Friday, February 28, 2014

ಕರುಣಾ ಸಂಧಿ - ೧೮ ನೇ ಪದ್ಯ

ಭುವನ ಪಾವನಚರಿತ ಪುಣ್ಯ
ಶ್ರವಣ ಕೀರ್ತನ ಪಾಪನಾಶನ
ಕವಿಭಿರೀಡಿತ ಕೈರವದಳ ಶ್ಯಾಮ   ನಿಸ್ಸೀಮ |
ಯುವತಿ ವೇಷದಿ ಹಿಂದೆ ಗೌರೀ
ಧವನ ಮೋಹಿಸಿ ಕೆಡಿಸಿ ಉಳಿಸಿದ
ಇವನ ಮಾವಯ ಗೆಲುವನಾವನು ಈ ಜಗತ್ರಯದಿ  ||೧೮||

ಪ್ರತಿಪದಾರ್ಥ : ಭುವನ ಪಾವನಚರಿತ - ೧೪ ಲೋಕಗಳನ್ನೂ ಪವಿತ್ರಗೊಳಿಸುವಂತಹ ಮಹಿಮೆಯ ಕಥೆಯನ್ನುಳ್ಳವನು, ಪುಣ್ಯ ಶ್ರವಣ ಕೀರ್ತನ - ತನ್ನ ಕಥಾ ಶ್ರವಣ ಮಾಡುವವರಿಗೂ ಶ್ರವಣ ಮಾಡುವವರಿಗೂ ಪುಣ್ಯ ಕೊಡುವವನು, ಪಾಪನಾಶನ - ಸಮಸ್ತ ಪಾಪಗಳನ್ನೂ ನಾಶ ಮಾಡುವವನು, ಕವಿಭಿರೀಡಿತ - ಕವಿ ಎಂದರೆ ಜ್ಞಾನಿಗಳು ಈ ಡಿತ ಎಂದರೆ ಸ್ತುತನಾದವನು ಎಂದರ್ಥ, ಕೈರವದಳ ಶ್ಯಾಮ - ನೈದಿಲೆ ದಳದ ನೀಲವರ್ಣದಂತೆ ವಿಶಿಷ್ಟವಾದ ಕಾಂತಿಯುಳ್ಳವನು, ನಿಸ್ಸೀಮ - ದೇಶ ಕಾಲ ಗುಣಗಳಲ್ಲಿ ಮಿತಿಯಿಲ್ಲದವನು, ಯುವತಿ ವೇಶದಿ - ಸಮುದ್ರ ಮಥನ ಸಮಯದಲ್ಲಿ ಮೋಹಿನಿ ವೇಷ ಧರಿಸಿ, ಹಿಂದೆ - ಶಿವ ಮೋಹಿನಿ ರೂಪವನ್ನು ನೋಡಬೇಕೆಂದು ಪ್ರಾರ್ಥಿಸಿದಾಗ, ಗೌರಿಧವನ - ಪಾರ್ವತಿ ಪತಿಯಾದ ಶಿವನ, ಮೋಹಿಸಿ - ಮೋಹಗೊಳಿಸಿ, ಕೆಡಿಸಿ - ಆ ಸಮಯದಲ್ಲಿ ಶಿವನಿಗೆ ಅಜ್ಞಾನ ಕೊಟ್ಟು, ಉಳಿಸಿದ - ರಕ್ಷಿಸಿದ, ಇವನ ಮಾಯವ ಗೆಲುವನಾವನು - ಭಗವಂತನಾದ ಶ್ರೀಹರಿಯ ಮಾಯೆಯನ್ನು ಯಾರಿಂದ ಗೆಲ್ಲಲು ಸಾಧ್ಯವಿದೆ, ಈ ಜಗತ್ರಯದಿ - ಮೂರು ಲೋಕಗಳಲ್ಲಿಯೂ.
 

ಚತುರ್ದಶ ಲೋಕಗಳಲ್ಲಿ ಪವಿತ್ರತರವಾದ ಚರಿತ್ರೆಗಳುಳ್ಳ ಜೀವರು ಮೋಕ್ಷ ಪಡೆಯುವುದಕ್ಕಾಗಿ ಪುಣ್ಯಕಾರ್ಯವಾದ ಸಚ್ಚಾಸ್ತ್ರಗಳ ಶ್ರವಣ ಮತ್ತು ಪಠಣ ಮಾಡುವುದರಿ೦ದ, ಇ೦ತಹ ಸುಜೀವರ ಪಾಪನಾಶನೂ ಆದ  ಭಗವ೦ತನು, ಬ್ರಹ್ಮಾದಿ ದೇವತೆಗಳಿಂದ ಸ್ತುತಿಸಲ್ಪಟ್ಟವನೂ,  ನೈದಿಲೆಯಂತೆ ನೀಲವರ್ಣದವನೂ, ವಿಶಿಷ್ಟವಾದ ಕಾಂತಿಯುಳ್ಳವನೂ ಆಗಿರುವ ಮಹಾ ನಿಸ್ಸೀಮನು. ಬ್ರಹ್ಮಜ್ಞಾನಿಗಳಿ೦ದ ಸ್ತುತ್ಯನಾದ ಅತ್ಯ೦ತ ಪರಾಕ್ರಮಶಾಲಿಯೂ ಆಗಿದ್ದಾನೆ.   ಅಮೃತ ಮಂಥನ ಕಾಲದಲ್ಲಿ ಇವನು ಧರಿಸಿದ ಮೋಹಿನಿ ವೇಷವನ್ನು ನೋಡಲಿಲ್ಲವೆಂದು ಪಾರ್ವತೀ ಪತಿಯಾದ ರುದ್ರನು ಕೇಳಿದಾಗ, ಮೋಹಿನಿ ರೂಪವನ್ನು ತಾಳಿ ನಿಂತ ವಿಷ್ಣುವನ್ನು ಹೆಣ್ಣೆಂದೇ ಭಾವಿಸಿ, ರುದ್ರನು ವರ್ತಿಸಿದಾಗ, ಅಜ್ಞಾನವನ್ನು ಕೊಟ್ಟು ಕೆಡಿಸಿ, ನ೦ತರ ಜ್ಞಾನವನ್ನು ಕೊಟ್ಟು ಸ೦ರಕ್ಷಣೆ ಮಾಡುತ್ತಾನೆ. ಇಂತಹವನ ಮಾಯೆಯನ್ನು ಮೂರು ಜಗದಲ್ಲಿ ಯಾರಿಗಾದರೂ ಗೆಲ್ಲಲು ಸಾಧ್ಯವೇ ?  ಮನ್ಮಥ ದಹನ ಮಾಡಿದ ಫಾಲಾಕ್ಷನದೇ ಈ ಪಾಡಾದ ಮೇಲೆ ಬೇರೆಯವರ ಪಾಡೇನು ? 

ಹಿಂದಿನ ಪದ್ಯದಲ್ಲಿ ಶ್ರೀ ಜಗನ್ನಾಥದಾಸರು ಶ್ರೀಹರಿಯು ಸಜ್ಜನ ಭಕ್ತರಿಗೆ ಕರುಣಿಸುವ ಮೋಕ್ಷಸುಖದ ವಿಷಯವನ್ನು ತಿಳಿಸಿದ್ದರು.  ಈ ಪದ್ಯದಲ್ಲಿ, ಭಕ್ತನು ಸಂಸಾರದಲ್ಲಿದ್ದರೂ, ಅವನಿಗೆ ವಿಷಯ ಸುಖಗಳನ್ನು ನೀಡಿ, ಆ ಸುಖದಲ್ಲಿಯೇ ಅವನು ಮುಳುಗದಂತೆಯೂ ಎಚ್ಚರಿಸುವ, ರಕ್ಷಿಸುವ ಭಗವಂತನ ಕಾರುಣ್ಯವನ್ನು ವಿವರಿಸುತ್ತಾರೆ.  ಭಗವಂತನ ಕಾರುಣ್ಯಕ್ಕೆ ಮಿತಿಯಿಲ್ಲವೆಂಬುದಕ್ಕೆ,  ಅತ್ಯದ್ಭುತವಾದ, ಅತಿಶಯ ಸುಂದರವಾದ ಮೋಹಿನೀ ರೂಪವನ್ನು ನೋಡಿ ಮೋಹಿಸಿದ ರುದ್ರದೇವರ ದೃಷ್ಣಾಂತವನ್ನು ತಿಳಿಸಿದ್ದಾರೆ.  ಭಗವಂತನ ಗುಣಗಳನ್ನು ಅನೇಕ ವಿಶೇಷ ಪದಪುಂಜಗಳಿಂದ ವರ್ಣಿಸಿದ್ದಾರೆ.   

ಭುವನಪಾವನಚರಿತ - ಭಗವಂತನ ಪಾವನವಾದ ಪುಣ್ಯಕರವಾದ ಚರಿತ್ರೆಯನ್ನು ಕೇಳುವುದರಿಂದ ಭೂಮಂಡಲದ ಸಕಲ ಜೀವರಾಶಿಗಳಿಗೂ ಪುಣ್ಯ ಬರುತ್ತದೆ.  ಆದ್ದರಿಂದಲೇ ಭಗವಂತನು ಭುವನ ಪಾವನ ಚರಿತನು.  ಶ್ರೀಹರಿಯ ಕಥೆಯನ್ನು ಶ್ರವಣ ಮಾಡುವುದರಿಂದಲೇ ಅವನು ಭಕ್ತರ ಶ್ರವಣೇಂದ್ರಿಯಗಳ ಮೂಲಕ ಹೃದಯಕ್ಕೆ ಪ್ರವೇಶಿಸಿ, ಅಲ್ಲಿ ತುಂಬಿರುವ ಪಾಪಗಳನ್ನೆಲ್ಲಾ ನಾಶಮಾಡುತ್ತಾನೆ.

ಪುಣ್ಯಶ್ರವಣಕೀರ್ತನ - ಯಾರ ಗುಣಗಳನ್ನು ಉಪಾಸಿಸುವುದರಿಂದಲೂ, ಶ್ರವಣ ಮಾಡುವುದರಿಂದಲೂ, ಹೃದಯದಲ್ಲಿ ತುಂಬಿಸಿಕೊಳ್ಳುವುದರಿಂದಲೂ, ಅರಿಯುವ ಪ್ರಯತ್ನ ಮಾಡುವುದರಿಂದಲೂ ಮತ್ತು ಅರಿತ ಕಿಂಚಿತ್ತನ್ನು ಮತ್ತೊಬ್ಬರಿಗೆ ತಿಳಿಸುವೆವೋ, ಅವನು ಪುಣ್ಯಶ್ರವಣಕೀರ್ತನನು.  ಭಾಗವತದಲ್ಲಿ ಲಕ್ಷ್ಮೀದೇವಿಯಲ್ಲಿರುವ ಭಕ್ತಿ ಬೇರೆ ಯಾರಲ್ಲೂ ಇಲ್ಲವೆಂದೂ, ಭಗವಂತನ ಮಂಗಳಕರವಾದ ಕೀರ್ತಿಯನ್ನು ಆವೃತ್ತಿಮಾಡುವ ಇಚ್ಛೆಯಿಂದಲೂ ಮತ್ತು ಭಗವಂತನ ಗುಣಗಳ ಉಪದೇಶವನ್ನು ಹೊಂದಬೇಕೆಂಬ ಇಚ್ಛೆಯಿಂದಲೂ, ಸಾಕ್ಷಾತ್ ಲಕ್ಷ್ಮೀದೇವಿಯೇ ಸದಾ ಕಾಲವೂ ಭಗವಂತನ ಪುಣ್ಯಕೀರ್ತಿಯ ಶ್ರವಣವನ್ನು ಅಪೇಕ್ಷಿಸುವಳು ಎಂಬ ಮಾತು ಉಲ್ಲೇಖವಾಗಿದೆ.  ವಿಷ್ಣು ಸಹಸ್ರನಾಮದಲ್ಲಿ "ಪುಣ್ಯಕೀರ್ತಯೇ ನಮಃ" ಮತ್ತು "ಪುಣ್ಯಶ್ರವಣಕೀರ್ತನಾಯ ನಮಃ" ಎಂದಿದೆ.  ಭಗವಂತನು ಅನಂತ ಕಲ್ಯಾಣ ಗುಣ ಸಂಪನ್ನನು. ಅವನ ತೇಜಸ್ಸು ಅದ್ಭುತ ಹಾಗೂ ಅವನ ಕೀರ್ತಿ ಅಪಾರ.  ಭಗವಂತನ ಅಪಾರ ಕೀರ್ತಿಯನ್ನು ಸದಾ ಧ್ಯಾನಿಸುವವರಿಗೆ ಯಶಸ್ಸು ಖಂಡಿತವಾಗಿ ಸಿಕ್ಕುವುದು.  ಭಗವಂತನ ಅಪಾರ ಮಹಿಮೆಯನ್ನು ಕೇಳುವುದರಿಂದಲೇ ಆತ್ಮಲಾಭ, ಆತಿಶಯಾನಂದ, ನಿರತಿಶಯ ಸುಖವು ಲಭಿಸುವುದು ಮತ್ತು ಪುಣ್ಯ ಪ್ರಾಪ್ತಿಯಾಗುವುದು.  ಭಗವಂತನ ಸಾಕ್ಷಾತ್ಕಾರವಾದವರಿಂದ ಭಗವಂತನ ಅಚಿಂತ್ಯ ಮಹಿಮೆಯನ್ನು ಕೇಳುವುದೇ ಸದ್ಗತಿಗೆ ದಾರಿಯಾಗುತ್ತದೆ.  ಭಾಗವತದಲ್ಲಿ ತಿಳಿಸಿರುವಂತೆ ಪರೀಕ್ಷಿತ್ ಮಹಾರಾಜ ಭಗವಂತನ ಪುಣ್ಯ ಕಥೆಯನ್ನು ಶ್ರವಣ ಮಾಡಿಯೇ ಸದ್ಗತಿ ಪಡೆದನು.  ಭಾಗವತದ ಮೊದಲನೇ ಸ್ಕಂದದಲ್ಲಿ "ಶೃಣುತ್ವಾಂ ಸ್ವಕಥಾಂ ಕೃಷ್ಣಃ ಪುಣ್ಯಶ್ರವಣಕೀರ್ತನಃ | ಹೃದ್ಯಂತಃಸ್ಥೋ ಹ್ಯಭದ್ರಾಣಿ ವಿಧುನೋತಿ ಸುಹೃತ್ ಸತಾಮ್"|| - ಪುಣ್ಯಶ್ರವಣಕೀರ್ತನ ಎಂಬ ನಾಮವುಳ್ಳವನಾದ ಶ್ರೀಕೃಷ್ಣ ಪರಮಾತ್ಮನು ತನ್ನ ಕಥೆಯನ್ನು ಕೇಳುವವರ ಅಂತಃಕರಣದೊಳಗೆ ಪ್ರವೇಶಿಸುತ್ತಾನೆ ಮತ್ತು ಅವರ ಸಕಲ ಪಾಪಗಳನ್ನೂ ಪರಿಹರಿಸುತ್ತಾನೆ ಎಂಬ ಮಾತು ತಿಳಿಸಲಾಗಿದೆ.  ಬೃಹದಾರಣ್ಯಕ ಉಪನಿಷತ್ತಿನ ಪಂಚಮಾಧ್ಯಾಯದ ಎರಡನೆಯ ಶಾಖೆಯಲ್ಲಿ "ಪುಣ್ಯೋ ವೈ ಪುಣ್ಯೇನ ಕರ್ಮಣಾ ಭವತಿ" - ಪುಣ್ಯ ಕರ್ಮಗಳನ್ನು ಮಾಡುವುದರಿಂದ ಮನುಷ್ಯನು ಪುಣ್ಯವಂತನಾಗುತ್ತಾನೆ ಎಂಬ ಉಲ್ಲೇಖವಿದೆ.  ಭಗವಂತನ ಗುಣಗಳನ್ನು ಉಪಾಸಿಸುವುದೇ ಜೀವಿ ಮಾಡಬಹುದಾದ ಪುಣ್ಯ ಕರ್ಮವು.  ಸದಾ ನಿರತವೂ ಸಂಕೀರ್ತನೆಯನ್ನು ಮಾಡುತ್ತಾ, ಶ್ರವಣ ಮಾಡುತ್ತಾ ಇರುವುದರಿಂದ ನಮ್ಮೊಳಗಿನಲ್ಲಿ ವಿಚಾರಶಕ್ತಿಯು ಬೆಳೆಯುತ್ತದೆ ಮತ್ತು ಧನಾತ್ಮಕ ಭಾವಗಳ ಧಾರೆಯೇ ಹರಿಯುತ್ತದೆ, ಸದಾಚಾರ ಬೆಳೆಯುತ್ತದೆ.  ಶಾಂತಿ, ಧೈರ್ಯ ಹೆಚ್ಚುತ್ತದೆ.   ಸಂತತಂ ಚಿಂತಯೇ ಅನಂತಂ ಎಂಬುದನ್ನು ಅಭ್ಯಾಸ ಮಾಡಿಕೊಂಡಾಗ, ಅಂತ್ಯಕಾಲದಲ್ಲಿ ವಿಶೇಷವಾಗಿ ಭಗವಂತನ ಸ್ಮರಣೆ ಸಿಕ್ಕುತ್ತದೆ.  ವಿಷ್ಣುಸಹಸ್ರನಾಮದ ಫಲಶ್ರುತಿಯಲ್ಲಿ "ಯ ಇದಂ ಶ್ರುಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ | ನಾ ಶುಭಂ ಪ್ರಾಪ್ನುಯಾತ್ ಕಿಂಚಿತ್ ಸೋಮುತ್ರೇಹ ಚ ಮಾನವಃ || - ಯಾರು ಭಗವಂತನ ಸಹಸ್ರನಾಮವನ್ನು ನಿತ್ಯವೂ ಕೇಳುವರೋ, ಹಾಡುವರೋ ಅವರಿಗೆ ಇಲ್ಲಿಯಾಗಲೀ, ಪರಲೋಕದಲ್ಲಿಯಾಗಲೀ ಸ್ವಲ್ಪವೂ ಕೆಡುಕಾಗುವುದಿಲ್ಲ ಎಂದಿದ್ದಾರೆ. 

ಪಾಪನಾಶನ - ವಿಷ್ಣು ಸಹಸ್ರನಾಮದಲ್ಲಿ "ದೇವಕೀನನ್ದನಃ (ದೇವಕೀ ನಂದನ) ಸ್ರಷ್ಟಾ ಕ್ಷಿತೀಶಃ ಪಾಪನಾಶನಃ" -  ದೇವಕೀ ಪುತ್ರನಾದ ಏಕೋ ದೇವನಾದ ಶ್ರೀಕೃಷ್ಣನೇ ಏಕಮೇವಾದ್ವಿತೀಯನಾದ ನಾರಾಯಣನು.  ಇವನ ನಾಮ ಸಂಕೀರ್ತನೆ ಮಾಡಿದರೆ, ಬೆಂಕಿಯು ಧಾತುವನ್ನು ಕರಗಿಸಿಬಿಡುವಂತೆ, ಸರ್ವ ಪಾಪಗಳನ್ನೂ ಸುಟ್ಟು ಭಸ್ಮ ಮಾಡಿಬಿಡುವನು ಎಂದು ತಿಳಿಸಲಾಗಿದೆ.  ಹಾಗೇ  ಫಲಶೃತಿಯಲ್ಲಿ "ಸರ್ವ ಪಾಪ ವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್"  - ಸರ್ವ ಪಾಪಗಳನ್ನೂ ಶುದ್ಧಗೊಳಿಸುವ ಒಂದೇ ಒಂದು ಆತ್ಮ, ಅವನೇ  ಪರಬ್ರಹ್ಮ ಎಂಬ ಉಲ್ಲೇಖವಿದೆ.  ಬೃಹದಾರಣ್ಯಕ ಉಪನಿಷತ್ತಿನ ಪಂಚಮಾಧ್ಯಾಯದ ಎರಡನೆಯ ಶಾಖೆಯಲ್ಲಿ "ಪಾಪಃ ಪಾಪೇನೇತಿ" - ಭಗವಂತನನ್ನು ಧ್ಯಾನಿಸದೆ ಪಾಪ ಕರ್ಮಗಳನ್ನು ಮಾಡುವವನು ಪಾಪಿಯಾಗುತ್ತಾನೆ ಎಂದಿದೆ.  ಭಗವದ್ಗೀತೆಯ ೧೬ನೇ ಅಧ್ಯಾಯದಲ್ಲಿ ಭಗವಂತ "ತಾನಹಂ ದ್ವಿಷತಃ ಕ್ರೂರಾನ್ಸಂಸಾರೇಷು ನರಾಧಮಾನ್ | ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು"|| - ನನ್ನನ್ನು ದ್ವೇಷಿಸುವ ಪಾಪಿಗಳೂ, ಕ್ರೂರಕರ್ಮಿಗಳೂ ಆದ ನರಾಧಮರನ್ನು ನಾನು ಸಂಸಾರದಲ್ಲಿ ಪದೇ ಪದೇ ಅಸುರೀ ಯೋನಿಗಳಲ್ಲಿ ಜನಿಸುವಂತೆ ಮಾಡುತ್ತೇನೆ ಎಂದಿದ್ದಾನೆ.  ಶರಣು ಬಂದ ಭಕ್ತರಿಗೆ ಭಗವಂತನು ಪಾಪನಾಶನನೂ ಹೌದು ಮತ್ತು ಪಾಪಿಗಳನ್ನು (ಅಸುರರನ್ನು) ಸಂಹರಿಸುವವನೂ ಆಗಿರುವನು.  ಪುಣ್ಯಧಾಮನ ಗುಣಗಳ ವಿಶೇಷತೆಯನ್ನು ಕೇಳುವುದರಿಂದಲೇ ಸಕಲ ಪಾಪವೂ ಪರಿಹಾರವಾಗುವುದಾದ್ದರಿಂದಲೇ ಭಗವಂತನು ಪಾಪನಾಶನ ನಾಮಕನು.   ಭಕ್ತಿಯಿಂದ ಒಮ್ಮೆ ಕೂಗಿದರೂ ಸಾಕು, ಓಡಿ ಬಂದು ಬಿಡುವ ಕರುಣಾಮಯಿ.  ಸಮುದ್ರ ಮಥನದ ಸಮಯದಲ್ಲಿ ಪಾಪಾಭಿಮಾನಿ ಅಸುರರಿಗೆ ಅಮೃತ ಸಿಕ್ಕದಂತೆ ಮಾಡಿ   ಅವರನ್ನು ನಾಶಮಾಡಿದವನು.

ಭಾಗವತದ ದಶಮಸ್ಕಂದದಲ್ಲಿ ಬರುವ ಗೋಪೀಗೀತಮ್ ನಲ್ಲಿ "ಪ್ರಣತದೇಹಿನಾಂ ಪಾಪಕರ್ಶನಂ" - ಶರಣಾಗತರಾದವರ ಪಾಪಗಳನ್ನು ಹೋಗಲಾಡಿಸುವವನು ಎಂಬ ಉಲ್ಲೇಖವಿದೆ.

ಕವಿಭಿರೀಡಿತ - ಆದಿ ಕವಿಯಾದ ಬ್ರಹ್ಮನಿಂದಲೂ, ಜ್ಞಾನಿಗಳಿಂದಲೂ ಸ್ತುತಿಸಿಕೊಳ್ಳುವವನು.  ಋಷಿಗಳು, ಮುನಿಗಳು, ದೇವಾನುದೇವತೆಗಳೆಲ್ಲರೂ ಸರ್ವದಾ ಸ್ತುತಿಸಿದರೂ ಅವನ ಮಹಿಮೆಯ ಗುಣಗಾನ ಮಾಡುವುದಾಗುವುದಿಲ್ಲ.  ಸಾಕ್ಷಾತ್ ಮಹಾಲಕ್ಷ್ಮಿಯಿಂದಲೂ ಅವನ ಅನಂತ ಗುಣಗಳನ್ನು ಸಂಪೂರ್ಣವಾಗಿ ಅರಿತು ಸ್ತುತಿಸುವುದಾಗುವುದಿಲ್ಲ.  ಸ್ತುತಿಸಿದಷ್ಟೂ ಗೋಚರವಾಗದ ಅನೇಕ ಗುಣಗಳನ್ನು ಉಳಿಸಿಕೊಂಡಂತಹ ಭಗವಂತ ಅಪ್ರತಿಮ ಮಹಿಮೆಯುಳ್ಳವನು.  ದಾಸ ಪರಂಪರೆಯಲ್ಲಿ ಬಂದ ಎಲ್ಲಾ ದಾಸರುಗಳೂ ಭಗವಂತನ ಗುಣವಿಶೇಷಣಗಳನ್ನು ಸ್ತುತಿಸಿ, ಲಕ್ಷಾಂತರ ಕೀರ್ತನೆಗಳನ್ನು ಸುಲಭ ಹಾಗೂ ಸರಳ ಕನ್ನಡದಲ್ಲಿಯೇ ರಚಿಸಿ ಹಾಡಿದ್ದಾರೆ.

ಭಾಗವತದ ದಶಮಸ್ಕಂದದಲ್ಲಿ ಬರುವ ಗೋಪೀಗೀತಮ್ ನಲ್ಲಿ "ತವ ಕಥಾಮೃತಂ ತಪ್ತಜೀವನಂ ಕವಿಭಿರೀಡಿತಂ ಕಲ್ಮಷಾಪಹಮ್" - ಭಗವಂತನ ಲೀಲೆಯ ಕಥಾಪ್ರಸಂಗಗಳು ಅಮೃತ ಸ್ವರೂಪಗಳೇ ಆಗಿವೆ.  ವಿರಹಿಗಳಿಗೆ ಅದನ್ನು ಬಿಟ್ಟು ಬೇರೇನೂ ಬೇಕಾಗುವುದೇ ಇಲ್ಲ.  ದೊಡ್ಡ ದೊಡ್ಡ ಜ್ಞಾನಿಗಳು ಮತ್ತು ಮಹಾ ಕವಿಗಳು ನಿನ್ನ ಚರಿತಾಮೃತವನ್ನು ಹಾಡಿ ಹೊಗಳಿದ್ದಾರೆ ಎಂದಿದ್ದಾರೆ.

ಕೈವರದಳಶ್ಯಾಮ - ಕನ್ನೈದಿಲೆಯ ಬಣ್ಣವನ್ನು ಹೋಲುವ ಕಪ್ಪುಬಣ್ಣದವನಾದವನು ಭಗವಂತ.  ಆದ್ದರಿಂದಲೇ ಅವನು ಕೈವರದಳಶ್ಯಾಮ.  ಅರಳಿದ ನೈದಿಲೆಯಂತೆ ಅತಿಮೋಹಕ ಬಣ್ಣವನ್ನೂ, ರೂಪವನ್ನೂ ಹೊಂದಿದವನು ಶ್ರೀಹರಿ.  ದರ್ಶನ ಮಾತ್ರದಿಂದಲೇ ಸರ್ವರನ್ನೂ ಸೆಳೆಯುವವನು, ಹೃತ್ಕಮಲವನ್ನು ಅರಳಿಸಿ, ಆನಂದಾನುಭೂತಿಯ ಅನುಭವವನ್ನು ಕೊಡುವವನು.  ದೇವಕಿ - ವಸುದೇವರ ಪುತ್ರನಾಗಿ ಸೆರೆಮನೆಯಲ್ಲಿ ಜನಿಸಿದರೂ ತನ್ನ ವಿಷ್ಣು ರೂಪವನ್ನು ತೋರಿಸಿ ಆನಂದಪಡಿಸಿದವನು.  ಬಾಲಕೃಷ್ಣನಾಗಿ ತನ್ನ ಲೀಲಾವಿನೋದಗಳಿಂದ ಸರ್ವರನ್ನೂ ಸಂತೋಷಪಡಿಸಿದವನು, ಕೈವರದಳಶ್ಯಾಮನು.

ನಿಸ್ಸೀಮ - ತನಗೆ ತಾನೇ ಸಾಟಿಯಾದಂತಹವನು, ಅಸಾಧ್ಯನು, ಎಲ್ಲಾ ಸೀಮೆಯನ್ನೂ ಮೀರಿ ಅಸೀಮಾತೀತನಾಗಿ ನಿಂತವನು, ಅತೀತನು, ಭಗವಂತನು ನಿಸ್ಸೀಮನು.  ಕಾಮದೇವನನ್ನೇ ಸುಟ್ಟು ಹಾಕಿದ ವೈರಾಗ್ಯಪತಿ ಮಹಾರುದ್ರನನ್ನೇ ಮೋಹಿನಿ ವೇಷದಲ್ಲಿ ಮರುಳು ಮಾಡಿ ಕಂಗೆಡಿಸಿದವನು ಭಗವಂತನು, ಅವನ ಮಹಿಮೆಗೆಲ್ಲಿದೆ ಸೀಮೆ?

ಯುವತಿವೇಷದಿ - ಅಮೃತ ಮಂಥನದ ಸಮಯದಲ್ಲಿ ಮೋಹಿನಿ ರೂಪದಿಂದ ಬಂದ ಭಗವಂತನ ಅಸಾಧಾರಣ ಸೌಂದರ್ಯವನ್ನು ನೋಡುವ ಅವಕಾಶ ದೇವತೆಗಳಿಗೆ ಲಭಿಸಿತು.  ಅಸುರರಿಗೆ ಭಗವಂತ ಕಣ್ಣು ಮುಚ್ಚಲು ತಿಳಿಸಿಬಿಟ್ಟ.  ಅಸುರರು ಸುಂದರಿ ಸ್ತ್ರೀಯೆಂಬ ದೃಷ್ಟಿಯಿಂದ ನೋಡಿದರು.  ಆದ್ದರಿಂದಲೇ ಅವರಿಗೆ ಕಣ್ಣುಮುಚ್ಚಲು ಆಜ್ಞಾಪಿಸಿದ ಭಗವಂತ.  ದೇವತೆಗಳು ಅತಿಶಯವಾದ, ಅನುಪಮ ಸೌಂದರ್ಯವನ್ನು ಕಣ್ಣರಳಿಸಿ ನೋಡಿ, ಮನದಲ್ಲಿ ತುಂಬಿಸಿಕೊಂಡರು.  ಅವರು ಸ್ತ್ರೀರೂಪವೆಂದು ನೋಡದೆ ಜಗನ್ಮಾತೆಯೆಂಬ ದೃಷ್ಟಿಯಿಂದಲೇ ನೋಡಿದ್ದರಿಂದ ಭಗವಂತನು ಅವರಿಗೆ ಕರುಣಿಸಿದ.

ಗೌರೀಧವನ ಮೋಹಿಸಿ - ಭಾಗವತ ಅಷ್ಟಮಸ್ಕಂದದಲ್ಲಿ ಭಗವಂತನು ಮೋಹಿನೀ ರೂಪ ಧರಿಸಿದ ಕಥೆಯು ಹೇಳಲ್ಪಟ್ಟಿದೆ.  ಮೋಹಿನೀರೂಪದ ವರ್ಣನೆಯನ್ನು ಕೇಳಿ ರುದ್ರದೇವರು ತಾವೂ ಶ್ರೀಹರಿಯ ಈ ಮನಮೋಹಕ ರೂಪವನ್ನು ಕಾಣಬೇಕೆಂದು ಗಿರಿಜಾ ಸಮೇತನಾಗಿ ವಿಷ್ಣು ಲೋಕಕ್ಕೆ ಬರುತ್ತಾನೆ.  ಭಗವಂತನನ್ನು ನಾನಾ ರೀತಿಯಲ್ಲಿ ಸ್ತುತಿಸುತ್ತಾ, ತಾನು ಎಲ್ಲಾ ಗುಣಪೂರ್ಣ ರೂಪಗಳನ್ನು ನೋಡಿದ್ದರೂ ಸ್ತ್ರೀರೂಪ ನೋಡಿಲ್ಲವಾಗಿ, ತನಗೆ ಆ ಅತಿಶಯ ಲಾವಣ್ಯವತಿಯ ರೂಪವನ್ನು ತೋರಿಸುವಂತ ಪ್ರಾರ್ಥಿಸಿಕೊಳ್ಳುತ್ತಾನೆ.  ಭಗವಂತ ಮಾಯವಾಗಿ ಹೋದಾಗ, ಶಂಕರನು ಪಾರ್ವತೀ ಹಾಗೂ ಪ್ರಥಮಗಣಗಳೊಡನೆ ಎಲ್ಲಾ ದಿಕ್ಕುಗಳಲ್ಲೂ ತಿರುಗಿ ನೋಡುತ್ತಾ ಇರುವಾಗಲೇ ಜಗನ್ಮೋಹಕ ಸುಂದರಿಯನ್ನು ಉಪವನದಲ್ಲಿ ಕಾಣುತ್ತಾನೆ.  ದರ್ಶನ ಮಾತ್ರದಿಂದಲೇ ಪಾರ್ವತೀ ಹಾಗೂ ಪ್ರಥಮಗಣಗಳನ್ನೂ ಮರೆತು ಧಾವಿಸಿಬಿಡುತ್ತಾನೆ.  ಮೋಹಿನಿಯು ಮರಗಳ ಮರೆಯಲ್ಲಿ ಅವಿತಿಟ್ಟುಕೊಂಡರೂ ರುದ್ರನು ಬಿಡದೇ ಬೆನ್ನಟ್ಟಿಹೋಗುವನು. ವಿಷ್ಣುವನ್ನು ಹೆಣ್ಣೆಂದೇ ಭಾವಿಸಿ, ರುದ್ರನು ವರ್ತಿಸಿದಾಗ, ಅಜ್ಞಾನವನ್ನು ಕೊಟ್ಟು ಕೆಡಿಸಿ, ನ೦ತರ ಜ್ಞಾನವನ್ನು ಕೊಟ್ಟು ಸ೦ರಕ್ಷಣೆ ಮಾಡುತ್ತಾನೆ. ಹೀಗೆ ಯುವತಿವೇಷವ ಧರಿಸಿ ಗೌರೀಧವನ
ನ್ನು ಮೋಹಿಸುವಂತೆ ಮಾಡಿದ ಭಗವಂತನು.   ಭಗವಂತನ ಅಪರಿಮಿತ ಮಹಿಮೆಯನ್ನು ವರ್ಣಿಸುತ್ತಾ ರುದ್ರದೇವರು ಪಾರ್ವತಿದೇವಿಗೆ ಈ ಪ್ರಸಂಗವನ್ನು ಯಾರು ಬಾರಿಬಾರಿಗೂ ಸಂಕೀರ್ತಿಸುತ್ತಾರೋ ಅಥವಾ ಶ್ರವಣ ಮಾಡುತ್ತಾರೋ ಅವರಿಗೆ ನಿಷ್ಫಲವೆಂಬುದೇ ಇರುವುದಿಲ್ಲ.  ಸಂಸಾರದ ಸಮಸ್ತ ಕ್ಲೇಶಗಳೂ ಕಳೆದುಹೋಗುವುವು ಎಂದಿದ್ದಾರೆಂಬುದನ್ನು  ಭಾಗವತದಲ್ಲಿ ಉಲ್ಲೇಖಿಸಲಾಗಿದೆ.

ಕೆಡಿಸಿ ಉಳಿಸಿದ - ಜಗದೇಕ ಸೌಂದರ್ಯವತಿಯಾದ ಪಾರ್ವತಿಯನ್ನು ಮದುವೆಯಾಗಿದ್ದರೂ ಶಿವನು ಕಾಮವನ್ನೇ ಸುಟ್ಟು, ಜಯಿಸಿದವನು.  ಆದರೆ ಅತಿಲಾವಣ್ಯಮತಿ ಮೋಹಿನಿಯನ್ನು ಕಂಡು ಭಗವಂತನ ಮಾಯೆಯಲ್ಲಿ ಸಿಲುಕಿ, ಶಿವನು ಮೋಹಿತನಾಗುತ್ತಾನೆ.   ಶ್ರೀಹರಿಯ ಮಾಯೆಯಿಂದ ತಾನು ಮೋಹಿತನಾದೆನೆಂದು ತಿಳಿದು ಶಿವನು ನಾಚುತ್ತಾನೆ.  ಭಗವಂತನು ರುದ್ರದೇವನಿಗೆ ನಾನು ನಿನ್ನನ್ನು ಮೋಹಗೊಳಿಸಿದರೂ ಕೂಡ ನೀನು ದೈವವಶದಿಂದ ದಾಟಿ ವಿವೇಕವನ್ನು ಹೊಂದಿದೆ.  ಆದ್ದರಿಂದ ನೀನು ನಿಜವಾಗಿಯೂ ಪರಮ ವಿರಕ್ತನು, ನಿನ್ನಂತೆ ಕಾಮಾದಿಗಳನ್ನು ಯಾರೂ ಜಯಿಸಲಾರರು ಎಂದನು.   ಭಗವಂತನನು ತನ್ನ ಮೋಹಿನಿ ರೂಪದಿಂದ ಶಿವನ ಚಿತ್ತ ಸ್ವಾಸ್ಥ್ಯ ಕೆಡಿಸಿದ, ಮೋಹಪಾಶದಿಂದ ಅರಿವು ತಳೆದ ರುದ್ರದೇವನನ್ನು ಹೊಗಳಿ ಉಳಿಸಿದನು.  ಇದು ಶ್ರೀಹರಿಯ ಕಾರುಣ್ಯದ ಮಹಿಮೆ.

ಇವನ ಮಾಯವ ಗೆಲುವನಾವನು ಈ ಜಗತ್ರಯದಿ -  ಭಗವಂತನ ಮಾಯೆ ಎಂದರೆ ಸಾಮರ್ಥ್ಯ, ಶಕ್ತಿ ಅಥವಾ ಇಚ್ಛೆ ಎಂಬರ್ಥವು ಮತ್ತು ಭಗವಂತನ ಪತ್ನಿ ಮಾಯಾದೇವಿ ರೂಪಿಯಾದ ಲಕ್ಷ್ಮೀದೇವಿ.  ಬ್ರಹ್ಮಾದಿ ದೇವತೆಗಳಿಂದ ಪ್ರಾರಂಭಿಸಿ ಜೀವಿಗಳವರೆಗೂ ಯಾರಿಗೂ ಈ ಎರಡೂ ಮಾಯೆಗಳನ್ನು ಗೆಲ್ಲುವುದು ಸಾಧ್ಯವೇ ಇಲ್ಲ,  ಭಗವಂತನ ಲೀಲೆಗಳೂ, ಅವನ ಮಾಯೆಯ ಪ್ರಭಾವವೂ ಇರುತ್ತದೆ.  ಯಾರಿಂದಲೂ ಅದನ್ನು ಗೆಲ್ಲುವುದಾಗುವುದಿಲ್ಲ.  ಆದರೆ ಭಗವಂತನ ಕರುಣೆಯೂ ಅಪಾರ.  ಶ್ರದ್ಧೆ ಹಾಗೂ ಭಕ್ತಿಯಿಂದ ಯಾರು ಸಂಪೂರ್ಣವಾಗಿ ಶರಣಾಗತರಾಗುವರೋ, ಅವರನ್ನು ಸಂಸಾರವೆಂಬ ಬಂಧನ ಅಥವಾ ಮಾಯೆಯಿಂದ ಬಿಡಿಸಿ ಉದ್ಧರಿಸುವನು.  ಭಗವಂತನು ದುರ್ಜನರನ್ನೂ, ತಾಮಸಿಗರನ್ನೂ ತನ್ನ ಮಾಯೆಯಿಂದ ಕೆಡಿಸಿ, ಪರಮಪುರುಷಾರ್ಥವಾದ ಮುಕ್ತಿ, ಮೋಕ್ಷದಿಂದ ಅವರು ವಂಚಿತರಾಗುವಂತೆ ಮಾಡುವನು.  ಸಜ್ಜನರನ್ನೂ, ಸಾತ್ವಿಕರನ್ನೂ ಮಾಯೆಯಿಂದ ಬಿಡಿಸಿ, ಮುಕ್ತಿ ಹಾಗೂ ಮೋಕ್ಷಗಳನ್ನು ಕೊಟ್ಟು ರಕ್ಷಿಸುವನು.  ಶ್ರೀ ಪುರಂದರ ದಾಸರು ತಮ್ಮ "ಚಂದ್ರಚೂಡ ಶಿವ ಶಂಕರ ಪಾರ್ವತಿ ರಮನ ನಿನಗೆ ನಮೋ ನಮೋ" ಎಂಬ ಕೃತಿಯಲ್ಲಿ "ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ | ಜಾಲಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ" || ಎಂದು ಸ್ತುತಿಸಿದ್ದಾರೆ.

ಭಗವದ್ಗೀತೆಯಲ್ಲಿ ಭಗವಂತ :
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ |
ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ||  - ಎಲೈ ಭಾರತಾ ! ಎಲ್ಲಾ ಪ್ರಕಾರಗಳಿಂದಲೂ ಪರಮಾತ್ಮನಿಗೇ ಶರಣಾಗು.  ಆ ಪರಮಾತ್ಮನ ಕೃಪೆಯಿಂದಲೇ ನೀನು ಪರಮ ಶಾಂತಿಯನ್ನು ಹಾಗೂ ಸನಾತನ ಪರಮಧಾಮವನ್ನೂ ಹೊಂದುವೆ ಎಂದಿದ್ದಾನೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ವಸುವ್ವಾಲಿಯಲ್ಲಿ :

ಎಲ್ಲರಂದದಿ ಲಕ್ಷ್ಮೀನಲ್ಲನೆಂದೆನಬೇಡ
ಬಲ್ಲಿದನು ಕಂಡ್ಯ ಭಗವಂತ | ಭಗವಂತನ ಮಹಿಮೆ
ಬಲ್ಲವರು ಇಲ್ಲ ಜಗದೊಳು || - ಎಲ್ಲರೂ ತಿಳಿದಂತೆ ಭಗವಂತನನ್ನು ಲಕ್ಷ್ಮೀರಮಣನೆಂದು ಮಾತ್ರ ತಿಳಿಯಬೇಡ.  ಶ್ರೀಹರಿಯು ಷಡ್ಗುಣೈಶ್ವರ್ಯಪೂರ್ಣನಾದ, ಅಚಿಂತ್ಯವಾದ, ಅದ್ಭುತವಾದ ಸಾಮರ್ಥ್ಯವುಳ್ಳವನು.  ಭಗವಂತನ ಮಹಿಮೆಗಳನ್ನು ಪೂರ್ಣವಾಗಿ ತಿಳಿದವರು ಯಾರೂ ಇಲ್ಲವೇ ಇಲ್ಲ.

ಶ್ರೀಯರಸನೆ ನಿನ್ನ ಮಾಯಕ್ಕೆ ಎಣೆಗಾಣೆ
ಹೇಯವಿಷಯಗಳ ಜನರಿಗೆ | ಜನರಿಗುಣಿಸಿ ಉಪಾ-
ದೇಯವೆಂತೆಂದು ಸುಖಿಸುವಿ || - ಭಗವಂತನ ಇಚ್ಛೆ, ಶಕ್ತಿಗಳೆಂಬ ಮಾಯೆಗೆ ಯಾರೂ, ಯಾವುದೂ ಸಾಟಿಯಲ್ಲ.  ಪ್ರಾಕೃತಿಕ ಬಂಧನದಲ್ಲಿ ಸಿಲುಕಿಸಿ ಜೀವರಿಗೆ ಲೌಕಿಕ ಭೋಗಗಳೇ ಪರಮ ಪುರುಷಾರ್ಥಗಳೆಂದೂ, ಆದರರಿಂದ ಸ್ವೀಕರಿಸಲು ಯೋಗ್ಯವೂ ಎಂಬ ಮಾಯೆಯಲ್ಲಿ ಮುಳುಗಿಸಿ, ಅವರು ತಮ್ಮ ’ಅಹಂ ಮಮಕಾರ’ಗಳೊಳಗೇ ಮುಳುಗುವಂತೆ ಮಾಡುತ್ತಾನೆ.  ಭವವೆಂಬ ಪಾಶದಲ್ಲಿ ಬಂಧಿಸುವವನೂ ಅವನೇ, ಬಿಡಿಸಿ ಉದ್ಧರಿಸುವವನೂ ಅವನೇ.  ಜೀವಿಗಳಲ್ಲಿ ತಾನಿದ್ದು ಭಗವಂತನು ಶುಭವಿಷಯಗಳನ್ನು ಭೋಗಿಸಿದರೂ, ಎಲ್ಲದರಿಂದಲೂ ರಹಿತನಾಗಿದ್ದು ಸುಖಿಸುವ ಪೂರ್ಣಾನಂದನಾಗಿದ್ದಾನೆ.



ಚಿತ್ರಕೃಪೆ : ಅಂತರ್ಜಾಲ

Tuesday, February 18, 2014

ಕರುಣಾ ಸಂಧಿ - ೧೭ ನೇ ಪದ್ಯ

ಜನಪ ಮೆಚ್ಚಿದರೀವ ಧನವಾ
ಹನ ವಿಭೂಷಣವಸನ ಭೂಮಿಯ
ತನು ಮನೆ ಗಳಿತ್ತಾದರಿಪರುಂಟೇನೋ ಲೋಕದೊಳು |
ಅನವರತ ನೆನೆವವರನಂತಾ
ಸನವೆ ಮೊದಲಾದಾಲಯದೊಳಿ
ಟ್ಟುಣುಗನಂದದವರ ವಶನಾಗುವ ಮಹಾಮಹಿಮ  ||೧೭||



ಪ್ರತಿಪದಾರ್ಥ : ಜನಪ - ಅರಸು, ಮೆಚ್ಚಿದರೆ - ಇಷ್ಟವಾದರೆ, ಧನ ವಾಹನ ವಿಭೂಷಣ ವಸನ ಮತ್ತು ಭೂಮಿ - ಧನಕನಕ ಕುದುರೆ ಆನೆ ಮೊದಲಾದ ವಾಹನ ಆಭರಣಗಳು ವಸ್ತ್ರಗಳು ಜಮೀನು ಇತ್ಯಾದಿಗಳನ್ನು ಕೊಡುವನು, ತನು ಮನೆಗಳಿತ್ತಾದರಿಪರುಂಟೇನೋ  - ಶ್ರೀಹರಿಯು ತನ್ನನ್ನೇ ಕೊಡುವುದಲ್ಲದೇ ಅನಂತಾಸನ ಶ್ವೇತದ್ವೀಪ ಮತ್ತು ವೈಕುಂಠ ಎಂಬ ಭಗವಂತನ ಮಂದಿರಗಳು ಎಂದರ್ಥ,  ಲೋಕದೊಳು - ಈ ಜಗತ್ತಿನಲ್ಲಿ, ಅನವರತ ನೆನೆವವರ - ಸದಾ ನಿರಂತರವಾಗಿ ಶ್ರೀಹರಿಯನ್ನೇ ಧ್ಯಾನಿಸುವವರನ್ನು, ಅನಂತಾಸನವೆ ಮೊದಲಾದ ಆಲಯದೊಳಿಟ್ಟು - ತನ್ನ ಮಂದಿರಗಳಾದ ಅನಂತಾಸನ ಶ್ವೇತದ್ವೀಪ ಮತ್ತು ವೈಕುಂಠಗಳೆಂಬ ಮಂದಿರಗಳಲ್ಲಿ ನೆಲೆಸುವಂತೆ ಮಾಡಿ, ಅಣುಗನಂದದಲಿ ಅವರ ವಶನಾಗುವ - ಪುಟ್ಟ ಮಗುವಿನಂತೆ ಭಗವಂತನು ಮುಕ್ತರಾದ ಜೀವಿಗಳ ವಶಕ್ಕೆ ಸಿಲುಕುವನು, ಮಹಾಮಹಿಮ - ಅಂತಹ ಮಹಿಮಾವಂತನಾಗಿರುವನು.

ಲೌಕಿಕದಲ್ಲಿ ಪ್ರಭುವಾದವನು ಕಷ್ಟಪಟ್ಟು, ಮೈ ಮುರಿದು ದುಡಿಯುವ ಸೇವಕರಿಗೆ ಹಣ ಕೊಡಬಹುದು, ವಾಹನಗಳನ್ನು ಕೊಡಬಹುದು, ಒಡವೆ ಬಟ್ಟೆಗಳನ್ನೂ, ಭೂಮಿಯನ್ನೂ ಕೊಡಬಹುದು.  ಆದರೆ ದೇಹ ಮನಸ್ಸು ಕೊಡಲಿಕ್ಕವನಿಗೆ ಸಾಧ್ಯವಿಲ್ಲ.  ಅಂತಹುದನ್ನು ಯಾವ ದೊರೆ ಕೊಟ್ಟಿದ್ದಾನೆ ?  ಪರಮಾತ್ಮನಿಗೊಬ್ಬನಿಗೇ ಅದನ್ನು ಕೊಡಲು ಸಾಧ್ಯವಿರುವುದು.  ಹೀಗೆ ಸದಾ ಸ್ಮರಿಸುವ ಭಕ್ತರನ್ನು ಅನಂತಾಸನದಂತಹ ಆಲಯದೊಳಗಿಟ್ಟು ತಾನು ಮಗುವಿನಂತೆ  ಈ ಮಹಾಮಹಿಮನು ಭಕ್ತರ ವಶನಾಗುವನು.  ಪ್ರಾಕೃತ ಲೋಕದ ದೊರೆಯು ನಮ್ಮನ್ನು ಮೆಚ್ಚಿದರೆ ಒಡವೆ-ವಸನಗಳನ್ನು ಕೊಟ್ಟು ಆದರಿಸಬಹುದು.  ಆದರೆ ಹರಿಯು ಎಲ್ಲಾ ಮೋಹವನ್ನೂ ಹರಿಸುವಂತಹ ಜ್ಞಾನ, ಭಕ್ತಿ, ವೈರಾಗ್ಯಗಳನ್ನು ಕೊಟ್ಟು ನಮಗೆ ತನ್ನ ಲೋಕಗಳಲ್ಲಿ ಇರುವಂತಹ ವೈಭವವನ್ನು ಕೊಡುತ್ತಾನೆ.  ಇಂತಹ ಕಾರ್ಯಕ್ಕೆ ನಾವು ಸಿದ್ಧರಾಗಲು ನಮಗೆ ದೇಹ, ಮನಸ್ಸು ಎಲ್ಲವನ್ನೂ ಕೊಟ್ಟಿರುತ್ತಾನೆ.  ಪರಮಾತ್ಮನು ನಮ್ಮ ಜೊತೆಗೆ ಮಗುವಿನಂತೆ ಇರುತ್ತಾನೆ, ಮಿತ್ರನಂತೆ ಸಹಾಯ ಮಾಡುತ್ತಾನೆ.  ತಂದೆಯಂತೆ ನಮ್ಮನ್ನು ರಕ್ಷಿಸುತ್ತಾನೆ, ಪ್ರಭುವಿನಂತೆ ಕಾಪಾಡುತ್ತಾನೆ.  ನಾವು ನಿಜಕ್ಕೂ ಅವನ ವಶವಾದರೆ ನಮ್ಮನ್ನು ತನ್ನ ಮಗುವಿನಂತೆಯೇ ಕಾಪಾಡುತ್ತಾನೆ ಮತ್ತು ತಾನೂ ನಮ್ಮ ಮಗುವಾಗಿ ವಶನಾಗುತ್ತಾನೆ.

ಜನಪ ಮೆಚ್ಚಿದರೀವ -  ರಾಜಾ ಹರಿಶ್ಚಂದ್ರನಂತಹವರು ತಾವು ಕೊಟ್ಟ ಮಾತು ಪಾಲಿಸುವುದಕ್ಕಾಗಿ, ಸತ್ಯ, ಧರ್ಮವನ್ನು ನಿಲ್ಲಿಸುವುದಕ್ಕಾಗಿ, ಶರಣಾಗತರಾದವರನ್ನು ಕಾಪಾಡುವುದಕ್ಕಾಗಿ ತಮ್ಮ ಸರ್ವಸ್ವವನ್ನೂ, ಪ್ರಾಣವನ್ನೂ ಕೊಡಲು ಸಿದ್ಧರಿದ್ದರು.  ಆದರೆ ಅವರು ತಮ್ಮ ಅರಮನೆಯನ್ನು ಯಾರಿಗೂ ಕೊಡಲಿಲ್ಲ, ಇವೆಲ್ಲಾ ತಮ್ಮ ಸಾಧನೆಗಾಗಿಯಾಗಿಯೂ ಪುಣ್ಯ ಸಂಪಾದನೆಗಾಗಿಯೂ ಮಾಡಿದರು.  ರಾಜನೇ ಆದರೂ ತಮ್ಮ ಹತ್ತಿರ ಇರುವ ವಸ್ತುಗಳು ತಮ್ಮ ಉಪಯೋಗಕ್ಕೆ ಆಗಿ ಹೆಚ್ಚಿಗೆಯಿದ್ದರೆ ಕೊಡಬಹುದು.  ಹಾಗೆ ಕೊಡುವುದೂ ಅಪರೂಪವೇ ಆಗಿರುತ್ತದೆ. ಆದರೆ ಭಗವಂತನ ಕರುಣೆಗೆ ಯಾವ ಮಿತಿಯೂ, ದೃಷ್ಟಾಂತವೂ ಇಲ್ಲ.  ಜಗತ್ತಿಗೇ ಜನಪನಾದ ಭಗವಂತ, ನಿರಂತರ ಧ್ಯಾನಿಸುವ ತನ್ನ ಭಕ್ತರಿಗೆ ತನ್ನ ಮನೆ, ಮನ, ತನು ಸಕಲವನ್ನೂ ಕೊಡುವನು.

ತನುಮನೆಗಳಿತ್ತಾದರಿಪರುಂಟೇನೋ - ದೇಶವನ್ನಾಳುವ ರಾಜನು ತನಗೆ ಅತ್ಯಂತ ಪ್ರಿಯರಾದವರಿಗೆ ಹಣ, ವಾಹನ, ಬಂಗಾರ, ವಸ್ತ್ರ, ಭೂಮಿ, ಇನ್ನೂ ಏನನ್ನು ಬೇಕಾದರು ಕೊಡುತ್ತಾನೆ.  ತಾನು ಮೆಚ್ಚಿದ  ಆ ವ್ಯಕ್ತಿ ಅದೆಷ್ಟೇ ಪ್ರಿಯನಾದವನಾದರೂ ಅವನಿಗೆ ತನ್ನ ಅರಮನೆಯನ್ನಾಗಲೀ ಅಥವಾ ತನ್ನ ಪಟ್ಟಣವನ್ನಾಗಲೀ ಕೊಡುವುದಿಲ್ಲ ಮತ್ತು ತನ್ನ ಶರೀರ ಹಾಗೂ ಮನಸ್ಸುಗಳನ್ನು ಕೊಡುವುದಿಲ್ಲ.  ಆದರೆ  ಅತ್ಯಂತ ಕರುಣಾಮಯಿಯಾದ ಭಗವಂತನು ಪ್ರಾಪಂಚಿಕ ಭೋಗಗಳನ್ನೂ ಕೊಡುತ್ತಾನೆ, ಧನಕನಕಾದಿಗಳನ್ನೂ ಕೊಡುತ್ತಾನೆ.  ಸದಾ ತನ್ನನ್ನೇ ಧ್ಯಾನಿಸುತ್ತಾ, ತನ್ನಲ್ಲಿ ನಿಷ್ಮಾಮ ಭಕ್ತಿಯನ್ನಿಟ್ಟಿರುವ ಭಕ್ತರಿಗೆ ಮುಕ್ತಿಯನ್ನೂ ಕೊಡುತ್ತಾನೆ.  ತನ್ನ ಪಟ್ಟಣವನ್ನೇ ಕೊಡುತ್ತಾನೆ, ತನುವನ್ನೇ ಕೊಡುತ್ತಾನೆ, ಜೊತೆಗೆ ಮನವನ್ನೂ ಕೊಟ್ಟುಬಿಡುತ್ತಾನೆ.  ತನುವನ್ನೂ ಮನವನ್ನೂ ಕೊಟ್ಟುಬಿಡುವುದರ ಅರ್ಥವೆಂದರೆ ಮುಕ್ತರಿಗೆ ಮೋಕ್ಷ ಕರುಣಿಸುವುದು ಎಂದಾಗುತ್ತದೆ.  ಭಕ್ತಿಯಲ್ಲಿ ಬಹುವಿಧಗಳಿವೆ ಹಾಗೇ ಮೋಕ್ಷದಲ್ಲೂ ಐದು ವಿಧವಾದ ಮೋಕ್ಷಗಳಿವೆ.  ಭಕ್ತಿಯಲ್ಲಿ ಬಹುವಿಧವಿದೆಯೆಂಬುದನ್ನು ಭಾಗವತದ ತೃತೀಯಸ್ಕಂದದಲ್ಲಿ 

ಭಕ್ತಿಯೋಗೋ ಬಹುವಿಧೋ ಮಾರ್ತೈರ್ಭಾಮಿನಿ ಭಾವ್ಯತೇ |
ಸ್ವಭಾವಗುಣ ಮಾರ್ಗೇಣ ಪುಂಸಾಂ ಭಾವೋ ವಿಭಿದ್ಯತೇ || - ಸಾಧಕರ ಭಾವಕ್ಕೆ ತಕ್ಕಂತೆ ಭಕ್ತಿಯೋಗವು ಅನೇಕ ಪ್ರಕಾರವಾಗಿ ಪ್ರಕಾಶಿಸುತ್ತದೆ.  ಮನುಷ್ಯರ ಮನೋವೃತ್ತಿಗಳ ಮತ್ತು ಸತ್ತ್ವಾದಿಗುಣಗಳ ಭೇದಕ್ಕೆ ಅನುಗುಣವಾಗಿ ಅವರ ಭಾವಗಳಲ್ಲೂ ಅನೇಕ ಪ್ರಕಾರದ ಭೇದಗಳಿರುತ್ತವೆ.  ಅದರಿಂದಾಗಿಯೇ ಭಕ್ತಿಯಲ್ಲಿ ಮಾತ್ರ ವಿವಿಧತೆಯಲ್ಲ, ಭಕ್ತರಲ್ಲೂ ವಿವಿಧ ಭೇದಗಳಿವೆ.  ನಿಜವಾದ ಭಕ್ತರ ಲಕ್ಷಣಗಳು ಹೀಗಿರುತ್ತವೆಯೆಂದು ಭಾಗವತದಲ್ಲಿ ತಿಳಿಸಿದೆ.
ಲಕ್ಷಣಂ ಭಕ್ತಿಯೋಗಸ್ಯ ನಿರ್ಗುಣಸ್ಯ ಹ್ಯುದಾಹೃತಮ್ |
ಅಹೈತುಕ್ಯವ್ಯವಹಿತಾ ಯಾ ಭಕ್ತಿಃ ಪುರುಷೋತ್ತಮೇ || - ಗಂಗೆಯ ಪ್ರವಾಹವು ಅಖಂಡರೂಪವಾಗಿ, ಸಹಜವೇ ಎನ್ನುವಂತೆ ಸಮುದ್ರದೆಡೆಗೆ ಹೇಗೆ ಧಾವಿಸುವುದೋ, ಹಾಗೆ ಭಗವಂತನ ಗುಣಗಳನ್ನು ಕೇಳಿ, ಅನ್ಯವ್ಯಾಪಾರರಹಿತವಾಗಿ ಗಂಗಾಪ್ರವಾಹದಂತೆ ಸ್ವಾಭಾವಿಕವಾಗಿರುವ ಅಂತಃಕರಣ ಸ್ಥಿತಿಯಲ್ಲಿ ಸರ್ವಾಂತರ್ಯಾಮಿ ಹಾಗೂ ಪುರುಷೋತ್ತಮನಾದ ಭಗವಂತನ ಕಡೆಗೆ  ಅನನ್ಯ ಭಾವದಿಂದ ಸೆಳೆಯಲ್ಪಡುವುದೋ ಅದೇ ಉತ್ತಮ ಭಕ್ತಿ ಅಥವಾ ’ನಿರ್ಗುಣ ಭಕ್ತಿ’ಯ ಲಕ್ಷಣ. ನಿರ್ಗುಣ ಭಕ್ತಿಯೆಂದರೆ ಜಗತ್ತೆಲ್ಲವೂ ಪರಮಾತ್ಮನ ಸ್ಥೂಲರೂಪ, ಹಾಗೂ ಜಗತ್ ಸೃಷ್ಟಿಗೆ ಏಕಮೇವ ಕಾರಣ ಎಂದು ತಿಳಿಯುವುದು.  ಬಾಹ್ಯ ಉಪಾಧಿಗಳನ್ನೆಲ್ಲಾ ಬಿಟ್ಟು ಸರ್ವದಾ ಭಗವಂತನ ಸ್ವರೂಪವನ್ನು ಅತ್ಯಧಿಕ ಪ್ರೇಮದಿಂದ ಚಿಂತಿಸುತ್ತ ಇರುವುದು ಎಂಬುದನ್ನು ಸ್ಕಂದಮಹಾಪುರಾಣದಲ್ಲಿ ತಿಳಿಸಲ್ಪಟ್ಟಿದೆ.  ಈ ನಿರ್ಗುಣ ಭಕ್ತಿಯು ಸತ್ವ, ರಜೋ, ತಮೋ ಎಂಬ ತ್ರಿಗುಣಗಳನ್ನೂ ಹೋಗಲಾಡಿಸಿ, ಮುಕ್ತಿಗೆ ತಲುಪಿಸುತ್ತದೆ.

ಅನ್ಯವ್ಯಾಪಾರರಹಿತವಾಗಿ ಭಕ್ತಿಯನ್ನು ಮಾಡುವ ಭಕ್ತನನ್ನು ಕುರಿತು ಭಗವದ್ಗೀತೆಯ ೧೧ನೇ ಅಧ್ಯಾಯದಲ್ಲಿ  ಭಗವಂತ
ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋರ್ಜುನ |
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ || - ಅನನ್ಯ ಭಕ್ತಿಯ ಮೂಲಕ ಚತುರ್ಭುಜರೂಪವುಳ್ಳ ನನ್ನನ್ನು ಪ್ರತ್ಯಕ್ಷವಾಗಿ ನೋಡಲು, ತತ್ವದಿಂದ ತಿಳಿಯಲು ಹಾಗೂ ಪ್ರವೇಶಿಸಲು ಶಕ್ತ್ಯವಿದೆಯೆಂದಿದ್ದಾನೆ
ಮತ್ಕರ್ಮ ಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ |
ನಿವೈರಃ ಸರ್ವ ಭೂತೇಷು ಯಃ ಸ ಮಾಮೇತಿ ಪಾಂಡವ || - ಕೇವಲ ನನಗಾಗಿಯೇ ಸಮಸ್ತ ಕರ್ತವ್ಯ, ಕರ್ಮಗಳನ್ನು ಮಾಡುವ, ನನ್ನಲ್ಲಿ ಪರಾಯಣನಾದ, ನನ್ನ ಭಕ್ತನಾದ, ಆಸಕ್ತಿರಹಿತನಾದ ಮತ್ತು ಸರ್ವ ಪ್ರಾಣಿಗಳಲ್ಲಿ ವೈರಭಾವರಹಿತನಾದ ಅನನ್ಯ ಭಕ್ತನು ನನ್ನನ್ನೇ ಹೊಂದುತ್ತಾನೆ ಎಂದಿದ್ದಾನೆ.

ಮುಕ್ತಿಯಲ್ಲಿಯೂ ಐದು ವಿಧ ಮುಕ್ತಿಗಳಿವೆಯೆಂದು ಭಾಗವತ ತೃತೀಯ ಸ್ಕಂದದಲ್ಲಿ ತಿಳಿಸಿದೆ.
ಸಾಲೋಕ್ಯಸಾರ್ಷ್ಟಿ ಸಾಮೀಪ್ಯ ಸಾರೂಪ್ಯೈಕತ್ವಮಪ್ಯುತ |
ದೀಯಮಾನಂ ನ ಗೃಹ್ಣನ್ತಿ ವಿನಾ ಮತ್ಸೇವನಂ ಜನಾಃ || - ಐದು ವಿಧ ಮುಕ್ತಿಗಳೆಂದರೆ ಸಾಲೋಕ್ಯ ಸಾರ್ಷ್ಟಿ, ಸಾಮೀಪ್ಯ, ಸಾರೂಪ್ಯ ಮತ್ತು ಸಾಯುಜ್ಯ.  ಸಾಲೋಕ್ಯವೆಂದರೆ ಭಗವಂತನ ಲೋಕದಲ್ಲಿಯೇ  ಅಂದರೆ ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳಲ್ಲಿ ನಿವಾಸಮಾಡುವುದು.  ಸಾರ್ಷ್ಟಿಯೆಂದರೆ ಭಗವಂತನನೊಡನೆ ಸಮಾನವಾದ ಐಶ್ವರ್ಯವನ್ನು ಹೊಂದುವುದು.  ಸಾಮೀಪ್ಯವೆಂದರೆ ಸದಾ ಭಗವಂತನ ಬಳಿಯಲ್ಲಿ, ಅಂದರೆ ವಿಷ್ಣುಲೋಕಗಳೆನಿಸಿರುವ ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳ ಸಮೀಪದಲ್ಲಿ ಇರುವುದು.  ಸಾರೂಪ್ಯವೆಂದರೆ ಭಗವಂತನ ರೂಪದಂತೆಯೇ ರೂಪವನ್ನು ಹೊಂದುವುದು, ಅಂದರೆ ಭಗವಂತನಂತೆಯೇ ನಾಲ್ಕು ತೋಳುಗಳನ್ನೂ, ಕಿರೀಟಾದಿ ಆಭರಣಗಳನ್ನೂ ಧರಿಸಿ ವಿಮಾನಗಳಲ್ಲಿ ವಿಹರಿಸುವಂತಹದು.  ಸಾಯುಜ್ಯವೆಂದರೆ ಭಗವಂತನ ತನುಮನಗಳಲ್ಲೇ ವಾಸಿಸುವುದು.  ಭಗವಂತ ತನ್ನ ಶರೀರ ಹಾಗೂ ಮನಸ್ಸುಗಳನ್ನು ಕೊಡುತ್ತಾನೆಂದರೆ, ಮುಕ್ತರು ಭಗವಂತನ ಶರೀರ ಮನಸ್ಸುಗಳನ್ನೇ ಉಪಯೋಗಿಸಿಕೊಂಡು ತಮ್ಮ ಇಚ್ಛಾನುಸಾರ ಚಟುವಟಿಕೆಗಳನ್ನು ಮಾಡುವುದೆಂದರ್ಥವಾಗುತ್ತದೆ.  ಅಂದರೆ ಇಲ್ಲಿಯೂ ಭಗವಂತನ ಅಧೀನವೇ ಇರುತ್ತದೆ, ಸ್ವತಂತ್ರತೆಯಲ್ಲ. ಮುಕ್ತರಾದರೂ ಅವರ ಇಚ್ಛೆ ಹರಿಯ ಇಚ್ಛಾನುಸಾರವೇ ಆಗಿರುತ್ತದೆ ಎಂದರ್ಥವಾಗುತ್ತದೆ.

ಮೋಕ್ಷಕ್ಕೆ ಅಂತರ್ಯಾಮಿಯಾಗಿ ಮಾಡುವ ಅಂತರಂಗ ಸಾಧನೆಗೆ ಭಕ್ತಿಯೊಂದೇ ಪ್ರಧಾನವಾಗಿರುವುದು.  "ಮನಸಾ ಧ್ಯಾಯನ್ ವಿಷ್ಣುಂ" ಎಂಬ ಒಂದೇ ಮಾರ್ಗ ಹಾಗೂ ಗುರಿಯಾಗಬೇಕು.  ಮುಕ್ತಿಗಳಲ್ಲಿ "ಸಾಯುಜ್ಯ" ಮುಕ್ತಿಯೇ ಶ್ರೇಷ್ಠವಾದದ್ದು.   ಸಾಯುಜ್ಯ ಮುಕ್ತಿಗೆ ಯೋಗ್ಯರಾದ ಭಕ್ತರು ಸಾಯುಜ್ಯವನ್ನೂ ಬಯಸಿರುವುದಿಲ್ಲ.  ಅವರಿಗೆ ಶ್ರೀಹರಿಯ ತನುಮನಗಳ ಆಶ್ರಯ ಬೇಕಾಗಿರುತ್ತದಷ್ಟೆ.  ಬೇರೇನೂ ಅಲ್ಲ.  ಭಗವಂತ ಪ್ರೀತಿಯಿಂದ ಕೊಟ್ಟ ಸಾಯುಜ್ಯವನ್ನು ಅವರು ಶ್ರೀಹರಿಯ ಆಜ್ಞೆಯೆಂದು ಮಾತ್ರ ಸ್ವೀಕರಿಸುತ್ತಾರೆ, ಬೇರಾವ ಕಾರಣಕ್ಕೂ ಅಲ್ಲ.

ಶ್ರೀ ವಾದಿರಾಜರು ತಮ್ಮ ವೈಕುಂಠವರ್ಣನೆಯಲ್ಲಿ " ಸಾಯುಜ್ಯ ಸಾಲೋಕ್ಯ ಸಾಮೀಪ್ಯ ಮತ್ತು ಸಾರೂಪ್ಯವೆಂದು ನಾಲ್ಕು ವಿಧ ಮುಕ್ತಿಗಳನ್ನು  ಉಲ್ಲೇಖಿಸಿದ್ದಾರೆ. ಸಾಯುಜ್ಯ ಮುಕ್ತಿಯನ್ನು "ಹರಿಯಂಗವಾಶ್ರೈಸಿ ಮುಕ್ತಿಯಲಿಹರಾಗಿ ಆ ಪಿರಿಯಸುರರೆ ಸಾಯುಜ್ಯ ಮೋಕ್ಷಕರು" ಎಂದಿದ್ದಾರೆ.  ಸಾಲೋಕ್ಯ ಮುಕ್ತಿಯನ್ನು "ಸಾಲೋಕ್ಯ ಹರಿಯ ಲೋಕದೊಳಗೆ ತುಂಬಿಪ್ಪುದು" ಎಂದಿದ್ದಾರೆ.   ಸಾಮೀಪ್ಯ ಮುಕ್ತಿಯನ್ನು  "ಪಾಲಸಾಗರದಲ್ಲಿ ಸುಖಿಸುವ ಜೀವರ ಸಾಲಿಗೆ ಸಾಮೀಪ್ಯ ಮುಕ್ತಿ ಕಾಣಿರೋ" ಎಂದಿದ್ದಾರೆ.    ಸಾಯುಜ್ಯ, ಸಾಮೀಪ್ಯ ಮತ್ತು ಸಾಲೋಕ್ಯ ಮುಕ್ತಿಯನ್ನು ಹೊಂದಿದವರಿಗೂ ಸಾರೂಪ್ಯವೆಂಬುದು ಇದ್ದೇ ಇರುತದೆಂಬುದನ್ನು
ಮೂರು ಶಾಕವ ಮಾಡಿ ಲವಣವ ಕೂಡಿದರೂ
ಮೂರು ಶಾಕವೆಂದು ಕರೆಯರೈಸೆ
ಬೇರೆ ಬೇರೆ ಬಡಿಸಿದರೂ ಲವಣವೆನಿಪುದು ಈ-
ಪರಿಯಲ್ಲಿ ಸಾರೂಪ್ಯದ ಮುಕ್ತರಿಗೂ || - ಮೂರು ತರಹದ ಪಲ್ಯಗಳನ್ನು ಮಾಡಿ, ಅವುಗಳನ್ನು ಉಪ್ಪಿನೊಡನೆ ಸೇರಿಸಿದರೂ ಕೂಡ, ಮೂರು ತರಹದ ಪಲ್ಯಗಳೆಂದೇ ಕರೆಯಲ್ಪಡುತ್ತವೆ.   ಅದರಲ್ಲಿ ಉಪ್ಪು ಬೇರೆಯೆಂದು ವ್ಯವಹರಿಸುವುದಿಲ್ಲ.  ಆದರೆ ಎಲೆಯ ತುದಿಯಲ್ಲಿ ಬೇರೆಯಾಗಿಯೇ ಬಡಿಸಿದ ಉಪ್ಪನ್ನು ಮಾತ್ರ ಉಪ್ಪು ಎಂದೇ ವ್ಯವಹರಿಸುತ್ತಾರೆ.  ಸಾಮೀಪ್ಯ ಮತ್ತು ಸಾಯುಜ್ಯ ಮುಕ್ತಿಗಳು ವಿಶೇಷವಾದವು.  ಅವುಗಳಿಲ್ಲದ ಬೇರೆ ಎಲ್ಲಾ ಮುಕ್ತರಿಗೂ ಸಾರೂಪ್ಯಮುಕ್ತಿಯು ಇದ್ದೇ ಇರುತ್ತದೆ.

ಸತ್ಯಲೋಕದವರೆಗಿನ ಲೋಕಗಳಲ್ಲಿ ವಾಸಿಸುವವರು ಸಾರೂಪ್ಯ ಮುಕ್ತರು.  ಭಗವಂತನ ಮನೆಗಳಾದ ಧಾಮತ್ರಯಗಳ ಆಸುಪಾಸಿನಲ್ಲಿ ವಾಸಿಸುವವರು ಸಾಮೀಪ್ಯ ಮುಕ್ತರು.  ಶ್ರೀಹರಿಯ ಮನೆಗಳಾದ ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳಲ್ಲಿ ವಾಸಿಸುವವರು ಸಾಲೋಕ್ಯ ಮುಕ್ತರು ಮತ್ತು ಪರಮಾತ್ಮನ ತನುಮನಗಳಲ್ಲಿ ವಾಸಿಸುವವರು ಸಾಯುಜ್ಯ ಮುಕ್ತರು.  ಭಗವಂತ ಹೀಗೆ ತನ್ನನ್ನೇ ಸದಾ ಸ್ಮರಿಸುವ, ಸೇವಿಸುವ ಭಕ್ತರಿಗೆ ತನ್ನ ತನುಮನಗಳೆರಡನ್ನೂ ಕೊಟ್ಟು ಮುಕ್ತಿಯನ್ನು ಕರುಣಿಸುವ ಕರುಣಾಮಯಿಯು.

ಅನವರತ ನೆನೆವವರ - ಅನವರತವೂ ನೆನೆವವರೇ ನಿಜವಾದ ಭಕ್ತರು. ಧ್ಯಾನದಿಂದಲೇ ಅವರು ಶುದ್ಧಿಯಾಗುವರು ಮತ್ತು ಎಲ್ಲವನ್ನೂ ಪಡೆಯುವರು.  ಸ್ಕಂದಮಹಾಪುರಾಣದಲ್ಲಿ
ಧ್ಯಾನೇನ ಸರ್ವಮಾಪ್ನೋತಿ ಧ್ಯಾನೇ ನಾಪ್ನೋತೊ ಶುದ್ಧತಾಂ |
ಧ್ಯಾನೇನ ಪರಮಂ ಬ್ರಹ್ಮ ಮೂರ್ತೌ ಯೋಗಸ್ತು ಧ್ಯಾನಜಃ || - ಪರಬ್ರಹ್ಮ ಪ್ರಾಪ್ತಿಯೂ, ಸಾಕ್ಷಾತ್ಕಾರವೂ ಉತ್ಕಟ ಹಾಗೂ ಅನವರತ ಧ್ಯಾನದಿಂದಲೇ ಸಾಧ್ಯವೆಂದು ತಿಳಿಸಲ್ಪಟ್ಟಿದೆ.
ಭಗವದ್ಗೀತೆಯಲ್ಲಿ ಭಗವಂತ ಅರ್ಜುನನಿಗೆ
ಮಯ್ಯೇವ ಮನ ಆಧಸ್ಸ್ವಮಯಿ ಬುದ್ಧಿಂ ನಿವೇಶಯ |
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ || - ನನ್ನಲ್ಲೇ ಮನಸ್ಸು ಹಾಗೂ ಬುದ್ಧಿಯನ್ನು ತೊಡಗಿಸಿದರೆ ಯಾವ ಸಂಶಯವೂ ಇಲ್ಲದೆ ನೀನು ನನ್ನಲ್ಲೇ ನೆಲೆಸುವೆ ಎಂದಿದ್ದಾನೆ.  ಮನಸ್ಸು ಮತ್ತು ಬುದ್ಧಿ ಎರಡನ್ನೂ ಭಗವಂತನ ಪಾದದಲ್ಲಿ ನೆಲೆಗೊಳಿಸಲು, ಧ್ಯಾನದ ಮೂಲಕ ಅನವರತ ನೆನೆವುದಲ್ಲದೆ ಬೇರೆ ಉಪಾಯವಿಲ್ಲವೇ ಇಲ್ಲ.
"ನಿನ್ನ ಧ್ಯಾನವನು ಕೊಡು ಎನ್ನ ಧನ್ಯನ ಮಾಡು" ಎಂದು ಪುರಂದರ ದಾಸರು ಹೇಳಿದ್ದಾರೆ.  "ನಿನ್ನ ಧ್ಯಾನದ ಶಕ್ತಿಯ ಕೊಡು, ಅನ್ಯರಲಿ ವಿರಕ್ತಿಯ ಕೊಡು..... ತುದಿಯಲಿ ಎನಗೆ ಮುಕ್ತಿ ಕೊಡು" ಎಂದು ಶ್ರೀವಾದಿರಾಜರು ಕೂಡ ತಿಳಿಸಿದ್ದಾರೆ.

ಅನಂತಾಸನವೆ ಮೊದಲಾದಾಲಯ -   ಧಾಮತ್ರಯಗಳೆಂದೇ ಪ್ರಸಿದ್ಧಿಗೊಂಡಿರುವುದು ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳು.  ಈ ಧಾಮತ್ರಯಗಳು ಶ್ರೀಹರಿಯ ಸಾಕ್ಷಾತ್ ನಿವಾಸಗಳು.  ವಿಷ್ಣುರಹಸ್ಯ ಹಾಗೂ ಇತರ ಪುರಾಣಗಳಲ್ಲಿ ವೈಕುಂಠ ಲೋಕದಲ್ಲಿ, ವೈಕುಂಠವೆಂದೇ ಕರೆಯಲ್ಪಡುವ ವೈಕುಂಠನಾಮಕ ಶ್ರೀಹರಿಯು ವಿಹರಿಸುವುದೇ ವೈಕುಂಠನಗರಿಯು ಎಂದಿದೆ.
ಭಗವದ್ಗೀತೆಯ ೮ನೇ ಅಧ್ಯಾಯದಲ್ಲಿ ಭಗವಂತ
ಅವ್ಯಕ್ತೋಕ್ಷರ ಇತ್ಯುಕ್ತಸ್ತಮಾಹುಃ ಪರಮಾ ಗತಿಮ್ |
ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ || - ಅದನ್ನು ಅವ್ಯಕ್ತ, ಅಕ್ಷರ ಎಂದು ಹೇಳುತ್ತಾರೆ ಮತ್ತು ಶ್ರೇಷ್ಠಗತಿಯೆಂದೂ ತಿಳಿಸುತ್ತಾರೆ.  ಆ ಸನಾತನ ಅವ್ಯಕ್ತ ಭಾವವನ್ನು ಪಡೆದುಕೊಂಡ ಬಳಿಕ ಮನುಷ್ಯನು ಮರಳಿ ಹುಟ್ಟುವುದಿಲ್ಲ, ಅದು ನನ್ನ ಸರ್ವಶ್ರೇಷ್ಠ ಸ್ಥಾನವಾಗಿದೆ ಎಂದಿದ್ದಾನೆ.
ಶ್ರೀ ವಾದಿರಾಜರು ತಮ್ಮ ವೈಕುಂಠ ವರ್ಣನೆಯಲ್ಲಿ "ಸಾಕ್ಷಾನ್ನಾರಾಯಣನಿಪ್ಪ ವೈಕುಂಠ"ವೆಂದಿದ್ದಾರೆ.   "ಅರ್ಕಕೋಟಿಗಳಂತೆ ವೈಕುಂಠಲೋಕ ದಶ ದಿಕ್ಕಿನೊಳಗೆ ಬೆಳಗುವುದು"  -  ವೈಕುಂಠಲೋಕವನ್ನು ಮಾತ್ರ ಲಕ್ಷ್ಮೀದೇವಿಯ ಕಾಂತಿಯು ಸಾಕ್ಷಾತ್ತಾಗೆ ಪ್ರಕಾಶಗೊಳಿಸುತ್ತದೆ ಎಂದಿದ್ದಾರೆ.
ಭಗವದ್ಗೀತೆಯಲ್ಲಿ ಭಗವಂತ ಸ್ವಯಂ
ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ |
ಯದ್ಗತ್ವಾನ ನಿವರ್ತಂತೇ ತದ್ಧಾಮ ಪರಮಂ ಮಮ || - ಆ ಸ್ವಯಂ ಪ್ರಕಾಶಿತ ಪರಮಪದವನ್ನು ಸೂರ್ಯ ಚಂದ್ರರಾಗಲೀ, ಅಗ್ನಿಯಾಗಲೀ ಪ್ರಕಾಶಿಸಲಾರರು.  ಆ ಪರಮಪದವನ್ನು ಪಡೆದ ಮನುಷ್ಯ ಮರಳಿ ಸಂಸಾರಕ್ಕೆ ಬರುವುದಿಲ್ಲ.  ಅದೇ ನನ್ನ ಪರಮಧಾಮವಾಗಿದೆ ಎಂದಿದ್ದಾನೆ.
ಶ್ರೀ ವಾದಿರಾಜರು ವೈಕುಂಠವರ್ಣನೆಯಲ್ಲಿ ಮುಂದುವರೆಯುತ್ತಾ "ಶಿರಿದೇವಿ ತಾನೆ ಮುರಹರನ ಪಟ್ಟಣದೊಳು | ಪರಿಪರಿಯ ಮನೆಯ ರೂಪದಲ್ಲಿ | ಮಿರಮಿರನೆ ಮಿಂಚುವಳು ಹಚ್ಚಪ್ರಕೃತಿಯಿಂದ | ವಿರಚಿತಗೃಹಗಳೊಪ್ಪಿಹವು || - ಮುರಹರನ ಪಟ್ಟಣದಲ್ಲಿ ಶಿರಿದೇವಿಯಾದ ಶ್ರೀಮಹಾಲಕ್ಷ್ಮಿಯೇ ಸ್ವಯಂ ಪರಿಪರಿಯ, ನಾನಾವಿಧದ ಮನೆಯ ರೂಪಗಳಲ್ಲಿ ಪ್ರಕಾಶಿಸುತ್ತಾಳೆ ಎಂದಿದ್ದಾರೆ.  ಇಂತಹ ಪರಮ ಪವಿತ್ರವಾದ ಮತ್ತು ಲಕ್ಷ್ಮೀದೇವಿಯೇ ಸ್ವಯಂ ರೂಪದಲ್ಲಿರುವ ತನ್ನ ತ್ರಿಧಾಮಗಳನ್ನೇ ಭಗವಂತ ಸಾಲೋಕ್ಯ ಮುಕ್ತರಿಗೆ ಕೊಟ್ಟುಬಿಡುತ್ತಾನೆ.  ಇದು ಅವನ ಪರಮಕಾರುಣ್ಯವಲ್ಲದೇ ಬೇರೇನೂ ಅಲ್ಲ.

ಅಣುಗನಂದದಲವರ ವಶನಾಗುವ -  ಅನುಗನೆಂದರೆ ಸಂಸ್ಕೃತದಲ್ಲಿ ಸಹಚರ, ಸೇವಕ, ಅನುಚರ, ಹಿಂಬಾಲಿಸುವವ ಎಂದರ್ಥ.  ಲೌಕಿಕ ಪ್ರಪಂಚದ ಎಲ್ಲಾ ಸಂಬಂಧಗಳಲ್ಲೂ ಒಬ್ಬರಿಗೊಬ್ಬರು ತಮ್ಮನ್ನು ಅರ್ಪಿಸಿಕೊಂಡಾಗ ಅಲ್ಲಿ ಸ್ವಾರ್ಥದ ಲೇಪವಿದ್ದೇ ಇರುತ್ತದೆ.  ಆದರೆ ಪರಮಾತ್ಮನಿಗೆ ಪರಮ ಭಕ್ತರು ತಮ್ಮನ್ನೇ ಅರ್ಪಿಸಿಕೊಂಡಾಗ ಅಲ್ಲಿ ಎಲ್ಲವೂ ಮುಕ್ತವಾಗಿರುತ್ತದೆ.  ಭಗವಂತ ತನ್ನ ತನು ಮನ ಧಾಮಗಳೆಲ್ಲವನ್ನೂ ಭಕ್ತರಿಗೆ ಕೊಟ್ಟಾಗಲೂ ಅದರಿಂದ ಅವನಿಗೆ ಯಾವ ಲಾಭವೂ ಇಲ್ಲ.  ತನ್ನದೆಲ್ಲವನ್ನೂ ಕೊಟ್ಟು, ತಾನೂ ಅನುಗನಂತೆ ಭಕ್ತರನ್ನು ಸೇವಿಸುವ.  ಪುಟ್ಟ ಮಗು ತನ್ನ ತಂದೆಯನ್ನೇ ಅನುಸರಿಸುತ್ತಾ ಹಿಂದೆ ಮುಂದೆ ತಿರುಗುವಂತೆ ಭಗವಂತ ತನ್ನ ಭಕ್ತರ ವಶನಾಗಿಬಿಡುವನು.  ಇದೇ ಆ ಪರಮಪುರುಷನ ಅತಿಶಯವಾದ ಕಾರುಣ್ಯವು  ಹಾಗೂ ಮಹಾಮಹಿಮೆಯು ಆಗಿರುತ್ತದೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ
ಏನು ಕೊಟ್ಟರೂ ಕೊಡೋ ಶ್ರೀನಿವಾಸನೆ ನಿನ್ನ-
ಧೀನದವನಯ್ಯ ಎಂದೆಂದು | ಎಂದೆಂದು ಸುಖದುಃಖ-
ಮಾನಾದಿಗಳಿಗೆ ಪ್ರಭು ನೀನು || - ಶ್ರೀನಿವಾಸನೇ ನೀನು ಏನು ಕೊಡುತ್ತೀಯೋ ಕೊಡು, ನಿನ್ನ ಇಚ್ಛೆಗೆ ಬಂದದ್ದನ್ನು ಕೊಡು.  ನಾನು ಎಂದೆಂದಿಗೂ, ಯಾವ ಕಾಲಕ್ಕೂ (ಮುಕ್ತಿಯಲ್ಲೂ) ನಿನ್ನ ದಾಸನು.  ನನ್ನ ಸುಖ-ದುಃಖ ಮಾನಾಪಮಾನಾದಿ ದ್ವಂದ್ವಗಳಿಗೆ ನೀನೇ ಪ್ರಭು, ನೀನೇ ಸ್ವತಂತ್ರನು.  ನಾನು ನಿನ್ನ ಅಧೀನನು ಎಂದಿದ್ದಾರೆ.

ನಿತ್ಯ ಬುದ್ಧನು ನಾನು ನಿತ್ಯ ಮುಕ್ತನು ನೀನು
ಭೃತ್ಯನು ನಾನು ಪ್ರಭು ನೀನು | ಪ್ರಭು ನೀನು ಮೂರ್ಲೋಕ-
ವ್ಯಾಪ್ತನು ನೀನು ಅಣು ನಾನು || - ನಾನು ನಿತ್ಯ ಪರಾಧೀನನು, ನಿತ್ಯ ಸಂಸಾರಿಯು ಮತ್ತು ನಿನ್ನ ಸೇವಕನು.  ನೀನು ನಿತ್ಯ ಸ್ವತಂತ್ರನು, ಆಳುವ ಪ್ರಭು,  ಮೂರ್ಲೋಕ ವ್ಯಾಪ್ತನು.  ಆದರೆ ನಾನಾದರೋ ಅಣು ಮಾತ್ರ ಸ್ವರೂಪನು ಎಂದಿದ್ದಾರೆ.  ದುಃಖ ವಿಮೋಚನೆಯೇ ಮುಕ್ತನೆಂಬ ನಾಮಕ್ಕೆ ಕಾರಣವಾದರೆ, ಸದಾ ಶ್ರೀಹರಿಯ ಅಧೀನನು ಎಂಬುದೇ ಬದ್ಧನೆಂಬ ನಾಮಕ್ಕೆ ಕಾರಣವಾಗುತ್ತದೆ.

ಡಿವಿಜಿಯವರು ಕಗ್ಗದಲ್ಲಿ "ಮುಕ್ತಿಸುಖವಾಂತರಿಕವದು ನಿರವಧಿಸುಖ" - ಮುಕ್ತಿಸುಖವೆನ್ನುವುದು ಬಾಹ್ಯವಲ್ಲ,  ಆಂತರಿಕ.  ಪ್ರತೀ ಜೀವಿಯೂ ತನ್ನ ದೃಷ್ಟಿಯನ್ನು ತನ್ನೊಳಗೆ ತಿರುಗಿಸಿಕೊಂಡು ಅಲ್ಲಿ ಆಗುವ ಬ್ರಹ್ಮಾನಂದವನ್ನು ಅನುಭವಿಸಬೇಕು, ಅದು ನಿರವಧಿಸುಖ ಎಂದಿದ್ದಾರೆ.
ನೆನೆನೆನೆದು ಗಹನವನು, ಜೀವನರಹಸ್ಯವನು
ಮನವ ಬಳಲಿಸಿ ಸೋಲಿಸಿರುವ ತತ್ತ್ವವನು |
ಮನನದೇಕಾಂತದಲಿ ಮೌನದ ಧ್ಯಾನದಲಿ
ಮಣಿಮಣಿದು ಕೈಮುಗಿಯೊ - ಮಂಕುತಿಮ್ಮ || - ವಿಶ್ವಕ್ಕೆಲ್ಲಾ ಆದಿಮೂಲವಾಗಿರುವ ಬ್ರಹ್ಮ ವಸ್ತುವನ್ನು ಯಾವಾಗಲೂ ಜ್ಞಾಪಿಸಿಕೊಳ್ಳುತ್ತಿರು.  ಏಕಾಂತದಲ್ಲಿ ಮೌನವಾಗಿ ಕುಳಿತು ತದೇಕ ಚಿತ್ತನಾಗಿ ಧ್ಯಾನಿಸು.  ಧ್ಯಾನಿಸುತ್ತಾ ಪುನಃ ಪುನಃ ಸಾಷ್ಟಾಂಗ ನಮಸ್ಕಾರ ಮಾಡು ಎಂದಿದ್ದಾರೆ.

ಚಿತ್ರಕೃಪೆ : ಅಂತರ್ಜಾಲ

Tuesday, February 11, 2014

ಕರುಣಾ ಸಂಧಿ - ೧೬ ನೇ ಪದ್ಯ

ಏನು ಕರುಣಾನಿಧಿಯೊ ಹರಿ ಮ
ತ್ತೇನು ಭಕ್ತಾಧೀನನೋ ಇ
ನ್ನೇನು ಈತನ ಲೀಲೆ ಇಚ್ಛಾಮಾತ್ರದಲಿ ಜಗವ |
ತಾನೆ ಸೃಜಿಸುವ ಪಾಲಿಸುವ ನಿ
ರ್ವಾಣ ಮೊದಲಾದಖಿಳಲೋಕ
ಸ್ಥಾನದಲಿ ಮತ್ತವರನಿಟ್ಟಾನಂದ ಪಡಿಸುವನು  ||೧೬||

ಪ್ರತಿಪದಾರ್ಥ : ಏನು ಕರುಣಾನಿಧಿಯೋ ಹರಿ - ಶ್ರೀಹರಿಯು ಸಾಟಿಯಿಲ್ಲದಂತಹ ಕರುಣಾಸಾಗರನು, ಮತ್ತೇನು ಭಕ್ತಾಧೀನನೋ - ತನ್ನನ್ನು ಭಕ್ತಿ ಹಾಗೂ ಪ್ರೇಮದಿಂದ ಸ್ತುತಿಸುವ ಭಕ್ತರಿಗೆ ಅಧೀನನಾಗುವನು, ಇನ್ನೇನು ಈತನ ಲೀಲೆ - ಭಗವಂತ ಎಲ್ಲಾ ಕಾರ್ಯಗಳೂ ಲೀಲೆಗಳೇ (ಕ್ರೀಡೆಗಳೇ) ಆಗಿವೆ ಬಣ್ಣಿಸಲಾಗಲೀ ಹೋಲಿಸಲಾಗಲೀ ಸಾಧ್ಯವಿಲ್ಲದಂತಹುದು, ಇಚ್ಛಾಮಾತ್ರದಲಿ - ತನಗೆ ಇಚ್ಛೆಯಾದ ಕೂಡಲೆ,  ಜಗವ ತಾನೆ ಸೃಜಿಸುವ - ಬ್ರಹ್ಮಾಂಡವನ್ನು ಸೃಷ್ಟಿ ಮಾಡುವನು, ಪಾಲಿಸುವ - ಸಂರಕ್ಷಣೆಯನ್ನೂ ಮಾಡುವನು, ನಿರ್ವಾಣ - ಎಂದರೆ ಬಾಣವಿಲ್ಲದ ಸ್ಥಳ ಮತ್ತು ಬಾಣ ಎಂದರೆ ಬಾಹ್ಯದೇಹ - ಮೋಕ್ಷ, ಮೊದಲಾದಖಿಳ - ಸ್ವರ್ಗ ಹಾಗೂ ಇತರ ಭೋಗಗಳು, ಲೋಕ ಸ್ಥಾನದಲಿ - ಸ್ವರ್ಗಲೋಕ ಮಹರ್ಲೋಕ ಮುಂತಾದ ಲೋಕಗಳಲ್ಲಿ, ಮತ್ತವರನ್ನಿಟ್ಟು - ಭಕ್ತರನ್ನು ಅಲ್ಲಿ ಇಟ್ಟು, ಆನಂದಪಡಿಸುವನು - ಸಂತೋಷಪಡುವಂತೆ ಮಾಡುವನು.

ಹರಿ ಕರುಣಾ ಸಮುದ್ರನು ಮತ್ತು ಭಕ್ತರಿಗೆ ಅಧೀನನೂ ಆಗಿದ್ದಾನೆ.  ತನ್ನ ಖುಷಿಯಿಂದ ಜಗತ್ತನ್ನು ಸೃಷ್ಟಿಸುವವನು ಹಾಗೂ  ಪಾಲಿಸುವವನು.  ತನ್ನ ಇಷ್ಟವುಳ್ಳ ಭಕ್ತರಿಗೆ ಮೋಕ್ಷವನ್ನು ಕೊಟ್ಟು, ಅವರನ್ನು ಆನಂದ ಪಡಿಸುವನು.  ಅತ್ಯಂತ ಬಡವನಾದ ತನ್ನ ಸ್ನೇಹಿತ ಸುಧಾಮನಿಗೆ ಐಶ್ವರ್ಯವನ್ನು ಕೊಟ್ಟು ಕರುಣಾನಿಧಿ ಎನಿಸಿಕೊಂಡ.  ಭಕ್ತ ಪುಂಡರೀಕ ಕೊಟ್ಟ ಇಟ್ಟಿಗೆಯ ಮೇಲೆ ನಿಂತು ಭಕ್ತಾಧೀನನೆನಿಸಿಕೊಂಡ.  ಪುಟ್ಟ ಧೃವ ಮತ್ತು ಪ್ರಹ್ಲಾದರಿಗೆ ಏನೇ ಕಷ್ಟ ಬಂದರೂ ಅವರನ್ನು ಕಾಪಾಡಿದ.  ಧೃವನಿಗೆ ಒಂದು ಲೋಕವನ್ನೇ ಕೊಟ್ಟು ಲೋಕಾಧಿಪತಿಯನ್ನು ಮಾಡಿದ.  ಭಕ್ತ ಪ್ರಹ್ಲಾದನಿಗಾಗಿ ಒಂದು ಅವತಾರವನ್ನೇ ಎತ್ತಿದ.  ಹೀಗೆ ಇಚ್ಛಾಮಾತ್ರ ಲೀಲೆಯಿಂದ ಈ ಲೋಕವನ್ನು ಸೃಷ್ಟಿಸಿ, ಪಾಲಿಸಿ, ಲಯಗೊಳಿಸಿ, ವೈಕುಂಠವೇ ಮೊದಲಾದ ಮುಕ್ತ ಲೋಕಗಳಲ್ಲಿ ತನ್ನ ಭಕ್ತರನ್ನಿಟ್ಟು ಆನಂದಪಡಿಸುತ್ತಾನೆ.

ಭಗವಂತನ ಲೀಲೆಗಳಿಂದ ಆನಂದವಲ್ಲ, ಅವನು ಆನಂದದಿಂದಲೇ ಲೀಲೆಯಾಡುವನು.  ತನ್ನ ಒಂದು ಇಚ್ಛೆಯಿಂದಲೇ ಬ್ರಹ್ಮಾಂಡದ ಸೃಷ್ಟಿಯನ್ನು ಮಾಡುವಂತಹ ಪರಮಪುರುಷನಾದ ಶ್ರೀಹರಿ ಅದೆಷ್ಟು ಕರುಣಾಮಯನೆಂದರೆ, ನಿಜವಾದ ಭಕ್ತರಿಗೆ ತಾನೇ ಅಧೀನನಾಗಿ ಬಿಡುವಂತಹವನು.  ಕರುಣೆಗೆ ಗುರುತೇ ಭಕ್ತರಿಗಧೀನನಾಗುವುದು.  ಆನಂದದಿಂದ ಲೀಲೆಯಾಡುವಂತಹ ಸರ್ವಶಕ್ತನಾದ ಶ್ರೀಹರಿ ಭಕ್ತರ ನಿಷ್ಕಲ್ಮಷ ಪ್ರೇಮಕ್ಕೆ, ಭಕ್ತಿಗೆ ತನ್ನನ್ನೇ ಕೊಟ್ಟು, ಕಟ್ಟುಹಾಕಿಸಿಕೊಳ್ಳುವಂತಹವನು.  ಇಂತಹ ಕರುಣಾಮಯನ ಕರುಣೆ ಜೀವಿಗೆ ಸಿಗಬೇಕಾದರೆ, ಜೀವಿ ನಿಜವಾದ ಭಕ್ತಿಯಿಂದ ಪರಿಪೂರ್ಣವಾಗಿ ತನ್ನನ್ನೇ ಅವನಿಗೆ ಅರ್ಪಿಸಿಕೊಳ್ಳಬೇಕು.  ನಿಜವಾದ ಭಕ್ತನು ಯಾರು ಮತ್ತು ನಿಜವಾದ ಭಕ್ತಿಯೆಂದರೆ ಏನೆಂಬುದನ್ನು ಮೊದಲು ಅರಿಯಬೇಕು.  ಭಕ್ತರಲ್ಲಿಯೂ ವಿವಿಧ ಭಾವಗಳಿವೆ.  ಜ್ಞಾನವನ್ನು ಸಂಪಾದಿಸಿಕೊಳ್ಳಬೇಕೆಂದು ಬಯಸುವ ಭಕ್ತನನ್ನು ’ಜಿಜ್ಞಾಸು’ (ಜ್ಞಾತುಂ ಇಚ್ಛಾ ಜಿಜ್ಞಾಸಾ) ಎನ್ನುತ್ತಾರೆ.   ವಾಸನೆಗಳನ್ನೂ, ವಿಷಯಗಳನ್ನೂ ಬಯಸುವ ಭಕ್ತನನ್ನು ’ಅರ್ಥಾರ್ಥಿ’ ಎನ್ನುತ್ತಾರೆ.  ಸದಾ ಸರ್ವದಾ ಭಗವಂತನನ್ನೇ ಬಯಸುವಂತಹ ಭಕ್ತನನ್ನು ’ಜ್ಞಾನೀಚ’ ಎನ್ನುತ್ತಾರೆ ಮತ್ತು ಇದೇ ನಿಜವಾದ ಭಕ್ತಿ ಹಾಗೂ ಇದನ್ನು ಬಯಸುವವನೇ ನಿಜವಾದ ಭಕ್ತನೂ ಆಗಿರುತ್ತಾನೆ.  ನಿರಂತರ ಸ್ಮರಿಸಬೇಕೆಂದಾಗ, ಭಗವಂತನಿಗೆ ಇದೇ ನಾಮ ಅದೇ ನಾಮವೆಂಬ ಯಾವುದೇ ನಿಯಮವಿಲ್ಲ.  ಅವನು ಪ್ರತಿ ಅಕ್ಷರ ಹಾಗೂ ಪದಗಳ ಪ್ರತಿಪಾದ್ಯನು.  ಯಾವುದೇ ಪದವನ್ನು ಉಪಯೋಗಿಸಿದರೂ, ಯಾವುದೇ ನಾಮವಾದರೂ , ಶುದ್ಧ ಭಕ್ತಿಯಿಂದ, ನುಡಿದಾಗ ಅದು ಭಗವಂತನ ನಾಮವೇ ಆಗುತ್ತದೆ.  ನಾವು ಆಡುವ ಪ್ರತಿ ಶಬ್ದವೂ ಭಗವಂತನಿಗೇ ಸಮರ್ಪಣೆಯೆಂಬ ಒಂದು ಅನುಸಂಧಾನವನ್ನು ದಿನವೂ ಬೆಳಿಗ್ಗೆ ಎದ್ದ ತಕ್ಷಣ ಮಾಡಿಕೊಂಡರೆ, ದಿನಪೂರ್ತಿಯೂ ಆಡುವ ಪ್ರತೀ ಮಾತೂ ಅವನಿಗೇ ಸಮರ್ಪಿತವಾಗುತ್ತದೆ.  ಹೀಗೆ ಮಾಡಿದಾಗ ತತ್ತ್ವಾಭಿಮಾನಿ ದೇವತೆಗಳು ಕೂಡ ನುಡಿಯುವ ಪ್ರತೀ ಶಬ್ದವೂ ಭಗವಂತನಿಗೆ ಪ್ರೀತಿಯಾಗುವಂತೆಯೇ ನುಡಿಸುತ್ತಾರೆ.  ಭಗವಂತನಿಗೆ ತನ್ನದೇ ಎಂಬ ಯಾವ ಕರ್ತವ್ಯವೂ ಯಾವ ಲೋಕದಲ್ಲಿಯೂ ಇಲ್ಲ.  ಅವನು ಕರುಣಾಸಾಗರ ಹಾಗೂ ಭಕ್ತಪರಾಧೀನನಾದ್ದರಿಂದಲೇ, ಜೀವಿಗೋಸ್ಕರವಾಗಿಯೇ, ತನ್ನದೇ ಕರ್ತವ್ಯವೋ ಎಂಬಂತೆ ತಾನು ಮಾಡಿ, ನಮ್ಮಿಂದ ಮಾಡಿಸಿ, ನಮ್ಮನ್ನು ಕಾಪಾಡುತ್ತಾನೆ.  


ಭಗವದ್ಗೀತೆಯಲ್ಲಿ ಶ್ರೀಕೃಷ್ಣನು :

ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ |
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ || -  ಮೂರೂ ಲೋಕಗಳಲ್ಲಿಯೂ ನನಗೆ ಗಳಿಸಲಾಗದಿರುವ ಯಾವುದೇ ವಸ್ತುವೂ ಇಲ್ಲ ಮತ್ತು ಇದ್ದರೂ ನನಗೆ ಅದರ ಅವಶ್ಯಕತೆ ಇಲ್ಲ.  ನನಗಾಗಿ ಯಾವ ಕರ್ತವ್ಯವೂ ಉಳಿದಿಲ್ಲವಾದರೂ ಕೂಡ ನಾನು ಕರ್ಮಗಳನ್ನು ತ್ಯಾಗ ಮಾಡುವುದಿಲ್ಲ.  ನಾನೇ ಸೃಷ್ಟಿಸಿರುವ ಈ ಲೋಕದ ಜೀವಿಗಳಿಗಾಗಿ, ಅವರ ಉದ್ಧಾರಕ್ಕಾಗಿ, ಅವರ ಮೇಲೆ ದಯೆಗೈದು ನಾನು ಕರ್ಮಗಳಲ್ಲಿ ತೊಡಗಿದ್ದೇನೆ ಎಂದು ಅರ್ಜುನನಿಗೆ ತಿಳಿಸಿದ್ದಾನೆ.  

ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದಿತಃ |

ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ || - ನಾನು ಎಂದಾದರೂ ಎಚ್ಚರವಾಗಿ ಕರ್ಮಗಳನ್ನು  ಮಾಡದಿದ್ದರೆ ದೊಡ್ಡ ಹಾನಿಯುಂಟಾಗುವುದು.  ಏಕೆಂದರೆ ಎಲ್ಲಾ ಜೀವಿಗಳೂ ಪ್ರತಿಯೊಂದು ರೀತಿಯಲ್ಲೂ ನನ್ನ ಮಾರ್ಗವನ್ನೇ ಅನುಸರಿಸುತ್ತಾರೆ ಎಂದಿದ್ದಾನೆ.
ಭಗವಂತ ತಾನೇನೂ ಮಾಡಬೇಕಿಲ್ಲವಾದರೂ, ಅವನು ಮಾಡದಿದ್ದರೆ ಅಸ್ವತಂತ್ರರಾದ ಜೀವಿಗಳೂ ಏನೂ ಮಾಡಲಾರರು.   ಜೀವಿಗಳು ತಮಗೆ ಬೇಕಿದ್ದರೂ ಕೂಡ ತಾವೇ ಜನಿಸಲಾರರು,  ಸಾಧನೆ ಮಾಡಲಾರರು.  ಮುಕ್ತಿ, ಮೋಕ್ಷಗಳನ್ನು ಪಡೆಯಲಾರರು.  ಆದ್ದರಿಂದ ಕರುಣಾಮಯಿಯಾದ ಭಗವಂತ ತಾನೇ ಹುಟ್ಟಿಸಿ, ರಕ್ಷಿಸಿ, ಸಾಧನೆ ಮಾಡಿಸಿ, ಮೋಕ್ಷಾದಿ ಫಲಗಳನ್ನು ಕೊಟ್ಟು ಸಂತೋಷಪಡಿಸುತ್ತಾನೆ.   ಇಷ್ಟೆಲ್ಲಾ ಮಾಡುವ ಭಗವಂತನು ತಾನು ಮಾಡಿದ ಕೆಲಸಕ್ಕೆ ಪ್ರತಿಫಲವನ್ನೇನೂ ಬಯಸುವುದಿಲ್ಲ.

ಅನುಸಂಧಾನ ಪೂರ್ವಕವಾಗಿ ಮಾಡುವ ಪ್ರತೀ ಕರ್ಮವೂ ಭಗವಂತನಿಗೆ ಸಮರ್ಪಣೆಯಾಗುತ್ತದೆ.  ಸಮರ್ಪಣೆಯಾದಾಗ, ಪಾಪವೂ ಪಾಪವಾಗುವುದಿಲ್ಲ, ಪುಣ್ಯವೇ ಆಗುತ್ತದೆ.  ಪಾಪವೆಂಬಂತೆ ತೋರಿಸಿ, ಜೀವಿಯನ್ನು ಎಚ್ಚರಿಸಿ ಮತ್ತೆ ಪಾಪ ಮಾಡದಂತೆ, ಪ್ರೇರೇಪಿಸುತ್ತಾನೆ ಭಗವಂತ.  ಆದ್ದರಿಂದಲೇ ಅವನು ಕರುಣಾಸಮುದ್ರನು. ಭಕ್ತಾಧೀನನಾದ ಭಗವ೦ತನು ತನ್ನ ಕರುಣೆಯ ಅಧೀನತ್ವವನ್ನು ಯಾವಾಗ ತೋರಿಸುವನು ಎ೦ದರೆ ಜೀವಿಯು ಅನುಸ೦ಧಾನಪೂರ್ವಕವಾಗಿ ಕರ್ಮಗಳನ್ನು ಮಾಡಿದಲ್ಲಿ, ತನ್ನ ಭಕ್ತರು ಏನು ಪಾಪವನ್ನು ಮಾಡಿದರೂ, ತಜ್ಜನಿತವಾದ ಪಾಪ ಫಲಗಳನ್ನು ದೈತ್ಯರಿಗೆ ವಿಭಾಗ ಮಾಡಿಕೊಟ್ಟು, ದೈತ್ಯರು ಮಾಡಿದ ಪುಣ್ಯಕರ್ಮಗಳನ್ನು ತನ್ನ ಭಕ್ತರಿಗೆ ಕೊಡುತ್ತಾನೆ. 


ಏನು ಕರುಣಾನಿಧಿಯೊ - ಭಾಗವತದಲ್ಲಿ ತಿಳಿಸಿರುವಂತೆ ಬ್ರಹ್ಮಾಂಡ ಸೃಷ್ಟಿಯಾಗುವ ಮೊದಲೇ ೨೪ ತತ್ತ್ವಗಳ ಸೃಷ್ಟಿಯಾಗಿತ್ತು.  ಆದರೆ ತತ್ತ್ವಾಭಿಮಾನಿ ದೇವತೆಗಳು ಏನೂ ಮಾಡಲಾಗದೇ, ಭಗವಂತನಿಗೆ ಶರಣುಬಂದಾಗ, ಶ್ರೀಹರಿ ತಾನೇ ಎಲ್ಲ ದೇವತೆಗಳೊಳಗೂ ನಿಂತು, ಮಾಡಿ, ತತ್ತ್ವಾಭಿಮಾನಿ ದೇವತೆಗಳಿಂದ ಮಾಡಿಸಿ, ಬ್ರಹ್ಮಾಂಡ ಸೃಷ್ಟಿಸಿದ.  ಪ್ರತಿಯೊಬ್ಬರಿಗೂ ಅವರರವ ಯೋಗ್ಯತೆಗನುಸಾರವಾಗಿ ಕರ್ಮ ಮಾಡಿಸಿ, ತಕ್ಕ ಫಲವನ್ನು ಕೊಡುವವನು.  ಸಾಧನೆಯಿಲ್ಲದೇ ಯಾವ ಫಲವೂ ಸಿಕ್ಕುವುದಿಲ್ಲ.  ಈ ಜನ್ಮದಲ್ಲಿ ಕೊಟ್ಟಿರುವ ಭೌತಿಕ ಶರೀರವನ್ನುಪಯೋಗಿಸಿಕೊಂಡು ಭಗವಂತನಿಗೆ ಶರಣಾಗಿ ಪ್ರಾರ್ಥಿಸಿಕೊಂಡಾಗ ಮಾತ್ರ ನಮಗೆ ಮುಂದಿನ ಜನ್ಮಗಳಲ್ಲೂ ಸಾಧನೆಗೆ ಅನುಕೂಲವಾಗುವಂತಹ ಉತ್ತಮ ಶರೀರ ಕೊಟ್ಟು, ಹಣ, ಸ್ಥೈರ್ಯ, ಅನುಕೂಲಕರವಾಗಿರುವ ವಾತಾವರಣ ಕೊಟ್ಟು ಸಾಧನೆ ಮಾಡಿಸಿ, ಸಾಧನೆಯ ಫಲವಾಗಿ  ಸ್ವರ್ಗ ಹಾಗೂ ಮೋಕ್ಷಗಳನ್ನು ಕರುಣಿಸುತ್ತಾನೆ.


ಏನು ಭಕ್ತಾಧೀನನೋ -  ಭಗವಂತ ಭಕ್ತರ ಅಧೀನನು.  ಜೀವಿಗಳಿಂದ ಪ್ರಾರಂಭಿಸಿ, ದೇವತೆಗಳವರೆಗೂ ಎಲ್ಲರೂ ಅವನ ಭಕ್ತರೇ.  ಎಲ್ಲರಲ್ಲೂ ಅವನೇ ಇದ್ದು ಸಾಧನೆ ಮಾಡಿಸುವನು.  ಜೀವಿಗಳನ್ನು ಹುಟ್ಟಿಸಿ, ಅವರೊಳಗೆ ಭಗವತ್ತತ್ತ್ವಗಳ ಪ್ರೇರಣೆ ಕೊಟ್ಟು, ಸಾಧನೆ ಮಾಡಿಸುವುದು ತತ್ತ್ವಾಭಿಮಾನಿ ದೇವತೆಗಳ ಕೆಲಸ, ಕರ್ತವ್ಯ.  ಇದು ತತ್ತ್ವಾಭಿಮಾನಿ ದೇವತೆಗಳಿಗೆ ಮೋಕ್ಷ ಸಾಧನೆ.  ಆದರೆ ತತ್ತ್ವಾಭಿಮಾನಿ ದೇವತೆಗಳೂ ಕೂಡ ಅಸ್ವತಂತ್ರರೇ.  ಅವರು ಭಗವಂತನಲ್ಲಿ ತಮ್ಮ ಅಶಕ್ತತೆಯನ್ನು ನಿವೇದಿಸಿಕೊಂಡರು.  ಭಾಗವತ ತೃತೀಯ ಸ್ಕಂದದಲ್ಲಿ ತಿಳಿಸಿರುವಂತೆ ದೇವತೆಗಳು ಭಗವಂತನನ್ನು "ಪ್ರಪಂಚದ ಸೃಷ್ಟಿಗಾಗಿ ನೀನು ನಮ್ಮನ್ನು ತ್ರಿಗುಣಮಯವನ್ನಾಗಿ ಸೃಷ್ಟಿಸಿದರೂ, ನಮ್ಮಲ್ಲಿ ಪರಸ್ಪರ ಸಾಮ್ಯವಿಲ್ಲ.  ಎಲ್ಲರ ಸ್ವಭಾವವೂ ಬೇರೆ ಬೇರೆಯೇ ಆಗಿದೆ.  ಆದ್ದರಿಂದ ನಾವುಗಳೆಲ್ಲರೂ ಒಟ್ಟಾಗಿ ಸೇರಿ ನಿನ್ನ ಕ್ರೀಡೆಗಾಗಿ ಲೋಕವನ್ನು ಸೃಷ್ಟಿಮಾಡಿ, ನಿನಗೆ ಅರ್ಪಿಸಲು ಅಸಮರ್ಥರಾಗಿದ್ದೇವೆ" ಎಂದು ಪ್ರಾರ್ಥಿಸಿಕೊಂಡರು.  ಭಗವಂತ ಪ್ರತೀ ತತ್ತ್ವಾಭಿಮಾನಿ ದೇವತೆಯೊಳಗೂ ತಾನು ಪ್ರವೇಶಿಸಿ, ಅವರಲ್ಲಿದ್ದ ಸುಪ್ತ ಶಕ್ತಿಯನ್ನು ಉದ್ರೇಕಿಸಿ, ಪ್ರೇರಣೆ ಕೊಟ್ಟು, ಅವರೆಲ್ಲರ ಮೂಲಕವೇ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿಸಿದ.  ಹೀಗೆ ತನ್ನ ಭಕ್ತರಾದ ದೇವತೆಗಳ ಭಕ್ತಿಗೆ ಮೆಚ್ಚಿ ಅವರೊಳಗಿದ್ದು ತಾನು ಮಾಡಿ, ಅವರಿಂದ ಸಾಧನೆ ಮಾಡಿಸುವನಾದ್ದರಿಂದಲೇ ಅವನು ಭಕ್ತಪರಾಧೀನ.   ಭಗವಂತ ತಾನೇ ಎಲ್ಲವನ್ನೂ ಮಾಡಿದರೂ ಕೂಡ ಅದರಿಂದ ಬರುವ ಪ್ರತಿಫಲಗಳನ್ನು ಆಯಾ ದೇವತೆಗಳಿಗೇ ಅವರ ಸಾಧನೆಯ ಲೆಕ್ಕಕ್ಕೆ ಸೇರಿಸಿಬಿಡುವ ಕರುಣಾಸಮುದ್ರನಾಗಿದ್ದಾನೆ.    ಬ್ರಹ್ಮಾಂಡದ ಪಾಲನೆಯಲ್ಲಿಯೂ ದೇವತೆಗಳು ಅಶಕ್ತರೆಂಬುದು ಭಾಗವತದಲ್ಲಿ ಬರುವ "ಭಕ್ತ ಅಂಬರೀಷ ರಾಜ"ನ ಕಥೆಯಿಂದ ತಿಳಿಯಬಹುದು.  ರಾಜ ಅಂಬರೀಷನಲ್ಲಿ ಅಪರಾಧ ಮಾಡಿದ ದುರ್ವಾಸರನ್ನು ವಿಷ್ಣುಚಕ್ರ ಬೆನ್ನಟ್ಟಿಕೊಂಡು ಬಂದಾಗ, ದುರ್ವಾಸರು ಎಲ್ಲಾ ಲೋಕಗಳಲ್ಲಿಯೂ ಸಂಚರಿಸಿ, ದೇವತೆಗಳನ್ನು ಪ್ರಾರ್ಥಿಸಿದರು.  ಆದರೆ ಯಾರಿಂದಲೂ ವಿಷ್ಣುಚಕ್ರ ತಡೆಯುವುದಾಗಲಿಲ್ಲ.  ಕೊನೆಗೆ ಶ್ರೀಹರಿಯ ಪಾದಗಳಿಗೆ ದುರ್ವಾಸರು ಶರಣಾಗತರಾದಾಗ, ಭಗವಂತ ವಿಷ್ಣುಚಕ್ರ ತಡೆಯುವುದು, ತನ್ನಿಂದಲೂ ಸಾಧ್ಯವಿಲ್ಲವೆಂದು ತಿಳಿಸಿದನು.  ದುರ್ವಾಸರು ಅಪರಾಧ ಮಾಡಿದ್ದ ಭಗವಂತನ ಪರಮ ಭಕ್ತನಾದ ರಾಜ ಅಂಬರೀಷನು ಮಾತ್ರವೇ ವಿಷ್ಣುಚಕ್ರವನ್ನು ತಡೆಯಬಲ್ಲವನೆಂದು ದುರ್ವಾಸರಿಗೆ ತಿಳಿಸಿ, ತನ್ನ ಭಕ್ತಾಧೀನ ಗುಣವನ್ನು ಪ್ರಕಾಶಿಸಿದ.  ಭಗವಂತ ತಾನೇ "ಅಹಂ ಭಕ್ತಪರಾಧೀನೋ ಹ್ಯಸ್ವತನ್ತ್ರ ಇವ ದ್ವಿಜ | ಸಾಧುಭಿರ್ಗ್ರಸ್ತ ಹೃದಯೋ ಭಕ್ತೈರ್ಭಕ್ತ ಜನಪ್ರಿಯಃ || - ನಾನು ಸರ್ವಥಾ ಭಕ್ತಜನರಿಗೆ ಅಧೀನನು, ನನಗೆ ಯಾವ ಸ್ವಾತಂತ್ರವೂ ಇಲ್ಲ, ನನ್ನ ಭಕ್ತರನ್ನು ಬಹಳವಾಗಿ ಪ್ರೀತಿಸುತ್ತೇನೆ ಎಂದು  ತಿಳಿಸಿದ್ದಾನೆ.


ಏನು ಈತನ ಲೀಲೆ - ಭಗವಂತ ಸುಖವಾಗಿ ತಾನಿರುವ ವೈಕುಂಠದಿಂದಲೇ ತನ್ನ ಇಚ್ಛೆಮಾತ್ರದಿಂದಲೇ ಸಕಲ ಸೃಷ್ಟಿಯನ್ನೂ ಮಾಡಬಹುದು.  ಆದರೆ ಹಾಗೆ ಮಾಡದೆ ತನ್ನ ಭಕ್ತರಾದ ಬ್ರಹ್ಮಾದಿ ದೇವತೆಗಳ ಮೂಲಕ ಸೃಷ್ಟಿಯಾದಿ ಕೆಲಸಗಳನ್ನು ಮಾಡುವನು.  ತಾನೇ ಬೇರೆ ಬೇರೆ ರೂಪಗಳಲ್ಲಿ ಎಲ್ಲಾ ದೇವತೆಗಳೊಳಗೂ ಪ್ರವೇಶಿಸಿ ಎಲ್ಲವನ್ನೂ ಮಾಡಿ ಮಾಡಿಸುತ್ತಾನೆ.  ತನಗಾಗಿ ತನ್ನ ಲೀಲೆಗಾಗಿ ಭಗವಂತ ಸೃಷ್ಟಿಯ ಕಾರ್ಯ ಮಾಡುವುದಿಲ್ಲ.  ಅವನು ಪೂರ್ಣಾನಂದನಾಗಿರುವುದರಿಂದ ಸೃಷ್ಟಿಯನ್ನು ಲೀಲೆಯಿಂದ ಮಾಡಿಬಿಡುತ್ತಾನಷ್ಟೆ. 

ಭಗವದ್ಗೀತೆಯಲ್ಲಿ ಭಗವಂತ
ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ | -   ಎನ್ನುತ್ತಾ ಸರ್ವ ಜಗತ್ತಿನ ಉತ್ಪತ್ತಿಗೆ ನಾನೇ ಕಾರಣನಾಗಿದ್ದೇನೆ ಮತ್ತು ನನ್ನಿಂದಲೇ ಇಡೀ ಜಗತ್ತು ವರ್ತಿಸುತ್ತಾ ಇದೆ ಎಂದೂ
ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ |
ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್ || - ಕಲ್ಪದ ಕೊನೆಯಲ್ಲಿ ಸರ್ವ ಜೀವಕೋಟಿಯು ನನ್ನ ಪ್ರಕೃತಿಯಲ್ಲಿ ಲೀನವಾಗುತ್ತವೆ ಹಾಗೂ ಕಲ್ಪದ ಪ್ರಾರಂಭದಲ್ಲಿ ಪುನಃ ಅವುಗಳನ್ನು ನಾನು ಸೃಷ್ಟಿಸುತ್ತೇನೆ ಎಂದೂ ತಿಳಿಸಿದ್ದಾನೆ. 
ಸಕಲವೂ ಅವನದ್ದೇ, ಎಲ್ಲಾ ಚರಾ ಚರಗಳಲ್ಲೂ ಭಗವಂತನದ್ದೇ ಅನೇಕಾನೇಕ ವಿಭೂತಿರೂಪಗಳಿವೆ ಎಂಬುದನ್ನು ತಾನೇ ತಿಳಿಸಿರುವಾಗ ಸೃಷ್ಟಿಯೆಂಬುದು ಅವನಿಗೆ ಅನಾಯಾಸ ಕಾರ್ಯ.  ಸದಾನಂದನಾಗಿ ಅವನು ನಡೆಸುವ ಲೀಲೆಯೇ ಸೃಷ್ಟಿ.  ಲೀಲೆಗಾಗಿ ಸೃಷ್ಟಿಯಲ್ಲ, ಸೃಷ್ಟಿಯೇ ಲೀಲೆ.

ಇಚ್ಛಾಮಾತ್ರದಲಿ ಜಗವ ತಾನೆ ಸೃಜಿಸುವ - ಭಗವಂತ ಏತಕ್ಕಾಗಿ ಸೃಷ್ಟಿಯನ್ನು ಮಾಡಬೇಕು ಎಂದು ವಿಚಾರ ಮಾಡಿದಾಗ,  ಜಗತ್ತನ್ನು ಸೃಜಿಸುವುದರಿಂದ ಭಗವಂತನಿಗೆ ಯಾವ ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.  ಸೃಷ್ಟಿ ಕಾರ್ಯ ಎಂಬ ಕ್ರೀಡೆಯಿಂದ ಅವನಿಗೆ ಯಾವ ಆನಂದವೂ ಉಂಟಾಗುವುದಿಲ್ಲ,  ಏಕೆಂದರೆ ಅವನು ಸದಾನಂದನೂ, ಪೂರ್ಣಾನಂದನೂ ಆಗಿರುವನು.  ಹಾಗಿರುವಾಗ ಈ ಸೃಷ್ಟಿಯ ಕಾರ್ಯವನ್ನು ಭಗವಂತ ತನ್ನ ಆನಂದಕ್ಕಾಗಲೀ ಅಥವಾ ಉಪಯೋಗಕ್ಕಾಗಲೀ ಮಾಡುವುದಿಲ್ಲವೆಂಬುದು ತಿಳಿಯುತ್ತದೆ. ಭಗವಂತನು ಜೀವಿಗಳ ಮೇಲಿನ ಕರುಣೆಯಿಂದ ಮತ್ತು ಜೀವಿಗಳ ಉದ್ಧಾರಕ್ಕಾಗಿಯೇ ಜಗವನ್ನು ಸೃಷ್ಟಿಸಿ, ಸಾಧನೆ ಮಾಡಲು ಅನುಕೂಲ ಮಾಡಿಕೊಡುತ್ತಾನೆ.  ಕರುಣಾಸಮುದ್ರನಾದ ಭಗವಂತ ಭಕ್ತಾಪರಾಧೀನನಾಗಿ, ಭಕ್ತರಿಗೋಸ್ಕರ ಜಗತ್ತನ್ನು ಸೃಷ್ಟಿಸಿ, ಅವರೊಳಗೆ ತಾನಿದ್ದು, ಸಾಧನೆ ಮಾಡಿಸುತ್ತಾನೆ.  ಸಾಧನೆಗೆ ಪ್ರತಿಫಲವಾಗಿ ಮುಕ್ತಿ ಹಾಗೂ ಮೋಕ್ಷಗಳನ್ನು ಕೊಟ್ಟು ಸದಾ ಆನಂದದಿಂದಿರುವಂತೆ ರಕ್ಷಿಸುತ್ತಾನೆ.  ಭಗವಂತನಿಗೆ ಸೃಷ್ಟಿ ಕಾರ್ಯ ಮಾಡುವುದರಿಂದ ಯಾವುದೇ ಆಯಾಸವೂ ಆಗುವುದಿಲ್ಲ.  ತನ್ನ ಸ್ವಾಭಾವಿಕ ಗುಣವಾದ ಆನಂದದಿಂದಲೇ ಅನಾಯಾಸವಾಗಿಯೇ ಸೃಜಿಸುತ್ತಾನೆ.  ಸಾಧನೆ ಮಾಡಿದ ಭಕ್ತರನ್ನು ನಿರ್ವಾಣ ಮೊದಲಾದ ಅಖಿಳ ಲೋಕಗಳಲ್ಲಿಟ್ಟು ಆನಂದಪಡಿಸುತ್ತಾನೆ.  ನಿರ್ವಾಣವೆಂದರೆ ಶೂನ್ಯ ಅಥವಾ ಏನೂ ಇಲ್ಲದ ಸ್ಥಿತಿ ಎಂದರ್ಥ.  ನಿರ್ವಾಣ ಲೋಕವೆಂದರೆ ’ಲಿಂಗಶರೀರ’ ಭಂಗವಾದ ನಂತರ ಸಾಧಕನು ತಲುಪುವ ಸ್ಥಳ, ಅಂದರೆ ಮೋಕ್ಷವೆಂದರ್ಥವಾಗುತ್ತದೆ.   ಅ೦ತ:ಕರಣವೆ೦ಬ ಸಮುದ್ರ ಉಳ್ಳವ ಎ೦ದರೆ ಅಪಾರ ಕಾರುಣ್ಯವುಳ್ಳವನಾದ ಭಗವ೦ತ ಎ೦ದೂ ಭಕ್ತರವಶನು. ತಾನೇ ಸೃಜಿಸಿರುವ, ಸ೦ರಕ್ಷಣೆ ಮಾಡುವ, ಜಗತ್ತಿನಲ್ಲಿ ಮಾತ್ರವಲ್ಲದೆ, ಪ್ರಳಯಕಾಲದಲ್ಲಿ, ಲಿ೦ಗಭ೦ಗ ಉ೦ಟಾದ ಜೀವರನ್ನು ಶ್ವೇತದ್ವೀಪ, ಅನ೦ತಾಸನ, ವೈಕು೦ಠಾದಿ ಲೋಕಗಳಲ್ಲಿಯೂ ಆವಾಸರನ್ನಾಗಿ ಮಾಡಿ ಸ್ವರೂಪಾನ೦ದವನ್ನು ಪಡಿಸುವವನು ಎ೦ದು ಜಗನ್ನಾಥ ದಾಸರು ತಿಳಿಸುತ್ತಾರೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ :


ಏನು ಕರುಣಾನಿಧಿಯೊ ಶ್ರೀನಿತಂಬಿನಿರಮಣ

ತಾ ನಮ್ಮನಗಲಿ ಸೈರಿ-ಸ | ಸೈರಿಸದ ಕರುಣಿಯ
ನಾನೆಂತು ತುತಿಸಿ ಹಿಗ್ಗ-ಲಿ || - ಶ್ರೀಮಹಾಲಕ್ಷ್ಮೀ ರಮಣನೂ, ಅಪಾರ ಕರುಣಾಸಮುದ್ರನೂ ಆದ ಭಗವಂತ ಭಕ್ತರನ್ನು ಅಗಲಿ ಇರುವುದಿಲ್ಲ.  ಅವನು ಅಗಲಿಕೆಯನ್ನು ಸಹಿಸುವುದಿಲ್ಲ.  ಅಂತಹ ಸರ್ವ ಶ್ರೇಷ್ಟನಾದ ಭಗವಂತನನ್ನು ಎಷ್ಟು ವಿಧವಾಗಿ ಸ್ತುತಿಸಿದರೂ ಸಾಕಾಗುವುದಿಲ್ಲವೆಂದು ಭಗವಂತನ ಕರುಣೆಯ ಬಗ್ಗೆ ತಿಳಿಸಿದ್ದಾರೆ.

ಸರ್ವಸ್ವತಂತ್ರ ನೀನೋರ್ವನಲ್ಲದೆ ಮ

ತ್ತೋರ್ವನಿನ್ನುಂಟೇ ಜಗದೊಳು | ಜಗದೊಳಗಜಾದಿಗಳು
ದರ್ವಿಯಂದದಲಿ ಚರಿಸೋರು || - ಭಗವಂತನೊಬ್ಬನೇ ಸರ್ವ ಸ್ವತಂತ್ರನು, ಯಾರ ಅಧೀನನೂ ಅಲ್ಲದವನು.  ಎಲ್ಲವನ್ನೂ ನಿಯಂತ್ರಿಸುವವನು.  ಬ್ರಹ್ಮಾದಿ ದೇವತೆಗಳೂ ಮತ್ತು ಸಕಲ ಜೀವಿಗಳೂ ಜಡ ಉಪಕರಣವಾದ ’ಸೌಟು’ ಇದ್ದಂತೆ.  ಅಡುಗೆ ಬಡಿಸಲು ಉಪಯೋಗಿಸಿದರೆ ಮಾತ್ರ ಉಪಯೋಗವಾಗುವುದು ಸೌಟು.  ಹಾಗೇ ಬ್ರಹ್ಮಾದಿ ದೇವತೆಗಳೊಳಗೆ ನೀನಿದ್ದು ಸರ್ವ ಕಾರ್ಯಗಳನ್ನೂ ಮಾಡಿಸುವೆ ಎಂದಿದ್ದಾರೆ. 

ಏನು ಮಾಡುವ ಕರ್ಮ ನೀನೆ ಮಾಡಿಪೆ ಎಂಬ

ಜ್ಞಾನವೇ ಎನಗೆ ಜಿತವಾಗಿ | ಜಿತವಾಗಿ ಇರಲಿ ಮ-
ತ್ತೇನು ನಾನೊಲ್ಲೆ ನಿನ್ನಾಣೆ || - ಅಸ್ವತಂತ್ರನಾದ ನಾನು ಏನನ್ನೂ ಮಾಡಲಾರೆ.  ನಾನು ಮಾಡುವ ಎಲ್ಲಾ ಕಾರ್ಯಗಳನ್ನೂ ನನ್ನೊಳಗೆ  ಭಗವಂತ ನೀನು ನಿಂತು ಮಾಡಿ ಮಾಡಿಸುವೆ ಎಂಬ ಅರಿವು, ಜ್ಞಾನ ಮಾತ್ರ, ಯಾವ ಸಂಶಯವೂ ಇಲ್ಲದೆ ನನ್ನಲ್ಲಿ ಸ್ಥಿರವಾಗಿ ನಿಲ್ಲಲಿ.  ನಾನು ಸತ್ಯವಾಗಿಯೂ ಇನ್ನೇನನ್ನೂ ಬಯಸುವುದಿಲ್ಲ ಎಂದಿದ್ದಾರೆ.

ಗುಣಕಾಲ ಕರ್ಮಗಳ ಮನೆಮಾಡಿ ಜೀವರಿಗೆ

ಉಣಿಸುವಿ ನೀನೇ ಸುಖದುಃಖ | ಸುಖದುಃಖ ಮಿಶ್ರಫಲ
ಉಣದೆ ಸರ್ವತ್ರ ಬೆಳಗುವೆ || -  ಸತ್ವ ರಜಸ್ತಮೋ ಗುಣಗಳ, ಕಾಲ ಮತ್ತು ಕರ್ಮಗಳೆಂಬ ಮನೆಯನ್ನು ವಾಸಸ್ಥಾನವನ್ನಾಗಿ ಮಾಡಿ, ಸಂಸಾರಿಗಳಾದ ಜೀವಿಗಳನ್ನು ಬಂಧನಕ್ಕೆ ಒಳಪಡಿಸುತ್ತಾನೆ.  ಈ ಮನೆಗೆ ಭಗವಂತ ತಾನೇ ನಿಯಾಮಕನಾಗಿ ಜೀವಿಗಳಿಗೆ ಸುಖದುಃಖಗಳನ್ನು ಉಣಿಸುತ್ತಾನೆ.  ಭಗವಂತನು ತಾನು ಏನನ್ನೂ ಭೋಗಿಸದೆ ಎಲ್ಲೆಲ್ಲಿಯೂ ವಿರಾಜಮಾನನಾಗಿ ಬೆಳಗುತ್ತಾನೆ ಎಂದಿದ್ದಾರೆ.

ಡಿವಿಜಿಯವರು ಕಗ್ಗದಲ್ಲಿ

ಶಶ್ವದ್ವಿಕಾಸನ ಹ್ರಾಸನ ಕ್ರಮಗಳಿಂ |
ವಿಶ್ವದಲಿ ನರ್ತಿಸುತೆ ಪೌರುಷೋನ್ನತಿಯೊಳ್ ||
ಸ್ವಸ್ವರೂಪವನರಸುವಾಟ ಪರಚೇತನದ |
ಹೃಷ್ಯದ್ವಿಲಾಸವೆಲೊ - ಮಂಕುತಿಮ್ಮ || -  ಶಾಶ್ವತವಾದದ್ದು  (ಭಗವಂತ) ತನ್ನ ಆನಂದಕ್ಕೋಸ್ಕರ ವಿಕಾಸಗೊಂಡು ಪ್ರಪಂಚವಾಗಿ ಅರಳಿ, ಪ್ರಳಯಕಾಲದಲ್ಲಿ ಎಲ್ಲವನ್ನೂ ತನ್ನ ಉದರದೊಳಗೆ ಸೇರಿಸಿಕೊಂಡು ವಿಶ್ವದಲ್ಲಿ ತನ್ನ ಪೌರುಷೋನ್ನತಿಯಿಂದ ನರ್ತನ ಮಾಡುತ್ತಿದೆ.   ತನ್ನದೇ ಶಕ್ತಿಯಾದ ಪ್ರಕೃತಿಯ ಮೂಲಕ ಲೀಲೆಗಳನ್ನು ಮಾಡುತ್ತಿದೆ.  ಈ ವಿಸ್ಮಯದ ಹಿಂದೆ ಅಡಗಿರುವ ತನ್ನ ನಿಜವಾದ ಸ್ವರೂಪವನ್ನು ಹುಡುಕಲಿಯೆಂದೇ ಆ ಪರ ಚೇತನದ (ಭಗವಂತನ) ಆಟ.  ಇದು ಪರಮಪುರುಷನ ಹೃಷ್ಯದ್ವಿಲಾಸ, ಅಂದರೆ ಆನಂದದ ವಿಲಾಸ.

ಪುರುಷಂ ಸ್ವತಂತ್ರನೋ ? ದೈವವಿಧಿ ಪರವಶನೊ? |

ಎರಡುಮನಿತಿನಿತುಳ್ಳ ತೋಳಿನಂತಿಹನೋ ? ||
ತಿರುಗುವುದು ಮಡಿಸುವುದು ತೋಳ್ ಮೈಯಕಟ್ಟಿನಲಿ |
ನರನಂತು ಮಿತಶಕ್ತ - ಮಂಕುತಿಮ್ಮ || - ಮನುಷ್ಯನು ಮಾಡುವ ಧರ್ಮ/ಕರ್ಮಗಳಲ್ಲಿ ಅವನು ಎಷ್ಟು ಸ್ವತಂತ್ರ ?  ದೈವವೇ ಮನುಷ್ಯನಿಂದ ಕರ್ಮಗಳನ್ನು ಮಾಡಿಸುತ್ತದೆ.  ಮನುಷ್ಯ ಅಸ್ವತಂತ್ರನು.  ಅವನ ಶಕ್ತಿ, ಪರಿಧಿಯೆಲ್ಲಾ ಭೌತಿಕ ದೇಹದವರೆಗೆ ಮಾತ್ರ.  ಮನುಷ್ಯ ತನ್ನ ಒಂದು ತೋಳನ್ನು ತನ್ನ ದೇಹದ ಕಟ್ಟಿನ ಪರಿಧಿಯಲ್ಲಿ ಮಾತ್ರ ತಿರುಗಿಸಬಹುದು, ಮಡಿಸಬಹುದು.  ಅದಕ್ಕಿಂತ ಆಚೆಗೆ ತೋಳನ್ನೇ ತೆಗೆಯುವುದಕ್ಕಾಗುವುದಿಲ್ಲ.  ತೋಳಿನ ಆಟ ದೇಹದ ಕಟ್ಟಿನ ಹಿಡಿತ ಬಿಟ್ಟು ನಡೆಯುವುದಿಲ್ಲ.  ತೋಳಿಗೆ ಭುಜದ ಕಡೆಯಿಂದ ನಿರ್ಬಂಧವಿದೆ, ಬೆರಳಿನ ಕಡೆಯಿಂದ ಸ್ವಾತಂತ್ರ್ಯವಿದೆ.  ಮನುಷ್ಯ ಆಕಾಶದಲ್ಲಿ ಎಷ್ಟು ಹಾರಾಡಿದರೂ ಭೂಮಿಯ ಆಕರ್ಷಣಾ ಶಕ್ತಿಯಿಂದ ನಿರ್ಬಂಧಿತನಾಗಿದ್ದಾನೆ.  ಆದರೆ  ಆಕಾಶಕ್ಕೆ ನೆಗೆಯುವುದಕ್ಕೂ ಮತ್ತು ಭೂಮಿಯ ಮೇಲೆ ಸಂಚರಿಸುವುದಕ್ಕೂ ಅವನು ಸ್ವತಂತ್ರನು.  ಇಷ್ಟು ಸ್ವಾತಂತ್ರ್ಯ ಕೂಡ ಭಗವಂತನ ಅಸೀಮ ಕರುಣೆಯಲ್ಲದೆ ಬೇರೇನೂ ಅಲ್ಲ.  ಇದೇ ಪರಮಪುರುಷನ ಸೀಮಾತೀತವಿಲ್ಲದ ಸ್ವಾತಂತ್ರ್ಯ ಹಾಗೂ ಮನುಷ್ಯನಿಗಿರುವ ಅಸ್ವತಂತ್ರತೆ ಅಥವಾ ನಿರ್ಬಂಧತೆ.
 ಚಿತ್ರಕೃಪೆ : ಅಂತರ್ಜಾಲ