Thursday, November 26, 2015

ಕರುಣಾ ಸಂಧಿ - ೩೧ ನೇ ಪದ್ಯ



ಶ್ರೀ ಮನೋರಮ ಶಮಲವರ್ಜಿತ
ಕಾಮಿತಪ್ರದ ಕೈರವದಳ-
ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷಸಖ |
ಸಾಮಸನ್ನುತ ಸಕಲಗುಣಗಣ-
ಧಾಮ ಶ್ರೀ ಜಗನ್ನಾಥ ವಿಟ್ಠಲ
ನೀ ಮಹಿಯೊಳವತರಿಸಿ ಸಲಹಿದೆ ಸಕಲ ಸುಜನರನು || ೩೧ ||


ಪ್ರತಿಪದಾರ್ಥ : ಶ್ರೀ ಮನೋರಮ - ಮಹಾಲಕ್ಷ್ಮಿಯ ಮನಸ್ಸಿಗೆ ಆನಂದ ಕೊಡುವವನು, ಶಮಲವರ್ಜಿತ - ದೋಷದೂರನಾದವನು, ಕಾಮಿತಪ್ರದ - ಇಷ್ಟಾರ್ಥಗಳನ್ನೆಲ್ಲಾ ಪೂರೈಸುವವನು, ಕೈರವದಳ ಶ್ಯಾಮ - ನೈದಿಲೆ ಹೂವಿನಂತೆ ನೀಲವರ್ಣ ವಿಶಿಷ್ಟನಾದವನು, ಶಬಲ - ಮಿಶ್ರವರ್ಣ ಉಳ್ಳವನು, ಶರಣ್ಯ - ಮೊರೆಹೊಕ್ಕವರಿಗೆ ಆಸರೆಯಾದವನು, ಶಾಶ್ವತ - ಎಂದಿಗೂ ಬದಲಾಗದ ನಿರ್ವಿಕಾರನು, ಶರ್ಕರಾಕ್ಷಸಖ - ಶರ್ಕರಾ ಎಂದರೆ ಸೂಕ್ಷ್ಮವಾದಂಥ ಮತ್ತು ಅಕ್ಷ ಎಂದರೆ ಜ್ಞಾನ ಎಂದರ್ಥ, ಸಾಮಸನ್ನುತ - ಸಾಮವೇದದಿಂದ ಸ್ತುತಿಸಲ್ಪಡುವವನು, ಸಕಲ ಗುಣಗಣಧಾಮ - ಸಮಸ್ತ ಕಲ್ಯಾಣ ಗುಣಗಳಿಗೆ ಆಶ್ರಯನಾದವನು, ಶ್ರೀ ಜಗನ್ನಾಥ ವಿಟ್ಠಲನು - ಜಗತ್ತಿಗೇ ಸ್ವಾಮಿಯಾದವನು, ಈ ಮಹಿಯೊಳವತರಿಸಿ - ಈ ಭೂಮಿಯಲ್ಲಿ ಮತ್ತೆ ಮತ್ತೆ ಅವತರಿಸಿ, ಸಲಹಿದ ಸಕಲ ಸುಜನರನು - ಸಮಸ್ತ ಸಜ್ಜನರನ್ನು ಕಾಪಾಡುವವನು.

ಕರುಣಾ ಸಂಧಿಯ ಕಡೆಯ ಪದ್ಯದಲ್ಲಿ ಶ್ರೀ ಜಗನ್ನಾಥದಾಸರು ಭಕ್ತಿ ಪರವಶತೆಯಿಂದ ಭಗವಂತನನ್ನು ನಾನಾ ವಿಧವಾಗಿ, ವಿಶೇಷಣಗಳಿಂದ ಸ್ತುತಿಸಿದ್ದಾರೆ.  ಪರಮ ಕಾರುಣ್ಯದ ಭಾವವನ್ನೂ, ಮತ್ತು ಗುಣಗಳನ್ನೂ ವಿಧ ವಿಧವಾದ,  ವಿಶೇಷವಾದ ಗುಣವಾಚಕಗಳನ್ನು ಬಳಸಿ ಹೇಳಿದ್ದಾರೆ.  ಮಹಾ ವೈಭವೋಪೇತನಾದರೂ ಭಕ್ತರನ್ನು ಅನುಗ್ರಹಿಸುವುದಕ್ಕಾಗಿಯೇ ಈ ಭುವಿಯಲ್ಲಿ ಅನೇಕ ಬಾರಿ ಅವತರಿಸಿ ಮತ್ತು ಮುಂದೆಯೂ ಅವತರಿಸುವನು ಎನ್ನುತ್ತಾ ಭಗವಂತನ ಎಲ್ಲೆಯಿಲ್ಲದ ಕಾರುಣ್ಯದ ಮಹಿಮೆಯನ್ನು ಕೊಂಡಾಡುತ್ತಾ ಕರುಣಾ ಸಂಧಿಯನ್ನು  ಪರಿಸಮಾಪ್ತಿಗೊಳಿಸಿದ್ದಾರೆ.

ಶ್ರೀ ಮನೋಹರ / ಶ್ರೀ ಮನೋರಮ - ಶ್ರೀ ಮನೋಹರನೆಂದರೆ ಶ್ರೀ- ರಮಾದೇವಿಯ ಮನಸ್ಸಿಗೆ ರತಿಯನ್ನು ನೀಡುವವನು ಶ್ರೀ ಮನೋಹರನೆಂದರೆ ಶ್ರೀದೇವಿಗೆ ಮಾತ್ರ ಮನಸೆಳೆವ ಪತಿ ಹರಿಯಾಗಿರುವನು.  ಗೋಪಿಯರ ಮನಸ್ಸನ್ನು ಸೆಳೆದದ್ದು, ಹದಿನಾರು ಸಾವಿರ ಸ್ತ್ರೀಯರನ್ನು ಕಲ್ಯಾಣವಾದದ್ದೆಲ್ಲವೂ ಅವರವರ ತಪಸ್ಸಿಗೆ ತಕ್ಕ ಫಲವಾಗಿಯೂ, ಅವರಲ್ಲಿ ರಮಾದೇವಿಯ ಆವೇಶವಾಗಿದ್ದರಿಂದಲೂ ನಡೆಯುವುದು.  ಶ್ರೀಹರಿ ಎಂದಿಗೂ ಕಾಮವೆಂಬ ದೋಷಕ್ಕೆ ಸಿಲುಕುವವನೂ, ಪರಸ್ತ್ರೀಯರನ್ನು ಮೋಹಿಸುವವನೂ ಅಲ್ಲ.  ಭಗವಂತನು ರಮಾದೇವಿಯನ್ನು ಮಾತ್ರವೇ ಮೋಹಿಸುವವನು ಎಂಬರ್ಥವಾಗಿರುವುದು.  ಶ್ರೀಹರಿಯು ಸದಾ ಕಾಲವೂ ಮಹಾಲಕ್ಷ್ಮಿಯನ್ನು ಆನಂದಗೊಳಿಸುವವನಾಗಿರುವನು.

ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಈ ಪದ್ಯದಲ್ಲಿ ಬಳಸಲ್ಪಟ್ಟಿರುವ ಭಗವಂತನ ವಿಶೇಷ ನಾಮಗಳನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.  ಕೇವಲ ವೇದದಲ್ಲಿ ಮಾತ್ರವೇ ಬರುವ  ನಾಮಗಳನ್ನು ದಾಸರಾಯರು ಇಲ್ಲಿ ಬಳಸಿದ್ದಾರೆಂದೂ, ಇವುಗಳನ್ನು ವೈದಿಕ ನಾಮಗಳೆಂದು ಅರ್ಥೈಸಬೇಕೆಂದೂ ತಿಳಿಸಿದ್ದಾರೆ.  ಐತರೇಯೋಪನಿಷತ್ತಿನಲ್ಲಿ ಭಗವಂತನು ಚತುರ್ಮುಖ ಶರೀರವನ್ನು ಕಾಲಿನ ತುದಿಯಿಂದ ಪ್ರವೇಶಿಸಿದನು ಎಂಬ ವಿವರಣೆಯಿದೆ.  ಹಾಗೆ ಪ್ರವೇಶಿಸಿ ಊರ್ಧ್ವಮುಖನಾಗಿ ಚಲಿಸಿದ ಭಗವಂತನಾದ ವಾಸುದೇವನು ವಾಯು ಮತ್ತು ಇತರ ಇಂದ್ರಿಯಾಭಿಮಾನಿ ದೇವತೆಗಳೊಂದಿಗೆ ತಲೆಯನ್ನು ಆಶ್ರಯಿಸಿದನೆಂದು ತಲೆಯನ್ನು ’ಶಿರಸ್’ ಎನ್ನಲಾಯಿತು.  ಚಕ್ಷುಸ್, ಶ್ರೋತ್ರ, ಮನಸ್, ವಾಕ್, ಪ್ರಾಣ ಮೊದಲಾದ ದೇವತೆಗಳು ಶಿರಸ್ಸನ್ನಾಶ್ರಯಿಸಿದ್ದು ಪ್ರರಬ್ರಹ್ಮನ ಉಪಾಸನೆ ಮಾಡುವುದರಿಂದ ಅವರುಗಳು ’ಶ್ರೀ’ ಎನಿಸಿದ್ದಾರೆಂಬ ಉಲ್ಲೇಖವಿದೆ. ಆದರೆ ಇಂದ್ರಿಯಗಳೇ ಶ್ರೀ ಆಗುವುದಿಲ್ಲ.  ಇಂದ್ರಿಯಗಳಲ್ಲಿ ನೆಲೆಸಿರುವ ಅಭಿಮಾನಿ ದೇವತೆಗಳು, ಆ ದೇವತೆಗಳಲ್ಲಿರುವ ಪಂಚ ಪ್ರಾಣಗಳು, ಪಂಚ ಪ್ರಾಣಗಳಲ್ಲಿ ನೆಲೆಸಿರುವ ಪಂಚರೂಪಿಯಾದ ಭಗವಂತನು "ಶ್ರೀ" ಶಬ್ದ ವಾಚ್ಯನಾಗಿರುವನು.  ಅಭಿಮಾನಿ ದೇವತೆಗಳಾದ ಸೂರ್ಯ, ಚಂದ್ರ, ಅಗ್ನಿ, ಗರುಡ, ಶೇಷ, ರುದ್ರ ಮತ್ತು ಬ್ರಹ್ಮ ವಾಯುಗಳಾದ ಎಂಟು ಜನ ದೇವತೆಗಳ ಮನಗಳಲ್ಲಿ ಗೋಚರವಾಗಿ ಭಗವಂತನು ಅವರಿಗೆ ಮುದ ನೀಡುವನಾದ್ದರಿಂದ ಈ ದೇವತೆಗಳೂ ಕೂಡ ಶ್ರೀ ಶಬ್ದ ವಾಚ್ಯರಾಗುವರು ಎಂದರ್ಥೈಸಿಕೊಳ್ಳಬೇಕಾಗುವುದು.  ಹಾಗೇ ಶ್ರೀ ಎಂದರೆ ವೇದಗಳು ಎಂಬ ಅರ್ಥವೂ ಇರುವುದರಿಂದ, ವೇದಾಭಿಮಾನಿ ದೇವತೆಗಳಾದ ಲಕ್ಷ್ಮೀ, ಸರಸ್ವತಿ, ಭಾರತಿಯರ ಮನದಲ್ಲಿ ಗೋಚರನಾಗಿ ಅವರಿಗೆ ಸಂತೋಷ ಕೊಡುವವನಾಗಿರುವವನು ಶ್ರೀಮನೋಹರನಾದ ಭಗವಂತನು ಎಂಬುದು ವೈದಿಕವಾದ ಅರ್ಥವಾಗುವುದು.

ಶಮಲವರ್ಜಿತ - ಶಮಲವೆಂದರೆ ದೋಷವೆಂದು ಅರ್ಥವಾಗುತ್ತದೆ.  ಪದವನ್ನು ಬಿಡಿಸಿದಾಗ ಶ + ಮಲ = ಶ ಎಂದರೆ ಆನಂದವೆಂದೂ, ಮಲ ಎಂದರೆ ದೋಷ, ದುಃಖದ ಜೊತೆಗಿರುವ ಆನಂದದ ಮಲ/ದೋಷವೆಂದರ್ಥವಾಗುವುದು.  ನಮ್ಮಂತಹ ಪಾಮರರಿಗೆ ದುಃಖ ಮಿಶ್ರಿತ ಸುಖವಿರುವುದು.  ದೋಷವೆಂದರೆ ದುಃಖವೆಂದಾದಾಗ, ಭಗವಂತನು ದುಃಖವಿಲ್ಲದವನು, ಅವನು ಸದಾ ಆನಂದಮಯನಾಗಿರುವನು.  ಭಕ್ತರಿಗೆ, ಸಾಧಕರಿಗೆ ಜ್ಞಾನಾನಂದವನ್ನು ಕೊಡುವವನಾಗಿರುವನು.     ಶ್ರೀಹರಿಯನ್ನು ಜ್ಞಾನಾನಂದ ಸ್ವರೂಪನೆಂದು ಆರಾಧಿಸಿದಾಗ ನಮಗೆ ನಮ್ಮ ಸ್ವರೂಪ ಜ್ಞಾನವನ್ನು  ಕರುಣೆಯಿಂದ ದಯಪಾಲಿಸುವವನಾಗಿರುವನು.    ಭಗವಂತನು ಕಾಮಾದಿ ದೋಷಗಳಿಂದ ವರ್ಜಿತನಾಗಿರುವುದರಿಂದ, ಅವನು ಸರ್ವ ದೋಷಗಳಿಂದಲೂ ವರ್ಜಿತನು.  ಆದ್ದರಿಂದಲೇ ಅವನು ಶ್ರೀಮನೋಹರನಾಗಿರುವನು. 

ನಾರಾಯಣೋಪನಿಷತ್ತಿನಲ್ಲಿ ಭಗವಂತನನ್ನು "ನಿಷ್ಕಳಂಕೋ ನಿರಂಜನೋ ನಿರ್ವಿಕಲ್ಪೋ ನಿರಾಖ್ಯಾತಶ್ಶುದ್ಧೋ ದೇವ ಏಕೋ ನಾರಾಯಣಃ" - ನಾರಾಯಣನು ನಿಷ್ಕಳಂಕನು, ನಿರಂಜನನು, ನಿರ್ವಿಕಲ್ಪನು, ಮಾತಿನಲ್ಲಿ ಹೀಗೆಂದು ಹೇಳಲು ಸಾಧ್ಯವಿಲ್ಲದವನು.  ಶುದ್ಧನೂ, ದೇವನೂ ಅದ್ವಿತೀಯನು ಆ ನಾರಾಯಣನಲ್ಲದೆ ಮತ್ಯಾರೂ ಇಲ್ಲವೇ ಇಲ್ಲ ಎಂದು ತಿಳಿಸಲಾಗಿದೆ.

ಭಗವದ್ಗೀತೆಯ ಎರಡನೆಯ ಅಧ್ಯಾಯ ೬೨ನೆಯ ಶ್ಲೋಕದಲ್ಲಿ

ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ |
ಸಂಗಾತ್ಸಂಜಾಯತೇ ಕಾಮಃ ಕಾಮಾತ್ಕ್ರೋಧೋSಭಿಜಾಯತೇ || - ವಿಷಯಗಳನ್ನು ಚಿಂತಿಸುವ ಪುರುಷನಿಗೆ ಆ ವಿಷಯದಲ್ಲಿ ಆಸಕ್ತಿಯುಂಟಾಗುವುದು.  ಆಸಕ್ತಿಯಿಂದಾಗಿ ಆ ವಿಷಯಗಳ ಕಾಮನೆಯುಂಟಾಗುವುದು ಮತ್ತು ಕಾಮನೆಗಳು ಪೂರ್ಣವಾಗದಿದ್ದಾಗ ಕ್ರೋಧವುಂಟಾಗುವುದು ಎಂದು ಭಗವಂತನೇ ತಿಳಿಸಿರುವನು.  ಕಾಮ ಒಂದಿದ್ದರೆ ಸಾಕು, ಅದಕ್ಕೆ ಅಡಚಣೆಯಾದಾಗ ಕ್ರೋಧ ತಾನಾಗೇ, ಅರಿವಿಲ್ಲದಂತೆಯೇ ಬಂದು ಬಿಡುವುದು.  ಸದ್ದಿಲ್ಲದೇ ಬಂದ ಕ್ರೋಧವು ಧರ್ಮಕ್ಕೆ ವಿರುದ್ಧವಾದಂತಹ ಅಕಾರ್ಯಗಳಲ್ಲಿ ತೊಡಗುವಂತೆ ಮೋಹಗೊಳಿಸುವುದು.  ಶಾಸ್ತ್ರಗಳಲ್ಲಿ ತಿಳಿಸಿರುವ ವಿಧಿ ನಿಷೇಧದ ಅರಿವನ್ನು ಮರೆಯುವಂತೆ ಮಾಡುವುದು.  ಸರಿ ತಪ್ಪುಗಳ ವಿಮರ್ಶೆಯನ್ನೇ ಇಲ್ಲವಾಗಿಸಿ, ವ್ಯಕ್ತಿಯನ್ನು ವಿವೇಕ ಶೂನ್ಯನನ್ನಾಗಿಸುವುದು.  ವಿವೇಕ ಕಳೆದುಕೊಂಡ ಕ್ಷಣದಿಂದಲೇ ಬದುಕು ಅನರ್ಥಗಳ  ದಾರಿಯಲ್ಲಿ ವೇಗವಾಗಿ ಚಲಿಸುವುದು.  

ಸಮಸ್ತ ದೇವತೆಗಳೂ ತಮ್ಮಲ್ಲಿರುವ ದೋಷಗಳನ್ನು ಕಳೆದುಕೊಳ್ಳುವುದಕ್ಕೋಸ್ಕರವೇ ಭಗವಂತನನ್ನು ಮನನ ಮಾಡುವರು ಏಕೆಂದರೆ ಭಗವಂತನು ದೋಷ ವರ್ಜಿತನಾಗಿರುವನು. ಅವನು ಶಮಲವರ್ಜಿತನಾಗಿರುವನು ಆದ್ದರಿಂದಲೇ ಅವನು ಶ್ರೀಮನೋಹರನಾಗಿರುವನು ಎಂದು ತಿಳಿಯಬೇಕು.

ಕಾಮಿತಪ್ರದ -  ಸರ್ವ ಗುಣ ಪರಿಪೂರ್ಣ ಹಾಗೂ ಸಕಲ ದೋಷ ವರ್ಜಿತನಾಗಿರುವುದರಿಂದಲೇ ಭಗವಂತನು ಕಾಮಿತ ಪ್ರದನಾಗಿರುವನು.  ಕ ಎಂದರೆ ಆನಂದವೆಂಬ ಅರ್ಥವಾದರೆ, ಭಗವಂತನು ಮೋಕ್ಷದಲ್ಲಿ ಅಮಿತವಾದ ಆನಂದವನ್ನು ಕೊಡುವವನು, ಆದ್ದರಿಂದ ಅವನು ’ಕಾಮಿತ’ನೆನಿಸುವನು.  ಭಕ್ತರು ಮೋಕ್ಷದ ಸುಖಕ್ಕಾಗಿಯೂ, ಧರ್ಮ, ಅರ್ಥ, ಕಾಮಗಳ ಅಭೀಷ್ಟೆಗಳಿಂದಲೂ ಭಗವಂತನನ್ನು ಪ್ರಾರ್ಥಿಸುವರು.  ಸಕಲರ ಅಭೀಷ್ಟಗಳನ್ನೂ ಕರುಣೆಯಿಂದ ದಯಪಾಲಿಸುವ ಭಗವಂತನು ಕಾಮಿತಪ್ರದನೆನಿಸುವನು.  ಸಾಮಾನ್ಯ ಭಕ್ತರಿಗಿಂತ ವಿಭಿನ್ನರಾದ ಅಂತರಂಗ ಭಕ್ತರು ಭಗವಂತನಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನೆಲ್ಲಾ ಯಾವುದನ್ನೂ ಬಯಸುವುದಿಲ್ಲ.  ಅವರು ಭಗವಂತನನ್ನೇ ಬಯಸುವರು, ಬೇರೇನನ್ನೂ ಅಲ್ಲ.  ಇಂತಹ ಭಕ್ತರಿಂದ ಸದಾ ಕಾಮಿತನಾದ ಭಗವಂತನು ’ಕಾಮಿತ’ ವಾಚ್ಯನಾಗುವನು.  ಮತ್ತು ಆರಾಧಿಸುವ ಭಕ್ತರಿಗೆ ಅತ್ಯಂತ ಶ್ರೇಷ್ಠವಾದ ಸ್ವರೂಪ ಆನಂದವನ್ನು ಕೊಡುವವನಾಗಿರುವನು, ಆದ್ದರಿಂದ ಭಗವಂತನು ’ಪ್ರದ’ ಎನಿಸುವನು (ಶ್ರೀ ಬನ್ನಂಜೆ ಅವರ ಪ್ರವಚನ ಆಧಾರಿತ). 

ಭಗವದ್ಗೀತೆಯ ೪ನೆಯ ಅಧ್ಯಾಯದ ೮ನೆಯ ಶ್ಲೋಕದಲ್ಲಿ ಭಗವಂತನು
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ |
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ || - ಸಾಧು ಪುರುಷರನ್ನು ಉದ್ಧರಿಸುವುದಕ್ಕಾಗಿ, ಪಾಪಕರ್ಮ ಮಾಡುವವರನ್ನು ವಿನಾಶ ಮಾಡಲಿಕ್ಕಾಗಿ ಮತ್ತು ಧರ್ಮವನ್ನು ಚೆನ್ನಾಗಿ ಸ್ಥಾಪಿಸುವುದಕ್ಕಾಗಿ ನಾನು ಯುಗ-ಯುಗಗಳಲ್ಲಿ ಪ್ರಕಟನಾಗುತ್ತೇನೆ ಎನ್ನುವ ಭರವಸೆಯನ್ನು ಕೊಟ್ಟಿರುವನು.  ತನ್ನನ್ನೇ ಬಯಸುವಂತಹ ಸಾಧು ಜನರಿಗಾಗಿ ಭಗವಂತ ತಾನು ಅಸಂಖ್ಯಾತ ಅವತಾರಗಳನ್ನು ಎತ್ತುತ್ತಲೇ ಇರುವೆನು ಎಂದು ತಿಳಿಸಿರುವನು. 

ಯಾರು ಸರ್ವ ಶ್ರೇಷ್ಠ ಗುಣಗಳನ್ನು ಹೊಂದಿರುವರೋ, ದೋಷ ರಹಿತರಾಗಿರುವರೋ ಅವರು ಇತರರ ದೋಷಗಳನ್ನು ದೂರ ಮಾಡಬಲ್ಲರು, ಅಭೀಷ್ಟಗಳನ್ನು ನೆರವೇರಿಸಬಲ್ಲರು.  ತಮ್ಮಲ್ಲೇ ದೋಷವಿದ್ದವರು, ತಮ್ಮ ದೋಷಗಳನ್ನೇ ಸರಿಪಡಿಸಿಕೊಳ್ಳಲಾರದವರು ಇತರರ ದೋಷಗಳನ್ನೂ, ಅವಗುಣಗಳನ್ನೂ ದೂರ ಮಾಡಲು ಅಸಾಧ್ಯವಾಗಿರುವುದು.  ಭಗವಂತನು ಸರ್ವ ಶ್ರೇಷ್ಠನು, ಉತ್ಕೃಷ್ಠನು ಎನ್ನುವುದನ್ನು ಶ್ರೀವಾದಿರಾಜ ಗುರುಗಳು ತಮ್ಮ "ಲಕ್ಷ್ಮೀ ಶೋಭಾನೆ" ಕೃತಿಯಲ್ಲಿ

ತಾ ದುಃಖಿಯಾದರೆ ಸುರತಿಯ ಕಳೆದು
ಮೋದವೀವುದಕೆ ಧರೆಗಾಗಿ |
ಮಾಧವ ಬಾಹನೆ ಕೆಸರೊಳು ಮುಳುಗಿದವ ಪರರ
ಬಾಧಿಪ ಕೆಸರ ಬಿಡಿಸುವನೆ? - ದೋಷ ರಹಿತನಾದ ಭಗವಂತನು ಮಾತ್ರವೇ ಇತರರ ದೋಷಗಳನ್ನು ದೂರ ಮಾಡುವ ಸಾಮರ್ಥ್ಯ ಉಳ್ಳವನಾಗಿರುವನು.  ತಾನೇ ಕೆಸರಿನಲ್ಲಿ ಮುಳುಗಿರುವವನು ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುವನಲ್ಲದೇ ಪರರನ್ನು ಬಾಧಿಸುವ ಕೆಸರನ್ನು ಬಿಡಿಸುವ ಸಾಹಸ ಮಾಡುವವನಲ್ಲ.  ತಾನು ಕೆಸರಿನಿಂದ ಮೇಲೆದ್ದರೆ ಮಾತ್ರವೇ ಕೆಸರಿನಲ್ಲಿ ಇನ್ನೂ ಮುಳುಗಿರುವ ಮತ್ತೊಬ್ಬನನ್ನು ಮೇಲೆತ್ತುವ ಆಲೋಚನೆ ಮಾಡಬಹುದು.  ಆದರೆ ಭಗವಂತ ಸರ್ವ ದುಃಖರಹಿತನೂ, ಸರ್ವ ದೋಷರಹಿತನೂ ಆಗಿರುವುದರಿಂದಲೇ ಮತ್ತೆ ಮತ್ತೆ ಅವತಾರಗಳನ್ನೆತ್ತುತ್ತಾ ಸುರಾದಿ ದೇವತೆಗಳ ದುಃಖ, ದೋಷಗಳನ್ನು ದೂರ ಮಾಡಿ ಅವರ ಮನಸ್ಸಿಗೆ ಮುದ ಕೊಡುವನು ಎಂದು ವಿವರಿಸಿದ್ದಾರೆ.  

ಕೈರವದಳಶ್ಯಾಮ - ಕೈ ಎಂದರೆ ಶಬ್ದವೆಂದೂ, ಶಬ್ದದ ಸಮುದಾಯವಾದ ’ವೇದ’ ಎಂದೂ ಒಂದರ್ಥವಿದೆ.  ಕೈ ಇಂದ ರವತಿ - ಈ ವೇದಗಳೆಂಬ ಶಬ್ದ ಸಮೂಹದಿಂದ ಪ್ರಕಟಗೊಳ್ಳುವವನಾದ ಭಗವಂತನು, ದಲನ - ನಾಶಮಾಡುವವನು, ಅಂದರೆ ನಮ್ಮ ಭವವನ್ನು ನಾಶ ಮಾಡುವವನಾಗಿರುವನು ಎಂದರ್ಥವಾಗುವುದು.  ಆದ್ದರಿಂದಲೇ ಅವನು ಕೈರವದಳನೆನಿಸುವನು (ಶ್ರೀ ಬನ್ನಂಜೆಯವರ ಪ್ರವಚನ ಆಧಾರಿತ).  "ಅಂಗುಷ್ಠಮಾತ್ರಃ ಪುರುಷೋsನ್ತರಾತ್ಮಾ, ಸದಾ ಜನಾನಾಂ ಹೃದಯೇ ಸನ್ನಿವಿಷ್ಟಃ"  - ಹೆಬ್ಬೆರಳ ಗಾತ್ರವುಳ್ಳ ಪುರುಷನು ಶರೀರದಲ್ಲಿ ಹೃದಯ ಮಧ್ಯದಲ್ಲಿ ಇದ್ದಾನೆ ಎಂಬ ಕಠೋಪನಿಷತ್ತಿನ ಮಾತಿನಂತೆ ಭಗವಂತನು ನಮ್ಮ ಹೃದಯದಲ್ಲಿಯೇ ಅಡಗಿ ಕುಳಿತಿರುವನು.   ಕೈರವ ಎಂದರೆ ನೀಲಿ ಬಣ್ಣದ ನೈದಿಲೆಯೆಂಬರ್ಥವಾಗುವುದು.  ಹೃದಯ ಕಮಲದಲ್ಲಿ ನೆಲೆಸಿರುವ ಭಗವಂತನು ನೈದಿಲೆಯಂತೆ ನೀಲವರ್ಣದಿಂದ ಹೊಳೆಯುತ್ತಾ ನೆಲೆಸಿರುವನು.

ಭಗವಂತನು ಕೈರವದಳ ಶ್ಯಾಮನೂ ಆಗಿರುವನು ಮತ್ತು ನೀಲಮೇಘಶ್ಯಾಮನೂ ಆಗಿರುವನು. ಶ್ಯಾಮ ಎಂಬ ನಾಮವನ್ನು ಬೇರೆಯಾಗಿಯೇ ಅರ್ಥೈಸಬಹುದಾಗಿದೆ.  ’ಶ್ಯಾ’ ಎಂದರೆ ಆನಂದ ಮತ್ತು ’ಮ’ ಎಂದರೆ ಜ್ಞಾನ.  ಭಗವಂತನು ಪರಿಪೂರ್ಣನಾದ ಜ್ಞಾನಾನಂದಮಯನು.  ಆದ್ದರಿಂದಲೇ ಅವನು "ಶ್ಯಾಮ".  ಶ್ಯಾಮನೆಂದರೆ ನೀಲವರ್ಣದವನು.  ನೈದಿಲೆಯಂತೆ ನೀಲವರ್ಣದವನಾದ ಭಗವಂತನು ನಮ್ಮ ಹೃತ್ಕಮಲದಲ್ಲಿಯೇ ವಾಸಿಸುವವನಾಗಿರುವನು.

ಶಬಲ - ಶಬಲ ಎಂದರೆ ಸಂಸ್ಕೃತದಲ್ಲಿ ನಾನಾವರ್ಣದ, ಚಿತ್ರವರ್ಣದ ಎಂಬ ಅರ್ಥವಿದೆ.  ಭಗವಂತನ ಶಬಲವೆಂಬ ವಿಶೇಷಣಕ್ಕೆ ಕೂಡ ನಾನಾವರ್ಣವಿರುವವನು ಅಥವಾ ಸಕಲ ವರ್ಣಗಳೂ ಇರುವವನು ಎಂಬ ಅರ್ಥವೇ ಆಗುವುದು.  ಶ್ಯಾಮರೂಪಿ ಭಗವಂತನು  ನೀಲವರ್ಣದವನು, ಶಬಲರೂಪಿ ಭಗವಂತನು ಸಕಲ ವರ್ಣದವನು.  ಶಬಲರೂಪವು ಅರ್ಜುನನು ಕಂಡಂತಹ ವಿಶ್ವರೂಪಿ ಭಗವಂತನದ್ದು.  ಇಡೀ ವಿಶ್ವದಲ್ಲೇ ತುಂಬಿರುವ ವಿಶ್ವ ನಾಮಕ ಭಗವಂತನು ಶಬಲನೆನಿಸುವನು.  ವಿಶ್ವದ ಪ್ರತೀ ವಸ್ತುವಿನಲ್ಲಿಯೂ ವ್ಯಾಪಿಸಿರುವ ಭಗವಂತನು, ಆಯಾ ವಸ್ತುವಿನಲ್ಲಿ ಅದೇ ರೂಪದಲ್ಲಿಯೇ, ಅದೇ ವರ್ಣದಲ್ಲಿಯೇ ನೆಲೆಸಿರುವನು.  ಆದ್ದರಿಂದಲೇ ಅವನು ವರ್ಣರಂಜಿನಾದವನು ಮತ್ತು ಶಬಲನಾಮಕನಾಗುವನು.  ಹೃತ್ಕಮಲದಲ್ಲಿರುವ ನೀಲವರ್ಣದ ಶ್ಯಾಮರೂಪಿ ಭಗವಂತನನ್ನು ಸರ್ವ ಶ್ರೇಷ್ಠ ಸಾಧನೆಯ ಮೂಲಕ ಅಪರೋಕ್ಷ ಜ್ಞಾನವನ್ನು ಪಡೆದ ಸಾಧಕರು ಕಾಣುವರು.  ಧ್ಯಾನದ ತುರೀಯಾವಸ್ಥೆಯಲ್ಲಿ ನೀಲವರ್ಣದ ಶ್ಯಾಮರೂಪವನ್ನು ಕಂಡವರು, ತಮ್ಮ ಎಚ್ಚರದ ಸ್ಥಿತಿಯಲ್ಲಿ ಸಕಲ ವರ್ಣದ ಶಬಲರೂಪವನ್ನು ಕಾಣುವರು.

ಛಾಂದೋಗ್ಯೋಪನಿಷತ್ತಿನಲ್ಲಿ "ಶ್ಯಾಮಾಚ್ಛಬಳಂ ಪ್ರಪದ್ಯೇ ಶಬಳಾಚ್ಛ್ಯಾಮಂ ಪ್ರಪದ್ಯೇ" - ಶ್ಯಾಮರೂಪನಾದ (ನೀಲವರ್ಣದಿಂದ) ಭಗವಂತನಿಂದ ಶಬಲರೂಪನಾದ (ಸಕಲ ವರ್ಣಗಳಿಂದ ಶೋಭಿತನಾದ, ವಿಶ್ವರೂಪದ) ಭಗವಂತನನ್ನು ಕಾಣುತ್ತಿದ್ದೇನೆ.  ಮರಳಿ ಶಬಲರೂಪದಿಂದ ಶ್ಯಾಮರೂಪದ ಉಪಾಸನೆಗೆ ಹಿಂದಿರುಗುವೆನು ಎಂಬ ಉಲ್ಲೇಖವಿದೆ.

ಶಬಲ ಮತ್ತು ಶ್ಯಾಮ ಎರಡೂ ಒಂದೇ ಅರ್ಥ ಕೊಡುವಂತಹ ವಿಶೇಷಣಗಳು.  ’ಶ’  ಎಂದರೆ ಆನಂದ, ’ಬ’ ಎಂದರೆ ಜ್ಞಾನ, ಮತ್ತು ’ಲ’ ಎಂದರೆ ಕೊಡುವವನು, ಜ್ಞಾನಾನಂದವನ್ನು ಕೊಡುವವನು.  ನಮಗೆ ಅಪೇಕ್ಷಿತವಾದ ಮತ್ತು ನಾವು ಬಯಸುವ ನಮ್ಮ ಸ್ವರೂಪಾನಂದವನ್ನು (ಶಬ) ಕೊಡುವವನು (ಲ) ಎಂಬ ಅರ್ಥವಾಗುತ್ತದೆ.  ಭಗವಂತನ ಈ ನಾಮವು ವೈದಿಕ ನಾಮವಾಗಿರುವುದು.

ಶರಣ್ಯ - ಶರಣ್ಯ ಎಂದರೆ ಶರಣಾಗತಿ ಎಂದು ಆಶ್ರಯ ಕೇಳಿ ಬಂದ ’ಶರಣ’ರಿಗೆ ಆಶ್ರಯವನ್ನು ಕಲ್ಪಿಸಿಕೊಡುವವನು, ಆಸರೆಯನ್ನು ನೀಡುವವನು, ಸರ್ವ ವಿಧದ ರಕ್ಷಣೆಯನ್ನೂ ಕೊಡುವವನು, ಆಶ್ರಯದಾತನು ಎಂಬ ಅರ್ಥವಾಗುವುದು.  ಪ್ರತಿಯೊಬ್ಬ ಜೀವಿಯೂ ಅಂತಿಮವಾಗಿ ಭಗವಂತನಿಗೇ ಮೊರೆಹೋಗಬೇಕು.  ಅವನನ್ನೇ ಆಶ್ರಯಿಸಬೇಕು.  ಹಾಗೆ ತನ್ನನ್ನೇ ಒಪ್ಪಿಸಿಕೊಳ್ಳುವುದೂ, ಮೋಕ್ಷವನ್ನು ಬಯಸುವುದೇ ಜನ್ಮದ ರಹಸ್ಯವೆಂದು ತಿಳಿದು, ಭಗವಂತನ್ನು ಆರಾಧಿಸಿದಾಗ, ನಮ್ಮ ಭವ ಬಂಧನವನ್ನು ಬಿಡಿಸಿ, ಆಶ್ರಯ ನೀಡಿ, ಭಗವಂತನು "ಶರಣ್ಯ"ನಾಮಕನಾಗುವನು.  ನಮ್ಮ ಸಹಸ್ರ ಅಪರಾಧಗಳನ್ನೂ ಮನ್ನಿಸಿ ಶರಣ್ಯನಾಗುವ ಭಗವಂತನು ಅಪಾರ ಕರುಣಾಮಯನಾಗಿರುವನು.

ಭಗವದ್ಗೀತೆಯ ೯ನೆಯ ಅಧ್ಯಾಯದ ೧೮ನೆಯ ಶ್ಲೋಕದಲ್ಲಿ "ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್" - ಸಂಸಾರ ಭೀತರಿಗೂ ಮುಕ್ತಾತ್ಮರಿಗೂ ಆಶ್ರಯನಾಗಿರುವುದರಿಂದಲೇ ತಾನು ’ಶರಣಂ’ ಎನಿಸಿರುವೆನೆಂದು ಭಗವಂತನು ತಿಳಿಸಿರುವನು.

ವಿಷ್ಣು ಸಹಸ್ರನಾಮದಲ್ಲಿ "ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ" - ಸಂಸಾರದಲ್ಲಿ ಪರಿತಪಿಸುತ್ತಿರುವ ಅಜ್ಞಾನಿಗಳಿಗಷ್ಟೇ ಆಶ್ರಯನಲ್ಲ, ಜ್ಞಾನಿಗಳಿಗೂ ಮತ್ತು ಮುಕ್ತಾತ್ಮರಿಗೂ ಕೂಡ ಶ್ರೀಹರಿಯೇ ಆಶ್ರಯನು  ಎಂಬುದಾಗಿ ಉಲ್ಲೇಖಿಸಲಾಗಿದೆ.

ಶಾಶ್ವತ -  ಭಗವಂತನಲ್ಲಿರುವ ಸರ್ವ ಗುಣಗಳೂ, ಸದಾ ಸರ್ವದಾ, ಬದಲಾವಣೆಗೊಳಗಾಗದೇ ಪ್ರಾಕೃತಿಕವಾಗಿ ಇರುವಂತಹ ಗುಣಗಳು.  ಅವನ ಕರುಣಾಸಮುದ್ರವೆಂದೂ ಬತ್ತುವುದೇ ಇಲ್ಲ.  ಭಕ್ತರೆಡೆಗಿನ ಭಗವಂತನ ಕರುಣೆ, ವಾತ್ಸಲ್ಯ, ಪ್ರೀತಿ ಶಾಶ್ವತವಾಗಿ ಅನಾದಿಯಿಂದಲೂ, ಅನಂತ ಕಾಲದವರೆಗೂ ಹರಿಯುತ್ತಲೇ ಇರುವುದರಿಂದ, ಅವನು "ಶಾಶ್ವತ"ನೆಂಬ ವಿಶೇಷಣದಿಂದ ಕರೆಯಲ್ಪಡುವನು.  ಶಾಶ್ವತನೆಂದರೆ ಸಮಸ್ತವನ್ನೂ, ಎಲ್ಲಾ ಕಾಲದಲ್ಲಿಯೂ ತಿಳಿಯಬಲ್ಲವನು, ಪೂರ್ಣಜ್ಞಾನ ಸ್ವರೂಪನೂ ಆಗಿರುವನೆಂದು ತಿಳಿಯಬೇಕು.  ಶಾಶ್ವತ ಎಂಬ ನಾಮವನ್ನು ಬಿಡಿಸಿದಾಗ, ಈ ನಾಮದಲ್ಲಿಯೂ ’ಶಾ’ ಎಂದರೆ ಆನಂದ, ’ಅಶ್ವ’ ಎಂದರೆ ಹಯಗ್ರೀವ ರೂಪಿಯಾಗಿರುವವನು ಮತ್ತು ’ತ’ ಎಂದರೆ ತತನಾಗಿರುವವನು ಎಂಬ ಅನುಸಂಧಾನ ಮಾಡಿಕೊಳ್ಳಬೇಕು.  ಶ್ರೀಹರಿಯು ಸದಾ ಆನಂದ ಸ್ವರೂಪನಲ್ಲದೇ ಬೇರೆ ಅಲ್ಲವೇ ಅಲ್ಲ ಎಂಬುದನ್ನು ಪುನರಾವೃತ್ತಿಯಾಗಿ ದಾಸರಾಯರು ಉಲ್ಲೇಖಿಸುತ್ತಲೇ ಭಗವಂತನ ಕಾರುಣ್ಯದ ವರ್ಣನೆ ಮಾಡಿರುವರು. 

ಮಾಂಡೂಕೋಪನಿಷತ್ತಿನಲ್ಲಿ "ಓಮಿತ್ಯೇತದಕ್ಷರಮಿದಂ ಸರ್ವಂ ತಸ್ಯೋಪವ್ಯಾಖ್ಯಾನಂ ಭೂತಂ ಭವದ್ ಭವಿಷ್ಯದಿತಿ" - ಓಂ ಎನಿಸುವ ಭಗವಂತನು ನಾಶರಹಿತನಾದ ಪ್ರಯುಕ್ತ ಅಕ್ಷರ ಎನಿಸಿಕೊಂಡು ಭೂತ, ಭವಿಷ್ಯದ್, ವರ್ತಮಾನ ಕಾಲಗಳಲ್ಲೂ ಒಂದೇ ರೀತಿಯಾಗಿಯೇ ಇರುವನು ಎಂದು ತಿಳಿಸಲ್ಪಟ್ಟಿದೆ.    ಮಹಾನಾರಾಯಣೋಪನಿಷತ್ತಿನ ಸಪ್ತಮೋಧ್ಯಾಯ (ಉತ್ತರ ಕಾಂಡ) ೫ನೆಯ ಮಂತ್ರದಲ್ಲಿ ಭಗವಂತನನ್ನು "ಮನೋವಾಚಾಮಗೋಚರಂ, ನಿತ್ಯಮುಕ್ತ ಸ್ವರೂಪಂ..... ಎಂದೆಲ್ಲಾ ವರ್ಣಿಸುತ್ತಾ "ದೇಶತಃ ಕಾಲತೋ ವಸ್ತುತಃ ಪರಿಚ್ಛೇದರಹಿತಂ ನಿರಂತ ರಾಭಿನವಂ ನಿತ್ಯಪರಿಪೂರ್ಣಂ, ಅಖಂಡಾನಂದಾಮೃತ ವಿಶೇಷಂ, ಶಾಶ್ವತಂ ಪರಮಪದಂ" - ದೇಶದಿಂದ, ಕಾಲದಿಂದ, ವಸ್ತುವಿನಿಂದ, ಪರಿಚ್ಛಿನ್ನವಾಗದಂಥದ್ದು, ನಿರಂತರವೂ ಅಭಿನವವಾದುದು, ನಿತ್ಯ ಪರಿಪೂರ್ಣವಾದುದು, ಅಖಂಡಾನಂದಾಮೃತ ವಿಶೇಷ ಹಾಗೂ ಶಾಶ್ವತ, ಪರಮಪದ ಎಂಬ ವಿವರಣೆಯಿದೆ.

ಭಗವದ್ಗೀತೆಯ ೨ನೆಯ ಅಧ್ಯಾಯ ೨೦ನೆಯ ಶ್ಲೋಕದಲ್ಲಿ "ಅಜೋ ನಿತ್ಯಃ ಶಾಶ್ವತೋSಯಂ ಪುರಾಣೋ" - ಭಗವಂತನು ತಾನು ಜನ್ಮರಹಿತನೂ, ನಿತ್ಯನೂ, ಸನಾತನನೂ ಮತ್ತು ಪುರಾತನನೂ ಆಗಿರುವುದರಿಂದ ಶಾಶ್ವತನು ಎಂದು ಸ್ವಯಂ ಉಲ್ಲೇಖಿಸಿದ್ದಾನೆ.
ವಿಷ್ಣುಸಹಸ್ರನಾಮದಲ್ಲಿಯೂ "ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ" -  ಭಗವಂತನು ಅನಾದಿ ಹಾಗೂ ಅನಂತನಾದ್ದರಿಂದಲೇ ಅವನು ಶಾಶ್ವತನು ಎಂದಿದ್ದಾರೆ.    

ಶಾರ್ಕರಾಕ್ಷ್ಯಸಖ - ಶರ್ಕರಾ ಎಂದರೆ ಅತ್ಯಂತ ಸೂಕ್ಷ್ಮವಾದ, ಅಕ್ಷ ಎಂದರೆ ದೃಷ್ಟಿ ಉಳ್ಳವರು ಎಂದು ಅರ್ಥವಾಗುತ್ತದೆ.  ಅತ್ಯಂತ ಸೂಕ್ಷ್ಮವಾದ ಕಣ್ಣು (ದೃಷ್ಟಿ)ಗಳುಳ್ಳ ಋಷಿಗಳ ಸಮೂಹ.  ಇವರಲ್ಲಿ ಪ್ರಖ್ಯಾತರಾದವರು ಶಾರ್ಕರಾಕ್ಷ್ಯರು ಎಂಬ ಮುನಿಗಳು.   ಶ್ರೀಮದಾಚಾರ್ಯರು ತಮ್ಮ ಮಹೈತರೇಯೋಪನಿಷದ್ಭಾಷ್ಯದಲ್ಲಿ "ಸೂಕ್ಷ್ಯ ದೃಷ್ಟಿಯುತಾ ಯೇ ತು ಮುನಯಃ ಶಾರ್ಕರಾಕ್ಷ್ಯಕಾಃ" - ಸೂಕ್ಷ್ಮ ದೃಷ್ಟಿಯುಕ್ತರಾದ ಶಾರ್ಕರಾಕ್ಷ್ಯರೆಂಬ ಹೆಸರಿನ ಯಾವ ಮುನಿಗಳಿರುವರೋ ಅವರಿಗೆ ಅತ್ಯಂತ ಬೇಕಾದವನಾಗಿ, ಪ್ರೀತಿಪಾತ್ರದವನಾಗಿ, ಸಖನಾಗಿ ಇರುವ ಭಗವಂತನ ರೂಪವೇ ’ಶಾರ್ಕರಾಕ್ಷ್ಯಸಖ’ ರೂಪ ಎಂದು ತಿಳಿಸಿದ್ದಾರೆ.

ಶರ್ಕರಾಕ್ಷರು ಎಂದರೆ ಬ್ರಹ್ಮ ಜ್ಞಾನಿಗಳು, ಭಗವಂತ ಅವರಿಗೆ ಪ್ರಿಯನಾದವನು, ಆದ್ದರಿಂದಲೇ ಸಖನಾಗುವನು.  ಶರ್ಕರಾಕ್ಷ ಎಂಬ ಶಬ್ದವನ್ನು ಬಿಡಿಸಿದಾಗ ಶ = ಸುಖರೂಪಿಯಾದ, ರ = ಕ್ರೀಡೆ (ಸೃಷ್ಟಿಯೇ ಮುಂತಾದ ಆಟಗಳನ್ನಾಡುವ), ಕ = ಪೂರ್ಣನಾದ ಪರಮಾತ್ಮನಲ್ಲಿ, ರಾ= ರಕ್ತಿ / ಆಸಕ್ತಿ ಸಹಿತನಾದ, ಅಕ್ಷ = ಕಣ್ಣುಳ್ಳವನು ಶರ್ಕರಾಕ್ಷನು.  ಅವರಿಗೆ ಸಖನಾದ ಭಗವಂತನೆಂದರೆ, ಸ್ನೇಹಿತ / ಪ್ರಿಯವಾದವನು ಎಂಬ ಅರ್ಥ ತಿಳಿಯಬಹುದು.  ಶರ್ಕರಾಕ್ಷ ಎಂದರೆ ವಾಯುದೇವರು ಎಂದೂ ಅರ್ಥವಾಗುವುದು.  ವಾಯುದೇವರಿಗೆ ಪ್ರಿಯನಾದವನು ಭಗವಂತ ಎಂದು ಕೂಡ ತಿಳಿಯಬಹುದು (ಶ್ರೀ ಕೆ ಎಂ ಕೃಷ್ಣರಾವ ಪುಸ್ತಕ ಆಧಾರಿತ).

ಭಗವಂತನು ಎರಡು ವಿಧದಿಂದ ಪುರುಷಾಕಾರದ ಶರೀರ ಪ್ರವೇಶ ಮಾಡುವನು.  ಮೊದಲನೆಯದಾಗಿ ಪಾದದ ಮೂಲಕ ಮತ್ತು ಎರಡನೆಯದಾಗಿ ತಲೆಯ ಮೂಲಕ.  ಪಾದದ ಮೂಲಕ ಪ್ರವೇಶಿಸಿದ್ದರಿಂದ ಪುರುಷನ ಕಾಲಿನ ತುದಿಗೆ ’ಪ್ರಪದ’ ಎಂಬ ಹೆಸರಾಯಿತು.  ಐತರೇಯೋಪನಿಷತ್ತಿನಲ್ಲಿ ತಿಳಿಸಿರುವಂತೆ ವಾಸುದೇವ ರೂಪಿ ಭಗವಂತನು ಪುರುಷಾಕಾರದ ಚತುರ್ಮುಖ ಶರೀರವನ್ನು, ವಾಯು ಹಾಗೂ ಇತರ ಇಂದ್ರಿಯಾಭಿಮಾನಿ ದೇವತೆಗಳೊಂದಿಗೆ ಪಾದದ ಮೂಲಕ ಪ್ರವೇಶಿಸುವನು.  ಪುರುಷಾಕಾರದ ಹೊಟ್ಟೆಯ ಭಾಗದಲ್ಲಿ ಭಗವಂತನು ತನ್ನ ಜೊತೆ ಬಂದಿದ್ದ ವಾಯುದೇವರಿಗೆ ನೆಲೆಸಿ ಬಹುವಾಗಿ ಅನ್ನ ಉಂಡು ತನ್ನನ್ನು ಸ್ತುತಿಸುವಂತೆ ಆದೇಶಿಸುವನು.  ವಾಯುದೇವನು ಭಗವಂತನ ಆದೇಶವನ್ನು ಪಾಲಿಸಿದ ಹೊಟ್ಟೆಯ ಭಾಗವು ’ಉದರ’ ಎನಿಸಿಕೊಂಡಿತು.  ’ಉದ್’ ಚೆನ್ನಾಗಿ ’ಅರ’ ಉಂಡ ಮತ್ತು ಸ್ತೋತ್ರ ಮಾಡಿದ ಸ್ಥಳವಾದ್ದರಿಂದ ಅದು ಉದರವೆನಿಸಿತು.   ಶಾರ್ಕರಾಕ್ಷ್ಯರೆಂದು ಕರೆಯಲ್ಪಡುವ ಮುನಿಗಳ ಸಮೂಹವು ಭಗವಂತನನ್ನು "ಉದರ" ಎಂದು ಉಪಾಸನೆಗೈಯುವವರು.  ಉದರ ಎಂದರೆ ನಿಜವಾದ ಉದರವೆಂಬ ಅಂಗವಲ್ಲ, ಉದರವನ್ನು ಸ್ಥಳವನ್ನಾಗಿಸಿಕೊಂಡು ನೆಲೆ ನಿಂತಿರುವ ’ಉದರನಾಮಕ’ ಭಗವಂತನ ರೂಪವನ್ನು ಶಾರ್ಕರಾಕ್ಷ್ಯರು ಉಪಾಸನೆ ಮಾಡುವರು ಎಂಬ ಅರ್ಥವಾಗುವುದು.

ಮಹೈತರೇಯೋಪನಿಷತ್ತಿನಲ್ಲಿ ಶಾರ್ಕರಾಕ್ಷ್ಯರನ್ನು "ಉದರಂ ಬ್ರಹ್ಮೇತಿ ಶಾರ್ಕರಾಕ್ಷ್ಯಾ ಉಪಾಸತೇ" - ಶಾರ್ಕರಾಕ್ಷ್ಯ ಮುನಿಗಳು ಉದರದಲ್ಲಿರುವ ವಾಸುದೇವ ರೂಪವನ್ನು ಪರಬ್ರಹ್ಮನೆಂದು ಉಪಾಸನೆ ಮಾಡುವರು ಎಂಬ ಉಲ್ಲೇಖವಿದೆ.  ಇದನ್ನೇ ಆಚಾರ್ಯರು ತಮ್ಮ ಭಾಷ್ಯದಲ್ಲಿ "ಉದರೇ ತೇ ಪರಂ ಬ್ರಹ್ಮ ವಾಸುದೇವಮುಪಾಸತೇ"  ಎಂದು ವಿವರಿಸಿದ್ದಾರೆ.

ಭಾಗವತ ದಶಮಸ್ಕಂಧ, ೯೬ನೆಯ ಅಧ್ಯಾಯದಲ್ಲಿ ’ಶ್ರುತಿಗೀತೆ’ಯ ಐದನೆಯ ಪದ್ಯ "ಉದರಮುಪಾಸತೇ ಯರ್ಹಿ ವರ್ತ್ಮನಿ ಸೂಕ್ಷ್ಮದೃಶಃ" - ಬ್ರಹ್ಮ ವಿಚಾರ ಮಾರ್ಗದಲ್ಲಿ ಸೂಕ್ಷ್ಮದೃಷ್ಟಿಯುಳ್ಳ ಶಾರ್ಕರಾಕ್ಷ್ಯ ಮುನಿಗಳು ಉದರನಾಮಕನಾದ ಹರಿಯನ್ನು ಉಪಾಸಿಸುತ್ತಾರೆ.  ’ಶರ್ಕರಾ’ ಎಂದರೆ ಸಣ್ಣ ಮರಳಿನಂತೆ ಸೂಕ್ಷ್ಮವಾದ ಮತ್ತು ’ಅಕ್ಷಿ’ ಎಂದರೆ ಕಣ್ಣಿನ ದೃಷ್ಟಿ ಉಳ್ಳ ಮುನಿಗಳು ಶಾರ್ಕರಾಕ್ಷ್ಯರೆಂದು ಕರೆಯಲ್ಪಡುವರು.  ಇವರು ಉದರದಲ್ಲಿ ಉದರನಾಮಕನಾದ ಹರಿಯನ್ನು ಉಪಾಸನೆ ಮಾಡಿ ಬ್ರಹ್ಮನಾಡಿಯಿಂದ ಉತ್ಕ್ರಮಣ ಮಾಡಿ ಹರಿಯನ್ನು ಹೊಂದುವುದರಿಂದ ತಿರುಗಿ ಸಂಸಾರ ಬಂಧನದಲ್ಲಿ ಬೀಳುವುದಿಲ್ಲವೆಂದು ತಿಳಿಸಲಾಗಿದೆ.  (ಶ್ರೀ ಹಯವದನ ಪುರಾಣಿಕರ ಭಾಗವತ ತಾತ್ಪರ್ಯ ನಿರ್ಣಯ ಆಧಾರಿತ).

ಸಾಮಸನ್ನುತ - ಸಾಮಸನ್ನುತನೆಂದರೆ ಸಾಮವೇದದಿಂದ ಸ್ತುತಿಸಲ್ಪಡುವವನು.  ಭಗವಂತನು ಸಾಮಗಾನ ಪ್ರಿಯನಾದವನು.  ಸಮಸ್ತ ಮುನಿಗಳೂ ಭಗವಂತನನ್ನು ಸಾಮಾದಿ ವೇದಮಂತ್ರಗಳಿಂದಲೇ, ಸಾಮಗಾನ ಪ್ರಿಯನನ್ನು ಸ್ತುತಿಸಿ, ಉಪಾಸನೆ ಮಾಡುವರು.  ವೇದಮಂತ್ರಪೂರ್ವಕವಾಗಿ ಮನಸ್ಸನ್ನು ಭಗವಂತನಿಗೆ ಸಮರ್ಪಿಸಿದಾಗ ಮಾತ್ರವೇ ಮನಸ್ಸು ಭಗವಂತನಲ್ಲಿ ನೆಲೆ ನಿಲ್ಲಬಹುದಾಗಿದೆ.   ಸಾಮವೇದದ ವಿಶೇಷತೆಯೆಂದರೆ ಭಗವಂತನು ವೇದನಾಮಗಳೊಂದಿಗೆ ನಾದದಿಂದಲೂ ಸ್ತುತಿಸಲ್ಪಡುವನು.  ’ಸಾಮ’ ಎಂದರೆ ಭಗವಂತನು ಸಮಸ್ತ ರೂಪಗಳಲ್ಲಿಯೂ ಸಮನಾಗಿರುವನು, ಸಮಸ್ತ ಗುಣಪೂರ್ಣನಾಗಿರುವನು ಎಂಬ ಅರ್ಥವಾಗುವುದು.  ’ಸತ್’ ಶಬ್ದವು ವೇದಗಳಲ್ಲಿ ಬ್ರಹ್ಮ ಮತ್ತು ವಾಯುಗಳ ಹೆಸರಾಗಿರುವುದು.  ಅವರುಗಳಿಂದ ವಿಶೇಷವಾಗಿ ಸ್ತುತಿಸಲ್ಪಡುವವನು ಎಂದೂ ಅರ್ಥವಾಗುವುದು.  ಸನ್ನುತ ಶಬ್ದವನ್ನು ಬಿಡಿಸಿದಾಗ ಸತ್ ಎಂದರೆ ಸಜ್ಜನರಿಂದ ನುತ ಸ್ತುತಿಸಲ್ಪಡುವವನೂ ಎಂಬ ಅರ್ಥವೂ ಇರುವುದು.  ಸ ಎಂದರೆ ಭಾರತೀದೇವಿ, ವಾಗ್ದೇವತೆ ಹಾಗೂ ಅಮ ಎಂದರೆ ವಾಯುದೇವರು.  ಸಾಮ ಎಂದರೆ ಭಾರತೀದೇವಿ ಹಾಗೂ ಮುಖ್ಯಪ್ರಾಣ ದೇವರಿಂದ ಸ್ತುತಿಸಲ್ಪಡುವವನು ಎಂಬ ಅರ್ಥವೂ ಆಗುವುದು (ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಆಧಾರಿತ). 

ಭಗವದ್ಗೀತೆಯ ೧೦ನೆಯ ಅಧ್ಯಾಯದ ೨೨ನೆಯ ಶ್ಲೋಕದಲ್ಲಿ ಭಗವಂತ "ವೇದಾನಾಂ ಸಾಮವೇದೋಸ್ಮಿ.." ಎನ್ನುತ್ತಾ ತಾನು ಸಾಮಗಾನ ಪ್ರಿಯನೂ, ಸಾಮವೇದ ಮಂತ್ರಗಳಿಂದ ಸ್ತುತಿಸಿದವರಿಗೆ ಒಲಿಯುವೆನೆಂಬುದನ್ನೂ ಸ್ವತಃ ತಿಳಿಸಿದ್ದಾನೆ. 


ಸಕಲಗುಣಗಣಧಾಮ - ’ಸಕಲ’ ಎಂದರೆ ಷೋಡಶ ಕಲೆಗಳಿಗೂ ನಿಯಾಮಕನಾಗಿ, ಅದರ ಜೊತೆಗೇ ಇರುವವನು ಎಂಬರ್ಥವಾಗುವುದು.  ’ಗುಣ’ ಎಂದರೆ ಸಮಸ್ತ ಗುಣ ಪರಿಪೂರ್ಣನು, ದೋಷರಹಿತನು ಎಂಬರ್ಥವಾಗುವುದು.  ’ಗಣ’ ಎಂದರೆ ಸಮಸ್ತ ಭಕ್ತರ ಸಾಧನೆಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವವನು.  ’ಧಾ’ ಎಂದರೆ ಜಗತ್ತಿಗೇ ಧಾರಕನಾಗಿರುವವನು, ’ಧಾಮ’ ಎಂದರೆ ಸಮಸ್ತ ಗುಣಗಳ ಸಮೂಹಕ್ಕೆ ಅಮಿತ ಧಾರಕನಾಗಿರುವವನು , ಆಶ್ರಯದಾತನು ಎಂಬ ಅರ್ಥವಾಗುವುದು.

ಶ್ರೀ ಜಗನ್ನಾಥ ವಿಟ್ಠಲ - ಶ್ರೀ ಎಂದರೆ ಲಕ್ಷ್ಮೀದೇವಿ ಮತ್ತು ಜಗತ್ ಎಂದರೆ ಸರ್ವ ವ್ಯಾಪ್ತನಾಗಿರುವ ಪ್ರಾಣದೇವರಿಗೆ ’ನಾಥ’ ನಾಗಿರುವ ಭಗವಂತನು ಎಂಬರ್ಥವಾಗುವುದು.  ’ವಿಟ್’ ಎಂದರೆ ಅಜ್ಞಾನಿಗಳಿಗೆ ಜ್ಞಾನವನ್ನು ’ಲ’ ಎಂದರೆ ಕೊಟ್ಟು, ಅವರನ್ನು ಉದ್ಧರಿಸುವವನಾದ ಭಗವಂತನು ’ವಿಟ್ಠಲ’ನೆನಿಸುವನು. 

ನೀ ಮಹಿಯೊಳವತರಿಸಿ ಸಲಹಿದೆ ಸಕಲ ಸುಜನರನು - ಕಾಲ ಕಾಲಕ್ಕೆ ಧರ್ಮವನ್ನು ರಕ್ಷಿಸುವ ಸಲುವಾಗಿ ಭಗವಂತನು ಅನೇಕ ಅವತಾರಗಳಲ್ಲಿ ಪ್ರಾದುರ್ಭವಿಸುತ್ತಾ ಈ ಮಹಿಯೊಳಗೆ ಸಜ್ಜನರನ್ನು ಸಲಹುವನು.  ಭಗವಂತನು ಸ್ಥೂಲ ಬುದ್ಧಿಯವರೂ, ಅಜ್ಞಾನಿಗಳೂ ಆದ ನಮ್ಮನ್ನು ಉದ್ಧರಿಸುವ ಪರಮ ಕರುಣಾಮಯಿಯಾದವನು.  ಕರುಣಾಸಾಗರನು.  ಉಪನಿಷತ್ ಪ್ರತಿಪಾದ್ಯವಾದ ಭಗವಂತನ ರೂಪಗಳನ್ನೂ, ವಿಷ್ಣು ಸಹಸ್ರನಾಮದ ನಾಮಗಳನ್ನೂ ಉಲ್ಲೇಖಿಸುತ್ತಾ, ಸಕಲ ಶ್ರುತಿಸ್ಮೃತಿಗಳ ರಹಸ್ಯವನ್ನು ಸರಳವಾಗಿ ವಿವರಿಸುತ್ತಾ ಶ್ರೀಜಗನ್ನಾಥ ದಾಸರು, ಭಗವಂತನ ಅಪಾರ ಕರುಣೆಯನ್ನು ’ಕರುಣಾಸಂಧಿ’ ಎಂದೇ ಕರೆದಿರುವ ೩೧ ಪದ್ಯಗಳ ಸುಂದರ ಹೂವಿನ ಗುಚ್ಛದಲ್ಲಿ ವಿಧವಿಧವಾದ ಉಪಮೆಗಳ ಸಹಿತವಾಗಿ ವಿವರಿಸಿದ್ದಾರೆ.


 " ಶ್ರೀ ಕೃಷ್ಣಾರ್ಪಣಮಸ್ತು "

ಭಗವಂತನ ಕೃಪೆಯಿಂದ ಹರಿಕಥಾಮೃತಸಾರವೆಂಬ ಮೇರು ಗ್ರಂಥದ ಮೊದಲ ಎರಡು ಸಂಧಿಗಳಾದ "ಮಂಗಳಾಚರಣ ಸಂಧಿ" ಮತ್ತು "ಕರುಣಾಸಂಧಿ"ಯ ಪದ್ಯಗಳ ಅರ್ಥ ವಿವರಣೆಯು  ಇಲ್ಲಿಗೆ ಸಂಪನ್ನವಾಗಿದೆ.  ನಮಗೆ ತಿಳಿದ ಮಟ್ಟಿಗೆ ಮಾಡಿರುವ ಈ ನಮ್ಮ ಚಿಕ್ಕ ಪ್ರಯತ್ನವನ್ನು ೨-೩ ವರ್ಷಗಳಿಂದಲೂ  ಸತತವಾಗಿ ಓದಿ ನಮ್ಮನ್ನು ಪ್ರೋತ್ಸಾಹಿಸಿದ  ಎಲ್ಲಾ ಆಧ್ಯಾತ್ಮ ಬಂಧುಗಳಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
 ಚಿತ್ರಕೃಪೆ : ಅಂತರ್ಜಾಲ

No comments: