರೀತಿಗೆ ಹೋಲಿಸುತ್ತಾರೆ.  ಶ್ರೀಹರಿ ಒಬ್ಬನಲ್ಲಿ ನಿಂತು ಕರ್ಮೇಂದ್ರಿಯಗಳಿಗೆ ಪ್ರೇರಣೆ ನೀಡಿ, ತೀರ್ಥಕ್ಷೇತ್ರ ಯಾತ್ರೆಗಳನ್ನು ಮಾಡಿ, ಮಾಡಿಸುತ್ತಾರೆ.  ಹಾಗೇ ಮತ್ತೊಬ್ಬನಲ್ಲಿ ನಿಂತು ಜ್ಞಾನೇಂದ್ರಿಯಗಳಿಗೆ ಪ್ರೇರಣೆ ನೀಡಿ, ಭಗವಂತನ ಚರಿತ್ರೆ ಓದುವುದು, ಕೇಳುವುದು, ಪೂಜೆಯ ನಿರ್ಮಾಲ್ಯವನ್ನು ಆಘ್ರಾಣಿಸುವುದು ಮುಂತಾದ ಕ್ರಿಯೆಗಳನ್ನು ಪ್ರಚೋದಿಸಿ, ಮಾಡಿ, ಮಾಡಿಸುತ್ತಾನೆ.  ಹೀಗೆ ಜೀವಿಗಳಿಗೆ ಅವರವರ ಕರ್ಮಗಳಿಗನುಸಾರವಾಗಿ, ಅವರಿಗೆ ಪ್ರೇರಣೆ ಕೊಟ್ಟು, ಒಬ್ಬೊಬ್ಬರಲ್ಲಿ ಒಬ್ಬೊಬ್ಬನಾಗಿ ನಿಂತು ಎಲ್ಲವನ್ನೂ ಮಾಡುತ್ತಾನೆ ಮತ್ತು ಮಾಡಿಸುತ್ತಾನೆ ಎನ್ನುತ್ತಾರೆ.  ಶ್ರೀಹರಿಯ ಕರುಣೆಗೆ ಪಾತ್ರರಾಗಿ, ಸತ್ಕಾರ್ಯಗಳನ್ನು ಮಾಡುವ ಅವಕಾಶ ಪಡೆಯುವವನು ಎಲ್ಲೋ ಸಾವಿರಾರು ಜೀವಿಗಳಲ್ಲಿ ಒಬ್ಬ ಪುಣ್ಯಾತ್ಮನಿರಬಹುದು ಎನ್ನುತ್ತದೆ ನಮ್ಮ ದಾಸ ಪರಂಪರೆ.  ಶ್ರೀಹರಿಯ ಕರುಣೆಗಾಗಿ ಶ್ರಮಿಸುವ ಸಾವಿರದಲ್ಲಿ ಒಬ್ಬ ಜೀವಿ ಸಿದ್ಧಿ ಹೊಂದಬಹುದು, ಸಿದ್ಧಿ ಪಡೆದ ಸಾವಿರಾರು ಜೀವಿಗಳಲ್ಲಿ ಒಬ್ಬನೇ ಒಬ್ಬ ತನ್ನನ್ನು ಸ್ಫುಟವಾಗಿ ತಿಳಿಯಬಲ್ಲನು ಎಂದಿದ್ದಾನೆ ಭಗವಂತ ಭಗವದ್ಗೀತೆಯಲ್ಲಿ.

"ವಾಯುಜೀವೋತ್ತಮ"ತ್ವಕ್ಕೆ ಒಳ್ಳೆಯ ವಿವರಣೆ ಎನ್ನುತ್ತಾರೆ ಶ್ರೀ ಪುರಾಣಿಕರು.  ಒಬ್ಬ ಮಾನವನಲ್ಲಿ ಅಲ್ಲ, ಒಬ್ಬ ತತ್ವಾಭಿಮಾನಿಯಲ್ಲಿಯೂ ಅಲ್ಲ, ಒಬ್ಬ ಮುಖ್ಯಪ್ರಾಣನಲ್ಲಿಯೇ ಅಂತರ್ಯಾಮಿಯಾಗಿದ್ದು ಆಡುತ್ತಾನೆ, ನೋಡುತ್ತಾನೆ, ಬೇಡುತ್ತಾನೆ, ನೀಡುತ್ತಾನೆ, ಮಾತಾಡುತ್ತಾನೆ, ಎಲ್ಲಾ ಕ್ರಿಯೆಗಳನ್ನೂ ನಡೆಸುತ್ತಾನೆ.  ಮುಖ್ಯಪ್ರಾಣ ದೇವರನ್ನು ಒಬ್ಬನನ್ನೇ ಸರ್ವಾಂತರ್ಯಾಮಿಯಾಗಿ ಸರ್ವರೊಳಗೂ ಇಟ್ಟು, ಅವನ ಅಂತರ್ಯಾಮಿಯಾಗಿ ತಾನು ನೆಲೆಸಿ, ಜೀವವನ್ನೇ ಕರುಣಿಸುವ ಜೀವೋತ್ತಮನಿಗೂ ಪ್ರಾಣನಾಗಿ ಸಕಲವನ್ನೂ ಮಾಡುವ ಭಗವಂತ ಅಬ್ಬರದ ಹೆದ್ದೈವನಲ್ಲದೇ ಮತ್ತೇನು ? ಆದರೂ ಸರ್ವೋತ್ತಮನಾದ ಶ್ರೀಹರಿ ಈ ಮುಖ್ಯಪ್ರಾಣನನ್ನಲ್ಲದೇ ಮತ್ತೊಬ್ಬರನ್ನು ಲೆಕ್ಕಿಸುವುದಿಲ್ಲ, ಏಕೆಂದರೆ ವಾಯುವಿನಂತಹ ಭಕ್ತರು ಮತ್ತೊಬ್ಬರು ಇಲ್ಲವೇ ಇಲ್ಲ, ಅವನೆಂದೂ ಭಗವಂತನನ್ನು ವಿರೋಧಿಸಲೂ ಇಲ್ಲ,  ಬಾಧಿಸಲೂ ಇಲ್ಲ.  ಆದ್ದರಿಂದ ಶ್ರೀಹರಿ ಮತ್ತು ಪ್ರಾಣದೇವರ ಸಂಬಂಧ ಬಾಧ್ಯ-ಬಾಧಕದಿಂದಲ್ಲದೆ "ಅಬಾಧ್ಯ-ಅಬಾಧಕ" ತತ್ವವಾಗಿದೆ.  ಶ್ರೀಹರಿಯಿಂದ ಹನುಮನಿಗೆ ಹೇಗೆ ಯಾವ ಆಪತ್ತೂ, ಭಯವೂ ಇಲ್ಲವೋ ಹಾಗೇ ಹನುಮನಿಂದ ಶ್ರೀಹರಿಗೂ ಯಾವ ಆಪತ್ತೂ, ಭಯವೂ ಇಲ್ಲ.  ಹನುಮನು ನಿರ್ಭೀತನು ಹಾಗೆ ಅವನನ್ನು ಸ್ಮರಿಸುವವರಿಗೂ ಭಯವೆಂಬುದೇ ಇಲ್ಲ.  "ನಿರ್ಭಯತ್ವಂ ಅರೋಗತಾ, ಅಜಾಡ್ಯಂ ವಾಕ್ಪಟುತ್ವಂ ಚ ಹನುಮತ್ ಸ್ಮರಣಾದ್ಭವೇತ್" - ಬುದ್ಧಿ, ಬಲ, ಯಶಸ್ಸು, ಧೈರ್ಯವೆಲ್ಲವನ್ನೂ ಕರುಣಿಸುವವನು ಹನುಮ. ಹನುಮನ ಸ್ಮರಣೆಯಿಂದಲೇ ಜೀವೋತ್ತಮನು ಕರುಣೆಯಿಂದ ಜೀವಿಗಳು ಸಾಧನೆ ಮಾಡುವಂತೆ ಪ್ರೇರೇಪಿಸಿ, ಸರ್ವೋತ್ತಮನಾದ ಶ್ರೀಹರಿಯಿಂದ ಮೋಕ್ಷ ಕೊಡಿಸುವವನು.  

ಜಗನ್ನಾಥ ದಾಸರ  "ಮುಖ್ಯಪ್ರಾಣ ದೇವ ನೀನಲ್ಲದೆ ಕಾಯ್ವರ ಕಾಣೆನೋ ಜಗದೊಳಗೇ" ಎಂಬ ಪದದಲ್ಲಿ "ಪರಿಸರ ನೀನಿರೆ ಹರಿತಾನಿಪ್ಪನು ಇರದಿರೆ ತಾನಿರನು | ಕರಣ ನಿಯಾಮಕ ಸುರರಗುರುವೆ ನೀ ಕರುಣಿಸೆ ಕರುಣಿಸುವಾ" ಎನ್ನುತ್ತಾ ಪ್ರಾಣದೇವರು ಇರುವ ಕಡೆ ಶ್ರೀಹರಿ ಇದ್ದೇ ಇರುವ, ಇಲ್ಲದಿದ್ದರೆ ಇಲ್ಲವೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಶಾಂಡಿಲ್ಯ ತತ್ವದಲ್ಲಿ - "ಪ್ರತಿಬಿಂಬಕ್ರಿಯಾಯಾಃಬಿಂಬಕ್ರಿಯಾನುಸ್ಯೂತತಾ |  ಯದಾಶ್ನಾತಿ ತದಾಶ್ನಾತಿ ಯದಾ ವಕ್ತಿ ತದೈವ ಸಃ | ಕಿಮತ್ರ ಬಹುನೋಕ್ತೇನ ನಾ ಕೃತಂ ಕ್ರಿಯತೇ ಜನೈಃ || - ಬಿಂಬನು ಉಂಡರೆ ಪ್ರತಿಬಿಂಬನು ಉಣ್ಣುವನು, ಮಾತಾಡಿದರೆ ಮಾತಾಡುವನು, ಬಿಂಬ ಮಾಡದ ಏನನ್ನೂ ಪ್ರತಿಬಿಂಬ ಮಾಡನು ಎಂಬ ಅರ್ಥ.  
ತತ್ವಸುವಾಲಿಯಲ್ಲಿ ಜಗನ್ನಾಥ ದಾಸರು
ನಿಲ್ಲಲು ನಿಲ್ಲುವೆನು ಮಲಗಿದರೆ ಮಲಗುವೆನು
ತಿಳಿದು ತಿಳಿಸಿದರೆ ತಿಳಿವೆನು | ತಿಳಿವೆನೊ ದೇಹದ
ನೆಳಲಂತೆ ಇರ್ಪೆ ನಿನಗಾನು ||
ಜೀವನಾಮಕನಾಗಿ ಜೀವರೊಳು ನೀ ನಿಂತು
ಜೀವಕೃತಕರ್ಮ ನೀ ಮಾಡಿ | ನೀ ಮಾಡಿ ಮಾಡಿಸಿ
ಜೀವರಿಗೆ ಕೊಡುವೆ ಸುಖದುಃಖ || - ಎಲ್ಲಕ್ಕೂ ಭಗವಂತನದೇ ಪ್ರೇರಣೆ ಮತ್ತು ತಾನೆ ಮಾಡಿ ಜೀವಿಗಳಿಂದ ಮಾಡಿಸುತ್ತಾನೆ ಎನ್ನುತ್ತಾರೆ.









ಚಿತ್ರಕೃಪೆ : ಅಂತರ್ಜಾಲ